ಶುಕ್ರವಾರ, ಏಪ್ರಿಲ್ 14, 2023

ಮನದೊಳಗಣ ಕಿಚ್ಚು ಮನವ ಸುಡುವುದು

15-21 ಏಪ್ರಿಲ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ.

ಕಿಚ್ಚನಾರಿಸಬಹುದು ಹೊಟ್ಟೆಯ | ಕಿಚ್ಚಿಗೌಷಧವುಂಟೆ ಲೋಕದಿ | ಮಚ್ಚರವು ಜೀವಂತ ಸುಡುವುದು ನಿಚ್ಚವೆಮ್ಮ || ಎಂದು ಬರೆಯುತ್ತಾರೆ ಯುವ ಯಕ್ಷಗಾನ ಕವಿ ಶಿವಕುಮಾರ ಅಳಗೋಡು. ಅಸೂಯೆ ಎಷ್ಟು ಘೋರವಾದದ್ದು ಎಂಬುದನ್ನು ಎಷ್ಟೊಂದು ಸರಳವಾಗಿ ಚಿತ್ರಿಸಿದ್ದಾರೆ! ಭೌತಿಕವಾಗಿ ಕಾಣುವ ಬೆಂಕಿಯನ್ನು ಹೇಗಾದರೂ ನಂದಿಸಬಹುದು, ಆದರೆ ಒಳಗಿನ ಕಿಚ್ಚಿಗೆ ಪರಿಹಾರವಿಲ್ಲ; ಅದು ವ್ಯಕ್ತಿಯನ್ನು ದಿನವೂ ಸುಡುತ್ತಿರುತ್ತದೆ ಎಂಬ ಮಾತು ನೂರು ಪ್ರತಿಶತ ಸತ್ಯ.

ಅಸೂಯೆ ಎಂಬ ಬೆಂಕಿ ವ್ಯಕ್ತಿಗಳನ್ನಷ್ಟೇ ಅಲ್ಲ, ರಾಜ್ಯ-ಕೋಶಗಳನ್ನೇ ಸುಟ್ಟುಹಾಕಿದೆ,  ಸಾಮ್ರಾಜ್ಯಗಳನ್ನೇ ಬೂದಿಮಾಡಿದೆ, ವಂಶಗಳೇ ಅಳಿದುಹೋಗುವಂತೆ ಮಾಡಿದೆ. ಅದು ಅಂತಿಂಥ ಕಿಚ್ಚಲ್ಲ. ಬದುಕನ್ನೇ ನಿರ್ನಾಮ ಮಾಡುವ ಕಿಚ್ಚು. ಕಾಳ್ಗಿಚ್ಚನ್ನಾದರೂ ಕಟ್ಟಿಹಾಕಬಹುದು, ಈರ್ಷ್ಯೆಯನ್ನಲ್ಲ. ಬರಿಗಣ್ಣಿಗೆ ತಕ್ಷಣ ಕಾಣದೆ ಇರುವ ಈ ಜ್ವಾಲೆ ಕೆನ್ನಾಲಿಗೆಯಾದ ಮೇಲೆ ತಡೆಯುವುದು ಕಷ್ಟ.

ಕೈಕೇಯಿಯ ಅಸೂಯೆಯಿಂದ ರಾಮಾಯಣವಾಯಿತು; ಗಾಂಧಾರಿಯ ಅಸೂಯೆಯಿಂದ ಮಹಾಭಾರತವೇ ಸೃಷ್ಟಿಯಾಯಿತು. ರಾಮ ಕಾಡಿಗೆ ಹೋದದ್ದರಿಂದಲಾದರೂ ಭೂಭಾರ ಹರಣ ಆಯಿತು. ಆದರೆ ಗಾಂಧಾರಿ ಹೊಟ್ಟೆ ಹಿಸುಕಿಕೊಂಡದ್ದರಿಂದ ನೂರೊಂದು ಕೌರವರು ಹುಟ್ಟಿಕೊಂಡುಬಿಟ್ಟರು. ಇಡೀ ಮಹಾಭಾರತವೇ ದಾಯಾದಿ ಕಲಹದ ವೇದಿಕೆಯಾಯಿತು. ಗಾಂಧಾರಿ ಯಾವ ಅಸಹನೆಯಿಂದ ತನ್ನ ಗರ್ಭವನ್ನು ಹಿಸುಕಿಕೊಂಡಳೋ ಅದೇ ಅಸಹನೆ ಸಮಸ್ತ ಕೌರವರ ಸ್ಥಾಯೀಗುಣವೇ ಆಗಿ ಕೊನೆಗೆ ಕುರುಕ್ಷೇತ್ರವೇ ನಿರ್ಮಾಣವಾಯಿತು.

