ಗುರುವಾರ, ಮಾರ್ಚ್ 7, 2013

ಮಾರ್ಚ್ 9ರಂದು ಮಂಗಳೂರು ವಿ.ವಿ. ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ


ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ೯ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವು ಮಂಗಳೂರು ವಿ. ವಿ. ಸ್ನಾತಕೋತ್ತರ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಇದೇ ಮಾರ್ಚ್ 9ರಂದು ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ, ಮಂಗಳೂರು ಇಲ್ಲಿ ಜರುಗಲಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀ ಬೊಳುವಾರು ಮಹಮದ್ ಕುಂಞಿ ಸಮ್ಮೇಳನವನ್ನು ಬೆಳಗ್ಗೆ 9.30 ಗಂಟೆಗೆ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಕೆ. ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಆರ್. ಲಕ್ಷ್ಮೀನಾರಾಯಣ ಭಟ್ಟ ಶುಭಾಶಂಸನೆ ನೆರವೇರಿಸಲಿದ್ದಾರೆ.

ಸಮ್ಮೇಳನದಲ್ಲಿ ಪ್ರಬಂಧಗೋಷ್ಠಿ, ಕಥಾಗೋಷ್ಠಿ ಹಾಗೂ ಕವಿಗೋಷ್ಠಿ- ಒಟ್ಟು ಮೂರು ಗೋಷ್ಠಿಗಳು ನಡೆಯಲಿದ್ದು, ಪ್ರಬಂಧಗೋಷ್ಠಿಯ ಅಧ್ಯಕ್ಷತೆಯನ್ನು ಸುಳ್ಯದ ನಿವೃತ್ತ ಪ್ರಾಧ್ಯಾಪಕ, ಶಿಕ್ಷಣ ಚಿಂತಕ ಡಾ. ಚಂದ್ರಶೇಖರ ದಾಮ್ಲೆ ವಹಿಸಲಿದ್ದಾರೆ. ಬಹುಮಾನ ವಿಜೇತ ವಿದ್ಯಾರ್ಥಿ ಸಾಹಿತಿಗಳು 'ಜಾತಿಮುಕ್ತ ಭಾರತ: ಸವಾಲುಗಳು ಮತ್ತು ಸಾಧ್ಯತೆಗಳು’ ಹಾಗೂ 'ಮಹಿಳಾ ಸಬಲೀಕರಣ: ಆಗಿರುವುದೇನು? ಆಗಬೇಕಿರುವುದೇನು?’ ವಿಷಯಗಳ ಬಗ್ಗೆ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳಲಿದ್ದಾರೆ.
ಕಥಾಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿಗಳೂ, ಭಂಡಾರ್ಕಾರ್ಸ್ ಕಾಲೇಜು ಕುಂದಾಪುರ ಇಲ್ಲಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರೂ ಆದ ಡಾ. ಪಾರ್ವತಿ ಜಿ. ಐತಾಳ್ ವಹಿಸಿಕೊಳ್ಳಲಿದ್ದಾರೆ. ಮೂವರು ಉದಯೋನ್ಮುಖ ಕಥೆಗಾರರು ಕಥೆಗಳನ್ನು ಮಂಡಿಸಲಿದ್ದಾರೆ.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯಿತ್ರಿ ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಡಾ. ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ವಸಂತ ವಹಿಸಲಿದ್ದು, 12 ಮಂದಿ ಯುವಕವಿಗಳು ಸ್ವರಚಿತ ಕವಿತೆಗಳನ್ನು ವಾಚಿಸಲಿದ್ದಾರೆ.

ಸಂಜೆ 4-೦೦ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಾಹಿತಿಗಳೂ ನಿವೃತ್ತ ಪ್ರಾಧ್ಯಾಪಕರೂ ಆದ ಡಾ. ನಾ. ದಾಮೋದರ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದಾರೆ. ಮಂಗಳೂರು ವಿ.ವಿ. ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಯ, ಅಲ್ಲದೆ ಗಡಿನಾಡಿನ ಕಾಸರಗೋಡು ಜಿಲ್ಲೆಯ ಪದವಿ ಹಾಗೂ ಸ್ನಾತಕೋತ್ತರ ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಶುಕ್ರವಾರ, ಮಾರ್ಚ್ 1, 2013

