ಮಂಗಳವಾರ, ಡಿಸೆಂಬರ್ 25, 2018

ಡೆಸ್ಕ್ ಚಿತ್ರಕಥಾ

ಡಿಸೆಂಬರ್ 25, 2018ರ ಉದಯವಾಣಿ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ತನ್ನ ವಿದ್ಯಾರ್ಥಿಗಳನ್ನು ಕುರಿತು ಕಾಲೇಜು ಮೇಷ್ಟ್ರೊಬ್ಬ ಶತದಡ್ಡರು ನಾಲಾಯಕ್ಕುಗಳು ಎಂದು ಎಂದಾದರೂ ರೇಗಿದ್ದಾನೆ ಎಂದರೆ ಆತ ಆವರೆಗೆ ಇಡೀ ತರಗತಿಗೆ ಒಮ್ಮೆಯೂ ಪ್ರದಕ್ಷಿಣೆ ಬಂದಿಲ್ಲವೆಂದೇ ಅರ್ಥ. ಬಂದಿದ್ದರೆ ಆತನ ತರಗತಿಯಲ್ಲಿರುವ ಸಿನಿಮಾ ಹೀರೋಗಳು, ಅಮರ ಪ್ರೇಮಿಗಳು, ಮಹಾಕವಿಗಳು, ತತ್ತ್ವಜ್ಞಾನಿಗಳ ಬಗ್ಗೆ ಅವನಿಗೆ ಜ್ಞಾನೋದಯವಾಗದೇ ಇರುತ್ತಿರಲಿಲ್ಲ.

'ರಾತ್ರಿಯಿಡೀ ಓದಿಯೂ ಏನೂ ಬರಿಯಕ್ಕೆ ಹೊಳೀತಿಲ್ರೀ. ದಯಮಾಡಿ ಪಾಸು ಮಾಡಿ ಸರಾ...’ ಎಂದು ಉತ್ತರ ಪತ್ರಿಕೆಯ ಕೊನೆಯಲ್ಲಿ ಸಾಷ್ಟಾಂಗ ಸಮಸ್ಕಾರ ಸಮೇತ ವಿನಂತಿ ಮಾಡಿಕೊಳ್ಳುವ ಉತ್ತರ ಭೂಪರೂ ಕ್ಲಾಸಿನಲ್ಲಿ ಕುಳಿತರೆಂದರೆ ಅವರ ಸುಪ್ತ ಪ್ರತಿಭೆ ತಾನಾಗೇ ಚಿಗುರಲು ಆರಂಭಿಸುತ್ತದೆ. ಅದರಿಂದ ಒಡಮೂಡುವ ಪ್ರಕಾರವೇ ಸಾರಸ್ವತ ಲೋಕದಲ್ಲಿ ತೀರಾ ವಿಶಿಷ್ಟವೆನಿಸುವ ಡೆಸ್ಕ್ ಸಾಹಿತ್ಯ. ತೀರಾ ಬೋರು ಹುಟ್ಟಿಸುವ ಮೇಷ್ಟ್ರುಗಳೇ ಇಂತಹ ಪ್ರತಿಭೆಗಳ ನಿಜವಾದ ಪ್ರೇರಣೆಯಾಗಿರುವುದರಿಂದ ಅವರನ್ನು ಸಾಹಿತ್ಯ ಪೋಷಕರು ಎಂದು ಎಲ್ಲ ರೀತಿಯಿಂದಲೂ ಒಪ್ಪಿಕೊಳ್ಳಬಹುದು.

ಡೆಸ್ಕ್ ಸಾಹಿತ್ಯಕ್ಕೆ ಹಲವು ಆಯಾಮಗಳಿದ್ದರೂ ಅದರಲ್ಲಿ ಪ್ರೇಮಸಾಹಿತ್ಯಕ್ಕೇ ಸಿಂಹಪಾಲು. ಅಲ್ಲದೆ, ಇಂತಹ ಸಾಹಿತಿಗಳ ಪೈಕಿ ಹುಡುಗರದ್ದೇ ಬಹುಸಂಖ್ಯೆ ಎಂಬ ವೈಜ್ಞಾನಿಕ ಸತ್ಯವನ್ನು ಯಾವ ಸಂಶೋಧನೆಯೂ ಇಲ್ಲದೆ ದೃಢೀಕರಿಸಬಹುದು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಎಲ್ಲದರಲ್ಲೂ ಹುಡುಗಿಯರದ್ದೇ ಮೇಲುಗೈ ಎಂದು ಪದೇಪದೇ ಮುಖಪುಟದಲ್ಲಿ ಬರೆಯುವ ಪತ್ರಿಕೆಗಳು ಡೆಸ್ಕ್ ಸಾಹಿತ್ಯ ನಿರ್ಮಾಣದಲ್ಲಿ ಹುಡುಗರದ್ದೇ ಮೇಲುಗೈ ಎಂಬುದನ್ನು ಬೇಷರತ್ತಾಗಿ ಪ್ರಕಟಿಸಬೇಕಾಗುತ್ತದೆ.
ಮೇಘಸಂದೇಶದ ಬಳಿಕ ಪ್ರೇಮಪತ್ರಗಳ ಕಾಲ ಸರಿದುಹೋಗಿ ವಾಟ್ಸಾಪು ಅವತರಿಸಿದರೂ ಡೆಸ್ಕಿನ ಮೇಲೆ ಪ್ರೇಮನಿವೇದನೆ ಮಾಡುವ ಸಂಪ್ರದಾಯಕ್ಕೆ ಎಳ್ಳಿನಿತೂ ಧಕ್ಕೆಯಾಗಿಲ್ಲ. ಯಾವುದಾದರೂ ಡೆಸ್ಕಿನ ಮೇಲೆ ಪ್ರೇಮ ಪ್ರತೀಕವಾದ ಹೃದಯದ ಒಂದಾದರೂ ರೇಖಾಚಿತ್ರ ಇಲ್ಲದೇ ಹೋದರೆ ಅಂತಹ ಕಾಲೇಜನ್ನು ಕಾಲೇಜೆಂದು ಕರೆಯುವುದು ಹುಡುಗರಿಗೆ ಮಾಡುವ ಅವಮಾನವೆಂದೇ ಭಾವಿಸಬಹುದು.

ಡೆಸ್ಕಿನ ಮೇಲೆ ಈಗಾಗಲೇ ಇರುವ ಹೃದಯದ ಚಿತ್ರವನ್ನು ಇನ್ನಷ್ಟು ಬಲಪಡಿಸುವ ಹೊಣೆ ಮುಂದಿನ ವರ್ಷಗಳಲ್ಲಿ ಬರುವ ಕಿರಿಯ ತಲೆಮಾರಿನದ್ದು. ಈ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ಜೂನಿಯರ‍್ಸ್ ಮುಂದುವರಿಸುತ್ತಾರೆಂದು ಕನಿಷ್ಟ ಐದು ವರ್ಷ ಹಳೆಯದಾದ ಯಾವ ಡೆಸ್ಕುಗಳನ್ನು ನೋಡಿದರೂ ಹೇಳಬಹುದು. ಡೆಸ್ಕು ಹಳೆಯದಾದಷ್ಟು ಸಾಹಿತ್ಯ ಹೆಚ್ಚು ಗಟ್ಟಿ.

'ಬುಲ್‌ಬುಲ್ ಮಾತಾಡಕಿಲ್ವ?’ ಎಂಬ ತನ್ನ ಬಹುಕಾಲದ ಬೇಡಿಕೆಯನ್ನು ಹುಡುಗಿ ಕೂರುವ ಡೆಸ್ಕಿನ ಮೇಲೆ ಸೂಚ್ಯವಾಗಿ ಬಹಿರಂಗಪಡಿಸಿ ನಾಪತ್ತೆಯಾಗುವ ಬಯಲುಸೀಮೆಯ ಹುಡುಗ, 'ಎನ್’ ಐ ಮಿಸ್ ಯೂ ಎಂದೋ, ಐ ಲವ್ ಯೂ 'ಕೆ’ ಎಂದೋ ಡೆಸ್ಕಿನ ಮೇಲೆ ಗೀಚಿ ಬರೆದದ್ದು ಹುಡುಗನೋ ಹುಡುಗಿಯೋ ಎಂಬ ರಹಸ್ಯವನ್ನು ಕಾಪಾಡಿಕೊಳ್ಳುವ ಅನಾಮಿಕ ಪ್ರೇಮಿ, ಈ ಕಣ್ಣಿರೋದು ನಿನ್ನನ್ನೇ ನೋಡಲು ಚಿನ್ನೂ ಎಂದೋ, ನೀನಿಲ್ಲನ ನಾನು ನೀರಿಲ್ಲದ ಮೀನು ಎಂದೋ ಒಂದೇ ಸಾಲಿನ ಕವಿತೆಯನ್ನು ಬರೆದು ಅಡಗಿ ಕೂರುವ ಭಾವಜೀವಿ- ಎಲ್ಲರೂ ಈ ಸಾಹಿತ್ಯ ವಲಯದ ಆಧಾರ ಸ್ತಂಭಗಳು.