ಧೃತರಾಷ್ಟ್ರನಂತೂ ಹುಟ್ಟುಕುರುಡ. ಆತನಿಗಿಲ್ಲದ ದೃಷ್ಟಿ ತನಗೂ ಬೇಡ ಎಂದು ಗಾಂಧಾರಿ ತಾನೂ ದೃಷ್ಟಿಯನ್ನು ಬಂಧಿಸಿಕೊಂಡಳು. ವಿಚಿತ್ರವೆಂದರೆ ಕೌರವರೆಲ್ಲರೂ ಈರ್ಷ್ಯೆಯೆಂಬ ಬಟ್ಟೆಯಿಂದ ತಮ್ಮ ಅಂತರಂಗದ ಕಣ್ಣುಗಳನ್ನೇ ಕಟ್ಟಿಕೊಂಡರು. ಅಸೂಯೆ ಒಳಗಣ್ಣನ್ನೇ ಕುರುಡಾಗಿಸುತ್ತದೆ. ಅದು ಮನುಷ್ಯನನ್ನು ಯೋಚಿಸದಂತೆ ಮಾಡುತ್ತದೆ, ಆತ್ಮಾವಲೋಕನದ ಶಕ್ತಿಯನ್ನು ಕುಂದಿಸುತ್ತದೆ. ಹೇಗಾದರೂ ಮಾಡಿ ತನ್ನ ಪ್ರತಿಸ್ಪರ್ಧಿಯನ್ನು ಮಣಿಸಬೇಕು ಎಂಬ ಉದ್ದೇಶ ಪ್ರಬಲವಾಗುತ್ತದೆಯೇ ಹೊರತು ತಾನೇಕೆ ಹೀಗಾಗಿದ್ದೇನೆ ಎಂದು ಚಿಂತಿಸುವುದೇ ಇಲ್ಲ. ತನ್ನ ಒಂದು ಕಣ್ಣು ಹೋದರೂ ಅಡ್ಡಿಯಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಲಿ ಎಂಬ ಭಾವನೆಯೇ ಇಲ್ಲಿ ಪ್ರಬಲ.

ಉದ್ಯೋಗ, ವ್ಯವಹಾರ, ಸಂಪತ್ತು, ಸಂಬಂಧ- ಎಲ್ಲ ಕಡೆಗಳಲ್ಲೂ ಮತ್ಸರ ಅನಾಹುತಗಳನ್ನು ಸೃಷ್ಟಿಸಬಲ್ಲದು. ಇನ್ನೊಬ್ಬ ತನಗಿಂತ ಮುಂದಿರಬಾರದು ಎಂಬ ಮನಸ್ಥಿತಿಯೇ ಈ ಮತ್ಸರಕ್ಕೆ ಕಾರಣ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಈ ಮನಸ್ಥಿತಿಯ ಮೂಲಕಾರಣ ಸ್ಪರ್ಧೆ ಎಂಬುದಕ್ಕಿಂತಲೂ ವ್ಯಕ್ತಿಯ ಕೀಳರಿಮೆ ಎಂಬುದೇ ನಿಜ. ‘ಅಸೂಯೆ ಎಂಬುದು ಒಬ್ಬ ವ್ಯಕ್ತಿಯ ಕೀಳರಿಮೆಯ ಅಂತಃಪ್ರಜ್ಞೆ. ಅದೊಂದು ಮಾನಸಿಕ ಕ್ಯಾನ್ಸರ್’ ಎನ್ನುತ್ತಾನೆ ಫೋರ್ಬ್ಸ್. ಗುಣ, ರೂಪ, ಹಣ, ಜ್ಞಾನ, ಅಂತಸ್ತು, ಜನಪ್ರಿಯತೆ- ಯಾವ ವಿಷಯದಲ್ಲಾದರೂ ಈ ಕೀಳರಿಮೆ ಹುಟ್ಟಿಕೊಳ್ಳಬಹುದು. ಇಂತಹ ವಿಷಯಗಳಲ್ಲಿ ಇನ್ನೊಬ್ಬನ ಮಟ್ಟಕ್ಕೆ ಏರುವುದು ತನಗೆ ಸಾಧ್ಯವಿಲ್ಲ ಎಂದು ವ್ಯಕ್ತಿಗೆ ಅನ್ನಿಸಿದಾಗ ಅದು ಕೀಳರಿಮೆಯಾಗಿ ಬೆಳೆಯುವುದುಂಟು. ಅಸೂಯೆ ಕೀಳರಿಮೆಯ ಇನ್ನೊಂದು ಮುಖ.