'ಮಾಧ್ಯಮಶೋಧ'ಕ್ಕೆ ವಿರಾಮ

ಸ್ನೇಹಿತರೆ,

ಇದುವರೆಗೆ 'ಹೊಸದಿಗಂತ'ದಲ್ಲಿ ಪ್ರಕಟವಾಗುತ್ತಿದ್ದ ನನ್ನ 'ಮಾಧ್ಯಮಶೋಧ' ಅಂಕಣವನ್ನು ಸದ್ಯಕ್ಕೆ ನಿಲ್ಲಿಸಿದ್ದೇನೆ. ಮಾಧ್ಯಮಲೋಕದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಒಟ್ಟು 35 ಲೇಖನಗಳು ಈ ಸರಣಿಯಲ್ಲಿ ಪ್ರಕಟವಾಗಿವೆ. ಕೆಲವನ್ನು ಇಲ್ಲಿಯೂ ನೀವು ಗಮನಿಸಿದ್ದೀರಿ. ಒಟ್ಟಾರೆ ಲೇಖನಗಳ ಒಂದು ಪಟ್ಟಿ ಇಲ್ಲಿದೆ ನೋಡಿ. ಸುಮ್ಮನೇ ಒಂದು ನೆನಪಿಗೆ ಮತ್ತು ಪ್ರಕಟಿಸಿದ ಪತ್ರಿಕೆಗೆ ಕೃತಜ್ಞತೆಗೆ...