ಆಕ್ಷನ್ ಪ್ರಿನ್ಸ್‌ಗೂ ಡಿಂಪಲ್ ಕ್ವೀನ್‌ಗೂ ಸಿಂಪಲ್ಲಾಗ್ ಲವ್ ಆಯ್ತು ಎಂದು ತನ್ನ ಪ್ರೇಮಕಥನವನ್ನೇ ಸಿನಿಮಾ ಶೈಲಿಯಲ್ಲಿ ಪ್ರಸ್ತುತ ಪಡಿಸುವ ಸುಪ್ತಪ್ರತಿಭೆ, ಆರ್ ಲವ್ಸ್ ಇ: ಗ್ರೇಟ್ ಲವರ್ಸ್ ಫಾರೆವರ್ ಎಂದು ತಾನು ನಿರ್ಮಿಸಲಿರುವ ಹೊಸ ಸಿನಿಮಾದ ಟೈಟಲನ್ನು ಪ್ರಕಟಿಸುವ ಭಾವೀ ನಿರ್ದೇಶಕ, ಕನ್ನಡ ಮೇಷ್ಟ್ರ ಪಾಠ ಕೇಳುತ್ತಲೇ ಪಕ್ಕದ ಬೆಂಚಿನ ಕನಸಿನ ಕನ್ಯೆಯನ್ನು ನೋಡಿ 'ಓ ನನ್ನ ಚೇತನ’ ಎಂದು ಬರೆದು ಅದರ ಸುತ್ತಲೊಂದು ಹೃದಯದ ನಕಾಶೆಯನ್ನು ಕೊರೆವ ಕಳ್ಳಕವಿ- ಇವರೂ ಈ ಸಾಹಿತ್ಯಸಮಾಜದ ಸಕ್ರಿಯ ನಾಗರಿಕರು.

ಯಾವ ಸಿನಿಮಾ ಹೀರೋಗಳು ಹೆಚ್ಚು ಜನಪ್ರಿಯರು, ಪಡ್ಡೆಗಳ ಹೃದಯ ಗೆದ್ದಿರುವ ಚಿತ್ರಗಳು ಯಾವವೆಂದು ತಿಳಿಯಲೂ ಪ್ರತ್ಯೇಕ ಸಮೀಕ್ಷೆಗಳು ಬೇಕಿಲ್ಲ. ಡೆಸ್ಕುಗಳ ಮೇಲೆ ಐದು ನಿಮಿಷ ಕಣ್ಣಾಡಿಸಿಕೊಂಡು ಬಂದರೆ ಧಾರಾಳವಾಯ್ತು. ಎಲ್ಲ ಬಗೆಯ ರಿಯಲ್ ಸ್ಟಾರುಗಳು, ಗೋಲ್ಡನ್ ಸ್ಟಾರ್‌ಗಳು, ರೆಬೆಲ್ ಸಾರ್‌ಗಳು, ಪವರ್ ಸ್ಟಾರ್‌ಗಳು ಸಾಲುಸಾಲಾಗಿ ಪವಡಿಸಿರುತ್ತಾರೆ. ಅದ್ದೂರಿ, ಭರ್ಜರಿ, ಬಹದ್ದೂರ್, ಗಜಕೇಸರಿ, ಜಗ್ಗುದಾದ, ಕಿರಾತಕ, ರಾಮಾಚಾರಿ... ಎಂಬಿತ್ಯಾದಿ ಸಿನಿಮಾಗಳು ಥಿಯೇಟರುಗಳಲ್ಲಿ ಎಷ್ಟು ವಾರ ಓಡುತ್ತವೋ ಗೊತ್ತಿಲ್ಲ, ನಮ್ಮ ಹುಡುಗರ ಕೃಪೆಯಿಂದ ಡೆಸ್ಕುಗಳ ಮೇಲೆ ಒಂದು ಶತಮಾನವಾದರೂ ಬಾಳಿ ಬದುಕುವುದು ಶತಃಸಿದ್ಧ.

ಭರ್ತಿ ಎರಡು ತಿಂಗಳ ಬಳಿಕ ಕ್ಲಾಸಿಗೆ ಹಾಜರಾಗಿ 'ಪ್ರಶೂ ಈಸ್ ಬ್ಯಾಕ್’ ಎಂದು ಡೆಸ್ಕ್ ಮೇಲೆ ಹಾಜರಿ ಹಾಕಿ ಹೋಗಿ ಮತ್ತೆ ಎರಡು ತಿಂಗಳ ನಾಪತ್ತೆಯಾಗುವ ಉಡಾಳ, ಕರುನಾಡ ಸಿಂಗಂ ರವಿ ಚನ್ನಣ್ಣನವರ್ ಎಂದು ದೊಡ್ಡದಾಗಿ ಬರೆದು ಕುಸುರಿ ಕೆಲಸದಿಂದ ಸಿಂಗರಿಸುವ ಅಪ್ರತಿಮ ಅಭಿಮಾನಿ, 'ಎವರಿಬಡಿ ಈಸ್ ಈಕ್ವಲ್ ಬಿಫೋರ್ ಲಾ’ ಎಂಬ ಮೇಷ್ಟ್ರ ಹೇಳಿಕೆಯನ್ನು ಕರಾರುವಾಕ್ಕಾಗಿ ಬರೆದು ಅದರ ಮುಂದೆ 'ಸೋ, ಮುಂದಿನ ಬೆಂಚೂ ಹಿಂದಿನ ಬೆಂಚಿನ ನಡುವೆ ವ್ಯತ್ಯಾಸ ಇಲ್ಲ ತಿಳ್ಕಳಿ’ ಎಂದು ಷರಾ ನಮೂದಿಸುವ ಕೊನೇ ಬೆಂಚಿನ ಹುಡುಗ- ಇವರೆಲ್ಲ ತರಗತಿ ಬಹುಮುಖ ಪ್ರತಿಭೆಗಳಿಂದ ಕೂಡಿದೆಯೆಂಬುದಕ್ಕೆ ಪ್ರಮುಖ ಸಾಕ್ಷಿಗಳು.

ಇಷ್ಟೆಲ್ಲದರ ನಡುವೆ ಭಾರತೀಯ ಸಂವಿಧಾನದ ಪ್ರಮುಖ ಲಕ್ಷಣಗಳು, ಪ್ರಧಾನಮಂತ್ರಿಯ ಅಧಿಕಾರ ಮತ್ತು ಕರ್ತವ್ಯಗಳು, ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣಗಳು, ಸಣ್ಣ ಕೈಗಾರಿಕೆಗಳ ಸಮಸ್ಯೆಗಳು, ಕುಮಾರವ್ಯಾಸನ ಕಾವ್ಯಸೌಂದರ್ಯ ಮತ್ತಿತರ ಘನಗಂಭೀರ ಟಿಪ್ಪಣಿಗಳೂ ಡೆಸ್ಕುಗಳ ಮೇಲೆ ಕಾಣಸಿಗುವುದುಂಟು. ಇವೆಲ್ಲ ತರಗತಿಲ್ಲಾಗಲೀ ಮನೆಯಲ್ಲಾಗಲೀ ಎಂದೂ ಒಂದು ಪುಟ ನೋಟ್ಸ್ ಬರೆಯದ ಮಹಾನ್ ಸೋಮಾರಿಗಳ ಶ್ರದ್ಧೆಯ ಫಲ ಎಂದು ಮೇಲ್ನೋಟಕ್ಕೇ ಹೇಳಬಹುದು. ಪರೀಕ್ಷೆಯಲ್ಲಿ ಪಾಸಾಗುವುದೇ ಈ ಸಾಹಿತ್ಯ ಪ್ರಕಾರದ ಏಕೈಕ ಉದ್ದೇಶ.

ಈ ಬಹುಮುಖ ಪ್ರತಿಭೆಗಳ ನಡುವಿನ ತತ್ತ್ವಜ್ಞಾನಿಗಳ ಬಗ್ಗೆ ಹೇಳದೆ ಹೋದರೆ ಲೇಖನವೇ ಅಪೂರ್ಣವಲ್ಲವೇ? 'ಒಳ್ಳೆಯವರು ನೆನಪು ನೀಡುತ್ತಾರೆ. ಕೆಟ್ಟವರು ಅನುಭವ ನೀಡುತ್ತಾರೆ. ದುಷ್ಟರು ಪಾಠ ಕಲಿಸುತ್ತಾರೆ. ಅತ್ಯುತ್ತಮರು ಸವಿ ನೆನಪು ನೀಡುತ್ತಾರೆ. ಆದ್ದರಿಂದ ಯಾರನ್ನೂ ದೂಷಿಸುವುದು ಸರಿಯಲ್ಲ. ಎಲ್ಲರಿಂದಲೂ ಒಂದು ರೀತಿಯ ಅನುಕೂಲವಿರುತ್ತದೆ...’ - ಎಂಬೊಂದು ಮಾತು ಬರೆದ ಪುಣ್ಯಾತ್ಮ ಕೊನೆಗೆ ತನ್ನ ಹೆಸರು ಬರೆಯಲು ಮನಸ್ಸಾಗದೆ 'ಗೌತಮ ಬುದ್ಧ’ ಎಂದು ಬರೆದಿದ್ದ. ಅವನಿಗೆ ಡೆಸ್ಕಿನ ಮೇಲೆ ಜ್ಞಾನೋದಯವಾದದ್ದಿರಬೇಕು.

