ಗುರುವಾರ, ಅಕ್ಟೋಬರ್ 13, 2011

ಅಂತೂ ಹೊರಬಂತು ಪೇಯ್ಡ್ ನ್ಯೂಸ್ (Paid News), ವರದಿ ಆದರೆ...

ಮಾಧ್ಯಮಶೋಧ (೭), ಹೊಸದಿಗಂತ, ೧೩.೧೦.೨೦೧೧



ಪೇಯ್ಡ್ ನ್ಯೂಸ್ (Paid News) ಅಥವಾ ಸುದ್ದಿಗೂ ಕಾಸು ಎಂಬ ಹೆಸರಿನ ಮಾಧ್ಯಮ ಭ್ರಷ್ಟಾಚಾರದ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಭಾರತೀಯ ಪತ್ರಿಕಾ ಮಂಡಳಿ ನೇಮಿಸಿದ್ದ ಉಪಸಮಿತಿಯ ವರದಿಗೆ ಕೊನೆಗೂ ಮೋಕ್ಷ ಪ್ರಾಪ್ತಿಯಾಗಿದೆ. ಕಳೆದೊಂದು ವರ್ಷದಿಂದ ಪತ್ರಿಕಾ ಮಂಡಳಿಯ ಸೇಫ್ ಲಾಕರ್‌ನಲ್ಲಿ ಮೌನವಾಗಿ ಬಚ್ಚಿಟ್ಟುಕೊಂಡಿದ್ದ ಈ ವರದಿ ಕೇಂದ್ರ ಮಾಹಿತಿ ಆಯೋಗದ ಚಾಟಿಯೇಟಿಗೆ ಬೆದರಿ ಅದು ನೀಡಿದ ಅಂತಿಮ ಗಡುವು ಅಕ್ಟೋಬರ್ ೧೦ರಂದು ಸಾರ್ವಜನಿಕರೆದುರು ತೆರೆದುಕೊಂಡಿದೆ.


ಅಂದಹಾಗೆ ಉಪಸಮಿತಿಯ ವರದಿ ಒಂದು ಬ್ರೇಕಿಂಗ್ ನ್ಯೂಸ್ ಏನೂ ಅಲ್ಲ. ಕಳೆದ ವರ್ಷ ಎಪ್ರಿಲ್ ತಿಂಗಳಿನಲ್ಲಿ ಸಮಿತಿಯು ಸಲ್ಲಿಸಿದ ವರದಿಯನ್ನು ಈವರೆಗೆ ಪತ್ರಿಕಾ ಮಂಡಳಿ ತನ್ನಲ್ಲೇ ಗೌಪ್ಯವಾಗಿ ಇಟ್ಟುಕೊಂಡಿದ್ದರೂ, ಅದು ಯಾವತ್ತೋ ಅಂತರ್ಜಾಲದ ಮೂಲಕ ಎಷ್ಟೋ ಮಂದಿಯನ್ನು ತಲುಪಿಯಾಗಿದೆ. ಅದೊಂಥರಾ ಓಪನ್ ಸೀಕ್ರೆಟ್. ಅಲ್ಲದೆ ಯಾರ‍್ಯಾರು ಪೇಯ್ಡ್ ನ್ಯೂಸ್ ದಂಧೆಗಳಲ್ಲಿ ತೊಡಗಿದ್ದಾರೆಂದು ಸ್ವತಃ ಮಾಧ್ಯಮಗಳಿಗೂ ಗೊತ್ತು, ಸಾಕಷ್ಟು ಸಾರ್ವಜನಿಕರಿಗೂ ಗೊತ್ತು. ಆದರೆ, ಪತ್ರಿಕಾ ಮಂಡಳಿ ತನ್ನ ಉಪಸಮಿತಿಯ ವರದಿಯನ್ನು ಬಹಿರಂಗಗೊಳಿಸುವುದರೊಂದಿಗೆ ಈಗ ಅದಕ್ಕೊಂದು ಅಧಿಕೃತತೆ ಲಭಿಸಿದೆ ಎಂಬುದು ಗಮನಿಸಬೇಕಾದ ವಿಷಯ.


ದುರಂತವೆಂದರೆ ಈ ಕೆಲಸವನ್ನೂ ಪತ್ರಿಕಾ ಮಂಡಳಿ ಮನಃಪೂರ್ವಕವಾಗಿ ಮಾಡಿಲ್ಲ. ಪೇಯ್ಡ್ ನ್ಯೂಸ್ ಕುರಿತ ವರದಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಾ ಮಂಡಳಿಯು, ಈ ವರದಿಯನ್ನು ಕೇಂದ್ರ ಮಾಹಿತಿ ಆಯೋಗದ ನಿರ್ದೇಶನದ ಮೇರೆಗೆ ಪ್ರಕಟಿಸಲಾಗುತ್ತಿದೆ... ಉಪಸಮಿತಿಯ ವರದಿಯನ್ನು ಮಂಡಳಿ ಅಂಗೀಕರಿಸಿಲ್ಲ; ಅಂತಿಮ ವರದಿ ತಯಾರಿಸುವಲ್ಲಿ ಅದನ್ನು ಆಧಾರವಾಗಿಟ್ಟುಕೊಂಡಿತ್ತು ಅಷ್ಟೇ ಎಂದು ತಿಪ್ಪೆ ಸಾರಿಸಿದೆ. ಅಲ್ಲಿಗೆ ಪತ್ರಿಕಾ ಮಂಡಳಿಯೂ ಎಂತಹ ಒತ್ತಡಗಳ ನಡುವೆ ಕೆಲಸ ಮಾಡುತ್ತಿದೆ ಎಂಬುದು ಅರ್ಥವಾಗುತ್ತದೆ. ಅಲ್ಲದೆ, ’ಹಲ್ಲಿಲ್ಲದ ಹಾವು’, ’ಕಾಗದದ ಹುಲಿ’ ಮತ್ತಿತರ ಅದರ ಅಭಿದಾನಗಳೂ ಮತ್ತೊಮ್ಮೆ ಅನ್ವರ್ಥವಾಗಿವೆ.


೨೦೦೯ರ ಮಹಾಚುನಾವಣೆ ಹಾಗೂ ಕೆಲವು ರಾಜ್ಯ ವಿಧಾನಸಭೆಗಳ ಚುನಾವಣೆಯ ಸಂದರ್ಭ ನಡೆದ ಪೇಯ್ಡ್ ನ್ಯೂಸ್ ಚಟುವಟಿಕೆಗಳ ಬಗ್ಗೆ ಚುನಾವಣಾ ಆಯೋಗ, ಅಖಿಲ ಭಾರತ ಸಂಪಾದಕರ ಮಂಡಳಿಯೂ ಸೇರಿದಂತೆ ಹಲವಾರು ಸಂಘಸಂಸ್ಥೆಗಳಿಂದ, ಹಿರಿಯ ಪತ್ರಕರ್ತರಿಂದ, ಸಾರ್ವಜನಿಕರಿಂದ ದೇಶವ್ಯಾಪಿ ಅಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ೨೦೦೯ರ ಜುಲೈ ತಿಂಗಳಲ್ಲಿ ಭಾರತೀಯ ಪತ್ರಿಕಾ ಮಂಡಳಿಯು ತನ್ನ ಸದಸ್ಯರಲ್ಲೇ ಇಬ್ಬರನ್ನು (ಪರಂಜಯ್ ಗುಹಾ ಠಾಕುರ್ತಾ ಹಾಗೂ ಕೆ. ಶ್ರೀನಿವಾಸ ರೆಡ್ಡಿ) ಆಯ್ದುಕೊಂಡು ಉಪಸಮಿತಿಯೊಂದನ್ನು ರಚಿಸಿತು. ಸುದ್ದಿಗೂ ಕಾಸು ಪ್ರವೃತ್ತಿಯ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸುವ ಬಗ್ಗೆ ಅವರನ್ನು ಕೇಳಿಕೊಂಡಿತು. ಅವರಾದರೋ ಅತ್ಯಂತ ಶ್ರದ್ಧೆಯಿಂದ ಈ ಕೆಲಸ ಮಾಡಿ ಮುಗಿಸಿದರು. ೨೦೧೦ ಎಪ್ರಿಲ್‌ನಲ್ಲಿ ತಮ್ಮ ವರದಿಯನ್ನೂ ಸಲ್ಲಿಸಿದರು. ಆದರೆ ೭೧ ಪುಟಗಳ ಆ ವರದಿ ಮಂಡಳಿಯನ್ನೇ ಚಿಂತೆಗೀಡು ಮಾಡಿರಬೇಕು. ಅದನ್ನು ಹಾಗೆಯೇ ಸ್ವೀಕರಿಸುವ ಅಥವಾ ಬಹಿರಂಗಪಡಿಸುವ ಎಂಟೆದೆ ಮಂಡಳಿಗಂತೂ ಇದ್ದಿರಲಿಲ್ಲ. ಅಂದರೆ ಅದರಲ್ಲಿದ್ದ ಹಲವಾರು ಖ್ಯಾತನಾಮ ಪತ್ರಿಕೆಗಳ ಹೆಸರುಗಳನ್ನು ಸಾರ್ವಜನಿಕಗೊಳಿಸುವುದು ಮಂಡಳಿಗೆ ಬೇಕಿರಲಿಲ್ಲ. ಆಗ ಅದರ ಮುಂದಿದ್ದ ಸುಲಭದ ದಾರಿಯೆಂದರೆ ಆ ವರದಿಯನ್ನು ಅಧ್ಯಯನ ಮಾಡಲು ಇನ್ನೊಂದು ಸಮಿತಿಯನ್ನು ನೇಮಿಸುವುದು!


ಪತ್ರಿಕಾ ಮಂಡಳಿ ಮತ್ತೆ ೧೨ ಮಂದಿ ಸದಸ್ಯರ ಇನ್ನೊಂದು ಸಮಿತಿ ರಚಿಸಿತು. ಆ ಸಮಿತಿಯು ಉಪಸಮಿತಿ ನೀಡಿದ ವರದಿಯನ್ನು ಅರೆದು ಕುಡಿದು ೧೩ ಪುಟಗಳ ’ಅಂತಿಮ ವರದಿ’ಯನ್ನು ಭಟ್ಟಿಯಿಳಿಸಿತು. ಆ ವರದಿಯೊಂದಿಗೆ ಒಂದು ಅಡಿಟಿಪ್ಪಣಿ ಕೂಡಾ ಇತ್ತು: ಉಪಸಮಿತಿಯ ವರದಿಯು ಒಂದು ಪರಾಮರ್ಶನ ಕಡತವಾಗಿ ಮಂಡಳಿಯ ದಾಖಲೆಯಲ್ಲಿ ಇರಬಹುದು ಎಂದು ಮಂಡಳಿಯು ನಿರ್ಧರಿಸಿದೆ. ಅಬ್ಬ, ಎಂತಹ ಅದ್ಭುತ ಅಧ್ಯಯನ! ಸತತ ಹತ್ತು ತಿಂಗಳ ಕಾಲ ದೇಶದೆಲ್ಲೆಡೆ ಸುತ್ತಾಡಿ, ದೆಹಲಿ, ಮುಂಬೈ, ಹೈದರಾಬಾದ್‌ಗಳಲ್ಲಿ ವಿಶೇಷ ತನಿಖೆಗಳನ್ನು ನಡೆಸಿ, ಹತ್ತಾರು ಸಾಕ್ಷಿಗಳ ವಿಚಾರಣೆ ನಡೆಸಿ, ಪತ್ರಕರ್ತರನ್ನು, ಮಾಧ್ಯಮ ಮಾಲೀಕರನ್ನು, ರಾಜಕಾರಣಿಗಳನ್ನು, ಕಾನೂನು ತಜ್ಞರನ್ನು ಸಂಪರ್ಕಿಸಿ ತಯಾರಿಸಲಾದ ಸುದೀರ್ಘ ವರದಿಗೆ ಒಂದೇ ವಾಕ್ಯದ ಭಾಷ್ಯ! ಈಗ ಉಪಸಮಿತಿಯ ವರದಿಯ ಪೂರ್ಣಪಾಠವನ್ನು ಸಾರ್ವಜನಿಕರಿಗಾಗಿ ಪ್ರಕಟಿಸಿದ್ದರೂ ಅದರಲ್ಲಿ ಪುನಃ ತನ್ನ ’ಡಿಸ್‌ಕ್ಲೇಮರ್’ನ್ನು ಹಾಕಿಕೊಳ್ಳುವುದರೊಂದಿಗೆ ಮಂಡಳಿ ತನ್ನದು ’ಒತ್ತಾಯದ ರುಜು’ ಎಂಬುದನ್ನು ಮುಕ್ತವಾಗಿ ಹೇಳಿಕೊಂಡಂತಾಗಿದೆ.


ಆದಾಗ್ಯೂ ಉಪಸಮಿತಿಯ ವರದಿಯಲ್ಲಿ ಉಲ್ಲೇಖವಾಗಿರುವ ಕೆಲವು ಅಂಶಗಳು ಸಮಸ್ಯೆಯ ಗಾಂಭೀರ್ಯತೆಯ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದಿವೆ. ಸಮಿತಿಯು ನೇರವಾಗಿ ಪತ್ರಿಕೆಗಳನ್ನು, ಚಾನೆಲ್‌ಗಳನ್ನು ಆರೋಪಿಗಳೆಂದು ಬೊಟ್ಟು ಮಾಡಿಲ್ಲವಾದರೂ, ತಾನು ವಿಚಾರಣೆ ನಡೆಸಿದ ವ್ಯಕ್ತಿಗಳ ಹೇಳಿಕೆಗಳನ್ನೆಲ್ಲ ಅದು ತನ್ನ ವರದಿಯಲ್ಲಿ ದಾಖಲಿಸಿದೆ. ಹಲವಾರು ಸಾಕ್ಷಿಗಳು, ಪ್ರಮುಖವಾಗಿ ರಾಜಕಾರಣಿಗಳು, ’ಪಾಸಿಟಿವ್ ಕವರೇಜ್’ಗಾಗಿ ತಮ್ಮಲ್ಲಿ ಲಕ್ಷಗಟ್ಟಲೆ ಹಣ ಕೇಳಿದ ಮಾಧ್ಯಮಗಳ ಹೆಸರುಗಳನ್ನು ಸಮಿತಿಯ ಮುಂದೆ ಬಹಿರಂಗಪಡಿಸಿದ್ದಾರೆ. ದೈನಿಕ್ ಜಾಗರಣ್, ಲೋಕಮತ್, ಪುಢಾರಿ, ಪ್ರಥಮ್ ಪ್ರವಕ್ತಾ, ಪಂಜಾಬ್ ಕೇಸರಿ, ದೈನಿಕ್ ಭಾಸ್ಕರ್, ಹಿಂದೂಸ್ತಾನ್, ಅಮರ್ ಉಜಾಲ, ಆಜ್, ಉರ್ದು ಸಹರಾ, ಈನಾಡು, ಆಂಧ್ರಜ್ಯೋತಿ, ಸಾಕ್ಷಿ, ವಾರ್ತಾ, ಆಂಧ್ರಭೂಮಿ, ಸೂರ್ಯ ಮೊದಲಾದ ಪತ್ರಿಕೆಗಳನ್ನೂ, ಆಂಧ್ರ ಪ್ರದೇಶದ ಚಾನೆಲ್‌ಗಳಾದ ಟಿವಿ೯, ಈಟಿವಿ-೨, ಟಿವಿ-೫, ಎಚ್‌ಎಮ್‌ಟಿವಿ ನ್ಯೂಸ್ ಇತ್ಯಾದಿಗಳನ್ನೂ ಸಾಕ್ಷಿಗಳು ಹೆಸರಿಸಿದ್ದಾರೆ ಮತ್ತು ಅವನ್ನು ವರದಿ ದಾಖಲಿಸಿದೆ. ಮೀಡಿಯಾನೆಟ್ ಹಾಗೂ ಪ್ರೈವೇಟ್ ಟ್ರೀಟೀಸ್ ಯೋಜನೆಗಳ ಮೂಲಕ ಸುದ್ದಿಗೂ ಕಾಸು ಸಮಸ್ಯೆಯ ಬೀಜವನ್ನು ಬಿತ್ತಿದ್ದು ಟೈಮ್ಸ್ ಆಫ್ ಇಂಡಿಯಾ ಒಡೆತನದ ಬೆನೆಟ್, ಕೋಲ್‌ಮನ್ ಕಂಪೆನಿ ಲಿಮಿಟೆಡ್ ಸಂಸ್ಥೆಯೇ ಎಂಬುದನ್ನು ಸಮಿತಿಯು ಒಂದರ್ಥದಲ್ಲಿ ನೇರವಾಗಿಯೇ ಹೇಳಿದೆ. ಪೇಯ್ಡ್‌ನ್ಯೂಸ್ ಕುರಿತಂತೆ ಔಟ್‌ಲುಕ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳು, ಪತ್ರಕರ್ತ ಪಿ. ಸಾಯಿನಾಥ್ ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಿದ ವರದಿಗಳು, ಮೃಣಾಲ್ ಪಾಂಡೆ, ಪ್ರಭಾಶ್ ಜೋಶಿ ಮೊದಲಾದ ಹಿರಿಯ ಪತ್ರಕರ್ತರ ಅಭಿಪ್ರಾಯಗಳನ್ನೂ ವರದಿ ಉಲ್ಲೇಖಿಸಿದೆ.


