ಶುಕ್ರವಾರ, ಮಾರ್ಚ್ 16, 2012

ಖಡ್ಗಕ್ಕಿಂತಲೂ ಹರಿತದ ಆಯುಧಪಾಣಿಗಳ ರಕ್ಷಣೆಗೆ ಇಲ್ಲವೇ ಗುರಾಣಿ?

ಮಾಧ್ಯಮಶೋಧ-೧೫, ಹೊಸದಿಗಂತ, ೧೬-೦೩-೨೦೧೨

'ಪ್ರಜೆಗಿರುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯವೇನೂ ಪತ್ರಕರ್ತನಿಗೆ ಬೇಕಿಲ್ಲ; ಆದರೆ ಅದಕ್ಕಿಂತ ಕಡಮೆಯಾಗಿಯೂ ಇರಬಾರದು...’ ಹೀಗೆಂದು ಕನ್ನಡ ಪತ್ರಿಕಾರಂಗದ ಭೀಷ್ಮ ಡಿ.ವಿ.ಜಿ.ಯವರು ಬರೆದಿಟ್ಟು ಸರಿಸುಮಾರು ೬೦ ವರ್ಷಗಳೇ ಉರುಳಿಹೋಗಿವೆ. ಆದರೆ ತಮ್ಮದೇ ದೇಶದಲ್ಲಿ ಮುಂದೊಂದು ದಿನ ಇದೇ ಸ್ವಾತಂತ್ರ್ಯದ ಅಣಕವೆಂಬಹಾಗೆ ಹತ್ತಾರು ಪತ್ರಕರ್ತರ ತಲೆಗಳೇ ಉರುಳಬಹುದೆಂದು ಅವರು ಊಹಿಸಿದ್ದರೇ? ಖಂಡಿತ ಇರಲಾರದು.

'ಇಂಡಿಯಾ ದೇಶದಲ್ಲಿ ಪತ್ರಿಕೆಗಳಿಗೆ ಇನ್ನೂ ಅಷ್ಟು ನಿರ್ಭಯ ಸ್ಥಿತಿ ಬಂದಿಲ್ಲ. ಈ ದೇಶದಲ್ಲಿಯೂ ಅನೇಕ ಮಂದಿ ಪತ್ರಕರ್ತರು ಸರಕಾರದ ಮೇಲೆ ತಾವು ಮಾಡಿದ ಟೀಕೆಗಳಿಗಾಗಿ ಕಾರಾಗೃಹವನ್ನು ಸೇರಿ ಕಷ್ಟಪಟ್ಟಿದ್ದಾರೆ... ಎಂಥಾ ಸಂದರ್ಭದಲ್ಲಿ, ಯಾವ ಹೊಸ ನೆವದಿಂದ, ಎಂಥಾ ಹೊಸ ಅಪಾಯ ಬಂದೀತೋ ಎಂಬ ಭಯ ಪತ್ರಿಕೆಗಳಿಗೆ ಸಂಪೂರ್ಣವಾಗಿ ಹೋಗಿಲ್ಲ...’ ಭಾರತಕ್ಕೆ ಸ್ವಾತಂತ್ರ್ಯ ಬಂದ ಸಮಯದಲ್ಲಿ ಡಿ.ವಿ.ಜಿ. ಬರೆದ ಮಾತಿದು.

ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸುವ, ಪತ್ರಿಕಾ ಧರ್ಮವನ್ನು ಎತ್ತಿಹಿಡಿಯುವ ಆಗಿನ ಪತ್ರಕರ್ತರ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷರು ಬಳಸಿದ ತಂತ್ರಗಳು, ಜಾರಿಗೆ ತಂದ ಕಾನೂನು ಕಟ್ಟಳೆಗಳು ಅಸಂಖ್ಯ. ಅವರಿಂದಾಗಿ ಜೈಲಿಗೆ ಹೋದ, ಗಡೀಪಾರಾದ ಪತ್ರಕರ್ತರು, ಮುಚ್ಚಿಹೋದ ಪತ್ರಿಕೆಗಳು ಕೂಡಾ ನೂರಾರು. ಡಿ.ವಿ.ಜಿ.ಯವರು ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಬರೆದಾಗ ಅವರೆದುರು ಇದ್ದ ಸನ್ನಿವೇಶ ಈ ಬಗೆಯದ್ದು ಮಾತ್ರ. ಆಕಾಶದೆತ್ತರಕ್ಕೆ ಬೆಳೆದುನಿಂತಿರುವ ಈಗಿನ ಆಧುನಿಕ ಮಾಧ್ಯಮಲೋಕ ಅವರ ಕಲ್ಪನೆಯಲ್ಲಿತ್ತೋ ಗೊತ್ತಿಲ್ಲ, ಆದರೆ ಮುಂದೊಂದು ದಿನ ತಾವು ನಂಬಿರುವ ವೃತ್ತಿಗಾಗಿ ಪತ್ರಕರ್ತರು ತಮ್ಮ ಜೀವವನ್ನೇ ಸಾಲುಸಾಲಾಗಿ ಬಲಿಕೊಡಬೇಕಾದ ಪರಿಸ್ಥಿತಿ ಎದುರಾದೀತು ಎಂದು ಮಾತ್ರ ಆ ಮಹಾನುಭಾವ ಊಹಿಸಿರಲಿಕ್ಕಿಲ್ಲ.

