ಶುಕ್ರವಾರ, ಡಿಸೆಂಬರ್ 24, 2021

ಸಾಹಿತ್ಯ ಪ್ರೀತಿ ಮತ್ತು ಹೊಸ ತಲೆಮಾರಿನ ವೈರುಧ್ಯ

ಡಿಸೆಂಬರ್ 2021ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಈಗಿನ ಯುವಜನರಲ್ಲಿ ಭಾಷೆ-ಸಾಹಿತ್ಯ ಪ್ರೀತಿ ಹೇಗಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಎರಡು ವೈರುಧ್ಯಗಳು ಗೋಚರಿಸುತ್ತವೆ: ಒಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಸಾಕಷ್ಟು ಅಭಿಮಾನ ಬೆಳೆಸಿಕೊಂಡಿರುವ, ಸಾಹಿತ್ಯದ ಅಧ್ಯಯನ ಮತ್ತು ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಯುವಜನತೆ; ಇನ್ನೊಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಯಾವ ಆದರಾಭಿಮಾನವೂ ಇಲ್ಲದ, ಬದುಕು ಹಾಗೂ ಭವಿಷ್ಯದ ಕುರಿತು ಹೇರಳವಾದ ಸಿನಿಕತೆಯನ್ನು ಬೆಳೆಸಿಕೊಂಡಿರುವ ಯುವಜನತೆ. ಈ ಎರಡು ಅಂಚುಗಳು ನಮ್ಮನ್ನು ಚಕಿತರನ್ನಾಗಿಯೂ, ವಿಷಣ್ಣರನ್ನಾಗಿಯೂ ಮಾಡುವುದಿದೆ. ಸಮಾಜದಲ್ಲಿರುವ ಎಲ್ಲರೂ ಏಕಪ್ರಕಾರವಾಗಿ ಸಾಹಿತ್ಯ-ಮಾನವಿಕಶಾಸ್ತ್ರಗಳ ಬಗ್ಗೆ ಪ್ರೀತಿಯನ್ನೋ ಅಭಿಮಾನವನ್ನೋ ಬೆಳೆಸಿಕೊಳ್ಳಬೇಕಾಗಿಲ್ಲ ನಿಜ, ಆದರೆ ಅವುಗಳಿಂದ ತೀರಾ ದೂರಸರಿದರೆ ಬದುಕಿಗೇನು ಸ್ವಾರಸ್ಯ? ನಾವಿರುವ ಕ್ಷೇತ್ರ, ಮಾಡುತ್ತಿರುವ ಉದ್ಯೋಗಗಳು ಭಿನ್ನವಾಗಿರಬಹುದು, ಆದರೆ ಭಾಷೆ-ಸಾಹಿತ್ಯದ ಪ್ರೀತಿ ಒಟ್ಟಾರೆ ಜೀವನಕ್ಕೆ ತಂದುಕೊಡುವ ವೈವಿಧ್ಯತೆ, ಜೀವಂತಿಕೆ, ಚೆಲುವು, ಒಲವುಗಳು ಸುಖಾಸುಮ್ಮನೆ ಹೇಗೆ ಬರುವುದು ಸಾಧ್ಯ?

ಇಂತಹದೊಂದು ಸನ್ನಿವೇಶ ಉದ್ಭವಿಸಲು ಏನು ಕಾರಣ ಎಂದು ಯೋಚಿಸಿದರೆ ಅನೇಕ ಅಂಶಗಳು ಕಣ್ಣಮುಂದೆ ಬರುತ್ತವೆ. ಕಾಲದ ಓಟದಲ್ಲಿ ನಾವು ಬಹಳ ದೂರ ಸಾಗಿ ಬಂದಿದ್ದೇವೆ. ಬದುಕಿನ ಉದ್ದೇಶ, ವಿಧಾನ, ದೃಷ್ಟಿಕೋನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಬದುಕಿನ ಮೊದಲ ಹದಿನೈದು-ಇಪ್ಪತ್ತು ವರ್ಷಗಳು ಅನೇಕ ಪ್ರಭಾವಗಳಿಂದ ಸುತ್ತುವರಿದಿವೆ. ಜೀವನ ರೂಪೀಕರಣಗೊಳ್ಳುವ ಈ ಸುವರ್ಣಕಾಲದಲ್ಲಿ ವಾಸ್ತವವಾಗಿಯೂ ಏನು ನಡೆಯುತ್ತಿದೆ ಎಂದು ನೋಡೋಣ.

ಕೌಟುಂಬಿಕ ವಾತಾವರಣ:

ಬಾಲ್ಯಕಾಲವು ನಮ್ಮ ಜೀವನವನ್ನು ನಿರ್ಧರಿಸುವ ಬಹುಮುಖ್ಯ ಘಟ್ಟ ಎಂಬುದನ್ನು ಎಲ್ಲರೂ ಬಲ್ಲೆವು. ಈ ಬಾಲ್ಯ ಎಷ್ಟರಮಟ್ಟಿಗೆ ಬಾಲ್ಯವಾಗಿ ಉಳಿದಿದೆ? ಯೋಚಿಸಿದರೆ ಅನೇಕ ಸಲ ಆತಂಕವಾಗುತ್ತದೆ. ಸಮಾಜದ ವಿನ್ಯಾಸ, ಚಲನೆ, ಚಟುವಟಿಕೆಗಳು ಬದಲಾಗಿವೆ. ಕುಟುಂಬದ ಸ್ವರೂಪದಲ್ಲಿ ಮಹತ್ವದ ಸ್ಥಿತ್ಯಂತರಗಳುಂಟಾಗಿವೆ. ಕೂಡುಕುಟುಂಬಗಳು ಇಲ್ಲವೇ ಇಲ್ಲ ಎಂಬಷ್ಟು ಇಲ್ಲ. ನ್ಯೂಕ್ಲಿಯರ್ ಕುಟುಂಬಗಳ ದೆಸೆಯಲ್ಲಿ ಅಜ್ಜಿ, ತಾತ, ಅತ್ತೆ, ಮಾವ, ದೊಡ್ಡಪ್ಪ, ಚಿಕ್ಕಮ್ಮ, ಅತ್ತಿಗೆ, ಸೊಸೆ ಇತ್ಯಾದಿ ಸಂಬಂಧಗಳೆಲ್ಲ ಬಹುತೇಕ ಹೊರಟುಹೋಗಿವೆ. ಪರಿಚಯವಾಗುವ ಹೊಸ ವ್ಯಕ್ತಿ ಒಂದೋ ಅಂಕಲ್ ಇಲ್ಲವೇ ಆಂಟಿ. 

ಕೌಟುಂಬಿಕ ಸಮಾರಂಭಗಳು, ಹಬ್ಬ-ಹರಿದಿನಗಳು ಇತ್ಯಾದಿಗಳೆಲ್ಲ ಮಾಯವಾಗಿವೆ; ಇದ್ದರೂ ಎಲ್ಲವೂ ಯಾಂತ್ರಿಕ, ಎಲ್ಲದರಲ್ಲೂ ವಾಣಿಜ್ಯಕ ದೃಷ್ಟಿಕೋನ. ಎಲ್ಲರೂ ತಮ್ಮ ಉದ್ಯೋಗ, ಸಾಧನೆಗಳಲ್ಲಿ ವ್ಯಸ್ತರಾಗಿದ್ದಾರೆ. ಬಾಲ್ಯಕಾಲದಲ್ಲಿ ವ್ಯಕ್ತಿಯ ಭಾವಪೋಷಣೆ ಮಾಡುವ ಸಹಜ ಸುಂದರ ವಾತಾವರಣ ಈಗ ಹಳ್ಳಿಗಳಲ್ಲೂ ಉಳಿದುಕೊಂಡಿಲ್ಲ. ಮನೆಗಳಲ್ಲಿ ಪತ್ರಿಕೆ, ಪುಸ್ತಕ ಓದುವ ವಾತಾವರಣ ಇದ್ದರೆ ಮಕ್ಕಳಲ್ಲೂ ಆ ಪ್ರೀತಿ ಸಹಜವಾಗಿಯೇ ಬೆಳೆಯುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಬದುಕನ್ನು ಸ್ಪರ್ಧೆಯನ್ನಾಗಿ ತೆಗೆದುಕೊಂಡಿರುವ ಅನೇಕ ಕುಟುಂಬಗಳಲ್ಲಿ ಇಂತಹ ಸನ್ನಿವೇಶ ನಿಧಾನಕ್ಕೆ ಮರೆಯಾಗುತ್ತಿದೆ. ದೊರೆತ ಅಲ್ಪಸ್ವಲ್ಪ ಸಮಯವನ್ನು ಮೊಬೈಲ್, ಟಿವಿಗಳು ಆವರಿಸಿಕೊಂಡಿವೆ.

ಶಾಲಾ ಪರಿಸರ:

ಮೊದಲ ಪಾಠಶಾಲೆಯೆನಿಸಿದ ಮನೆಯಲ್ಲಿ ಆರಂಭವಾದ ಭಾವಪೋಷಣೆ ಶಾಲೆಯಲ್ಲಿ ಮುಂದುವರಿಯಬೇಕು; ಅದು ಎರಡನೆಯ ಮನೆ, ಅಥವಾ ಮನೆಯ ವಿಸ್ತರಣೆ. ಆದರೆ ಅಂತಹ ವಾತಾವರಣವೂ ಉಳಿದುಕೊಂಡಿಲ್ಲ. ಬದುಕಿನ ವೇಗದ ಓಟಕ್ಕೆ ಶಾಲೆಯಲ್ಲಿಯೇ ಟೊಂಕ ಕಟ್ಟಿಯಾಯಿತು. ಇದು ಸ್ಪರ್ಧಾತ್ಮಕ ಜಗತ್ತು, ನೀನು ಓಡದೇ ಇದ್ದರೆ ಹಿಂದೆ ಉಳಿಯುತ್ತೀಯಾ ಎಂಬ ಮಂತ್ರಪಠನೆ ಅಲ್ಲಿಯೇ ಆರಂಭವಾಗುತ್ತದೆ. ಅಲ್ಲಿಗೆ ಪಠ್ಯಪುಸ್ತಕ, ಪರೀಕ್ಷೆಗಳ ಹೊರತಾಗಿ ಬೇರೇನೂ ಬೇಡ ಎಂಬ ಮನಸ್ಥಿತಿ ಮೂಡಿಯಾಯಿತು; ಈ ಮಕ್ಕಳಿಗೆ ಇನ್ನೇನೂ ಮುಖ್ಯವಲ್ಲ. ಮೊದಲಾದರೆ ಆರಂಭದ ಆರು ವರ್ಷದ ಅವಧಿಯಾದರೂ ಮನೆಯಲ್ಲಿಯೇ ಕಳೆದುಹೋಗುತ್ತಿತ್ತು. ಈಗ ಮಗುವಿಗೆ ಉಸಿರಾಡಲೂ ಸಮಯವಿಲ್ಲ. ಅಂಬೆಗಾಲಿಕ್ಕುವ ಮಗು ಹಾಗೆ ಎದ್ದುನಿಲ್ಲಲು ಪ್ರಯತ್ನಿಸುವ ಹೊತ್ತಿಗೆ ಪ್ಲೇಹೋಂ ಸೇರಿಯಾಯಿತು. ಆಮೇಲೆ ಪ್ರೀನರ್ಸರಿ, ನರ್ಸರಿ, ಕೇಜಿಗಳ ಗೌಜು ಆರಂಭ. ಹಾಗೆ ಕಳೆದುಹೋದ ಮಗು ಮತ್ತೆ ಕೈಗೆ ಸಿಗುವುದೇ ಇಲ್ಲ.

ಬದಲಾದ ವಿದ್ಯಾರ್ಥಿ ಜೀವನ:

ದಶಕಗಳ ಹಿಂದೆ ಶಾಲಾ-ಕಾಲೇಜುಗಳಲ್ಲಿ ಭಾಷೆ-ಸಾಹಿತ್ಯ-ಸಂಸ್ಕೃತಿಯ ಪ್ರೀತಿ ಪೋಷಣೆಗೆ ಹೇರಳ ಅವಕಾಶಗಳಿದ್ದವು. ವಾರಕ್ಕೊಂದಾದರೂ ಚರ್ಚಾಕೂಟ, ಆಗಿಂದಾಗ್ಗೆ ಸ್ಪರ್ಧೆಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಸ, ಸಂಭ್ರಮದ ವಾರ್ಷಿಕೋತ್ಸವ- ಎಲ್ಲವೂ ವಿದ್ಯಾರ್ಥಿ ಬದುಕಿನ ಭಾಗವಾಗಿದ್ದವು. ಈಗ ಅವುಗಳಿಗೆ ಬಿಡುವಿಲ್ಲ, ಇದ್ದರೂ ಎಲ್ಲವೂ ಪ್ರಚಾರಕ್ಕಾಗಿ ಎಂಬಷ್ಟು ಕೃತಕ.

ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆ ಎಂಬುದೇ ಇಲ್ಲ. ಗ್ರಂಥಾಲದ ಅವಧಿ, ಆಟದ ಅವಧಿಗಳಿಲ್ಲ. ಅನೇಕ ಶಾಲೆ-ಕಾಲೇಜುಗಳಲ್ಲಿ ಗ್ರಂಥಾಲಯಗಳೇ ಇಲ್ಲ. ಲಕ್ಷಗಟ್ಟಲೆ ಶುಲ್ಕ ಪೀಕುವ ಸಂಸ್ಥೆಗಳು ಎಲ್ಲವನ್ನೂ ‘ರೆಡಿ-ಟು-ಈಟ್’ ಮಾದರಿಯಲ್ಲಿ ವಿದ್ಯಾರ್ಥಿಗಳೆದುರು ತಂದು ಸುರಿಯುತ್ತಿರುವಾಗ ಅವರಿಗೆ ಗ್ರಂಥಾಲಯ ಅವಶ್ಯಕ ಎಂದು ಅನಿಸುವುದೂ ಇಲ್ಲ. ಗ್ರಂಥಾಲಯ ಮಾಡಿ ಜಾಗ ಕಳೆಯುವ ಬದಲು ಹೊಸದೊಂದು ಸೆಕ್ಷನ್ ತೆರೆಯಬಹುದಲ್ಲ ಎಂಬುದೇ ಈ ಸಿರಿ ಗರ ಬಡಿದ ಆಡಳಿತ ಮಂಡಳಿಗಳ ಯೋಚನೆ.

ವೃತ್ತಿಪರ ಕೋರ್ಸೇ ಸರ್ವಸ್ವ:

ಸ್ಪರ್ಧೆಯಲ್ಲಿ ಗೆಲ್ಲುವುದೇ ಶ್ರೇಷ್ಠ ಎಂಬ ಭಾವನೆ ಬಿತ್ತುವುದರ ಜೊತೆಗೆ ಈ ಶಿಕ್ಷಣ ಸಂಸ್ಥೆಗಳು ವೃತ್ತಿಪರ ಕೋರ್ಸುಗಳಿಂದಲೇ ಜೀವನ ಉದ್ಧಾರವೆಂಬ ಭಾವನೆಯನ್ನು ವಿದ್ಯಾರ್ಥಿಗಳಲ್ಲೂ ಪೋಷಕರಲ್ಲೂ ಪರಿಣಾಮಕಾರಿಯಾಗಿ ಬೆಳೆಸಿಬಿಟ್ಟಿವೆ. ಇದರ ಹಿಂದಿರುವುದು ಇವರ ದುಡ್ಡಿನ ದುರಾಸೆಯ ರಾಜಕಾರಣ. ಇಂತಹದೊಂದು ಮನಸ್ಥಿತಿಯನ್ನು ಬೆಳೆಸದೆ ಹೋದರೆ ಲಕ್ಷಗಟ್ಟಲೆ ಶುಲ್ಕ ವಿಧಿಸುವುದಾದರೂ ಹೇಗೆ?

