ಮಂಗಳವಾರ, ಜೂನ್ 21, 2022

ಉದ್ಯೋಗ ಜಗತ್ತು ಬಯಸುವ 10 ಕೌಶಲಗಳು

4 ಜೂನ್ 2022ರ 'ವಿಜಯವಾಣಿ' ಪತ್ರಿಕೆಯ 'ಶಿಕ್ಷಣಪಥ' ಪುರವಣಿಯಲ್ಲಿ ಪ್ರಕಟವಾದ ಲೇಖನ

ಕೇವಲ ಡಿಗ್ರಿ ಆಧಾರದಲ್ಲಿ ಉದ್ಯೋಗ ಸಂಪಾದಿಸುವ ದಿನಗಳು ಇತಿಹಾಸಕ್ಕೆ ಸಂದುಹೋಗಿವೆ. ಇದು ಸ್ಪರ್ಧಾತ್ಮಕ ಯುಗ. ಉದ್ಯೋಗ ಸಂಪಾದನೆಯಿಂದ ತೊಡಗಿ ಅದರಲ್ಲಿ ಯಶಸ್ಸು ಸಾಧಿಸುವವರೆಗೆ ಪ್ರತಿ ಹಂತದಲ್ಲೂ ಇನ್ನೊಬ್ಬರಿಂದ ಕಠಿಣ ಸ್ಪರ್ಧೆ ಎದುರಿಸಬೇಕಾಗುತ್ತದೆ. ಡಿಗ್ರಿಯೊಂದಿದ್ದರೆ ಯಾವುದಾದರೊಂದು ಉದ್ಯೋಗ ಸಿಗುತ್ತದೆ ಎಂಬ ಮನೋಭಾವ ಇರುವವರಿಗೆ ಇನ್ನು ಬದುಕು ಬಲು ಕಷ್ಟ. 

ಅಂಕಪಟ್ಟಿಯಲ್ಲಿ ನಮೂದಾಗಿರುವ ಪರ್ಸೆಂಟೇಜನ್ನು ನಂಬಿ ಈಗ ಯಾರೂ ಉದ್ಯೋಗ ಕೊಡುವುದಿಲ್ಲ. ಎಷ್ಟೇ ಸಣ್ಣ ಉದ್ಯೋಗವಾದರೂ ತಾನು ಕೊಡುವ ಸಂಬಳಕ್ಕೆ ಪ್ರತಿಯಾಗಿ ಉದ್ಯೋಗಿ ತನ್ನ ಸಂಸ್ಥೆಗೆ ಏನು ಕೊಡಬಲ್ಲ ಎಂದು ಉದ್ಯೋಗಪತಿ ಯೋಚಿಸುತ್ತಾನೆ. ಆದ್ದರಿಂದ ಅಂಕಪಟ್ಟಿ, ಪ್ರಮಾಣಪತ್ರಗಳ ಜೊತೆಗೆ ಉದ್ಯೋಗ ರಂಗವು ಅಪೇಕ್ಷಿಸುವ ಒಂದಷ್ಟು ಕೌಶಲಗಳನ್ನು ಪ್ರತಿಯೊಬ್ಬನೂ ರೂಢಿಸಿಕೊಳ್ಳುವುದು ಅಗತ್ಯ. ಕ್ಷೇತ್ರ, ಉದ್ಯೋಗ ಯಾವುದೇ ಇರಲಿ, ಈ ಕೌಶಲಗಳು ಎಲ್ಲ ಉದ್ಯೋಗಾಕಾಂಕ್ಷಿಗಳಲ್ಲೂ ಇರಲೇಬೇಕು.

ಸಮಸ್ಯೆ ಬಗೆಹರಿಸುವಿಕೆ

ಉದ್ಯೋಗ ಸ್ಥಳದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಯಾವಾಗ ಯಾವ ಸಮಸ್ಯೆಗಳು ಎದುರಾಗುತ್ತವೆ ಎಂದು ಹೇಳಲು ಬರುವುದಿಲ್ಲ. ಕೆಲವು ನಿರೀಕ್ಷಿತ, ಕೆಲವು ಅನಿರೀಕ್ಷಿತ. ಎರಡನ್ನೂ ಸಮಾನ ಧೈರ್ಯದಿಂದ ಎದುರಿಸುವ ಕೌಶಲ ವ್ಯಕ್ತಿಗೆ ಇರಬೇಕು. ನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ಸಿದ್ಧ ತಂತ್ರಗಾರಿಕೆ ಬೇಕು. ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸಲು ಆತ್ಮವಿಶ್ವಾಸ, ತಾಳ್ಮೆ, ವ್ಯವಸ್ಥಿತ ನಿರ್ವಹಣೆ ಬೇಕು. 

ಸಮಸ್ಯೆ ಎದುರಾದ ಕೂಡಲೇ ಧೈರ್ಯ ಕಳೆದುಕೊಳ್ಳುವುದಲ್ಲ, ಕುಗ್ಗಿ ಬದಿಗೆ ಸರಿಯುವುದಲ್ಲ. ಸಮಸ್ಯೆ ಯಾಕೆ ಬಂತು, ಅದಕ್ಕಿರುವ ವಿವಿಧ ಪರಿಹಾರಗಳೇನು, ತಕ್ಷಣಕ್ಕೆ ಏನು ಮಾಡಬಹುದು- ಇವನ್ನೆಲ್ಲ ಕೂಲಂಕಷವಾಗಿ ಯೋಚಿಸಿ ಮುಂದಿನ ಹೆಜ್ಜೆ ಇಡುವುದು ಅಪೇಕ್ಷಣೀಯ. ದುಡುಕು, ಆತಂಕಗಳಿAದ ಸಮಸ್ಯೆ ಪರಿಹಾರವಾಗುವ ಬದಲು ಇನ್ನಷ್ಟು ಬಿಗಡಾಯಿಸುತ್ತದೆ.

