ಶುಕ್ರವಾರ, ಏಪ್ರಿಲ್ 17, 2020

ಆನ್‌ಲೈನ್ ಶಿಕ್ಷಣ ಮತ್ತು ಡಿಜಿಟಲ್ ಕಂದಕ

ದಿನಾಂಕ: 18-04-2020ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ.

ಕೊರೋನಾ ಸೃಷ್ಟಿಸಿದ ಪಲ್ಲಟ ಉಳಿದೆಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ಹೊಸ ರೀತಿಯಲ್ಲಿ ಯೋಚಿಸುವಂತೆ ಮಾಡಿದೆ. ಐದೋ ಹತ್ತೋ ವರ್ಷಕ್ಕೆ ಅನಿವಾರ್ಯವಾಗಬಹುದಾಗಿದ್ದ ಆನ್‌ಲೈನ್ ಬೋಧನೆ-ಕಲಿಕೆ ಈಗಲೇ ಅನಿವಾರ್ಯವಾಗಿಬಿಟ್ಟಿದೆ. ಕೊರೋನಾ ಬಿಕ್ಕಟ್ಟಿನಿಂದಾಗಿ ಅನೇಕ ರಂಗಗಳು ಹಲವು ವರ್ಷ ಹಿಂದಕ್ಕೆ ಚಲಿಸುವಂತಾಗಿದ್ದರೆ, ಶಿಕ್ಷಣ ರಂಗ ತಂತ್ರಜ್ಞಾನದ ಬಳಕೆಯ ದೃಷ್ಟಿಯಿಂದಲಾದರೂ ಒಂದಷ್ಟು ವರ್ಷ ಮುಂದಕ್ಕೆ ಸಾಗುವಂತಾಗಿದೆ.

'ವರ್ಚುವಲ್ ಕ್ಲಾಸ್‌ರೂಂ’ ಎಂದಾಕ್ಷಣ ದೊಡ್ಡ ನಗರಗಳ ಶ್ರೀಮಂತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನೋ, ಪಶ್ಚಿಮದ ದೇಶಗಳನ್ನೋ ಮನಸ್ಸಿಗೆ ತಂದುಕೊಳ್ಳುವುದು ಸಾಮಾನ್ಯವಾಗಿತ್ತು. ಅದು ನಮಗಿರುವುದಲ್ಲ ಅಥವಾ ನಮ್ಮಂಥವರಿಗಲ್ಲ ಎಂಬುದೇ ಬಹುಪಾಲು ಭಾರತೀಯರ ಮನಸ್ಥಿತಿಯಾಗಿತ್ತು- ಇಲ್ಲಿಯವರೆಗೆ. ಕೇವಲ ಒಂದೆರಡು ತಿಂಗಳಲ್ಲೇ ಒಟ್ಟಾರೆ ಜಗತ್ತಿನ ಮನಸ್ಥಿತಿಯೇ ಬದಲಾಗಿದೆ, ಜತೆಗೆ ನಮ್ಮದೂ. ವರ್ಚುವಲ್ ಕ್ಲಾಸ್‌ರೂಂಗಳ ಅನಿವಾರ್ಯತೆ ನಮ್ಮ ಮನೆ ಬಾಗಿಲಿಗೇ ಈಗ ಬಂದು ನಿಂತಿದೆ. ಎಷ್ಟಾದರೂ ಅನಿವಾರ್ಯತೆ ಅನ್ವೇಷಣೆಯ ತಾಯಿ.