ಇಡಿ ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ರೀತಿಯಲ್ಲಿ ಸುದ್ದಿಗೂ ಕಾಸು ಕಾಯಿಲೆ ಸಂಘಟನಾತ್ಮಕವಾಗಿ ಇಡೀ ದೇಶವನ್ನು ವ್ಯಾಪಿಸಿರುವ ಕುರಿತು ತನ್ನ ಕಳವಳ ವ್ಯಕ್ತಪಡಿಸಿರುವ ಸಮಿತಿ, ತನ್ನ ವರದಿಯ ಕೊನೆಯಲ್ಲಿ ಈ ಸಮಸ್ಯೆಯ ನಿಯಂತ್ರಣಕ್ಕೆ ಅವಶ್ಯವಾಗಿರುವ ಕೆಲವು ಕ್ರಮಗಳನ್ನೂ ಶಿಫಾರಸು ಮಾಡಿದ್ದು ಅವು ಗಮನಾರ್ಹವಾಗಿವೆ: ಜಾಹೀರಾತು ಮತ್ತು ಸುದ್ದಿ ನಡುವೆ ಸ್ಪಷ್ಟ ವ್ಯತ್ಯಾಸ ತೋರಿಸುವಂತೆ ಪತ್ರಿಕಾ ಮಂಡಳಿಯು ಎಲ್ಲ ಪತ್ರಿಕೆಗಳಿಗೆ ಕಡ್ಡಾಯ ಮಾಡುವುದು; ರಾಜಕಾರಣಿಗಳು ಮತ್ತು ಪಕ್ಷಗಳು ತಾವು ಚುನಾವಣೆ ಸಂದರ್ಭದಲ್ಲಿ ಮಾಧ್ಯಮ ಪ್ರಚಾರಕ್ಕಾಗಿ ಮಾಡಿದ ಖರ್ಚಿನ ಲೆಕ್ಕ ಕೊಡುವುದು; ೧೯೫೧ರ ಜನಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತಂದು ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಹಣ ನೀಡುವುದನ್ನೂ ಚುನಾವಣಾ ಅಕ್ರಮ ಎಂದು ಪರಿಗಣಿಸಿ ಅದನ್ನೊಂದು ಶಿಕ್ಷಾರ್ಹ ಅಪರಾಧ ಎಂದು ಘೋಷಿಸುವುದು; ಪೇಯ್ಡ್ ನ್ಯೂಸ್ ಬಗ್ಗೆ ದೂರು ದಾಖಲಿಸಲು ಭಾರತೀಯ ಚುನಾವಣಾ ಆಯೋಗ ಪ್ರತ್ಯೇಕ ವಿಭಾಗವೊಂದನ್ನು ತೆರೆಯುವುದು; ಪತ್ರಿಕಾ ಮಂಡಳಿಯ ಸಹಯೋಗದಲ್ಲಿ ಚುನಾವಣಾ ಆಯೋಗವು ಪೇಯ್ಡ್ ನ್ಯೂಸ್ ಅಕ್ರಮಗಳನ್ನು ಪತ್ತೆ ಮಾಡುವುದಕ್ಕಾಗಿ ಪ್ರತ್ಯೇಕ ವೀಕ್ಷಕರನ್ನು ನೇಮಿಸುವುದು; ಅರೆಕಾಲಿಕ ವರದಿಗಾರರು ಮತ್ತು ವರದಿಗಾರರು ಜಾಹೀರಾತು ಏಜೆಂಟರ ಕೆಲಸ ಮಾಡುವುದನ್ನು ಪತ್ರಿಕೆಗಳು ಕಡ್ಡಾಯವಾಗಿ ತಡೆಗಟ್ಟುವುದು; ೧೯೭೮ರ ಪತ್ರಿಕಾ ಮಂಡಳಿ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಅಧಿಕಾರವನ್ನು ಮಂಡಳಿಗೆ ನೀಡುವುದು; ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರಲ್ಲಿ ಸುದ್ದಿಗೂ ಕಾಸು ಮೋಸದಾಟದ ಬಗ್ಗೆ ಜಾಗೃತಿ ಮೂಡಿಸುವುದು... ಇತ್ಯಾದಿ.


ಭಾರತೀಯ ಪತ್ರಿಕಾ ಮಂಡಳಿಯನ್ನು ಬಲಪಡಿಸುವ ಅವಶ್ಯಕತೆಯನ್ನೂ ವರದಿ ಒತ್ತಿ ಹೇಳಿದೆ. ಪತ್ರಿಕಾ ಮಂಡಳಿ ಒಂದು ಆಂಶಿಕ ನ್ಯಾಯಿಕ ಸಂಸ್ಥೆಯಾಗಿದ್ದರೂ, ಅದು ವಾಗ್ದಂಡನೆ ವಿಧಿಸುವ, ಛೀಮಾರಿ ಹಾಕುವ, ಆಕ್ಷೇಪಣೆ ವ್ಯಕ್ತಪಡಿಸುವ ಅಧಿಕಾರ ಹೊಂದಿದೆಯೇ ಹೊರತು ತಪ್ಪಿತಸ್ಥರು ಎದುರಿಗಿದ್ದರೂ ಅವರನ್ನು ದಂಡಿಸುವ ಅಧಿಕಾರ ಹೊಂದಿಲ್ಲ. ಅದಕ್ಕೇ ಅದು ಹಲ್ಲಿಲ್ಲದ ಹಾವು. ಅಲ್ಲದೆ ಕೇವಲ ಮುದ್ರಣ ಮಾಧ್ಯಮ ಮಾತ್ರ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಈ ಪರಿಸ್ಥಿತಿಯನ್ನು ಸುಧಾರಿಸುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಪಸಮಿತಿ ಒತ್ತಾಯಿಸಿದೆ. ಪತ್ರಿಕೆಗಳನ್ನಷ್ಟೇ ಅಲ್ಲದೆ, ಟಿವಿ, ರೇಡಿಯೋ, ಇಂಟರ್ನೆಟ್‌ಗಳಲ್ಲೂ ನಡೆಯುವ ಅಕ್ರಮಗಳನ್ನು ತಡೆಯಲು ಪತ್ರಿಕಾ ಮಂಡಳಿಗೆ ಅಧಿಕಾರ ನೀಡಬೇಕು; ತಪ್ಪಿತಸ್ಥರನ್ನು ದಂಡಿಸುವ ಕಾನೂನಾತ್ಮಕ ಅಧಿಕಾರವನ್ನೂ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿರುವುದು ಉಲ್ಲೇಖಾರ್ಹ. ಈ ರೀತಿಯ ಒತ್ತಾಯವೇನೋ ಬಹಳ ಹಿಂದಿನಿಂದಲೂ ಇದೆ, ಆದರೆ ಅದಿನ್ನೂ ಕಾರ್ಯಗತವಾಗುವ ಸೂಚನೆ ಕಾಣಿಸುತ್ತಿಲ್ಲ; ಬಹುಶಃ ಕಾರ್ಯಗತವಾಗುವುದು ಅದನ್ನು ಸಾಧ್ಯವಾಗಿಸಬಲ್ಲವರಿಗೂ ಬೇಕಾಗಿಲ್ಲ.


ಎಲ್ಲಾ ಶಿಫಾರಸು ಮಾಡಿದ ಮೇಲೂ, ಉಪಸಮಿತಿ ತನ್ನ ವರದಿಯ ಕೊನೆಗೆ ಬರೆದಿರುವ ಒಂದು ಮಾತು ಗಮನಾರ್ಹ: ಈ ಎಲ್ಲ ಕ್ರಮಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ ಭಾರತೀಯ ಮಾಧ್ಯಮ ರಂಗದಲ್ಲಿನ ಅಕ್ರಮಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗದಿದ್ದರೂ, ಅವುಗಳ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಗಣನೀಯವಾಗಿ ತಗ್ಗಿಸಬಹುದು ಎಂಬ ಮಾತು ಒಂದು ಆಶಾವಾದದಂತೆ ಕಂಡುಬಂದರೂ, ’ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ...’ ಎಂಬ ಮಾತು ನಮ್ಮನ್ನು ಚಿಂತೆಗೀಡುಮಾಡುತ್ತದೆ. ಏಕೆಂದರೆ, ಅದೊಂದಿದ್ದರೆ ನಾವು ಇಷ್ಟೆಲ್ಲ ಸಮಸ್ಯೆಗಳೆಡೆಯಲ್ಲಿ ಸಿಕ್ಕಿಹಾಕಿಕೊಳ್ಳುವ, ಅವುಗಳ ನಡುವೆ ಒದ್ದಾಡುವ, ಗುದ್ದಾಡುವ ಪ್ರಮೇಯವೇ ಬರುತ್ತಿರಲಿಲ್ಲವಲ್ಲ!

ಗುರುವಾರ, ಸೆಪ್ಟೆಂಬರ್ 29, 2011

ಅಭಿವೃದ್ಧಿ ಪತ್ರಿಕೋದ್ಯಮ ಎಂಬ ಆಶಾವಾದದ ಬೆಳಕಿಂಡಿ

ನಮ್ಮ ಗ್ರಾಮಭಾರತದ ಪತ್ರಕರ್ತರು ಈ ಬಾರಿಯ ಗಾಂಧೀಜಯಂತಿಯಂದು ಸಂಭ್ರಮಿಸುವುದಕ್ಕೆ ಒಂದು ವಿಶೇಷ ಕಾರಣವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳೇಪುಣಿ ಎಂಬ ಪುಟ್ಟ ಹಳ್ಳಿಯ ಪತ್ರಕರ್ತ ಗುರುವಪ್ಪ ಎನ್. ಟಿ. ಬಾಳೇಪುಣಿಯವರು ನಾಡಿದ್ದು ಗಾಂಧೀಜಯಂತಿಯ ದಿನ ಸರೋಜಿನಿ ನಾಯ್ಡು ಹೆಸರಲ್ಲಿ ನೀಡಲಾಗುವ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಸ್ವೀಕರಿಸಲಿದ್ದಾರೆ - ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ. ಪ್ರಶಸ್ತಿಯ ಮೊತ್ತ ಎರಡು ಲಕ್ಷ ರೂಪಾಯಿ.


ಪ್ರಶಸ್ತಿಯ ಮೌಲ್ಯ ನಿರ್ಧಾರವಾಗುವುದು ಅದರೊಂದಿಗೆ ಬರುವ ಮೊತ್ತದಿಂದಲ್ಲ, ಬದಲಿಗೆ ಅದನ್ನು ಕೊಡುವವರ ಮತ್ತು ಸ್ವೀಕರಿಸುವವರ ಘನತೆಯಿಂದ ಎಂಬುದು ಅಕ್ಷರಶಃ ನಿಜವಾದರೂ, ಬಾಳೇಪುಣಿಯವರ ಮಟ್ಟಿಗೆ ಅದೊಂದು ದೊಡ್ಡ ಮತ್ತು ಉಲ್ಲೇಖಾರ್ಹ ಮೊತ್ತವೇ. ಬಂಟ್ವಾಳ ತಾಲೂಕಿನ ಇಡ್ಕಿದು ಎಂಬ ಮಾದರಿ ಗ್ರಾಮ ಪಂಚಾಯತ್ ಒಂದರ ಯಶೋಗಾಥೆಯ ಬಗ್ಗೆ ಬಾಳೇಪುಣಿ ’ಹೊಸದಿಗಂತ’ದಲ್ಲಿ ಮಾಡಿದ ವರದಿಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆಯಾದರೂ, ಇದು ಅವರ ಇಪ್ಪತ್ತೈದು ವರ್ಷಗಳ ಅಭಿವೃದ್ಧಿ ಪತ್ರಿಕೋದ್ಯಮದ ಮೌನ ಸಾಧನೆಗೆ ಸಂದ ಗೌರವ ಎಂದು ಅವರನ್ನು ಹತ್ತಿರದಿಂದ ಬಲ್ಲ ಯಾರಾದರೂ ಒಪ್ಪಿಕೊಳ್ಳುವ ಮಾತು. ಇಷ್ಟು ದೀರ್ಘ ಅವಧಿಯ ಸೇವೆಯಲ್ಲಿ ’ತನಗಾಗಿ’ ಏನೂ ಮಾಡಿಕೊಳ್ಳದ, ಇನ್ನೂ ಕಾಲ್ನಡಿಗೆಯಲ್ಲೇ ಗ್ರಾಮಗಳನ್ನು ಸುತ್ತುವ, ಮತ್ತು - ಅವರದೇ ಮಾತಿನಂತೆ - ಸಿಟಿಬಸ್‌ನಲ್ಲೇ ನೇತಾಡಿಕೊಂಡು ಪ್ರಯಾಣಿಸುವ ಒಬ್ಬ ಪತ್ರಕರ್ತನ ಮಟ್ಟಿಗೆ ಪ್ರಶಸ್ತಿಯ ಮೊತ್ತವೂ ಮಹತ್ವದ್ದು ಎಂದರೆ ತಪ್ಪಲ್ಲ.


ಹಾಜಬ್ಬ ಎಂಬ ಸಾಮಾನ್ಯ ಕಿತ್ತಳೆ ವ್ಯಾಪಾರಿಯೊಬ್ಬರು ತನ್ನೂರು ಹರೇಕಳದಲ್ಲಿ ಸದ್ದಿಲ್ಲದೆ ಒಂದು ಹೈಸ್ಕೂಲು ಕಟ್ಟಿ ನೂರಾರು ಹಳ್ಳಿ ಹುಡುಗರ ವಿದ್ಯಾಭ್ಯಾಸಕ್ಕೆ ಕಾರಣವಾದ ಅಸಾಮಾನ್ಯ ಸಂಗತಿ ಬಗ್ಗೆ ಬಾಳೇಪುಣಿಯವರು ’ಹೊಸದಿಗಂತ’ದಲ್ಲಿ ಮಾಡಿದ ವರದಿ ನಾಡಿನ ಗಮನ ಸೆಳೆದಿತ್ತು. ಮುಂದೆ ವಿವಿಧ ಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮಗಳು ಮತ್ತು ಸಂಘಸಂಸ್ಥೆಗಳಿಂದ ಹಾಜಬ್ಬನವರ ಸಾಧನೆಗೆ ಸಾಕಷ್ಟು ಮನ್ನಣೆ ದೊರೆಯಿತು; ಆದರೆ ಹಾಜಬ್ಬ ಅವರನ್ನು ಮೊದಲ ಬಾರಿಗೆ ಎಲೆಮರೆಯಿಂದ ಈಚೆಗೆ ಕರೆತಂದ ಕೀರ್ತಿ ಬಾಳೆಪುಣಿಯವರದ್ದೇ. ಅವರ ಹಳೆಯ ಕಡತಗಳನ್ನು ಬಿಚ್ಚುತ್ತಾ ಹೋದರೆ ಇಂತಹ ಹತ್ತಾರು ನಿದರ್ಶನಗಳು ತೆರೆದುಕೊಳ್ಳುತ್ತವೆ.



ಅಂದಹಾಗೆ, ’ದಿ ಹಂಗರ್ ಪ್ರಾಜೆಕ್ಟ್’ ಎಂಬ ಸ್ವಯಂಸೇವಾ ಸಂಸ್ಥೆ ನೀಡುವ ಈ ಸರೋಜಿನಿ ನಾಯ್ಡು ಪ್ರಶಸ್ತಿ ಮಂಗಳೂರಿಗೆ ಎರಡನೆಯ ಬಾರಿಗೆ ಬಂದಿದೆ. ಮೊದಲ ಬಾರಿಗೆ ಬಂದದ್ದು ೨೦೦೯ರಲ್ಲಿ - ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯಸ್ಥ ಡಾ. ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರಿಗೆ. ’ಕೊಲ: ದಿ ಓನ್ಲಿ ಮಾಡೆಲ್ ಗ್ರಾಮ ಪಂಚಾಯತ್ ಇನ್ ಅನ್‌ಡಿವೈಡೆಡ್ ದಕ್ಷಿಣ ಕನ್ನಡ’ ಎಂಬ ಅವರ ವರದಿಗೆ ಈ ರಾಷ್ಟ್ರೀಯ ಪುರಸ್ಕಾರ ಲಭಿಸಿತ್ತು.
ಕಳೆದ ೧೪ ವರ್ಷಗಳಿಂದ ಪತ್ರಿಕಾ ವ್ಯವಸಾಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಸೂಕ್ಷ್ಮ ಸಂವೇದನೆಯ ಪತ್ರಕರ್ತ ರೊನಾಲ್ಡ್. ವೃತ್ತಿಪರತೆಯಷ್ಟೇ ಅಕಾಡೆಮಿಕ್ ಶಿಸ್ತನ್ನೂ ಬೆಳೆಸಿಕೊಂಡಿರುವ, ಸಂಶೋಧನೆ ನಡೆಸಿ ಪಿಎಚ್.ಡಿ. ಪದವಿ ಪಡೆದಿರುವ ಅಪರೂಪದ ಪತ್ರಕರ್ತರಲ್ಲಿ ಅವರೂ ಒಬ್ಬರು. ವಿವಿಧ ಶಿಕ್ಷಣ ಸಂಸ್ಥೆಗಳ ಅಧ್ಯಯನ ಮಂಡಳಿಗಳ ಸದಸ್ಯತನ, ವಿದೇಶ ಪ್ರವಾಸ, ಹಳ್ಳಿಗಳ ಸುತ್ತಾಟ - ಇವೆಲ್ಲ ಅವರ ವ್ಯಕ್ತಿತ್ವದ ಮುಖಗಳಾಗಿರುವಂತೆಯೇ ಸರಸ್ವತಿ ಎಂಬ ದಲಿತ ಮಹಿಳೆಯೊಬ್ಬರು ಕೊಲ ಗ್ರಾಮ ಪಂಚಾಯತ್‌ನ ಅಧ್ಯಕ್ಷೆಯಾಗಿ ಅದನ್ನೊಂದು ಮಾದರಿ ಗ್ರಾಮ ಪಂಚಾಯತ್ ಆಗಿ ರೂಪಿಸಿದ ಕಥೆಯನ್ನು ಪತ್ರಿಕೆಯಲ್ಲಿ ತೆರೆದಿಟ್ಟು ಅರ್ಹವಾಗಿಯೇ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾದರು. ಅಂದಹಾಗೆ ಪ್ರಶಸ್ತಿಯೊಂದಿಗೆ ತಮಗೆ ದೊರೆತ ಎರಡು ಲಕ್ಷ ರೂಪಾಯಿಯಲ್ಲಿ ಒಂದು ಲಕ್ಷವನ್ನು ರೊನಾಲ್ಡ್ ದಲಿತರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜನಶಿಕ್ಷಣ ಟ್ರಸ್ಟ್ ಸಂಸ್ಥೆಗೆ ದೇಣಿಗೆಯಾಗಿ ನೀಡಿದ್ದರೆಂಬುದು ಬಹಳ ಮಂದಿಗೆ ಗೊತ್ತಿಲ್ಲ.


