ಭಾನುವಾರ, ಮೇ 22, 2022

UGC-NET ಎಂಬ ಆಕರ್ಷಕ ಗಮ್ಯ

20 ಮೇ 2022ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ

ನೆಟ್ (NET) ಪರೀಕ್ಷೆಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಪ್ರತೀ ವರ್ಷ ಏರುತ್ತಲೇ ಇದೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಸಾಫ್ಟ್ ವೇರ್ ಇಂಜಿನಿಯರುಗಳಂತೆ ಸಂಬಳ ಪಡೆಯುತ್ತಿರುವುದು, ಮತ್ತು ಇಂತಹ ಹುದ್ದೆಗೆ ಆಯ್ಕೆಯಾಗಲು ನೆಟ್ ಪರೀಕ್ಷೆ ಪ್ರಾಥಮಿಕ ಅರ್ಹತೆಯಾಗಿರುವುದೇ ಇದಕ್ಕೆ ಪ್ರಮುಖ ಕಾರಣ. ಇದು ರಾಷ್ಟ್ರೀಯ ಅರ್ಹತಾ ಪರೀಕ್ಷೆ. ಯುಜಿಸಿ ಪರೀಕ್ಷೆ, ನೆಟ್ ಪರೀಕ್ಷೆ ಎಂದೆಲ್ಲ ಪ್ರಸಿದ್ಧಿ. 2018ರವರೆಗೆ ಈ ಪರೀಕ್ಷೆಯನ್ನು ಯುಜಿಸಿ- ಅಂದರೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ನೇರವಾಗಿ ನಡೆಸುತ್ತಿತ್ತು. ಈಗ ಯುಜಿಸಿಯ ಪರವಾಗಿ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (NTA) ನಡೆಸುತ್ತಿದೆ. ವಿಜ್ಞಾನ ವಿಷಯಗಳ ಎನ್‍ಇಟಿ ಪರೀಕ್ಷೆಯನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್ (CSIR) ನಡೆಸುತ್ತದೆ.

ಯುಜಿಸಿ-ಎನ್‍ಇಟಿ ಹಿಂದಿನಿಂದಲೂ ಒಂದು ಪ್ರತಿಷ್ಠಿತ ಪರೀಕ್ಷೆ. ಅದನ್ನು ತೇರ್ಗಡೆಯಾದವರೆಲ್ಲರಿಗೂ ಸರ್ಕಾರಿ ನೇಮಕಾತಿ ಖಾತ್ರಿಯಲ್ಲವಾದರೂ, ತೇರ್ಗಡೆಯಾಗುವುದೇ ಒಂದು ಹೆಮ್ಮೆಯ ಸಂಗತಿ. ಒಮ್ಮೆ ತೇರ್ಗಡೆಯಾದರೆ ಅದು ಜೀವಮಾನದ ಅರ್ಹತೆ - ಅದಕ್ಕೆ expiry date ಇಲ್ಲ; ಅವಕಾಶ ಕೂಡಿ ಬಂದಾಗ ಈ ಅರ್ಹತೆ ಬೆನ್ನಿಗೆ ನಿಲ್ಲುತ್ತದೆ. ಖಾಸಗಿ ಕಾಲೇಜುಗಳೂ ನೆಟ್ ತೇರ್ಗಡೆಯಾದ ಅಭ್ಯರ್ಥಿಗಳಿಗೇ ಮಣೆ ಹಾಕುತ್ತವೆ. ಅತ್ಯುನ್ನತ ಶ್ರೇಣಿಯಲ್ಲಿ ನೆಟ್ ತೇರ್ಗಡೆಯಾದವರು ಪಿಎಚ್‍ಡಿ ಸಂಶೋಧನೆ ಕೈಗೊಳ್ಳುವುದಕ್ಕೆ ಸರ್ಕಾರದಿಂದ ಆಕರ್ಷಕ ಶಿಷ್ಯವೇತನ (JRF) ಪಡೆಯುವುದೂ ನೆಟ್ ಜನಪ್ರಿಯತೆಗೆ ಇನ್ನೊಂದು ಕಾರಣ.

ಕಷ್ಟದ ಪರೀಕ್ಷೆಯೇ?

ಕಷ್ಟವೆನ್ನುವವರಿಗೆ ಕಷ್ಟ, ಸುಲಭವೆನ್ನುವವರಿಗೆ ಸುಲಭ. ಈಜು ಬಲ್ಲವರಿಗೆ ಅದೊಂದು ಆಟ, ನಿಂತು ನೋಡುವವರಿಗೆ ಆತಂಕ. ಆದರೆ ಇದು ಎಂ.ಎ., ಎಂಎಸ್ಸಿ ಪರೀಕ್ಷೆಗಳನ್ನು ಬರೆದಂತೆ ಅಲ್ಲ. ರಾಷ್ಟೀಯ ಅರ್ಹತಾ ಪರೀಕ್ಷೆ. ತೇರ್ಗಡೆಯಾದವರು ದೇಶದ ಯಾವ ಭಾಗದಲ್ಲಾದರೂ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಬಹುದು. ಸ್ನಾತಕೋತ್ತರ ಹಂತದ ಪಠ್ಯಕ್ರಮವೇ ಆದರೂ, ಪರೀಕ್ಷಾ ವಿಧಾನ ಹಾಗೂ ಪ್ರಶ್ನೆಗಳ ಸಂಕೀರ್ಣತೆಯಿಂದಾಗಿ ಗಟ್ಟಿ ಮನಸ್ಸು, ಅಪಾರ ಬದ್ಧತೆ ಹಾಗೂ ಶ್ರದ್ಧೆಯ ತಯಾರಿಯನ್ನು ಅಪೇಕ್ಷಿಸುತ್ತದೆ.