೧. ಹೊಸ ಶಕೆಯ ಹೊಸಿಲಲ್ಲಿ ಖಾಸಗಿ ಎಫ್. ಎಂ. ರೇಡಿಯೋ
೨. ಮುರ್ಡೋಕ್ ಹಿನ್ನಡೆ: ಎತ್ತ ಕಡೆ ಭಾರತದ ನಡೆ?
೩. ಡಬ್ಬಿಂಗ್ ಭೂತ ಮತ್ತೆ ಜೀವಂತ
೪. ಅಣ್ಣಾ ಆಂದೋಲನ ಮತ್ತು ಮಾಧ್ಯಮ ಮ್ಯಾಜಿಕ್
೫. ಟಿಆರ್‌ಪಿ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
೬. ಅಭಿವೃದ್ಧಿ ಪತ್ರಿಕೋದ್ಯಮ ಎಂಬ ಆಶಾವಾದದ ಬೆಳಕಿಂಡಿ
೭. ಅಂತೂ ಹೊರಬಂತು ಪೇಯ್ಡ್ ನ್ಯೂಸ್ ವರದಿ, ಆದರೆ...
೮. ಶಿಥಿಲವಾಗುತ್ತಿವೆಯೇ ಸಣ್ಣಪತ್ರಿಕೆಗಳೆಂಬ ದೊಡ್ಡ ಸ್ತಂಭಗಳು?
೯. ನ್ಯಾ| ಕಟ್ಜು ಹೇಳಿಕೆಗಳೂ, ಅರ್ಥವಿಲ್ಲದ ಟೀಕೆಗಳೂ
೧೦. ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಮತ್ತು ಚಹಾ ಅಂಗಡಿಯ ಸೆನ್ಸಾರ್
೧೧. ಜಾಹೀರಾತು ನಿಯಂತ್ರಣ ಶೀಘ್ರ: ಕ್ಷಮಿಸಿ, ಷರತ್ತುಗಳು ಅನ್ವಯಿಸುತ್ತವೆ!
೧೨. ಪತ್ರಕರ್ತ ಕಾರ್ಯಕರ್ತನೂ ಆಗಿರಬೇಕೆ? ಉತ್ತರಿಸಲು ಈಗ ಕೋಟೆಯವರೇ ಇಲ್ಲ
೧೩. ತಯಾರಾಗುತ್ತಿದ್ದಾರೆ ಭಾರತೀಯ ಮುರ್ಡೋಕ್‌ಗಳು
೧೪. ಸದನಕ್ಕೊಂದು ಪ್ರತ್ಯೇಕ ಚಾನೆಲ್: ಯಾಕಿಷ್ಟು ಗೊಂದಲ?
೧೫. ಖಡ್ಗಕ್ಕಿಂತಲೂ ಹರಿತದ ಆಯುಧಪಾಣಿಗಳ ರಕ್ಷಣೆಗೆ ಇಲ್ಲವೇ ಗುರಾಣಿ?
೧೬. ಸಿನಿಮಾ ಪ್ರಶಸ್ತಿ ವಿವಾದಗಳಿಗೆ ಅಂತ್ಯವೆಂದು?
೧೭. ನ್ಯಾಯಾಲಯ ವರದಿಗಾರಿಕೆ: ಮಾರ್ಗಸೂಚಿ ಬೇಕೆ?
೧೮. ಧನಮೇವ ಜಯತೇ! ಇದೇ ನಮ್ಮ ಸದ್ಯದ ರಿಯಾಲಿಟಿ
೧೯. ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆಗೆ ಕಾಯ್ದೆಯ ಯೋಗ: ಸಾಹಿತಿ-ಕಲಾವಿದರಿಗೆ ಸಿಹಿಸಿಹಿ ಸುದ್ದಿ
೨೦. ಟ್ರಾಯ್-ಟಿವಿ ಚಾನೆಲ್‌ಗಳ ಕದನವಿರಾಮ: ಮುಂದೇನು?
೨೧. 170ರ ಹೊಸಿಲಲ್ಲಿ ಕನ್ನಡ ಪತ್ರಿಕೋದ್ಯಮ: ಸುನಾಮಿಯಾಗದಿರಲಿ ಬದಲಾವಣೆಯ ಅಲೆ
೨೨. ಸ್ವಾತಂತ್ರ್ಯದ ಪರದೆಯೂ ಎರಡಲಗಿನ ಕತ್ತಿಯೂ
೨೩. ಓದುಗನೇ ದೊರೆಯಾದರೆ ಓದುಗರ ಸಂಪಾದಕ ಏಕೆ ಹೊರೆ?
೨೪. ಸೈಬರ್ ಸಮರದ ಕರಿನೆರಳಲ್ಲಿ ಭಾರತ
೨೫. ಕ್ಲಾಸ್‌ರೂಂ ಪತ್ರಿಕೋದ್ಯಮ ವೇಸ್ಟಾ? ಮಾಧ್ಯಮ ಶಿಕ್ಷಣ ಚರ್ಚೆಯ ಸುತ್ತಮುತ್ತ
೨೬. ಸುದ್ದಿಗಷ್ಟೇ ಅಲ್ಲ, ಟಿಆರ್‌ಪಿಗೂ ಕಾಸು!
೨೭. ಚಿತ್ರಭಾಷಾಕಾವ್ಯದ ಸಾಂಗತ್ಯದಲ್ಲಿ...
೨೮. ನಾಲ್ಕನೆಯ ಸ್ತಂಭದ ಮುಂದೆ ನಾಲ್ಕು ಪ್ರಶ್ನೆಗಳು
೨೯. ಕೇಬಲ್ ಟಿವಿ ಡಿಜಿಟಲೀಕರಣ: ಮುಂದೇನು?
೩೦. ಮಾಧ್ಯಮರಂಗದಲ್ಲಿ ವಿದೇಶಿ ಬಂಡವಾಳ: ಪರರ ಕೈಯಲ್ಲಿ ಕಾವಲುನಾಯಿಯ ಕುತ್ತಿಗೆಪಟ್ಟಿ
೩೧. ಮಾಧ್ಯಮ ನಿಯಂತ್ರಣ: ಇಂಗ್ಲೆಂಡಿನ ಕನ್ನಡಿಯಲ್ಲಿ ಭಾರತದ ಮುಖ
೩೨. ಕಾವು ಕೊಡುವ ಮಾಧ್ಯಮಗಳಿಗಿದು ಪರ್ವಕಾಲ: ಕಬ್ಬಿಣ ಕಾದಾಗಲೇ ಬಡಿಯಬೇಕು
೩೩. ಇಂಟರ್ನೆಟ್‌ಗೆ 30: ಇದು ಸಂವಹನ ಪ್ರಜಾಪ್ರಭುತ್ವದ ಹೊತ್ತು
೩೪. ಅಂತೂ ಬಂತು 'ಮುಕ್ತ ಮುಕ್ತ’ದ ಅಂತಿಮ ಕಂತು: ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ...
೩೫. 'ವಿಶ್ವರೂಪಂ’ನ ಹಿಂದಿರುವ ವಿಶ್ವವ್ಯಾಪಿ ಕಾಯಿಲೆ