ಭಾನುವಾರ, ನವೆಂಬರ್ 17, 2019

ನವಯುಗದ ಮಾಧ್ಯಮಗಳ ಮುಂದಿರುವ ಅವಕಾಶಗಳು ಮತ್ತು ಸವಾಲುಗಳು

ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ದಿನಾಂಕ: 17-11-2019ರಂದು ಬೆಂಗಳೂರಿನ 'ಮಿಥಿಕ್ ಸೊಸೈಟಿ' ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೀಡಿದ ಉಪನ್ಯಾಸದ ಸಂಕ್ಷಿಪ್ತ ರೂಪ

ಪ್ರೊ. ಕೆ. ಆರ್. ವೇಣುಗೋಪಾಲ್, ಶ್ರೀ ದು.ಗು. ಲಕ್ಷ್ಮಣ ಅವರೊಂದಿಗೆ
ಎಲ್ಲರಿಗೂ ನಮಸ್ಕಾರ. ಇಲ್ಲಿ ಕುಳಿತಿರುವ ಬಹುತೇಕರು ತುಂಬ ಹಿರಿಯರಿದ್ದೀರಿ. ನಿಮ್ಮ ಅನುಭವಕ್ಕಿಂತಲೂ ನನ್ನ ವಯಸ್ಸು ತುಂಬ ಸಣ್ಣದೆಂದು ನಾನು ತಿಳಿದಿದ್ದೇನೆ. ಈ ಅಳುಕಿನ ಜತೆಗೆ ನಿಮ್ಮೆದುರು ಮಾತನಾಡುವುದಕ್ಕಿರುವ ಸಣ್ಣ ಧೈರ್ಯವೆಂದರೆ ನೀವು ಹಿರಿಯರಿದ್ದೀರಿ ಎಂಬುದೇ ಆಗಿದೆ. ಏಕೆಂದರೆ ತಪ್ಪಾಗಿರುವುದನ್ನು ಹಿರಿಯರು ತಿದ್ದಬಲ್ಲರು.

ಇರಲಿ, ಇಂದು ನಾನು ಮಾತಾಡಬೇಕಿರುವ ವಿಷಯಕ್ಕೆ ಬರೋಣ. ಮಾಧ್ಯಮಗಳ ಬಗ್ಗೆ ಮಾತನಾಡುವುದೆಂದರೆ ಡಿಜಿಟಲ್ ಮಾಧ್ಯಮಗಳ ಬಗ್ಗೆ ಮಾತನಾಡುವುದೆಂದೇ ಆಗಿದೆ. ಏಕೆಂದರೆ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಎಂಬಿತ್ಯಾದಿ ಪ್ರತ್ಯೇಕ ಅಸ್ಮಿತೆಗಳು ಇವತ್ತು ಉಳಿದುಕೊಂಡಿಲ್ಲ. We are in the age of media convergence.  ನಾವು ಮಾಧ್ಯಮ ಸಂಗಮದ ಕಾಲದಲ್ಲಿದ್ದೇವೆ. ಪತ್ರಿಕೆ, ಟಿವಿ ಎಲ್ಲವೂ ಡಿಜಿಟಲ್ ಆಗಿವೆ. ಆನ್‌ಲೈನ್ ಆವೃತ್ತಿ ಇಲ್ಲದ ಪತ್ರಿಕೆ ಇಲ್ಲ. ಮುದ್ರಣಕ್ಕೆ ಸೀಮಿತವಾಗಿದ್ದ ಪತ್ರಿಕೆಗಳಲ್ಲಿ ಇವತ್ತು ಆಡಿಯೋ ಇದೆ, ವೀಡಿಯೋ ಇದೆ. ಅತ್ತ ಟಿವಿ ಚಾನೆಲ್‌ಗಳು ತಮ್ಮ ಜಾಲತಾಣಗಳಲ್ಲಿ ಪಠ್ಯ ರೂಪದಲ್ಲೂ ಸುದ್ದಿ ಪ್ರಕಟಿಸುತ್ತವೆ. ಎಲ್ಲವೂ ಒಟ್ಟಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ, ವಿವಿಧ ವೇಷಗಳಲ್ಲಿ ಹರಿದಾಡುತ್ತವೆ. ಹೀಗಾಗಿ ಸೋಷಿಯಲ್ ಮೀಡಿಯಾವನ್ನೇ ನಾನಿಲ್ಲಿ 'ನವಯುಗದ ಮಾಧ್ಯಮ'ಗಳೆಂದು ವ್ಯಾಖ್ಯಾನಿಸಿಕೊಂಡಿದ್ದೇನೆ.

ಜಗತ್ತಿನ ಸುಮಾರು 770 ಕೋಟಿ ಜನಸಂಖ್ಯೆಯಲ್ಲಿ 402 ಕೋಟಿಯಷ್ಟು - ಅಂದರೆ ಶೇ. 53 - ಇಂಟರ್ನೆಟ್ ಬಳಕೆದಾರರಿದ್ದಾರೆ. ಸುಮಾರು 319 ಕೋಟಿ ಮಂದಿ (ಶೇ. 42) ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರು.

ಭಾರತದ ಪ್ರಸಕ್ತ ಜನಸಂಖ್ಯೆ 137 ಕೋಟಿ. ಇವರಲ್ಲಿ ಅರ್ಧದಷ್ಟು ಮಂದಿ ಇಂಟರ್ನೆಟ್ ಬಳಕೆದಾರರು. ಸುಮಾರು 35 ಕೋಟಿ ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರು. ಭಾರತದಲ್ಲಿ ಸುಮಾರು 40 ಕೋಟಿ ಮಂದಿ ವಾಟ್ಸಾಪನ್ನೂ, 27 ಕೋಟಿ ಮಂದಿ ಫೇಸ್ಬುಕ್ಕನ್ನೂ, ತಲಾ 8 ಕೋಟಿ ಮಂದಿ ಇನ್‌ಸ್ಟಾಗ್ರಾಮನ್ನೂ, ಟ್ವಿಟರನ್ನೂ ಬಳಸುತ್ತಾರೆ. ಸಮೀಕ್ಷೆಗಳ ಪ್ರಕಾರ ಭಾರತೀಯ ಇಂಟರ್ನೆಟ್ ಬಳಕೆದಾರರು ದಿನಕ್ಕೆ ಸರಾಸರಿ 2.4 ಗಂಟೆಯಷ್ಟು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ.

ಇಂಟರ್ನೆಟ್ ಇಷ್ಟೊಂದು ಕ್ಷಿಪ್ರವಾಗಿ ಭಾರತದಲ್ಲಿ ಪಸರಿಸಲು ಪ್ರಮುಖ ಕಾರಣ ನಮ್ಮಲ್ಲಿ ದೊರೆಯುತ್ತಿರುವ ಅಗ್ಗದ ಡೇಟಾ. ಒಂದು ಜಿಬಿ ಡೇಟಾದ ದರ ಸ್ವಿಟ್ಜರ್ಲೆಂಡಿನಲ್ಲಿ ರೂ. 1425-00, ಅಮೇರಿಕದಲ್ಲಿ ರೂ. 872-00, ಇಂಗ್ಲೆಂಡಿನಲ್ಲಿ ರೂ. 470-00; ಆದರೆ ಭಾರತದಲ್ಲಿ ಕೇವಲ ರೂ. 18-00.

ಜನರು ಡಿಜಿಟಲ್/ ಸಾಮಾಜಿಕ ಮಾಧ್ಯಮಗಳನ್ನು ಪರ್ಯಾಯ ಮಾಧ್ಯಮಗಳನ್ನಾಗಿ ಕಂಡುಕೊಳ್ಳಲು ಇರುವ ಇನ್ನೊಂದು ಪ್ರಮುಖ ಕಾರಣ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಅವರ ಕಳೆದುಕೊಂಡಿರುವ ವಿಶ್ವಾಸ. ಮುಖ್ಯವಾಹಿನಿಯ ಮಾಧ್ಯಮಗಳು ವಾಣಿಜ್ಯೀಕರಣದ ಹಿಂದೆ ಬಿದ್ದಿರುವುದು, ಹೆಚ್ಚಿನ ಓದುಗರನ್ನು/ ಪ್ರೇಕ್ಷಕರನ್ನು ಸೆಳೆಯುವ ಮತ್ತು ಆ ಮೂಲಕ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅಪರಾಧ, ಹಿಂಸೆಗಳನ್ನು ವೈಭವೀಕರಿಸುತ್ತಿರುವುದು, ಅತಿಯಾದ ಸ್ಪರ್ಧೆ, ಧಾವಂತ,  ಕ್ಷುಲ್ಲಕ ವಿಚಾರಗಳನ್ನು ಮಹತ್ವದ ಸುದ್ದಿಗಳೆಂಬಂತೆ ಬಿಂಬಿಸುವುದು, ಬದ್ಧತೆಯ ಕೊರತೆ, ಬಹುತೇಕ ಮಾಧ್ಯಮಗಳೂ ಒಂದಲ್ಲ ಒಂದು ರಾಜಕೀಯ ಅಜೆಂಡಾ ಇಟ್ಟುಕೊಂಡಿರುವುದು, ಮಾಧ್ಯಮ ಮಾಲೀಕತ್ವದಲ್ಲಿ ಹೆಚ್ಚಿರುವ ಏಕಸ್ವಾಮ್ಯತೆ- ಇವೆಲ್ಲವನ್ನೂ ಈಗ ಜನಸಾಮಾನ್ಯರೂ ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕೇ ಅವರಿಗೆ ಮಾಧ್ಯಮಗಳ ಮೇಲೆ ವಿಶ್ವಾಸ ಕುಸಿದಿದೆ.

ಮಾಧ್ಯಮಗಳಲ್ಲಿ ಪ್ರಕಟವಾದ ವಿಚಾರಗಳನ್ನೂ ತಮ್ಮ ಸ್ನೇಹಿತರಲ್ಲಿ ಕೇಳಿ ಖಚಿತಪಡಿಸಿಕೊಳ್ಳುವ ಮಟ್ಟಿಗೆ ಜನ ಬದಲಾಗಿದ್ದಾರೆ. ಹಿಂದೆ ಜನರ ಬಾಯಲ್ಲಿ ಕೇಳಿದ್ದನ್ನು ಮಾಧ್ಯಮಗಳ ಮೂಲಕ ಖಚಿತಪಡಿಸಿಕೊಳ್ಳುವ ಪರಿಪಾಠ ಇತ್ತು; ಇಂದು ಮಾಧ್ಯಮಗಳಲ್ಲಿ ಬಂದುದನ್ನು ತಮ್ಮ ಪರಿಚಯದವರಲ್ಲಿ ಕೇಳಿ ಖಚಿತಪಡಿಸಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ ಎಂಬುದು ವಿಪರ್ಯಾಸ.

ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್ ಮಾಧ್ಯಮ ಜನರಿಗೆ ಪರ್ಯಾಯ ಸಂವಹನ ವೇದಿಕೆಯಾಗಿ ಒದಗಿಬಂದಿದೆ. ಇದು ನಾಗರಿಕ ಪತ್ರಿಕೋದ್ಯಮ - Citizen Journalism - ನ ಸುವರ್ಣಯುಗ. ನಾವು ನೀಡಿದ್ದನ್ನು ನೀವು ತೆಗೆದುಕೊಳ್ಳಿ ಎಂಬ ಮುಖ್ಯವಾಹಿನಿಯ ಮಾಧ್ಯಮಗಳ ಉಡಾಫೆಗೆ ಇಲ್ಲಿ ಎಡೆಯಿಲ್ಲ. ಇಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಇದೆ. ಇಲ್ಲಿ ಸಂಪಾದಕರಿಲ್ಲ. ಸುದ್ದಿಯನ್ನೋ ಲೇಖನವನ್ನೋ ಹೀಗೆಯೇ ಬರೆಯಬೇಕು ಎಂಬ ಕಟ್ಟುಪಾಡು ಇಲ್ಲ. ಯಾರು ಬೇಕಾದರೂ ಮಾತನಾಡಬಹುದು.  Consumers of news have become producers of news. ಧ್ವನಿಯೇ ಇಲ್ಲದವರಿಗೆ ಸಾಮಾಜಿಕ ಮಾಧ್ಯಮಗಳು ಧ್ವನಿ ನೀಡಿವೆ. ಮುಖ್ಯವಾಹಿನಿ ಮಾಧ್ಯಮಗಳ ಅಜೆಂಡಾಗಳು ಇಲ್ಲಿ ಕ್ಷಣಗಳಲ್ಲಿ ಬಯಲಾಗುತ್ತವೆ. ಇಲ್ಲಿ ಸುಳ್ಳು ಹೇಳುವುದು ಸುಲಭವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಮೋಚ್ಛ ಸ್ಥಿತಿ ಇದು.

ಪ್ರಧಾನಮಂತ್ರಿ, ಮುಖ್ಯಮಂತ್ರಿ, ಇನ್ನೆಲ್ಲ ನಾಯಕರು ಫೇಸ್ಬುಕ್, ಟ್ವಿಟರ್‌ಗಳಲ್ಲಿ ಸಾಮಾನ್ಯ ನಾಗರಿಕರಿಗೆ ಎದುರಾಗುತ್ತಾರೆ. ಜನ ಸಾಮಾನ್ಯರೂ ಅವರನ್ನು ಟ್ಯಾಗ್ ಮಾಡಿ ಕಮೆಂಟ್ ಮಾಡಬಹುದು. ಆ ಮಟ್ಟಿನ ನಮನೀಯತೆ ಸಾಮಾಜಿಕ ಮಾಧ್ಯಮಗಳಲ್ಲಿದೆ. ಸಂವಹನ ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಿತಿಯೂ ಇದೇ ಆಗಿದೆ. ಸಣ್ಣಪುಟ್ಟ ಸಮಸ್ಯೆಗಳನ್ನೂ ತುಂಬ ಕ್ಷಿಪ್ರವಾಗಿ ಸಂಬಂಧಿಸಿದವರ ಗಮನಕ್ಕೆ ತರುವುದಕ್ಕೆ ಸಾಮಾಜಿಕ ಮಾಧ್ಯಮಗಳು ಸಹಕಾರಿ. ಒಂದರ್ಥದಲ್ಲಿ ಜಾಗೃತಿ ಹಾಗೂ ಅಭಿವೃದ್ಧಿಯ ಅತ್ಯುತ್ತಮ ವೇಗವರ್ಧಕಗಳು. ಇವುಗಳಿಗೆ ಭೌಗೋಳಿಕ ಸೀಮೆಗಳೂ ಇಲ್ಲದಿರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಮಂದಿಯೂ ಒಂದು ಕರೆಗೆ ಓಗೊಟ್ಟು ಸಾಮೂಹಿಕ ಆಂದೋಲನಗಳಲ್ಲಿ ಸೇರಿಕೊಳ್ಳುವಂತೆ ಮಾಡುವುದರಲ್ಲಿ ಇವುಗಳ ಪಾತ್ರ ತುಂಬ ದೊಡ್ಡದು. ಅನೇಕ ಬೃಹತ್ ಆಂದೋಲನಗಳು ಸಾಮಾಜಿಕ ಮಾಧ್ಯಮಗಳ ನೆರವಿನಿಂದಲೇ ನಡೆದಿರುವ ಜೀವಂತ ಉದಾಹರಣೆಗಳು ನಮ್ಮ ಮುಂದೆ ಇವೆ.

ಇವೆಲ್ಲ ಹೊಸ ಕಾಲದ ಮಾಧ್ಯಮಗಳ ಅವಕಾಶಗಳೆಂದು ತಿಳಿದುಕೊಂಡರೆ, ಇವುಗಳ ಮುಂದಿರುವ ಸವಾಲುಗಳು ನೂರಾರು. ಮುಖ್ಯವಾಗಿ ನಿಯಂತ್ರಣದ ಕೊರತೆ. ಇಲ್ಲಿ ಸಂಪಾದಕರಿಲ್ಲ ಎಂಬುದು ಹೇಗೆ ಅನುಕೂಲವೋ, ಹಾಗೇ ಅನಾನುಕೂಲವೂ ಹೌದು. ಪತ್ರಿಕೆ, ಟಿವಿಗಳಲ್ಲಿ ಯಾವುದನ್ನು, ಎಷ್ಟು, ಹೇಗೆ ಪ್ರಕಟಿಸಬೇಕು ಎಂಬುದನ್ನು ನಿರ್ಧರಿಸಲು ವಿವಿಧ ಮಂದಿಯಿದ್ದಾರೆ. ಇಲ್ಲಿ ಅವರಿಲ್ಲ- ಗೇಟ್ ಕೀಪಿಂಗ್ ಇಲ್ಲ- ಎಂಬುದೇ ದೊಡ್ಡ ಮಿತಿ. ಇಲ್ಲಿ ಎಲ್ಲರೂ ಪತ್ರಕರ್ತರೇ. ಎಲ್ಲರೂ ಸುದ್ದಿಗಾರರೇ. ಹೀಗಾಗಿ ಯಾವುದು, ಎಷ್ಟು, ಹೇಗೆ ಪ್ರಕಟವಾಗಬೇಕು ಎಂದು ನಿರ್ಧರಿಸಲು ಯಾರೂ ಇಲ್ಲ. ಇದು ಎಷ್ಟೊಂದು ಅನಾಹುತಗಳಿಗೂ ಕಾರಣವಾಗುತ್ತದೆ ಎನ್ನುವುದನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರಾದ ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ.

ಮಾಧ್ಯಮಗಳಿಗೆ ಪ್ರಮುಖವಾಗಿ ಬೇಕಾಗಿರುವ ವಸ್ತುನಿಷ್ಠತೆ, ಸ್ಪಷ್ಟತೆ, ನಿಖರತೆ, ಮರುಪರಿಶೀಲನೆ, ಪೂರ್ವಾಗ್ರಹಮುಕ್ತತೆ ಮುಂತಾದ ತತ್ತ್ವಗಳನ್ನು ಎಲ್ಲರೂ ಪತ್ರಕರ್ತರಾಗಿರುವ ಸನ್ನಿವೇಶದಲ್ಲಿ ಅನುಷ್ಠಾನಕ್ಕೆ ತರುವುದು ಕಡುಕಷ್ಟ.  ಇಲ್ಲಿ ವದಂತಿಗಳು, ಸುಳ್ಳುಸುದ್ದಿಗಳೇ ಜನಪ್ರಿಯ. ಸಾಮಾಜಿಕ ಮಾಧ್ಯಮಗಳು ಒಂದರ್ಥದಲ್ಲಿ ಸುಳ್ಳುಸುದ್ದಿಗಳ ಕಾರ್ಖಾನೆಗಳೇ ಆಗಿವೆ. ಕ್ಷಿಪ್ರತೆ ಎಂಬ ಗುಣ ಸಾಮಾಜಿಕ ಮಾಧ್ಯಮಗಳ ದೊಡ್ಡ ಸವಾಲೂ ಹೌದು. ಇಲ್ಲಿ ಒಳ್ಳೆಯದಕ್ಕಿಂತಲೂ ಕೆಟ್ಟದು ಬೇಗ ಹರಡುತ್ತದೆ- ಕಾಳ್ಗಿಚ್ಚಿನ ಹಾಗೆ. ಸಮಷ್ಟಿ ಹಿತದ ಚರ್ಚೆಗಳಿಗಿಂತಲೂ ವೈಯಕ್ತಿಕ ಕೆಸರೆರಚಾಟಗಳಲ್ಲಿ ಜನರಿಗೆ ಹೆಚ್ಚು ಆಸಕ್ತಿ.

ಇವನ್ನೆಲ್ಲ ನೋಡುತ್ತ ನೋಡುತ್ತ ಮುಖ್ಯವಾಹಿನಿಯ ಮಾಧ್ಯಮಗಳೂ ಸಾಮಾಜಿಕ ಮಾಧ್ಯಮಗಳ ಜಾಯಮಾನವನ್ನು ಬೆಳೆಸಿಕೊಳ್ಳುತ್ತಿವೆ. ತಮ್ಮ ಮೂಲ ರೂಪಗಳಲ್ಲಿ ಗಂಭೀರವಾಗಿರುವ ಪತ್ರಿಕೆ, ಚಾನೆಲ್‌ಗಳೂ ಸಾಮಾಜಿಕ ತಾಣಗಳಲ್ಲಿ ಬಾಲಿಶವಾಗಿ ವರ್ತಿಸುತ್ತಿರುವುದು ಇಂದಿನ ವಿದ್ಯಮಾನ. ಸೆಲೆಬ್ರಿಟಿಗಳ ಖಾಸಗಿ ಬದುಕಿನ ವಿಚಾರಗಳೇ ಅವರಿಗೆ ಪ್ರಮುಖ ಸುದ್ದಿಯಾಗುತ್ತಿವೆ. ಖಾಸಗಿಗೂ ಸಾರ್ವಜನಿಕವಾದುದಕ್ಕೂ ವ್ಯತ್ಯಾಸವೇ ಉಳಿದಿಲ್ಲ. ಎಲ್ಲವೂ ಬಟಾಬಯಲಲ್ಲೇ ನಡೆಯಬೇಕು ಎಂಬುದು ಮಾಧ್ಯಮಗಳ ಹೊಸ ನೀತಿ.

ಹೊಸ ಮಾಧ್ಯಮಗಳಿಂದ ಒಂದು ಬಗೆಯ ಮಾಹಿತಿ ಅತಿಸಾರ ಸೃಷ್ಟಿಯಾಗಿದೆ. ಎಲ್ಲ ಕಡೆಗಳಿಂದಲೂ ಬರುತ್ತಿರುವ ಭರಪೂರ ಮಾಹಿತಿಗಳಲ್ಲಿ ತಮಗೆ ಬೇಕಾದುದೇನು ಬೇಡದ್ದೇನು ಎಂದು ನಿರ್ಧರಿಸಿಕೊಳ್ಳಲಾಗದ ಸಂಕಷ್ಟ ಜನಸಾಮಾನ್ಯರನ್ನು ಕಾಡುತ್ತಿದೆ. ಅದರ ನಡುವೆ ಸುಳ್ಳುಪೊಳ್ಳುಗಳು ಸೇರಿಕೊಂಡಾಗಲಂತೂ ಜನರ ಪರಿಸ್ಥಿತಿ ಹೇಳತೀರದು. ಆಹಾರದ ಡಯೆಟ್ ಬಗ್ಗೆ ಮಾತ್ರ ಯೋಚಿಸುತ್ತಿದ್ದವರು ಇಂದು ಮೀಡಿಯಾ ಡಯೆಟ್ ಬಗ್ಗೆ ಯೋಚಿಸುವ ಸಂದರ್ಭ ಬಂದಿದೆ.

ಸಾಮಾಜಿಕ ತಾಣಗಳಲ್ಲಿ ನಾವು ಹಂಚಿಕೊಳ್ಳುತ್ತಿರುವ ಮಾಹಿತಿಗಳು ಎಲ್ಲಿ ಸಂಗ್ರಹವಾಗುತ್ತಿವೆ, ಅವು ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಚರ್ಚೆಗಳೂ ಈಗ ಮುನ್ನೆಲೆಗೆ ಬಂದಿವೆ. ಜನ ಡೇಟಾ ವಸಾಹತುಗಳ ಬಗ್ಗೆ ಎಚ್ಚರವಾಗತೊಡಗಿದ್ದಾರೆ. ದೇಶದ ಭದ್ರತೆ, ವೈಯಕ್ತಿಕ ಮಾಹಿತಿಗಳ ಗೌಪ್ಯತೆ, ಇವುಗಳ ಸುತ್ತಮುತ್ತ ಹರಡಿಕೊಂಡಿರುವ ಸೈಬರ್ ಅಪರಾಧ, ಮೋಸ-ವಂಚನೆಗಳು ಪರ್ಯಾಯ ಮಾಧ್ಯಮಗಳ ಕಡೆಗೂ ಜನ ಅಪನಂಬಿಕೆಯಿಂದ ನೋಡುವಂತೆ ಮಾಡಿವೆ.

ಒಟ್ಟಿನಲ್ಲಿ ಮಾಧ್ಯಮಗಳ ಜತೆಗಿನ ಒಡನಾಟ ಜನಸಾಮಾನ್ಯರಿಗೆ ಕತ್ತಿಯಂಚಿನ ನಡಿಗೆಯೇ ಆಗಿದೆ. ಈ ಒಟ್ಟಾರೆ ಪರಿಸ್ಥಿತಿಗೆ ಪರಿಹಾರ ಏನು ಎಂಬುದು ನಮ್ಮೆದುರಿನ ದೊಡ್ಡ ಪ್ರಶ್ನೆ. ಆ ಬಗ್ಗೆ ಮಾತನಾಡುವುದು ಇನ್ನೊಂದು ಸುದೀರ್ಘ ಚರ್ಚೆಯಾದೀತು. ಅದನ್ನು ಇನ್ನೊಮ್ಮೆ ಮಾಡೋಣ. ಧನ್ಯವಾದ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 22, 2019

ಬೀಗಿದಷ್ಟೂ ಬಾಗುವುದು ಕಷ್ಟ

19-25 ಅಕ್ಟೋಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ಬದುಕಲಿಕ್ಕೊಂದು ಭ್ರಾಂತಿ ಬೇಕಾಗ್ತದೆ, ಪ್ರಜೆಗಳಿಗೂ, ಸುಲ್ತಾನರಿಗೂ.’ ಹಾಗೆನ್ನುತ್ತದೆ ಕಾರ್ನಾಡರ ‘ರಾಕ್ಷಸತಂಗಡಿ’ ನಾಟಕದ ಒಂದು ಪಾತ್ರ. ಹೌದು, ಒಬ್ಬೊಬ್ಬರು ಸದಾ ಒಂದೊಂದು ಭ್ರಾಂತಿಯಲ್ಲೇ ಇರುತ್ತಾರೆ. ಕೆಲವರಿಗೆ ತಾವೇನೋ ಸಾಧಿಸಿದೆವೆನ್ನುವ, ಇನ್ನು ಕೆಲವರಿಗೆ ತಾವು ಯಾರನ್ನೋ ಸೋಲಿಸಿದೆವೆನ್ನುವ, ಇನ್ನು ಹಲವರಿಗೆ ತಾವು ಸಮಾಜವನ್ನು ಬದಲಾಯಿಸಿಬಿಡುತ್ತೇವೆನ್ನುವ, ಇನ್ನುಳಿದವರಿಗೆ ತಾವು ತುಂಬ ಸುಖ-ಸಂತೋಷದಿಂದ ಬದುಕುತ್ತಿದ್ದೇವೆನ್ನುವ ಭ್ರಾಂತಿ. ಸ್ವಲ್ಪ ಮಟ್ಟಿಗೆ ಇವೆಲ್ಲ ಬೇಕು. ಭ್ರಾಂತಿಯಿಂದ ಚಿಂತೆ ದೂರವಾಗುವುದಿದ್ದರೆ, ನಿರಾಸೆ ಒತ್ತಟ್ಟಿಗೆ ಸರಿಯುವುದಿದ್ದರೆ, ದುಃಖ ಕ್ಷಣಕಾಲ ಮರೆಯಾಗುವುದಿದ್ದರೆ, ಒಂದಷ್ಟು ಹುಮ್ಮಸ್ಸು-ಉತ್ಸಾಹ ಬೆನ್ನಿಗೆ ನಿಲ್ಲುವುದಿದ್ದರೆ ಕೊಂಚ ಭ್ರಾಂತಿ ಇದ್ದರೆ ಒಳ್ಳೆಯದು. ಆದರೆ ಭ್ರಾಂತಿಯೇ ಬದುಕಾಗಬಾರದಲ್ಲ!

ಬೋಧಿವೃಕ್ಷ | 19-25 ಅಕ್ಟೋಬರ್ 2019
‘ನಾನು ಯಾರು?’ ಎಂಬ ಪ್ರಶ್ನೆಯನ್ನು ಎಂದಾದರೂ ನಾವು ಅಂತರ್ಯಕ್ಕೆ ಕೇಳಿಕೊಂಡದ್ದಿದೆಯೇ? ಹಾಗೆ ಕೇಳಿಕೊಂಡರೆ ಮೊದಲ ಉತ್ತರವಾಗಿ ನಮ್ಮ ಹೆಸರು ಬರಬಹುದು. ಅದು ನಮ್ಮ ಹೆಸರಾಯಿತೇ ಹೊರತು ನಾವು ಯಾರೆಂದು ಹೇಳಿದಂತಾಗಲಿಲ್ಲ ಅಲ್ಲವೇ? ನಮ್ಮ ಹೆಸರನ್ನು ಬದಲಾಯಿಸಿಕೊಂಡರೆ ನಾವು ಬದಲಾಗುತ್ತೇವೆಯೇ? ಇಲ್ಲ. ಹೆಸರು ಮಾತ್ರ ಬದಲಾಗುವುದು; ನಾವು ಹಾಗೆಯೇ ಉಳಿಯುತ್ತೇವೆ. ಹಾಗಾದರೆ ನಾವೆಂದರೆ ನಮ್ಮ ಹೆಸರಲ್ಲ ಎಂದಾಯಿತು.

ಮತ್ತೆ ಪ್ರಶ್ನಿಸಿದರೆ ನಾನು ಇಂಥವರ ಮಗ ಅಥವಾ ಮಗಳು ಎಂದೋ, ಇಂಥ ಕುಟುಂಬಕ್ಕೆ ಸೇರಿದವರು ಎಂದೋ, ಇಂಥ ಜಾತಿ ಅಥವಾ ಪಂಗಡದವರು ಎಂದೋ, ಇಂಥ ಊರಿನವರು ಎಂದೋ, ಇಂಥ ಉದ್ಯೋಗದಲ್ಲಿರುವವರು ಎಂದೋ- ನಾನಾ ಉತ್ತರಗಳು ಬರುತ್ತಲೇ ಇರಬಹುದು. ಅವೆಲ್ಲ ನಮ್ಮ ವಿಳಾಸದ ವಿಚಾರವಾಯಿತೇ ಹೊರತು ನಾವು ಯಾರು ಎಂದು ಸಿದ್ಧಪಡಿಸಿದಂತೆ ಆಗಲಿಲ್ಲ.

ಹೆಚ್ಚೆಂದರೆ ಎಲ್ಲವಕ್ಕೂ ಒಂದೊಂದು ಗುರುತಿನ ಪತ್ರವನ್ನು ತಂದು ತೋರಿಸಬಹುದು. ಮಳೆಯಲ್ಲಿ ನೆನೆದರೆ, ಬೆಂಕಿಯಲ್ಲಿ ಬೆಂದರೆ ಆ ಗುರುತಿನ ಪತ್ರ ಉಳಿಯುವುದಿಲ್ಲ. ಮತ್ತೆ ಹೊಸದಾಗಿ ಮಾಡಿಸಬೇಕು. ಗುರುತಿನ ಪತ್ರ ಇಲ್ಲದೆಯೇ ನಮ್ಮನ್ನು ನಾವು ಉದ್ಘಾಟಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವೇ?

ಸಮಾಜದಲ್ಲಿ ನಾವು ವಿವಿಧ ಅಸ್ಮಿತೆಗಳಿಂದ ಗುರುತಿಸಿಕೊಳ್ಳುತ್ತೇವೆ: ತಂದೆ, ಗಂಡ, ಹೆಂಡತಿ, ಪ್ರಯಾಣಿಕ, ಗೆಳೆಯ, ಅಧ್ಯಾಪಕ... ಮಕ್ಕಳಿರುವುದರಿಂದ ತಂದೆ, ಹೆಂಡತಿಯಿರುವುದರಿಂದ ಗಂಡ, ಗಂಡ ಇರುವುದರಿಂದ ಹೆಂಡತಿ, ಪಾಠ ಮಾಡುತ್ತಿರುವುದರಿಂದ ಅಧ್ಯಾಪಕ, ಬಸ್ಸಿನಲ್ಲಿರುವುದರಿಂದ ಪ್ರಯಾಣಿಕ. ಅಂದರೆ ಅವೆಲ್ಲ ನಾವಿರುವ ಪರಿಸರ ಅಥವಾ ಸ್ಥಾನದಿಂದಾಗಿ ಅಥವಾ ನಾವು ನಿರ್ವಹಿಸುತ್ತಿರುವ ಕಾರ್ಯದಿಂದಾಗಿ ಒದಗಿರುವ ಉಪಾಧಿಗಳೇ ಹೊರತು ನಿಜವಾದ ಅಸ್ಮಿತೆಗಳಲ್ಲ. ಪಾತ್ರಗಳು ಬದಲಾದಂತೆ ನಮ್ಮ ಉಪಾಧಿಗಳು, ಅಸ್ಮಿತೆಗಳು ಬದಲಾಗುತ್ತಾ ಹೋಗುತ್ತವೆ. ಹೊಸ ಉಪಾಧಿಗಳು ಬಂದಂತೆಲ್ಲ ವಾಸ್ತವದಿಂದ ದೂರ ಸರಿಯುತ್ತಲೇ ಇರುತ್ತೇವೆ.

ಹಾಗಾದರೆ ‘ನಾನು ಯಾರು?’ ಮತ್ತದೇ ಪ್ರಶ್ನೆ. ಈ ಪ್ರಶ್ನೆಯನ್ನು ಮನಸ್ಸಿಗೆ ಮತ್ತೆ ಮತ್ತೆ ಕೇಳಿದಾಗೆಲ್ಲ ಸತ್ಯದ ಅರಿವಾಗುತ್ತಾ ಹೋಗುತ್ತದೆ. ನಮ್ಮ ಅಸ್ಮಿತೆಯಷ್ಟೇ ಅಲ್ಲದೆ, ನಮ್ಮ ಇತಿಮಿತಿಗಳೂ ಅರ್ಥವಾಗುತ್ತಾ ಹೋಗುತ್ತವೆ. ನಾವು ಏನು ಎಂದು ತಿಳಿಯುವಷ್ಟೇ ನಾವು ಏನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದೂ ಮುಖ್ಯ. ನಾವು ಏನು ಮತ್ತು ಏನಲ್ಲ ಎಂದು ತಿಳಿದುಕೊಳ್ಳುವುದಕ್ಕೆ ಸ್ವಸ್ಥಾನಪರಿಜ್ಞಾನವೆಂದು ಹೆಸರು. ಬದುಕಿನಲ್ಲಿ ಎದುರಾಗುವ ಹಲವು ದುಃಖ, ಸಂಕಟಗಳಿಗೆ ಸ್ವಸ್ಥಾನಪರಿಜ್ಞಾನ ಇಲ್ಲದಿರುವುದೇ ಕಾರಣ.

