ಗುರುವಾರ, ಡಿಸೆಂಬರ್ 31, 2020

ಮಾಧ್ಯಮ ಶಿಕ್ಷಣಕ್ಕೆ ನೂರು: ಸವಾಲು ನೂರಾರು

31 ಡಿಸೆಂಬರ್ 2020ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಭಾರತದ ಮಾಧ್ಯಮ ಶಿಕ್ಷಣಕ್ಕೆ ನೂರು ವರ್ಷ ತುಂಬಿತು. ಶತಮಾನವೆಂಬುದು ಚರಿತ್ರೆಯಲ್ಲಿ ಬಹುದೊಡ್ಡ ಅವಧಿ. ಒಂದು ಲಕ್ಷಕ್ಕೂ ಹೆಚ್ಚು ಪತ್ರಿಕೆಗಳು, 900ರಷ್ಟು ಟಿವಿ ಚಾನೆಲ್‌ಗಳು, 800ರಷ್ಟು ರೇಡಿಯೋ ಕೇಂದ್ರಗಳು, ಅಸಂಖ್ಯ ಆನ್ಲೈನ್ ಸುದ್ದಿತಾಣಗಳಿರುವ ಈ ದೇಶದಲ್ಲಿ ನೂರು ವರ್ಷ ಪೂರೈಸಿರುವ ಮಾಧ್ಯಮ ಶಿಕ್ಷಣ ಏನು ಮಾಡಿದೆ, ಏನು ಮಾಡಬೇಕು ಎಂಬ ಪ್ರಶ್ನೆ ಮಹತ್ವದ್ದು.

ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆ ಸಮಾಜ ಸುಧಾರಕಿ ಆನಿಬೆಸೆಂಟ್‌ಗೆ ಸಲ್ಲುತ್ತದೆ. ಅವರು 1920ರಲ್ಲಿ ತಮ್ಮ ಥಿಯೋಸಾಫಿಕಲ್ ಸೊಸೈಟಿಯ ಅಡಿಯಲ್ಲಿ ಮದ್ರಾಸ್‌ನ ಅಡ್ಯಾರ್‌ನಲ್ಲಿರುವ ನ್ಯಾಷನಲ್ ಯೂನಿವರ್ಸಿಟಿಯ ಮೂಲಕ ಮೊದಲ ಬಾರಿಗೆ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದರು. ಅವರೇ ನಡೆಸುತ್ತಿದ್ದ 'ನ್ಯೂ ಇಂಡಿಯಾ' ಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಪಡೆಯುವ ವ್ಯವಸ್ಥೆಯೂ ಇತ್ತು.

ಮುಂದೆ ಆಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯ (1938), ಲಾಹೋರಿನ ಪಂಜಾಬ್ ವಿಶ್ವವಿದ್ಯಾನಿಲಯ (1941), ಮದ್ರಾಸ್ (1947) ಮತ್ತು ಕಲ್ಕತ್ತಾ (1948) ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮದ ಕೋರ್ಸುಗಳು ಬಂದವು. 1951ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಪರಿಚಯಿಸುವುದರೊಂದಿಗೆ ಕರ್ನಾಟಕಕ್ಕೆ ಮಾಧ್ಯಮ ಶಿಕ್ಷಣ ಪ್ರವೇಶಿಸಿತು.

ಆನಿಬೆಸೆಂಟ್ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದಾಗ ಅವರ ಗಮನ ಇದ್ದುದು ಪತ್ರಿಕೆಗಳಿಗಾಗಿ ಬರೆಯುವುದರ ಮತ್ತು ಸಂಪಾದಿಸುವುದರ ಬಗ್ಗೆ. ಆಗ ಇದ್ದ ಪತ್ರಿಕೆಗಳ ಸಂಖ್ಯೆಯೂ ಬೆರಳೆಣಿಕೆಯಷ್ಟು. ಭಾರತಕ್ಕೆ ರೇಡಿಯೋ ಬಂದದ್ದೇ 1921ರಲ್ಲಿ. ಸಿನಿಮಾ ಇನ್ನೂ ಮೂಕಿಯುಗದಲ್ಲೇ ಇತ್ತು. ಟಿವಿ, ಕಂಪ್ಯೂಟರ್, ಇಂಟರ್ನೆಟ್‌ಗಳೆಲ್ಲ ನಮ್ಮ ಕಲ್ಪನೆಗೂ ಮೀರಿದವಾಗಿದ್ದವು. ಹೀಗಾಗಿ 'ಜರ್ನಲಿಸಂ' ಎಂದಾಗ ಮುದ್ರಣ ಮಾಧ್ಯಮದ ಆಚೆಗೆ ಯೋಚಿಸುವಂತಹ ಅಗತ್ಯವೇನೂ ಇರಲಿಲ್ಲ.

ಒಂದು ಶತಮಾನದ ಅಂತರದಲ್ಲಿ ಮಾಧ್ಯಮ ಜಗತ್ತು ಊಹೆಗೂ ಮೀರಿ ಬದಲಾಗಿದೆ- ಪತ್ರಿಕೋದ್ಯಮ ಎಂಬ ಪದವೇ ಅಸಹಜ ಎನಿಸುವಷ್ಟು. ಮುದ್ರಣ, ವಿದ್ಯುನ್ಮಾನ ಇತ್ಯಾದಿ ವರ್ಗೀಕರಣದ ಕಾಲವೇ ಹೊರಟುಹೋಗಿದೆ. ಎಲ್ಲವೂ ಡಿಜಿಟಲ್ ಎಂಬ ನಾಲ್ಕಕ್ಷರದೊಳಗೆ ನುಸುಳಿಕೊಂಡಿವೆ. ಡಿಜಿಟಲೇ ನಮ್ಮ ಭವಿಷ್ಯ ಎಂದು ನಿರ್ಧರಿಸಿಯಾಗಿದೆ. ಕೋವಿಡ್ ಅಂತೂ ಮಾಧ್ಯಮರಂಗದ ಒಟ್ಟಾರೆ ದೃಷ್ಟಿಕೋನವನ್ನೇ ಬದಲಾಯಿಸಿದೆ. ಜಾಹೀರಾತು, ಕಾರ್ಪೋರೇಟ್ ಕಮ್ಯೂನಿಕೇಶನ್, ಮನರಂಜನಾ ಉದ್ಯಮ, ಈವೆಂಟ್ ಮ್ಯಾನೇಜ್ಮೆಂಟ್, ವಿಎಫ್‌ಎಕ್ಸ್, ಅನಿಮೇಶನ್, ಡಿಜಿಟಲ್ ಕಂಟೆಂಟ್, ವೀಡಿಯೋ ಗೇಮ್, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ, ಭಾಷಾಂತರ ಮುಂತಾದ ಹತ್ತಾರು ಅವಕಾಶಗಳು ಮಾಧ್ಯಮರಂಗವೆಂಬ ತೆರೆದಬಯಲಲ್ಲಿ ಬಿಡಾರ ಹೂಡಿವೆ. 

ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಮಾಧ್ಯಮ ಶಿಕ್ಷಣದ ಪರಿಕಲ್ಪನೆ ಬದಲಾಗಿದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ದೇಶದಾದ್ಯಂತ ಇರುವ ವಿವಿಧ ಬಗೆಯ ಸುಮಾರು 1000ದಷ್ಟು ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ ಅಂದಾಜು 20,000ದಷ್ಟು ಯುವಕರು ಪ್ರತಿವರ್ಷ ಹೊರಬರುತ್ತಿದ್ದಾರೆ. ಹೊಸ ಮಾಧ್ಯಮ ಜಗತ್ತು ಬಯಸುವ ಜ್ಞಾನ-ಕೌಶಲಗಳು ಇವರಲ್ಲಿವೆಯೇ, ಅದಕ್ಕೆ ಬೇಕಾದಂತೆ ಹೊಸಬರನ್ನು ತರಬೇತುಗೊಳಿಸುವುದಕ್ಕೆ ನಮ್ಮ ಮಾಧ್ಯಮ ಶಿಕ್ಷಣ ವ್ಯವಸ್ಥೆ ಸನ್ನದ್ಧವಾಗಿದೆಯೇ ಎಂದು ಕೇಳಿಕೊಳ್ಳಬೇಕಾಗಿದೆ.

ಮಾಧ್ಯಮರಂಗ ಅನಿಮೇಶನ್ ಯುಗದಲ್ಲಿದ್ದರೂ ಶಿಕ್ಷಣಸಂಸ್ಥೆಗಳು ಇನ್ನೂ ಅಚ್ಚುಮೊಳೆಗಳ ಬಗೆಗೇ ಪಾಠಮಾಡುತ್ತಿವೆ, ಪತ್ರಿಕೋದ್ಯಮ ತರಗತಿಗಳಲ್ಲಿ ಬೋಧಿಸಿದ್ದಕ್ಕೂ ವಾಸ್ತವಕ್ಕೂ ಸಂಬಂಧ ಇಲ್ಲ ಎಂಬುದು ಇತ್ತೀಚಿನವರೆಗೂ ಇದ್ದ ಆರೋಪವಾಗಿತ್ತು. ವರ್ತಮಾನದ ಮಾಧ್ಯಮರಂಗ ಬಯಸುವ ಕೌಶಲಗಳು ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿಲ್ಲ ಎಂಬುದು ಇದರ ಸಾರ. ಮಾಧ್ಯಮ ಶಿಕ್ಷಣ ಸಂಸ್ಥೆಗಳು ಈ ಆರೋಪದಿಂದ ಹೊರಬರಲು ತಕ್ಕಮಟ್ಟಿಗೆ ಪ್ರಯತ್ನಿಸಿವೆ. ವಿಶ್ವವಿದ್ಯಾನಿಲಯಗಳ ಮಾಧ್ಯಮ ಪಠ್ಯಕ್ರಮ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಪರಿಷ್ಕರಣೆಗೆ ಒಳಗಾಗಿದೆ. ಸಿದ್ಧಾಂತ-ಪ್ರಯೋಗ ಎರಡಕ್ಕೂ ಸಮಾನ ಆದ್ಯತೆಯನ್ನು ನೀಡುವ, ಮಾಧ್ಯಮರಂಗದಲ್ಲಿನ ಹೊಸತುಗಳನ್ನು ಆಗಿಂದಾಗ್ಗೆ ಪಠ್ಯಕ್ರಮದೊಳಗೆ ಸೇರಿಸುವ ಪ್ರಯತ್ನಗಳು ನಡೆದಿವೆ.

ಆದರೆ ಪಠ್ಯಕ್ರಮದಷ್ಟೇ ಅದರ ಅನುಷ್ಠಾನವೂ ಮುಖ್ಯ. ಇದಕ್ಕೆ ಬೇಕಾದ ತಜ್ಞ ಅಧ್ಯಾಪಕರು, ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯ ಇದೆಯೇ ಎಂದರೆ ನಿರುತ್ತರ. ಮಾಧ್ಯಮ ಕೋರ್ಸುಗಳನ್ನು ತೆರೆಯುವಲ್ಲಿ ಇರುವ ಉತ್ಸಾಹ ಅವುಗಳನ್ನು ಪೋಷಿಸುವಲ್ಲಿ ಇಲ್ಲ. ಟಿವಿ, ಜಾಹೀರಾತು, ಪತ್ರಿಕೆ, ಅನಿಮೇಶನ್, ಸಿನಿಮಾ, ಗ್ರಾಫಿಕ್ಸ್, ಡಿಜಿಟಲ್ ಎಂದರೆ ಸಾಲದು; ಅವುಗಳ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವುದಕ್ಕೆ ಪರಿಣತಿ ಬೇಕು, ಸೌಕರ್ಯಗಳು ಇರಬೇಕು. ಈ ವಿಷಯದಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಅಜಗಜಾಂತರ ಇದೆ. 

ಸರ್ಕಾರಿ ಕಾಲೇಜುಗಳಲ್ಲಿರುವ ಪತ್ರಿಕೋದ್ಯಮ ವಿಭಾಗಗಳ ಸ್ಥಿತಿಯಂತೂ ಶೋಚನೀಯ. ಒಂದೆರಡು ಕಂಪ್ಯೂಟರುಗಳಾದರೂ ಇಲ್ಲದ ಪತ್ರಿಕೋದ್ಯಮ ವಿಭಾಗಗಳು ಇನ್ನೂ ಇವೆ ಎಂದರೆ ನಂಬಲೇಬೇಕು. ಸಾಹಿತ್ಯ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಬೋಧಿಸಿದಂತೆ ಪತ್ರಿಕೋದ್ಯಮವನ್ನೂ ಬೋಧಿಸಬೇಕು ಎಂದರೆ ಅದೆಷ್ಟು ಪರಿಣಾಮಕಾರಿಯಾದೀತು? ಅನೇಕ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರೇ ಇಲ್ಲ. ವಿಶ್ವವಿದ್ಯಾನಿಲಯಗಳಲ್ಲೂ ಅನೇಕ ಹುದ್ದೆಗಳು ಖಾಲಿ ಬಿದ್ದಿವೆ. ಖಾಸಗಿ ಸಂಸ್ಥೆಗಳೇನೋ ಒಂದಷ್ಟು ಸೌಕರ್ಯಗಳನ್ನು ಹೊಂದಿವೆ ಎಂದರೆ ಅಂತಹ ನಗರ ಕೇಂದ್ರಿತ ಕಾಲೇಜುಗಳು, ಅವು ವಿಧಿಸುವ ಶುಲ್ಕದ ಕಾರಣದಿಂದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಗಗನಕುಸುಮ. 

ವಿಶ್ವವಿದ್ಯಾನಿಲಯಗಳ ಮಾಧ್ಯಮ ಅಧ್ಯಯನ ವಿಭಾಗಗಳು ವಿದ್ಯಾರ್ಥಿಗಳನ್ನು ಅಕಡೆಮಿಕ್ ಆಗಿ ಬೆಳೆಸಬೇಕೇ ಕೌಶಲಗಳಿಗೆ ಗಮನಕೊಡಬೇಕೇ ಎಂಬ ವಿಷಯದಲ್ಲಿ ಇನ್ನೂ ಅಭಿಪ್ರಾಯ ಭೇದಗಳಿವೆ. ಆದರೆ ವೃತ್ತಿಪರರು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಬೇಕು, ಉತ್ತಮ ಸಂಬಂಧ ಬೆಳೆಯಬೇಕು, ಅಧ್ಯಾಪಕರೂ ಕಾಲದಿಂದ ಕಾಲಕ್ಕೆ ಅಪ್ಡೇಟ್ ಆಗಬೇಕು ಎಂಬಲ್ಲಿ ಗೊಂದಲ ಇಲ್ಲ. ಇಚ್ಛಾಶಕ್ತಿ ಎಲ್ಲದಕ್ಕಿಂತ ದೊಡ್ಡದು.

- ಸಿಬಂತಿ ಪದ್ಮನಾಭ ಕೆ. ವಿ.

ಬುಧವಾರ, ಡಿಸೆಂಬರ್ 16, 2020

ಕೊರೋನಾ ಕಂಟಕದ ನಡುವೆ ಯಕ್ಷಗಾನಕ್ಕೆ ಚೈತನ್ಯ ತುಂಬಿದ ಸಿರಿಬಾಗಿಲು ಪ್ರತಿಷ್ಠಾನ

ನವೆಂಬರ್ 2020ರ 'ಯಕ್ಷಪ್ರಭಾ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಕೊರೋನಾ ಕಂಟಕ ಯಕ್ಷಗಾನವನ್ನೂ ಬಿಡಲಿಲ್ಲ. ಎಷ್ಟೋ ವರ್ಷಗಳಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಕೊರೋನಾ ಕಾರಣಕ್ಕೆ ಏಕಾಏಕಿ ನಿಂತುಹೋದವು. ವೃತ್ತಿಪರರು, ಹವ್ಯಾಸಿಗಳು ಎಂಬ ಭೇದವಿಲ್ಲದೆ ಪ್ರತಿಯೊಬ್ಬ ಕಲಾವಿದರೂ ಅಸಹಾಯಕರಾದರು. ಯಕ್ಷಗಾನ ನೂರಾರು ಮಂದಿಗೆ ಜೀವನೋಪಾಯವೂ ಆಗಿತ್ತು. ಈ ಆಕಸ್ಮಿಕ ಬೆಳವಣಿಗೆಯಿಂದ ಕಲಾಭಿಮಾನಿಗಳೂ ಕಂಗೆಟ್ಟರು.

ಎಲ್ಲ ಸಂಕಷ್ಟಗಳ ನಡುವೆ ಕಲಾವಿದರಿಗೆ ಧೈರ್ಯ ತುಂಬುವ, ಸಮಾಜದಲ್ಲಿ ಚೈತನ್ಯ ಮೂಡಿಸುವ ಅನೇಕ ಪ್ರಯತ್ನಗಳು ಯಕ್ಷಗಾನ ವಲಯದಲ್ಲೇ ನಡೆದವು. ಅವುಗಳಲ್ಲಿ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಹಲವು ಪ್ರಯತ್ನಗಳು ಗಮನಾರ್ಹವೆನಿಸಿ ಪ್ರಶಂಸೆ ಹಾಗೂ ಮನ್ನಣೆಗಳಿಗೆ ಪಾತ್ರವಾದವು. ಆ ಉಪಕ್ರಮಗಳು ವಿಶಿಷ್ಟ ಹಾಗೂ ಮೌಲಿಕವಾಗಿದ್ದುದೇ ಇದಕ್ಕೆ ಕಾರಣ.

ಕೊರೋನಾ ವೇಗವಾಗಿ ಹರುಡುತ್ತಿದ್ದ ಸಂದರ್ಭ ಸರ್ಕಾರವೂ ಸೇರಿದಂತೆ ವಿವಿಧ ಸಂಘಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೆ, ಅಂತಹದೊಂದು ಕೆಲಸವನ್ನು ಯಕ್ಷಗಾನದ ಮೂಲಕವೂ ಯಾಕೆ ಮಾಡಬಾರದು ಎಂಬ ಯೋಚನೆ ಸಿರಿಬಾಗಿಲು ಪ್ರತಿಷ್ಠಾನದ ಮುಖ್ಯಸ್ಥರಾದ ಶ್ರೀ ರಾಮಕೃಷ್ಣ ಮಯ್ಯ ಸಿರಿಬಾಗಿಲು ಮತ್ತವರ ಬಳಗಕ್ಕೆ ಬಂತು. ಯೋಚನೆ ಅನುಷ್ಠಾನವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಒಂದೆರಡು ದಿನಗಳಲ್ಲಿ ‘ಕೊರೋನಾ ಜಾಗೃತಿ ಯಕ್ಷಗಾನ’ ರೂಪುಗೊಂಡು ಪ್ರದರ್ಶನಕ್ಕೂ ಸಿದ್ಧವಾಯಿತು. ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಎಂ. ಎ. ಹೆಗಡೆ ಹಾಗೂ ಹಿರಿಯ ವಿದ್ವಾಂಸರಾದ ಶ್ರೀ ಡಿ. ಎಸ್. ಶ್ರೀಧರ ಅವರು ಪದ್ಯಗಳನ್ನು ಹೊಸೆದಿದ್ದರು. ಯಕ್ಷಗಾನದ ಮೂಲಕ ಜನರ ಸಾಮಾಜಿಕ ಅರಿವನ್ನು ಹೆಚ್ಚಿಸುವ ಪ್ರಯತ್ನಗಳು ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ನಡೆದಿರುವುದರಿಂದ ಇಂತಹದೊಂದು ಪ್ರಯೋಗವು ಅಸಹಜ ಎನಿಸಲಿಲ್ಲ.