ಎಂಬಲ್ಲಿಗೆ ಇಂಟರ್‍ನ್ಯಾಷನಲ್ ಶಾಲೆ-ಕಾಲೇಜುಗಳ ಮೆರವಣಿಗೆ, ಎಂಟನೇ ತರಗತಿಯಿಂದಲೇ ಇಂಜಿನಿಯರಿಂಗ್-ಮೆಡಿಕಲ್ ಸೀಟುಗಳಿಗೆ ತರಬೇತಿ, ಇದೇ ಅಧ್ಯಾಪಕರು ಹೊರಗೆ ತಮ್ಮದೇ ಕೋಚಿಂಗೆ ಸೆಂಟರುಗಳನ್ನು ತೆರೆದು ಕೋಚಿಂಗ್‍ಗೆ ಸೇರದ ವಿದ್ಯಾರ್ಥಿಗಳು ನಿಷ್ಪ್ರಯೋಜಕರು ಎಂಬ ಭಾವನೆಯನ್ನು ಬಿತ್ತುವುದು: ಎಲ್ಲವೂ ಆರಂಭವಾಯಿತು. ಜತೆಗೆ ವೃತ್ತಿಪರ ಕೋರ್ಸುಗಳನ್ನು ಓದುವವರಿಗೆ ಭಾಷಾ ಪಾಠಗಳು ಮುಖ್ಯವಲ್ಲ ಎಂಬ ಭಾವನೆಯನ್ನೂ ವ್ಯವಸ್ಥಿತವಾಗಿ ಬಿತ್ತುವ ಪ್ರವೃತ್ತಿ ಆರಂಭವಾಯಿತು. ಇವರಿಗೆಲ್ಲ ಭಾಷಾ ಶಿಕ್ಷಕರುಗಳು ಎಂದರೆ ಉಳಿದ ಅಧ್ಯಾಪಕರಿಗೆ ಪಾಠದ ನಡುವೆ ಕೊಂಚ ವಿರಾಮ ಒದಗಿಸುವ ಗ್ಯಾಪ್ ಫಿಲ್ಲರುಗಳು ಮತ್ತು ವಿದ್ಯಾರ್ಥಿಗಳಿಗೆ ಒಂದಿಷ್ಟು ನಿರಾಳತೆ ನೀಡುವ ಹಾಸ್ಯಗಾರರು.

ಅಧ್ಯಾಪಕರು ಹೇಗಿದ್ದಾರೆ?

ವಿದ್ಯಾರ್ಥಿಗಳಲ್ಲಿ ಸಾಹಿತ್ಯ-ಸಂಸ್ಕೃತಿ-ಭಾಷೆಗಳ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವಲ್ಲಿ ಅಧ್ಯಾಪಕರ ಪಾತ್ರವೂ ಮಹತ್ವದ್ದು. ಈ ವಿಚಾರದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂದರೆ ಮತ್ತೆ ಅಲ್ಲಿಯೂ ಕಾಡುವುದು ನಿರಾಶೆಯೇ. ಪ್ರಾಥಮಿಕ ಶಾಲೆಯಲ್ಲಿ ಭಾಷೆಯನ್ನು ಸುಪುಷ್ಟವಾಗಿ ಬೋಧಿಸುವ ಕೆಲಸ ಬಹುತೇಕ ಕಡೆ ಯಶಸ್ವಿಯಾಗಿ ನಡೆದಿಲ್ಲ. ಅಧ್ಯಾಪಕರೇ ಸಮರ್ಪಕವಾಗಿ ಕಲಿತಿಲ್ಲವೋ, ಮಕ್ಕಳಿಗೆ ಕಲಿಸುವಲ್ಲಿ ಆಸಕ್ತಿ-ಬದ್ಧತೆಗಳಿಲ್ಲವೋ, ಅಂತೂ ಎಲ್ಲಿ ಗಟ್ಟಿ ತಳಹದಿ ದೊರೆಯಬೇಕಿತ್ತೋ ಅಲ್ಲಿ ದೊರೆಯುತ್ತಿಲ್ಲ. ಇದೇ ಸಡಿಲ ಪಾಯದೊಂದಿಗೆ ಮಕ್ಕಳು ಪ್ರೌಢಶಾಲೆ, ಅಲ್ಲಿಂದ ಪಿಯುಸಿ, ಅಲ್ಲಿಂದ ಕಾಲೇಜುಗಳಿಗೆ ಭಡ್ತಿ ಪಡೆಯುತ್ತಿದ್ದಾರೆ. ಆಗಿರುವ ತಪ್ಪುಗಳಿಗೆ ಒಬ್ಬರು ಇನ್ನೊಬ್ಬರೆಡೆಗೆ ಬೆರಳು ತೋರಿಸುವ ಕೆಲಸ ನಡೆಯುತ್ತಿದೆಯೇ ಹೊರತು ಆತ್ಮಾವಲೋಕನ ನಡೆಸಲು ಯಾರೂ ಸಿದ್ಧರಿಲ್ಲ. ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲೂ ಕಾಗುಣಿತ ತಿದ್ದಿಲ್ಲ, ಸ್ವತಂತ್ರವಾಗಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಲು ಬರುತ್ತಿಲ್ಲ ಎಂದರೆ ಏನರ್ಥ?

ಅಧ್ಯಾಪಕರು ಮನಸ್ಸು ಮಾಡಿದರೆ ಭಾಷೆ, ಸಾಹಿತ್ಯ ಎರಡರ ಕಡೆಗೂ ಮಕ್ಕಳನ್ನು ಧಾರಾಳವಾಗಿ ಸೆಳೆಯಬಹುದು. ಪ್ರೌಢಶಾಲೆ, ಕಾಲೇಜು ಹಂತದಲ್ಲಂತೂ ಇದಕ್ಕೆ ಹೇರಳ ಅವಕಾಶ ಇದೆ. ಸಾಹಿತ್ಯ ಪ್ರೀತಿ ಮೂಡಿಸುವ ನಾಲ್ಕು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಕಡೇ ಪಕ್ಷ ತಮ್ಮ ವಿದ್ಯಾರ್ಥಿಗಳಿಗೆ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿಸುವುದು, ಅವರು ಆ ಬಗ್ಗೆ ವಿಚಾರ ವಿನಿಮಯ ಮಾಡುವಂತೆ ನೋಡಿಕೊಳ್ಳುವುದು- ಇಷ್ಟನ್ನು ಮಾಡಿದರೂ ಹೊಸ ತಲೆಮಾರಿನ ಹುಡುಗರಿಗೆ ಉಪಕಾರ ಮಾಡಿದ ಪುಣ್ಯ ಅವರಿಗೆ ಸಲ್ಲುತ್ತದೆ. ಆದರೆ ಅವರಿಗೇ ಸ್ವತಃ ಭಾಷೆ-ಸಾಹಿತ್ಯಗಳ ಮೇಲೆ ಅಭಿಮಾನ ಇಲ್ಲದೇ ಹೋದರೆ ಮುಂದಿನದನ್ನು ಮಾತಾಡುವುದು ವ್ಯರ್ಥ. ಸಂಬಳ, ಭಡ್ತಿ, ವರ್ಗಾವಣೆ- ವೃತ್ತಿಜೀವನಕ್ಕೆ ಮುಖ್ಯವಾದ ವಿಚಾರಗಳು ನಿಜ, ಆದರೆ ಉಳಿದ ಉದ್ಯೋಗಗಳಿಗಿಂತ ಭಿನ್ನವಾದ ಬದ್ಧತೆಯೊಂದು ಅಧ್ಯಾಪಕರಿಗೆ ಇದೆಯಲ್ಲ?

ಪಠ್ಯಪುಸ್ತಕಗಳ ಕಥೆ 

ಪ್ರಾಥಮಿಕ ಹಂತದಿಂದ ತೊಡಗಿ ಉನ್ನತಶಿಕ್ಷಣದವರೆಗೆ ಪಠ್ಯಪುಸ್ತಕಗಳ ಸ್ವರೂಪವೇ ಬದಲಾಗಿದೆ. ಮೂವತ್ತು ವರ್ಷಗಳ ಹಿಂದಿನ ಪಠ್ಯವನ್ನೇ ಈಗಲೂ ಬೋಧಿಸಲು ಬರುತ್ತದೆಯೇ ಎಂಬುದು ನ್ಯಾಯವಾದ ಪ್ರಶ್ನೆ. ಆದರೆ ಕಾಲ ಎಷ್ಟೇ ಬದಲಾದರೂ ಶಿಕ್ಷಣದ ಮೂಲ ಉದ್ದೇಶ ಬದಲಾಗಬಾರದಲ್ಲ? ಹೊಸ ಕಾಲಕ್ಕೆ ಹೊಂದುವ ನೆಪದಲ್ಲಿ, ಹೊಸ ಚಿಂತನೆಗಳನ್ನು ಬೆಳೆಸುವ ನೆಪದಲ್ಲಿ ನಾವು ಪಠ್ಯಪುಸ್ತಕಗಳ ಸೊಗಸನ್ನೇ ಹಾಳುಗೆಡವಿದ್ದೇವೆಯೇ ಎಂದು ಅನೇಕ ಸಲ ಅನಿಸುವುದಿದೆ. 

ಖಾಸಗಿ ಶಾಲೆಗಳ ದರ್ಬಾರಿನಲ್ಲಂತೂ ಪಠ್ಯಪುಸ್ತಕಗಳಲ್ಲಿ ವಿವಿಧ ಮಾದರಿಗಳು ಬಂದಿವೆ. ಒಂದೊಂದು ಶಾಲೆ ಒಂದೊಂದು ‘ಕಂಪೆನಿ’ಯ ಪಠ್ಯಕ್ರಮವನ್ನು ಅನುಸರಿಸುವುದೂ ಇದೆ. ಈ ಪುಸ್ತಕಗಳೆಲ್ಲ ಬಣ್ಣಬಣ್ಣ, ಫಳಫಳ, ಸಾಮಾನ್ಯರ ಕೈಗೆ ಎಟುಕದಷ್ಟು ತುಟ್ಟಿ. ಹಾಗೆ ನೋಡಿದರೆ ಅವುಗಳಲ್ಲಿರುವ ಹೂರಣವೂ ಚೆನ್ನಾಗಿದೆ, ಆದರೆ ದಶಕದ ಹಿಂದೆ ಇರುತ್ತಿದ್ದ ಪಠ್ಯಗಳ ಸೊಗಸು ಅಲ್ಲಿ ಕಾಣುತ್ತಿಲ್ಲ. ಅವೆಲ್ಲ ಮುಗ್ಧತೆ ಮಾಸಿದ ಮಕ್ಕಳಂತೆ ಪೇಲವವಾಗಿವೆ ಎನಿಸುತ್ತದೆ. ಬಾಲ್ಯಕ್ಕೆ ತರ್ಕಕ್ಕಿಂತಲೂ ಭಾವಪೋಷಣೆಯೇ ಮುಖ್ಯವಲ್ಲವೇ?

ಹೊಸ ಸಾಧ್ಯತೆಗಳು

ಕಾಲದೊಂದಿಗೆ ಓದು-ಅಧ್ಯಯನದ ಸ್ವರೂಪ ಬದಲಾಗಿದೆ. ಮಾಧ್ಯಮಗಳು ಬದಲಾಗಿವೆ. ಹೊಸ ತಲೆಮಾರಿನ ಆಯ್ಕೆಗಳು ಬದಲಾಗಿವೆ. ಎಲ್ಲವನ್ನೂ ಮುದ್ರಿತ ಪುಸ್ತಕ ರೂಪದಲ್ಲೇ ಓದಬೇಕಾಗಿಲ್ಲ. ಯುವಕರು ಅಂತರಜಾಲವನ್ನು ಧಾರಾಳವಾಗಿ ಬಳಸುತ್ತಿದ್ದಾರೆ. ಅಂತರಜಾಲದ ಬಳಕೆಯೂ ಸಾಹಿತ್ಯದ ಓದಿನ ಒಂದು ಪ್ರಮುಖ ಭಾಗ ಆಗಿರಬಹುದು. ಪುಸ್ತಕಗಳು ಡಿಜಿಟಲ್ ರೂಪದಲ್ಲಿ, ಆಡಿಯೋ ರೂಪದಲ್ಲಿ ದೊರೆಯುತ್ತಿವೆ. ಹೊಸ ತಲೆಮಾರಿಗೆ ಅವುಗಳನ್ನು ಬಳಸುವುದು ಸುಲಭವೆನಿಸಬಹುದು. ಹೀಗಾಗಿ ಇಂದಿನ ವಿದ್ಯಾರ್ಥಿಗಳು ಮುದ್ರಿತ ಪುಸ್ತಕಗಳನ್ನು ಓದುವುದು ಕಡಿಮೆಯಾಗಿದೆ ಎಂದು ತೀರಾ ಆತಂಕಪಡುವ ಅಗತ್ಯವೇನೂ ಇಲ್ಲ. ಆದರೆ ಈ ಪ್ರವೃತ್ತಿಯಲ್ಲಾದರೂ ಇರುವವರ ಸಂಖ್ಯೆ ಎಷ್ಟು ಎಂದು ಯೋಚಿಸಬೇಕು.

ಕಂಪ್ಯೂಟರ್, ಮೊಬೈಲ್ ಬಳಸುವ ಯುವಕರೆಲ್ಲರೂ ಅವುಗಳನ್ನು ಸಾಹಿತ್ಯ-ಭಾಷೆ ಇತ್ಯಾದಿಗಳ ಅಭ್ಯಾಸಕ್ಕೂ ಬಳಸುತ್ತಿದ್ದಾರೆ ಎಂದು ಹೇಳಲು ಬರುವುದಿಲ್ಲ. ಬಹುಪಾಲು ಮಂದಿ ಸೋಶಿಯಲ್ ಮೀಡಿಯಾದಲ್ಲಿ, ವೀಡಿಯೋ ಗೇಮ್‍ಗಳಲ್ಲಿ ಕಳೆದುಹೋಗುತ್ತಿದ್ದಾರೆ. ಆಧುನಿಕ ಮಾಧ್ಯಮಗಳನ್ನು ಬಳಸುತ್ತಿರುವ ಈ ತಲೆಮಾರು ಅವುಗಳನ್ನು ಒಳ್ಳೆಯ ಓದು, ಅಧ್ಯಯನಕ್ಕೆ ಬಳಸುವಂತೆ ಮಾಡುವ ಜವಾಬ್ದಾರಿ ನಾಗರಿಕ ಸಮಾಜಕ್ಕೆ ಇದೆ.

ಕೊರೋನೋತ್ತರ ಕಾಲದಲ್ಲಂತೂ ಶಿಕ್ಷಣ-ಸಂವಹನದ ಪರಿಕರಗಳು ಆಮೂಲಾಗ್ರ ಬದಲಾವಣೆ ಕಂಡಿವೆ. ಗೂಗಲ್ ಮೀಟ್, ಜೂಮ್‍ನಂತಹ ಆನ್ಲೈನ್ ವೇದಿಕೆಗಳು ಪ್ರಸಿದ್ಧಿಗೆ ಬಂದಿವೆ. ಇವುಗಳು ಭಾಷೆ, ಸಾಹಿತ್ಯ, ಸಮಾಜ ಹಿತಚಿಂತನೆಯ ಸಂವಾದಗಳಿಗೂ ಒಳ್ಳೆಯ ವೇದಿಕೆಗಳಾಗಿ ಬಳಕೆಯಾಗುತ್ತಿವೆ. ಕ್ಲಬ್‍ಹೌಸಿನಂತಹ ಪರಿಕರಗಳನ್ನೂ ಒಳ್ಳೆಯ ಅಧ್ಯಯನಕೂಟಗಳನ್ನಾಗಿ ಬಳಸಿಕೊಳ್ಳುವುದಕ್ಕೆ ಅವಕಾಶವಿದೆ. ಉಪಕ್ರಮ ವಹಿಸುವವರಿದ್ದರೆ ಅವರನ್ನು ಅನುಸರಿಸುವ ಮಂದಿಯೂ ಇರುತ್ತಾರೆ. ಇಂತಹ ಸಾಕಷ್ಟು ಪ್ರಯತ್ನಗಳೂ ವಿದ್ಯಾರ್ಥಿಗಳ ನಡುವೆ, ಯುವತಲೆಮಾರಿನ ನಡುವೆ ಈಚೆಗೆ ನಡೆಯುತ್ತಿವೆ. ಒಳ್ಳೆಯದು ಎಲ್ಲಿ, ಹೇಗೆ ನಡೆದರೂ ಸಂತೋಷದ ವಿಷಯವೇ. ಆದರೆ ಇವೆಲ್ಲ ಆರಂಭಶೂರತನ ಆಗಬಾರದು ಅಷ್ಟೇ.

