ಶುಕ್ರವಾರ, ಸೆಪ್ಟೆಂಬರ್ 6, 2019

ಗುರಿಯಿಲ್ಲದ ಬದುಕು ಹಾಯಿ ಇಲ್ಲದ ದೋಣಿ

ಆಗಸ್ಟ್ 31- ಸೆಪ್ಟೆಂಬರ್ 6, 2019ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ.

ಓರಗೆಯ ಮಕ್ಕಳು ಚಿನ್ನಿದಾಂಡು ಆಡುತ್ತಿದ್ದರೆ ಇವನೊಬ್ಬ ಅಂಕೆಸಂಖ್ಯೆಗಳೊಂದಿಗೆ ಆಟವಾಡುತ್ತಿದ್ದ. ದಿನಕ್ಕೆ ಒಂದು ಹೊತ್ತು ಹೊಟ್ಟೆ ತುಂಬ ಉಣ್ಣಲಾಗದ ಕಡುಬಡತನವಿದ್ದರೂ ತಲೆಯೊಳಗೆ ಬಂಗಾರದ ಗಣಿಯಿತ್ತು. ಕೂತಲ್ಲಿ ನಿಂತಲ್ಲಿ ನಡೆದಲ್ಲಿ ಗಣಿತಶಾಸ್ತ್ರೀಯ ಸೂತ್ರಗಳು ಕಣ್ಣ ಮುಂದೆ ತಕತಕನೆ ಕುಣಿಯುತ್ತಿದ್ದವು. ಇನ್ನೂ ಹನ್ನೊಂದರ ಹುಡುಗ ಯಾರೋ ಹರಿದೆಸೆದ ಬಿಳಿ ಹಾಳೆಗಳ ಮೇಲೆ ಮನಸ್ಸಿಗೆ ಬಂದ ಬೀಜಗಣಿತದ ಸಮೀಕರಣಗಳನ್ನು ಗೀಚುತ್ತಿದ್ದರೆ ಕಾಲೇಜು ಪ್ರೊಫೆಸರುಗಳಿಗೂ ಅರಗಿಸಿಕೊಳ್ಳಲಾಗದ ವಿಸ್ಮಯ.

ಆತ ಜಗತ್ತು ಕಂಡ ಶ್ರೇಷ್ಠ ಗಣಿತಶಾಸ್ತ್ರಜ್ಞರಲ್ಲಿ ಒಬ್ಬರಾದ ಶ್ರೀನಿವಾಸ ರಾಮಾನುಜನ್. ಅವರು ಬರೆದಿಟ್ಟಿದ್ದ ಗಣಿತದ ಸಮೀಕರಣಗಳನ್ನು ಕಂಡು ವಿಶ್ವವಿಖ್ಯಾತ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರೇ ಬೆಚ್ಚಿಬಿದ್ದಿದ್ದರು. ‘ಸರಿಯಾದ ಕಾಲೇಜು ಶಿಕ್ಷಣವೇ ಆಗಿಲ್ಲ ನಿನಗೆ. 'ಯೂನಿವರ್ಸಿಟಿ ಡಿಗ್ರಿಯೂ ಇಲ್ಲ. ಅತ್ಯಂತ ಕಠಿಣ ಸಮೀಕರಣಗಳನ್ನೆಲ್ಲ ಬಿಡಿಸಿದ್ದೀಯ. ಅದು ಹೇಗೆ? ಉತ್ತರ ಎಲ್ಲಿಂದ ಬಂತು?’ ಪ್ರೊ. ಹಾರ್ಡಿ ಕೇಳುತ್ತಿದ್ದರೆ ರಾಮಾನುಜನ್ ಉತ್ತರ: ‘ಗೊತ್ತಿಲ್ಲ ಸರ್. ನನ್ನ ಮನಸ್ಸಿಗೆ ಹೊಳೆಯಿತು. ಬರೆದಿದ್ದೇನೆ ಅಷ್ಟೇ.’