ಸಂವಹನ ಕಲೆ

ಸಂವಹನದಲ್ಲಿ ವ್ಯಕ್ತಿಯ ಯಶಸ್ಸು ಅಡಗಿದೆ. ಮನಸ್ಸಿನಲ್ಲಿ ಏನಿದೆ ಎಂಬುದಕ್ಕಿಂತಲೂ ಅದನ್ನು ಇನ್ನೊಬ್ಬರೆದುರು ಹೇಗೆ ಮಂಡಿಸಬೇಕು ಎಂದು ತಿಳಿದಿರುವುದು ಮುಖ್ಯ. ಇನ್ನೊಬ್ಬನೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಾಧ್ಯವಾಗದ ವ್ಯಕ್ತಿ ಎಷ್ಟೇ ಉನ್ನತ ವಿದ್ಯಾರ್ಹತೆ ಹೊಂದಿದ್ದರೂ ಪ್ರಯೋಜನವಿಲ್ಲ.

ಉತ್ತಮ ಉದ್ಯೋಗ ಪಡೆಯಲು ಮತ್ತು ಅದರಲ್ಲಿ ಯಶಸ್ಸು ಸಾಧಿಸಲು ಲಿಖಿತ ಮತ್ತು ಮೌಖಿಕ ಸಂವಹನ ಕಲೆ ಬಹಳ ಮುಖ್ಯ. ತನ್ನ ಬಯೋಡಾಟಾ ಬರೆಯುವುದರಿಂದ ತೊಡಗಿ ವಿವಿಧ ಸಂದರ್ಭಗಳಲ್ಲಿ ಪತ್ರ, ಇಮೇಲ್ ಮತ್ತಿತರ ವ್ಯವಹಾರ ನಡೆಸುವುದಕ್ಕೆ ಬರೆವಣಿಗೆ ಕೌಶಲ ಬಹಳ ಮುಖ್ಯ. ಒಂದು ಕೆಟ್ಟ ಇಮೇಲ್ ಇಡೀ ಯೋಜನೆಯನ್ನೇ ಹಾಳುಗೆಡಹಬಹುದು. ಒಂದು ಉತ್ತಮ ಪತ್ರ ಅಥವಾ ಪ್ರಸ್ತಾವನೆ ಕೋಟ್ಯಂತರ ರುಪಾಯಿಯ ಪ್ರಾಜೆಕ್ಟ್ ಒಂದನ್ನು ಪಡೆದುಕೊಳ್ಳಲು ನೆರವಾಗಬಹುದು. ಮೌಖಿಕ ಸಂವಹನವAತೂ ಆಧುನಿಕ ಕಾಲದ ಅತ್ಯಗತ್ಯ ಕೌಶಲ. ಉದ್ಯೋಗ ನೀಡಲು ಸಂದರ್ಶನ ನಡೆಸುವ ವ್ಯಕ್ತಿ ನಿಮ್ಮ ಮೌಖಿಕ ಸಂವಹನ, ದೇಹಭಾಷೆಯನ್ನು ನೋಡಿಯೇ ನಿಮಗೆ ಆ ಉದ್ಯೋಗ ನೀಡಬೇಕೇ ಬೇಡವೇ ಎಂಬುದನ್ನು ಬಹುಪಾಲು ನಿರ್ಧರಿಸುವ ಸಾಧ್ಯತೆ ಇದೆ.

ಹೊಂದಾಣಿಕೆ

ಹೊಸತನ ಉದ್ಯೋಗರಂಗದ ಖಾಯಂ ಲಕ್ಷಣ. ಯಾವುದೇ ಉದ್ಯೋಗದಲ್ಲಿ ಹೊಸಹೊಸ ಸವಾಲುಗಳು ಎದುರಾಗುತ್ತಲೇ ಇರುತ್ತವೆ. ಹೊಸ ತಂತ್ರಜ್ಞಾನ, ಹೊಸ ಬಗೆಯ ಸ್ಪರ್ಧೆಗಳು, ಹೊಸ ವ್ಯವಹಾರದ ಮಾದರಿಗಳು ಪ್ರತಿದಿನ ಗೋಚರವಾಗುತ್ತವೆ. ಈ ಬದಲಾವಣೆಗಳಿಗೆ ಆಗಿಂದಾಗ್ಗೆ ಹೊಂದಿಕೊಳ್ಳುವುದು ಉದ್ಯೋಗಿಯ ಆದ್ಯತೆಯಾಗಬೇಕು. ಸದಾ ಹೊಸತನ್ನು ಕಲಿಯುವ ಅಭ್ಯಾಸ ರೂಢಿಯಾಗಬೇಕು. ಹೊಸ ವಿಷಯ ಹಾಗೂ ಹೊಸ ವ್ಯಕ್ತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗದ ಉದ್ಯೋಗಿ ಯಶಸ್ಸು ಕಾಣುವುದು ಕಷ್ಟ.

ತಂಡ ಮನೋಭಾವ

ತಂಡದೊಂದಿಗೆ ಕೆಲಸ ಮಾಡುವ ಗುಣ ಅತ್ಯಂತ ದೊಡ್ಡ ಉದ್ಯೋಗ ಕೌಶಲವೆಂದು ಪರಿಗಣಿಸಲ್ಪಟ್ಟಿದೆ. ಒಂದು ಸಂಸ್ಥೆಯಲ್ಲಿ ಮಾಡುವ ಬಹುತೇಕ ಕೆಲಸಗಳು ತಂಡ ಪ್ರಯತ್ನಗಳೇ. ಒಬ್ಬ ವ್ಯಕ್ತಿ ಏಕಾಂಗಿಯಾಗಿ ಪೂರೈಸಬಹುದಾದ ಕೆಲಸಗಳು ಕಡಿಮೆ. ಇಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರಿಯುವುದೇ ಪ್ರಮುಖ ಕೌಶಲ. 