ಪ್ರಜಾವಾಣಿ | 18-04-2020
ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣದವರೆಗಿನದ್ದು ಒಂದು ಕತೆಯಾದರೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳದ್ದು ಇನ್ನೊಂದು ಕತೆ. ಪದವಿ ತರಗತಿಗಳು ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದರೆ, ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವರ್ಷದ ಎರಡನೆಯ ಭಾಗ ಅರ್ಧದಲ್ಲೇ ಇದೆ. ಪಾಠಪ್ರವಚನಗಳನ್ನು ಮುಂದುವರಿಸುವುದಕ್ಕೆ ಲಾಕ್‌ಡೌನ್ ಅಡ್ಡಿ, ಆದರೆ ಮುಂದುವರಿಸದೆ ವಿಧಿಯಿಲ್ಲ. ಒಟ್ಟಿನಲ್ಲಿ, ಕಾಲೇಜು-ವಿಶ್ವವಿದ್ಯಾನಿಲಯಗಳಿಗೆ ಆನ್‌ಲೈನ್ ಕಲಿಕೆಯ ಹೊರತು ಬೇರೆ ದಾರಿಯಿಲ್ಲ ಎಂಬಂತಾಗಿದೆ.

ಬಹುತೇಕ ವಿಶ್ವವಿದ್ಯಾನಿಲಯಗಳು, ಒಂದಷ್ಟು ಕಾಲೇಜುಗಳು ಈ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುತ್ತಿವೆ. ವಿದೇಶಗಳ ಪರಿಸ್ಥಿತಿಗೆ ಹೋಲಿಸಿದರೆ ನಾವು ಕನಿಷ್ಠ ಹತ್ತು ವರ್ಷ ಹಿಂದೆ ಇದ್ದರೂ ಈಗಲಾದರೂ ಈ ಹಂತದಿಂದ ಆರಂಭಿಸುವುದು ಅನಿವಾರ್ಯವಾಗಿದೆ. ಕೆಲವರು ಜೂಮ್‌ನಂತಹ ಆಪ್‌ಗಳ ಸಹಾಯದಿಂದ ತರಗತಿಗಳನ್ನು ನಡೆಸಲು ಪ್ರಯತ್ನಿಸುತ್ತಿದ್ದರೆ, ಇನ್ನು ಕೆಲವರು ಯೂಟ್ಯೂಬ್‌ನಲ್ಲಿ ವೀಡಿಯೋ ಉಪನ್ಯಾಸಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದಾರೆ. ವಾಟ್ಸ್‌ಆಪ್‌ನಲ್ಲಿ ಆಡಿಯೋ ಪಾಠ, ಅಧ್ಯಯನ ಸಾಮಗ್ರಿಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸ್ಕೈಪ್, ವಿಮಿಯೋ, ಗೂಗಲ್ ಮೀಟ್, ಗೋಟುಮೀಟಿಂಗ್, ಗೋಟುವೆಬಿನಾರ್, ವೆಬಿನಾರ್ ಜಾಮ್, ಲೈವ್‌ಸ್ಟ್ರೀಂ - ಹೀಗೆ ಲಭ್ಯವಿರುವ ಹತ್ತು ಹಲವು ಸಾಧ್ಯತೆಗಳನ್ನು ಹುಡುಕಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ.

ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಇದೊಂದು ಹೊಸ ಅನುಭವ. ಒಂದೆಡೆ ತರಗತಿಗಳಲ್ಲಿ ಮಾತ್ರ ಸಿಗುತ್ತಿದ್ದ ಅಧ್ಯಾಪಕರು ಆನ್‌ಲೈನ್ ಮೂಲಕ ತಮ್ಮನ್ನು ತಲುಪುತಿದ್ದಾರೆ ಎಂಬ ಸಂಭ್ರಮ ವಿದ್ಯಾರ್ಥಿಗಳದ್ದಾರೆ, ಹೀಗೆಲ್ಲ ಮಾಡಬಹುದೇ ಎಂಬ ಸೋಜಿಗ ಅನೇಕ ಅಧ್ಯಾಪಕರದ್ದು. ಕಂಪ್ಯೂಟರ್, ಪ್ರೊಜೆಕ್ಟರ್ ಎಂದರೆ ಮೂಗುಮುರಿಯುತ್ತಾ ಇನ್ನೂ ಕರಿಹಲಗೆ-ಪಠ್ಯಪುಸ್ತಕಗಳಿಗೆ ಅಂಟಿಕೊಂಡಿದ್ದ ಅವರು ತಾವು ಸದಾ ಬಳಸುವ ಮೊಬೈಲಿನಲ್ಲೇ ಇಷ್ಟೊಂದು ಸಾಧ್ಯತೆಗಳಿವೆಯೇ ಎಂದು ನಿಧಾನಕ್ಕೆ ಅರ್ಥಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಯಾಪನೆ ಮಾಡುವುದಲ್ಲದೆ ಮೊಬೈಲಿನಿಂದ ಇನ್ನೂ ಅನೇಕ ಉಪಯೋಗಗಳಿವೆ ಎಂದು ಮನದಟ್ಟಾಗುತ್ತಿದೆ.