ಶನಿವಾರ, ಡಿಸೆಂಬರ್ 22, 2018

ಮುಚ್ಚಿದ ವ್ಯವಸ್ಥೆಯ 'ತೆರೆದ ಪುಸ್ತಕ'

28 ನವೆಂಬರ್ 2018ರ 'ಪ್ರಜಾವಾಣಿ' ಶಿಕ್ಷಣ ಪುರವಣಿಯಲ್ಲಿ ಪ್ರಕಟವಾದ ಲೇಖನ

ಪ್ರಜಾವಾಣಿ, 28 ನವೆಂಬರ್ 2018
ತೆರೆದ ಪುಸ್ತಕ ಪರೀಕ್ಷೆಗಳ ಬಗ್ಗೆ ಶಿಕ್ಷಣ ಸಚಿವರ ಪ್ರಸ್ತಾಪದಿಂದ ಹುಟ್ಟಿಕೊಂಡ ಚರ್ಚೆಗಳು ಅಲ್ಲಲ್ಲೇ ಮೌನವಾಗತ್ತಿದ್ದ ಹಾಗೆಯೇ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಮುಂದಿನ ವರ್ಷದಿಂದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಲ್ಲೂ ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದೆ. ಯಾವುದೇ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯೊಂದು ಪ್ರಸ್ತಾಪವಾದಾಗ ಅದರ ಬಗ್ಗೆ ಪರ ವಿರೋಧ ಚರ್ಚೆಗಳು ಬರುವುದು ಸಾಮಾನ್ಯ. ಆದರೆ ಅವುಗಳ ಸಾರ್ಥಕತೆಯಿರುವುದು ಅವೇನಾದರೂ ತಾರ್ಕಿಕ ಅಂತ್ಯ ಕಾಣುತ್ತವೆಯೇ ಎಂಬುದರಲ್ಲಿ.

ತೆರೆದ ಪುಸ್ತಕ ಪರೀಕ್ಷೆಯ ಅಗತ್ಯವನ್ನು ಪ್ರತಿಪಾದಿಸುವವರು ಗುರುತಿಸುವ ಪ್ರಧಾನ ಅಂಶಗಳು ಎರಡು: ಮೊದಲನೆಯದು, ಅದು ಮಕ್ಕಳಲ್ಲಿನ ಪರೀಕ್ಷಾ ಭಯವನ್ನು ಹೋಗಲಾಡಿಸುತ್ತದೆ; ಎರಡನೆಯದು, ಅದು ಮಕ್ಕಳಲ್ಲಿ ವಿಶ್ಲೇಷಣಾ ಕೌಶಲವನ್ನು ಬೆಳೆಸುತ್ತದೆ. ಮತ್ತು ಇವೆರಡೂ ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಈ ಅಭಿಪ್ರಾಯದಲ್ಲಿ ಹುರುಳೇನೋ ಇದೆ. ಆದರೆ ಇದರಿಂದಲೇ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದೋಷಗಳು ಪರಿಹಾರವಾಗುತ್ತವೆಯೇ ಎಂಬುದು ನಮ್ಮ ಮುಂದಿನ ಪ್ರಶ್ನೆ. ವಿಷಯದ ಎರಡೂ ಮಗ್ಗುಲನ್ನು ಪರಿಶೀಲಿಸೋಣ.

ನಮ್ಮಲ್ಲಿ ಚಾಲ್ತಿಯಲ್ಲಿರುವ ಪರೀಕ್ಷಾ ಪದ್ಧತಿ ವಿದ್ಯಾರ್ಥಿ ಗಳಿಸಿದ ಜ್ಞಾನ ಮತ್ತು ಕೌಶಲಗಳ ಮೌಲ್ಯಮಾಪನಕ್ಕಿಂತಲೂ ಆತನ ಜ್ಞಾಪಕ ಶಕ್ತಿಯ ಪರೀಕ್ಷೆ ಆಗಿರುವುದೇ ಹೆಚ್ಚು. ಇಡೀ ಸೆಮಿಸ್ಟರ್ ಓದಿದ್ದರ ಸಾರಸರ್ವಸ್ವವನ್ನು ಕಂಠಪಾಠ ಮಾಡಿ ನೆನಪುಳಿದದ್ದನ್ನು ಮೂರು ಗಂಟೆಗಳಲ್ಲಿ ಕಕ್ಕುವ ಈ ಪದ್ಧತಿ ಯಾವ ರೀತಿಯಲ್ಲೂ ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಬೆಳೆಸೀತು ಎಂದು ನಿರೀಕ್ಷಿಸುವುದು ಕಷ್ಟ. ಬದುಕನ್ನು ಎದುರಿಸುವ ವಿಚಾರ ಹಾಗಿರಲಿ, ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ವಿದ್ಯಾರ್ಥಿಯೊಬ್ಬ ತನ್ನ ದಿನನಿತ್ಯದ ಜವಾಬ್ದಾರಿಗಳನ್ನಾದರೂ ಸಮರ್ಥನಾಗಿ ನಿರ್ವಹಿಸಬಲ್ಲನೇ? ಅದಕ್ಕೆ ಬೇಕಾದ ಸಾಮಾನ್ಯ ವಿವೇಕ, ವ್ಯವಹಾರ ಕುಶಲತೆಯನ್ನು ಅವನ ಶಿಕ್ಷಣ ಪದ್ಧತಿ ಬೆಳೆಸಿದೆಯೇ? ಇಲ್ಲವಾದರೆ ಶಿಕ್ಷಣ ಅವನಿಗೇನು ಕೊಟ್ಟಿದೆ? ನೂರಕ್ಕೆ ನೂರು ಅಂಕ ಕೊಟ್ಟ ಪರೀಕ್ಷೆ ಅವನ ಯಾವ ಜ್ಞಾನವನ್ನು ಅಳೆದಿದೆ?

ತೆರೆದ ಪುಸ್ತಕದ ಪರೀಕ್ಷೆ ಇಂತಹ ಸಮಸ್ಯೆಗೇನಾದರೂ ಪರಿಹಾರ ತೋರಿಸೀತೇ ಎಂದು ಅನಿಸುವುದು ಇಂತಹ ಪ್ರಶ್ನೆಗಳ ನಡುವೆ. ಪಠ್ಯಪುಸ್ತಕದಲ್ಲಿರುವ ಜ್ಞಾನವನ್ನು ವಿದ್ಯಾರ್ಥಿಗಳ ತಲೆಗೆ ವರ್ಗಾಯಿಸುವುದೇ ಬೋಧನೆ ಎಂಬುದು ರೂಢಿಗತ ಚಿಂತನೆಯಾದರೆ ವಿದ್ಯಾರ್ಥಿಗಳು ಕಲಿಯುವುದನ್ನು ಕಲಿಸುವುದೇ ಬೊಧನೆ ಎಂಬುದು ಹೊಸ ಬಗೆಯ ಚಿಂತನೆ. ಜಗತ್ತು ಆಧುನಿಕವಾಗುತ್ತಿದ್ದಂತೆಯೇ, ದಿನನಿತ್ಯದ ಬದುಕು ಹಾಗೂ ವೃತ್ತಿಜೀವನದಲ್ಲಿ ಹೊಸ ಸವಾಲುಗಳು ಎದುರಾಗುತ್ತಿದ್ದಂತೆಯೇ ಅದಕ್ಕೆ ಸೂಕ್ತವಾದ ಮಾನಸಿಕತೆಯನ್ನು ಸಿದ್ಧಗೊಳಿಸುವುದು ಶಿಕ್ಷಕರ ಹಾಗೂ ಶಿಕ್ಷಣದ ಜವಾಬ್ದಾರಿ.

