ಭಾನುವಾರ, ನವೆಂಬರ್ 27, 2016

ನಿನ್ನ ನೀನು ಮರೆತರೆ...?

ಬೋಧಿವೃಕ್ಷ (ನ. 19-25, 2016)ದಲ್ಲಿ ಪ್ರಕಟಿತ ಲೇಖನ

'ಗುರುಗಳೇ, ನಮಸ್ಕರಿಸಿದ್ದೇನೆ.’
'ಎದ್ದೇಳು. ಒಳ್ಳೆಯದಾಗಲಿ. ಯಾರು ನೀನು?’
'ನಾನು ಪ್ರಭಾಕರ.’
'ಅದು ನಿನ್ನ ಹೆಸರು. ನೀನು ಯಾರು?’
'ನಾನು ವೆಂಕಟೇಶರಾಯರ ಮಗ. .... ಕುಟುಂಬಕ್ಕೆ ಸೇರಿದವನು.’
'ಅದು ನಿನ್ನ ತಂದೆಯ ಮತ್ತು ಕುಟುಂಬದ ಹೆಸರು. ನೀನು ಯಾರು?’
'ನಾನು ಹರಿಹರದಿಂದ ಬಂದಿದ್ದೇನೆ. .... ಜಾತಿಯವನು’
'ಅದು ನಿನ್ನ ಊರು ಮತ್ತು ಜಾತಿಯ ಬಗೆಗಾಯಿತು. ನೀನು ಯಾರು?’
'ನಾನು ಬಿ.ಇ. ಓದಿದ್ದೇನೆ. ಈಗ ಒಂದು ದೊಡ್ಡ ಸಾಫ್ಟ್‌ವೇರ್ ಕಂಪೆನಿಯಲ್ಲಿ ಗ್ರೂಪ್ ಲೀಡರ್ ಆಗಿದ್ದೇನೆ.’
'ಅದು ನಿನ್ನ ವಿದ್ಯಾಭ್ಯಾಸ ಮತ್ತು ಉದ್ಯೋಗದ ವಿಷಯ. ನೀನು ಯಾರು?’
ಹೀಗೆ ಸಾಗುತ್ತದೆ ಗುರು-ಶಿಷ್ಯರ ನಡುವಿನ ಸಂಭಾಷಣೆ. ಅರ್ಧಗಂಟೆ, ಒಂದು ಗಂಟೆ. ಶಿಷ್ಯನ ಬಳಿ ಇನ್ನೇನೂ ಉತ್ತರ ಉಳಿದಿಲ್ಲ. ಆದರೆ ಗುರುವಿನ ಪ್ರಶ್ನೆ ಹಾಗೆಯೇ ಇದೆ: 'ನೀನು ಯಾರು?’ ಬೇರೆ ದಾರಿ ಕಾಣದೆ ಶಿಷ್ಯ ಗುರುವಿನ ಪಾದ ಹಿಡಿದು ಆರ್ತನಾಗಿ ಕೇಳುತ್ತಾನೆ: 'ಗುರುಗಳೇ, ನನಗೊಂದೂ ಅರ್ಥವಾಗುತ್ತಿಲ್ಲ! ನಾನು ಯಾರು?’

***

ಹೀಗೊಂದು ಪ್ರಶ್ನೆಯನ್ನು ನಮಗೆ ನಾವೇ ಎಂದಾದರೂ ಕೇಳಿಕೊಂಡದ್ದಿದೆಯೇ? ಇಲ್ಲಿಯವರೆಗೆ ಎಷ್ಟೊಂದು ಬಾರಿ 'ನೀನು ಯಾರು’ ಎಂಬ ಪ್ರಶ್ನೆಯನ್ನು ನಾವು ಎದುರಿಸಿಲ್ಲ? ಎಷ್ಟೊಂದು ಬಾರಿ ನಾವು ನಮ್ಮ ಪರಿಚಯ ಮಾಡಿಕೊಂಡಿಲ್ಲ? ಬಹುಶಃ ಪ್ರತಿನಿತ್ಯವೂ ಯಾವುದಾದರೊಂದು ಸನ್ನಿವೇಶದಲ್ಲಿ ನಮ್ಮ ಪರಿಚಯ ಮಾಡಿಕೊಂಡಿರುತ್ತೇವೆ. ಆಗೆಲ್ಲಾ ನಮ್ಮ ಹೆಸರು, ಊರು, ವಿದ್ಯಾಭ್ಯಾಸ, ಉದ್ಯೋಗ, ಕೆಲವೊಮ್ಮೆ ಧರ್ಮ, ಸಮುದಾಯ, ಜಾತಿ ಇತ್ಯಾದಿಗಳ ಬಗ್ಗೆ ಹೇಳುತ್ತೇವೆ.
ಇವೆಲ್ಲಾ ನಮಗೆ ಯಾವಾಗ ಅಂಟಿಕೊಂಡವು? ಉದ್ಯೋಗ ಸಿಕ್ಕಿದ್ದು ವಿದ್ಯಾಭ್ಯಾಸದ ಆಧಾರದಲ್ಲಿ. ಶಿಕ್ಷಣ ದೊರೆಯುವುದಕ್ಕೆ ಮುಂಚೆ ನಮಗೊಂದು ಹೆಸರು ಮಾತ್ರ ಇತ್ತು. ಅಪ್ಪ-ಅಮ್ಮ ಹೆಸರು ಇಡುವುದಕ್ಕೆ ಮುನ್ನ ನಾವು ಯಾರಾಗಿದ್ದೆವು? ಇಂತಹ ಮನೆಯಲ್ಲಿ ಹುಟ್ಟಿದೆವು ಎಂಬ ಕಾರಣಕ್ಕೆ ಜಾತಿ, ಧರ್ಮಗಳು ನಮ್ಮ ಅಕ್ಕಪಕ್ಕ ಸೇರಿಕೊಂಡವು. ಇವೆಲ್ಲವನ್ನು ಪಕ್ಕಕ್ಕಿಟ್ಟರೆ ನಮ್ಮ ಐಡೆಂಟಿಟಿ ಏನು? ‘God has given you one face, and you make yourself another’ ಎಂಬ ಶೇಕ್ಸ್‌ಪಿಯರ್‌ನ ಮಾತಲ್ಲಿರುವುದೂ ಇದೇ ಪ್ರಶ್ನೆ.

ವೃತ್ತಿ, ಜಾತಿ, ಧರ್ಮ, ಅಂತಸ್ತು, ಕುಟುಂಬ ಇತ್ಯಾದಿಗಳೇ ನಮ್ಮ ವ್ಯಕ್ತಿತ್ವವೇ? ಅವುಗಳ ಹೊರತಾಗಿ ನಮಗೆ ನಮ್ಮದೇ ಆದ ಒಂದು ಮುಖವೇ ಇಲ್ಲವೇ? ಅವುಗಳಿಲ್ಲದೇ ಹೋದರೆ ನಮಗೆ ಬೆಲೆಯೇ ಇಲ್ಲವೇ? ಇಂತಹ ಉಪಾಧಿಗಳನ್ನೆಲ್ಲ ಕಳಚಿಯೂ ಪ್ರಪಂಚದಿಂದ ಗುರುತಿಸಿಕೊಂಡವರು ಇದ್ದಾರೆಯೇ? ಇದ್ದಾರೆ ಎಂದಾದರೆ ಅವರ ಐಡೆಂಟಿಟಿ ಏನು? ಜಾತಿ, ಧರ್ಮ, ಉದ್ಯೋಗ, ಆದಾಯಗಳೆಲ್ಲ ಅವರಿಗೆ ಏನಾಗಿದ್ದವು? ಲೌಕಿಕ ಬದುಕಿನಲ್ಲಿ ನಾವು ಪ್ರತಿಕ್ಷಣ ಕೊರಳಿಗೆ ಸುತ್ತಿಕೊಂಡು ಮೆರೆಯುವ ಗುರುತುಚೀಟಿಗಳ ಯತಾರ್ಥತೆ ಏನು?

ನಾವು ಹುಟ್ಟಿದ ಬಳಿಕ ಈ ಅಸ್ಮಿತೆಗಳೆಲ್ಲ ನಮ್ಮನ್ನು ಆವರಿಸಿಕೊಂಡವು ಎಂದಾದರೆ ನಮ್ಮ ಸಾವಿನೊಂದಿಗೆ ಅವುಗಳೂ ಅಂತ್ಯ ಕಾಣಬೇಕು. ವೃತ್ತಿ, ಸಮುದಾಯ, ಸಂಪತ್ತು, ಬಿರುದು, ಬಿಗುಮಾನಗಳ್ಯಾವುವೂ ನಮ್ಮ ನಂತರ ಉಳಿಯುವುದಿಲ್ಲ ಎಂದಾದರೆ ಅವು ನಮ್ಮ ನಿಜವಾದ ಗಳಿಕೆ ಅಲ್ಲ. ಹಾಗಾದರೆ ನಮ್ಮ ನೈಜ ಗಳಿಕೆ ಯಾವುದು? ನೈಜ ಉಳಿಕೆ ಯಾವುದು?

ಏನೇ ನಿಜವಿರಲಿ ಮತ್ತೇನೇ ಸುಳ್ಳಾಗಿರಲಿ
ನಾನೆನಿಪ್ಪಾತ್ಮವೊಂದಿರುವುದನುಭವಿಕ|
ಹಾನಿಗಾವಾತನಾತ್ಮವನುಂ ಕೆಡುಹದಿರು
ಧ್ಯಾನಿಸಾತ್ಮದ ಗತಿಯ - ಮಂಕುತಿಮ್ಮ||
ಎಂಬ ಡಿವಿಜಿಯವರ ಆದೇಶ ನಮಗಿಲ್ಲಿ ಬೆಳಕಿನ ಬೀಜವಾಗಬೇಕು. 'ನಾನು’ ಎಂದೆನಿಸುವ ಆತ್ಮದ ಅನುಭವವಿರುವತನಕ ಬೇರೆ ಆತ್ಮಗಳಿಗೆ ಹಾನಿಯುಂಟುಮಾಡದೆ ನಿನ್ನ ಆತ್ಮದ ಗತಿಯ ಮತ್ತು ಗಮ್ಯದ ಬಗ್ಗೆ ನೀನು ಧ್ಯಾನಿಸು ಎಂಬ ಡಿವಿಜಿಯವರ ಮಾತು ನಾವು ಸಾಗಬೇಕಾದ ಹಾದಿಯೆಡೆಗಿನ ಸ್ಪಷ್ಟ ತೋರುಗಂಬ.

ನಾನು ಯಾರು? ಎಲ್ಲಿಂದ ಬಂದೆ? ನನ್ನ ನಿಜವಾದ ಸ್ವಭಾವವೇನು? ನಾನು ವರ್ತಿಸುತ್ತಿರುವ ರೀತಿ ಸರಿಯಾಗಿದೆಯೇ? ಇಲ್ಲವಾದರೆ ನನ್ನನ್ನು ನಾನು ಅಭಿವೃದ್ಧಿಪಡಿಸಿಕೊಳ್ಳುವುದು ಹೇಗೆ? ನನ್ನ ಬದುಕಿನ ಅಂತಿಮ ಗುರಿ ಯಾವುದು? ಅದನ್ನು ತಲುಪಲು ಇರುವ ಸರಿಯಾದ ಮಾರ್ಗ ಯಾವುದು? ಇದುವೇ ಸರಿಯಾದ ಮಾರ್ಗ ಎಂದು ತೋರಿಸಿಕೊಡುವವರು ಯಾರು? ಇವೆಲ್ಲ ತನ್ನ ನಿಜವಾದ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮನುಷ್ಯ ತನ್ನನ್ನು ತಾನು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಎಂಬುದು ಡಿವಿಜಿ ವಚನದ ಧ್ವನಿ.

ಅವರ ಇನ್ನೊಂದು ಪ್ರಸಿದ್ಧ ಕಗ್ಗವಂತೂ ಈ ಸಂದರ್ಭಕ್ಕೆ ಚೆನ್ನಾಗಿ ಒಪ್ಪುತ್ತದೆ:
ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ
ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ|
ಉದ್ಧರಿಸುವೆನು ಜಗವನೆನ್ನುತಿಹ ಸಖನೆ
ನಿನ್ನುದ್ಧಾರವೆಷ್ಟಾಯ್ತೊ? ಮಂಕುತಿಮ್ಮ||
ಒಬ್ಬೊಬ್ಬರೂ ತಮ್ಮನ್ನು ತಾವು ಸರಿಪಡಿಸಿಕೊಂಡರೆ ಸಮಾಜವನ್ನು ತಿದ್ದುವುದಕ್ಕೆ ಮೂರನೆಯವನ ಅಗತ್ಯವಿಲ್ಲ ಎಂಬ ಈ ನುಡಿ ಎಷ್ಟೊಂದು ಅದ್ಭುತವಾಗಿದೆ ನೋಡಿ! ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್| ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ|| (ತನ್ನನ್ನು ತಾನೇ ಉದ್ಧಾರಮಾಡಿಕೊಳ್ಳಬೇಕು. ತನ್ನನ್ನು ಕುಗ್ಗಿಸಿಕೊಳ್ಳಬಾರದು. ಏಕೆಂದರೆ, ತಾನೇ ತನ್ನ ಬಂಧು. ತಾನೇ ತನ್ನ ಶತ್ರು) ಎಂಬ ಗೀತಾಚಾರ್ಯನ ಮಾತಿನ ತಾತ್ಪರ್ಯವೂ ಇದೇ ಅಲ್ಲವೇ?
'ಲೋಕದ ಡೊಂಕ ನೀವೇಕೆ ತಿದ್ದುವಿರಿ? ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ’ ಎಂದು ಬಸವಣ್ಣನವರ ಮಾತಿನಲ್ಲೂ, 'ಕೆಡುಕರನ್ನು ನಾ ಹುಡುಕುತ ಹೊರಟೆ/ ಕೆಡುಕರಾರೂ ಸಿಗಲಿಲ್ಲ/ ನನ್ನಯ ಮನವನು ನಾನೇ ನೋಡೆ/ ನನಗಿಂತ ಕೆಡುಕರಿಲ್ಲ- ಕಬೀರಾ’ ('ಕಬೀರ ಬೀರಿದ ಬೆಳಕು’: ಸ್ವಾಮಿ ಪುರುಷೋತ್ತಮಾನಂದ) ಎಂಬ ಕಬೀರರ ಮಾತಿನಲ್ಲಿಯೂ ಇರುವುದು ಆತ್ಮನಿರೀಕ್ಷಣೆಯ ತತ್ವವೇ.

'ನಾನು ಯಾರು?’ ಎಂಬ ಸರಳ ಪ್ರಶ್ನೆಯೇ 'ಸಚ್ಚಿದಾನಂದ’ವೆಂಬ ಆತ್ಮಸಾಕ್ಷಾತ್ಕಾರದ ಮೂಲವೆಂದು ಪ್ರತಿಪಾದಿಸಿದವರು ಶ್ರೀ ರಮಣಮಹರ್ಷಿಗಳು. ಮನಸ್ಸೇ ಎಲ್ಲದಕ್ಕೂ ಮೂಲ. ಅದೇ ಸೂಕ್ಷ್ಮರೂಪದಲ್ಲಿರುವ ಶರೀರ. ಈ ಶರೀರದಲ್ಲಿ ನಾನೆಂದು ತೋರುವುದು ಯಾವುದೋ ಅದೇ ಮನಸ್ಸು. ಮನಸ್ಸಿಗೂ ಪ್ರಾಣಕ್ಕೂ ಮೂಲಸ್ಥಾನ ಒಂದೇ ಎಂಬ ಅವರ ಮಾತಿನಲ್ಲಿ ಮನಸ್ಸೇ ಈ ಸಚ್ಚಿದಾನಂದಕ್ಕಿರುವ ಮಹಾಮಾರ್ಗ ಎಂಬ ಸೂಚನೆಯಿದೆ.

ನಾನು ಯಾರು ಎಂಬ ಪ್ರಶ್ನೆಯ ಅಂತ್ಯದಲ್ಲಿ ದೊರೆಯುವ ಬೆಳಕಿನ ಬಿಂಬ ಯಾವುದೆಂಬುದನ್ನು ಶ್ರೀರಮಣಮಹರ್ಷಿಗಳು ಸೊಗಸಾಗಿ ವಿವರಿಸುತ್ತಾರೆ: ನಾನು ಯಾರು ಎಂಬ ವಿಚಾರದಿಂದಲೇ ಮನಸ್ಸು ಲಯವಾಗುತ್ತದೆ. ನಾನೆಂಬ ಸಂಕಲ್ಪವು ಇತರ ಸಂಕಲ್ಪಗಳನ್ನೆಲ್ಲಾ ನಾಶಮಾಡಿ ಶವವನ್ನು ಸುಟ್ಟ ಕಟ್ಟಿಗೆಯಂತೆ ಕಡೆಗೆ ತಾನೂ ನಾಶವಾಗುತ್ತದೆ... ನಾನು ಯಾರು ಎಂದು ಪ್ರಶ್ನೆ ಮಾಡಿದಲ್ಲಿ ಮನಸ್ಸು ತನ್ನ ಹುಟ್ಟಿದ ಸ್ಥಳಕ್ಕೇ ಮರಳಿ, ಹುಟ್ಟಿದ ಸಂಕಲ್ಪವೂ ಲಯವಾಗಿ ಹೋಗುವುದು... ಮನಸ್ಸನ್ನು ಹೊರಗೆ ಹೋಗಗೊಡಿಸದೆ ಹೃದಯದಲ್ಲಿ ನಿಲ್ಲಿಸಿಕೊಳ್ಳುವುದಕ್ಕೇ ಅಂತರ್ಮುಖ ಎಂದು ಹೆಸರು. ಹೀಗೆ ಮಾಡಿದಾಗ ಸಂಕಲ್ಪ ವಿಕಲ್ಪಗಳಿಗೆಲ್ಲಾ ಮೂಲವಾದ 'ನಾನು’ ಎಂಬುದು ಹೋಗಿ ಯಾವಾಗಲೂ ಇರುವ ತಾನು ಮಾತ್ರ ಪ್ರಕಾಶಿಸುವುದು. ನಾನು ಎಂಬ ಸಂಕಲ್ಪವು ಸ್ವಲ್ಪವಾದರೂ ಇಲ್ಲದ ಸ್ಥಿತಿಯೇ ಸ್ವಸ್ವರೂಪವಾಗುತ್ತದೆ. ಅದೇ ಮೌನವೆಂದು ಕರೆಯಲ್ಪಡುವುದು. ಈ ರೀತಿಯಾಗಿ ಸುಮ್ಮನೆ ಇರುವುದಕ್ಕೇ ಜ್ಞಾನದೃಷ್ಟಿ ಎಂದು ಹೆಸರು, ಹೀಗೆನ್ನುವ ಮಹರ್ಷಿಗಳು ಸತ್ಯವಾದುದು ಆತ್ಮಸ್ವರೂಪ ಒಂದೇ ಎಂಬ ಉಪನಿಷತ್ ಸಾರವನ್ನು ಸರಳವಾಗಿ ಪ್ರತಿಪಾದಿಸುತ್ತಾರೆ.

'ನೀನು ಮೋಕ್ಷಕ್ಕೆ ಹೋಗುವಿಯೋ?’ ಎಂದು ಗುರು ವ್ಯಾಸತೀರ್ಥರು ಕನಕದಾಸರನ್ನು ಕೇಳಿದ, ’ನಾನು ಹೋದರೆ ಹೋದೇನು’ ಎಂದು ಕನಕದಾಸರು ಉತ್ತರಿಸಿದ ಪ್ರಸಿದ್ಧ ದೃಷ್ಟಾಂತವೂ ನಮಗೆ ಹೇಳುವುದು ಇದೇ ವಿಚಾರವನ್ನು. ನೀವು ನಿಮ್ಮ ಮನಸ್ಸನ್ನು ಮೀರಿದಾಗಲೇ ನಿಮ್ಮ ಅಹಂಕಾರವನ್ನು ಜಯಿಸಿ ಮುಂದೆ ಸಾಗುತ್ತೀರಿ. ಆಗಲೇ ನಿಮ್ಮ ಬಗೆಗಿನ ಸತ್ಯದ ದರ್ಶನವಾಗುತ್ತದೆ. ನೀವು ಚಿತ್ರಿಸಿಕೊಂಡ ವ್ಯಕ್ತಿತ್ವಕ್ಕೂ ವಾಸ್ತವದಲ್ಲಿ ನೀವಿರುವ ರೀತಿಗೂ ಅಗಾಧವಾದ ವ್ಯತ್ಯಾಸವಿದೆ ಎಂಬುದನ್ನು ಮನಗಾಣುತ್ತೀರಿ. ನಿಮ್ಮ ಅಹಂ ಚಿತ್ರಿಸಿದ ನಿಮ್ಮ ಚಿತ್ರದಲ್ಲಿ ನಿಮ್ಮ ದೇಹ ಮತ್ತು ಮನಸ್ಸುಗಳೆರಡೂ ಇಲ್ಲವೆಂಬುದು ನಿಮ್ಮ ಅರಿವಿಗೆ ಬರುತ್ತದೆ ಎನ್ನುತ್ತಾರೆ ಓಶೋ.

ದುರದೃಷ್ಟವಶಾತ್, ಸ್ವಸ್ಥಾನಪರಿಜ್ಞಾನದ ಕೊರತೆಯೇ ಆತ್ಮಸಂತೋಷವನ್ನು ಸಾಧಿಸುವಲ್ಲಿ ಬಹುಮಂದಿಗಿರುವ ದೊಡ್ಡ ಅಡ್ಡಿ. ತಮ್ಮ ವೃತ್ತಿ, ಆದಾಯ, ಸಾಮಾಜಿಕ ಸ್ಥಾನಮಾನಗಳೆಂಬ ಮಿಥ್ಯಾ ಅಸ್ಮಿತೆಗಳೇ ಅವರನ್ನು ಸದಾಕಾಲ ಸುತ್ತುವರಿದಿರುವುದರಿಂದ ನಿಜಕ್ಕೂ ತಾವೇನು, ತಮ್ಮ ಸ್ಥಾನಮಾನವೇನು ಎಂಬ ಅರಿವು ಅವರಲ್ಲಿ ಬೆಳಗುವುದೇ ಇಲ್ಲ. 'ಯಾರೂ ಅವರವರ ಅಳತೆ ಮೀರಿ ಉದ್ಘಾಟಿಸಿಕೊಳ್ಳಬಾರದು. ಇದು ಯತಾರ್ಥವಾಗಿ ತನ್ನನ್ನು ತಾನು ಸಣ್ಣದು ಮಾಡಿಕೊಂಡಹಾಗೆ’ ಎನ್ನುತ್ತಾರೆ ಯಕ್ಷಗಾನದ ಮೇರುಪುರುಷ ದಿ| ಶೇಣಿ ಗೋಪಾಲಕೃಷ್ಣ ಭಟ್ಟರು. ಅವರು ತಮ್ಮ ಆತ್ಮಕಥೆಯಲ್ಲಿ ಒಂದೆಡೆ ದಾಖಲಿಸುವ ವಿಚಾರ ಮಾರ್ಮಿಕವೂ ಚಿಂತನಾರ್ಹವೂ ಆಗಿದೆ: ಎಷ್ಟೋ ಸಲ ತಮ್ಮನ್ನು ತಮ್ಮ ವಾಸ್ತವಿಕತೆಯ ದೃಷ್ಟಿಯಿಂದ ನೋಡಿಕೊಳ್ಳದೆ ಸಭಾಮರ್ಯಾದೆಗಾಗಿಯೋ, ಭಾಷಾ ಮರ್ಯಾದೆಗಾಗಿಯೋ ಅಭಿನಂದನಕಾರರು ಆಡುವ ಮಾತಿನಿಂದಲೂ, ಮಾನಪತ್ರಗಳ ಒಕ್ಕಣೆಗಳಿಂದಲೂ ಕೆಲವರು ಪ್ರಭಾವಿತರಾಗಿ ತನ್ನ ವ್ಯಕ್ತಿತ್ವಕ್ಕೆ ಅಳತೆಗೋಲಾಗಿ ಮಾಡಿಕೊಳ್ಳುವುದುಂಟು. ಇಂತಹವರು ತಮ್ಮನ್ನು ತಮ್ಮ ಕಲ್ಪನೆಯ ಮಟ್ಟದಿಂದ ಇತರರೂ ಗುರುತಿಸಬೇಕೆಂದು ಬಯಸಿ, ಕೆಲವೊಮ್ಮೆ ಹಾಗಾಗದಿದ್ದಾಗ ಅತೃಪ್ತರಾಗುವುದುಂಟು.

ತಮ್ಮ ಬದುಕೆಲ್ಲವೂ ಸತ್ಯಾನ್ವೇಷಣೆಯ ಪ್ರಯೋಗಶಾಲೆಯೆಂದರು ಮಹಾತ್ಮ ಗಾಂಧೀಜಿ. ಅವರು ತಮ್ಮ ಆತ್ಮಚರಿತ್ರೆಯನ್ನು 'ಮೈ ಎಕ್ಸ್‌ಪರಿಮೆಂಟ್ ವಿದ್ ಟ್ರುಥ್’ ಎಂದೇ ಕರೆದರು. ಸತ್ಯಶೋಧಕ ಧೂಳುಕಣಕ್ಕಿಂತ ಹೆಚ್ಚು ನಮ್ರನಾಗಿರಬೇಕು. ಲೋಕವು ಧೂಳಿನ ಕಣವನ್ನು ಕಾಲ ಕೆಳಗೆ ತುಳಿಯುತ್ತದೆ. ಆದರೆ ಸತ್ಯಶೋಧಕ ಆ ಧೂಳಿನ ಕಣದಿಂದಲೂ ತುಳಿಸಿಕೊಳ್ಳುವಷ್ಟು ನಮ್ರನಾಗಿರಬೇಕು. ಆಗ ಮಾತ್ರ ಅವನಿಗೆ ಸತ್ಯದ ಕಿರುನೋಟ ಲಭಿಸೀತು ಎಂದು ತಮ್ಮ ಆತ್ಮಕಥೆಯ ಮುನ್ನುಡಿಯಲ್ಲಿ ಹೇಳಿದ್ದಾರೆ ಗಾಂಧೀಜಿ.