ಇಂತಹ ಅನಿವಾರ್ಯ ಇಷ್ಟೊಂದು ಬೇಗನೆ ಮತ್ತು ಅಚಾನಕ್ಕಾಗಿ ಎದುರಾದೀತು ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಹೀಗಾಗಿ ಇಂಥದ್ದೊಂದು ಪರಿಸ್ಥಿತಿ ಎದುರಾದಾಗ ಅದನ್ನು ಹೇಗೆ ನಿಭಾಯಿಸಬೇಕೆಂಬ ಚಿಂತನೆಯನ್ನೂ ಮಾಡಿದವರು ಕಡಿಮೆಯೇ. ಆನ್‌ಲೈನ್ ಕೋರ್ಸುಗಳು ಕೆಲವು ವರ್ಷಗಳಿಂದ ನಮ್ಮಲ್ಲಿ ಲಭ್ಯವಿದ್ದರೂ ಅವು ಐಚ್ಛಿಕ. ಬಹುತೇಕ ಖಾಸಗಿ ವಲಯದಲ್ಲೇ ಇವೆ. ಈಗಾಗಲೇ ಉದ್ಯೋಗದಲ್ಲಿರುವವರು, ಹೆಚ್ಚುವರಿ ಶೈಕ್ಷಣಿಕ ಅರ್ಹತೆ ಬಯಸುವವರು, ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುವವರು ಇಂಥವುಗಳನ್ನು ಆಯ್ದುಕೊಳ್ಳುತ್ತಿದ್ದುದು ಇದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 'ಸ್ವಯಂ’ ಎಂಬ ಆನ್‌ಲೈನ್ ಕಲಿಕಾ ವೇದಿಕೆಯನ್ನು 2017ರಲ್ಲಿ ಆರಂಭಿಸಿ ನೂರಾರು ಮುಕ್ತ ಕೋರ್ಸುಗಳನ್ನು ಪರಿಚಯಿಸಿದ್ದರೂ, ಅವೆಲ್ಲವೂ ಐಚ್ಛಿಕ. ಅವನ್ನು ಔಪಚಾರಿಕ ಕೋರ್ಸುಗಳ ಭಾಗವನ್ನಾಗಿಸುವ ಅಥವಾ ಕಡ್ಡಾಯಗೊಳಿಸುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.

ಹೌದು, ಆನ್‌ಲೈನ್ ತರಗತಿಗಳಿಂದ ಅನೇಕ ಲಾಭಗಳಿದ್ದರೂ ಅವುಗಳ ಇತಿಮಿತಿಗಳೂ ಅಷ್ಟೇ ಇವೆ. ನಮಗೆ ಬೇಕಾದ ಸಮಯವನ್ನು ಹೊಂದಿಸಿಕೊಂಡು ಪಾಠ ಮಾಡಬಹುದು ಅಥವಾ ಕೇಳಬಹುದು, ವಿದ್ಯಾರ್ಥಿಗಳು ಅಂತರಜಾಲವನ್ನು ಬಳಸಿಕೊಂಡು ಯಥೇಚ್ಛ ಅಧ್ಯಯನ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು. ಆದರೆ ಈ ತಂತ್ರಜ್ಞಾನದ ಲಾಭ ಪಡೆಯುವ ಮಂದಿಯ ಪ್ರಮಾಣ ಎಷ್ಟು ಎಂಬುದೂ ಮುಖ್ಯವಾದ ಪ್ರಶ್ನೆ.