ಒಬ್ಬ ಉದ್ಯೋಗಾಕಾಂಕ್ಷಿ ವಿವಿಧ ಹಿನ್ನೆಲೆಯ, ವಯಸ್ಸಿನ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಮಂದಿಯೊAದಿಗೆ ತಂಡ ಮನೋಭಾವದಿಂದ ಕೆಲಸ ಮಾಡಲು ಸಿದ್ಧವಿರಬೇಕು. ತಂಡದ ಮುಖ್ಯಸ್ಥನಾಗಬಯಸುವವನಿಗಂತೂ ಇನ್ನೊಬ್ಬರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಗಮನಿಸಿ, ಅವರಿಗೆ ತಕ್ಕುದಾದ ಜವಾಬ್ದಾರಿಗಳನ್ನು ವಹಿಸುವ ಸಾಮರ್ಥ್ಯವಿರಬೇಕು.

ಸಮಯ ನಿರ್ವಹಣೆ

ಸಮಯ ನಿರ್ವಹಣೆಯು ಸಂಪನ್ಮೂಲ ನಿರ್ವಹಣೆಯ ಒಂದು ಭಾಗ. ಅತ್ಯಂತ ಕಡಿಮೆ ಸಮಯದಲ್ಲಿ ಗರಿಷ್ಠ ಪ್ರಯೋಜನವನ್ನು ಪಡೆಯುವುದು ಯಾವನೇ ಉದ್ಯೋಗಿಯ ಪ್ರಮುಖ ಗುರಿಯಾಗಬೇಕು. ಇದಕ್ಕೆ ಸೂಕ್ತ ಯೋಜನೆ ಅಗತ್ಯ. ಸರಿಯಾದ ಪ್ಲಾನಿಂಗ್ ಇದ್ದಾಗ ಮಾತ್ರ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.

ಸಮಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಒಂದು ಶ್ರೇಷ್ಠ ಕೌಶಲ. ಒಂದೊಂದು ನಿಮಿಷವೂ ಮುಖ್ಯ ಎಂಬ ಭಾವನೆ ಹೊಂದಿರುವವನಿಗೆ ಮಾತ್ರ ಸಮಯದ ಮೌಲ್ಯ ಅರ್ಥವಾಗಲು ಸಾಧ್ಯ. ನಿಗದಿತ ವೇಳೆಗೆ ಒಂದು ಕೆಲಸಕ್ಕೆ ಹಾಜರಾಗುವುದು, ನಿರ್ದಿಷ್ಟ ಕಾಲಮಿತಿಯಲ್ಲಿ ಜವಾಬ್ದಾರಿಯನ್ನು ಪೂರೈಸುವುದು- ಇವೆಲ್ಲ ಒಬ್ಬ ವ್ಯಕ್ತಿಯ ಉದ್ಯೋಗಾರ್ಹತೆಯನ್ನು ನಿರ್ಧರಿಸುತ್ತವೆ.

ಸಂಘಟನೆ

ವ್ಯಕ್ತಿಗಳು ಹಾಗೂ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಹಾಗೂ ಬುದ್ಧಿವಂತಿಕೆಯಿಂದ ಬಳಸುವುದು ಸಂಘಟನೆಯ ಗುಟ್ಟು. ಎಲ್ಲ ಕೆಲಸಗಳನ್ನೂ ಒಬ್ಬನೇ ನಿರ್ವಹಿಸಲಾಗದು. ಯಾರಿಗೆ ಯಾವಾಗ ಯಾವ ಕೆಲಸವನ್ನು ವಹಿಸಬೇಕೆಂಬುದು ಒಬ್ಬ ಉತ್ತಮ ಸಂಘಟಕನಿಗೆ ತಿಳಿದಿರುತ್ತದೆ. ಇದರಿಂದ ಒಂದು ತಂಡದಲ್ಲಿ ಪರಸ್ಪರ ವಿಶ್ವಾಸವೂ ಬೆಳೆಯುತ್ತದೆ. ಜವಾಬ್ದಾರಿಗಳ ಸಮಾನ ಹಂಚಿಕೆಯಾಗುತ್ತದೆ.

ಸ್ವಪ್ರೇರಣೆಯನ್ನು ಹೆಚ್ಚಿಸಿಕೊಳ್ಳವುದು, ತನ್ನ ಹಾಗೂ ಸಹೋದ್ಯೋಗಿಗಳ ಸಾಮರ್ಥ್ಯದ ಗರಿಷ್ಠ ಬಳಕೆ ಮಾಡುವುದು, ಜವಾಬ್ದಾರಿಗಳನ್ನು ಜಾಗರೂಕತೆಯಿಂದ ನಿರ್ವಹಿಸುವುದು, ತಕ್ಷಣದ ಆದ್ಯತೆ ಯಾವುದು ಎಂದು ಅರ್ಥಮಾಡಿಕೊಳ್ಳವುದು- ಇವೆಲ್ಲ ಒಬ್ಬ ಉದ್ಯೋಗಸ್ಥ ಅಥವಾ ಉದ್ಯೋಗಾಕಾಂಕ್ಷಿಯ ಪ್ರಧಾನ ಗುಣಗಳಾಗಿರಬೇಕು.

ತಂತ್ರಜ್ಞಾನದ ಬಳಕೆ

ಇದು ತಂತ್ರಜ್ಞಾನದ ಯುಗ. ಪ್ರತಿದಿನ ಹೊಸ ತಂತ್ರಜ್ಞಾನ ನಮ್ಮೆದುರು ಕಾಣಿಸಿಕೊಳ್ಳುತ್ತಿದೆ. ಕಡೇ ಪಕ್ಷ ಕಂಪ್ಯೂಟರನ್ನಾದರೂ ತನ್ನ ಕೆಲಸಗಳಿಗೆ ಸರಿಯಾಗಿ ಬಳಸಿಕೊಳ್ಳಲಾಗದ ವ್ಯಕ್ತಿ ಇಂದು ಅನಕ್ಷರಸ್ಥನೇ ಸರಿ. ಇತ್ತೀಚಿನ ವರ್ಷಗಳಲ್ಲಂತೂ ಕಂಪ್ಯೂಟರ್‌ನಲ್ಲಿ ಮಾಡಬಹುದಾದ ಅನೇಕ ಕೆಲಸಗಳನ್ನು ಮೊಬೈಲ್ ಫೋನಿನಲ್ಲೇ ಮಾಡುವುದು ಸಾಧ್ಯ. 