ಶ್ರೀಮಂತಿಕೆಯಿದೆಯೆಂದು ಬೀಗುತ್ತೇವೆ. ತುಂಬ ಸಂಪಾದಿಸಿದ್ದೇವೆ ಎಂದು ಬೀಗುತ್ತೇವೆ. ಜನಪ್ರಿಯರಾಗಿದ್ದೇವೆ ಎಂದು ಬೀಗುತ್ತೇವೆ. ಹಲವು ಪ್ರಶಸ್ತಿ-ಪದವಿಗಳನ್ನು ಪಡೆದುಕೊಂಡಿದ್ದೇವೆ ಎಂದು ಬೀಗುತ್ತೇವೆ. ಬೀಗಿದಷ್ಟೂ ಬಾಗುವುದು ಕಡಿಮೆಯಾಗುತ್ತದೆ. ಬಾಗದೇ ಹೋದರೆ ಕೆಲವೊಮ್ಮೆ ಫಟ್ಟನೆ ತುಂಡಾಗಿಬಿಡುವುದೂ ಇದೆ. ಸಾಧನೆಯ ತುತ್ತತುದಿಯಲ್ಲಿದ್ದೇವೆ ಎಂಬ ಭ್ರಮೆಯಲ್ಲಿರುವಾಗಲೇ ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಪ್ರಪಾತಕ್ಕೆ ಬಿದ್ದಿರುತ್ತೇವೆ.

ಕೆಲವೊಮ್ಮೆ ತುಂಬ ಕೊರಗುತ್ತೇವೆ. ಎಷ್ಟು ವರ್ಷ ದುಡಿದರೂ ಬದುಕಿನ ಬಂಡಿ ಒಂದು ಹದಕ್ಕೆ ಬಂದಿಲ್ಲವೆಂದೋ, ಎಷ್ಟು ಸಂಪಾದಿಸಿದರೂ ಕೈಯಲ್ಲೊಂದು ಕಾಸೂ ಉಳಿಯುತ್ತಿಲ್ಲವೆಂದೋ, ಕಷ್ಟಗಳೆಲ್ಲ ನಮಗೇ ಬರುತ್ತಿವೆ ಎಂದೋ, ಮಕ್ಕಳು ಮಾತನ್ನು ಕೇಳುತ್ತಿಲ್ಲ ಎಂದೋ, ಉಪಕಾರ ಪಡೆದುಕೊಂಡವರೆಲ್ಲ ತಿರುಗಿಬಿದ್ದಿದ್ದಾರೆಂದೋ, ಸುತ್ತಮುತ್ತಲಿನವರೆಲ್ಲ ನಮ್ಮ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆಂದೋ ಕೊರಗುತ್ತಲೇ ಇರುತ್ತೇವೆ. ಯಾವುದೋ ಒಂದು ದಿನ ಎಲ್ಲ ಕೊರಗುವಿಕೆಗಳೂ ಏಕಾಏಕಿ ಮಾಯವಾಗಿ ಸಂತೋಷದ ಉತ್ತುಂಗಕ್ಕೆ ತಲುಪಿರುತ್ತೇವೆ.

ಅಂದರೆ ಯಾವುದೂ ಶಾಶ್ವತವಲ್ಲ. ಬದಲಾವಣೆಯೊಂದೇ ಶಾಶ್ವತವಾದದ್ದು. ಬದುಕೊಂದು ಜಲಚಕ್ರ. ಕೆಳಗಿರುವುದು ಮೇಲೇರುತ್ತದೆ. ಮೇಲೇರಿದ್ದು ಕೆಳಗಿಳಿಯುತ್ತದೆ. ಇದು ಸಂಪೂರ್ಣ ಅರ್ಥವಾದಾಗ ಭ್ರಾಂತಿ ತೊಲಗುತ್ತದೆ. ಯಾರೋ ಔಪಚಾರಿಕತೆಗಾಗಿಯೋ, ಸ್ವಂತ ಲಾಭಕ್ಕಾಗಿಯೋ ನಮ್ಮನ್ನು ಬಹುವಾಗಿ ಹೊಗಳಿ ಉಬ್ಬಿಸಲು ಪ್ರಯತ್ನಿಸಬಹುದು. ಇನ್ಯಾರೋ ಮತ್ಸರದಿಂದಲೋ, ಘಾತಿಸುವ ಉದ್ದೇಶದಿಂದಲೋ ನಮ್ಮಲ್ಲಿ ನಿರಾಶೆಯನ್ನು ತುಂಬಲು ಪ್ರಯತ್ನಿಸಬಹುದು. ಸ್ವಸ್ಥಾನಪರಿಜ್ಞಾನವುಳ್ಳವನು ಹೊಗಳಿಯಿಂದ ಹಿಗ್ಗುವುದೋ, ನಿಂದೆಯಿಂದ ಕುಗ್ಗುವುದೋ ಆಗಬಾರದು. ತನ್ನ ಸಾಮರ್ಥ್ಯ
 ಮತ್ತು ಮಿತಿಗಳ ಅರಿವು ಇರುವವನಿಗೆ ಇವುಗಳಿಂದ ಯಾವ ಪರಿಣಾಮವೂ ಆಗುವುದಿಲ್ಲ. ಆ ಸ್ಥಿತಿಗೆ ಸ್ಥಿತಪ್ರಜ್ಞತೆ ಎಂದು ಹೆಸರು. ಅದು ಸ್ವಸ್ಥಾನಪರಿಜ್ಞಾನದಿಂದ ಹುಟ್ಟಿಕೊಳ್ಳುವ ಆನಂದದ ಭಾವ.

‘ನೀನು ಯಾವ ಪುಸ್ತಕ ಓದುತ್ತೀಯೋ, ಅದು ನೀನಾಗುತ್ತಿ; ಯಾವ ಸಿನಿಮಾ ನೋಡುತ್ತೀಯೋ, ಅದು ನೀನಾಗುತ್ತಿ; ಯಾವ ಸಂಗೀತ ಕೇಳುತ್ತೀಯೋ ಅದು ನೀನಾನುತ್ತಿ; ಯಾರೊಂದಿಗೆ ಸಮಯ ಕಳೆಯುತ್ತೀಯೋ, ಅವರೇ ನೀನಾಗುತ್ತಿ. ಆದ್ದರಿಂದ ನೀನು ಯಾರಾಗಬೇಕು ಎಂಬುದನ್ನು ನಿರ್ಧರಿಸಬೇಕಾದುದು ನೀನೇ’ ಎನ್ನುತ್ತಾನೆ ಒಬ್ಬ ದಾರ್ಶನಿಕ.

‘ಬ್ರಹ್ಮ ಸತ್ಯಂ, ಜಗನ್ಮಿಥ್ಯಾ, ಜೀವೋ ಬ್ರಹ್ಮೈವನಾಪರಃ’ ಎಂದರು ಆಚಾರ್ಯ ಶಂಕರರು. ಬ್ರಹ್ಮವು ಸತ್ಯ, ಜಗತ್ತು ಮಿಥ್ಯ, ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ ಎಂಬುದು ಅವರ ಅದ್ವೈತ ದರ್ಶನದ ಸಾರ. ಈ ಜಗತ್ತನ್ನು ತನ್ನ ಪ್ರಭಾವಳಿಯಲ್ಲಿ ಹಿಡಿದಿಟ್ಟುಕೊಂಡಿರುವ ಒಂದು ಮಹೋನ್ನತ ಶಕ್ತಿಯಿದೆ; ಅದನ್ನು ಕೆಲವರು ದೇವರು ಎಂದರು, ಇನ್ನು ಕೆಲವರು ಪ್ರಕೃತಿ ಎಂದರು. ಅಂತೂ ತಾನು ಅದರ ಒಂದು ಭಾಗ, ಅಥವಾ ಅದೇ ತಾನು ಎಂದು ಅರ್ಥವಾದಾಗ ಉಳಿದೆಲ್ಲ ಅಸ್ಮಿತೆಗಳ ಭ್ರಮೆ ತಾನಾಗಿಯೇ ಕರಗಿ ಹೋಗುತ್ತದೆ. ಆಗ ಉಳಿಯುವುದು ನಿರುಮ್ಮಳತೆಯ, ನಿರ್ವ್ಯಾಮೋಹದ, ಆನಂದದ ಭಾವ.

ಈ ಸತ್-ಚಿತ್-ಆನಂದದ ಸ್ವರೂಪ ಅಷ್ಟು ಸುಲಭವಾಗಿ ದಕ್ಕುವುದೇ? ‘ನಾನು ಹೋದರೆ ಹೋದೇನು’ ಎಂದು ಹೇಳಿದ ಕನಕದಾಸರ ಹಿಂದೆ ವ್ಯಾಸತೀರ್ಥರಿದ್ದರು. ಹೌದು, ಲೋಹಗಳ ನಡುವಿನಿಂದ ಚಿನ್ನವನ್ನು ಬೇರ್ಪಡಿಸುವುದಕ್ಕೆ ಒಬ್ಬ ಚಿನಿವಾರ ಬೇಕಿರುವಂತೆ ನಾವು ಯಾರು ಎಂದು ಅಂತಿಮವಾಗಿ ಅರ್ಥ ಮಾಡಿಕೊಳ್ಳಲು ಒಬ್ಬ ಗುರು ಬೇಕು. ಆತ ನಮ್ಮ ಅಂತರಂಗಕ್ಕೆ ಇಳಿದು ಬೆಳಕಿನ ಹಣತೆ ಹಚ್ಚಬಲ್ಲ. ಕತ್ತಲಲ್ಲಿರುವ ಎಲ್ಲರಿಗೂ ಬೇಕಾಗಿರುವುದು ಒಬ್ಬ ಗುರು. ಗುರುವನ್ನು ಹುಡುಕಿಹೊರಟವನಿಗೆ ಕತ್ತಲೆಂಬುದೇ ಇಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಅಕ್ಟೋಬರ್ 13, 2019

ಕೊಟ್ಟ ಕುದುರೆಯನೇರಲರಿಯದೆ...

13 ಅಕ್ಟೋಬರ್ 2019ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ

ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಹೊರಟವರದ್ದು ಅಸಹಾಯಕತೆಯಲ್ಲವೆ?
“ಯಾರು ಪತ್ರಿಕೆಗಳ ಆಕ್ಷೇಪಣೆಗಳನ್ನು ಎದುರಿಸಬಲ್ಲಷ್ಟು ಸಾಹಸ ಸಾಮಥ್ರ್ಯಗಳನ್ನು ಪಡೆದಿರುವರೋ ಅಂಥವರು ಮಾತ್ರವೇ ಸರಕಾರವನ್ನು ನಡೆಸಲು ಅರ್ಹರಾಗಿರುತ್ತಾರೆ. ಯಾರು ಪತ್ರಿಕೆಗಳಿಗೆ ಅಂಜುವಷ್ಟು ದುರ್ಬಲರೂ, ಪತ್ರಿಕೆಗಳ ಚಳವಳಿಯಿಂದಲೇ ಪ್ರಜೆಗಳ ಅಪನಂಬಿಕೆಗೆ ಪಾತ್ರರಾಗಿ ಅಧಿಕಾರವನ್ನು ಕಳೆದುಕೊಳ್ಳುವಷ್ಟು ಅವಿಚಕ್ಷಣರೂ ಅಪ್ರಶಸ್ತರೂ ಆಗಿರುವರೋ, ಅಂಥವರು ಸರಕಾರವನ್ನು ಬಿಡುವುದೇ ಲೇಸು.” ಕನ್ನಡ ಪತ್ರಿಕಾರಂಗದ ಶಕಪುರುಷರಲ್ಲಿ ಒಬ್ಬರೆನಿಸಿದ ಡಿವಿಜಿಯವರು ಈ ಮಾತನ್ನು ಹೇಳಿ ಇನ್ನೇನು ಒಂದು ಶತಮಾನವಾಗುತ್ತಾ ಬಂತು.

ಅವರು ಹೀಗೆಂದು ಹೇಳಿದಾಗ ಟಿವಿ ಚಾನೆಲ್‍ಗಳೂ ಇರಲಿಲ್ಲ, ಮಾಧ್ಯಮರಂಗದ ಒಟ್ಟಾರೆ ಪರಿಸ್ಥಿತಿಯೂ ಹೀಗಿರಲಿಲ್ಲ.
ಅಂದಿಗೂ ಇಂದಿಗೂ ಆಕಾಶ-ಪಾತಾಳದಷ್ಟು ಅಂತರ. ಆದರೆ ಆಳುವ ವರ್ಗದ ಮನಸ್ಥಿತಿ ಮಾತ್ರ ಎಲ್ಲಾ ಕಾಲದಲ್ಲೂ ಒಂದೇ ರೀತಿ ಇರುತ್ತದೆ ಎಂಬುದಕ್ಕೆ ಸದ್ಯದ ಬೆಳವಣಿಗೆಗಳೇ ಸಾಕ್ಷಿ. ಪತ್ರಿಕೆಗಳನ್ನು ನಿಯಂತ್ರಿಸಲು ಬ್ರಿಟಿಷ್ ದೊರೆಗಳು ಒಂದಾದಮೇಲೊಂದರಂತೆ ಕಾಯ್ದೆಗಳನ್ನು ರೂಪಿಸುತ್ತಿದ್ದುದಕ್ಕೂ, ತುರ್ತುಪರಿಸ್ಥಿತಿಯ ಹೆಸರಿನಲ್ಲಿ ಮಾಧ್ಯಮಗಳು ಪ್ರಭುತ್ವದ ಕಾಲ್ತುಳಿತಕ್ಕೆ ಸಿಲುಕಿದ್ದಕ್ಕೂ, ಪ್ರಸ್ತುತ ಕರ್ನಾಟಕ ವಿಧಾನಸಭೆ ಪ್ರವೇಶಕ್ಕೆ ಖಾಸಗಿ ಚಾನೆಲ್‍ಗಳ ಕ್ಯಾಮೆರಾಮೆನ್ ಹಾಗೂ ಪತ್ರಿಕಾ ಛಾಯಾಗ್ರಾಹಕರಿಗೆ ನಿರ್ಬಂಧ ವಿಧಿಸಿದ್ದಕ್ಕೂ ಅಂತಹ ವ್ಯತ್ಯಾಸವೇನೂ ಕಾಣುತ್ತಿಲ್ಲ. ಎಲ್ಲವೂ ವಿವಿಧ ಕಾಲಘಟ್ಟದ ಆಳುವವರ್ಗದ ಒಂದೇ ಮನಸ್ಥಿತಿಯ ಪ್ರತೀಕಗಳಷ್ಟೇ.

ಆಡಳಿತಾರೂಢರ ಮತ್ತು ಮಾಧ್ಯಮಗಳ ತಿಕ್ಕಾಟ ಪತ್ರಿಕೆಗಳು ಹುಟ್ಟಿಕೊಂಡಲ್ಲಿಂದಲೂ ಇದೆ. ಭಾರತದ ಪ್ರಪ್ರಥಮ ಪತ್ರಿಕೆಯ ಸಂಪಾದಕ ಜೇಮ್ಸ್ ಆಗಸ್ಟಸ್ ಹಿಕಿಯೇ ಒಂದೆರಡು ವರ್ಷದ ಪ್ರಭುತ್ವದೊಂದಿಗಿನ ಗುದ್ದಾಟದಲ್ಲಿ ನಾಮಾವಶೇಷವಾಗಿಹೋಗಿದ್ದ. ಇತಿಹಾಸದಲ್ಲಿ ಅಂತಹ ನೂರಾರು ಕತೆಗಳು ಇವೆ. ಸರ್ಕಾರ-ಮಾಧ್ಯಮಗಳ ನಡುವೆ ಒಂದು ಆರೋಗ್ಯಕರ ಗುದ್ದಾಟ ಯಾವತ್ತಿಗೂ ಅಪೇಕ್ಷಣೀಯವೇ. ಅದೊಂದು ಬಗೆಯ ಮೊಸರು-ಕಡೆಗೋಲು ನಡುವಿನ ಘರ್ಷಣೆಯ ಹಾಗೆ. ಅದರ ಕೊನೆಯಲ್ಲಿ ಸಿಗುವುದು ಪ್ರಜಾಪ್ರಭುತ್ವವೆಂಬ ನವನೀತ. ಆದರೆ ಈ ತಿಕ್ಕಾಟ ಪರಸ್ಪರರನ್ನು ಕೊಲ್ಲುವ ಯುದ್ಧವಾಗಿ ಮಾರ್ಪಟ್ಟಾಗ ಮಾತ್ರ ಪ್ರಜಾಪ್ರಭುತ್ವದ ಒಟ್ಟಾರೆ ಆಶಯವೇ ನಾಶವಾಗುತ್ತದೆ.

ಟೀಕೆಗೆ ಟೀಕೆಯ ರೂಪದಲ್ಲೂ, ಸಮರ್ಥನೆಯ ರೂಪದಲ್ಲೂ, ತಪ್ಪನ್ನು ತಿದ್ದಿಕೊಳ್ಳುವ ಮೂಲಕವೂ ಉತ್ತರ ನೀಡಬಹುದು. ಟೀಕೆಯನ್ನೇ ಮಾಡಬೇಡಿ ಎಂದೋ, ನೀವು ಸಮೀಪಕ್ಕೆ ಬರಬೇಡಿ ಎಂದೋ ಕಾನೂನು ಮಾಡುವುದು ಸರಿಯಾದ ವಿಧಾನ ಅಲ್ಲ. ಅದು ಡಿವಿಜಿ ಹೇಳುವ ಹಾಗೆ ಅವಿಚಕ್ಷಣರೂ ಅಪ್ರಶಸ್ತರೂ ಮಾಡುವ ಕೆಲಸ. ಇದನ್ನೂ ಕೂಡ ಕರ್ನಾಟಕದಲ್ಲಿ ಗುಂಡೂರಾಯರಿಂದ ತೊಡಗಿ ಕುಮಾರಸ್ವಾಮಿಯವರೆಗೆ ಅನೇಕ ಮಂದಿ ಮಾಡಿಕೊಂಡು ಬಂದಿದ್ದಾರೆ.

80ರ ದಶಕದ ಆರಂಭದಲ್ಲಿ ಗುಂಡೂರಾಯರು ಪತ್ರಕರ್ತರನ್ನೆಲ್ಲ ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಎಂದು ಗುಡುಗಿದ್ದು ಗೊತ್ತೇ ಇದೆ.  1988ರಲ್ಲೇ ರಾಮಕೃಷ್ಣ ಹೆಗಡೆಯವರು ಮಾಧ್ಯಮಗಳನ್ನು ನಿಯಂತ್ರಿಸುವ ದೂರಾಲೋಚನೆಯೊಂದಿಗೆ ಕರ್ನಾಟಕ ಶಾಸಕಾಂಗ (ಅಧಿಕಾರಗಳು, ಸವಲತ್ತುಗಳು & ವಿನಾಯಿತಿಗಳು) ಮಸೂದೆಯನ್ನು ಪ್ರಸ್ತಾಪಿಸಿದ್ದರು ಮತ್ತು ಮಾಧ್ಯಮವಲಯದ ಟೀಕೆಗೂ ಗುರಿಯಾಗಿದ್ದರು. ಆದರೆ ಅವರ ರಾಜೀನಾಮೆಯ ಬಳಿಕ ಅದು ಮೂಲೆಸೇರಿತು. 2012ರಲ್ಲಿ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಸದನಕ್ಕೊಂದು ಪ್ರತ್ಯೇಕ ಚಾನೆಲನ್ನೇ ರೂಪಿಸುವ ಚರ್ಚೆ ಮುನ್ನೆಲೆಗೆ ಬಂದು ವಾದವಿವಾದಗಳು ನಡೆದುಹೋದವು. ಆಗಿನ್ನೂ ಮೂವರು ಸಚಿವರು ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ದೃಶ್ಯಗಳು ಜಗಜ್ಜಾಹೀರಾದ ಸಮಾಚಾರ ಹಸಿಹಸಿಯಾಗಿದ್ದರಿಂದ ಸ್ವತಂತ್ರ ಚಾನೆಲ್‍ನ ಪ್ರಸ್ತಾಪ ಬೇರೆಯೇ ಸ್ವರೂಪ ಪಡೆದುಕೊಂಡಿತು. ನಿಧಾನಕ್ಕೆ ಅದೂ ಜನರಿಗೆ ಮರೆತುಹೋಯಿತು. 2017ರಲ್ಲಿ ಆಗ ಸ್ಪೀಕರ್ ಆಗಿದ್ದ ಕೆ. ಬಿ. ಕೋಳೀವಾಡ ಮಾಧ್ಯಮಗಳಿಗೆ ‘ಲಕ್ಷ್ಮಣರೇಖೆ’ಯೊಂದನ್ನು ಎಳೆಯುವುದಕ್ಕಾಗಿ ಸದನ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪ ಮಾಡಿದ್ದರು. ತಾನು ಯಾವ ಚಾನೆಲ್‍ನವರೊಂದಿಗೂ ಮಾತನಾಡುವುದಿಲ್ಲವೆಂದು ಕಳೆದ ಚುನಾವಣೆ ವೇಳೆ ಕುಮಾರಸ್ವಾಮಿಯವರು ಪ್ರತಿಜ್ಞೆ ಮಾಡಿದ್ದನ್ನು ಕೂಡ ಜನ ಮರೆತಿಲ್ಲ. ಈಗ ವಿಧಾನಸಭಾಧ್ಯಕ್ಷರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕ್ಯಾಮೆರಾಮೆನ್, ಛಾಯಾಗ್ರಾಹಕರ ಪ್ರವೇಶವನ್ನೇ ನಿರ್ಬಂಧಿಸುವ ನಿರ್ಧಾರಕ್ಕೆ ಬಂದಿರುವುದರಿಂದ ಮಾಧ್ಯಮಗಳೆಡೆಗಿನ ಸರ್ಕಾರದ ಅಸಹಿಷ್ಣುತೆ ಗರಿಷ್ಠ ಹಂತವನ್ನು ತಲುಪಿದಂತಾಗಿದೆ.

ನ್ಯಾಯಾಲಯ ವರದಿಗಾರಿಕೆಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸುವ ಸಂಬಂಧ ಜನಾಭಿಪ್ರಾಯವನ್ನು ಪಡೆಯುವುದಕ್ಕಾಗಿ 2012ರಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಆಗಿನ ಮುಖ್ಯ ನ್ಯಾಯಾಧೀಶ ಎಸ್.ಎಚ್. ಕಪಾಡಿಯಾ ನೇತೃತ್ವದಲ್ಲಿ ಪಂಚಸದಸ್ಯ ಪೀಠವೊಂದನ್ನು ರಚಿಸಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು. ಆದರೆ ಸುಪ್ರೀಂ ಕೋರ್ಟ್ ಅನುಸರಿಸಿದ ವಿಧಾನ ಪ್ರಸ್ತುತ ವಿದ್ಯಮಾನಕ್ಕಿಂತ ಭಿನ್ನವಾಗಿತ್ತು. ಮಾಧ್ಯಮಗಳ ಸಂಪಾದಕರೂ ಸೇರಿದಂತೆ ಸಮಾಜದ ವಿವಿಧ ವಲಯಗಳ ಪ್ರತಿನಿಧಿಗಳ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಲಾಗಿತ್ತು.

ಸಂವಿಧಾನದ 21ನೇ ಪರಿಚ್ಛೇದ ಹಾಗೂ 19(1)(ಎ) ಪರಿಚ್ಛೇದದ ನಡುವೆ ಸಮತೋಲನ ತರುವುದೇ ನಮ್ಮ ಪ್ರಸ್ತಾಪದ ಆಶಯ ಎಂದ ಸರ್ವೋಚ್ಛ ನ್ಯಾಯಾಲಯ, ‘ಮಾಧ್ಯಮಗಳ ಸಂಪಾದಕೀಯ ವಸ್ತುವಿಚಾರಗಳನ್ನು ನಿಯಂತ್ರಿಸುವಲ್ಲಿ ನಮಗೆ ಆಸಕ್ತಿ ಇಲ್ಲ. ತಪ್ಪು ಮಾಡುವ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಅಂತಹ ತಪ್ಪುಗಳಾಗದಂತೆ ತಡೆಗಟ್ಟುವುದೇ ನಮ್ಮ ಉದ್ದೇಶ’ ಎಂದು ಸ್ಪಷ್ಟೀಕರಿಸಿತು. ಆ ನಂತರ ನಡೆದ ಚರ್ಚೆಗಳೂ ಅಷ್ಟೇ ಆರೋಗ್ಯಕರವಾಗಿದ್ದವು.

‘ನ್ಯಾಯಾಂಗದ ತುತ್ತತುದಿಯಲ್ಲಿರುವ ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಿಬಿಟ್ಟರೆ ಅದು ಸರ್ಕಾರದ ಇತರ ಅಂಗಗಳಿಗೂ ಪ್ರೇರಣೆಯಾಗುವ ಸಾಧ್ಯತೆಯಿದೆ; ಸಂಸತ್ತು, ರಾಜ್ಯ ವಿಧಾನಸಭೆಗಳು, ಸಚಿವಾಲಯಗಳು ಹೀಗೆ ಎಲ್ಲರೂ ಪತ್ರಕರ್ತರಿಗೆ ನಿಯಮಗಳನ್ನು ರೂಪಿಸುತ್ತಾ ಹೋಗುವುದಕ್ಕೆ ಕಾರಣವಾಗಬಹುದು’ ಎಂದು ಅನೇಕ ಹಿರಿಯ ಪತ್ರಕರ್ತರು ಆತಂಕ ವ್ಯಕ್ತಪಡಿಸಿದರು. ಕೊನೆಗೆ ಸುಪ್ರೀಂ ಕೋರ್ಟ್ ತನ್ನ ಪ್ರಸ್ತಾಪದಿಂದ ಹಿಂದೆ ಸರಿಯಬೇಕಾಯಿತು.

ಮಾಧ್ಯಮಗಳಿಗೆ ಒಂದು ಹಂತದ ನಿಯಂತ್ರಣ ಅಗತ್ಯ ಎಂದು ವಾದಿಸುತ್ತಲೇ ಇದ್ದ ನ್ಯಾ| ಮಾರ್ಕಾಂಡೇಯ ಕಟ್ಜು ಕೂಡ ಅದನ್ನು ಸರ್ಕಾರ ಮಾಡಬೇಕೆಂದು ಎಲ್ಲೂ ಹೇಳಲಿಲ್ಲ. ಅವರು ಹೇಳುತ್ತಿದ್ದುದು ಭಾರತೀಯ ಪತ್ರಿಕಾ ಮಂಡಳಿಗೆ ಹೆಚ್ಚಿನ ಅಧಿಕಾರ ಕೊಡಿ ಎಂದಷ್ಟೇ. ಅಂದರೆ ತನ್ನ ಕೆಲಸಕಾರ್ಯ, ನೀತಿನಿಯಮ, ನಿಯಂತ್ರಣ ಇತ್ಯಾದಿಗಳನ್ನೆಲ್ಲ ಮಾಧ್ಯಮವಲಯವೇ ನೋಡಿಕೊಳ್ಳಬೇಕು, ಹೊರಗಿನವರಲ್ಲ ಎಂಬುದು ಅವರ ಒತ್ತಾಯದ ತಿರುಳಾಗಿತ್ತು. ‘ರೆಗ್ಯುಲೇಶನಿಗೂ ಕಂಟ್ರೋಲ್‍ಗೂ ವ್ಯತ್ಯಾಸವಿದೆ. ಮಾಧ್ಯಮಗಳನ್ನು ಕಂಟ್ರೋಲ್ ಮಾಡಬೇಕಾದ್ದಲ್ಲ; ರೆಗ್ಯುಲೇಶನ್ ರೂಪಿಸಬಹುದು. ಆ ಅಧಿಕಾರವನ್ನು ಪತ್ರಿಕಾ ಮಂಡಳಿಗೆ ಕೊಡಿ’ ಎಂಬುದು ಅವರ ವಾದ.

ಆದರೆ ಕರ್ನಾಟಕ ವಿಧಾನಸಭೆಯ ಹೊಸ ಹೆಜ್ಜೆ ‘ಕಂಟ್ರೋಲ್’ ಹಂತಕ್ಕೆ ಹೋಗಿದೆ. ಮಾಧ್ಯಮಗಳ ಕಾರ್ಯನಿರ್ವಹಣೆ ಹದತಪ್ಪಿಹೋಗದಂತೆ ನೋಡಿಕೊಳ್ಳುವುದಕ್ಕೆ ಈಗಾಗಲೇ ಇರುವ ನೀತಿನಿಯಮ, ಕಾನೂನುಗಳೇ ಬೆಟ್ಟದಷ್ಟಿವೆ. ಭಾರತೀಯ ದಂಡ ಸಂಹಿತೆಯಿಂದ ತೊಡಗಿ ಈ ದೇಶದ ಒಂದೊಂದು ಕಾನೂನು ಕೂಡ ಜನಸಾಮಾನ್ಯರಿಗೆ ಅನ್ವಯಿಸಿದಷ್ಟೇ ಸಮಾನವಾಗಿ ಪತ್ರಕರ್ತರಿಗೂ ಅನ್ವಯಿಸುತ್ತದೆ. ನಮ್ಮ ಸಂವಿಧಾನವೇ ಎಲ್ಲ ಕಾನೂನುಗಳ ಅಗ್ರಜ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವ 19(1)(ಎ) ಪರಿಚ್ಛೇದದ ಬೆನ್ನಿಗೇ 19(2) ಪರಿಚ್ಛೇದದಲ್ಲಿ ‘ಸಕಾರಣ ನಿರ್ಬಂಧ’ಗಳೂ ಇವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದ್ದರೂ ದೇಶದ ಸಾರ್ವಭೌಮತೆ ಮತ್ತು ಐಕ್ಯತೆ, ಭದ್ರತೆ, ನೈತಿಕತೆ, ನ್ಯಾಯಾಂಗ ನಿಂದನೆ, ಮಾನಹಾನಿ, ಅಪರಾಧದ ಚಿತಾವಣೆಯಂತಹ ಸನ್ನಿವೇಶಗಳಲ್ಲಿ ಆ ಸ್ವಾತಂತ್ರ್ಯವನ್ನು ಸರ್ಕಾರ ನಿರ್ಬಂಧಿಸಬಹುದು ಎನ್ನುತ್ತದೆ ಸಂವಿಧಾನದ 19(2)ನೇ ಪರಿಚ್ಛೇದ.

ತಮ್ಮ ಕಾರ್ಯಕಲಾಪಗಳನ್ನು ಸಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕೆ ಸಂಸತ್ತು ಮತ್ತು ರಾಜ್ಯವಿಧಾನಮಂಡಲಗಳಿಗೆ ಸ್ವತಃ ಸಂವಿಧಾನವೇ ವಿಶೇಷಾಧಿಕಾರವನ್ನು (ಪಾರ್ಲಿಮೆಂಟರಿ ಪ್ರಿವಿಲಿಜಸ್) ನೀಡಿದೆ. ತನ್ನ ನೀತಿನಿಯಮಗಳನ್ನು ತಾನೇ ರೂಪಿಸಿಕೊಳ್ಳುವುದು, ಅವುಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವುದು ಕೂಡ ಅದರಲ್ಲಿ ಸೇರಿದೆ. ವಿಶೇಷಾಧಿಕಾರವನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ (ಬ್ರೀಚ್ ಆಫ್ ಪ್ರಿವಿಲಿಜಸ್) ಈಗಾಗಲೇ ಅನೇಕ ಮಂದಿ ಪತ್ರಕರ್ತರು, ಮಾಧ್ಯಮಸಂಸ್ಥೆಗಳು ಸದನದ ಛೀಮಾರಿಗೆ ಒಳಗಾದ ಘಟನೆಗಳು ಕರ್ನಾಟಕವೂ ಸೇರಿದಂತೆ ಭಾರತದ ಬೇರೆಬೇರೆ ಭಾಗಗಳಲ್ಲಿ ಸಾಕಷ್ಟು ನಡೆದಿವೆ. ಅಂತಹ ಸಂವಿಧಾನದತ್ತ ವಿಶೇಷಾಧಿಕಾರವನ್ನು ಚಲಾಯಿಸಬೇಡಿರೆಂದೋ, ತೆಗೆದುಹಾಕಿರೆಂದೋ ಯಾರೂ ಈಗ ಪ್ರತಿಭಟನೆ ನಡೆಸುತ್ತಿಲ್ಲ. ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಬಿಟ್ಟು ವಾಹಿನಿಗಳನ್ನೇ ಒಳಕ್ಕೆ ಬರದಂತೆ ನಿರ್ಬಂಧಿಸುತ್ತಿರುವುದರ ಹಿಂದಿನ ರಾಜಕಾರಣವೇನು ಎಂಬುದೇ ಎಲ್ಲರ ಪ್ರಶ್ನೆ.

2002ರಲ್ಲಿ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ 80ನೆಯದಾಗಿತ್ತು. 2016ರಲ್ಲಿ ಅದು 133ಕ್ಕೆ ಕುಸಿಯಿತು. 2019ರಲ್ಲಿ ಅದು ಇನ್ನೂ ಕೆಳಗಿಳಿದು 140ನೇ ರ್ಯಾಂಕಿಗೆ ತಲುಪಿದೆ. ದೇಶದ ಪತ್ರಿಕಾ ಸ್ವಾತಂತ್ರ್ಯದ ಪರಿಸ್ಥಿತಿಗೂ ಪ್ರಸ್ತುತ ವಿದ್ಯಮಾನಕ್ಕೂ ನೇರಸಂಬಂಧವಿಲ್ಲದೇ ಹೋದರೂ, ಇಂತಹ ಬೆಳವಣಿಗೆಗಳೆಲ್ಲ ನಮ್ಮ ಒಟ್ಟಾರೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ.