ಪತ್ರಕರ್ತರು ಎದುರಿಸುವ ಪ್ರಾಣಬೆದರಿಕೆ-ಹಲ್ಲೆಗಳು ತೀರಾ ಸಾಮಾನ್ಯವಾಗುತ್ತಿರುವ ದಿನಗಳಲ್ಲೇ ತಮ್ಮ ಬರವಣಿಗೆಗಳಿಗಾಗಿ ಪ್ರಾಣಕಳೆದುಕೊಳ್ಳುತ್ತಿರುವ ಪತ್ರಕರ್ತರ ಸಂಖ್ಯೆಯೂ ಒಂದೇ ಸಮನೆ ಏರುತ್ತಿದೆ. ಇರಾಕ್, ಸೊಮಾಲಿಯಾ, ಫಿಲಿಫೈನ್ಸ್‌ನಂತಹ ದೇಶಗಳಲ್ಲಿ ಅತಿಯಾಗಿದ್ದ ಪತ್ರಕರ್ತರ ಹತ್ಯಾಪ್ರಕರಣಗಳು ಈಚಿನ ವರ್ಷಗಳಲ್ಲಿ ಭಾರತದಲ್ಲೂ ತೀವ್ರಸ್ವರೂಪ ಪಡೆದುಕೊಳ್ಳುತ್ತಿರುವುದು ಮಾಧ್ಯಮಲೋಕವನ್ನು ದಿಗ್ಭ್ರಮೆಗೊಳಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸುಮಾರು ೩೦ ಪತ್ರಕರ್ತರು ಕೊಲೆಯಾಗಿದ್ದಾರೆ ಎಂಬುದು ಆತಂಕಕಾರಿ ಅಂಶ. ಅದರಲ್ಲೂ ೨೦೧೦ರಿಂದೀಚೆಗೆ ಪ್ರಾಣಕಳಕೊಂಡವರು ಐದು ಮಂದಿ. ಪ್ರಭುತ್ವದ ವಿರುದ್ಧ ಬರೆಯುವ ಪತ್ರಕರ್ತರು ನಿರ್ಬಂಧಗಳನ್ನೆದುರಿಸುವುದು ಹಿಂದಿನಿಂದಲೂ ಚಾಲ್ತಿಯಲ್ಲಿದ್ದ ವಿಚಾರ; ಆದರೆ ಖಾಸಗಿ ಮಾಫಿಯಾಗಳ, ಭೂಗತ ಪಾತಕಿಗಳ ವಕ್ರದೃಷ್ಟಿಗೂ ಪತ್ರಕರ್ತರು ಬಲಿಯಾಗುತ್ತಿರುವುದು ಈಚಿನ ವರ್ಷಗಳ ಕಳವಳಕಾರಿ ಬೆಳವಣಿಗೆ. ಇದಕ್ಕಿಂತಲೂ ದುರದೃಷ್ಟಕರ ಸಂಗತಿಯೆಂದರೆ ಬಹುತೇಕ ಪತ್ರಕರ್ತರ ಹತ್ಯೆಗಳು ಇತ್ಯರ್ಥಗೊಳ್ಳದೇ ಹೋಗುತ್ತಿರುವುದು ಅಥವಾ ನಿಜವಾದ ಪಾತಕಿಗಳಿಗೆ ಶಿಕ್ಷೆಯಾಗದೇ ಇರುವುದು. ಕಳೆದ ೨೩ ವರ್ಷಗಳಲ್ಲಿ ಅಸ್ಸಾಂ ಒಂದರಲ್ಲೇ ೨೭ ಪತ್ರಕರ್ತರು ಕೊಲೆಯಾಗಿದ್ದಾರೆ; ಇವುಗಳಲ್ಲಿ ಒಂದೇ ಒಂದು ಪ್ರಕರಣದಲ್ಲೂ ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ! ಅನೇಕ ಸಂದರ್ಭಗಳಲ್ಲಿ ನೈಜಮಾಹಿತಿ, ಸಾಕ್ಷಿ-ಪುರಾವೆಗಳಿದ್ದರೂ ಪತ್ರಕರ್ತರನ್ನು ಕೊಲೆ ಮಾಡಿದವರನ್ನು ಹಿಡಿದು ಶಿಕ್ಷಿಸುವುದು ಪೋಲೀಸರಿಂದ ಸಾಧ್ಯವಾಗುತ್ತಿಲ್ಲ. ಖಾಸಗಿಯವರ ಕಪಿಮುಷ್ಟಿ ಎಷ್ಟು ಬಿಗಿಯಾಗಿದೆ ಎಂಬುದಕ್ಕೆ ಇದು ಸಾಕ್ಷಿ.

೨೦೧೦ ಡಿಸೆಂಬರ್‌ನಲ್ಲಿ ದೈನಿಕ್ ಭಾಸ್ಕರ್ ಪತ್ರಿಕೆಯ ಹಿರಿಯ ಪತ್ರಕರ್ತ ಸುಶೀಲ್ ಪಾಠಕ್‌ರನ್ನು ಛತ್ತೀಸ್‌ಘಡದಲ್ಲಿ ಗುಂಡಿಟ್ಟು ಕೊಲ್ಲಲಾಯಿತು. ಬಿಲಾಸ್‌ಪುರ್‌ನ ಪ್ರೆಸ್ ಕ್ಲಬ್ ಕಾರ್ಯದರ್ಶಿಯಾಗಿದ್ದ ಪಾಠಕ್ ಕೊಲೆ ಹಿಂದೆ ರಿಯಲ್ ಎಸ್ಟೇಟ್ ಕೈವಾಡವಿದೆಯೆಂದು ಶಂಕಿಸಲಾಗಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಅಲ್ಲಿನ ಸರ್ಕಾರ ಬರೋಬ್ಬರಿ ಮೂರು ತಿಂಗಳು ತೆಗೆದುಕೊಂಡಿತು.ಇದಾಗಿ ಕೇವಲ ಒಂದೇ ತಿಂಗಳಲ್ಲಿ ನಯೀ ದುನಿಯಾ ಪತ್ರಿಕೆಯ ವರದಿಗಾರ ಉಮೇಶ್ ರಜಪೂತ್‌ರನ್ನು ಮತ್ತದೇ ಛತ್ತೀಸ್‌ಘಡದ ಹಳ್ಳಿಯೊಂದರಲ್ಲಿ ಹತ್ಯೆ ಮಾಡಲಾಯಿತು. ಆದಿವಾಸಿ ಮಹಿಳೆಯೊಬ್ಬರ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವಲ್ಲಿ ವೈದ್ಯ ತೋರಿದ ನಿರ್ಲಕ್ಷ್ಯ ಆಕೆಯ ಸಾವಿನಲ್ಲಿ ಕೊನೆಯಾಗಿದ್ದನ್ನು ವರದಿ ಮಾಡಿದ್ದೇ ರಜಪೂತ್ ಕೊಲೆಗೆ ಕಾರಣ. ಈ ಪ್ರಕರಣದಲ್ಲಿ ಕೊಲೆ ಮಾಡಿದವರ ಬಗ್ಗೆ ಸಾಕಷ್ಟು ಪುರಾವೆ ಇದ್ದರೂ ಪೋಲೀಸರು ನಿಗೂಢ ಮೌನಕ್ಕೆ ಶರಣಾಗಿದ್ದರು.