ಕೀಳರಿಮೆಗೆ ಕಾರಣ ವಾಸ್ತವವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ. ಒಬ್ಬೊಬ್ಬ ವ್ಯಕ್ತಿಯೂ ಅವನದೇ ನೆಲೆಯಲ್ಲಿ ವಿಶಿಷ್ಟ ಮತ್ತು ಅನನ್ಯ. ಒಬ್ಬ ವ್ಯಕ್ತಿ ಯಾವುದೋ ಒಂದು ವಿಷಯದಲ್ಲಿ ಗಟ್ಟಿಗನಾಗಿದ್ದಾನೆಂದರೆ ಇನ್ನೊಬ್ಬ ವ್ಯಕ್ತಿ ಎಲ್ಲ ವಿಷಯಗಳಲ್ಲೂ ದುರ್ಬಲ ಎಂದರ್ಥವಲ್ಲ. ಅವನಿಗೆ ಅವನದ್ದೇ ಆದ ವೈಶಿಷ್ಟ್ಯಗಳಿರಬಹುದು, ಮತ್ತು ಅವುಗಳ ಮೂಲಕ ಯಶಸ್ಸು ಸಾಧಿಸಬಹುದು. ಒಂದು ವಿಷಯದಲ್ಲಿ ಗಟ್ಟಿಗ ಎನಿಸಿಕೊಂಡವನು ಉಳಿದ ಹತ್ತಾರು ವಿಷಯಗಳಲ್ಲಿ ದುರ್ಬಲನಾಗಿರಬಹುದು. ನಿಜವಾಗಿ ನೋಡಿದರೆ ಪರಿಪೂರ್ಣತೆಯೆಂಬುದು ಒಂದು ಭ್ರಮೆ. ಒಬ್ಬ ವ್ಯಕ್ತಿ ಪರಿಪೂರ್ಣನಾಗಿರುವುದು ಸಾಧ್ಯವೇ ಇಲ್ಲ. ಇದಿಷ್ಟು ಸ್ಪಷ್ಟ ಇರುವವನಿಗೆ ಇನ್ನೊಬ್ಬನ ಕುರಿತು ಮತ್ಸರ ಹುಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ‘ಹೋಲಿಸಿಕೊಳ್ಳದೆ ಬದುಕುವುದೆಂದರೆ ದೊಡ್ಡ ಹೊರೆಯೊಂದನ್ನು ಇಳಿಸಿಕೊಂಡಂತೆ’ ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ. 

ತಾನು ಯಾರೊಂದಿಗೂ ಸ್ಪರ್ಧಿಸಬೇಕಿಲ್ಲ, ತನಗೆ ತಾನೇ ಸ್ಪರ್ಧಿ; ಪ್ರತಿದಿನವೂ ತನ್ನನ್ನು ತಾನು ಮೀರುವ ದಾರಿಯಲ್ಲಿ ಸಾಗಬೇಕು ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಪ್ರತಿಸ್ಪರ್ಧಿಗಳಿಂದ ತನಗೆ ತೊಂದರೆಯಿದೆ ಎಂದು ಯಾವ ವ್ಯಕ್ತಿಗೂ ಅನ್ನಿಸಲಾರದು. ಉದ್ಯೋಗ ಸ್ಥಳದಲ್ಲೇ ಆಗಿರಲಿ, ತಾನು ಗರಿಷ್ಠ ಪ್ರಯತ್ನದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದಕ್ಕೆ ಸೂಕ್ತ ಪ್ರತಿಫಲ ಇಂದಲ್ಲ ನಾಳೆಯಾದರೂ ಸಿಕ್ಕಿಯೇ ಸಿಗುತ್ತದೆ ಎಂದು ಭಾವಿಸಿದವನಿಗೆ ಅಸೂಯೆಯ ಕಿಚ್ಚು ಕಾಡಲಾರದು. 

ಇದು ನಮ್ಮನ್ನು ಅಸೂಯೆ ಕಾಡದಂತೆ ನೋಡಿಕೊಳ್ಳುವ ಬಗೆಯಾಯಿತು. ನಮ್ಮನ್ನು ನೋಡಿ ಇನ್ನೊಬ್ಬ ಅಸೂಯೆಪಟ್ಟುಕೊಳ್ಳುತ್ತಿದ್ದಾನೆ, ಹೋದ ದಾರಿಗೆಲ್ಲ ಅಡ್ಡಬರುತ್ತಿದ್ದಾನೆ ಎಂದು ಅನಿಸುತ್ತಿದೆಯೇ? ಅಂಥವರ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಮತ್ಸರವೆಂಬುದು ವ್ಯಕ್ತಿಯ ಒಳಗಿನ ಕಿಚ್ಚು ಎಂದು ಆಗಲೇ ಹೇಳಿಯಾಯಿತು. ಕಿಚ್ಚು ಒಳಗೆ ಇದೆ ಎಂದ ಮೇಲೆ ಅದು ಲೋಕವನ್ನು ಸುಡುವುದಕ್ಕಿಂತ ಮುಂಚೆ ವ್ಯಕ್ತಿಯನ್ನೇ ಸುಡುತ್ತದೆ. ವಾಸ್ತವವಾಗಿ ಅಂಥವರು ಪ್ರತಿದಿನವೂ ತಮ್ಮೊಳಗೇ ಸುಟ್ಟುಹೋಗುತ್ತಿರುತ್ತಾರೆ; ಯಾವುದೋ ಒಂದು ದಿನ ನೋಡನೋಡುತ್ತಿದ್ದಂತೆಯೇ ಕರಕಲಾಗುತ್ತಾರೆ. ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂದು ಬಸವಣ್ಣನೇ ಹೇಳಿಲ್ಲವೇ? ಇನ್ನೊಬ್ಬನನ್ನು ನೋಡಿ ಅಸೂಯೆಪಡುವವರಿಗೆ ಮಾನಸಿಕ ನೆಮ್ಮದಿಯೇ ಇರುವುದಿಲ್ಲ. ಅವರು ಸದಾ ಅತೃಪ್ತಿ, ಅಶಾಂತಿಗಳಿಂದ ಒಳಗೊಳಗೇ ಬೇಯುತ್ತಿರುತ್ತಾರೆ. ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ ಎಂಬ ಮಾತೇ ಇದೆಯಲ್ಲ! 