ಕಾರ್ಪೋರೇಟ್ ಪತ್ರಿಕೋದ್ಯಮದ ಭರಾಟೆಯಲ್ಲಿ ಜನಪರ ದನಿಗಳು ದಿನೇದಿನೇ ಗೌಣವಾಗುತ್ತಿವೆ ಎಂಬ ಕೊರಗಿನ ನಡುವೆಯೂ ಅಭಿವೃದ್ಧಿ ಪತ್ರಿಕೋದ್ಯಮದ ಈ ಬಗೆಯ ತಾಜಾ ನಿದರ್ಶನಗಳು ಪ್ರಜ್ಞಾವಂತ ಜನತೆಗೆ ಒಂದಷ್ಟು ಹುರುಪನ್ನೂ, ಉತ್ಸಾಹವನ್ನೂ, ಪ್ರೇರಣೆಯನ್ನೂ ನೀಡುತ್ತವೆ ಎಂಬುದು ಸುಳ್ಳಲ್ಲ. ಜಾಹೀರಾತು ವಿಭಾಗವೇ ಸಂಪಾದಕೀಯ ವಿಭಾಗವನ್ನು ಆಳುತ್ತಿರುವ ಇಂದಿನ ಮಾಧ್ಯಮ ಜಗತ್ತಿನ ಬದಲಾದ ಸನ್ನಿವೇಶದಲ್ಲೂ ಇಡ್ಕಿದು-ಕೊಲಗಳನ್ನು, ಅವುಗಳ ಸಾಧನೆಯ ಹಿಂದಿನ ಪ್ರೇರಕ ಶಕ್ತಿಗಳಾದ ದಲಿತ ಮಹಿಳೆಯರನ್ನು ಗುರುತಿಸುವ ಪತ್ರಕರ್ತರು ಇದ್ದಾರೆ ಅಷ್ಟೇ ಅಲ್ಲ, ಅಂತಹ ಪತ್ರಕರ್ತರನ್ನೂ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂಬುದು ಒಂದು ಸಣ್ಣ ನಿರಾಳತೆಯನ್ನು ತಂದುಕೊಡುತ್ತದೆ.


೧೯೯೩ರಲ್ಲಿ ’ಟೈಮ್ಸ್ ಆಫ್ ಇಂಡಿಯಾ’ದ ಫೆಲೋಶಿಪ್‌ಗೆ ಅರ್ಜಿ ಹಾಕಿದ ಖ್ಯಾತ ಪತ್ರಕರ್ತ ಪಿ. ಸಾಯಿನಾಥ್ ಅವರನ್ನು ಆ ಸಂಬಂಧ ಪ್ರಶ್ನಿಸಿದ ಸಂದರ್ಶನಾ ಮಂಡಳಿಯ ಸದಸ್ಯರೊಬ್ಬರು ’ನೀವು ಕೊಡಲಿರುವ ಗ್ರಾಮೀಣ ವರದಿಗಳನ್ನು ನಮ್ಮ ಓದುಗರು ಇಷ್ಟಪಡುತ್ತಾರೆಂದು ಏನು ಗ್ಯಾರಂಟಿ?’ ಎಂದು ಕೇಳಿದರಂತೆ. ಅದಕ್ಕೆ ಪ್ರತಿಯಾಗಿ ಸಾಯಿನಾಥ್, ’ನೀವು ನಿಮ್ಮ ಓದುಗರನ್ನು ಎಂದಾದರೂ ಈ ಬಗ್ಗೆ ಕೇಳಿ ನೋಡಿದ್ದೀರಾ?’ ಎಂದು ಮತ್ತೆ ಪ್ರಶ್ನಿಸಿದರಂತೆ. ಕೊನೆಗೂ ಅವರಿಗೆ ಆ ಫೆಲೋಶಿಪ್ ಸಿಕ್ಕಿತು ಮತ್ತು ಅದರ ಫಲವೇ ಅವರ ಜನಪ್ರಿಯ ’ಎವೆರಿಬಡಿ ಲವ್ಸ್ ಎ ಗುಡ್ ಡ್ರೌಟ್’ ಪುಸ್ತಕ. ಭಾರತದ ಏಳೆಂಟು ರಾಜ್ಯಗಳ ಹತ್ತಾರು ಕಡುಬಡತನದ ಜಿಲ್ಲೆಗಳನ್ನು ಸುತ್ತಾಡಿ ಅವರು ಬರೆದ ವರದಿಗಳು ದೊಡ್ಡ ಸಂಚಲನ ಮೂಡಿಸಿದ್ದು ಎಲ್ಲರಿಗೂ ತಿಳಿದಿದೆ. ಪ್ರಸ್ತುತ ’ದಿ ಹಿಂದೂ’ ಪತ್ರಿಕೆಯ ಗ್ರಾಮೀಣ ವಿದ್ಯಮಾನಗಳ ಸಂಪಾದಕರಾಗಿರುವ ಸಾಯಿನಾಥ್ ಈಗಲೂ ತಮ್ಮ ಅಧ್ಯಯನಪೂರ್ಣ ವರದಿಗಳಿಗೆ ಪ್ರಸಿದ್ಧರು.

ಮಾಧ್ಯಮಗಳ ವಾಣಿಜ್ಯೀಕರಣದಿಂದಾಗಿ ಅಭಿವೃದ್ಧಿ ವರದಿಗಾರಿಕೆಯ ಸಾಧ್ಯತೆಗಳು ಕ್ಷೀಣಿಸುತ್ತಿವೆ ಎಂಬ ಮಾತು ನಿಜವೇ ಇರಬಹುದಾದರೂ, ಓದುಗರ ಬೇಕುಬೇಡಗಳನ್ನು ತಾವೇ ನಿರ್ಧರಿಸಿಬಿಡುವ ಮಾಧ್ಯಮಗಳ ಪೂರ್ವಾಗ್ರಹವೂ ಇದಕ್ಕೊಂದು ಕಾರಣ ಎಂಬುದನ್ನೂ ಒಪ್ಪಿಕೊಳ್ಳಬೇಕು. ತಮ್ಮ ಸುತ್ತಲಿನ ಮಿತಿಗಳ ನಡುವೆಯೂ ಅಭಿವೃದ್ಧಿ ಪತ್ರಿಕೋದ್ಯಮವನ್ನು ಬಲಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ಮತ್ತು ಮಾಡುತ್ತಿರುವ ಸಂವೇದನಾಶೀಲ ಪತ್ರಕರ್ತರ ಒಂದು ತಂಡವೂ ಬದುಕಿಕೊಂಡುಬಂದಿದೆ.

ಅಭಿವೃದ್ಧಿ ಪತ್ರಿಕೋದ್ಯಮದ ಹೊಸ ಸಾಧ್ಯತೆಗಳನ್ನು ತೋರಿಸಿಕೊಟ್ಟದ್ದಲ್ಲದೆ, ಆ ಬಗೆಯ ಪ್ರಯತ್ನಗಳನ್ನು ಪ್ರೋತ್ಸಾಹಿಸುತ್ತಲೇ ’ನಮ್ಮೊಳಗಿನ ಬ್ರಹ್ಮಾಂಡ’, ’ಇರುವುದೊಂದೇ ಭೂಮಿ’, ’ಅಭಿವೃದ್ಧಿಯ ಅಂಧಯುಗ’ದಂತಹ ವಿಶಿಷ್ಟ ಕೃತಿಗಳನ್ನು ಪ್ರಕಟಿಸಿದ ’ಪ್ರಜಾವಾಣಿ’ಯ ಸಹ ಸಂಪಾದಕರಾಗಿದ್ದ ನಾಗೇಶ ಹೆಗಡೆ ಸದಾ ನೆನಪಲ್ಲಿ ಉಳಿಯುತ್ತಾರೆ. ವಿಜ್ಞಾನಿಗಳ ಸಂಶೋಧನೆಗಳೆಲ್ಲ ಹೊಲಗಳಿಗೆ ತಲುಪದೆ ಪ್ರಯೋಗಾಲಯಗಳಲ್ಲಿಯೇ ಬಿದ್ದು ಕೊಳೆಯುತ್ತಿರಬೇಕಾದರೆ, ’ಅಡಿಕೆ ಪತ್ರಿಕೆ’ಯೆಂಬ ಕೃಷಿಕರ ಪ್ರಯೋಗಾಲಯವನ್ನು ಹುಟ್ಟುಹಾಕಿದ, ರೈತರ ಕೈಗೆ ಲೇಖನಿ ಕೊಟ್ಟ, ಜಲಸಾಕ್ಷರತೆಯ ಬಗ್ಗೆ ಒಂದು ಬಗೆಯ ಆಂದೋಲನವನ್ನೇ ಸೃಷ್ಟಿಸಿದ ಶ್ರೀಪಡ್ರೆ ಹೊಸ ಭರವಸೆ ಮೂಡಿಸುತ್ತಾರೆ. ’ಉದಯವಾಣಿ’ಯ ಸಂಪಾದಕರಾಗಿ ೧೯೮೦ರ ದಶಕದ ಆದಿಯಲ್ಲೇ ’ಕುಗ್ರಾಮ ಗುರುತಿಸಿ’ ಯೋಜನೆಯ ಮೂಲಕ ಬೆಳ್ತಂಗಡಿ ತಾಲೂಕಿನ ದಿಡುಪೆ ಗ್ರಾಮದಲ್ಲಿ ಅಭ್ಯುದಯದ ಹಣತೆ ಬೆಳಗಿಸಿದ ಈಶ್ವರ ದೈತೋಟ ಈ ಸಾಲಿಗೆ ಸೇರುವ ಇನ್ನೊಂದು ಹೆಸರು. ೧೯೮೪ರಲ್ಲಿ ಆ ಯೋಜನೆ ಸಮಾಪ್ತಿಯಾದ ಮೇಲೆ ಅವರು ಪ್ರಕಟಿಸಿದ ’ದಿ ಎಯ್ಟೀನ್ತ್ ಎಲಿಫೆಂಟ್’ ಪುಸ್ತಕ ಅಭಿವೃದ್ಧಿ ಪತ್ರಿಕೋದ್ಯಮದ ಮಟ್ಟಿಗೆ ಈಗಲೂ ಅತ್ಯಂತ ಸ್ಮರಣೀಯ ದಾಖಲೆ.


ಹಲವು ವರ್ಷ ವೃತ್ತಿನಿರತ ಪತ್ರಕರ್ತರಾಗಿ ಮುಂದೆ ಅಧ್ಯಾಪನದಲ್ಲಿ ತೊಡಗಿಕೊಂಡು, ’ಸಾವಯವ ಕೃಷಿ’, ’ಕಾಂಕ್ರೀಟ್ ಕಾಡಿನ ಪುಟ್ಟ ಕಿಟಕಿ’, ’ನೆಲದವರು’ ಮುಂತಾದ ಕೃತಿಗಳ ಮೂಲಕ ಗುರುತಿಸಿಕೊಂಡ ಡಾ. ನರೇಂದ್ರ ರೈ ದೇರ್ಲ, ಅಭಿವೃದ್ಧಿಪರ ಬರವಣಿಗೆ ಮತ್ತು ಅಂತಹದೇ ಹಾದಿಯಲ್ಲಿ ಮುಂದುವರಿಯುವುದಕ್ಕೆ ಸಹಕಾರಿಯಾಗಿ ಯುವಕರಿಗೆ ಕಾರ್ಯಾಗಾರಗಳ ಆಯೋಜನೆ, ’ಒಡಲ ನೋವಿನ ತೊಟ್ಟಿಲ ಹಾಡು’, ’ಮೋನೋಕಲ್ಚರ್ ಮಹಾಯಾನ’, ’ಕಾನ್‌ಚಿಟ್ಟೆ’ಯಂತಹ ಪುಸ್ತಗಳನ್ನು ಪ್ರಕಟಿಸಿರುವ ಶಿವಾನಂದ ಕಳವೆ, ಬೇರೆಬೇರೆ ರೀತಿಯಾಗಿ ಈ ಬಗೆಯ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸತೀಶ್ ಚಪ್ಪರಿಕೆ, ಅನಿತಾ ಪೈಲೂರು, ಆನಂದತೀರ್ಥಪ್ಯಾಟಿ, ಪ. ರಾಮಕೃಷ್ಣ ಶಾಸ್ತ್ರಿ, ಬೇಳೂರು ಸುದರ್ಶನ, ನಾ. ಕಾರಂತ ಪೆರಾಜೆ, ಪೂರ್ಣಪ್ರಜ್ಞ ಬೇಳೂರು ಮುಂತಾದವರು ಕನ್ನಡದ ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸುತ್ತಾರೆ. ಕೃಷಿ ಮಾಧ್ಯಮ ಕೇಂದ್ರ, ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಮುಂತಾದ ಸಂಸ್ಥೆಗಳು ಸ್ವಇಚ್ಛೆಯಿಂದ ಅಭಿವೃದ್ಧಿ ಪತ್ರಿಕೋದ್ಯಮದ ಜಾಡನ್ನು ಗಟ್ಟಿಗೊಳಿಸುವತ್ತ ಶಿಕ್ಷಣ ಹಾಗೂ ತರಬೇತಿಗಳಲ್ಲಿ ತೊಡಗಿಕೊಂಡಿರುವುದೂ ಒಂದು ಆಶಾದಾಯಕ ಅಂಶವೇ.


ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮುರುಘಾಶ್ರೀ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರಿನ ಕಮ್ಯುನಿಕೇಶನ್ ಫಾರ್ ಡೆವಲಪ್‌ಮೆಂಟ್ ಅಂಡ್ ಲರ್ನಿಂಗ್ ಸಂಸ್ಥೆ ನೀಡುವ ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ಹಿರಿಯ ಪತ್ರಕರ್ತ ದಿ ಪ. ಗೋಪಾಲಕೃಷ್ಣ ಅವರ ಹೆಸರಲ್ಲಿ ನೀಡುವ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, ರಾಜ್ಯ ಸರ್ಕಾರ ನೀಡುವ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳು ಹೊಸಬಗೆಯ ಪ್ರಯತ್ನಗಳಿಗೆ ಪ್ರೋತ್ಸಾಹ ಕೊಡುವಲ್ಲಿ ಸಫಲವಾದರೆ ಅವೂ ಅಭಿನಂದನೀಯವೇ.


ಆದರೂ, ಒಟ್ಟು ಪತ್ರಿಕೋದ್ಯಮದ ಸನ್ನಿವೇಶ ಗಮನಿಸಿದಾಗ ಅಭಿವೃದ್ಧಿ ವರದಿಗಾರಿಕೆಗೆ ದೊರೆಯುವ ಅವಕಾಶ ತೀರಾ ಕಡಿಮೆ ಎಂಬುದು ಈಗಲೂ ಸತ್ಯ. ೨೦೧೦ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ದೇಶದ ಐದು ರಾಜ್ಯಗಳಿಂದ ಆಯ್ದ ೧೦ ಪ್ರಮುಖ ಪತ್ರಿಕೆಗಳನ್ನಿಟ್ಟುಕೊಂಡು ಸಂಶೋಧನ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ ಪರಿಸರ ವಿಚಾರಗಳಿಗೆ ದೊರೆತ ಸ್ಥಳಾವಕಾಶ ಶೇ. ೩ ಮತ್ತು ಕೃಷಿಗೆ ದೊರೆತ ಅವಕಾಶ ಶೇ. ೦.೯. ಆದರೆ ರಾಜಕೀಯಕ್ಕೆ ದೊರೆತ ಸ್ಥಳಾವಕಾಶ ಶೇ. ೧೫. ೭ ಮತ್ತು ವಾಣಿಜ್ಯ ವಿಷಯಗಳಿಗೆ ದೊರೆತ ಅವಕಾಶ ಶೇ. ೧೩.೬. ಅಭಿವೃದ್ಧಿ ವರದಿಗಾರಿಕೆಗೆ ನಮ್ಮಲ್ಲಿರುವ ಅವಕಾಶ ಏನೆಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ. ಆದಾಗ್ಯೂ ಎಲ್ಲ ಒತ್ತಡ ಅನಿವಾರ್ಯತೆಗಳ ನಡುವೆಯೂ ಕನ್ನಡ ಪತ್ರಿಕೋದ್ಯಮದಲ್ಲಿ ಒಂದು ಆಶಾವಾದದ ಬೆಳಕಿಂಡಿ ಇನ್ನೂ ತೆರೆದುಕೊಂಡಿಯೆಂದಾದರೆ ಅಂತಹ ಹತ್ತಾರು ಕಿಂಡಿಗಳು ಇನ್ನೂ ತೆರೆದುಕೊಳ್ಳಲಿ ಎಂಬುದೇ ಸದ್ಯದ ಆಶಯ.



(ಇದು ೨೯-೦೯-೨೦೧೧ರ ’ಹೊಸದಿಗಂತ’ದಲ್ಲಿ ಪ್ರಕಟವಾದ ಬರಹ. ಮೂಲ ಪುಟವನ್ನು ಈ ಲಿಂಕಿನ ಮೂಲಕ ನೋಡಬಹುದು. ಬೇಳೂರು ಸುದರ್ಶನ ಅವರೂ ತಮ್ಮ ಮಿತ್ರಮಾಧ್ಯಮ ಬ್ಲಾಗಿನಲ್ಲಿ ಬಾಳೇಪುಣಿಯವರ ಬಗ್ಗೆ ಒಂದು ಒಳ್ಳೆಯ ಲೇಖನ ಬರೆದಿದ್ದಾರೆ. ಅದನ್ನು ಕೂಡ ಓದಿ.)