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಡಿಸೆಂಬರ್ 22, 2021

ಶುಭಾಶಯಗಳ ನಡುವೆ ಬಂದ ಒಂದು ವಿಷಾದಪತ್ರ

ಹ್ಯಾಪಿ ಬರ್ತ್ ಡೇ ಹ್ಯಾಪಿ ಬರ್ತ್ ಡೇ.. ಒಂದರ ಮೇಲೊಂದು ಬರುತ್ತಿದ್ದ ಭರಪೂರ ಸಂದೇಶಗಳ ನಡುವೆ ಒಂದು ವಿಷಾದಪತ್ರವೂ
ನುಸುಳಿಕೊಂಡಿತ್ತು.

ಅದು ನವದೆಹಲಿಯ ಫುಲ್'ಬ್ರೈಟ್ ಕಮೀಷನ್ನಿಂದ ಬಂದ ಈ-ಮೇಲು: "2022-23ರ Fulbright-Nehru Postdoctoral Research Fellowshipಗಾಗಿ ನೀವು ಸಲ್ಲಿಸಿದ ಅರ್ಜಿ ಮುಂದಿನ ಪ್ರಕ್ರಿಯೆಗೆ ಆಯ್ಕೆಯಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ಪ್ರತೀ ಅರ್ಜಿಯ ಬಗ್ಗೆ ನಿರ್ದಿಷ್ಟ ಪ್ರತಿಕ್ರಿಯೆ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ, ಕ್ಷಮಿಸಿ. ನಿಮ್ಮ ಭವಿಷ್ಯದ ಶೈಕ್ಷಣಿಕ ಹಾಗೂ ವೃತ್ತಿ ಬದುಕಿಗೆ ಶುಭಾಶಯಗಳು." ಇದು ಪತ್ರದ ಸಾರಾಂಶ.

ಪಾಸು-ಫೇಲು ಎರಡಕ್ಕೂ ಸಿದ್ಧನಿದ್ದ ವಿದ್ಯಾರ್ಥಿಯಂತೆ ನಾನು ಫಲಿತಾಂಶವನ್ನು ನೋಡಿದ್ದರಿಂದ ಅದು ನನ್ನ ಮೇಲೆ ಅಂತಹ ಪರಿಣಾಮವನ್ನೇನೂ ಬೀರಲಿಲ್ಲ. "ಮಾಹಿತಿ ನೀಡಿದ್ದಕ್ಕೆ ಧನ್ಯವಾದ. ಆದರೆ ಅರ್ಜಿಯ ಕುರಿತ ನಿರ್ದಿಷ್ಟ ಪ್ರತಿಕ್ರಿಯೆಯನ್ನೂ ತಿಳಿಸಿದ್ದರೆ ಸ್ವಸುಧಾರಣೆಗೆ ಅನುಕೂಲವಾಗುತ್ತಿತ್ತು" ಎಂದಷ್ಟೇ ಉತ್ತರಿಸಿ, ಫೆಲೋಶಿಪ್ಪಿನ ಪ್ರಸ್ತಾವನೆಯನ್ನು ಸಾಮುಗೊಳಿಸುವಲ್ಲಿ ನೆರವಾದ ಎಲ್ಲ ಹಿರಿಯರಿಗೆ, ಗೆಳೆಯರಿಗೆ ಈ ವರ್ತಮಾನವನ್ನು ತಿಳಿಸಿ ಸುಮ್ಮನಾದೆ.

ಹಣ್ಣಾಗದ ಹೂವಿನ ಕಥೆಯನ್ನು ಬಿತ್ತರಿಸಬೇಕೇ ಎಂದು ಯೋಚಿಸಿದೆ. ಆದರೆ ಹೇಳುವುದರಿಂದ ಇದರ ಬಗ್ಗೆ ಗೊತ್ತಿಲ್ಲದ ನಾಕು ಮಂದಿಗೆ ಮುಂದಕ್ಕೆ ಪ್ರಯೋಜನವಾಗಬಹುದು ಅನಿಸಿತು. ಹಾಗಾಗಿ ಈ ಪ್ರವರ.

Fulbright-Nehru Fellowship ಭಾರತ-ಅಮೇರಿಕ ಜಂಟಿಯಾಗಿ ಕೊಡಮಾಡುವ ಒಂದು ಪ್ರತಿಷ್ಠಿತ ಫೆಲೋಶಿಪ್. ವಿದ್ಯಾರ್ಥಿಗಳು, ಅಧ್ಯಾಪಕರು, ವೃತ್ತಿಪರರು ಉನ್ನತ ವ್ಯಾಸಂಗ ಹಾಗೂ ಸಂಶೋಧನೆ ನಡೆಸುವುದಕ್ಕೆ ವಿವಿಧ ವಿದ್ಯಾರ್ಥಿವೇತನಗಳನ್ನು ಪ್ರತಿವರ್ಷವೂ ನೀಡಲಾಗುತ್ತದೆ. ಇದು 1950ರಿಂದಲೂ ಚಾಲ್ತಿಯಲ್ಲಿದೆ. ಅಮೇರಿಕವು ಇತರ 150 ದೇಶಗಳೊಂದಿಗೆ ನಡೆಸುವ ಈ ಫೆಲೋಶಿಪ್ ಯೋಜನೆ ವಿಶ್ವದಲ್ಲೇ ಅತ್ಯಂತ ದೊಡ್ಡ ವಿದ್ಯಾರ್ಥಿವೇತನ ಯೋಜನೆಯೆಂಬ ಹೆಗ್ಗಳಿಕೆ ಹೊಂದಿದೆ.

ನನ್ನ ಕೆಲವು ಅಧ್ಯಾಪಕರು ಹಿಂದೆ ಈ ಫೆಲೋಶಿಪ್ಪಿಗೆ ಆಯ್ಕೆಯಾಗಿ ಅಮೇರಿಕಕ್ಕೆ ಹೋಗಿ ಸಂಶೋಧನೆ ನಡೆಸಿ ಬಂದ ವಿಚಾರದ ಹೊರತಾಗಿ, ಅದರ ಬಗ್ಗೆ ನನಗೆ ಇನ್ನೇನೂ ತಿಳಿದಿರಲಿಲ್ಲ. ಪಿಎಚ್.ಡಿ ಆದ ಮೇಲೆ ನಾನೂ ಒಮ್ಮೆ ಪ್ರಯತ್ನಿಸಬೇಕು ಎಂಬ ಕನಸು ಇಟ್ಟುಕೊಂಡಿದ್ದುಂಟು. ಈ ವರ್ಷ ಅದನ್ನು ಜಾರಿಗೊಳಿಸುವ ಸಂದರ್ಭ ಬಂತು.

ಅರ್ಜಿ ಸಲ್ಲಿಸುವ ಯೋಚನೆ ಗಟ್ಟಿಯಾದದ್ದೇ, ದಶಕಗಳ ಹಿಂದೆ ಈ ಫೆಲೋಶಿಪ್ ಪಡೆದ ಹಿರಿಯ ಪ್ರಾಧ್ಯಾಪಕರೊಂದಿಗೆ ಮಾತಾನಾಡಿ, ನನ್ನಂತಹ ಹುಲುಮಾನವರು ಇದಕ್ಕೆ ಪ್ರಯತ್ನಿಸಬಹುದೇ ಎಂದು ಚರ್ಚಿಸಿದೆ. ಅವರೆಲ್ಲ ತಮ್ಮ ಕಾಲದ ಅನುಭವಗಳನ್ನು ನೆನಪಿಸಿಕೊಂಡು “ಆ ಕಾಲ ಬೇರೆ, ಈ ಕಾಲ ಬೇರೆ. ಆದರೆ ಖಂಡಿತ ಪ್ರಯತ್ನಿಸು, ಚೆನ್ನಾಗಿ ತಯಾರಿ ಮಾಡು, ಆಲ್ ದಿ ಬೆಸ್ಟ್” ಅಂದರು. ಇದಕ್ಕೂ ಮೊದಲು ನಮ್ಮ ಹೋಂ ಮಿನಿಸ್ಟ್ರಿಗೆ ಸವಿನಯದಿಂದ ಅರ್ಜಿ ಸಲ್ಲಿಸಿ, “ಹೇಗೆ, ನಾನು ಒಂದು ವರ್ಷ ದೇಶ ಬಿಟ್ಟರೆ ಇಲ್ಲಿ ಪರವಾಗಿಲ್ಲವಾ?” ಎಂದು ತಗ್ಗಿಬಗ್ಗಿ ಕೇಳಿ ಅನುಮತಿ ಪಡೆದಿದ್ದೆ ಎಂದು ಬೇರೆ ಹೇಳಬೇಕಿಲ್ಲ. ಹೈಕಮಾಂಡ್ ಒಪ್ಪಿಗೆಯಿಲ್ಲದೆ ನಾವು ಒಂದು ಹೆಜ್ಜೆ ಹಿಂದೆ ಮುಂದೆ ಇಡುವುದಕ್ಕುಂಟಾ!

ಅಲ್ಲಿಂದ ತಯಾರಿ ಶುರು. ತಿಂಗಳಾನುಗಟ್ಟಲೆ ಪರಿಶ್ರಮ ಬಯಸುವ ಕೆಲಸ ಅದು. ಅತಿಂಥ ಸ್ಪರ್ಧೆಯಲ್ಲ ಅದು. ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ಪಿಗಂತೂ ಇಡೀ ದೇಶದಿಂದ ಆಯ್ಕೆಯಾಗುವವರು ಹತ್ತೋ ಹದಿನೈದೋ ಮಂದಿ. ಕಳೆದ ಕೆಲವು ವರ್ಷಗಳಲ್ಲಿ ಫೆಲೋಶಿಪ್ ಪಡೆದವರ ಬಯೋಡಾಟ ನೋಡಿದರೆ ಎದೆಯೊಳಗೆ ಸಣ್ಣ ನಡುಕ ಹುಟ್ಟುತ್ತಿತ್ತು. ಅವರೆಲ್ಲ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳಿಂದ ಹೊರಬಂದವರು.

ನೀರಿಗೆ ಇಳಿದವನಿಗೆ ಎಂಥಾ ಚಳಿ ಎಂದು ತಯಾರಿ ಶುರು ಮಾಡಿದೆ. ಅದು ಬರೀ ಅರ್ಜಿ ಬರೆವ ಕೆಲಸ ಅಲ್ಲ. ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರು ಮೆಚ್ಚುವ ಸಂಶೋಧನ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಬೇಕು. ಅದು ಅವರೇ ಸೂಚಿಸಿದ 23 ಕ್ಷೇತ್ರಗಳ ವ್ಯಾಪ್ತಿಯಲ್ಲೇ ಇರಬೇಕು. ನನ್ನ ದುರದೃಷ್ಟಕ್ಕೆ ನನ್ನ ಕ್ಷೇತ್ರವಾದ Mass Communication & Journalism ಅವರ ಪಟ್ಟಿಯಲ್ಲಿ ಇರಲಿಲ್ಲ. ಹಾಗಾಗಿ ಅಲ್ಲಿ ಕೊಟ್ಟಿರುವುದರಲ್ಲೇ ಯಾವುದಾದರೊಂದನ್ನು ಆಯ್ದುಕೊಳ್ಳಬೇಕು. ಸದ್ಯಕ್ಕೆ ಅವರು ಕೊಟ್ಟ ಪಟ್ಟಿಯಲ್ಲಿ Performing Arts ನನಗೆ ಸಮೀಪವೆನಿಸಬಲ್ಲ ಒಂದು ಕ್ಷೇತ್ರವಾಗಿತ್ತು. ಯಕ್ಷಗಾನ ಹಾಗೂ ಅಭಿವೃದ್ಧಿ ಸಂವಹನದ ವಿಚಾರವಾಗಿ ನಾನು ಪಿಎಚ್.ಡಿ ಮಾಡಿದ್ದರಿಂದ ಆ ನಿರ್ಧಾರಕ್ಕೆ ಬಂದೆ.

ಸರಿ; ನಾವು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ವಿಷಯ ಭಾರತ-ಅಮೇರಿಕ ಎರಡಕ್ಕೂ ಪ್ರಸ್ತುತವಾಗಬೇಕು. ನಮ್ಮ ವೃತ್ತಿಬದುಕಿಗೆ ಪೂರಕವಾಗಿರಬೇಕು. ಅದು ಆಯ್ಕೆ ಮಾಡಿಕೊಂಡ ಕ್ಷೇತ್ರದೊಳಗೆ ಬರಬೇಕು. ಅಂತಹದೊಂದು ವಿಷಯದ ಅಸ್ಪಷ್ಟ ಚಿತ್ರಣ ಸಿಗುವುದಕ್ಕೇ ಎರಡು ತಿಂಗಳು ಹಿಡಿಯಿತು. ಹಾಗೆ ಮಾಡಬಹುದೋ, ಹೀಗೆ ಮಾಡಬಹುದೋ ಎಂದು ಹತ್ತಾರು ಮಂದಿಯೊಂದಿಗೆ ಚರ್ಚಿಸಿದೆ. ಇದಕ್ಕಿಂತಲೂ ಪ್ರಮುಖ ಸವಾಲೆಂದರೆ, ಅರ್ಜಿ ಸಲ್ಲಿಸುವ ಮೊದಲೇ ಅಮೇರಿಕದ ಯಾರಾದರೂ ಒಬ್ಬ ಪ್ರಾಧ್ಯಾಪಕರಿಂದ ಅಲ್ಲಿಗೆ ಬರುವುದಕ್ಕೆ ನಮಗೆ ಆಹ್ವಾನ ಬೇಕು. ಯಾರನ್ನು ಕೇಳುವುದು? ನನಗೆ ಅಂತಹ ಸಂಪರ್ಕ ಇಲ್ಲ. ಗಾಡ್ ಫಾದರುಗಳೂ ಇಲ್ಲ. ಮೊದಲು ಅಂತಹವರೊಬ್ಬರನ್ನು ಹುಡುಕಬೇಕು, ಸಂಪರ್ಕಿಸಬೇಕು, ಅವರಿಗೆ ನಮ್ಮ ಸಂಶೋಧನ ಯೋಜನೆ ಇಷ್ಟವಾಗಬೇಕು, ಬೆಂಬಲಿಸಲು ಒಪ್ಪಬೇಕು, ಆಮೇಲೆ ಅವರ ಪತ್ರ ಕೇಳಬೇಕು.

ಆ ಕೆಲಸವನ್ನೂ ಜತೆಜತೆಗೇ ಮಾಡಿದೆ. ಅಮೇರಿಕದ ಟಾಪ್-50 ವಿಶ್ವವಿದ್ಯಾನಿಲಯಗಳ ಪಟ್ಟಿ ತಯಾರಿಸಿದೆ. ಅಲ್ಲಿನ Performing Arts/Mass Communication ವಿಭಾಗಗಳನ್ನು ಹುಡುಕಿ, ನನ್ನ ಆಸಕ್ತಿಗೆ ಸರಿಹೊಂದುವ ಪ್ರಾಧ್ಯಾಪಕರಿದ್ದಾರೆಯೇ ಎಂದು ನೋಡಿದೆ. ಏಳೆಂಟು ಮಂದಿಯನ್ನು ಶೋಧಿಸಿ, ಅವರಲ್ಲಿ ಅಂತಿಮವಾಗಿ ಮೂವರಿಗೆ ಮೈಲ್ ಮಾಡಿದೆ. ನನ್ನ ಪಿಎಚ್.ಡಿ.ಯ ಸಾರಾಂಶ, ಬಯೋಡಾಟಾ, ಅಲ್ಲಿಗೆ ಹೋಗಿ ಮಾಡಬೇಕು ಅಂದುಕೊಂಡಿರುವ ಸಂಶೋಧನೆ- ಇಷ್ಟನ್ನು ಕಳಿಸಿ, ನನಗೆ ಸಹಾಯ ಮಾಡುವಿರಾ ಎಂದು ಕೇಳಿಕೊಂಡೆ. ಆಶ್ಚರ್ಯ ಎನಿಸುವ ಹಾಗೆ ಒಬ್ಬರು ಪ್ರಾಧ್ಯಾಪಕರು ಮರುದಿನವೇ ಉತ್ತರಿಸಿದರು.