ಆದ್ದರಿಂದ ತಂತ್ರಜ್ಞಾನದ ವಿಷಯದಲ್ಲಿ ವ್ಯಕ್ತಿ ಆಗಿಂದಾಗ್ಗೆ ಅಪ್ಡೇಟ್ ಆಗುವುದು ಅನಿವಾರ್ಯ. ಕಂಪ್ಯೂಟರ್, ಮೊಬೈಲ್‌ಗಳನ್ನು ಸ್ಮಾರ್ಟ್ ಆಗಿ ಬಳಸಿಕೊಳ್ಳಬಲ್ಲ ವ್ಯಕ್ತಿ ಇಂದು ಯಾವುದೇ ಉದ್ಯೋಗಕ್ಕೆ ಹೆಚ್ಚು ಯೋಗ್ಯ ಎನಿಸಿಕೊಳ್ಳುತ್ತಾನೆ.

ಮಾಹಿತಿಯ ಬಳಕೆ

21ನೇ ಶತಮಾನದಲ್ಲಿ ಮಾಹಿತಿಯೇ ಕರೆನ್ಸಿ. ಯಾವುದೇ ಮಾಧ್ಯಮವನ್ನು ಬಳಸಿ ಸರಿಯಾದ ಮಾಹಿತಿಯನ್ನು ಸಂಗ್ರಹಿಸುವುದು, ಸಂಗ್ರಹಿಸಿದ ಮಾಹಿತಿಯನ್ನು ಒಪ್ಪ ಓರಣವಾಗಿ ವ್ಯವಸ್ಥೆಗೊಳಿಸುವುದು, ಅದನ್ನು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉದ್ಯೋಗಿಗಳ ಪ್ರಮುಖ ಕೌಶಲ. ವಿಷಯಗಳು ಗೊತ್ತಿದ್ದರೆ ಸಾಲದು, ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುವುದು, ಇನ್ನೊಬ್ಬರಿಗೆ ಸಂವಹನ ಮಾಡುವುದು ಮುಖ್ಯ.

ಉತ್ತಮ ವ್ಯಕ್ತಿತ್ವ 

ಉತ್ತಮ ವ್ಯಕ್ತಿತ್ವ ಎಲ್ಲ ಅರ್ಹತೆಗಳನ್ನು ಬೆಳಗುವ ಶೋಕೇಸು. ಎಂತಹದೇ ವಿದ್ಯಾರ್ಹತೆ ಇದ್ದರೂ ಅದು ನಮ್ಮ ವ್ಯಕ್ತಿತ್ವದಲ್ಲಿ ಪ್ರತಿಫಲಿತವಾಗದೇ ಹೋದರೆ ಅದಕ್ಕೆ ಈ ಕಾಲದಲ್ಲಿ ಮೌಲ್ಯವಿಲ್ಲ. ವೃತ್ತಿಪರತೆ, ಉತ್ಸಾಹ, ಆತ್ಮವಿಶ್ವಾಸ, ಸೃಜನಶೀಲತೆ, ಪಾರದರ್ಶಕತೆ – ಇವೆಲ್ಲ ವ್ಯಕ್ತಿತ್ವದ ವಿವಿಧ ಆಯಾಮಗಳೆಂದು ಗುರುತಿಸಲ್ಪಟ್ಟಿವೆ. ಇವುಗಳನ್ನು ರೂಢಿಸಿಕೊಂಡು ಬೆಳೆಸಿಕೊಳ್ಳುವುದು ಉತ್ತಮ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಬಹಳ ಅಗತ್ಯ.

ನಾಯಕತ್ವ

ಎಲ್ಲರನ್ನೂ ಮುನ್ನಡೆಸಿಕೊಂಡು ಹೋಗುವ ಸಾಮರ್ಥ್ಯ ಯಶಸ್ಸಿನ ಪ್ರಾಥಮಿಕ ಅರ್ಹತೆ. ನಾಯಕನಾದವನು ಉಳಿದವರಿಗೆ ಮಾದರಿಯಾಗಬೇಕು. ಆತ ತನ್ನ ವರ್ಚಸ್ಸು ಹಾಗೂ ಸಾಮರ್ಥ್ಯದಿಂದ ಉಳಿದವರಿಗೆ ಪ್ರೇರಕನಾಗಿರಬೇಕು.

ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದು, ಇನ್ನೊಬ್ಬರ ಸಾಮರ್ಥ್ಯವನ್ನು ಗುರುತಿಸುವುದು, ವ್ಯವಸ್ಥಿತ ಚಿಂತನೆ ಹಾಗೂ ಯೋಜನೆ, ತನ್ನೊಂದಿಗೆ ಇರುವವರ ಸಾಧನೆಗಳನ್ನು ಗುರುತಿಸಿ ಸೂಕ್ತ ಮನ್ನಣೆಯನ್ನು ನೀಡುವುದು, ವೈಫಲ್ಯದ ಜವಾಬ್ದಾರಿ ಹೊತ್ತುಕೊಳ್ಳುವುದು ಇತ್ಯಾದಿಗಳು ಉತ್ತಮ ನಾಯಕನ ಲಕ್ಷಣಗಳು. 