ಬುಧವಾರ, ಜುಲೈ 6, 2011

ಪ್ರಾಥಮಿಕ ಶಿಕ್ಷಣದ ಗೊಂದಲ ಮತ್ತು ಉನ್ನತ ಶಿಕ್ಷಣದ ಕುಹಕ

ಇದು ಜುಲೈ ೦೭, ೨೦೧೧ರ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ. ಇದನ್ನು ಈ ಲಿಂಕ್‌ನಲ್ಲಿಯೂ ಓದಬಹುದು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿನ ಕೊರತೆ ಹಾಗೂ ಸುಧಾರಣೆಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ಬೇರೆಬೇರೆ ಮಾಧ್ಯಮಗಳಲ್ಲಿ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿವೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಫಲಿತಾಂಶ ಕುಸಿಯುತ್ತಿರುವ ಬಗೆಗಿನ ಆತಂಕವೇ ಎಲ್ಲ ಚರ್ಚೆಗಳಲ್ಲಿದ್ದ ಸಾಮಾನ್ಯ ಅಂಶ. ’ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಓದಲು ಮತ್ತು ಬರೆಯಲು ಬರುವುದೇ ಇಲ್ಲ. ಇವರಿಗೆ ಪಿಯುಸಿಯಲ್ಲಿ ಕನ್ನಡ ಅಕ್ಷರಮಾಲೆ, ಕಾಗುಣಿತ ಒತ್ತಕ್ಷರಗಳನ್ನು ಕಲಿಸಬೇಕಾದ ಅನಿವಾರ್ಯತೆ ಇದೆ’ ಎಂದು ಲೇಖಕರೊಬ್ಬರು ಕಳವಳ ವ್ಯಕ್ತಪಡಿಸಿದ್ದರು.

ವಿಷಯವೇನೋ ನಿಜ. ಆದರೆ ಇದನ್ನು ಕೇವಲ ಪ್ರೌಢಶಾಲೆ ಅಥವಾ ಪಿಯುಸಿ ಹಂತದವರೆಗಿನ ಸಮಸ್ಯೆಯೆಂದು ಮಾತ್ರ ಪರಿಗಣಿಸಿ ಸುಮ್ಮನಾಗುವಂತಿಲ್ಲ. ಏಕೆಂದರೆ, ಪ್ರಾಥಮಿಕ ಶಿಕ್ಷಣದಿಂದ ತೊಡಗಿ ಪದವಿಪೂರ್ವ ಶಿಕ್ಷಣದವರೆಗೆ ಏನೆಲ್ಲ ಸಮಸ್ಯೆಗಳು ಕಾಡುತ್ತವೆಯೋ ಅವು ಮುಂದೆ ಪದವಿ ಹಂತವನ್ನೂ ಬೆಂಬಿಡದೆ ಕಾಡುವುದು ನಿಸ್ಸಂಶಯ. ಪಿಯುಸಿ ಹಂತ ದಾಟಿದಾಕ್ಷಣ ಅಷ್ಟೂ ಸಮಸ್ಯೆಗಳು ಏಕಾಏಕಿ ನಿವಾರಣೆಯಾಗುವುದಂತೂ ದೂರದ ಮಾತು. ಅಲ್ಲದೆ, ಪದವಿ ಹಾಗೂ ಸ್ನಾತಕೋತ್ತರ ಹಂತಗಳಲ್ಲಿ ಅವುಗಳದ್ದೇ ಆದ ಪ್ರತ್ಯೇಕ ಸವಾಲುಗಳು ಹುಟ್ಟಿಕೊಂಡು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿರುವುದು ವಾಸ್ತವ ಸಂಗತಿ.

’ಕಾಗುಣಿತ ಕಲಿಸಬೇಕಾದ ಅನಿವಾರ್ಯತೆ ಇದೆ’ ಎಂಬ ಮಾತಿನ ಹಿಂದೆ ಅಪಾರ ಆತಂಕ ಹಾಗೂ ವ್ಯಥೆ ಇರುವುದು ನಿಜ. ಆದರೆ ಇದಕ್ಕಿಂತ ನೋವಿನ ಸಂಗತಿಯೆಂದರೆ ಈ ಪರಿಸ್ಥಿತಿ ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿ ಮಟ್ಟಕ್ಕೆ ಸೀಮಿತವಾಗಿಲ್ಲ, ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲೂ ಅಷ್ಟೇ ದಟ್ಟವಾಗಿ ಇದೆ. ತಮ್ಮ ಊರು, ತಾವು ಅಧ್ಯಯನ ನಡೆಸುತ್ತಿರುವ ಕಾಲೇಜಿನ ಹೆಸರನ್ನೂ ತಪ್ಪಿಲ್ಲದೆ ಬರೆಯಲಾಗದ ಅದೆಷ್ಟೋ ಪದವಿ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ. ಕನ್ನಡದಲ್ಲಿ ಒಂದು ಸರಳ ಅರ್ಥಪೂರ್ಣ ವಾಕ್ಯವನ್ನು ಸ್ವತಂತ್ರವಾಗಿ ಬರೆಯಲಾಗದ ಸ್ನಾತಕೋತ್ತರ ವಿದ್ಯಾರ್ಥಿಗಳೂ ಇದ್ದಾರೆ. ಈ ಹಂತದಲ್ಲೂ ತಾವು ಕಾಗುಣಿತವನ್ನೇ ಸ್ಪಷ್ಟವಾಗಿ ಬರೆಯಲಾಗದಿರುವುದು ಒಂದು ದಯನೀಯ ಪರಿಸ್ಥಿತಿಯೆಂದಾಗಲೀ, ಈಗಲಾದರೂ ಅದನ್ನು ಸರಿಪಡಿಸಿಕೊಂಡು ಹೋಗುವುದು ತಮ್ಮ ಕರ್ತವ್ಯವೆಂದಾಗಲೀ ಭಾವಿಸುವ ಪ್ರೌಢಿಮೆ ಈ ವಿದ್ಯಾರ್ಥಿಗಳಿಗೆ ಬಾರದೇ ಇರುವುದು ಇನ್ನಷ್ಟು ಶೋಚನೀಯ ವಿಚಾರ.

’ಎಷ್ಟೊಂದು ತಪ್ಪು ಬರೆಯುತ್ತಿದ್ದೀರಿ ನೀವು! ಒಂದು ಅಕ್ಷರ ವ್ಯತ್ಯಾಸದಿಂದ ಅರ್ಥ ಎಷ್ಟೊಂದು ಬದಲಾಗುತ್ತದೆ ಗೊತ್ತಾ? ಮುದ್ರಣದಲ್ಲಿರುವುದನ್ನು ನೋಡಿ ನಕಲು ಮಾಡುವಾಗಲೂ ಹೀಗೇಕೆ ತಪ್ಪಾಗುತ್ತದೆ?’ ಎಂದು ಈ ವಿದ್ಯಾರ್ಥಿಗಳನ್ನು ಕೇಳಿದರೆ ಅವರ ಮುಖದಲ್ಲಿ ’ಅಂಥದ್ದೇನಾಯಿತೀಗ?’ ಎಂಬ ಭಾವ. ಸ್ನಾತಕ-ಸ್ನಾತಕೋತ್ತರ ಹಂತದಲ್ಲಾದರೂ ಭಾಷೆಯ ಗಾಂಭೀರ್ಯತೆ ತಟ್ಟದೇ ಹೋದರೆ ಮುಂದಿನ ಗತಿ ಏನು? ಇದೆಲ್ಲ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ನಡೆದ ತಪ್ಪುಗಳು ಎಂದು ಹೇಳಿ ಕೈತೊಳೆದುಕೊಳ್ಳುವುದು ಸುಲಭವೇನೋ? ಹಾಗಂತ ಇದಕ್ಕೆ ಪರಿಹಾರ ಏನು? ಇದೆಲ್ಲ ಸರಿಯಾಗುವುದು ಯಾವಾಗ?

ಹಾಗಾದರೆ ಅಧ್ಯಾಪಕರೇನು ಮಾಡುತ್ತಿದ್ದಾರೆ? ವಿದ್ಯಾರ್ಥಿಗಳ ಭಾಷೆಯ ಬಗ್ಗೆ ಅವರಾದರೂ ಕೊಂಚ ಗಮನ ಕೊಡಬಾರದಾ ಎಂದರೆ ’ಕಾಲೇಜಿಗೆ ಬಂದ ಮೇಲೆ ಕಾಗುಣಿತ ತಿದ್ದುತ್ತಾ ಕೂರುವುದಕ್ಕಾಗುತ್ತದೆಯೇ? ಅಕ್ಷರ ಕಲಿಸುತ್ತಾ ಕೂರುವುದಾದರೆ ಉಳಿದ ಪಾಠ ಮಾಡುವುದು ಯಾವಾಗ’ ಎಂಬ ಪ್ರಶ್ನೆ ಬಂದೇ ಬರುತ್ತದೆ. ಇದನ್ನೂ ಪೂರ್ತಿ ತಳ್ಳಿಹಾಕಲಾಗದು. ವಿದ್ಯಾರ್ಥಿಗಳು ಡಿಗ್ರಿ ತಲುಪಿದ ಮೇಲೆ ಅವರು ಸಿಲೆಬಸ್ ಅಧಾರದಲ್ಲಿ ಕಲಿಯಬೇಕಾದ್ದು ಸಾಕಷ್ಟಿರುತ್ತದೆ. ಅಲ್ಲದೆ ಪದವಿ-ಸ್ನಾತಕೋತ್ತರ ಹಂತದಲ್ಲಿ ಸ್ವತಃ ವಿದ್ಯಾರ್ಥಿಯೇ ತನ್ನ ಅಧ್ಯಾಪಕನ ಮಾರ್ಗದರ್ಶನ ಬಳಸಿಕೊಂಡು ಸ್ವತಂತ್ರವಾಗಿ ಅಧ್ಯಯನ ನಡೆಸಿಕೊಂಡು ಹೋಗುವ ಪ್ರೌಢಿಮೆ ಗಳಿಸಿಕೊಂಡಿರಬೇಕು ಎಂಬ ಅಪೇಕ್ಷೆಯೂ ಸಹಜವಾದದ್ದೇ. ಹಾಗಂತ ಈ ಅಪೇಕ್ಷೆ ಹೊಂದುವುದಕ್ಕೆ ನಮ್ಮ ಅಧ್ಯಾಪಕವರ್ಗದವರೂ ಸಂಪೂರ್ಣ ನೈತಿಕ ಬಲ ಹೊಂದಿದ್ದಾರೆಯೇ?

’ನಮ್ಮ ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಸಂಬಂಧವಿಲ್ಲದ ಯಾವುದೇ ವಿಷಯ ಬೋಧನೆಯೂ ಬೇಡವಾಗಿದೆ. ಇನ್ನು ಶಿಕ್ಷಕರೋ! ಅವರು ಸಹ ತಮ್ಮ ನಿತ್ಯ ಪ್ರವಚನಕ್ಕೆ ಎಷ್ಟು ಬೇಕೋ ಅಷ್ಟು ಓದಿಕೊಂಡು ಬರುವವರು. ಪರೀಕ್ಷೆಗೆ ಬಾರದ ಯಾವ ವಿಷಯವೂ ಮುಖ್ಯವಲ್ಲ ಎಂಬ ವಿಚಾರದಲ್ಲಿ ಅವರ ನಡುವೆ ಸಂಪೂರ್ಣ ಒಮ್ಮತ’ ಎಂದು ದಶಕಗಳ ಹಿಂದೆಯೇ ಡಾ. ಶಿವರಾಮ ಕಾರಂತರು ಕುಟುಕಿದ್ದರು. ಈ ಪರಿಸ್ಥಿತಿಯಲ್ಲಿ ಇಂದು ಏನಾದರೂ ಬದಲಾವಣೆಯಾಗಿದೆಯೇ?
ಸ್ವಂತ ಅಧ್ಯಯನದ ವಿಷಯ ಹಾಗಿರಲಿ, ಭಾಷಾಶುದ್ಧಿಯ ವಿಚಾರದಲ್ಲಾದರೂ ನಮ್ಮ ಎಲ್ಲ ಕಾಲೇಜು ಅಧ್ಯಾಪಕರುಗಳು ತಾವು ಒಂದಿಷ್ಟೂ ತಪ್ಪಿಲ್ಲದೆ ಒಳ್ಳೆಯ ಕನ್ನಡ ಅಥವಾ ಇಂಗ್ಲಿಷ್‌ನ್ನು ಬರೆಯಬಲ್ಲೆವು ಎಂದು ಘೋಷಿಸಿಕೊಳ್ಳುವ ಧೈರ್ಯ ಹೊಂದಿದ್ದಾರೆಯೇ? ಸ್ವತಃ ಒಬ್ಬ ಅಧ್ಯಾಪಕನಾಗಿ ಈ ಪ್ರಶ್ನೆ ಕೇಳುವುದು ಶೋಭೆಯ ಸಂಗತಿಯೇನೂ ಅಲ್ಲವಾದರೂ ಈ ರೀತಿ ಕೇಳಲೇಬೇಕಾಗಿದೆ. ’ಮನದುಂಬಿ ಹಾರೈಸುತ್ತೇನೆ’ ಎಂದು ಇತ್ತೀಚೆಗೆ ಯಾವುದೋ ಒಂದು ಸಂದರ್ಭಕ್ಕೆ ನಾನು ಬರೆದಿದ್ದೆ. ಅದನ್ನು ನೋಡಿದ ಪಿಎಚ್.ಡಿ. ಪೂರೈಸಿರುವ ಕನ್ನಡ ಉಪನ್ಯಾಸಕರೊಬ್ಬರು ಹೌಹಾರಿ ’ಸಾರ್ ತಪ್ಪು ತಪ್ಪು... ಇದು ಮನದುಂಬಿ ಆರೈಸುತ್ತೇನೆ ಎಂದಾಗಬೇಕು...’ ಎನ್ನುತ್ತಾ ಅರೆಕ್ಷಣವೂ ಕಾಯದೆ ತಮ್ಮ ಪೆನ್ನಿನಿಂದ ತಿದ್ದುಪಡಿ ಮಾಡಿಯೇಬಿಟ್ಟರು. ಭಾಷೆ-ಸಾಹಿತ್ಯ ಪಾಠ ಮಾಡುವ ಅಧ್ಯಾಪಕ ಮಹೋದಯರೇ ಹೀಗಾದರೆ ವಿದ್ಯಾರ್ಥಿಗಳ ಗತಿ ಏನು?

ಪದವಿ ಶಿಕ್ಷಣ ಹಂತದ ಉಲ್ಲೇಖಿಸಲೇಬೇಕಾದ ಸಮಸ್ಯೆಯೆಂದರೆ ತರಗತಿಯಲ್ಲಿ ವಿದ್ಯಾರ್ಥಿಗಳ ಗೈರುಹಾಜರಿ. ಫಲಿತಾಂಶ ಗುಣಮಟ್ಟವನ್ನು ಕಾಯ್ದುಕೊಳ್ಳುವ ತುರ್ತು ಇರುವ ಖಾಸಗಿ ಕಾಲೇಜುಗಳಾದರೂ ಶೇ. ೭೫ ಹಾಜರಾತಿ ಕಡ್ಡಾಯ ಮಾಡಿ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ. ಆದರೆ ಸರ್ಕಾರಿ ಕಾಲೇಜುಗಳ ಅವಸ್ಥೆ ಕಳವಳಕಾರಿಯೇ. ಅದ್ಯಾವ ಕಾರಣಕ್ಕಾಗಿಯೋ, ಪರೀಕ್ಷೆ ಪಾಸಾಗಬೇಕಾದರೆ ತರಗತಿಗೆ ಹೋಗಬೇಕಾಗಿಯೇನೂ ಇಲ್ಲ. ವರ್ಷದ ಆರಂಭದಲ್ಲಿ ಕಾಲೇಜಿಗೆ ಹೇಗಾದರೂ ಅಡ್ಮಿಷನ್ ಪಡೆದುಕೊಂಡು ಪರೀಕ್ಷೆ ಸಮಯಕ್ಕೆ ನಿಗದಿತ ಶುಲ್ಕ ಕಟ್ಟಿ, ಪರೀಕ್ಷೆಗಳಿಗೆ ಹಾಜರಾದರಾಯಿತು. ಹಾಗೂಹೀಗೂ ಪಾಸಾಗಿ ಪ್ರಮಾಣಪತ್ರ ಸಿಕ್ಕಿಬಿಡುತ್ತದೆ ಎಂಬ ಭಾವನೆ ಸಾಕಷ್ಟು ವಿದ್ಯಾರ್ಥಿಗಳಲ್ಲಿ ಇದೆ. ಹೀಗಾಗಿ ಅನೇಕ ಕಾಲೇಜುಗಳಲ್ಲಿ ಹಾಜರಾತಿಯೇ ಇಲ್ಲ. ವಿದ್ಯಾರ್ಥಿಗಳು ತರಗತಿಗೆ ಬಂದರೆ ಬಂದರು ಬಿಟ್ಟರೆ ಬಿಟ್ಟರು ಎಂಬ ಪರಿಸ್ಥಿತಿ ಇದೆ.