ಬದುಕಿನ ಉದ್ದೇಶ ಮತ್ತು ಅದರ ಸಾಧನೆಗಿರುವ ರಾಜಮಾರ್ಗವನ್ನು ಮಹಾಭಾರತದಷ್ಟು ಸರಳವೂ ನೇರವೂ ಆಗಿ ಇನ್ನೆಲ್ಲೂ ಹೇಳಿಲ್ಲವೇನೋ?
ಆಹಾರಾರ್ಥಂ ಕರ್ಮ ಕುರ್ಯಾದ ನಿಂದ್ಯಂ
ಕುರ್ಯಾದಾಹಾರಂ ಪ್ರಾಣ ಸಂಧಾರಣಾರ್ಥಂ|
ಪ್ರಾಣಾಃ ಸಂಧಾರ್ಯಾಃ ತತ್ವ ವಿಜ್ಞಾನ ಹೇತೋಃ
ತತ್ತ್ವಂ ವಿಜ್ಞೇಯಂ ಯೇನ ಭೂಯೋ ನ ಜನ್ಮ||
(ಆಹಾರ ಸಂಪಾದನೆಗಾಗಿ ನಿಂದಿತವಲ್ಲದ ಕರ್ಮವನ್ನು ಮಾಡಬೇಕು. ಪ್ರಾಣಧಾರಣೆಗಾಗಿ ಆಹಾರವನ್ನು ಸೇವಿಸಬೇಕು. ತತ್ವವನ್ನರಿಯುವುದಕ್ಕಾಗಿ ಪ್ರಾಣವನ್ನು ಉಳಿಸಿಕೊಳ್ಳಬೇಕು. ಪುನರ್ಜನ್ಮವಾಗಬಾರದೆಂದು ತತ್ತ್ವವನ್ನು ತಿಳಿಯಬೇಕು).
ಜಗತ್ತಿನ ಎಲ್ಲ ಕ್ಷೆಭೆಗಳ ಮೂಲ ಜನರಿಗಿರುವ ಅಸ್ಮಿತೆಯ ಬಿಕ್ಕಟ್ಟು (ಐಡೆಂಟಿಟಿ ಕ್ರೈಸಿಸ್). ಜಾತಿ, ಧರ್ಮ, ಆಸ್ತಿ, ಅಂತಸ್ತು, ಕೀರ್ತಿ ಇತ್ಯಾದಿ ಯಾವುದೇ ಅಸ್ಮಿತೆಗಳ ಬಾಲ ಹಿಡಿದರೂ ಮನುಷ್ಯನಿಗೆ ಸಂತೃಪ್ತಿ ಇಲ್ಲ. ವಾಸ್ತವವಾಗಿ ಅವು ಯಾವುವೂ ತನ್ನವಲ್ಲ ಎಂಬ ಸರಳ ಸತ್ಯವನ್ನು ಆತ ಅರ್ಥ ಮಾಡಿಕೊಂಡರೆ ಅವುಗಳ ಹೆಸರಿನಲ್ಲಿ ಪ್ರತಿದಿನ ಕಲಹ ಮಾಡುವ ಪ್ರಮೇಯವೇ ಬರುವುದಿಲ್ಲ. ಜಾತಿ-ಧರ್ಮ-ಅಧಿಕಾರಗಳ ಹೆಸರಿನಲ್ಲಿ ಜನರ, ಪ್ರಾಂತ್ಯಗಳ, ದೇಶಗಳ ನಡುವೆ ನಡೆಯುತ್ತಿರುವ ಕದನಗಳಿಗೆ ಆತ್ಮಶೋಧನೆಯ ಸೂತ್ರದಲ್ಲಿ ಪರಿಹಾರವಿದೆಯೇ ಎಂಬ ಜಿಜ್ಞಾಸೆಯೇ ನಮ್ಮನ್ನು ರೋಮಾಂಚನಗೊಳಿಸುತ್ತದೆ. ’ನಾನು ಯಾರು’ ಎಂಬ ಪ್ರಶ್ನೆ ಅಂತಿಮವಾಗಿ ವಿಶ್ವಶಾಂತಿಯೆಡೆಗೆ ನಮ್ಮನ್ನೆಲ್ಲ ಮುನ್ನಡೆಸಬಲ್ಲುದಾದರೆ ಅದಕ್ಕಿಂದ ದೊಡ್ಡ ಸಾರ್ಥಕತೆ ಇನ್ನೇನಿದೆ?
(ನೆರವು: ವಿದ್ವಾನ್ ಹೆಚ್. ಎಸ್. ಬಾಲಕೃಷ್ಣ)

ಶನಿವಾರ, ಅಕ್ಟೋಬರ್ 15, 2016

ಕಲೆಯ ಸೆಲೆಯಿಲ್ಲದೆ ಬದುಕಿಗೆಲ್ಲಿಯ ಬೆಲೆ?

ಅಕ್ಟೋಬರ್ 13, 2016ರ 'ಕನ್ನಡ ಪ್ರಭ' ಕ್ಯಾಂಪಸ್ ಪುಟದಲ್ಲಿ ಪ್ರಕಟವಾದ ಲೇಖನ

ಅತ್ತ ನವರಾತ್ರಿಯ ಹುಲಿಗಳು ತಮಟೆಯ ಬಡಿತಕ್ಕೆ ಲಯಬದ್ಧವಾಗಿ ಹೆಜ್ಜೆಹಾಕುತ್ತಿದ್ದರೆ ಇತ್ತ ಉಮಾಮಹೇಶ್ವರ ಸಂಗೀತಶಾಲೆಯ ವಿದ್ಯಾರ್ಥಿಗಳು ನಾದಸರಸ್ವತಿಯ ಉಪಾಸನೆಯಲ್ಲಿ ಮುಳುಗಿದ್ದರು. ಭಾವ-ರಾಗ-ತಾಳಗಳನ್ನು ಮೇಳೈಸಿಕೊಂಡು ಹತ್ತಾರು ಮಕ್ಕಳು ಮುಂಜಾನೆಯಿಂದ ಮಧ್ಯರಾತ್ರಿಯವರೆಗೂ ಹಾಡುತ್ತಲೇ ಹೋದರು. ಅವರಿಗೆ ದಣಿವೆಂಬುದೇ ಇರಲಿಲ್ಲ. ಅವರಲ್ಲಿ ತುಂಬಿ ತುಳುಕುತ್ತಿದ್ದ ಪ್ರತಿಭೆ ಮತ್ತು ಮುಖದಲ್ಲಿ ಹೊಮ್ಮುತ್ತಿದ್ದ ಜ್ಞಾನದ ಪ್ರಭೆಗೆ ಇಡೀ ಸಭಾಂಗಣ ಅಕ್ಷರಶಃ ಮಿರಮಿರನೆ ಮಿಂಚುತ್ತಿತ್ತು.

ಅದ್ಯಾಕೋ ಇದ್ದಕ್ಕಿದ್ದಂತೆ ಕೋಚಿಂಗ್ ಸೆಂಟರುಗಳೆಂಬ ಮಹಾಜೈಲುಗಳಲ್ಲಿ ಪುಸ್ತಕಗಳ ನಡುವೆ ನರಳುತ್ತಿರುವ ಇದೇ ವಯಸ್ಸಿನ ಮಕ್ಕಳ ಚಿತ್ರ ಕಣ್ಮುಂದೆ ಸುಳಿದು ಮರೆಯಾಯಿತು. ಮಾತೆತ್ತಿದರೆ ಮಾರ್ಕ್ಸ್, ಬಾಯ್ಬಿಟ್ಟರೆ ರ‍್ಯಾಂಕ್, ದಿನಬೆಳಗಾದರೆ ಎಂಜಿನಿಯರಿಂಗ್-ಮೆಡಿಕಲ್ ಸೀಟುಗಳ ಜಪ... ಈ ಫಸ್ಟ್ ರ‍್ಯಾಂಕ್ ರಾಜುಗಳು ಸುಂದರ ಸೂರ್ಯೋದಯವನ್ನೋ ರಮಣೀಯ ಸೂರ್ಯಾಸ್ತವನ್ನೋ ಹೃದಯಂಗಮ ಕಡಲ ತೀರವನ್ನೋ ಹಚ್ಚಹಸುರಿನ ಪ್ರಕೃತಿಸಿರಿಯನ್ನೋ ನೋಡಿ ಅದೆಷ್ಟು ದಿನಗಳಾದವೋ? ಇನ್ನು ಅವರು ಸಂಗೀತವೆಂಬ ಆತ್ಮಸಂತೋಷದ ತಂತಿಯನ್ನು ಮೀಟುವುದಕ್ಕೆ ಬಿಡುವಾದರೂ ಎಲ್ಲಿ ದೊರಕೀತು!

ನಾನು ನನ್ನ ಕಂಪೆನಿಗೆ ತಂತ್ರಜ್ಞರುಗಳನ್ನು ಆಯ್ಕೆ ಮಾಡುವಾಗ ಕೇವಲ ಅವರ ಎಂಜಿನಿಯರಿಂಗ್ ಪ್ರತಿಭೆಯಷ್ಟನ್ನೇ ನೋಡುವುದಿಲ್ಲ. ಸಂಗೀತವೇ ಮೊದಲಾದ ಲಲಿತ ಕಲೆಗಳಲ್ಲಿ ಅವರು ತರಬೇತಿ ಪಡೆದಿದ್ದಾರೆಯೇ ಎಂಬುದನ್ನು ಗಮನಿಸುತ್ತೇನೆ ಮತ್ತು ಅಂಥವರಿಗೆ ಆದ್ಯತೆ ನೀಡುತ್ತೇನೆ - ಹೀಗೆಂದವರು ’ಆಪಲ್’ ಸಂಸ್ಥಾಪಕ ಸ್ಟೀವ್ ಜಾಬ್ಸ್. ಅವರು ತಮ್ಮ ಮಾತನ್ನು ಹೀಗೆ ಮುಂದುವರಿಸುತ್ತಾರೆ: ಮ್ಯಾಕಿಂಟೋಶ್ ಯಾಕೆ ಒಂದು ಅದ್ಭುತ ಸಂಶೋಧನೆಯಾಯಿತೆಂದರೆ ಅದಕ್ಕಾಗಿ ಕೆಲಸ ಮಾಡಿದವರು ಜಗತ್ತಿನ ಶ್ರೇಷ್ಠ ಕಂಪ್ಯೂಟರ್ ವಿಜ್ಞಾನಿಗಳಷ್ಟೇ ಆಗಿರಲಿಲ್ಲ, ಅವರು ಸಂಗೀತಜ್ಞರು, ಕವಿಗಳು, ಕಲಾವಿದರು ಮತ್ತು ಇತಿಹಾಸಕಾರರೂ ಆಗಿದ್ದರು.

ತಮ್ಮ ಮಗು ಲಕ್ಷಗಟ್ಟಲೆ ಸಂಬಳ ಗಳಿಸುವ ಎಂಜಿನಿಯರ್ ಆದರಷ್ಟೇ ಜನ್ಮ ಸಾರ್ಥಕ ಎಂದುಕೊಳ್ಳುವ ಹೆತ್ತವರು, ಅವರು ಹಾಕಿದ ಲಕ್ಷ್ಮಣರೇಖೆ ದಾಟದೆ ಸ್ಕೋರಿಂಗ್ ಮಶೀನುಗಳಾಗುವುದಷ್ಟೇ ತಮ್ಮ ಕರ್ತವ್ಯ ಎಂದುಕೊಂಡಿರುವ ಮಕ್ಕಳೆಲ್ಲರೂ ಸ್ಟೀವ್ ಜಾಬ್ಸ್‌ನ ಮಾತನ್ನೊಮ್ಮೆ ಮನಸಾರೆ ಗುನುಗುನಿಸಬೇಕು. ಬದುಕು ಎಂದರೆ ಏನು? ಬರೀ ಸ್ಪರ್ಧೆಯೇ? ಬರೀ ಸಂಪಾದನೆಯೇ? ಬರೀ ಓಟವೇ? ಬರೀ ಒತ್ತಡವೇ? ಅದರಾಚೆಗೆ ಏನೂ ಇಲ್ಲವೇ?

ಮಿತ್ರರೇ ನಾವು ಶ್ರೇಷ್ಠ ವಿಜ್ಞಾನಿಗಳಾಗೋಣ, ಪ್ರಸಿದ್ಧ ವೈದ್ಯರಾಗೋಣ, ಕೈತುಂಬ ಸಂಬಳ ಗಳಿಸುವ ಎಂಜಿನಿಯರುಗಳಾಗೋಣ. ಆದರೆ ಅಷ್ಟಕ್ಕೇ ನಮ್ಮ ಜೀವನ ಸೀಮಿತಗೊಂಡರೆ ನಮಗೂ ರೋಬೋಟ್‌ಗಳಿಗೂ ಏನು ವ್ಯತ್ಯಾಸ ಉಳಿಯುತ್ತದೆ? ಮನುಷ್ಯ ಸಹಜ ಭಾವನೆಗಳಿಗೆ ಅಭಿವ್ಯಕ್ತಿ ಸಿಗದೇ ಹೋದರೆ ನಾವು ಮನುಷ್ಯರು ಹೇಗಾದೇವು? ಈ ಪ್ರಪಂಚ ಎಷ್ಟೊಂದು ವಿಶಾಲ ವೈವಿಧ್ಯಮಯ ಅವಕಾಶಗಳ ಆಗರ. ಕೇವಲ ಹಣಗಳಿಕೆಯಷ್ಟೇ ನಮ್ಮ ಉದ್ದೇಶವಾದರೆ ಮಾನವನೆಂಬ ಪ್ರಕೃತಿಯ ಅಮೂಲ್ಯ ಸೃಷ್ಟಿಗೆ ಎಲ್ಲಿಯ ಕಿಮ್ಮತ್ತು?

ಲಲಿತಕಲೆಗಳು ನಮ್ಮ ಬದುಕನ್ನು ಪರಿಪೂರ್ಣವಾಗಿಸುತ್ತವೆ. ಅದರಲ್ಲೂ ಸಂಗೀತ, ನೃತ್ಯಗಳಂತಹ ಕಲೆಗಳು ಕಷ್ಟಕಾಲದಲ್ಲಿ ನಮ್ಮನ್ನು ಕಾಪಾಡುತ್ತವೆ. ಹಣದ ರಾಶಿ ತತ್‌ಕಾಲಕ್ಕೆ ಸಂತೋಷವನ್ನೂ ಹೆಮ್ಮೆಯನ್ನೂ ತಂದುಕೊಡಬಲ್ಲುದೇನೋ? ಆದರೆ ಅದು ಶಾಶ್ವತವಲ್ಲ. ಕಲೆ ತಂದುಕೊಡುವ ಸಂತೃಪ್ತಿ ಸಂಪೂರ್ಣವೂ ಶಾಶ್ವತವೂ ಆದದ್ದು. ನಮ್ಮೊಂದಿಗೆ ಯಾರೂ ಇಲ್ಲದ ವೇಳೆ ನಮ್ಮ ಬಳಿಯಿರುವ ಸಂಪತ್ತಿನ ಚೀಲ ಯಾವ ಪ್ರಯೋಜನಕ್ಕೂ ಬರದು. ಆದರೆ ನಮ್ಮೊಂದಿಗಿರುವ ಕಲೆ ಅಂತಹ ಕಾಲದಲ್ಲಿ ನಮ್ಮ ಅತ್ಯುತ್ತಮ ಒಡನಾಡಿಯಾದೀತು. ಎಲ್ಲಿ ಶಬ್ದಗಳು ವಿಫಲವಾಗುತ್ತವೋ ಅಲ್ಲಿ ಸಂಗೀತ ಮಾತನಾಡುತ್ತದಂತೆ. ಎಲ್ಲಿ ಒಂಟಿತನದ, ಸೋಲಿನ ಭೀತಿ ಆವರಿಸುತ್ತದೋ ಅಲ್ಲಿ ಕಲೆ ನಮ್ಮ ಕೈಹಿಡಿಯುತ್ತದೆ.

ಅಂಕಗಳ, ರ‍್ಯಾಂಕುಗಳ ಹಿಂದೆ ಬಿದ್ದಿರುತ್ತಿದ್ದರೆ ನಮಗೊಬ್ಬರು ಎಂ. ಎಸ್. ಸುಬ್ಬುಲಕ್ಷ್ಮಿ ಸಿಗುತ್ತಿದ್ದರೇ? ಲತಾ ಮಂಗೇಶ್ಕರ್ ಸಿಗುತ್ತಿದ್ದರೇ? ಚೆಂಬೈ, ಪಟ್ಟಮ್ಮಾಳ್, ಶೆಮ್ಮಗುಂಡಿ, ಲಾಲ್ಗುಡಿ, ಚೌರಾಸಿಯಾ, ಭೀಮಸೇನ್ ಜೋಶಿ, ಎಸ್. ಜಾನಕಿ, ಬಾಲಮುರಳೀಕೃಷ್ಣ, ಮಲ್ಲಿಕಾ ಸಾರಾಭಾಯಿ, ಝಾಕಿರ್ ಹುಸೇನ್, ಪದ್ಮಾ ಸುಬ್ರಹ್ಮಣ್ಯಂ, ಎ. ಆರ್. ರೆಹಮಾನ್, ಎಂ.ಎಸ್. ಗೋಪಾಲಕೃಷ್ಣನ್ ಅಥವಾ ಆರ್. ಕೆ. ಶ್ರೀಕಂಠನ್ ಸಿಗುತ್ತಿದ್ದರೇ? ಇವರಿಗಾಗಲೀ ಇವರ ಕುಟುಂಬಕ್ಕಾಗಲೀ ಸಂಗೀತ ನೃತ್ಯಗಳೇ ಬದುಕಿನ ಸರ್ವಸ್ವವಾಗಿದ್ದವು. ಅದರಲ್ಲೇ ಬೆಳಗು, ಅದರಲ್ಲೇ ರಾತ್ರಿ. ಅವರು ಸಂಪಾದಿಸಿದ್ದು ಅವರೊಂದಿಗೇ ಮುಗಿಯಲಿಲ್ಲ. ಇನ್ನೂ ನೂರಾರು ವರ್ಷಗಳ ಕಾಲ ನಮ್ಮ ನಡುವೆ ಕಾಲಪ್ರವಾಹದಲ್ಲಿ ಹರಿಯುತ್ತಲೇ ಇರುತ್ತದೆ.

ನಾನು ಒಂದುವೇಳೆ ಭೌತವಿಜ್ಞಾನಿ ಆಗಿಲ್ಲದಿರುತ್ತಿದ್ದರೆ, ಬಹುಶಃ ಸಂಗೀತಜ್ಞ ಆಗಿರುತ್ತಿದ್ದೆ. ನಾನು ಸಂಗೀತಲ್ಲೇ ಯೋಚಿಸುತ್ತೇನೆ. ಸಂಗೀತದಲ್ಲೇ ನನ್ನ ಹಗಲುಗನಸುಗಳನ್ನು ಕಾಣುತ್ತೇನೆ ಎಂದಿದ್ದರು ಆಲ್ಬರ್ಟ್ ಐನ್‌ಸ್ಟೀನ್. ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿಗಳು, ತಂತ್ರಜ್ಞರೆಲ್ಲರೂ ಲಲಿತಕಲೆಗಳ ಬಹುದೊಡ್ಡ ಅಭಿಮಾನಿಗಳೆಂಬುದನ್ನು ನಾವು ಗಮನಿಸಬೇಕು. ಅವರ‍್ಯಾರಿಗೂ ಸಂಗೀತವಾಗಲೀ ನೃತ್ಯವಾಗಲೀ ಚಿತ್ರಕಲೆಯಾಗಲೀ ವಿದ್ಯಾಭ್ಯಾಸಕ್ಕಿರುವ ತೊಡಕೆಂದು ಅನಿಸಲೇ ಇಲ್ಲ. ಬದಲಾಗಿ, ಇವೆಲ್ಲ ವ್ಯಕ್ತಿಯ ಒಟ್ಟಾರೆ ಕಲಿಕೆಯ ವೇಗವರ್ಧಕಗಳೆಂದು ಅವರು ಭಾವಿಸಿದ್ದರು.

ಭಾರತೀಯ ಸಂಜಾತ ವಿಶ್ವಪ್ರಸಿದ್ಧ ಗಣಿತಜ್ಞ ಹಾಗೂ ಪ್ರತಿಭಾವಂತ ತಬಲಾಪಟು ಮಂಜುಳ್ ಭಾರ್ಗವ ಕಳೆದ ವರ್ಷ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಮಾಡಿದ ಭಾಷಣ ನಮ್ಮ ಕಣ್ತೆರೆಸುವಂತಿದೆ: ಭಾರತಕ್ಕೆ ಶ್ರೇಷ್ಠ ವಿಜ್ಞಾನಿಗಳು, ಅನ್ವೇಷಕರು, ನ್ಯಾಯಪಂಡಿತರು ಬೇಕಿದ್ದರೆ ನಿಮ್ಮ ಮಕ್ಕಳಿಗೆ ಸಂಗೀತ ಕಲಿಸಿ... ಶಾಸ್ತ್ರೀಯ ಸಂಗೀತದ ಶಕ್ತಿ ಏನೆಂದರೆ ಅದು ವ್ಯಕ್ತಿಯೊಬ್ಬ ತೊಡಗಿರುವ ಇತರ ಕ್ಷೇತ್ರಗಳಲ್ಲಿಯೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಭಾರತೀಯ ಸಂಗೀತವೆಂಬುದು ಆಳ ಗಣಿತವನ್ನೂ ಸಂಕೀರ್ಣ ಸೌಂದರ್ಯವನ್ನೂ ತನ್ನೊಳಗಿರಿಸಿಕೊಂಡಿರುವ ಅತಿ ವಿಸ್ತಾರದ ಅಭಿವ್ಯಕ್ತಿ...

ಸ್ನೇಹಿತರೇ, ಒಂದೋ ಅತಿಯಾದ ಓದು ಇಲ್ಲವೇ ಅತಿಯಾದ ಮೋಜು- ಇವುಗಳಲ್ಲೇ ನಮ್ಮ ವಿದ್ಯಾರ್ಥಿ ಜೀವನ ಕಳೆದುಹೋಗುವ ಅಪಾಯ ಹೆಚ್ಚು. ಓದು, ಅಸೈನ್‌ಮೆಂಟು, ಪರೀಕ್ಷೆಗಳ ನಡುವೆ ನಮ್ಮ ಸ್ಟೂಡೆಂಟ್‌ಲೈಫು ಕರಗಿಹೋದರೆ ಕೊನೆಗೆ ಉಳಿಯುವುದು ಅಂಕಪಟ್ಟಿ ಮಾತ್ರ. ಎಲ್ಲ ಗಡಿಬಿಡಿಗಳ ನಡುವೆ ಒಂದಿಷ್ಟು ಸಮಯವನ್ನು ಹೊಂದಿಸಿಕೊಂಡು  ಸಂಗೀತವನ್ನೋ ನೃತ್ಯವನ್ನೋ ಅಭ್ಯಾಸ ಮಾಡಿ. ನೀವು ಓದುತ್ತಿರುವ ಊರಿನಲ್ಲೇ ಹುಡುಕಿದರೆ ನಿಮಗೊಬ್ಬ ಒಳ್ಳೆಯ ಗುರು ಸಿಗಬಹುದು. ಅವರಿಂದ ನಿಮ್ಮ ಬದುಕಿಗೊಂದು ಮಹತ್ವದ ತಿರುವೂ ಲಭಿಸಬಹುದು. ನೀವು ಅದರಲ್ಲೇ ಮುಂದುವರಿದು ದೊಡ್ಡ ಕಲಾವಿದರಾಗಬೇಕೆಂದೇನೂ ಇಲ್ಲ; ಕಲೆಯ ಬಗ್ಗೆ ಗೌರವ, ಕಲಾಸ್ವಾದನೆಯ ಗುಣ ನಿಮ್ಮಲ್ಲಿ ಬೆಳೆದರೆ ಸಾಕು. ನೀವು ಯಾವ ಉದ್ಯೋಗದಲ್ಲಾದರೂ ಮುಂದುವರಿಯಿರಿ, ಯಾವ ದೇಶದಲ್ಲಾದರೂ ಬದುಕಿ, ಆದರೆ ನಿಮ್ಮೊಳಗೆ ಚಿಗಿತ ಕಲೆಯ ಪುಟ್ಟ ಬಳ್ಳಿ ನಿಮ್ಮ ಇಡೀ ಜೀವನಕ್ಕೆ ನೆಮ್ಮದಿಯ ತೋರಣ ಕಟ್ಟೀತು ಎಂಬುದು ಮಾತ್ರ ಸಂಗೀತದಾಣೆ ಸತ್ಯ.

ಸೋಮವಾರ, ಅಕ್ಟೋಬರ್ 3, 2016

BAIF Institute of Rural Development: Towards carrying forward Gandhian principles of Gram Swaraj


The Gramodaya training centre
at the BIRD-K campus at Lakkihalli near Tiptur.
Life was just miserable for the farmers of Upparahalli, a village in Chikkanayakanahalli taluk of Tumkur district. They toiled hard but they could hardly smile at the end of the day. They thought, agriculture, could no more be a reliable source of their daily bread.