ಅವರೇ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ (ಬರ್ಕ್ಲೀ)ದ Theatre, Dance and Performance Studies ವಿಭಾಗ ಸಹಪ್ರಾಧ್ಯಾಪಕ ಡಾ. ಪೀಟರ್ ಗ್ಲೇಸರ್. ಆ ಪುಣ್ಯಾತ್ಮನ ಬಗ್ಗೆ ಇನ್ನೊಮ್ಮೆ ಪ್ರತ್ಯೇಕವಾಗಿ ಬರೆಯುತ್ತೇನೆ. ಅಂತಹ ವಿಶಿಷ್ಟ ವ್ಯಕ್ತಿ ಅವರು. ನಾನು ಯಾರೋ, ಅವರು ಯಾರೋ. ಈ ತುಮಕೂರೆಂಬ ಊರಲ್ಲಿರುವ ಪದ್ಮನಾಭ ಎಂಬ ಹುಲ್ಲುಕಡ್ಡಿಯ ಬಗ್ಗೆ ಅವರಿಗೆ ಯಾವ ಕಲ್ಪನೆಯೂ ಇರದು. ಯಾರ ರೆಫರೆನ್ಸೂ ಇಲ್ಲದೆ ಅವರನ್ನು ಸಂಪರ್ಕಿಸಿದ್ದೆ. “ನಿಮ್ಮ ಯೋಜನೆ ಆಸಕ್ತಿದಾಯಕವಾಗಿದೆ. ಆದರೆ ನಾನು ನಿಮ್ಮೊಂದಿಗೆ ಒಮ್ಮೆ ಮುಖಾಮುಖಿ ಮಾತಾಡಬೇಕು. ಸಾಧ್ಯವಾದಷ್ಟು ಬೇಗ ಒಂದು ಜೂಮ್ ಮೀಟಿಂಗ್ ಶೆಡ್ಯೂಲ್ ಮಾಡಿ” ಎಂದು ಉತ್ತರಿಸಿದರಲ್ಲದೆ, ಯಕ್ಷಗಾನ ಹಾಗೂ ಭಾರತೀಯ ರಂಗಭೂಮಿ ಕುರಿತಂತೆ ವಿದೇಶೀಯರು ನಡೆಸಿದ ಒಂದಷ್ಟು ಸಂಶೋಧನೆಗಳನ್ನೂ ಪ್ರಸ್ತಾಪಿಸಿದರು. ನಿಜವಾಗಿಯೂ ಬೇಸ್ತು ಬೀಳುವ ಸರದಿ ನನ್ನದಾಗಿತ್ತು. ಒಂದು ಗಂಟೆಯ ಮಾತುಕತೆ ಬಳಿಕ ನನ್ನ ಪ್ರಸ್ತಾವನೆಯನ್ನು ಬೆಂಬಲಿಸುವ ಭರವಸೆ ನೀಡಿದರು. ಆಮೇಲೆ ಎರಡು ಮೂರು ಬಾರಿ ಮೀಟಿಂಗ್ ನಡೆಸಿದ್ದುಂಟು; ಹತ್ತಾರು ಈಮೇಲುಗಳನ್ನು ವಿನಿಮಯ ಮಾಡಿದ್ದುಂಟು. ಅವರ ಶೈಕ್ಷಣಿಕ ಶಿಸ್ತು, ಮಾರ್ಗದರ್ಶನ ಮಾಡುವ ರೀತಿ ನೋಡಿಯೇ ಅಲ್ಲಿ ಖಂಡಿತ ಒಂದು ವರ್ಷ ಕಳೆಯಬೇಕೆಂದು ಆಸೆಪಟ್ಟೆ.

ಆಮೇಲೆ ನನ್ನ ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯಕ್ರಮ. ಮೂರೂವರೆಸಾವಿರ ಪದಗಳ ಪ್ರಸ್ತಾವನೆ ಬರೆಯುವುದಕ್ಕೆ ಮೂರೂವರೆ ತಿಂಗಳು ಹಿಡಿಯಿತು. ಬಹುಶಃ ರಾತ್ರಿ ಎರಡು ಗಂಟೆಯಲ್ಲದೆ ಮಲಗಿದ್ದೇ ಇಲ್ಲ. ಕೆಲವೊಮ್ಮೆ ಬೆಳಗಾದದ್ದೂ ಉಂಟು. ಅಷ್ಟೊಂದು ಕೆಲಸ ಅನಿವಾರ್ಯವಾಗಿತ್ತು. ಈ ನಡುವೆ ವಿದ್ವಾಂಸರೊಂದಿಗೆ, ಅಮೇರಿಕದಲ್ಲಿರುವ ಸ್ನೇಹಿತರೊಂದಿಗೆ, ಯಕ್ಷಗಾನ, ರಂಗಭೂಮಿಗೆ ಸಂಬಂಧಿಸಿದ ಹಿರಿಯರೊಂದಿಗೆ ಮಾತುಕತೆ ನಿರಂತರವಾಗಿತ್ತು. ಎರಡೂ ದೇಶಗಳಿಗೆ ಪ್ರಸ್ತುತವಾಗುವ ಸಂಶೋಧನ ಯೋಜನೆಯೊಂದು ತಯಾರಾಗಬೇಕಾದರೆ ನನಗೆ ಮೊದಲು ಆ ದೇಶದ ಕಲೆ-ಸಮಾಜ-ರಂಗಭೂಮಿಯ ಸಣ್ಣ ಚಿತ್ರಣವಾದರೂ ಬೇಕಲ್ಲ?

ಪ್ರಸ್ತಾವನೆಯನ್ನು 10-15 ಮಂದಿ ಹಿರಿಯರು, ಸ್ನೇಹಿತರು ಓದಿ ಪರಿಷ್ಕರಣೆಗಳನ್ನು ಸೂಚಿಸಿ “ಆಲ್ ದಿ ಬೆಸ್ಟ್” ಅಂದರು. ಸ್ವತಃ ಡಾ. ಗ್ಲೇಸರ್ ವಾಕ್ಯವಾಕ್ಯವನ್ನೂ ಓದಿ ತಿದ್ದುಪಡಿ ಹೇಳಿದರು. ತಮ್ಮ ಯೋಚನೆಗಳನ್ನು ಸೇರಿಸಿದರು. ಓದಿದ ಎಲ್ಲರೂ “ಇದು ಬಹಳ ಪ್ರಬಲವಾದ ಪ್ರಸ್ತಾವನೆ. ಖಂಡಿತ ಫೆಲೋಶಿಪ್ ಗೆಲ್ಲುತ್ತದೆ” ಎಂದು ಅಭಿಪ್ರಾಯಪಟ್ಟರು.

ಇತ್ತ ನನ್ನ ವಿಶ್ವವಿದ್ಯಾನಿಲಯವೂ, ಆಯ್ಕೆಯಾದರೆ ಒಂದು ವರ್ಷ ಅಧ್ಯಯನ ರಜೆ ಮಂಜೂರು ಮಾಡುವುದಾಗಿ ಪತ್ರ ನೀಡಿತು. ಇಷ್ಟೆಲ್ಲ ಆದಲ್ಲಿಗೆ ಅರ್ಧ ದಾರಿ ಕ್ರಮಿಸಿದ ಹಾಗಾಯಿತು. ಅಂತೂ ಸೆಪ್ಟೆಂಬರ್ 9ರ ಸರಿರಾತ್ರಿ ಎರಡೂವರೆ ಹೊತ್ತಿಗೆ ಅರ್ಜಿಯ ಎಲ್ಲ ಅವಶ್ಯಕತೆಗಳನ್ನೂ ಪೂರೈಸಿ, ಸಲ್ಲಿಸಿದ್ದಾಯಿತು.

ನಂತರದ ಬೆಳವಣಿಗೆ ಮೊನ್ನೆ ಬಂದ ವಿಷಾದಪತ್ರ. ಅರ್ಜಿ ಆಯ್ಕೆಯಾಗಲಿಲ್ಲ. ಕಾರಣಗಳು ತಿಳಿದಿಲ್ಲ. ಯಾವುದೋ ಒಂದು ಹಂತದಲ್ಲಿ ಅರ್ಜಿ ಸೋತಿದೆ. ಆಯ್ಕೆಗೆ ಹತ್ತಾರು ಮಾನದಂಡಗಳಿವೆ. ಅವರ ನಿರೀಕ್ಷೆಗಳು ಭಿನ್ನವಾಗಿರಬಹುದು. ಇನ್ನೂ ಏನೋ ಇರಬಹುದು. ಅರ್ಜಿ ಆಯ್ಕೆಯಾದರೆ ಸಾಲದು, ಮುಂದೆ ರಾಷ್ಟ್ರಮಟ್ಟದ ಸಂದರ್ಶನ ಎದುರಿಸಬೇಕು; ಅಲ್ಲಿ 1:2 ಅಭ್ಯರ್ಥಿಗಳ ಆಯ್ಕೆ. ಅಂತಿಮವಾಗಿ ಉಳಿದವರು ಅಮೇರಿಕಕ್ಕೆ ಹೋಗುತ್ತಾರೆ. ಆ ನಂತರದ ಎಲ್ಲ ಖರ್ಚು ಅವರದ್ದೇ.

ಸೋತರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆರಂಭದಲ್ಲೇ ಪ್ರತಿಜ್ಞೆ ಮಾಡಿ ಹೊರಟಿದ್ದರಿಂದ ಇನ್ನು ಆ ಬಗ್ಗೆ ಯೋಚನೆಯಿಲ್ಲ. ಆಯ್ಕೆಯಾಗಿ ಹೋಗಲು ಸಾಧ್ಯವಾಗದಿದ್ದರೆ ನಾನು ಇಲ್ಲಿ ಮಾಡಬೇಕಾಗಿರುವ ಕೆಲಸಗಳೇನು ಎಂಬುದನ್ನೂ ಮೊದಲೇ ನಿರ್ಧರಿಸಿಯಾಗಿದೆ.

ನನ್ನ ಪ್ರಸ್ತಾವನೆಯನ್ನು ಓದಿದ್ದವರಿಗೆ ಮತ್ತು ಪರಿಷ್ಕರಣೆಗಳನ್ನು ಸೂಚಿಸಿದ್ದವರಿಗೆ ಫೆಲೋಶಿಪ್ ಫಲಿತಾಂಶ ತಿಳಿಸಿದಾಗ ಅವರೆಲ್ಲ ಚಕಿತರಾದರು. “ನಿಜವಾಗಿಯೂ ನೀವು ಆಯ್ಕೆಯಾಗುತ್ತೀರಿ ಎಂದುಕೊಂಡಿದ್ದೆವು… ಹೋಗಲಿ, ಇನ್ನೊಮ್ಮೆ ಖಂಡಿತ ಪ್ರಯತ್ನಿಸಿ” ಎಂದರು.

ಇರಲಿ. ಅದು ಬೇರೆ ವಿಷಯ. ಮತ್ತೊಂದು ಆರು ತಿಂಗಳನ್ನು ಅದಕ್ಕಾಗಿ ವ್ಯಯಿಸುವ ಉಮೇದು ಈಗಿನ್ನೂ ಹುಟ್ಟಿಲ್ಲ. ಓದಿದ ವಿಷಯ, ಮಾಡಿದ ಕೆಲಸ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಮೊದಲಿನಿಂದಲೂ ನಂಬಿದವನು ನಾನು. ಅದು ಅನುಭವದಿಂದಲೂ ಸಿದ್ಧವಾಗಿದೆ ಕೂಡ. ಈ ಪ್ರಕ್ರಿಯೆಯಲ್ಲಂತೂ ನಾನು ಕಲಿತದ್ದು ಬೆಟ್ಟದಷ್ಟು.
ಅಂತೂ, ಇದೊಂದು ಕಥೆಯನ್ನು ಬರೆದರೆ ಮುಂದೆ ಪ್ರಯತ್ನಿಸುವ ಯಾರಿಗಾದರೂ ಅನುಕೂಲವಾದೀತು ಎಂದುಕೊಂಡು ಬರೆದೆ ಅಷ್ಟೆ. ಈ ಇಡೀ ಪ್ರಕ್ರಿಯೆಯಲ್ಲಿ ನನಗೆ ನೆರವಾದ, ಬೆಂಬಲಿಸಿದ ಎಲ್ಲ ಹಿರಿಯರು, ಸ್ನೇಹಿತರು, ಹಿತೈಷಿಗಳಿಗೆ- ಎಲ್ಲರಿಗೂ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸುವೆ. ಇಂತಹ ಹತ್ತಾರು ಒಳ್ಳೊಳ್ಳೆಯ ಅಂತಾರಾಷ್ಟ್ರೀಯ ಫೆಲೋಶಿಪ್ ಗಳಿವೆ. ವಿದ್ಯಾರ್ಥಿಗಳು, ಸಂಶೋಧಕರು, ಇತರ ಆಸಕ್ತರು ಪ್ರಯತ್ನಿಸಿದರೆ ಅವುಗಳ ಅನುಕೂಲ ಪಡೆಯಬಹುದು. ಐಎಎಸ್ ಪರೀಕ್ಷೆ ಪಾಸಾಗದಿದ್ದರೂ ಕೋಚಿಂಗ್ ಸೆಂಟರ್ ಆರಂಭಿಸಬಹುದಾದಂತೆ, ಈಗ ಈ ವಿಷಯದಲ್ಲಿ ನಾನೊಂದು ಸ್ಥಳೀಯ ಕನ್ಸಲ್ಟೆನ್ಸಿ ತೆರೆಯುವಷ್ಟು ಸಂಪನ್ಮೂಲ ಉಂಟು.

ಎಲ್ಲ ಬಗೆಯ Fulbright Fellowshipಗಳ ಮಾಹಿತಿಗೆ: www.usief.org.in ನೋಡಿ.

ಅಂದಹಾಗೆ, ಡಾ. ಪೀಟರ್ ಗ್ಲೇಸರ್ ಎಂಬ ಪುಣ್ಯಾತ್ಮನ ಬಗ್ಗೆ ಇನ್ನೊಮ್ಮೆ ಬರೆಯುವೆ.

- ಸಿಬಂತಿ ಪದ್ಮನಾಭ ಕೆ. ವಿ.
sibanthipadmanabha@gmail.com

ಶನಿವಾರ, ಡಿಸೆಂಬರ್ 18, 2021

ಬಂದರೂ ಕಾಲೇಜಿಗೆ ಬಾರದು ಕಾಗುಣಿತ

17 ಡಿಸೆಂಬರ್ 2021ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಇದು ‘ಅ’ಕಾರ ‘ಹ’ಕಾರ ವಿವಾದದ ಕುರಿತು ಅಲ್ಲ; ಅಲ್ಪಪ್ರಾಣ, ಮಹಾಪ್ರಾಣಗಳಿಗೆ ಸಂಬಂಧಿಸಿದ ಸಂಗತಿಯೂ ಅಲ್ಲ. ಅದಕ್ಕಿಂತಲೂ ಪ್ರಾಥಮಿಕವಾದ ವಿಷಯವೊಂದಕ್ಕೆ ಸಂಬಂಧಿಸಿದ್ದು. ಬರೆವಣಿಗೆಯಲ್ಲಿ ಕಾಗುಣಿತ ದೋಷ ಇರಬಾರದು ಎಂಬ ಬಗ್ಗೆ ಬಹುಮಂದಿಯ ಆಕ್ಷೇಪ ಇರಲಾರದೇನೋ? 

ಕಾಲೇಜು ಅಥವಾ ವಿಶ್ವವಿದ್ಯಾನಿಲಯ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ತರಗತಿ ಟಿಪ್ಪಣಿಯನ್ನೋ, ಬೇರೆ ಯಾವುದಾದರೂ ಬರೆಹವನ್ನೋ ಗಮನಿಸಿ. ಬಹುಪಾಲು ವಿದ್ಯಾರ್ಥಿಗಳಲ್ಲಿ ಒಂದು ಸಾಲಿಗೆ ನಾಲ್ಕು ಕಾಗುಣಿತ ತಪ್ಪು ಎದ್ದು ಕಾಣುತ್ತದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪಕರ ಪರಿಸ್ಥಿತಿಯನ್ನಂತೂ ಕೇಳುವುದೇ ಬೇಡ. ಅದು ಅವರಿಗೇ ಒಂದು ದೊಡ್ಡ ಪರೀಕ್ಷೆ.