ಎಲ್ಲಾ ಕಾಲೇಜುಗಳಲ್ಲೂ ಶೇ. ೭೫ ಹಾಜರಾತಿ ಕಡ್ಡಾಯ ಮಾಡುವುದೊಂದೇ ಇದಕ್ಕೆ ಪರಿಹಾರ. ನಿಗದಿತ ಹಾಜರಾತಿ ಇಲ್ಲದೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಇಲ್ಲ ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ಬಹುತೇಕ ಸಮಸ್ಯೆಗಳು ತಾವಾಗಿಯೇ ಪರಿಹಾರಗೊಳ್ಳುತ್ತವೆ. ಅನಿವಾರ್ಯವಾಗಿಯಾದರೂ ನಿಯಮಿತವಾಗಿ ತರಗತಿಗೆ ಹಾಜರಾಗುವುದರಿಂದ ಕಾಲೇಜಿನಲ್ಲಿ ಕಲಿಕಾ ಪರಿಸರ ಸ್ವಾಭಾವಿಕವಾಗೇ ಅಭಿವೃದ್ಧಿಯಾಗುತ್ತದೆ; ಫಲಿತಾಂಶದ ಗುಣಮಟ್ಟವೂ ಸುಧಾರಿಸುತ್ತದೆ. ವಿದ್ಯಾರ್ಥಿಗಳಲ್ಲಿ ನಿಧಾನವಾಗಿಯಾದರೂ ಅವಶ್ಯವಿರುವ ಕಲಿಕಾ ಆಸಕ್ತಿ ವೃದ್ಧಿಸುತ್ತದೆ.

ಹಾಗಂತ ಕಾಲೇಜು ಓದುವವರಲ್ಲಿ ಸಾಕಷ್ಟು ಬಡವರು, ಕೂಲಿಕಾರರ ಮಕ್ಕಳಿದ್ದಾರೆ. ಅವರು ದುಡಿದೇ ಓದುವ ಮಂದಿ. ಈ ಕಡ್ಡಾಯ ಹಾಜರಾತಿಯಿಂದ ಅವರು ಸಂಕಷ್ಟಕ್ಕೀಡಾಗುತ್ತಾರೆ ಎಂಬ ಮಾತಿದೆ. ನಿಜ, ಆದರೆ ಇದು ಪರಿಹರಿಸಲಾಗದ ಸಮಸ್ಯೆಯೇನೂ ಅಲ್ಲ. ಪ್ರತೀದಿನ ತಾಸುಗಟ್ಟಲೆ ದುಡಿದು ಅದರೊಂದಿಗೆ ಕಲಿಕೆಗೂ ವಿಮುಖರಾಗದೆ ಅದ್ಭುತವೆನಿಸುವ ಫಲಿತಾಂಶ ತರುವ ಛಲಗಾರ ಪ್ರಾಮಾಣಿಕ ವಿದ್ಯಾರ್ಥಿಗಳು ನಮ್ಮೊಂದಿಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಇವೆಲ್ಲದರ ಜೊತೆಗೆ ಅನೇಕ ಸರ್ಕಾರಿ ಕಾಲೇಜುಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಮುಖ್ಯವಾಗಿ ಅಗತ್ಯ ಕಟ್ಟಡ, ತರಗತಿ ಕೊಠಡಿ, ಶೌಚಾಲಯ ಇತ್ಯಾದಿಗಳಿಲ್ಲದಿರುವುದೇ ಬಹುದೊಡ್ಡ ಕೊರತೆಯಾಗಿದೆ. ಇಷ್ಟವೆನಿಸಿದಾಗೆಲ್ಲ ಹೊಸ ಕಾಲೇಜು, ವಿಶ್ವವಿದ್ಯಾನಿಲಯಗಳ ಸ್ಥಾಪನೆಯ ಬಗ್ಗೆ ಆಶ್ವಾಸನೆ ನೀಡುವುದು, ಮಂಜೂರು ಮಾಡುವುದು ನಮ್ಮಲ್ಲಿ ಒಂದು ಫ್ಯಾಶನ್ ಆಗಿಬಿಟ್ಟಿದೆ. ಅವುಗಳಿಗೆ ಅಗತ್ಯ ಜಾಗ ಇದೆಯೇ, ಕಟ್ಟಡ ಇದೆಯೇ, ಇಲ್ಲವಾದರೆ ಅವುಗಳ ಒದಗಣೆ ಹೇಗೆ ಎಂದು ಯೋಚನೆ ಬರುವುದೇ ಎರಡು ವರ್ಷ ದಾಟಿದ ಮೇಲೆ. ಇವೆಲ್ಲ ಉನ್ನತ ಶಿಕ್ಷಣದ ಕುಹಕಗಳಲ್ಲದೆ ಇನ್ನೇನು?

ಗುರುವಾರ, ಮೇ 26, 2011

ಮಂಗಳೂರು-ಸ್ವಿಟ್ಜರ್ಲ್ಯಾಂಡ್ ಗಳ ಘಂಟೆಯ ನಂಟು!



ಸ್ನೇಹಿತ ಶೇಣಿ ಬಾಲಮುರಳಿ ಮತ್ತು ಸಂಗಡಿಗರು ಮಂಗಳೂರಿನಿಂದ ಭಾಮಿನಿ ಎಂಬ ವಿಶಿಷ್ಟ ಕನ್ನಡ ಮಾಸಿಕವನ್ನು ಹೊರತರುತ್ತಿದ್ದಾರೆ. ಹೆಸರಿನ ಹಾಗೆಯೇ ಪತ್ರಿಕೆಯೂ ಆಕರ್ಷಕವಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲೇ ಭಾಮಿನಿ ರಾಜ್ಯಾದ್ಯಂತ ತನ್ನದೇ ಆದ ಛಾಪು ಮೂಡಿಸಿರುವುದೇ ಇದಕ್ಕೆ ಸಾಕ್ಷಿ. ಭಾಮಿನಿಯ ಮೇ 2011 ಸಂಚಿಕೆಯಲ್ಲಿ ಪ್ರಕಟವಾದ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. ಬಿಡುವು ಮಾಡಿ ಓದಿ..







ಢಣ್! ಢಣ್!!
ಕಾಂತಿ ಮತ್ತು ಶಾಂತಿ ಚರ್ಚ್ ಗಳ ಅಷ್ಟೆತ್ತರದ ಘಂಟೆಗೋಪುರಗಳಿಂದ ಹಾಗೊಂದು ಗಂಭೀರ ನಿನಾದ ಹೊರಟು ಕರಾವಳಿಯ ಮಂದಾನಿಲದೊಳಗೆ ಸೇರಿಕೊಂಡು ಮೆಲ್ಲಮೆಲ್ಲನೆ ಹರಡುತ್ತಿದ್ದರೆ, ಆಸ್ತಿಕ ಅನುಯಾಯಿಗಳು ಸರಸರನೆ ಒಟ್ಟಾಗಿ ಪ್ರಾರ್ಥನೆಗೆ ಅಣಿಯಾಗುತ್ತಾರೆ. ನಿನಾದ ನಿಧಾನವಾಗುತ್ತಿದ್ದಂತೆ, ಅದಕ್ಕೆ ಕಾರಣವಾದ ಘಂಟೆಗಳು ತಮ್ಮಷ್ಟಕ್ಕೇ ನಿಶ್ಚಲಗೊಂಡು ಮೌನದ ಗೂಡು ಸೇರುತ್ತವೆ.
ಆದರೆ ಆ ನಿನಾದ ಹುಟ್ಟಿಸಿದ ಕೌತುಕ ಅಲ್ಲಿಗೇ ಮೌನವಾಗುವುದಿಲ್ಲ. ಕುತೂಹಲದ ಕಣ್ಣು-ಕಿವಿಗಳನ್ನು ಎಳೆದುಕೊಂಡು ಬಂದು ದೈತ್ಯ ಘಂಟೆಗೋಪುರದೆದುರು ನಿಲ್ಲಿಸುತ್ತವೆ. ಚರ್ಚ್ ಗಳ ಶಿಖರದಿಂದ ತೇಲಿಬಂದದ್ದು ಬರೀ ಘಂಟೆಗಳ ಧ್ವನಿಯೇ? ಅಥವಾ ಆ ಧ್ವನಿಯ ಹಿಂದೆ ಏನಾದರೂ ಸೋಜಿಗದ ಕಥೆಯೊಂದಿದೆಯೇ? ಯಾಕೆ ಇರಬಾರದು! ಇದ್ದರೆ ನಾವ್ಯಾಕೆ ಅದಕ್ಕೆ ಕಿವಿಯಾನಿಸಬಾರದು?
ನಿಜ, ಆ ಘಂಟೆಗಳಿಂದ ಹೊರಟದ್ದು ಕೇವಲ ಧ್ವನಿಯಲ್ಲ. ಆ ಧ್ವನಿಯೊಳಗೆ ಮಂಗಳೂರನ್ನೂ ದೂರದ ಸ್ವಿಟ್ಜರ್ಲೆಂಡನ್ನೂ ಬೆಸೆಯುವ ಅಗೋಚರ ಸೇತುವೆಯೊಂದಿದೆ! ಆ ಸೇತುವೆ ಇಂದು ನಿನ್ನೆಯದಲ್ಲ; ಶತಮಾನಕ್ಕಿಂತಲೂ ಹಳೆಯದು. ಅದು ಇತಿಹಾಸದ ಪುಟಗಳನ್ನು ತೆರೆಯುತ್ತಾ ಹೋಗುತ್ತದೆ; ಸ್ವಾರಸ್ಯಗಳನ್ನು ಬಿಚ್ಚಿಡುತ್ತದೆ. ಅರೆ, ಎತ್ತಣ ಮಂಗಳೂರು, ಎತ್ತಣ ಸ್ವಿಟ್ಜರ್ಲ್ಯಾಂಡ್, ಇನ್ನೆತ್ತಣ ಚರ್ಚ್ ಘಂಟೆಗಳಯ್ಯ?
ಹಾಗೆಂದು ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ನಮ್ಮೆದುರು ಅನಾವರಣಗೊಳ್ಳುವುದು ಇತಿಹಾಸ ಪ್ರಸಿದ್ಧ ಬಾಸೆಲ್ ಮಿಶನ್ನ ಸಾಹಸದ ಕಥೆಗಳು. ಬಾಸೆಲ್ ಮಿಶನ್ಗೂ ಕರಾವಳಿಗೂ ಒಂದು ವಿಶಿಷ್ಟ ಬಾಂಧವ್ಯ. ಒಂದು ವೇಳೆ 19ನೇ ಶತಮಾನದ ಆರಂಭದಲ್ಲಿ ಬಾಸೆಲ್ ಇವಾಂಜೆಲಿಕಲ್ ಮಿಶನರಿ ಸೊಸೈಟಿ ಮಂಗಳೂರನ್ನು ಪ್ರವೇಶಿಸದೇ ಇದ್ದಿದ್ದಲ್ಲಿ, ಇಂದು ಕರಾವಳಿಯ ಚಿತ್ರ ಬೇರೆಯದೇ ಇರುತ್ತಿತ್ತೋ ಏನೋ? ಬಾಸೆಲ್ ಮಿಶನ್ ಬಂದರು ಪಟ್ಟಣವೆನಿಸಿದ ಮಂಗಳೂರಿಗೆ ಬಂದ ಮುಖ್ಯ ಉದ್ದೇಶ ಧರ್ಮಪ್ರಚಾರವೇ ಆಗಿದ್ದರೂ, ಕನರ್ಾಟಕದ, ಅದರಲ್ಲೂ ಕರಾವಳಿಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಅವರು ನೀಡಿದ ಕೊಡುಗೆ ಅಸಾಧಾರಣವಾದುದೇ ಆಗಿದೆ.