ಪಾರದರ್ಶಕತೆಯೇ ಪ್ರಜಾಪ್ರಭುತ್ವದ ಜೀವಾಳ. ಮಾಧ್ಯಮ ಸ್ವಾತಂತ್ರ್ಯ ಇಲ್ಲದೇ ಹೋದರೆ ಆಡಳಿತದಲ್ಲ್ಲಿ ಪಾರದರ್ಶಕತೆ ಎಂಬ ಮಾತಿಗೆ ಅರ್ಥವೇ ಇರುವುದಿಲ್ಲ. ಅಧಿಕಾರಿಗಳಷ್ಟೇ ಅಲ್ಲ, ಜನಪ್ರತಿನಿಧಿಗಳೂ ಸದನಗಳಲ್ಲಿ ಏನು ಮಾಡುತ್ತಾರೆ, ಹೇಗೆ ವರ್ತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಒಬ್ಬೊಬ್ಬ ಮತದಾರನಿಗೂ ಇದೆ. ಆ ಹಕ್ಕು ಕಾರ್ಯರೂಪಕ್ಕೆ ಬಂದಾಗಲೇ ಮತದಾರ ನಿಜದರ್ಥದಲ್ಲಿ ಪ್ರಜ್ಞಾವಂತನಾಗುವುದು. ನಿಮ್ಮ ಒಂದೊಂದು ಮತವೂ ಅಮೂಲ್ಯ, ಯೋಗ್ಯರನ್ನು ಆಯ್ಕೆ ಮಾಡಿ ಎಂದು ಪ್ರಚಾರ ಮಾಡಿದರೆ ಸಾಲದು, ತಾನು ಎಂಥವರಿಗೆ ಮತ ಹಾಕುತ್ತಿದ್ದೇನೆ ಎಂದು ಆ ಮತದಾರನಿಗೂ ತಿಳಿಯುವಂತೆ ಮಾಡಬೇಕು. ಮತದಾನ ಮಾಡಿದಲ್ಲಿಗೆ ಮತದಾರನ ಕರ್ತವ್ಯ ಮುಗಿಯಲಿಲ್ಲವಷ್ಟೆ? ಸರ್ಕಾರಿ ಚಾನೆಲ್ ಮೂಲಕ ಪ್ರಸಾರವಾಗುವ ದೃಶ್ಯಗಳನ್ನಷ್ಟೇ ಪ್ರಸಾರ ಮಾಡಿ ಎಂದು ತಾಕೀತು ಮಾಡುವುದರ ಹಿಂದಿನ ಮರ್ಮವೇನು ಎಂದು ವೀಕ್ಷಕರಿಗೆ ಅರ್ಥವಾಗುವುದಿಲ್ಲವೇ? ಎಂಬಲ್ಲಿಗೆ ಸರ್ಕಾರದ ಭಾಗವಾಗಿರುವ ಮತದಾರನ ಮಾಹಿತಿಯ ಹಕ್ಕನ್ನೂ ಕಸಿದುಕೊಂಡಂತೆ ಆಗಲಿಲ್ಲವೇ? ಸದನದ ಗಾಂಭೀರ್ಯತೆ, ಘನತೆ ಕಾಪಾಡುವ ಚಿಂತನೆ ಅದರಲ್ಲಿ ಭಾಗವಹಿಸುವವರಿಂದಲೇ ಬರಬೇಕೇ ಹೊರತು ಮಾಧ್ಯಮಗಳನ್ನು ನಿರ್ಬಂಧಿಸುವ ಮೂಲಕ ಅಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಸೆಪ್ಟೆಂಬರ್ 30, 2019

NET ಪರೀಕ್ಷೆಗೆ ನೆಟ್ಟಗೆ ತಯಾರಾಗಿ!

01 ಒಕ್ಟೋಬರ್ 2019ರ ಉದಯವಾಣಿ (ಜೋಶ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಏನಾದರಾಗಲಿ, ಈ ಬಾರಿ ನೆಟ್ ಪರೀಕ್ಷೆ ಪಾಸಾಗಿಬಿಡಬೇಕು ಎಂದು ಗಟ್ಟಿ ಮನಸ್ಸು ಮಾಡುತ್ತಿರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಸಾಫ್ಟ್‍ವೇರ್ ಇಂಜಿನಿಯರುಗಳಂತೆ ಸಂಬಳ ಪಡೆಯುತ್ತಿರುವುದು, ಇಂತಹ ಹುದ್ದೆಗೆ ಆಯ್ಕೆಯಾಗಲು ನೆಟ್ (NET) ಪರೀಕ್ಷೆ ಪ್ರಾಥಮಿಕ ಅರ್ಹತೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ.

ಯುಜಿಸಿ-ಎನ್‍ಇಟಿ ಹಿಂದಿನಿಂದಲೂ ಒಂದು ಪ್ರತಿಷ್ಠಿತ ಪರೀಕ್ಷೆ. ಅದನ್ನು ತೇರ್ಗಡೆಯಾದವರೆಲ್ಲರಿಗೂ ಸರ್ಕಾರಿ ನೇಮಕಾತಿ ಖಾತ್ರಿಯಲ್ಲವಾದರೂ, ತೇರ್ಗಡೆಯಾಗುವುದೇ ಒಂದು ಹೆಮ್ಮೆಯ ಸಂಗತಿ. ಒಮ್ಮೆ ತೇರ್ಗಡೆಯಾದರೆ ಅದು ಜೀವಮಾನದ ಅರ್ಹತೆ - ಅದಕ್ಕೆ ಎಕ್ಸ್‍ಪಯರಿ ಡೇಟ್ ಇಲ್ಲ; ಅವಕಾಶ ಕೂಡಿ ಬಂದಾಗ ಈ ಅರ್ಹತೆ ಬೆನ್ನಿಗೆ ನಿಲ್ಲುತ್ತದೆ. ಖಾಸಗಿ ಕಾಲೇಜುಗಳೂ ನೆಟ್ ತೇರ್ಗಡೆಯಾದ ಅಭ್ಯರ್ಥಿಗಳಿಗೇ ಮಣೆ ಹಾಕುತ್ತವೆ. ಅತ್ಯುನ್ನತ ಶ್ರೇಣಿಯಲ್ಲಿ ನೆಟ್ ತೇರ್ಗಡೆಯಾದವರು ಪಿಎಚ್‍ಡಿ ಸಂಶೋಧನೆ ಕೈಗೊಳ್ಳುವುದಕ್ಕೆ ಸರ್ಕಾರದಿಂದ ಆಕರ್ಷಕ ಶಿಷ್ಯವೇತನ (JRF) ಪಡೆಯುವುದೂ ನೆಟ್ ಜನಪ್ರಿಯತೆಗೆ ಇನ್ನೊಂದು ಕಾರಣ.

ಕಷ್ಟದ ಪರೀಕ್ಷೆಯೇ?
ಕಷ್ಟವೆನ್ನುವವರಿಗೆ ಕಷ್ಟ, ಸುಲಭವೆನ್ನುವವರಿಗೆ ಸುಲಭ. ಈಜು ಬಲ್ಲವರಿಗೆ ಅದೊಂದು ಆಟ, ನಿಂತು ನೋಡುವವರಿಗೆ ಆತಂಕ. ಆದರೆ ಇದು ಎಂ.ಎ., ಎಂಎಸ್ಸಿ ಪರೀಕ್ಷೆಗಳನ್ನು ಬರೆದಂತೆ ಅಲ್ಲ. ರಾಷ್ಟೀಯ ಅರ್ಹತಾ ಪರೀಕ್ಷೆ. ತೇರ್ಗಡೆಯಾದವರು ದೇಶದ ಯಾವ ಭಾಗದಲ್ಲಾದರೂ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಬಹುದು. ಸ್ನಾತಕೋತ್ತರ ಹಂತದ ಪಠ್ಯಕ್ರಮವೇ ಆದರೂ, ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಗಳ ಸಂಕೀರ್ಣತೆಯಿಂದಾಗಿ ಗಟ್ಟಿ ಮನಸ್ಸು, ಅಪಾರ ಬದ್ಧತೆ ಹಾಗೂ ಶ್ರದ್ಧೆಯ ತಯಾರಿಯನ್ನು ಅಪೇಕ್ಷಿಸುತ್ತದೆ.

ಯಾರು ಬರೆಯಬಹುದು?
ಸ್ನಾತಕೋತ್ತರ ಪದವೀಧರರು ಅಥವಾ ಅದರ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಪರೀಕ್ಷೆ ಬರೆಯಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ. 55, ಒಬಿಸಿ/ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಶೇ. 50 ಅಂಕ ಪಡೆದಿರಬೇಕು. ಸ್ನಾತಕೋತ್ತರ ಪದವಿ ಅಂತಿಮ ವರ್ಷದಲ್ಲೇ ನೆಟ್ ತೇರ್ಗಡೆಯಾದರೆ, ಪದವಿ ಫಲಿತಾಂಶ ಬಂದಮೇಲಷ್ಟೇ ಅರ್ಹತಾ ಪ್ರಮಾಣಪತ್ರ ದೊರೆಯುತ್ತದೆ.

ನೆಟ್ ಬರೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯುವುದಕ್ಕೆ ಗರಿಷ್ಠ ವಯೋಮಿತಿ ಇಲ್ಲ. ಆದರೆ ಸಂಶೋಧನಾ ಫೆಲೋಷಿಪ್ (JRF) ಪಡೆಯಲು ಅರ್ಹರಾಗಬೇಕೆಂದರೆ 30 ವರ್ಷದ ಒಳಗಿನವರಾಗಿರಬೇಕು. ಒಬಿಸಿ/ಎಸ್‍ಸಿ/ಎಸ್‍ಟಿ/ಭಿನ್ನಲಿಂಗಿ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಅವಕಾಶವಿದೆ.

ಯಾರು ನಡೆಸುತ್ತಾರೆ?
ಹಿಂದೆ ಎನ್‍ಇಟಿ ಪರೀಕ್ಷೆಗಳನ್ನು ವಿಶ್ವವಿದ್ಯಾನಿಲಯ ಅನುದಾನ ಆಯೋಗ (UGC) ನಡೆಸುತ್ತಿತ್ತು. ಈಗ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಸ್ಥಾಪಿತವಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುತ್ತದೆ. ಮಾನವಿಕ ವಿಷಯಗಳ (ಕಲೆ, ವಾಣಿಜ್ಯ, ಸಾಹಿತ್ಯ) ಎನ್‍ಇಟಿ ಪರೀಕ್ಷೆಗೆ ಯುಜಿಸಿ ಪ್ರಾಧಿಕಾರವಾದರೆ, ವಿಜ್ಞಾನ ವಿಷಯಗಳ ಎನ್‍ಇಟಿ ಪರೀಕ್ಷೆಗೆ ಯುಜಿಸಿ-ಸಿಎಸ್‍ಐಆರ್ ಪ್ರಾಧಿಕಾರವಾಗಿದೆ. ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (CSIR) ನಮ್ಮ ದೇಶದ ಅತಿದೊಡ್ಡ ಸಂಶೋಧನ ಸಂಸ್ಥೆಗಳಲ್ಲೊಂದು. ಎರಡೂ ಪರೀಕ್ಷೆಗಳಿಗೆ ಬೇರೆಬೇರೆ ಸಮಯದಲ್ಲಿ ಪ್ರತ್ಯೇಕ ಅಧಿಸೂಚನೆ, ಪ್ರಕ್ರಿಯೆ ನಡೆಯುತ್ತದೆ.

ಮಾನವಿಕ ವಿಭಾಗದಲ್ಲಿ ಸುಮಾರು 100 ವಿಷಯಗಳಲ್ಲಿ ಎನ್‍ಇಟಿ ಪರೀಕ್ಷೆ ತೆಗೆದುಕೊಳ್ಳಬಹುದು. ವಿಜ್ಞಾನ ವಿಷಯಗಳಲ್ಲಿ ರಾಸಾಯನಿಕ ವಿಜ್ಞಾನ, ಭೂ ವಿಜ್ಞಾನ, ಜೀವ ವಿಜ್ಞಾನ, ಗಣಿತಶಾಸ್ತ್ರೀಯ ವಿಜ್ಞಾನ ಹಾಗೂ ಭೌತಶಾಸ್ತ್ರೀಯ ವಿಜ್ಞಾನಗಳೆಂಬ ಐದು ವಿಭಾಗಗಳಿವೆ. ತಾವು ಎಂಎಸ್ಸಿ ಓದಿದ ವಿಷಯದ ಎನ್‍ಇಟಿಯನ್ನು ಸಂಬಂಧಿತ ವಿಭಾಗದಲ್ಲಿ ಬರೆಯಬಹುದು. ಹಿಂದೆ ಇಂಜಿನಿಯರಿಂಗ್ ವಿಷಯಗಳಿಗೂ ಎನ್‍ಇಟಿ ನಡೆಯುತ್ತಿತ್ತು, ಈಗ ಇಲ್ಲ.

ಹೇಗಿರುತ್ತದೆ ನೆಟ್?
ಈಗ ಎನ್‍ಇಟಿ ಪರೀಕ್ಷೆ ಆನ್‍ಲೈನ್ ಮಾದರಿಯಲ್ಲಿ ನಡೆಯುತ್ತದೆ. ಕಲೆ/ವಾಣಿಜ್ಯ/ಸಾಹಿತ್ಯ ವಿಷಯಗಳಲ್ಲಿ ಎರಡು ಪ್ರತ್ಯೇಕ ಪತ್ರಿಕೆಗಳಿದ್ದು ಒಟ್ಟು ಮೂರು ಗಂಟೆಯ ಅವಧಿ ಇರುತ್ತದೆ. ಪ್ರಶ್ನೆಗಳು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯವು. ಮೊದಲನೇ ಪತ್ರಿಕೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೂ ಸಾಮಾನ್ಯ. ಇದರಲ್ಲಿ ಎರಡು ಅಂಕಗಳ 50 ಪ್ರಶ್ನೆಗಳಿದ್ದು ಅವು ಬೋಧನೆ ಹಾಗೂ ಸಂಶೋಧನ ಕೌಶಲಗಳಿಗೆ ಸಂಬಂಧಪಟ್ಟವು. ಎರಡನೇ ಪತ್ರಿಕೆ ಆಯಾ ಅಭ್ಯರ್ಥಿಗಳ ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಗಳಿಗೆ ಸಂಬಂಧಪಟ್ಟವು; ಉದಾ: ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಕನ್ನಡ, ಇಂಗ್ಲಿಷ್, ಇತ್ಯಾದಿ. ಇದರಲ್ಲಿ ತಲಾ ಎರಡು ಅಂಕಗಳ 100 ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗಳ ನಡುವೆ ಬ್ರೇಕ್ ಇಲ್ಲ. ಪ್ರಶ್ನೆಗಳ ನಡುವೆ ಆಯ್ಕೆ ಇಲ್ಲ, ನೆಗೆಟಿವ್ ಮಾರ್ಕಿಂಗ್ ಕೂಡ ಇಲ್ಲ.

ವಿಜ್ಞಾನ ವಿಷಯಗಳಲ್ಲಿ ಮೂರು ಗಂಟೆ ಅವಧಿಯ ಒಂದೇ ಪರೀಕ್ಷೆ. ಎರಡು ಪತ್ರಿಕೆಗಳಿಲ್ಲ. 200 ಅಂಕಗಳ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯ ಪತ್ರಿಕೆ. ಇದರಲ್ಲಿ ಮೂರು ವಿಭಾಗಗಳಿರುತ್ತವೆ: ಮೊದಲನೇ ಭಾಗ (30 ಅಂಕ) ಎಲ್ಲರಿಗೂ ಸಾಮಾನ್ಯ; ಎರಡನೇ ಭಾಗ (70 ಅಂಕ) ಅವರವರ ಎಂಎಸ್ಸಿ ವಿಷಯಗಳಿಗೆ ಸಂಬಂಧಿಸಿದ್ದು; ಮೂರನೇ ಭಾಗ (100 ಅಂಕ) ಅದೇ ವಿಷಯ, ಕೊಂಚ ಹೆಚ್ಚಿನ ಸಂಕೀರ್ಣತೆ ಹೊಂದಿರುವ ಪ್ರಶ್ನೆಗಳಿರುತ್ತವೆ. ಇಲ್ಲಿ ಪ್ರಶ್ನೆಗಳ ಆಯ್ಕೆಯೂ ಇರುತ್ತದೆ, ನೆಗೆಟಿವ್ ಮಾರ್ಕಿಂಗ್ ಕೂಡ ಇರುತ್ತದೆ.

ಪರೀಕ್ಷೆ ಯಾವಾಗ? ಎಲ್ಲಿ?
ನೆಟ್ ಪರೀಕ್ಷೆಯನ್ನು ಜೂನ್ ಹಾಗೂ ಡಿಸೆಂಬರ್ ತಿಂಗಳಲ್ಲಿ- ಅಂದರೆ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಈ ಬಾರಿಯ ನೆಟ್ ಪರೀಕ್ಷೆಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದ್ದು, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಅಕ್ಟೋಬರ್ 9 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಅಕ್ಟೋಬರ್ 10ರ ರಾತ್ರಿವರೆಗೂ ಶುಲ್ಕ ಪಾವತಿಸಬಹುದು. ಸಾಮಾನ್ಯ ವರ್ಗದವರಿಗೆ ರೂ. 1000, ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಒಬಿಸಿ ವರ್ಗದವರಿಗೆ ರೂ. 500 ಮತ್ತು ಎಸ್‍ಸಿ/ಎಸ್‍ಟಿ/ವಿಕಲಾಂಗ/ತೃತೀಯಲಿಂಗಿ ಅಭ್ಯರ್ಥಿಗಳಿಗೆ ರೂ. 250 ಶುಲ್ಕವಿರುತ್ತದೆ. ನವೆಂಬರ್ 9ರಿಂದ ಎನ್‍ಟಿಎ ಜಾಲತಾಣ ದಿಂದ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು.

ಯುಜಿಸಿ-ಎನ್‍ಇಟಿ ಈ ಬಾರಿ ಡಿಸೆಂಬರ್ 2ರಿಂದ 6ರವರೆಗೆ, ಸಿಎಸ್‍ಐಆರ್-ಎನ್‍ಇಟಿ ಡಿಸೆಂಬರ್ 15ಕ್ಕೆ ನಡೆಯಲಿದೆ. ಎರಡೂ ಪರೀಕ್ಷೆಗಳ ಫಲಿತಾಂಶ ಡಿಸೆಂಬರ್ 31ಕ್ಕೆ ಲಭ್ಯವಾಗಲಿದೆ. ಯುಜಿಸಿ-ಎನ್‍ಇಟಿ ಎರಡು ಪಾಳಿಗಳಲ್ಲಿ ನಡೆಯಲಿದ್ದು, ಬೆಳಗ್ಗಿನ ಶಿಫ್ಟ್ 9:30ರಿಂದ 12:30ರವರೆಗೆ, ಮಧ್ಯಾಹ್ನದ ಶಿಫ್ಟ್ 2:30ರಿಂದ 5:30ರವರೆಗೆ.

ಆನ್‍ಲೈನ್ ಪರೀಕ್ಷೆಗಾಗಿ ದೇಶದ ವಿವಿಧ ಭಾಗಗಳಲ್ಲಿ ಕಂಪ್ಯೂಟರ್ ಸೌಲಭ್ಯವಿರುವ ಕೇಂದ್ರಗಳನ್ನು ಆಯ್ಕೆ ಮಾಡಲಾಗುತ್ತದೆ. ಹಾಲ್ ಟಿಕೇಟಿನಲ್ಲಿ ಪರೀಕ್ಷೆಯ ಸ್ಥಳ, ದಿನಾಂಕ ಹಾಗೂ ಸಮಯ ನಮೂದಿಸುತ್ತಾರೆ.

ತಯಾರಿ ಹೇಗೆ?
ಎನ್‍ಇಟಿ ಪರೀಕ್ಷೆಗೆ ಕನಿಷ್ಠ ಆರು ತಿಂಗಳ ಗಂಭೀರ ತಯಾರಿ ಬೇಕು. ಮಾನವಿಕ ವಿಷಯಗಳ ಪಠ್ಯಕ್ರಮ https://www.ugcnetonline.in/syllabus-new.php ಜಾಲತಾಣದಲ್ಲಿಯೂ, ವಿಜ್ಞಾನ ವಿಷಯಗಳ ಪಠ್ಯಕ್ರಮ https://csirhrdg.res.in ಜಾಲತಾಣದಲ್ಲಿಯೂ ಲಭ್ಯವಿದೆ. ತಯಾರಿಯ ಮೊದಲು ಪಠ್ಯಕ್ರಮದ ಸಂಪೂರ್ಣ ಪರಿಚಯ ಮಾಡಿಕೊಳ್ಳುವುದು ಅಗತ್ಯ.

ನೆಟ್ ಸಾಮಾನ್ಯ ಪತ್ರಿಕೆಯ ಪಠ್ಯಕ್ರಮದಲ್ಲಿ 10 ಅಧ್ಯಾಯಗಳಿವೆ. ಬೋಧನೆ ಹಾಗೂ ಸಂಶೋಧನೆಯ ಕೌಶಲ, ವಿಷಯ ಗ್ರಹಿಕೆ, ಸಂವಹನ, ಪ್ರಾಥಮಿಕ ಗಣಿತ, ತಾರ್ಕಿಕ ಚಿಂತನೆ, ದತ್ತಾಂಶ ವಿಶ್ಲೇಷಣೆ, ಮಾಹಿತಿ ಸಂವಹನ ತಂತ್ರಜ್ಞಾನ (ICT), ಅಭಿವೃದ್ಧಿ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ- ಹೀಗೆ ವೈವಿಧ್ಯಮಯ ವಿಷಯಗಳಿರುತ್ತವೆ. ಐಚ್ಛಿಕ ವಿಷಯದ ಪಠ್ಯಕ್ರಮ ಸ್ನಾತಕೋತ್ತರ ಕೋರ್ಸಿಗೆ ಸಮಾನವಾಗಿದ್ದು, ಸಮಗ್ರ ಹಾಗೂ ಆಳವಾದ ಅಧ್ಯಯನ ಅಗತ್ಯ.

ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ದಿನದಲ್ಲಿ ಕನಿಷ್ಠ 3-4 ಗಂಟೆಯನ್ನಾದರೂ ಅಭ್ಯಾಸಕ್ಕೆ ಮೀಸಲಿಡುವುದು ಒಳ್ಳೆಯದು. ಪರೀಕ್ಷೆ ವಸ್ತುನಿಷ್ಠ ಮಾದರಿಯದ್ದಾಗಿರುವುದರಿಂದ ಸಣ್ಣಸಣ್ಣ ವಿವರಗಳಿಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ಓದುತ್ತಲೇ ನೋಟ್ಸ್ ಮಾಡಿಕೊಳ್ಳುವುದು ಕೊನೆಯ ಕ್ಷಣದ ರಿವಿಶನ್‍ಗೆ ಬಹಳ ಅಗತ್ಯ. ಈಗ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯ. ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಗೊಂದಲಕ್ಕೆ ಬೀಳುವುದಕ್ಕಿಂತ ಉತ್ತಮ ಗುಣಮಟ್ಟದ ಒಂದೋ ಎರಡೋ ಪುಸ್ತಕ ಸಾಕು.

ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಅತ್ಯಂತ ಮುಖ್ಯ. ಕನಿಷ್ಠ 7-8 ವರ್ಷಗಳ ಹಿಂದಿನ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಕಲಿತರೆ ಪರೀಕ್ಷೆ ತೇರ್ಗಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆಯಾ ಪರೀಕ್ಷೆಗಳ ವೆಬ್‍ಸೈಟಿನಿಂದ ಅನೇಕ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ಈ ಪರೀಕ್ಷೆಗೆ ಪ್ರತ್ಯೇಕ ಕೋಚಿಂಗ್ ಅನಿವಾರ್ಯವೇನೂ ಅಲ್ಲ. ಪರಿಶ್ರಮಪಟ್ಟು ಸ್ವಂತ ಅಧ್ಯಯನ ಮಾಡಿದರೆ ಸಾಕು. ಈಗಂತೂ ಇಂಟರ್ನೆಟ್ಟಲ್ಲಿ ಧಾರಾಳ ಅಭ್ಯಾಸ ಸಾಮಗ್ರಿಗಳು, ಮಾಕ್ ಟೆಸ್ಟ್ ಗಳು ದೊರೆಯುತ್ತವೆ. ತೀರಾ ಅರ್ಥವಾಗದ ವಿಷಯಗಳಿದ್ದರೆ ಸ್ನೇಹಿತರ ಅಥವಾ ಅಧ್ಯಾಪಕರ ಬಳಿ ಪಾಠ ಹೇಳಿಸಿಕೊಳ್ಳಬಹುದು. ವಿದ್ಯಾರ್ಥಿಗಳಾಗಿರುವಾಗಲೇ ನೆಟ್ ಬರೆಯುವುದು ತಯಾರಿ ದೃಷ್ಟಿಯಿಂದ ತುಂಬ ಒಳ್ಳೆಯದು.

ಉದಾಸೀನ ಸಲ್ಲದು
‘ಮೊದಲನೇ ಪತ್ರಿಕೆ ಜನರಲ್, ಅಷ್ಟಾಗಿ ಓದಿಕೊಳ್ಳದಿದ್ದರೂ ಪರವಾಗಿಲ್ಲ; ಐಚ್ಛಿಕ ಪತ್ರಿಕೆಗೆ ಚೆನ್ನಾಗಿ ತಯಾರಾಗೋಣ’ ಎಂದು ಭಾವಿಸುವವರು ಹೆಚ್ಚು. ಇಲ್ಲೇ ಅವರು ಎಡವುವುದು. ಮೊದಲನೇ ಪತ್ರಿಕೆ ಅಂದುಕೊಂಡಷ್ಟು ಸುಲಭವಲ್ಲ. ಅಂದಾಜಿನ ಮೇಲೆ ಉತ್ತರ ಗುರುತು ಮಾಡುವುದೂ ಸರಿಯಲ್ಲ. ಮೊದಲನೇ ಪತ್ರಿಕೆಯಲ್ಲೇ ತೇರ್ಗಡೆಯಾಗದೆ ಎರಡನೆಯದರಲ್ಲಿ ಉನ್ನತ ಶ್ರೇಣಿ ಪಡೆದೂ ಪ್ರಯೋಜನವಿಲ್ಲ. ಆದ್ದರಿಂದ ಎರಡೂ ಪತ್ರಿಕೆಗಳಿಗೆ ಸಮಾನ ಆದ್ಯತೆ ನೀಡಿ ತಯಾರಿ ನಡೆಸುವವರೇ ಜಾಣರು.

ಎಲ್ಲ ಅಧ್ಯಾಯಗಳನ್ನು ಸಂಪೂರ್ಣವಾಗಿ ಅಭ್ಯಾಸ ಮಾಡುವುದೂ ಅಷ್ಟೇ ಮುಖ್ಯ. ಪ್ರತಿ ಅಧ್ಯಾಯದಿಂದಲೂ ಸಮಾನ ಸಂಖ್ಯೆಯ ಪ್ರಶ್ನೆಗಳನ್ನು ಕೇಳಿರುತ್ತಾರೆ. ಸಾಮಾನ್ಯವಾಗಿ ಜನರಲ್ ಪತ್ರಿಕೆಯ ಮೆಥಮೆಟಿಕಲ್ ರೀಸನಿಂಗ್ & ಆಪ್ಟಿಟ್ಯೂಡ್, ಲಾಜಿಕಲ್ ರೀಸನಿಂಗ್ ಡೇಟಾ ಇಂಟರ್‍ಪ್ರಿಟೇಶನ್ ಅಧ್ಯಾಯಗಳನ್ನು ನಿರ್ಲಕ್ಷಿಸುವವರು ಹೆಚ್ಚು. ಅದರಲ್ಲೂ ಕಲಾ ವಿಭಾಗದ ಅಭ್ಯರ್ಥಿಗಳಿಗೆ ಇವೆಲ್ಲ ಕೊಂಚ ಕಷ್ಟ ಅನಿಸಿ ಬಿಟ್ಟುಬಿಡುವುದೂ ಇದೆ. ಹಾಗೆ ಮಾಡುವುದು ತಪ್ಪು. ಅನೇಕ ಅಭ್ಯರ್ಥಿಗಳು ಮೊದಲ ಪತ್ರಿಕೆಯಲ್ಲಿ ಫೇಲ್ ಆಗುವುದಕ್ಕೆ ಇದೇ ಕಾರಣ. ಒಂದಷ್ಟು ಮಾದರಿ ಪ್ರಶ್ನೆಗಳನ್ನು ಅಭ್ಯಾಸ ಮಾಡಿದರೆ ಇವೆಲ್ಲ ಅಂತ ಕಠಿಣ ವಿಷಯಗಳೇನಲ್ಲ.

ಎರಡನೇ ಪತ್ರಿಕೆಯಲ್ಲಂತೂ ಹೊಂದಿಸಿ ಬರೆಯುವ, ಕಾಲಾನುಕ್ರಮದಲ್ಲಿ ಜೋಡಿಸುವ, ಪ್ರತಿಪಾದನೆ-ತರ್ಕ (Assertion-Reasoning) ಮಾದರಿಯ ಪ್ರಶ್ನೆಗಳೇ ಹೆಚ್ಚಾಗಿರುವುದರಿಂದ ಸಮಯ ಬೇಗನೆ ಕಳೆದುಹೋಗುತ್ತದೆ. ಕೊಂಚ ಏಕಾಗ್ರತೆ ತಪ್ಪಿದರೂ ಚೆನ್ನಾಗಿ ಗೊತ್ತಿರುವ ಪ್ರಶ್ನೆಗೇ ತಪ್ಪು ಉತ್ತರ ಬರೆಯುವ ಸಾಧ್ಯತೆ ಹೆಚ್ಚು. ಹಳೆಯ ಪ್ರಶ್ನೆಪತ್ರಿಕೆಗಳನ್ನು ಹೆಚ್ಚುಹೆಚ್ಚು ಬಿಡಿಸಿದಷ್ಟೂ ಈ ಸಮಸ್ಯೆ ಮನವರಿಕೆ ಆಗುವುದರಿಂದ ಸಂಭವನೀಯ ತಪ್ಪುಗಳಿಂದ ಬಚಾವಾಗಬಹುದು.

ಏನಿದು JRF?
ನೆಟ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಜೂನಿಯರ್ ರಿಸರ್ಚ್ ಫೆಲೋಷಿಪ್ (JRF-Junior Research Fellowship) ಎಂಬ ಬಂಪರ್ ಬಹುಮಾನವಿದೆ. ಪಿಎಚ್‍ಡಿ ಮಾಡಲು ಯುಜಿಸಿ ಪ್ರತೀ ತಿಂಗಳೂ ಕೈತುಂಬ ಫೆಲೋಷಿಪ್ ನೀಡುತ್ತದೆ. ಮೊದಲ ಎರಡು ವರ್ಷ ಪ್ರತೀ ತಿಂಗಳೂ ರೂ. 31,000, ಮುಂದಿನ ಮೂರು ವರ್ಷ (SRF- Senior Research Fellowship) ಪ್ರತೀ ತಿಂಗಳೂ ರೂ. 35,000 ಲಭ್ಯ. ಬೇರೆ ಭತ್ಯೆಗಳೂ ಇವೆ. ಯಾವ ಉದ್ಯೋಗ ಹಿಡಿಯುವ ಆತಂಕವೂ ಇಲ್ಲದೆ ನೆಮ್ಮದಿಯಾಗಿ ಸಂಶೋಧನೆಯಲ್ಲಿ ನಿರತರಾಗಬಹುದು. ಜೆಆರ್‍ಎಫ್ ಬಯಸುವವರು ನೆಟ್ ಅರ್ಜಿ ತುಂಬುವಾಗ ಮಾತ್ರ ‘ಅಸಿಸ್ಟೆಂಟ್ ಪ್ರೊಫೆಸರ್ & ಜೆಆರ್‍ಎಫ್’ ಎಂಬ ಅಂಕಣವನ್ನು ಕಡ್ಡಾಯ ತುಂಬಬೇಕು. ಕೇವಲ ‘ಅಸಿಸ್ಟೆಂಟ್ ಪ್ರೊಫೆಸರ್’ ಎಂದು ತುಂಬಿದರೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ಫೆಲೋಷಿಪ್‍ಗೆ ಪರಿಗಣಿಸುವುದಿಲ್ಲ.

ಕೆ-ಸೆಟ್ ಬರೆಯಿರಿ
ನೆಟ್ ಪರೀಕ್ಷೆಗೆ ಸಮಾನವಾಗಿ ರಾಜ್ಯಮಟ್ಟಗಳಲ್ಲಿ ಸೆಟ್ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಕೆಲವು ವರ್ಷಗಳಿಂದ ಮೈಸೂರು ವಿಶ್ವವಿದ್ಯಾನಿಲಯ ಕೆ-ಸೆಟ್ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಯ ವಿಧಾನ, ಮಾದರಿ, ಪಠ್ಯಕ್ರಮ ಎಲ್ಲವೂ ಯುಜಿಸಿ-ನೆಟ್‍ನಂತೆಯೇ ಇರುತ್ತದೆ. ಆದರೆ ಇದನ್ನು ತೇರ್ಗಡೆಯಾದವರು ನಮ್ಮ ರಾಜ್ಯದ ಕಾಲೇಜು, ವಿವಿಗಳಲ್ಲಿ ಮಾತ್ರ ಉದ್ಯೋಗ ಪಡೆಯಬಹುದು, ಬೇರೆ ರಾಜ್ಯಗಳಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. http://kset.uni-mysore.ac.in/ ಜಾಲತಾಣದಲ್ಲಿ ಸಂಪೂರ್ಣ ವಿವರಗಳಿವೆ.

-ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಸೆಪ್ಟೆಂಬರ್ 24, 2019

ಉದ್ಯೋಗವಿದ್ದರೂ ನಿರುದ್ಯೋಗ!

25 ಸೆಪ್ಟೆಂಬರ್ 2019ರ ವಿಜಯವಾಣಿ (ಮಸ್ತ್ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಎಲ್ಲೆಲ್ಲೂ ನೀರೋ ನೀರು, ಕುಡಿಯುವುದಕ್ಕೊಂದೂ ಹನಿಯಿಲ್ಲ! ಇದು ಕವಿ ಕೋಲರಿಜ್‍ನ ಪ್ರಸಿದ್ಧ ಹಾಡೊಂದರ ಸಾಲು. ಒಂದೂಕಾಲು ಶತಮಾನದ ಬಳಿಕ ಈ ಸಾಲು ಉದ್ಯೋಗದ ಅವಶ್ಯಕತೆಯಿರುವವರ ಹಾಗೂ ಉದ್ಯೋಗ ನೀಡುವವರ ಅಸಹಾಯಕ ಧ್ವನಿಯಾಗಿ ಕೇಳಿಸುತ್ತಿರುವುದು ಮಾತ್ರ ಕಾಕತಾಳೀಯ ಮತ್ತು ವಿಚಿತ್ರ.