ವಿದೇಶಗಳಲ್ಲಿ ಆನ್‌ಲೈನ್ ಬೋಧನೆ-ಕಲಿಕೆ ಯಶಸ್ವಿಯಾಗಿದ್ದರೆ ಅದರ ಹಿಂದೆ ಅಲ್ಲಿನ ಮೂಲಭೂತ ಸೌಕರ್ಯ, ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ನೀಡಲಾಗಿರುವ ಹೆಚ್ಚುವರಿ ತರಬೇತಿಯ ಪಾತ್ರ ಇದೆ. ಅಲ್ಲಿ ಪ್ರತಿಕ್ರಿಯಾತ್ಮಕ ಅಧ್ಯಯನ ಸಾಮಗ್ರಿಗಳು, ಆನ್‌ಲೈನ್ ಪರೀಕ್ಷಾ ವ್ಯವಸ್ಥೆ, ತೆರೆದ ಪುಸ್ತಕದ ಪರೀಕ್ಷೆ- ಎಲ್ಲವೂ ಸಾಕಷ್ಟು ಮೊದಲಿನಿಂದಲೂ ಜಾರಿಯಲ್ಲಿದೆ. ನಮಗೆ ಎದುರಾಗಿರುವ ಪರಿಸ್ಥಿತಿ ತೀರಾ ಅನಿರೀಕ್ಷಿತವಾದದ್ದು.

ಭಾರತದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ. 32.5ರಷ್ಟು ಮಂದಿ ನಗರಗಳಲ್ಲಿದ್ದಾರೆ, ಶೇ. 67.5ರಷ್ಟು ಹಳ್ಳಿಗಳಲ್ಲಿದ್ದಾರೆ. ನಮ್ಮ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಸುಮಾರು 60 ಕೋಟಿ. ಅಂದರೆ ಅರ್ಧಕ್ಕಿಂತಲೂ ಕಡಿಮೆ. ಅವರಲ್ಲಿಯೂ ಮೊಬೈಲ್ ಇಂಟರ್ನೆಟ್ ಬಳಕೆದಾರರೇ ಹೆಚ್ಚು. ಟ್ರಾಯ್ ವರದಿ ಪ್ರಕಾರ, ಹಳ್ಳಿಗಳಲ್ಲೇ ಮುಕ್ಕಾಲು ಪಾಲು ಜನರಿದ್ದರೂ ಅಲ್ಲಿನ ಇಂಟರ್ನೆಟ್ ಸಾಂಧ್ರತೆ ಶೇ. 25. ಉಳಿದಿರುವ ಜನರಷ್ಟೇ ನಗರಗಳಲ್ಲಿದ್ದರೂ ಅಲ್ಲಿನ ಇಂಟರ್ನೆಟ್ ಸಾಂಧ್ರತೆ ಶೇ. 97. ಇದು ನಮ್ಮ ದೇಶದ ಡಿಜಿಟಲ್ ಕಂದಕದ ಆಳ-ಅಗಲ. ಹೀಗಾಗಿ ನಮ್ಮಲ್ಲಿ ಆನ್‌ಲೈನ್ ಕಲಿಕೆಯ ಪರಿಣಾಮಕಾರಿ ಅನುಷ್ಠಾನ ಅಷ್ಟು ಸುಲಭದ ಕೆಲಸವೇನೂ ಅಲ್ಲ.