ಒಳ್ಳೆಯ ಉದ್ಯೋಗ ಪಡೆಯುವ ಕನಸು ಕಂಡರೆ ಸಾಲದು. ಅದಕ್ಕೆ ತಕ್ಕುದಾದ ತಯಾರಿ ನಮ್ಮಲ್ಲಿರಬೇಕು. ಉದ್ಯೋಗಕ್ಕೆ ತಯಾರಿ ನಡೆಸುವುದೆಂದರೆ ಇಂತಹ ಕೌಶಲಗಳನ್ನು ಹೊಂದುವುದಕ್ಕೆ ನಿರಂತರ ಪ್ರಯತ್ನಶೀಲರಾಗವುದು. ಇದು ಒಂದು ವಾರದಲ್ಲಿ ಅಥವಾ ತಿಂಗಳಿನಲ್ಲಿ ಕರಗತವಾಗುವ ವಿಷಯಗಳಲ್ಲ. ನಿರಂತರ ಪ್ರಯತ್ನ ಹಾಗೂ ಅಭ್ಯಾಸ ಬೇಕು. ವಿದ್ಯಾಭ್ಯಾಸದ ಜತೆಜತೆಗೆ ಈ ಕೌಶಲಗಳನ್ನು ರೂಢಿಸಿಕೊಳ್ಳಲು ಪ್ರಯತ್ನವು ಜಾಗೃತವಾಗಿದ್ದರೆ ವ್ಯಾಸಂಗ ಮುಗಿಯುವ ವೇಳೆಗೆ ಉದ್ಯೋಗಕ್ಕೂ ನಾವು ಸಿದ್ಧರಾಗಿರುತ್ತೇವೆ. ಇಲ್ಲಿ ಹೇಳಿರುವ ಕೌಶಲಗಳನ್ನು ರೂಢಿಸಿಕೊಳ್ಳುವುದರಿಂದ ಉತ್ತಮ ಉದ್ಯೋಗ ಪಡೆಯುವುದು ಮಾತ್ರವಲ್ಲ, ಪಡೆದ ಉದ್ಯೋಗದಲ್ಲಿ ಯಶಸ್ಸನ್ನು ಸಾಧಿಸಿ ಇನ್ನೂ ಉತ್ತಮ ಸ್ಥಾನಕ್ಕೆ ಏರುವುದೂ ಸಾಧ್ಯ.

- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ಜೂನ್ 19, 2022

ಅಪ್ಪನೆಂಬ ಅಂತರಂಗದ ಬೆಳಕು

'ಬೋಧಿವೃಕ್ಷ' 18-25 ಜೂನ್ 2022ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

Postmen in the Mountains ಎಂಬೊಂದು ಚೈನೀಸ್ ಚಲನಚಿತ್ರವಿದೆ. ಕಾಲ್ನಡಿಗೆಯಲ್ಲೇ ಕಡಿದಾದ ಬೆಟ್ಟಗುಡ್ಡಗಳನ್ನು ಏರಿಳಿಯುತ್ತಾ ಪತ್ರಗಳ ಬಟವಾಡೆ ಮಾಡಿಕೊಂಡು ತನ್ನ ಸುದೀರ್ಘ ವೃತ್ತಿಜೀವನವನ್ನು ಕಳೆದ ಅಂಚೆಯಣ್ಣನ ಕಥೆಯದು. ಸಿನಿಮಾ ಆರಂಭವಾಗುವುದು ಅಂಚೆಯಣ್ಣನ ವೃತ್ತಿಬದುಕಿನ ಕೊನೆಯ ದಿನದಿಂದ. ವಯೋಸಹಜ ಅನಾರೋಗ್ಯದಿಂದಾಗಿ ಅಂಚೆಯಣ್ಣ ತನ್ನ ಉದ್ಯೋಗಕ್ಕೆ ವಿದಾಯ ಹೇಳಬೇಕಾದ ಸಂದರ್ಭ ಬಂದಾಗ ಆ ಉದ್ಯೋಗ ಅವನ ಮಗನಿಗೆ ಸಿಗುತ್ತದೆ.  ಮಾಡಬೇಕಾದ ಕೆಲಸದಿಂದ ತೊಡಗಿ ನಡೆಯಬೇಕಾದ ದಾರಿಯವರೆಗೆ ಅವನಿಗೆ ಎಲ್ಲವೂ ಹೊಸದು. ಅದನ್ನು ಪರಿಚಯ ಮಾಡಿಕೊಡುವುದಕ್ಕಾಗಿ ಅಪ್ಪ ಮಗನೊಂದಿಗೆ ಹೊರಟುಬಿಡುತ್ತಾನೆ. ಬಹುಕಾಲದಿಂದ ಅಂಚೆಯಣ್ಣನ ಒಡನಾಡಿಯಾಗಿದ್ದ ನಾಯಿಯೂ ಜತೆಯಾಗುತ್ತದೆ. 

ಇಡೀ ಚಲನಚಿತ್ರದಲ್ಲಿ ಇರುವುದು ಅಪ್ಪ-ಮಗನ ಈ ಸಹಪಯಣದ ಕಥನ. ಅಂತಿಂಥ ಪಯಣವಲ್ಲ ಅದು. ಭರ್ತಿ ಇನ್ನೂರ ಅರವತ್ತು ಮೈಲಿಗಳ ನಡಿಗೆ. ಅಷ್ಟನ್ನು ಪೂರೈಸುವುದಕ್ಕೆ ಮೂರು ಹಗಲೂ ಮೂರು ಇರುಳೂ ಬೇಕು. ಗುಡ್ಡಗಾಡು ಪ್ರದೇಶಗಳಲ್ಲಿ ಚದುರಿಕೊಂಡಿರುವ ಸಣ್ಣಪುಟ್ಟ ಹಳ್ಳಿಗಳು, ಎಲ್ಲೋ ಅಡಗಿರುವ ಮನೆಗಳನ್ನು ಹುಡುಕಿ ಹೋಗಿ ಅಂಚೆ ಬಟವಾಡೆ ಮಾಡಿ ಮುಂದುವರಿಯಬೇಕು. ವಿಚಿತ್ರವೆಂದರೆ, ತರುಣ ಮಗ ತನ್ನ ದಿನನಿತ್ಯದ ಕೆಲಸಗಳನ್ನು, ಓಡಾಡಬೇಕಾದ ದಾರಿಯನ್ನು ಗಮನಿಸುವ ಬದಲು ತನ್ನ ತಂದೆಯನ್ನು ಗಮನಿಸಲು ಆರಂಭಿಸುತ್ತಾನೆ. ತಂದೆ ಮಗನನ್ನು ಗಮನಿಸಲು ಆರಂಭಿಸುತ್ತಾನೆ.