ಆದರೆ ಕೊರೋನಾ ಕಾರಣದಿಂದ ಜನಜೀವನವೇ ಸ್ತಬ್ಧವಾಗಿದ್ದುದರಿಂದ ಈ ಯಕ್ಷಗಾನವನ್ನು ಜನರು ನೋಡುವಂತೆ ಮಾಡುವುದೇ ಸವಾಲಾಗಿತ್ತು. ಆಗ ಸಹಾಯಕ್ಕೆ ಬಂದುದು ತಂತ್ರಜ್ಞಾನ. ಪ್ರತಿಷ್ಠಾನವು ಯಕ್ಷಗಾನ ಪ್ರದರ್ಶನವನ್ನು ವೀಡಿಯೋ ಚಿತ್ರೀಕರಣಗೊಳಿಸಿ ಮಾರ್ಚ್ 21, 2000ದಂದು ತನ್ನ ಯೂಟ್ಯೂಬ್ ಚಾನೆಲ್‍ನಲ್ಲಿ ಹರಿಯಬಿಟ್ಟಿತು. ಈ ಕ್ಷಿಪ್ರ ಸಾಹಸವನ್ನು ಜನರು ಅಚ್ಚರಿ ಹಾಗೂ ಸಂತೋಷದಿಂದಲೇ ಸ್ವಾಗತಿಸಿದರು. ಒಂದೆರಡು ದಿನಗಳಲ್ಲಿ ಪ್ರಪಂಚದಾದ್ಯಂತ ಸಾವಿರಾರು ಜನರು ‘ಕೊರೋನಾ ಜಾಗೃತಿ ಯಕ್ಷಗಾನ’ವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದರ ಬೆನ್ನಿಗೇ ‘ಕೊರೋನಾ ದಿಗ್ಬಂಧನ - ನಾನು ಕಲಿತ ಪಾಠಗಳು’ ಎಂಬ ಶೀರ್ಷಿಕೆಯಲ್ಲಿ ಪ್ರತಿಷ್ಠಾನವು ಯಕ್ಷಗಾನ ಕಲಾವಿದರಿಗೆ ಲೇಖನ ಸ್ಪರ್ಧೆಯನ್ನೂ ಏರ್ಪಡಿಸಿತು. ವೃತ್ತಿಕಲಾವಿದರು, ಹವ್ಯಾಸಿಗಳು ಹಾಗೂ ತಾಳಮದ್ದಳೆ ಅರ್ಥಧಾರಿಗಳಿಗಾಗಿ ಪ್ರತ್ಯೇಕ ವಿಭಾಗಗಳಿದ್ದುದರಿಂದ ಎಲ್ಲ ಕಲಾವಿದರಿಗೂ ಭಾಗವಹಿಸಲು ಅವಕಾಶ ಸಿಕ್ಕಿತು. ಕೊರೋನಾ ಜಂಜಡಲ್ಲಿ ಒತ್ತಡಕ್ಕೆ ಒಳಗಾಗಿದ್ದ ಕಲಾವಿದರ ಮನಸ್ಸುಗಳಿಗೆ ಈ ವೇದಿಕೆಯಿಂದ ಒಂದಿಷ್ಟು ನಿರಾಳತೆ ಪ್ರಾಪ್ತವಾಯಿತು. ಜೂನ್ ತಿಂಗಳಲ್ಲಿ ಪಣಂಬೂರು ವೆಂಕಟ್ರಾಯ ಐತಾಳ ಪ್ರತಿಷ್ಠಾನದ ಸಹಯೋಗದೊಂದಿಗೆ ಮೂರು ದಿನಗಳ ಆನ್ಲೈನ್ ಯಕ್ಷಗಾನವನ್ನು ಏರ್ಪಡಿಸಿ ಸಿರಿಬಾಗಿಲು ತಂಡವು ಕಲಾವಿದರಿಗೆ ಇನ್ನಷ್ಟು ಬೆಂಬಲ ನೀಡಿತು. ಗಡಿನಾಡಿನ ಸುಮಾರು 40 ಮಂದಿ ಕಲಾವಿದರು ಕಂಸವಧೆ, ಸೀತಾಕಲ್ಯಾಣ, ಇಂದ್ರಜಿತು ಕಾಳಗ ಪ್ರಸಂಗಗಳಲ್ಲಿ ಅಭಿನಯಿಸಿದರು.

ಕೊರೋನಾ ಜಾಗೃತಿ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋದ ಪ್ರತಿಷ್ಠಾನವು ಬೊಂಬೆಯಾಟವನ್ನು ಸಂಯೋಜಿಸಿತು. ಶ್ರೀ ಕೆ. ವಿ. ರಮೇಶ್ ಅವರ ನೇತೃತ್ವದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತಂಡವು ಇಂತಹದೊಂದು ಪ್ರಯೋಗಕ್ಕೆ ನೆರವಾಯಿತು. ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನ ಕೇಂದ್ರ ಮತ್ತು ಗ್ರಂಥಾಲಯದ ಸಹಯೋಗವೂ ಇದಕ್ಕಿತ್ತು. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಪ್ರತ್ಯೇಕವಾಗಿ ಸಿದ್ಧಗೊಂಡ ತಲಾ 30 ನಿಮಿಷಗಳ ಬೊಂಬೆಯಾಟವು ಮತ್ತೆ ಯೂಟ್ಯೂಬ್ ಮೂಲಕ ವಿಶ್ವದೆಲ್ಲೆಡೆ ಪಸರಿಸಿತು. ಬೊಂಬೆಯಾಟಕ್ಕೆ ಭಾಷೆಗಿಂತಲೂ ಆಚೆಗಿನ ಒಂದು ಜಾಗತಿಕ ಭಾಷೆಯ ಆಯಾಮವಿರುವುದರಿಂದ ಅದು ಬೇಗನೆ ಜನರನ್ನು ತಲುಪುತ್ತದೆ.

ಕನ್ನಡ ಯಕ್ಷಗಾನ ಬೊಂಬೆಯಾಟಕ್ಕೆ ಶ್ರೀ ಡಿ. ಎಸ್. ಶ್ರೀಧರ ಅವರ ಪದ್ಯಗಳಿದ್ದರೆ, ಹಿಂದಿಯಲ್ಲಿ ಪದ್ಯ ಹಾಗೂ ಸಂಭಾಷಣೆಯನ್ನು ಶ್ರೀ ಸರ್ಪಂಗಳ ಈಶ್ವರ ಭಟ್, ಹಾಗೂ ಇಂಗ್ಲಿಷ್ ಸಂಭಾಷಣೆಗಳನ್ನು ಪ್ರಸನ್ನ ಕುಮಾರಿ ಎ. ಮತ್ತು ದಿನೇಶ್ ಕೆ. ಎಸ್. ರಚಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯು ಏರ್ಪಡಿಸಿದ್ದ ವೆಬಿನಾರ್ ಸರಣಿಯೊಂದರಲ್ಲಿ ಈ ಪ್ರಯತ್ನವನ್ನು ಪ್ರಸ್ತಾಪಿಸಿ ಪ್ರಶಂಸಿಸುವ ಮೂಲಕ ಸಿಂಗಾಪುರದ ನ್ಯಾಷನಲ್ ಯೂನಿವರ್ಸಿಟಿಯ ಪ್ರಾಧ್ಯಾಪಕ ಪ್ರೊ. ಡೇಲ್ ಫಿಶರ್ ಅಂತಾರಾಷ್ಟ್ರೀಯ ಗಮನವನ್ನೂ ಸೆಳೆದರು.