ಇನ್ನೊಂದು ವಿಚಾರ ಏನೆಂದರೆ, ಯಾರೋ ನಮ್ಮನ್ನು ನೋಡಿ ಮತ್ಸರಪಡುತ್ತಿದ್ದಾರೆ ಎಂದರೆ ನಾವು ಸಾಧನೆಯ ದಾರಿಯಲ್ಲಿದ್ದೇವೆ ಎಂದು ಅರ್ಥ. ಸೋತವರನ್ನು ನೋಡಿ ಯಾರೂ ಅಸೂಯೆಪಡುವುದಿಲ್ಲವಲ್ಲ! “ನಿಮ್ಮನ್ನು ನೋಡಿ ಅಸೂಯೆಪಡುವವರನ್ನು ದ್ವೇಷಿಸಬೇಡಿ. ಅವರು ವಾಸ್ತವವಾಗಿ ತಮಗಿಂತ ನೀವೇ ಉತ್ತಮ ಎಂದು ಭಾವಿಸಿಕೊಂಡಿರುತ್ತಾರೆ. ಅಂಥವರಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿ ಮುಂದಕ್ಕೆ ಹೋಗುತ್ತಾ ಇರಿ” ಎಂದು ದಾರ್ಶನಿಕರು ಇದೇ ಕಾರಣಕ್ಕೆ ಹೇಳಿರುವುದು.

ಯಾವ ಸುಯೋಧನನ ಮತ್ಸರದಿಂದ ಕುರುಕ್ಷೇತ್ರ ಸೃಷ್ಟಿಯಾಯಿತೋ, ಅದೇ ಸುಯೋಧನ ಒಂದು ಹಂತದಲ್ಲಿ ತನ್ನ ಪ್ರತಿಸ್ಪರ್ಧಿಯ ಶೌರ್ಯವನ್ನು ಮೆಚ್ಚಿದ್ದುಂಟಂತೆ. ಯುದ್ಧದಲ್ಲಿ ಭೀಮನ ಪರಾಕ್ರಮವನ್ನು ನೋಡಿದ ಕೌರವ ‘ಸದ್ಗುಣಕೆ ಮತ್ಸರವೆ’ ಎಂದುಕೊಳ್ಳುತ್ತಾನೆ (ಕುಮಾರವ್ಯಾಸಭಾರತ). ಇನ್ನೊಬ್ಬನ ಸದ್ಗುಣವನ್ನು, ಒಳ್ಳೆಯತನವನ್ನು, ನ್ಯಾಯಮಾರ್ಗದಲ್ಲಿ ಗಳಿಸುವ ಯಶಸ್ಸನ್ನು ನೋಡಿ ಖಂಡಿತ ಮತ್ಸರಪಟ್ಟುಕೊಳ್ಳಬಾರದು. ಇನ್ನೊಬ್ಬನನ್ನು ಪ್ರಾಮಾಣಿಕವಾಗಿ ಅಭಿನಂದಿಸುವುದರಲ್ಲಿ ಇರುವ ಆತ್ಮಸಂತೋಷ ಬೇರೆಡೆ ಸಿಗಲಾರದು. ‘ಸರ್ವಂ ಪರಿಕ್ರೋಶಮ್ ಜಹಿ’ (ಎಲ್ಲ ಬಗೆಯ ಮತ್ಸರವನ್ನು ತ್ಯಜಿಸು) ಎನ್ನುತ್ತದೆ ಋಗ್ವೇದ. ವೇದದ ಬೆಳಕು ನಮ್ಮನ್ನು ಮುನ್ನಡೆಸಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಏಪ್ರಿಲ್ 11, 2023