ಮಿಶನರಿಗಳು ತಮ್ಮ ಚಟುವಟಿಕೆಗಳನ್ನು ಧರ್ಮಪ್ರಚಾರಕ್ಕಷ್ಟೇ ಸೀಮಿತಗೊಳಿಸದೆ, ಇಡೀ ಪ್ರದೇಶವನ್ನು ವಾಣಿಜ್ಯಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ಪ್ರಯೋಗಗಳ ವೇದಿಕೆಯನ್ನಾಗಿ ಬದಲಾಯಿಸಿಕೊಂಡರು. ಹೀಗಾಗಿ, ಯಾರೇ ಆದರೂ ಪಶ್ಚಿಮ ಕರಾವಳಿಯ ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ ಹಾಗೂ ಶೈಕ್ಷಣಿಕ ರಂಗಗಳ ಬಗ್ಗೆ ಮಾತನಾಡಹೊರಟರೆ ಅವರು ಬಾಸೆಲ್ ಮಿಶನರಿಗಳ ಚಟುವಟಿಕೆಗಳಿಂದಲೇ ಆರಂಭಿಸುವುದು ಅನಿವಾರ್ಯವಾಗುತ್ತದೆ.
ಕರಾವಳಿ ಜಿಲ್ಲೆಗಳಲ್ಲಿ ಹಳೆಯದೆನಿಸುವ ಯಾವುದೇ ಸ್ಮಾರಕ, ನಿರ್ಮಾಣಗಳ ಹತ್ತಿರ ಹೋಗಿ, ನವಿರಾಗಿ ಅವನ್ನು ನೇವರಿಸಿ, ನಿಮ್ಮ ಕುತೂಹಲದ ಕಿವಿಗಳನ್ನು ಆನಿಸಿ ಸುಮ್ಮನೆ ಕುಳಿತುಬಿಡಿ. ಸ್ವಾರಸ್ಯಭರಿತ ಕಥೆಗಳು ಒಂದಾದಮೇಲೊಂದರಂತೆ ತೆರೆದುಕೊಳ್ಳುತ್ತಲೇ ಹೋಗುತ್ತವೆ. ಈ ವಿಚಾರ ಕರಾವಳಿಗಷ್ಟೇ ಅಲ್ಲ, ಪ್ರಪಂಚದ ಯಾವುದೇ ಮೂಲೆಗಾದರೂ ನಿಜವೇ. ಈ ಕಟ್ಟಡಗಳು ತಮ್ಮೊಂದಿಗೆ ಶ್ರೀಮಂತ ಪರಂಪರೆಯನ್ನು ಒಯ್ಯುತ್ತಲೇ ಇಂದಿನ ಜನತೆಗೆ ಭೂತಕಾಲದ ಸಾಕಷ್ಟು ಕಥೆಗಳನ್ನೂ ಹೇಳುತ್ತವೆ. ಮಂಗಳೂರಿನ ಬಲ್ಮಠದಲ್ಲಿರುವ ಶಾಂತಿ ಕೆಥಡ್ರೆಲ್ ಹಾಗೂ ಜೆಪ್ಪುವಿನಲ್ಲಿರುವ ಕಾಂತಿ ಚರ್ಚ್ ಗಳ ತುದಿಯಲ್ಲಿ ಸ್ಥಾಪಿತವಾಗಿರುವ ಬೃಹತ್ ಘಂಟೆಗಳು ಮಂಗಳೂರು ಹಾಗೂ ಸ್ವಿಟ್ಜರ್ಲೆಂಡ್ ನಡುವಿನ ಐತಿಹಾಸಿಕ ಸಂಬಂಧವನ್ನು ಅನಾವರಣಗೊಳಿಸುತ್ತವೆ!
ಕರಾವಳಿ ಪ್ರಾಂತ್ಯದಲ್ಲೇ ಅತಿ ದೊಡ್ಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪಂಚಲೋಹದ ಈ ಘಂಟೆಗಳು ಶತಮಾನದ ಹಿಂದೆಯೇ ಸ್ವಿಟ್ಜರ್ಲೆಂಡಿನಲ್ಲಿ ತಯಾರಾದವು. ಸ್ವಾರಸ್ಯಕರ ಸಂಗತಿಯೆಂದರೆ, ನೂರಾರು ಕೆ.ಜಿ. ಭಾರವಿರುವ ಈ ಘಂಟೆಗಳ ಮೇಲ್ಮೈಯಲ್ಲಿ ಕನ್ನಡ ಭಾಷೆಯ ಬೈಬಲ್ ವಾಕ್ಯಗಳನ್ನು ಉಬ್ಬು ಅಚ್ಚಿನ ಮಾದರಿಯಲ್ಲಿ ಕೆತ್ತಲಾಗಿದೆ. ದುರದೃಷ್ಟವಶಾತ್, ಈ ಘಂಟೆಗಳ ಬಗ್ಗೆ ಬಾಸೆಲ್ ಮಿಶನ್ನ ಹಳೆಯ ದಾಖಲೆಗಳಲ್ಲಿ ಹೆಚ್ಚಿನ ಮಾಹಿತಿಯೇನೂ ದೊರೆಯುವುದಿಲ್ಲ. ಚರ್ಚ್ ಗಳ ಇತಿಹಾಸದ ಬಗ್ಗೆ ವಿವರ ನೀಡುವ ಬಲ್ಮಠದ ಕರ್ನಾಟಕ ಥಿಯಾಲಾಜಿಕಲ್ ಕಾಲೇಜಿನ (ಕೆಟಿಸಿ) ಪತ್ರಾಗಾರದ ಕೆಲವು ದಾಖಲೆಗಳು ಈ ಘಂಟೆಗಳ ಸ್ಥಾಪನೆಯ ಬಗೆಗಷ್ಟೇ ಕೆಲವು ಸಾಮಾನ್ಯ ಮಾಹಿತಿಗಳನ್ನು ನೀಡುತ್ತವೆ. ಆದರೂ, ಸಂಶೋಧಕರಿಗೂ ಜನಸಾಮಾನ್ಯರಿಗೂ ಆಸಕ್ತಿದಾಯಕವಾಗಬಲ್ಲ ಕೆಲವು ವಿವರಗಳನ್ನು ಘಂಟೆಗಳ ಮೇಲ್ಮೈಯಲ್ಲಿ ಕಾಣಬಹುದು.
ಕರ್ನಾಟಕ ಕ್ಕೆ ಆಗಮಿಸಿದ ಮೇಲೆ ಬಾಸೆಲ್ ಮಿಶನರಿಗಳು ಕಟ್ಟಿದ ಚರ್ಚ್ ಗಳಲ್ಲಿ ಶಾಂತಿ ಕೆಥಡ್ರೆಲ್ ಮೊದಲನೆಯದು. 1862ರಲ್ಲಿ ನಿರ್ಮಾಣಗೊಂಡ ಈ ಚರ್ಚ್ 1904ರಲ್ಲಿ ಘಂಟೆ ಗೋಪುರವೊಂದನ್ನು ಪಡೆಯಿತು.
ಗೋಪುರದಲ್ಲಿ ಸಾಲಾಗಿ ತೂಗು ಹಾಕಿರುವ ಮೂರು ಘಂಟೆಗಳಲ್ಲಿ ಒಂದು ದೊಡ್ಡದು, ಉಳಿದವೆರಡು ಕೊಂಚ ಸಣ್ಣವು. ದೊಡ್ಡ ಘಂಟೆಯ ತಳಭಾಗ ಸುಮಾರು 90 ಇಂಚುಗಳಷ್ಟು ಪರಿಧಿಯನ್ನು ಹೊಂದಿದ್ದು, 29 ಇಂಚು ವ್ಯಾಸವನ್ನು ಹೊಂದಿದೆ. ಉಳಿದೆರಡು ಘಂಟೆಗಳು ಒಂದೇ ಗಾತ್ರದವಾಗಿದ್ದು, 60 ಇಂಚು ಪರಿಧಿಯನ್ನೂ 20 ಇಂಚುಗಳಷ್ಟು ವ್ಯಾಸವನ್ನೂ ಹೊಂದಿವೆ.
ಮೊದಲನೆಯ ಘಂಟೆಯ ಮೇಲ್ಮೈಯಲ್ಲಿ ಈ ವಾಕ್ಯವನ್ನು ಉಬ್ಬು ಅಚ್ಚಿನ ಮಾದರಿಯಲ್ಲಿ ರಚಿಸಲಾಗಿದೆ: ಮಹೋನ್ನತವಾದವುಗಳಲ್ಲಿ ದೇವರಿಗೆ ಮಹಿಮೆಯು! ಭೂಮಿಯ ಮೇಲೆ ಸಮಾಧಾನವು! ಮನುಷ್ಯರಲ್ಲಿ ದಯವು!
ನಥಾನೆಲ್ ಮತ್ತು ಅನ್ನಾ ವೇಬ್ರೆಕ್ಟ್ ಎಂಬೆರಡು ಹೆಸರುಗಳಲ್ಲದೆ, 11 ನವೆಂಬರ್ 1873 ಮಂಗಳೂರು; 11 ನವೆಂಬರ್ 1898 ಎಸ್ಲಿಂಗೆನ್ ಎಂದೂ ಘಂಟೆಯ ಮೇಲೆ ಬರೆಯಲಾಗಿದೆ.
ಎರಡನೇ ಘಂಟೆಯ ಮೇಲೆ ಈ ರೀತಿ ಬರೆಯಲಾಗಿದೆ: ಎಲ್ಲಾ ಜನಾಂಗಗಳೆ, ಯೆಹೋವನನ್ನು ಸ್ತುತಿಸಿರಿ; ಎಲ್ಲಾ ಜನಗಳೇ, ಅವನನ್ನು ಹೊಗಳಿರಿ. ಅಲ್ಲಿಯೂ ಅರ್ನ್ಸ್ಟ್ ವೇಬ್ರೆಕ್ಟ್, ಮಂಗಳೂರಿನಲ್ಲಿ ಜನನ, 7 ಡಿಸೆಂಬರ್ 1874 ಎಂದು ಬರೆಯಲಾಗಿದೆ.
ಮೂರನೆಯ ಘಂಟೆಯ ಮೇಲೆ: ಕೂಸುಗಳು ನನ್ನ ಬಳಿಗೆ ಬರಗೊಡಿಸಿರಿ; ಯಾಕೆಂದರೆ ದೇವರ ರಾಜ್ಯವು ಇಂಥವರಿಂದಾಗಿದೆ ಎಂದು ಬರೆಯಲಾಗಿದ್ದು, ಎಲಿಜಬೆತ್ ಮಾಜ್ ವೇಬ್ರೆಕ್ಟ್, ಮಂಗಳೂರಿನಲ್ಲಿ ಜನನ, 25 ಜನವರಿ 1876 ಎಂಬ ಮಾಹಿತಿ ಕಾಣಸಿಗುತ್ತದೆ.
ಘಂಟೆಗಳ ಮೇಲೆ ಕೊಟ್ಟಿರುವ ಮಾಹಿತಿಯಂತೆ, ಅವುಗಳು 1900ರಲ್ಲಿ ಜೆಗೊಸೆನ್ ವೊನ್ ಹೆನ್ರಿಚ್ Curtsರಿಂದ Stutgart ನಲ್ಲಿ ತಯಾರಾಗಿವೆ. ಅಲ್ಲಿರುವ ಹೆಸರುಗಳು ಹಾಗೂ ಜನನ ದಿನಾಂಕಗಳ ಮೂಲಕ ಅವು ಆಯಾ ಹೆಸರಿನ ವ್ಯಕ್ತಿಗಳ ನೆನಪಿನಲ್ಲಿ ಕೊಡುಗೆಯಾಗಿ ನೀಡಲಾದವು ಎಂದು ಊಹಿಸಬಹುದು.
ಜೆಪ್ಪುವಿನ ಕಾಂತಿ ಚರ್ಚ್ ಪುರಾಣಪ್ರಸಿದ್ಧ ಮಂಗಳಾದೇವಿ ದೇಗುಲದಿಂದ ಕಣ್ಣಳತೆಯ ದೂರದಲ್ಲೇ ಇದೆ. ಇಲ್ಲಿ ಕೂಡ ಇದೇ ಬಗೆಯ ಮೂರು ಘಂಟೆಗಳನ್ನು ಕಾಣಬಹುದು. ಶಾಂತಿ ಚರ್ಚ್ ಗಿಂತ ನಂತರದ ವರ್ಷಗಳಲ್ಲಿ ಇವುಗಳು ಸ್ಥಾಪನೆಯಾದರೂ, ಇವು ಶಾಂತಿ ಚರ್ಚ್ ನ ಘಂಟೆಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿವೆ. ದೊಡ್ದ ಘಂಟೆ 118 ಇಂಚುಗಳಷ್ಟು (ಹೆಚ್ಚುಕಡಿಮೆ ಎರಡು ಮೀಟರ್) ಪರಿಧಿ ಹಾಗೂ 37 ಇಂಚು ವ್ಯಾಸ ಹೊಂದಿದೆ. ಇನ್ನೊಂದು ಘಂಟೆ 93 ಇಂಚಿನಷ್ಟು ಪರಿಧಿ ಹೊಂದಿದೆ. ಮೂರನೆಯ ಘಂಟೆ ಇನ್ನೂ ಕೊಂಚ ಸಣ್ಣದು. ನಿನ್ನ ನಾಮವು ಪರಿಶುದ್ಧವಾಗಲಿ, ನಿನ್ನ ರಾಜ್ಯವು ಬರಲಿ ಹಾಗೂ ನಿನ್ನ ಚಿತ್ತವು ಆಗಲಿ ಎಂಬ ವಾಕ್ಯಗಳು ಘಂಟೆಗಳ ಮೇಲೆ ಕಂಡುಬರುತ್ತಿದ್ದು, ಇದು ಬೈಬಲ್ನ ಭಾಗವಾದ 'ಲಾರ್ಡ್ಸ್ ಪ್ರೇಯರ್'ನಲ್ಲಿ ಇದೆ ಎಂದು ಚರ್ಚ್ ಗುರು ರೆ ವಿನ್ಫ್ರೆಡ್ ಅಮ್ಮನ್ನ ಅಭಿಪ್ರಾಯಪಡುತ್ತಾರೆ.
ಘಂಟೆಗಳ ಮೇಲೆ ಒದಗಿಸಿರುವ ಮಾಹಿತಿಯಂತೆ ಅವು, Geg. V. Bochumer Verein Iರಿಂದ Bochumನಲ್ಲಿ 1922ರಲ್ಲಿ ತಯಾರಾಗಿವೆ. ಕಾಂತಿ ಚರ್ಚನ್ನು 1883ರಲ್ಲಿ ನಿರ್ಮಿಸಲಾಯಿತು. ಇದಕ್ಕೆ Albert Glatfelder ಎಂಬ ತಂತ್ರಜ್ಞನ ಮೇಲ್ವಿಚಾರಣೆಯಲ್ಲಿ 1925ರಲ್ಲಿ ಘಂಟೆ ಗೋಫುರವನ್ನು ನಿರ್ಮಿಸಲಾಯಿತು. ಬಾಸೆಲ್ ಮಿಶನ್ನ ಇತರ ಯೋಜನೆಗಳಾದ ಮಲ್ಪೆ ಹಾಗೂ ಜೆಪ್ಪುವಿನ ಹೆಂಚಿನ ಕಾಖರ್ಾನೆಗಳಿಗೂ ಗ್ಲಾಟ್ಫೆಡ್ಲರ್ನೇ ವ್ಯವಸ್ಥಾಪಕನಾಗಿದ್ದ. 1977ರಲ್ಲಿ ಎರಗಿದ ಒಂದು ಸಿಡಿಲಿನ ಆಘಾತಕ್ಕೆ ಗೋಪುರವು ತೀವ್ರ ಹಾನಿಗೀಡಾಗಿತ್ತು. ಆದರೆ ಈ ಘಂಟೆಗಳಿಗೆ ಏನೂ ಆಗಲಿಲ್ಲ. ಒಂದು ಸಣ್ಣ ಸೀಳೂ ಕಾಣಿಸಿಕೊಳ್ಳಲಿಲ್ಲ, ಎನ್ನುತ್ತಾರೆ ಕೆಟಿಸಿ ಪತ್ರಾಗಾರದ ಉಸ್ತುವಾರಿ ಹೊತ್ತಿರುವ ಬೆನೆಟ್ ಅಮ್ಮನ್ನ.
ದೈತ್ಯಾಕಾರದ ಪ್ರತ್ಯೇಕ-ಪ್ರತ್ಯೇಕ ಅಚ್ಚು ತಯಾರಿಸಿ ಅದರೊಳಗೆ ಕನ್ನಡದ ಉಬ್ಬು ಅಕ್ಷರಗಳನ್ನು ಕೆತ್ತಿಸಿ ಪಂಚಲೋಹದ ಎರಕ ಹೊಯ್ದು ಶತಮಾನದ ಹಿಂದೆಯೇ ಘಂಟೆಗಳನ್ನು ತಯಾರಿಸಿರಬೇಕೆಂದರೆ ಅದೆಂತಹ ಸಾಹಸವಾಗಿರಬೇಕು! ಸ್ವಿಟ್ಜರ್ಲೆಂಡಿನಲ್ಲಿ ಈ ಕೆಲಸ ನಡೆದಿದೆಯೆಂದರೆ ಮಂಗಳೂರಿನಿಂದ ಯಾರಾದರೂ ಪರಿಣಿತ ಕೆಲಸಗಾರರನ್ನು ಅಲ್ಲಿಗೆ ಕರೆದೊಯ್ದಿರಬೇಕು ಅಥವಾ ಕನ್ನಡದ ವಾಕ್ಯಗಳ ಅಚ್ಚುಗಳನ್ನು ಇಲ್ಲೇ ತಯಾರಿಸಿ ಕೊಂಡೊಯ್ದು ಅಲ್ಲಿನ ಕೆಲಸಗಾರರಿಂದ ಮಾಡಿಸಿರಬೇಕು... ಅಷ್ಟು ಭಾರದ ಘಂಟೆಗಳನ್ನು ಸ್ವಿಟ್ಜರ್ಲ್ಯಾಂಡಿನಿಂದ ಇಲ್ಲಿಗೆ ತಂದು ಅಷ್ಟೆತ್ತರದ ಗೋಪುರದ ತುದಿಯಲ್ಲಿ ಆ ಕಾಲಕ್ಕೇ ನಿಲ್ಲಿಸಿದ್ದಾರೆಂದರೆ ಆವಾಗ ಬಳಸಿದ ತಂತ್ರಜ್ಞಾನ ಎಂತಹದೋ! ಎಂದು ಅಚ್ಚರಿಪಡುತ್ತಾರೆ ಅಮ್ಮನ್ನ.
ಏನೇ ಇರಲಿ, ಘಂಟೆಗಳ ಮೇಲಿರುವ ಕನ್ನಡ ವಾಕ್ಯಗಳು ಸ್ಥಳೀಯ ಭಾಷೆಯ ಮಹತ್ವವನ್ನು ಮಿಶನರಿಗಳು ಎಷ್ಟು ಚೆನ್ನಾಗಿ ಅರಿತಿದ್ದರೆಂಬುದನ್ನು ತೋರಿಸುತ್ತವೆ. ಇಲ್ಲವಾದರೆ ಬೈಬಲ್ನ ಹೇಳಿಕೆಗಳನ್ನು ಇಂಗ್ಲಿಷ್ನಲ್ಲೋ ಇನ್ಯಾವುದೋ ಭಾಷೆಯಲ್ಲೋ ನೀಡಬಹುದಿತ್ತು, ಕನ್ನಡವೇ ಆಗಬೇಕಿರಲಿಲ್ಲ. ಮಿಶನರಿಗಳು 1836ರಲ್ಲಿ ಕನ್ನಡದಲ್ಲಿ ಹಾಗೂ 1851ರಲ್ಲಿ ತುಳು ಭಾಷೆಯಲ್ಲಿ ಪ್ರಾರ್ಥನೆ ನಡೆಸುವ ಸಂಪ್ರದಾಯವನ್ನು ಆರಂಭಿಸಿದರೆಂಬುದನ್ನು ಇಲ್ಲಿ ಸ್ಮರಿಸಬಹುದು.
ಕುತೂಹಲಕರ ಸಂಗತಿಯೆಂದರೆ, ಕರಾವಳಿಯ ಮೊತ್ತಮೊದಲ ಮುದ್ರಣಾಲಯವಾದ ಮಂಗಳೂರು ಬಾಸೆಲ್ ಮಿಶನ್ ಪ್ರೆಸ್ನಿಂದ (1841) ಹೊರಬಂದ ಮೊತ್ತ ಮೊದಲ ಪುಸ್ತಕವೆಂದರೆ 'ತುಳು ಕೀರ್ತನೆಗಳು' ಎಂಬ ಶೀಷರ್ಿಕೆಯ ಕ್ರಿಸ್ತನ ಸ್ತುತಿ ಪದ್ಯಗಳು. ಬಾಸೆಲ್ ಮಿಶನ್ ಮುದ್ರಣಾಲಯವು ಕನ್ನಡ, ಮಲಯಾಳಂ, ತೆಲುಗು, ತಮಿಳು, ಇಂಗ್ಲಿಷ್, ಸಂಸ್ಕೃತ ಹಾಗೂ ಜರ್ಮನ್ ಬಾಷೆಗಳಲ್ಲೂ ಅನೇಕ ಪುಸ್ತಕಗಳನ್ನು ಮುದ್ರಿಸಿತು. ಕನ್ನಡದ ಮೊತ್ತಮೊದಲ ಪತ್ರಿಕೆ ರೆ ಹರ್ಮನ್ ಮೊಗ್ಲಿಂಗ್ರ 'ಮಂಗಳೂರ ಸಮಾಚಾರ', ರೆ ಫಡರ್ಿನೆಂಡ್ ಕಿಟೆಲ್ರ ಕನ್ನಡ-ಇಂಗ್ಲಿಷ್ ಶಬ್ದಕೋಶಗಳೆಲ್ಲ ಈ ಮುದ್ರಣಾಲದಲ್ಲೇ ಮುದ್ರಿಸಲ್ಪಟ್ಟವು. ಜೈಮಿನಿ ಭಾರತ, ದಶಪರ್ವ ಭಾರತ, ಬಸವ ಪುರಾಣ, ದಾಸರ ಪದಗಳು ಮುಂತಾದ ಅನೇಕ ಮಹತ್ವದ ಕೃತಿಗಳನ್ನು ಮಿಶನರಿಗಳು ಮುದ್ರಿಸಿ ಕನ್ನಡಿಗರಿಗೆ ದೊರಕಿಸಿಕೊಟ್ಟವು

ಭಾನುವಾರ, ಮೇ 8, 2011

ಕೊನೆಗೂ ಅಪ್ಪ ಮನೆಗೆ ಬಂದಿದ್ದಾರೆ...

ಹೌದು, ಅಪ್ಪನ ಬರೋಬ್ಬರಿ ಐದು ತಿಂಗಳ ಒಂಟಿ ಒಬ್ಬಂಟಿ ವನವಾಸ ಇವತ್ತಿಗೆ ಮುಗಿದಿದೆ. ’ಪುರದ ಪುಣ್ಯಂ ಪುರುಷ ರೂಪಿಂದೆ’ ಆಗಮಿಸಿದೆ. ಎರಡು ವರ್ಷದ ಹಿಂದೆ ಬಹುವಾಗಿ ಕಾಡಿದ ನೇಗಿಲಯೋಗಿ ನನಗೇ ಗೊತ್ತಿಲ್ಲದ ಹಾಗೆ ಇಂದು ಯಾಕೋ ಮತ್ತೆಮತ್ತೆ ಕಾಡುತ್ತಿದ್ದಾನೆ.