ಪಿಎಚ್‍ಡಿ ಮಾಡಿದವರು ಹಾಸ್ಟೆಲ್ ಅಡುಗೆಯವರ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾರೆ. ಬಿಇ, ಎಂಎ ಪದವೀಧರರು ಗುಮಾಸ್ತರ ಕೆಲಕ್ಕೆ ದೌಡಾಯಿಸುತ್ತಿದ್ದಾರೆ. ನಮ್ಮ ಅರ್ಹತೆಗೆ ತಕ್ಕುದಾದ ಉದ್ಯೋಗ ದೊರೆಯುತ್ತಿಲ್ಲ ಎಂಬುದು ಅವರ ಅಳಲು. ಇನ್ನೊಂದೆಡೆ, ನಮ್ಮಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ, ಅರ್ಹ ಅಭ್ಯರ್ಥಿಗಳೇ ಸಿಗುತ್ತಿಲ್ಲ ಎಂಬುದು ಹತ್ತುಹಲವು ಕಂಪೆನಿಗಳ ದೂರು. ಎಂಬಲ್ಲಿಗೆ ‘ನಿಮ್ಮ ಅಂಕಪಟ್ಟಿ, ಪ್ರಮಾಣಪತ್ರ ಯಾರಿಗೂ ಬೇಡ. ಉದ್ಯೋಗ ನೀಡುವವರಿಗೆ ಬೇಕಾಗಿರುವುದು ನೀವು, ಅಂದರೆ ನಿಮ್ಮೊಳಗಿನ ಕೌಶಲ’ ಎಂಬ ಹಳೆಯ ಮೇಷ್ಟ್ರುಗಳ ಮಾತು ನಿಜವಾಯಿತು.

‘ನಮ್ಮಲ್ಲಿ ನಿರುದ್ಯೋಗ ಸಮಸ್ಯೆ ಎಂಬುದೇ ಇಲ್ಲ. ಬೇಕಾದಷ್ಟು ಉದ್ಯೋಗಗಳು ಖಾಲಿ ಇವೆ. ಆದರೆ ಅರ್ಹ ಯುವಕರೇ ಇಲ್ಲ’ ಎಂಬ ಕೇಂದ್ರ ಕಾರ್ಮಿಕ ಸಚಿವರ ಇತ್ತೀಚಿನ ಹೇಳಿಕೆಯಿಂದ ವಿವಾದ ಉಂಟಾಯಿತು. ಅವರು ಹಾಗೆ ಹೇಳುವಾಗ ‘ಉತ್ತರ ಭಾರತದಲ್ಲಿ’ ಎಂಬ ಮಾತು ಸೇರಿಸಿದ್ದೇ ವಿವಾದಕ್ಕೆ ಕಾರಣ. ರಾಜಕೀಯದಲ್ಲಿ ವಿವಾದಗಳು ಸಾಮಾನ್ಯವೇ, ಆದರೆ ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಹೇಗೆ? ಈವರೆಗಿನ ಹತ್ತಾರು ಅಧ್ಯಯನ ವರದಿಗಳು ಕೌಶಲದ ಕೊರತೆಯೇ ಭಾರತೀಯರ ನಿರುದ್ಯೋಗ ಸಮಸ್ಯೆಗೆ ಪ್ರಮುಖ ಕಾರಣ ಎಂಬುದನ್ನು ಮತ್ತೆಮತ್ತೆ ಹೇಳಿವೆ.

ಕೋರ್ಸುಗಳ ದುಸ್ಥಿತಿ
ಕಳೆದ ಸುಮಾರು ಹತ್ತು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಬಿಎ, ಬಿಎಸ್ಸಿಯಂತಹ ಸಾಂಪ್ರದಾಯಿಕ ಕೋರ್ಸುಗಳು ಬಿಕೋ ಎನ್ನುತ್ತಿವೆ. ಉಪನ್ಯಾಸಕರು ತಮ್ಮ ಹುದ್ದೆ ಉಳಿಸಿಕೊಳ್ಳಲು ಬೀದಿ ಬಯಲು ಸುತ್ತಿ ಕನಿಷ್ಟ ದಾಖಲಾತಿ ಮಟ್ಟವನ್ನಾದರೂ ತಲುಪುವ ಸರ್ಕಸ್ ಮಾಡುತ್ತಿದ್ದಾರೆ. ನಗರ ಪ್ರದೇಶಗಳ ಬಹುತೇಕ ಕಾಲೇಜುಗಳು ಪಿಯುಸಿ, ಪದವಿ ಹಂತಗಳಲ್ಲಿ ಕಲಾ ವಿಭಾಗವನ್ನು ಮುಚ್ಚಿಯೇಬಿಟ್ಟಿವೆ.

ಕಾಲಾಂತರದಿಂದ ಇದ್ದ ಕೋರ್ಸುಗಳೆಲ್ಲ ಆಕರ್ಷಣೆಯನ್ನು ಕಳೆದುಕೊಂಡಿವೆಯೇ? ಅವುಗಳಲ್ಲಿ ನಮ್ಮ ಯುವಕರಿಗೆ ಕೂಳಿನ ದಾರಿ ಕಾಣುತ್ತಿಲ್ಲವೇ? ಎರಡೂ ಪ್ರಶ್ನೆಗಳಿಗೆ ಉತ್ತರ ‘ಹೌದು’ ಎಂದೇ ಆಗಿದೆ. ಹಾಗಾದರೆ ಮುಂದೇನು? ಇಲ್ಲಿಗೆ ಬರಬೇಕಿದ್ದ ಯುವಕರು ಬೇರೆಲ್ಲಿ ಹೋಗುತ್ತಿದ್ದಾರೆ? ಈ ಕೋರ್ಸು-ಕಾಲೇಜುಗಳನ್ನೆಲ್ಲ ಇಡಿಯಿಡಿಯಾಗಿ ಮುಚ್ಚಿಬಿಡುವುದೇ? ಹಾಗೆ ಮಾಡಿದರೆ ನಮ್ಮ ಸಮಾಜದ ಅವಿಭಾಜ್ಯ ಅಂಗಗಳಾಗಿರುವ ಮೂಲ ವಿಜ್ಞಾನ, ಮಾನವಿಕ ಶಾಸ್ತ್ರಗಳ ಭವಿಷ್ಯವೇನು?

ಕೋರ್ಸುಗಳೂ ಮುಚ್ಚಿಹೋಗಬಾರದು, ಉದ್ಯೋಗ ಮಾರುಕಟ್ಟೆಯ ಅವಶ್ಯಕತೆಗಳನ್ನೂ ಕಡೆಗಣಿಸಲಾಗದು ಎಂದರೆ ಬದಲಾಗಿರುವ ಕಾಲಕ್ಕೆ ತಕ್ಕಂತೆ ಅವುಗಳ ಸ್ವರೂಪದಲ್ಲಿ ಮಾರ್ಪಾಡು ತರುವುದು ಇಂದಿನ ಅನಿವಾರ್ಯತೆ. ಕಾಲ ಬದಲಾಯಿತೆಂದು ಸಾಬೂನು, ಚಪ್ಪಲಿ, ಉಡುಪುಗಳಂತಹ ವಸ್ತುಗಳ ಉತ್ಪಾದನೆ ನಿಂತು ಹೋಗಿಲ್ಲ; ಅವುಗಳ ಬಣ್ಣ, ವಿನ್ಯಾಸ ಬದಲಾಗಿದೆ ಅಷ್ಟೇ. ಇನ್ನು ಮನುಷ್ಯರ ಅಂತರ್ಗತ ಭಾಗವಾಗಿರುವ ಶಿಕ್ಷಣವು ಸಮಾಜದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗದಿದ್ದರೆ ಹೇಗೆ?

ಉದ್ಯೋಗಗಳಿವೆ, ಅವುಗಳಿಗೆ ಬೇಕಾದ ಅಭ್ಯರ್ಥಿಗಳು ದೊರೆಯುತ್ತಿಲ್ಲ. ಲಕ್ಷಾಂತರ ಅಭ್ಯರ್ಥಿಗಳು ಕಾಯುತ್ತಿದ್ದಾರೆ, ಅವರಿಗೆ ಉದ್ಯೋಗ ದೊರೆಯುತ್ತಿಲ್ಲ. ವಾಸ್ತವವಾಗಿ ಈ ಎರಡು ಪರಿಸ್ಥಿತಿಗಳ ಅರ್ಥ ಒಂದೇ. ಬೇಡಿಕೆ ಮತ್ತು ಸರಬರಾಜು-  ಉದ್ಯೋಗ ಜಗತ್ತಿನಲ್ಲಿ ಇವೆರಡರ ನಡುವೆ ದೊಡ್ಡ ಕಂದರ ಇದೆ. ಇದನ್ನು ಬೆಸೆಯದೇ ಹೋದರೆ ಮುಂದೆ ಉಳಿಗಾಲವಿಲ್ಲ.

ಉದ್ಯೋಗ ಮತ್ತು ಕೌಶಲ
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಕಾರ, ನಮ್ಮ ದೇಶದ ಒಟ್ಟಾರೆ ದುಡಿಯುವ ವರ್ಗದ ಪೈಕಿ ಶೇ. 4.69ರಷ್ಟು ಮಾತ್ರ ಕೌಶಲಯುಕ್ತ ಮಂದಿಯಿದ್ದಾರೆ. ಉಳಿದವರೆಲ್ಲರೂ ಕೌಶಲ್ಯರಹಿತರು. ಅಮೇರಿಕದಲ್ಲಿ ಶೇ. 52, ಇಂಗ್ಲೆಂಡಿನಲ್ಲಿ ಶೇ. 68, ಜರ್ಮನಿಯಲ್ಲಿ ಶೇ. 75, ಜಪಾನ್‍ನಲ್ಲಿ ಶೇ. 80 ಹಾಗೂ ದಕ್ಷಿಣ ಕೊರಿಯಾದಲ್ಲಿ ಶೇ. 96 ಕೌಶಲ್ಯಯುಕ್ತ ಉದ್ಯೋಗಿಗಳಿದ್ದಾರೆ. ಒಂದು ದೇಶದ ಅಭಿವೃದ್ಧಿಗೂ ಅಲ್ಲಿನ ಕೌಶಲ್ಯಯುಕ್ತ ದುಡಿಯುವ ವರ್ಗಕ್ಕೂ ಸಂಬಂಧ ಇದೆ ಎಂದು ಬೇರೆ ಹೇಳಬೇಕೆ?

ಯಾವ ಕೆಲಸವನ್ನೂ ಇಂದು ಯಾಂತ್ರಿಕವಾಗಿ ಮಾಡಿ ಮುಗಿಸುವಂತಿಲ್ಲ. ಪ್ರತೀ ಕಾರ್ಯವೂ ಮೌಲ್ಯವರ್ಧನೆಯನ್ನು ಬಯಸುತ್ತದೆ. ಒಂದು ವಸ್ತುವನ್ನು ಇಲ್ಲಿಂದ ಅಲ್ಲಿಗೆ ಎತ್ತಿ ಇಡುವಲ್ಲೂ ಒಪ್ಪ ಓರಣ, ನಾಜೂಕುತನ ಇರಬೇಕು. ಯುವಕರು ಸ್ಮಾರ್ಟ್ ಮತ್ತು ಸ್ಕಿಲ್ಡ್ ಆಗಿರಬೇಕು, ಅವರಲ್ಲಿ ಸೃಜನಶೀಲತೆ, ನಿರ್ಧಾರ ಕೈಗೊಳ್ಳುವಿಕೆಯ ಸೂಕ್ಷ್ಮತೆ, ಗ್ರಾಹಕ ಸಂಬಂಧ, ಸ್ಪಷ್ಟ ಯೋಚನೆ, ಉತ್ತಮ ಸಂವಹನ, ಸಮಯ ನಿರ್ವಹಣೆ, ನಾಯಕತ್ವ- ಇತ್ಯಾದಿ ಗುಣಗಳಿರಬೇಕು ಎಂದು ಉದ್ಯೋಗ ಜಗತ್ತು ಬಯಸುವುದರಲ್ಲಿ ಏನಾದರೂ ತಪ್ಪಿದೆಯೇ? ನಮ್ಮ ಶೈಕ್ಷಣಿಕ ಜಗತ್ತಿನ ನೀತಿ ನಿರೂಪಕರು, ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಅಷ್ಟೇ.

ಎಚ್ಚೆತ್ತುಕೊಳ್ಳುವ ಕಾಲ
ಶಿಕ್ಷಣದ ಯಾಂತ್ರಿಕತೆಯಿಂದ ಹೊರಬರದೆ ನಿರುದ್ಯೋಗ ಸಮಸ್ಯೆಗೆ ಪರಿಹಾರವಿಲ್ಲ ಎಂಬುದು ಆಡಳಿತಗಾರರಿಗೆ ತಡವಾಗಿಯಾದರೂ ಮನವರಿಕೆ ಆಗಿದೆ. ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿಯನ್ನು ಜತೆಜತೆಯಾಗಿ ಕೊಂಡೊಯ್ಯಬೇಕು ಎಂಬ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಪ್ರಯತ್ನಗಳು ನಡೆದಿವೆ. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಕೇಂದ್ರ ಸರ್ಕಾರ 2014ರಲ್ಲಿ ಪ್ರತ್ಯೇಕ ಸಚಿವಾಲಯವನ್ನೇ ಸ್ಥಾಪಿಸಿದೆ. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಸಂಸ್ಥೆ (ಎನ್‍ಎಸ್‍ಡಿಎ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ (ಎನ್‍ಎಸ್‍ಡಿಸಿ), ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಧಿ (ಎನ್‍ಎಸ್‍ಡಿಎಫ್)ಗಳಲ್ಲದೆ ದೇಶದಾದ್ಯಂತೆ 28 ಸೆಕ್ಟರ್ ಸ್ಕಿಲ್ ಕೌನ್ಸಿಲ್‍ಗಳು ಹೊಸ ರೂಪ ಪಡೆದು ಕಾರ್ಯಕ್ಷೇತ್ರಕ್ಕೆ ಧುಮುಕಿವೆ. ರಾಷ್ಟ್ರೀಯ ಕೌಶಲ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಎನ್‍ಎಸ್‍ಡಿಸಿ ಹಾಗೂ ಎನ್‍ಎಸ್‍ಡಿಎಫ್‍ಗಳನ್ನು ಪುನಾರಚಿಸುವ ನಿರ್ಧಾರವನ್ನೂ ಕೇಂದ್ರ ಸರ್ಕಾರ ಕೈಗೊಂಡಿದೆ.

2015ರಿಂದಲೇ ‘ಸ್ಕಿಲ್ ಇಂಡಿಯಾ’ ಅಭಿಯಾನ ಆರಂಭವಾಗಿದೆ. ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ, ದೀನ ದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ, ರಾಜೀವ ಗಾಂಧಿ ಚೈತನ್ಯ ಯೋಜನೆ - ಹೀಗೆ ಹತ್ತಾರು ಯೋಜನೆಗಳು ಚಾಲ್ತಿಯಲ್ಲಿವೆ. ಕರ್ನಾಟಕ ವೃತ್ತಿ ಶಿಕ್ಷಣ ನಿಗಮ ಈಗ ‘ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ’ಯಾಗಿ ಬದಲಾಗಿದೆ. ಸಾಂಪ್ರದಾಯಿಕ ಕೋರ್ಸುಗಳ ಜತೆಗೆ ಕೌಶಲಗಳಿಗೆ ಪ್ರಾಮುಖ್ಯತೆ ನೀಡುವ ಆ್ಯಡ್-ಆನ್ ಕೋರ್ಸುಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಎಂದು ಯುಜಿಸಿ ಕಾಲೇಜುಗಳಿಗೆ ದುಂಬಾಲು ಬಿದ್ದಿದೆ. ಬಿಎ/ಬಿಎಸ್ಸಿಯ ಜತೆಗೆ ಉದ್ಯೋಗ ಜಗತ್ತಿನೊಂದಿಗೆ ನೇರವಾಗಿ ಸಂಬಂಧ ಹೊಂದಿರುವ ಬಿ.ವೋಕ್. ಕೋರ್ಸುಗಳನ್ನು ಪರಿಚಯಿಸಿದೆ.

ಸಮಸ್ಯೆಯಿರುವುದು ಯೋಜನೆಗಳ ಸಂಖ್ಯೆಯಲ್ಲಿ ಅಲ್ಲ; ಅವುಗಳ ಅನುಷ್ಠಾನದಲ್ಲಿ. ಇಷ್ಟೆಲ್ಲ ಯೋಜನೆಗಳು ಎಷ್ಟು ಮಂದಿಯನ್ನು ಪರಿಣಾಮಕಾರಿಯಾಗಿ ತಲುಪುತ್ತಿವೆ, ಎಷ್ಟು ಮಂದಿ ಇವುಗಳ ಪ್ರಯೋಜನ ಪಡೆಯುತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಯೋಜನೆಗಳ ಹೆಸರು ಬದಲಾಯಿಸಿದರೆ, ಜಾರಿಗೊಳಿಸಿದರೆ ಸಾಲದು, ಅವುಗಳ ಮಾಹಿತಿ ಒಬ್ಬೊಬ್ಬ ಯುವಕನಿಗೂ ಸಿಗಬೇಕು. ಮಧ್ಯವರ್ತಿಗಳಿಗೆ ಅವಕಾಶ ಇಲ್ಲದಂತೆ ಫಲಾನುಭವಿಗಳೇ ಅವುಗಳ ಪ್ರಯೋಜನ ಪಡೆಯಬೇಕು. ಇಂತಹ ಕೋರ್ಸುಗಳನ್ನು ಮಾಡಿದರೆ ತಮಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆ ಅವರಲ್ಲಿ ಬೆಳೆಯಬೇಕು. ಸರ್ಟಿಫಿಕೇಟ್ ದೊರೆತರೆ ಕೆಲಸ ಸಿಗುತ್ತದೆ ಎಂಬ ಯೋಚನೆ ಬಿಟ್ಟು ಜ್ಞಾನ ಮತ್ತು ಕೌಶಲ್ಯ ಬೆಳೆಸಿಕೊಳ್ಳಲು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶ್ರಮಿಸಬೇಕು. ಇಲ್ಲವಾದರೆ ದುಡ್ಡು ಕೊಟ್ಟು ಪ್ರಮಾಣಪತ್ರ ಪಡೆಯುವ ಹಳೆಯ ದಂಧೆ ಮುಂದುವರಿಯುತ್ತದೆಯೇ ಹೊರತು ನಿರುದ್ಯೋಗ ಸಮಸ್ಯೆ ಪರಿಹಾರವಾಗದು.

*****************
ಕೌಶಲ್ಯ ಕೇಂದ್ರಗಳೆಲ್ಲಿವೆ?
ಕೌಶಲ್ಯ ತರಬೇತಿ ನೀಡುವವರಿಗೂ ಪಡೆಯುವವರಿಗೂ ಈಗ ಹೇರಳ ಅವಕಾಶ ಇದೆ. ಕೇಂದ್ರ ಹಾಗೂ ರಾಜ್ಯದ ಬಹುತೇಕ ಕೌಶಲಾಭಿವೃದ್ಧಿ ಯೋಜನೆಗಳು ಜಿಲ್ಲಾ ಮಟ್ಟದಲ್ಲೇ ಲಭ್ಯ ಇವೆ. ತರಬೇತಿ ಕೇಂದ್ರಗಳನ್ನು ನಡೆಸುವುದಕ್ಕೆ ಖಾಸಗಿಯವರಿಗೆ ಮಾನ್ಯತೆ ಹಾಗೂ ಅನುದಾನವನ್ನು ಸರ್ಕಾರವೇ ನೀಡುತ್ತಿದೆ. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ಪ್ರತೀ ಜಿಲ್ಲಾ ಕೇಂದ್ರದಲ್ಲೂ ಕಚೇರಿಯನ್ನು ಸ್ಥಾಪಿಸಿದೆ. https://www.kaushalkar.com/article/district-skill-mission/ ಜಾಲತಾಣ ಲಿಂಕಿನಲ್ಲಿ ಜಿಲ್ಲಾವಾರು ಕಚೇರಿಗಳ ಸಂಪರ್ಕ ವಿವರ ಇದೆ. ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಇರುವ ಯೋಜನೆಗಳೇನು, ಆಯಾ ಜಿಲ್ಲೆಗಳಲ್ಲಿ ಎಲ್ಲೆಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳಿವೆ ಇತ್ಯಾದಿ ಮಾಹಿತಿಗಳನ್ನು ಈ ಕೇಂದ್ರಗಳಿಂದ ಪಡೆಯಬಹುದು.

ಬಿ.ವೋಕ್. ಕೋರ್ಸುಗಳು ಎಲ್ಲಿವೆ?
ಕೌಶಲ್ಯಾಧಾರಿತ ಪದವಿಗಳನ್ನು ನೀಡುವ ಉದ್ದೇಶದಿಂದ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ)ವು ದೇಶದಾದ್ಯಂತ 150ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಬಿ.ವೋಕ್. ಕೋರ್ಸುಗಳನ್ನು ಮಂಜೂರು ಮಾಡಿದೆ. ಐಟಿ, ಪ್ರವಾಸೋದ್ಯಮ, ರೀಟೇಲ್ ಮ್ಯಾನೇಜ್ಮೆಂಟ್, ಫ್ಯಾಷನ್ ಡಿಸೈನಿಂಗ್, ಸಿನಿಮಾ ನಿರ್ಮಾಣ, ಆಹಾರ ಸಂಸ್ಕರಣೆ, ಸಾಫ್ಟ್‍ವೇರ್ ಅಭಿವೃದ್ಧಿ, ಫಾರ್ಮಸ್ಯುಟಿಕಲ್ಸ್, ನಿರ್ಮಾಣ ತಂತ್ರಜ್ಞಾನ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ, ಆನ್ವಯಿಕ ಕಲೆ, ಅಟೋಮೊಬೈಲ್ಸ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್, ಅನಿಮೇಶನ್ & ಗ್ರಾಫಿಕ್ಸ್, ಇಂಟೀರಿಯರ್ ಡಿಸೈನ್ ಇತ್ಯಾದಿ ಹತ್ತು ಹಲವು ಕೋರ್ಸುಗಳಿದ್ದು, ಉದ್ಯೋಗ ದೊರಕಿಸಿಕೊಡುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಇಂತಹ ಪದವಿಗಳನ್ನು ನೀಡುವ ಪ್ರಮುಖ ಸಂಸ್ಥೆಗಳು ಇವು:
ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜು, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು, ಸೈಂಟ್ ಜೋಸೆಫ್ಸ್ ಕಾಲೇಜು, ಎನ್‍ಎಂಕೆಆರ್‍ವಿ ಮಹಿಳಾ ಕಾಲೇಜು, ಬಿಎಂಎಸ್ ಮಹಿಳಾ ಕಾಲೇಜು, ತುಮಕೂರು ವಿಶ್ವವಿದ್ಯಾನಿಲಯ, ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿವಿ, ಮೈಸೂರಿನ ಜೆಎಸ್‍ಎಸ್ ಕಾಲೇಜು, ಸೈಂಟ್ ಫಿಲೋಮಿನಾ ಕಾಲೇಜು, ಉಜಿರೆಯ ಎಸ್‍ಡಿಎಂ ಕಾಲೇಜು, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜು, ಬೀದರಿನ ಕರ್ನಾಟಕ ಆಟ್ರ್ಸ್, ಸೈನ್ಸ್ & ಕಾಮರ್ಸ್ ಕಾಲೇಜು, ಮುಂತಾದವು.

ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಸೆಪ್ಟೆಂಬರ್ 13, 2019

ವಾಸ್ತವ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸುವ ಬಗೆ

14-20 ಸೆಪ್ಟೆಂಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ಅಯ್ಯೋ ನೀವೇ ನನ್ನ ತಂದೆತಾಯಿಯರೆಂದು ಈವರೆಗೆ ನನಗೇಕೆ ಗೊತ್ತಾಗಲಿಲ್ಲ?’ ಹಾಗೆಂದು ಕೃಷ್ಣ-ಭಾಮೆಯರ ಘಾತಕ್ಕೆ ನೆಲಕ್ಕೊರಗಿ ಹಲುಬುತ್ತಾನೆ ನರಕಾಸುರ. ‘ನಿಮ್ಮ ಮಗನಾಗಿಯೂ ನಾನೇಕೆ ಹೀಗಾದೆ? ಬದುಕನ್ನೆಲ್ಲಾ ನಾನೇಕೆ ದುಷ್ಕೃತ್ಯದಲ್ಲೇ ಕಳೆದುಬಿಟ್ಟೆ?’ ಅವನು ಪಶ್ಚಾತ್ತಾಪದಲ್ಲಿ ಬೇಯುತ್ತಾನೆ. ವಿಷ್ಣು ವರಾಹಾವತಾರಿಯಾಗಿ ಬಂದು ಹಿರಣ್ಯಾಕ್ಷನನ್ನು ವಧಿಸಿದ ಬಳಿಕ ಭೂದೇವಿಯನ್ನು ಕೂಡಿದ್ದರಿಂದ ಹುಟ್ಟಿದವನು ಈ ನರಕಾಸುರ. ತಂದೆತಾಯಿಯರು ಜತೆಯಾಗಿ ಎದುರಿಸಿದಾಗ ಮಾತ್ರವೇ ತನಗೆ ಮರಣ ಎಂಬ ಬ್ರಹ್ಮನ ವರಬಲ ಅವನಿಗಿತ್ತು. ಸತ್ಯಭಾಮೆಯು ಭೂದೇವಿಯ ಅಂಶದಿಂದ ಕೂಡಿದವಳಾದ್ದರಿಂದ ಆಕೆಯೂ ಕೃಷ್ಣನೂ ಜತೆಯಾಗಿ ಹೋರಾಡಿ ದುಷ್ಟತನದಿಂದ ಮೆರೆಯುತ್ತಿದ್ದ ನರಕನನ್ನು ವಧಿಸಬೇಕಾಯಿತು.

ಬೋಧಿವೃಕ್ಷ | 14-20 ಸೆಪ್ಟೆಂಬರ್ 2019
‘ನೀನು ನಡೆದ ಹಾದಿ ನಿನಗೆ ಮುಳುವಾಯಿತು’ ಹಾಗೆನ್ನುತ್ತಲೇ ನರಕಾಸುರನ ಒಳಗೆ ಬೆಳಕನ್ನು ಹಚ್ಚುತ್ತಾನೆ ಕೃಷ್ಣ. ‘ಬೀಜವನ್ನು ಎಲ್ಲಿ ಬಿತ್ತಲಾಗುತ್ತದೆ ಎಂಬುದಷ್ಟೇ ಮುಖ್ಯವಲ್ಲ. ಅದು ಹೇಗೆ ಬೆಳೆಯುತ್ತದೆ ಎಂಬುದೂ ಮುಖ್ಯ’ ಎಂಬುದು ಆತನ ಮಾತಿನ ಸಾರ. ಬೆಳೆ ಕಳೆಯಾಗಬಲ್ಲುದು, ಕಳೆ ಬೆಳೆಯಾಗಬಲ್ಲುದು. ಅದು ನಿರ್ಧಾರವಾಗುವುದು ಹುಟ್ಟಿದ ಮೊಳಕೆ ಯಾವ ಬಗೆಯ ಪೋಷಣೆ ಪಡೆಯುತ್ತದೆ ಎಂಬುದರ ಆಧಾರದಲ್ಲಿ. ನರಕಾಸುರ ಹುಟ್ಟಿದ್ದು ದೈವೀಶಕ್ತಿಯಿಂದಲೇ ಆದರೂ ಬೆಳೆದದ್ದು ರಕ್ಕಸ ಪರಿವಾರದಲ್ಲಿ.

ಇಲ್ಲಿ ಬೀಜ ಅಥವಾ ಮೊಳಕೆಗಿಂತಲೂ ಬಿತ್ತುವವನ ಅಥವಾ ಬೆಳೆಯುವವನ ಜವಾಬ್ದಾರಿಯೂ ದೊಡ್ಡದೆಂಬ ಧ್ವನಿಯೂ ಇದೆ. ‘ಹೆತ್ತವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಹೋದರೆ ಮಕ್ಕಳ ಪತನವನ್ನೂ ನೋಡಬೇಕಾಗುತ್ತದೆ’ ಎಂಬ ಆತ್ಮಾವಲೋಕನದ ವಿಷಾದವೂ ಇದೆ.

ಬರೀ ತೊಂಬತ್ತು ಅಂಕ ತೆಗೆದುಕೊಂಡಿದ್ದೀಯಾ, ಇನ್ನೂ ಹೆಚ್ಚು ಯಾಕೆ ತೆಗೆದುಕೊಂಡಿಲ್ಲ ಎಂದು ಅಪ್ಪ-ಅಮ್ಮ ಮಗನಲ್ಲಿ ಎರಡು ದಿನ ಮಾತು ಬಿಟ್ಟರಂತೆ; ಮೂರನೆಯ ದಿನ ಮಗ ನೇಣುಹಾಕಿಕೊಂಡು ಪ್ರಾಣಬಿಟ್ಟನಂತೆ. ಹೊಸ ಮೊಬೈಲ್ ಕೊಡಿಸುವುದಿಲ್ಲ ಎಂದು ಅಮ್ಮ ಖಡಕ್ಕಾಗಿ ಹೇಳಿದಳಂತೆ; ಮರುದಿನ ಹನ್ನೆರಡು ವರ್ಷದ ಮಗಳು ಮನೆಬಿಟ್ಟು ಓಡಿಹೋದಳಂತೆ. ಚಟಹಿಡಿಯುವ ಗೇಮ್ ಆಡಬೇಡವೆಂದು ಅಪ್ಪ ಕಟ್ಟುನಿಟ್ಟು ಮಾಡಿದನಂತೆ; ಮಗ ಮಧ್ಯರಾತ್ರಿ ಎದ್ದು ಅಪ್ಪನನ್ನು ಉಸಿರುಗಟ್ಟಿಸಿ ಸಾಯಿಸಿಯೇಬಿಟ್ಟನಂತೆ. ಶಿಸ್ತು ಸಂಯಮದಿಂದ ಇರಿ ಎಂದು ವಿದ್ಯಾರ್ಥಿಗಳಿಗೆ ಅಧ್ಯಾಪಕನೊಬ್ಬ ಕೊಂಚ ಗಟ್ಟಿ ದನಿಯಲ್ಲೇ ಬುದ್ಧಿವಾದ ಹೇಳಿದನಂತೆ; ಶಿಷ್ಯೋತ್ತಮನೊಬ್ಬ ತರಗತಿಯಲ್ಲೇ ಗುರುವಿಗೆ ಕಪಾಳಮೋಕ್ಷ ಮಾಡಿದನಂತೆ.

ಯಾಕೆ ಹೀಗಾಗುತ್ತಿದೆ? ಮಕ್ಕಳು ಯಾಕೆ ದೊಡ್ಡವರ ಮಾತನ್ನು ಕೇಳುತ್ತಿಲ್ಲ? ಇನ್ನೂ ಹದಿಹರೆಯದ ಹೊಸಿಲಲ್ಲಿರುವ ಮಕ್ಕಳು ‘ಇದು ನನ್ನ ಪರ್ಸನಲ್ ವಿಷ್ಯ. ನೀನು ಮೂಗು ತೂರಿಸಬೇಡ’ ಎಂದು ತಂದೆತಾಯಿಯರಿಗೆ ಕಟ್ಟಪ್ಪಣೆ ಮಾಡುವ ಮಟ್ಟಕ್ಕೆ ಹೋಗಿದ್ದಾರೆ? ಅವರೇಕೆ ಸಣ್ಣಪುಟ್ಟ ಸೋಲುಗಳನ್ನೂ ಎದುರಿಸುವ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ? ಅವರೇಕೆ ದಿನೇದಿನೇ ದುರ್ಬಲರಾಗಿ ಕಳೆಗುಂದುತ್ತಿದ್ದಾರೆ? ‘ಇಂದಿನ ಮಕ್ಕಳು ನಮ್ಮ ಕಾಲದವರಂತಲ್ಲ. ಮಹಾಬುದ್ಧಿವಂತರು. ತುಂಬಾ ಫಾಸ್ಟು’ ಹೀಗೆಂದು ಹಿರಿಯರು ಮಾತಾಡಿಕೊಳ್ಳುವುದಿದೆ. ಈ ಮಹಾಬುದ್ಧಿವಂತಿಕೆ ಎಂದರೇನು? ಬುದ್ಧಿವಂತಿಕೆಯ ಮಾನದಂಡ ಯಾವುದು? ಈ ಫಾಸ್ಟ್ ಮಕ್ಕಳು ವಾಸ್ತವದಲ್ಲಿ ಯಾಕಿಷ್ಟು ಸ್ಲೋ ಆಗಿದ್ದಾರೆ?

‘ಹುಟ್ಟುವ ಪ್ರತಿಯೊಂದು ಮಗುವೂ ಮನುಷ್ಯನ ಮೇಲೆ ತಾನಿನ್ನೂ ಮುನಿದಿಲ್ಲ ಎಂಬ ದೇವರ ಸಂದೇಶವನ್ನು ಭೂಮಿಗೆ ತರುತ್ತದೆ’ ಎನ್ನುತ್ತಾರೆ ಕವಿಗುರು ರವೀಂದ್ರನಾಥ ಠಾಕೂರ್. ಜಗತ್ತನ್ನು ಮುನ್ನಡೆಸುವ ಶಕ್ತಿಯ ಪ್ರತಿನಿಧಿಗಳಾಗಿ ಮಕ್ಕಳು ಹುಟ್ಟುತ್ತಾರೆ ಎಂದೂ ಆ ಮಾತನ್ನು ಅರ್ಥ ಮಾಡಿಕೊಳ್ಳಬಹುದಲ್ಲ? ಅಂದರೆ ಪ್ರತೀ ಮಗುವೂ ಮೂಲತಃ ದೈವಾಂಶಸಂಭೂತವೇ. ಮಕ್ಕಳನ್ನು ದೇವರೆಂದು ಕರೆಯುವುದೂ ಇದೇ ಕಾರಣಕ್ಕೆ ಅಲ್ಲವೇ? ‘ಚೈಲ್ಡ್ ಈಸ್ ದಿ ಫಾದರ್ ಆಫ್ ದಿ ಮ್ಯಾನ್’ ಎಂಬ ವರ್ಡ್ಸ್'ವರ್ತನ ಸಾಲಿನಲ್ಲೂ ಇದೇ ಧ್ವನಿ ಇದೆ. ಅಂತಹ ಮಗು ಬೆಳೆಬೆಳೆಯುತ್ತಾ ನಾವೀಗ ಆತಂಕಪಡುತ್ತಿರುವ ಪರಿಸ್ಥಿತಿಗೆ ಬಂದು ನಿಲ್ಲುತ್ತದೆ ಎಂದರೆ ಅದಕ್ಕೆ ಹೊಣೆಗಾರರು ಯಾರು?