ಕಳೆದ ವರ್ಷ ಜೂನ್‌ನಲ್ಲಿ ನಡೆದ ಮಿಡ್ ಡೇ ಪತ್ರಿಕೆಯ ತನಿಖಾ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರ ಹತ್ಯೆ ಪ್ರಕರಣ, ಮೊನ್ನೆಮೊನ್ನೆ ಫೆಬ್ರವರಿಯಲ್ಲಿ ನಡೆದ ಹವ್ಯಾಸಿ ಪತ್ರಕರ್ತ ಚಂದ್ರಿಕಾರಾಯ್ ಅವರ ಕೊಲೆ ಇನ್ನೂ ಹಸಿಹಸಿಯಾಗಿಯೇ ಜನಮಾನಸದಲ್ಲಿ ಇದೆ. ಡೇ ಕೊಲೆ ಪ್ರಕರಣದ ಹಿಂದೆ ತೈಲ ಮಾಫಿಯಾ, ಭೂಗತ ಜಗತ್ತು ಜಾಗೂ ಭ್ರಷ್ಟ ಪೋಲೀಸ್ ವ್ಯವಸ್ಥೆಯ ಬಗ್ಗೆ ಮಾತುಗಳು ಕೇಳಿ ಬಂದಿದ್ದು, ಈವರೆಗೆ ೧೧ ಮಂದಿಯ ಬಂಧನವಾಗಿದೆ; ಆದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೋ ಅಥವಾ ಯಾವುದೋ ಒಂದು ದಿನ ಯಾರಿಗೂ ಗೊತ್ತಾಗದಂತೆ ಕಡತಕ್ಕೆ ಗೆದ್ದಲು ಹಿಡಿಯುತ್ತದೋ ಗೊತ್ತಿಲ್ಲ. ಚಂದ್ರಿಕಾರಾಯ್ ಅವರ ಕೊಲೆ ಪ್ರಕರಣವನ್ನು ಕೂಡಾ ಹಳ್ಳಹಿಡಿಸುವ ಪ್ರಯತ್ನಗಳು ಆರಂಭದಿಂದಲೇ ನಡೆದಿವೆ. ಸ್ಥಳೀಯ ಕಲ್ಲಿದ್ದಲು ಮಾಫಿಯಾದ ಕೈವಾಡದ ಬಗ್ಗೆ ಮೊದಲಿಗೇ ಮಾತುಗಳು ಕೇಳಿಬಂದರೂ, ಅದನ್ನು ವೈಯುಕ್ತಿಕ ಜಗಳದ ಮಟ್ಟಕ್ಕೆ ತಂದು ತನಿಖೆಯ ದಿಕ್ಕುತಪ್ಪಿಸುವ ಪ್ರಯತ್ನಗಳು ನಂತರದ ಹಂತದಲ್ಲಿ ನಡೆದಿವೆ.

ಮಧ್ಯಪ್ರದೇಶದ ರೇವಾ ಪ್ರದೇಶದಲ್ಲಿ ಮೀಡಿಯಾ ರಾಜ್ ಎಂಬ ಸಣ್ಣ ವಾರಪತ್ರಿಕೆಯೊಂದನ್ನು ನಡೆಸುತ್ತಿದ್ದ ರಾಜೇಶ್ ಮಿಶ್ರಾ ಎಂಬವರನ್ನು ಅದೇ ಊರಿನ ಇನ್ನೊಂದು ಸಾಪ್ತಾಹಿಕದ ಸಂಪಾದಕ ರಜನೀಶ್ ಬ್ಯಾನರ್ಜಿ ಎಂಬಾತ ಕೊಲೆ ಮಾಡಿದ್ದು ಇದೇ ತಿಂಗಳಲ್ಲಿ ವರದಿಯಾಗಿದೆ. ಮೇಲ್ನೋಟಕ್ಕೆ ಇದು ಎರಡು ಪತ್ರಿಕೆಗಳ ನಡುವಿನ ಜಗಳದಂತೆ ಕಂಡರೂ, ಹತ್ಯೆಯ ಹಿಂದಿನ ಕಾರಣ ಬ್ಯಾನರ್ಜಿ ಕುಟುಂಬ ನಡೆಸುತ್ತಿದ್ದ ಖಾಸಗಿ ಶಾಲೆಗಳಲ್ಲಿನ ಅವ್ಯವಹಾರಗಳ ಬಗ್ಗೆ ಮಿಶ್ರಾ ಅವರು ತಮ್ಮ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದದ್ದು ಎಂಬುದು ಈಗ ಸಾರ್ವಜನಿಕಗೊಂಡಿದೆ.