ಪದವಿ ಅಥವಾ ಸ್ನಾತಕೋತ್ತರ ಹಂತಕ್ಕೆ ಬಂದರೂ ಈ ವಿದ್ಯಾರ್ಥಿಗಳ ಭಾಷೆ ಏಕೆ ತಿದ್ದಿಲ್ಲ? ಪ್ರೌಢ ಬರೆಹಗಳನ್ನು ಬರೆಯುವ ವಿಷಯ ಹಾಗಿರಲಿ, ಕಾಗುಣಿತ ದೋಷವಿಲ್ಲದ, ಅರ್ಥಪೂರ್ಣ ವಾಕ್ಯವೊಂದನ್ನು ರಚಿಸುವ ಶಕ್ತಿಯೂ ಈ ಮಕ್ಕಳಲ್ಲಿ ಏಕೆ ಬೆಳೆದಿಲ್ಲ? ಇದು ಯಾವುದೋ ಪ್ರದೇಶಕ್ಕೋ, ಜಾತಿಗೋ, ಪಂಗಡಕ್ಕೋ ಸಂಬಂಧಿಸಿದ ಸಮಸ್ಯೆ ಅಲ್ಲ. ಎಲ್ಲಾ ಕಡೆ, ಎಲ್ಲರಲ್ಲೂ ಇದೆ. 

‘ಹೊಡೆತ’ ಎಂಬುದು ‘ಹೋಡೆತ’ ಆಗುತ್ತದೆ; ‘ಬೇಲಿ’ ಎಂಬುದು ‘ಬೆಲಿ’ ಆಗುತ್ತದೆ; ‘ವಿಚಾರ’ ಎಂಬುದು ‘ವಿಚರಾ’ ಆಗುತ್ತದೆ; ‘ಮುದ್ದೆ’ ಎಂಬುದು ‘ಮುದೇ’ ಆಗುತ್ತದೆ; ‘ಆಗುತ್ತದೆ’ ಎಂಬುದು ‘ಅಗೂತದೆ’ ಆಗುತ್ತದೆ! ಇದೊಂದು ವಾಕ್ಯ ಗಮನಿಸಿ: ‘ನಿರುದ್ಯೋಗಕ್ಕೆ ಪ್ರಮುಖ ಕಾರಣವೆಂದರೆ ಕೌಶಲ್ಯಗಳ ಕೊರತೆಯೇ ನಿರುದ್ಯೋಗಕ್ಕೆ ಪ್ರಮುಖ ಕಾರಣ ಎನ್ನಬಹುದು’. ಸರಳವಾದ ವಾಕ್ಯವೊಂದನ್ನು ಬರೆಯುವಾಗಲೂ ತಾವೇನು ತಪ್ಪು ಮಾಡುತ್ತಿದ್ದೇವೆ ಎಂದು ಈ ವಿದ್ಯಾರ್ಥಿಗಳಿಗೆ ಹೊಳೆಯುವುದಿಲ್ಲ.

ಮಕ್ಕಳಲ್ಲಿ ಕಾಗುಣಿತ ದೋಷ ತಿದ್ದದಿರುವುದು ಹೊಸ ಚರ್ಚೆಯೇನೂ ಅಲ್ಲ. ವಿಶ್ವವಿದ್ಯಾನಿಲಯದವರು ಕಾಲೇಜಿನವರತ್ತ ಬೆರಳು ತೋರಿಸುವುದು, ಕಾಲೇಜು ಅಧ್ಯಾಪಕರು ಪ್ರೌಢಶಾಲಾ ಶಿಕ್ಷಕರತ್ತ ಬೊಟ್ಟು ಮಾಡುವುದು, ಪ್ರೌಢಶಾಲೆಯಲ್ಲಿರುವವರು ಪ್ರಾಥಮಿಕ ಶಾಲೆಯ ಅಧ್ಯಾಪಕನ್ನು ದೂರುವುದು ಹಿಂದಿನಿಂದಲೂ ನಡೆದಿದೆ. ಅವರಿವರನ್ನು ಜವಾಬ್ದಾರರನ್ನಾಗಿಸುವುದು ಹಾಗಿರಲಿ, ಈ ಸಮಸ್ಯೆಯ ಮೂಲ ಯಾವುದು, ಪರಿಹಾರ ಏನು ಎಂಬುದಾದರೂ ಚರ್ಚೆಯಾಗಬೇಕಲ್ಲ?

ಈ ವಿಚಾರದ ಬೆನ್ನು ಹಿಡಿದು ಹೊರಟರೆ ಮೂಲದಲ್ಲಿ ಪ್ರಾಥಮಿಕ ಶಾಲೆಯೇ ಕಾಣುತ್ತದೆ. ಆದರೆ ಅದೊಂದೇ ಕಾರಣವಲ್ಲ ಎಂಬುದೂ ಗೊತ್ತಾಗುತ್ತದೆ. ಪ್ರಾಥಮಿಕ ಶಿಕ್ಷಣದಿಂದಲೇ ಆರಂಭಿಸೋಣ.

ಪ್ರಾಥಮಿಕ ಶಾಲೆಯಲ್ಲಿ ಕಾಗುಣಿತ-ವ್ಯಾಕರಣಗಳಿಗೆ ಹೆಚ್ಚಿನ ಒತ್ತು ನೀಡಬೇಡಿ, ಮಕ್ಕಳಿಗೆ ‘ಸೌಂಡ್’ (ಧ್ವನಿ) ಅನ್ನು ಕಲಿಸಿಕೊಡಿ, ಮುಂದೆ ಭಾಷೆ ತಾನಾಗಿಯೇ ಬೆಳೆಯುತ್ತದೆ ಎಂಬ ಅಭಿಪ್ರಾಯವೊಂದಿದೆ. ಒಂದು ವೇಳೆ ಇದೇ ನಿಜವಾಗಿದ್ದರೆ ಈಗ ಹೇಳಿದ ಸಮಸ್ಯೆ ಕುರಿತು ಮಾತನಾಡುವ ಅಗತ್ಯ ಬರುತ್ತಿರಲಿಲ್ಲ. ಈ ವಿದ್ಯಾರ್ಥಿಗಳಿಗೆ ‘ಸೌಂಡ್’ನ ಅರಿವು ಚೆನ್ನಾಗಿಯೇ ಇದೆ. ‘ಮಾಡುತ್ತೇನೆ’ ಎಂಬ ಪದವನ್ನು ಹಾಗೆಯೇ ಓದುತ್ತಾರೆ, ಬರೆಯುವಾಗ ಮಾತ್ರ ಅದು ‘ಮಾಡುತೆನೆ’ಯೋ ‘ಮಡುತ್ತೆನೆ’ಯೋ ಆಗುತ್ತದೆ.

ಆರಂಭದಿಂದಲೂ ಆಂಗ್ಲಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಈ ಸಮಸ್ಯೆಯೋ ಎಂದು ಗಮನಿಸಿದರೆ, ಹಾಗಿಲ್ಲ. ಇವರು ಪೂರ್ತಿಯಾಗಿ ಕನ್ನಡ ಮಾಧ್ಯಮದಲ್ಲಿ ಓದಿದವರೇ. ಅಂದರೆ ಕಲಿಕೆಯಲ್ಲೇ ಸಮಸ್ಯೆ ಇದೆ ಎಂದಾಯ್ತು. ಪ್ರಾಥಮಿಕ ಹಂತದಲ್ಲಿ ಇನ್ನೇನು ಅಲ್ಲವಾದರೂ ಕಾಗುಣಿತವಾದರೂ ತಿದ್ದದೇ ಹೋದರೆ ಮುಂದೆ ಸುಧಾರಿಸುವುದು ಕಷ್ಟವಿದೆ. 

ಪ್ರಾಥಮಿಕ ಶಾಲೆಯೂ ಸೇರಿದಂತೆ ಶಿಕ್ಷಣದ ವಿವಿಧ ಹಂತಗಳಲ್ಲಿರುವ ಅಧ್ಯಾಪಕರಲ್ಲಿ ಎಷ್ಟು ಪ್ರಮಾಣ ಕಾಗುಣಿತ ತಪ್ಪಿಲ್ಲದೆ ಬರೆಯಬಲ್ಲವರು ಇದ್ದಾರೆ ಎಂಬುದೂ ಒಂದು ಪ್ರಶ್ನೆ. ಹೀಗೆ ಕೇಳಿದರೆ ಅನೇಕ ಅಧ್ಯಾಪಕರಿಗೆ ಮುಜುಗರ ಅನ್ನಿಸೀತು. ಆದರೆ ಈ ವಿಷಯ ನಿಜ. ಆರಂಭದಲ್ಲಿ ಪ್ರಸ್ತಾಪಿಸಿದ ರೀತಿಯ ವಿದ್ಯಾರ್ಥಿಗಳೇ ಅಧ್ಯಾಪಕರಾಗುತ್ತಾ ಹೋದರೆ ಅವರು ಅದನ್ನೇ ತಮ್ಮ ವಿದ್ಯಾರ್ಥಿಗಳಿಗೂ ಕಲಿಸುವುದು ಸಹಜ.

ಎಂಟನೇ ತರಗತಿ ಕಳೆದ ಮೇಲಂತೂ ಈಗಿನ ವಿದ್ಯಾರ್ಥಿಗಳು ಯಂತ್ರಗಳೇ ಆಗಿಬಿಡುತ್ತಾರೆ. ಅವರಿಗೆ ಆಗಲೇ ಪಿಯುಸಿಯಲ್ಲಿ ವಿಜ್ಞಾನ ಓದಿ ಇಂಜಿನಿಯರಿಂಗ್, ಮೆಡಿಕಲ್ ಸೀಟು ಹಿಡಿಯುವ ಗುಂಗು. ದಿನಬೆಳಗಾದರೆ ಟ್ಯೂಶನ್, ಕೋಚಿಂಗ್. ಇನ್ನೂ ಹತ್ತನೇ ತರಗತಿ ಮುಗಿಯುವ ಮೊದಲೇ ನೀಟು, ಜೆಇಇ ತರಬೇತಿ. ಖಾಸಗಿ ಪದವಿಪೂರ್ವ ಕಾಲೇಜುಗಳಲ್ಲಿ ಪರ್ಸೆಂಟೇಜು ಹೆಚ್ಚಿಸುವ ಪ್ರಯೋಗಗಳು. ಇವುಗಳ ನಡುವೆ ಭಾಷೆ ತಬ್ಬಲಿ.

ಪಿಯುಸಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಓದುವವರಿಗೆ ಭಾಷೆ ಯಾಕೆ ಎಂಬಷ್ಟು ಉಡಾಫೆ. ಪ್ರಧಾನ ವಿಷಯಗಳ ಬಗೆಗಷ್ಟೇ ಅವರ ಗಮನ. ಅವುಗಳಿಂದ ಪರ್ಸೆಂಟೇಜಿಗೆ ಏನೂ ಪ್ರಯೋಜನ ಇಲ್ಲ ಎಂಬ ಲೆಕ್ಕಾಚಾರ. ಭಾಷಾ ಶಿಕ್ಷಕರು ಅನೇಕ ಸಲ ಪೆವಿಲಿಯನ್‍ಗೆ ಮಾತ್ರ ಉಳಿಯುವ ಹೆಚ್ಚುವರಿ ಆಟಗಾರರು. ಇನ್ನು ಕಲಾ ವಿಭಾಗವನ್ನು ಕೇಳುವವರೇ ಇಲ್ಲ.

ಕಲೆ-ವಾಣಿಜ್ಯ ವಿಭಾಗದವರು, ತಾಂತ್ರಿಕ ಶಿಕ್ಷಣಕ್ಕೆ ಹೋಗದ ವಿಜ್ಞಾನ ವಿಭಾಗದವರು ಕಾಲೇಜಿಗೆ ಬರುತ್ತಾರೆ. ಅಷ್ಟು ಹೊತ್ತಿಗೆ ಅವರ ಭಾಷೆಯ ತೊಡಕುಗಳು ಅಲುಗಾಡಿಸಲೂ ಆಗದಷ್ಟು ಭದ್ರವಾಗಿ ಬೇರೂರಿರುತ್ತವೆ. ಎದುರಿಗೆ ಒಂದು ಪುಟ ಇಟ್ಟು ಅದನ್ನೇ ನಕಲು ಮಾಡಿ ಎಂದರೂ ಅವರೂ ತಪ್ಪೇ ಬರೆಯುತ್ತಾರೆ. ಅವರ ಕಣ್ಣೆದುರೇ ತಪ್ಪನ್ನು ತಿದ್ದಿದರೂ ಮರುದಿನ ಅದೇ ತಪ್ಪು ಬರೆಯುತ್ತಾರೆ. ಹೇಗೋ ತೇರ್ಗಡೆ ಆಗಿ ಎಂಎಗೆ ಪ್ರವೇಶ ಪಡೆಯುತ್ತಾರೆ. ಅಲ್ಲಿಯೂ ಇದೇ ಪ್ರಹಸನ ಮುಂದುವರಿಯುತ್ತದೆ. ನೀನು ತಪ್ಪು ಬರೆಯುತ್ತಾ ಇದ್ದೀ ಎಂದರೆ ಈ ಹಂತಕ್ಕೆ ಬಂದ ವಿದ್ಯಾರ್ಥಿಗೆ ಅವಮಾನ. ಇಲ್ಲಿ ಕಾಗುಣಿತ ತಿದ್ದಿಕೊಂಡು ಕೂರಲು ಅಧ್ಯಾಪಕರಿಗೆ ಸಮಯ, ವ್ಯವಧಾನ ಎರಡೂ ಇಲ್ಲ.

ಇಲ್ಲೊಂದು ಸಾಮಾಜಿಕ-ಆರ್ಥಿಕ ವಿಚಾರವೂ ಇದೆ. ಅದೇನೆಂದರೆ, ಸರ್ಕಾರಿ ಶಾಲೆಗಳಲ್ಲಿ ಓದುವ ಅನೇಕ ಮಕ್ಕಳು ವಿವಿಧ ಕಾರಣಗಳಿಗಾಗಿ ತರಗತಿಗೆ ಹಾಜರಾಗುವುದೇ ಇಲ್ಲ ಅಥವಾ ಇವರದ್ದು ತೀರಾ ಅನಿಯಮಿತ ಹಾಜರಾತಿ. ಇವರು ಆರಂಭದಿಂದಲೇ ಭಾಷಾತರಬೇತಿಯಿಂದ ವಂಚಿತರು. ಅಂತೂ ಇದೊಂದು ವಿಷವರ್ತುಲ. ಕೇವಲ ಭಾಷಾಶಾಸ್ತ್ರಜ್ಞರೋ, ಶಿಕ್ಷಣ ಶಾಸ್ತ್ರಜ್ಞರೋ ಪರಿಹಾರ ಸೂಚಿಸಬಹುದಾದ ಸಮಸ್ಯೆ ಅಲ್ಲ. ಸುಧಾರಣೆಯ ದಾರಿ ಬಗ್ಗೆ ಪೂರ್ವಗ್ರಹರಹಿತ ಚರ್ಚೆಯಾದರೆ ಒಳ್ಳೆಯದು.

- ಸಿಬಂತಿ ಪದ್ಮನಾಭ ಕೆ. ವಿ.


ಸೋಮವಾರ, ಡಿಸೆಂಬರ್ 13, 2021

ಬದಲಾಗಿರುವ ಮಾಧ್ಯಮರಂಗದಲ್ಲಿ ಉದ್ಯೋಗಾವಕಾಶ ಮತ್ತು ನಿರೀಕ್ಷೆಗಳು

13 ಡಿಸೆಂಬರ್ 2021ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಮಾಧ್ಯಮರಂಗ ಯುವತಲೆಮಾರಿನ ಕನಸಿನ ಲೋಕ. ಸಾಮಾಜಿಕ ಮನ್ನಣೆ, ಒಳ್ಳೆಯ ಸಂಪಾದನೆ- ಎರಡನ್ನೂ ಒಂದೇ ಹೆಜ್ಜೆಯಲ್ಲಿ ಸಾಧಿಸಿಕೊಳ್ಳುವ ತವಕ ಹಲವರದು. ಈ ಕನಸು ಅತಿರಂಜಿತವೂ ಅಲ್ಲ, ಅಸಾಧ್ಯವೂ ಅಲ್ಲ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಬದುಕು ಕಂಡುಕೊಳ್ಳುವ ಹಂಬಲ ಹೊಂದಿರುವವರು ಅಲ್ಲಿನ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದರ ನಿರೀಕ್ಷೆಗಳಿಗೆ ಸರಿಹೊಂದುವ ಅರ್ಹತೆಗಳನ್ನು ರೂಢಿಸಿಕೊಳ್ಳುವುದು ಮುಖ್ಯ.