ಹೌದು, ಮಾಡಬೇಕಾದ್ದನ್ನು ಮಾಡಬೇಕಾದ ಕಾಲದಲ್ಲಿ ಮಾಡದೆ ಹೋದರೆ ಆಗಬಾರದ್ದು ಆಗುತ್ತದೆ. ಬೇವು ಬಿತ್ತಿ ಮಾವಿನ ಫಲ ನಿರೀಕ್ಷಿಸಿದರೆ ಆಗುತ್ತದೆಯೇ? ಸಂಸ್ಕಾರವೆಂಬುದು ಮನೆಯಲ್ಲಿ ಬೆಳೆಯದೆ ಹೋದರೆ ಮನೆಯೆ ಮೊದಲ ಪಾಠಶಾಲೆ ಎಂಬ ಮಾತಿಗೆ ಯಾವ ಮಹತ್ವವೂ ಉಳಿಯುವುದಿಲ್ಲ. ಹಿರಿಯರೊಂದಿಗೆ, ಕಿರಿಯರೊಂದಿಗೆ, ಓರಗೆಯವರೊಂದಿಗೆ, ಕಲಿಸುವ ಗುರುಗಳೊಂದಿಗೆ, ಬೆಳೆಸುವ ಬಂಧುಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ತಿಳುವಳಿಕೆಯನ್ನು ಮಕ್ಕಳಿಗೆ ಎಳವೆಯಲ್ಲೇ ಕಲಿಸಲು ನಾವು ವಿಫಲರಾದೆವೆಂದರೆ ಆಮೇಲೆ ಅವರು ನಮ್ಮ ನಿರೀಕ್ಷೆಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಅಲವತ್ತುಕೊಳ್ಳುವುದಕ್ಕೆ ನಮಗೆ ಯಾವ ನೈತಿಕತೆಯೂ ಉಳಿಯುವುದಿಲ್ಲ.

ಮಕ್ಕಳು ನಾವು ಹೇಳಿದ್ದನ್ನು ಕೇಳಲಾರರೇನೋ? ಆದರೆ ಮಾಡಿದ್ದನ್ನು ಮಾಡುತ್ತಾರೆ. ಯಾಕೆಂದರೆ ಮಕ್ಕಳದ್ದು ಕೇಳಿ ಕಲಿಯುವ ವಯಸ್ಸಲ್ಲ, ನೋಡಿ ಮಾಡುವ ವಯಸ್ಸು. ದೊಡ್ಡವರ ಒಣ ರಾಜಕೀಯ, ವಿನಾ ಪ್ರತಿಷ್ಠೆ, ಕ್ಲುಲ್ಲಕ ವೈಮನಸ್ಸು, ಅನಗತ್ಯ ದುರಹಂಕಾರ- ಎಲ್ಲವನ್ನೂ ಎಳೆಯ ಮಕ್ಕಳು ತಮಗೂ ಗೊತ್ತಿಲ್ಲದೆ ಅನುಸರಿಸುತ್ತಿರುತ್ತಾರೆ. ಅವರಿಗೆ ಅಪ್ಪ-ಅಮ್ಮಂದಿರಿಗಿಂತ, ಅವರಿಗಿಂತಲೂ ಹೆಚ್ಚು ಸಮಯ ಜತೆಯಲ್ಲಿ ಕಳೆಯುವ ಅಧ್ಯಾಪಕರುಗಳಿಗಿಂತ ದೊಡ್ಡ ಮಾದರಿಗಳಿಲ್ಲ. ಅವರು ತಮ್ಮ ನಡೆನುಡಿಗಳಲ್ಲಿ ತೋರಲಾಗದ್ದನ್ನು ಮಕ್ಕಳ ವರ್ತನೆಗಳಲ್ಲಿ ನಿರೀಕ್ಷಿಸುವುದರಲ್ಲಿ ಯಾವ ಅರ್ಥವೂ ಇಲ್ಲ.

ನಾವೆಲ್ಲ ಮಕ್ಕಳ ಐಕ್ಯೂ ಹಿಂದೆ ಬಿದ್ದುಬಿಟ್ಟಿದ್ದೇವೆ. ಅದನ್ನೇ ಬುದ್ಧಿವಂತಿಕೆಯೆಂದೂ, ಅದೇ ಬದುಕಿನ ಯಶಸ್ಸಿನ ಮಾನದಂಡವೆಂದೂ ತಪ್ಪು ತಿಳಿದುಕೊಂಡಿದ್ದೇವೆ. ಐಕ್ಯೂವಿನಷ್ಟೇ ಸಮಾನವಾದ ಇಕ್ಯೂ (ಇಮೋಶನಲ್ ಕೋಶೆಂಟ್)ವನ್ನು ಅವರಲ್ಲಿ ಬೆಳೆಸುವುದರಲ್ಲಿ ವಿಫಲರಾಗಿದ್ದೇವೆ. ಅವರಲ್ಲಿ ಪ್ರೀತಿ, ಗೌರವ, ಸಹನೆ, ಕರುಣೆ, ಅನುಕಂಪ, ಸಹಾನುಭೂತಿ ಇನ್ನಿತ್ಯಾದಿ ಭಾವ ವೈವಿಧ್ಯತೆಗಳ ಮರುಪೂರಣದ ಅಗತ್ಯ ತುಂಬ ಇದೆ. ದಿನದ ಇಪ್ಪತ್ನಾಲ್ಕು ಗಂಟೆಗಳನ್ನೂ ಮೊಬೈಲ್ ಉಪಾಸನೆ, ಸೀರಿಯಲ್ ಮಹಾಪೂಜೆಗಳಲ್ಲಿ ತಲ್ಲೀನರಾಗಿರುವ ಮನೆಮಂದಿಗೆ ಅದಕ್ಕಿಂತ ಭಿನ್ನವಾದ ಪ್ರಸಾದ ದೊರೆಯುವುದಾದರೂ ಹೇಗೆ?

ಸ್ಪಿರಿಚುವಲ್ ಕೋಶೆಂಟ್ ಇಂದು ಎಲ್ಲಕ್ಕಿಂತಲೂ ದೊಡ್ಡ ಅನಿವಾರ್ಯತೆ. ಮಕ್ಕಳಿಗೆ ಪುರಾಣದ, ಪಂಚತಂತ್ರದ ಕಥೆಗಳನ್ನು ಹೇಳಿ. ರಾಮಾಯಣ ಮಹಾಭಾರತ ಭಾಗವತಗಳನ್ನು ಸರಳವಾಗಿ ಪರಿಚಯಿಸಿ. ಸಂಗೀತ, ಕಲೆಗಳಲ್ಲಿ ಆಸಕ್ತಿ ಕುದುರುವಂತೆ ಮಾಡಿ. ಅವರೇನು ಮಹಾದೈವಭಕ್ತರಾಗಿ ಬೆಳೆಯಬೇಕಾಗಿಲ್ಲ, ಕನಿಷ್ಟ ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ, ಕೆಟ್ಟದು ಮಾಡಿದರೆ ಕೆಟ್ಟದಾಗುತ್ತದೆ, ಕೆಟ್ಟದ್ದನ್ನು ಶಿಕ್ಷಿಸುವ ಶಕ್ತಿಯೊಂದು ನಮ್ಮ ಬೆನ್ನಹಿಂದೆ ಸದಾ ಇದೆ ಎಂಬ ಭಾವನೆಯನ್ನಾದರೂ ಬೆಳೆಸಿ.  ಗೆಲ್ಲುವುದರೊಂದಿಗೆ ಸೋಲುವುದನ್ನೂ ಕಲಿಸಿ. ಸಣ್ಣಪುಟ್ಟ ಸೋಲುಗಳನ್ನು ದೊಡ್ಡದು ಮಾಡಲು ಹೋಗಬೇಡಿ. ಅವೆಲ್ಲ ಸಾಮಾನ್ಯ ಎಂಬ ಭಾವನೆಯನ್ನು ಬೆಳೆಸಿ. ಆಗ ಬದುಕಿನ ದೊಡ್ಡ ಸವಾಲುಗಳನ್ನು ಎದುರಿಸಲು ಮಗುವಿನ ಮನಸ್ಸು ಸಹಜವಾಗಿಯೇ ಸಿದ್ಧವಾಗುತ್ತದೆ.

-ಸಿಬಂತಿ ಪದ್ಮನಾಭ ಕೆ. ವಿ. 

ಶುಕ್ರವಾರ, ಸೆಪ್ಟೆಂಬರ್ 6, 2019

ಗುರಿಯಿಲ್ಲದ ಬದುಕು ಹಾಯಿ ಇಲ್ಲದ ದೋಣಿ

ಆಗಸ್ಟ್ 31- ಸೆಪ್ಟೆಂಬರ್ 6, 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ.

ಓರಗೆಯ ಮಕ್ಕಳು ಚಿನ್ನಿದಾಂಡು ಆಡುತ್ತಿದ್ದರೆ ಇವನೊಬ್ಬ ಅಂಕೆಸಂಖ್ಯೆಗಳೊಂದಿಗೆ ಆಟವಾಡುತ್ತಿದ್ದ. ದಿನಕ್ಕೆ ಒಂದು ಹೊತ್ತು ಹೊಟ್ಟೆ ತುಂಬ ಉಣ್ಣಲಾಗದ ಕಡುಬಡತನವಿದ್ದರೂ ತಲೆಯೊಳಗೆ ಬಂಗಾರದ ಗಣಿಯಿತ್ತು. ಕೂತಲ್ಲಿ ನಿಂತಲ್ಲಿ ನಡೆದಲ್ಲಿ ಗಣಿತಶಾಸ್ತ್ರೀಯ ಸೂತ್ರಗಳು ಕಣ್ಣ ಮುಂದೆ ತಕತಕನೆ ಕುಣಿಯುತ್ತಿದ್ದವು. ಇನ್ನೂ ಹನ್ನೊಂದರ ಹುಡುಗ ಯಾರೋ ಹರಿದೆಸೆದ ಬಿಳಿ ಹಾಳೆಗಳ ಮೇಲೆ ಮನಸ್ಸಿಗೆ ಬಂದ ಬೀಜಗಣಿತದ ಸಮೀಕರಣಗಳನ್ನು ಗೀಚುತ್ತಿದ್ದರೆ ಕಾಲೇಜು ಪ್ರೊಫೆಸರುಗಳಿಗೂ ಅರಗಿಸಿಕೊಳ್ಳಲಾಗದ ವಿಸ್ಮಯ.

ಆತ ಜಗತ್ತು ಕಂಡ ಶ್ರೇಷ್ಠ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರಾದ ಶ್ರೀನಿವಾಸ ರಾಮಾನುಜನ್. ಅವರು ಬರೆದಿಟ್ಟಿದ್ದ ಗಣಿತದ ಸಮೀಕರಣಗಳನ್ನು ಕಂಡು ವಿಶ್ವವಿಖ್ಯಾತ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೇ ಬೆಚ್ಚಿಬಿದ್ದಿದ್ದರು. ‘ಸರಿಯಾದ ಕಾಲೇಜು ಶಿಕ್ಷಣವೇ ಆಗಿಲ್ಲ ನಿನಗೆ. 'ಯೂನಿವರ್ಸಿಟಿ ಡಿಗ್ರಿಯೂ ಇಲ್ಲ. ಅತ್ಯಂತ ಕಠಿಣ ಸಮೀಕರಣಗಳನ್ನೆಲ್ಲ ಬಿಡಿಸಿದ್ದೀಯ. ಅದು ಹೇಗೆ? ಉತ್ತರ ಎಲ್ಲಿಂದ ಬಂತು?’ ಪ್ರೊ. ಹಾರ್ಡಿ ಕೇಳುತ್ತಿದ್ದರೆ ರಾಮಾನುಜನ್ ಉತ್ತರ: ‘ಗೊತ್ತಿಲ್ಲ ಸರ್. ನನ್ನ ಮನಸ್ಸಿಗೆ ಹೊಳೆಯಿತು. ಬರೆದಿದ್ದೇನೆ ಅಷ್ಟೇ.’

ಇವನ್ನೆಲ್ಲ ನಿಜಕ್ಕೂ ಈ ಹುಡುಗನೇ ಬರೆದನಾ ಎಂದು ಅವರೆಲ್ಲ ತಲೆಕೆಡಿಸಿಕೊಳ್ಳುವಷ್ಟರಮಟ್ಟಿನ ಅಪೂರ್ವ ಸಂಶೋಧನೆಗಳನ್ನು ರಾಮಾನುಜನ್ ಮಾಡಿದ್ದರು. ಕೊನೆಗೊಂದು ದಿನ ಲಂಡನ್‍ನ ವಿಶ್ವವಿಖ್ಯಾತ ರಾಯಲ್ ಸೊಸೈಟಿ ತನ್ನೆಲ್ಲ ನಿಯಮಗಳನ್ನು ಸಡಿಲಿಸಿ 30ರ ತರುಣ ರಾಮಾನುಜರನ್ನು ತನ್ನ ಫೆಲೋ ಎಂದು ಘೋಷಿಸಿತು. ಅವರು ಬರೆದಿಟ್ಟದ್ದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಇನ್ನೂ ನಮ್ಮ ಗಣಿತಲೋಕಕ್ಕೆ ಸಾಧ್ಯವಾಗಿಲ್ಲ. ಹಿ ವಾಸ್ ಎ ಜೀನಿಯಸ್!

ದೊಡ್ಡದೊಂದು ಗುರಿ, ಯಾರಿಂದಲೂ ತಡೆಯಲಾಗದ ಮಹತ್ವಾಕಾಂಕ್ಷೆ- ಇವೆರಡೂ ಇದ್ದರೆ ಮನುಷ್ಯ ಏನನ್ನೂ ಸಾಧಿಸಬಲ್ಲ ಎಂಬುದಕ್ಕೆ ಶ್ರೀನಿವಾಸ ರಾಮಾನುಜನರೇ ಸಾಕ್ಷಿ. ಗಣಿತ ಬಿಟ್ಟು ಅವರಿಗೆ ಇನ್ನೇನೂ ಅರ್ಥವಾಗುತ್ತಿರಲಿಲ್ಲ. ಪ್ರತಿಕ್ಷಣ, ಪ್ರತಿನಿಮಿಷವೂ ಅವರ ಮನಸ್ಸು ಗಣಿತಕ್ಕಾಗಿ ಹಪಹಪಿಸುತ್ತಿತ್ತು. ಊಟ, ನೀರು, ನಿದ್ದೆಯಿಲ್ಲದಿದ್ದರೂ ನಡೆಯುತ್ತಿತ್ತು; ಗಣಿತವಿಲ್ಲದೆ ಅವರಿಗೆ ಬದುಕು ಅಸಾಧ್ಯವಾಗಿತ್ತು. ಕೇವಲ 32 ವರ್ಷ ಬದುಕಿದ್ದ ರಾಮಾನುಜನ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಕಾರಣ ಅವರೊಳಗಿದ್ದ ಗುರಿಸಾಧನೆಯ ಕಿಚ್ಚು.

‘ದೊಡ್ಡ ಗುರಿಗಳಿಂದ ದೊಡ್ಡ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ತಾವು ಕಾಣದ ಗುರಿಯನ್ನು ಜನ ಹೇಗೆ ತಾನೇ ಬೇಧಿಸಿಯಾರು?’ ಎಂದು ಕೇಳುತ್ತಾರೆ ರಾಯ್ ಬೆನೆಟ್. ಅದನ್ನೇ ಸಾವಿರಾರು ವರ್ಷಗಳ ಹಿಂದೆ ದ್ರೋಣಾಚಾರ್ಯರು ತಮ್ಮ ಶಿಷ್ಯರಲ್ಲಿ ಕೇಳಿದ್ದರು. ಮರದ ಮೇಲೆ ಕುಳಿತಿರುವ ಹಕ್ಕಿಯ ಕಣ್ಣಿಗೆ ಗುರಿಯಿಡಲು ಸೂಚಿಸಿದ ಮೇಲೆ ‘ಹೇಳಿ ನಿಮಗೇನು ಕಾಣುತ್ತಿದೆ’ ಎಂದು ಅವರು ಎಲ್ಲರನ್ನೂ ಕೇಳಿದರಂತೆ. ಸುತ್ತಲಿನ ತೋಟ, ಅಲ್ಲಿನ ಮರಗಿಡಗಳು, ಹೂವು, ಹಣ್ಣು, ರೆಂಬೆಕೊಂಬೆ... ಒಬ್ಬೊಬ್ಬರಿಗೆ ಒಂದೊಂದು ಕಂಡರೆ ಅರ್ಜುನ ಮಾತ್ರ ‘ಹಕ್ಕಿಯ ಕಣ್ಣು ಕಾಣಿಸುತ್ತಿದೆ ಗುರುಗಳೆ’ ಎಂದಿದ್ದನಂತೆ. ಅದಕ್ಕೇ ಅವನು ಮುಂದೆ ತ್ರಿಲೋಕಗಳಲ್ಲೂ ಸಾಟಿಯಿಲ್ಲದ ಬಿಲ್ಗಾರ ಎನಿಸಿಕೊಂಡ. ತಾವು ಸಾಧಿಸಬೇಕಿರುವುದು ಏನೆಂದು ಅರ್ಥ ಮಾಡಿಕೊಳ್ಳಲಾಗದವರು ವಾಸ್ತವವಾಗಿ ಸಾಧನೆಯೊಂದನ್ನು ಮಾಡುವುದಾದರೂ ಹೇಗೆ?

ಗುರಿಯಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟದ ಹಾಗೆ, ಹಾಯಿ ಇಲ್ಲದ ದೋಣಿಯ ಹಾಗೆ. ಬಸ್ಸು ಹತ್ತಿ ಕುಳಿತವನಿಗೂ ಎಲ್ಲಿಗೆ ಟಿಕೇಟು ತೆಗೆದುಕೊಳ್ಳಬೇಕು ಎಂದು ತಿಳಿದಿರುತ್ತದೆ. ಇನ್ನು ಬದುಕಿನ ಬಂಡಿ ಏರಿದವನಿಗೆ ಎಲ್ಲಿ ಇಳಿಯಬೇಕು ಎಂಬ ಅರಿವಿಲ್ಲದಿದ್ದರೆ ಹೇಗೆ? ಗುರಿಯ ಅರಿವು ಸಾಧನೆಗೆ ಬಲವನ್ನೂ, ಹುರುಪನ್ನೂ, ಏಕಾಗ್ರತೆಯನ್ನೂ, ಶ್ರದ್ಧೆಯನ್ನೂ ಕೊಡುತ್ತದೆ. ಗುರಿಯಿಲ್ಲದ ಉತ್ಸಾಹ ಕಾಳ್ಗಿಚ್ಚಿಗೆ ಸಮ. ಕಾಡು ಉರಿದು ಬೂದಿಯಾಗುತ್ತದೆಯೇ ಹೊರತು ಒಳ್ಳೆಯದೇನೂ ಆಗುವುದಿಲ್ಲ. ಅರ್ಧ ಆಯಸ್ಸು ಕಳೆದ ಮೇಲೂ ಅನೇಕ ಮಂದಿಗೆ ಜೀವನದಲ್ಲಿ ತಾವೇನು ಮಾಡಬೇಕು ಎಂಬ ಸ್ಪಷ್ಟತೆ ಇರುವುದಿಲ್ಲ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು, ಅವರೂ ಒಂದು ದಿನ ಸಾಯುತ್ತಾರೆ. ಒಂದು ಜೀವನದ ಘನತೆ ಅಷ್ಟೇ ಏನು? ಇನ್ನು ಕೆಲವರಿಗೆ ಸಮಸ್ಯೆಗಳೇ ಮುಗಿಯುವುದಿಲ್ಲ. ಜಗತ್ತಿನ ಎಲ್ಲ ಸಮಸ್ಯೆಗಳೂ ತಮಗೊಬ್ಬರಿಗೇ ಬಂದಿದೆ ಎಂದು ಹಲುಬುತ್ತಿರುತ್ತಾರೆ. ಏನಾದರೂ ಸಾಧಿಸಬೇಕು ಎಂಬ ಆಸೆಯೇನೋ ಇದೆ, ಆದರೆ ಈ ಸಮಸ್ಯೆಗಳು ತನ್ನನ್ನು ಬಿಡುವುದಿಲ್ಲ ಎಂಬ ನೆಪ ಹೇಳುತ್ತಾರೆ. ಅವರು ಸಮಸ್ಯೆಗಳ ನಡುವೆಯೇ ಜೀವನ ನೂಕುತ್ತಾ ಅತೃಪ್ತ ಆತ್ಮಗಳಾಗಿಯೇ ಉಳಿಯುತ್ತಾರೆಯೇ ವಿನಾ ಎಂದೂ ಸಂತೃಪ್ತಿ ಕಾಣುವುದೇ ಇಲ್ಲ.

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|
ಗುರುತಿಸೊಳಿತಿರುವುದನು ಕೇಡುಗಳ ನಡುವೆ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು|
ಹರುಷಕದೆ ದಾರಿಯೆಲೊ- ಮಂಕುತಿಮ್ಮ||
ಸರ್ಕಾರಿ ಬಸ್ಸಲ್ಲಿ ಕುಳಿತ ಬಹುಮಂದಿಯೂ ಚಾಲಕನ ಹಿಂದಿರುವ ಎರಡು ಗೆರೆಗಳ ಭಾಗ್ಯದ ವಿಚಾರವನ್ನು ಓದಿ ತಲೆಕೆರೆದುಕೊಂಡು ಸುಮ್ಮನಾಗುತ್ತಾರೆಯೇ ಹೊರತು ತಮ್ಮ ಹರುಷದ ದಾರಿಯ ಬಗ್ಗೆ ಯೋಚಿಸುವುದೇ ಇಲ್ಲ. ಗುರಿ-ದಾರಿಗಳ ಸ್ಪಷ್ಟ ಅರಿವು ಇಲ್ಲದಿರುವವರು ಜೀವನದಲ್ಲಿ ಯಾವ ನಿಲ್ದಾಣವನ್ನೂ ತಲುಪುವುದಿಲ್ಲ. ‘ತನ್ನ ಕಣ್ಣುಗಳನ್ನು ಗುರಿಯಿಂದ ಕದಲಿಸುವವನು ಮಾತ್ರ ದಾರಿಯಲ್ಲಿ ಅಡೆತಡೆಗಳನ್ನು ಕಾಣುತ್ತಾನೆ’ ಎಂಬ ಜೋಸೆಫ್ ಕಾಸ್ಮಾನ್ ಮಾತು ಇಲ್ಲಿ ನೆನಪಾಗಬೇಕು. ವ್ಯಕ್ತಿಯೊಬ್ಬನಿಗೆ ತನ್ನ ಹಾದಿಯಲ್ಲಿ ಬರೀ ಅಡ್ಡಿ ಆತಂಕಗಳೇ ಕಾಣುತ್ತವೆಂದರೆ ಆತನ ದೃಷ್ಟಿ ಭದ್ರವಾಗಿ ಗುರಿಯ ಮೇಲೆ ನೆಟ್ಟಿಲ್ಲ ಎಂದೇ ಅರ್ಥ.

ಬದುಕಿನಲ್ಲಿ ಸೋತರೆ ತಪ್ಪಲ್ಲ, ಆದರೆ ಸಣ್ಣ ಗುರಿಯನ್ನು ಇಟ್ಟುಕೊಳ್ಳುವುದು ಅಪರಾಧ ಎಂಬ ದಾರ್ಶನಿಕರ ಮಾತು ನಮಗೆ ದೊಡ್ಡ ಪಾಠ. ನಮ್ಮ ಪ್ರಯತ್ನಗಳು ಸುಖಾಸುಮ್ಮನೆ ವ್ಯರ್ಥವಾಗುವುದೇ ಇಲ್ಲ. ಒಂದು ಕಡೆ ಸೋತಂತೆ ಕಂಡರೂ ಅದಕ್ಕಾಗಿ ಹಾಕಿದ ಶ್ರಮ ಇನ್ನೆಲ್ಲೋ ಒಂದು ಕಡೆ ಫಲ ನೀಡಿಯೇ ನೀಡುತ್ತದೆ. ಹತ್ತು ಕಡೆ ಹಳ್ಳ ತೋಡುವುದಕ್ಕಿಂತ ಒಂದೇ ಕಡೆ ಹತ್ತುಕಡೆಯ ಶ್ರಮವನ್ನು ಹಾಕಿದರೆ ನೀರಾದರೂ ದೊರೆತೀತು. ಗುರಿಸಾಧನೆಯ ದಾರಿಯಲ್ಲಿ ಸಣ್ಣಪುಟ್ಟ ಆಕರ್ಷಣೆಗಳು ಎದುರಾಗುವುದು ಸಹಜ. ಅವುಗಳಿಂದ ವಿಚಲಿತರಾಗದ ಗಟ್ಟಿ ಮನಸ್ಸು ಬೇಕು. ಹೆದ್ದಾರಿಯ ತುದಿಯಲ್ಲಿ ಫಲಿತಾಂಶ ಖಚಿತ ಇದೆಯೆಂದು ತಿಳಿದಿರುವಾಗ ಅಡ್ಡದಾರಿಗಳ ಗೊಡವೆಯೇಕೆ?

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಆಗಸ್ಟ್ 28, 2019

ಯಾಣದ ಸೊಬಗಿನ ಹಿಂದಿನ ಕೈಗಳ ಕಾಣಾ!

27 ಆಗಸ್ಟ್ 2019ರ ಪ್ರಜಾವಾಣಿ - ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟವಾದ ಲೇಖನ
ಮೂಲ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ.

ಶೈಲಾ ಪಟಗಾರ ಮತ್ತು ವಿನೋದ ಮರಾಟಿ. ಈ ಹೆಸರುಗಳನ್ನು ನೀವು ಕೇಳದೇ ಇರಬಹುದು. ಆದರೆ ಕಳೆದ ಒಂದೆರಡು ವರ್ಷಗಳಲ್ಲಿ ಯಾಣಕ್ಕೇನಾದರೂ ಪ್ರವಾಸ ಕೈಗೊಂಡಿದ್ದರೆ ಖಾಕಿ ಸಮವಸ್ತ್ರದಲ್ಲಿರುವ ಈ ಇಬ್ಬರು ಮಹಿಳೆಯರನ್ನು ಮಾತ್ರ ನೋಡದೆ ಇದ್ದಿರಲಾರಿರಿ.

ಯಾಣದ ಪ್ರವೇಶದ್ವಾರದಿಂದ ತೊಡಗಿ ವಿಶ್ವಪ್ರಸಿದ್ಧ ಅವಳಿ ಶಿಲೆಗಳವರೆಗಿನ ಒಂದು ಮೈಲಿ ದೂರದ ಕಾಲುಹಾದಿಗುಂಟ ಬೆಳಗ್ಗಿನಿಂದ ಸಂಜೆಯವರೆಗೂ ಅತ್ತಿಂದಿತ್ತ ಇತ್ತಿಂದತ್ತ ಹೆಜ್ಜೆಹಾಕುವ ಈ ಹೆಣ್ಮಕ್ಕಳ ಬದ್ಧತೆ ನಿಮ್ಮಲ್ಲಿ ಸೋಜಿಗ ಹಾಗೂ ಹೆಮ್ಮೆಯನ್ನು ತುಂಬದೆ ಇರಲಾರದು.

ಕೈಯ್ಯಲ್ಲೊಂದು ಕಬ್ಬಿಣದ ಕೊಕ್ಕೆ ಹಿಡಿದು ಹೊರಟರೆಂದರೆ ಕುಡಿದು ಎಸೆದ ನೀರಿನ ಬಾಟಲ್, ತಿಂದು ಮುದುರಿದ ಕುರುಕಲಿನ ಕವರು – ಇಂಥವುಗಳನ್ನು ಬಿಟ್ಟರೆ ಅವರಿಗೆ ಬೇರೇನೂ ಕಾಣುವುದೇ ಇಲ್ಲ. ಕಂಡಲ್ಲೆಲ್ಲ ಅವುಗಳನ್ನು ಕೊಕ್ಕೆಯ ಸಹಾಯದಿಂದ ಹೆಕ್ಕಿ ಅಲ್ಲಲ್ಲೇ ಇರುವ ಕಸದ ಬುಟ್ಟಿಗಳಿಗೆ ತುಂಬಿಸುತ್ತಾ ಹೋಗುವುದೇ ಅವರ ಏಕೈಕ ಕಾಯಕ.

ಕೆಲಸ ಸರಳವಾಗಿ ಕಾಣಬಹುದು. ಆದರೆ ನಮ್ಮ ಸುತ್ತಲಿನ ನೂರಾರು ಪ್ರವಾಸೀ ತಾಣಗಳ ಪೈಕಿ ಇಂದು ಪ್ಲಾಸ್ಟಿಕ್ ಹಾವಳಿ ತೀರಾ ಕಡಿಮೆಯಿರುವುದು ಕತಗಾಲ ಅರಣ್ಯ ವಲಯಕ್ಕೆ ಸೇರುವ ಯಾಣದಲ್ಲಿ ಎಂದರೆ ಅದಕ್ಕೆ ಈ ಇಬ್ಬರು ಹೆಣ್ಮಕ್ಕಳ ಶ್ರದ್ಧೆ ಮತ್ತು ಬದ್ಧತೆಯೇ ಕಾರಣ. ಶೈಲಾ ಮತ್ತು ವಿನೋದ ಇಬ್ಬರೂ ಯಾಣದ ಸ್ಥಳೀಯರೇ. ಗ್ರಾಮ ಅರಣ್ಯ ಸಮಿತಿಯಿಂದ ಇವರು ನೇಮಕಗೊಂಡಿರುವುದೇ ಯಾಣವನ್ನು ಪ್ಲಾಸ್ಟಿಕ್‍ಮುಕ್ತವನ್ನಾಗಿ ಇರಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಯಾಣಕ್ಕೆ ಪ್ರತಿವರ್ಷ ಏನಿಲ್ಲವೆಂದರೂ ಒಂದು ಲಕ್ಷ ಪ್ರವಾಸಿಗರು ಭೇಟಿನೀಡುತ್ತಾರೆ.  ಯಾಣದ ನಿತ್ಯಹರಿದ್ವರ್ಣ ಕಾಡು, ಕಲ್ಮಶರಹಿತ ಗಾಳಿ, ಅಲ್ಲಲ್ಲಿ ಜಿನುಗುವ ನೀರಿನ ಒರತೆ, ಕಪ್ಪುಮಣ್ಣಿನ ಮೇಲೆ ಒಪ್ಪವಾಗಿ ಹರಡಿಕೊಂಡಿರುವ ಮೆತ್ತಗಿನ ಹುಲ್ಲು, ಎಂತಹ ಒತ್ತಡದ ಮನಸ್ಸುಗಳನ್ನೂ ಕ್ಷಣಕಾಲ ನಿರಾಳವಾಗಿಸಬಲ್ಲ ತಂಪುತಂಪು ವಾತಾವರಣ, ಎಲ್ಲವಕ್ಕೂ ಕಿರೀಟವಿಟ್ಟಂತೆ ಆಕಾಶದತ್ತ ಚಾಚಿಕೊಂಡು ನೋಡುಗರನ್ನು ನಿಬ್ಬೆರಗಾಗಿಸುವಂತೆ ನಿಂತಿರುವ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರಗಳೆಂಬ ಕಡುಕಪ್ಪು ಅವಳಿ ಶಿಲೆಗಳು- ಇವುಗಳತ್ತ ಪ್ರತಿದಿನ ನಾಡಿನ ವಿವಿಧ ದಿಕ್ಕುಗಳಿಂದ ನೂರಾರು ಮಂದಿ ಆಕರ್ಷಿತರಾಗಿ ಓಡಿಬರುತ್ತಾರೆ ಎಂದರೆ ಅಚ್ಚರಿಯೇನೂ ಇಲ್ಲ. ಅಚ್ಚರಿಯಾಗುವುದು ಇಂತಹ ರಮಣೀಯ ಪರಿಸರಕ್ಕೆ ಕೈಗೆ ಸಿಕ್ಕಿದ ತ್ಯಾಜ್ಯಗಳನ್ನೆಲ್ಲ ಎಸೆದು ಹೋಗುವ ಮನಸ್ಸಾದರೂ ಜನರಿಗೆ ಹೇಗೆ ಬರುತ್ತದೆ ಎಂಬ ಪ್ರಶ್ನೆಗೆ. ಇದನ್ನು ಅಚ್ಚರಿ ಎಂಬುದಕ್ಕಿಂತಲೂ ಬೇಸರ ಎಂಬುದೇ ಹೆಚ್ಚು ಸರಿ.

“ದಿನಕ್ಕೆ ಏನಿಲ್ಲವೆಂದರೂ ಐದು ಕೆ.ಜಿ. ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿರುವುದರಿಂದ ಈ ಪ್ರಮಾಣ ಇಮ್ಮಡಿಯಾಗುವುದೂ ಇದೆ,” ಎನ್ನುತ್ತಾರೆ ಶೈಲಾ ಪಟಗಾರ. “ಪ್ಲಾಸ್ಟಿಕ್ ಎಸೀಬೇಡಿ ಅಂತ ಕಂಡವರನ್ನೆಲ್ಲ ಬೇಡಿಕೊಳ್ಳುತ್ತೇವೆ. ಆದರೆ ಕಿವಿಗೆ ಹಾಕಿಕೊಳ್ಳುವವರು ಕಡಿಮೆ. ಬಿದ್ದ ಪ್ಲಾಸ್ಟಿಕ್ ಹೆಕ್ಕಿ ಮುಂದಕ್ಕೆ ಹೋಗುತ್ತಿದ್ದ ಹಾಗೆ ಅಲ್ಲೇ ಮತ್ತೆ ಕಸ ಎಸೆಯುವವರಿಗೇನೂ ಕಮ್ಮಿಯಿಲ್ಲ. ಅಲ್ಲೊಂದು ಪ್ಲಾಸ್ಟಿಕ್ ಉಳಿದುಕೊಂಡಿದೆ ನೋಡಿ, ಹೆಕ್ಕಿಕೊಳ್ಳಿ ಎಂದು ನಮಗೇ ತಿಳಿಹೇಳುವವರೂ ಇದ್ದಾರೆ” ಎಂದು ನೆನಪಿಸಿಕೊಳ್ಳುತ್ತಾರೆ ವಿನೋದ.