ನಮ್ಮ ಬಹುತೇಕ ವಿದ್ಯಾರ್ಥಿಗಳು ಹಳ್ಳಿಗಳಲ್ಲಿದ್ದಾರೆ. ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳಿದ್ದರೂ ಮೊಬೈಲ್ ಇಲ್ಲದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಅನೇಕ ಕಡೆ ಆನ್‌ಲೈನ್ ಕಲಿಕಾ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಬಲ್ಲ ೪ಜಿ ನೆಟ್‌ವರ್ಕ್ ಇಲ್ಲ. ಆನ್‌ಲೈನ್ ಪಾಠಗಳನ್ನು ಶೇ. 60ರಷ್ಟು ವಿದ್ಯಾರ್ಥಿಗಳು ಬಳಸುತ್ತಿದ್ದಾರೆ ಎಂದರೂ ಉಳಿದ ಶೇ. 40 ವಿದ್ಯಾರ್ಥಿಗಳ ಕಥೆಯೇನು? ಅವರನ್ನು ಬಿಟ್ಟು ನಾವು ಮುಂದಕ್ಕೆ ಹೋಗುವುದಾದರೂ ಹೇಗೆ? ಡಿಜಿಟಲ್ ಕಂದಕದ ನಡುವೆ ನಮ್ಮ ವಿದ್ಯಾರ್ಥಿಗಳು ಸಿಲುಕಿಕೊಳ್ಳದಂತೆ ನೋಡಿಕೊಳ್ಳುವುದು ಶಿಕ್ಷಣ ವಲಯದ ದೊಡ್ಡ ಜವಾಬ್ದಾರಿ. ಜತೆಗೆ ಅಧ್ಯಾಪಕರಿಗೂ ಶಿಕ್ಷಕರಿಗೂ ವಿಶೇಷ ತರಬೇತಿಯ ಅಗತ್ಯವೂ ಇದೆ. ತರಗತಿ ಪಾಠಪ್ರವಚನಗಳಿಗೆ ಆನ್‌ಲೈನ್ ಶಿಕ್ಷಣ ಸಂಪೂರ್ಣವಾಗಿ ಪರ್ಯಾಯವೂ ಆಗಲಾರದು ಎಂಬದೂ ಗಮನಾರ್ಹ.

ಸಾಗಬೇಕಿರುವ ದಾರಿ ಬಲುದೂರ ಇದೆ. ಆದರೆ ಕೊರೋನಾ ಆ ದಾರಿಯ ಅನಿವಾರ್ಯ, ಇತಿಮಿತಿ ಹಾಗೂ ಅಗತ್ಯ ತಯಾರಿಗಳ ಕುರಿತು ನಾವು ಯೋಚಿಸುವಂತೆ ಮಾಡಿದೆ.

-ಸಿಬಂತಿ ಪದ್ಮನಾಭ ಕೆ. ವಿ. 

ಭಾನುವಾರ, ಏಪ್ರಿಲ್ 5, 2020

ಆಂಜನೇಯನೆಂಬ ಸ್ಫೂರ್ತಿಯ ಚಿಲುಮೆ

ಏಪ್ರಿಲ್ 4-10, 2020ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತ|
ಅಜಾಡ್ಯಂ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್ ಭವೇತ್||
ಇದು ಜಗತ್ತಿನ ಕೋಟ್ಯಂತರ ಆಸ್ತಿಕರ ದಿನನಿತ್ಯದ ಪ್ರಾರ್ಥನೆ. ಆಂಜನೇಯನ ಸ್ಮರಣೆಯಿಂದ ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತ್ವ, ಆರೋಗ್ಯ, ವಾಕ್‌ಪ್ರತಿಭೆ ಇವೆಲ್ಲವೂ ತಾವಾಗಿಯೇ ಒಲಿದುಬರುತ್ತವೆ ಎಂಬುದು ಅವರೆಲ್ಲರ ಗಾಢ ನಂಬಿಕೆ. ಹನೂಮಂತ ವಜ್ರಕಾಯ, ಜಿತೇಂದ್ರಿಯ, ಶತ್ರುಭಯಂಕರ, ಮಹಾನ್ ಶಕ್ತಿಶಾಲಿ; ಹೀಗಾಗಿ ಆತ ನಂಬಿದವರ ರಕ್ಷಕ, ಉತ್ಸಾಹದ ಚಿಲುಮೆ, ಎಂತಹ ಜುಗುಪ್ಸೆಯಿಂದ ಬೆಂದ ಮನಸ್ಸಿಗೂ ನೆಮ್ಮದಿ, ಧೈರ್ಯ, ಸ್ಫೂರ್ತಿಯನ್ನು ತುಂಬಬಲ್ಲ ಐಂದ್ರಜಾಲಿಕ ಎಂಬ ಭಾವನೆಗೆ ಸಾವಿರಾರು ವರ್ಷಗಳ ಇತಿಹಾಸ.

