ಗುರುವಾರ, ಸೆಪ್ಟೆಂಬರ್ 29, 2022

ಸೋಶಿಯಲ್ ಫೋಬಿಯಾ: ಆತ್ಮವಿಶ್ವಾಸವೇ ಅಭಯ

18-24 ಸೆಪ್ಟೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಕೆಲವು ವರ್ಷಗಳ ಹಿಂದಿನ ಘಟನೆ. ಅದು ಕಾಲೇಜಿನ ಹೊಸ ಬ್ಯಾಚಿನ ಮೊದಲನೇ ಕ್ಲಾಸು. ಒಬ್ಬೊಬ್ಬರನ್ನೇ ತರಗತಿಯ ಎದುರಿಗೆ ಕರೆಸಿಕೊಂಡು ಅವರಿಂದ ಸ್ವಪರಿಚಯ ಹೇಳಿಸುತ್ತಿದ್ದೆ. ಕೆಲವರು ಸಲೀಸಾಗಿಯೂ ಇನ್ನು ಕೆಲವರು ಕೊಂಚ ಆತಂಕದಿಂದಲೂ ತಮ್ಮತಮ್ಮ ಪರಿಚಯ ಹೇಳಿಕೊಂಡರು. ಒಬ್ಬಳು ಮಾತ್ರ ಎದುರು ಬರುವುದಕ್ಕೇ ಒಪ್ಪಲಿಲ್ಲ. ಹೇಗೋ ಒತ್ತಾಯ ಮಾಡಿ ಅವಳನ್ನು ಈಚೆ ಕರೆತಂದದ್ದಾಯಿತು. ಮಾತು ಆರಂಭಿಸುವುದಕ್ಕೇ ಒಂದು ನಿಮಿಷ ತೆಗೆದುಕೊಂಡಳು. ಸ್ವಲ್ಪ ಹೊತ್ತಲ್ಲೇ ಏನೂ ಮಾತಾಡಲಾಗದೆ ಪೂರ್ತಿ ಬೆವರಿ ಒದ್ದೆಯಾಗಿ ಗೋಳೋ ಎಂದಳುತ್ತಾ ಅಲ್ಲೇ ಕುಸಿದುಕುಳಿತಳು. ಅವಳನ್ನು ಸಂತೈಸಿ ಅಂದಿನ ತರಗತಿ ಮುಗಿಸಿದ್ದಾಯಿತು.

ಅಚ್ಚರಿಯೆಂದರೆ ತರಗತಿ ಬಳಿಕ ತಾನಾಗಿಯೇ ಆ ಹುಡುಗಿ ವಿಭಾಗಕ್ಕೆ ಬಂದು ಭೇಟಿಯಾದಳು. ತನ್ನ ಕಷ್ಟ ಹೇಳಿಕೊಂಡಳು. ‘ಕ್ಲಾಸ್ ಅಂತ ಅಲ್ಲ ಸರ್, ಎಲ್ಲ ಕಡೆಯೂ ಹೀಗೇ ಆಗುತ್ತೆ. ಹೊಸಬರನ್ನೇನು, ಪ್ರತಿದಿನ ಎದುರಾಗುವವರು ಸಿಕ್ಕರೂ ಆತಂಕ ಆಗಿಬಿಡುತ್ತೆ. ಯಾವುದೋ ಫಂಕ್ಷನಿಗೆ ಹೋದರೂ ಟೆನ್ಷನ್ ಮಾಡ್ಕೋತೀನಿ. ಅದಕ್ಕೆ ಈಗೀಗ ಹೊರಗೆ ಹೋಗೋದನ್ನೇ ನಿಲ್ಲಿಸಿದೀನಿ. ಕಾಲೇಜಿಗೆ ಯಾಕಾದರೂ ಸೇರಿದೆನೋ ಅನ್ನಿಸ್ತಿದೆ’ ಎಂದಳು. 

‘ನಿಧಾನವಾಗಿ ಎಲ್ಲ ಸರಿ ಹೋಗುತ್ತಮ್ಮ. ನೋಡೋಣ. ಈಗ ನನ್ನ ಬಗ್ಗೆ ವಿಶ್ವಾಸ ಬಂದಿದೆ ತಾನೇ? ದಿನಕ್ಕೊಮ್ಮೆ ಬಂದು ಭೇಟಿಯಾಗು. ಏನೇ ಹೇಳಬೇಕು ಅನ್ನಿಸಿದರೂ ಹೇಳು’ ಎಂದು ಒಂದಷ್ಟು ಸಮಾಧಾನ ಹೇಳಿದೆ. ಕೆಲವು ದಿನಗಳ ಬಳಿಕ ‘ನಿನ್ನ ಹವ್ಯಾಸಗಳೇನು? ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಿ?’ ಕೇಳಿದೆ. ‘ಸಣ್ಣಪುಟ್ಟ ಕವಿತೆ ಬರೀತೀನಿ ಸರ್. ಆದ್ರೆ ಈವರೆಗೆ ಯಾರಿಗೂ ಒಮ್ಮೆಯೂ ತೋರಿಸಿಲ್ಲ. ಎಲ್ಲ ಬರೆದು ಒಂದು ಕಡೆ ಇಟ್ಟಿದೀನಿ. ಯಾರು ಏನಂದ್ಕೋತಾರೋ ಅನ್ನೋ ಭಯ’ ಅಂದಳು. ಅವನ್ನೆಲ್ಲ ಅವಶ್ಯ ತಂದು ತೋರಿಸು, ತಪ್ಪಿದ್ದರೂ ನಾನು ತಮಾಷೆ ಮಾಡೋದಿಲ್ಲ ಅಂತ ಭರವಸೆ ತುಂಬಿದೆ.

ಅವಳ ಕವಿತೆಗಳು ನಿಜಕ್ಕೂ ಚೆನ್ನಾಗಿದ್ದವು. ಅವುಗಳಲ್ಲಿ ಹೊಸತನ ಇತ್ತು. ಅವಳನ್ನು ಅಭಿನಂದಿಸಿದೆ. ಬೇರೆ ಕೆಲವು ಕವನ ಸಂಕಲನಗಳನ್ನು ಕೊಟ್ಟು ಓದಲು ಹೇಳಿದೆ. ಅವಳು ಹೆಚ್ಚುಹೆಚ್ಚು ಬರೆದು ತೋರಿಸತೊಡಗಿದಳು. ಕೆಲವು ಕಾಲೇಜು ಮ್ಯಾಗಜಿನ್‌ನಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾದವು. ಸಹಪಾಠಿಗಳಿಂದ, ಬೇರೆ ಅಧ್ಯಾಪಕರಿಂದ ಅವಳಿಗೆ ಪ್ರಶಂಸೆ ಸಿಕ್ಕಿತು. ಆಕೆಯ ವ್ಯಕ್ತಿತ್ವ, ವರ್ತನೆಯಲ್ಲೂ ಕ್ರಮೇಣ ಸುಧಾರಣೆ ಕಾಣುತ್ತಿತ್ತು. ಒಂದು ವರ್ಷ ಕಳೆಯುವ ಹೊತ್ತಿಗೆ ಇದೇ ಹಳ್ಳಿಹುಡುಗಿ ಮೊದಲ ತರಗತಿಯಲ್ಲಿ ಭಯದಿಂದ ನಡುಗಿ ಬಿದ್ದುಹೋದಳಾ ಎಂದು ಅಚ್ಚರಿಯಾಗುವಷ್ಟರ ಮಟ್ಟಿಗೆ ಆಕೆ ಬದಲಾದಳು. ಪದವಿ ಮುಗಿಯುವ ಹೊತ್ತಿಗೆ ಅವಳ ಚೊಚ್ಚಲ ಕವನ ಸಂಕಲನ ಪ್ರಕಟವಾಯಿತು, ಮತ್ತು ಅದಕ್ಕೆ ರಾಜ್ಯಸರ್ಕಾರದ ಬಹುಮಾನ ಕೂಡ ಬಂತು!

ಸಾರ್ವಜನಿಕ ಸನ್ನಿವೇಶಗಳಲ್ಲಿ ಒಂದು ಬಗೆಯ ಭಯ, ಆತಂಕ ಕಾಡುವುದು ಸಾಮಾನ್ಯ. ಇದು ಎಲ್ಲರಿಗೂ ಒಂದಲ್ಲ ಒಂದು ಸಂದರ್ಭ ಎದುರಾಗುವಂಥದ್ದೇ. ಇದಕ್ಕೆ ಹಳ್ಳಿಯವರು, ಪಟ್ಟಣದವರು ಎಂಬ ಭೇದವಿಲ್ಲ. ಗಂಡು-ಹೆಣ್ಣೆAಬ ವ್ಯತ್ಯಾಸ ಇಲ್ಲ. ಇದು ಹದಿಹರೆಯದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾದರೂ, ಆಮೇಲೆಯೂ ಇರಬಾರದು ಎಂದಿಲ್ಲ. ಕೆಲವೊಮ್ಮೆ ಇವು ದೀರ್ಘಕಾಲ ಮುಂದುವರಿಯುತ್ತವೆ. ಇದಕ್ಕೆ ‘ಸಾಮಾಜಿಕ ಭಯ’ (ಸೋಶಿಯಲ್ ಫೋಬಿಯಾ) ಎಂದು ಹೆಸರು. ಈ ದೀರ್ಘಕಾಲೀನ ಉದ್ವಿಗ್ನತೆ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ಮೇಲೆ, ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ತನ್ನಷ್ಟಕ್ಕೇ ಒಂಟಿಯಾಗುತ್ತಾ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವುದೂ ಇದೆ. 