ಯಾಣದ ಶಿಲೆಗಳತ್ತ ಸಾಗುವ ಹಾದಿಯುದ್ದಕ್ಕೂ ಸ್ವಚ್ಛತೆಯನ್ನು ಕಾಪಾಡುವಂತೆ ಪ್ರವಾಸಿಗರನ್ನು ಕೋರುವ ಹತ್ತಾರು ಫಲಕಗಳನ್ನು ಅರಣ್ಯ ಇಲಾಖೆ ಸ್ಥಾಪಿಸಿದೆ. ಹೆಜ್ಜೆಗೊಂದರಂತೆ ಕಸದ ಬುಟ್ಟಿಗಳನ್ನು ಇರಿಸಿದೆ. ಆದರೆ ಅವುಗಳತ್ತ ಗಮನ ಕೊಡುವವರು ಮಾತ್ರ ವಿರಳ.

2017ರ ಆರಂಭದಲ್ಲಿ ನೇಮಕಗೊಂಡ ಶೈಲಾ-ವಿನೋದ ಇಬ್ಬರೂ ದಿನಕ್ಕೆ ಹತ್ತು-ಹದಿನೈದು ಕಿ.ಮೀ. ಓಡಾಡುತ್ತಲೇ ಈವರೆಗೆ ಮೂರು ಟನ್ ಆದರೂ ಪ್ಲಾಸ್ಟಿಕ್‍ನ್ನು ಸಂಗ್ರಹಿಸಿರಬಹುದು. ನೆಲದೊಳಕ್ಕೆ ಸೇರಿಹೋಗಬಹುದಾಗಿದ್ದ ಎಷ್ಟು ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಅನ್ನು ಈ ಹೆಮ್ಮಕ್ಕಳು ತಡೆಹಿಡಿದಿದ್ದಾರೆ ಎಂಬುದೇ ದೊಡ್ಡದೊಂದು ಹೆಮ್ಮೆಯ ಸಂಗತಿ. ಪ್ರತೀ ವಾರಾಂತ್ಯದಲ್ಲಿ ಅವರು ಸಂಗ್ರಹಿಸಿದ ಕಸವನ್ನು ಕುಮಟಾ ನಗರಸಭೆಯ ವಾಹನಗಳು ಕೊಂಡೊಯ್ದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತವೆ.

“ಈ ಮಹಿಳೆಯರು ಮಾಡುವ ಕೆಲಸಕ್ಕೆ ಗ್ರಾಮ ಅರಣ್ಯ ಸಮಿತಿಯಿಂದ ಪುಟ್ಟ ಸಂಭಾವನೆ ಇದೆ. ಆದರೆ ಅವರು ಮಾಡುವ ಕೆಲಸ, ಶ್ರದ್ಧೆ, ಬದ್ಧತೆ ಮತ್ತು ನಿರಂತರತೆಯ ಎದುರು ಆ ಸಂಭಾವನೆ ಏನೇನೂ ಅಲ್ಲ. ಅವರು ಮಹಿಳೆಯರಾಗಿರುವುದರಿಂದಲೇ ಈ ಬದ್ಧತೆ ಸಾಧ್ಯವಾಗಿರಬೇಕು” ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು. “ಆದರೆ ಸ್ವತಃ ಪ್ಲಾಸ್ಟಿಕ್ ಹೆಕ್ಕುವುದಕ್ಕಿಂತಲೂ ಪ್ರವಾಸಿಗರು ಅವನ್ನು ಎಸೆದುಹೋಗದಂತೆ ಅವರಿಗೆ ತಿಳಿಹೇಳುವ ಕೆಲಸವನ್ನೂ ಇವರು ಮಾಡಬೇಕು. ನಮ್ಮ ಒಂದೊಂದು ಪ್ರವಾಸಿ ತಾಣಗಳಲ್ಲೂ ಇಂತಹ ಯೋಜನೆ ಜಾರಿಗೆ ಬಂದರೆ ಅದರ ಒಟ್ಟಾರೆ ಪರಿಣಾಮ ನಿಜಕ್ಕೂ ತುಂಬ ವಿಭಿನ್ನವಾಗಿರಬಹುದು” ಎನ್ನುತ್ತಾರೆ ಅವರು.

“ವಾಸ್ತವವಾಗಿ ನಾವು ಪ್ರಕೃತಿಗಾಗಿ ಹೊಸದೇನನ್ನೂ ಮಾಡಬೇಕಿಲ್ಲ. ಅದು ಸಹಜವಾಗಿ ತನ್ನಪಾಡಿಗೆ ತಾನು ಇರಲು ಅವಕಾಶ ಮಾಡಿಕೊಟ್ಟರೆ ಸಾಕು. ಆದರೆ ಪ್ರವಾಸಿಗರಿಗೆ ಈ ವಿಷಯ ಅರ್ಥವೇ ಆಗುವುದಿಲ್ಲ. ಈ ಇಬ್ಬರು ಮಹಿಳೆಯರ ನಿಸ್ವಾರ್ಥ ಸೇವೆ ಖಂಡಿತ ಪ್ರಶಂಸಾರ್ಹ” ಎನ್ನುತ್ತಾರೆ ಯಾದಗಿರಿ ಜಿಲ್ಲೆಯ ಮಂಜಲಾಪುರದಿಂದ ಬಂದ ಪ್ರವಾಸಿ ಪರಶುರಾಮ ಐಕೂರು.

ಯಾಣದಂತಹ ರಮಣೀಯ ತಾಣಗಳು ಅಂದಗೆಡಿಸಿಕೊಳ್ಳುತ್ತಿರುವುದು ವಿದ್ಯಾವಂತ ಮಂದಿಯಿಂದಲೇ ಎಂಬುದು ಗುಬ್ಬಿ ತಾಲೂಕಿನ ಕಡಬದ ಪ್ರವಾಸಿ ಪಿ. ಕವಿತ ಅವರ ಅಭಿಮತ. “ನಿರ್ದಿಷ್ಟವಾಗಿ ವಾರಾಂತ್ಯಗಳಲ್ಲಿ ಇಂತಹ ಪ್ರದೇಶಗಳಿಗೆ ಭೇಟಿ ನೀಡುವುದು ವಿದ್ಯಾವಂತ ಉದ್ಯೋಗಸ್ಥ ಮಂದಿಯೇ. ಅವರು ತಮ್ಮ ಕನಿಷ್ಟ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದಿರುವುದು ಮಾತ್ರ ವಿಚಿತ್ರ. ಬರೀ ಕಾನೂನು-ನಿಯಮಗಳಿಂದ ಏನು ತಾನೇ ಸಾಧಿಸಲು ಸಾಧ್ಯ? ಬದಲಾಗಬೇಕಿರುವುದು ಜನರ ಮನಸ್ಥಿತಿ,” ಎನ್ನುತ್ತಾರೆ ಅವರು.

ಪ್ಲಾಸ್ಟಿಕ್ ತ್ಯಾಜ್ಯ ವಿಷಯವಾಗಿ ರಾಜ್ಯ ಮತ್ತು ದೇಶದಲ್ಲಿರುವ ನೂರಾರು ಪ್ರಸಿದ್ಧ ಪ್ರವಾಸಿ ಹಾಗೂ ಚಾರಣ ತಾಣಗಳು ಎಚ್ಚೆತ್ತುಕೊಳ್ಳುವುದು ಇಂದಿನ ಅನಿವಾರ್ಯತೆ. ಹೊಸದೇನನ್ನು ಮಾಡಲಾಗದಿದ್ದರೂ ಅರಣ್ಯ ಇಲಾಖೆ ಪೋಷಿಸಿರುವ ಯಾಣದ ಸಿದ್ಧ ಮಾದರಿಯೊಂದನ್ನು ಅಳವಡಿಸಿಕೊಳ್ಳುವುದು ಅಂತಹ ಕಷ್ಟವೇನೂ ಆಗಲಾರದು.
- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಆಗಸ್ಟ್ 26, 2019

ಅಮೇರಿಕದಲ್ಲಿ ನಾಣ್ಯ ಬಿದ್ದರೆ ಭಾರತದಲ್ಲೂ ಸದ್ದು!

26 ಆಗಸ್ಟ್ 2019ರ ವಿಜಯವಾಣಿ (ವಿತ್ತವಾಣಿ ಪುರವಣಿ)ಯಲ್ಲಿ ಪ್ರಕಟವಾದ ಲೇಖನ

ಭಾರತ ಮತ್ತೊಂದು ಆರ್ಥಿಕ ಹಿಂಜರಿತದ ಹೊಸ್ತಿಲಲ್ಲಿ ನಿಂತಿದೆಯೇ ಎಂಬ ಬಗ್ಗೆ ಬಿಸಿಬಿಸಿ ಚರ್ಚೆಗಳು ಆರಂಭವಾಗಿವೆ. ದೊಡ್ಡದೊಡ್ಡ ಕಂಪೆನಿಗಳು ಉತ್ಪಾದನೆಯನ್ನು ಕಡಿತಗೊಳಿಸಿರುವ, ನಷ್ಟವನ್ನು ಅನುಭವಿಸುತ್ತಿರುವ, ಉದ್ಯೋಗಿಗಳನ್ನು ಮನೆಗೆ ಕಳಿಸುತ್ತಿರುವ ಕುರಿತ ವಿವಿಧ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 2008ರಲ್ಲಿ ತಲೆದೋರಿದ ಆರ್ಥಿಕ ಕುಸಿತದೊಂದಿಗೆ ನಾವು ಮತ್ತೊಮ್ಮೆ ಸೆಣಸಬೇಕಾಗಿದೆಯೇ ಎಂಬ ಆತಂಕ ಅನೇಕ ಮಂದಿಯಲ್ಲಿ ಮನೆ ಮಾಡಿದೆ.

“70 ವರ್ಷಗಳಲ್ಲೇ ದೇಶ ಅತ್ಯಂತ ವಿಚಿತ್ರವಾದ ಸಂದಿಗ್ಧದ ಪರಿಸ್ಥಿತಿಯೊಂದನ್ನು ಎದುರಿಸುತ್ತಿದೆ. ಖಾಸಗಿ ರಂಗದವರು ಯಾರು ಯಾರನ್ನೂ ನಂಬದ ಪರಿಸ್ಥಿತಿಯಲ್ಲಿ ಇದ್ದಾರೆ. ಕೇಂದ್ರ ಸರ್ಕಾರ ಈಗ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲೇಬೇಕಾಗಿದೆ. ಖಾಸಗಿಯವರ ಮನಸ್ಸಿನಲ್ಲಿ ಕಾಡುತ್ತಿರುವ ಸಂಶಯಗಳನ್ನು ನಿವಾರಿಸಿ, ಅವರು ಮತ್ತೆ ಧೈರ್ಯವಾಗಿ ಹೂಡಿಕೆಯಲ್ಲಿ ತೊಡಗುವಂತೆ ಮಾಡುವುದು ಸರ್ಕಾರದ ಕರ್ತವ್ಯ” ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿರುವ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೊಂದು ಜಾಗತಿಕ ವಿದ್ಯಮಾನ, ಯಾರೂ ಧೈರ್ಯ ಕಳೆದುಕೊಳ್ಳಬೇಕಿಲ್ಲ ಎಂದು ಸಮಾಧಾನದ ಮಾತುಗಳನ್ನಾಡಿದ್ದಾರೆ.

ಆರ್ಥಿಕ ಹಿಂಜರಿತದ ಆತಂಕ ಇಡೀ ವಿಶ್ವವನ್ನೇ ಕಾಡುತ್ತಿರುವುದು ಸುಳ್ಳಲ್ಲ. ಚೀನಾ, ಲ್ಯಾಟಿನ್ ಅಮೇರಿಕ, ಯುರೋಪಿಯನ್ ದೇಶಗಳಲ್ಲಿ ಜನರ ಕೊಳ್ಳುವ ಶಕ್ತಿಯು ಕುಸಿಯುತ್ತಿರುವುದು, ಉದ್ಯಮ ದಿಗ್ಗಜಗಳು ಉತ್ಪಾದನೆ, ಮಾರಾಟ ನಿಲ್ಲಿಸುತ್ತಿರುವುದು ಗುಟ್ಟಿನ ಸಂಗತಿಯೇನೂ ಅಲ್ಲ. ಚೀನಾ-ಅಮೇರಿಕದ ದರಸಮರದ ಬಿಸಿ ಪ್ರಪಂಚದ ಉಳಿದ ದೇಶಗಳಿಗೂ ತಟ್ಟಿರುವುದನ್ನು ವಿತ್ತ ಕ್ಷೇತ್ರ ಗಂಭೀರವಾಗಿ ಪರಿಗಣಿಸಿದೆ. 

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ 2008ರಲ್ಲಿ ತಲೆದೋರಿದ ಪರಿಸ್ಥಿತಿ ಮತ್ತೆ ಉದ್ಭವಿಸಿರುವುದು ಜೂನ್ ತಿಂಗಳ ನಿರಾಶಾದಾಯಕ ಅಂಕಿಅಂಶಗಳಿಂದ ದೃಢಪಡುತ್ತದೆ. ಆರ್ಥಿಕ ಬಿಕ್ಕಟ್ಟು ಜಾಗತಿಕ ವಿದ್ಯಮಾನ ಆಗಿರುವುದರಿಂದಲೇ ಭಾರತವೂ ಅದರ ಬಗ್ಗೆ ತೀವ್ರವಾಗಿ ತಲೆಕೆಡಿಸಿಕೊಳ್ಳುವ ಅನಿವಾರ್ಯತೆ ಎದುರಾಗಿರುವುದು. ಏಕೆಂದರೆ ಈ ಜಗತ್ತಿನಲ್ಲಿ ಎಲ್ಲವೂ ಒಂದಕ್ಕೊಂದು ಸಂಬಂಧವುಳ್ಳವೇ. ಅಮೇರಿಕದಲ್ಲಿ ಬಿದ್ದ ನಾಣ್ಯ ಬೆಂಗಳೂರಿನಲ್ಲಿಯೂ ಸದ್ದು ಮಾಡಬಹುದು.

ಶೇ. 7ರ ಮಟ್ಟದಲ್ಲಿ ಸಾಗುತ್ತಿದ್ದ ಭಾರತದ ತ್ರೈಮಾಸಿಕ ಜಿಡಿಪಿ ಶೇ. 5.8ಕ್ಕೆ ಇಳಿದಿರುವುದು ಆತಂಕದ ಪ್ರಮುಖ ಕಾರಣಗಳಲ್ಲೊಂದು. ಡಾಲರ್ ಎದುರು ರೂಪಾಯಿಯ ಮೌಲ್ಯ 69.06ಕ್ಕೆ ಇಳಿದಿದೆ. ದೇಶದ ಒಟ್ಟಾರೆ ವಿತ್ತೀಯ ಕೊರತೆ ರೂ. 4.32 ಲಕ್ಷ ಕೋಟಿಗಳಿಗೆ ಏರಿದೆ. ಕೇಂದ್ರ ಬಜೆಟ್ ಮಂಡನೆಯ ಬಳಿಕ ಒಂದೇ ತಿಂಗಳಿನಲ್ಲಿ ವಿದೇಶಿ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ಸುಮಾರು ರೂ. 21,000 ಕೋಟಿಯಷ್ಟು ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದಾರೆ.

ಮೂಲಸೌಕರ್ಯದ ಪ್ರಮುಖ ರಂಗಗಳೆನಿಸಿರುವ ಕಲ್ಲಿದ್ದಲು, ರಸಗೊಬ್ಬರ, ನೈಸರ್ಗಿಕ ಅನಿಲ, ಕಚ್ಚಾತೈಲ, ಉಕ್ಕು, ಸಿಮೆಂಟ್, ವಿದ್ಯುತ್, ಸಂಸ್ಕರಣೆ ಮುಂತಾದವುಗಳ ಪ್ರಗತಿ ಕಳೆದ 50 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂಬ ವರದಿಗಳು ಪ್ರಕಟವಾಗಿರುವುದು ಜನಸಾಮಾನ್ಯರ ಆತಂಕಕ್ಕೂ ಕಾರಣವಾಗಿದೆ. ಮುಂಬೈ ಷೇರು ಮಾರುಕಟ್ಟೆ ಕಳೆದ ಐದು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಅಂಕಿಅಂಶಗಳಲ್ಲಿ ನಿಚ್ಚಳವಾಗುತ್ತದೆ.

ಅಟೋಮೊಬೈಲ್ ರಂಗ ಅತ್ಯಂತ ಹೆಚ್ಚು ಹೊಡೆತಕ್ಕೆ ಒಳಗಾಗಿರುವ ಕ್ಷೇತ್ರಗಳಲ್ಲಿ ಒಂದೆಂದು ವಿಶ್ಲೇಷಿಸಲಾಗುತ್ತಿದೆ. 2018ರ ಏಪ್ರಿಲ್-ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ 2019ರ ಈ ಅವಧಿಯ ಕಾರು ಮಾರಾಟ ಶೇ. 23.3ರಷ್ಟು ಕುಸಿದಿರುವುದು ಸ್ಪಷ್ಟವಾಗಿದೆ. ಅಟೋಮೊಬೈಲ್ ರಂಗ ಹೊಡೆತ ತಿಂದರೆ ಅದರ ಪರಿಣಾಮ ಇನ್ನೂ ಅನೇಕ ರಂಗಗಳ ಮೇಲೆ ಆಗುತ್ತದೆ. ಸ್ಟೀಲಿನಿಂದ ತೊಡಗಿ ಟಯರಿನವರೆಗೆ ವಿವಿಧ ಉದ್ದಿಮೆಗಳು ಋಣಾತ್ಮಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಇದರ ಪರಿಣಾಮವಾಗಿ ವಾಹನ ಸಾಲದ ಪ್ರಮಾಣವೂ ಶೇ. 5.1ರಷ್ಟು ಕುಸಿದಿದೆ. ಮಾರುತಿ ಸುಜುಕಿ ಕಂಪೆನಿಯು ಕಳೆದ ಐದು ತಿಂಗಳಿನಿಂದ ತನ್ನ ಉತ್ಪಾದನೆ ಪ್ರಮಾಣವನ್ನು ಸತತವಾಗಿ ಕಡಿಮೆ ಮಾಡುತ್ತಾ ಬಂದಿದೆ.

2008ರಲ್ಲಿ ದ್ವಿಚಕ್ರವಾಹನ ಮಾರಾಟ ಪ್ರಮಾಣವು ಶೇ. 14.8ರಷ್ಟು ಕುಸಿತ ಕಂಡಿತ್ತು. ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿದರೆ ಇದೇ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ಶೇ. 11.7ರಷ್ಟು ಕುಸಿತ ಕಂಡಿದೆ. 2008ರ ಬಳಿಕ ಇದೇ ಅತಿದೊಡ್ಡ ಕುಸಿತವಾಗಿದ್ದು, ನಾವು ಅಂದಿನ ಪರಿಸ್ಥಿತಿಯಿಂದ ಹೆಚ್ಚೇನೂ ದೂರದಲ್ಲಿ ಇಲ್ಲ ಎಂಬ ಅಂಶವನ್ನು ಅರ್ಥಮಾಡಿಕೊಳ್ಳಬೇಕು. 

ದೇಶದ ಬಹಭಾಗ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಗೆ ಸಿಲುಕಿದ್ದು ಈಗಷ್ಟೇ ಚೇತರಿಕೆ ಕಾಣುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿರಂಗವೂ ಅಂತಹ ಆಶಾದಾಯಕ ಸ್ಥಿತಿಯಲ್ಲಿ ಇಲ್ಲವೆಂಬುದು ಸಹಜ ವಿವೇಚನೆಯ ಸಂಗತಿ. ಕಳೆದ ತ್ರೈಮಾಸಿಕದಲ್ಲಿ ಟ್ರಾಕ್ಟರುಗಳ ಮಾರಾಟ ಪ್ರಮಾಣ ಶೇ. 14.1ರಷ್ಟು ಕುಸಿದಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಹೆಚ್ಚಿನದ್ದು ಎಂಬ ಅಂಶ ನಮ್ಮನ್ನು ಯೋಚನೆಗೀಡುಮಾಡುತ್ತದೆ.

ಇದ್ದಕ್ಕಿದ್ದಂತೆ ಮಾರುಕಟ್ಟೆಯಲ್ಲಿ ಪ್ಯಾಕೇಜ್ಡ್ ವಸ್ತುಗಳ ಬೇಡಿಕೆಯ ಪ್ರಮಾಣ ತಗ್ಗಿದೆ. ವೇಗವಾಗಿ ಮಾರಾಟವಾಗುವ ಗ್ರಾಹಕ ಸರಕು (ಎಫ್‍ಎಂಸಿಜಿ) ಕಂಪೆನಿಗಳ ಉತ್ಪನ್ನಗಳು ಕಳೆದೊಂದು ವರ್ಷದಿಂದ ನಿರಂತರವಾಗಿ ಕುಸಿತ ಕಾಣುತ್ತಿರುವುದನ್ನು ಮಾರುಕಟ್ಟೆ ಅಂಕಿಅಂಶಗಳು ವಿವರಿಸುತ್ತವೆ. ಹಿಂದೂಸ್ತಾನ್ ಯುನಿಲಿವರ್ ಕಂಪೆನಿಯ ಏಪ್ರಿಲ್-ಜೂನ್ ತ್ರೈಮಾಸಿಕದ ಪ್ರಗತಿ ಪ್ರಮಾಣ ಶೇ. 5ರಷ್ಟು ಇದೆ; ಇದು 2018ರ ಇದೇ ಅವಧಿಯಲ್ಲಿ ಶೇ. 12ರಷ್ಟು ಇತ್ತು ಎಂಬುದನ್ನು ಗಮನಿಸಬೇಕು. ಡಾಬರ್ ಇಂಡಿಯಾ ಕಂಪೆನಿಯ ಪ್ರಗತಿ ಕಳೆದ ವರ್ಷ ಶೇ. 21 ಇದ್ದರೆ ಈ ವರ್ಷ ಶೇ. 6ಕ್ಕೆ ಇಳಿದಿದೆ. ಹಾಗೆಯೇ, ಬ್ರಿಟಾನಿಯಾ ಪ್ರಗತಿ ಪ್ರಮಾಣ ಶೇ. 13ರಿಂದ ಶೇ. 6ಕ್ಕೆ ಕುಸಿದಿದೆ.

ತೈಲ, ಚಿನ್ನ, ಬೆಳ್ಳಿ ಹೊರತಾದ ಉತ್ಪನ್ನಗಳ ಆಮದು ಕಳೆದ ಮೂರು ವರ್ಷಗಳಲ್ಲೇ ಅತಿಹೆಚ್ಚು ಕುಸಿತವನ್ನು ಕಂಡಿದೆ. ಕಳೆದ ವರ್ಷ ಶೇ. 6.3 ಇದ್ದದ್ದು ಈ ವರ್ಷ ಶೇ. 5.3ಕ್ಕೆ ಕುಸಿದಿದೆ. ಏರ್‍ಟೆಲ್‍ನಂತಹ ಉದ್ಯಮ ದಿಗ್ಗಜ ಕಳೆದ ತ್ರೈಮಾಸಿಕ ಒಂದರಲ್ಲೇ ರೂ. 2866 ಕೋಟಿ ನಷ್ಟ ಅನುಭವಿಸಿದೆ.

ಆರ್ಥಿಕ ಪರಿಸ್ಥಿತಿ ವಿಷಮಗೊಳ್ಳುತ್ತಿರುವ ಭೀತಿ ರಿಯಲ್ ಎಸ್ಟೇಟನ್ನೂ ಬಿಟ್ಟಿಲ್ಲ. 2019 ಮಾರ್ಚ್ ತಿಂಗಳ ಅಂಕಿಅಂಶದಂತೆ, ದೇಶದ ಟಾಪ್-30 ನಗರಗಳಲ್ಲಿ ಸುಮಾರು 1.28 ಮಿಲಿಯನ್‍ನಷ್ಟು ಮನೆಗಳು ನಿರ್ಮಾಣಗೊಂಡು ಇನ್ನೂ ಮಾರಾಟವಾಗದೇ ಉಳಿದುಕೊಂಡಿವೆ. ವಾಹನದಂತೆ ರಿಯಲ್ ಎಸ್ಟೇಟ್ ಉದ್ಯಮವೂ ಇನ್ನೂ ಅನೇಕ ಉದ್ಯಮಗಳೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿರುವ ಕ್ಷೇತ್ರ. ರಿಯಲ್ ಎಸ್ಟೇಟ್ ಕುಸಿದರೆ ಅದರ ಸಹವರ್ತಿಗಳಾದ ಸ್ಟೀಲ್, ಸಿಮೆಂಟ್, ಪೀಠೋಪಕರಣ, ಪೈಂಟ್ ಮೊದಲಾದ ರಂಗಗಳೂ ಋಣಾತ್ಮಕ ಪರಿಣಾಮ ಎದುರಿಸುತ್ತವೆ ಎಂದು ಪ್ರತ್ಯೇಕ ಹೇಳಬೇಕಿಲ್ಲ.

ಯಾವುದೇ ಮಹತ್ತರ ಬದಲಾವಣೆಯೊಂದಕ್ಕೂ ಮುನ್ನ ಸಣ್ಣದೊಂದು ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಎಂಬ ಆರ್ಥಿಕ ರಂಗದ ನಾಣ್ಣುಡಿಯಷ್ಟೇ ಸದ್ಯಕ್ಕೆ ಕೊಂಚ ಭರವಸೆಯನ್ನು ತುಂಬುವ ಮಾತು. ಉತ್ತಮ ಭವಿಷ್ಯಕ್ಕಾಗಿ ಜನತೆ ಸಣ್ಣಮಟ್ಟಿನ ಅನನುಕೂಲತೆಯನ್ನು ಸಹಿಸಿಕೊಳ್ಳಲು ಸಿದ್ಧವಾಗಬೇಕು ಎಂದು ಹಣಕಾಸು ಸಚಿವರು ಬಜೆಟ್ ಮಂಡನೆಯ ವೇಳೆ ಹೇಳಿದ್ದನ್ನು ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಿಕೊಂಡರೆ ಭವಿಷ್ಯ ತೀರಾ ಕರಾಳವಾಗಿರಲಾರದು ಎಂಬ ಸಮಾಧಾನ ಜೊತೆಯಾಗುತ್ತದೆ.

ಕೆಲವು ಹೆಜ್ಜೆಗಳು ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣಬಹುದು, ಆದರೆ ಅವುಗಳಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಪ್ರಾಯೋಗಿಕ ಉಪಕ್ರಮಗಳಿಂದ ಮಾತ್ರ ಜನಸಾಮಾನ್ಯರ ಪರಿಸ್ಥಿತಿಯು ಸುಧಾರಿಸುತ್ತದೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬ ಆರ್ಥಿಕ ಪರಿಣತರ ಮಾತು ಸದ್ಯದ ಮಾರ್ಗದರ್ಶಕ ಸೂತ್ರವಾಗಬೇಕು. ಈ ನಿಟ್ಟಿನಲ್ಲಿ, ಕುಸಿದುಹೋಗುತ್ತಿರುವ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಮೇಲೆತ್ತುವುದು, ಖಾಸಗಿ ಹೂಡಿಕೆದಾರರಲ್ಲಿ ವಿಶ್ವಾಸ ತುಂಬುವುದು, ಹೂಡಿಕೆ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳುವುದು, ಮತ್ತು ಆ ಮೂಲಕ ಹೊಸ ಉದ್ಯೋಗ ಸೃಷ್ಟಿ ಆಗುವಂತೆ ನೋಡಿಕೊಳ್ಳುವುದು ಸರ್ಕಾರದ ಕಡೆಯಿಂದ ತುರ್ತಾಗಿ ಆಗಬೇಕಿರುವ ಕೆಲಸ.
- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಆಗಸ್ಟ್ 25, 2019

ಸ್ವಾತಂತ್ರ್ಯ ಹರಣ, ಡೇಟಾ ಕಾರಣ!

25 ಆಗಸ್ಟ್ 2019ರ ಪ್ರಜಾವಾಣಿ ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಲೇಖನ
ಮೂಲ ಲೇಖನವನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

ಗೋ ಡಿಜಿಟಲ್! ಹಾಗೆಂದು ಬಲು ಸುಲಭವಾಗಿ ಹೇಳಿಬಿಡುತ್ತೇವೆ. ಜಗತ್ತಿನ ಸಮಸ್ತ ಸಮಸ್ಯೆಗಳಿಗೂ ಡಿಜಿಟಲೀಕರಣವೇ ಏಕೈಕ ಪರಿಹಾರ ಎಂಬರ್ಥದಲ್ಲಿ ಮಾತಾಡುತ್ತೇವೆ. ಕಚೇರಿ ಕೆಲಸಗಳಿಂದ ತೊಡಗಿ ಹಣಕಾಸು ವ್ಯವಹಾರದವರೆಗೆ ದಿನದ ಪ್ರತಿಯೊಂದು ಕೆಲಸವೂ ಆನ್‍ಲೈನ್ ಆಗಿಬಿಟ್ಟಿದೆ. ದಿನಸಿಯಿಂದ ತೊಡಗಿ ಔಷಧಿಯವರೆಗೆ, ಬ್ಯಾಗಿನಿಂದ ತೊಡಗಿ ಪುಸ್ತಕಗಳವರೆಗೆ ಎಲ್ಲವೂ ಆ್ಯಪ್‍ಗಳೆಂಬ ಉಗ್ರಾಣಗಳಲ್ಲಿ ಭದ್ರವಾಗಿವೆ. ಎಲ್ಲ ಸರಿ, ನಮ್ಮ ಬದುಕು ಭದ್ರವಾಗಿದೆಯೇ?
ಆನ್‍ಲೈನ್ ವ್ಯವಹಾರಗಳಿಂದ ಮನುಷ್ಯನ ಬದುಕು ಸರಳವಾಯಿತೆಂದೂ, ಸಾಮಾಜಿಕ ಮಾಧ್ಯಮಗಳಿಂದ ಪ್ರಜಾಪ್ರಭುತ್ವಕ್ಕೊಂದು ಪರ್ಯಾಯ ಸೃಷ್ಟಿಯಾಯಿತೆಂದೂ ಹೆಮ್ಮೆಪಟ್ಟವರು ಬಹಳ. ಆದರೆ ಈ ಹೆಮ್ಮೆ ಹೆಚ್ಚುಕಾಲ ಉಳಿಯುವ ಲಕ್ಷಣ ಕಾಣಿಸುತ್ತಿಲ್ಲ. ಏಕೆಂದರೆ ‘ಬದುಕು ಭದ್ರವಾಗಿದೆಯೇ?’ ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಂಡವರು ನಿರಾತಂಕವಾಗಿ ಉಳಿಯವುದು ಕಷ್ಟ.

ಪ್ರಜಾವಾಣಿ, 25 ಆಗಸ್ಟ್ 2019 | ಸಿಬಂತಿ ಪದ್ಮನಾಭ
ಎಲ್ಲವೂ ಬೆರಳ ತುದಿಯಲ್ಲೇ ಲಭ್ಯವಿರುವ ವರ್ಚುವಲ್ ಜಗತ್ತಿನಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಎಂಬಿತ್ಯಾದಿ ಪದಗಳಿಗೆ ವಾಸ್ತವವಾಗಿ ತಮ್ಮದೇ ಅಸ್ತಿತ್ವ ಇದೆಯೇ ಎಂದು ಯೋಚಿಸುವ ಕಾಲ ಬಂದಿದೆ. ರಾಜಕೀಯ ಪರಿಭಾಷೆಯಲ್ಲಿ ನಾವು ಸ್ವತಂತ್ರರೂ ಹೌದು, ಪ್ರಜಾಪ್ರಭುತ್ವದ ಫಲಾನುಭವಿಗಳೂ ಹೌದು. ಆದರೆ ನಿಜಕ್ಕೂ ವಸ್ತುಸ್ಥಿತಿ ಹಾಗಿದೆಯೇ ಎಂದು ಕೇಳಿದರೆ ಈ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಗಳೆಲ್ಲ ನಮ್ಮ ದೇಶದೊಳಗೆಯೇ ಇವೆಯೇ ಎಂದು ಖಚಿತಪಡಿಸಿಕೊಳ್ಳಬೇಕಾಗುತ್ತದೆ.
ಹೌದು, ವಾಸ್ತವ ಬೇರೆಯೇ ಇದೆ. ನಮ್ಮ ಒಬ್ಬೊಬ್ಬರ ಸ್ವಾತಂತ್ರ್ಯವೂ ಅಮೇರಿಕಾದಲ್ಲಿಯೋ ಚೀನಾದಲ್ಲಿಯೋ ಮೋಡಗಳ ನಡುವೆ ಓಡಾಡುತ್ತಿದೆ. ನಾವೆಲ್ಲ ದೇಶದೇಶಗಳ ನಡುವಿನ ಗೋಡೆಗಳನ್ನೆಲ್ಲ ನೆಲಸಮ ಮಾಡಿ ವಿಶ್ವವನ್ನು ಅಂಗೈಯಗಲಕ್ಕೆ ಇಳಿಸಿರುವ ಸೈಬರ್ ಸ್ಪೇಸ್ ನ ಅಡಿಯಾಳುಗಳಾಗಿ ದಶಕಗಳೇ ಕಳೆದುಹೋಗಿವೆ. ಹಾಗೆಂದು ಅರ್ಥವಾಗಿರುವುದು ಕೊಂಚ ತಡವಾಗಿದೆ ಅಷ್ಟೇ.