ಅರರೆ, ಬದುಕು ಎಷ್ಟೊಂದು ಬದಲಾಗಿ ಹೋಯಿತು... ಎಲ್ಲಿಯ ಸಿಬಂತಿ, ಎಲ್ಲಿಯ ಮಂಗಳೂರು, ಎಲ್ಲಿಯ ತುಮಕೂರು... ಇದೆಲ್ಲ ಒಂದು ಸಿನಿಮಾದಂತೆ ಇದೆಯಲ್ಲ ಎನಿಸುತ್ತಿದೆ. ರಾಜಧಾನಿಯ ಮಣೇಕ್ ಷಾ ಪೆರೇಡ್ ಮೈದಾನದಲ್ಲಿ ಡಾ. ಅಶ್ವಥ್ ನೂರಾರು ಸಹಗಾಯಕರೊಂದಿಗೆ ’ಉಳುವಾ ಯೋಗಿಯ ನೋಡಲ್ಲಿ...’ ಎಂದು ಉಚ್ಛಸ್ಥಾಯಿಯಲ್ಲಿ ಹಾಡುತ್ತಿದ್ದರೆ, ನನಗೆ ಮಾತ್ರ ಕಾಡಿನ ನಡುವೆ ಉಳುಮೆ ನಡೆಸುತ್ತಿದ್ದ ಅಪ್ಪನ ನೆನಪು ಒತ್ತೊತ್ತಿ ಬರುತ್ತಿತ್ತು. ಅವರನ್ನು ಹೇಗಾದರೂ ನಾನಿರುವೆಡೆ ಕರೆತಂದು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮನಸ್ಸು ಬಿಡದೆ ಹಂಬಲಿಸುತ್ತಿತ್ತು. ಆದರೆ ಅದಾಗಿ ವರ್ಷ ಕಳೆಯುವುದರೊಳಗಾಗಿ ನನ್ನ ಬದುಕಿನ ಮಾರ್ಗವೇ ಬದಲಾಗಬಹುದು ಎಂದು ಮಾತ್ರ ಅನಿಸಿರಲೇ ಇಲ್ಲ.

ಜಾಗದ ತಗಾದೆ ಇನ್ನು ಮುಂದುವರಿಸೋದು ಬೇಡ; ಬರಿದೇ ವರ್ಷಾನುಗಟ್ಟಲೆ ಕೋರ್ಟು-ಕಚೇರಿಯ ಅಲೆದಾಟ ಯಾಕೆ? ನಮಗೆ ಸಲ್ಲುವ ಋಣವಿರೋದು ಸಂದೇ ಸಲ್ಲುತ್ತದೆ. ಇಲ್ಲಿ ಅಲ್ಲದಿದ್ದರೆ ಇನ್ನೊಂದು ಕಡೆ. ಆ ಬಗ್ಗೆ ಚಿಂತೆ ಬೇಡವೇ ಬೇಡ. ಮಾತುಕತೆಯಲ್ಲಿ ಹೇಗಾದರೂ ಈ ತಕರಾರು ಮುಗಿಸುವ ಆಗದಾ? - ಆ ರೀತಿ ಅಪ್ಪನನ್ನು ಕೇಳುವುದಕ್ಕೆ ನನಗೆ ಯಾವ ಅರ್ಹತೆಯೂ ಇರಲಿಲ್ಲ. ಆದರೆ ನಾನು ಹಾಗೆ ಕೇಳಿದ್ದೆ. ತಾನು ನಾಕು ದಶಕ ಬೆವರು ಬಸಿದು ದುಡಿದ ಭೂಮಿ ತನ್ನ ಕಣ್ಣೆದುರೇ ಅನ್ಯಾಯವಾಗಿ ಬೇರೆಯವರ ಪಾಲಾಗುತ್ತಿದೆ ಎಂದುಕೊಂಡಾಗ ಯಾವ ಶ್ರಮಜೀವಿಗೂ ಸಂಕಟವಾಗದೆ ಇರಲಾರದು. ಆದರೆ ನನ್ನ ಮಾತಿಗೆ ಅಪ್ಪ ಒಪ್ಪಿಬಿಟ್ಟರು. ಅಮ್ಮ ತಲೆಯಾಡಿಸಿದರು.

ಕೊಂಚ ನಿಧಾನವಾಗಿಯೇ ಆದರೂ ನನ್ನ ಯೋಜನೆಯಂತೆ ಕೆಲಸ ಆಯಿತು. ತಗಾದೆ ಮುಗಿಯಿತು. ಮನೆಗೆ ಅಗಲ ರಸ್ತೆ ಬಂತು. ಚಿಮಿಣಿ ಎಣ್ಣೆ ದೀಪದ ಹೊಗೆಯಿಂದ ಕಪ್ಪಿಟ್ಟಿದ್ದ ಮನೆಯಲ್ಲಿ ಮೊದಲ ಬಾರಿಗೆ ಕರೆಂಟು ಲೈಟು ಉರಿಯಿತು. ಅದಾಗಲೇ ಮಂಗಳೂರು ಬಿಡುವ ಯೋಚನೆ ನಾನು ಮಾಡಿಯಾಗಿತ್ತು. ಮನೆಯಲ್ಲೇ ಇದ್ದುಕೊಂಡು ಅಲ್ಲೆಲ್ಲಾದರೂ ಪಾಠ ಮಾಡುತ್ತಾ ತೋಟದ ನಡುವೆಯೇ ಬದುಕು ಕಟ್ಟುವ ಮಾನಸಿಕ ತಯಾರಿಯನ್ನು ನಾನೂ-ಆರತಿಯೂ ನಡೆಸಿಯಾಗಿತ್ತು. ಮಕ್ಕಳು ಖಾಯಂ ಆಗೇ ಊರಿಗೆ ಬಂದುಬಿಡುತ್ತಿದ್ದಾರೆ ಎಂಬ ಸಂಭ್ರಮ ಅಪ್ಪ-ಅಮ್ಮನ ಮುಖಮನಸ್ಸುಗಳಲ್ಲಿ ಎದ್ದು ಕುಣಿಯುತ್ತಿತ್ತು. ಆ ಸಂಭ್ರಮ ಅಷ್ಟಕ್ಕೇ ನಿಲ್ಲದೆ ಒಂದೆರಡು ದಿನಗಳಲ್ಲೇ ಊರೆಲ್ಲ ಹರಡಿಬಿಟ್ಟಿತ್ತು.


ಈ ನಡುವೆ ಅದೇನಾಯ್ತೋ, ನಾನು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಗುಜರಾಯಿಸಿಬಿಟ್ಟಿದ್ದೆ. ಅದರ ಬೆನ್ನಿಗೇ ಚಿಕನ್‌ಪಾಕ್ಸ್ ಬಂದು ಎರಡು-ಮೂರು ವಾರ ಏನೂ ಮಾಡಲಾಗದೆ ಸಿಬಂತಿಯಲ್ಲಿ ಮಲಗಿದ್ದೆ. ಇನ್ನೇನು ಪೂರ್ತಿ ಚೇತರಿಸಿಕೊಳ್ಳುವ ಮುನ್ನ ಸಂದರ್ಶನ ಪತ್ರ ಕೈಸೇರಿತ್ತು. ಚಿಕನ್‌ಪಾಕ್ಸ್‌ನ ಕಲೆಗಳಿಂದ ತುಂಬಿದ ವಿಕಾರ ಮುಖ ಹೊತ್ತುಕೊಂಡೇ ನಾನು ತಜ್ಞರ ಸಮಿತಿಯೆದುರು ಕುಗ್ಗಿಕುಳಿತಿದ್ದೆ. ಅದರ ಮಾರನೆ ದಿನ ನಾನು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದೆ... ಅಂದಹಾಗೆ ಇದೆಲ್ಲಾ ಆಗಿ ಇವತ್ತಿಗೆ (ಮೇ ೯) ಸರಿಯಾಗಿ ಒಂದು ವರ್ಷ ಆಯಿತು. ಎಲ್ಲವೂ ಒಂದು ಸಿನಿಮಾದಂತೆಯೇ ಭಾಸವಾಗುತ್ತಿದೆ. ಆದರೆ ನಾವಂದುಕೊಳ್ಳುವುದೇ ಒಂದು, ಆಗುವುದೇ ಮತ್ತೊಂದು ಎಂಬುದು ಸಿನಿಮಾದಲ್ಲಷ್ಟೇ ನಡೆಯುವುದಿಲ್ಲವಲ್ಲ!


ತುಮಕೂರಿಗೆ ಬಂದಾಯಿತು. ಈಗ ನಾನು ಮೊದಲಿಗಿಂತಲೂ ಹೆಚ್ಚು ದೂರಕ್ಕೆ ಬಂದುಬಿಟ್ಟಿದ್ದೆ. ಅಪ್ಪ-ಅಮ್ಮನ ಕಳವಳ, ನನ್ನ ಸಂಕಟ ಹೆಚ್ಚೇ ಆಯಿತು. ಅವರನ್ನು ಇಲ್ಲಿಗೆ ಕರೆತರುವ ಅವಶ್ಯಕತೆಯೂ ದಿನೇದಿನೇ ಹೆಚ್ಚಾಗುತ್ತಿತ್ತು. ಶೂನ್ಯದಿಂದ ಸೃಷ್ಟಿಸಿದ ಬಂಗಾರದಂಥಾ ಆ ಭೂಮಿಯನ್ನು ಮಾರುವುದು ನಮಗ್ಯಾರಿಗೂ ರುಚಿಸದ ಸಂಗತಿಯೇ ಆಗಿದ್ದರೂ, ಆಮೇಲಾಮೇಲೆ ಅದು ಅನಿವಾರ್ಯ ಎನಿಸತೊಡಗಿತು. ಅನಾರೋಗ್ಯ - ಅಭದ್ರತೆಗಳಿಂದ ಅಪ್ಪ-ಅಮ್ಮ ಕುಸಿಯುತ್ತಿದ್ದುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.


ಆದರೆ ಜಾಗ ಮಾರುವುಡು ಅಷ್ಟು ಸುಲಭದ ಮಾತಾಗಿರಲಿಲ್ಲ. ಕಾನೂನು ಪ್ರಕಾರ ಅದನ್ನು ಮಾರಬೇಕಾದರೆ ಇನ್ನೂ ನಾಕೈದು ವರ್ಷ ಕಾಯಬೇಕಿತ್ತು. ಅಷ್ಟು ಕಾಯುವ ಸ್ಥಿತಿಯಲ್ಲಿ ನಾವಿರಲಿಲ್ಲ. ಇದೇ ಯೋಚನೆಯಲ್ಲಿರಬೇಕಾದರೇ ಮತ್ತೊಂದು ಆಘಾತ ಕಾದಿತ್ತು. ಅಮ್ಮಂಗೆ ಕೈಕಾಲು ಬತ್ತಿಲ್ಲೆ... ಮಧ್ಯರಾತ್ರಿ ಒಂದು ಗಂಟೆಗೆ ಅಪ್ಪನ ಫೋನು. ನಾನೇನು ಆಗಬಾರದು ಅಂದುಕೊಂಡಿದ್ದೆನೋ ಅದು ಆಗಿ ಹೋಗಿತ್ತು. ಅಮ್ಮನಿಗೆ ಮೈಲ್ಡ್ ಹ್ಯಾಮರೇಜ್ ಆಗಿತ್ತು. ಎಡಭಾಗದ ಕೈ-ಕಾಲು ಶಕ್ತಿ ಕಳೆದುಕೊಂಡಿದ್ದವು. ದಾಲಾಟ ಭಾವ ಅದೇ ಅಪರಾತ್ರಿಯಲ್ಲಿ ಮನೆಗೆ ಧಾವಿಸಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾದ. ನಾನು ಇನ್ನೂರೈವತ್ತು ಕಿ.ಮೀ. ದೂರದಲ್ಲಿದ್ದೆ.


ಇಪ್ಪತ್ತು ದಿನ ಅಸ್ಪತ್ರೆ ಹಾಸಿಗೆಗೆ ಅಂಟಿಕೊಂಡಿದ್ದ ಅಮ್ಮನನ್ನು ಮತ್ತೆ ಸಿಬಂತಿಗೆ ಕರೆದೊಯ್ಯದೇ ತುಮಕೂರಿಗೇ ಕರಕೊಂಡು ಬಂದೆ. ಮತ್ತೆ ಅಪ್ಪ ಒಬ್ಬಂಟಿಯಾದರು ಅಲ್ಲಿ. ಜಾಗ ಮಾರಲೇಬೇಕಾದ ಅನಿವಾರ್ಯತೆ ಈಗ ಮತ್ತೆ ಬೆಂಬಿಡದೆ ಕಾಡಿತು. ಛೇ, ಜಾಗ ಮಾರ್ತೀಯಾ? ಹುಡುಗಾಟಾನಾ? ಈಗ ಮಾರಿದ್ರೆ ಅಂಥಾ ಜಾಗ ಮತ್ತೊಮ್ಮೆ ಸಿಗುತ್ತಾ? ಹತ್ತಾರು ಜನ ಎಚ್ಚರಿಸಿದರು. ಬೇರೆ ಏನಾದ್ರೂ ವ್ಯವಸ್ಥೆ ಮಾಡಪ್ಪ, ಆದ್ರೆ ಜಾಗ ಮಾರ್ಬೇಡ... ನೋಡಿಕೊಳ್ಳುವುದಕ್ಕೆ ಜನ ಮಾಡು... ಲೀಸ್‌ಗೆ ಕೊಡು... ಹೀಗೆ ನೂರಾರು ಸಲಹೆಗಳ ಮಹಾಪೂರ. ಆದರೆ ಯಾವುದೂ ಪ್ರಾಯೋಗಿಕವಾಗಿರಲಿಲ್ಲ.


ಕೆಲಸಕ್ಕೆ ಜನ ಇಲ್ಲ. ಅಪ್ಪನ ಜೊತೆ ಸಂಗಾತಕ್ಕೆ ಅಂತ ಬಂದವರೂ ವಾರದಿಂದ ಹೆಚ್ಚು ನಿಲ್ಲಲಿಲ್ಲ. ತೋಟದ ಕೆಲಸ ಮಾಡಲೂ ಆಗದೆ, ಮಾಡದೆ ಇರಲೂ ಆಗದೆ ಎಂಬತ್ತೆರಡು ವರ್ಷದ ಅಪ್ಪ ದೈಹಿಕವಾಗಿ ದಿನದಿಂದ ದಿನಕ್ಕೆ ಸೋಲುತ್ತಿದ್ದರು. ವಾಯಿದೆ ಆಗದಿದ್ದರೂ ಏನಾದರೂ ಮಾಡಿ ಜಾಗ ಕೊಟ್ಟುಬಿಡೋದು ಅಂತ ಎಂದೋ ತೀರ್ಮಾನಿಸಿಯಾಗಿತ್ತು, ಆದರೆ ಆ ಗೊಂಡಾರಣ್ಯಕ್ಕೆ ತಕ್ಕಮಟ್ಟಿನ ಗಿರಾಕಿಯೂ ಬರದೆ ಹೈರಾಣಾದೆವು. ನಲ್ವತ್ತು ವರ್ಷ ಒಂದು ಹೊಲಕ್ಕೆ ಹಗಲಿರುಳೆನ್ನದೆ ದುಡಿದ ವ್ಯಕ್ತಿ ಅದನ್ನು ತೀರಾ ಕ್ಷುಲ್ಲಕ ಮೌಲ್ಯಕ್ಕೆ ಮಾರಿಯಾನೇ? ಅದಕ್ಕೆ ಅಪ್ಪನ ಸ್ವಾಭಿಮಾನ, ಆತ್ಮವಿಶ್ವಾಸ ಎಡೆಮಾಡಿಕೊಡದು. ಆದರೆ ಅಂಥಾ ಅಪ್ಪನೇ ಒಂದು ದಿನ ಬೆಳ್ಳಂಬೆಳಗ್ಗೆ ಪೋನು ಮಾಡಿ, ’ಮಾರಿಬಿಡುವಾ ಅತ್ಲಾಗಿ... ಇನ್ನೆನಗೆ ಧೈರ್ಯ ಇಲ್ಲೆ...’ ಎಂದಾಗ ನಾನು ಮತ್ತೆ ಯೋಚನೆ ಮಾಡುವ ಶೇ. ೧ ಪಾಲೂ ಉಳಿದಿರಲಿಲ್ಲ. ಎಷ್ಟು ಕಮ್ಮಿಗಾದರೂ ಸರಿ, ಹೆಚ್ಚು ದಿನ ತಳ್ಳದೆ ಕೊಟ್ಟುಬಿಡಬೇಕು ಅಂತ ಶಪಥ ಮಾಡಿಬಿಟ್ಟೆ.
ಎಲ್ಲ ಮುಗಿಯದಿದ್ದರೂ ಮುಗಿಯಬೇಕಾದಷ್ಟು ಮುಗಿಯಿತು ಈಗ. ಇವತ್ತು ಅಪ್ಪ ಮನೆಗೆ ಬಂದಿದ್ದಾರೆ - ಒಂದು ತಂಗೀಸು ಚೀಲ, ಮತ್ತೊಂದು ಊರುಗೋಲು ಹಾಗೂ ಹಿಮಾಲಯದಷ್ಟು ಸಂತೋಷದ ಸಮೇತ.

ಗುರುವಾರ, ಮೇ 5, 2011

ಮಾಧ್ಯಮಗಳಿಗೆ ಈ ಯುದ್ಧೋನ್ಮಾದದ ಭಾಷೆ ಅನಿವಾರ್ಯವೇ?

[ವಿಷಯ ಸ್ವಲ್ಪ ಹಳತಾಯಿತೇನೋ? ಪ್ರಜಾವಾಣಿಗೆ ಕಳಿಸಿದ್ದೆ. ಪ್ರಕಟವಾಗುತ್ತದೋ ಅಂತ ಕಾಯ್ತಿದ್ದೆ. ಏಪ್ರಿಲ್ ೧೧, ೨೦೧೧ರಂದು ಕಳಿಸಿದ್ದು ’ಸಂಗತ’ ಅಂಕಣಕ್ಕಾಗಿ. ಬಹುಶಃ ಇನ್ನು ಪ್ರಕಟವಾಗಲಾರದು ಅಂದುಕೊಂಡು, ಈಗ ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ.]

ಕ್ರಿಕೆಟ್‌ಗೆ ಮಾಧ್ಯಮಗಳು ಇಷ್ಟೊಂದು ಮಹತ್ವ ಕೊಡಬೇಕೇ ಎಂಬ ವಿಷಯ ಆಗಿಂದಾಗ್ಗೆ ಚರ್ಚೆಯಾಗುವುದಿದೆ. ಇತ್ತೀಚೆಗಷ್ಟೇ ಮುಗಿದ ವಿಶ್ವಕಪ್‌ನ ಸಂದರ್ಭದಲ್ಲೂ ಈ ಕುರಿತ ಅನೇಕ ಪ್ರಶ್ನೆಗಳು ಚರ್ಚೆಗೆ ಬಂದವು; ಸಾಕಷ್ಟು ಸಮರ್ಥನೆಗಳೂ ಮಂಡನೆಯಾದವು. ಈ ವಾದ-ಪ್ರತಿವಾದಗಳು ಹೊಸತೇನಲ್ಲ. ಆದರೆ, ಈ ಹಿಂದಿನ ಎಲ್ಲ ಸನ್ನಿವೇಶಗಳಿಗಿಂತಲೂ ಈ ಬಾರಿ ಹೆಚ್ಚು ಗಮನ ಸೆಳೆದ ಸಂಗತಿಯೆಂದರೆ ಕ್ರಿಕೆಟ್ ವರದಿಯ ಸಂದರ್ಭದಲ್ಲಿ ಮಾಧ್ಯಮಗಳು ಬಳಸಿದ ಭಾಷೆ.

ಭಾರತ-ಪಾಕಿಸ್ತಾನದ ನಡುವೆ ಪಂದ್ಯ ಇದ್ದಾಗಲೆಲ್ಲ ಎರಡೂ ರಾಷ್ಟ್ರಗಳನ್ನು ಪರಸ್ಪರ ’ಸಾಂಪ್ರದಾಯಿಕ ಎದುರಾಳಿಗಳು’ ಎಂಬ ಒಕ್ಕಣೆಯಿಂದ ವಿವರಿಸುವುದು ಪತ್ರಿಕೆಗಳಲ್ಲಿ ಸಾಮಾನ್ಯ. ’ಕ್ರೀಡೆಯಲ್ಲೂ ದ್ವೇಷದ ಛಾಯೆ ತರಬೇಕೆ? ಪಂದ್ಯ ಆಡುವವರು-ನೋಡುವವರೆಲ್ಲ ಆ ಭಾವನೆಯನೆಯೊಳಗೇ ಬೇಯಬೇಕೆ?’ ಎಂಬ ಪ್ರಶ್ನೆಯೂ ಅಷ್ಟೇ ಸಾಮಾನ್ಯ. ಆದರೆ ವರ್ಷಾನುಗಟ್ಟಲೆ ಬಳಸಿದರೂ ಆ ನುಡಿಗಟ್ಟು ಪತ್ರಿಕೆಗಳಿಗೋ, ಟಿವಿ ಚಾನೆಲ್‌ಗಳಿಗೋ ಸವಕಲು ಎನಿಸಿಲ್ಲ. ಮೊನ್ನೆಯ ವಿಶ್ವಕಪ್‌ನ ಸಂದರ್ಭದಲ್ಲಂತೂ ಮಾಧ್ಯಮಗಳು ಹೊಸಹೊಸ ಹೋಲಿಕೆಗಳ, ವರ್ಣನೆಗಳ, ಪದಗುಚ್ಛಗಳ ಬಳಕೆಗೆ ಶಕ್ತಿಮೀರಿ ಪ್ರಯತ್ನಿಸಿದ್ದನ್ನು ಕಾಣಬಹುದು.

ಬಗ್ಗುಬಡಿ, ಚಚ್ಚಿಹಾಕು ಇತ್ಯಾದಿ ಹತ್ತಾರು ಪದಗಳು ವಿಶ್ವಕಪ್‌ನುದ್ದಕ್ಕೂ ಮಾಧ್ಯಮಗಳಲ್ಲಿ ಮಿಂಚಿದವು. ಭಾರತ-ಪಾಕ್ ನಡುವಿನ ಸೆಮಿಫೈನಲ್ ಹಾಗೂ ಭಾರತ-ಶ್ರೀಲಂಕಾ ನಡುವಿನ ಫೈನಲ್ ಪಂದ್ಯಗಳಲ್ಲಂತೂ ಈ ಯುದ್ಧೋನ್ಮಾದವೇ ವರದಿ-ತಲೆಬರಹಗಳ ತುಂಬೆಲ್ಲ ಎದ್ದುಕುಣಿದಾಡುತ್ತಿತ್ತು. ಭಾರತ-ಪಾಕ್ ಪಂದ್ಯವನ್ನು ’ಮೊಹಾಲಿ ಮಹಾಯುದ್ಧ’, ’ಮಹಾಸಮರ’, ’ಪಾಕಿಸ್ತಾನವೆಂಬ ಪರಮವೈರಿ’ ಎಂಬಿತ್ಯಾದಿ ಪದಗಳಿಂದ ವರ್ಣಿಸಲಾಯಿತು. ಒಂದು ಪತ್ರಿಕೆಯಂತೂ ’ಮಾರ್ಚ್ ೩೦: ಇಂಡೋ-ಪಾಕ್ ಯುದ್ಧ’ ಎಂದೇ ತಲೆಬರಹ ನೀಡಿ ಓದುಗರನ್ನು ಬೆಚ್ಚಿಬೀಳಿಸಿತು.

ಪಂದ್ಯದ ನಂತರದ ಒಂದು ವರದಿಯಲ್ಲಿ ಭಾರತದ ಆಟಗಾರರು ’ಪಾಕಿಗಳ ಹುಟ್ಟಡಗಿಸಿದರು’ ಎಂದು ಬರೆದರೆ, ಇನ್ನೊಂದು ಪತ್ರಿಕೆ ’ಪಾಕ್ ಪೌರುಷ ನುಚ್ಚುನೂರು’ ಎಂದೂ, ಮತ್ತೊಂದು ಪತ್ರಿಕೆ ’ಪಾಕ್ ಗಡಿಪಾರು’ ಎಂದೂ ಬರೆಯಿತು. ’ದೋನಿ ದೈತ್ಯಸಂಹಾರಿಯಾಗಿ ಹೊರಹೊಮ್ಮಿದ್ದಾರೆ’ ಎಂಬ ಉಪಮೆಯೂ ಬಂತು. ಭಾರತ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದಂತೆ ಭಾರತದ ಆಟಗಾರರು ಕ್ರಿಕೆಟ್ ಕಾರ್ಗಿಲ್‌ನಲ್ಲಿ ಆಫ್ರಿದಿ ಸೈನ್ಯಕ್ಕೆ ತಮ್ಮ ದೇಶದ ದಾರಿ ತೋರಿಸಿದರು ಎಂಬ ಹೋಲಿಕೆ ಇನ್ನೊಂದು ಪತ್ರಿಕೆಯಲ್ಲಿತ್ತು. ಭಾರತ-ಪಾಕಿಸ್ತಾನದ ನಡುವೆ ಗಡಿವಿವಾದ, ರಾಜಕೀಯ ವೈಷಮ್ಯ ಎಲ್ಲ ಇದ್ದದ್ದೇ, ಆದರೆ ಕ್ರಿಕೆಟ್ ವರದಿಗೂ ಅದನ್ನೆಲ್ಲ ಅಂಟಿಸಿಕೊಳ್ಳಬೇಕೆ? ಇದೆಂತಹ ಕ್ರೀಡಾಸ್ಫೂರ್ತಿ?

ಭಾರತ-ಶ್ರೀಲಂಕಾ ನಡುವಿನ ಫೈನಲ್ ಪಂದ್ಯದ ಕುರಿತಾದ ವರದಿಗಳೂ ಈ ರಣೋತ್ಸಾಹದಿಂದ ಹೊರತಾಗಿರಲಿಲ್ಲ. ಅನೇಕ ಪತ್ರಿಕೆಗಳು, ಚಾನೆಲ್‌ಗಳು ಇದನ್ನೊಂದು ರಾಮಾಯಣದ ಯುದ್ಧವೆಂಬ ಹಾಗೆ ಚಿತ್ರಿಸಿದವು. ’ಮುಂಬೈಯಲ್ಲಿ ರಾಮಾಯಣ’ ಎಂಬುದು ಒಂದು ಪತ್ರಿಕೆಯ ಶೀರ್ಷಿಕೆಯಾದರೆ, ’ರಾಮ-ರಾವಣ ಕಾಳಗ’ ಎಂಬುದು ಇನ್ನೊಂದರ ತಲೆಬರಹ. ’ನಾಳೆ ಲಂಕಾದಹನ’, ’ಲಂಕಾದಹನಕ್ಕೆ ಭಾರತ ಸಜ್ಜು’ ಎಂಬ ಶೀರ್ಷಿಕೆಗಳೂ ವಿಜೃಂಭಿಸಿದವು. ಇದು ಸಾಲದು ಎಂಬಂತೆ ಶನಿವಾರ ರಾಮ ಮತ್ತು ರಾವಣರ ನಡುವೆ ಮ್ಯಾಚ್ ನಡೆಯಲಿದೆ... ಈ ಬಾರಿಯೂ ರಾಮನೇ ರಾವಣನನ್ನು ಸೋಲಿಸಿ ಸೀತೆಯನ್ನು ಕರೆತರುತ್ತಾನೆ ಎಂಬಿತ್ಯಾದಿ ಎಸ್‌ಎಂಎಸ್‌ಗಳು ಮೊಬೈಲ್‌ಗಳಲ್ಲಿ ಹರಿದಾಡಿದವು. ವಿಶ್ವಕಪ್ ಫೈನಲ್ ಎಂದರೆ ನಿಸ್ಸಂಶಯವಾಗಿ ಅದೊಂದು ಮಹತ್ವದ ಘಟನೆ, ಭಾರತದ ಮಟ್ಟಿಗಂತೂ ಉಸಿರು ಬಿಗಿಹಿಡಿದು ಕಾಯುವಂತಹ ಸನ್ನಿವೇಶ; ಎಲ್ಲ ನಿಜ, ಆದರೆ ಅದನ್ನೊಂದು ವೈಷಮ್ಯದ, ಉನ್ಮಾದದ ಮಟ್ಟಕ್ಕೆ ಕೊಂಡೊಯ್ಯಬೇಕೆ? ರಾಮ-ರಾವಣರ ನಡುವಿನ ಯುದ್ಧದ ಪೌರಾಣಿಕ ಕಥಾನಕವನ್ನೂ ಎರಡು ದೇಶಗಳ ನಡುವಣ ಕ್ರೀಡಾ ಪಂದ್ಯವೊಂದನ್ನೂ ಈ ರೀತಿಯೆಲ್ಲ ತೂಗಿನೋಡುವ ಅವಶ್ಯಕತೆ ಇದೆಯೇ?

ಇದು ಯುದ್ಧವಲ್ಲ. ಇದೊಂದು ದೊಡ್ಡ ಕ್ರಿಕೆಟ್ ಪಂದ್ಯ. ಕ್ರಿಕೆಟ್ ಮೇಲಷ್ಟೇ ಮಾಧ್ಯಮಗಳು ವರದಿಗಳನ್ನು ನೀಡಬೇಕು, ಎಂಬ ಪಾಕ್ ತಂಡದ ನಾಯಕನ ವಿನಂತಿ, ಅದೇ ಅರ್ಥ ಬರುವ ಭಾರತದ ಆಟಗಾರರ ಹೇಳಿಕೆಗಳನ್ನು ನಾವು ಗಮನಿಸಬೇಕು. ಅದರಲ್ಲೂ ಪಾಕಿಸ್ತಾನವು ಪಂದ್ಯವನ್ನು ಸೋತ ಬಳಿಕ ಆ ದೇಶದ ಪತ್ರಿಕೆಗಳು ಅಭಿವ್ಯಕ್ತಿಸಿದ ಸಹಿಷ್ಣುತೆಯನ್ನಾದರೂ ನಾವು ತೆರೆದ ಕಣ್ಣುಗಳಿಂದ ನೋಡಬೇಕು. ಕ್ರಿಕೆಟ್‌ಗಾಗಿ ಜನರು ಹೇಗೆ ಒಂದಾಗಿದ್ದರು... ನಮ್ಮ ತಂಡದವರು ಧೈರ್ಯದಿಂದ ಹೋರಾಡಿ ಗೌರವಯುತವಾಗಿ ಸೋತರು. ರಾಜಕಾರಣಿಗಳು ಇದರಿಂದಲಾದರೂ ಪಾಠ ಕಲಿತು ಸಂಬಂಧ ಸುಧಾರಣೆಗೆ ಪ್ರಯತ್ನಿಸಬೇಕು, ಎಂದು ಅಲ್ಲಿನ ಒಂದು ಪತ್ರಿಕೆ ಬರೆಯಿತು.

ಇದುವರೆಗಿನ ಕಹಿಯನ್ನು ಕ್ರಿಕೆಟ್ ದೂರ ಮಾಡಿದೆ. ಇನ್ನೇನಿದ್ದರೂ ರಾಜಕಾರಣಿಗಳು ಪ್ರಯತ್ನ ಮುಂದುವರಿಸಬೇಕು. ಸಂಬಂಧದ ಕೊಂಡಿಗಳನ್ನು ಅವರೇ ಭದ್ರಗೊಳಿಸಬೇಕು. ...ಇದೇ ಸ್ಫೂರ್ತಿ ಹಾಗೂ ಒಗ್ಗಟ್ಟಿನಿಂದ ಜನ ಮುನ್ನುಗ್ಗುವಂತಹ ಯೋಜನೆಗಳನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು... ಎಂಬುದು ಅಲ್ಲಿನ ಮಾಧ್ಯಮಗಳ ಅಭಿಪ್ರಾಯ. ಒಂದು ಪತ್ರಿಕೆಯಂತೂ, ಎರಡು ದೇಶಗಳ ಮಾತುಕತೆ ಪುನರಾರಂಭಕ್ಕೆ ಇದು ಸಕಾಲ ಎಂಬಲ್ಲಿಯವರೆಗೆ ಯೋಚನೆ ಮಾಡಿತು. ಭಾರತ-ಪಾಕ್ ಸಮಸ್ಯೆಯನ್ನೂ ಕ್ರಿಕೆಟ್ ಪಂದ್ಯವನ್ನೂ ಒಂದೇ ತಕ್ಕಡಿಯಲ್ಲಿಟ್ಟು ನೋಡಲಾದೀತೇ? ಒಂದು ಕ್ರಿಕೆಟ್ ಪಂದ್ಯ ರಾಯಭಾರದ ವೇದಿಕೆಯಾದೀತೇ? ಹೇಳುವುದು ಕಷ್ಟ. ಆದರೆ ಅದನ್ನೊಂದು ಯುದ್ಧೋನ್ಮಾದದ ಕಣ್ಣಿನಿಂದ ನೋಡುವ ಬದಲು ಈ ರೀತಿ ಯೋಚಿಸುವುದು ಎಷ್ಟೋ ಮೇಲು ಎನಿಸುತ್ತದೆ.

’ಇಂಡೋ-ಪಾಕ್ ಯುದ್ಧ’ ’ಲಂಕಾದಹನ’ ’ಕ್ರಿಕೆಟ್ ಕಾರ್ಗಿಲ್’ ’ರಾಮ-ರಾವಣ ಕಾಳಗ’ ಇತ್ಯಾದಿ ಠೇಂಕಾರಗಳು ’ಸಂಬಂಧದ ಕೊಂಡಿಗಳನ್ನು ಭದ್ರಗೊಳಿಸಬೇಕು’ ಎಂಬಂತಹ ಸೂಚನೆಗಳ ಎದುರು ತೀರಾ ಕುಬ್ಜವಾಗಿ ತೋರುತ್ತವೆ. ಇಷ್ಟಕ್ಕೂ ಆ ಬಗೆಯ ಉಪಮೆಗಳನ್ನು ಮಾಧ್ಯಮಗಳು ಬಳಸಿದ ತಕ್ಷಣ ದೇಶಗಳೇನು ಕಾಳಗಕ್ಕೆ ಸಿದ್ಧವಾಗಿಬಿಡುತ್ತವೆಯೇ ಎಂದು ಕೇಳಬಹುದು. ಅದು ಬೇರೆ ಪ್ರಶ್ನೆ. ಆದರೆ ಮಾಧ್ಯಮಗಳ ಸಾಮರ್ಥ್ಯವನ್ನು, ಜನಾಭಿಪ್ರಾಯ ರೂಪಿಸುವ ಅವುಗಳ ತಾಕತ್ತನ್ನು ಇತಿಹಾಸ ನೋಡಿದೆ. ಭಾಷೆಯೇ ಪತ್ರಿಕೆಗಳ ಶಕ್ತಿ. ಅದು ಜಲಾಶಯದಲ್ಲಿರುವ ವಿದ್ಯುತ್ತಿನ ಹಾಗೆ, ಪ್ರಚ್ಛನ್ನ. ದುರಂತ ಸಂಭವಿಸಬೇಕಾದರೆ ಕಾಳ್ಗಿಚ್ಚೇ ಬೇಕಾಗಿಲ್ಲ, ಒಂದು ಕಿಡಿಯೂ ಸಾಕು, ಅಲ್ಲವೇ?

ಭಾನುವಾರ, ಜನವರಿ 2, 2011

ಭಾರತಿ ಬರೆದಿದ್ದಾಳೆ

'ವಿಜಯ ಕರ್ನಾಟಕ' ದ ೨.೧.೨೦೧೧ರ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿರುವ ಸ್ನೇಹಿತೆ ಭಾರತಿಯ ಲೇಖನ ಯಾಕೋ ತುಂಬ ಹಿಡಿಸಿತು. ಬಿಡುವು ಮಾಡಿ ನೀವೂ ಒಮ್ಮೆ ಓದಿ. ಹೀಗೆ ಓ ದಲಾಗುತ್ತದೋ ಗೊತ್ತಿಲ್ಲ. ಆಗದಿದ್ದರೆ ಈ ಕೊಂಡಿ ಹಿಡಿದು ಸಾಗಿ.
http://www.vijaykarnatakaepaper.com//svww_zoomart.php?Artname=20110102l_002101001&ileft=760&itop=53&zoomRatio=130&AN=20110102l_002101001