ಸಾಮಾಜಿಕ ಭಯ ಕೇವಲ ನಾಚಿಕೆ ಅಲ್ಲ. ಅದಕ್ಕಿಂತ ಹೆಚ್ಚಾದ ಭಯ. ಗುಂಪುಗಳಲ್ಲಿ ಇರುವ, ಹೊಸಬರನ್ನು ಭೇಟಿಯಾಗುವ, ಸಭೆಯನ್ನು ಎದುರಿಸುವ- ಅಂದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಒಬ್ಬ ವ್ಯಕ್ತಿ ಎದುರಿಸುವ ತೀವ್ರ ಉದ್ವಿಗ್ನತೆ. ತನ್ನ ಪ್ರತೀ ಚಟುವಟಿಕೆಯನ್ನೂ ಯಾರೋ ಗಮನಿಸುತ್ತಿರುತ್ತಾರೆ; ಅವುಗಳಲ್ಲಿ ಅಕಸ್ಮಾತ್ ತಪ್ಪುಗಳಾದರೆ ಎಲ್ಲರೂ ಆಡಿಕೊಳ್ಳುತ್ತಾರೆ ಎಂಬ ಭಾವನೆಯೇ ಈ ಆತಂಕದ ಬೇರು. ಆತ್ಮವಿಶ್ವಾಸವನ್ನೇ ಕುಗ್ಗಿಸುವ ಈ ಭಯದಿಂದಾಗಿ ವ್ಯಕ್ತಿ ಜೀವನದಲ್ಲೇ ಜುಗುಪ್ಸೆಯನ್ನು ತಾಳುವುದೂ ಇದೆ. ‘ನಾನು ಎಲ್ಲಿಯೂ ಸಲ್ಲದವನು, ಯಾವ ಕೆಲಸಕ್ಕೂ ಆಗದವನು, ನಿಷ್ಪ್ರಯೋಜಕ’ ಎಂಬ ಭಾವ ಬಂದರೆ ಅರ್ಧ ಬದುಕು ಮುಗಿದ ಹಾಗೆ. ಎಲ್ಲಿಯವರೆಗೆ ಎಂದರೆ ಇಂತಹ ವ್ಯಕ್ತಿಗಳು ಅಕ್ಕಪಕ್ಕ ಯಾರಾದರೂ ಇದ್ದರೆ ಶೌಚಾಲಯಕ್ಕೆ ಹೋಗಲೂ ಹಿಂಜರಿಯುತ್ತಾರೆ.

ಹೊರಬರುವುದು ಹೇಗೆ?

ಯಾವುದೇ ಸಮಸ್ಯೆಗೆ ಸುಲಭ ಪರಿಹಾರ ಎಂದರೆ ಸಮಸ್ಯೆಯ ಕಾರಣವನ್ನು ಅರ್ಥಮಾಡಿಕೊಳ್ಳುವುದು. ಇದು ಮೂರನೆಯ ವ್ಯಕ್ತಿಗಿಂತಲೂ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ತಾನೇ ಮಾಡುವುದೇ ಸರಿ. ತಾನು ಯಾವ ಸನ್ನಿವೇಶದಲ್ಲಿ ಆತಂಕಕ್ಕೊಳಗಾಗುತ್ತೇನೋ ಅದರ ಬಗ್ಗೆ ಗಾಢವಾಗಿ ಯೋಚನೆ ಮಾಡಿ ಅದರ ನಿರ್ದಿಷ್ಟ ಕಾರಣವನ್ನು ಅರ್ಥಮಾಡಿಕೊಳ್ಳುವುದು ಈ ನಿಟ್ಟಿನಲ್ಲಿ ಮೊದಲನೇ ಹೆಜ್ಜೆ. 

ಋಣಾತ್ಮಕ ಯೋಚನೆಗಳನ್ನು ದೂರವಿಟ್ಟು ತಾನು ಉಳಿದವರಿಗಿಂತ ಕಮ್ಮಿಯಿಲ್ಲ ಎಂಬ ಭಾವನೆಯನ್ನು ಗಟ್ಟಿಮಾಡಿಕೊಳ್ಳುವುದು ಎರಡನೇ ಹೆಜ್ಜೆ. ಯಾರೋ ತನ್ನನ್ನು ಗಮನಿಸುತ್ತಾರೆ, ಅವರು ಆಡಿಕೊಳ್ಳುತ್ತಾರೆ ಎಂಬ ಯೋಚನೆಯಿಂದ ಮೊದಲು ಹೊರಬರಬೇಕು. ಇನ್ನೊಬ್ಬರನ್ನು ಗಮನಿಸುವುದೇ ಎಲ್ಲರ ಕೆಲಸ ಅಲ್ಲ, ಅವರಿಗೆ ತಮ್ಮದೇ ಆದ ಕೆಲಸಗಳಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾರೋ ಅದನ್ನೇ ಮಾಡುತ್ತಾರೆ ಎಂದುಕೊಳ್ಳೋಣ, ಅದರಿಂದ ಅವರ ನೆಗೆಟಿವ್ ವ್ಯಕ್ತಿತ್ವ ಗೊತ್ತಾಗುತ್ತದೆಯೇ ಹೊರತು ನಾವು ಕಳೆದುಕೊಳ್ಳುವಂಥದ್ದೇನೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಇನ್ನೊಂದು ಮುಖ್ಯ ವಿಷಯವೆಂದರೆ, ನಾವು ಯಾವುದೋ ಸಣ್ಣ ತಪ್ಪು ಮಾಡಿದೆವು ಎಂದುಕೊಳ್ಳೋಣ, ಅದನ್ನು ನೋಡಿದವರು ಬಹುತೇಕ ತಾವೂ ಹಿಂದೆ ಅಂತಹದೇ ತಪ್ಪು ಮಾಡಿದ್ದೆವಲ್ಲ ಎಂದು ಒಳಗೊಳಗಿಂದಲೇ ನೆನಪಿಸಿಕೊಳ್ಳುತ್ತಿರುತ್ತಾರೆ.

ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಪ್ರತಿಭೆ, ವಿಶಿಷ್ಟ ಗುಣ ಇದ್ದೇ ಇರುತ್ತದೆ. ಅದನ್ನು ತನಗೆ ತಾನೇ ಪೋಷಿಸಿಕೊಂಡು, ಅದರಿಂದ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಮುಖ್ಯ. ಬರವಣಿಗೆ, ಕ್ರೀಡೆ, ಹಾಡು, ಮಾತುಗಾರಿಕೆ, ಪೈಂಟಿಂಗ್, ಕಸೂತಿ, ಡ್ಯಾನ್ಸ್, ನಾಟಕ- ಯಾವುದಾದರೊಂದು ಕಲೆ ನಮ್ಮೊಳಗೆ ಇರುತ್ತದೆ. ಅದನ್ನು ಗಮನಿಸಿಕೊಂಡು ಗಟ್ಟಿಗೊಳಿಸುವುದೇ ಒಂದು ಪ್ರಮುಖ ಪರಿಹಾರ. 

ಬರೆಯುವ ಕೌಶಲ ಇರುವವರು ಒಂದು ಕವಿತೆ, ಕತೆ, ಲೇಖನವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ, ಎಲ್ಲೋ ಪ್ರಕಟಿಸಿದಾಗ ದೊರೆಯುವ ಪ್ರತಿಕ್ರಿಯೆಯ ಮೌಲ್ಯ, ಅದರಿಂದ ದೊರೆಯುವ ಆತ್ಮವಿಶ್ವಾಸ ಬಹಳ ದೊಡ್ಡದು. ಹಾಡುವ ಹವ್ಯಾಸ ಇರುವವರು ನಾಕು ಮಂದಿಯ ಮುಂದೆ ಹಾಡಿದಾಗ ದೊರೆಯುವ ಒಂದು ಸಣ್ಣ ಪ್ರಶಂಸೆ ಅಪೂರ್ವ ಬದಲಾವಣೆ ತರಬಲ್ಲದು. ಆಟೋಟ, ಪ್ರದರ್ಶನ ಕಲೆ- ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಮನ್ನಣೆಯನ್ನೂ, ಪ್ರತಿಫಲವಾಗಿ ಧೈರ್ಯವನ್ನೂ ತಂದುಕೊಡುತ್ತದೆ. ಪ್ರೇರಣಾದಾಯಿ ಪುಸ್ತಕಗಳ ಓದೂ ಈ ನಿಟ್ಟಿನಲ್ಲಿ ಸಹಕಾರಿ.

ಆತ್ಮವಿಶ್ವಾಸ ಎಂಬುದು ಯಾರೋ ಬೆಂಕಿಕಡ್ಡಿ ಗೀರಿ ಹಚ್ಚಲಿ ಎಂದು ಕಾಯುವ ದೀಪ ಅಲ್ಲ; ಸ್ವಯಂ ಬೆಳಗಬೇಕಾದ ಮಿಂಚುಹುಳ. 

- ಸಿಬಂತಿ ಪದ್ಮನಾಭ ಕೆ.ವಿ.

ಬುಧವಾರ, ಸೆಪ್ಟೆಂಬರ್ 14, 2022

ಅಜ್ಜ ಅಜ್ಜಿ ಇರಲವ್ವ ಮನೆಯಲ್ಲಿ...