ಇಂಟರ್ನೆಟ್‍ನ ಬಳಕೆ ಹೆಚ್ಚಾದಂತೆ ವಾಸ್ತವವಾಗಿ ನಮ್ಮ ಸ್ವಾತಂತ್ರ್ಯದ ಪ್ರಮಾಣ ಇಳಿಕೆಯಾಗುತ್ತಾ ಹೋಗಿದೆ. ದಿನವಿಡೀ ವಾಟ್ಸಾಪ್, ಫೇಸ್‍ಬುಕ್ ಬಳಸುತ್ತೇವೆ. ಸಾಧ್ಯವಾದಷ್ಟೂ ನಮ್ಮ ಪ್ರೊಫೈಲ್ ಅಪ್ಡೇಟ್ ಆಗಿರಬೇಕೆಂದು ಬಯಸುತ್ತೇವೆ. ದಿನಕ್ಕೆ ಐದು ಬಾರಿ ಸ್ಟೇಟಸ್ ಸರಿಪಡಿಸಿಕೊಳ್ಳುತ್ತೇವೆ. ಮನೆಯಲ್ಲೇ ಇರುವ ಹೆಂಡತಿಗೆ, ಕಣ್ಣೆದುರೇ ಇರುವ ಮಕ್ಕಳಿಗೆ ಫೇಸ್ಬುಕ್ಕಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುತ್ತೇವೆ. ಎದ್ದದ್ದು, ಬಿದ್ದದ್ದು, ನಡೆದದ್ದು, ನಿದ್ದೆ ಮಾಡಿದ್ದು, ತಿಂದದ್ದು, ಕುಡಿದದ್ದು, ಪ್ರವಾಸ ಹೋಗಿದ್ದು, ಪಾರ್ಕಿನಲ್ಲಿ ಕೂತದ್ದು, ಶಾಪಿಂಗ್ ಮಾಡಿದ್ದು, ಕಾಯಿಲೆ ಬಿದ್ದದ್ದು, ಹಬ್ಬ ಆಚರಿಸಿದ್ದು... ಒಂದೊಂದು ಸುದ್ದಿಯನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವವರೆಗೆ ನಮಗೆ ಸಮಾಧಾನವೇ ಇಲ್ಲ. ಎಳ್ಳಷ್ಟು ಮಾಹಿತಿ ಬೇಕಾದರೂ ಗೂಗಲ್‍ನ ಮೊರೆ ಹೋಗುತ್ತೇವೆ. ಹೊಸದೊಂದು ಆ್ಯಪ್ ಬಂದಾಗ ಲಾಟರಿ ಹೊಡೆಸಿಕೊಂಡವರಂತೆ ಹಿಗ್ಗುತ್ತೇವೆ. ಅದು ಕೇಳಿದ ಮಾಹಿತಿಯನ್ನೆಲ್ಲ ಹಿಂದೆಮುಂದೆ ನೋಡದೆ ತುಂಬುತ್ತಾ ಹೋಗುತ್ತೇವೆ. ಹಿಂದಿನ ಜನ್ಮದಲ್ಲಿ ಹೇಗಿದ್ದೆವು ಎಂದು ತಿಳಿಯುವ ಕುತೂಹಲಿಗಳಾಗುತ್ತೇವೆ. ನಮ್ಮ ವೃದ್ಧಾಪ್ಯ ಹೇಗಿರುತ್ತದೆ ಎಂದು ಈಗಲೇ ತಿಳಿದುಕೊಳ್ಳಲು ಹಾತೊರೆಯುತ್ತೇವೆ. ಇಷ್ಟಾಗುವ ಹೊತ್ತಿಗೆ ನಮ್ಮ ಅಷ್ಟೂ ಜಾತಕವನ್ನು ಇಡಿಯಿಡಿಯಾಗಿ ಅಮೇರಿಕಕ್ಕೋ ಜಪಾನಿಗೋ ಚೀನಾಕ್ಕೋ ಬೇಷರತ್ತಾಗಿ ಒಪ್ಪಿಸಿದ್ದೇವೆ ಎಂಬುದು ಅರ್ಥವೇ ಆಗುವುದಿಲ್ಲ.

ಮೈಕ್ರೋಸಾಫ್ಟ್, ಗೂಗಲ್, ಐಬಿಎಂ, ಫೇಸ್‍ಬುಕ್, ಟ್ವಿಟರ್, ಸ್ನಾಪ್‍ಚಾಟ್, ಅಲಿಬಾಬಾ ಮುಂತಾದ ಆನ್‍ಲೈನ್ ದಿಗ್ಗಜಗಳು ದಿನ, ಗಂಟೆ, ನಿಮಿಷ, ಕ್ಷಣಗಳ ಲೆಕ್ಕದಲ್ಲಿ ನಮ್ಮ ವೈಯುಕ್ತಿಕ ಮಾಹಿತಿಗಳನ್ನು ಕಲೆಹಾಕುತ್ತಿವೆ. ನಾವು ಬಳಕೆ ಮಾಡುವ ಒಂದೊಂದು ಆ್ಯಪ್‍ಗಳೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಮಾಹಿತಿಯನ್ನು ಸಂಗ್ರಹಿಸುತ್ತಾ ಇರುತ್ತವೆ. ನಾವು ಏನನ್ನು ತಿನ್ನುತ್ತೇವೆ, ಏನನ್ನು ಕುಡಿಯುತ್ತೇವೆ, ಏನನ್ನು ಓದುತ್ತೇವೆ, ಏನನ್ನು ಮಾಡುತ್ತೇವೆ, ಏನನ್ನು ಕೊಳ್ಳುತ್ತೇವೆ- ಒಟ್ಟಿನಲ್ಲಿ ನಮ್ಮ ಇಷ್ಟಾನಿಷ್ಟಗಳೇನು, ವರ್ತನೆಗಳೇನು ಎಂಬುದನ್ನು ನಮ್ಮ ಮನೆಮಂದಿಗಿಂತಲೂ ಚೆನ್ನಾಗಿ ಗಮನಿಸುವವರು ಈ ಸೈಬರ್‍ಸ್ಪೇಸೆಂಬ ಮಾಯಾಲೋಕದಲ್ಲಿ ಕುಳಿತಿರುವ ಇಂಟರ್ನೆಟ್ಟಿನ ಇಂದ್ರಜಾಲಿಗರು. ಅಮೆಜಾನ್, ಗೂಗಲ್, ಉಬೆರ್, ಆಪಲ್‍ನಂತಹ ಇ-ಕಾಮರ್ಸ್ ದೈತ್ಯರು ವ್ಯವಹಾರ ನಡೆಸುತ್ತಿರುವುದೇ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಎಂಬ ಮ್ಯಾಜಿಕ್‍ನ ಆಧಾರದಲ್ಲಿ.

ವಸಾಹತುಶಾಹಿಯ ಕಾಲ ತೀರಾ ಹಳೆಯದಾಯಿತು; ನಾವೀಗ ಡೇಟಾ ಕಾಲನಿಗಳೆಂಬ ನವ್ಯೋತ್ತರ ವಸಾಹತುಶಾಹಿಯ ಕಾಲದಲ್ಲಿ ಬಂದು ನಿಂತಿದ್ದೇವೆ. ಪೋರ್ಚುಗೀಸರು, ಫ್ರೆಂಚರು, ಡಚ್ಚರು, ಬ್ರಿಟಿಷರು- ಹೀಗೆ ಒಬ್ಬೊಬ್ಬರಾಗಿ ಭಾರತಕ್ಕೆ ಬಂದದ್ದು ಆರಂಭದಲ್ಲಿ ವ್ಯಾಪಾರಕ್ಕಾಗಿಯೇ. ನಿಧಾನವಾಗಿ ಅಧಿಕಾರ ಚಲಾಯಿಸಲು ಆರಂಭಿಸಿ ಆಮೇಲೆ ನಮ್ಮನ್ನೇ ಆಳಿದರು. ಈ ಸೈಬರ್ ಯುಗದ ಚಕ್ರವರ್ತಿಗಳು ದೇಶದಿಂದ ದೇಶಕ್ಕೆ ದಂಡಯಾತ್ರೆ ನಡೆಸುತ್ತಿರುವುದು ವ್ಯಾಪಾರದ ಸೋಗಿನಲ್ಲಿಯೇ. ಅದಕ್ಕಾಗಿಯೇ ಈ ಡೇಟಾ ವ್ಯಾಪಾರ ಮುಂದೆ ಯಾವ ಹಂತಕ್ಕೆ ಹೋಗಿ ನಿಂತೀತು ಎಂಬ ಊಹೆ ಆತಂಕಕ್ಕೆ ಕಾರಣವಾಗುವುದು. ನಾವು ನಮ್ಮ ಭೌತಿಕ ಅಸ್ಮಿತೆ, ನಮ್ಮ ರಾಜ್ಯ-ದೇಶಗಳ ಗಡಿಗಳ ಬಗ್ಗೆ ತಲೆಕೆಡಿಸಿಕೊಂಡಿದ್ದೇವೆಯೇ ಹೊರತು ನಮ್ಮ ಪ್ರತಿಕ್ಷಣದ ಅಸ್ಮಿತೆ, ಮಾಹಿತಿ, ಖಾಸಗಿತನಗಳೆಲ್ಲ ಏನಾಗುತ್ತಿವೆ ಎಂದು ಯೋಚಿಸಿಯೇ ಇಲ್ಲ.

“ಕಳೆದ ಶತಮಾನದಲ್ಲಿ ತೈಲ ಏನಾಗಿತ್ತೋ, ಈ ಶತಮಾನದಲ್ಲಿ ಅದು ದತ್ತಾಂಶ (ಡೇಟಾ) ಆಗಿದೆ- ಅಂದರೆ ಅಭಿವೃದ್ಧಿ ಮತ್ತು ಬದಲಾವಣೆಯ ಚಾಲಕಶಕ್ತಿ. ದತ್ತಾಂಶದ ಪ್ರವಹಿಸುವಿಕೆಯ ಹೊಸ ಮೂಲಸೌಕರ್ಯ, ಹೊಸ ವ್ಯವಹಾರ, ಹೊಸ ಏಕಸ್ವಾಮ್ಯತೆ, ಹೊಸ ರಾಜಕೀಯ ಮತ್ತು- ಅತ್ಯಂತ ಪ್ರಮುಖವಾಗಿ- ಹೊಸ ಅರ್ಥಶಾಸ್ತ್ರವನ್ನು ಸೃಷ್ಟಿಸಿದೆ” ಹೀಗೆಂದು ಕಳೆದ ವರ್ಷ ಲಂಡನ್‍ನ ‘ದಿ ಇಕನಾಮಿಸ್ಟ್’ ಪತ್ರಿಕೆ ಬರೆದಾಗ ಭಾರತದಂತಹ ದೇಶಗಳು ಮೊದಲ ಬಾರಿಗೆ ಸಣ್ಣಗೆ ಬೆಚ್ಚಿ ಎದ್ದು ಕುಳಿತವು.

ಆಧಾರ್ ಯೋಜನೆಯ ಹಿಂದಿದ್ದ ನಂದನ್ ನೀಲೇಕಣಿಯವರೇ ವಿಸ್ತಾರಗೊಳ್ಳುತ್ತಿರುವ ಡೇಟಾ ಕಾಲನಿಗಳ ಬಗ್ಗೆ ಮಾತಾಡಿದವರಲ್ಲಿ ಮೊದಲಿಗರು. ನಾವು ವಿದೇಶಗಳಿಂದ ಕಪ್ಪುಹಣ ವಾಪಸ್ ತರಬೇಕಿರುವುದೇನೋ ಒಳ್ಳೆಯದೇ, ಆದರೆ ಅದಕ್ಕಿಂತಲೂ ಮೊದಲು ವಾಪಸ್ ತರಬೇಕಿರುವುದು ವಿದೇಶೀ ವಸಾಹತುಗಳಲ್ಲಿ ಸಂಗ್ರಹವಾಗಿರುವ ನಮ್ಮ ದತ್ತಾಂಶಗಳೆಂದು ಎಚ್ಚರಿಸಿದ್ದು ಅವರೇ. ಆಮೇಲೆ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಕೂಡ ಈ ಬಗ್ಗೆ ಮಾತಾಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. “ದತ್ತಾಂಶವೀಗ ಹೊಸ ತೈಲ. ಅದು ಭಾರತದ ಹೊಸ ಸಂಪತ್ತು. ಭಾರತದ ದತ್ತಾಂಶವು ಭಾರತೀಯರಿಂದಲೇ ನಿಯಂತ್ರಿಸಲ್ಪಡಬೇಕೇ ಹೊರತು ವಿದೇಶೀ ಕಾರ್ಪೋರೇಟ್ ಸಂಸ್ಥೆಗಳಿಂದಲ್ಲ. ಪ್ರಧಾನಿಗಳೇ ಈ ನಿಟ್ಟಿನಲ್ಲಿ ನಾವು ಎಚ್ಚೆತ್ತುಕೊಳ್ಳದೇ ಉಳಿಗಾಲವಿಲ್ಲ” ಎಂದು ಅವರು ಈ ವರ್ಷದ ಆರಂಭದಲ್ಲಿ ನಡೆದ ವೈಬ್ರಂಟ್ ಗುಜರಾತ್ ಶೃಂಗಸಭೆಯಲ್ಲಿ ಎಚ್ಚರಿಸಿದ್ದು ನಮ್ಮ ನೀತಿನಿರೂಪಕರಲ್ಲೂ ಹೊಸ ಸಂಚಲನೆ ಮೂಡಿಸಿತು.

“ದತ್ತಾಂಶ ಸ್ವಾತಂತ್ರ್ಯವು 1947ರ ಸ್ವಾತಂತ್ರ್ಯದಷ್ಟೇ ಅತ್ಯಮೂಲ್ಯವಾದ್ದು... ಗಾಂಧೀಜಿಯವರು ರಾಜಕೀಯ ವಸಾಹತೀಕರಣದ ವಿರುದ್ಧದ ಚಳುವಳಿಯನ್ನು ರೂಪಿಸಿದರು.  ನಾವಿಂದು ದತ್ತಾಂಶ ವಸಾಹತೀಕರಣದ ವಿರುದ್ಧ ಹೊಸದೊಂದು ಚಳುವಳಿಯನ್ನು ಹೂಡಬೇಕಾಗಿದೆ” ಎಂಬ ಅವರ ಕರೆಗಂಟೆ ಅತ್ಯಂತ ಗಂಭೀರವಾದದ್ದು ಎಂಬುದನ್ನು ತಡವಾಗಿಯಾದರೂ ಒಪ್ಪಿಕೊಳ್ಳಲೇಬೇಕಿದೆ.

ಅಮೇರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್‍ಎಸ್‍ಎ) ತನ್ನ ದೇಶದ ಹಾಗೂ ಉಳಿದ ದೇಶಗಳ ಪ್ರಜೆಗಳ ಚಲನವಲನದ ಮೇಲೆ ಕಣ್ಗಾವಲು ಇಟ್ಟಿತ್ತೆಂಬ ಸ್ಫೋಟಕ ಸುದ್ದಿಯನ್ನು ಅಮೇರಿಕದ ವಾಷಿಂಗ್ಟನ್ ಪೋಸ್ಟ್ ಹಾಗೂ ಇಂಗ್ಲೆಂಡಿನ ದಿ ಗಾರ್ಡಿಯನ್ ಪತ್ರಿಕೆಗಳು ಪ್ರಕಟಿಸಿದ ಬಳಿಕ ಇಡೀ ಜಗತ್ತೇ ಅಂತಾರಾಷ್ಟ್ರೀಯ ದತ್ತಾಂಶ ಕಳವು ಹಾಗೂ ಅದರ ವಾಣಿಜ್ಯಿಕ ಬಳಕೆಯ ಕುರಿತು ಆತಂಕದಿಂದ ಯೋಚಿಸುವಂತೆ ಆಗಿದೆ. ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಉದ್ಯಮದ ಹೆಸರಿನಲ್ಲಿ ಪಾಶ್ಚಿಮಾತ್ಯ ದೇಶಗಳ ಏಜೆಂಟ್‍ಗಳಾಗಿ ವಿವಿಧ ದೇಶಗಳಲ್ಲಿ ತೆರೆಮರೆಯ ಕೆಲಸ ಮಾಡುತ್ತಿವೆ ಎಂಬ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ.

ಸ್ವತಃ ಭಾರತಕ್ಕೇ ಈ ವಿಷಯ ಅರ್ಥವಾಗಿದ್ದರೂ ತಕ್ಷಣಕ್ಕೆ ಏನನ್ನಾದರೂ ಮಾಡುವ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ ಈಗ ಅಮೇರಿಕದಂತಹ ದೇಶಗಳಲ್ಲಿ ಸಂಗ್ರಹಗೊಳ್ಳುತ್ತಿರುವ ನಮ್ಮ ದೇಶದ ದತ್ತಾಂಶಗಳನ್ನು ನಮ್ಮಲ್ಲೇ ಸಂಗ್ರಹಿಸಲು ಸಾಧ್ಯವಾಗುವ ಪರ್ಯಾಯ ಮೂಲಸೌಕರ್ಯ ಇನ್ನೂ ನಮ್ಮಲ್ಲಿ ಬೆಳೆದಿಲ್ಲ. ಭಾರತವು ದೊಡ್ಡ ಸಾಫ್ಟ್‍ವೇರ್ ಕಂಪೆನಿಗಳನ್ನು ಹೊಂದಿದ್ದರೂ ಅವು ಕೆಲಸ ಮಾಡುತ್ತಿರುವುದು ಪಾಶ್ಚಿಮಾತ್ಯ ದೇಶಗಳ ಉದ್ದಿಮೆಗಳಿಗಾಗಿ. ಹೀಗಾಗಿ ಮಿಲಿಟರಿಯೂ ಸೇರಿದಂತೆ ಭಾರತದ ಡಿಜಿಟಲ್ ಮೂಲಸೌಕರ್ಯ ಅಸ್ವಿತ್ವದಲ್ಲಿರುವುದು ವಿದೇಶಗಳಲ್ಲಿ ನೆಲೆಕಂಡಿರುವ ಬೃಹತ್ ಸರ್ವರ್‍ಗಳಲ್ಲಿ. ಇದು ನಮ್ಮದೇ ಚಿನ್ನಾಭರಣಗಳನ್ನು ನೆರೆಮನೆಯವರ ಲಾಕರ್‍ಗಳಲ್ಲಿ ಇರಿಸಿ ಅವು ಭದ್ರವಾಗಿವೆ ಎಂದು ಭ್ರಮೆಗೊಳಗಾಗುವುದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

ಈ ವಿಷಯದಲ್ಲಿ ಭಾರತ ತಡವಾಗಿಯಾದರೂ ಎಚ್ಚೆತ್ತುಕೊಂಡಿದ್ದರೂ ಅನುಷ್ಠಾನದ ವಿಷಯದಲ್ಲಿ ಮತ್ತೆ ನಿಧಾನವಾಗಿಯೇ ಹೆಜ್ಜೆಯಿಡುತ್ತಿದೆ. ಜಸ್ಟೀಸ್ ಬಿ. ಎನ್ ಶ್ರೀಕೃಷ್ಣ ಸಮಿತಿಯು ದತ್ತಾಂಶ ಸಂರಕ್ಷಣೆ ಮಸೂದೆಯನ್ನು 2018ರ ಜುಲೈ ತಿಂಗಳಲ್ಲೇ ಕೇಂದ್ರ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಸಲ್ಲಿಸಿದ್ದರೂ ಅದಕ್ಕಿನ್ನೂ ಶಾಸನವಾಗುವ ಭಾಗ್ಯ ದೊರಕಿಲ್ಲ. ಶ್ರೀಕೃಷ್ಣ ಸಮಿತಿಯು ಜನತೆಯ ಸ್ಥಳೀಯ ಮಾಹಿತಿಯನ್ನು ದೇಶದೊಳಗೇ ಸಂಗ್ರಹಿಸುವುದನ್ನು ಕಡ್ಡಾಯ ಮಾಡಿ ಶಿಫಾರಸು ಮಾಡಿರುವುದು ಗಮನಾರ್ಹ. ಸರ್ವರ್‍ಗಳು ಭಾರತದ ಹೊರಗಿದ್ದರೂ ಮೂಲ ಮಾಹಿತಿಯನ್ನು ಭಾರತದ ಭೌಗೋಳಿಕ ಗಡಿಯ ಒಳಗಿನ ಸರ್ವರ್‍ಗಳಲ್ಲೇ ಸಂಗ್ರಹಿಸಿ ಅವುಗಳ ಪ್ರತಿಯನ್ನಷ್ಟೇ ವಿದೇಶಗಳಲ್ಲಿ ಉಳಿಸಬಹುದು ಎಂದು ಸಮಿತಿ ಹೇಳಿದೆ. ಕೇಂದ್ರ ವಾಣಿಜ್ಯ ಮತ್ತು ಉದ್ಯಮದ ಸಚಿವಾಲಯದ ಕೈಗಾರಿಕಾ ನೀತಿ ಉತ್ತೇಜನ ಇಲಾಖೆಯು ಇ-ಕಾಮರ್ಸ್ ಜಾಲತಾಣಗಳು ಹಾಗೂ ಆನ್‍ಲೈನ್ ಮಾರುಕಟ್ಟೆಗಳು ಗ್ರಾಹಕರ ದತ್ತಾಂಶಗಳನ್ನು ಸಂಗ್ರಹಿಸುವ ಕುರಿತಾದ ಹೊಸ ನೀತಿಗಳನ್ನು ಕಳೆದ ವರ್ಷಾಂತ್ಯಕ್ಕೆ ಘೋಷಿಸಿದೆ.

ಈ ನಿಟ್ಟಿನಲ್ಲಿ ವಿಯೆಟ್ನಾಂ ನಮಗಿಂತಲೂ ಹೆಚ್ಚು ಎಚ್ಚೆತ್ತುಕೊಂಡಿದೆ ಎಂಬುದನ್ನು ಗಮನಿಸಬೇಕು. ಜಗತ್ತಿನಾದ್ಯಂತ ತಲಾ 200 ಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ಬುಕ್ ಮತ್ತು ಗೂಗಲ್ – ಜಗತ್ತಿನ ಎರಡು ಅತಿದೊಡ್ಡ ವೈಯುಕ್ತಿಕ ಮಾಹಿತಿ ಸಂಗ್ರಾಹಕ ಕಂಪೆನಿಗಳು- ವಿಯೆಟ್ನಾಂ ನಾಗರಿಕರ ವೈಯುಕ್ತಿಕ ಮಾಹಿತಿಗಳೇನಿದ್ದರೂ ವಿಯೆಟ್ನಾಂ ಗಡಿಯೊಳಗೆಯೇ ದಾಸ್ತಾನು ಮಾಡತಕ್ಕದ್ದು ಎಂಬ ಕಟ್ಟುನಿಟ್ಟಿನ ಕಾನೂನನ್ನು ವಿಯೆಟ್ನಾ ಸರ್ಕಾರ ಈಗಾಗಲೇ ಅನುಷ್ಠಾನಗೊಳಿಸಿದೆ. ನಾವು ಈ ದಿಕ್ಕಿನಲ್ಲಿ ಕ್ಷಿಪ್ರ ಹೆಜ್ಜೆಯನ್ನಿರಿಸದೇ ಹೋದರೆ ನಮ್ಮ ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳೆರಡೂ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕ್ಕೆ ಒಳಗಾಗುವ ಎಲ್ಲ ಸಾಧ್ಯತೆಗಳೂ ಇವೆ ಎಂಬುದನ್ನು ದೇಶದ ಚುಕ್ಕಾಣಿ ಹಿಡಿದವರು ಅರ್ಥಮಾಡಿಕೊಳ್ಳಬೇಕಿದೆ. ಏಕೆಂದರೆ ಭೌತಿಕ ದಾಸ್ಯಕ್ಕಿಂತ ಮಾನಸಿಕ ದಾಸ್ಯ ಹೆಚ್ಚು ಘೋರವಾದದ್ದು.
- ಸಿಬಂತಿ ಪದ್ಮನಾಭ ಕೆ. ವಿ.

ಗುರುವಾರ, ಆಗಸ್ಟ್ 15, 2019

ಸಿಗ್ನಲಿನಲ್ಲಿ ಸ್ವಾತಂತ್ರ್ಯದ ಬಾವುಟ ಹಾರಿಸುವ ಮಕ್ಕಳು ನಾಪತ್ತೆಯಾಗಿದ್ದಾರೆ!

15 ಆಗಸ್ಟ್ 2019ರ 'ಕನ್ನಡಪ್ರಭ'ದಲ್ಲಿ ಪ್ರಕಟವಾದ ಬರೆಹ

ತರಹೇವಾರಿ ಧ್ವಜಗಳನ್ನು ಹಿಡಿದ ಐದರ ಬಾಲೆ ಸಿಗ್ನಲ್‌ನಲ್ಲಿ ಎದುರಾಗುತ್ತಾಳೆ. ’ಬೆಳಗ್ಗಿನಿಂದ ಏನೂ ತಿಂದಿಲ್ಲ ಅಣ್ಣಾ, ನೀನೊಂದು ಫ್ಲಾಗ್ ತಗೊಂಡ್ರೆ ನಂಗೆ ಒಂದು ರುಪಾಯಿ ಸಿಗುತ್ತೆ’ ಅಂತ ಗೋಗರೆಯುತ್ತಾಳೆ. ಸ್ವಾತಂತ್ರ್ಯದ ಹೆಗ್ಗುರುತಿನಂತಿರುವ ಹತ್ತೆಂಟು ಧ್ವಜಗಳನ್ನು ಅವಚಿ ಹಿಡಿದಿರುವ ಅವಳಿನ್ನೂ ಒಂದು ಹೊತ್ತಿನ ಕೂಳಿಗಾಗಿ ಸಿಗ್ನಲ್‌ಗಳಲ್ಲೇ ಬೆಳಗು ರಾತ್ರಿ ಮಾಡುತ್ತಿದ್ದಾಳೆ.

ಸ್ವಾತಂತ್ರ್ಯಾನಂತರದ ಏಳು ದಶಕಗಳಲ್ಲಿ ಅಭಿವೃದ್ಧಿಯ ಬಗ್ಗೆ ನಾವು ಮಾತಾಡಿದಷ್ಟು ಪ್ರಪಂಚದಲ್ಲಿ ಬೇರೆ ಯಾರೂ ಮಾತನಾಡಿರಲಿಕ್ಕಿಲ್ಲವೇನೋ? ಕೇಳಿದರೆ ನಮ್ಮಲ್ಲಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಲಕ್ಷಾಂತರ ಪುಟಗಳ ದಾಖಲೆಗಳಿವೆ. ಥಾನುಗಟ್ಟಲೆ ಅಂಕಿಅಂಶಗಳಿವೆ. ದುರದೃಷ್ಟವಶಾತ್ ಇಷ್ಟೊಂದು ಅಂಕಿಅಂಶಗಳ ನಡುವೆ ಸಿಗ್ನಲಿನಲ್ಲಿ ಸ್ವಾತಂತ್ರ್ಯದ ಬಾವುಟ ಹಾರಿಸುವ ಮಕ್ಕಳು ನಾಪತ್ತೆಯಾಗಿದ್ದಾರೆ.

ಗಣಿಗಳಲ್ಲಿ ಚಿನ್ನವೆತ್ತುವವರ ನಡುವೆ ಬಡ ಕೂಲಿಕಾರರಿಗೆ ಬದುಕು ಸಿಕ್ಕಿಲ್ಲ. ಹೋಟೆಲು-ಫ್ಯಾಕ್ಟರಿಗಳಲ್ಲಿ ಹಣ ಎಣಿಸುವವರ ನಡುವೆ ಬಾಲ ಕಾರ್ಮಿಕರಿಗೆ ಬೆಳಕು ಕಂಡಿಲ್ಲ. ಸಾವಿರಾರು ಲೋಕಾಯುಕ್ತ ದಾಳಿಗಳು ನಡೆದ ಮೇಲೂ ರೇಶನ್ ಕಾರ್ಡು, ಇನ್‌ಕಂ ಸರ್ಟಿಫಿಕೇಟಿಗೆ ನೂರಾರು ರುಪಾಯಿ ಲಂಚ ಕೊಡುವುದರಿಂದ ಮುಕ್ತಿ ದೊರಕಿಲ್ಲ. ಎಲ್ಲರೂ ಪ್ರಜಾಪ್ರಭುತ್ವದ ಬಗ್ಗೆ ಭಾಷಣ ಮಾಡುವವರೇ ಆದರೂ ಸ್ವಾರ್ಥ ರಾಜಕಾರಣಿಗಳ ಅಧಿಕಾರರ ಲಾಲಸೆಯಿಂದ ಜನ ಬಿಡುಗಡೆ ಕಂಡಿಲ್ಲ.

ದೇಶಕ್ಕೆ, ಅದರೊಳಗಿರುವ ಜನರಿಗೆ ಏನಾದರೂ ಒಳ್ಳೆಯದಾಗಬೇಕೆಂದು ಮನಸಾ ಬಯಸುವ ರಾಜಕಾರಣಿಗಳು ಈ ಸ್ವತಂತ್ರ ದೇಶದ ವ್ಯಾಪ್ತಿಯೊಳಗಿಲ್ಲ. ನೂರಕ್ಕೆ ತೊಂಬತ್ತೊಂಬತ್ತು ಮಂದಿಯಲ್ಲೂ ತುಂಬಿ ತುಳುಕುತ್ತಿರುವುದು ಹಣ ಮತ್ತು ಅಧಿಕಾರದ ದಾಹ. ಇದು ವರ್ಷ ಕಳೆದಂತೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣವೂ ಇಲ್ಲ.

ನನಗಿಷ್ಟವಾದ ಯೋಚನೆ ಇದು, ನನಗಿಷ್ಟವಾದ ದಾರಿ ಇದು ಎಂದು ಮುನ್ನಡೆಯುವ ಸ್ವಾತಂತ್ರ್ಯವಂತೂ ಯಾರಿಗೂ ಇಲ್ಲ. ಇದೇ ಸರಿಯಾದ ಚಿಂತನೆ, ಇದೇ ಸರಿಯಾದ ಹಾದಿ, ಇದನ್ನೇ ಅನುಸರಿಸತಕ್ಕದ್ದು ಎಂಬ ಕಟ್ಟುಕಟ್ಟಳೆಗಳ ನಡುವೆ ವಾಸ್ತವದ ಸ್ವಾತಂತ್ರ್ಯ ಕಳೆದೇ ಹೋಗಿದೆ. ಎಡ-ಬಲಗಳೆಂಬ ಅತಿರೇಕಗಳ ನಡುವೆ ಸಮಾಜ ಚಿಂದಿಯಾಗಿದೆ. ನಮ್ಮ ಸಿದ್ಧಾಂತ ಇದು, ಇದೇ ಸರಿ, ಇದನ್ನೇ ಎಲ್ಲರೂ ಒಪ್ಪತಕ್ಕದ್ದು ಎಂಬ ಬಲವಂತದ ಭಾರದಲ್ಲಿ ನಿಜವಾಗಿ ದೊರೆಯಬೇಕಿದ್ದ ಬೌದ್ಧಿಕ ಸ್ವಾತಂತ್ರ್ಯವೇ ಕಾಲುಮುರಿದುಕೊಂಡು ಬಿದ್ದಿದೆ.

-ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಆಗಸ್ಟ್ 11, 2019

Champions of plastic-free forest | Deccan Herald


This article has been published in Deccan Herald, 10 August 2019, Page-7


Shaila Patagara and Vinoda Marati
If you visit Yana, one of the prominent tourist attractions of Kumta taluk in Uttara Kannada district, you will certainly meet two women in khaki uniforms, somewhere on the walking path leading to the mammoth rock formations. You will find them walking with a metal stick with a hook at one end. They pick plastic pieces, bottles, wrappers of snacks thrown by tourists and deposit them in the bins.  They are seen doing this the whole day.


Yana is different from other trekking sites in terms of cleanliness. It is free from plastic litter thanks to the commitment of these two women who have collected at least three tonnes of plastic from Yana and its surroundings in the past three years. 

Shaila Patagara and Vinoda Marati, the two women in uniform, are responsible for maintaining Yana as a plastic-free zone. They were appointed by the Village Forest Committee of Yana, which comes under the Katagal Forest Range, with the objective of maintaining cleanliness at the popular tourist spot.



“We are working here since January 2017, and our job is to keep the surroundings free of plastic. We collect at least 5kg plastic every day. This quantity doubles during weekends when the crowd is more,” says Shaila.

Yana caves are visited by an average of one lakh tourists every year, and it is a Herculean task to maintain the place clean. “We planned to appoint two personnel under Village Forest Committee with a special task of collecting plastic waste. Our idea worked very well, as these women deliver their duties sincerely and effectively,” says an official attached to Katagal Forest Range.

Shaila and Vinoda are from the same village and feel proud that their village attracts thousands of visitors from across the country, and sometimes, from abroad. They even feel proud to work for the betterment of such a popular place, but they are disappointed a little that the tendency of the visitors have not changed much even after the continuous efforts of the Forest Department to create awareness.

“We not only pick plastic waste but also educate people to keep the forest plastic-free. A lot of signboards advocating responsible behaviour have been installed by the Forest Department along the path leading to the caves, despite which people throw wrappers and bottles here and there,” says Vinoda.

The collected waste is handed over to the Kumta town municipality at regular intervals. The two women receive a monthly honorarium of Rs 7500 each for their committed service.

The number of visitors to Yana caves, located in the Sahyadri mountain range (Western Ghats), is increasing every year, and naturally, there are concerns over keeping the area clean. “It is not the duty of just these two women or the Forest Department to keep this place clean and safe. Tourists are equally, if not more, responsible,” say local people. 

According to Parashuram Aikur, a visitor from Manjalapura in Yadgir district, the tourist sites can be maintained well only if tourists cooperate. “We don’t have to do much. Just following the rules of the place will go a long way in not disturbing the aesthetics and environment of the place. It is inspiring to see the selfless service of these women,” he said.

“Most tourists are educated people but unfortunately, they are least bothered about the cleanliness of the place. Government and laws alone won’t suffice. It will be difficult to preserve our environment unless people’s mindset changes,” notes Kavitha P, a tourist from Kadaba village in Gubbi taluk.

The two massive rock outcrops — the 390-foot Bhairaveshwara Shikhara and the 300-foot Mohini Shikhara — at Yana have been considered as one of the natural wonders of the country. The magnificent rocks made up of solid black, crystalline Karst limestone are located amidst lush green forest and pristine streams and waterfalls. The site will certainly make any visitor wonder-struck and one can find solace from the stressful life. However, tourists should learn that the serenity of the place can be protected only when they understand their responsibilities towards nature.

Sibanthi Padmanabha K V

ಸೋಮವಾರ, ಆಗಸ್ಟ್ 5, 2019

'ತುಂಬಲಾರದ ನಷ್ಟ' ಯಾರಿಗೆ?