ಮಾಧ್ಯಮಲೋಕ ಕಳೆದ ಒಂದು ದಶಕದಲ್ಲಿ ಊಹೆಗೂ ಮೀರಿ ಬದಲಾಗಿದೆ. ಒಂದು ಕಾಲಕ್ಕೆ ಪತ್ರಿಕೆ, ಟಿವಿ, ರೇಡಿಯೋಗಳಿಗೆ ಸೀಮಿತವಾಗಿದ್ದ ಮಾಧ್ಯಮಕ್ಷೇತ್ರ ಈಗ ಹಲವು ಆಯಾಮಗಳನ್ನು ಮೈಗೂಡಿಸಿಕೊಂಡು ಬಹುಕೋಟಿ ಉದ್ಯಮವಾಗಿ ಬೆಳೆದಿದೆ. ಅದನ್ನು ‘ಮಾಧ್ಯಮ ಮತ್ತು ಮನರಂಜನಾ ಉದ್ಯಮ’ ಎಂದು ಕರೆಯುವವರೆಗೆ ಅದರ ಸ್ವರೂಪ ಬದಲಾಗಿದೆ. 

ಭಾರತದಲ್ಲಿ ಇಂದು ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ ಇದುವೇ. 2020ರಲ್ಲಿ ನಮ್ಮ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಗಾತ್ರ ರೂ. 1.38 ಲಕ್ಷ ಕೋಟಿ (ಟ್ರಿಲಿಯನ್) ಆಗಿತ್ತು. ಸದ್ಯದಲ್ಲೇ ಅದು 1.80 ಟ್ರಿಲಿಯನ್‍ಗೆ ತಲುಪುವ ನಿರೀಕ್ಷೆ ಇದೆ. ಕೋವಿಡ್ ಉಳಿದೆಲ್ಲ ಕ್ಷೇತ್ರಗಳಂತೆ ಮಾಧ್ಯಮ ಕ್ಷೇತ್ರಕ್ಕೂ ಮಹಾಹೊಡೆತ ನೀಡಿದೆ ಎಂಬುದು ಮೇಲ್ನೋಟದ ತಿಳುವಳಿಕೆ ಆದರೂ ಒಟ್ಟಾರೆ ರಂಗದ ಮೇಲೆ ಬೇರೆ ಕ್ಷೇತ್ರಗಳಿಗೆ ಆದಷ್ಟು ತೊಂದರೆ ಆಗಿಲ್ಲ; ಅಥವಾ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಬಹುಬೇಗನೆ ಚೇತರಿಸಿಕೊಂಡಿದೆ. 

ಹಾಗೆ ನೋಡಿದರೆ ಕೋವಿಡ್ ಮಾಧ್ಯಮರಂಗದ ಸ್ವರೂಪದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಮಾಧ್ಯಮಗಳ ಡಿಜಿಟಲ್ ಆಯಾಮ ವಿಕಾಸವಾಗಿರುವುದರ ಹಿಂದೆ ಕೋವಿಡ್‍ನ ಕೊಡುಗೆಯೂ ಬಹಳ ಇದೆ. ಇನ್ನು ಎರಡು-ಮೂರು ವರ್ಷಗಳಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಶೇ. 40 ಪಾಲನ್ನು ಟಿವಿ, ಶೇ. 13 ಮುದ್ರಣ ಮಾಧ್ಯಮ, ಶೇ. 12 ಜಾಹೀರಾತು, ಶೇ. 9 ಸಿನಿಮಾ ಹಾಗೂ ಶೇ. 8ರಷ್ಟನ್ನು ಒಟಿಟಿ ಮತ್ತು ಗೇಮಿಂಗ್ ಹೊಂದಲಿವೆ ಎಂದು ಅಧ್ಯಯನಗಳು ತಿಳಿಸಿವೆ.

ಬದಲಾಗಿರುವ ಸ್ವರೂಪ

ಕೆಲವು ವರ್ಷಗಳ ಹಿಂದೆ ಒಳ್ಳೆಯ ಬರವಣಿಗೆ, ಒಳ್ಳೆಯ ಮಾತುಗಾರಿಕೆ, ವಿವಿಧ ರಂಗಗಳ ಉತ್ತಮ ತಿಳುವಳಿಕೆ ಇದ್ದರೆ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳಿಗೆ ಪ್ರವೇಶ ಸುಲಭವಾಗಿತ್ತು. ಈಗ ಮಾಧ್ಯಮರಂಗವೂ ಬದಲಾಗಿದೆ, ನಿರೀಕ್ಷೆಗಳೂ ಬದಲಾಗಿವೆ. ಇದನ್ನು ಆ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಯಸುವವರು ಅರ್ಥಮಾಡಿಕೊಳ್ಳಬೇಕು. ಬದಲಾಗಿರುವ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲಗಳನ್ನು ಬೆಳೆಸಿಕೊಳ್ಳದೆ ಹೋದರೆ ಮಾಧ್ಯಮರಂಗಕ್ಕೆ ಪ್ರವೇಶ ಇಲ್ಲ, ಪ್ರವೇಶಿಸಿದರೂ ಯಶಸ್ಸು ಇಲ್ಲ, ಉಳಿಗಾಲವೂ ಇಲ್ಲ.

ಮಾಧ್ಯಮಗಳನ್ನು ಮುದ್ರಣ ಮತ್ತು ವಿದ್ಯುನ್ಮಾನವೆಂದು ವಿಂಗಡಿಸುವ ಪದ್ಧತಿಯೇ ಹಳತಾಯಿತು. ಅಂತಹ ಪ್ರತ್ಯೇಕತೆ ಈಗ ಉಳಿದುಕೊಂಡಿಲ್ಲ. ಮುದ್ರಣ ಮಾಧ್ಯಮ, ಟಿವಿ ಚಾನೆಲ್‍ಗಳು ಇಂಟರ್ನೆಟ್‍ನಲ್ಲಿವೆ, ಫೇಸ್‍ಬುಕ್‍ನಂತಹ ಸಾಮಾಜಿಕ ತಾಣಗಳಲ್ಲಿವೆ, ಯೂಟ್ಯೂಬ್ ಚಾನೆಲ್‍ಗಳನ್ನು ಹೊಂದಿವೆ. ಪತ್ರಿಕೆಗಳು ಸಾಮಾಜಿಕ ತಾಣಗಳಲ್ಲಿ ಲೈವ್ ಕಾರ್ಯಕ್ರಮಗಳನ್ನು ನೀಡುತ್ತಿವೆ, ಪಾಡ್‍ಕಾಸ್ಟ್, ಕ್ಲಬ್‍ಹೌಸ್ ಚರ್ಚೆಗಳನ್ನು ನಡೆಸುತ್ತಿವೆ, ದೃಶ್ಯ-ಶ್ರವ್ಯ ಸಾಮಗ್ರಿಗಳನ್ನು ಹೆಚ್ಚುಹೆಚ್ಚಾಗಿ ಒದಗಿಸುತ್ತಿವೆ. ಹೆಚ್ಚೆಂದರೆ ಎಲ್ಲವನ್ನೂ ಒಟ್ಟಾಗಿ ಡಿಜಿಟಲ್ ಮಾಧ್ಯಮಗಳು ಎಂದು ಕರೆಯಬಹುದೇನೋ? ಡಿಜಿಟಲೇ ಮಾಧ್ಯಮರಂಗದ ಭವಿಷ್ಯ ಎಂದು ದಶಕದ ಹಿಂದೆಯೇ ಘೋಷಿಸಿಯಾಗಿದೆ; ಕೋವಿಡ್ ಅದನ್ನು ಬೇಗನೇ ನಿಜವಾಗಿಸಿದೆ.

ಅಗತ್ಯ ಕೌಶಲಗಳು

ಮಾಧ್ಯಮರಂಗದಲ್ಲಾಗಿರುವ ಬದಲಾವಣೆ ತಂತ್ರಜ್ಞಾನದ ಕೊಡುಗೆ ಎಂದ ಮೇಲೆ ಅದರ ಜ್ಞಾನ ಇಂದು ನಿರ್ಣಾಯಕ. ಮಾಧ್ಯಮ ಕೌಶಲಗಳ ಕೊತೆಗೆ ತಾಂತ್ರಿಕ ನೈಪುಣ್ಯವುಳ್ಳವರಿಗೆ ಇಂದು ಮೀಡಿಯಾದಲ್ಲಿ ತೆರೆದತೋಳಿನ ಸ್ವಾಗತ. ತಪ್ಪಿಲ್ಲದ ಬರವಣಿಗೆ, ತಡವರಿಸದ ಮಾತು, ಪ್ರಚಲಿತ ವಿದ್ಯಮಾನಗಳ ಉತ್ತಮ ಮಾಹಿತಿ, ಇತಿಹಾಸ, ಸಾಹಿತ್ಯ, ಆರ್ಥಿಕತೆ, ರಾಜಕೀಯ ಮೊದಲಾದ ಕ್ಷೇತ್ರಗಳ ವಿಸ್ತೃತ ತಿಳುವಳಿಕೆ, ಕಂಪ್ಯೂಟರ್ ಜ್ಞಾನ- ಇವೆಲ್ಲವುಗಳ ಹೊತೆಗೆ ಮಾಧ್ಯಮರಂಗಕ್ಕೆ ಸೇರಬಯಸುವವರಿಗೆ ಇಂದು ಡಿಜಿಟಲ್ ಕೌಶಲಗಳು ಬಹಳ ಅಗತ್ಯ. 

ಸೃಜನಶೀಲ ಚಿಂತನೆ, ಆಡಿಯೋ-ವೀಡಿಯೋ ಎಡಿಟಿಂಗ್, ಸಾಮಾಜಿಕ ಮಾಧ್ಯಮಗಳ ಕಾರ್ಯವೈಖರಿಯ ತಿಳುವಳಿಕೆ, ಡಿಜಿಟಲ್ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (SEO) ಕೌಶಲಗಳನ್ನೂ ಇಂದು ಕರಗತ ಮಾಡಿಕೊಳ್ಳುವುದು ಅಗತ್ಯ.

ಅನಿಮೇಶನ್, ವಿಶುವಲ್ ಇಫೆಕ್ಟ್, ಗೇಮಿಂಗ್, ಕಾಮಿಕ್ಸ್- ಇವನ್ನು ‘ಛಾಂಪಿಯನ್ ಸೆಕ್ಟರ್ಸ್’ ಎಂದು ಮಾರುಕಟ್ಟೆ ಹಾಗೂ ಸರ್ಕಾರ ಎರಡೂ ಗುರುತಿಸಿವೆ. ಮಾಧ್ಯಮರಂಗ ಈ ಆಯಾಮಗಳನ್ನು ತನ್ನೊಳಗೆ ಆವಾಹಿಸಿಕೊಳ್ಳುತ್ತಿದೆ. ಪತ್ರಿಕೆ-ಟಿವಿಗಳ ಆದಾಯ ಮೂಲದ ಲೆಕ್ಕಾಚಾರ ಬದಲಾಗಿದೆ. ಸರ್ಕ್ಯುಲೇಶನ್, ಟಿ.ಆರ್.ಪಿ. ಜಾಗದಲ್ಲಿ ಕ್ಲಿಕ್ಸ್, ವ್ಯೂಸ್ ಪದಗಳು ಕೂಡ ಸೇರಿಕೊಂಡಿವೆ. ಕೃತಕ ಬುದ್ಧಿಮತ್ತೆ, ಮಶಿನ್ ಲರ್ನಿಂಗ್‍ಗಳು ಮಾಧ್ಯಮಗಳ ಕಾರ್ಯವೈಖರಿಯ ಮೇಲೂ ಪ್ರಭಾವ ಬೀರಿವೆ. ಮಾಧ್ಯಮಕ್ಷೇತ್ರದಲ್ಲಿ ಉದ್ಯೋಗ, ಭವಿಷ್ಯ ಬಯಸುವವರು ಈ ಬದಲಾವಣೆಗಳನ್ನೂ ಆರ್ಥಮಾಡಿಕೊಳ್ಳಬೇಕು. ಮಾಧ್ಯಮ ಶಿಕ್ಷಣ-ತರಬೇತಿ ನೀಡುವ ಕಾಲೇಜು, ವಿಶ್ವವಿದ್ಯಾನಿಲಯಗಳೂ ಇವನ್ನು ಗಮನಿಸದೆ ಹೋದರೆ ಅವರ ಕೋರ್ಸುಗಳೂ ಅಪ್ರಸ್ತುತವಾಗಿಬಿಡುತ್ತವೆ. ಅವುಗಳ ಪಠ್ಯಕ್ರಮ, ತರಬೇತಿಯ ವಿಧಾನ, ಅಧ್ಯಾಪಕರ ತಿಳುವಳಿಕೆ- ಎಲ್ಲವೂ ಕಾಲಕ್ಕೆ ಅನುಗುಣವಾಗಿ ‘ಅಪ್ಡೇಟ್’ ಆಗುವುದು ಅನಿವಾರ್ಯ.

ಇಷ್ಟೆಲ್ಲ ಹೇಳಿದ ಮೇಲೂ ಮರೆಯದಿರಬೇಕಾದ ಒಂದು ಮಾತು: ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿ ಆದರೂ ಸಾಮಾಜಿಕ ಬದ್ಧತೆಯೇ ಮಾಧ್ಯಮರಂಗದ ಶಾಶ್ವತ ಅಂತರ್ಗತ ಮೌಲ್ಯ. ಅದಿಲ್ಲದೆ ಮಾಧ್ಯಮಗಳಿಗೆ ಅಸ್ತಿತ್ವ ಇಲ್ಲ. ಮಾಧ್ಯಮರಂಗದಲ್ಲಿ ಉದ್ಯೋಗ ಕಂಡುಕೊಳ್ಳಬಯಸುವವರಿಗೂ ಅಂತಿಮವಾಗಿ ಇದೇ ದಾರಿದೀಪ.

ಹೊಸ ಉದ್ಯೋಗಾವಕಾಶಗಳು

ವೆಬ್ ಕಂಟೆಂಟ್ ಮ್ಯಾನೇಜರ್: ವಿವಿಧ ಉದ್ಯಮ, ಸಂಸ್ಥೆಗಳ ವೆಬ್ಸೈಟ್, ಆನ್ಲೈನ್ ಹೂರಣವನ್ನು ನಿರ್ವಹಿಸುವುದು.

ಸೋಶಿಯಲ್ ಮೀಡಿಯಾ ಮ್ಯಾನೇಜರ್: ಉದ್ಯಮಗಳು ಹಾಗೂ ಗಣ್ಯರ ಸಾಮಾಜಿಕ ಜಾಲತಾಣ ಪುಟಗಳ ನಿರ್ವಹಣೆ.

ಮೀಡಿಯಾ ಪ್ಲಾನರ್: ಯಾವ ಕಂಪೆನಿಗಳು ತಮ್ಮ ಜಾಹೀರಾತು, ಪ್ರಚಾರಕ್ಕಾಗಿ ಯಾವ ಮಾಧ್ಯಮಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿರ್ಧರಿಸುವುದು.

ಪಿಆರ್‍ಒ (ಸಾರ್ವಜನಿಕ ಸಂಪರ್ಕ ಅಧಿಕಾರಿ): ವಿವಿಧ ಉದ್ಯಮ, ವ್ಯಕ್ತಿ, ಸಂಸ್ಥೆಗಳ ವರ್ಚಸ್ಸು ವೃದ್ಧಿ, ಈವೆಂಟ್ ಮ್ಯಾನೇಜ್ಮೆಂಟ್ ಹಾಗೂ ಮಾಧ್ಯಮ ಸಂಬಂಧದ ಜವಾಬ್ದಾರಿ ನಿರ್ವಹಿಸುವುದು.

ಡಿಜಿಟಲ್ ಮಾರ್ಕೆಟರ್: ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಮೊಬೈಲ್ ಮಾರ್ಕೆಟಿಂಗ್ ಇತ್ಯಾದಿಗಳನ್ನು ನೋಡಿಕೊಳ್ಳುವುದು.

ಜಾಹೀರಾತು ಕ್ಷೇತ್ರ: ಜಾಹೀರಾತು ಸ್ಕ್ರಿಪ್ಟ್, ವಿನ್ಯಾಸ ರಚನೆ, ಆಡಿಯೋ-ವಿಶುವಲ್ ಎಡಿಟಿಂಗ್, ಇತ್ಯಾದಿ.