11 ಸೆಪ್ಟೆಂಬರ್ 2022ರ 'ವಿಜಯ ಕರ್ನಾಟಕ' ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಲೇಖನ

ಅಜ್ಜ-ಅಜ್ಜಿ ಅಂದ್ರೆ ನಿಮಗೇಕೆ ಇಷ್ಟ? ಹಾಗೊಂದು ಪ್ರಶ್ನೆಯನ್ನು ಮಕ್ಕಳ ಮುಂದಿಟ್ಟೆ. ಹೆಚ್ಚುಕಮ್ಮಿ ಒಂದೇ ಅರ್ಥದ ಉತ್ತರ ಸರಕ್ಕನೆ ಬಂತು: ‘ಅವರು ನಮಗೆ ಬಯ್ಯೋದೇ ಇಲ್ಲ’. ಮಕ್ಕಳನ್ನು ಬಯ್ಯದೆಯೂ ತಿದ್ದಿತೀಡುವ ಕಲೆ ಅಜ್ಜ-ಅಜ್ಜಿಯಂದಿರಿಗೆ ಕರತಲಾಮಲಕ. ಅದಕ್ಕೇ ಅವರು ಗ್ರ್ಯಾಂಡ್ ಪೇರೆಂಟ್ಸ್ ಮಾತ್ರವಲ್ಲ ಗ್ರೇಟ್‌ಪೇರೆಂಟ್ಸ್ ಕೂಡ.

ಭೂಮಿಯ ಮೇಲೆ ನಿಮ್ಮನ್ನು ಬಯ್ಯದೆ ಇರುವ ಏಕೈಕ ಜೀವಿಗಳೆಂದರೆ ಅಜ್ಜ-ಅಜ್ಜಿ ಮಾತ್ರ. ಅದರರ್ಥ ಅವರು ನಿಮ್ಮನ್ನು ಟೀಕೆ ಮಾಡುವುದೇ ಇಲ್ಲ ಎಂದಲ್ಲ. ಕಹಿಗುಳಿಗೆಗಳನ್ನೂ ಅಕ್ಕರೆಯೆಂಬ ಸಕ್ಕರೆ ಪಾಕದಲ್ಲಿ ಅದ್ದಿ ನುಂಗಿಸುವುದು ಹೇಗೆಂದು ಅವರಿಗೆ ಗೊತ್ತು. ಅದು ಬಹಳ ಮುಖ್ಯ ಕೂಡ. ಬರೀ ಸಕ್ಕರೆ ಪಾಕ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಜ್ಜಿ ಸಾಕಿದ ಮಗು ಬೊಜ್ಜಕ್ಕೂ ಬಾರ ಅಂತೊಂದು ಗಾದೆ ಬೇರೆ ಉಂಟಲ್ಲ! ತೀರಾ ಮುಚ್ಚಟೆಯಿಂದ ಬೆಳೆದ ಮಗು ನಿಷ್ಪ್ರಯೋಜಕ ಆಗುತ್ತದೆ ಎಂಬ ಧ್ವನಿ ಅಷ್ಟೇ.

ಅದೊಂದು ಕಾಲ ಇತ್ತು: ಅಜ್ಜನ ಮನೆ ಎಂಬುದು ಸರ್ವತಂತ್ರ ಸ್ವಾತಂತ್ರ್ಯಕ್ಕೊಂದು ಪರ್ಯಾಯ ಪದ. ಅಜ್ಜನ ಮನೆಗೆ ಹೋಗುವ ಕಲ್ಪನೆಯಂತೂ ಆ ಸ್ವಾತಂತ್ರ್ಯದೆಡೆಗೊಂದು ಮಹಾ ನಡಿಗೆ. ಕೆಂಪು ಬಸ್ಸಿನಲ್ಲಿ ಕಿಟಕಿ ಪಕ್ಕ ಕೂರುವ, ಬಿರುಬಿಸಿಲಿನ ಮಧ್ಯೆ ಐವತ್ತು ಪೈಸೆಯ ಐಸ್‌ಕ್ಯಾಂಡಿ ಸವಿಯುವ, ಅಜ್ಜಿ ಮಾಡಿಟ್ಟ ಕುರುಕಲುಗಳನ್ನು ಹಗಲೂ ರಾತ್ರಿ ಮೆಲ್ಲುವ ಆ ಕಲ್ಪನೆಯೇ ಬಲು ರೋಚಕ. ಕನಿಷ್ಟ ಎರಡು ಮೂರು ತಿಂಗಳಿನಿಂದ ‘ದೊಡ್ಡರಜೆ’ಗೆ ಕಾಯುವ, ಅಜ್ಜನ ಮನೆಗೆ ಹೋಗಲು ಇನ್ನೆಷ್ಟು ದಿನ ಬಾಕಿ ಎಂದು ದಿನಾ ರಾತ್ರಿ ಕೌಂಟ್‌ಡೌನ್ ಮಾಡುವ, ಇಂಥಾ ದಿನವೇ ಹೋಗುವುದೆಂದು ಅಮ್ಮನ ಬಾಯಿಂದ ಅಧಿಕೃತವಾಗಿ ಹೇಳಿಸುವ, ಅದಕ್ಕೆ ಪೂರ್ವತಯಾರಿ ರೂಪದಲ್ಲಿ ಅಪ್ಪನನ್ನು ಒಪ್ಪಿಸುವ- ಆ ಕಾಲವಂತೂ ಒಂದು ಕನಸಿನ ಲೋಕ.

ಅಲ್ಲಿಗೆ ತಲುಪಿದ ಮೇಲಂತೂ ಮೊಮ್ಮಕ್ಕಳದ್ದೇ ಸಾಮ್ರಾಜ್ಯ. ಅಲ್ಲಿನ ಆಟಾಟೋಪಗಳಿಗೆ ಲಂಗುಲಗಾಮಿಲ್ಲ. ಯಾಕೆಂದು ಗೊತ್ತಲ್ಲ- ಅಜ್ಜನಿಗೆ ಸಿಟ್ಟು ಬರುವುದೇ ಇಲ್ಲ, ಅಜ್ಜಿ ಬಯ್ಯವುದೇ ಇಲ್ಲ. ತೋಟ ಸುತ್ತು, ಗುಡ್ಡ ಹತ್ತು, ತೋಡಿನಲ್ಲಿ ಓಡು, ಬೇಕಾದ್ದು ಮಾಡು... ಅಜ್ಜಅಜ್ಜಿ ಗದರುವ ಕ್ರಮವೇ ಇಲ್ಲ. ರಾತ್ರಿಯಾದರೂ ‘ತಡವಾಯ್ತು ಮಲಕ್ಕೊಳ್ರೋ’ ಎಂದು ಎಚ್ಚರಿಸಿಯಾರು; ಬೆಳಗ್ಗಂತೂ ಎಬ್ಬಿಸುವ ಪ್ರಶ್ನೆಯೇ ಇಲ್ಲ. ‘ಪಾಪ ಮಕ್ಳು, ರಜೆ ಅಲ್ವಾ, ಸ್ವಲ್ಪ ಹೊತ್ತು ಮಲಕ್ಕೊಳ್ಳಿ...’ ಹಾಗೆ ಹೇಳದಿದ್ದರೆ ಆಕೆ ಅಜ್ಜಿಯೇ ಅಲ್ಲ.

ಅಜ್ಜಿಗಂತೂ ದಿನವಿಡೀ ಬಿಡುವೇ ಇಲ್ಲ. ಆಕೆಗೆ ತರಹೇವಾರಿ ತಿಂಡಿತಿನಿಸು ಮಾಡಲು ಗೊತ್ತಿರುವುದೇ ಇದಕ್ಕೆ ಕಾರಣ. ಅಜ್ಜಿಗೆ ಗೊತ್ತಿಲ್ಲದ ತಿಂಡಿ ಇಲ್ಲ, ಅಜ್ಜನಿಗೆ ಗೊತ್ತಿಲ್ಲದ ಕಥೆ ಇಲ್ಲ. ಅಜ್ಜನ ಕಥೆ ಕೇಳುವುದಕ್ಕೆ ಹಗಲು-ರಾತ್ರಿ ಎಂಬ ಭೇದಗಳೂ ಇಲ್ಲ. ರಾತ್ರಿ ಹೇಗೂ ಬ್ಯಾಕ್ ಟು ಬ್ಯಾಕ್ ಕಥೆ ಇದೆ, ಹಗಲು ಹೆಚ್ಚುವರಿ ಕಥೆ ಹೇಳಿಸಿಕೊಳ್ಳುವುದು ರಜೆಗೆ ಬೋನಸ್. ಈ ಅಜ್ಜ ಎಂಬುದೊಂದು ಕಥೆಗಳ ಮಹಾಕಣಜ. ತೆಗೆದಷ್ಟೂ ಮುಗಿಯದ ಅಕ್ಷಯಪಾತ್ರೆ ಅದು. ಕಥೆ ತೆಗೆಯುತ್ತಾ ಹೋದರೆ ಅಜ್ಜನ ಜೋಳಿಗೆ ಬರಿದಾಗುವುದಿಲ್ಲ, ಕಥೆ ಹೇಳಿಹೇಳಿ ಅಜ್ಜನಿಗೆ ಬೇಜಾರೂ ಬರುವುದಿಲ್ಲ. ನಿನ್ನೆ ಹೇಳಿದ ಕಥೆಯನ್ನೇ ಇಂದು ಅಜ್ಜ ಮತ್ತೊಮ್ಮೆ ಹೇಳಿದರೆ ಮೊಮ್ಮಕ್ಕಳಿಗೂ ಆಕ್ಷೇಪ ಇಲ್ಲ. ಏಕೆಂದರೆ ಅಜ್ಜನ ಕಥೆಯೆಂದರೆ ಪ್ರತಿದಿನ ಹೊಸ ಲೋಕವನ್ನು ಕಟ್ಟಿನಿಲ್ಲಿಸುವ ವರ್ಣರಂಜಿತ ಬಯಲಾಟ. 