ಹಿಂದಿನ ಸರ್ಕಾರ ಅನೇಕ ಜಯಂತಿಗಳ ರಜೆಗಳನ್ನು ರದ್ದುಪಡಿಸಿ ಅವುಗಳನ್ನು ಪರಿಮಿತ ರಜೆಗಳನ್ನಾಗಿ ಪರಿವರ್ತಿಸಿ ಆದೇಶ ಹೊರಡಿಸಿತ್ತು. ಅದು ನಿಸ್ಸಂಶಯವಾಗಿ ಒಂದು ಸ್ವಾಗತಾರ್ಹ ಕ್ರಮ. ಇದರ ಜಾಡಿನಲ್ಲಿ ಹೊಸ ಸರ್ಕಾರ ಈಗ ಇನ್ನೊಂದು ನಿರ್ಧಾರವನ್ನೂ ತೆಗೆದುಕೊಂಡರೆ ನಿಜಕ್ಕೂ ಅದೊಂದು ಐತಿಹಾಸಿಕ ಮತ್ತು ಪ್ರಶಂಸಾರ್ಹ ಕಾರ್ಯವಾದೀತು. ಅದೇನೆಂದರೆ, ಗಣ್ಯ ವ್ಯಕ್ತಿಗಳ ನಿಧನದ ಸಂದರ್ಭದಲ್ಲಿ ರಜೆ ಘೋಷಿಸುವ ಪದ್ಧತಿಯನ್ನು ಕೈಬಿಡುವುದು. ಇದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಗಬೇಕಿರುವ ಅತ್ಯಂತ ಪ್ರಮುಖ ಕೆಲಸ.

ಗಣ್ಯ ವ್ಯಕ್ತಿಗಳು ನಿಧನರಾದಾಗ ರಜೆ ಘೋಷಿಸುವುದು ನಮ್ಮಲ್ಲೊಂದು ದೊಡ್ಡ ಸಂಪ್ರದಾಯವಾಗಿ ಬೆಳೆದುಬಿಟ್ಟಿದೆ. ರಜೆ ಘೋಷಿಸದೆ ಹೋದರೆ ’ನಮ್ಮ ನಾಯಕರಿಗೆ’ ಅಗೌರವ ತೋರಿದರು ಎಂಬ ಗಲಾಟೆಯೇ ಆರಂಭವಾಗುತ್ತದೆ. ನಿಧನರಾದವರು ರಾಜಕೀಯ ವ್ಯಕ್ತಿಯಾಗಿದ್ದು, ಅವರ ಪ್ರತಿಸ್ಪರ್ಧಿ ಪಕ್ಷದವರು ಅಧಿಕಾರದಲ್ಲಿದ್ದರಂತೂ ಈ ಗಲಾಟೆಗೆ ತಕ್ಷಣ ರಾಜಕೀಯ ಬಣ್ಣ ಬಂದುಬಿಡುತ್ತದೆ. ಅದರೊಂದಿಗೆ ’ಜಾತಿ’ಯ ಆಯಾಮ ಸಿಕ್ಕಿದರಂತೂ ಮುಂದಿನ ತಮಾಷೆಯ ಬಗ್ಗೆ ಹೇಳುವುದೇ ಬೇಡ. 

ಶೋಕಾಚರಣೆ ಮಾಡುವುದು, ಮೃತರಿಗೆ ಗೌರವ ಸಲ್ಲಿಸುವುದು, ಅವರ ಸಾಧನೆ-ಕೊಡುಗೆಗಳ ಬಗ್ಗೆ ಸಮಾಜದ ಗಮನ ಸೆಳೆಯುವುದು, ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ತಿಗೆ ಆಗಬಹುದಾದ ಸಂಭಾವ್ಯ ಹಾನಿಯನ್ನು ತಪ್ಪಿಸುವುದು - ಇವೆಲ್ಲ ಗಣ್ಯ ವ್ಯಕ್ತಿಗಳ ನಿಧನದ ಹಿನ್ನೆಲೆಯಲ್ಲಿ ರಜೆ ಘೋಷಿಸುವುದಕ್ಕೆ ಕೊಡಬಹುದಾದ ಸಮರ್ಥನೆಗಳು. ಸಾರ್ವಜನಿಕರಿಗೆ ಆಗಬಹುದಾದ ಸಂಭಾವ್ಯ ತೊಂದರೆಗಳನ್ನು ತಪ್ಪಿಸುವ ಒಂದು ಸಂಗತಿಯ ಹೊರತಾಗಿ ಬೇರೆ ಯಾವುದಾದರೂ ಉದ್ದೇಶ ಈವರೆಗೆ ವಾಸ್ತವವಾಗಿ ಈಡೇರಿದ್ದಿದೆಯೇ?

ಶೋಕಾಚರಣೆ ಮಾಡುವುದು ಅಥವಾ ಮೃತರಿಗೆ ಗೌರವ ಸೂಚಿಸುವುದು ಎಂದರೇನು? ಆ ವ್ಯಕ್ತಿ ಸಮಾಜದ ಯಾವುದಾದರೂ ಕ್ಷೇತ್ರಕ್ಕೆ ಸಲ್ಲಿಸಿರಬಹುದಾದ ಕೊಡುಗೆಗಳನ್ನು ಸ್ಮರಣೆ ಮಾಡಿಕೊಳ್ಳುವುದು, ಅವುಗಳ ಬಗ್ಗೆ ತಮ್ಮೊಳಗೆ ಸಂವಾದ ನಡೆಸಿ ಅಭಿಮಾನಪಟ್ಟುಕೊಳ್ಳುವುದು, ಗಣ್ಯ ವ್ಯಕ್ತಿಯ ಸಾಧನೆಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವುದು ಮತ್ತು ಆ ಮೂಲಕ ಅವರೂ ಪ್ರೇರಣೆ ಪಡೆಯುವಂತೆ ಮಾಡುವುದು... ಇತ್ಯಾದಿ ವಿವರಣೆಗಳನ್ನು ಕೊಡಬಹುದು. ರಜೆ ಘೋಷಿಸುವುದರಿಂದ ವಾಸ್ತವವಾಗಿ ಈ ಗುರಿ ಈಡೇರುತ್ತದೆಯೇ? ಅಥವಾ ರಜೆ ಕೊಡುವುದರಿಂದ ಮಾತ್ರವೇ ಈ ಗುರಿ ಈಡೇರುತ್ತದೆಯೇ? ರಜೆ ನೀಡದೆಯೂ ಈ ಉದ್ದೇಶಗಳನ್ನು ಸಾಧಿಸುವುದು ಸಾಧ್ಯವಿಲ್ಲವೇ?

ಸಹೋದ್ಯೋಗಿಯೊಬ್ಬರು ತಮ್ಮ ಚಾಲನಾ ಪರವಾನಗಿ ನವೀಕರಣಕ್ಕಾಗಿ ಇತ್ತೀಚೆಗೆ ಮೈಸೂರಿಗೆ ಹೋಗಿದ್ದರಂತೆ. ಗಂಟೆಗಟ್ಟಲೆ ಸರತಿಯಲ್ಲಿ ಕಾದು ಇನ್ನೇನು ಅವರ ಕೆಲಸ ಆಗಬೇಕು ಅನ್ನುವಷ್ಟರಲ್ಲಿ ಗಣ್ಯ ವ್ಯಕ್ತಿಯೊಬ್ಬರ ನಿಧನದ ಪ್ರಯುಕ್ತ ರಜೆಯ ಘೋಷಣೆ ಹೊರಬಿತ್ತು. ಎಷ್ಟಾದರೂ ಸರ್ಕಾರಿ ನೌಕರರು, ರಜೆ ಘೋಷಣೆಯಾಗುತ್ತಿದ್ದಂತೆ ಫೈಲುಗಳನ್ನೆಲ್ಲ ಮಡಚಿಟ್ಟು ಹೊರಟೇಬಿಟ್ಟರಂತೆ. ನಿಮಿಷಾರ್ಧದಲ್ಲಿ ಕಚೇರಿಯೆಲ್ಲ ಖಾಲಿಯಾದ್ದರಿಂದ ನಾಲ್ಕು ಗಂಟೆ ಪ್ರಯಾಣ ಮಾಡಿ ಮೈಸೂರಿಗೆ ಹೋಗಿದ್ದ ಸಹೋದ್ಯೋಗಿ ಪೆಚ್ಚುಮೋರೆ ಹಾಕಿಕೊಂಡು ಪುನಃ ಬಸ್ ಹತ್ತಿದರಂತೆ.

ಇದೊಂದು ಸಣ್ಣ ನಿದರ್ಶನ ಅಷ್ಟೇ. ಇಂತಹ ಎಷ್ಟು ಸಾವಿರ ಕೆಲಸಗಳು ಒಂದು ರಜೆಯಿಂದ ಬಾಕಿಯಾಗಬಹುದು? ಎಷ್ಟು ಲಕ್ಷ ಗಂಟೆ ಮಾನವ ಶ್ರಮ ವ್ಯರ್ಥವಾಗಬಹುದು? ಎಷ್ಟು ಕೋಟಿ ರೂಪಾಯಿ ಹಣಕಾಸು ನಷ್ಟ ಆಗಬಹುದು? ಸ್ವಾತಂತ್ರ್ಯಾನಂತರ ಗಣ್ಯವ್ಯಕ್ತಿಗಳ ನಿಧನದ ಶೋಕಾಚರಣೆಗಾಗಿ ಎಷ್ಟು ರಜೆಗಳನ್ನು ಘೋಷಣೆ ಮಾಡಿರಬಹುದು? ಅವುಗಳಿಂದ ಆಗಿರಬಹುದಾದ ಒಟ್ಟು ನಷ್ಟ ಎಷ್ಟಿರಬಹುದು? ಅಧ್ಯಯನಕ್ಕೊಳಪಡಿಸಿದರೆ ಅದೊಂದು ಮಹಾಗ್ರಂಥವೇ ಆದೀತು. ಗಣ್ಯರ ನಿಧನದಿಂದ ಸಮಾಜಕ್ಕೆ ’ತುಂಬಲಾರದ ನಷ್ಟ’ವೆಂದು ಹೇಳುವುದು ಮಾಮೂಲಿ ಆಗಿ ಬಿಟ್ಟಿದೆ; ವಾಸ್ತವವಾಗಿ ತುಂಬಲಾರದ ನಷ್ಟ ಆಗುವುದು ಅವರ ನಿಧನದ ಹೆಸರಿನಲ್ಲಿ ರಜೆ ಘೋಷಿಸುವುದರಿಂದ.

ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡು, ಪಿಂಚಣಿ, ಪೋಸ್ಟಾಪೀಸು, ಬ್ಯಾಂಕ್ ಕೆಲಸ ಎಂದು ದೂರದೂರದ ಹಳ್ಳಿಗಳಿಂದ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಿಗೆ ಹತ್ತಾರು ಮೈಲಿ ದೂರದಿಂದ ಪ್ರತಿದಿನ ಪ್ರಯಾಣ ಮಾಡುವ ರೈತರು, ಕೂಲಿಕಾರ್ಮಿಕರು, ಬಡ ಮಹಿಳೆಯರು, ವಯೋವೃದ್ಧರು ಸಾವಿರಾರು. ಇದ್ದಕ್ಕಿದ್ದ ಹಾಗೆ ಒಂದು ರಜೆ ಘೋಷಣೆ ಮಾಡುವುದರಿಂದ ಇಂತಹ ಜನಸಾಮಾನ್ಯರಿಗೆ ಆಗುವ ತೊಂದರೆ ಏನೆಂದು ಸರ್ಕಾರ ಎಂದಾದರೂ ಆಲೋಚಿಸಿದ್ದಿದೆಯೇ? ತಮ್ಮ ಹೊಲದ ಕೆಲಸಕ್ಕೋ, ದಿನನಿತ್ಯದ ಕೂಳಿನ ಮೂಲವಾದ ಕೂಲಿ ಕೆಲಸಕ್ಕೋ ಮೀಸಲಿರುವ ಒಂದು ದಿನವನ್ನು ಹೇಗೋ ಹೊಂದಿಸಿಕೊಂಡು ಕಚೇರಿಗಳಿಗೆ ಎಡತಾಕುವ ಈ ಜನರಿಗೆ ರಜೆ ಘೋಷಣೆಯಿಂದ ಆಗುವ ನಷ್ಟ ಎಷ್ಟೆಂದು ಯಾರಾದರೂ ಅರ್ಥ ಮಾಡಿಕೊಂಡಿದ್ದಾರೆಯೇ? ಒಂದಿಡೀ ದಿನ ವ್ಯರ್ಥವಾಯಿತಲ್ಲ ಎಂದು ನೊಂದುಕೊಳ್ಳುವ ಇವರು ನಿಧನರಾದ ಗಣ್ಯ ವ್ಯಕ್ತಿಯ ಗೌರವಾರ್ಥ ಶೋಕಾಚರಿಸಿ ಅವರ ಸಾಧನೆಗಳನ್ನು ಕೊಂಡಾಡುವ ಸಾಧ್ಯತೆ ಎಷ್ಟು?

ಇನ್ನು ಶಾಲಾ-ಕಾಲೇಜುಗಳ ಸಮಾಚಾರ ಕೇಳುವುದೇ ಬೇಡ. ಅವರಿಗೆ ರಜೆಯೆಂದರೆ ಸಂಭ್ರಮಾಚರಣೆ ಅಷ್ಟೆ. ಅದು ವಿದ್ಯಾರ್ಥಿಗಳ ಸಹಜ ಗುಣ. ವರ್ಷದಲ್ಲಿ ಎರಡು-ಮೂರು ತಿಂಗಳು ರಜೆಯಿದ್ದು, ಹಬ್ಬಹರಿದಿನಗಳೆಂದು ಮತ್ತಷ್ಟು ರಜೆಗಳಿದ್ದರೂ, ಇನ್ನೂ ಒಂದಷ್ಟು ರಜೆ ಸಿಕ್ಕಿದರೆ ಅವರೇನು ಬೇಡ ಅನ್ನುವುದಿಲ್ಲ. ಗಣ್ಯರ ನಿಧನಕ್ಕೆ ರಜೆ ಘೋಷಿಸಿದರೆ ಅವರಿಗಿಂತ ಹೆಚ್ಚು ಸಂಭ್ರಮಿಸುವವರು ಬೇರೆ ಇರಲಿಕ್ಕಿಲ್ಲ. ಇದು ಕೊಂಚ ಬೀಸು ಹೇಳಿಕೆ ಅನ್ನಿಸಿದರೂ ಇದು ನಿಜ ಮತ್ತು ಅತ್ಯಂತ ಗಂಭೀರವಾದ ವಿಚಾರ.

ನಿಧನ ಹೊಂದಿದ ಗಣ್ಯರ ಸಾಧನೆ-ಕೊಡುಗೆಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು ಶಾಲಾ-ಕಾಲೇಜುಗಳ, ಅಧ್ಯಾಪಕರ ಕರ್ತವ್ಯ ಎಂಬುದು ನಿಜ. ಆದರೆ ರಜೆ ಘೋಷಿಸುವುದರಿಂದ ಅದನ್ನು ಮಾಡಿದಂತಾಗುತ್ತದೆಯೇ? ಅನೇಕ ವಿದ್ಯಾರ್ಥಿಗಳು ಸ್ವಯಂ ರಜೆ ಘೋಷಿಸಿಕೊಂಡು ಅಂದು ಕಾಲೇಜುಗಳಿಗೆ ಕಾಲಿಡುವುದೇ ಇಲ್ಲ; ಬಹುತೇಕರು ರಜೆ ಘೋಷಣೆಯಾದ್ದೇ ಕ್ಯಾಂಪಸ್ ಖಾಲಿ ಮಾಡುತ್ತಾರೆ. ಅವರಲ್ಲಿ ಬಹುತೇಕರು ದಿನದ ಉಳಿದ ಸಮಯವನ್ನು ಹೇಗೆ ಕಳೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಇನ್ನು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಸ್ಯೆ ಬೇರೆ. ಅವರಿಗೆ ರಜೆ ಕೊಟ್ಟರೂ ಸಮಸ್ಯೆ, ಕೊಡದಿದ್ದರೂ ಸಮಸ್ಯೆ. ಆಗಷ್ಟೇ ಶಾಲೆಗೆ ಬಂದ ಪುಟಾಣಿಗಳನ್ನು ಮತ್ತೆ ಅವರವರ ಮನೆಗಳಿಗೆ ತಲುಪಿಸುವುದು ತುಂಬ ತ್ರಾಸದ ಕೆಲಸ. ರಜೆ ಕೊಡದೇ ಇದ್ದರೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದಂತಾಗುತ್ತದೆ. ಅತ್ತ ಶಾಲೆಗಳಿಗೆ ಸಂಕಟ, ಇತ್ತ ಹೆತ್ತವರಿಗೆ ಆತಂಕ.

ಒಟ್ಟಾರೆ ಈ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲೇಬೇಕು. ಇದಕ್ಕೆ ಎಲ್ಲರೂ ಪಕ್ಷಾತೀತವಾಗಿ ಒಂದು ಒಮ್ಮತದ ತೀರ್ಮಾನಕ್ಕೆ ಬರಲೇಬೇಕು. ಆ ದಿನ ಎಲ್ಲರೂ ಒಂದು ಗಂಟೆ ಹೆಚ್ಚು ಕೆಲಸ ಮಾಡಲಿ. ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ನಿಧನ ಹೊಂದಿದ ಗಣ್ಯರ ಬಗ್ಗೆ ಒಳ್ಳೆಯ ಉಪನ್ಯಾಸ-ಸಂವಾದ ಕಾರ್ಯಕ್ರಮ ಏರ್ಪಡಿಸಲಿ. ಮೃತರಿಗೆ ಇದಕ್ಕಿಂತ ದೊಡ್ಡ ಗೌರವ ಉಂಟೇ?

-ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಆಗಸ್ಟ್ 2, 2019

ನಮ್ಮೊಳಗೆ ಗೆಲುವಿನ ಬೆಳಕು ಪಸರಿಸಲಿ

03 ರಿಂದ 09 ಆಗಸ್ಟ್ 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ.

ಜೀವಶಾಸ್ತ್ರದ ಅಧ್ಯಾಪಕರು ಎಂಟನೇ ತರಗತಿಯಲ್ಲಿ ಪ್ರತಿಕಾಯಗಳ ಬಗ್ಗೆ ಪಾಠ ಮಾಡುತ್ತಿದ್ದರೆ, ತಲೆಯೊಳಗೆ ಅದೇನೋ ಮಿಂಚು ಹೊಳೆದವನಂತೆ ಜ್ಯಾಕ್ ಆ್ಯಂಡ್ರೆಕಾ ‘ಯೆಸ್!’ ಎಂದು ಉದ್ಗರಿಸಿದ್ದ. ಇಡೀ ತರಗತಿ ಜ್ಯಾಕ್‍ನತ್ತ ತಿರುಗಿ ನೋಡುತ್ತಿದ್ದರೆ ಆತ ಮಾತ್ರ ಏನನ್ನೋ ಶೋಧಿಸಿದವನ ಹುಮ್ಮಸ್ಸಿನಲ್ಲಿ ಬೀಗುತ್ತಿದ್ದ.

ಹತ್ತಿರದ ಸಂಬಂಧಿಯೊಬ್ಬರು ಮೇದೋಜೀರಕ ಗ್ರಂಥಿಯ ಕ್ಯಾನ್ಸರಿನಿಂದ ಸಾವಿಗೀಡಾದ ಬಳಿಕ ಅದರದ್ದೇ ಯೋಚನೆಯಲ್ಲಿ ಮುಳುಗಿದ್ದ ಜ್ಯಾಕ್‍ಗೆ ಥಟ್ಟನೆ ಏನೋ ಹೊಳೆದು ಹೊಸದೊಂದು ಮಾರ್ಗ ಗೋಚರಿಸತೊಡಗಿತ್ತು. ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‍ಗೆ ತುತ್ತಾದವರು ಸಾವಿಗೀಡಾಗುವುದೇ ಬಹಳ. ಕಾರಣ ಅದು ಗೊತ್ತಾಗುವುದೇ ಸಾವು ಸಮೀಪಿಸಿದ ಮೇಲೆ. ಆರಂಭದ ಹಂತದಲ್ಲೇ ಗೊತ್ತಾದರೆ ಚಿಕಿತ್ಸೆ ಕೊಡಬಹುದು ಮತ್ತು ಯಶಸ್ಸು ಪಡೆಯಬಹುದು ಎಂದು ಜ್ಯಾಕ್ ಎಲ್ಲೋ ಓದಿದ್ದ.

ಅಂತಹ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಮಾಡುವ ಸಾಧನವೊಂದರ ಪ್ರಮೇಯ ಬಯಾಲಜಿ ತರಗತಿಯಲ್ಲಿ ಕುಳಿತ ಜ್ಯಾಕ್ ಮೆದುಳಿನಲ್ಲಿ ಸ್ಫುರಿಸಿತ್ತು. ಆ ಚಿತ್ರ ಕಾರ್ಯರೂಪಕ್ಕೆ ಬಂದದ್ದೇ ಆದರೆ ಅದು ಈಗಾಗಲೇ ಇದ್ದ ವಿಧಾನಗಳಿಗಿಂತ 10 ಪಟ್ಟು ಪರಿಣಾಮಕಾರಿಯೂ, 26,000 ಪಟ್ಟು ಅಗ್ಗವೂ ಆಗಿತ್ತು! ಎಲ್ಲವೂ ನಿಜ, ಆದರೆ ತನ್ನ ಕಲ್ಪನೆಯನ್ನು ಸಾಕಾರಗೊಳಿಸುವುದಕ್ಕೆ ಬೇಕಾದ ಮೂಲಭೂತ ಸೌಕರ್ಯ ಮತ್ತು ತಾಂತ್ರಿಕ ಬೆಂಬಲವೇ ಜ್ಯಾಕ್ ಬಳಿ ಇರಲಿಲ್ಲ.

ನಿರಾಶನಾಗದ ಜ್ಯಾಕ್ ಆಧುನಿಕ ಸೌಲಭ್ಯಗಳಿದ್ದ ಅಮೇರಿಕಾದ ವಿವಿಧ ವಿಶ್ವವಿದ್ಯಾನಿಲಯಗಳಿಗೆ ಅರ್ಜಿ ಸಲ್ಲಿಸುತ್ತಾ ಬಂದ. ದುರದೃಷ್ಟವಶಾತ್ ಈ ಹೈಸ್ಕೂಲು ಹುಡುಗನ ಪ್ರಸ್ತಾಪವನ್ನು ಎಲ್ಲರೂ ಹುಡುಗಾಟಿಕೆಯೆಂದೇ ಭಾವಿಸಿದರು. ಒಂದಲ್ಲ, ಎರಡಲ್ಲ, 199 ಲ್ಯಾಬೋರೆಟರಿಗಳು ಜ್ಯಾಕ್‍ಗೆ ಸೌಲಭ್ಯ ಒದಗಿಸಲು ನಿರಾಕರಿಸಿದವು. ಸಾಮಾನ್ಯ ಹುಡುಗರಾಗಿದ್ದರೆ ನಾಲ್ಕು ಮಂದಿ ‘ಇಲ್ಲ’ ಎಂದಾಗ ಜೀವನದಲ್ಲಿ ಎಂದೂ ಇಂತಹದರ ತಂಟೆಗೇ ಹೋಗಬಾರದೆಂದು ಸುಮ್ಮನಿದ್ದುಬಿಡುತ್ತಿದ್ದರು.

ಆದರೆ ಜ್ಯಾಕ್‍ಗೆ ಅಪಾರ ಮನೋಬಲ ಇತ್ತು. ಅನೇಕ ಬಾರಿ ಅಧೀರತೆ ಕಾಡಿದರೂ ಆಶಾವಾದದಿಂದ ಪ್ರಯತ್ನಿಸುತ್ತಲೇ ಇದ್ದ. ಆತನ 200ನೇ ಯತ್ನ ಫಲ ನೀಡಿತು. ಜಾನ್ ಹಾಪ್ಕಿನ್ಸ್ ವೈದ್ಯಕೀಯ ವಿವಿಯ ಪ್ರಾಧ್ಯಾಪಕರೊಬ್ಬರು ಜ್ಯಾಕ್ ಪ್ರಸ್ತಾವನೆಯನ್ನು ಒಪ್ಪಿಕೊಂಡು ಆತನನ್ನು ತಮ್ಮ ಪ್ರಯೋಗಾಲಯಕ್ಕೆ ಆಹ್ವಾನಿಸಿದರು. ಆಮೇಲಿನದ್ದು ಏನಿದ್ದರೂ ಇತಿಹಾಸ.

ಹೌದು, ಸೋಲು ಒಂದು ಬಾರಿ ಎಲ್ಲರನ್ನೂ ಅಧೀರರನ್ನಾಗಿಸುತ್ತದೆ, ಕಂಗೆಡಿಸುತ್ತದೆ. ಮತ್ತೆ ಮತ್ತೆ ಸೋತರಂತೂ ಮುಂದೆ ಜೀವನದಲ್ಲಿ ಏನೂ ಇಲ್ಲ ಎಂಬ ಕತ್ತಲು ಆವರಿಸಿಕೊಂಡುಬಿಡುತ್ತದೆ. ಈ ಹಂತದಲ್ಲಿ ಧೈರ್ಯ ಕಳೆದುಕೊಂಡರಂತೂ ಬದುಕು ಅಲ್ಲಿಗೆ ಅಂತ್ಯವಾದಂತೆ. ಎಲ್ಲರೂ ಹೀಗೆಯೇ ಆಗಿದ್ದರೆ ಈ ಜಗತ್ತಿನಲ್ಲಿ ಸಾಧಕರೇ ಇರುತ್ತಿರಲಿಲ್ಲ. ಏಕೆಂದರೆ ಪ್ರತಿಯೊಬ್ಬ ಸಾಧಕನ ಹಿಂದೆ ಇರುವುದೂ ಬಹುಪಾಲು ಸೋಲಿನ ಕಥೆಗಳೇ.

ಸೋತೆವೆಂದು ಸುಮ್ಮನಾಗುತ್ತಿದ್ದರೆ ನಮ್ಮ ಇತಿಹಾಸ ಬಟಾಬಯಲಿನಂತೆ ಖಾಲಿಯಾಗಿರುತ್ತಿತ್ತು. ತಮ್ಮದೇ ಉದ್ಯಮದ ಸಾಮ್ರಾಜ್ಯಗಳನ್ನು ಕಟ್ಟಿದ ಸೋಶಿರೋ ಹೋಂಡಾ, ರತನ್ ಟಾಟಾ, ಸ್ಟೀವ್ ಜಾಬ್ಸ್, ವಾಲ್ಟ್ ಡಿಸ್ನಿ, ಧೀರೂಬಾಯಿ ಅಂಬಾನಿ, ನಾರಾಯಣ ಮೂರ್ತಿ, ಮನೋಬಲದಿಂದಲೇ ಯಶೋಗಾಥೆಗಳನ್ನು ಬರೆದ ಅರುಣಿಮಾ ಸಿನ್ಹಾ, ಸುಶೀಲ್ ಕುಮಾರ್, ಅಬ್ದುಲ್ ಕಲಾಂ, ರಜನೀಕಾಂತ್– ಇವರೆಲ್ಲ ತಮ್ಮ ಸೋಲಿನಿಂತ ಕಂಗೆಟ್ಟು ಕುಳಿತಿದ್ದರೆ ನಾವಿಂದು ಇವರನ್ನೆಲ್ಲ ನೆನಪಿಸಿಕೊಳ್ಳುವ ಅವಕಾಶವೇ ಇರುತ್ತಿರಲಿಲ್ಲ.

“ನಾನು ಸಾವಿರ ಬಾರಿ ಸೋತಿಲ್ಲ. ಸಾವಿರ ವಿಧಾನಗಳು ನನ್ನ ಪ್ರಯೋಗಕ್ಕೆ ಅನುಕೂಲವಾಗಲಿಲ್ಲ ಎಂಬುದನ್ನು ಕಲಿತೆನಷ್ಟೆ” ಎಂಬುದು ಬಲ್ಬ್ ಕಂಡುಹಿಡಿದ ಥಾಮಸ್ ಆಲ್ವಾ ಎಡಿಸನ್‍ನ ಪ್ರಸಿದ್ಧ ಮಾತು. ಸೋಲು ಎದುರಾದಾಗ ನಾವು ನೆನಪಿಸಿಕೊಳ್ಳಬೇಕಾದದ್ದು ಇದೇ ಮಾತನ್ನು. ಸೋಲು ನಮ್ಮ ತಪ್ಪುಗಳನ್ನು ತೋರಿಸಿಕೊಡುವ ಕೈದೀವಿಗೆಯಾಗಬೇಕೇ ಹೊರತು ನಮ್ಮನ್ನೇ ಸುಡುವ ಬೆಂಕಿಯಾಗಬಾರದು. “ಯಶಸ್ಸಿನಷ್ಟು ದೊಡ್ಡ ವೈಫಲ್ಯ ಇನ್ನೊಂದಿಲ್ಲ, ಏಕೆಂದರೆ ನಾವು ಅದರಿಂದ ಏನನ್ನೂ ಕಲಿಯುವುದಿಲ್ಲ. ಆದರೆ ಸೋಲುಗಳಿಂದ ನಾವು ಕಲಿಯವುದು ಬಹಳಷ್ಟಿದೆ” ಎಂದು ಬೌಲ್ಡಿಂಗ್ ಕೆನೆತ್ ಹೇಳಿರುವುದೂ ಇದೇ ಅರ್ಥದಲ್ಲಿ.

ಉದ್ಯೋಗ, ಶಿಕ್ಷಣ, ವ್ಯಾಪಾರ, ಸಂಸಾರ, ಕೃಷಿ ಎಲ್ಲದರಲ್ಲೂ ಒಂದಲ್ಲ ಒಂದು ಬಾರಿ ಸೋಲು ಎದುರಾಗುವುದು ಸಾಮಾನ್ಯ. ಆಗ ಮಾಡಬೇಕಿರುವುದು ಆತ್ಮಾವಲೋಕನವೇ ಹೊರತು ಆತ್ಮಹತ್ಯೆ ಅಲ್ಲ. ಸೋತುಬಿಟ್ಟೆ ಎಂದು ಬೇಜಾರಾಗುತ್ತೇವೆಯೇ ಹೊರತು ಯಾಕೆ ಸೋತೆ ಎಂದು ಯೋಚಿಸುವುದೇ ಇಲ್ಲ. ಸೋಲಿಗೆ ಏನಾದರೊಂದು ಕಾರಣ ಇರಲೇಬೇಕಲ್ಲ? ಅದನ್ನು ಅರ್ಥ ಮಾಡಿಕೊಂಡರೆ ಯಶಸ್ಸಿನ ಅರ್ಧ ದಾರಿ ಕ್ರಮಿಸಿದಂತೆಯೇ.

ಸೋತಾಗ ಸೋತು ಗೆದ್ದವರ, ನಮಗಿಂತಲೂ ಹೆಚ್ಚು ಪೆಟ್ಟು ತಿಂದವರ ಕಥೆಗಳು ನೆನಪಾಗಬೇಕು. ಅದು ಮನಸ್ಸಿಗೊಂದಿಷ್ಟು ಸಮಾಧಾನವನ್ನು ಕೊಡುತ್ತದೆ. ಸೋಲು ಛಲವಾಗಿ ಬದಲಾಗಬೇಕು. ಸೋತಿದ್ದೇನೆ, ಆದರೆ ಸತ್ತಿಲ್ಲ ಎಂಬುದನ್ನು ಸೋಲಿಸಿದವರಿಗೆ ತೋರಿಸಿಕೊಡಬೇಕೆಂದರೆ ಅವರೆದುರೇ ನಾವು ಪುಟಿದು ನಿಲ್ಲಬೇಕು. ಯಾರು ನಮ್ಮನ್ನು ಅಸಡ್ಡೆಯಿಂದ ಕಂಡರೋ ಅವರೇ ಮುಂದೊಂದು ದಿನ ನಮ್ಮನ್ನು ನೋಡಿ ಕರುಬುವಂತೆ ಬೆಳೆಯುವ ಪಣ ತೊಡಬೇಕು.

ಮನಸ್ಸು ಮ್ಲಾನವಾದಾಗ ವಿಶ್ವಾಸವುಳ್ಳ ಒಬ್ಬ ವ್ಯಕ್ತಿಯೊಂದಿಗೆ ಒಂದಷ್ಟು ಹೊತ್ತು ಕಳೆಯುವುದು ತುಂಬ ಮುಖ್ಯ. ನಿರಾಸೆ, ದುಃಖಗಳನ್ನು ಹಂಚಿಕೊಂಡಾಗ ಅದು ಕಡಿಮೆಯಾಗುತ್ತದೆ, ತುಸು ನಿರಾಳವೆನಿಸುತ್ತದೆ. ಆಗಷ್ಟೇ ಮನಸ್ಸು ಸ್ವಪರೀಕ್ಷೆಗೆ, ಮುಂದಿನ ದಾರಿಯ ಯೋಚನೆಗೆ ಸಿದ್ಧವಾಗುತ್ತದೆ. ನಮ್ಮೆದುರಿನ ವ್ಯಕ್ತಿಯ ಸಲಹೆ ಒಂದಿಷ್ಟು ಧೈರ್ಯವನ್ನೂ ನೀಡುತ್ತದೆ. ಯಾವುದೂ ಆಗದಿದ್ದರೆ ಸರ್ವಶಕ್ತನೆಂಬ ಒಂದು ಶಕ್ತಿಯ ಮೇಲೆ ನಂಬಿಕೆಯಿಟ್ಟು ಮುನ್ನಡೆಯಬೇಕು. ‘ನೀನೊಲಿದರೆ ಕೊರಡು ಕೊನರುವುದಯ್ಯಾ’ ಎಂಬ ಭರವಸೆಯಿಂದ ನಿರುಮ್ಮಳವಾಗಿ ಧ್ಯಾನಿಸಿದರೆ ದೂರದಲ್ಲೆಲ್ಲೋ ಆಶಾವಾದದ ಬೆಳಕಿಂಡಿಯೊಂದು ತೆರೆಯಬಹುದು. ಆಶಾವಾದವೇ ಗೆಲುವಿನ ಮೆಟ್ಟಿಲು.

- ಸಿಬಂತಿ ಪದ್ಮನಾಭ ಕೆ. ವಿ.