‘ಪಲಾಂಡು ಚರಿತ್ರೆ’, ‘ಕರ್ಮಣ್ಯೇವಾಧಿಕಾರಸ್ತೇ’, ‘ರಾಮಧಾನ್ಯ ಚರಿತ್ರೆ’ ಹಾಗೂ ‘ಜಡಭರತ’ ಯಕ್ಷಗಾನಗಳು ಪ್ರೇಕ್ಷಕರ ಹಾಗೂ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದ ಸಿರಿಬಾಗಿಲು ಪ್ರತಿಷ್ಠಾನದ ಹಿರಿಮೆಯನ್ನು ಹೆಚ್ಚಿಸಿದ ವಿಶಿಷ್ಟ ಪಯತ್ನಗಳು. ವಿವಿಧ ಕಾರಣಗಳಿಗಾಗಿ ಈ ಯಕ್ಷಗಾನಗಳು ಮೌಲಿಕ ಎನಿಸಿದವಲ್ಲದೆ ಪ್ರೇಕ್ಷಕರು ಹಾಗೂ ವಿದ್ವಾಂಸರ ಪ್ರಶಂಸೆಗೆ ಪಾತ್ರವಾದವು. ಪಲಾಂಡು ಚರಿತ್ರೆ ಹಾಗೂ ರಾಮಧಾನ್ಯ ಚರಿತ್ರೆ ಪ್ರಸಂಗಗಳು ತಮ್ಮೊಳಗೆ ಇಟ್ಟುಕೊಂಡಿದ್ದ ಸಾರ್ವಕಾಲಿಕ ಮೌಲ್ಯಗಳಿಗಾಗಿ ಗಮನಾರ್ಹವೆನಿಸಿದರೆ, ಕರ್ಮಣ್ಯೇವಾಧಿಕಾಸ್ತೇ ಹಾಗೂ ಜಡಭರತ ಯಕ್ಷಗಾನಗಳು ತಮ್ಮ ತಾತ್ವಿಕ ವಿಚಾರಗಳಿಂದ ಸಹೃದಯರಿಗೆ ಹತ್ತಿರವೆನಿಸಿದವು. 

ಕೆರೋಡಿ ಸುಬ್ಬರಾಯರ ಪಲಾಂಡು ಚರಿತ್ರೆ 1896ರಷ್ಟು ಹಿಂದಿನದು. ಮೇಲ್ನೋಟಕ್ಕೆ ನೆಲದಡಿಯಲ್ಲಿ ಬೆಳೆಯುವ ಕಂದಮೂಲಗಳು ಹಾಗೂ ನೆಲದ ಮೇಲೆ ಬೆಳಯುವ ಹಣ್ಣು-ತರಕಾರಿಗಳ ನಡುವಿನ ಜಗಳದ ಪ್ರಸಂಗವಾಗಿ ಕಂಡರೂ, ಅದರ ಹಿಂದೆ ವರ್ಗಸಂಘರ್ಷದ ಚರ್ಚೆಯಿದೆ. ಪಲಾಂಡು ಹಾಗೂ ಚೂತರಾಜನ ನಡುವಿನ ವಾಗ್ವಾದವನ್ನು ವಿಷ್ಣು ಪರಿಹರಿಸುವ ವಿದ್ಯಮಾನದಲ್ಲಿ ತಮ್ಮ ಸ್ಥಾನದ ಕಾರಣಕ್ಕೆ ಯಾರೂ ಮೇಲಲ್ಲ, ಯಾರೂ ಕೀಳಲ್ಲ ಎಂಬ ಸಾರ್ವಕಾಲಿಕ ಸಂದೇಶವನ್ನು ಪ್ರತಿಪಾದಿಸುವ ಉದ್ದೇಶವಿದೆ. ಪ್ರೊ. ಎಂ. ಎ. ಹೆಗಡೆಯವರ ‘ರಾಮಧಾನ್ಯ ಚರಿತ್ರೆ’ಯೂ ಇದನ್ನೇ ಧ್ವನಿಸುತ್ತದೆ. ಕನಕದಾಸರ 12ನೇ ಶತಮಾನದ ರಾಮಧಾನ್ಯ ಚರಿತ್ರೆಯೇ ಇದಕ್ಕೆ ಆಧಾರ. ಭತ್ತ ಮತ್ತು ರಾಗಿಯ ನಡುವೆ ಹುಟ್ಟಿಕೊಳ್ಳುವ ಯಾರು ಶ್ರೇಷ್ಠರು ಎಂಬ ವಾಗ್ವಾದದ ಅಂತ್ಯದಲ್ಲಿ ಕೀಳೆನಿಸಲ್ಪಟ್ಟ ರಾಗಿಯೇ ಮೇಲೆಂದು ತೀರ್ಮಾನವಾಗುವುದು ಪ್ರಸಂಗದ ಕಥಾನಕ. 

ದೇವಿದಾಸ ಕವಿಯ ಕೃಷ್ಣಸಂಧಾನ-ಭೀಷ್ಮಪರ್ವದ ಆಧಾರದಲ್ಲಿ ಪ್ರದರ್ಶನಗೊಂಡ ‘ಕರ್ಮಣ್ಯೇವಾಧಿಕಾರಸ್ತೇ’ ಕರ್ಮಸಿದ್ಧಾಂತದ ಮೇಲ್ಮೆಯನ್ನು ಸಾರುವ ಪ್ರಸಂಗ. ಪೂರ್ವಾರ್ಧದಲ್ಲಿ ಕೌರವನು ಭೀಷ್ಮರನ್ನು ಸೇನಾಧಿಪತ್ಯಕ್ಕೆ ಒಪ್ಪಿಸುವ ಹಾಗೂ ಧರ್ಮರಾಯನು ಭೀಷ್ಮ-ದ್ರೋಣರ ಅಭಯವನ್ನು ಪಡೆಯುವ ಸನ್ನಿವೇಶಗಳಿದ್ದರೆ, ಉತ್ತರಾರ್ಧದಲ್ಲಿ ಗೀತಾಚಾರ್ಯನು ಅರ್ಜುನನ ಗೊಂದಲಗಳನ್ನು ಪರಿಹರಿಸಿ ಜ್ಞಾನದ ಬೆಳಕು ಹರಿಸುವ ಸಂದರ್ಭವಿದೆ. ಶ್ರೀ ಡಿ. ಎಸ್. ಶ್ರೀಧರ ಅವರ ‘ಜಡಭರತ’ ಪ್ರಸಂಗದಲ್ಲಿ ಕರ್ಮಬಂಧ ಹಾಗೂ ಅದ್ವೈತಗಳ ಚರ್ಚೆಯನ್ನು ಸಾಮಾನ್ಯ ಪ್ರೇಕ್ಷಕರಿಗೆ ಸರಳ ಭಾಷೆಯಲ್ಲಿ ತಲುಪಿಸುವ ಪ್ರಯತ್ನವಿದೆ. ಹಾಗೆಯೇ, ತನ್ನ ದೈಹಿಕ ಮತ್ತು ಮಾನಸಿಕ ವ್ಯತ್ಯಾಸಗಳ ಕಾರಣಕ್ಕೆ ಯಾವ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಯಿಂದ  ಹೊರಗುಳಿಯಬಾರದು ಎಂಬ ಈ ಪ್ರಸಂಗದ ಸಂದೇಶ ಎಲ್ಲ ಕಾಲಕ್ಕೂ ಸಲ್ಲುವಂಥದ್ದು.