ಒಟ್ಟಿನಲ್ಲಿ ಪತ್ರಕರ್ತರ ವಿರುದ್ಧ ಖಾಸಗಿ ಪಟ್ಟಭದ್ರ ಹಿತಾಸಕ್ತಿಗಳ ಅಸಹನೆ ದಿನೇದಿನೇ ಮೇರೆಮೀರುತ್ತಿರುವುದು ಸ್ಪಷ್ಟವಾಗುತ್ತಿದೆ. ಅದರೊಂದಿಗೆ ಈ ಬಗೆಯ ಪ್ರಕರಣಗಳು ಇತ್ಯರ್ಥಗೊಳ್ಳದಂತೆ ಯೋಜಿತ ಪ್ರಯತ್ನಗಳು ನಡೆಯುತ್ತಿರುವುದೂ ನಿಚ್ಚಳವಾಗುತ್ತಿದೆ. ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಎಂಬ ಅಂತಾರಾಷ್ಷ್ರೀಯ ಸಂಘಟನೆಯ ವರದಿಯ ಪ್ರಕಾರ ೧೯೯೨ರಿಂದೀಚೆಗೆ ವಿಶ್ವದಾದ್ಯಂತ ಒಟ್ಟು ೮೮೭ ಪತ್ರಕರ್ತರು ಹತ್ಯೆಗೀಡಾಗಿದ್ದಾರೆ; ಈ ಘಟನೆಗಳ ಪೈಕಿ ೫೫೪ ಪ್ರಕರಣಗಳು ಇನ್ನೂ ಬಗೆಹರಿದಿಲ್ಲ ಅಥವಾ ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ. ಈ ಬಗೆಯ ದುರಂತಗಳು ನಿರ್ದಿಷ್ಟವಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿದೆ ಎಂಬ ವರದಿಗಳು ಬರುತ್ತಿದ್ದು, ಇದು ಇನ್ನೂ ಹೆಚ್ಚಿನ ಆತಂಕದ ಸಂಗತಿಯಾಗಿದೆ. ಶ್ರೀಲಂಕಾ, ಅಪ್ಘಾನಿಸ್ತಾನ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲದೆ ಭಾರತವೂ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ ಎಂಬುದನ್ನು ಗಮನಿಸಬೇಕು. ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್ ಇತ್ತೀಚೆಗೆ ಹೇಳಿರುವಂತೆ ಪತ್ರಕರ್ತರ ಹತ್ಯೆಗೆ ಸಂಬಂಧಿಸಿದ ಇತ್ಯರ್ಥಗೊಳ್ಳದ ಪ್ರಕರಣಗಳ ಸೂಚ್ಯಂಕದಲ್ಲಿ ಭಾರತದ ಸ್ಥಾನ ೧೩ರಿಂದ ೮ಕ್ಕೆ ಏರಿದೆ. ನಂಬರ್ ೧ ಸ್ಥಾನದಲ್ಲಿರುವ ಇರಾಕ್, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿರುವ ಸೊಮಾಲಿಯಾ ಹಾಗೂ ಫಿಲಿಫೈನ್ಸ್ ದೇಶಗಳ ಜತೆ ನಾವೇನು ಸ್ಪರ್ಧೆಗಿಳಿದಿದ್ದೇವೆಯೇ!

ವಿಶ್ವದಾದ್ಯಂತ ನಡೆಯುತ್ತಿರುವ ಈ ಬಗೆಯ ಘಟನೆಗಳಲ್ಲಿನ ಸಾಮಾನ್ಯ ಅಂಶವೆಂದರೆ, ಹತ್ಯೆಗೊಳಗಾಗುತ್ತಿರುವ ಪತ್ರಕರ್ತರ ಪೈಕಿ ಬಹುತೇಕರು ಸ್ಥಳೀಯರು. ಕೇವಲ ಶೇ. ೬ ಮಾತ್ರ ಅಂತಾರಾಷ್ಟ್ರೀಯ ವ್ಯಾಪ್ತಿಯವರು. ಅಲ್ಲದೆ, ಕೊಲೆಗೊಳಗಾಗುತ್ತಿರುವವರ ಪೈಕಿ ಶೇ. ೩೦ರಷ್ಟು ಮಂದಿ ರಾಜಕೀಯ ಬೀಟ್ ನೋಡಿಕೊಳ್ಳುತ್ತಿರುವವರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಎಲ್ಲರೂ ಈ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪತ್ರಕರ್ತರ ಹತ್ಯೆಗಳು ಈ ಪ್ರಮಾಣದಲ್ಲಿ ಹೆಚ್ಚುತ್ತಾ ಹೋದರೆ, ಕಡೇಪಕ್ಷ ನಡೆದ ಪ್ರಕರಣಗಳ ತಪ್ಪಿತಸ್ಥರನ್ನು ಶಿಕ್ಷಿಸುವ ಕೆಲಸವಾದರೂ ಆಗದಿದ್ದರೆ ಮಾಧ್ಯಮ ಜಗತ್ತಿನ ಶಕ್ತಿ ಸಾಮರ್ಥ್ಯಗಳ ಮೇಲೆ ಅಪಾರ ನಂಬಿಕೆಯಿಟ್ಟಿರುವ ನಾಗರಿಕ ಸಮಾಜದ ಗತಿಯೇನು? ಪತ್ರಿಕಾ ಮಾಧ್ಯಮದ ಆದರ್ಶ ಆಕರ್ಷಣೆಗಳಿಂದ ಅದರತ್ತ ಮುಖಮಾಡುತ್ತಿರುವ ಹೊಸತಲೆಮಾರಿನ ಪತ್ರಕರ್ತರ ಬದುಕಿಗೆ ಭರವಸೆಯೇನು? ಖಡ್ಗಕ್ಕಿಂತಲೂ ಹರಿತವಾದ ಆಯುಧ ಹಿಡಿದವರು ಎಂದು ಮೊದಲಿನಿಂದಲೂ ಸಮಾಜದಿಂದ ಹೊಗಳಿಸಿಕೊಂಡ ಈ ಪ್ರಜಾಸತ್ತೆಯ ಸೈನಿಕರನ್ನು ಕಾಪಾಡುವ ಗುರಾಣಿ ಒದಗಿಸುವವರು ಯಾರು?