ಅವರಿಬ್ಬರೂ ಅಷ್ಟೊಂದು ಹತ್ತಿರದಿಂದ ನೋಡಿಕೊಂಡದ್ದು, ಮಾತನಾಡಿದ್ದು, ಒಬ್ಬರನ್ನೊಬ್ಬರು ಗಮನಿಸಿದ್ದು ಎರಡೂವರೆ ದಶಕದಲ್ಲಿ ಅದೇ ಮೊದಲು. ಅಂಚೆಚೀಲ ಬೆನ್ನಿಗೇರಿಸಿಕೊಂಡು ಒಮ್ಮೆ ಹೊರಟರೆ ಅಪ್ಪ ಹಿಂತಿರುಗುವುದು ಒಂದಷ್ಟು ದಿನಗಳಾದಮೇಲೆಯೇ. ಮನೆಯಲ್ಲಿ ಅಮ್ಮ-ಮಗ ಮಾತ್ರ. ಒಂದು ನಡಿಗೆ ಮುಗಿಸಿ ಮನೆಗೆ ಹಿಂತಿರುಗಿದ ಅಪ್ಪ ಮತ್ತೆ ಬೆಳಗಾಗುವ ಹೊತ್ತಿಗೆ ಎದ್ದು ಮುಂದಿನ ಪಯಣ ಆರಂಭಿಸಿರುತ್ತಾನೆ. ಮಗನ ಮನಸ್ಸಿನಲ್ಲಿರುವುದು ಅಪ್ಪನೆಂಬ ಆಕೃತಿ ಮಾತ್ರ. ಇಷ್ಟು ವರ್ಷಗಳಾದ ಮೇಲೆಯೂ ಅದರೊಂದಿಗೆ ಒಂದು ಭಾವಬಂಧ ಬಲಿತೇ ಇಲ್ಲ. ಅದಕ್ಕೆ ಸಣ್ಣ ಅವಕಾಶವೂ ಇರಲಿಲ್ಲ.  

ಅಂಥದ್ದೊಂದು ಅವಕಾಶವಾಗಿ ಒಲಿದು ಬಂದದ್ದು ಈ ಸಹಪಯಣದಿಂದ. ಪಯಣದಲ್ಲಿ ಎದುರಾಗುವ ಪ್ರತಿಕ್ಷಣವೂ ತರುಣ ಮಗನಿಗೆ ಹೊಚ್ಚಹೊಸದು. ಅವನಿಗೆ ಪ್ರತಿಯೊಂದರಲ್ಲೂ ವೈಶಿಷ್ಟ್ಯ, ಸ್ವಾರಸ್ಯ, ಕೌತುಕ. ಮುಕ್ಕಾಲು ಪಯಣ ಮುಗಿಯುವ ಹೊತ್ತಿಗೆ ನದಿಯೊಂದು ಎದುರಾಗುತ್ತದೆ. ಸೇತುವೆಯಿಲ್ಲದ ಅದನ್ನು ಹಾಗೆಯೇ ಕಾಲ್ನಡಿಗೆಯಲ್ಲಿ ದಾಟುವುದು ಕ್ರಮ. ಮಗ ನಾಯಿಯೊಂದಿಗೆ ಮೊದಲು ನದಿ ದಾಟಿ ಬೆನ್ನಮೇಲಿನ ಚೀಲವನ್ನು ಇನ್ನೊಂದು ದಡದಲ್ಲಿ ಇಟ್ಟು ಬರುತ್ತಾನೆ. ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡು ಇನ್ನೊಮ್ಮೆ ದಾಟುತ್ತಾನೆ. ಅಪ್ಪ-ಮಗ ಇಬ್ಬರಿಗೂ ಅದೊಂದು ವರ್ಣನಾತೀತ ಅನುಭೂತಿ.

“ಯಾವಾಗ ಮಗ ಅಪ್ಪನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಾನೋ ಆಗ ಮಗ ಬೆಳೆದು ದೊಡ್ಡವನಾದನೆಂದು ಅರ್ಥ ಅಂತ ನಮ್ಮೂರಿನ ಹಿರಿಯರು ಹೇಳ್ತಾ ಇದ್ರು. ನಾನು ಎಳೆಯವನಿದ್ದಾಗ ಅಪ್ಪ ನನಗೊಬ್ಬ ಭಾರೀ ಆಕೃತಿ ಆಗಿದ್ದ. ಇವನನ್ನು ನಾನು ಎಂದಾದರೂ ಹೊತ್ತುಕೊಂಡು ಹೋಗುವುದು ಸಾಧ್ಯವಿದೆಯೇ ಅಂತ ಕಳವಳಪಡುತ್ತಿದ್ದೆ...” ನದಿ ದಾಟುತ್ತಲೇ ಮಗ ಜ್ಞಾಪಿಸಿಕೊಳ್ಳುತ್ತಾನೆ.

ಅಪ್ಪನೊಳಗೂ ಇನ್ಯಾವುದೋ ಒಂದು ಭಾವಸ್ಫುರಣ ಉಂಟಾಗಿ ಮನಸ್ಸು ಒದ್ದೆಯಾಗಿರುತ್ತದೆ. ಬಹುಶಃ ಅವನ ಮನಸ್ಸಿನಲ್ಲೂ ಇರುವುದು ಮಗನ ಎದೆಯೊಳಗೆ ಹರಿದಾಡುತ್ತಿರುವ ಬೇಗುದಿಯೇ. ಅವನ ಕಣ್ಣುಗಳಲ್ಲಿರುವುದು ತಂದೆಯಾಗಿ ತಾನು ಮಾಡಬೇಕಾದ್ದನ್ನು ಮಾಡಿದ್ದೇನೆಯೇ ಎಂಬ ಪ್ರಾಮಾಣಿಕ ಪ್ರಶ್ನೆ. ನದಿಯನ್ನು ದಾಟುತ್ತಲೇ ಅಪ್ಪ-ಮಗ ಪರಸ್ಪರ ಮಾತುಗಳೇ ಇಲ್ಲದೆ ತಮ್ಮತಮ್ಮ ನೆಲೆಗಳನ್ನು, ಪಾತ್ರಗಳನ್ನು ಅರ್ಥೈಸಿಕೊಳ್ಳುವ ರೀತಿ ಮಾತ್ರ ಅದ್ಭುತ. ನದಿಯನ್ನು ದಾಟಿ ಮಗನ ಹೆಗಲಿನಿಂದ ಇಳಿದ ತಂದೆಗೆ ಆತನ ಮುಖ ನೋಡುವ ಧೈರ್ಯ ಇಲ್ಲ. ಮಗನಿಗೂ ಅಪ್ಪನ ಕಣ್ಣುಗಳನ್ನು ನೋಡುವ ಧೈರ್ಯ ಇಲ್ಲ. “ಈ ಪೋಸ್ಟ್ ಬ್ಯಾಗಿಗಿಂತಲೂ ನೀನೇ ಬಹಳ ಹಗುರ ಇದ್ದೀಯಾ” ಎಂದು ತಂದೆಯ ಮಾತುತಪ್ಪಿಸಲು ಪ್ರಯತ್ನಿಸುತ್ತಾನೆ.

ಅಪ್ಪನೆಂದರೆ ಹಾಗೆಯೇ. ಅದೊಂದು ವಿಚಿತ್ರ ವ್ಯಕ್ತಿತ್ವ. ಅಂಚೆಯಣ್ಣನ ಎಳೆಯ ಮಗನಿಗೆ ಕಂಡ ಹಾಗೆ ಅದೊಂದು ಭಯಂಕರ ಆಕೃತಿ. ಹೆಚ್ಚೆಂದರೆ ಅದು ಜಗತ್ತಿನ ಎಲ್ಲ ಕೆಲಸಗಳನ್ನೂ ಮಾಡಬಲ್ಲ, ಬೇಕಾದ್ದನ್ನು ತಂದುಕೊಡಬಲ್ಲ ಸೂಪರ್‍ಮ್ಯಾನ್ ಆಗಬಹುದು. ಇನ್ನು ಕೆಲವರಿಗೆ ಅದೊಂದು ಒರಟು ಮನುಷ್ಯ. ಅಮ್ಮನೊಂದಿಗೆ ಇರಬಹುದಾದ ಸಲುಗೆಯನ್ನು ಈ ವ್ಯಕ್ತಿಯೊಂದಿಗೆ ಇಟ್ಟುಕೊಳ್ಳುವುದು ಕಷ್ಟ. ಅಮ್ಮನಲ್ಲಾದರೆ ಏನು ಬೇಕಾದರೂ ಹೇಳಿಕೊಳ್ಳಬಹುದು. ಅಪ್ಪನೊಂದಿಗೆ ಮಾತಾಡುವುದಕ್ಕೆ ಅಮ್ಮನ ವಕಾಲತ್ತು ಬೇಕು. ಅನೇಕ ಸಲ ಅಮ್ಮನಿಗೂ ಬಚಾವಾಗುವುದಕ್ಕೆ ಈ ಅಪ್ಪನೆಂಬ ಗುರಾಣಿಯೇ ಬೇಕು. ‘ಇರು, ಅಪ್ಪ ಬರಲಿ, ಎಲ್ಲ ಹೇಳುತ್ತೇನೆ’ – ಆಕೆ ಹಾಗೆಂದು ಮಕ್ಕಳ ಬಹುಪಾಲು ಉಪಟಳಗಳನ್ನು ನಿಯಂತ್ರಿಸಿಯಾಳು.

ಆದರೆ ಅಪ್ಪನೆಂದರೆ ಅಷ್ಟೇ ಅಲ್ಲವೆಂದು ಮನದಟ್ಟು ಆಗುವ ಹೊತ್ತಿಗೆ ಬದುಕಿನ ಅರ್ಧ ಭಾಗವೇ ಸವೆದುಹೋಗಿರುತ್ತದೋ ಏನೋ! ಅಮ್ಮನೆಂದರೆ ಸುಲಭವಾಗಿ ಅರ್ಥವಾಗುವ ಸುಂದರ ಭಾವಗೀತೆ; ಅಪ್ಪನಾದರೋ ತಕ್ಷಣಕ್ಕೆ ಅರ್ಥವಾಗದ ಸುದೀರ್ಘ ಕಥನಕವನ. ಅಮ್ಮನೆಂದರೆ ಎರಡೂ ದಡಗಳಿಗೆ ತಂಪನ್ನುಣಿಸುತ್ತಾ ಮೆಲ್ಲಮೆಲ್ಲನೆ ಹರಿಯುವ ತಣ್ಣನೆಯ ತೊರೆ; ಅಪ್ಪನಾದರೋ ಆಳ-ಅಗಲ ತಕ್ಷಣಕ್ಕೆ ಅರಿವಿಗೆ ಬಾರದೆ ತನ್ನಷ್ಟಕ್ಕೇ ಹರಿಯುತ್ತಿರುವ ಘನಗಂಭೀರ ವಿಸ್ತಾರ ನದಿ. ಆತನ ಮುಖವನ್ನಷ್ಟೇ ನೋಡಿ ಏನನ್ನಾದರೂ ಅರ್ಥ ಮಾಡಿಕೊಳ್ಳುವುದು ಕಷ್ಟ. ಏಕೆಂದರೆ ಮುಖದಲ್ಲೇ ಆತ ಎಲ್ಲವನ್ನೂ ವ್ಯಕ್ತಪಡಿಸಲಾರ.