‘ನೋಡಿ ನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ...’ ಅಂತ ಅಜ್ಜ ಪದ್ಯ ಸಮೇತ ಕಥೆ ಆರಂಭಿಸಿದರೆ ಅಲ್ಲಿ ರಾಮ-ಸೀತೆ-ಲಕ್ಷ್ಮಣರೆಲ್ಲ ಥಟ್ಟನೆ ಪ್ರತ್ಯಕ್ಷ. ಕಥೆ ಮುಂದಕ್ಕೆ ಹೋದಂತೆ ವಾನರಸೇನೆಯೇನೂ ಪ್ರತ್ಯೇಕ ಬರುವ ಅಗತ್ಯ ಇಲ್ಲ. ಅಜ್ಜನ ಕೋಣೆಯೇ ಕಿಷ್ಕಿಂಧೆಯಾಗಿಯೂ, ಸುತ್ತಮುತ್ತಲೆಲ್ಲ ಹತ್ತಿಹಾರುವವರು ಈ ಸೇನೆಯ ಪಟುಭಟರಾಗಿಯೂ ಬದಲಾಗುವುದುಂಟು. ಆದರೆ ಕಥೆ ಮಗ್ಗುಲು ಬದಲಾಯಿಸಿ, ಚಂದ್ರಮತಿಯ ಪ್ರಲಾಪಕ್ಕೋ, ದಮಯಂತಿಯ ಶೋಕಕ್ಕೋ ಹೊರಳಿಕೊಂಡರೆ ವಾನರವೀರರೆಲ್ಲ ಮತ್ತೆ ಎಳೆಯ ಮಕ್ಕಳಾಗಿ ಬದಲಾಗಿ ಅಜ್ಜನ ಜೊತೆ ಕಣ್ಣೀರು ಮಿಡಿಯುವುದೂ ಉಂಟು.

ಏತನ್ಮಧ್ಯೆ ಅಜ್ಜನೂ ಮೊಮ್ಮಗುವಾಗಿ ಅವತರಿಸುವ ಕ್ರಮವೂ ಉಂಟು. ಕಥೆ ಹೇಳಬೇಕೆಂದರೆ ವೀಳ್ಯಕ್ಕೆ ಬೇಕಾದ ಅಡಿಕೆಯನ್ನು ಗುದ್ದಿ ಸಿದ್ಧಪಡಿಸುವ, ಅಜ್ಜಿಗೆ ಸಿಟ್ಟು ಬರದಂತೆ ಕಾಫಿಗೆ ಡಬಲ್ ಸಕ್ಕರೆ ಹಾಕಿಸಿಕೊಂಡು ಬರುವ, ಸಮಯಕ್ಕೆ ಸರಿಯಾಗಿ ರೇಡಿಯೋ ನ್ಯೂಸು ಕೇಳಿಸುವ ಸಣ್ಣಪುಟ್ಟ ಲೋಕೋಪಕಾರಿ ಕೆಲಸ ಮಾಡಬೇಕಾಗುವ ಒತ್ತಡ ಅಜ್ಜನಿಂದ ಬಂದರೆ ಅಚ್ಚರಿಯಿಲ್ಲ. ಹಾಗೆಂದು ಕಥೆ ಹೇಳು ಅಂದಾಕ್ಷಣ ಕಥೆ ಆರಂಭಿಸುವ ಪಾಪದ ಅಜ್ಜ ಅವರಲ್ಲ. ಸಾಕಷ್ಟು ಕಾಡಿಸದೆ ಪೀಡಿಸದೆ ಅವರಿಂದ ಕಥೆ ಹೊರಡದು. ‘ನಿಂಗೆ ಕೇಳಿದ ಕಥೆ ಬೇಕೋ ಮಗಾ, ಕೇಳದ ಕಥೆ ಬೇಕಾ?’ ಅಜ್ಜನ ಪ್ರಶ್ನೆ. ‘ನಂಗೆ ಕೇಳದ ಕಥೆ ಬೇಕು ಅಜ್ಜ’ ಮೊಮ್ಮಕ್ಕಳ ಕೌತುಕ. ‘ಕೇಳದ ಕಥೆಯಲ್ವ, ಅದು ಕೇಳಿಸ್ತಾ ಇಲ್ಲ, ನಾನು ಹೇಳ್ತಾ ಇದ್ದೇನೆ’ ಅಜ್ಜ ಪೂರ್ತಿ ಸೈಲೆಂಟು. ‘ಓಹೋ ಹಾಗಾ, ಹಾಗಾದ್ರೆ ಕೇಳಿದ ಕಥೆ ಹೇಳು’ ಮೊಮ್ಮಕಳ ಜಾಣ ಪ್ರಶ್ನೆ. ‘ಕೇಳಿದ ಕಥೆಯಲ್ವ, ಮತ್ತೆ ಪುನಃ ಯಾಕೆ ಹೇಳ್ಬೇಕು’ ಅಜ್ಜ ಇನ್ನಷ್ಟು ಇಂಟೆಲಿಜೆAಟು. ಅಂತೂ ಅಜ್ಜನ ಕಥಾವಾಹಿನಿ ಆರಂಭವಾಗಬೇಕೆAದರೆ ಹತ್ತುಹಲವು ಸರ್ಕಸ್ಸು ಬೇಕು. ಒಮ್ಮೆ ಆರಂಭವಾದರೆ ಮಾತ್ರ ಅದು ಎಂದೂ ಮುಗಿಯದ ನಿರಂತರ ನೇತ್ರಾವತಿ.

ಬದಲಾಯ್ತು ಕಾಲ:

ಮತ್ತೆ ಬಂದೀತಾ ಅಂತಹದೊಂದು ಕಾಲ? ಆ ಪ್ರಶ್ನೆಯ ಜತೆಗೆ ಒಂದು ವಿಸ್ಮಯವೂ, ಅದರ ಬೆನ್ನಿಗೊಂದು ವಿಷಾದವೂ ಹಿಂಬಾಲಿಸೀತು. ಮನೆಯಲ್ಲೇ ಅಜ್ಜ-ಅಜ್ಜಿಯರಿರುವುದಿತ್ತು, ಅವರು ಕಾಲವಾಗಿದ್ದರೆ ಅಮ್ಮನ ತವರಿನಲ್ಲಾದರೂ ಅವರ ಒಟನಾಡ ಇರುತ್ತಿತ್ತು. ಅವರ ಸಾಮೀಪ್ಯ ನೀಡುವ ಬಿಸುಪು, ಭದ್ರತೆಯ ಬುತ್ತಿ, ಭಾವಪೋಷಣೆ ಅನ್ಯತ್ರ ಅಲಭ್ಯ.

ಬದುಕು ಬದಲಾಗಿ ಹೋಗಿದೆ. ಅವಿಭಕ್ತ ಕುಟುಂಬಗಳು ಸಣ್ಣಸಣ್ಣ ತುಣುಕುಗಳಾಗಿ ವಿಘಟಿಸಿವೆ. ಗಂಡ-ಹೆಂಡತಿ ಇಬ್ಬರಿಗೂ ಉದ್ಯೋಗ ಇದೆ. ಮನೆಯಲ್ಲಿ ಅಕಸ್ಮಾತ್ ಬೇರೆ ಸದಸ್ಯರಿದ್ದರೆ ಅವರಿಗೂ ಓದು, ಆಫೀಸು ಇದೆ. ಯಾರಿಗೂ ಬಿಡುವಿಲ್ಲ. ಅಜ್ಜ-ಅಜ್ಜಿ ಇದ್ದರೂ ಅವರು ಊರಲ್ಲಿದ್ದಾರೆ. ಅವರು ತಮ್ಮ ಜಮೀನನ್ನು, ಅದರೊಂದಿಗಿನ ಹಳೆಯ ನೆನಪುಗಳನ್ನು ಬಿಟ್ಟು ಬರಲಾರರು. ಬಂದರೂ ಪಟ್ಟಣದ ಗದ್ದಲದ ಮಧ್ಯೆ ಹೆಚ್ಚು ದಿನ ಉಳಿಯಲಾರರು. ಉಳಿದರೂ ನೆಮ್ಮದಿಯಿಂದ ಇರಲಾರರು. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಎರಡು ದಿನ ಹೆಚ್ಚು ಉಳಿದಾರು ಅಷ್ಟೇ. ಹೆಚ್ಚುತ್ತಿರುವ ವೃದ್ಧಾಶ್ರಮಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.

ಅನೇಕ ಸಲ ಮನೆಯಲ್ಲಿ ವಯಸ್ಸಾದ ಹಿರಿಯರಿದ್ದರೆ ಉದ್ಯೋಗಸ್ಥ ದಂಪತಿಗೆ ಕಿರಿಕಿರಿ. ‘ಹಿರಿಯರಿದ್ದರೆ ಮಕ್ಕಳನ್ನು ನೋಡಿಕೊಳ್ಳುವುದಕ್ಕಾದರೂ ಆಗುತ್ತದೆ’ ಎಂಬೊಂದು ಕಾಲ ಇತ್ತು. ಈಗ ಅದೂ ಹೋಗಿದೆ. ಎಲ್ಲರ ಕೈಯಲ್ಲೂ ದುಡ್ಡಿದೆ. ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ. ಸಂಬಳ ಕೊಟ್ಟರೆ ಆಯಾ ಬರುತ್ತಾಳೆ. ಮಗುವನ್ನು ಪ್ರೊಫೆಶನಲ್ ಆಗಿ ನೋಡಿಕೊಳ್ಳುತ್ತಾಳೆ. ಆಕೆ ಮಗುವಿನ ಅಜ್ಜಿ ಆಗಬಲ್ಲಳಾ?