ಟೆಕ್ನಿಕಲ್ ರೈಟರ್: ತಾಂತ್ರಿಕ ಕ್ಷೇತ್ರಗಳಿಗೆ ವಿಶಿಷ್ಟವಾದ ಬರವಣಿಗೆ, ಪ್ರಚಾರ ಹಾಗೂ ತರಬೇತಿ ಸಾಮಗ್ರಿಗಳ ತಯಾರಿ, ಭಾಷಾಂತರ ಮುಂತಾದ ಜವಾಬ್ದಾರಿ.

ಅನಿಮೇಟರ್/ಮಲ್ಟಿಮೀಡಿಯಾ ಸ್ಪೆಶಲಿಸ್ಟ್: ಜಾಹೀರಾತು, ಟಿವಿ, ಸಿನಿಮಾ, ಧಾರಾವಾಹಿ, ಡಿಜಿಟಲ್ ಮೀಡಿಯಾಗಳಲ್ಲಿ ಹೇರಳ ಅವಕಾಶ.

- ಸಿಬಂತಿ ಪದ್ಮನಾಭ ಕೆ. ವಿ.


ಭಾನುವಾರ, ಡಿಸೆಂಬರ್ 12, 2021

ಇದು ಮಾಯಾಬಜಾರು

12 ಡಿಸೆಂಬರ್ 2021ರ 'ವಿಜಯ ಕರ್ನಾಟಕ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ

ಲ್ಯಾಂಡ್‍ಲೈನ್ ಫೋನಿನ ಕಾಲವನ್ನೊಮ್ಮೆ ಜ್ಞಾಪಿಸಿಕೊಳ್ಳಿ: ಪ್ರತಿಯೊಬ್ಬನಿಗೂ ಏನಿಲ್ಲವೆಂದರೂ ಐವತ್ತು ದೂರವಾಣಿ ಸಂಖ್ಯೆಗಳು ನೆನಪಿರುತ್ತಿದ್ದವು. ಅಕ್ಕ, ತಮ್ಮ, ಅಣ್ಣ, ತಂಗಿ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ, ಮಾವ, ನಾದಿನಿ, ಸೊಸೆ, ಹತ್ತಾರು ಸ್ನೇಹಿತರು- ಎಲ್ಲರ ಸಂಖ್ಯೆಗಳೂ ಕಂಠಪಾಠ. ಸಾಲದು ಎಂದರೆ ಇನ್ನಷ್ಟು ನಂಬರುಗಳನ್ನು ಬರೆದುಕೊಳ್ಳಲು ಒಂದು ಪುಟ್ಟ ಪುಸ್ತಕ. ಆಮೇಲೆ ಕಾಯಿನ್‍ಫೋನು ಬಂದ ಮೇಲಂತೂ ಇನ್ನಷ್ಟು ಸಂಖ್ಯೆಗಳು ನೆನಪಿರಲೇಬೇಕು. ಏಕೆಂದರೆ ಮುಷ್ಟಿಮುಷ್ಟಿ ನಾಣ್ಯಗಳನ್ನು ಹಿಡಿದುಕೊಂಡು ಬೂತಿನೆದುರು ಕ್ಯೂ ನಿಲ್ಲುವಾಗ ಫೋನ್ ಪುಸ್ತಕ ಹಿಡಿದುಕೊಳ್ಳಲು ಕೈಯಲ್ಲಿ ಜಾಗವಾದರೂ ಬೇಕಲ್ಲ! 

ಈ ಮೊಬೈಲೆಂಬ ಮೋಹಮಾಯೆ ಬಂದದ್ದೇ, ಕಾಯಿನ್‍ಗಳು ಉದುರಿಹೋದವು, ನೆನಪುಗಳು ಚದುರಿಹೋದವು. ಅವೆಲ್ಲವೂ ಓಡಿಹೋಗಿ ಸೆಲ್‍ಫೋನೆಂಬ ಚಿಕ್ಕಪೆಟ್ಟಿಗೆಯೊಳಗೆ ಅಡಗಿಕೊಂಡವು. ಆರಂಭದಲ್ಲಿ ಬಂದ ಸಾಮಾನ್ಯ ಫೋನುಗಳಿಗೆ ಸ್ವಲ್ಪ ಇತಿಮಿತಿ ಇತ್ತು. ಫೋನಿನ ಸಾಮರ್ಥ್ಯ ಮುಗಿದ ಮೇಲೆ ಇನ್ನೂ ಸಂಖ್ಯೆಗಳಿದ್ದರೆ ಪ್ರತ್ಯೇಕ ಬರೆದಿಟ್ಟುಕೊಳ್ಳಬೇಕಿತ್ತು. ಆಮೇಲೆ ಹೊಸಹೊಸ ಫೋನುಗಳು ಬಂದಂತೆಲ್ಲ ಅವುಗಳೊಳಗೆ ಜಾಗ ಹೆಚ್ಚಾಯಿತು. ನಮ್ಮ ತಲೆಯೊಳಗಿನ ಜಾಗ ಕಡಿಮೆಯಾಯಿತು.

ಈಗ ಯಾವುದನ್ನೂ ನೆನಪಿಟ್ಟುಕೊಳ್ಳಬೇಕಿಲ್ಲ, ಮೊಬೈಲ್ ಇದೆಯಲ್ಲ! ಹತ್ತಲ್ಲ, ನೂರಲ್ಲ, ಸಾವಿರಾರು ನಂಬರುಗಳಿದ್ದರೂ ಅದು ನೆನಪಿಟ್ಟುಕೊಳ್ಳುತ್ತದೆ. ಮೊಬೈಲಿಗೆ ಇಂಟರ್ನೆಟ್ ಹೊಕ್ಕ ಮೇಲಂತೂ ಕೇಳುವುದೇ ಬೇಡ. ಅದಕ್ಕೂ ನೆನಪು ಬೇಕಿಲ್ಲ. ಎಲ್ಲವೂ ಅಲ್ಲೆಲ್ಲೋ ಬರಿಗಣ್ಣಿಗೆ ಕಾಣದ, ಮೊಬೈಲಿಗೆ ಮಾತ್ರ ಕಾಣುವ ಮೋಡಗಳ ನಡುವೆ ಚದುರಿಕೊಂಡಿರುತ್ತವೆ. ಕುಟುಂಬ ಸದಸ್ಯರ, ಆಪ್ತ ಸ್ನೇಹಿತರ ನಂಬರುಗಳು ಬಿಡಿ, ತನ್ನ ನಂಬರೇ ಮನುಷ್ಯನಿಗೆ ನೆನಪಿದ್ದರೆ ಅದೇ ಹೆಚ್ಚು. ಒಬ್ಬನಿಗೆ ಕನಿಷ್ಟ ಎರಡು ನಂಬರು ಈಗ ಸರ್ವೇಸಾಮಾನ್ಯ. ‘ನಿಮ್ಮ ನಂಬರ್ ಹೇಳಿ’ ಎಂದರೆ ‘ತಡೀರಿ ಒಂದು ನಿಮಿಷ’ ಎಂದು ಮತ್ತದೇ ಮೊಬೈಲ್‍ನ ನೆರವು ಪಡೆಯುವುದು ಮೊಬೈಲಿನಾಣೆಗೂ ನಿಜ.

ನಾವು ಮರೆತಿರುವುದು ನಂಬರುಗಳನ್ನು ಮಾತ್ರವೇ ಎಂದು ಕೇಳಿಕೊಂಡರೆ ಅಷ್ಟೇ ಅಲ್ಲ ಎಂದು ನಮ್ಮಷ್ಟಕ್ಕೇ ಆದರೂ ಗೊಣಗಿಕೊಳ್ಳುತ್ತೇವೆ. ಹೌದು, ಮೊಬೈಲ್ ಮತ್ತು ಅದರೊಳಗೆ ಸೇರಿಕೊಂಡಿರುವ ಡೇಟಾ ಬದುಕನ್ನು ಗುರುತೇ ಸಿಗದಷ್ಟು ಬದಲಾಯಿಸಿಬಿಟ್ಟಿವೆ. ಮೊಬೈಲ್ ಎಂದರೆ ಸೋಶಿಯಲ್ ಮೀಡಿಯಾ ಎಂಬಷ್ಟರಮಟ್ಟಿಗೆ ಮೊಬೈಲ್ ಕೂಡ ತನ್ನ ಸ್ವರೂಪವನ್ನು ಬದಲಿಸಿಕೊಂಡಿದೆ. ಈಗ ಯಾವುದೂ ನಮ್ಮೊಳಗೆ ಇಲ್ಲ, ಎಲ್ಲವನ್ನೂ ಅಲ್ಲೇ ಅಚ್ಚುಕಟ್ಟಾಗಿ ಜೋಡಿಸಿಟ್ಟಿದ್ದೇವೆ. ವರ್ಷಪೂರ್ತಿ ಜಾತ್ರೆ; ಪ್ರದರ್ಶನ ಮತ್ತು ಮಾರಾಟ ನಿರಂತರ. ಜಾತ್ರೆಗೆ ಯಾರು ಬೇಕಾದರೂ ಬರಬಹುದು, ಯಾವಾಗ ಬೇಕಾದರೂ ಹೋಗಬಹುದು. ಕೆಲವರು ನೋಡಿಕೊಂಡು, ಮತ್ತೆ ಕೆಲವರು ಮುಟ್ಟಿನೋಡಿಕೊಂಡು, ಇನ್ನು ಕೆಲವರು ಬರಿದೇ ಚೌಕಾಸಿ ಮಾಡಿಕೊಂಡು, ಉಳಿದ ಹಲವರು ಒಳ್ಳೇ ವ್ಯಾಪಾರ ಕುದುರಿಸಿಕೊಂಡು ಓಡಾಡುವುದು ಇಲ್ಲಿ ಸಾಮಾನ್ಯ. ಇಲ್ಲಿ ಎಲ್ಲರೂ ಎಲ್ಲರನ್ನೂ ಪ್ರಶ್ನೆ ಮಾಡುವವರೇ. ಆದರೆ ಯಾರು ಕೂಡ ಯಾರಿಗೂ ಜವಾಬ್ದಾರರಲ್ಲ ಅಷ್ಟೆ.

ನೆನಪುಗಳನ್ನೆಲ್ಲ ಗುಡಿಸಿ ಒರೆಸಿ ಹೊರಹಾಕುವುದೇ ಮನಸ್ಸನ್ನು ಖಾಲಿ ಇಟ್ಟುಕೊಳ್ಳುವ ವಿಧಾನ ಎಂಬುದನ್ನು ಸೋಶಿಯಲ್ ಮೀಡಿಯಾಗಳು ಕಲಿಸಿವೆ. ಬೆಳಗ್ಗೆ ಎದ್ದಲ್ಲಿಂದ ತಡರಾತ್ರಿ ಮಲಗುವವರೆಗಿನ ಎಲ್ಲ ಕ್ಷಣಗಳೂ ಅಲ್ಲಿ ದಾಖಲಾಗಬೇಕು. ಎದ್ದದ್ದು, ಬಿದ್ದದ್ದು, ಅಡುಗೆ ಮಾಡಿದ್ದು, ಉಂಡದ್ದು, ಓಡಾಡಿದ್ದು, ಖರೀದಿಸಿದ್ದು, ಬರೆದದ್ದು, ಓದಿದ್ದು, ಅತ್ತದ್ದು, ಕುಡಿದದ್ದು, ಕುಣಿದದ್ದು, ಬಸಿರಾದದ್ದು, ಹುಟ್ಟಿದ್ದು, ಸತ್ತಿದ್ದು... ಎಲ್ಲವನ್ನೂ ಹೇಳಿಕೊಳ್ಳಬೇಕು. ಹೆಂಡತಿ ಮನೆಯಲ್ಲೇ ಇದ್ದರೂ ಆಕೆಗೆ ಫೇಸ್ಬುಕ್ಕಲ್ಲೊಂದು ಆನಿವರ್ಸರಿ ವಿಶ್ ಮಾಡಬೇಕು. ಗಂಡ ಮನೆಯಲ್ಲೇ ಇದ್ದರೂ ಅಲ್ಲಿ ಆತನಿಗೊಂದು ಬರ್ತ್‍ಡೇ ವಿಶ್ ಮಾಡಬೇಕು. ಕೊನೆಗೆ ಇಂದು ತಾವು ಹುಟ್ಟಿದ, ಮದುವೆಯಾದ ದಿನ, ಎಲ್ಲರೂ ಯಥಾಸಾಧ್ಯ ಶುಭಾಶಯ ಕೋರಬಹುದು ಎಂದು ದಯನೀಯವಾಗಿ ಕೇಳಿಕೊಳ್ಳುವುದೂ ಉಂಟು. ಸೋಶಿಯಲ್ ಮೀಡಿಯಾ ನಮ್ಮನ್ನು ಅಂತಹದೊಂದು ಪರಿಸ್ಥಿತಿಗೆ ತಂದು ನಿಲ್ಲಿಸಿದೆ.

ಏಕಾಂತದ ಸುಖ

ಬದುಕಿನ ಸುಖದುಃಖದ ಕ್ಷಣಗಳನ್ನು ಯಾರೊಂದಿಗೂ ಹಂಚಬಾರದೆಂಬುದು ಇದರ ಅರ್ಥವಲ್ಲ. ಹೇಳಿಕೊಳ್ಳುವ ಬೇಕಾದಷ್ಟು ವಿಚಾರಗಳು ಇರುತ್ತವೆ. ಸಂತೋಷವನ್ನು ಹಂಚಿಕೊಂಡಾಗ ಹೆಚ್ಚಾಗುತ್ತದಂತೆ, ದುಃಖವನ್ನು ಹಂಚಿದಾಗ ಕಡಿಮೆಯಾಗುತ್ತದಂತೆ. ಆದರೆ ಯಾವುದನ್ನು ಎಲ್ಲಿ ಹೇಗೆ ಯಾವಾಗ ಹಂಚಿಕೊಳ್ಳಬೇಕು ಎಂಬ ಪ್ರಜ್ಞೆ ಮುಖ್ಯ ಅಷ್ಟೇ. ಎಲ್ಲ ನೆನಪುಗಳಿರುವುದೂ ಹಂಚಿಕೊಳ್ಳುವುದಕ್ಕಲ್ಲ, ಎಲ್ಲ ಕ್ಷಣಗಳಿರುವುದೂ ಜಾತ್ರೆಯ ಮಧ್ಯೆ ಕಳೆಯುವುದಕ್ಕಲ್ಲ. ಒಳಗೆ ಕಾಪಿಟ್ಟುಕೊಳ್ಳಬೇಕಾದ ನೆನಪುಗಳೂ, ಏಕಾಂತದಲ್ಲಿ ಅನುಭವಿಸಬೇಕಾದ ಕ್ಷಣಗಳೂ ಇರುತ್ತವೆ.

ಇದನ್ನು ಖಾಸಗಿ-ಸಾರ್ವಜನಿಕ ಎಂದಾದರೂ ಕರೆಯೋಣ, ಅಂತರಂಗ-ಬಹಿರಂಗ ಎಂದಾದರೂ ಕರೆಯೋಣ. ಅಂತೂ ಈ ಎರಡು ಜಗತ್ತುಗಳು ಇವೆಯೆಂಬುದು ನಿಜ. ಸಾಮಾಜಿಕ ಮಾಧ್ಯಮಗಳು ಈ ಎರಡು ಜಗತ್ತುಗಳ ನಡುವಿನ ಗೋಡೆಯನ್ನು ತೆಳ್ಳಗಾಗಿಸುತ್ತಲೇ ಹೋಗಿವೆ. ಎಷ್ಟು ತೆಳ್ಳಗೆ ಎಂದರೆ ಸಂಪೂರ್ಣ ಪಾರದರ್ಶಕ ಅನಿಸುವಷ್ಟು, ಅಥವಾ ಇಲ್ಲವೇ ಇಲ್ಲ ಅನಿಸುವಷ್ಟು. ಈಗ ಖಾಸಗಿಯೆಂಬುದೇ ಇಲ್ಲ. ಎಲ್ಲವೂ ಸಾರ್ವಜನಿಕ. 