ಯಾರು ಬರೆಯಬಹುದು?

ಸ್ನಾತಕೋತ್ತರ ಪದವೀಧರರು ಅಥವಾ ಅದರ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವವರು ಈ ಪರೀಕ್ಷೆ ಬರೆಯಬಹುದು. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಶೇ. 55, ಒಬಿಸಿ/ಎಸ್‍ಸಿ/ಎಸ್‍ಟಿ ಅಭ್ಯರ್ಥಿಗಳು ಶೇ. 50 ಅಂಕ ಪಡೆದಿರಬೇಕು. ಸ್ನಾತಕೋತ್ತರ ಪದವಿ ಅಂತಿಮ ವರ್ಷದಲ್ಲೇ ನೆಟ್ ತೇರ್ಗಡೆಯಾದರೆ, ಪದವಿ ಫಲಿತಾಂಶ ಬಂದಮೇಲಷ್ಟೇ ಅರ್ಹತಾ ಪ್ರಮಾಣಪತ್ರ ದೊರೆಯುತ್ತದೆ. 

ನೆಟ್ ಬರೆದು ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯುವುದಕ್ಕೆ ಗರಿಷ್ಠ ವಯೋಮಿತಿ ಇಲ್ಲ. ಆದರೆ ಸಂಶೋಧನಾ ಫೆಲೋಷಿಪ್ (ಜೆಆರ್‍ಎಫ್) ಪಡೆಯಲು ಅರ್ಹರಾಗಬೇಕೆಂದರೆ 30 ವರ್ಷದ ಒಳಗಿನವರಾಗಿರಬೇಕು. ಒಬಿಸಿ/ಎಸ್‍ಸಿ/ಎಸ್‍ಟಿ/ಭಿನ್ನಲಿಂಗಿ ಅಭ್ಯರ್ಥಿಗಳಿಗೆ 35 ವರ್ಷದವರೆಗೆ ಅವಕಾಶವಿದೆ.

ಹೇಗಿರುತ್ತದೆ ನೆಟ್?

ಈಗ ಎನ್‍ಇಟಿ ಪರೀಕ್ಷೆ ಆನ್‍ಲೈನ್ ಮಾದರಿಯಲ್ಲಿ ನಡೆಯುತ್ತದೆ. ಕಲೆ/ವಾಣಿಜ್ಯ/ಸಾಹಿತ್ಯ ವಿಷಯಗಳಲ್ಲಿ ಎರಡು ಪ್ರತ್ಯೇಕ ಪತ್ರಿಕೆಗಳಿದ್ದು ಒಟ್ಟು ಮೂರು ಗಂಟೆಯ ಅವಧಿ ಇರುತ್ತದೆ. ಪ್ರಶ್ನೆಗಳು ಬಹುಆಯ್ಕೆಯ ವಸ್ತುನಿಷ್ಠ ಮಾದರಿಯವು. ಮೊದಲನೇ ಪತ್ರಿಕೆ ಎಲ್ಲ ವಿಷಯಗಳ ಅಭ್ಯರ್ಥಿಗಳಿಗೂ ಸಾಮಾನ್ಯ. ಇದರಲ್ಲಿ ಎರಡು ಅಂಕಗಳ 50 ಪ್ರಶ್ನೆಗಳಿದ್ದು ಅವು ಬೋಧನೆ ಹಾಗೂ ಸಂಶೋಧನ ಕೌಶಲಗಳಿಗೆ ಸಂಬಂಧಪಟ್ಟವು. ಎರಡನೇ ಪತ್ರಿಕೆ ಆಯಾ ಅಭ್ಯರ್ಥಿಗಳ ಸ್ನಾತಕೋತ್ತರ ಪದವಿಯಲ್ಲಿ ಓದಿದ ವಿಷಯಗಳಿಗೆ ಸಂಬಂಧಪಟ್ಟವು; ಉದಾ: ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಕನ್ನಡ, ಇಂಗ್ಲಿಷ್, ಇತ್ಯಾದಿ. ಇದರಲ್ಲಿ ತಲಾ ಎರಡು ಅಂಕಗಳ 100 ಪ್ರಶ್ನೆಗಳಿರುತ್ತವೆ. ಎರಡೂ ಪರೀಕ್ಷೆಗಳ ನಡುವೆ ಬ್ರೇಕ್ ಇಲ್ಲ. ಪ್ರಶ್ನೆಗಳ ನಡುವೆ ಆಯ್ಕೆ ಇಲ್ಲ, ನೆಗೆಟಿವ್ ಮಾರ್ಕಿಂಗ್ ಕೂಡ ಇಲ್ಲ.