ದುಡಿಯುವ ದಂಪತಿ ಮಧ್ಯೆ ನಾವು ಹೋಗಿ ತೊಂದರೆ ಯಾಕೆ, ಕೈಕಾಲಿಗೆ ಬಲ ಇರುವಷ್ಟು ದಿನ ನಮ್ಮಷ್ಟಕ್ಕೇ ಇರೋಣ- ಎಂಬುದು ಅಜ್ಜ-ಅಜ್ಜಿಯ ವರಸೆ. ಕೈಕಾಲು ಬಿದ್ದಮೇಲೆ ಮಕ್ಕಳ ಮನೆಗೆ ಹೋಗಿ ಮಾಡಬೇಕಿರುವುದಾದರೂ ಏನು? ಆರೋಗ್ಯವಾಗಿದ್ದಾಗಲೇ ಎಲ್ಲರೂ ಜತೆಯಾಗಿದ್ದರೆ ಮೊಮ್ಮಕ್ಕಳಿಗಾದರೂ ಅನುಕೂಲ. ಈಗಿನ ಮಕ್ಕಳಿಗೋ ಬಾಲ್ಯವೇ ಇಲ್ಲ, ಎರಡು ವರ್ಷವಾದರೆ ಅವರ ದಿನಚರಿಯೇ ಬದಲು: ಪ್ಲೇಹೋಮು, ನರ್ಸರಿ, ಶಾಲೆ, ಇತ್ಯಾದಿ. ಆ ವೇಳೆಗೆ ಅಜ್ಜ-ಅಜ್ಜಿ ದೊರೆತರೂ ಅವರು ಬಹುಪಾಲು ಅಪರಿಚಿತರಾಗಿಯೇ ಉಳಿಯುವುದು ಸಿದ್ಧ. ಮೊದಲೇ ಆಧುನಿಕತೆಯ ರಂಗಿನಾಟ: ತಾತ-ಮೊಮ್ಮಕ್ಕಳ ನಡುವೆ ತಲೆಮಾರಿನ ಅಂತರ ಅಷ್ಟೇ ಅಲ್ಲ, ಶತಮಾನಗಳ ಅಂತರ. ಮಕ್ಕಳ ಆಹಾರ-ವಿಹಾರ, ಉಡುಗೆ-ತೊಡುಗೆ, ವೇಷ-ಭಾಷೆ ಎಲ್ಲವೂ ಭಿನ್ನ. ಮಗುವಿಗೆ ಮನೆಭಾಷೆ ಬರದು, ಅಜ್ಜ-ಅಜ್ಜಿಗೆ ಇಂಗ್ಲೀಷು ತಿಳಿಯದು. ಮನೆಯೊಳಗಿನ ದೀಪಗಳೆಲ್ಲ ದ್ವೀಪಗಳಾಗಿ ಬೆಳೆಯುವ ಸಂಕಟ ಅವರಿಗೆ. ಆದರೆ ಅದನ್ನು ಹೇಳಿಕೊಳ್ಳಲಾರರು. 

ಇಷ್ಟರ ಮಧ್ಯೆ, ಯಾರ ಮನೆಯಲ್ಲಾದರೂ ಅಜ್ಜ-ಅಜ್ಜಿ ಇದ್ದರೆ ಅದೊಂದು ಅದ್ಭುತ ವಿದ್ಯಮಾನ. ಅವರೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಇದ್ದರೆ ಮಕ್ಕಳಿಗೆ ಅದಕ್ಕಿಂತ ದೊಡ್ಡ ವರಪ್ರಸಾದ ಇಲ್ಲ. ಭಾರತೀಯ ಸಮಾಜದಲ್ಲಿ ಕುಟುಂಬ ಒಂದು ಘಟಕ ಮಾತ್ರ ಅಲ್ಲ, ಸಂಸ್ಥೆ ಕೂಡ. ಅಜ್ಜಿ-ತಾತ ಈ ಮಹಾವೃಕ್ಷದ ತಾಯಿಬೇರು. ಯಾವ ಮನೆಯಲ್ಲಿ ಅಜ್ಜ-ಅಜ್ಜಿ ಇದ್ದಾರೋ ಆ ಮನೆಯ ಮಕ್ಕಳಲ್ಲಿರುವ ಭದ್ರತೆಯ ಭಾವ, ಕೌಟುಂಬಿಕ ಮೌಲ್ಯಗಳು, ಸಂಸ್ಕಾರ, ಪರಸ್ಪರ ನಂಬಿಕೆ, ಸಹಕಾರ ಪ್ರವೃತ್ತಿ, ಸಮಷ್ಟಿ ಪ್ರಜ್ಞೆ, ಹಿರಿಯರ ಕುರಿತಾದ ಗೌರವ- ಉಳಿದ ಮಕ್ಕಳಿಗಿಂತ ಒಂದು ಹಿಡಿ ಹೆಚ್ಚೇ. 

‘ಪ್ರತೀ ತಲೆಮಾರೂ ತನ್ನ ತಂದೆಯವರ ವಿರುದ್ಧ ದಂಗೆಯೇಳುತ್ತದೆ, ಆದರೆ ತಾತಂದಿರೊಂದಿಗೆ ಸ್ನೇಹವನ್ನು ಬಯಸುತ್ತದೆ’ ಎಂಬ ಲೂಯಿ ಮನ್‌ಫೋರ್ಡ್ ಮಾತಿದೆ. ನಮ್ಮ ಹೊಸ ತಲೆಮಾರಿಗೆ ಅವರ ತಾತಂದಿರು ಮಾದರಿಯಾಗಬಲ್ಲರು. ಆದರೆ ಅದಕ್ಕೆ ಅವಕಾಶವನ್ನು ನಾವು ಒದಗಿಸಿಕೊಡಬೇಕಷ್ಟೇ. ‘ಒಬ್ಬ ಮನುಷ್ಯನನ್ನು ನೀವು ನಾಗರಿಕನನ್ನಾಗಿ ಬೆಳೆಸಬೇಕೆಂದರೆ ಆತನ ಅಜ್ಜನಿಂದ ಆ ಕೆಲಸವನ್ನು ಆರಂಭಿಸಿ’ ಎಂದು ವಿಕ್ಟರ್ ಹ್ಯೂಗೋ ಕೂಡ ಇದೇ ಅರ್ಥದಲ್ಲಿ ಹೇಳಿದ್ದು.

‘ಅಜ್ಜ-ಅಜ್ಜಿಯರ ದಿನ’ ಎಂಬ ಈ ಆಚರಣೆ ಮೊದಲು ಆರಂಭವಾಗಿದ್ದು ಅಮೇರಿಕದಲ್ಲಿ- ಸುಮಾರು ಅರ್ಧ ಶತಮಾನದ ಹಿಂದೆ. ಅಲ್ಲಿ ಆಗಲೇ ಅದರ ಅನಿವಾರ್ಯತೆ ಇತ್ತು. ಈಗ ನಾವೂ ಅಂತಹದೊಂದು ದಿನವನ್ನು ನೆನಪಿಸಿಕೊಳ್ಳುವ ಸಂದರ್ಭ ಬಂದಿದೆ ಎಂದರೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಾವೂ ಪಶ್ಚಿಮದ ಅಂಚಿಗೆ ಸರಿದಿದ್ದೇವೆ ಎಂದು ಅರ್ಥ. ಕಾಲದ ಓಟದಲ್ಲಿ ಇದೆಲ್ಲ ಅನಿವಾರ್ಯ, ತಡೆಯುವುದಕ್ಕಾಗದು. ಆದರೆ ಇದನ್ನು ನಾವು ಎಚ್ಚರದಿಂದಲೂ ಜವಾಬ್ದಾರಿಯಿಂದಲೂ ಗಮನಿಸಬೇಕು. ಏಕೆಂದರೆ, ಮನೆಯ ಹಿರಿಜೀವಗಳು ಕೇವಲ ಭೂತಕಾಲದ ಧ್ವನಿಗಳಲ್ಲ, ಭವಿಷ್ಯದ ಬಾಗಿಲುಗಳು ಕೂಡ.

- ಸಿಬಂತಿ ಪದ್ಮನಾಭ ಕೆ. ವಿ. 

ಮಂಗಳವಾರ, ಸೆಪ್ಟೆಂಬರ್ 13, 2022

ಯಕ್ಷಗಾನಕ್ಕೆ ಕಾಲಮಿತಿ: ಪರಿವರ್ತನೆ ಎಂಬ ಕಾಲಧರ್ಮ

11 ಸೆಪ್ಟೆಂಬರ್ 2022ರ 'ಉದಯವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.

ಯಕ್ಷಗಾನ ನಿರಂತರ ಪರಿಷ್ಕರಣೆಗೆ ಒಳಗಾಗುತ್ತಾ ಬಂದಿರುವ ಕಲೆ. ಅದರ ವಸ್ತು, ವಿನ್ಯಾಸ, ರಂಗಭಾಷೆ, ವೇಷಭೂಷಣ, ಪ್ರಸ್ತುತಿ- ಎಲ್ಲ ಆಯಾಮಗಳಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ, ಆಗುತ್ತಲೇ ಇವೆ. ಇವುಗಳಲ್ಲಿ ಕೆಲವನ್ನು ಪ್ರೇಕ್ಷಕರು, ಕಲಾವಿದರು, ವಿದ್ವಾಂಸರು ಒಪ್ಪಿಕೊಂಡರು, ಇನ್ನು ಕೆಲವನ್ನು ಟೀಕಿಸಿದರು. ಕಾಳುಗಳು ಉಳಿದವು; ಜಳ್ಳುಗಳು ತೂರಿಹೋದವು. ಇದು ಕಾಲಧರ್ಮ.