ಉದ್ಯೋಗಸೇತುವಾಗಬಲ್ಲ ಕೌಶಲ ಕೋರ್ಸುಗಳು

03 ಏಪ್ರಿಲ್ 2023ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಉದ್ಯೋಗರಂಗದ ನಡುವೆ ಅಡ್ಡ ನಿಂತಿರುವ ದೊಡ್ಡ ಗೋಡೆ ಕೌಶಲಗಳ ಕೊರತೆ. ಶಿಕ್ಷಣ ಸಂಸ್ಥೆಗಳಿಂದ ಲಕ್ಷಾಂತರ ಪದವೀಧರರು ಪ್ರತಿವರ್ಷ ಹೊರಬರುತ್ತಲೇ ಇದ್ದರೂ ಉದ್ಯೋಗಜಗತ್ತಿನ ಅವಶ್ಯಕತೆಗಳು ಪೂರೈಕೆಯಾಗುತ್ತಿಲ್ಲ. ಒಂದೆಡೆ ಖಾಲಿ ಉಳಿದಿರುವ ಅಸಂಖ್ಯ ಉದ್ಯೋಗಗಳು, ಇನ್ನೊಂದೆಡೆ ಹೆಚ್ಚುತ್ತಲೇ ಇರುವ ನಿರುದ್ಯೋಗ.

ಈ ವೈರುಧ್ಯವನ್ನು ಸರಿಪಡಿಸುವ ಏಕೈಕ ದಾರಿಯೆಂದರೆ ಶಿಕ್ಷಣ ಹಾಗೂ ಉದ್ಯೋಗಜಗತ್ತಿನ ನಡುವಿನ ಅಂತರವನ್ನು ನಿವಾರಿಸುವುದು; ಅಂದರೆ ನಮ್ಮ ಯುವಕರನ್ನು ಹೊಸಕಾಲದ ಕೌಶಲ್ಯಗಳೊಂದಿಗೆ ಸಶಕ್ತರೂ ಸಮರ್ಥರೂ ಆಗಿ ಬೆಳೆಸುವುದು. ಕಾಲ ಬದಲಾಗಿದೆ, ಉದ್ಯೋಗಗಳೂ ಬದಲಾಗಿವೆ, ಅದಕ್ಕೆ ತಕ್ಕಂತೆ ಶಿಕ್ಷಣ ಹಾಗೂ ತರಬೇತಿ ಬದಲಾಗದೆ ಇರುವುದೇ ಇಂದಿನ ಎಲ್ಲ ಸಮಸ್ಯೆಗಳ ಮೂಲ. 

ಉದ್ಯೋಗ ಜಗತ್ತು ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯುರಿಟಿ, ವರ್ಚುವಲ್ ರಿಯಾಲಿಟಿ, 3-ಡಿ ಪ್ರಿಂಟಿಂಗ್, ರೋಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ಕ್ಷೇತ್ರಗಳೆಡೆಗೆ ಭರದಿಂದ ವ್ಯಾಪಿಸುತ್ತಿದೆ. ನಾವು ಕೇವಲ ಸಾಂಪ್ರದಾಯಿಕ ಉದ್ಯೋಗಗಳ ಕಡೆಗಷ್ಟೇ ಗಮನಹರಿಸಿದರೆ ಏನೇನೂ ಸಾಲದು. ಹೊಸತನದತ್ತ ತೆರೆದುಕೊಳ್ಳುವುದು ಇಂದಿನ ಅನಿವಾರ್ಯ.

ಹೊಸ ಉದ್ಯೋಗ ಸಾಧ್ಯತೆಗಳನ್ನು ಗಮನಿಸಿದಾಗ ತಕ್ಷಣಕ್ಕೆ ಇವೆಲ್ಲ ತಾಂತ್ರಿಕ ಹುದ್ದೆಗಳು ಎನಿಸಿದರೂ, ಇವು ಎಲ್ಲ ಹಿನ್ನೆಲೆಯ ಮಂದಿಯನ್ನೂ ಸ್ವಾಗತಿಸುವ ಕ್ಷೇತ್ರಗಳೆಂಬುದು ವಾಸ್ತವ ಸಂಗತಿ. ಬಿಎ, ಬಿಕಾಂ, ಬಿಎಸ್ಸಿಯಂತಹ ಸಾಂಪ್ರದಾಯಿಕ ಪದವಿಗಳನ್ನು ಪಡೆದವರೂ ಇವುಗಳನ್ನು ಪ್ರವೇಶಿಸಿ ಯಶಸ್ಸು ಸಾಧಿಸಬಹುದು. ದೊಡ್ಡದೊಡ್ಡ ಕಂಪೆನಿಗಳು ಇಂದು ಎದುರು ನೋಡುತ್ತಿರುವುದು ಕೌಶಲಗಳನ್ನೇ ಹೊರತು ಅಂಕಪಟ್ಟಿಗಳನ್ನಲ್ಲ. ಪದವಿ ವ್ಯಾಸಂಗ ಮಾಡುತ್ತಿರುವವರು ಅದರ ಜೊತೆಜೊತೆಗೆ ಕಲಿಯಬಹುದಾದ ನೂರಾರು ಕೋರ್ಸುಗಳು ಈಗ ಲಭ್ಯವಿವೆ. ಇವುಗಳಲ್ಲಿ ಅನೇಕವು ಉಚಿತ ಹಾಗೂ ಆನ್ಲೈನ್ ವಿಧಾನದಲ್ಲಿ ಲಭ್ಯ.  ಬಿಡುವಿನ ವೇಳೆಯಲ್ಲಿ ಒಂದೆರಡು ಕೋರ್ಸುಗಳನ್ನು ಮಾಡಿಕೊಂಡರೆ ಇವುಗಳ ನೆರವಿನಿಂದಲೇ ಒಳ್ಳೆಯ ಉದ್ಯೋಗಗಳನ್ನೂ ಪಡೆಯಬಹುದು.