ಸಿಬಂತಿ ಪದ್ಮನಾಭ | ಬೋಧಿವೃಕ್ಷ |  ಏಪ್ರಿಲ್ 4-10, 2020
ಆಂಜನೇಯ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವುದು ನೂರೆಂಟು ಚಿತ್ರ. ಬಲಗಡೆ ಲಕ್ಷ್ಮಣ, ಎಡಗಡೆ ಸೀತೆಯನ್ನು ಒಡಗೂಡಿ ನಿಂತಿರುವ ಕೋದಂಡರಾಮನ ಎದುರು ಮಂಡಿಯೂರಿ ಕುಳಿತಿರುವ ಮಾರುತಿ, ರಾಮ-ಲಕ್ಷ್ಮಣರನ್ನು ಎರಡೂ ಭುಜಗಳಲ್ಲಿ ಹೊತ್ತು ಸಾಗುತ್ತಿರುವ ಹನೂಮಂತ, ಕೈಗಳನ್ನು ಮುಂದಕ್ಕೆ ಚಾಚಿ ಸಾಗರಲ್ಲೋಂಘನ ಮಾಡುತ್ತಿರುವ ಪವನಸುತ, ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಬರುತ್ತಿರುವ ವಾತಾತ್ಮಜ, ತನ್ನೆದೆಯನ್ನೇ ಸೀಳಿ ರಾಮ ಇಲ್ಲಿದ್ದಾನೆ ಎಂದು ತೋರಿಸುವ ರಾಮದೂತ... ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಚಿತ್ರ.

ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬೇಕಾದವನು ಈ ಆಂಜನೇಯ. ಮಕ್ಕಳಿಗಂತೂ ಹನೂಮಂತ ಒಬ್ಬ ಆಪ್ತ ಗೆಳೆಯ. ತಾವು ಇಷ್ಟಪಡುವ ಮಹಿಮಾವಿಶೇಷಗಳನ್ನು ಕ್ಷಣಮಾತ್ರದಲ್ಲಿ ಮಾಡಿತೋರಿಸಬಲ್ಲ ಪವಾಡಪುರುಷ. ತಮ್ಮೊಂದಿಗೆ ಓರಗೆಯವನಾಗಿ ಆಟವಾಡಬಲ್ಲ ಬಾಲಮಾರುತಿ. ಹನೂಮಂತ ನಾಯಕನಾಗಿರುವ ಕಾರ್ಟೂನು ಇಲ್ಲದಿದ್ದರೆ ಅದು ಮಕ್ಕಳಿಗೆ ಟಿವಿ ಚಾನೆಲೇ ಅಲ್ಲ. ಯುವಕರಿಗೆ ಈ ಬ್ರಹ್ಮಚಾರಿ ಮನೋಬಲದ ಪ್ರತೀಕವಾದರೆ, ವೃದ್ಧರಿಗೆ ಮೋಕ್ಷಮಾರ್ಗದ ದಿಕ್ಸೂಚಿ. ಶರೀರಬಲ, ಬುದ್ಧಿಬಲ, ಆತ್ಮಬಲಗಳ ತ್ರಿವೇಣಿ ಸಂಗಮ. ಆದರ್ಶದಲ್ಲಿ, ಚಾರಿತ್ರ್ಯದಲ್ಲಿ, ಸದಾಚಾರದಲ್ಲಿ, ಕಾರ್ಯಕ್ಷಮತೆಯಲ್ಲಿ ಅವನಿಗೆ ಸರಿಮಿಗಿಲಾದವರು ಇನ್ನೊಬ್ಬರಿಲ್ಲ. 'ನ ಸಮಃ ಸ್ಯಾತ್ ಹನೂಮತಃ’ - ಹನೂಮಂತನಿಗೆ ಸಮ ಬೇರಾರೂ ಇಲ್ಲ ಎಂದು ಸ್ವತಃ ರಾಮಚಂದ್ರನಿಂದಲೇ ಪ್ರಶಂಸೆಗೆ ಪಾತ್ರನಾದವನು ಅವನು.