Well, this is a decade-old story. If you visit the village now, you will be surprised to see a completely different picture altogether. You will see at least hundred self-reliant families beaming with smiles and confidence. Upparahalli has witnessed a paradigm shift with the introduction of organic farming and a reinforcement of traditional knowledge and modern techniques.

Every villager has become an expert in vermicomposting, preparing Jeevamruta, bio-pesticides, liquid fertilizers and Japan-model organic fertilizers. Brinjal, tomato, beans, bitter-gourd, ladies finger, radish, snake gourd, angular gourd… you ask for it, and you will get it in each courtyard – everything grown organically. “We are happy today. We are sure nothing will fetch us more income like vegetable. We now believe that only agriculture will save us” say the villagers.

A farmer with his rainwater harvesting pond.
Interestingly, this is not the story of only Upparahalli. You will find hundreds of such villages across Karnataka chanting the mantra of self-reliance. And the strength behind such confidence is BAIF Institute of Rural Development – Karnataka (BIRD-K), a non-profit organization that has been striving towards realizing the Gandhian concept of Gram Swaraj.

True to its vision of “building a self-reliant rural society assured of food security, safe drinking water, good health, gender equity, low child mortality, literacy, high moral values and clean environment”, BIRD-K has been following the footsteps of Mahatma since its inception in 1980. Gandhiji’s principle of Sarvodaya is well-reflected in the mission of the organization, i.e., “to create opportunities of gainful self-employment for the rural families, especially disadvantaged sections, ensuring sustainable livelihood, enriched environment, improved quality of life and good human values.”

Gandhian roots
The very origin of BIRD-K lies in the Gandhian dream of prosperity of rural India. In fact, the story of its birth can be traced back to the Nature Cure Ashram of Mahatma Gandhiji.  It was in March 1946, Gandhiji established a naturopathy centre in Urulikanchan near Pune in order to improve the quality of life of rural people, and entrusted the responsibility of continuing its activities to Manibhai Desai, a youngster active in freedom movement. Manibhai Desai used this opportunity to promote community development and sustainable livelihoods in and around the villages of the Nature Cure Centre.

Dr. Manibhai Desai
Based on this successful experience, he established Bharatiya Agro Industries Foundation (BAIF) in August 1967 as a Public Trust, and motivated farmers to take up agro based development as their business enterprise with sound management practices. In 1989, BAIF was renamed as BAIF Development Research Foundation to refocus on development research for rural prosperity. Today BAIF is active in 16 states across India through its various associate organizations, and BIRD-K is one among them. BIRD-K was established on May 13, 1980 in order to extend the BAIF mission in Karnataka.

Since then, BIRD-K, the non-political, secular and professionally managed organization is committed towards realizing the Gandhian dream of “welfare of all”. Cattle development was the initial preference of the BAIF since Dr. Manibhai thought dairy husbandry could be the easier and effective way of involving the rural mass in the development process. The programme was expanded to conserve natural resources for promoting holistic sustainable livelihood, while ensuring women empowerment, improved quality of life and environmental conservation. BIRD-K is based in Tiptur, 150 km away from Bangalore.

Dream of Gram Swaraj
The Gandhian philosophy of Gram Swaraj has been well articulated by the activities of the BAIF. Mahatma used to emphasize that “Gram Swaraj is the pathway to Poorna Swaraj” and also stressed that rural development must be based on the principles of Sarvodaya and Antyodaya, i.e., a win-win situation for everyone in the village. As an effort towards realizing this dream, BAIF has been making all efforts to make the villages self-reliant.

As renowned agricultural scientist Dr. M. S. Swaminathan writes, the Gandhian model of rural development has three major components, and the BAIF has been successful in bringing those components in its development approach: 
A family using drinking water
collected through roof-top rainwater harvesting.
1. Conservation and enhancement of the basic life support system comprising soil, water, biodiversity and climate. 
2. Improvement of on-farm productivity and profitability through sustainable agricultural practices. 
3. Generation of additional market-driven and value-added non-farm sources of income.

“It is this Gandhian approach that has made us to focus on creating sustainable livelihood in villages, climate resilient initiatives, women empowerment and gender equity and community health” says Mr. Pandit G. Patil, Additional Chief Programme Coordinator of BIRD-K.

Local resources
“Late Manibhaiji felt that one has to approach the villages with a neutral mind, without a pre-conceived idea and try to learn from the rural people. Each village is a different entity and we need different approaches to solve their problems. To make our programmes more participatory, we respect the traditional knowledge of the farmers and involve Gram Panchayats in the overall process,” says Mr. Mallikarjunappa K., former Chief Programme Coordinator of BIRD-K.


The tree-based farming technique initiated by the BAIF has the same idea of making the best use of the local resources. “Our philosophy is that agriculture should go along with nature. The tree-based farming may affect the yield initially, but we are keener towards the long term profits and sustainability,” he adds.

According to Mr. Patil, the method has helped farmers a lot in risk management. “The farmers who have adopted tree-based farming need not simply rely on a single crop. If one crop fails, some other produce will come to their help. It has not only improved the vegetative cover and soil fertility, but also providing fuel wood, timber, fruits and fodder. If you visit Belagumba village, you will certainly get one or other fruit in any season,” he explains.

Both Gandhiji and Manibhaiji felt that any programme will be successful only when women are brought to the forefront, and one can find active participation of women in all BAIF projects. “May it be livestock development or organic farming or rainwater harvesting, we always try to involve women to the maximum extent. We are sure our programmes will end nowhere if women do not take an active role,” stresses Mr. Mallikarjunappa.

Participatory approach
The participatory approach- a villagers’ meeting.
BIRD-K has been carrying forward the Gandhian mission through more than 15 different programmes across 22 districts of Karnataka spread in four regions, namely, Gulbarga, Dharwad, Tiptur and Mysore. Considered ‘technically competent authority’ by the government, BAIF has built a long-lasting relationship with various departments, and worked as an efficient and trustworthy implementing agency. It has taken various schemes of Departments of Rural Development & Panchayat Raj, Animal Husbandry & Veterinary Services, Agriculture, and Watershed Development, to the hundreds of villages of Karnataka. Its professionalism in programme implementation and transparency in fund management have made various banks, corporate and charity organizations sponsor the activities of the BIRD-K.

Through its livestock development programme, BIRD-K is promoting both local breeds and cross breeds, which has resulted in considerable increase in milk production in the state. ‘Parimochana’ supported by Chitrapur Math and organic farming project supported by Savayava Bhagya Yojane of the state government, have brought smiles on the faces of thousands of farmers. Under its natural resource management mission, BIRD has covered 493 villages in tree-based farming, and 21,818 hectares of land in watershed management since 1980.

‘Sachetana’ project introduced by BIRD for providing fluoride-free drinking water has caused a silent revolution, especially in Pavagada, Madhugiri and Sira taluks of Tumkur district. BIRD has helped around 7500 families in these areas to construct rain water harvesting units, as well as getting clean kitchen and herbal gardens. The ‘Navachetana’ project has empowered hundreds of families, esp. women by providing financial assistance. The organization provides necessary training towards the effective implementation of all its projects through its well-established training centers at Tiptur, Kalaghatagi and Mundaragi.

                        A view of tree-based farming.
BIRD’s 500-acre campus in Lakkihalli near Tiptur, demonstrating various applied technologies for sustainable developemt, is a great place for any farmer or a researcher to visit. Watershed development model demonstrating soil and water conservation measures, roof-top rain water harvesting, dairy, bamboo arboretum, nursery, orchard, ethno-medicinal forest, drip-irrigated coconut grove,  energy plantation, experiments with bio-fuel, various composting techniques- everything showcased in the green campus will certainly give an overall picture of the BIRD activities spread across the state.

Need for the day
“Be the change you want to see in the world” – this is the great message left by Mahatma for the human world. BAIF, completing 50 years of its walk on the footsteps of Gandhiji, has adopted the message in the true sense, and the BIRD-K has followed the same path. At a time when the Indian villages are reeling under the crises of under development and under employment, the Gandhian philosophy of Gram Swaraj should come as a beacon of light. Whatever may be the degree of industrialization in India, it cannot prosper by neglecting villages. Organizations like BAIF should set a role model for the government while designing and implementing rural development programmes.

ಗುರುವಾರ, ಸೆಪ್ಟೆಂಬರ್ 29, 2016

'ಶಿಕ್ಷಣ ಶಿಲ್ಪ'ದ ಬಗ್ಗೆ ಒಂದಿಷ್ಟು...

ಸುತ್ತೂರಿನ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮಶತಮಾನೋತ್ಸವದ ಅಂಗವಾಗಿ ‘ಶಿಕ್ಷಣ ಶಿಲ್ಪ’ ಎಂಬೊಂದು ಶೈಕ್ಷಣಿಕ ಸಂಪುಟವನ್ನು ಪ್ರಕಟಿಸಲಾಗಿದೆ. ಹಿರಿಯ ಸಂಶೋಧಕ ಡಾ. ಷ. ಶೆಟ್ಟರ್ ಇದರ ಪ್ರಧಾನ ಸಂಪಾದಕರು; ಡಾ. ಗುರುರಾಜ ಕರಜಗಿ ಸಂಪಾದಕರು. ಸುಮಾರು 800 ಪುಟಗಳ ಈ ಬೃಹತ್ ಸಂಪುಟದಲ್ಲಿ ಭಾರತೀಯ ಶೈಕ್ಷಣಿಕ ಪರಂಪರೆಯ ಆಳ-ಅಳವು, ವೈವಿಧ್ಯತೆ ಹಾಗೂ ವೈಶಿಷ್ಟ್ಯತೆಗಳನ್ನು ದಾಖಲಿಸುವ ಒಟ್ಟು 46 ಲೇಖನಗಳಿವೆ. ಗ್ರಂಥ ಒಳಗೊಂಡಿರುವ ಲೇಖನಗಳ ವಿಷಯ ವಿಸ್ತಾರ ಹಾಗೂ ಅವುಗಳನ್ನು ಬರೆದಿರುವ ವಿದ್ವಾಂಸ ಗಡಣದ ಕಾರಣದಿಂದಾಗಿ ಇದು ಈ ಕ್ಷೇತ್ರದ ಆಸಕ್ತರೆಲ್ಲರಿಗೂ ನಿಸ್ಸಂಶಯವಾಗಿ ಒಂದು ಮಹತ್ವದ ಆಕರ ಕೃತಿ ಆದೀತು.

ಪ್ರೊ. ವೈ. ಎನ್. ಶ್ರೀಧರ್, ಡಾ. ತುಳಸೀ ರಾಮಚಂದ್ರ, ಡಾ. ಚೂಡಾಮಣಿ ನಂದಗೋಪಾಲ್, ಪ್ರೊ. ಕೆ. ರಾಮಮೂರ್ತಿ ರಾವ್, ಪ್ರೊ. ಎಂ. ಎಚ್. ಕೃಷ್ಣಯ್ಯ, ಶ್ರೀ ನಾಗೇಶ ಹೆಗಡೆ, ಡಾ. ಕೃಷ್ಣಮೂರ್ತಿ ಹನೂರು, ಡಾ. ನಿರಂಜನ ವಾನಳ್ಳಿ,  ಸ್ವಾಮಿ ಹರ್ಷಾನಂದಜಿ, ಡಾ. ಎಚ್. ವಿ. ನಾಗರಾಜರಾವ್, ಪ್ರೊ. ಹಂ.ಪ.ನಾ., ಶ್ರೀ ಜಿ. ಎಸ್. ಜಯದೇವ, ಪ್ರೊ. ಎಂ. ಎಸ್. ವೇಣುಗೋಪಾಲ, ಶ್ರೀ ಸುರೇಂದ್ರ ಕೌಲಗಿ, ಡಾ. ರಾಜೇಂದ್ರ  ಚೆನ್ನಿ, ಶ್ರೀ ವಾಸುದೇವ ಶರ್ಮಾ, ಶ್ರೀ ನಾಗತಿಹಳ್ಳಿ ಚಂದ್ರಶೇಖರ, ಡಾ. ಎಂ. ಮಹದೇವಪ್ಪ, ಡಾ. ಪಿ. ಎಸ್. ಶಂಕರ್, ಡಾ. ಎಚ್. ಆರ್. ಕುಲಕರ್ಣಿ, ಪ್ರೊ. ಮಲೆಯೂರು ಗುರುಸ್ವಾಮಿ, ಡಾ. ಕೆ.. ಎಸ್. ಸಮೀರಸಿಂಹ ಮೊದಲಾದ ಹಿರಿಯರು ಹತ್ತುಹಲವು ಕ್ಷೇತ್ರಗಳ ಶೈಕ್ಷಣಿಕ ವ್ಯಾಪ್ತಿಯ ಕುರಿತು ವಿಸ್ತೃತವಾಗಿ ಬರೆದಿದ್ದಾರೆ.

ಭಾರತೀಯ ನೃತ್ಯ, ಶಿಲ್ಪಕಲೆ, ಕರಕುಶಲ ಕಲೆ, ನಾಟಕ, ಜನಪದ, ಛಾಯಾಗ್ರಹಣ, ಸಿನಿಮಾ, ಯೋಗ, ಜೈನ-ಬೌದ್ಧ ಧರ್ಮ, ಹರಿದಾಸರು, ಪಾರಂಪರಿಕ ಕೃಷಿ, ಸಮೂಹ ಮಾಧ್ಯಮ, ತಂತ್ರಜ್ಞಾನ, ಪಶುಸಂಗೋಪನೆ, ಪ್ರವಾಸೋದ್ಯಮ, ಪರಿಸರ, ವೈದ್ಯಕೀಯ, ಮಾನವಹಕ್ಕು- ಹೀಗೆ ಈ ಗ್ರಂಥ ಹತ್ತಾರು ಕ್ಷೇತ್ರಗಳ ಶೈಕ್ಷಣಿಕ ಆಳವನ್ನು ಗಂಭೀರ ಪರಿಶೀಲನೆಗೆ ಒಳಪಡಿಸಿರುವುದು ಕುತೂಹಲಕಾರಿ. ಗ್ರಂಥ ಹೊರಬರುವಲ್ಲಿ ಜನ್ಮಶತಮಾನೋತ್ಸವ ಪ್ರಕಟಣ ಸಮಿತಿಯ ಸಂಚಾಲಕ ಡಾ. ನಂದೀಶ್ ಹಂಚೆಯವರ ಪರಿಶ್ರಮ ವಿಶೇಷವಾದದ್ದು. ಅವರಿಗೆ ಅಭಿನಂದನೆಗಳು ಸಲ್ಲಬೇಕು.
***
ಅಂದಹಾಗೆ, ಈ ಎಲ್ಲ ಹಿರಿಯರ ಬರೆಹಗಳ ನಡುವೆ ಸಮೂಹ ಮಾಧ್ಯಮ ಶಿಕ್ಷಣಕ್ಕೆ ಸಂಬಂಧಿಸಿದ ನನ್ನದೊಂದು ಲೇಖನವೂ ಇದೆ. ‘ಸಮೂಹ ಮಾಧ್ಯಮಗಳು, ಶಿಕ್ಷಣ ಮತ್ತು ಸಮಾಜ’ ಎಂಬ ಈ ಲೇಖನದಲ್ಲಿ ಭಾರತದ ಮಾಧ್ಯಮರಂಗದ ವಿಸ್ತಾರ, ಮಾಧ್ಯಮ ಶಿಕ್ಷಣದ ಇತಿಹಾಸ,  ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಲು ಅಗತ್ಯವಿರುವ ಜ್ಞಾನ-ಕೌಶಲಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು, ಮಾಧ್ಯಮರಂಗದ ಉದ್ಯೋಗಾವಕಾಶಗಳ ವಿವರ, ಸಮೂಹ ಮಾಧ್ಯಮಗಳ ಸಾಮಾಜಿಕ ಪ್ರಭಾವ ಹಾಗೂ ಒಟ್ಟಾರೆ ಶಿಕ್ಷಣದಲ್ಲಿ ಸಮೂಹ ಮಾಧ್ಯಮಗಳು ವಹಿಸುವ ಪಾತ್ರ – ಇತ್ಯಾದಿ ಅನೇಕ ಮಗ್ಗುಲುಗಳತ್ತ ಗಮನ ಹರಿಸಲಾಗಿದೆ. ಎಷ್ಟೊಂದು ಹಿರಿಯ ತಲೆಗಳ ನಡುವೆ ಪತ್ರಿಕೋದ್ಯಮ ಶಿಕ್ಷಣದ ಬಗ್ಗೆ ಬರೆಯುವ ಅವಕಾಶ ನನಗೆ ಒದಗಿ ಬಂದದ್ದು ನಿಜಕ್ಕೂ ಒಂದು ಸುಯೋಗ. ನನ್ನ ಅನುಭವ ಹಾಗೂ ತಿಳುವಳಿಕೆಯ ಇತಿಮಿತಿಗಳ ನಡುವೆ ಬರೆದಿರುವ ಈ ಲೇಖನ ಪತ್ರಿಕೋದ್ಯಮ ಶಿಕ್ಷಣದ ಆಸಕ್ತರಿಗೆ ಒಂದೇ ಕಡೆ ಒಂದಷ್ಟು ವಿಚಾರಗಳನ್ನು ಒದಗಿಸಬಹುದು ಎಂದು ಆಶಿಸುತ್ತೇನೆ.
***
ಕೃತಿ:  ಶಿಕ್ಷಣ ಶಿಲ್ಪ
ಸಂಪಾದಕರು: ಡಾ. ಷ. ಶೆಟ್ಟರ್, ಡಾ. ಗುರುರಾಜ ಕರ್ಜಗಿ
ಪ್ರಕಟಣೆ:  ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮಶತಮಾನೋತ್ಸವ ಸಮಿತಿ
ಪುಟಗಳು:  18+814
ಬೆಲೆ:  ರೂ. 1000 
ವರ್ಷ: 2016

ಭಾನುವಾರ, ಜೂನ್ 12, 2016

ಇದು ಯಾವ ಜನ್ಮದ ಮೈತ್ರಿ?

ಜೂನ್ 11-17, 2016ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ನೀವು ಈ ಮೊದಲು ಭೇಟಿ ನೀಡಿರದ ಯಾವುದೋ ಒಂದು ಸ್ಥಳಕ್ಕೆ ಹೋದಾಗ ‘ಅರೆ! ಈ ಜಾಗದಲ್ಲಿ ಹಿಂದೆಂದೋ ನಾನು ಓಡಾಡಿರುವ ಹಾಗಿದೆಯಲ್ಲ?’ ಎಂಬ ಭಾವ ನಿಮ್ಮನ್ನು ಕಾಡಿದ್ದುಂಟೇ? ಇನ್ಯಾವುದೋ ಒಂದು ಹೊಸ ಸನ್ನಿವೇಶ ಎದುರಾದಾಗ ಇಂತಹದೇ ಒಂದು ಘಟನೆ ಹಿಂದೆಯೂ ಒಮ್ಮೆ ಘಟಿಸಿತ್ತಲ್ಲ ಎಂದು ನಿಮಗೆ ಬಲವಾಗಿ ಅನಿಸುದ್ದುಂಟೇ? ಯಾವನೋ ಒಬ್ಬ ಅಪರಿಚಿತ ವ್ಯಕ್ತಿಯನ್ನು ಮೊದಲ ಬಾರಿ ಭೇಟಿಯಾದಾಗ ಈತ ನನಗೆ ತುಂಬ ಹತ್ತಿರದವನು, ಬಹಳ ಬೇಕಾದವನು ಎಂಬ ನವಿರಾದ ಸೆಳೆತವೊಂದು ಹುಟ್ಟಿಕೊಂಡದ್ದುಂಟೇ? ‘ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ!’ ಎಂಬ ಕುವೆಂಪು ಅವರ ಸಾಲುಗಳು ಥಟ್ಟನೆ ಮನದಲ್ಲಿ ಮೂಡಿ ಮೈ ಝುಮ್ಮೆನ್ನಿಸಿದ್ದುಂಟೇ?

ಹೌದೇ ಹೌದೆಂದು ನಿಮ್ಮ ಮನಸ್ಸು ಹೇಳುತ್ತಿದೆಯಾದರೆ ಒಂದು ಕ್ಷಣ ಕಣ್ಮುಚ್ಚಿ ಕುಳಿತುಕೊಂಡು ಧ್ಯಾನಸ್ಥರಾಗಿ. ನಿಮ್ಮ ಪೂರ್ವಿಕರನ್ನು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿ. ಗರಿಷ್ಠ ಎಷ್ಟು ಮಂದಿಯ ಹೆಸರು ಪಟ್ಟಿಮಾಡಬಲ್ಲಿರಿ? ಅಪ್ಪ-ಅಮ್ಮ, ತಾತ-ಅಜ್ಜಿ, ಮುತ್ತಾತ-ಮುತ್ತಜ್ಜಿ... ಇಷ್ಟು ಮಂದಿಯನ್ನು ಮನಸ್ಸಿಗೆ ತಂದುಕೊಳ್ಳುವಾಗಲೇ ಸುಸ್ತೆದ್ದು ಹೋಗುತ್ತೀರಿ, ಇನ್ನು ಅದರ ಹಿಂದಿನ ಐದೋ ಹತ್ತೋ ತಲೆಮಾರನ್ನೋ ನೆನಪಿಸಿಕೊಳ್ಳುವ ಮಾತು ಅಷ್ಟಕ್ಕೇ ಉಳಿಯಿತು ಅಲ್ಲವೇ?

ನಮ್ಮ ಪೂರ್ವಜರು ಇಂತಹ ಕಡೆ ಇದ್ದರಂತೆ, ಮುತ್ತಾತನ ಕಾಲದಲ್ಲಿ ಅವರು ಇಂತಹ ಕಡೆಗೆ ವಲಸೆ ಬಂದರಂತೆ, ತಾತನ ಕಾಲದಿಂದ ಈಗ ನಾವಿರೋ ಜಾಗದಲ್ಲಿ ಇದ್ದೇವೆ ಎಂದು ನಿಮ್ಮ ಮನೆ ಹಿರಿಯರು ಹೇಳುವುದನ್ನು ನೀವು ಗಮನಿಸಿರಬಹುದು. ಅವರು ಹೇಳುವ ಪೂರ್ವಜರು ಎಷ್ಟು ವರ್ಷ ಹಿಂದಿನವರು? ಒಂದು ಎಂಟುನೂರು ವರ್ಷವೇ? ಹಾಗಾದರೆ ಅದರ ಹಿಂದಿನ ಕಥೆ ಏನು? ಅವರ ತಾತ ಮುತ್ತಾತಂದಿರು ಎಲ್ಲಿದ್ದರು? ಹೇಗಿದ್ದರು? ಅವರ ಕುಟುಂಬದಿಂದ ಒಡೆದ ಕವಲುಗಳು ಇನ್ನೆಲ್ಲಿ ಹಬ್ಬಿ ಪಸರಿಸಿರಬಹುದು? ಅವೆಲ್ಲ ಈಗಲೂ ಜೀವಂತವಾಗಿವೆಯೇ? ಇದ್ದರೆ ಇದೇ ದೇಶದಲ್ಲಿ ಇವೆಯೇ? ದೇಶದ ಗಡಿಗಳನ್ನು ದಾಟಿ ಖಂಡಾಂತರ ವ್ಯಾಪಿಸಿವೆಯೇ? ನಮ್ಮ ಕುಟುಂಬದ ಯಾವುದೋ ಅಜ್ಞಾತ ಬೇರು ಆಫ್ರಿಕಾದಲ್ಲೋ ಚೀನಾದಲ್ಲೋ ಇನ್ನೂ ಉಳಿದುಕೊಂಡಿದೆಯೇ? ಅಲ್ಲೆಲ್ಲೋ ಅರಳಿದ ಹೂವಿನ ಪರಾಗ ಇನ್ಯಾವುದೋ ದೇಶದ ಪುಷ್ಪದ ಮೇಲೆ ಬಿದ್ದು ಹುಟ್ಟಿಕೊಂಡ ಹಣ್ಣು ಕಾಲಾಂತರದಲ್ಲೊಂದು ದಿನ ಧುತ್ತೆಂದು ನಮ್ಮೆದುರು ಬಂದಾಗ ಇದು ‘ಎಮ್ಮ ಮನೆಯಂಗಳದಿ ಬೆಳೆದೊಂದು’ ಫಲವೆಂದು ಅನಿಸಲಾರದೆಂದು ಹೇಗೆ ಹೇಳುವುದು?

ವಿಸ್ಮಯವೆನಿಸುತ್ತಿದೆ ಅಲ್ಲವೇ? ಹೌದು ಈ ಬದುಕೊಂದು ವಿಸ್ಮಯದ ವಂಶವೃಕ್ಷ. ದ್ಯಾವಾ ಪೃಥಿವೀಗಳನ್ನು ಆವರಿಸಿಕೊಂಡಿರುವ ಈ ಹೆಮ್ಮರದ ಮೊತ್ತಮೊದಲ ಬೇರಾಗಲೀ ಕಟ್ಟಕಡೆಯ ಕವಲಾಗಲೀ ಎಲ್ಲಿದೆಯೆಂದು ಹೇಗೆ ತಾನೇ ಹುಡುಕಿಯೇವು! ಹಾಗಂತ ಇದು ಭಾರತೀಯ ನಂಬಿಕೆಗಳ ಪರಂಪರೆಯಲ್ಲಿ ಸಾಗಿಬಂದ ಜನ್ಮಾಂತರದ ಕಥೆಗಿಂತ ಸಂಪೂರ್ಣ ಭಿನ್ನ. ನಾವಿಲ್ಲಿ ಪೂರ್ವಜನ್ಮ, ಮರುಜನ್ಮಗಳ ಬಗ್ಗೆ ಮಾತಾಡುತ್ತಿಲ್ಲ. ಅದೊಂದು ಬೇರೆಯದೇ ಪರಿಕಲ್ಪನೆ. ಭೂಮಿಯ ಮೇಲಿನ ಪ್ರತಿಯೊಂದು ಜೀವಕ್ಕೂ ಜನ್ಮಾಂತರದ ನಂಟಿದೆ ಎಂಬುದೇ ಆ ನಂಬಿಕೆ. ಶ್ರೀಹರಿಯು ಭೂಭಾರಹರಣಕ್ಕಾಗಿ ದಶಾವತಾರಗಳನ್ನು ಎತ್ತಿಬಂದ ಪುರಾಣದ ಕಥೆ ನಮ್ಮ ದಿನನಿತ್ಯದ ಬದುಕಿನಲ್ಲಿ ಹಾಸುಹೊಕ್ಕಂತೆ ಇದೆ. ಕರ್ಮಫಲದಲ್ಲಿ ನಂಬಿಕೆಯಿರುವ ಬಹುಪಾಲು ಭಾರತೀಯರು ಪೂರ್ವಜನ್ಮ, ಮರುಜನ್ಮಗಳ ಕಥೆಗಳನ್ನು ನಂಬುವುದೂ ಇದೆ. ಅಚ್ಚಣ್ಣಯ್ಯನ ಮಗ ವಿಶ್ವೇಶ್ವರನು ಜೋಯಿಸರ ಮನೆಯಲ್ಲಿ ಕ್ಷೇತ್ರಪಾಲನಾಗಿ ಹುಟ್ಟಿ ಎರಡು ವರ್ಷದವನಿರುವಾಗಲೇ ‘ನನಗೆ ಮದುವೆಯಾಗಿದೆ. ಹಂಡ್ತಿ ಹೆಸ್ರು ವೆಂಕಮ್ಮ. ಒಂದು ಗಂಡು ಮಗೂನೂ ಇದೆ’ ಎಂದು ದಂಗುಹಿಡಿಸುವ ಕಥೆಯುಳ್ಳ ಎಸ್. ಎಲ್. ಭೈರಪ್ಪನವರ ‘ನಾಯಿ ನೆರಳು’ ಕೂಡ ಹೊಸದೊಂದು ಲೋಕಕ್ಕೆ ನಮ್ಮನ್ನು ಕೊಂಡೊಯ್ಯಬಲ್ಲುದು. ಈಗಂತೂ ಜನ್ಮಾಂತರದ ಕಥೆಗಳೆಲ್ಲ ನಮ್ಮ ಟಿವಿ ಚಾನೆಲ್‍ಗಳಿಗೆ ಒಳ್ಳೆಯ ಟಿಆರ್‍ಪಿ ತಂದುಕೊಡುವ ಕಾರ್ಯಕ್ರಮಗಳು!

ಆದರೆ ಇಲ್ಲಿ ಹೇಳುತ್ತಿರುವ ಪೂರ್ವಜರ ಕಥೆ ಜನ್ಮಾಂತರದ ನಂಬಿಕೆಯಲ್ಲ, ವಂಶವಾಹಿನಿಯ ಕವಲುಗಳ ವೈಜ್ಞಾನಿಕ ಹುಡುಕಾಟ. ಕಳೆದ ಇಪ್ಪತ್ತು ವರ್ಷಗಳಿಂದೀಚೆಗೆ ವಂಶವಾಹಿಶಾಸ್ತ್ರ (Genealogy) ದಲ್ಲಿ ಅಭೂತಪೂರ್ವ ಬೆಳವಣಿಗೆ ಆಗಿದೆ, ಹೊಸಹೊಸ ಸಂಶೋಧನೆಗಳು ನಡೆದಿವೆ. ಮಾನವರು ಆಫ್ರಿಕಾ ಖಂಡದಿಂದ ಪೂರ್ವ ಏಷ್ಯಾ ದೇಶಗಳಿಗೆ ನೇರವಾಗಿ ಬಂದವರೆಂದೇ ಕೆಲವು ವರ್ಷಗಳ ಹಿಂದಿನವರೆಗೆ ನಂಬಲಾಗಿತ್ತು. ಆದರೆ ಏಷ್ಯಾದ ಹತ್ತು ರಾಷ್ಟ್ರಗಳಲ್ಲಿ ಈಚೆಗೆ ನಡೆಸಲಾದ ಮಾನವ ಅನುವಂಶೀಯತೆಯ ಪತ್ತೆ ಅಧ್ಯಯನವು ಈ ತಿಳುವಳಿಕೆಯ ದಿಕ್ಕನ್ನೇ ಬದಲಾಯಿಸಿತು. ಅದರ ಪ್ರಕಾರ, ದಕ್ಷಿಣ ಆಫ್ರಿಕಾದಿಂದ ಮಾನವರು ಲಕ್ಷ ವರ್ಷಗಳ ಹಿಂದೆ ಮೊತ್ತಮೊದಲು ವಲಸೆ ಬಂದದ್ದು ಭಾರತಕ್ಕೆ. ಇಲ್ಲಿಂದ ಅವರು ದಕ್ಷಿಣ ಏಷ್ಯಾ ಮತ್ತು ಪೂರ್ವ ಏಷ್ಯಾಗಳಿಗೆ, ಕೊನೆಗೆ ಅಮೇರಿಕಕ್ಕೆ ಪಸರಿಸಿಕೊಂಡರು. ಹಾಗಾಗಿ ಏಷ್ಯಾ ಖಂಡದ ಪ್ರತಿಯೊಬ್ಬರೂ ಭಾರತದೊಂದಿಗೆ ಆನುವಂಶಿಕ ಸಂಬಂಧ ಹೊಂದಿದ್ದಾರೆ ಎಂದು ಆ ಅಧ್ಯಯನವು ಬಹಿರಂಗಪಡಿಸಿತು.

ತಮ್ಮ ಪೂರ್ವಜರ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂಹಲ ಈಚಿನ ವರ್ಷಗಳಲ್ಲಿ ತುಸು ಹೆಚ್ಚೇ ಆಗಿರುವುದು ಒಂದು ಸೋಜಿಗದ ಸಂಗತಿ. ‘ವಂಶ ಎನ್ನುವ ಕಲ್ಪನೆ ನಮ್ಮ ಬೇರು. ನಾವು ಯಾರಿಗೆ ಹುಟ್ಟಿದ್ದು? ಯಾವ ಕ್ಷೇತ್ರದಲ್ಲಿ ಹುಟ್ಟಿದ್ದು? ಕ್ಷೇತ್ರ ಅಂದರೆ ಹೆಣ್ಣು, ಬೇರು ಅಂದರೆ ಬೀಜ. ಈ ಕುರಿತು ಎಲ್ಲರಿಗೂ ಎಲ್ಲ ಸಮಾಜದಲ್ಲೂ ದೇಶಗಳಲ್ಲೂ ಕುತೂಹಲ ಇದೆ’ ಎಂದು ‘ವಂಶವೃಕ್ಷ’ದ ಕರ್ತೃ ಎಸ್.ಎಲ್. ಭೈರಪ್ಪ ಸಂದರ್ಶನವೊಂದರಲ್ಲಿ ಹೇಳಿದ್ದಿದೆ. ಪೂರ್ವಜರ ಕುರಿತಾದ ಆಧುನಿಕರ ಕುತೂಹಲಕ್ಕೆ ಕಾರಣ ಮೇಲೆ ಹೇಳಿರುವ ವಂಶವಾಹಿಶಾಸ್ತ್ರದಲ್ಲಿ ಆಗಿರುವ ವೈಜ್ಞಾನಿಕ ಪ್ರಗತಿ. ಒಂದು ಸಂತತಿಯ ನಿಜವಾದ ಬಾಧ್ಯಸ್ತರು ಯಾರು ಎಂಬುದನ್ನು ಪತ್ತೆಮಾಡುವ ಸಾಫ್ಟ್‍ವೇರ್‍ಗಳು ಅಭಿವೃದ್ಧಿಯಾಗಿರುವುದೂ ಈ ಹೊಸ ಕುತೂಹಲಕ್ಕೆ ಕಾರಣ. ಲೀಗಸಿ ಫ್ಯಾಮಿಲಿ ಟ್ರೀ, ಫ್ಯಾಮಿಲಿ ಟ್ರೀ ಮೇಕರ್, ರೂಟ್ಸ್ ಮ್ಯಾಜಿಕ್ ಎಸೆನ್ಷಿಯಲ್ ಎಂಬ ಸಾಪ್ಟ್‍ವೇರ್‍ಗಳು, ಆನ್ಸಿಸ್ಟರಿ ಡಾಟ್ ಕಾಮ್‍ನಂತಹ ಜಾಲತಾಣಗಳು ಇಂದು ಜೀನಿಯಾಲಜಿ ಅಥವಾ ಪೆಡಿಗ್ರೀಯ ಹುಡುಕಾಟಕ್ಕೆ ಕುತೂಹಲಿಗಳ ಬೆನ್ನಿಗೆ ನಿಂತಿವೆ. ಒಂದು ಮೂಲದ ಪ್ರಕಾರ, ವಂಶವಾಹಿನಿಯ ಅಧ್ಯಯನ ಇಂದು ಅಂತರ್ಜಾಲದ ಅತ್ಯಂತ ಜನಪ್ರಿಯ ಹುಡುಕಾಟಗಳಲ್ಲಿ ಒಂದು.

ವಂಶವೃಕ್ಷದ ಆಳ ಅಗಲಗಳನ್ನು ತಿಳಿದುಕೊಳ್ಳುವಲ್ಲಿ ಇಂದು ಮೂರು ಬಗೆಯ ವೈಜ್ಞಾನಿಕ ವಿಧಾನಗಳು ಪ್ರಚಲಿತದಲ್ಲಿವೆ. ಮೊದಲನೆಯದು, ಅಟೋಸೋಮಲ್ ಡಿಎನ್‍ಎ ಟೆಸ್ಟಿಂಗ್. ಇದು ಮಗುವಿನ ಲಿಂಗ ನಿರ್ಧಾರದಲ್ಲಿ ಪಾತ್ರ ವಹಿಸದ ಇಪ್ಪತ್ತೆರಡು ಜತೆ ವರ್ಣತಂತುಗಳ ಅಧ್ಯಯನ. ತಂದೆ ತಾಯಿಯರಿಂದ ಮತ್ತು ಅವರ ಹಿರೀಕರಿಂದ ಸಮಾನವಾಗಿ ಪ್ರವಹಿಸಿಕೊಂಡು ಬಂದ ಈ ವರ್ಣತಂತುಗಳ ಪರೀಕ್ಷೆ ವಂಶವೃಕ್ಷದ ಬೇರುಗಳ ಹುಡುಕಾಟಕ್ಕೆ ತುಂಬ ಮಖ್ಯ. ಎರಡನೆಯದು, ಮೈಟೋಕಾಂಡ್ರಿಯಲ್ ಡಿಎನ್‍ಎ ಟೆಸ್ಟಿಂಗ್. ಇದು ತಾಯಿಯಿಂದ ಮಗುವಿಗೆ ವರ್ಗಾವಣೆಯಾಗುವ ಅಂಶದ ಪರೀಕ್ಷೆ. ತಾಯಿಯ ಕಡೆಯ ಪೂರ್ವಜರ ಪತ್ತೆಗೆ ಇದು ತುಂಬ ಸಹಕಾರಿ. ಮೂರನೆಯದು, ವೈ ಕ್ರೊಮೋಸೋಮ್ ಟೆಸ್ಟಿಂಗ್. ಇದು ಗಂಡಸಿನಲ್ಲಿ ಮಾತ್ರ ಇರುವ ಇಪ್ಪತ್ಮೂರನೆಯ ವರ್ಣತಂತು ಜೋಡಿಯ ಅಧ್ಯಯನ. ತಂದೆಯ ಕಡೆಯ ಪೂರ್ವಜರ ಪತ್ತೆ ಈ ಪರೀಕ್ಷೆಯಿಂದ ಸಾಧ್ಯ.

ಈ ವೈಜ್ಞಾನಿಕ ವಿಧಾನಗಳಿಗೂ ಸಾಕಷ್ಟು ಇತಿಮಿತಿಗಳಿವೆ ಮತ್ತು ಇವುಗಳಿಂದಾಗಿ ವಂಶವಾಹಿನಿಯ ಚರಿತ್ರೆಯನ್ನು ಹೆಕ್ಕಿ ತೆಗೆಯುವಾಗ ದಾರಿ ತಪ್ಪುವ ಅಪಾಯಗಳೂ ಇವೆ ಎಂಬುದನ್ನು ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ. ಆದರೂ ಈ ವಂಶವೃಕ್ಷದ ಕಥೆ ತುಂಬ ರೋಚಕವಾದ್ದು. ಎದುರಿಗೆ ನಿಂತಿರುವ ಆಗಂತುಕನೊಬ್ಬನ ಕುರಿತು ನಮಗೆ ಅರಿವೇ ಇಲ್ಲದಂತೆ ನಮ್ಮ ಮನಸ್ಸು ‘ಇವ ನಮ್ಮವ ಇವ ನಮ್ಮವ’ ಎಂದು ಗುನುಗಿಕೊಂಡರೆ ಅದರಾಚೆಗೆ ನಮ್ಮ ನೆನಪು ಅಥವಾ ತಿಳುವಳಿಕೆಗೆ ಮೀರಿದ ಯಾವುದೋ ಒಂದು ಪುರಾತನ ನಂಟು ಇದ್ದರೂ ಇರಬಹುದು ಎಂಬ ಕಲ್ಪನೆಯೇ ವಿಸ್ಮಯಕಾರಿ.

‘ಎನ್ನ ಒಡಹುಟ್ಟಿದವನೋ ಸಂಬಂಧವೋ ತಿಳಿಯೆನು, ಕರ್ಣನಾರೈ?’ ಎಂದು ಕುರುಕ್ಷೇತ್ರದ ರಣಾಂಗಣದಲ್ಲಿ ಇದ್ದಕಿದ್ದಂತೆ ಅರ್ಜುನ ಮನಸಿಜ ಪಿತನಾದ ಕೃಷ್ಣನನ್ನು ಪಟ್ಟು ಹಿಡಿದು ಕೇಳಿದನಂತೆ. ಕಣ್ಣರಿಯದಿದ್ದರೂ ಕರುಳು ಅರಿಯುತ್ತದೆ ಎಂಬ ಗಾದೆಯ ಹಿಂದೆ ಇರುವುದು ವಂಶವಾಹಿನಿಯ ಕಥೆಯೇ?

ಗುರುವಾರ, ಜೂನ್ 9, 2016

ಚಡ್ಡಿ ಎಂಬ ಬಾಲ್ಯವೂ, ಪ್ಯಾಂಟ್ ಎಂಬ ಯೌವನವೂ

ಜೂನ್ 9, 2016ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಬಸವನಹುಳುವಿನಂತೆ ತೆವಳುವ ಪ್ರೈಮರಿ ಹೈಸ್ಕೂಲು ದಿನಗಳೆಲ್ಲ ಸರಸರನೆ ಸರಿದುಹೋಗಿ ಕಾಲೇಜು ಮೆಟ್ಟಿಲು ಹತ್ತುವ ಮುಹೂರ್ತ ಯಥಾಶೀಘ್ರ ಕೂಡಿಬರಲಿ ದೇವರೇ ಎಂದು ನಿತ್ಯವೂ ಬೇಡಿಕೊಳ್ಳುವುದಕ್ಕೆ ನಮಗೆ ಮೂರು ದೊಡ್ಡ ಕಾರಣಗಳಿದ್ದವು. ಮೊದಲನೆಯದು, ಬೆನ್ನಿಗೆ ಮಣಭಾರದ ಚೀಲ ನೇತುಹಾಕಿಕೊಂಡು ಒಂಟೆಗಳಂತೆ ಓಡಾಡುವ ಬದಲು ಎರಡೇ ಎರಡು ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡು ಸ್ಕೂಲ್ ಹುಡುಗರೆದುರು ಸ್ಟೈಲಾಗಿ ಪೋಸು ಕೊಡಬಹುದು; ಎರಡನೆಯದು, ಚಪ್ಪಲಿಯೂ ಇಲ್ಲದೆ ಬರಿಗಾಲಲ್ಲಿ ಮೈಲುಗಟ್ಟಲೆ ನಡೆಯುವ ಬದಲು ಟ್ರಿನ್ ಟ್ರಿನ್ ಶಬ್ದ ಮಾಡಿಕೊಂಡು ಬೈಸಿಕಲ್ ಮೇಲೆ ರೊಂಯ್ಯನೆ ವಾಯುವೇಗದಲ್ಲಿ ವಿಹರಿಸಬಹುದು; ಮೂರನೆಯದು, ಜೋರಾಗಿ ಗಾಳಿ ಬೀಸಿದರೂ ಧೊಪ್ಪೆಂದು ಕೆಳಗೆ ಬೀಳಬಹುದಾಗಿದ್ದ ಖಾಕಿ ಚಡ್ಡಿಯ ಬದಲಾಗಿ ಉದ್ದುದ್ದನೆಯ ಪ್ಯಾಂಟ್ ಹಾಕಿಕೊಂಡು ಯಾವ ಆಫೀಸರುಗಳಿಗೂ ಕಮ್ಮಿಯಿಲ್ಲದಂತೆ ನಮ್ಮೂರಿನ ಕಿರುದಾರಿಗಳಲ್ಲಿ ಗತ್ತಿನಿಂದ ಹೆಜ್ಜೆ ಹಾಕಬಹುದು.

ಹಗಲು ಇರುಳು ಎಂಬ ಬೇಧವಿಲ್ಲದೆ ಬೇಕಾದ ಹಾಗೆಲ್ಲ ಬೀಳುತ್ತಿದ್ದ ಈ ಕನಸುಗಳಿಗೆ ಕಾರಣ ನಮ್ಮೂರಿನ ಚರಿತ್ರೆಯಲ್ಲೇ ಮೊದಲ ಬಾರಿಗೆ ಹೈಸ್ಕೂಲು ಮುಗಿಸಿ ಕಾಲೇಜು ಸೇರಿದ್ದ ಒಂದಿಬ್ಬರು ಹುಡುಗ ಹುಡುಗಿಯರು. ನಮಗಿಂತ ತಡವಾಗಿ ತಮ್ಮ ಮನೆಗಳಿಂದ ಹೊರಟರೂ ನಮಗಿಂತ ಮೊದಲೇ ಕಾಲೇಜು ಬಿಟ್ಟು ವಾಪಸಾಗುತ್ತಿದ್ದ ಈ ಮಹನೀಯರುಗಳು ನಮಗೆಲ್ಲ ಅತ್ಯಂತ ಕುತೂಹಲದ ಜೀವಿಗಳಾಗಿದ್ದರು. ಅದರಲ್ಲೂ ಅವರ ಮೇಲಿದ್ದ ವಿಶೇಷ ಗೌರವಾದರಗಳಿಗೆ ಕಾರಣ ಅವರು ತೊಡುತ್ತಿದ್ದ ಪ್ಯಾಂಟ್ ಶರ್ಟ್, ಹುಡುಗಿಯರಾದರೆ ಚೂಡಿದಾರ್ ಇಲ್ಲವೇ ಚೆಂದದ ಯೂನಿಫಾರ್ಮ್, ಮತ್ತು ಬ್ಯಾಗಿನ ಹಂಗಿಲ್ಲದೆ ಬರಿಗೈಲಿ ಅವಚಿಕೊಂಡು ಹೋಗುತ್ತಿದ್ದ ಎರಡೋ ಮೂರೋ ಪುಸ್ತಕಗಳು.

ಅಂತೂ ಕಾಲೇಜಿಗೆ ಸೇರುವ ಕಾಲ ಬಂತೇ ಬಂತು. ಅದು ಬಹುನಿರೀಕ್ಷಿತ ಪ್ಯಾಂಟ್ ಭಾಗ್ಯ ಯೋಜನೆ ಜಾರಿಗೊಳ್ಳುವ ಸಮಯ. ಬೂದುಬಣ್ಣದ ಪ್ಯಾಂಟು, ಬೆಳ್ಳನೆಯ ಶರ್ಟೇ ಯೂನಿಫಾರ್ಮ್. ಅದನ್ನು ಹೊಲಿಸಿಕೊಳ್ಳಲು ಊರಾಚೆ ಇರುವ ಟೈಲರ್ ಎಂಬ ಅಪರೂಪದ ವ್ಯಕ್ತಿಯ ಬಳಿಗೆ ಮರುದಿನ ಹೋಗುವುದೆಂದು ಯಾವತ್ತು ನಿಗದಿಯಾಯಿತೋ ಅಲ್ಲಿಂದ ಮತ್ತೆ ಪುನಃ ಕನಸುಗಳ ಮೆರವಣಿಗೆ ಆರಂಭವಾಗಿತ್ತು. ಇಡೀ ಊರಿಗೇ ಅತ್ಯಂತ ಬೇಡಿಕೆಯ ವ್ಯಕ್ತಿಯಾಗಿದ್ದ ನಮ್ಮ ಟೈಲರ್ ಬಾಬು ಯೂನಿಫಾರ್ಮ್ ಹೊಲಿದು ಕೊಡಲು ಏನಿಲ್ಲವೆಂದರೂ ಐದು ಬಾರಿ ಓಡಾಡಿಸಿದ್ದ. ಆದರೂ ಅವನ ಅಂಗಡಿಗೆ ಸ್ನೇಹಿತರ ಜತೆ ಭೇಟಿ ಕೊಡುವುದು ಆಪ್ಯಾಯಮಾನ ವಿಚಾರವಾಗಿತ್ತು. ಆತ ಯೂನಿಫಾರ್ಮ್ ಕೊಡದೇ ಹೋದರೂ ಬೇರೆಯವರಿಗಾಗಿ ಹೊಲಿದು ಅಂಗಡಿಯೆದುರು ನೇತುಹಾಕಿದ್ದ ಗರಿಗರಿ ಪ್ಯಾಂಟ್ ಶರ್ಟ್‌ಗಳನ್ನು ನಮ್ಮದೇ ಎಂಬಂತೆ ಹತ್ತಾರು ನಿಮಿಷ ನೋಡಿ ಕಣ್ತುಂಬಿಕೊಂಡು ಇನ್ನೊಂದು ವಾರ ಕಳೆದರೆ ಇಂಥದ್ದನ್ನು ನಾವೂ ಏರಿಸಿಕೊಂಡು ಸಂಭ್ರಮದಿಂದ ಓಡಾಡಬಹುದೆಂದು ಕನಸು ಕಾಣುತ್ತಾ ವಾಪಸ್ ಹೆಜ್ಜೆ ಹಾಕುವುದು ನಡೆದೇ ಇತ್ತು.

ಕಾಲೇಜು ಆರಂಭದ ಮುನ್ನಾದಿನ ಸಂಜೆ ಯೌವನವೇ ಮೈವೆತ್ತು ಬಂದ ಹಾಗೆ ಪ್ಯಾಂಟ್ ಶರ್ಟ್ ಮನೆಗೆ ಬಂದಿತ್ತು. ಆ ಕಟ್ಟನ್ನು ಲಗುಬಗೆಯಿಂದ ಬಿಚ್ಚಿ ಹೊಸಾ ಇಸ್ತ್ರಿಯಿಂದ ಮಿರುಗುವ ಬಟ್ಟೆಯನ್ನು ನಿಧಾನವಾಗಿ ಸವರಿ, ಆಘ್ರಾಣಿಸಿ, ಎರಡೆರಡು ಬಾರಿ ಹಾಕಿ ತೆಗೆದು ಅದು ಎಲ್ಲ ರೀತಿಯಿಂದಲೂ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ಮನೆಮಂದಿಯೆದುರೆಲ್ಲ ಪೆರೇಡ್ ಮಾಡಿದ ಮೇಲೆಯೇ ಮನಸ್ಸಿಗೆ ಸಮಾಧಾನ. ಆದರೂ ಬೆಳಗಾಗುವುದಕ್ಕೆ ಇನ್ನೂ ತಿಂಗಳುಗಟ್ಟಲೆ ಕಾಯಬೇಕೋ ಎಂಬ ತಹತಹ.

ಕಾಲೇಜು ಆರಂಭದ ಒಂದೆರಡು ವಾರದವರೆಗೂ ಇದೇ ಗುಂಗು. ಬಹುತೇಕ ಹುಡುಗರೂ ಅದೇ ಮೊದಲ ಬಾರಿ ಪ್ಯಾಂಟ್ ಏರಿಸಿಕೊಂಡವರಾದರೆ, ಬಹುತೇಕ ಹುಡುಗಿಯರೂ ಅದೇ ಮೊದಲ ಬಾರಿಗೆ ಚೂಡಿದಾರ್ ತೊಟ್ಟಿದ್ದಿರಬೇಕು. ಪ್ಯಾಂಟ್ ಶರ್ಟ್ ಹಾಕಿದ ದೆಸೆಯಿಂದಲೇ ನಾವೆಲ್ಲ ಏಕಾಏಕಿ ಯುವಕರಾಗಿಬಿಟ್ಟಿದ್ದರಿಂದ ಸುತ್ತಲಿನ ಜಗತ್ತೆಲ್ಲ ವರ್ಣಮಯವಾಗಿ ಹೊಸಹೊಸ ಕನಸುಗಳು ಥಟ್ಟನೆ ಹೊರಗಿಣುಕಲಾರಂಭಿಸಿದ್ದವು. ಹುಡುಗರೆಲ್ಲ ಹೈಸ್ಕೂಲಿನ ಸಣ್ಣಮಟ್ಟಿನ ನಾಚಿಕೆಯ ಪೊರೆಯನ್ನು ಕಳಚಿಕೊಂಡು ಅಕ್ಕಪಕ್ಕದ ಡೆಸ್ಕುಗಳತ್ತ ವಾರೆಗಣ್ಣಿನಲ್ಲಿ ನೋಡಬಲ್ಲಷ್ಟು ಧೈರ್ಯವನ್ನು ಹೊಂದುವುದಕ್ಕೂ, ಹುಡುಗಿಯರು ಇನ್ನೂ ಒಂದಿಷ್ಟು ಹೆಚ್ಚೇ ನಾಚಿಕೆ ಹಾಗೂ ಬಿಂಕವನ್ನು ಆವಾಹಿಸಿಕೊಂಡು ಸಣ್ಣಸಣ್ಣ ಗುಂಪುಗಳಲ್ಲಿ ಮಂತ್ರಾಲೋಚನೆ ನಡೆಸುವುದಕ್ಕೂ ಈ ಡ್ರೆಸ್‌ಕೋಡಿನಲ್ಲಾದ ವಿಶೇಷ ಬದಲಾವಣೆಯೇ ಪ್ರಮುಖ ಕಾರಣವಿದ್ದೀತೆಂದು ನನ್ನ ಅನುಮಾನ.

ಆದರೆ ಪ್ರೈಮರಿ-ಹೈಸ್ಕೂಲಿನಿಂದ ಕಾಲೇಜಿಗಾದ ಪ್ರಮೋಶನ್ನಿನಿಂದಾಗಿ ಅನೇಕಾನೇಕ ಸೌಲಭ್ಯಗಳು ನಮಗರಿವಿಲ್ಲದಂತೆಯೇ ಬಿಟ್ಟುಹೋಗಿದ್ದವು. ಕಾಲೇಜಿನ ಕೃಪೆಯಿಂದ ’ದೊಡ್ಡ ಹುಡುಗರಾಗಿದ್ದ’ ನಮಗೆ ಪ್ರೈಮರಿ ಸ್ಕೂಲಿನ ಹುಡುಗರ ಸ್ವಾತಂತ್ರ್ಯ ಇರಲಿಲ್ಲ. ಮೂಗಲ್ಲೂ ಬಾಯಲ್ಲೂ ತಿಂಡಿ ಮುಕ್ಕಿ ಎರಡು ಮೈಲಿ ದೂರ ದಾಪುಗಾಲು ಹಾಕಿ ಮತ್ತೆ ಹನ್ನೆರಡು ಮೈಲಿ ಕೆಂಪು ಬಸ್ಸೆಂಬ ಡಕೋಟಾ ಎಕ್ಸ್‌ಪ್ರೆಸ್‌ನ ಮೆಟ್ಟಿಲ ಮೇಲೆ ನೇತಾಡಿಕೊಂಡು ಪ್ರಯಾಣ ಮಾಡಿ ಮತ್ತೊಂದು ಕಿಲೋಮೀಟರ್ ನಡೆದು ಕಾಲೇಜು ಸೇರುವ ಹೊತ್ತಿಗೆ ತಾರುಣ್ಯದಲ್ಲೇ ಮುದುಕರಾದ ಅನುಭವ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮೇಷ್ಟ್ರ ಗಾದೆ ಅರ್ಥವಾಗತೊಡಗಿದ್ದೂ ಆವಾಗಲೇ.

ಮೊದಲೇ ಮಜಾ ಇತ್ತು ಕಣ್ರೋ ಎಂದು ಹುಡುಗರು ಮಾತಾಡಿಕೊಳ್ಳುತ್ತಿದ್ದುದರ ಹಿಂದೆ ನೂರಾರು ಸುಂದರ ನೆನಪುಗಳಿದ್ದವು: ಕಾಡಿನ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳ ಮಕ್ಕಳೆಲ್ಲ ಒಬ್ಬೊಬ್ಬರಾಗಿ ಕಾಲುಹಾದಿ ಸೇರಿ ಮಣಭಾರದ ಚೀಲ ಹೊತ್ತು ಕಿಲೋಮೀಟರ್‌ಗಟ್ಟಲೆ ಬಿರಬಿರನೆ ಹಾಕುವ ಬರಿಗಾಲ ಹೆಜ್ಜೆ, ಕವಲು ಹಾದಿಗಳು ಸೇರುವಲ್ಲಿ ಸ್ನೇಹಿತರು ಇನ್ನೂ ಬಂದಿಲ್ಲದಿದ್ದರೆ ಮುಂದಕ್ಕೆ ಹೋದವರ ಗುರುತಿಗಾಗಿ ಅಲ್ಲೊಂದು ಮರಳಿನ ಸರ್ಕಲ್ ಮತ್ತು ಅದರೊಳಗೆ ಒಂದು ಹಿಡಿ ಹಸಿರುಸೊಪ್ಪು, ಶನಿವಾರದ ಅರ್ಧ ದಿನ ಕಾಡಿನಲ್ಲೇ ಮಾಡುವ ಪಿಕ್ನಿಕ್, ನಗರದ ಫಾಸ್ಟ್‌ಫುಡ್‌ಗಳನ್ನು ನಿವಾಳಿಸಿ ಎಸೆಯಬಲ್ಲ ನೆಲ್ಲಿ, ನೇರಳೆ, ಕೇಪುಳ, ಸರೊಳಿ, ಕುಂಟಾಲ, ಮಾವು, ಅಬ್ಳುಕ, ಕೊಟ್ಟೆ ಇನ್ನಿತರ ತರಹೇವಾರಿ ಹೆಸರುಗಳ ರಂಗುರಂಗಿನ ತಾಜಾ ಹಣ್ಣುಗಳು, ಘಮ್ಮೆನ್ನುವ ಹೂಗಳು...

ಧೋ ಎಂದು ಸುರಿವ ಆಷಾಢದ ಮಳೆಗೆ ದಾರಿಗುಂಟ ಹರಿವ ತಂಪು ನೀರಲ್ಲಿ ತಳಂಪಳಂ ಹೆಜ್ಜೆಹಾಕುತ್ತಾ ಬೇಕುಬೇಕೆಂದೇ ಮೈಯೆಲ್ಲ ಒದ್ದೆಯಾಗಿಸಿಕೊಂಡು ಮುಸ್ಸಂಜೆ ಹೊತ್ತು ಮನೆಗೆ ತಲುಪಿ ಅದೇ ಒದ್ದೆ ಮೈಯಲ್ಲಿ ಒಲೆಯೆದುರು ಕುಳಿತು ಅಮ್ಮ ಸುಟ್ಟು ಕೊಡುವ ಹಲಸಿನ ಹಪ್ಪಳ ಮೆಲ್ಲುತ್ತಾ ಬಿಸಿಬಿಸಿ ಕಾಫಿ ಹೀರುವ ಸೌಲಭ್ಯವಂತೂ ಕಾಲೇಜು ದಿನಗಳಲ್ಲಿ ಬರೀ ನೆನಪು ಮಾತ್ರ.

ಕಾಲವೇ ಕೇಳಿಸುತ್ತಿದೆಯಾ?

ಬುಧವಾರ, ಜೂನ್ 1, 2016

ಹಾಜರಾತಿ ಕೊರತೆಯ ಅಡಕತ್ತರಿ

ಜೂನ್ 2, 2016ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಬರೆಹ. ಓದಲು ಇಲ್ಲಿ ಕ್ಲಿಕ್ಕಿಸಿ

ಹಾಜರಾತಿ ಕೊರತೆ ಶೈಕ್ಷಣಿಕ ವಲಯದಲ್ಲಿ ಬಹುಚರ್ಚಿತ ವಿಷಯ. ಪಿಯುಸಿಯಿಂದ ತೊಡಗಿ ಸ್ನಾತಕೋತ್ತರ ಅಧ್ಯಯನದವರೆಗೂ ಹಾಜರಾತಿ ಕೊರತೆಯ ಸಮಸ್ಯೆಯನ್ನು ಬಹು ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ. ತರಗತಿಗಳಲ್ಲಿ ಕಡ್ಡಾಯ ಹಾಜರಾತಿ ಎಂಬುದು ಒಂದು ಅಮಾನವೀಯ ಕ್ರಮ ಎಂದೂ, ಇದು ವಿದ್ಯಾರ್ಥಿಗಳ ಸ್ವತಂತ್ರ ಕಲಿಕಾ ಪ್ರವೃತ್ತಿಗೆ ದೊಡ್ಡ ಅಡಚಣೆಯೆಂದೂ ವಾದಿಸುವವರು ಒಂದು ಕಡೆಯಾದರೆ, ಹಾಜರಾತಿ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ತುಂಬ ಅವಶ್ಯಕವೆಂದೂ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಗಂಭೀರವಾಗಿ ಪಾಲ್ಗೊಳ್ಳಲು ಅದು ಅನಿವಾರ್ಯ ಎಂದೂ ವಾದಿಸುವವರು ಇನ್ನೊಂದು ಕಡೆ.

ಈ ಎಲ್ಲದರ ನಡುವೆ ಪ್ರತೀವರ್ಷ ಒಂದಷ್ಟು ವಿದ್ಯಾರ್ಥಿಗಳು ಹಾಜರಾತಿ ಕೊರತೆಯ ಕಾರಣದಿಂದ ಪರೀಕ್ಷೆ ಬರೆಯಲು ಅನರ್ಹರಾಗುವುದು, ಅವರು ಕಾಲೇಜುಗಳ ಅಥವಾ ವಿಶ್ವವಿದ್ಯಾನಿಲಯಗಳ ಎದುರು ಧರಣಿ ಕೂರುವುದು, ಸಂಘಟನೆಗಳನ್ನು ಬೆನ್ನಿಗೆ ಕಟ್ಟಿಕೊಳ್ಳುವುದು, ಆತ್ಮಹತ್ಯೆ ಬೆದರಿಕೆ ಹಾಕುವುದು, ಕೆಲವೊಮ್ಮೆ ಈ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗುವುದು, ಪರಿಹಾರಕ್ಕೆ ಕೋರ್ಟ್ ಮೊರೆಹೋಗುವುದು ಇತ್ಯಾದಿಗಳು ನಡೆದೇ ಇವೆ.

ಹಾಜರಾತಿ ಕೊರತೆ ಎದುರಿಸುವ ಬಹುತೇಕ ವಿದ್ಯಾರ್ಥಿಗಳು ನೀಡುವ ಕಾರಣ ತಾವು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುವ ಪರಿಸ್ಥಿತಿ ಇಲ್ಲ ಎಂದು. ಅವರ ಮಾತಿನಲ್ಲಿ ನಿಜಾಂಶ ಇಲ್ಲದಿಲ್ಲ. ಗ್ರಾಮೀಣ ಹಿನ್ನೆಲೆಯ ಅನೇಕ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕಿಂತಲೂ ಹೊಟ್ಟೆಪಾಡೇ ಹೆಚ್ಚು ಮುಖ್ಯವಾಗುತ್ತದೆ.

ಅವರಲ್ಲಿ ತುಂಬ ಮಂದಿ ಕೂಲಿಕಾರರ ಇಲ್ಲವೇ ಕಡುಬಡವರ ಮಕ್ಕಳಿದ್ದಾರೆ. ಮನೆಯಲ್ಲಿ ಅಶಕ್ತ ತಂದೆತಾಯಿಯರಿದ್ದು ಒಬ್ಬನೇ ಮಗನೋ ಮಗಳೋ ಆಗಿದ್ದರಂತೂ ಅದೇ ದೊಡ್ಡ ಸಮಸ್ಯೆ. ಅವರಿಗೆ ದುಡಿಮೆ ಅನಿವಾರ್ಯ. ಇಂತಹವರಿಗೆ ಅನೇಕ ಸಲ ಉನ್ನತ ಶಿಕ್ಷಣ ಗಗನ ಕುಸುಮ. ಆದರೂ ಮುಂದೆ ಒಳ್ಳೆ ಉದ್ಯೋಗ ಸಿಗಬಹುದು ಎಂಬ ಆಸೆಯಿಂದ ಕಾಲೇಜು ಸೇರುವವರು ಹಲವರು. ಓದುವ ಆಸೆಯಿದ್ದರೂ ಕೆಲವೊಮ್ಮೆ ದುಡಿಮೆಯೇ ಹೆಚ್ಚು ಅನಿವಾರ್ಯವಾದರೆ ಆಶ್ಚರ್ಯವೇನೂ ಇಲ್ಲ.

ಇಂತಹ ವಿದ್ಯಾರ್ಥಿಗಳನ್ನು ಹಾಜರಾತಿಯ ವಿಷಯದಲ್ಲಿ ಮಾನವೀಯ ದೃಷ್ಟಿಯಿಂದ ನೋಡಬೇಕು ಎಂಬ ಮಾತು ಒಪ್ಪತಕ್ಕದ್ದೇ. ಆದರೆ ಒಂದು ಕುತೂಹಲದ ವಿಷಯ ಹೇಳುತ್ತೇನೆ: ನಾನು ಪಾಠ ಮಾಡುತ್ತಿರುವ ಕಾಲೇಜಿನ ಶೇ. ೯೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಬಡತನದ ಮತ್ತು ಗ್ರಾಮೀಣ ಹಿನ್ನೆಲೆಯವರು. ಅನೇಕರು ತಮ್ಮ ಶುಲ್ಕ ತುಂಬಲು ತಾವೇ ದುಡಿಯುವ ಅನಿವಾರ್ಯತೆ ಇರುವವರು. ಅದಕ್ಕಾಗಿ ಅರೆಕಾಲಿಕ ಉದ್ಯೋಗಗಳನ್ನು ಹಿಡಿದವರೂ ಇದ್ದಾರೆ.

ದುಡಿಮೆಯ ಆದಾಯದ ಒಂದು ಪಾಲನ್ನು ತಮ್ಮ ಕುಟುಂಬಕ್ಕೂ ಇನ್ನೊಂದು ಪಾಲನ್ನು ತಮ್ಮ ವಿದ್ಯಾಭ್ಯಾಸಕ್ಕೂ ಬಳಸುವ ನೂರಾರು ವಿದ್ಯಾರ್ಥಿಗಳು ಕಾಣಸಿಗುತ್ತಾರೆ. ವಿಶೇಷವೆಂದರೆ, ಇವರೆಲ್ಲ ಅತ್ಯಂತ ಶಿಸ್ತಿನ ಮತ್ತು ಶ್ರದ್ಧೆಯ ವಿದ್ಯಾರ್ಥಿಗಳು. ಇವರಿಗೆ ಕನಿಷ್ಠ ಹಾಜರಾತಿಯ ಕೊರತೆ ಇಲ್ಲ. ತಮ್ಮ ಕಾಲೇಜಿನ ಸಮಯ ಮತ್ತು ದುಡಿಮೆಯ ಸಮಯವನ್ನು ಅತ್ಯಂತ ಜತನದಿಂದ ಯೋಜಿಸಿಕೊಂಡು ಬದುಕಿನಲ್ಲಿ ಹೇಗಾದರೂ ಮುಂದೆ ಬರಬೇಕೆಂದು ಒದ್ದಾಡುವ ಇವರನ್ನು ಕಂಡಾಗ ಅಭಿಮಾನ ಉಂಟಾಗುತ್ತದೆ.

ಹಾಜರಾತಿ ಕೊರತೆ ಎದುರಿಸುವ ಬಹುತೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ಒಂದು ಕುಂಟುನೆಪ ಮಾತ್ರ. ಕಾಲೇಜು ಆವರಣದಲ್ಲೇ ಇದ್ದು ತರಗತಿಗಳಿಗೆ ಹಾಜರಾಗದೆ, ಸ್ನೇಹಿತರ ದಂಡುಕಟ್ಟಿಕೊಂಡು ಬೀದಿ ಸುತ್ತುವ, ಟಾಕೀಸುಗಳಲ್ಲಿ ಕಾಲ ಕಳೆಯುವ ವಿದ್ಯಾರ್ಥಿಗಳಿಗೂ ಪರೀಕ್ಷಾ ಸಮಯ ಸಮೀಪಿಸಿದಾಗ ತಮ್ಮ ಕೌಟುಂಬಿಕ ಹಿನ್ನೆಲೆ ನೆನಪಾಗುವುದನ್ನು ನೋಡಿದಾಗ ಮಾತ್ರ ಅಯ್ಯೋ ಎನಿಸುತ್ತದೆ. ಇಂತಹವರಿಗೆ ಎಲ್ಲ ಸಂಕಷ್ಟಗಳ ನಡುವೆಯೂ ವಿದ್ಯಾಭ್ಯಾಸದ ವಿಷಯದಲ್ಲಿ ಶ್ರದ್ಧೆಯನ್ನು ರೂಢಿಸಿಕೊಂಡಿರುವ ವಿದ್ಯಾರ್ಥಿಗಳು ಮಾದರಿಯಾಗಬೇಕು.

ಕರ್ನಾಟಕ ಶಿಕ್ಷಣ ಕಾಯ್ದೆ 2006ರ ಪ್ರಕಾರ ಪದವಿಪೂರ್ವ ಹಂತದಲ್ಲಿ ಶೇ. 75ರಷ್ಟು ಹಾಜರಾತಿ ಕಡ್ಡಾಯ. ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಹಾಜರಾತಿ ಇರಬೇಕೆಂದು ನಿಯಮ ರೂಪಿಸಿವೆ. ವೈದ್ಯಕೀಯ ಕಾರಣಗಳೇ ಮೊದಲಾದ ತೀರಾ ಅನಿವಾರ್ಯ ಸಂದರ್ಭಗಳಿದ್ದಾಗ ಅಭ್ಯರ್ಥಿಗೆ ಮಾನವೀಯ ದೃಷ್ಟಿಯಿಂದ ಶೇ. 5ರಷ್ಟು ವಿನಾಯಿತಿ ನೀಡಲು ಕುಲಪತಿಗಳಿಗೆ ಮಾತ್ರ ಸ್ವವಿವೇಚನೆಯ ಅವಕಾಶವಿದೆ. ನ್ಯಾ| ಜೆ. ಎಂ. ಲಿಂಗ್ಡೋ ಸಮಿತಿ ಕೂಡ ವಿದ್ಯಾರ್ಥಿ ಚುನಾವಣೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಶೇ. 75 ಹಾಜರಾತಿ ಕಡ್ಡಾಯವಾಗಿ ಇರಬೇಕೆಂದು ಶಿಫಾರಸು ಮಾಡಿದೆ. ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವುದಕ್ಕೆ ಹಾಜರಾತಿಯಲ್ಲಿ ಕಟ್ಟುನಿಟ್ಟು ಪಾಲಿಸುವುದು ಮುಖ್ಯ ಎಂಬುದನ್ನು ಅನೇಕ ಉಚ್ಚ ನ್ಯಾಯಾಲಯಗಳು, ಭಾರತದ ಸರ್ವೋಚ್ಛ ನ್ಯಾಯಾಲಯವೂ ಮತ್ತೆಮತ್ತೆ ಹೇಳಿವೆ.

'ವಿದ್ಯಾರ್ಥಿಗಳು ತಾರುಣ್ಯ ಸಹಜ ವರ್ತನೆಗಳಿಂದಲೋ, ಅಸೌಖ್ಯದಿಂದಲೋ ತರಗತಿಗಳಿಗೆ ಗೈರುಹಾಜರಾಗುವ ಸಂದರ್ಭ ಇದೆ. ಆದರೆ ಅದಕ್ಕಾಗಿಯೇ ಅವರಿಗೆ ಶೇ. 25ರಷ್ಟು ತರಗತಿಗಳಿಗೆ ಗೈರುಹಾಜರಾಗುವ ಸ್ವಾತಂತ್ರ್ಯ ಇದೆ. ಇನ್ನಷ್ಟು ವಿನಾಯಿತಿ ನೀಡಬೇಕೆಂಬುದು ನ್ಯಾಯ ಸಮ್ಮತ ಅಲ್ಲ. ಈ ಪ್ರವೃತ್ತಿಯಿಂದ ಶ್ರದ್ಧಾವಂತ ವಿದ್ಯಾರ್ಥಿಗಳ ನೈತಿಕತೆ ಮತ್ತು ನಂಬಿಕೆಯನ್ನು ದುರ್ಬಲಗೊಳಿಸಿದಂತಾಗುತ್ತದೆ’ ಎಂದು ತನ್ನ ತೀರ್ಪೊಂದರಲ್ಲಿ ದೆಹಲಿ ಹೈಕೋರ್ಟ್ ಹೇಳಿದೆ.

'ಅಪಾತ್ರರಿಗೆ ಅನುಕಂಪ ತೋರುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಕುಂಠಿತಗೊಳಿಸಬಾರದು. ಉಚ್ಚ ನ್ಯಾಯಾಲಯಗಳು ಕೂಡ ಕಾನೂನು ತತ್ವಗಳ ಉಲ್ಲಂಘನೆ ಆಗದ ಹೊರತು ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಹಾಗೂ ನಿಯಮಾವಳಿಗಳಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡಬಾರದು’ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳುತ್ತಲೇ ಬಂದಿದೆ.

ಕಡ್ಡಾಯ ಹಾಜರಾತಿಯ ಅಸ್ತ್ರವನ್ನು ಶಿಕ್ಷಣ ಸಂಸ್ಥೆಗಳು ಮತ್ತು ಅಧ್ಯಾಪಕರು ದುರ್ಬಳಕೆ ಮಾಡುತ್ತಿದ್ದಾರೆ ಎಂಬುದು ಅನೇಕ ವಿದ್ಯಾರ್ಥಿಗಳ ಆರೋಪ. ತಮಗಾಗದ ವಿದ್ಯಾರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಕೆಲವು ಅಧ್ಯಾಪಕರು ಸುಳ್ಳೇ ಹಾಜರಾತಿ ಕೊರತೆ ತೋರಿಸುತ್ತಾರೆ ಎಂಬುದು ಕೆಲವರ ದೂರು. ಹಾಜರಾತಿ ಕೊರತೆಯ ನೆಪವೊಡ್ಡಿ ವಿದ್ಯಾರ್ಥಿಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾವಿರಾರು ರೂಪಾಯಿ ಕೀಳುವ ದಂಧೆ ಮಾಡಿಕೊಂಡಿವೆ ಎಂಬುದು ಇನ್ನು ಕೆಲವರ ಆರೋಪ. ಈ ಆರೋಪಗಳೂ ತಳ್ಳಿಹಾಕುವಂಥವಲ್ಲ. ಸಾಕಷ್ಟು ಶೈಕ್ಷಣಿಕ ಅರ್ಹತೆ ಪಡೆದು ಉಪನ್ಯಾಸಕರಾದ ಮೇಲೂ ಎಲ್ಲವನ್ನೂ ಎಲ್ಲರನ್ನೂ ಜಾತಿಯ ಲೆಕ್ಕಾಚಾರದಲ್ಲೇ ಅಳೆದು ತೂಗುವ, ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಲಾಗದ ಸಂಕುಚಿತ ಮನೋಭಾವದ ಮಂದಿ ನಮ್ಮ ನಡುವೆ ಇದ್ದಾರೆ. ಪ್ರತೀ ವಿಷಯದ ಹಾಜರಾತಿ ಕೊರತೆಗೆ ಇಂತಿಷ್ಟು ದಂಡ ನಿಗದಿ ಮಾಡಿ ವಿದ್ಯಾರ್ಥಿಗಳಿಂದ ಹಣ ಕೀಳುವ ಸಂಸ್ಥೆಗಳೂ ಇವೆ. ಇದಕ್ಕೆ ಪೂರಕವಾಗಿ ಹಾಜರಾತಿ ಕೊರತೆಯಿದ್ದರೆ ಏನಂತೆ ಇಂತಿಷ್ಟು ಹಣ ಚೆಲ್ಲಿದರಾಯಿತು ಎಂಬ ಉಡಾಫೆ ಮನಸ್ಸಿನ ವಿದ್ಯಾರ್ಥಿಗಳೂ ಇದ್ದಾರೆ.

ಆದರೆ ಇಂತಹ ಸಮಸ್ಯೆಗಳ ಪರಿಹಾರದ ದಾರಿಯನ್ನು ನಾವು ಹುಡುಕಬೇಕೇ ಹೊರತು ಹಾಜರಾತಿಯ ಪರಿಕಲ್ಪನೆಯನ್ನೇ ಒಂದು ಅನವಶ್ಯಕ ಮತ್ತು ಅನಾಗರಿಕ ಕ್ರಮವೆಂದು ವಾದಿಸುವುದು ಹಾಸ್ಯಾಸ್ಪದ. ಶಿಕ್ಷಣದ ಘನತೆಯನ್ನು ಎತ್ತಿಹಿಡಿಯಬೇಕಾದರೆ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕುರಿತಾದ ಗಾಂಭೀರ್ಯತೆಯನ್ನೂ ಶ್ರದ್ಧೆಯನ್ನೂ ಬೆಳೆಸಬೇಕಾದರೆ ಉತ್ತಮ ಹಾಜರಾತಿ ಒಂದು ಪ್ರಮುಖ ಮಾರ್ಗ. ತರಗತಿಗೆ ಅನಿವಾರ್ಯವಾಗಿಯಾದರೂ ಹಾಜರಾದಾಗ ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಲ್ಲಿ ಕಳೆದುಹೋಗುವುದು ತಪ್ಪಿ ಕಲಿಕೆಯಲ್ಲಿ ಒಂದಿಷ್ಟಾದರೂ ಶಿಸ್ತು ಮೂಡಬಹುದು. ಇಷ್ಟವಿಲ್ಲದಿದ್ದರೂ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗುವಂತೆ ಮಾಡಿದರೆ ಅವರಿಂದ ತೊಂದರೆಯೇ ಹೆಚ್ಚು ಎಂಬ ಮಾತೂ ಅತಾರ್ಕಿಕವಾದದ್ದು. ಸ್ವತಂತ್ರ ಕಲಿಕೆಯ ವಾತಾವರಣ ಬೆಳೆಸುವುದೆಂದರೆ ವಿದ್ಯಾರ್ಥಿಗಳು ಮನಬಂದಂತೆ ತರಗತಿಗೆ ಹಾಜರಾಗುವ ಅಥವಾ ಹಾಜರಾಗದಿರುವ ಅವಕಾಶ ಮಾಡಿಕೊಡುವುದೇ?

ತರಗತಿಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಂತೆ ಗುಣಮಟ್ಟದ ಅಧ್ಯಾಪನ ಮಾಡುವುದು ಉಪನ್ಯಾಸಕರ ಜವಾಬ್ದಾರಿ; ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಶಿಕ್ಷಣ ಸಂಸ್ಥೆಗಳ ಮತ್ತು ಸರ್ಕಾರದ ಹೊಣೆ. ತಮ್ಮದೇ ಬೇಜವಾಬ್ದಾರಿಯಿಂದ ಹಾಜರಾತಿ ಕೊರತೆ ಎದುರಿಸುವ ವಿದ್ಯಾರ್ಥಿಗಳ ಬೆಂಬಲಕ್ಕೆ ಬರುವ ಜಾತಿ ಸಂಘಟನೆಗಳು ದುಡುಕಿನ ಹೋರಾಟ ಮಾಡುವ ಬದಲು ಅಂತಹ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ, ಅವರಿಗೆ ಆರ್ಥಿಕ ಸಹಾಯ ಮಾಡುವ ಕುರಿತು ಯೋಚಿಸುವುದೊಳ್ಳೆಯದು. ಉಳಿದಂತೆ, ಹಾಜರಾತಿ ಕೊರತೆಯನ್ನು ಒಂದು ಸೇಡಿನ ಅಥವಾ ಆದಾಯದ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಅಧ್ಯಾಪಕರ ಮತ್ತು ಕಾಲೇಜುಗಳ ವರ್ತನೆಯನ್ನು ನಿಯಂತ್ರಿಸುವುದಕ್ಕೆ ಬಯೋಮೆಟ್ರಿಕ್ ಹಾಜರಾತಿಯಂತಹ ಕ್ರಮಗಳು ಸಹಕಾರಿಯಾಗಬಲ್ಲವು.

ಮೇ 31 ‘ವಿಶ್ವ ತಂಬಾಕು ರಹಿತ ದಿನ’; ಧೂಮಪಾನಿಗಳೇ, ಆತ್ಮಹತ್ಯೆ ಮಾಡಿಕೊಳ್ಳಬೇಡಿ!

ಮೇ 31, 2016ರ 'ಪ್ರಜಾಪ್ರಗತಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

http://balto123.deviantart.com/
ದೃಶ್ಯ ಒಂದು: ಮುದ್ದು ಮಗಳು ಅಂದವಾಗಿ ಚಿತ್ರ ಬರೆಯುತ್ತಿದ್ದಾಳೆ. ಅಪ್ಪ ಕೆಮ್ಮುತ್ತಾ ಒಳಗೆ ಬರುತ್ತಾನೆ. ಮಗಳ ಮುಖ ಬಾಡುತ್ತದೆ. ದೃಶ್ಯ ಎರಡು: ಎಲ್ಲರೂ ಊಟದ ಮೇಜಿನಲ್ಲಿದ್ದಾರೆ. ಅಪ್ಪನ ಕೈಯಲ್ಲಿ ಸಿಗರೇಟು. ಮಗಳ ಮುಖ ಸೊರಗುತ್ತದೆ. ದೃಶ್ಯ ಮೂರು: ಅಪ್ಪ-ಮಗಳಿಬ್ಬರೂ ಜತೆಯಾಗಿ ಕುಳಿತು ಟಿವಿ ನೋಡುತ್ತಿದ್ದಾರೆ. ಅಪ್ಪನ ಕೈಯಲ್ಲಿ ಸಿಗರೇಟು. ಶ್ವಾಸಕೋಶದ ಕ್ಯಾನ್ಸರಿನಿಂದ ಕೆಮ್ಮಿ ಕೆಮ್ಮಿ ವ್ಯಕ್ತಿಯೊಬ್ಬ ನರಳುತ್ತಿರುವುದು ಟಿವಿಯಲ್ಲಿ ಕಾಣಿಸುತ್ತದೆ. ಮಗಳ ಮುಖ ಮತ್ತೆ ಬಾಡುತ್ತದೆ. ಅವಳು ಅಪ್ಪನ ಮುಖ ನೋಡುತ್ತಾಳೆ. ಆತ ಒಮ್ಮೆ ಟಿವಿಯನ್ನೂ ಇನ್ನೊಮ್ಮೆ ಮಗಳ ಮುಖವನ್ನೂ ನೋಡಿ ತಕ್ಷಣ ಅಲ್ಲಿಂದೆದ್ದು ಹೋಗಿ ಸಿಗರೇಟನ್ನು ಎಸೆದು ಬರುತ್ತಾನೆ. ಮಗಳು ಅಪ್ಪನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಾಳೆ.

ನೀವು ಯಾವುದೇ ಟಾಕೀಸಿಗೆ ಹೋಗಿರುವಿರಾದರೆ ಸಿನಿಮಾ ಆರಂಭಕ್ಕೂ ಮುನ್ನ ಹೀಗೊಂದು ಜಾಹೀರಾತನ್ನು ಖಂಡಿತ ನೋಡಿರುತ್ತೀರಿ. ಆಮೇಲೆ ಮಧ್ಯಂತರದಲ್ಲಿ ಎದ್ದು ಶೌಚಾಲಯದತ್ತ ಹೋದಿರೋ, ಸಿಗರೇಟಿನ ಹೊಗೆಯ ಮೋಡ ನಿಮ್ಮನ್ನು ಸ್ವಾಗತಿಸುತ್ತದೆ! ಆ ಹೊಗೆಗೆ ನೀವು ಮೂರ್ಛೆ ಹೋಗದಿದ್ದರೆ ಅದೇ ನಿಮ್ಮ ಪುಣ್ಯ. ಕನಿಷ್ಠ ಐವತ್ತು ಮಂದಿ ಯುವಕರು ಹೆಮ್ಮೆಯಿಂದ ಸಿಗರೇಟು ಸೇದುತ್ತಾ ಅದೊಂದು ಸಾಂವಿಧಾನಿಕ ಹಕ್ಕೋ ಎಂಬಹಾಗೆ ಅಡ್ಡಾಡುತ್ತಿರುತ್ತಾರೆ. ಆ ಹೊಗೆಗೆ ‘ಧೂಮಪಾನ ನಿಷೇಧಿಸಿದೆ’ ಎಂಬ ಗೋಡೆಯ ಮೇಲಿನ ಬೋರ್ಡು ಕಾಣಿಸುವುದೇ ಇಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಎಂಟು ವರ್ಷಗಳಾದರೂ ನಾವಿನ್ನೂ ತಂಬಾಕಿನ ಹೊಗೆಯ ಅಂಧಕಾರದಲ್ಲೇ ಇದ್ದೇವೆ. ಸಿಗರೇಟ್ ಸೇದುವವರು ಅದೊಂದು ಹೆಮ್ಮೆ ಎಂಬಂತೆ, ಇನ್ಯಾರಿಗೂ ಇರದ ವಿಶಿಷ್ಟವಾದ ಅರ್ಹತೆ ಎಂಬಂತೆ ವರ್ತಿಸುತ್ತಲೇ ಇದ್ದಾರೆ. ‘ನಿಮಗೆ ಬೇಡವಾದರೆ ಸೇದಬೇಡಿ, ನಮಗೇಕೆ ಬಿಟ್ಟಿ ಉಪದೇಶ ಮಾಡುತ್ತೀರಿ’ ಎಂಬ ಉಡಾಫೆ ಮನೋಭಾವದೊಂದಿಗೆ ದಿನದಿನವೂ ಸಾವನ್ನು ಸಮೀಪಿಸುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಪ್ರತಿವರ್ಷ 60 ಲಕ್ಷ ಮಂದಿ ಧೂಮಪಾನದಿಂದ ಸಾವಿಗೀಡಾಗುತ್ತಿದ್ದಾರೆ. ಆತಂಕಕಾರಿ ಸಂಗತಿಯೆಂದರೆ ಇವರಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ಸಕ್ರಿಯ ಧೂಮಪಾನಿಗಳಲ್ಲ. ತಾವು ನೇರವಾಗಿ ಧೂಮಪಾನಿಗಳಲ್ಲದಿದ್ದರೂ ಬೇರೆಯವರು ಸಿಗರೇಟ್ ಸೇದುವಾಗ ಆ ಪರಿಸರದಲ್ಲಿ ಇದ್ದ ಕಾರಣದಿಂದಾಗಿ ಮಾರಕ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳಕೊಂಡಿದ್ದಾರೆ. ಇನ್ನೊಂದು ಆತಂಕದ ವಿಷಯವೆಂದರೆ ಜಗತ್ತಿನ ಒಟ್ಟಾರೆ ಧೂಮಪಾನಿಗಳ ಪೈಕಿ ಶೇ. 12ರಷ್ಟು ಮಂದಿ (ಸುಮಾರು 12 ಕೋಟಿ) ಭಾರತದಲ್ಲೇ ಇದ್ದಾರೆ.

ತಂಬಾಕಿನ ಹೊಗೆಯಲ್ಲಿರುವ 4000 ರಾಸಾಯನಿಕಗಳಲ್ಲಿ ಕನಿಷ್ಠ 250 ತುಂಬ ಅಪಾಯಕಾರಿಯಾದವು; ಅದರಲ್ಲೂ 50ಕ್ಕೂ ಹೆಚ್ಚು ಕ್ಯಾನ್ಸರ್‍ಕಾರಕ ರಾಸಾಯನಿಕಗಳು. ಶೇ. 90ರಷ್ಟು ಬಾಯಿ ಹಾಗೂ ಶ್ವಾಸಕೋಶದ ಕ್ಯಾನ್ಸರಿಗೆ ಧೂಮಪಾನವೇ ಕಾರಣ ಎಂದು ಅಧ್ಯಯನಗಳು ದೃಢಪಡಿಸಿವೆ. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವಿಲ್ಲ ಎಂದಲ್ಲ. ಅವರು ಇರುಳು ಕಂಡ ಬಾವಿಗೆ ಹಗಲು ಬೀಳುತ್ತಿದ್ದಾರೆ ಅಷ್ಟೇ.

1987ರಿಂದಲೇ ವಿಶ್ವ ಆರೋಗ್ಯ ಸಂಸ್ಥೆ ಮೇ 31ನ್ನು ‘ತಂಬಾಕು ರಹಿತ ದಿನ’ವೆಂದು ಘೋಷಿಸಿ ತಂಬಾಕಿನ ವಿರುದ್ಧ ಜನಜಾಗೃತಿ ಮೂಡಿಸಲು ವ್ಯಾಪಕ ಪ್ರಯತ್ನ ಮಾಡುತ್ತಿದೆ. ಪ್ರತೀ ವರ್ಷ ತಂಬಾಕು ವಿರೋಧದ ಯಾವುದಾದರೊಂದು ಆಯಾಮವನ್ನು ಮುಖ್ಯ ಕಾರ್ಯಸೂಚಿಯಾಗಿಸಿಕೊಂಡು ವಿಶ್ವದೆಲ್ಲೆಡೆ ಎಚ್ಚರ ಮೂಡಿಸಲು ಪ್ರಯತ್ನಿಸುತ್ತಿದೆ. ಉದಾಹರಣೆಗೆ, ಈ ವರ್ಷ ಸಿಗರೇಟ್ ಪ್ಯಾಕೆಟ್‍ಗಳ ಮೇಲೆ ಯಾವುದೇ ಬಣ್ಣ, ಲಾಂಛನ, ಬ್ರಾಂಡ್ ಅಥವಾ ಉತ್ತೇಜಕ ವಾಕ್ಯಗಳನ್ನು ಮುದ್ರಿಸದೆ ಅವುಗಳ ಬದಲಾಗಿ ಆರೋಗ್ಯ ಎಚ್ಚರಿಕೆಗಳನ್ನು ಮಾತ್ರ ಮುದ್ರಿಸಲು ಕ್ರಮ ಕೈಗೊಳ್ಳುವಂತೆ ಡಬ್ಲ್ಯೂಎಚ್‍ಒ ವಿಶ್ವದ ವಿವಿಧ ದೇಶಗಳಿಗೆ ಕರೆ ನೀಡಿದೆ.

ಭಾರತವೂ ತಂಬಾಕಿನ ವಿರುದ್ಧ ಜಾಗೃತಿ ಮೂಡಿಸುವ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. 2008ರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇದರ ಪ್ರಕಾರ ಸಭಾಂಗಣ, ಹೊಟೇಲು, ಚಿತ್ರಮಂದಿರ, ಆಸ್ಪತ್ರೆ, ಸಾರ್ವಜನಿಕ ಸಾರಿಗೆ, ಗ್ರಂಥಾಲಯ, ಕ್ಯಾಂಟೀನ್, ನ್ಯಾಯಾಲಯ, ಅಂಚೆ ಕಚೇರಿ, ಮಾರುಕಟ್ಟೆ, ಮಾಲ್‍ಗಳು, ಉದ್ಯಾನ, ಶಾಲಾ ಕಾಲೇಜುಗಳು ಮುಂತಾದೆಡೆ ಧೂಮಪಾನ ಮಾಡುವುದು ಒಂದು ಅಪರಾಧ. ಇದಕ್ಕಾಗಿ ಒಬ್ಬ ವ್ಯಕ್ತಿಗೆ ರೂ. 200 ದಂಡ ವಿಧಿಸಬಹುದಾಗಿದೆ. ಇದನ್ನು ರೂ. 1000ಕ್ಕೆ ಏರಿಸಬೇಕು ಎಂಬ ಪ್ರಸ್ತಾಪ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡನೆಯಾಗಿದೆ. ಮಾಧ್ಯಮಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಸರ್ಕಾರ ನಿಷೇಧಿಸಿದೆ.

ಇಷ್ಟೆಲ್ಲ ಆದರೂ ನಮ್ಮ ಜನರು ಎಚ್ಚೆತ್ತುಕೊಂಡಿಲ್ಲ. ಕೇವಲ ಕಾನೂನುಗಳಿಂದಲೇ ಸಮಾಜ ಸುಧಾರಣೆಯಾಗದು ಎಂಬುದಕ್ಕೆ ಇದೇ ದೊಡ್ಡ ನಿದರ್ಶನ. ಮೇಲೆ ಹೇಳಿರುವ ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟರಮಟ್ಟಿಗೆ ಧೂಮಪಾನ ನಿಷೇಧ ಜಾರಿಯಾಗಿದೆ ಎಂದು ಯೋಚಿಸಿದರೆ ಸಾಕು, ಅರ್ಥವಾಗುತ್ತದೆ. ನೀವು ಯಾವುದೇ ಟೀ ಸ್ಟಾಲ್‍ಗೆ ಭೇಟಿ ನೀಡಿ, ಅಲ್ಲಿ ಚಹಾಕ್ಕಿಂತಲೂ ಸಮೃದ್ಧವಾದ ಸಿಗರೇಟ್ ಹೊಗೆ ನಿಮಗೆ ಉಚಿತವಾಗಿ ಲಭ್ಯ. ಧೂಮಪಾನ ಬೇಡದ ಜನಸಾಮಾನ್ಯರು ಸಿಗರೇಟ್ ಅಡ್ಡೆಗಳಾಗಿರುವ ಇಂತಹ ಅಂಗಡಿಗಳಿಗೆ ಹೋಗವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ವಿದ್ಯಾವಂತ ಮಂದಿಯೂ ಯಾವುದೇ ನಾಚಿಕೆ ಮರ್ಯಾದೆಯಿಲ್ಲದೆ, ನಾಗರಿಕತೆಯ ಕನಿಷ್ಠ ಲಕ್ಷಣವೂ ಇಲ್ಲದೆ ತಮ್ಮೆದುರು ನಿಂತ ಜನರ ಮುಖಕ್ಕೆ ಹೊಗೆಯುಗುಳುತ್ತಿರುತ್ತಾರೆ.

ಶಿಕ್ಷಣ ಸಂಸ್ಥೆಗಳ 200 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿದ್ದರೂ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಸಾಮಾನ್ಯವಾಗಿ ಸಿಗರೇಟ್, ಗುಟ್ಕಾದಂತಹ ತಂಬಾಕು ಉತ್ಪನ್ನಗಳ ಗೂಡಂಗಡಿಗಳು ಇರುವುದೂ ಕಾಲೇಜುಗಳ ಎದುರಲ್ಲೇ! ‘ಧೂಮಪಾನ ನಿಷೇಧಿಸಿದೆ. ಅದು ದಂಡನಾರ್ಹ ಅಪರಾಧ’ ಎಂಬ ಪೊಲೀಸರ ಬೋರ್ಡುಗಳನ್ನು ಅಂಗಡಿಯವರು ಅನಿವಾರ್ಯವಾಗಿ ಕಂಡೂಕಾಣಿಸದಂತೆ ತಗುಲಿಸುತ್ತಾರೆ; ಕೆಲವೊಮ್ಮೆ ತಣ್ಣಗೆ ಅದನ್ನು ಕಿತ್ತೆಸೆಯುವುದೂ ಇದೆ. ಎದುರಿಗೇ ಇದ್ದರೂ ನಮ್ಮ ದಪ್ಪ ಚರ್ಮದ ಮಂದಿಗೆ ಅದು ಕ್ಯಾರೇ ಅಲ್ಲ ಬಿಡಿ. ವಿದ್ಯಾರ್ಥಿಗಳಿಗೆ ಆರೋಗ್ಯದ, ನೀತಿ ನಿಯಮಗಳ ಪಾಠ ಹೇಳಬೇಕಾದ ಅಧ್ಯಾಪಕರುಗಳೇ ಹಲವು ಮಂದಿ ಗಂಟೆಗೊಮ್ಮೆ ಸಿಗರೇಟ್ ಸೇದದೆ, ಗುಟ್ಕಾ ಜಗಿಯದೆ ಬದುಕಲಾರರು ಎಂಬಂತಹ ಪರಿಸ್ಥಿತಿ ಇದೆ; ಇನ್ನು ಯುವಕರನ್ನು ದೂರಿ ಏನು ಪ್ರಯೋಜನ?

ಬದಲಾವಣೆಯಾಗಬೇಕಿರುವುದು ಮನಸ್ಸಿನಲ್ಲಿ. ಅದು ತಾನಾಗಿಯೇ ಸಮಾಜದಲ್ಲಿ ಪ್ರತಿಫಲಿಸುತ್ತದೆ. ಏಕೆಂದರೆ ಸಮಾಜವು ಸಮಷ್ಟಿ ಮನಸ್ಥಿತಿಯ ಕನ್ನಡಿ.

ಶುಕ್ರವಾರ, ಮೇ 13, 2016

ಸಮನ್ವಯತೆಯೇ ಸಂಸ್ಕೃತಿಯ ಅಂತರ್ಯ

ಏಪ್ರಿಲ್ 16-22, 2016 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ |
ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯಾಯಿಕಾಃ ||
ಅರ್ಹನ್ನಿತ್ಯಥ ಜೈನ ಶಾಸನರತಾಃ ಕರ್ಮೇತಿ ಮೀಮಾಂಸಕಾಃ |
ಸೋಯಂ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ಹರಿಃ ||
ಹನ್ನೆರಡನೇ ಶತಮಾನದ ಹೊಯ್ಸಳ ಶಾಸನವೊಂದರಲ್ಲಿ ಉಲ್ಲೇಖಿತವಾಗಿರುವ ಪ್ರಾರ್ಥನಾಶ್ಲೋಕವಿದು. “ಶೈವರು ಶಿವನೆಂದು ಯಾರನ್ನು ಉಪಾಸಿಸುವರೋ, ವೇದಾಂತಿಗಳು ಬ್ರಹ್ಮವೆಂದು ಯಾರನ್ನು ನಂಬುವರೋ, ವೈಚಾರಿಕಶ್ರೇಷ್ಠರಾದ ನೈಯಾಯಿಕರು ಯಾರನ್ನು ಕರ್ತೃವೆನ್ನುವರೋ, ಬೌದ್ಧರು ಯಾರನ್ನು ಬುದ್ಧನೆಂದು ಆರಾಧಿಸುವರೋ, ಜೈನಶಾಸನದ ಅನುಯಾಯಿಗಳು ಅರ್ಹತ್ ಎಂದು ನಿತ್ಯವೂ ಯಾರನ್ನು ನಂಬುವರೋ, ಮೀಮಾಂಸಕರು ಕರ್ಮವೆಂದು ಯಾರನ್ನು ಉಪಾಸನೆಗೈಯುವರೋ ಅಂತಹ ಮೂರು ಲೋಕದ ಒಡೆಯನಾಗಿರುವ ಶ್ರೀಹರಿಯು ನಿಮ್ಮ ಇಷ್ಟಫಲಗಳನ್ನು ಕರುಣಿಸಲಿ” ಎಂಬ ಭಾವಾರ್ಥದ ಈ ಶ್ಲೋಕ ಇಡೀ ಭಾರತೀಯ ಸಂಸ್ಕೃತಿಯ ಸಮನ್ವಯ ಗುಣಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಎಲ್ಲರನ್ನೂ ಎಲ್ಲವನ್ನೂ ಗೌರವದಿಂದ, ಸಂತುಲಿತ ಮನಸ್ಸಿನಿಂದ ಕಂಡ ಮೇಲ್ಮೆ ಭಾರತೀಯ ಸಂಸ್ಕೃತಿಯದ್ದು. ಅದು ಅಧ್ಯಾತ್ಮದ ತೊಟ್ಟಿಲಾಗಿದ್ದಂತೆಯೇ ಎಲ್ಲ ಬಗೆಯ ನಂಬಿಕೆ-ನಡವಳಿಕೆ, ಆಚಾರ-ವಿಚಾರ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಜೀವನಶೈಲಿಗಳ ತಾಯಿಯೂ ಆಗಿ ಸಾವಿರಾರು ವರ್ಷಗಳಿಂದ ಸಾಗಿ ಬಂದಿದೆ. ಅದು ಹತ್ತು ಹಲವು ಮತ-ಪಂಥಗಳ ಪ್ರಯೋಗಶಾಲೆ. ಈ ಭಾರತೀಯ ಪರಂಪರೆ ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ ಅಥವಾ ಒಬ್ಬ ಪ್ರವಾದಿಯ ಕೊಡುಗೆ ಅಲ್ಲ. ಯಾವುದೋ ಒಂದು ವರ್ಗದ ಸೊತ್ತೂ ಅಲ್ಲ. ಅದಕ್ಕೇ ವೈವಿಧ್ಯತೆ ನಮ್ಮ ಸಂಸ್ಕøತಿಯ ಪ್ರಾಥಮಿಕ ಲಕ್ಷಣ. ವೈವಿಧ್ಯತೆಯನ್ನೂ ಸಮನ್ವಯತೆಯನ್ನೂ ಏಕಕಾಲಕ್ಕೆ ಪ್ರದರ್ಶಿಸಬಲ್ಲ ತನ್ನ ಸಾಮಥ್ರ್ಯದಿಂದಾಗಿಯೇ ಭಾರತೀಯ ಪರಂಪರೆಗೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸ್ಥಾನ ಲಭಿಸಿರುವುದು.

ಜನರು ಎಷ್ಟೇ ಮತಗಳನ್ನು ಹೊಂದಿರಲಿ, ಎಷ್ಟೇ ದೇವರುಗಳನ್ನು ಪೂಜಿಸಲಿ ಒಟ್ಟಾರೆ ಸಮಾಜ ಅದರ ಬಗ್ಗೆ ಅಸಹಿಷ್ಣುವಾಗಿದ್ದಿಲ್ಲ. ಮೂಲದಲ್ಲಿ ಎಲ್ಲವೂ ಒಂದೇ ಎಂಬ ಭಾವವೇ ಇದರ ಹಿಂದಿನ ರಹಸ್ಯ. ‘ಆಕಾಶಾತ್ಪತಿತಂ ತೋಯಂ ಯಥಾಗಚ್ಛತಿ ಸಾಗರಂ| ಸರ್ವದೇವ ಸಮಸ್ಕಾರಃ ಕೇಶವಂ ಪ್ರತಿಗಚ್ಛತಿ|’ ಎಂಬುದು ಹಿರಿಯರು ಅರಿತಿದ್ದ ಸತ್ಯ. ಆಕಾಶದಿಂದ ಬೀಳುವ ನೀರು ಹೇಗೆ ಸಮುದ್ರವನ್ನು ಸೇರುತ್ತದೆಯೋ ಹಾಗೆಯೇ ಯಾವ ದೇವರಿಗೆ ನಮಸ್ಕರಿಸಿದರೂ ಅದು ಭಗವಂತನಿಗೆ ತಲುಪುತ್ತದೆ ಎಂಬ ಉದಾರ ಮನಸ್ಥಿತಿಯೇ ನಮ್ಮ ಸಂಸ್ಕøತಿಯ ಅಂತರ್ಯ.

ಈ ಸಮನ್ವಯದ ಹತ್ತು ಹಲವು ಉದಾಹರಣೆಗಳು ಪುರಾಣೇತಿಹಾಸ ಕಾಲದಿಂದಲೂ ನಮ್ಮ ನೆಲದಲ್ಲಿ ಹೇರಳವಾಗಿ ಸಿಗುತ್ತವೆ. ಕರ್ನಾಟಕವನ್ನಾಳಿದ ರಾಷ್ಟ್ರಕೂಟರು, ಹೊಯ್ಸಳರು ಜೈನ-ವೈಷ್ಣವ ಸಮನ್ವಯವನ್ನು ಸಾರಿದವರಾದರೆ, ಚಾಲುಕ್ಯರು ಮತ್ತು ವಿಜಯನಗರದ ಅರಸರು ಶೈವ-ವೈಷ್ಣವ ತತ್ವವನ್ನು ಜತೆಯಾಗಿ ಗೌರವಿಸಿದವರು. ‘ಅಮುಕ್ತಮಾಲ್ಯದ’ವನ್ನು ರಚಿಸಿದ ಪ್ರಸಿದ್ಧ ರಾಜ ಕೃಷ್ಣದೇವರಾಯ ಶ್ರೀವೈಷ್ಣವ ಪಂಥದ ತಾತಾಚಾರ್ಯರನ್ನೂ, ಮಾಧ್ವ ಪಂಥದ ವ್ಯಾಸರಾಯರನ್ನೂ ಏಕಕಾಲಕ್ಕೆ ಗುರುಗಳಾಗಿ ಪಡೆದವನು. ವೈಯುಕ್ತಿಕವಾಗಿ ಶ್ರೀನಿವಾಸನ ಭಕ್ತನಾಗಿದ್ದ ಕೃಷ್ಣದೇವರಾಯ ಹಂಪಿಯ ವಿರೂಪಾಕ್ಷನನಿಗೂ ತಲೆಬಾಗಿದವನು; ವಿಜಯವಿಠ್ಠಲ ದೇವಾಲಯವನ್ನೂ ಕಟ್ಟಿಸಿದವನು.

ಬುದ್ಧನನ್ನೂ ಆದಿ ತೀರ್ಥಂಕರನನ್ನೂ ವಿಷ್ಣುವಿನ ಅವತಾರವೆಂದೇ ಪೂಜಿಸುವ ನೆಲವಿದು. ಹಿಂದೂ-ಮುಸಲ್ಮಾನರಿಬ್ಬರೂ ಸಂದರ್ಶಿಸುವ ನೂರಾರು ದೇವಸ್ಥಾನಗಳು, ದರ್ಗಾಗಳು ಭಾರತದಾದ್ಯಂತ ಅಲ್ಲಲ್ಲಿ ಸಿಗುತ್ತವೆ. ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿಗಳಂತಹ ಹಬ್ಬಗಳಲ್ಲಿ ಮುಸಲ್ಮಾನರೂ, ಮೊಹರಂನಂತಹ ಹಬ್ಬಗಳಲ್ಲಿ ಹಿಂದೂಗಳೂ ಭಾಗವಹಿಸುವುದು ಹೊಸದೇನಲ್ಲ. ಬೆಂಗಳೂರಿನ ಪ್ರಸಿದ್ಧ ಕರಗ ಮಸ್ತಾನ್ ಸಾಬಿ ದರ್ಗಾಕ್ಕೂ ಹೋಗಿ ಪೂಜೆ ಸಲ್ಲಿಸಿ ಬರುವ ಕ್ರಮವಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮೂರು ಮತಗಳ ಸಂಗಮಸ್ಥಾನ. ಅಲ್ಲಿನ ಆಡಳಿತದ ಹೊಣೆ ಜೈನರದ್ದು; ಪೂಜಿಸಲ್ಪಡುವ ದೇವರು ಮಂಜುನಾಥ, ಅಂದರೆ ಶಿವ; ಪೂಜೆಯ ಜವಾಬ್ದಾರಿ ಹೊಂದಿರುವವರು ವೈಷ್ಣವರು. ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯದ ದೇವಾಲಯ ಶಿಖರದಲ್ಲಿ ಮುಸ್ಲಿಂ ವಾಸ್ತುಶಿಲ್ಪವಿದೆ.

ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಸಂಗೀತ-ಸಾಹಿತ್ಯ ಕ್ಷೇತ್ರದಲ್ಲಂತೂ ಈ ಸಮನ್ವಯತೆ ಹೇರಳವಾಗಿದೆ.  ನಮ್ಮ ಹಿಂದೂಸ್ತಾನಿ ಸಂಗೀತದ ಶ್ರೀಮಂತಿಕೆಯ ಹಿಂದೆ ಮುಸ್ಲಿಂ ಕಲಾವಿದರ ಕೊಡುಗೆ ಅಪಾರ. ದಾಸಸಾಹಿತ್ಯವನ್ನು ಜನಪ್ರಿಯಗೊಳಿಸಿದವರಲ್ಲಿ ಫಯಾಜ್ ಖಾನ್, ಹುಸೇನ್ ಸಾಬರಂಥ ಪ್ರಮುಖರಿದ್ದಾರೆ. ಅನೇಕ ಕೀರ್ತನೆಗಳನ್ನು ರಚಿಸಿರುವ ಬಡೇ ಸಾಬ್ ಅವರ ಅಂಕಿತನಾಮ ‘ಶ್ರೀರಾಮ’. ಪರ್ವೀನಾ ಸುಲ್ತಾನಾ, ಅಲ್ಲಾದಿಯಾ ಖಾನ್ ಅವರ ಕೊಡುಗೆಗಳನ್ನಾಗಲೀ, ಶಹನಾಯ್ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಅವರ ಕೊಡುಗೆಗಳನ್ನಾಗಲೀ ನಾವು ಹೇಗೆ ಮರೆತೇವು? ಗೋವಿಂದ ಭಟ್ಟರನ್ನು ಗುರುಗಳನ್ನಾಗಿ ಪಡೆದ ಸಂತ ಶಿಶುನಾಳ ಷರೀಫರನ್ನಾಗಲೀ, ಸಮನ್ವಯತೆಯೇ ಮೂರ್ತಿವೆತ್ತ ಕಬೀರ, ಸಮರ್ಥ ರಾಮದಾಸರು, ಕನಕದಾಸರನ್ನಾಗಲೀ ನಾವು ಹೇಗೆ ಮರೆತೇವು?

ಸಂಸ್ಕೃತಿಯೊಳಗಿನ ಸಮನ್ವಯತೆಯ ಬೀಜ ವೇದಗಳ ಕಾಲದಿಂದಲೂ ಜೀವಂತವಾಗಿದೆ. ಋಗ್ವೇದದ ಒಂದು ಮಂತ್ರ ಈ ಮಾತನ್ನು ಪುಷ್ಟೀಕರಿಸುತ್ತದೆ:
ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ |
ಮಧ್ಯಮಾಸೋ ಮಹಸಾ ವಿವಾವೃಧುಃ ||
ಸುಜಾತಾಸೋ ಜನುಷಾ ಪೃಶ್ನಿಮಾತರೋ |
ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ ||

‘ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ.  ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ’ ಎಂಬ ಈ ಮಾತು ಎಲ್ಲಾ ಕಾಲಕ್ಕೂ ಸಮನ್ವಯ ತತ್ವವನ್ನು ಎತ್ತಿಹಿಡಿಯಬಲ್ಲ ಸಾಮರ್ಥ್ಯವುಳ್ಳದ್ದು.

ಯಜುರ್ವೇದದ ಇನ್ನೊಂದು ಮಂತ್ರವೂ ಇದೇ ಭಾವವನ್ನು ಸ್ಫುರಿಸುತ್ತದೆ:
ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ |
ಸರ್ವಭೂತೇಶು ಚಾತ್ಮಾನಂ ತತೋ ನ ವಿ ಚಿಕಿತ್ಸತಿ ||
‘ಯಾರು ಸಮಸ್ತ ಪ್ರಾಣಿಗಳೂ ತಮ್ಮಂತೆಯೇ ಇಚ್ಛಾ-ದ್ವೇಷ-ಪ್ರಯತ್ನ-ಸುಖ-ದುಃಖಗಳನ್ನು ಹೊಂದಿದ ಆತ್ಮಗಳೇ ಎಂದು ಭಾವಿಸುವರೋ, ತಮ್ಮಂತೆಯೇ ಎಂದು ಕಂಡುಕೊಳ್ಳುವರೋ ಅವರು ಸಂದೇಹಗಳಿಗೆ ಸಿಲುಕುವುದಿಲ್ಲ’.
ವೇದಗಳ ಈ ಬಗೆಯ ಆಶಯ ನಿಜವಾಗಿಯೂ ಸಮಾಜದ ಬೇರುಗಳಿಗೆ ಇಳಿದರೆ ಸಮಾಜದಲ್ಲಿ ಅಸಮಾನತೆಯಾಗಲೀ ಅಸಹಿಷ್ಣುತೆಯಾಗಲೀ ಮೇಲುಕೀಳು ಭಾವವವಾಗಲೀ ನೆಲೆಗೊಳ್ಳುವುದಕ್ಕೆ ಅವಕಾಶವೇ ಇಲ್ಲ. ಇದುವೇ ನಮ್ಮ ಸಂಸ್ಕೃತಿಯ ಶ್ರೇಷ್ಠತೆ.

“ಸಂಸ್ಕೃತಿಗಳು ಏಕರೂಪಿ ರಚನೆಗಳಲ್ಲ. ಅವು ಪರಸ್ಪರ ಕುಡುಕೊಳುವಿಕೆಗಳಿಂದ ನಿರಂತರವಾಗಿ ಬೆಳೆಯುತ್ತವೆ. ಆದ್ದರಿಂದ ಸಂಸ್ಕೃತಿಗಳಲ್ಲಿ ಬಹುಮುಖತೆ ಸಾಮಾನ್ಯವಾಗಿರುತ್ತದೆ. ಭಾಷೆ, ಧರ್ಮ, ಆಚರಣೆ, ಸಂಪ್ರದಾಯ, ಭಿನ್ನ ಅನುಸಂಧಾನ, ಕಲೆ, ಆರ್ಥಿಕತೆ, ಲೋಕಗ್ರಹಿಕೆ, ನೋಟಕ್ರಮ ಇವೇ ಮೊದಲಾದವುಗಳ ಸಂಶ್ಲೇಷಿತ ರೂಪವೇ ಸಂಸ್ಕೃತಿ” ಎಂಬ ಮಾತು ಉಲ್ಲೇಖನೀಯ. ಬಹುಮುಖತೆಯೇ ಭಾರತೀಯ ಸಂಸ್ಕೃತಿಯ ಜೀವಾಳ. ವಿಭಿನ್ನ ಸಾಂಸ್ಕೃತಿಕ ನೆಲೆಗಳ ಈ ದೇಶದಲ್ಲಿ ಸಂಸ್ಕೃತಿ, ಪ್ರತಿಸಂಸ್ಕೃತಿ, ಉಪಸಂಸ್ಕೃತಿಗಳೆಲ್ಲ ಒಂದೇ ವಾಹಿನಿಗೆ ಸೇರಿಹೋಗಿವೆ. ಹಾಗಂತ ಇವು ಯಾವುದೋ ಒಂದು ಏಕರೂಪತೆಯತ್ತ ತುಡಿಯುವುದಿಲ್ಲ. ಏಕರೂಪತೆಯ ಬಯಕೆ ವೈವಿಧ್ಯತೆಗೆ ವಿನಾಶಕಾರಿ. ನಮ್ಮ ಕನ್ನಡ ಸಾಹಿತ್ಯವೂ ಏಕಸ್ತರೀಯ ನೆಲೆಯಿಂದ ಬಹಿಸ್ತರೀಯ ನೆಲೆಗಳ ಕಡೆಗೇ ಸಾಗಿಬಂದಿದೆ.

“ವಾಸ್ತವವಾಗಿ ಭಾರತೀಯ ಸಂಸ್ಕøತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ ಸಂಸ್ಕೃತಿ, ತಮಿಳು ಸಂಸ್ಕೃತಿ, ತೆಲುಗು ಸಂಸ್ಕೃತಿ, ಮಹಾರಾಷ್ಟ್ರ ಸಂಸ್ಕೃತಿ ಇವೇ ಮೊದಲಾದ ಸದೃಶವೂ ಭಿನ್ನವೂ ಆದ ಸಂಸ್ಕೃತಿಗಳ ಸಮಷ್ಟಿ ರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ. ಎಂದರೆ, ಭಾರತೀಯ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಭಾರತದಲ್ಲಿ ಒಂದೊಂದು ಪ್ರಾಂತಕ್ಕೂ ವಿಶಿಷ್ಟ ಜೀವನ ವಿಧಾನವಿದೆ. ಆ ವಿಶಿಷ್ಟ ಸಂಸ್ಕೃತಿಯನ್ನು ಗಮನಿಸುವುದು, ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆಯೇ” ಎಂಬ ಡಾ. ಎಂ. ಚಿದಾನಂದಮೂರ್ತಿಯವರ ಮಾತು ಸಂಸ್ಕೃತಿ ಹಾಗೂ ಸಮನ್ವಯತೆಗಳ ಅಂತಃಸತ್ವವನ್ನು ತೆರೆದಿಡುತ್ತದೆ.

ಈಚಿನ ದಿನಗಳಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಸಂಘರ್ಷಗಳು ಹೆಚ್ಚುತ್ತಿರುವುದನ್ನು ನೋಡಿದರೆ ಈ ಬೆಳವಣಿಗೆಗಳ ಹಿಂದೆ ಇರುವವರ್ಯಾರೂ ನಮ್ಮ ಸಂಸ್ಕೃತಿಯ ನಿಜವಾದ ಸಾರವನ್ನು ಅರ್ಥ ಮಾಡಿಕೊಂಡಿಲ್ಲವೆಂದೇ ಅನಿಸುತ್ತದೆ. ವೈಚಾರಿಕ ಸಂಘರ್ಷಗಳು ಒಳ್ಳೆಯದು, ಆದರೆ ಅದು ವ್ಯಕ್ತಿಗತವಾದಾಗ ಇಡೀ ಸಮಾಜದ ಆರೋಗ್ಯ ಕೆಡುತ್ತದೆ, ಹಿಂಸೆ ತಾಂಡವವಾಡುತ್ತದೆ. ಇದು ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೇ ವ್ಯಾಪಿಸಿಕೊಂಡಿರುವ ಒಂದು ಸಾಂಕ್ರಾಮಿಕ ರೋಗ. ‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ - ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದಲೂ ಬರಲಿ - ಎನ್ನುವ ಋಗ್ವೇದವನ್ನು ಕೊಟ್ಟ ದೇಶಕ್ಕೆ ಜಗತ್ತಿಗೆ ಸಾಮರಸ್ಯದ ಪಾಠ ಹೇಳುವ ಜವಾಬ್ದಾರಿ ಇದೆ ಎಂಬುದನ್ನು ನಾವು ಮರೆಯಬಾರದು.

Job creation in Karnataka: IT has Lion's Share


Karnataka, the country’s eighth largest state in terms of area and ninth largest state in terms of population has been considered one of the most progressive industrialized states of the country. The State has an illustrious history of having successfully introduced several industrial and technological initiatives and has acquired a tag of being ‘the most technology-savvy’ state in India.

Karnataka has made rapid and spectacular strides in the new economy. Research and developments in Information technology, Biotechnology, and many other fields have enhanced the state’s achievements at the national and global levels. Karnataka accounts for more than one third of electronics and computer software exports from the country.

The spectacular IT growth story of India is led by Karnataka, thanks to the availability of highly skilled professionals, dynamic entrepreneurs, a vibrant eco-system, and industry-friendly policies of the State. In other words, Karnataka’s vast and diversified resource base has emerged as a reputed investment destination for investment worldwide. Consequently Karnataka is contributing to over 30% of the IT exports of the country.

Karnataka tops in IT jobs
The recent rankings by the Assocham, showing Karnataka’s position in the country’s job market has been undoubtedly a new feather on the state’s cap. Karnataka has been ranked as country’s top job creator with over 24 per cent share during the fourth quarter of the financial year 2015-16. Maharashtra (23%) and Tamil Nadu (10.5%) have got the next consecutive places.

According to the report, IT sector created about 57% of about 9 lakh job openings recorded between January and March, 2016, followed by services (19%) and manufacturing (11%), which is a clear indication of the share of the IT industry in the job market. Apart from this, within Karnataka, ITES accounted for over 65% share in job openings across the state followed by services (16%), manufacturing (8%).

Karnataka had recorded 2.16 lakh job openings in the first quarter of the last fiscal followed by Maharashtra, Tamil Nadu, Andhra Pradesh and Telangana. Sector-wise, Karnataka leads in terms of job openings in ITES sector with 28% share in over five lakh jobs created by the sector.

IT-friendly state
As mentioned earlier, the secret of Karnataka’s rapid growth in IT sector lies in its congenial atmosphere, supported by its IT-friendly policies. The government has been keen on retaining Bengaluru’s title as the Silicon Valley of India, trying to take the fruits of its IT prosperity to the various parts of the State.

'Karnataka i-4' policy (IT, ITES, Innovation and Incentives Policy) announced by the government last year, is one such novel initiative which was aimed at giving a thrust to the growth of the IT sector in the tier-two and tier-three cities across the state. The policy has empowered the Dept. of IT, BT and S&T to act as a Single Window Agency for clearance of IT, IT-enabled services, startups, animation, gaming, computer graphics, telecom, BPO, KPO, and other knowledge-based industries. The policy has features such as employment linked incentivisation of land allotment outside Bengaluru, stamp duty exemption of 75% in Mysore and Mangalore, exemption of such industries from the applicability of Karnataka industrial employment rules, inclusion of such industries in the essential services and so on.

Startup Policy
Karnataka has emerged the first Indian state to launch a startup policy of its own, which has further boosted the prosperity of IT industry. The objective of the policy is to create a world class startup hub, in order to stimulate growth of 20,000 technology startups and to create 6,000 product startups in Karnataka alone. It is aimed to mobilize Rs. 2,000-crore funds and to facilitate generation of at least 25 innovative technology solutions with social impact. In order to support R &D, the government will support Technology Business Incubators (TBIs) in institutions of higher learning for a period of three years.

In addition to these policies, Karnataka has recently unveiled the idea of establishing India's first Information Technology Investment Region (ITIR) on the outskirts of Bengaluru, which will attract $20 billion investment and create millions of jobs in the future. When developed completely, the project is expected to overtake Silicon Valley of the US in revenue and size.

Support in the Budget
IT, BT and Science & Technology have got special provisions in the state’s new budget as a step towards implementing its i4 and startup policies. The government has announced setting up of 10 new incubators in post-graduate and professional institutions across the State under the New Age Incubation Network. The budget has proposed to support the setting-up of four technology business incubators in potential areas of Internet of Things, ESDM, etc. across the State. The budget also proposes incubators and common instrumentation facilities in Bengaluru and in the IT Parks of Shivamogga, Bagalakote and Kalaburagi by KEONICS and new IT Parks-incubator in Belagavi, Bidar and Vijayapura.

ಸೋಮವಾರ, ಮೇ 2, 2016

ಸಿದ್ಧವನವೆಂಬ ಪುಟ್ಟ ಭಾರತ

ಮೇ 1, 2016ರ 'ಉದಯವಾಣಿ'ಯಲ್ಲಿ ಪ್ರಕಟವಾದ ಲೇಖನ.

‘ಶಾಲಾ ಕಾಲೇಜುಗಳಲ್ಲಿ ಪಾಠ ಕಲಿತ ಮೇಲೆ ಪರೀಕ್ಷೆ ಬರೆಯುತ್ತೇವೆ; ಬದುಕಿನಲ್ಲಿ ಪರೀಕ್ಷೆಗಳಾದ ಮೇಲೆ ಪಾಠ ಕಲಿಯುತ್ತೇವೆ...’ ಪ್ರಾರ್ಥನಾ ಸಭೆಯಿಂದ ಈಚೆ ಬಂದ ಮೇಲೂ ಆ ಮಾತು ಕಿವಿಯಲ್ಲಿ ಗುಂಯ್‍ಗುಡುತ್ತಿತ್ತು. ಇನ್ನೂ ಚುಮುಚುಮು ಮುಂಜಾವು. ಬೆಳಕು

ಸರಿಯಾಗಿ ಹರಿದಿರಲಿಲ್ಲ. ಸಿದ್ಧವನದ ಹಸುರು ಮರಗಿಡಗಳ ನಡುವೆ ತಂಗಾಳಿ ಸುಳಿದಾಡುತ್ತಿತ್ತು. ಬೋಗುಣಿಯಲ್ಲಿ ಹಬೆಯಾಡುತ್ತಿದ್ದ ಬಿಸಿಬಿಸಿ ಚಹಾ ನಿಧಾನಕ್ಕೆ ಗಂಟಲೊಳಕ್ಕೆ ಇಳಿಯುತ್ತಿತ್ತು. ಸಿದ್ಧವನದ ಬೆಳ್ಳಂಬೆಳಗಿನ ಚಹಾ ಎಂದರೆ ಹಾಗೆಯೇ; ಕೊಂಚ ಸಪ್ಪೆಯೇ ಎನಿಸಿದರೂ ಅಂತಹದೊಂದು ಪಾನೀಯ ಪ್ರಪಂಚದ ಇನ್ಯಾವ ಪಾಕಶಾಲೆಯಲ್ಲೂ ತಯಾರಾಗದು.

ಚಹಾ ಮುಗಿದರೂ ಪ್ರಾರ್ಥನಾ ಸಭೆಯಲ್ಲಿ ಕೇಳಿದ ಆ ವಾಕ್ಯ ಮನಸ್ಸಿನಿಂದ ಮಾಸಿರಲಿಲ್ಲ. ಹುಡುಗರೆಲ್ಲ ತಾವು ತೊಟ್ಟಿದ್ದ ಶ್ವೇತ ವಸ್ತ್ರಗಳನ್ನು ಬದಲಾಯಿಸಿ ಲಗುಬಗೆಯಿಂದ ಹಾರೆ ಗುದ್ದಲಿಗಳೊಂದಿಗೆ ತೋಟದಲ್ಲಿ ಹಾಜರಾದರು. ತರಕಾರಿ ಸಾಲುಗಳಿಂದ ಕಳೆಕೀಳುವ, ನೀರು ಹಾಯಿಸುವ, ತೆಂಗಿನ ಮರಗಳಿಗೆ ಹಟ್ಟಿಯ ಸ್ಲರಿ ಊಡುವ ಕೆಲಸಗಳು ಅವ್ಯಾಹತವಾಗಿದ್ದವು. ಎರಡು ಗಂಟೆಗಳ ನಿರಂತರ ಶ್ರಮದ ಬಳಿಕ ಹೊಟ್ಟೆ ಬಕಾಸುರನಂತೆ ಬಾಯ್ದೆರೆದು ಕಾದಿದ್ದರೆ ಭೋಜನಶಾಲೆಯಲ್ಲಿ ಮತ್ತೆ ಬಿಸಿಬಿಸಿ ಗಂಜಿ-ಚಟ್ನಿ ಸಿದ್ಧವಾಗಿ ಕಾಯುತ್ತಿದ್ದವು. ಅಂತಹದೊಂದು ಮೃಷ್ಟಾನ್ನ ಭೋಜನ ಕೂಡ ಸಿದ್ಧವನದಲ್ಲದೆ ಇನ್ಯಾವ ಪಂಚತಾರಾ ಹೊಟೇಲಲ್ಲೂ ದೊರೆಯದು. ಮನಸ್ಸು ಮಾತ್ರ ನಸುಕಿನ ‘ಪಾಠ-ಪರೀಕ್ಷೆ’ಗಳ ಪ್ರಮೇಯವನ್ನು ಇನ್ನಿಲ್ಲದೆ ನೆನೆಯುತ್ತಿತ್ತು.

ಇದೆಲ್ಲ ಆಗಿ ಹದಿನೈದು ವರ್ಷಗಳೇ ಕಳೆದು ಹೋಗಿವೆ. ಆ ಪ್ರಮೇಯ ಮಾತ್ರ ಮನಸ್ಸಿನಲ್ಲಿ ನಿನ್ನೆ ಮೊನ್ನೆ ಕೇಳಿದಷ್ಟೇ ತಾಜಾ ಆಗಿ ಉಳಿದುಕೊಂಡಿದೆ. ಕಷ್ಟಗಳು ಎದುರಾದಾಗಲೆಲ್ಲ ಅದು ನೆನಪಾಗುತ್ತದೆ. ಮನಸ್ಸು ಗಟ್ಟಿಯಾಗುತ್ತದೆ. ವಿದ್ವಾನ್ ಮಹಾಬಲೇಶ್ವರ ಭಟ್ಟರ ಮಾತುಗಳೆಂದರೆ ಹಾಗೆಯೇ. ಚುಟುಕು, ಚುರುಕು. ಮುಂಜಾನೆಯ ಪ್ರಾರ್ಥನಾ ಸಭೆಯಲ್ಲಿ ಅವರಾಡುವ ಒಂದು ವಾಕ್ಯ ಇಡೀ ದಿನಕ್ಕೆ ಸಾಕಾಗುವ ಶಕ್ತಿಮದ್ದು. ಸಾಮಾನ್ಯ ಭಾಷೆಯಲ್ಲಿ ಅವರ ಹುದ್ದೆಯ ಹೆಸರು ‘ವಾರ್ಡನ್’. ಆದರೆ ಉಜಿರೆಯ ಶ್ರೀ ಸಿದ್ಧವನ ಗುರುಕುಲ ನಮಗೆ ಹಾಸ್ಟೆಲೂ ಆಗಿರಲಿಲ್ಲವಾಗಿ ಅವರು ವಾರ್ಡನ್ ಕೂಡ ಆಗಿರಲಿಲ್ಲ. ಗುರುಕುಲವಾಗಿದ್ದರಿಂದ ಅವರು ನಮಗೆ ಅಕ್ಷರಶಃ ಗುರುವೂ, ಎಲ್ಲೆಲ್ಲಿಂದಲೋ ಬಂದ ಬಡಪಾಯಿ ಹುಡುಗರಿಗೆ ಗುರುಕುಲ ಎರಡನೇ ಮನೆಯಾಗಿದ್ದರಿಂದ ಅವರೇ ಅಪ್ಪ-ಅಮ್ಮ, ಬಂಧು-ಬಳಗ ಎಲ್ಲವೂ ಆಗಿದ್ದರು. ಐದುನೂರರಷ್ಟು ಹದಿಹರೆಯದ ಹುಡುಗರ ತಂಟೆ-ತಕರಾರು, ಅವಿವೇಕತನ, ಸುಖ-ದುಃಖ, ಕಾಯಿಲೆ-ಕಸಾಲೆ ಎಲ್ಲವನ್ನೂ ಸಹಿಸಿಕೊಳ್ಳುವ ಭೂಮಿತಾಯಿ ಅವರಿದ್ದರು. ಹೀಗೆ ಬರೆಯುತ್ತಿದ್ದರೆ ಯಾಕೋ ಮನಸ್ಸೆಲ್ಲ ಆರ್ದ್ರವಾಗಿ ಕಣ್ಣಂಚು ಒ
ದ್ದೆಯಾಗುತ್ತಿದೆ.

ಸಿದ್ಧವನ ಗುರುಕುಲವನ್ನೇ ತಮ್ಮ ಮನೆಯಾಗಿ ಹೊಂದಿ ಉಜಿರೆಯ ಕಾಲೇಜಿನಲ್ಲಿ ಪದವಿ ಪಡೆದ ನನ್ನಂತಹ ಸಾವಿರಾರು ಮಂದಿಗೆ ಗುರುಕುಲದೊಂದಿಗೆ ಇಂತಹದೊಂದು ಅಖಂಡ ಮೈತ್ರಿ ಇದೆ. ಸಾವಿರಾರು ಬಡ ಮಕ್ಕಳ ವಿದ್ಯಾಭ್ಯಾಸದ ಕನಸನ್ನು ನಿಜವಾಗಿಸಿದ ಸಿದ್ಧವನ ಗುರುಕುಲಕ್ಕೀಗ 75ರ ಸಂಭ್ರಮ.  ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ದಿ| ಮಂಜಯ್ಯ ಹೆಗ್ಗಡೆಯವರು 1940ರಲ್ಲಿ ಬಿತ್ತಿದ ಬೀಜವಿದು. ದೂರದ ಬಂಗಾಲದಲ್ಲಿ ಗುರುದೇವ ರವೀಂದ್ರನಾಥ ಠ್ಯಾಗೋರರು ‘ವಿಶ್ವಭಾರತಿ’ಯ ಕನಸು ಕಂಡಿದ್ದರೆ, ಮಂಜಯ್ಯ ಹೆಗ್ಗಡೆಯವರು ಸಿದ್ಧವನ ಗುರುಕುಲದ ಕನಸು ಕಂಡರು. ‘ವಿದ್ಯೆಯೆಂದರೆ ಹೊರಗಿನಿಂದ ಹೊತ್ತಿಸಬಲ್ಲ ಮತ್ತು ಸರಿಪಡಿಸಬಲ್ಲ ಲಾಟೀನಿನ ಬೆಳಕಲ್ಲ; ಸ್ವಯಂಪ್ರಭೆ ಬೀರುವ ಮಿಂಚುಹುಳ’ ಎಂದಿದ್ದರು ಠ್ಯಾಗೋರರು. ಅಂತಹದೇ ಒಂದು ದರ್ಶನ ಹೆಗ್ಗಡೆಯವರ ಮನಸ್ಸಿನಲ್ಲಿದ್ದಿರಬೇಕು. ಅದಕ್ಕೇ ಸಿದ್ಧವನ ಕೇವಲ ಹಾಸ್ಟೆಲ್ ಆಗಲಿಲ್ಲ. ಜೀವನ ಶಿಕ್ಷಣವನ್ನು ನೀಡುವ ಗುರುಕುಲ ಆಯಿತು. ಆಧುನಿಕ ಬದುಕಿಗೆ ಬೇಕಾದ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳಿಗೆ ಪ್ರಚೋದನೆ ನೀಡಿ, ನಮ್ಮ ಸಂಸ್ಕೃತಿ, ಪರಂಪರೆಗಳ ಮಹೋನ್ನತಿಯನ್ನು ತಿಳಿಸಿಕೊಡುವಂತಹ ಆಧ್ಯಾತ್ಮಿಕ ಶಿಕ್ಷಣದ ಕೇಂದ್ರವಾಗಿ ಅದು ಬೆಳೆಯಿತು.

ಮಂಜಯ್ಯ ಹೆಗ್ಗಡೆಯವರು ಬಿತ್ತಿದ ಬೀಜವನ್ನು ಬೆಳೆಸಿ ಹೆಮ್ಮರವಾಗಿಸುವಲ್ಲಿ ಅವರ ನಂತರ ಬಂದ ದಿ| ರತ್ನವರ್ಮ ಹೆಗ್ಗಡೆ, ಈಗಿನ ಧರ್ಮಾಧಿಕಾರಿಯಾಗಿ ಹಳ್ಳಿಗಳಲ್ಲಿ ಅಭಿವೃದ್ಧಿಯ ಹೊಸ ಪರಂಪರೆ ಹುಟ್ಟುಹಾಕಿದ ಡಾ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ತುಂಬ ದೊಡ್ಡದು. ಸಿದ್ಧವನ ಗುರುಕುಲವೆಂದರೆ ಇವರೆಲ್ಲರಿಗೂ ತಮ್ಮ ಉಳಿದ ನೂರಾರು ಶಿಕ್ಷಣ ಸಂಸ್ಥೆಗಳಿಗಿಂತ ಒಂದು ಹಿಡಿ ಪ್ರೀತಿ ಜಾಸ್ತಿ. ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಓಡಾಡುವಾಗ ಒಂದಿಷ್ಟು ಬಿಡುವು ದೊರೆತರೂ ಗುರುಕುಲಕ್ಕೆ ಭೇಟಿ ನೀಡಿ ಮಕ್ಕಳ ಕ್ಷೇಮಸಮಾಚಾರ ವಿಚಾರಿಸದೆ ಇರರು. ನಾವು ಗುರುಕುಲದಲ್ಲಿದ್ದಾಗಲಂತೂ ವೀರೇಂದ್ರ ಹೆಗ್ಗಡೆಯವರ ತಾಯಿ ದಿ| ರತ್ಮಮ್ಮ ಹೆಗ್ಗಡೆಯವರು, ಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು, ಪ್ರೊ. ಎಸ್. ಪ್ರಭಾಕರ್, ಡಾ. ಬಿ. ಯಶೋವರ್ಮ ಮುಂತಾದವರು ಆಗಾಗ್ಗೆ ಗುರುಕುಲಕ್ಕೆ ಬಂದು ವಿದ್ಯಾರ್ಥಿಗಳನ್ನು ವಿಚಾರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಎದುರಿಗೆ ಸಿಕ್ಕ ಒಬ್ಬೊಬ್ಬರನ್ನೂ ಹತ್ತಿರ ಕರೆದು ‘ಊಟ-ತಿಂಡಿ ಚೆನ್ನಾಗಿದೆಯಾ? ತೋಟದ ಕೆಲಸ, ಹಸುಕರುಗಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಾ? ಮನೆಯ ನೆನಪಾಗುತ್ತಾ?’ ಎಂದು ಬೆನ್ನು ನೇವರಿಸಿ ಕೇಳಿದರೇ ಅವರಿಗೆ ಸಮಾಧಾನ. ಇವೆಲ್ಲಕ್ಕೂ ಸರಿಸಮನಾಗಿ ಗುರುಕುಲಕ್ಕಾಗಿ ತಮ್ಮ ಬದುಕು ತೇದವರು ಅದರ ವಾರ್ಡನ್‍ಗಳು. ಪಂಡಿತ ಜಿನರಾಜ ಶಾಸ್ತ್ರಿಯಾದಿಯಾಗಿ ಹಲವು ಮಂದಿ ಹಾಕಿಕೊಟ್ಟ ಈ ಪರಂಪರೆಯನ್ನು ಕಳೆದ ಇಪ್ಪತ್ತು ವರ್ಷಗಳಿಂದ ಸಮರ್ಥವಾಗಿ ಮುಂದುವರಿಸಿಕೊಂಡು ಬರುತ್ತಿರುವವರು ನಾನು ಆಗಲೇ ಹೇಳಿದ ಮಹಾಬಲೇಶ್ವರ ಭಟ್ಟರು.

ಸಿದ್ಧವನವನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅದರಲ್ಲೊಂದು ಮಿನಿ ಭಾರತದ ಬಿಂಬ ಕಂಡೀತು. ಭಾರತದ ವೈವಿಧ್ಯತೆ, ಅದರೊಳಗಿನ ಏಕತೆ, ಸರಳ ಜೀವನ, ಸಹಬಾಳ್ವೆ-ಸಮನ್ವಯತೆಗಳೆಲ್ಲ ಸಿದ್ಧವನ ಗುರುಕುಲದೊಳಗೆ ಅಂತರ್ಗತವಾಗಿವೆ. ಅಲ್ಲಿ ಜಾತಿ-ಮತ-ಪಂಥಗಳ ಪ್ರತ್ಯೇಕತೆಯಿಲ್ಲ. ಬಡವ-ಶ್ರೀಮಂತ ಬೇಧವಿಲ್ಲ. ಸಿದ್ಧವನದೊಳಗೆ ಕಾಲಿಟ್ಟ ಮೇಲೆ ಎಲ್ಲರೂ ಅಲ್ಲಿನ ಶ್ವೇತ ಸಮವಸ್ತ್ರದ ಒಳಗೆ ಸರ್ವಸಮಾನರು. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್-ಜೈನ ಇತ್ಯಾದಿ ಎಲ್ಲ ಮತ-ಪಂಥದವರಿಗೂ ಅಲ್ಲಿ ಪ್ರವೇಶವಿದೆ. ವಿದ್ಯಾರ್ಥಿಯ ಬಡ ಆರ್ಥಿಕ ಹಿನ್ನೆಲೆ ಹಾಗೂ ಉತ್ತಮ ಶೈಕ್ಷಣಿಕ ಸಾಧನೆಯಷ್ಟೇ ಅಲ್ಲಿನ ಪ್ರವೇಶಾತಿಯ ಮಾನದಂಡ.

ಸಿದ್ಧವನದಲ್ಲಿ ಎರಡೋ ಮೂರೋ ವರ್ಷ ಕಳೆದ ವಿದ್ಯಾರ್ಥಿ ಪ್ರಪಂಚದ ಯಾವ ಭಾಗದಲ್ಲೂ ಬದುಕಿ ಬರಬಲ್ಲ ಎಂಬುದು ಅಲ್ಲಿ ಬೆಳೆದವರ ನಡುವಿನ ಹೆಮ್ಮೆಯ ನುಡಿ. ಬರೀ ಬದುಕಿ ಬರುವುದಲ್ಲ, ಸಿದ್ಧವನದ ತೋಟದಲ್ಲಿ ಚಿಗಿತ ಸಾವಿರಾರು ಮೊಗ್ಗುಗಳು ಇಂದು ಪ್ರಪಂಚದ ನಾನಾ ಕಡೆ ನಾನಾ ಕ್ಷೇತ್ರಗಳಲ್ಲಿ ಅರಳಿ ಸುವಾಸನೆ ಬೀರುತ್ತಿವೆ. ಅವರ ಯಶಸ್ಸಿನ ಹಿಂದೆ ಸಿದ್ಧವನದಲ್ಲಿ ಕಲಿತ ಜೀವನದ ಪಾಠಗಳಿವೆ. ಅಲ್ಲಿ ಅವರಿಗೆ ತೊಡಿಸಲಾಗುವ ಶಿಸ್ತು-ಸಂಸ್ಕಾರದ ಚೌಕಟ್ಟು ಬದುಕಿನುದ್ದಕ್ಕೂ ಅವರನ್ನು ಕಾಪಾಡುತ್ತದೆ. ಅವರೆಲ್ಲ ‘ಊಟಕೆ ಹಾಜರ್’ ಸಂಸ್ಕೃತಿಯವವರಲ್ಲ. ಒಂದೊಂದು ತುತ್ತಿನ ಹಿಂದಿನ ಬೆವರಿನ ಬೆಲೆಯನ್ನು ಅರಿತವರು.

‘ಹಡಗನ್ನು ತುಂಬಿಸಲು ಹೋದವ ಹಿಂದೆ ಬಂದ, ಹೊಟ್ಟೆ ತುಂಬಿಸಲು ಹೋದವ ಹಿಂದೆ ಬರಲಿಲ್ಲ’ ಎನ್ನುತ್ತಿದ್ದರು ಮಹಾಬಲೇಶ್ವರ ಭಟ್ಟರು. ಸ್ಪರ್ಧೆಯ ಈ ಪ್ರಪಂಚದಲ್ಲಿ ಹೊಟ್ಟೆಯೆಂಬ ಹಡಗು ತುಂಬಿಸುವ ಕೆಲಸ ಎಷ್ಟು ಕಷ್ಟದ್ದು ಎಂಬುದನ್ನು ಅವರು ಪ್ರತಿದಿನ ನೆನಪಿಸುತ್ತಿದ್ದರು. ತೆಂಗಿನ ತೋಟದ ಕಳೆ ತೆಗೆಸುತ್ತಲೇ, ತರಕಾರಿ ಸಾಲು ಹಸನುಗೊಳಿಸುತ್ತಲೇ ಮನಸ್ಸು-ದೇಹಗಳನ್ನು ಹಸನುಗೊಳಿಸಲು ಕಲಿಸುವ ಅಸದೃಶ ಕಲೆಯೊಂದು ಅವರಿಗೆ ಕರಗತವಾಗಿತ್ತು. ಆ ಶಕ್ತಿ ಅವರ ಮಾತುಗಳಿಗೆ ಇತ್ತು. ಬೆಳಗ್ಗೆ ಐದು ಗಂಟೆಗೆ ಎದ್ದರೆ ತಣ್ಣೀರಿನ ಸ್ನಾನ, ಮತ್ತೆ ಅರ್ಧ ಗಂಟೆ ಪ್ರಾರ್ಥನೆ, ವಿಚಾರ ಮಂಥನ. ಆ ಪ್ರಾರ್ಥನಾ ಸಭೆಯಲ್ಲಿ ಅವರಾಡುವ ಮಾತು ಕಾಲೇಜಿನಲ್ಲಿ ನಡೆಯುವ ಇಡೀ ದಿನದ ಪಾಠ-ಪ್ರವಚನಗಳಿಗೆ ಶ್ರೇಷ್ಠ ಮುನ್ನುಡಿಯಂತೆ ಇರುತ್ತಿತ್ತು. ಸಂಜೆ ಮತ್ತೆ ನಡೆಯುತ್ತಿದ್ದ ಚಿಂತನಾ ಸಭೆಯಂತೂ ಪಠ್ಯ ಪುಸ್ತಕಗಳಾಚೆಯ ಕಲಿಕೆಯ ವೇದಿಕೆಯಾಗಿತ್ತು. ಅಲ್ಲಿ ಹೊಮ್ಮುತ್ತಿದ್ದ ಭಗವದ್ಗೀತೆ, ರಾಮಾಯಣ, ಮಹಾಭಾರತ, ಮಂಕುತಿಮ್ಮನ ಕಗ್ಗಗಳ ಸಾರ ಬದುಕಿನ ಗಾಂಭೀರ್ಯತೆಗೆ ಕೈದೀವಿಗೆಯಾಗಿತ್ತು.

ಸಿದ್ಧವನವೀಗ ಪ್ರಸಿದ್ಧವನವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ತೆರೆದುಕೊಂಡಿದೆ. ಮೊದಲು ಏಳೆಂಟು ಪ್ರತ್ಯೇಕ ಬ್ಲಾಕ್‍ಗಳಲ್ಲಿ ವಿದ್ಯಾರ್ಥಿಗಳ ವಾಸ್ತವ್ಯ ಇತ್ತು. ಈಗ ಒಂದೇ ಸುಸಜ್ಜಿತ ಕಟ್ಟಡವಿದೆ. ಸಾಕಷ್ಟು ಸೌಲಭ್ಯಗಳಿವೆ. ಬೆಳಗ್ಗೆ ಗಂಜಿ ಊಟದ ಬದಲು ವಿದ್ಯಾರ್ಥಿಗಳಿಗೆ ತಿಂಡಿ ವ್ಯವಸ್ಥೆಯಿದೆ. ಇವೆಲ್ಲ ಭೌತಿಕ ಬದಲಾವಣೆಗಳು ಮಾತ್ರ. ಸಿದ್ಧವನದ ಹಿಂದಿನ ದರ್ಶನ, ಮೌಲ್ಯಗಳ ಅಂತರ್ಯ ಇನ್ನೂ ಸಾವಿರ ವರ್ಷ ಕಳೆದರೂ ಬದಲಾಗದು, ಬದಲಾಗಬಾರದು. ಏಕೆಂದರೆ ಅದೊಂದು ಪುಟ್ಟ ಭಾರತ.

ಮಂಗಳವಾರ, ಮಾರ್ಚ್ 1, 2016

'ಮಾನವ ಹಕ್ಕುಗಳ ಸಂರಕ್ಷಣೆ: ಸವಾಲುಗಳು ಮತ್ತು ಸಾಧ್ಯತೆಗಳು' ಕುರಿತ ಯುಜಿಸಿ-ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣ


ಇದೇ ಮಾರ್ಚ್ 4 ಹಾಗೂ 5, 2016ರಂದು ನಮ್ಮ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿ ಮಾನವ ಹಕ್ಕುಗಳ ಕುರಿತ ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಲು ಬಯಸಿದ್ದೇವೆ. ಮಾನವ ಹಕ್ಕುಗಳ ಬಗ್ಗೆ ಹೊಸ ತಲೆಮಾರಿನಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ಯುಜಿಸಿ ನೀಡಿರುವ ಅನುದಾನವನ್ನು ಬಳಸಿಕೊಂಡು ಒಂದಷ್ಟು ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ಒಂದೆಡೆ ಕಲೆಹಾಕುವ ಪ್ರಯತ್ನ ಮಾಡಿದ್ದೇವೆ. ಎರಡು ದಿನಗಳ ಈ ವಿಚಾರ ಸಂಕಿರಣದ ಬಗ್ಗೆ ಒಂದಷ್ಟು ವಿವರ ಇಲ್ಲಿದೆ ನೋಡಿ:

ವಿಚಾರ ಸಂಕಿರಣದ ವಿಷಯ: ‘ಮಾನವ ಹಕ್ಕುಗಳ ಸಂರಕ್ಷಣೆ: ಸವಾಲುಗಳು ಮತ್ತು ಸಾಧ್ಯತೆಗಳು’

ದಿನಾಂಕ: ಮಾರ್ಚ್ 4 ಹಾಗೂ 5, 2016

ಸ್ಥಳ: ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣ, ತುಮಕೂರು ವಿಶ್ವವಿದ್ಯಾನಿಲಯ
---------------------------------------------------------


ಮಾರ್ಚ್ 4, 2016
ಉದ್ಘಾಟನಾ ಸಮಾರಂಭ: ಬೆಳಗ್ಗೆ 10-00 ಗಂಟೆಗೆ

ಉದ್ಘಾಟನೆ: ಪ್ರೊ. ಎ. ಎಚ್. ರಾಜಾಸಾಬ್, ಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ

ಮುಖ್ಯ ಅತಿಥಿಗಳು & ದಿಕ್ಸೂಚಿ ಉಪನ್ಯಾಸ: ಜಸ್ಟೀಸ್ ಎ. ಜೆ. ಸದಾಶಿವ, ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ

ಗೌರವ ಉಪಸ್ಥಿತಿ: ಪ್ರೊ. ಡಿ. ಶಿವಲಿಂಗಯ್ಯ, ಕುಲಸಚಿವರು, ತುಮಕೂರು ವಿಶ್ವವಿದ್ಯಾನಿಲಯ

ಉಪಸ್ಥಿತಿ: ಶ್ರೀ ಬಿ. ಕರಿಯಣ್ಣ, ಉಪಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಕಲಾ ಕಾಲೇಜು

ಅಧ್ಯಕ್ಷತೆ: ಡಾ. ಎಂ. ಜಯರಾಮು, ಪ್ರಾಂಶುಪಾಲರು, ವಿಶ್ವವಿದ್ಯಾನಿಲಯ ಕಲಾ ಕಾಲೇಜು

----------------------------------------------------------

ಗೋಷ್ಠಿ – ಒಂದು: ಮಧ್ಯಾಹ್ನ 12-00ರಿಂದ 1-30ವರೆಗೆ

ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕುಗಳು
ಡಾ. ನಿರಂಜನಾರಾಧ್ಯ ವಿ. ಪಿ.ಫೆಲೋ, ಸೆಂಟರ್ ಫಾರ್ ಚೈಲ್ಡ್ ಅಂಡ್ ದಿ ಲಾ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು

ಮಕ್ಕಳ ಹಕ್ಕುಗಳ ಸಂರಕ್ಷಣೆಯಲ್ಲಿ ಸಮಾಜದ ಸಹಭಾಗಿತ್ವ
ಎನ್. ವಿ. ವಾಸುದೇವ ಶರ್ಮಾ, ಕಾರ್ಯನಿರ್ವಾಹಕ ನಿರ್ದೇಶಕರು, ಚೈಲ್ಡ್ ರೈಟ್ಸ್ ಟ್ರಸ್ಟ್, ಬೆಂಗಳೂರು 

ಗೋಷ್ಠಿ – ಎರಡು: ಅಪರಾಹ್ನ 2-30ರಿಂದ 4-30ರವರೆಗೆ

ಹಿರಿಯ ನಾಗರಿಕರ ಹಕ್ಕು-ಬಾಧ್ಯತೆಗಳು
ಪ್ರೊ. ಬಿ. ಎಸ್. ಲಿಂಗರಾಜು, ನಿರ್ದೇಶಕರು, ಅನನ್ಯ ಇನ್ಸ್’ಟಿಟ್ಯೂಟ್ ಆಫ್ ಕಾಮರ್ಸ್ & ಮ್ಯಾನೇಜ್ಮೇಂಟ್, ತುಮಕೂರು

ಅಭಿವೃದ್ಧಿ v/s ಮಾನವ ಹಕ್ಕುಗಳು: ರೈತರು ಹಾಗೂ ಗ್ರಾಮೀಣ ಜನತೆಯ ಹಿತರಕ್ಷಣೆ
ಶ್ರೀಮತಿ ವಿದ್ಯಾ ದಿನಕರ್, ಸಾಮಾಜಿಕ ಕಾರ್ಯಕರ್ತರು, ಮಂಗಳೂರು

---------------------------------------------------------

ಮಾರ್ಚ್ 5, 2016 ಶನಿವಾರ
ಗೋಷ್ಠಿ – ಮೂರು: ಬೆಳಗ್ಗೆ 10-00ರಿಂದ 11.30ವರೆಗೆ

ಮಹಿಳೆಯರ ಆರ್ಥಿಕ ಸಬಲೀಕರಣದ ಸವಾಲುಗಳು
ಶ್ರೀಮತಿ ವಾಸಂತಿ ಶಿವಣ್ಣ, ಅಧ್ಯಕ್ಷರು, ಮಹಿಳಾ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ

ಗ್ರಾಮೀಣ ಆರೋಗ್ಯ ಮತ್ತು ವರ್ತಮಾನದ ಸ್ಥಿತಿಗತಿ
ಡಾ. (ಫ್ಲೈ| ಲೆ|) ಎಂ. ಎ. ಬಾಲಸುಬ್ರಹ್ಮಣ್ಯ, ಕಾರ್ಯದರ್ಶಿಗಳು ಮತ್ತು ಸಿಇಒ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಸರಗೂರು.

ಗೋಷ್ಠಿ – ನಾಲ್ಕು: ಮಧ್ಯಾಹ್ನ 12-00ರಿಂದ 1-30ರವರೆಗೆ
ಮಾಧ್ಯಮ ಮತ್ತು ಮಾನವ ಹಕ್ಕುಗಳು
ಶ್ರೀಮತಿ ಸಿ. ಜಿ. ಮಂಜುಳಾ, ಸಹ ಸಂಪಾದಕರು, ಪ್ರಜಾವಾಣಿ, ಬೆಂಗಳೂರು

ದಮನಿತ ಹಾಗೂ ನಿರ್ಲಕ್ಷಿತ ವರ್ಗಗಳ ಹಕ್ಕುಗಳ ಸಂರಕ್ಷಣೆ
ಪ್ರೊ. ಪಿ. ಎಲ್. ಧರ್ಮ, ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ

 
ಗುಂಪು ಸಂವಾದ: ಅಪರಾಹ್ನ 2-00ರಿಂದ 3-00ರವರೆಗೆವಿಚಾರ ಸಂಕಿರಣದ ವಿದ್ಯಾರ್ಥಿ ಪ್ರತಿನಿಧಿಗಳಿಂದ ಅಭಿಪ್ರಾಯ ಮಂಡನೆ

------------------------------------------------------------ 
ಸಮಾರೋಪ ಸಮಾರಂಭ: ಅಪರಾಹ್ನ 3-00ರಿಂದ 4-00ರವರೆಗೆ

ಸಮಾರೋಪ ಭಾಷಣ: ಶ್ರೀಮತಿ ಹೇಮಲತಾ ಮಹಿಷಿ, ಹಿರಿಯ ನ್ಯಾಯವಾದಿಗಳು ಮತ್ತು ಬರಹಗಾರರು, ಬೆಂಗಳೂರು

ಸಾಧ್ಯವಿದ್ದರೆ ನೀವು ಖಂಡಿತ ಇದರಲ್ಲಿ ಭಾಗವಹಿಸಿ. ಒಳ್ಳೆಯ ಚರ್ಚೆ ನಡೆಯಲು ಕಾರಣರಾಗಿ.

ಹೆಚ್ಚಿನ ವಿವರಗಳಿಗೆ: ಸಿಬಂತಿ ಪದ್ಮನಾಭ ಕೆ. ವಿ.ಸಂಘಟನಾ ಕಾರ್ಯದರ್ಶಿ (9449525854)