ಶುಕ್ರವಾರ, ಮಾರ್ಚ್ 2, 2012

ಸದನಕ್ಕೊಂದು ಪ್ರತ್ಯೇಕ ಚಾನೆಲ್: ಯಾಕಿಷ್ಟು ಗೊಂದಲ?

ಮಾಧ್ಯಮಶೋಧ, ಹೊಸದಿಗಂತ, ಮಾರ್ಚ್ 01, 2012


ಸುದ್ದಿ ಮಾಧ್ಯಮಗಳ ಹಸಿವಿಗೆ ಈಚಿನ ದಿನಗಳಲ್ಲಿ ಸಾಕಷ್ಟು ಆಹಾರ ಒದಗಿಸುತ್ತಿದ್ದ ರಾಜ್ಯ ಸರ್ಕಾರ ಈಗ ತಾನೇ ಸ್ವತಃ ಹೊಸದೊಂದು ಚಾನೆಲ್ ಆರಂಭಿಸುವ ಪ್ರಸ್ತಾಪ ಮಾಡಿ ಹಲವು ರೀತಿಯ ಚರ್ಚೆ-ವಾದ-ವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಆದರೆ ಚರ್ಚೆ ಆರಂಭವಾಗಿರುವುದು ಮತ್ತೊಂದು ಚಾನೆಲ್ ಬೇಕೇ ಬೇಡವೇ ಎಂಬ ಬಗ್ಗೆ ಅಲ್ಲ; ಬದಲಾಗಿ ಈ ಚಾನೆಲ್ ಆರಂಭಿಸುವ ನೆಪದಲ್ಲಿ ಸರ್ಕಾರ ರಾಜ್ಯ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳಿಂದ ಖಾಸಗಿ ವಾಹಿನಿಗಳನ್ನು ಹೊರಗಿಡುವ ಪ್ರಯತ್ನ ಮಾಡುತ್ತಿದೆಯೇ ಎಂಬ ಬಗ್ಗೆ.


ಗೊಂದಲಗಳಿರುವಲ್ಲಿ ವಾದ-ವಿವಾದ, ಟೀಕೆ-ಟಿಪ್ಪಣಿ ಸಾಮಾನ್ಯ. ರಾಜ್ಯ ಸರ್ಕಾರದ ಹೊಸ ಪ್ರಸ್ತಾಪ ಬಹಿರಂಗಗೊಂಡಿರುವ ಸನ್ನಿವೇಶ ಹಾಗೂ ಅದರ ಸುತ್ತಮುತ್ತಲಿನ ಗೊಂದಲಗಳಿಂದಾಗಿಯೇ ಸದ್ಯದ ವಾದ-ವಿವಾದಗಳು ಹುಟ್ಟಿಕೊಂಡಿವೆಯೆಂಬುದು ಸತ್ಯ. ಆರಂಭದಿಂದಲೇ ಸರ್ಕಾರ ತನ್ನ ಪ್ರಸ್ತಾಪಿತ ವಾಹಿನಿಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿರುತ್ತಿದ್ದರೆ ಯಾವ ಸಮಸ್ಯೆಯೂ ಉದ್ಭವಿಸುತ್ತಿರಲಿಲ್ಲ ಅಥವಾ ಸಮಸ್ಯೆ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ.


ಮುಖ್ಯವಾಗಿ, ಸರ್ಕಾರದ ಹೊಸ ಯೋಜನೆ ಪ್ರಸ್ತಾಪವಾಗಿರುವುದು ಸಚಿವರ ಅಶ್ಲೀಲ ಚಿತ್ರ ವೀಕ್ಷಣೆ ಅರೋಪದ ಅಡಾವುಡಿಗಳು ಇನ್ನೂ ಹಸಿಹಸಿಯಾಗಿರುವಾಗಲೇ. ಈ ಪ್ರಸ್ತಾಪ ಹೊಸತೇನೂ ಅಲ್ಲ, ಮೂರು ವರ್ಷಗಳ ಹಿಂದೆಯೇ ಈ ಬಗ್ಗೆ ಚಿಂತನೆ ನಡೆಸಲಾಗಿತ್ತು ಮತ್ತು ಈಗ ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಎ. ರಾಮದಾಸ್ ಅವರ ನೇತೃತ್ವದಲ್ಲಿ ಈ ಸಂಬಂಧ ಸಮಿತಿಯೊಂದನ್ನು ರಚಿಸಲಾಗಿತ್ತು ಎಂದು ಹೇಳಲಾಗುತ್ತಿದ್ದರೂ, ಮಾಧ್ಯಮಗಳಾಗಲೀ ಜನರಾಗಲೀ ಇದನ್ನು ನಂಬುವ ಸನ್ನಿವೇಶದಲ್ಲಿ ಇಲ್ಲ. ಎಲ್ಲರೂ ಮೊನ್ನೆಮೊನ್ನೆ ಸುದ್ದಿವಾಹಿನಿಗಳ ಮೂಲಕ ಜಗಜ್ಜಾಹೀರಾಗಿರುವ ಸಚಿವರ ನೀಲಿಚಿತ್ರ ವೀಕ್ಷಣೆಯ ಆರೋಪ ಮತ್ತು ನಂತರದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲೇ ಯೋಚಿಸುವ ಪರಿಸ್ಥಿತಿ ಇದೆ. ಇದರಲ್ಲಿ ಅತಿಶಯವಾದದ್ದೇನೂ ಇಲ್ಲ. ಪ್ರಸ್ತಾಪಿತ ವಾಹಿನಿಯ ಬಗ್ಗೆ ಜನರಿಗೆ ಮೊದಲೇ ಮಾಹಿತಿ ಇರುತ್ತಿದ್ದರೆ ಅವರೂ ಆತುರಾತುರವಾಗಿ ಅಭಿಪ್ರಾಯಗಳನ್ನು ತಳೆಯುವ ಪ್ರಮೇಯ ಬರುತ್ತಿರಲಿಲ್ಲ.