ಇಂತಹ ಪ್ರಯತ್ನಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಹಿಮ್ಮೇಳ-ಮುಮ್ಮೇಳ ಕಲಾವಿದರ ಪಾತ್ರ ತುಂಬ ದೊಡ್ಡದು. ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀ ರಾಧಾಕೃಷ್ಣ ನಾವಡ ಮಧೂರು, ಶ್ರೀ ವಾಸುದೇವ ರಂಗಾ ಭಟ್, ಶ್ರೀ ಪೆರ್ಮುದೆ ಜಯಪ್ರಕಾಶ ಶೆಟ್ಟಿ, ಶ್ರೀ ರವಿರಾಜ ಪನೆಯಾಲ ಮೊದಲಾದ ಕಲಾವಿದರು ಪ್ರಸಂಗಗಳ ಆಶಯವನ್ನು ಪ್ರತಿಪಾದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಅಭಿನಂದನಾರ್ಹ. ಇಂತಹ ಪ್ರಯತ್ನಗಳಿಗೆ ಬೆಂಬಲವಾದ ಹೈದರಾಬಾದಿನ ಕನ್ನಡ ನಾಟ್ಯರಂಗ, ಬೆಂಗಳೂರಿನ ಅಮರ ಸೌಂದರ್ಯ ಫೌಂಡೇಶನ್ ಕಾರ್ಯ ಪ್ರಶಂಸನೀಯ.

ಯಕ್ಷಗಾನವೂ ಸೇರಿದಂತೆ ಕಲೆ ಸಂಸ್ಕೃತಿಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಸಕಲಕಲಾವಲ್ಲಭ ಕೂಡ್ಲು ಸುಬ್ರಾಯ ಶ್ಯಾನೋಭೋಗರ (1876-1925) ಕುರಿತು ಸಾಕ್ಷ್ಯಚಿತ್ರವನ್ನೂ ಪ್ರತಿಷ್ಠಾನವು ಇತ್ತೀಚೆಗೆ ಹೊರತಂದಿದೆ. ಒಟ್ಟಿನಲ್ಲಿ ಕೊರೋನಾ ಒಂದು ನೆಪವಾಗಿ ಸಿರಿಬಾಗಿಲು ಪ್ರತಿಷ್ಠಾನದಂತಹ ಸಂಸ್ಥೆಗಳು ಅನೇಕ ಹೊಸ ಸಾಧ್ಯತೆಗಳನ್ನು ಅನ್ವೇಷಿಸಿರುವುದು, ಮತ್ತು ಆ ಮೂಲಕ ಸಮಾಜಕ್ಕೆ ಒಳಿತಾಗುವಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು, ಇದರ ಹಿಂದೆ ಯಕ್ಷಗಾನವೆಂಬ ದೊಡ್ಡ ಶಕ್ತಿಯಿರುವುದು ತುಂಬ ಹೆಮ್ಮೆಯ ವಿಚಾರ. 

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಡಿಸೆಂಬರ್ 15, 2020

ಕ್ಲಾಸ್ ಆನ್ ಸ್ಟೂಡೆಂಟ್ ಆಫ್!

15 ಡಿಸೆಂಬರ್ 2020ರ 'ಉದಯವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ಬರಹ

ವಿದ್ಯಾರ್ಥಿಗಳಿಗೆ ಗೊಂಡಾರಣ್ಯದಿಂದ ಹೊರಹೋಗಲು ದಾರಿ ಸಿಕ್ಕ ಅನುಭವ. ಅಧ್ಯಾಪಕರಿಗೆ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ಅನುಭವ. ಇಷ್ಟೆಲ್ಲದಕ್ಕೆ ಕಾರಣವಾದ ಕೊರೋನ ಮಾಯಾವಿಗೆ ಯಾವ ಅನುಭವ ಆಗುತ್ತಿದೆಯೋ ಗೊತ್ತಿಲ್ಲ. 

ತಿಂಗಳಾನುಗಟ್ಟಲೆ ಮನೆಗಳಲ್ಲೇ ಇದ್ದು ಚಡಪಡಿಸುತ್ತಿದ್ದ ವಿದ್ಯಾರ್ಥಿಗಳು ಈಗ ಮೆಲ್ಲಮೆಲ್ಲನೆ ಹೊರಗಡಿಯಿಡುವ ಕಾಲ. ಮೊಬೈಲ್, ಲ್ಯಾಪ್‍ಟಾಪ್ ನೋಡಿಕೊಂಡು ಪಾಠ ಹೇಳುತ್ತಿದ್ದ ಮೇಷ್ಟ್ರುಗಳು ಮತ್ತೆ ವಿದ್ಯಾರ್ಥಿಗಳನ್ನೇ ಕಂಡು ಬದುಕಿದೆಯಾ ಬಡಜೀವವೇ ಎಂದು ನಿರಾಳವಾಗುವ ಕಾಲ. 