ಶಿಕ್ಷಣ ತಜ್ಞ ಬೆಂಜಮಿನ್ ಬ್ಲೂಮ್ ಬೋಧನೆಯ ಆರು ಉದ್ದೇಶಗಳನ್ನು ಗುರುತಿಸುತ್ತಾನೆ: ಜ್ಞಾನ, ಗ್ರಹಿಕೆ, ಆನ್ವಯಿಕತೆ, ವಿಶ್ಲೇಷಣೆ, ಸಂಶ್ಲೇಷಣೆ ಹಾಗೂ ಮೌಲ್ಯಮಾಪನ. ಮೊದಲನೇ ಹಂತ ವಿಷಯಗಳನ್ನು ತಿಳಿದುಕೊಳ್ಳುವುದು ಮತ್ತು ಅಗತ್ಯವಿರುವಲ್ಲಿ ನೆನಪಿಸಿಕೊಳ್ಳುವುದಾದರೆ, ಎರಡನೆಯ ಹಂತ ಪಡೆದ ಮಾಹಿತಿಗಳನ್ನು ಅರ್ಥೈಸಿಕೊಳ್ಳುವುದಾಗಿದೆ. ಮೂರನೇ ಹಂತ ನಿರ್ದಿಷ್ಟ ಸಮಸ್ಯೆಗೆ ಜ್ಞಾನವನ್ನು ಅನ್ವಯಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದಾದರೆ, ನಾಲ್ಕನೇ ಹಂತ ವಿವಿಧ ಪರಿಕಲ್ಪನೆಗಳನ್ನು ಪರಿಶೀಲಿಸಿ ಅವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವುದಾಗಿದೆ. ಐದನೇ ಹಂತದಲ್ಲಿ ಪರಿಕಲ್ಪನೆ ಅಥವಾ ವಿಚಾರಗಳ ಕುರಿತು ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾದರೆ ಕೊನೆಯ ಹಂತದಲ್ಲಿ ವಿದ್ಯಾರ್ಥಿಯೇ ಹೊಸ ಚಿಂತನೆಗಳನ್ನು ಸೃಜಿಸಲು ಸಮರ್ಥನಾಗಬೇಕಾಗುತ್ತದೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಮೊದಲನೇ ಹಂತಲ್ಲಿ ಆರಂಭವಾಗಿ ಅದರಲ್ಲೇ ಅಂತ್ಯ ಕಾಣುತ್ತಿರುವುದೇ ವಿದ್ಯಾರ್ಥಿಗಳು ನಂಬಿಕೊಂಡಿರುವ ಪುಸ್ತಕದ ಬದನೆಕಾಯಿಯ ಹಿಂದಿರುವ ರಹಸ್ಯ. ತೆರೆದ ಪುಸ್ತಕ ಪರೀಕ್ಷಾ ಪದ್ಧತಿಯಲ್ಲಿ ಇದಕ್ಕೇನಾದರೂ ಪರಿಹಾರ ದೊರೆತೀತೇ ಎಂಬುದು ಸದ್ಯದ ಪ್ರಶ್ನೆ.

ತೆರೆದ ಪುಸ್ತಕ ಪರೀಕ್ಷೆಯೆಂದರೆ ಪರೀಕ್ಷಾ ಕೊಠಡಿಯೊಳಗೆ ಸಿದ್ಧ ಉತ್ತರಗಳ ಗೈಡುಗಳನ್ನು ಒಯ್ದು ಉತ್ತರಗಳನ್ನು ನಕಲು ಮಾಡುವ ವಿಧಾನವೇನೂ ಅಲ್ಲ. ಪಠ್ಯಪುಸ್ತಕ, ಪರಾಮರ್ಶನ ಗ್ರಂಥ ಮತ್ತಿತರ ಪೂರ್ವನಿರ್ಧರಿತ ಸಾಮಗ್ರಿಗಳನ್ನು ಮಾತ್ರ ಒಳಗೆ ಒಯ್ಯಲು ಅವಕಾಶ ನೀಡಲಾಗುತ್ತದೆ. ಪ್ರಶ್ನೆಪತ್ರಿಕೆಗಳೂ ರೂಢಿಯಲ್ಲಿರುವಂತೆ 'ಎಂದರೇನು’, 'ವ್ಯಾಖ್ಯಾನಿಸಿ’, 'ಪಟ್ಟಿಮಾಡಿ’, 'ವಿವರಿಸಿ’ ಎಂಬಿತ್ಯಾದಿ ಪ್ರಶ್ನೆಗಳಿಗೆ ಸೀಮಿತವಾಗಿರುವುದಿಲ್ಲ. ಅಲ್ಲಿ ವಿಮರ್ಶೆ-ವಿಶ್ಲೇಷಣೆಗಳಿಗೆ ಆದ್ಯತೆ. ಆಗ ಮೌಲ್ಯಮಾಪನದ ವಿಧಾನವೂ ಬದಲಾಗುತ್ತದೆ. ಪದವಿ, ಸ್ನಾತಕೋತ್ತರ ಪದವಿ, ಕಾನೂನು, ವೈದ್ಯಕೀಯ, ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಲ್ಲಿ ಈ ಪದ್ಧತಿ ಸಾಧ್ಯವಾದೀತೇನೋ? ಆದರೆ ಪ್ರಾಥಮಿಕ ಅಥವಾ ಮಾಧ್ಯಮಿಕ ಶಾಲಾ ಹಂತದಲ್ಲಿ ಇದನ್ನು ಅನುಷ್ಠಾನಕ್ಕೆ ತರುವ ಮುನ್ನ ಸಾಕಷ್ಟು ಯೋಚಿಸಬೇಕಾಗುತ್ತದೆ.

ತೆರೆದ ಪುಸ್ತಕ ಪರೀಕ್ಷೆಗಳ ಪದ್ಧತಿ ಅಮೇರಿಕ, ಆಸ್ಟ್ರೇಲಿಯ, ಫಿನ್‌ಲ್ಯಾಂಡ್, ಕೆನಡಾ, ಜರ್ಮನಿ, ಸ್ವಿಡ್ಜರ್‌ಲ್ಯಾಂಡಿನಂತಹ ದೇಶಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಅಲ್ಲಿ ತೆರೆದ ಪುಸ್ತಕವೇನು, ಪ್ರಶ್ನೆಪತ್ರಿಕೆಯನ್ನು ಮನೆಗೇ ಒಯ್ದು ಪರೀಕ್ಷೆ ಬರೆಯುವ ಪದ್ಧತಿಯೂ ಯಶಸ್ವಿಯಾಗಿದೆ. ಎಂಬ ಕಾರಣಕ್ಕೆ ನಮ್ಮಲ್ಲೂ ಅದು ಯಶಸ್ವಿಯಾದೀತೇ? ಇದು ಕೇವಲ ಪರೀಕ್ಷೆಯ ಪ್ರಶ್ನೆ ಮಾತ್ರವಾಗಿದ್ದರೆ ಉತ್ತರಿಸುವುದು ಸುಲಭವಿತ್ತು. ಆದರೆ ನಮ್ಮ ಸಮಸ್ಯೆ ಪರೀಕ್ಷೆಗೆ ಮಾತ್ರ ಸಂಬಂಧಿಸಿದ್ದಲ್ಲ. ನಮ್ಮ ಶಿಕ್ಷಣ ವ್ಯವಸ್ಥೆ ಆಮೂಲಾಗ್ರ ಪರಿವರ್ತನೆಯನ್ನು ಬಯಸುತ್ತಿದೆ.

ಇಂದಿಗೂ ಬಹುತೇಕ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆ, ಪೀಠೋಪಕರಣ, ಬೋಧನೋಪಕರಣಗಳ ಕೊರತೆಯಿಂದ ಬಳಲುತ್ತಿವೆ. ಶಿಕ್ಷಕರನ್ನು ಪಾಠಮಾಡುವುದೊಂದನ್ನುಳಿದು ಇನ್ನೆಲ್ಲ ಕೆಲಸಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಯತಾರ್ಥವಾಗಿ ಅವರಿಗೆ ಮಕ್ಕಳೊಂದಿಗೆ ಬೆರೆಯುವುದಕ್ಕೆ, ಅವರು ಇಷ್ಟಪಡುವಂತೆ ಪಾಠಮಾಡುವುದಕ್ಕೆ ಸಮಯವೇ ಇಲ್ಲ. ಅದರ ಮೇಲೆ ಹೇಗಾದರೂ ಮಾಡಿ ನೂರಕ್ಕೆ ನೂರು ಫಲಿತಾಂಶ ಪಡೆಯುವ ಒತ್ತಡ. ಇದರ ನಡುವೆ ತೆರೆದ ಪುಸ್ತಕದ ಪರೀಕ್ಷೆಗೆ ಮಕ್ಕಳನ್ನು ಸಿದ್ಧಪಡಿಸುವ ಹೊಸ ಬಗೆಯ ಬೋಧನಾ ವಿಧಾನಕ್ಕೆ ಅವರು ಒಗ್ಗಿಕೊಳ್ಳುವುದೆಂತು? ಅದಕ್ಕೆ ತಕ್ಕುದಾದ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವುದಕ್ಕೆ ಎಷ್ಟು ಮಂದಿ ಶಿಕ್ಷಕರು ಸ್ವತಃ ಸಮರ್ಥರಿದ್ದಾರೆ?