ವಿಧಾನಸಭೆ ಹಾಗೂ ವಿಧಾನ ಪರಿಷತ್‌ಗಳಿಗಾಗಿ ಪ್ರತ್ಯೇಕ ಚಾನೆಲ್ ಆರಂಭಿಸುವ ಸರ್ಕಾರದ ಪ್ರಸ್ತಾಪ ಆರಂಭದಲ್ಲಿ ಒಂದು ವದಂತಿಯಾಗಿ ಹಬ್ಬಿತು. ಒಂದೆರಡು ಪತ್ರಿಕೆಗಳಲ್ಲಿ ಇದು ಪ್ರಕಟವಾದಾಗ ಸಂಬಂಧಪಟ್ಟವರು ಈ ಬಗ್ಗೆ ಯಾವುದೇ ಬಗೆಯ ಸ್ಪಷ್ಟೀಕರಣ ನೀಡದೆ ಸುಮ್ಮನಿದ್ದುಬಿಟ್ಟರು. ಖಾಸಗಿ ಸುದ್ದಿವಾಹಿನಿಗಳಲ್ಲಿ ಈ ಕುರಿತ ಚರ್ಚಾವೇದಿಕೆಗಳು ಏರ್ಪಟ್ಟಾಗಲೂ ಸಂಬಂಧಿಸಿದವರು ಸರಿಯಾದ ರೀತಿಯಲ್ಲಿ ಮಾಹಿತಿ ನೀಡದೆ ಇನ್ನಷ್ಟು ಗೊಂದಲವೇರ್ಪಡಿಸಿದರು. ಕನ್ನಡದ ಸುದ್ದಿ ವಾಹಿನಿಯೊಂದು ಇಂತಹದೊಂದು ಚರ್ಚೆ ನಡೆಸುತ್ತಾ ಖುದ್ದು ಸ್ಪೀಕರ್ ಕೆ. ಜಿ. ಬೋಪಯ್ಯನವರಿಗೆ ದೂರವಾಣಿ ಕರೆ ಮಾಡಿ ಸ್ಪಷ್ಟೀಕರಣ ಕೇಳಿದರೆ ಅವರೋ ’ಯಾರು ನಿಮಗೆ ಈ ಥರ ಮಾಹಿತಿ ನೀಡಿದ್ದಾರೋ ಅವರನ್ನೇ ಕೇಳಿ ಹೋಗಿ. ನನಗೇನೂ ಗೊತ್ತಿಲ್ಲ’ ಎಂದು ಹೇಳಿ ಫೋನ್ ಇಟ್ಟುಬಿಟ್ಟರು. ಮುಖ್ಯಮಂತ್ರಿ, ಸಂಸದೀಯ ವ್ಯವಹಾರಗಳ ಸಚಿವರಾದಿಯಾಗಿ ಸಂಬಂಧಪಟ್ಟವರ‍್ಯಾರಿಂದಲೂ ಸ್ಪಷ್ಟ ಚಿತ್ರಣ ದೊರೆಯದೇ ಹೋಯಿತು. ಮೂರು ವರ್ಷಗಳ ಹಿಂದೆಯೇ ಇಂತಹದೊಂದು ಪ್ರಸ್ತಾಪ ಇತ್ತು ಎಂದು ಅವರು ಹೇಳಿದ್ದರೆ ಗೊಂದಲ ಆ ಹಂತದಲ್ಲಿಯೇ ಪರಿಹಾರವಾಗುತ್ತಿತ್ತು.