ಹಾಗೆಂದು ಎರಡೂ ಕಡೆಯವರ ಸಂಕಷ್ಟಗಳು ಮುಗಿದವೆಂದಲ್ಲ. ಈ ತರಗತಿ ಭಾಗ್ಯ ಯೋಜನೆಯ ಫಲಾನುಭವಿಗಳು ಕೊನೇ ವರ್ಷದಲ್ಲಿ ಓದುತ್ತಿರುವ ಡಿಗ್ರಿ ಮತ್ತು ಯುನಿವರ್ಸಿಟಿ ವಿದ್ಯಾರ್ಥಿಗಳು ಮತ್ತವರಿಗೆ ಪಾಠ ಮಾಡುತ್ತಿರುವ ಅಧ್ಯಾಪಕರು ಮಾತ್ರ. ಅದರಲ್ಲೂ ವಿದ್ಯಾರ್ಥಿಗಳಿಗೆ ಇದು ಕಡ್ಡಾಯವೇನಲ್ಲ. ತರಗತಿಗೆ ಬರುವುದು ಬಿಡುವುದು ಅವರ ನಿರ್ಧಾರ. ಕಾಲೇಜಿಗೆ ಬರಲೇಬೇಕೆಂದು ಮೇಷ್ಟ್ರುಗಳು ಒತ್ತಾಯಿಸುವ ಹಾಗೆ ಇಲ್ಲ. ಬಂದವರಿಗೆ ಪಾಠ ಮಾಡಬೇಕು. ಬಾರದವರಿಗೂ ಪಾಠಗಳು ಮುಂದುವರಿಯಬೇಕು.

ವಿದ್ಯಾರ್ಥಿಗಳಿಗೇನೋ ಕಾಲೇಜಿಗೆ ಹೋಗುವುದಕ್ಕೆ ಅನುಮತಿ ಸಿಕ್ಕಿದೆ. ಆದರೆ ಅವರೆದುರು ಆಯ್ಕೆಗಳಿವೆ. ಸಿಗ್ನಲ್ ತೆರೆದ ತಕ್ಷಣ ಮುನ್ನುಗ್ಗುವ ವಾಹನಗಳ ಉತ್ಸಾಹ ಅವರಲ್ಲಿ ಕಾಣುತ್ತಿಲ್ಲ. ಅವರಿಗೇನೋ ಮತ್ತೆ ಕ್ಲಾಸ್ ಅಟೆಂಡ್ ಆಗಬೇಕು, ಮೊದಲಿನಂತೆ ತಮ್ಮ ಗೆಳೆಯರ ಜತೆ ಬೆರೆಯಬೇಕೆಂಬ ಆಸೆ. ಆದರೆ ಅನೇಕರಿಗೆ ಮನೆಯಿಂದಲೇ ಅನುಮತಿ ಇಲ್ಲ. ‘ಅಪ್ಪ-ಅಮ್ಮ ಬೇಡ ಅಂತಿದ್ದಾರೆ ಸಾರ್’ ಎಂಬುದು ಹಲವು ಹುಡುಗರ ಅಳಲು. ಹೇಗೂ ಮನೆಯಿಂದಲೇ ಪಾಠ ಕೇಳಬಹುದು ಎಂಬ ಆಯ್ಕೆ ಇರುವುದರಿಂದ ಈ ಜಂಜಾಟದ ಓಡಾಟ ಯಾಕೆ ಎಂದು ಯೋಚಿಸುವವರೂ ಹಲವರು.

ತರಗತಿಗೆ ಹಾಜರಾಗುವುದಕ್ಕೆ ಅವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿರಬೇಕು ಎಂಬ ಸೂಚನೆ ಇರುವುದೂ ಈ ನಿರುತ್ಸಾಹಕ್ಕೆ ಇನ್ನೊಂದು ಕಾರಣ. ಅಯ್ಯೋ ಅಲ್ಲಿ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕು ಎಂಬ ಬೇಸರ ಕೆಲವರಿಗಾದರೆ, ತಮ್ಮ ಮಕ್ಕಳು ಟೆಸ್ಟ್ ಮಾಡಿಸಿಕೊಳ್ಳುವುದೇ ಬೇಡ ಎಂಬ ಆತಂಕ ಕೆಲವು ಅಪ್ಪ-ಅಮ್ಮಂದಿರದ್ದು. ದೂರದೂರುಗಳಿಂದ ಬರುವವರಿಗೆ ಹಾಸ್ಟೆಲ್ ಕೂಡ ತೆರೆದಿರಬೇಕು. ‘ಹಾಸ್ಟೆಲ್ ತೆರೆದಿದ್ದಾರೆ, ಮೆಸ್ ಇನ್ನೂ ಓಪನ್ ಆಗಿಲ್ಲ. ಊಟಕ್ಕೇನು ಮಾಡೋಣ ಸಾರ್’ ಮತ್ತೆ ಹುಡುಗರ ದೂರು. ಇಂತಿಷ್ಟು ಮಕ್ಕಳಿರುತ್ತಾರೆ ಎಂದು ಖಚಿತವಾಗದೆ ಅಡುಗೆ ಆರಂಭಿಸುವುದಕ್ಕೆ ಹಾಸ್ಟೆಲಿನವರಿಗೂ ಸಮಸ್ಯೆ.

ಅಂತೂ ಎಲ್ಲದರ ನಡುವೆ ಅನುಕೂಲ ಮಾಡಿಕೊಂಡು ತರಗತಿಗೆ ಬಂದು ಕುಳಿತಿರುವ ಹುಡುಗರಿಗೆ ಪ್ರತ್ಯಕ್ಷ ಪಾಠ ಮಾಡುವ ಸವಾಲು ಮೇಷ್ಟ್ರುಗಳದ್ದು. ವಿದ್ಯಾರ್ಥಿಗಳು ಒಂದು ಸುದೀರ್ಘ ರಜೆ ಮುಗಿಸಿ ಬಂದವರು. ಇಲ್ಲಿಯವರೆಗೆ ಆನ್ಲೈನ್ ಪಾಠ ನಡೆದಿರುತ್ತದೆ ಎಂದಿದ್ದರೂ, ಅವರಲ್ಲೆಷ್ಟು ಮಂದಿ ಅದನ್ನು ಕೇಳಿಸಿಕೊಂಡಿದ್ದಾರೆ, ಕೇಳಿಸಿಕೊಂಡವರಿಗೆಷ್ಟು ಅರ್ಥವಾಗಿದೆ ಎಂಬುದು ಮೇಷ್ಟ್ರುಗಳ ಗೊಂದಲ. ಮತ್ತೆ ಲಾಗಾಯ್ತಿನಿಂದ ಪಾಠ ಆರಂಭಿಸುವಂತಿಲ್ಲ. ಆದಲೇ ಅರ್ಧ ಸೆಮಿಸ್ಟರು ಮುಗಿದಿದೆ. ಅಲ್ಲಿಂದಲೇ ಪಾಠ ಮುಂದುವರಿಯಬೇಕು. 