ಇನ್ನೊಂದೆಡೆ, ಇಡೀ ಸಮಾಜ ಅಂಕ ಗಳಿಕೆಯ ಓಟದಲ್ಲಿ ನಿರತವಾಗಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಪಡೆವ ಅಂಕಗಳೇ ಮಕ್ಕಳ ಒಟ್ಟಾರೆ ಭವಿಷ್ಯದ ಅಡಿಗಲ್ಲುಗಳೆಂಬಂತೆ ಬಿಂಬಿಸಲಾಗುತ್ತಿದೆ. ನಿದ್ದೆ ಮಾಡುವ ನಾಲ್ಕೈದು ಗಂಟೆಗಳ ಹೊರತಾಗಿ ಉಳಿದೆಲ್ಲ ಸಮಯದಲ್ಲೂ ಬೆಳಗು, ಸಂಜೆ, ಮಳೆ, ಚಳಿಗಳೆಂಬ ವ್ಯತ್ಯಾಸ ಗೊತ್ತಾಗದಂತೆ ವಿದ್ಯಾರ್ಥಿಗಳನ್ನು ಟ್ಯೂಶನ್ ಗಿರಣಿಗಳಲ್ಲಿ ರುಬ್ಬಲಾಗುತ್ತಿದೆ. ನೂರಕ್ಕೆ ನೂರು ಅಂಕ ಗಳಿಸುವ ಹೊರತಾಗಿ ಅವರ ವಿದ್ಯಾರ್ಥಿ ಜೀವನಕ್ಕೆ ಇನ್ನೇನೂ ಗುರಿಗಳೇ ಇಲ್ಲ. ಇಂಥ ಮಕ್ಕಳಿಗೆ ಪುಸ್ತಕ ತೆರೆದರೂ ಅಷ್ಟೆ, ಮುಚ್ಚಿದರೂ ಅಷ್ಟೆ. ಪರೀಕ್ಷಾ ಭಯದಿಂದ ಎಷ್ಟು ವಿದ್ಯಾರ್ಥಿಗಳು ಈವರೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ, ಆದರೆ ಫಲಿತಾಂಶದ ಮತ್ತು ಅದರಿಂದ ಬರುವ ಪ್ರಕ್ರಿಯೆಯ ಭಯದಿಂದಾಗಿ ಈವರೆಗೆ ಪ್ರಾಣಕಳಕೊಂಡಿರುವ ಅಮಾಯಕ ಜೀವಗಳು ಸಾವಿರಾರು.

ಈ ಮೂಲಭೂತ ವ್ಯವಸ್ಥೆಯನ್ನು ಸರಿಪಡಿಸದೆ ಏಕಾಏಕಿ ತೆರೆದ ಪುಸ್ತಕ ಪರೀಕ್ಷೆಗಳನ್ನು ಜಾರಿಗೆ ತಂದು ಎಲ್ಲವನ್ನೂ ಬದಲಾಯಿಸಿಬಿಡುತ್ತೇವೆ ಎಂಬ ಯೋಚನೆ ಮೂರ್ಖತನದ್ದು. ಒಳಗೆ ಮುಳ್ಳನ್ನು ಉಳಿಸಿಕೊಂಡು ಹೊರಗಿನಿಂತ ಎಷ್ಟು ಮುಲಾಮು ಹಚ್ಚಿದರೇನು ಪ್ರಯೋಜನ?


ಬುಧವಾರ, ಡಿಸೆಂಬರ್ 19, 2018

ಒಂದೇ ಜಗತ್ತು: ಹಲವು ದೀಪಾವಳಿ

'ಹೊಸದಿಗಂತ' ದೀಪಾವಳಿ ವಿಶೇಷಾಂಕ 2018ರಲ್ಲಿ ಪ್ರಕಟವಾದ ಲೇಖನ

ಹೊಸದಿಗಂತ ದೀಪಾವಳಿ ವಿಶೇಷಾಂಕ 2018
ದೀಪಾವಳಿಯಷ್ಟು ವರ್ಣಮಯ ಹಬ್ಬ ಭಾರತದಲ್ಲಿ ಮತ್ತೊಂದು ಹೇಗೆ ಇಲ್ಲವೋ, ಅದರಷ್ಟು ವಿಸ್ತಾರವಾದ ಮಾನ್ಯತೆ ಪಡೆದ ಹಬ್ಬವೂ ಜಗತ್ತಿನಲ್ಲಿ ಇನ್ನೊಂದಿಲ್ಲ ಎನಿಸುತ್ತದೆ. ಅಷ್ಟರಮಟ್ಟಿಗೆ ದೀಪಾವಳಿ ಸರ್ವಮಾನ್ಯ, ವಿಶ್ವಮಾನ್ಯ. ಫಿಜಿ, ನೇಪಾಳ, ಮಾರಿಷಸ್, ಮಯನ್ಮಾರ್, ಸಿಂಗಾಪುರ, ಶ್ರೀಲಂಕಾ, ಟ್ರಿನಿಡಾಡ್, ಇಂಗ್ಲೆಂಡ್, ಇಂಡೋನೇಷ್ಯಾ, ಜಪಾನ್, ಥಾಯ್‌ಲ್ಯಾಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯ, ಅಮೇರಿಕಗಳಲ್ಲೆಲ್ಲ ದೀಪಾವಳಿ ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಈ ದೇಶಗಳ ಪೈಕಿ ಬಹುತೇಕ ಕಡೆ ದೀಪಾವಳಿ ಆಚರಣೆಗೆ ಸಾರ್ವಜನಿಕ ರಜೆಯನ್ನೂ ಘೋಷಿಸಲಾಗುತ್ತದೆ ಎಂಬುದು ಗಮನಾರ್ಹ.

ದೀಪಗಳನ್ನು ಬೆಳಗಿ ಕತ್ತಲೆಯ ಎದುರು ಬೆಳಕಿನ ವಿಜಯವನ್ನು ಸಾರುವ ದೀಪಾವಳಿ ಈ ವೈಶಿಷ್ಟ್ಯಪೂರ್ಣ ಸಂದೇಶದಿಂದಲೇ ಜಗತ್ತಿನ ಗಮನ ಸೆಳೆದಿದೆ. ಇನ್ನೊಂದೆಡೆ ಜಗತ್ತಿನ ವಿವಿಧ ಭಾಗಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಭಾರತೀಯರು ತಮ್ಮ ಪ್ರಭಾವಳಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಸಂಕೇತವೂ ಇದೆಂದು ಭಾವಿಸಬಹುದು. ಜಗತ್ತಿನ ಯಾವ ಭಾಗಕ್ಕೆ ದೀಪಾವಳಿ ಹೋದರೂ ಅದರ ಮೂಲ ಸ್ವರೂಪ ಮತ್ತು ಅದು ನೀಡುವ ಸಂದೇಶ ಬದಲಾಗಲು ಸಾಧ್ಯವಿಲ್ಲ ಅಲ್ಲವೇ?

2009ರಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಖುದ್ದು ಶ್ವೇತಭವನದಲ್ಲಿ ಹಣತೆ ಬೆಳಗುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು ಮತ್ತು ಆ ಮೂಲಕ ವಿಶ್ವದ ಗಮನ ಸೆಳೆದರು. ಪ್ರಪಂಚದ ಬೇರೆ ಬೇರೆ ದೇಶಗಳು ದೀಪಾವಳಿಯನ್ನು ಆಚರಿಸುವ ಬಗೆಯೇನು ಎಂಬುದನ್ನು ಮುಂದೆ ನೋಡೋಣ:

ನೇಪಾಳ
2008ರವರೆಗೂ ಪ್ರಪಂಚದ ಏಕೈಕ ಹಿಂದೂ ರಾಷ್ಟ್ರವೆಂಬ ಅಧಿಕೃತ ಮನ್ನಣೆಗೆ ಪಾತ್ರವಾಗಿದ್ದ ನೇಪಾಳದಲ್ಲಿ ದೀಪಾವಳಿ ಬಹುಸಂಭ್ರಮದ ಹಬ್ಬ. ಹಿಮಾಲಯದ ತಪ್ಪಲಿನಲ್ಲಿ ತಂಪಾಗಿರುವ ನೇಪಾಳಿಯನ್ನರು ಪಶುಪತಿನಾಥನ ಆರಾಧಕರು. ಅವರ ದೀಪಾವಳಿ ಆಚರಣೆ ಕುತೂಹಲಕರವೂ ವಿಶಿಷ್ಟವೂ ಆಗಿದೆ.  ನೇಪಾಳದಲ್ಲಿ ತಿಹಾರ್ ಎಂದು ಕರೆಯಲ್ಪಡುವ ದೀಪಾವಳಿಯು ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಮೈತ್ರಿಯ ಸುಂದರ ಸಂಕೇತದಂತಿದೆ.  ದೀಪಾವಳಿಯ ಮೊದಲನೆಯ ದಿನ 'ಕಾಗ್ ತಿಹಾರ್’. ಸಾಮಾನ್ಯ ದಿನಗಳಲ್ಲಿ ಜನರಿಂದ ಅಶುಭವೆಂದು ಕರೆಸಿಕೊಳ್ಳುವ ಕಾಗೆಗಳಿಗೆ ಅಂದು ಅಗ್ರಪೂಜೆ. ಕೆಟ್ಟ ಸುದ್ದಿಗಳನ್ನು ತರಬೇಡಿರಪ್ಪಾ ಎಂದು ಕೈಮುಗಿದು ಕಾಗೆಗಳಿಗೆ ಸಿಹಿತಿಂಡಿ ಬಡಿಸುವುದು ಅಂದಿನ ರೂಢಿ. ಎರಡನೆಯ ದಿನ 'ಕುಕುರ್ ತಿಹಾರ್’. ಅಂದು ನಾಯಿಗಳಿಗೆ ಸಿಹಿಯೂಟ. ಮೂರನೆಯ ದಿನ 'ಗಾಯ್ ತಿಹಾರ್’. ಗೋಪೂಜೆ ಮತ್ತು ಲಕ್ಷ್ಮೀಪೂಜೆ ಅಂದಿನ ವಿಶೇಷ. ನಾಲ್ಕನೆಯ ದಿನ ಗೋರು ತಿಹಾರ್ ಅಥವಾ ಎತ್ತುಗಳಿಗೆ ಪೂಜೆ. ಕೆಲವು ಪಂಗಡಗಳು ಇದನ್ನು ಗೋವರ್ಧನ ಪೂಜೆ ಎಂದು ಅಚರಿಸುವುದೂ ಇದೆ. ಐದನೆಯ ದಿನ 'ಭಾಯಿ ಟಿಕಾ’ ಅಂದರೆ ಸೋದರ-ಸೋದರಿಯರು ಒಂದೆಡೆ ಸೇರಿ ಸಂಭ್ರಮಿಸುವ ದಿನ. ಹೆಣ್ಣುಮಕ್ಕಳು ತಮ್ಮ ಅಣ್ಣತಮ್ಮಂದಿರ ಮನೆಗಳಿಗೆ ತೆರಳಿ ಹಣೆಗೆ ತಿಲಕ ಹಚ್ಚಿ ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವುದು ಅಂದಿನ ವಿಶೇಷ. ಹಬ್ಬದ ದಿನಗಳಲ್ಲಿ ಸ್ನೇಹಿತರು ಅಲ್ಲಲ್ಲಿ ಸೇರಿ ಜೂಜಾಡುವುದೂ ಇದೆ. ದೀಪಾವಳಿ ಸಮಯದಲ್ಲಿ ಜೂಜಾಡುವುದು ನೇಪಾಳದಲ್ಲಿ ಕಾನೂನುಬಾಹಿರ ಅಲ್ಲ.

ಮಾರಿಷಸ್
ಪ್ರಕೃತಿಯ ಸೌಂದರ್ಯದ ಮಡಿಲಂತಿರುವ ಮಾರಿಷಸ್ ಒಂದು ಬಹುಧರ್ಮೀಯ, ಬಹುಸಂಸ್ಕೃತಿಯ, ಬಹುಭಾಷಿಕ ನಾಡು. ಆಫ್ರಿಕಾದ ಆಗ್ನೇಯ ಕಡಲ ತೀರದಿಂದ 2000 ಕಿ.ಮೀ. ದೂರದಲ್ಲಿರುವ ಮಾರಿಷಸ್ ಜೀವವೈವಿಧ್ಯಕ್ಕೆ ಹೆಸರಾದ ದೇಶವೂ ಹೌದು. ಆಫ್ರಿಕಾದಲ್ಲೇ ಅತಿಹೆಚ್ಚು ಹಿಂದೂ ಜನಸಂಖ್ಯೆಯನ್ನು ಹೊಂದಿರುವ ಈ ದ್ವೀಪರಾಷ್ಟ್ರದಲ್ಲಿ ಧಾರ್ಮಿಕ ಶ್ರದ್ಧಾಳುಗಳು ಹೆಚ್ಚು. ಅದಕ್ಕೇ ಮಾರಿಷಸ್‌ನಲ್ಲಿ ದೀಪಾವಳಿ ವಿಶೇಷ ಹಬ್ಬ. ಗಣಪತಿ ಹಾಗೂ ಲಕ್ಷ್ಮಿಗೆ ವಿಶಿಷ್ಟ ಪೂಜೆ ಸಲ್ಲಿಸುವ ಅಲ್ಲಿನ ಮಂದಿ ಮನೆ, ದೇಗುಲಗಳನ್ನು ವಿಶಿಷ್ಟವಾಗಿ ಅಲಂಕರಿಸುವುದರಲ್ಲೂ ಎತ್ತಿದ ಕೈ.

ದೀಪಾವಳಿಯ ಸಂದರ್ಭ ಹೊಸ ಉಡುಗೆ-ತೊಡುಗೆ, ಒಡವೆಗಳನ್ನು ಖರೀದಿಸುವುದೂ ಇಲ್ಲಿನ ವಾಡಿಕೆ. ಮನೆಗೆ ಸಂಪತ್ತನ್ನು ಬರಮಾಡಿಕೊಳ್ಳುವ ಈ ಸಾಂಕೇತಿಕ ದಿನಕ್ಕೆ ಮಾರಿಷಸ್‌ನಲ್ಲಿ 'ಧಂತೇರ’ ಎಂದು ಹೆಸರು. ದೀಪಾವಳಿಯ ಕೊನೆಯ ದಿನದಂದು ಸೋದರ ಸೋದರಿಯರು ಒಂದೆಡೆ ಸೇರಿ ಸಂಭ್ರಮಿಸುವ ಹಾಗೂ ಸ್ನೇಹಿತರು ಜೂಜಾಡುವ ಸಂಪ್ರದಾಯ ಇಲ್ಲಿಯೂ ಇದೆ. ಆದರೆ ಈ ಜೂಜಾಟದ ಹಿಂದೆ ಶಿವ-ಪಾರ್ವತಿಯರ ಪಗಡೆಯಾಟದ ಕಥೆಯಿದೆ. ದೀಪಾವಳಿಯಂದು ಪಗಡೆ ಆಡುವವರನ್ನು ಅದೃಷ್ಟ ಹುಡುಕಿಕೊಂಡು ಬರಲಿ ಎಂದು ಪಾರ್ವತಿ ಹರಸುತ್ತಾಳೆಂಬುದು ಜನಪದರ ನಂಬಿಕೆ.

ಫಿಜಿ
ದಕ್ಷಿಣ ಪೆಸಿಫಿಕ್‌ನಲ್ಲಿರುವ ಫಿಜಿ ಮುನ್ನೂರಕ್ಕಿಂತಲೂ ಹೆಚ್ಚು ಪುಟ್ಟ ದ್ವೀಪಗಳ ಒಂದು ಸಮೂಹ. ಮನೋಹರ ಕಡಲ ಕಿನಾರೆಗಳು ಹಾಗೂ ಹವಳದ ದಂಡೆಗಳಿಂದ ಕೂಡಿರುವ ಫಿಜಿ ಶ್ರೀಮಂತ ದೇಶವೂ ಹೌದು. ಇಲ್ಲಿನ ಜನಸಂಖ್ಯೆಯ ಶೇ. 28 ಹಿಂದೂಗಳು ಎಂಬುದು ಗಮನಾರ್ಹ ಮತ್ತು ಅದಕ್ಕಾಗಿಯೇ ಇಲ್ಲಿ ದೀಪಾವಳಿ ಒಂದು ವಿಶೇಷ ಆಚರಣೆ. ಇಷ್ಟೊಂದು ಸಂಖ್ಯೆಯ ಭಾರತೀಯರು ಫಿಜಿಯಲ್ಲಿ ಇರುವುದಕ್ಕೆ ಕಾರಣ 19ನೇ ಶತಮಾನದಲ್ಲಿ ಬ್ರಿಟಿಷರು ತೋಟದ ಕೆಲಸಕ್ಕಾಗಿ ಭಾರತೀಯರದನ್ನು ಸಾವಿರಾರು ಸಂಖ್ಯೆಯಲ್ಲಿ ಅಲ್ಲಿಗೆ ಕೊಂಡೊಯ್ದದ್ದು. ದೀಪಗಳ ಅಲಂಕಾರ, ಭೂರಿ ಭೋಜನ, ಪಟಾಕಿಗಳ ಗಮ್ಮತ್ತು ಅಲ್ಲದೆ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಫಿಜಿಯ ವೈಶಿಷ್ಟ್ಯತೆ.