ವಿಜ್ಞಾನ ವಿಷಯಗಳಲ್ಲಿ ಮೂರು ಗಂಟೆ ಅವಧಿಯ ಒಂದೇ ಪರೀಕ್ಷೆ. ಎರಡು ಪತ್ರಿಕೆಗಳಿಲ್ಲ. 200 ಅಂಕಗಳ ಬಹು ಆಯ್ಕೆಯ ವಸ್ತುನಿಷ್ಠ ಮಾದರಿಯ ಪತ್ರಿಕೆ. ಇದರಲ್ಲಿ ಮೂರು ವಿಭಾಗಗಳಿರುತ್ತವೆ: ಮೊದಲನೇ ಭಾಗ (30 ಅಂಕ) ಎಲ್ಲರಿಗೂ ಸಾಮಾನ್ಯ; ಎರಡನೇ ಭಾಗ (70 ಅಂಕ) ಅವರವರ ಎಂಎಸ್ಸಿ ವಿಷಯಗಳಿಗೆ ಸಂಬಂಧಿಸಿದ್ದು; ಮೂರನೇ ಭಾಗ (100 ಅಂಕ) ಅದೇ ವಿಷಯ, ಕೊಂಚ ಹೆಚ್ಚಿನ ಸಂಕೀರ್ಣತೆ ಹೊಂದಿರುವ ಪ್ರಶ್ನೆಗಳಿರುತ್ತವೆ. ಇಲ್ಲಿ ಪ್ರಶ್ನೆಗಳ ಆಯ್ಕೆಯೂ ಇರುತ್ತದೆ, ನೆಗೆಟಿವ್ ಮಾರ್ಕಿಂಗ್ ಕೂಡ ಇರುತ್ತದೆ.

ತಯಾರಿ ಹೇಗೆ?

ಎನ್‍ಇಟಿ ಪರೀಕ್ಷೆಗೆ ಕನಿಷ್ಠ ಆರು ತಿಂಗಳ ಗಂಭೀರ ತಯಾರಿ ಬೇಕು. ಮಾನವಿಕ ವಿಷಯಗಳ ಪಠ್ಯಕ್ರಮ www.ugcnetonline.in ಜಾಲತಾಣದಲ್ಲಿಯೂ, ವಿಜ್ಞಾನ ವಿಷಯಗಳ ಪಠ್ಯಕ್ರಮ https://csirhrdg.res.in ಜಾಲತಾಣದಲ್ಲಿಯೂ ಲಭ್ಯವಿದೆ. ತಯಾರಿಯ ಮೊದಲು ಪಠ್ಯಕ್ರಮದ ಸಂಪೂರ್ಣ ಪರಿಚಯ ಮಾಡಿಕೊಳ್ಳುವುದು ಅಗತ್ಯ.

ನೆಟ್ ಸಾಮಾನ್ಯ ಪತ್ರಿಕೆಯ ಪಠ್ಯಕ್ರಮದಲ್ಲಿ 10 ಅಧ್ಯಾಯಗಳಿವೆ. ಬೋಧನೆ ಹಾಗೂ ಸಂಶೋಧನೆಯ ಕೌಶಲ, ವಿಷಯ ಗ್ರಹಿಕೆ, ಸಂವಹನ, ಪ್ರಾಥಮಿಕ ಗಣಿತ, ತಾರ್ಕಿಕ ಚಿಂತನೆ, ದತ್ತಾಂಶ ವಿಶ್ಲೇಷಣೆ, ಮಾಹಿತಿ ಸಂವಹನ ತಂತ್ರಜ್ಞಾನ (ICT), ಅಭಿವೃದ್ಧಿ ಮತ್ತು ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆ- ಹೀಗೆ ವೈವಿಧ್ಯಮಯ ವಿಷಯಗಳಿರುತ್ತವೆ. ಐಚ್ಛಿಕ ವಿಷಯದ ಪಠ್ಯಕ್ರಮ ಸ್ನಾತಕೋತ್ತರ ಕೋರ್ಸಿಗೆ ಸಮಾನವಾಗಿದ್ದು, ಸಮಗ್ರ ಹಾಗೂ ಆಳವಾದ ಅಧ್ಯಯನ ಅಗತ್ಯ.

ಒಂದು ವೇಳಾಪಟ್ಟಿಯನ್ನು ಹಾಕಿಕೊಂಡು ದಿನದಲ್ಲಿ ಕನಿಷ್ಠ 3-4 ಗಂಟೆಯನ್ನಾದರೂ ಅಭ್ಯಾಸಕ್ಕೆ ಮೀಸಲಿಡುವುದು ಒಳ್ಳೆಯದು. ಪರೀಕ್ಷೆ ವಸ್ತುನಿಷ್ಠ ಮಾದರಿಯದ್ದಾಗಿರುವುದರಿಂದ ಸಣ್ಣಸಣ್ಣ ವಿವರಗಳಿಗೂ ಹೆಚ್ಚಿನ ಗಮನ ಕೊಡುವುದು ಮುಖ್ಯ. ಓದುತ್ತಲೇ ನೋಟ್ಸ್ ಮಾಡಿಕೊಳ್ಳುವುದು ಕೊನೆಯ ಕ್ಷಣದ ರಿವಿಶನ್‍ಗೆ ಬಹಳ ಅಗತ್ಯ. ಈಗ ಮಾರುಕಟ್ಟೆಯಲ್ಲಿ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಪುಸ್ತಕಗಳು ಲಭ್ಯ. ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಗೊಂದಲಕ್ಕೆ ಬೀಳುವುದಕ್ಕಿಂತ ಉತ್ತಮ ಗುಣಮಟ್ಟದ ಒಂದೋ ಎರಡೋ ಪುಸ್ತಕ ಸಾಕು. 

ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ ಅತ್ಯಂತ ಮುಖ್ಯ. ಕನಿಷ್ಠ 7-8 ವರ್ಷಗಳ ಹಿಂದಿನ ಎಲ್ಲ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಕಲಿತರೆ ಪರೀಕ್ಷೆ ತೇರ್ಗಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಆಯಾ ಪರೀಕ್ಷೆಗಳ ವೆಬ್‍ಸೈಟಿನಿಂದ ಅನೇಕ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆ ನೋಡಿದರೆ ಈ ಪರೀಕ್ಷೆಗೆ ಪ್ರತ್ಯೇಕ ಕೋಚಿಂಗ್ ಅನಿವಾರ್ಯವೇನೂ ಅಲ್ಲ. ಪರಿಶ್ರಮಪಟ್ಟು ಸ್ವಂತ ಅಧ್ಯಯನ ಮಾಡಿದರೆ ಸಾಕು. ಈಗಂತೂ ಇಂಟರ್ನೆಟ್ಟಲ್ಲಿ ಧಾರಾಳ ಅಭ್ಯಾಸ ಸಾಮಗ್ರಿಗಳು, ಮಾಕ್ ಟೆಸ್ಟ್ ಗಳು ದೊರೆಯುತ್ತವೆ. ತೀರಾ ಅರ್ಥವಾಗದ ವಿಷಯಗಳಿದ್ದರೆ ಸ್ನೇಹಿತರ ಅಥವಾ ಅಧ್ಯಾಪಕರ ಬಳಿ ಪಾಠ ಹೇಳಿಸಿಕೊಳ್ಳಬಹುದು. ವಿದ್ಯಾರ್ಥಿಗಳಾಗಿರುವಾಗಲೇ ನೆಟ್ ಬರೆಯುವುದು ತಯಾರಿ ದೃಷ್ಟಿಯಿಂದ ತುಂಬ ಒಳ್ಳೆಯದು.

ಏನಿದು ಜೆಆರ್‍ಎಫ್?

ನೆಟ್ ಪರೀಕ್ಷೆಯನ್ನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಜೂನಿಯರ್ ರಿಸರ್ಚ್ ಫೆಲೋಷಿಪ್ (JRF) ಎಂಬ ಬಂಪರ್ ಬಹುಮಾನವಿದೆ. ಪಿಎಚ್‍ಡಿ ಮಾಡಲು ಯುಜಿಸಿ ಪ್ರತೀ ತಿಂಗಳೂ ಕೈತುಂಬ ಫೆಲೋಷಿಪ್ ನೀಡುತ್ತದೆ. ಮೊದಲ ಎರಡು ವರ್ಷ ಪ್ರತೀ ತಿಂಗಳೂ ರೂ. 31,000, ಮುಂದಿನ ಮೂರು ವರ್ಷ (SRF) ಪ್ರತೀ ತಿಂಗಳೂ ರೂ. 35,000 ಲಭ್ಯ. ಬೇರೆ ಭತ್ಯೆಗಳೂ ಇವೆ. ಯಾವ ಉದ್ಯೋಗ ಹಿಡಿಯುವ ಆತಂಕವೂ ಇಲ್ಲದೆ ನೆಮ್ಮದಿಯಾಗಿ ಸಂಶೋಧನೆಯಲ್ಲಿ ನಿರತರಾಗಬಹುದು. ಜೆಆರ್‍ಎಫ್ ಬಯಸುವವರು ನೆಟ್ ಅರ್ಜಿ ತುಂಬುವಾಗ ಮಾತ್ರ ‘ಅಸಿಸ್ಟೆಂಟ್ ಪ್ರೊಫೆಸರ್ & ಜೆಆರ್‍ಎಫ್’ ಎಂಬ ಅಂಕಣವನ್ನು ಕಡ್ಡಾಯ ತುಂಬಬೇಕು. ಕೇವಲ ‘ಅಸಿಸ್ಟೆಂಟ್ ಪ್ರೊಫೆಸರ್’ ಎಂದು ತುಂಬಿದರೆ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದರೂ ಫೆಲೋಷಿಪ್‍ಗೆ ಪರಿಗಣಿಸುವುದಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಮೇ 9, 2022

ಮೌಲ್ಯಗಳ ಮಹಾಸಾಗರ ವಿಶ್ವಕವಿ ರವೀಂದ್ರರು

7-13 ಮೇ 2022ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ

ಎಲ್ಲಿ ಮನಕಳುಕಿರದೊ, ಎಲ್ಲಿ ತಲೆಬಾಗಿರದೊ,
ಎಲ್ಲಿ ತಿಳಿವಿಗೆ ತೊಡಕು ತೋರದಿರುವಲ್ಲಿ;
ಎಲ್ಲಿ ಮನೆಯಿಕ್ಕಟ್ಟು, ಸಂಸಾರ ನೆಲೆಗಟ್ಟು,
ದೂಳೊಡೆಯದಿಹುದೊ, - ತಾನಾ ನಾಡಿನಲ್ಲಿ