‘ಕಳೆದ ಕ್ಲಾಸಿನಲ್ಲಿ ಹೇಳಿದಂತೆ...’ ಅಂತ ಶುರುಮಾಡೋ ಮೇಷ್ಟ್ರು ‘ಕಳೆದ ಆನ್ಲೈನ್ ಕ್ಲಾಸಿನಲ್ಲಿ ಹೇಳಿದಂತೆ...’ ಅಂತ ವರಸೆಯನ್ನು ಬದಲಾಯಿಸಿಕೊಳ್ಳಬೇಕು. ಈಗ ಮುಖಮುಖ ನೋಡಿಕೊಳ್ಳುವ ಸರದಿ ಹುಡುಗರದ್ದು. ಯಾವ ಕಡೆ ಕತ್ತು ತಿರುಗಿಸಿದರೂ ಕಳೆದ ಆನ್ಲೈನ್ ಕ್ಲಾಸಲ್ಲಿ ಮೇಷ್ಟ್ರು ಏನು ಹೇಳಿದ್ದಾರೆ ಅನ್ನೋದು ನೆನಪಾಗಲೊಲ್ಲದು. ಅಂತೂ ಅವರಿಗೊಂದೆರಡು ದಿನ ಸುದೀರ್ಘ ಪೀಠಿಕೆ ಹಾಕಿ ಮತ್ತೆ ಸಿಲೆಬಸ್ಸಿಗೆ ಬರಬೇಕು.

ಇಷ್ಟಾದಮೇಲೂ ತರಗತಿಯಲ್ಲಿರುವುದು ಶೇ. 20-30ರಷ್ಟು ವಿದ್ಯಾರ್ಥಿಗಳು. ಉಳಿದವರನ್ನು ಬಿಟ್ಟುಬಿಡುವ ಹಾಗಿಲ್ಲ. ಅವರಿಗೂ ಪಾಠ ತಲುಪಿಸಬೇಕು. ಒಂದೋ ತರಗತಿಯಲ್ಲಿ ಮಾಡಿದ್ದನ್ನು ಮತ್ತೊಮ್ಮೆ ಆನ್ಲೈನ್ ಮಾಡಬೇಕು. ಅಥವಾ ತರಗತಿಯಲ್ಲಿ ಮಾಡುತ್ತಿರುವುದೇ ನೇರ ಪ್ರಸಾರ ಆಗಬೇಕು. ಅಂದರೆ ಪಾಠ ಮಾಡುತ್ತಿರುವ ಅಧ್ಯಾಪಕ ಎದುರಿಗೆ ಮೊಬೈಲ್ ಅಥವಾ ಲ್ಯಾಪ್‍ಟಾಪ್ ಇಟ್ಟುಕೊಳ್ಳಬೇಕು. ಆನ್ಲೈನಿಗೆ ಬಂದಿರುವ ವಿದ್ಯಾರ್ಥಿಗಳು ಪಾಠ ಕೇಳಿಸಿಕೊಳ್ಳಬೇಕೆಂದರೆ ಅಧ್ಯಾಪಕ ನಿಂತಲ್ಲೇ ನಿಂತಿರಬೇಕು. ನಿಂತಲ್ಲೇ ನಿಂತರೆ ಅನೇಕ ಅಧ್ಯಾಪಕರಿಗೆ ಮಾತೇ ಹೊರಡದು. ಅವರಿಗೆ ಬೋರ್ಡು ಬಳಕೆ ಮಾಡಿ ಅಭ್ಯಾಸ. ಪ್ರತ್ಯಕ್ಷ ತರಗತಿಗೆ ಹಾಜರಾಗಿರುವವರಿಗೂ ನಿಶ್ಚಲ ಮೇಷ್ಟ್ರ ಪಾಠ ಕೇಳುವುದಕ್ಕೆ ಪರಮ ಸಂಕಷ್ಟ. ಅಧ್ಯಾಪಕ ಬೋರ್ಡನ್ನೂ ಬಳಕೆ ಮಾಡುವುದು ಆನ್ಲೈನ್ ವಿದ್ಯಾರ್ಥಿಗಳಿಗೆ ಕಾಣಿಸುವಂತೆ ಮಾಡಬಹುದು. ಅದಕ್ಕೆ ಬೇರೆ ವ್ಯವಸ್ಥೆ ಬೇಕು. ಅಷ್ಟೊಂದು ವ್ಯವಸ್ಥೆ ನಮ್ಮ ಕಾಲೇಜುಗಳಲ್ಲಿದೆಯಾ?

ಕಡೇ ಪಕ್ಷ ತರಗತಿಯಲ್ಲಿ ಪಾಠ ಮಾಡಿದ್ದರ ಆಡಿಯೋವನ್ನಾದರೂ ರೆಕಾರ್ಡ್ ಮಾಡಿ ಮನೆಯಲ್ಲಿ ಕುಳಿತಿರುವ ಭಾಗಶಃ ವಿದ್ಯಾರ್ಥಿಗಳಿಗೆ ವಾಟ್ಸಾಪ್ ಮೂಲಕ ತಲುಪಿಸಬಹುದು. ಕಾಲರ್ ಮೈಕ್ ಅನ್ನು ಮೊಬೈಲಿಗೆ ತಗುಲಿಸಿ ಈ ಕೆಲಸ ಮಾಡಬಹುದು. ನಡುವೆ ಫೋನ್ ಬಾರದಂತೆ ಅಧ್ಯಾಪಕ ಮುನ್ನೆಚ್ಚರಿಕೆ ವಹಿಸಬೇಕು. ಫೋನ್ ಬಂದರೆ ಅಲ್ಲಿಯವರೆಗಿನ ರೆಕಾರ್ಡಿಂಗ್ ಢಮಾರ್. ಈ ಎಲ್ಲ ಸರ್ಕಸ್ ಮಾಡುವ ತಾಂತ್ರಿಕತೆಗಳ ಪರಿಚಯ ಎಲ್ಲ ಅಧ್ಯಾಪಕರಿಗೂ ಇದೆಯೇ? ಅದು ಬೇರೆ ಮಾತು.

ಅಂತೂ ದಿನೇದಿನೇ ವಿದ್ಯಾರ್ಥಿಗಳ ಮತ್ತವರ ಪೋಷಕರ ಆತಂಕ ನಿಧಾನವಾಗಿ ಕರಗುತ್ತಿರುವುದು ಸದ್ಯದ ಆಶಾವಾದ. ತಮ್ಮ ಕ್ಲಾಸ್ಮೇಟುಗಳು ಧೈರ್ಯ ಮಾಡಿರುವುದು ನೋಡಿ ಉಳಿದಿರುವವರಿಗೂ ಉತ್ಸಾಹ ಮೂಡುತ್ತಿದೆ. ತರಗತಿಗಳಲ್ಲಿ ಅಟೆಂಡೆನ್ಸ್ ದಿನೇದಿನೇ ಏರುತ್ತಿದೆ. ಎಲ್ಲರೂ ಬಂದು ಹಾಜರ್ ಸಾರ್ ಎನ್ನುವವರೆಗೆ ಮೇಷ್ಟ್ರ ಪರದಾಟ ಮಾತ್ರ ತಪ್ಪಿದ್ದಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.