ಋಷ್ಯಮೂಕದ ಪಾದದಲ್ಲಿದ್ದ ಪಂಪಾಸರೋವರದ ತಟದಲ್ಲಿ ಆರಂಭವಾದ ರಾಮ-ಹನುಮರ ಸಖ್ಯ ಅಖಂಡ, ಚಿರಸ್ಥಾಯಿ. 'ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾ ಕ್ಲಿಷ್ಟಕರ್ಮಣಃ’ - ಉತ್ತಮ ಕರ್ಮಗಳನ್ನೇ ಎಸಗುವ ರಾಮಚಂದ್ರನಿಗೆ ನಾನು ಎಂದೆಂದಿಗೂ ದಾಸಾನುದಾಸ ಹೀಗೆ ಘೋಷಿಸಿಕೊಂಡ ಆಂಜನೇಯ ಅದನ್ನೇ ಯುಗಯುಗಗಳ ಪರ್ಯಂತ ಸಾಧಿಸಿಕೊಂಡು ಬಂದ. ಅವನು ಬಯಸಿದ್ದರೆ ರಾಮನು ವಾಲಿಯನ್ನು ವಧಿಸಿದ ಮೇಲೆ ಕಿಷ್ಕಿಂಧೆಯ ರಾಜನಾಗಬಹುದಿತ್ತು. ಆದರೆ ಅವನಿಗೆ ಬೇಕಿದ್ದದ್ದು ರಾಮನ ಸಾಹಚರ್ಯವೇ ಹೊರತು ರಾಜಕಾರಣವಾಗಲೀ, ಅಧಿಕಾರವಾಗಲೀ ಆಗಿರಲಿಲ್ಲ. ರಾಮಾವತಾರದ ಕೊನೆಯಲ್ಲಿ ’ಮುಂದೇನು’ ಎಂದು ಆಂಜನೇಯನನ್ನು ರಾಮ ಕೇಳಿದಾಗ ಅವನು ಹೇಳಿದ್ದು ಅದನ್ನೇ: ಭೂಮಿಯ ಮೇಲೆ ರಾಮಕಥೆ ಇರುವವರೆಗೆ ನನಗೆ ಅದೇ ನಾಮಸ್ಮರಣೆಯಲ್ಲಿ ಉಳಿಯುವ ಆಸೆ.

ಆಗ ರಾಮ ಹೇಳಿದನಂತೆ: ಹನುಮಾ, ನಿನ್ನ ಉಪಕಾರಗಳನ್ನು ನಾನು ಹೇಗೆ ತೀರಿಸಲಿ? ನೀನು ಮಾಡಿರುವ ಒಂದೊಂದು ಉಪಕಾರಕ್ಕೂ ನನ್ನ ಒಂದೊಂದು ಪ್ರಾಣವನ್ನು ನೀಡಬೇಕೆಂದರೂ ನನಗಿರುವುದು ಐದೇ ಪ್ರಾಣಗಳು. ಹೆಚ್ಚೆಂದರೆ ನಿನ್ನ ಐದು ಉಪಕಾರಗಳಿಗೆ ಮಾತ್ರ ಅವನ್ನು ನೀಡಬಹುದು. ಉಳಿದುದಕ್ಕೆ ಏನೂ ಕೊಡಲಾರೆ. ನಾನು ಎಂದೆಂದಿಗೂ ನಿನಗೆ ಋಣಿಯೇ.... ರಾಮ-ಹನುಮರದ್ದು ದೇವರು ಭಕ್ತರ ಸಂಬಂಧವೋ, ಸೇವ್ಯ-ಸೇವಕರ ಸಂಬಂಧವೋ, ಓರಗೆಯ ಸ್ನೇಹಿತರ ನಡುವಿನ ಸಂಬಂಧವೋ ಅವರಿಗೆ ಮಾತ್ರ ಗೊತ್ತು. ಆದರೆ ಅಂತಹದೊಂದು ಗಾಢ ಸಂಬಂಧವನ್ನು ಜಗತ್ತಿನಲ್ಲಿ ಬೇರೆಲ್ಲೂ ಕಾಣೆವು.