ಹೀಗೆ ಮುಂದುವರಿಯುತ್ತದೆ ವಿಶ್ವಕವಿ ರವೀಂದ್ರರ ‘ಪ್ರಾರ್ಥನೆ’ ಎಂಬ ಪ್ರಸಿದ್ಧ ಗೀತೆ (ಕನ್ನಡಾನುವಾದ ಎಂ. ಎನ್. ಕಾಮತ್). ತಮ್ಮ ಸುಂದರ ನಾಡಿನ ಕನಸನ್ನು ಬಿಚ್ಚಿಡುತ್ತಲೇ ಕೊನೆಗೆ, ‘ಅಲ್ಲಿಯಾ ಬಂಧನರಹಿತ ಸುಖದ ಸ್ವರ್ಗದಲಿ, ಪಾಲಿಸೈ ಪಿತ! ನಮ್ಮ ನಾಡೆಚ್ಚರಿಸಲಿ’ ಎಂದು ಮುಕ್ತಾಯಗೊಳಿಸುತ್ತಾರೆ. ಇದು ಅವರಿಗೆ ನೋಬೆಲ್ ಪ್ರಶಸ್ತಿ ತಂದುಕೊಟ್ಟ ‘ಗೀತಾಂಜಲಿ’ಯ ಕವಿತೆಗಳಲ್ಲೊಂದು ಕೂಡ.

ಹಾಗೆ ನೋಡಿದರೆ, ‘ಗೀತಾಂಜಲಿ’ಯಲ್ಲಿರುವ ಎಲ್ಲ ಕವಿತೆಗಳೂ ‘ಪ್ರಾರ್ಥನೆ’ಗಳೇ. ಅವೆಲ್ಲವೂ ರವೀಂದ್ರರು ತಮ್ಮ ಕಲ್ಪನೆಯ ದೇವರೆದುರು ಮಾಡಿಕೊಂಡ ನಿವೇದನೆಗಳೇ. ‘ನಿನ್ನ ಕರುಣೆಗೆಣೆಯಿಲ್ಲ ಪ್ರಭುವೆ/ ನೀನೆನ್ನ ಅನಂತವಾಗಿಸಿರುವೆ/ ಕಾಯವೆಂಬ ಗಡಿಗೆಯ ಖಾಲಿಯಾಗಿಸಿ/ ನವ ಚೈತನ್ಯವ ತುಂಬಿರುವೆ// ಬರಿದೆ ಬಿದ್ದ ಕೊಳಲು ನಾನು/ ಗಿರಿ ಗಹ್ವರಕೆ ಕೊಂಡೊಯ್ವೆ ನೀನು/ ಹೊಸಗಾಳಿಯ ಉಸಿರ ತುಂಬಿ/ ಜೀವರಾಗ ನೀ ನುಡಿಸಿರುವೆ’ ಎಂದು ಒಂದೆಡೆ ಹೇಳಿದರೆ, ಇನ್ನೊಂದೆಡೆ ‘ನಿನ್ನ ಕಾಣ್ಕೆಯಲಿ ನನ್ನ ಕವಿತನದ ಬಿಮ್ಮು ನಾಚಿ ಅಳಿಯಿತು’ ಎನ್ನುತ್ತಾರೆ. ಮತ್ತೊಂದೆಡೆ, ‘ಪ್ರಾರ್ಥಿಸುವೆ ನಿನ್ನ ಪ್ರಭುವೆ/ ಬಡಿಬಡಿದು ಎಚ್ಚರಿಸು/ ನನ್ನೆದೆಯ ಅರಿವಿನ ಬೇರು’ ಎಂದು ಬೇಡಿಕೊಳ್ಳುತ್ತಾರೆ (ಎಲ್ಲವೂ ಸುಧಾ ಅಡುಕಳ ಅವರ ಕನ್ನಡಾನುವಾದ).

ಅವರಿಗೆ ದೇವರೆಂದರೆ ಶುದ್ಧ ನಿರಾಕಾರ ಸ್ವರೂಪಿ; ಅಂತರಂಗವನ್ನು ಬೆಳಗುವ, ಒಳಗನ್ನು ಸದಾ ಎಚ್ಚರದಲ್ಲಿರಿಸುವ ಅಗೋಚರ ಶಕ್ತಿ. ಒಂದು ವೇಳೆ ಭಗವಂತನನ್ನು ಪ್ರತ್ಯಕ್ಷವಾಗಿ ನೋಡುವುದು ಸಾಧ್ಯವಾದರೆ ಅದು ಪ್ರಕೃತಿಯ ಮೂಲಕ ಎಂಬುದು ಅವರು ಕೊನೆಯವರೆಗೂ ಇಟ್ಟುಕೊಂಡಿದ್ದ ನಂಬಿಕೆ. ಅವರ ಕೃತಿಗಳಲ್ಲೆಲ್ಲ ಗಾಢವಾಗಿ ಎದ್ದುಕಾಣುವುದು ಪ್ರಕೃತಿಯೆಡೆಗಿನ ಅನಂತ ಪ್ರೇಮ.

ಗುರುದೇವ, ಕವಿಗುರು, ವಿಶ್ವಕವಿ- ಹೀಗೆಲ್ಲ ಜಗತ್ತಿನಿಂದ ಕರೆಸಿಕೊಂಡ ರವೀಂದ್ರನಾಥ ಟಾಗೋರ್ ಅಪ್ರತಿಮ ಪ್ರತಿಭಾವಂತರು ಮಾತ್ರವಲ್ಲ, ಮಹಾನ್ ದಾರ್ಶನಿಕರು ಕೂಡ. ಅವರ ಕೃತಿಗಳಲ್ಲೆಲ್ಲ ಮತ್ತೆಮತ್ತೆ ಕಾಣುವುದು ಮಾನವೀಯ ಮೌಲ್ಯಗಳ ನಿರಂತರ ಹುಡುಕಾಟ, ಪ್ರಕೃತಿಯೊಂದಿಗೆ ಒಂದಾಗಿ ಬಿಡಬೇಕೆನ್ನುವ ಎಡೆಬಿಡದ ತುಡಿತ. ‘ಪ್ರಕೃತಿಯಿಂದ ದೂರವಾದವನೇ ನಿಜವಾದ ಬಡವ. ಪ್ರಕೃತಿಯೊಂದಿಗೆ ಬಾಳುವುದೆಂದರೆ ದೇವರೊಂದಿಗೆ ಇರುವುದು. ಪ್ರಕೃತಿ ಮಾತ್ರ ಮನುಷ್ಯನ ಭೌತಿಕ ಹಾಗೂ ಮಾನಸಿಕ ಗಾಯಗಳನ್ನು ಗುಣಪಡಿಸಬಲ್ಲುದು’ ಎಂಬುದು ರವೀಂದ್ರರ ಗಟ್ಟಿ ನಂಬಿಕೆಯಾಗಿತ್ತು. ತಮ್ಮ ದಿನಚರಿಯ ಬಹುಭಾಗವನ್ನೂ ಅವರು ಪ್ರಕೃತಿಯ ನಡುವೆಯೇ ಕಳೆಯುತ್ತಿದ್ದವರು. ಗೋಡೆಗಳ ಅವಶ್ಯಕತೆ ಅವರಿಗೆ ಇರಲಿಲ್ಲ. ಗಿಡ, ಮರ, ಬಳ್ಳಿ, ಹೂವು, ತೊರೆ, ಬಿಸಿಲು, ನೆರಳುಗಳ ಮೂಲಕ ತಮ್ಮ ಕಲ್ಪನೆಯ ಲೋಕವನ್ನು ವಿಸ್ತರಿಸಿಕೊಳ್ಳಬಹುದಾದ ಭಾವಜಗತ್ತೊಂದು ಅವರೊಳಗೆ ಸದಾ ಜೀವಂತವಾಗಿತ್ತು.

ಸ್ವತಃ ಔಪಚಾರಿಕ ಶಿಕ್ಷಣವನ್ನು ಪಡೆಯದ ಟಾಗೋರರಿಗೆ ತರಗತಿ ಕೊಠಡಿಗಳ ಪಾಠಪ್ರವಚನಗಳಲ್ಲಿ ವಿಶೇಷವಾದ ಆಸಕ್ತಿಯೂ ಇರಲಿಲ್ಲ. ಅನುಭವಕ್ಕಿಂತ ದೊಡ್ಡ ಗುರುವಿಲ್ಲ, ಪ್ರಕೃತಿಗಿಂತ ದೊಡ್ಡ ಪಾಠಶಾಲೆಯಿಲ್ಲ ಎಂಬುದೇ ಅವರು ಬದುಕಿನಲ್ಲಿ ಕಂಡುಕೊಂಡ ಸತ್ಯ. ಅವರು ಸ್ಥಾಪಿಸಿದ ಶಾಂತಿನಿಕೇತನ ಅಂತಹದೊಂದು ನಂಬಿಕೆಯ ಅನುಷ್ಠಾನದ ಪ್ರಯತ್ನವೂ ಆಗಿತ್ತು. ಅವರು ತರಗತಿ ಕೊಠಡಿಗಳಿಂದಾಚೆ, ಮರಗಿಡಗಳ ಮಧ್ಯೆ ಕುಳಿತೇ ತಮ್ಮ ಶಿಷ್ಯರೊಂದಿಗೆ ಸಂವಾದ ನಡೆಸುತ್ತಿದ್ದರು.  ‘ಮಾಹಿತಿಯನ್ನಷ್ಟೇ ಕೊಡುವುದು ಶಿಕ್ಷಣ ಅಲ್ಲ. ಸೃಷ್ಟಿಯೊಂದಿಗೆ ಸೌಹಾರ್ದತೆಯಿಂದ ಬದುಕಲು ಕಲಿಯುವುದೇ ಅತ್ಯುನ್ನತವಾದ ಶಿಕ್ಷಣ’ ಅದು ಅವರ ಕಾಣ್ಕೆ.

ಪರಮ ಧಾರ್ಮಿಕರಾದರೂ, ಗುಡಿ-ವಿಗ್ರಹಗಳಿಂದಾಚೆ ದೇವರ ಇರವನ್ನು ಕಾಣಬಲ್ಲವರಾಗಿದ್ದರು. ದೇವರನ್ನು ಹಾಗೆ ಕಾಣಲು ಸಾಧ್ಯವಾಗಬೇಕು ಎಂಬುದೇ ಅವರ ಒಟ್ಟಾರೆ ಪ್ರತಿಪಾದನೆ ಕೂಡ. 

ಜಪಮಾಲೆಯ ಮಣಿಗಳನ್ನು ಎಣಿಸುತ್ತಾ
ಮಂತ್ರಗಳನ್ನು ಗೊಣಗುವುದನ್ನು ನಿಲ್ಲಿಸು
ಬಾಗಿಲು ಮುಚ್ಚಿ, ಕತ್ತಲೆಯಲ್ಲಿ ಕುಳಿತು 
ಏಕಾಂಗಿಯಾಗಿ ಯಾರನ್ನು ಸ್ತುತಿಸುವೆ?
ಕಣ್ತೆರೆದು ನೋಡು! ದೇವರು ನಿನ್ನೆದುರು ಇಲ್ಲ
ಅವನು...
ಬರಡು ನೆಲವ ನೇಗಿಲಿನಿಂದ ಹಸನುಗೊಳಿಸುತ್ತಿರುವವನೊಂದಿಗಿದ್ದಾನೆ
ಕಲ್ಲುಬಂಡೆಗಳ ಒಡೆದು ದಾರಿ ಮಾಡುವವನೊಂದಿಗಿದ್ದಾನೆ
ಬಿಸಿಲು ನೆರಳುಗಳ ಪರಿವೆಯಿಲ್ಲದೇ ದುಡಿಯುವವರೊಂದಿಗಿದ್ದಾನೆ

(ಕನ್ನಡಾನುವಾದ: ಸುಧಾ ಅಡುಕಳ)

ಎಂದು ಹೇಳುವಾಗ ರವೀಂದ್ರರಿಗೂ ‘ದುಡಿಮೆಯೇ ದೇವರು’ ಆಗಿತ್ತೆನ್ನುವುದು ಸ್ಪಷ್ಟ. ಗುಡಿಯೊಳಗೆ ದೇವರಿದ್ದಾನೆಯೇ ಎಂಬ ಪ್ರಶ್ನೆಗಿಂತಲೂ ಹೊರಗೆ ದುಡಿಯುವವರ ಕಸುವಲ್ಲಿ ದೇವರಿದ್ದಾನೆ ಎಂಬ ಅರಿವು ಅವರಿಗೆ ಮುಖ್ಯ. 

ರವೀಂದ್ರರನ್ನು ಅತ್ಯಂತ ಸೂಕ್ತವಾಗಿ ಏನೆಂದು ಗುರುತಿಸಬಹುದು? ಕವಿ? ಲೇಖಕ? ನಾಟಕಕಾರ? ಸಮಾಜ ಸುಧಾರಕ? ಕಾದಂಬರಿಕಾರ? ತತ್ತ್ವಜ್ಞಾನಿ? ಚಿತ್ರಕಾರ? ಅವರು ಅದೆಲ್ಲವೂ ಆಗಿದ್ದರು. ಒಂದರೊಳಗೆ ಇನ್ನೊಂದು ಬೆಸೆದುಕೊಂಡ ಅಸಾಧಾರಣ ವ್ಯಕ್ತಿತ್ವ ಅವರದ್ದು. ಒಂದರಿಂದ ಇನ್ನೊಂದನ್ನು ಬೇರ್ಪಡಿಸಲಾಗದು. ಅವರ ಗದ್ಯಗಳಲ್ಲಿ ಒಂದು ಕಾವ್ಯವಿದೆ, ಕಾವ್ಯದೊಳಗೊಂದು ದರ್ಶನವಿದೆ. ನಾಟಕ, ಕಾದಂಬರಿ, ಪ್ರಬಂಧ, ಚಿತ್ರ – ಯಾವುದನ್ನು ಎತ್ತಿಕೊಂಡರೂ ಅಲ್ಲೊಂದು ಮಾನವಪ್ರೀತಿಯ ಒರತೆಯಿದೆ.

‘ಮನುಷ್ಯನನ್ನು ಪ್ರೀತಿಸದ ಹೊರತು ನಾವು ಎಂದಿಗೂ ನಿಜವಾದ ದೃಷ್ಟಿಕೋನವನ್ನು ಹೊಂದಲು ಸಾಧ್ಯವಿಲ್ಲ. ನಾಗರಿಕತೆಯನ್ನು ಗೌರವಿಸಬೇಕಿರುವುದು ಅದು ಅಭಿವೃದ್ಧಿಪಡಿಸಿದ ಶಕ್ತಿಯ ಪ್ರಮಾಣದಿಂದಲ್ಲ; ಬದಲಾಗಿ, ಅದು ಎಷ್ಟು ವಿಕಾಸಗೊಂಡಿದೆ ಮತ್ತು ಮಾನವ ಜನಾಂಗದ ಪ್ರೀತಿಗೆ ಎಷ್ಟರಮಟ್ಟಿನ ಅಭಿವ್ಯಕ್ತಿ ನೀಡಿದೆ ಎಂಬುದರ ಮೇಲೆ’ ಎಂಬುದು ವಿಶ್ವಕವಿಯ ಮಾತು.