‘ನಿನ್ನನ್ನು ಪ್ರೀತಿಸುತ್ತೇನೆ ಎಂದು ತಂದೆ ಹೇಳುವುದಿಲ್ಲ, ಆದರೆ ಅದನ್ನು ಮಾಡುತ್ತಲೇ ಇರುತ್ತಾನೆ’ ಎಂಬ ಮಾತಿದೆ. ಹೌದು, ಆತ ಮಾತಿನಲ್ಲೇ ಎಲ್ಲವನ್ನೂ ಹೇಳಲಾರ. ಹತ್ತಿರದಿಂದ ನೋಡುವವರಿಗೆ ಕಂಡೀತು ಅಷ್ಟೆ. ತನ್ನೊಳಗೆ ತಾನೇ ಕರಗಿ ನೀರಾಗಿ ಮತ್ತೆ ಗಟ್ಟಿಯಾಗುವ ಮೇಣದಂತೆ ಅವನು- ಸಂತೋಷವಾದರೂ, ದುಃಖವಾದರೂ ಹೊರಮುಖದಲ್ಲಿ ಪ್ರಕಟವಾಗುವುದು ತುಸು ಅಪರೂಪವೇ. ಪ್ರಕಟವಾದ ಕ್ಷಣಕ್ಕೆ ಆತ ಅಪ್ಪನಾಗಿ ಉಳಿಯದೆ ಅಮ್ಮನಾಗುತ್ತಾನೆ: ಎಂಬಲ್ಲಿಗೆ ವಾಸ್ತವವಾಗಿ ಅಪ್ಪ-ಅಮ್ಮ ಇಬ್ಬರೂ ಒಂದೇ ಎಂದಾಯಿತು. ಗಂಡಿನೊಳಗೊಂದು ಹೆಣ್ಣು, ಹೆಣ್ಣಿನೊಳಗೊಬ್ಬ ಗಂಡು ಇರುವುದರಿಂದ ಅಲ್ಲವೇ ಪ್ರಕೃತಿ-ಪುರುಷರ ಪರಿಕಲ್ಪನೆ, ಆಕಾಶ-ಭೂಮಿಯ ತತ್ವಗಳು ಸಾಧ್ಯವಾಗಿರುವುದು? 

‘ಆತ್ಮಾ ವೈ ಪುತ್ರ ನಾಮಾಸಿ’- ಅಪ್ಪನೇ ಮಗನಾಗಿ ಹುಟ್ಟುತ್ತಾನೆ: ಇದು ಪೂರ್ವಿಕರ ನಂಬಿಕೆ. ತಂದೆಯಾಗುವುದು ಕಷ್ಟವಲ್ಲವಂತೆ, ತಂದೆಯಾಗಿರುವುದು ಕಷ್ಟ. ಎಳೆಯ ಮಗುವಿನಿಂದ ತೊಡಗಿ ವಯೋವೃದ್ಧರವರೆಗೆ ಎಲ್ಲ ಹೆಣ್ಣುಮಕ್ಕಳನ್ನೂ ‘ಅಮ್ಮಾ’ ಎಂದು ಸಂಬೋಧಿಸಬಹುದು. ಆದರೆ ‘ಅಪ್ಪ’ ಎಂದು ಕರೆಯುವುದು ಒಬ್ಬನನ್ನೇ. ಅದಕ್ಕೆ ಆ ಸ್ಥಾನ ಅಷ್ಟು ವಿಶಿಷ್ಟವಾದದ್ದು. ಆ ಸ್ಥಾನಕ್ಕೆ ತಲುಪುವುದು ಬದುಕಿನ ಸಹಜ ಪ್ರಕ್ರಿಯೆ, ಆದರೆ ತಂದೆಯಾಗಿ ಮಾಡಬೇಕಾದ್ದನ್ನು ಆತ್ಮತೃಪ್ತಿ ದಕ್ಕುವಂತೆ ಮಾಡುವುದು ಕೊಂಚ ನಿಧಾನಪ್ರಕ್ರಿಯೆ. ತಂದೆಯಾಗಿ ಯಾವ ಕರ್ತವ್ಯ ನಿರ್ವಹಿಸಬೇಕೋ ಅದನ್ನು ಸರಿಯಾಗಿ ನಿರ್ವಹಿಸದವನು  ಮುಂದೆ ತನ್ನ ಮಕ್ಕಳಿಂದಲೂ ಅಂತಹದನ್ನು ನಿರೀಕ್ಷಿಸಲಾಗದು.

ಮಕ್ಕಳು ಹದಿಹರೆಯ ದಾಟಿ ಪ್ರಾಯಪ್ರಬುದ್ಧರಾದ ಮೇಲೆ ಅಪ್ಪ ಅವರನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕೆಂಬುದೊಂದು ಲೋಕರೂಢಿ. ಅಪ್ಪ ಗೆಳೆಯನೂ ಆಗಿರುವುದರಿಂದಲೇ ಅವನೊಳಗೊಬ್ಬ ಮಾರ್ಗದರ್ಶಕನೂ ಸಲಹೆಗಾರನೂ ಇರುತ್ತಾನೆ. ಅಪ್ಪ ಪ್ರತಿಯೊಬ್ಬನ ಬೆನ್ನಹಿಂದೆ ಇರುವ ಒಬ್ಬ ಫ್ರೆಂಡ್, ಗೈಡ್ ಅಂಡ್ ಫಿಲಾಸಫರ್. ಹಾಗೆಂದು ಆತ ವಾಚಾಳಿಗಳಂತೆ ಎಲ್ಲವನ್ನೂ ಮಾತಿನಲ್ಲೇ ಹೇಳಿರುತ್ತಾನೆ ಎಂದೇನೂ ಇಲ್ಲ.  ಅವನ ಮೌನವನ್ನೂ, ಮೌನದೊಳಗಿರುವ ಸೂಚನೆಗಳನ್ನೂ ಅರ್ಥಮಾಡಿಕೊಳ್ಳಬಲ್ಲವರೇ ಜೀವನದಲ್ಲಿ ಯಶಸ್ಸನ್ನು ಕಂಡಾರು. ಅಪ್ಪ ಎಂದರೆ ಅಂತರಂಗದಲ್ಲಿ ಸದಾ ಬೆಳಗುತ್ತಿರುವ ಹೊಂಬೆಳಕು. ಆ ಬೆಳಕು ಒಳಗಿನಿಂದಲೇ ಪ್ರಭೆಯನ್ನು ಹೊಮ್ಮಿಸುವ ಮಿಂಚುಹುಳ ಆಗಿರುವುದರಿಂದಲೇ ನಮ್ಮ ವ್ಯಕ್ತಿತ್ವವನ್ನೂ ಬೆಳಗುತ್ತದೆ, ಭವಿಷ್ಯದ ದಾರಿಯನ್ನೂ ತೋರಿಸುತ್ತದೆ. ಆ ಬೆಳಕು ಮುಗಿಯುವುದೇ ಇಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.