ಯಾವುದೇ ಕಲೆಯನ್ನು ಒಂದು ಸಜೀವ ಅಸ್ತಿತ್ವವೆಂದು ಪರಿಗಣಿಸಬಹುದಾದರೆ, ಅದರಲ್ಲಿ ಬದಲಾವಣೆ ಸಹಜ. ಕಲೆ ಬದುಕಿನ ಭಾಗ. ಜೀವನ ಬೇರೆ ಅಲ್ಲ, ಕಲೆ ಬೇರೆ ಅಲ್ಲ. ಬದುಕಿನ ಸೃಜನಶೀಲ ಭಾಗವೇ ಕಲೆ. ಬದುಕು ಶತಮಾನಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇಲ್ಲ. ಅಂದಮೇಲೆ ಕಲೆಯೂ ಯಥಾಸ್ಥಿತಿಯಲ್ಲಿರುವುದು ಸಾಧ್ಯವಿಲ್ಲ. ಅದೂ ಕಾಲಾನುಕ್ರಮದಲ್ಲಿ ಬಯಸುವ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಈ ಪರಿಷ್ಕಾರಗಳು ಕಲೆಯ ಉನ್ನತಿಗೆ ಪೂರಕವಾಗಿರಬೇಕು ಎಂಬುದಷ್ಟೇ ಕಲೋಪಾಸಕರ ಆಗ್ರಹ.

ಯಕ್ಷಗಾನ ಕ್ಷೇತ್ರದಲ್ಲಿ ಯಾವುದೇ ಹೊಸ ವಿಚಾರ ಪ್ರಸ್ತಾಪವಾದಾಗಲೂ ಚರ್ಚೆ ಸಾಮಾನ್ಯ. ಅದಕ್ಕೆ ಕಾರಣ ಯಕ್ಷಗಾನಕ್ಕಿರುವ ದೊಡ್ಡಸಂಖ್ಯೆಯ ಪ್ರೇಕ್ಷಕರು ಮತ್ತು ಯಕ್ಷಗಾನದ ಕುರಿತು ಅವರಲ್ಲಿರುವ ವಿಶೇಷ ಅಭಿಮಾನ. ಮೂಲತಃ ಆರಾಧನಾ ಕಲೆಯಾಗಿದ್ದ ಯಕ್ಷಗಾನ ಕಾಲಕ್ರಮೇಣ ಮುಕ್ತತೆಗೆ ತೆರೆದುಕೊಂಡರೂ ಬಹುಪಾಲು ಪ್ರೇಕ್ಷಕರ ಮನಸ್ಸಿನಲ್ಲಿ ಅದರ ಕುರಿತೊಂದು ಪೂಜ್ಯ ಭಾವವೇ ಇದೆ. ಅವರು ಅದನ್ನೊಂದು ಕೇವಲ ಪ್ರದರ್ಶನ ಕಲೆಯಾಗಿ ಒಪ್ಪಿಕೊಳ್ಳಲಾರರು. ಯಕ್ಷಗಾನಕ್ಕಿರುವ ಜಾನಪದ ಸ್ವರೂಪವೂ ಇದಕ್ಕಿರುವ ಪ್ರಮುಖ ಕಾರಣ.

ಕಟೀಲು ಮೇಳಗಳು ಮುಂದಿನ ತಿರುಗಾಟದಿಂದ ಕಾಲಮಿತಿ ಪ್ರದರ್ಶನಗಳನ್ನು ನೀಡಲಿವೆ ಎಂದು ಇತ್ತೀಚೆಗೆ ಘೋಷಿಸಿದಲ್ಲಿಂದ ಯಕ್ಷಗಾನ ವಲಯದಲ್ಲಿ ಈ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕಾಲಮಿತಿಯ ವಿಚಾರ ಯಕ್ಷಗಾನಕ್ಕೆ ಹೊಸದೇನಲ್ಲ. ಕಾಲಮಿತಿಯ ಪರಿಕಲ್ಪನೆಯನ್ನು 1955ರಷ್ಟು ಹಿಂದೆಯೇ 'ಕಾಂಚನ ಮೇಳ' ಜಾರಿಗೆ ತಂದಿತೆಂದು ನೆನಪಿಸಿಕೊಳ್ಳುತ್ತಾರೆ ಯಕ್ಷಗಾನ ಕಲಾವಿದ-ಸಂಘಟಕ ಉಜಿರೆ ಅಶೋಕ ಭಟ್ಟರು. 1985ರಲ್ಲಿ ಕೆರೆಮನೆ ಮೇಳವೂ ಕಾಲಮಿತಿಯನ್ನು ಅಳವಡಿಸಿಕೊಂಡಿತು. ಹೊಸ ಸಹಸ್ರಮಾನದಲ್ಲಿ ಹೊಸನಗರ ಮೇಳ ಕಾಲಮಿತಿಯ ಪ್ರದರ್ಶನಗಳನ್ನು ಆರಂಭಿಸಿತು. ಹೊಸಕಾಲದ ವೃತ್ತಿಪರ ಮೇಳಗಳ ಮಟ್ಟಿಗೆ ಇದೊಂದು ಕ್ರಾಂತಿಕಾರಕ ಹೆಜ್ಜೆಯೇ ಆಗಿತ್ತು.  ಇದರಿಂದ ಪ್ರೇರಿತವಾದ ಧರ್ಮಸ್ಥಳ ಮೇಳವು 2015ರಲ್ಲಿ ಕಾಲಮಿತಿ ಪ್ರದರ್ಶನಗಳನ್ನು ನೀಡಲಾರಂಭಿಸಿತು. ಮುಂದೆ ಹನುಮಗಿರಿ, ಪಾವಂಜೆ ಮೊದಲಾದ ಮೇಳಗಳೂ ಕಾಲಮಿತಿಯ ಪ್ರದರ್ಶನಗಳಿಗೆ ಒಗ್ಗಿಕೊಂಡವು. ಆದರೆ ಕಟೀಲು ಮೇಳಗಳು ಕಾಲಮಿತಿಯ ಪ್ರಸ್ತಾಪ ಮಾಡಿದಾಗ ಅದರ ಬಗ್ಗೆ ಕಲಾವಿದರು ಹಾಗೂ ಪ್ರೇಕ್ಷಕರ ವಲಯದಿಂದ ಮತ್ತೆ ಪರ-ವಿರೋಧದ ಅಭಿಪ್ರಾಯಗಳು ಬರಲಾರಂಭಿಸಿವೆ.

ಯಾಕೆ ವಿರೋಧ?

ಕಟೀಲು ಮೇಳ ಯಕ್ಷಗಾನದ ಪೂರ್ವರಂಗವನ್ನೂ ಉಳಿಸಿಕೊಂಡು ಇಡೀ ರಾತ್ರಿ ಪ್ರದರ್ಶನ ನೀಡುತ್ತಿರುವ ತೆಂಕುತಿಟ್ಟಿನ ಏಕೈಕ ಮೇಳ (ಒಟ್ಟು ಆರು ಮೇಳಗಳಿವೆ). ಮುಸ್ಸಂಜೆಯ ಹೊತ್ತಲ್ಲಿ ಆರಂಭವಾಗುವ ಯಕ್ಷಗಾನದ ಪ್ರಕ್ರಿಯೆ, ರಾತ್ರಿ ಎಂಟರ ಸುಮಾರಿಗೆ ಸಭಾಲಕ್ಷಣದೊಂದಿಗೆ ಮುಂದುವರಿದು, ಹನ್ನೊಂದರ ಆಸುಪಾಸಲ್ಲಿ ಪ್ರಸಂಗವನ್ನು ಆರಂಭಿಸಿ, ಮುಂಜಾನೆ ಐದೂವರೆ-ಆರರ ಸುಮಾರಿಗೆ ಮಂಗಳವಾಗುವುದು ವಾಡಿಕೆ. ಇಡೀ ರಾತ್ರಿ ನಡೆಯುವ ಈ ಒಟ್ಟಾರೆ ಪ್ರಕ್ರಿಯೆ ಪ್ರೇಕ್ಷಕರ ಮನಸ್ಸಿನಲ್ಲೊಂದು ರಮ್ಯಾದ್ಭುತ ವರ್ಣಮಯ ಲೋಕವನ್ನು ಸೃಷ್ಟಿಸುವ ಪರಿ ಅನನ್ಯ.  

ಕಟೀಲು ಮೇಳಗಳೂ ಈ ಕಾಲಮಿತಿಯ ಪ್ರದರ್ಶನಗಳಿಗೆ ಒಳಪಟ್ಟರೆ ತೆಂಕುತಿಟ್ಟಿನಲ್ಲಿ ಉಳಿದಿರುವ ಪೂರ್ಣಾವಧಿಯ ಏಕೈಕ ಮಾದರಿಯೂ ಇಲ್ಲವಾಗುತ್ತದಲ್ಲ ಎಂಬುದು ಪ್ರಸ್ತುತ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ನೋವು. ಇದು ನಮ್ಮ ಸಾಂಸ್ಕೃತಿಕ ಪರಂಪರೆಗೆ ಬೀಳುತ್ತಿರುವ ಏಟು ಎಂಬ ವ್ಯಾಖ್ಯಾನವೂ ಕೇಳಿಬಂದಿದೆ. ಅವಧಿಯನ್ನು ಮೊಟಕುಗೊಳಿಸುವುದರಿಂದ ಅನೇಕ ಕಲಾವಿದರಿಗೆ ಅವಕಾಶ ತಪ್ಪಿಹೋಗುತ್ತದೆ, ಪೂರ್ವರಂಗ ಇಲ್ಲವಾಗುವುದರಿಂದ ಅಭ್ಯಾಸಿಗಳಿಗೆ ತರಬೇತಿ ಸಿಗುವುದಿಲ್ಲ, ಮಧ್ಯರಾತ್ರಿ ಆಟ ಮುಕ್ತಾಯವಾಗುವುದರಿಂದ ಪ್ರೇಕ್ಷಕರು ಮನೆಗಳಿಗೆ ಹಿಂತಿರುವುದು ಕಷ್ಟ, ಪ್ರಸಂಗಗಳನ್ನು ಸಂಕ್ಷೇಪಗೊಳಿಸುವುದರಿಂದ ಗುಣಮಟ್ಟ ಕಡಿಮೆಯಾಗುತ್ತದೆ ಇತ್ಯಾದಿ ಕಾರಣಗಳೂ ಪ್ರಸ್ತಾಪವಾಗಿವೆ.

ಬದಲಾವಣೆ ಅನಿವಾರ್ಯ:

ಆದರೆ ಕಾಲವೆಂಬುದು ಎಲ್ಲದಕ್ಕಿಂತ ಮೇಲಿನದ್ದು. ಅದು ಇಚ್ಛೆಯುಳ್ಳವರನ್ನು ಕರೆದುಕೊಂಡು ಹೋಗುತ್ತದೆ, ಇಚ್ಛೆಯಿಲ್ಲದವರನ್ನು ಎಳೆದುಕೊಂಡು ಹೋಗುತ್ತದೆ. ಮುಂದಕ್ಕೆ ಹೋಗುವುದಂತೂ ಹೋಗಲೇಬೇಕು. "ಕಾಲದ ಅನಿವಾರ್ಯಗಳನ್ನು ಅರ್ಥಮಾಡಿಕೊಳ್ಳದ ಕಲೆ ಕಾಲಗರ್ಭವನ್ನು ಸೇರಬೇಕಾಗುತ್ತದೆ" ಎಂಬ ಕಲಾವಿದ-ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರ ಮಾತು ಚಿಂತನಾರ್ಹ.

ಇದೇ ಅರ್ಥವನ್ನು ಹಿರಿಯ ವಿದ್ವಾಂಸ, ಯಕ್ಷಗಾನ ಕವಿ ಪ್ರೊ. ಅಮೃತ ಸೋಮೇಶ್ವರರೂ ಧ್ವನಿಸಿದ್ದುಂಟು: “ಚಲನಶೀಲತೆಯಿರುವ ಯಾವುದೇ ಜೀವಂತ ಕಲೆಯು ವರ್ತಮಾನ, ಭವಿಷ್ಯತ್ಕಾಲಗಳ ಪರಿಕಲ್ಪನೆಯಿಲ್ಲದೆ ಕೇವಲ ಭೂತಕಾಲವಿಹಾರಿಯಾಗುವಂತಿಲ್ಲ. ಒಂದು ವೇಳೆ ಅಂಥ ಹಳೇ ಹವ್ಯಾಸವನ್ನೇ ಮುಂದುವರಿಸಿದರೆ ಅಂಥ ಕಲೆ ಪ್ರತಿಗಾಮಿಯೂ ಪ್ರಗತಿ ವಿಮುಖವೂ ಎನಿಸುತ್ತದೆ. ವರ್ತಮಾನದ ಅರ್ಥಪೂರ್ಣ ಸಂಬಂಧವನ್ನು ಕಳೆದುಕೊಳ್ಳುತ್ತದೆ.”

ನಾವೀಗ ಅಂತಹದೊಂದು ಪರಿವರ್ತನೆಯ ಸಂಕ್ರಮಣಕಾಲದಲ್ಲಿದ್ದೇವೆ. ಸಮಾಜ ಆಧುನಿಕತೆಗೆ ತೆರೆದುಕೊಂಡಿದೆ. ಆಧುನಿಕ ಸಂವಹನ ಮಾಧ್ಯಮಗಳು ಜನರನ್ನು ಇನ್ನಿಲ್ಲದಂತೆ ಆವರಿಸಿಕೊಂಡಿವೆ. ಇಂತಹ ಸನ್ನಿವೇಶದಲ್ಲೂ ಜನರು ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಆಸಕ್ತಿ ಉಳಿಸಿಕೊಂಡಿದ್ದಾರೆ ಎಂಬುದೇ ವಿಶೇಷ. ಬಹುಶಃ ಅದು ಆ ಕಲೆಗಳ ಶಕ್ತಿ ಕೂಡಾ.

“ಈಗ ಎಲ್ಲರೂ ಒಂದಲ್ಲ ಒಂದು ಉದ್ಯೋಗ ಹಿಡಿದಿರುವವರೇ. ಯಾರೂ ಇಡೀ ರಾತ್ರಿ ನಿದ್ದೆಗೆಟ್ಟು ಆಟ ನೋಡುವ ಪರಿಸ್ಥಿತಿಯಲ್ಲಿ ಇಲ್ಲ. ಅವರು ನೋಡಬೇಕು ಎಂಬುದು ಅಪೇಕ್ಷಣೀಯವೂ ಅಲ್ಲ. ದಿನಬೆಳಗಾದರೆ ಎಲ್ಲರಿಗೂ ಅವರವರದ್ದೇ ಕೆಲಸಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಕಾಲಮಿತಿ ಪ್ರದರ್ಶನಗಳು ಖಂಡಿತ ಸ್ವಾಗತಾರ್ಹ” ಎನ್ನುತ್ತಾರೆ ಹಿರಿಯ ಕಲಾವಿದ, ಯಕ್ಷಗಾನ ಕವಿ ಡಿ. ಎಸ್. ಶ್ರೀಧರ.

“ಕಟೀಲು ಮೇಳದ್ದೇ ಜನಪ್ರಿಯ ಪ್ರಸಂಗ ‘ದೇವಿಮಹಾತ್ಮೆ’ಯನ್ನು ಮಧ್ಯರಾತ್ರಿ ಬಳಿಕ ನೋಡುವವರ ಸಂಖ್ಯೆ ಬೆರಳೆಣಿಕೆಯಷ್ಟು. ಆಟದ ವೀಳ್ಯ ಕೊಟ್ಟವರೇ ಬೆಳಗಿನವರೆಗೆ ಕೂರುವುದು ಕಡಿಮೆ. ರಕ್ತಬೀಜನ ಪಾತ್ರವನ್ನು ಸಾಮಾನ್ಯವಾಗಿ ಅನುಭವೀ ಹಿರಿಯ ಕಲಾವಿದರು ನಿರ್ವಹಿಸುತ್ತಾರೆ. ಆ ಪಾತ್ರದ ಪ್ರವೇಶವಾಗುವುದೇ ಬೆಳಗ್ಗೆ ನಾಲ್ಕು ಗಂಟೆಗೆ. ಆ ಹೊತ್ತಿಗೆ ರಂಗದ ಎದುರು ನಾಲ್ಕೈದು ಮಂದಿ ತೂಕಡಿಸುತ್ತಾ ಕುಳಿತಿದ್ದರೆ ಆ ಕಲಾವಿದರ ಶ್ರಮಕ್ಕೆ ಏನು ಬೆಲೆ?” ಎಂದು ಪ್ರಶ್ನಿಸುತ್ತಾರೆ ಯಕ್ಷಗಾನ ಸಂಘಟಕ ಡಾ. ಚಂದ್ರಶೇಖರ ದಾಮ್ಲೆ.

ಯಕ್ಷಗಾನದ ಅವಧಿ ಮೊಟಕುಗೊಳಿಸುವ ವಿದ್ಯಮಾನ ಇತ್ತೀಚಿನದ್ದೇನೂ ಅಲ್ಲವೆನ್ನುತ್ತಾರೆ ಕಲಾವಿದ-ಲೇಖಕ ಗಣರಾಜ ಕುಂಬ್ಳೆ. “ದೇವಿಮಹಾತ್ಮೆ, ಸಂಪೂರ್ಣ ರಾಮಾಯಣ ಇತ್ಯಾದಿ ಪ್ರಸಂಗಗಳನ್ನು ಮೂರು ದಿನ, ಐದು ದಿನ- ಹೀಗೆ ಪ್ರದರ್ಶಿಸುವುದು ಹಿಂದೆ ಚಾಲ್ತಿಯಲ್ಲಿತ್ತು. ಕಾಲಕ್ರಮೇಣ ಅವೆಲ್ಲ ಮರೆಯಾಗುತ್ತಾ ಒಂದು ರಾತ್ರಿಯ ಅವಧಿಗೆ ಬಂದು ನಿಂತಿತು. ಈಗಲೂ ಇಡೀ ರಾತ್ರಿ ಆಡುವುದಿದ್ದರೂ ಹೆಚ್ಚೆಂದರೆ ಆರು ಗಂಟೆ ಸಿಗಬಹುದು ಅಷ್ಟೆ. ಅದನ್ನು ನಾಲ್ಕೋ ಐದೋ ಗಂಟೆಗೆ ಸಂಕ್ಷೇಪಗೊಳಿಸುವುದು ಕಷ್ಟವೇನೂ ಅಲ್ಲ” ಎನ್ನುತ್ತಾರೆ ಅವರು.