ಪ್ರಸ್ತಾಪವನ್ನು ನಿರಾಕರಿಸುತ್ತಲೇ ಬಂದ ಸರ್ಕಾರ ಮೊನ್ನೆ ಮಂಗಳವಾರ ಇದ್ದಕ್ಕಿದ್ದಂತೆ ಎರಡೂ ಸದನಗಳ ಮುಖ್ಯಸ್ಥರನ್ನು ಸೇರಿಸಿಕೊಂಡು ಪ್ರತ್ಯೇಕ ಚಾನೆಲ್ ಆರಂಭಿಸುವ ಬಗ್ಗೆ ಸಭೆ ನಡೆಸಿದೆ. ಹೊಸ ವಾಹಿನಿ ಆರಂಭಿಸುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಲಾಯಿತೆಂದೂ, ಇದನ್ನು ಲೋಕಸಭೆ ಹಾಗೂ ರಾಜ್ಯಸಭೆ ಟಿವಿಗಳ ಮಾದರಿಯಲ್ಲಿ ಆರಂಭಿಸುವ ಕುರಿತು ಆಯಾ ಸದನಗಳ ಮುಖ್ಯಸ್ಥರೊಂದಿಗೆ ಸದ್ಯದಲ್ಲೇ ಚಿಂತನೆ ನಡೆಸಲಾಗುವುದೆಂದೂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಹೊಸ ವಾಹಿನಿ ಸ್ಥಾಪನೆಯಾದರೆ ಸದನದೊಳಗೆ ಇತರ ಖಾಸಗಿ ಚಾನೆಲ್‌ಗಳ ಪ್ರವೇಶವನ್ನು ನಿಷೇಧಿಸುವ ಯೋಜನೆಯನ್ನೇನೂ ಸರ್ಕಾರ ಹೊಂದಿಲ್ಲ ಎಂದೂ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಹೇಳಿಕೊಂಡಿದ್ದಾರೆ. ಈ ಸ್ಪಷ್ಟೀಕರಣವನ್ನು ಮೊದಲೇ ನೀಡಿರುತ್ತಿದ್ದರೆ ಯಾವುದೇ ಗೊಂದಲ ಸೃಷ್ಟಿಯಾಗುವ ಸನ್ನಿವೇಶ ಇರಲಿಲ್ಲ. ಏಕೆಂದರೆ, ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆಯ ಆರೋಪ ಜಗಜ್ಜಾಹೀರಾದದ್ದೇ ಖಾಸಗಿ ವಾಹಿನಿಗಳ ಮೂಲಕವಾದ್ದರಿಂದ ಮತ್ತು ಅದಿನ್ನೂ ಚರ್ಚೆಯಲ್ಲಿರುವಾಗಲೇ ಸರ್ಕಾರವು ಸದನದ ಕಲಾಪಗಳಿಗಾಗಿಯೇ ಪ್ರತ್ಯೇಕ ಚಾನೆಲ್ ರೂಪಿಸುತ್ತಿದೆ ಎಂಬ ಸುದ್ದಿ ಹಬ್ಬಿದ್ದರಿಂದ ಜನರು ಅನುಮಾನ ಪಡದೆ ಬೇರೆ ದಾರಿಯೇ ಇರಲಿಲ್ಲ.


ವಿಧಾನಸಭೆ ಹಾಗೂ ವಿಧಾನ ಪರಿಷತ್ ಕಲಾಪಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಒಂದು ಪ್ರತ್ಯೇಕ ಚಾನೆಲ್ ಆರಂಭವಾದರೆ ಅದರಲ್ಲಿ ವಿರೋಧಿಸುವಂಥದ್ದೇನೂ ಇಲ್ಲ. ಲೋಕಸಭೆ ಹಾಗೂ ರಾಜ್ಯಸಭೆಗಳಿಗಾಗಿಯೇ ಪ್ರತ್ಯೇಕ ಚಾನೆಲ್‌ಗಳು ಸ್ಥಾಪನೆಯಾಗಿರುವುದೂ ಇದೇ ಉದ್ದೇಶಕ್ಕೆ. ಸಂಸತ್ ಕಲಾಪಗಳು ನಡೆಯದ ಸಮಯದಲ್ಲಿಯೂ ಇವು ಪ್ರಚಲಿತ ವಿದ್ಯಮಾನಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ಚರ್ಚೆಗಳನ್ನು ಏರ್ಪಡಿಸುವ ಮೂಲಕ ಇತರ ಚಾನೆಲ್‌ಗಳಿಂದ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತವೆ. ಸಂಸತ್ತಿನ ಸ್ವಂತ ಬಜೆಟ್ ಮೂಲಕವೇ ಇವುಗಳು ಕಾರ್ಯಾಚರಿಸುತ್ತಿರುವುದರಿಂದ ಇವುಗಳಿಗೆ ಟಿಆರ್‌ಪಿ ಅಥವಾ ಜಾಹೀರಾತುಗಳ ಹಂಗಿಲ್ಲ. ಇದೇ ಮಾದರಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಸಮಾಲೋಚನೆ ನಡೆಸಿದೆಯೆಂದಾದರೆ ಅದು ಆಕ್ಷೇಪಾರ್ಹವಾದದ್ದೇನೂ ಅಲ್ಲ; ಆದರೆ ಖಾಸಗಿ ವಾಹಿನಿಯವರು ನೇರವಾಗಿ ಕಲಾಪಗಳನ್ನು ಸೆರೆಹಿಡಿಯಬಾರದು, ಸರ್ಕಾರಿ ನಿಯಂತ್ರಿತ ಚಾನೆಲ್ ನೀಡುವ ಎಡಿಟೆಡ್ ತುಣುಕುಗಳನ್ನು ಮಾತ್ರ ಬಳಸಿಕೊಳ್ಳಬೇಕು ಎಂಬ ಷರತ್ತುಗಳು ಜಾರಿಯಾದರೆ ಮಾತ್ರ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ಕ್ರಮವಾಗುತ್ತದೆ ಮತ್ತು ಈಗಾಗಲೇ ಅಸಂಸದೀಯವಾಗಿ ನಡೆದುಕೊಂಡಿರುವ ಮತ್ತು ನಡೆದುಕೊಳ್ಳುತ್ತಿರುವ ಜನನಾಯಕರಿಗೆ ರಕ್ಷಣೆ ಮತ್ತು ಪ್ರೋತ್ಸಾಹ ನೀಡಿದಂತಾಗುತ್ತದೆ ಅಷ್ಟೆ.


ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬ ಮನ್ನಣೆಗೆ ಪಾತ್ರವಾಗಿದ್ದರೂ ಮಾಧ್ಯಮ ಸ್ವಾತಂತ್ರ್ಯದ ವಿಷಯಕ್ಕೆ ಬಂದರೆ ಭಾರತದ ಸ್ಥಾನಮಾನ ಅಷ್ಟೊಂದು ಆಶಾದಾಯಕವಾಗಿಲ್ಲ ಎಂದೇ ಹೇಳಬೇಕು. ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಎಂಬ ಸಂಘಟನೆ ಪ್ರತಿವರ್ಷ ಜಾಗತಿಕವಾಗಿ ಸಮೀಕ್ಷೆ ನಡೆಸಿ ಪತ್ರಿಕಾ ಸ್ವಾತಂತ್ರ್ಯದ ವಿಷಯದಲ್ಲಿ ಬೇರೆಬೇರೆ ದೇಶಗಳು ಯಾವಯಾವ ಸ್ಥಾನದಲ್ಲಿವೆ ಎಂಬ ಬಗ್ಗೆ ವರದಿ ನೀಡುತ್ತದೆ. ಪ್ರಸಕ್ತ ಸಾಲಿನಲ್ಲಿ ಈ ಸಮೀಕ್ಷೆಗೊಳಪಟ್ಟಿರುವ ಜಗತ್ತಿನ ೧೭೯ ದೇಶಗಳ ಪೈಕಿ ಭಾರತ ೧೩೧ನೇ ರ‍್ಯಾಂಕ್‌ನಲ್ಲಿದೆ ಎಂಬುದು ಸಂತಸದ ವಿಷಯವೇನೂ ಅಲ್ಲ. ಫಿನ್‌ಲ್ಯಾಂಡ್, ನಾರ್ವೆ, ನೆದರ್‌ಲ್ಯಾಂಡ್ಸ್, ಆಸ್ಟ್ರಿಯಾದಂತಹ ದೇಶಗಳು ಮೊದಲ ಸ್ಥಾನಗಳನ್ನು ಪಡೆದಿದ್ದರೆ, ಎರಿತ್ರಿಯಾ, ಉತ್ತರ ಕೊರಿಯಾ, ಸಿರಿಯಾ, ಇರಾನ್, ಈಜಿಪ್ಟ್ ದೇಶಗಳು ಕೊನೆಯ ಸ್ಥಾನದಲ್ಲಿವೆ. ೨೦೦೨ರಲ್ಲಿ ಭಾರತ ಈ ಪಟ್ಟಿಯಲ್ಲಿ ೮೦ನೇ ಸ್ಥಾನ ಗಳಿಸಿತ್ತು. ಹತ್ತೇ ವರ್ಷಗಳಲ್ಲಿ ಇದು ೧೩೧ಕ್ಕೆ ಕುಸಿದಿದೆ ಎಂಬುದು ಆತಂಕಕಾರೀ ಸಂಗತಿಯಲ್ಲವೇ?


ಮಾಧ್ಯಮ ಸ್ವಾತಂತ್ರ್ಯದ ರ‍್ಯಾಂಕ್ ಪಟ್ಟಿಯಲ್ಲಿ ಭಾರತದ ಕುಸಿತವನ್ನು ಕರ್ನಾಟಕದ ವಿದ್ಯಮಾನಗಳ ಹಿನ್ನೆಲೆಯಲ್ಲೇನೂ ನೋಡಬೇಕಾಗಿಲ್ಲವಾದರೂ, ಚಾನೆಲ್‌ಗಳನ್ನು ನಿರ್ದಿಷ್ಟವಾಗಿ ನಿರ್ಬಂಧಿಸುವ ಯೋಚನೆಗಳೇನಾದರೂ ಇದ್ದರೆ, ಅವು ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಮಾಧ್ಯಮ ಸ್ವಾತಂತ್ರ್ಯದ ಪರಿಕಲ್ಪನೆಗೆ ತೀವ್ರ ಧಕ್ಕೆ ತರುವ ಸಂಗತಿ ಎಂಬುದನ್ನು ಮರೆಯಬಾರದು. ಒಂದೆಡೆ ಅಂತರ್ಜಾಲ ಮಾಧ್ಯಮವನ್ನು ಸೆನ್ಸಾರ್‌ಗೊಳಪಡಿಸುವ ಪ್ರಸ್ತಾಪ ಕೇಂದ್ರದಿಂದ ಬಂದಿದ್ದರೆ, ಇನ್ನೊಂದೆಡೆ ಸದನಗಳ ಕಲಾಪಕ್ಕೆ ಖಾಸಗಿ ಮಾಧ್ಯಮಗಳ ಪ್ರವೇಶ ನಿರ್ಬಂಧಿಸುವ ವದಂತಿ ನಮ್ಮ ರಾಜ್ಯದಿಂದಲೇ ಹಬ್ಬಿದೆ. ಸದನದ ಗಾಂಭೀರ್ಯತೆ, ಘನತೆ ಕಾಪಾಡುವ ಚಿಂತನೆ ಅದರಲ್ಲಿ ಭಾಗವಹಿಸುವವರಿಂದಲೇ ಬರಬೇಕೇ ಹೊರತು, ಮಾಧ್ಯಮಗಳನ್ನು ನಿರ್ಬಂಧಿಸುವ ಮೂಲಕ ಅಲ್ಲ. ಒಳ್ಳೆಯ ಯೋಜನೆಗಳಿಂದ ನಾವು ಇತರರಿಗೆ ಮಾದರಿಯಾಗೋಣ; ಮಾಧ್ಯಮ ಸ್ವಾತಂತ್ರ್ಯ ಪಟ್ಟಿಯಲ್ಲಿ ನಮಗಿಂತಲೂ ಪಾತಾಳದಲ್ಲಿರುವ ಕೊರಿಯಾ, ಸಿರಿಯಾ, ಈಜಿಪ್ಟ್, ಇರಾನ್, ಅಪ್ಘಾನಿಸ್ತಾನ, ಪಾಕಿಸ್ತಾನ ನಮಗೆ ಮಾದರಿಯಾಗುವುದು ಬೇಡ.