ಇವನ್ನೆಲ್ಲ ನಿಜಕ್ಕೂ ಈ ಹುಡುಗನೇ ಬರೆದನಾ ಎಂದು ಅವರೆಲ್ಲ ತಲೆಕೆಡಿಸಿಕೊಳ್ಳುವಷ್ಟರಮಟ್ಟಿನ ಅಪೂರ್ವ ಸಂಶೋಧನೆಗಳನ್ನು ರಾಮಾನುಜನ್ ಮಾಡಿದ್ದರು. ಕೊನೆಗೊಂದು ದಿನ ಲಂಡನ್‍ನ ವಿಶ್ವವಿಖ್ಯಾತ ರಾಯಲ್ ಸೊಸೈಟಿ ತನ್ನೆಲ್ಲ ನಿಯಮಗಳನ್ನು ಸಡಿಲಿಸಿ 30ರ ತರುಣ ರಾಮಾನುಜರನ್ನು ತನ್ನ ಫೆಲೋ ಎಂದು ಘೋಷಿಸಿತು. ಅವರು ಬರೆದಿಟ್ಟದ್ದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಇನ್ನೂ ನಮ್ಮ ಗಣಿತಲೋಕಕ್ಕೆ ಸಾಧ್ಯವಾಗಿಲ್ಲ. ಹಿ ವಾಸ್ ಎ ಜೀನಿಯಸ್!

ದೊಡ್ಡದೊಂದು ಗುರಿ, ಯಾರಿಂದಲೂ ತಡೆಯಲಾಗದ ಮಹತ್ವಾಕಾಂಕ್ಷೆ- ಇವೆರಡೂ ಇದ್ದರೆ ಮನುಷ್ಯ ಏನನ್ನೂ ಸಾಧಿಸಬಲ್ಲ ಎಂಬುದಕ್ಕೆ ಶ್ರೀನಿವಾಸ ರಾಮಾನುಜನರೇ ಸಾಕ್ಷಿ. ಗಣಿತ ಬಿಟ್ಟು ಅವರಿಗೆ ಇನ್ನೇನೂ ಅರ್ಥವಾಗುತ್ತಿರಲಿಲ್ಲ. ಪ್ರತಿಕ್ಷಣ, ಪ್ರತಿನಿಮಿಷವೂ ಅವರ ಮನಸ್ಸು ಗಣಿತಕ್ಕಾಗಿ ಹಪಹಪಿಸುತ್ತಿತ್ತು. ಊಟ, ನೀರು, ನಿದ್ದೆಯಿಲ್ಲದಿದ್ದರೂ ನಡೆಯುತ್ತಿತ್ತು; ಗಣಿತವಿಲ್ಲದೆ ಅವರಿಗೆ ಬದುಕು ಅಸಾಧ್ಯವಾಗಿತ್ತು. ಕೇವಲ 32 ವರ್ಷ ಬದುಕಿದ್ದ ರಾಮಾನುಜನ್ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಕಾರಣ ಅವರೊಳಗಿದ್ದ ಗುರಿಸಾಧನೆಯ ಕಿಚ್ಚು.

‘ದೊಡ್ಡ ಗುರಿಗಳಿಂದ ದೊಡ್ಡ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ತಾವು ಕಾಣದ ಗುರಿಯನ್ನು ಜನ ಹೇಗೆ ತಾನೇ ಬೇಧಿಸಿಯಾರು?’ ಎಂದು ಕೇಳುತ್ತಾರೆ ರಾಯ್ ಬೆನೆಟ್. ಅದನ್ನೇ ಸಾವಿರಾರು ವರ್ಷಗಳ ಹಿಂದೆ ದ್ರೋಣಾಚಾರ್ಯರು ತಮ್ಮ ಶಿಷ್ಯರಲ್ಲಿ ಕೇಳಿದ್ದರು. ಮರದ ಮೇಲೆ ಕುಳಿತಿರುವ ಹಕ್ಕಿಯ ಕಣ್ಣಿಗೆ ಗುರಿಯಿಡಲು ಸೂಚಿಸಿದ ಮೇಲೆ ‘ಹೇಳಿ ನಿಮಗೇನು ಕಾಣುತ್ತಿದೆ’ ಎಂದು ಅವರು ಎಲ್ಲರನ್ನೂ ಕೇಳಿದರಂತೆ. ಸುತ್ತಲಿನ ತೋಟ, ಅಲ್ಲಿನ ಮರಗಿಡಗಳು, ಹೂವು, ಹಣ್ಣು, ರೆಂಬೆಕೊಂಬೆ... ಒಬ್ಬೊಬ್ಬರಿಗೆ ಒಂದೊಂದು ಕಂಡರೆ ಅರ್ಜುನ ಮಾತ್ರ ‘ಹಕ್ಕಿಯ ಕಣ್ಣು ಕಾಣಿಸುತ್ತಿದೆ ಗುರುಗಳೆ’ ಎಂದಿದ್ದನಂತೆ. ಅದಕ್ಕೇ ಅವನು ಮುಂದೆ ತ್ರಿಲೋಕಗಳಲ್ಲೂ ಸಾಟಿಯಿಲ್ಲದ ಬಿಲ್ಗಾರ ಎನಿಸಿಕೊಂಡ. ತಾವು ಸಾಧಿಸಬೇಕಿರುವುದು ಏನೆಂದು ಅರ್ಥ ಮಾಡಿಕೊಳ್ಳಲಾಗದವರು ವಾಸ್ತವವಾಗಿ ಸಾಧನೆಯೊಂದನ್ನು ಮಾಡುವುದಾದರೂ ಹೇಗೆ?