ಹನುಮ ಸಾಮಾನ್ಯ ಕಪಿಯಲ್ಲ. ಚತುರ್ವೇದ ಪರಿಣತ. ವ್ಯಾಕರಣ ಪಂಡಿತ. ತರ್ಕ ಮೀಮಾಂಸೆಗಳಲ್ಲಿ ಪಾರಂಗತ. ರಸಪ್ರಜ್ಞೆ, ಸಮಯಪ್ರಜ್ಞೆ, ಸೌಂದರ್ಯಪ್ರಜ್ಞೆ, ವಾಕ್ಚಾತುರ್ಯ ಹೊಂದಿದ್ದ ಅಸೀಮ ರಾಮಭಕ್ತ. ಇಂದ್ರಾದಿ ದೇವತೆಗಳಿಂದ ಅನೇಕ ವಿದ್ಯೆಗಳನ್ನು ವರರೂಪವಾಗಿ ಪಡೆದವನು. ಇನ್ನೂ ಬಾಲಕನಿದ್ದಾಗಲೇ ಸೂರ್ಯನೆಂದು ಹಣ್ಣೆಂದು ಭ್ರಮಿಸಿ ನುಂಗಹೋದವನು. ಸೀತಾನ್ವೇಷಣೆಗಾಗಿ ಸಹಸ್ರ ಯೋಜನ ವಿಸ್ತಾರದ ಸಮುದ್ರವನ್ನು ಒಂದೇ ನೆಗೆತಕ್ಕೆ ಹಾರಿದವನು. ನಡುವೆ ಎದುರಾದ ಸುರಸೆ, ಸಿಂಹಿಣಿ, ಲಂಕಿಣಿಯರನ್ನು ನಿವಾರಿಸಿ ಅಶೋಕವನದಲ್ಲಿ ಸೀತೆಯನ್ನು ಪತ್ತೆಹಚ್ಚಿ ಆಕೆಗೆ ಶುಭಸಮಾಚಾರವನ್ನು ತಲುಪಿಸಿದವನು. ಜಂಬೂಮಾಲಿ, ಅಕ್ಷಯಕುಮಾರರನ್ನೆಲ್ಲ ಸದೆಬಡಿದು ಸ್ವರ್ಣಲಂಕೆಯನ್ನು ದಹಿಸಿ ರಾಮನಿಗೆ ವರ್ತಮಾನ ಮುಟ್ಟಿಸಿದವನು. ಮಹಾಪರಾಕ್ರಮಿ. 'ನ ರಾವಣ ಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್’ - ಸಾವಿರ ರಾವಣರು ಎದುರಾದರೂ ನನಗೆ ಸರಿಸಮ ಎದುರಾಳಿ ಆಗಲಾರರು ಎಂದು ಘರ್ಜಿಸಿದವನು. ಅದಕ್ಕೇ ಜನಸಾಮಾನ್ಯರಿಗೆ ಅವನೊಂದು ಮಹಾಪ್ರೇರಣೆ.

ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ||
ಅದು ಜಗತ್ತಿನ ಕೋಟಿಕೋಟಿ ಜನ ರಾಮದೂತನಿಗೆ ಪ್ರತಿದಿನ ವಂದಿಸುವ ಬಗೆ. ನಿರಾಶೆ, ಕತ್ತಲು ಮನಸ್ಸುಗಳನ್ನು, ಜಗತ್ತನ್ನು ತುಂಬಿರುವಾಗ ಚಿರಂಜೀವಿ ಆಂಜನೇಯನ ಚಿತ್ರ ಆಶಾವಾದ, ಧೈರ್ಯವನ್ನು ಕೊಡಬಲ್ಲುದಾದರೆ ಆ ಚಿತ್ರ ಸರ್ವವ್ಯಾಪಿಯಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.