ಡಿಜಿಟಲ್ ಮಾರ್ಕೆಟಿಂಗ್: ಯಾವುದೇ ಉತ್ಪನ್ನದ ಮಾರಾಟಗಾರರೂ ಇಂದು ಪ್ರಚಾರಕ್ಕಾಗಿ ಅವಲಂಬಿಸಿರುವುದು ಡಿಜಿಟಲ್ ಮಾಧ್ಯಮವನ್ನು. ಸಾಂಪ್ರದಾಯಿಕ ಮಾಧ್ಯಮಗಳ ಜಾಹೀರಾತು ಸಾಕಾಗುವುದಿಲ್ಲ. ಕಂಟೆAಟ್ ಡೆವಲಪ್ಮೆಂಟ್, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್- ಹೀಗೆ ಡಿಜಿಟಲ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ಹತ್ತಾರು ಆನ್ಲೈನ್ ಕೋರ್ಸುಗಳಿವೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ಬಹುತೇಕ ಆನ್ಲೈನ್ ಚಟುವಟಿಕೆಗಳು ಇಂದು ಕೃತಕ ಬುದ್ಧಿಮತ್ತೆ ಆಧರಿತವಾಗಿವೆ. ಅದನ್ನು ಬಳಸಿಕೊಂಡು ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಹತ್ತಾರು ಉಚಿತ ಕೋರ್ಸುಗಳು ಲಭ್ಯವಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಾಜೆಕ್ಟ್ಸ್, ಇಂಟ್ರೊಡಕ್ಷನ್ ಟು ಎಐ, ಸೆಕ್ಯೂರ್ & ಪ್ರೈವೇಟ್ ಎಐ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ರೋಬೋಟಿಕ್ಸ್, ಡೆವಲಪಿಂಗ್ ಎಐ ಅಪ್ಲಿಕೇಶನ್ಸ್ – ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.

ಡೇಟಾ ಅನಲಿಟಿಕ್ಸ್: ತಂತ್ರಜ್ಞಾನ ಬೆಳೆದಂತೆ ವಿವಿಧ ರಂಗಗಳಿಗೆ ಸಂಬಂಧಿಸಿದ ದತ್ತಾಂಶ ಬೆಟ್ಟದಂತೆ ಬೆಳೆಯುತ್ತಿದೆ. ಇದರ ವಿಶ್ಲೇಷಣೆ ಮತ್ತು ಅನ್ವಯ ದುಸ್ತರವಾಗುತ್ತಿದೆ. ಹೀಗಾಗಿ ಡೇಟಾ ಅನಲಿಟಿಕ್ಸ್ ಎಂಬ ಪ್ರಧಾನ ಉದ್ಯೋಗ ಕ್ಷೇತ್ರವೊಂದು ತೆರೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪ್ಯೂಟಿಂಗ್  ಫಾರ್ ಡೇಟಾ ಅನಾಲಿಸಿಸ್, ಕ್ರಿಪ್ಟೋಗ್ರಫಿ & ನೆಟ್ವರ್ಕ್ ಸೆಕ್ಯುರಿಟಿ, ಡೇಟಾ ಅನಲಿಟಿಕ್ಸ್ ವಿದ್ ಪೈಥಾನ್. ಡೇಟಾ ಅನಾಲಿಸಿಸ್ ಫಾರ್ ಡಿಸಿಶನ್ ಮೇಕಿಂಗ್, ವಿಶುವಲೈಸೇಶನ್ ಫಾರ್ ಡೇಟಾ ಜರ್ನಲಿಸಂ- ಇಂತಹ ಹತ್ತಾರು ಕೋರ್ಸುಗಳಿವೆ.