ಮಲೇಷ್ಯಾ
ಸುಮಾರು ೪೦ ಲಕ್ಷ ಅನಿವಾಸಿ ಭಾರತೀಯರು ನೆಲೆಸಿರುವ ಮಲೇಷ್ಯಾ ಅತ್ಯುತ್ತಮ ಪ್ರವಾಸೀ ತಾಣವೂ ಹೌದು. ಇಲ್ಲಿ ದೀಪಾವಳಿ ಕುಟುಂಬ ಮರುಮಿಲನಗಳಿಗೆ ಹೆಸರುವಾಸಿ. ವರ್ಷಕ್ಕೊಮ್ಮೆಯಾದರೂ ದೇಶದ ಬೇರೆಬೇರೆ ಕಡೆಯ ಬಂಧುಬಳಗ, ಸ್ನೇಹಿತರು ಒಂದೆಡೆ ಸೇರಿ ದೀಪ ಹಚ್ಚಿ ಪಟಾಕಿ ಸಿಡಿಸಿ ಸಿಹಿಯುಂಡು ಖುಷಿಪಡುವುದಕ್ಕೆ ದೀಪಾವಳಿ ಒಂದು ಒಳ್ಳೆಯ ಕಾರಣ. ಮಲೇಷ್ಯಾದ 'ಲಿಟಲ್ ಇಂಡಿಯಾ’ವಂತೂ ದೀಪಾವಳಿ ವೇಳೆಗೆ ಸಾಕ್ಷಾತ್ ಭಾರತವಾಗಿಯೇ ಮಾರ್ಪಟ್ಟು ಆಕರ್ಷಣೆಯ ಕೇಂದ್ರ ಬಿಂದುವಾಗುತ್ತದೆ.

ಶ್ರೀಲಂಕಾ
ಐತಿಹಾಸಿಕವಾಗಿಯೂ ಸಾಂಸ್ಕೃತಿಕವಾಗಿಯೂ ಶ್ರೀಲಂಕಾ ಭಾರತ ಉಪಖಂಡದ ಒಂದು ಭಾಗವೇ. ಅಲ್ಲಿ ಬೌದ್ಧರನ್ನು ಬಿಟ್ಟರೆ ಹಿಂದೂಗಳೇ ಬಹುಸಂಖ್ಯಾತರು (ಜನಸಂಖ್ಯೆಯ ಶೇ. 13 ಭಾಗ). ಶ್ರೀರಾಮ ರಾವಣನನ್ನು ವಧಿಸಿ ಸೀತಾಲಕ್ಷ್ಮಣ ಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ದಿನವೇ ದೀಪಾವಳಿ ಆಗಿರುವುದರಿಂದ ಲಂಕೆಗೆ ದೀಪಾವಳಿ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಇದೆ. ತಮಿಳರು ಹೆಚ್ಚಾಗಿ ನೆಲೆಸಿರುವ ಶ್ರೀಲಂಕಾದಲ್ಲಿ ಬಹುತೇಕ ಭಾರತದಲ್ಲಿ ನಡೆಯುವಂತೆಯೇ ದೀಪಾವಳಿ ಆಚರಣೆ ನಡೆಯುತ್ತದೆ.

ಅಮೇರಿಕ
ಐದೂವರೆ ಲಕ್ಷ ಹಿಂದೂಗಳು ಸೇರಿದಂತೆ 44 ಲಕ್ಷ ಅನಿವಾಸಿ ಭಾರತೀಯರಿರುವ ಅಮೇರಿಕದಲ್ಲಿ ದೀಪಾವಳಿ ಒಂದು ಅಧಿಕೃತ ಹಬ್ಬವೆನಿಸಿದ್ದು ಹೊಸ ಸಹಸ್ರಮಾನದಲ್ಲಿ. 2003ರಲ್ಲಿ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಶ್ವೇತಭವನದಲ್ಲಿ ದೀಪಾವಳಿ ಆಚರಣೆಗೆ ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಶ್ವೇತಭವನದಲ್ಲಿ ಅದೊಂದು ವಾರ್ಷಿಕ ಸಂಪ್ರದಾಯವೇ ಆಯಿತು. 2007ರಲ್ಲಿ ಅಮೇರಿಕದ ಸಂಸತ್ತು ದೀಪಾವಳಿಯ ಧಾರ್ಮಿಕ ಮತ್ತು ಐತಿಹಾಸಿಕ ಮಹತ್ವವನ್ನು ಸರ್ವಾನುಮತದಿಂದ ಅಂಗೀಕರಿಸಿತು. 2009ರಲ್ಲಿ ಖುದ್ದು ಬರಾಕ್ ಒಬಾಮ ಅವರೇ ವೇದಘೋಷಗಳ ನಡುವೆ ಸಪತ್ನೀಕರಾಗಿ ಶ್ವೇತಭವನದಲ್ಲಿ ದೀಪಾವಳಿಯ ಹಣತೆ ಬೆಳಗಿ ದೀಪಾವಳಿ ಆಚರಿಸಿದ ಮೊದಲ ಅಮೇರಿಕದ ಅಧ್ಯಕ್ಷರೆನಿಸಿದರು. 2016ರಲ್ಲಿ ಅಮೇರಿಕದ ಅಂಚೆ ಇಲಾಖೆಯು ಹಣತೆಯ ಚಿತ್ರವುಳ್ಳ ಅಂಚೆಚೀಟಿ ಬಿಡುಗಡೆ ಮಾಡಿ ಅಲ್ಲಿನ ಭಾರತೀಯರ ಸಂಭ್ರಮಕ್ಕೆ ಇನ್ನಷ್ಟು ಗರಿ ಮೂಡಿಸಿತು.

ಅಮೇರಿಕದ ಡ್ಯೂಕ್, ಪ್ರಿನ್ಸ್‌ಟನ್, ಹೋವಾರ್ಡ್, ರಗ್ಟರ್ಸ್, ಕಾರ್ನೆಗಿ ವಿಶ್ವವಿದ್ಯಾನಿಲಯಗಳಲ್ಲೂ ಭಾರತೀಯ ವಿದ್ಯಾರ್ಥಿಗಳು ವಿಶೇಷವಾಗಿ ದೀಪಾವಳಿ ಆಚರಿಸುತ್ತಾರೆ. ಅಮೇರಿಕದಲ್ಲಿರುವ ಸಿಖ್ಖರಿಗೂ ದೀಪಾವಳಿ ವಿಶೇಷ ಹಬ್ಬ. ಆದರೆ ಅವರ ದೀಪಾವಳಿಯ ಹಿನ್ನೆಲೆ ಬೇರೆ. ಜಹಾಂಗೀರನ ಸೆರೆಯಿಂದ ಹೊರಬಂದ ಗುರು ಹರಗೋವಿಂದರ ಸ್ಮರಣೆಗೆ ಅಮೃತಸರದ ಸ್ವರ್ಣಮಂದಿರ ಹೇಗೆ ಲಕಲಕನೆ ಹೊಳೆಯುತ್ತದೋ ಹಾಗೆಯೇ ಅಮೇರಿಕದಲ್ಲಿರುವ ಗುರುದ್ವಾರಗಳೂ ದೀಪಾವಳಿಯಂದು ಝಗಮಗಿಸುತ್ತವೆ.

ಮಯನ್ಮಾರ್
ಶೇ. 88ರಷ್ಟು ಬೌದ್ಧಧರ್ಮೀಯರೇ ಇದ್ದರೂ ಮಯನ್ಮಾರ್ ಒಂದು ವೈವಿಧ್ಯಮಯ ತಾಣ. ಒಂದು ಕಾಲಕ್ಕೆ ಹಿಂದೂಗಳೇ ಬಹುಸಂಖ್ಯಾತರಾಗಿದ್ದ ದೇಶವೂ ಹೌದು. ಆಗ್ನೇಯ ಏಷ್ಯಾದಲ್ಲೇ ಅತಿ ಹಿಂದುಳಿದ ದೇಶಗಳಲ್ಲೊಂದು ಎಂದು ಕರೆಯಲ್ಪಟ್ಟರೂ ಮಯನ್ಮಾರ್ ಅಥವಾ ಬರ್ಮಾಕ್ಕೆ ದೀಪಾವಳಿ ಆಚರಣೆಯಲ್ಲಿ ಬಡತನವಿಲ್ಲ. ಅಲ್ಲಿ ನೆಲೆಸಿರುವ ಭಾರತೀಯರಿಗೆ ದೀಪಾವಳಿ ಅಭ್ಯುದಯದ ಸಂಕೇತ.

ಇಂಡೋನೇಷ್ಯಾ
ಜಗತ್ತಿನ ಅತಿದೊಡ್ಡ ದ್ವೀಪರಾಷ್ಟ್ರ ಇಂಡೋನೇಷ್ಯಾದಲ್ಲಿ ಮುಸ್ಲಿಮರು ಬಹುಸಂಖ್ಯಾರು (ಶೇ. 87). ಅಲ್ಲಿನ ಬಾಲಿ ದ್ವೀಪದಲ್ಲಿ ದೀಪಾವಳಿ ಆಚರಣೆ ಹೆಚ್ಚು ಅದ್ದೂರಿಯಾಗಿ ನಡೆಯುತ್ತದೆ. ಅಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದೂ ಇದಕ್ಕೊಂದು ಕಾರಣ.