ಇದರೊಂದಿಗೆ ಇನ್ನೊಂದು ಎಚ್ಚರಿಕೆಯ ಮಾತನ್ನೂ ಕುಂಬ್ಳೆಯವರು ಸೇರಿಸುತ್ತಾರೆ: "ಕಲೆಯಲ್ಲಿ ಆಗುವ ಭೌತಿಕ ಬದಲಾವಣೆಗಳು ಕಲೆಯ ಆಂತರಿಕ ಗುಣಕ್ಕೆ ತೊಂದರೆ ಉಂಟುಮಾಡಬಾರದು. ಇದು ಪ್ರಬುದ್ಧ ಪ್ರೇಕ್ಷಕರು ಬಯಸುವ ವಿಷಯ. ಪ್ರದರ್ಶನದ ವೇಗ ಪ್ರಸಂಗದ ಆಶಯಕ್ಕೆ ವಿರುದ್ಧವಾಗಿ ಹೋಗುವುದು, ಪ್ರಾಮುಖ್ಯತೆ ಸಿಗಬೇಕಾದ ಭಾಗವನ್ನು ಬಿಟ್ಟು ಇನ್ಯಾವುದೋ ಭಾಗಕ್ಕೆ ಮಹತ್ವ ನೀಡುವುದು- ಇಂತಹ ಅಪಸವ್ಯಗಳು ಆಗದಂತೆ ಕಲಾವಿದರು ಎಚ್ಚರಿಕೆ ವಹಿಸಬೇಕು.  ಹೀಗೆ ಮಾಡಿದರೆ ಕಾಲಮಿತಿಯ ಪ್ರದರ್ಶನಗಳೂ ಹಿಂದಿನ ರಸಾನುಭವವನ್ನೇ ಪ್ರೇಕ್ಷಕರಿಗೆ ನೀಡಬಲ್ಲವು."

ವಾಸ್ತವಕ್ಕೆ ಬನ್ನಿ:

“ಇಡೀ ರಾತ್ರಿ ಯಕ್ಷಗಾನ ಬೇಕು ಎಂಬ ಬೇಡಿಕೆಯನ್ನು ಒಪ್ಪೋಣ. ಆದರೆ ಅದಕ್ಕೆ ಪ್ರೇಕ್ಷಕರು ಎಲ್ಲಿದ್ದಾರೆ? ಯಕ್ಷಗಾನವನ್ನೇ ಸಂಪೂರ್ಣ ನಂಬಿರುವ ಕಲಾವಿದರು ಎಲ್ಲಿದ್ದಾರೆ? ನಾವು ವಾಸ್ತವ ಅರ್ಥಮಾಡಿಕೊಳ್ಳಬೇಕು” ಎನ್ನುತ್ತಾರೆ ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್. “ಯಕ್ಷಗಾನದಿಂದಲೇ ಬದುಕು ಸಾಗಬೇಕು ಎನ್ನುವ ಮಂದಿ ಈಗ ಇಲ್ಲ. ಮೇಳಗಳು ಕೊಡುವ ಹದಿನೈದಿಪ್ಪತ್ತು ಸಾವಿರ ಸಂಬಳ ತಿಂಗಳ ಖರ್ಚಿಗೆ ಸಾಕಾಗುವುದಿಲ್ಲ. ಎಲ್ಲರಿಗೂ ಉಪವೃತ್ತಿ ಅನಿವಾರ್ಯವಾಗಿದೆ. ಮೇಳಗಳಿಗೆ ಕೆಲಸದಾಳುಗಳು ಸಿಗುವುದಿಲ್ಲ. ಇನ್ನೂ ಏಳೆಂಟು ವರ್ಷ ಕಳೆದರೆ ಒಂದು ಮೇಳಕ್ಕೆ ಬದ್ಧವಾಗಿರುವ ಖಾಯಂ ಕಲಾವಿದರ ತಂಡ ಸಿಗುವುದು ಕಷ್ಟ. ಆಗ ಸ್ಥಳೀಯ ಮಟ್ಟದಲ್ಲಿ ಲಭ್ಯವಿರುವ ಕಲಾವಿದರನ್ನೇ ಬಳಸಿಕೊಂಡು ಯಕ್ಷಗಾನ ಪ್ರದರ್ಶನ ಮಾಡಬೇಕಾಗುತ್ತದೆ. ಹೀಗಾಗಿ ಕಾಲಮಿತಿ ಯಕ್ಷಗಾನದ ಚಿಂತನೆಯಲ್ಲಿ ಆಕ್ಷೇಪಾರ್ಹವೇನೂ ಇಲ್ಲ” ಎನ್ನುತ್ತಾರವರು.

ಎಡಿಟಿಂಗ್ ಸಾಧ್ಯ:

ಯಕ್ಷಗಾನದ ಮೂಲಸೊಗಡನ್ನು ಕಳೆಯದೆ, ಪ್ರಸಂಗವನ್ನು ವಿರೂಪಗೊಳಿಸದೆ ಎಡಿಟಿಂಗ್ ಮಾಡುವುದು ಸಾಧ್ಯ ಎಂಬುದು ಈ ಎಲ್ಲ ಅನುಭವಿಗಳ ಅಭಿಪ್ರಾಯ. “ಪರಿಷ್ಕರಣೆ ಎಂದರೆ ಪ್ರಸಂಗವನ್ನು ಮನಬಂದಂತೆ ಕತ್ತರಿಸುವುದಲ್ಲ. ಯಾವುದು ಎಷ್ಟು ಬೇಕು ಎಂಬ ವಿವೇಚನೆಯನ್ನು ಇಟ್ಟುಕೊಂಡು ಎಡಿಟ್ ಮಾಡುವುದು. ಪೂರ್ವರಂಗವನ್ನು ಉಳಿಸಿಕೊಂಡು, ಪ್ರದರ್ಶನದ ಕಾಲಗತಿಯನ್ನು ಕಡೆಗಣಿಸದೆ, ಸನ್ನಿವೇಶಗಳನ್ನೂ ಬಿಡದೆ ಒಟ್ಟಾರೆ ಪ್ರದರ್ಶನವನ್ನು ಸಂಕ್ಷೇಪಗೊಳಿಸುವುದಕ್ಕೆ ಅವಕಾಶವಿದೆ. ಒಂದೇ ವಿಷಯಕ್ಕೆ ಸಂಬಂಧಿಸಿದ ನಾಲ್ಕೈದು ಪದ್ಯಗಳನ್ನು ಕೈಬಿಟ್ಟು ಅಗತ್ಯವಿರುವ ಒಂದೋ ಎರಡೋ ಪದ್ಯಗಳನ್ನು ವಿವೇಚನೆಯಿಂದ ತೆಗೆದುಕೊಳ್ಳಬಹುದು. ಕೋವಿಡ್ ಸಮಯದಲ್ಲಿ ಕಟೀಲು ಮೇಳಗಳೂ ಅನಿವಾರ್ಯವಾಗಿ ಕಾಲಮಿತಿ ಪ್ರದರ್ಶನ ಆರಂಭಿಸಿದಾಗ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾದದ್ದು ಉಲ್ಲೇಖಾರ್ಹ” ಎನ್ನುತ್ತಾರೆ ಭಾಗವತ ಪುತ್ತೂರು ರಮೇಶ ಭಟ್.

“ಸೂಕ್ತ ವಿವೇಚನಾ ಸಾಮರ್ಥ್ಯವುಳ್ಳ ಸಮರ್ಥ ಭಾಗವತನೊಬ್ಬ ಈ ಎಡಿಟಿಂಗನ್ನು ಮಾಡಬಲ್ಲ. ಪೂರ್ವರಂಗದ ಪ್ರಸ್ತುತತೆಯನ್ನೂ ನಾವೀಗ ವಿವೇಚಿಸಬೇಕು. ಅದರ ಹಿಂದಿರುವುದು ಮೂಲತಃ ತರಬೇತಿಯ ಉದ್ದೇಶ. ಈಗ ತಕ್ಕಮಟ್ಟಿಗೆ ತರಬೇತಿ ಪಡೆದವರೇ ಮೇಳಕ್ಕೆ ಸೇರುತ್ತಾರೆ. ಅಲ್ಲಿ ಎರಡುಗಂಟೆಯ ಪೂರ್ವರಂಗ ಪ್ರದರ್ಶಿಸುವ ಅಗತ್ಯವೇ ಇಲ್ಲ. ಈಗಾಗಲೇ ಕಾಲಮಿತಿ ಪ್ರದರ್ಶನಕ್ಕೆ ಒಗ್ಗಿಕೊಂಡ ಮೇಳಗಳಿಂದಾಗಿಯೂ ಯಕ್ಷಗಾನಕ್ಕೆ ಅಂತಹ ನಷ್ಟವೇನೂ ಆದಂತೆ ಕಾಣುವುದಿಲ್ಲ” ಎನ್ನುತ್ತಾರೆ ಕಲಾವಿದ-ಲೇಖಕ ರಾಧಾಕೃಷ್ಣ ಕಲ್ಚಾರ್.

ರಾತ್ರಿ ಹತ್ತರ ಬಳಿಕ 50 ಡೆಸಿಬಲ್‌ಗಳಿಗಿಂತ ಹೆಚ್ಚಿನ ಧ್ವನಿಹೊಮ್ಮಿಸುವ ಮೈಕ್‌ಗಳನ್ನು ಬಳಸದಂತೆಯೂ ಸರ್ಕಾರ ಇತ್ತೀಚೆಗೆ ಧಾರ್ಮಿಕ ಕೇಂದ್ರಗಳಿಗೆ ಸೂಚನೆ ನೀಡಿದೆ. ನೆಲದ ಕಾನೂನುಗಳನ್ನು ಗೌರವಿಸುವುದೂ ನಮ್ಮ ಅನಿವಾರ್ಯಗಳಲ್ಲೊಂದು. ಕಾಲಕಳೆದಂತೆ ಸಮಾಜದ ಅದ್ಯತೆ, ದೃಷ್ಟಿಕೋನಗಳು ಬದಲಾಗುವುದು ಸಾಮಾನ್ಯ. ಅದನ್ನು ಗಮನಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳದೆ ಹೋದರೆ ಕಲೆಯೂ ಅಪ್ರಸ್ತುತವಾಗುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.