ಸೈಬರ್ ಸೆಕ್ಯುರಿಟಿ: ಆನ್ಲೈನ್ ಜಗತ್ತಿನ ಕಳ್ಳಕಾಕರಿಂದ ಸುರಕ್ಷಿತವಾಗಿರುವುದು ಇಂದಿನ ಆದ್ಯತೆಗಳಲ್ಲೊಂದು. ಹೀಗಾಗಿ ಸೈಬರ್ ಭದ್ರತೆಯ ಜ್ಞಾನ ಹಾಗೂ ಕೌಶಲಗಳನ್ನು ಬೆಳೆಸಿಕೊಂಡವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಸರ್ಟಿಫಿಕೇಟ್ ಇನ್ ಸೈಬರ್ ಸೆಕ್ಯುರಿಟಿ, ಇನ್ಫಾರ್ಮೇಶನ್ ಸೆಕ್ಯುರಿಟಿ & ಸೈಬರ್ ಫಾರೆನ್ಸಿಕ್ಸ್, ಆನ್ಲೈನ್ ಪ್ರೈವಸಿ, ಸೈಬರ್ ಸೆಕ್ಯುರಿಟಿ ಇನ್ ಹೆಲ್ತ್ಕೇರ್ ಪ್ರೋಗ್ರಾಮ್ಸ್- ಈ ಕ್ಷೇತ್ರದಲ್ಲಿ ಲಭ್ಯವಿರುವ ಕೆಲವು ಕೋರ್ಸುಗಳು.

ಡೇಟಾ ಸೈನ್ಸ್: ದತ್ತಾಂಶ ನಿರ್ವಹಣೆ ಕುರಿತ ಆನ್ಲೈನ್ ಕೋರ್ಸುಗಳನ್ನು ಇಂದು ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳು ಹಾಗೂ ವಿಶ್ವವಿದ್ಯಾನಿಲಯಗಳು ನೀಡುತ್ತಿವೆ. ಇವು ಉಚಿತವಾಗಿಯೂ ಲಭ್ಯವಿವೆ. ಪರ್ಡ್ಯು ಯೂನಿವರ್ಸಿಟಿಯ ಡೇಟಾ ಸೈನ್ಸ್ ಫಾರ್ ಸ್ಮಾರ್ಟ್ ಸಿಟೀಸ್, ಎಂಐಟಿ ಕೇಂಬ್ರಿಜ್‌ನ ಕೊಲಾಬೊರೇಟಿವ್ ಡೇಟಾ ಸೈನ್ಸ್ ಫಾರ್ ಹೆಲ್ತ್ಕೇರ್, ಐಬಿಎಂನ ಡೇಟಾ ಸೈನ್ಸ್ ಟೂಲ್ಸ್, ಯೂನಿವರ್ಸಿಟಿ ಆಫ್ ಲಂಡನ್‌ನ ಫೌಂಡೇಶನ್ಸ್ ಆಫ್ ಡೇಟಾ ಸೈನ್ಸ್ ಇಂತಹ ಉಪಯುಕ್ತ ಕೋರ್ಸುಗಳಿಗೆ ಉದಾಹರಣೆಗಳು.

ಗ್ರಾಫಿಕ್ ಡಿಸೈನಿಂಗ್: ಯೋಚನೆ-ಯೋಜನೆಗಳ ದೃಶ್ಶಿಕ ವಿವರಣೆ ಹೊಸಕಾಲದ ಅವಶ್ಯಕತೆಗಳಲ್ಲೊಂದು. ಹೀಗಾಗಿ ಎಲ್ಲೆಡೆಯೂ ಗ್ರಾಫಿಕ್ ವಿನ್ಯಾಸಕಾರರು ಇಂದು ಬೇಕೇಬೇಕು. ಜಾಹೀರಾತಿನಿಂದ ತೊಡಗಿ ಸಿನಿಮಾರಂಗದವರೆಗೆ ನೂರಾರು ಕ್ಷೇತ್ರಗಳು ಅವರನ್ನು ಸ್ವಾಗತಿಸುತ್ತವೆ. ಇಂಟ್ರೊಡಕ್ಷನ್ ಟು ಗ್ರಾಫಿಕ್ ಡಿಸೈನ್ ವಿದ್ ಫೋಟೋಶಾಪ್, ಫಂಡಮೆಂಟಲ್ಸ್ ಆಫ್ ಗ್ರಾಫಿಕ್ ಡಿಸೈನ್, ಗ್ರಾಫಿಕ್ಸ್ & ಅನಿಮೇಶನ್ ಡೆವಲಪ್ಮಂಟ್, ಕಂಪ್ಯೂಟರ್ ಗ್ರಾಫಿಕ್ಸ್- ಹೀಗೆ ಅನೇಕ ಕೋರ್ಸುಗಳು ಉಚಿತವಾಗಿ ದೊರೆಯುತ್ತವೆ.