ನೆಂಟರಿಷ್ಟರು ಬಂದಾಗ ಎಲ್ಲರೂ ಜತೆಯಾಗಿ ಕುಳಿತು ಮದುವೆ-ಮುಂಜಿ-ಗೃಹಪ್ರವೇಶಗಳ ಆಲ್ಬಂಗಳನ್ನು ಗಂಟೆಗಟ್ಟಲೆ ನೋಡುವ, ಸುಂದರ ಕ್ಷಣಗಳನ್ನು ಮೆಲುಕು ಹಾಕುವ ಕಾಲವೊಂದಿತ್ತು. ಈಗ ನೆಂಟರಿಷ್ಟರು ಕಲೆಯುವುದೇ ಕಮ್ಮಿ, ಕಲೆತರೂ ಇಂತಹ ದೃಶ್ಯಗಳನ್ನು ಕಾಣುವುದು ಅಪರೂಪ. ನೋಡುವುದಕ್ಕೆ ನೆನಪುಗಳ ಆಲ್ಬಂಗಳಾದರೂ ಬೇಕಲ್ಲ? ಎಲ್ಲವೂ ಆಯಾಯಾ ಕ್ಷಣದ ಸೆಲ್ಫಿಗಳಾಗಿ ಅಲ್ಲಲ್ಲೇ ಸೆರೆಯಾಗುತ್ತವೆ, ಅಲ್ಲಲ್ಲೇ ಮರೆಯಾಗುತ್ತವೆ. ಸ್ಟೇಟಸ್‍ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಒಂದೆರಡು ದಿನಗಳಲ್ಲಿ ಅಲ್ಲೇ ಕೆಳಗೆ ಸರಿದುಹೋಗುತ್ತವೆ. ಈ ಸೆಲ್ಫಿಗಳಿಗೆ ಆಯುಷ್ಯ ಕಮ್ಮಿ. ಅವು ಆ ಕ್ಷಣದ ತುಡಿತಗಳಷ್ಟೇ. ಅವನ್ನೆಲ್ಲ ಒಂದು ಕಡೆ ಪೋಣಿಸಿಟ್ಟುಕೊಳ್ಳುವ ವ್ಯವಧಾನ, ಸಮಯ, ಸ್ಥಳ ಯಾರಿಗೂ ಇರುವುದಿಲ್ಲ. ನಿಶ್ಚಿತಾರ್ಥದಿಂದ ತೊಡಗಿ ಪ್ರೀವೆಡ್ಡಿಂಗ್, ಪೋಸ್ಟ್‍ವೆಡ್ಡಿಂಗ್... ಎಲ್ಲವೂ ನೂರಾರು ಬಿಂಬಗಳಾಗಿ ಪರಿವರ್ತನೆಯಾಗುತ್ತವೆ.  ಸೋಶಿಯಲ್ ಮೀಡಿಯಾದ ನ್ಯೂಸ್‍ಫೀಡ್‍ಗಳಲ್ಲಿ ಮಿಂಚಿ ಮರೆಯಾಗುತ್ತವೆ. ಅವೆಲ್ಲ ಮಧುರಕ್ಷಣಗಳಾಗಿ ಮನಸ್ಸಿನ ಮೂಲೆಯಲ್ಲಿ ಉಳಿದುಕೊಳ್ಳುವ ಸಾಧ್ಯತೆ ಅಷ್ಟರಲ್ಲೇ ಇದೆ.

ಸೋಶಿಯಲ್ ಮೀಡಿಯಾಗಳೋ ಮನುಷ್ಯನ ಬುದ್ಧಿಯನ್ನು ಕಬಳಿಸಿಕೊಂಡು ತಮ್ಮದೇ ಒಂದು ಕೃತಕ ಬುದ್ಧಿಮತ್ತೆ ಬೆಳೆಸಿಕೊಂಡಿವೆ. ನಮಗೆ ನೆನಪಾಗದಿದ್ದರೂ, ಯೂ ಹ್ಯಾವ್ ಮೆಮೊರೀಸ್ ಟು ಶೋ... ಎಂದು ನೆನಪಿಸುತ್ತವೆ. ಮರುಕ್ಷಣದಲ್ಲಿ ‘ಇಲ್ಲಿ ಏನಾದರೂ ಬರೆಯಿರಿ’ ಎನ್ನುತ್ತವೆ. ನಾವು ಏನಾದರೂ ಬರೆಯುತ್ತೇವೆ. ಆಮೇಲೆ ಮರೆಯುತ್ತೇವೆ. 

ಪ್ರಕಟಣೆಯೆಂಬುದು ಖಾಸಗಿತನದ ಮೇಲೆ ಮಾಡಿಕೊಳ್ಳುವ ಸ್ವ-ಆಕ್ರಮಣ ಎನ್ನುತ್ತಾರೆ ಮಾರ್ಷಲ್ ಮೆಕ್‍ಲುಹಾನ್. ಪ್ರಕಟಿಸಿಕೊಂಡಷ್ಟೂ ನಮ್ಮ ಮೇಲೆಯೇ ನಾವು ಮಾಡಿಕೊಳ್ಳುವ ಆಕ್ರಮಣದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ. ಅಲ್ಲಿಗೆ ಖಾಸಗಿ ಎಂಬುದು ಯಾವುದೂ ಉಳಿಯುವುದಿಲ್ಲ. ಕೆಲವನ್ನು ಹೇಳಿಕೊಳ್ಳದಿದ್ದಾಗಲೇ ಬೆಲೆ. ಏಕಾಂತದಲ್ಲಿ ಧ್ಯಾನಿಸುವುದಕ್ಕಾದರೂ ಕೆಲವು ನೆನಪುಗಳು ಬೇಕು. ತೆರೆದಿಟ್ಟ ಮಲ್ಲಿಗೆ, ಮುಚ್ಚಳವಿಲ್ಲದ ಸೆಂಟು ಎಷ್ಟು ಹೊತ್ತು ಸುವಾಸನೆ ಬೀರಬಲ್ಲುದು? ನಾವು ಮಲ್ಲಿಗೆಯೇನು, ಇಡೀ ಉದ್ಯಾನವನ್ನೇ ಸೋಶಿಯಲ್ ಮೀಡಿಯಾದಲ್ಲಿ ಬೆಳೆಯುತ್ತೇವೆ. ಯಾವುದನ್ನು ಮುಚ್ಚಿಡಬೇಕು, ಯಾವುದನ್ನು ಬಿಚ್ಚಿಡಬೇಕು ಎಂಬ ವಿವೇಕವನ್ನೇ ಅದು ನುಂಗಿಹಾಕಿದೆ. ಕಥೆಯಾಗಬಹುದಾದ ಘಟನೆಗಳು, ಕವಿತೆಯಾಗಬಹುದಾದ ನೆನಪುಗಳು ಸಾಮಾಜಿಕ ತಾಣಗಳ ಒಂದೆರಡು ಸಾಲುಗಳಾಗಿ ಮಲಗಿಬಿಡುತ್ತವೆ. ಉದ್ದುದ್ದ ಕತೆ-ಕವಿತೆ-ಬರಹಗಳನ್ನು ಓದುವಷ್ಟು ಸಮಯ, ತಾಳ್ಮೆ ಅಲ್ಲಿನ ಗ್ರಾಹಕರಿಗೂ ಇಲ್ಲ ಬಿಡಿ. ಈಗ ಏನಿದ್ದರೂ ಹೊಚ್ಚ ಹೊಸ ನಿಯಮ: ಕತೆಯಾಗಲೀ ಕವಿತೆಯಾಗಲೀ ಸಾಲು ಒಂದೇ ಇರಲಿ.

ಎಲ್ಲರಿಗೂ ಬೇಕಾದ ಮಾಧ್ಯಮ

ಇಂಟರ್ನೆಟ್ ಇಂದು ಎಲ್ಲರಿಗೂ ಬೇಕಾದ ಮಾಧ್ಯಮ. ಅಶನ-ವಸನ-ವಸತಿಯಷ್ಟೇ ಅನಿವಾರ್ಯ. ಯುವಜನರಿಗಂತೂ ಸೋಶಿಯಲ್ ಮೀಡಿಯಾದ ಬಳಕೆ ಉಸಿರಾಟದಷ್ಟೇ ಸಹಜ. ಜೀವನದ ಪ್ರತಿಕ್ಷಣವನ್ನೂ ಅದು ಆವರಿಸಿಕೊಂಡಿದೆ.  ಇಡೀ ದೇಶದ ಒಟ್ಟಾರೆ ಜನಸಂಖ್ಯೆಯ ಶೇ. 45ರಷ್ಟು ಭಾಗ ಇಂದು ಇಂಟರ್ನೆಟ್ಟನ್ನು ಬಳಸುತ್ತಿದೆ. 52 ಕೋಟಿ ಜನ ಸೋಶಿಯಲ್ ಮೀಡಿಯಾವನ್ನು ಬಳಸುತ್ತಿದ್ದಾರೆ. ಹದಿಹರೆಯದವರ ಪೈಕಿ ಶೇ. 90ಕ್ಕಿಂತಲೂ ಹೆಚ್ಚು ಮಂದಿ ಒಂದಲ್ಲ ಒಂದು ರೀತಿ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಲೇ ಇರುತ್ತಾರೆ.

ಇದರರ್ಥ ಸಾಮಾಜಿಕ ಮಾಧ್ಯಮಗಳನ್ನು ಕೇವಲ ಋಣಾತ್ಮಕವಾಗಿ ನೋಡಬೇಕೆಂದೇನೂ ಅಲ್ಲ. 21ನೇ ಶತಮಾನದಲ್ಲಿ ಅವುಗಳ ಪ್ರಯೋಜನವನ್ನು ಕಡೆಗಣಿಸಲಾಗದು. ಸಾಮಾಜಿಕ ಸಂಪರ್ಕ, ಸ್ನೇಹಿತರ ಒಡನಾಟ, ವಿಚಾರ ವಿನಿಮಯ, ಜ್ಞಾನಸಂಗ್ರಹ, ಅವಕಾಶಗಳ ಅನ್ವೇಷಣೆ, ಮನರಂಜನೆ, ಪ್ರತಿಭೆಗಳಿಗೆ ವೇದಿಕೆ... ಇವುಗಳಿಗೆಲ್ಲ ಸೋಶಿಯಲ್ ಮೀಡಿಯಾ ವರದಾನವೇ. ಕೋವಿಡ್ ಕಾಲದಲ್ಲಂತೂ ಸಮಾಜಕ್ಕೆ ಇಂಟರ್ನೆಟ್ ಹೊಸ ಆಯಾಮವನ್ನೇ ಕಲ್ಪಿಸಿತು. ಜನ ನೂರೆಂಟು ವಿಧದಲ್ಲಿ ಅದರ ಉಪಯೋಗ ಪಡೆದರು, ಹೊಸ ಬದುಕು ಕಟ್ಟಿಕೊಂಡರು. ಶಿಕ್ಷಣ ಕ್ಷೇತ್ರಕ್ಕಂತೂ ಅದು ವರದಾನವಾಯಿತು. ವಿದ್ಯಾಭ್ಯಾಸದ ಕತೆ ಇನ್ನೇನು ಮುಗಿಯಿತು ಎಂದುಕೊಳ್ಳುವಾಗ ಇಂಟರ್ನೆಟ್ ಹೊಸ ದಾರಿಗಳನ್ನು ತೋರಿಸಿತು.

ಆದರೆ ತಂತ್ರಜ್ಞಾನಗಳನ್ನು ಬಳಸುತ್ತಲೇ ಮನುಷ್ಯನೂ ಯಂತ್ರವಾಗುವ ಪರಿ ಮಾತ್ರ ಅಸಹನೀಯ. ಯಾವುದನ್ನು, ಎಲ್ಲಿ, ಯಾವಾಗ, ಎಷ್ಟು, ಹೇಗೆ ಬಳಸಬೇಕೆಂಬ ಪರಿಜ್ಞಾನ ಇಲ್ಲದಾಗ ಮನುಷ್ಯ ಕೇವಲ ಅನಿಸುತ್ತಾನೆ. ಸೋಶಿಯಲ್ ಮೀಡಿಯಾ ತೆರೆದ ಬಯಲು. ಅಲ್ಲಿ ಅಡಗುವುದಕ್ಕಾಗದು. ಅದು ಎಲ್ಲರನ್ನೂ ನಿರಂತರ ಬೆತ್ತಲುಗೊಳಿಸುತ್ತಲೇ ಇರುತ್ತದೆ. ಅಲ್ಲಿ ಎದುರಾಗುವವರು ಎಲ್ಲರೂ ವಿಷಯ ಪರಿಣತರೇ. ಶಿಕ್ಷಣದಿಂದ ತೊಡಗಿ ರಾಜಕೀಯದವರೆಗೆ, ಸಾಹಿತ್ಯದಿಂದ ತೊಡಗಿ ರಕ್ಷಣಾ ಕ್ಷೇತ್ರದವರೆಗೆ ಯಾರೂ ಏನನ್ನೂ ಮಾತಾಡಬಲ್ಲರು. ತಮ್ಮನ್ನು ಹೊರತುಪಡಿಸಿ ಬೇರೆಯವರಿಗೆಲ್ಲ ಸಲಹೆ ನೀಡಬಲ್ಲರು, ಬುದ್ಧಿವಾದ ಹೇಳಬಲ್ಲರು. ಕೀಳರಿಮೆಯನ್ನು ಅಹಂ ಆಗಿ ಮೆರೆಸುವವರು, ಕೀರ್ತಿಶನಿಯನ್ನು ಹೆಗಲೇರಿಸಿಕೊಂಡವರು, ಮುಠ್ಠಾಳತನಕ್ಕೆ ಬುದ್ಧಿವಂತಿಕೆಯ ಅಂಗಿ ತೊಡಿಸಿದವರು, ಪಂಥ-ಸಿದ್ಧಾಂತಗಳೆಂದು ಹಗಲು ರಾತ್ರಿಗಳನ್ನು ಸವೆಸುವವರು... ಅಲ್ಲಿ ವೈವಿಧ್ಯಮಯ ವ್ಯಕ್ತಿತ್ವಗಳು ಸದಾ ಎದುರಾಗುತ್ತಲೇ ಇರುತ್ತವೆ. ಅದು ಪ್ರಬಲರಷ್ಟೇ ಉಳಿದುಕೊಳ್ಳುವ ಮಾರುಕಟ್ಟೆ. ಗಟ್ಟಿ ಗಂಟಲಿನವನಿಗೆ ಮಾತ್ರ ಉಳಿಗಾಲ. ಮಾತನಾಡದವನು ಬದುಕಿಲ್ಲವೆಂದು ಅರ್ಥ. ಅಲ್ಲಿ ಒಂದು ಕವಿತೆ ಬರೆದವನು ಕವಿಯಾಗುತ್ತಾನೆ. ಎರಡು ಕತೆ ಬರೆದವನು ಕತೆಗಾರನಾಗುತ್ತಾನೆ. ಮೂರು ಲೇಖನ ಬರೆದವನು ಸಾಹಿತಿಯಾಗುತ್ತಾನೆ. ಅಷ್ಟರಲ್ಲಿ ನಾಲ್ಕು ಪ್ರಶಸ್ತಿಗಳೂ ಸಂದಿರುತ್ತವೆ. ಅಲ್ಲಿಗೆ ಆತನೆದುರು ಖ್ಯಾತ, ಪ್ರಸಿದ್ಧ, ಇತ್ಯಾದಿ ಐದಾರು ವಿಶೇಷಣಗಳು, ಬಿರುದು ಬಾವಲಿಗಳು ಸೇರಿಕೊಳ್ಳುತ್ತವೆ.

ಸೋಶಿಯಲ್ ಮೀಡಿಯಾವೊಂದು ಮಾಯಾಬಜಾರು. ಚೂರು ತಪ್ಪಿದರೂ ಶ್ರೀಕೃಷ್ಣಗಾರುಡಿಯಂತಹ ಗೊಂಡಾರಣ್ಯದಲ್ಲಿ ಸಿಲುಕಿ ಇನ್ನಿಲ್ಲದ ಪಾಡುಪಡಬೇಕಾಗುತ್ತದೆ. ಐವತ್ತು ದೂರವಾಣಿ ಸಂಖ್ಯೆಗಳೇನು, ನಮ್ಮ ಹೆಸರು-ವಿಳಾಸವೇ ಮರೆತು ಹೋದೀತು. ಅಂತಹದೊಂದು ದುರಂತ ನಡೆಯದೇ ಇರಲಿ.

- ಸಿಬಂತಿ ಪದ್ಮನಾಭ ಕೆ. ವಿ.