ಟ್ರಿನಿಡಾಡ್ & ಟೊಬಾಗೊ
ಕೆರಿಬಿಯನ್ ಪ್ರದೇಶದಲ್ಲಿ ಬರುವ ಟ್ರಿನಿಡಾಡ್ & ಟೊಬಾಗೊ ವೆಸ್ಟ್ ಇಂಡೀಸ್‌ನ ಪ್ರಸಿದ್ಧ ಅವಳಿ ದ್ವೀಪಗಳು. ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಇವು ದೀಪಾವಳಿ ಆಚರಣೆಗೂ ಹೆಸರುವಾಸಿ. ಜನಸಂಖ್ಯೆಯ ಶೇ. 18ರಷ್ಟು ಹಿಂದೂಗಳು ಇಲ್ಲಿ ನೆಲೆಸಿರುವುದರಿಂದ ದೀಪವಳಿಗೆ ಸಹಜವಾಗಿಯೇ ಹೆಚ್ಚಿನ ಮಾನ್ಯತೆ ದೊರಕಿದೆ.

ಸಿಂಗಾಪುರ
ಜಗತ್ತಿನ ಶ್ರೀಮಂತ ಹಾಗೂ ತುಟ್ಟಿ ದೇಶಗಳಲ್ಲೊಂದಾಗಿರುವ ಸಿಂಗಾಪುರದ ಭಾರತೀಯರಲ್ಲಿ ತಮಿಳರು ಹೆಚ್ಚು. ಇಲ್ಲಿ ಸುಮಾರು 8.5 ಲಕ್ಷ ಅನಿವಾಸಿ ಭಾರತೀಯರು ಮತ್ತು ಭಾರತ ಮೂಲದ ಜನರಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಚಿನ್ನಾಭರಣಗಳ ಖರೀದಿ ಭರಾಟೆ ಇಲ್ಲಿನ ವಿಶೇಷತೆ.

ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾದ ನತಾಲ್ ಮತ್ತು ಟ್ರಾನ್ಸ್‌ವಾಲ್‌ನಲ್ಲಿ ಹಿಂದೂಗಳು ಅಧಿಕ. ಉತ್ತರ ಪ್ರದೇಶ, ಗುಜರಾತ್ ಹಾಗೂ ತಮಿಳುನಾಡಿನಿಂದ ವಲಸೆ ಹೋದ ಕುಟುಂಬಗಳು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ಮಹಾತ್ಮ ಗಾಂಧಿಯವರ ಚಳವಳಿಗಳ ಕಾರಣದಿಂದ ಆಫ್ರಿಕಾದಲ್ಲಿ ಭಾರತೀಯರಿಂಗೆ ಒಂದಿಷ್ಟು ಹೆಚ್ಚಿನದೇ ಅಸ್ಮಿತೆ ಇದೆ. ಅಲ್ಲಿ ಸುಮಾರು 13 ಲಕ್ಷ ಭಾರತೀಯರು ನೆಲೆಸಿದ್ದಾರೆ. ಭಾರತೀಯರು ಇರುವ ಪ್ರದೇಶಗಳಲ್ಲೆಲ್ಲ ದೀಪಾವಳಿ ವೈಭವದಿಂದ ನಡೆಯುತ್ತದೆ. ಕೀನ್ಯಾ, ತಾಂಜಾನಿಯ ಹಾಗೂ ಉಗಾಂಡದಂತಹ ಆಫ್ರಿಕಾದ ಇತರ ದೇಶಗಳಲ್ಲೂ ದೀಪಾವಳಿ ಆಚರಣೆ ಇದೆ.

ಆಸ್ಟ್ರೇಲಿಯ
ಸುಮಾರು 4.68 ಲಕ್ಷ ಭಾರತೀಯರು ಹಾಗೂ ಭಾರತೀಯ ಸಂಜಾತರು ಇರುವ ಆಸ್ಟ್ರೇಲಿಯ ದೀಪಾವಳಿಯನ್ನು ಸಂಭ್ರಮದಿಂದ ಸ್ವಾಗತಿಸುತ್ತದೆ. ಮೆಲ್ಬರ್ನ್, ಸಿಡ್ನಿ, ಕ್ಯಾನ್ಬೆರ, ಅಡಿಲೇಡ್, ಪರ್ತ್ ಹಾಗೂ ಬ್ರಿಸ್ಬೇನ್ ಮಹಾನಗರಗಳಲ್ಲಿ ದೀಪಾವಳಿಯ ಉತ್ಸಾಹ ಹೆಚ್ಚು. 19ನೇ ಶತಮಾನದಲ್ಲಿ ಬ್ರಿಟಿಷರು ತಮ್ಮ ವಸಾಹತುಗಳ ಹತ್ತಿ ಮತ್ತು ಕಬ್ಬಿನ ತೋಟಗಳಿಗೆ ಕಾರ್ಮಿಕರನ್ನಾಗಿ ಭಾರತೀಯರನ್ನು ಅಲ್ಲಿಗೆ ಒಯ್ದ ಪರಿಣಾಮವಾಗಿ ಆಸ್ಟ್ರೇಲಿಯದೊಂದಿಗೆ ನಮ್ಮವರ ಬಾಂಧವ್ಯ ಇನ್ನೂ ಉಳಿದುಕೊಂಡಿದೆ. ಭಾರತೀಯರಲ್ಲದೆ ಶ್ರೀಲಂಕಾ, ಫಿಜಿ, ಮಲೇಷ್ಯಾ, ಸಿಂಗಾಪುರ, ನೇಪಾಳ ಹಾಗೂ ಬಾಂಗ್ಲಾದಿಂದ ಬಂದಿರುವ ಹಿಂದೂಗಳು ಇಲ್ಲಿ ದೀಪಾವಳಿ ಆಚರಣೆಗೆ ಜತೆಯಾಗುತ್ತಾರೆ. ಸಿಡ್ನಿಯಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂ ದೇವಾಲಯಗಳಿವೆ.

ಥಾಯ್ಲಂಡ್
ಶೇ. ೯೫ರಷ್ಟು ಬೌದ್ಧಧರ್ಮೀಯರು ಇರುವ ಥಾಯ್ಲಂಡ್ನಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ಆದರೆ ದೀಪಾವಳಿ ಅಲ್ಲಿ ಸಹಜ ಸುಂದರ ಸಂಭ್ರಮದಿಂದಲೇ ಆಚರಿಸಲ್ಪಡುತ್ತದೆ. ಅಲ್ಲಿ ದೀಪಾವಳಿಗೆ 'ಲಾಮ್ ಕ್ರಿಯೋನ್’ ಎಂದು ಹೆಸರು. ದೀಪಾವಳಿ ಆಚರಣೆಗೆ ಇಲ್ಲಿ ಸಿಖ್ ಧರ್ಮೀಯರೂ ಜತೆಯಾಗುತ್ತಾರೆ. ಬಾಳೆ ಎಲೆಯಿಂದ ಮಾಡಿದ ದೀಪಗಳನ್ನು ಹಚ್ಚಿ ನದಿಗಳಲ್ಲಿ ತೇಲಿ ಬಿಡುವುದು ದೀಪಾವಳಿ ದಿನಗಳಲ್ಲಿ ಥಾಲಂಡ್‌ನಲ್ಲಿ ಕಂಡು ಬರುವ ಮನೋಹರ ದೃಶ್ಯ.

ಜಪಾನ್
ಪಾರಂಪರಿಕ ತಾಣಗಳು, ಆತ್ಮರಕ್ಷಣಾ ಕಲೆಗಳು, ಸಂಶೋಧನೆ ಹಾಗೂ ಸ್ವಾದಿಷ್ಟ ಆಹಾರಗಳಿಗೆ ಹೆಸರಾದ ಪೂರ್ವ ಏಷ್ಯಾದ ದ್ವೀಪರಾಷ್ಟ್ರ ಜಪಾನ್ ದೀಪಾವಳಿಯನ್ನೂ ಪ್ರೀತಿಯಿಂದ ಆಚರಿಸುತ್ತದೆ. ಮೊನ್ನೆ ಅಕ್ಟೋಬರ್ ಕೊನೆಯ ವಾರದಲ್ಲಿ ಜಪಾನಿಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಟೋಕಿಯೋದಲ್ಲಿ ಭಾರತೀಯರೊಂದಿಗೆ ಮಾತನಾಡುತ್ತಾ ದೀಪಾವಳಿ ಹಣತೆಗಳಂತೆ ನೀವು ಭಾರತದ ಬೆಳಕನ್ನು ಜಪಾನ್ ಹಾಗೂ ಜಗತ್ತಿನೆಲ್ಲೆಡೆ ಹರಡುತ್ತಿದ್ದೀರಿ. ನಿಮಗೆ ನನ್ನ ಶುಭಾಶಯ ಮತ್ತು ಮೆಚ್ಚುಗೆಗಳು ಎಂದು ಹೇಳಿರುವುದು ಸ್ಮರಣೀಯ.