ಫೋಟೋಗ್ರಫಿ & ವೀಡಿಯೋಗ್ರಫಿ: ಕೌಟುಂಬಿಕ ಕಾರ್ಯಕ್ರಮಗಳಿಂದ ತೊಡಗಿ ಕಾರ್ಪೋರೇಟ್ ಸಮಾರಂಭಗಳವರೆಗೆ ಎಲ್ಲರಿಗೂ ಬೇಕಾಗಿರುವುದು ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ. ಹೀಗಾಗಿ ಕ್ಯಾಮೆರಾ ನಿರ್ವಹಿಸಬಲ್ಲವರಿಗೆ ಈಗ ಎಲ್ಲೆಡೆಯೂ ಬೇಡಿಕೆ. ಫೋಟೋಗ್ರಫಿ, ವೀಡಿಯೋಗ್ರಫಿ ಬಲ್ಲವರು ನಿರುದ್ಯೋಗಿಗಳಾಗಿ ಕುಳಿತುಕೊಳ್ಳುವ ಪ್ರಮೇಯವೇ ಇಲ್ಲ. ಹತ್ತಾರು ಸಂಖ್ಯೆಯಲ್ಲಿ ಲಭ್ಯವಿರುವ ಉಚಿತ ಆನ್ಲೈನ್ ಕೋರ್ಸುಗಳ ಮೂಲಕ ನಮ್ಮ ಫೋಟೋಗ್ರಫಿ ಕೌಶಲಗಳನ್ನು ಸುಲಭವಾಗಿ ಬೆಳೆಸಿಕೊಳ್ಳಬಹುದು.

ವೆಬ್ ಡಿಸೈನಿಂಗ್: ತಾಂತ್ರಿಕ ಪದವಿಗಳ ವ್ಯಾಸಂಗ ಮಾಡದೆಯೂ ಜಾಲತಾಣಗಳನ್ನು ಹಾಗೂ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವುದು ಈಗಿನ ಪ್ರವೃತ್ತಿಗಳಲ್ಲೊಂದು. ಅನೇಕ ಯುವಕರು ಇದನ್ನೊಂದು ಹವ್ಯಾಸವನ್ನಾಗಿ ಬೆಳೆಸಿಕೊಂಡು ದೊಡ್ಡ ಯಶಸ್ಸು ಸಾಧಿಸಿರುವುದುಂಟು. ಇಂಟ್ರೊಡಕ್ಷನ್ ಟು ವೆಬ್ ಡೆವಲಪ್ಮೆಂಟ್, ಯುಎಕ್ಸ್ ಡಿಸೈನ್ ಫಾರ್ ಮೊಬೈಲ್ ಡೆವಲಪರ್ಸ್, ಯೂಸರ್ ಇಂಟರ್‌ಫೇಸ್ ಡಿಸೈನ್. ಯೂಸರ್ ಎಕ್ಸ್ಪೀರಿಯನ್ಸ್ ಡಿಸೈನ್- ಈ ವರ್ಗಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.

ಎಲ್ಲಿ ದೊರೆಯುತ್ತವೆ?

ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನಾ (PMKVY), ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (NSDC), ಸ್ವಯಂ (SWAYAM) ಮುಂತಾದ ಸರ್ಕಾರಿ ಸಂಸ್ಥೆಗಳಲ್ಲದೆ ನಾಸ್‌ಕಾಮ್, ಇನ್ಫೋಸಿಸ್‌ನಂತಹ ಸರ್ಕಾರೇತರ ಸಂಸ್ಥೆಗಳು ನೂರಾರು ಉಚಿತ ಹಾಗೂ ಪಾವತಿ ಕೋರ್ಸುಗಳನ್ನು ಒದಗಿಸುತ್ತಿವೆ. ಪ್ರಮಾಣಪತ್ರವನ್ನೂ ನೀಡುತ್ತವೆ. ಕೆಲವು ಉಪಯುಕ್ತ ಲಿಂಕ್‌ಗಳು ಇಲ್ಲಿವೆ:

https://infyspringboard.onwingspan.com/

http://www.pmkvyofficial.org/

https://futureskillsprime.in/

https://swayam.gov.in/

https://www.careers360.com/

2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪದವಿ ಹಾಗೂ ಉದ್ಯೋಗಗಳ ನಡುವಿನ ಅಂತರವನ್ನು ಮೌಲ್ಯ ಹಾಗೂ ಕೌಶಲ್ಯಗಳ ಚೌಕಟ್ಟಿನಲ್ಲಿ ನಿವಾರಿಸಿಕೊಳ್ಳುವ ದೊಡ್ಡ ಕನಸು ಇಟ್ಟುಕೊಂಡಿದೆ. ಇದರ ಸಮರ್ಥ ಅನುಷ್ಠಾನ ವಿದ್ಯಾರ್ಥಿಗಳ ಉತ್ಸಾಹ ಹಾಗೂ ಅಧ್ಯಾಪಕರ ಬದ್ಧತೆಯ ಮೇಲೆ ನಿಂತಿದೆ. ಕೌಶಲಾಭಿವೃದ್ಧಿ ಕೋರ್ಸುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಇದಕ್ಕಿರುವ ಸರಳ ಮಾರ್ಗ.

- ಸಿಬಂತಿ ಪದ್ಮನಾಭ ಕೆ. ವಿ.