ವಿಶ್ವಮಾನವತೆಯ ಮಹಾಮಾದರಿಯೊಂದನ್ನು ಕಟ್ಟಿಕೊಟ್ಟದ್ದು ರವೀಂದ್ರರು. ಅವರು ಎಲ್ಲರನ್ನೂ ಪ್ರೀತಿಸಬಲ್ಲವರಾಗಿದ್ದರು. ವಿಶ್ವದ ಶ್ರೇಷ್ಠ ವ್ಯಕ್ತಿತ್ವಗಳೊಂದಿಗೆ ಸಂವಾದ ನಡೆಸಬಲ್ಲವರಾಗಿದ್ದರು. ಗಾಂಧೀಜಿಯವರೊಂದಿಗೆ ಒಂದಷ್ಟು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಅವರು ಪ್ರತಿಪಾದಿಸಿದ ಸತ್ಯ ಮತ್ತು ಅಹಿಂಸೆಯನ್ನು ಸದಾ ಬೆಂಬಲಿಸಿದರು. ವಿಶ್ವವಿಖ್ಯಾತ ವಿಜ್ಞಾನಿ ಐನ್‌ಸ್ಟೀನ್‌ರೊಂದಿಗೆ ಜಗತ್ತನ್ನು ಮುನ್ನಡೆಸುವ ಶಕ್ತಿಯ ಕುರಿತು ಚರ್ಚಿಸಿದರು. ‘ಪಶ್ಚಿಮದ ನಾಗರಿಕತೆ ಇಂಥದೊಂದು ಸಾಹಿತ್ಯ ಕೃತಿಗಾಗಿ [ಗೀತಾಂಜಲಿ] ಬಹುದಿನಗಳಿಂದ ಪ್ರಾರ್ಥಿಸುತ್ತಿತ್ತು’ ಎಂಬ ಪ್ರಶಂಸೆಯನ್ನು ಇಂಗ್ಲೀಷ್‌ನ ಪ್ರಸಿದ್ಧ ಕವಿ ಡಬ್ಲ್ಯು. ಬಿ. ಯೇಟ್ಸ್ ನಿಂದ ಪಡೆದುಕೊಂಡರು. ಭಾರತವನ್ನು ಅಪಾರವಾಗಿ ಪ್ರೀತಿಸಿದರೂ ಅವರಿಗೆ ಪಶ್ಚಿಮದ ಕುರಿತು ಅಗೌರವ ಇರಲಿಲ್ಲ. ಪೂರ್ವ-ಪಶ್ಚಿಮ ಎರಡನ್ನೂ ಸಮನ್ವಯದ ದೃಷ್ಟಿಯಿಂದ ನೋಡಬೇಕು ಎಂಬುದೇ ಅವರ ಪ್ರತಿಪಾದನೆ ಆಗಿತ್ತು. ‘ಎಲ್ಲ ಶ್ರೇಷ್ಠ ಮಾನವೀಯ ಮೌಲ್ಯಗಳಿಗೆ ಒಂದು ಕೌಟುಂಬಿಕ ಬಂಧವಿದೆ. ಈ ಮೌಲ್ಯಗಳು ರಾಷ್ಟ್ರಗಳ ಮಧ್ಯೆ ಪರಸ್ಪರ ಬೆಸೆದುಕೊಳ್ಳಬೇಕು’ ಎಂದಿದ್ದರು ಅವರು.

ಅವರು ಬಡವರಿಗಾಗಿ ಮಿಡಿದರು. ಅಶಕ್ತರಲ್ಲಿ ಸಹಾನುಭೂತಿ ಹೊಂದಿದರು. ಮನುಷ್ಯಪ್ರೀತಿಯ ಶ್ರೇಷ್ಠತೆಯನ್ನು ನಂಬಿದರು. ಕುಲೀನ ಮನೆತನದಿಂದ ಬಂದರೂ ಸರಳವಾಗಿಯೇ ಬದುಕಿದರು. ಭವಿಷ್ಯದ ಬಗ್ಗೆ ಅಪಾರ ಆಶಾವಾದ ಹೊಂದಿದ್ದರು. ಇವುಗಳನ್ನೆಲ್ಲ ತಮ್ಮ ಕವಿತೆ, ನಾಟಕಗಳಲ್ಲಿ ನಿರಂತರ ಅಭಿವ್ಯಕ್ತಿಸಿದರು. ಪುರಾಣ ಪಾತ್ರಗಳನ್ನೆಲ್ಲ ವರ್ತಮಾನದ ಬೆಳಕಿನಲ್ಲಿ ನೋಡುವ ನಮ್ಯತೆಯನ್ನೂ ಆಧುನಿಕ ಮನೋಭಾವವನ್ನೂ ಹೊಂದಿದ್ದರು. ಜಂಜಡಗಳಿಂದ ತುಂಬಿರುವ ಇಂದಿನ ಜಗತ್ತಿಗೆ ರವೀಂದ್ರರು ಹಚ್ಚಿದ ಬೆಳಕು ನೆಮ್ಮದಿಯ ಹಾದಿ ತೋರಬಲ್ಲುದು.

- ಸಿಬಂತಿ ಪದ್ಮನಾಭ ಕೆ. ವಿ.