ಗುರಿಯಿಲ್ಲದ ಬದುಕು ಸೂತ್ರವಿಲ್ಲದ ಗಾಳಿಪಟದ ಹಾಗೆ, ಹಾಯಿ ಇಲ್ಲದ ದೋಣಿಯ ಹಾಗೆ. ಬಸ್ಸು ಹತ್ತಿ ಕುಳಿತವನಿಗೂ ಎಲ್ಲಿಗೆ ಟಿಕೇಟು ತೆಗೆದುಕೊಳ್ಳಬೇಕು ಎಂದು ತಿಳಿದಿರುತ್ತದೆ. ಇನ್ನು ಬದುಕಿನ ಬಂಡಿ ಏರಿದವನಿಗೆ ಎಲ್ಲಿ ಇಳಿಯಬೇಕು ಎಂಬ ಅರಿವಿಲ್ಲದಿದ್ದರೆ ಹೇಗೆ? ಗುರಿಯ ಅರಿವು ಸಾಧನೆಗೆ ಬಲವನ್ನೂ, ಹುರುಪನ್ನೂ, ಏಕಾಗ್ರತೆಯನ್ನೂ, ಶ್ರದ್ಧೆಯನ್ನೂ ಕೊಡುತ್ತದೆ. ಗುರಿಯಿಲ್ಲದ ಉತ್ಸಾಹ ಕಾಳ್ಗಿಚ್ಚಿಗೆ ಸಮ. ಕಾಡು ಉರಿದು ಬೂದಿಯಾಗುತ್ತದೆಯೇ ಹೊರತು ಒಳ್ಳೆಯದೇನೂ ಆಗುವುದಿಲ್ಲ. ಅರ್ಧ ಆಯಸ್ಸು ಕಳೆದ ಮೇಲೂ ಅನೇಕ ಮಂದಿಗೆ ಜೀವನದಲ್ಲಿ ತಾವೇನು ಮಾಡಬೇಕು ಎಂಬ ಸ್ಪಷ್ಟತೆ ಇರುವುದಿಲ್ಲ. ಹುಟ್ಟಿದ ಮೇಲೆ ಎಲ್ಲರೂ ಸಾಯಲೇಬೇಕು, ಅವರೂ ಒಂದು ದಿನ ಸಾಯುತ್ತಾರೆ. ಒಂದು ಜೀವನದ ಘನತೆ ಅಷ್ಟೇ ಏನು? ಇನ್ನು ಕೆಲವರಿಗೆ ಸಮಸ್ಯೆಗಳೇ ಮುಗಿಯುವುದಿಲ್ಲ. ಜಗತ್ತಿನ ಎಲ್ಲ ಸಮಸ್ಯೆಗಳೂ ತಮಗೊಬ್ಬರಿಗೇ ಬಂದಿದೆ ಎಂದು ಹಲುಬುತ್ತಿರುತ್ತಾರೆ. ಏನಾದರೂ ಸಾಧಿಸಬೇಕು ಎಂಬ ಆಸೆಯೇನೋ ಇದೆ, ಆದರೆ ಈ ಸಮಸ್ಯೆಗಳು ತನ್ನನ್ನು ಬಿಡುವುದಿಲ್ಲ ಎಂಬ ನೆಪ ಹೇಳುತ್ತಾರೆ. ಅವರು ಸಮಸ್ಯೆಗಳ ನಡುವೆಯೇ ಜೀವನ ನೂಕುತ್ತಾ ಅತೃಪ್ತ ಆತ್ಮಗಳಾಗಿಯೇ ಉಳಿಯುತ್ತಾರೆಯೇ ವಿನಾ ಎಂದೂ ಸಂತೃಪ್ತಿ ಕಾಣುವುದೇ ಇಲ್ಲ.

ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು|
ಗುರುತಿಸೊಳಿತಿರುವುದನು ಕೇಡುಗಳ ನಡುವೆ||
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು|
ಹರುಷಕದೆ ದಾರಿಯೆಲೊ- ಮಂಕುತಿಮ್ಮ||
ಸರ್ಕಾರಿ ಬಸ್ಸಲ್ಲಿ ಕುಳಿತ ಬಹುಮಂದಿಯೂ ಚಾಲಕನ ಹಿಂದಿರುವ ಎರಡು ಗೆರೆಗಳ ಭಾಗ್ಯದ ವಿಚಾರವನ್ನು ಓದಿ ತಲೆಕೆರೆದುಕೊಂಡು ಸುಮ್ಮನಾಗುತ್ತಾರೆಯೇ ಹೊರತು ತಮ್ಮ ಹರುಷದ ದಾರಿಯ ಬಗ್ಗೆ ಯೋಚಿಸುವುದೇ ಇಲ್ಲ. ಗುರಿ-ದಾರಿಗಳ ಸ್ಪಷ್ಟ ಅರಿವು ಇಲ್ಲದಿರುವವರು ಜೀವನದಲ್ಲಿ ಯಾವ ನಿಲ್ದಾಣವನ್ನೂ ತಲುಪುವುದಿಲ್ಲ. ‘ತನ್ನ ಕಣ್ಣುಗಳನ್ನು ಗುರಿಯಿಂದ ಕದಲಿಸುವವನು ಮಾತ್ರ ದಾರಿಯಲ್ಲಿ ಅಡೆತಡೆಗಳನ್ನು ಕಾಣುತ್ತಾನೆ’ ಎಂಬ ಜೋಸೆಫ್ ಕಾಸ್ಮಾನ್ ಮಾತು ಇಲ್ಲಿ ನೆನಪಾಗಬೇಕು. ವ್ಯಕ್ತಿಯೊಬ್ಬನಿಗೆ ತನ್ನ ಹಾದಿಯಲ್ಲಿ ಬರೀ ಅಡ್ಡಿ ಆತಂಕಗಳೇ ಕಾಣುತ್ತವೆಂದರೆ ಆತನ ದೃಷ್ಟಿ ಭದ್ರವಾಗಿ ಗುರಿಯ ಮೇಲೆ ನೆಟ್ಟಿಲ್ಲ ಎಂದೇ ಅರ್ಥ.

ಬದುಕಿನಲ್ಲಿ ಸೋತರೆ ತಪ್ಪಲ್ಲ, ಆದರೆ ಸಣ್ಣ ಗುರಿಯನ್ನು ಇಟ್ಟುಕೊಳ್ಳುವುದು ಅಪರಾಧ ಎಂಬ ದಾರ್ಶನಿಕರ ಮಾತು ನಮಗೆ ದೊಡ್ಡ ಪಾಠ. ನಮ್ಮ ಪ್ರಯತ್ನಗಳು ಸುಖಾಸುಮ್ಮನೆ ವ್ಯರ್ಥವಾಗುವುದೇ ಇಲ್ಲ. ಒಂದು ಕಡೆ ಸೋತಂತೆ ಕಂಡರೂ ಅದಕ್ಕಾಗಿ ಹಾಕಿದ ಶ್ರಮ ಇನ್ನೆಲ್ಲೋ ಒಂದು ಕಡೆ ಫಲ ನೀಡಿಯೇ ನೀಡುತ್ತದೆ. ಹತ್ತು ಕಡೆ ಹಳ್ಳ ತೋಡುವುದಕ್ಕಿಂತ ಒಂದೇ ಕಡೆ ಹತ್ತುಕಡೆಯ ಶ್ರಮವನ್ನು ಹಾಕಿದರೆ ನೀರಾದರೂ ದೊರೆತೀತು. ಗುರಿಸಾಧನೆಯ ದಾರಿಯಲ್ಲಿ ಸಣ್ಣಪುಟ್ಟ ಆಕರ್ಷಣೆಗಳು ಎದುರಾಗುವುದು ಸಹಜ. ಅವುಗಳಿಂದ ವಿಚಲಿತರಾಗದ ಗಟ್ಟಿ ಮನಸ್ಸು ಬೇಕು. ಹೆದ್ದಾರಿಯ ತುದಿಯಲ್ಲಿ ಫಲಿತಾಂಶ ಖಚಿತ ಇದೆಯೆಂದು ತಿಳಿದಿರುವಾಗ ಅಡ್ಡದಾರಿಗಳ ಗೊಡವೆಯೇಕೆ?

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: