ಬುಧವಾರ, ನವೆಂಬರ್ 4, 2015

ಮಾಹಿತಿ ಮಹಾನದಿಯ ಮಧ್ಯೆ

ಫೇಸ್‌ಬುಕ್ ಮುಖಹೀನರ ಮುಖವಾಣಿಯಾಗುತ್ತಿದೆ ಎಂದೂ (ಸಂಗತ, ಅ. 19), ಇಲ್ಲ, ಅದು ಸಮಾಜದಲ್ಲಿ ಸಂವಾದಗಳನ್ನು ಹೆಚ್ಚಿಸಿರುವ ಸಂವಹನದ ಕುಡಿ ಎಂದೂ (ಚರ್ಚೆ, ಅ. 22) ಹೇಳುವ ಎರಡು ವಾದಗಳು ಗಮನಕ್ಕೆ ಬಂದವು. ಎರಡಕ್ಕೂ ತಮ್ಮದೇ ಆದ ಸಮರ್ಥನೆಗಳೂ, ಪ್ರತಿವಾದಗಳೂ ಇವೆ. ಅವುಗಳ ಪರವಾಗಿಯಾಗಲೀ ವಿರೋಧವಾಗಿಯಾಗಲೀ ಮಾತನಾಡುವುದು ಈ ಲೇಖನದ ಉದ್ದೇಶವಲ್ಲ. ಅವುಗಳ ನಿಮಿತ್ತದಿಂದ ಒಟ್ಟಾರೆ ಸಾಮಾಜಿಕ ಮಾಧ್ಯಮ ಅಥವಾ ಮಾಹಿತಿ ತಂತ್ರಜ್ಞಾನದ ಪರಿಣಾಮ ಕುರಿತ ಮೂಲಪ್ರಶ್ನೆಯೊಂದನ್ನು ಗಮನಿಸುವುದು ಇಲ್ಲಿನ ಉದ್ದೇಶ.
ಅಭಿವ್ಯಕ್ತಿಯ ಅವಕಾಶಗಳ ಕೊರತೆ ಅನುಭವಿಸುತ್ತಿದ್ದ ಜನಸಾಮಾನ್ಯರಿಗೆ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ಪರ್ಯಾಯ ಮಾಧ್ಯಮಗಳಾದವು ಎಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಯಾವುದೇ ಸಾಧನದ ಬಳಕೆ ಅರಿತ ಜನ ಅದರ ದುರ್ಬಳಕೆ ಕಲಿಯುವುದಕ್ಕೂ ಹೆಚ್ಚು ದಿನ ತೆಗೆದುಕೊಳ್ಳಲಾರರು ಎಂಬುದು ಅಷ್ಟೇ ನಿಜ. ಸಾಮಾಜಿಕ ಮಾಧ್ಯಮಗಳು ಅನಾಮಧೇಯರು ಹಾಗೂ ವಿಘ್ನ ಸಂತೋಷಿಗಳಿಗೂ ದೊಡ್ಡ ಆಡುಂಬೊಲವಾಗಿರಬಹುದು. ಇವೆರಡಕ್ಕೂ ಹೊರತಾದ ಇನ್ನೊಂದು ಸಂಗತಿ ಬಗ್ಗೆಯೂ ಯೋಚಿಸಬೇಕಾಗಿದೆ.
ಟ್ಯಾಬ್, ಆ್ಯಂಡ್ರಾಯ್ಡ್ ಮೊಬೈಲ್‌ಗಳ ಯುಗದಲ್ಲಿ ವಿಶ್ವವೇ ಅಂಗೈಯಲ್ಲಿ ಬಂದು ಕುಳಿತಿರುವುದು ನಿಜ. ಮಾಹಿತಿಯ ಕೊರತೆ ಎಂಬ ಪ್ರಶ್ನೆಯೇ ಈಗ ಇಲ್ಲ. ಫೇಸ್‌ಬುಕ್, ವಾಟ್ಸ್‌ ಆ್ಯಪ್‌, ಟ್ವಿಟರ್ ಮತ್ತಿತರ ಆ್ಯಪ್‌ಗಳು ಕ್ಷಣಕ್ಷಣಕ್ಕೂ ಹೊಚ್ಚಹೊಸ ಭರಪೂರ ಮಾಹಿತಿಗಳನ್ನು ತಂದು ನಮ್ಮೆದುರು ಸುರಿಯಬಲ್ಲವು. ಆದರೆ ಸಮಸ್ಯೆಯ ಮೂಲವಿರುವುದೇ ಇಲ್ಲಿ. ಏಕೆಂದರೆ ಮನುಷ್ಯನಿಗೆ ಮಾಹಿತಿ ಏಕೆ ಬೇಕು ಎಂಬುದಕ್ಕಿಂತಲೂ ಎಷ್ಟು ಬೇಕು ಎಂಬುದು ಪ್ರಮುಖ ಪ್ರಶ್ನೆ.
ಮಾಹಿತಿ ಪಡೆಯುವ, ಹಂಚಿಕೊಳ್ಳುವ ಸಾಮಾಜಿಕ ಜಾಲತಾಣಗಳ ಒಂದಷ್ಟು ಆ್ಯಪ್‌ಗಳನ್ನು ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ಕೂರಿಸಿಕೊಂಡಿರುವ ಮತ್ತು ಅವುಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಒಬ್ಬ ವ್ಯಕ್ತಿಯ ಪರಿಸ್ಥಿತಿ  ಊಹಿಸಿಕೊಳ್ಳಿ. ಆತ ಒಂದು ಕಡೆ ವಾಟ್ಸ್‌ ಆ್ಯಪ್ ಸಂದೇಶಗಳ ಮೇಲೆ ಬೆರಳಾಡಿಸುತ್ತಿರುತ್ತಾನೆ; ಬೇಕಾದ್ದೋ ಬೇಡದ್ದೋ ಎಲ್ಲವನ್ನೂ ತೆರೆದು ಅರೆಕ್ಷಣ ಕಣ್ಣಾಡಿಸುತ್ತಾನೆ; ಫೋಟೊ, ವಿಡಿಯೊಗಳಲ್ಲಿ ಒಂದಷ್ಟನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾನೆ. ಅಷ್ಟರಲ್ಲಿ ಫೇಸ್‌ಬುಕ್ ಹೊಸ ನೋಟಿಫಿಕೇಶನ್ ತೋರಿಸುತ್ತದೆ. ಅವನ ಗಮನ ಅತ್ತ ಕಡೆ ಹೋಗುತ್ತದೆ.
ಇನ್ನೊಂದು ಹೊಸ ಲೋಕದೊಳಕ್ಕೆ ಇಳಿಯುತ್ತಾನೆ. ಎಂದೂ ಮುಗಿಯದ ಸಮುದ್ರದ ಅಲೆಗಳಂತೆ ಆತ ಸ್ಕ್ರೋಲ್ ಮಾಡಿದಷ್ಟೂ ಹೊಸಹೊಸ ವಿಷಯ ಕಾಣಿಸುತ್ತಲೇ ಹೋಗುತ್ತದೆ. ಸಾಕಿನ್ನು ಮುಚ್ಚಿಡೋಣವೆಂದರೂ ಅದ್ಯಾವುದೋ ಹೊಸ ಪೋಸ್ಟ್ ಅವನಿಗೆ ಕುತೂಹಲ ಮೂಡಿಸಿಬಿಡುತ್ತದೆ. ಬೇರೆ ಯೋಚಿಸೋಣ ಎಂದುಕೊಂಡರೆ ಹೊಸ ಇ-ಮೇಲ್‌ಗಳು ಬಂದಿರುತ್ತವೆ. ಟ್ವಿಟರ್‌ನಲ್ಲಿ ನೂರಾರು ಹೊಸ ಸಂದೇಶಗಳು ಕಾಯುತ್ತಿರುತ್ತವೆ. ಎಲ್ಲದರ ಕಡೆ ಒಂದು ಸುತ್ತು ಹೊಡೆಯುವಷ್ಟರಲ್ಲಿ ಮತ್ತೆ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ನಲ್ಲಿ ಹೊಸದೇನು ಬಂದಿರಬಹುದೆಂಬ ಕುತೂಹಲ. ಅಂತೂ ಈ ಹುಡುಕಾಟದ ವರ್ತುಲಕ್ಕೆ ಕೊನೆಯೇ ಇಲ್ಲ. ಅನೇಕರನ್ನು ಮೆಟ್ಟಿಕೊಂಡಿರುವ ‘ಮಾಹಿತಿ ವ್ಯಸನ’ ಅವರನ್ನು ಅಂತಿಮವಾಗಿ ಎಲ್ಲಿಗೆ ಕೊಂಡೊಯ್ದೀತು ಎಂದು ಯೋಚಿಸಿದರೆ ಆತಂಕವಾಗುತ್ತದೆ.
ಮನುಷ್ಯನಿಗೆ ಮಾಹಿತಿ ಬೇಕು, ಸಂವಹನ ಬೇಕು, ತನ್ನವರೊಂದಿಗೆ ಸ್ನೇಹ, ವಿಚಾರ ವಿನಿಮಯ ಎಲ್ಲ ಬೇಕು. ಈ ಎಲ್ಲವನ್ನೂ ಮೀರಿದ ಏಕಾಂತವೆಂಬುದೂ ಒಂದು ಇದೆ; ಅದು ಬೇಡವೇ? ಎಲ್ಲ ಗದ್ದಲಗಳ ನಡುವೆ ಒಂದು ನಿಮಿಷ ಕಣ್ಮುಚ್ಚಿ ಕುಳಿತು ಏನನ್ನಾದರೂ ಯೋಚಿಸುವ ಅಥವಾ ಯೋಚಿಸದೆ ಇರುವ ಅವಕಾಶ ಬೇಡವೇ? ಒಂದು ಕವಿತೆಯೋ ಕಥೆಯೋ ಬರಹವೋ ಒಡಮೂಡುವುದು ಇಂತಹ ಏಕಾಂತದಲ್ಲಿ. ಹಾಗಂತ ಏಕಾಂತವೆಂಬುದು ಒಬ್ಬ ಬರಹಗಾರನಿಗಷ್ಟೇ ಬೇಕಾಗಿರುವ ಅವಕಾಶ ಅಲ್ಲ. ಪ್ರತಿ ವ್ಯಕ್ತಿಯೂ ತಾನು ನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ಸಂತೃಪ್ತಿ ಕಾಣಬೇಕಾದರೆ ಅಲ್ಲೊಂದು ಏಕಾಂತ ಬೇಕೇ ಬೇಕು.
ಅದು ಸೃಜನಶೀಲ ಚಟುವಟಿಕೆಯಲ್ಲಿ ತೊಡಗುವ ಮಂದಿ ಬಯಸುವ ಏಕಾಂತಕ್ಕಿಂತ ವಿಭಿನ್ನವಾಗಿರಬಹುದು ಅಷ್ಟೇ. ಆದರೆ ನಮ್ಮ ಸುತ್ತ ತುಂಬಿ ತುಳುಕುತ್ತಿರುವ ಸಾಮಾಜಿಕ ಮಾಧ್ಯಮಗಳು, ಅವುಗಳನ್ನು ಜನರಿಗೆ ತಲುಪಿಸುವ ಆ್ಯಪ್‌ಗಳು ಪ್ರತಿ ಮನುಷ್ಯನಿಗೂ ಅವಶ್ಯಕತೆಯಿರುವ ಅವನದ್ದೇ ಆದ ವಿಶಿಷ್ಟ ಏಕಾಂತವೊಂದನ್ನು ಕಸಿದುಕೊಂಡಿರುವುದು ಒಂದು ಗಂಭೀರ ವಿಚಾರ. ಈ ಮಾಹಿತಿಯ ಮಾಧ್ಯಮಗಳು ಏಕಾಏಕಿ ಕೈಗೆ ಬಂದಾಗ ಹೊಸದೊಂದು ಲೋಕ ಪ್ರವೇಶಿಸಿದಂತೆ, ಅಭಿವ್ಯಕ್ತಿಯ ಹೊಸ ದಾರಿಗಳು ತೆರೆದುಕೊಂಡಂತೆ ಹಲವರಿಗೆ ಅನ್ನಿಸಿದರೂ ಇವೆಲ್ಲವೂ ತಾನು ಬಯಸಿದ್ದಕ್ಕಿಂತ ಹೆಚ್ಚಾಯಿತು ಎಂದು ಒಂದು ಹಂತದಲ್ಲಿ ಪ್ರಾಮಾಣಿಕವಾಗಿ ಅನ್ನಿಸದೆ ಇರದು.
ಜ್ಞಾನದ ಓಟದಲ್ಲಿ ವಿವೇಕವನ್ನೂ, ಮಾಹಿತಿಯ ಮಹಾಪೂರದಲ್ಲಿ ಜ್ಞಾನವನ್ನೂ ನಾವು ಕಳೆದುಕೊಂಡಿದ್ದೇವೆಯೇ ಎಂದು ಕೇಳಿದ್ದ ಪ್ರಸಿದ್ಧ ಇಂಗ್ಲಿಷ್ ಕವಿ ಟಿ.ಎಸ್.ಎಲಿಯಟ್ ಅವರ ಪ್ರಶ್ನೆ, ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ಅತ್ಯಂತ ಪ್ರಸ್ತುತ ಎನಿಸುತ್ತದೆ. ಇಂಟರ್ನೆಟ್ ಭೂಮಿ ಮೇಲೆ ಕಣ್ತೆರೆಯುವ ಹತ್ತಾರು ವರ್ಷಗಳ ಹಿಂದೆಯೇ ಗರ್ಟ್ರೂಡ್ ಸ್ಟೈನ್ ಎಂಬ ಅಮೆರಿಕನ್ ಬರಹಗಾರ್ತಿ ಒಂದು ಮಾತು ಹೇಳಿದ್ದರು: ‘ಪ್ರತಿದಿನ ಪ್ರತಿಯೊಬ್ಬರೂ ಎಷ್ಟೊಂದು ಮಾಹಿತಿಗಳನ್ನು ಪಡೆಯುತ್ತಾರೆಂದರೆ ಅವುಗಳ ಭರಾಟೆಯಲ್ಲಿ ಅವರು ತಮ್ಮ ಸಾಮಾನ್ಯ ವಿವೇಕವನ್ನೇ ಕಳೆದುಕೊಂಡುಬಿಡುತ್ತಾರೆ’.
ಇನ್ನು ಮಾಹಿತಿ ತಂತ್ರಜ್ಞಾನದ ತುರೀಯಾವಸ್ಥೆಯ ಈ ಕಾಲದಲ್ಲಿ ಜನರ ವಿವೇಕಕ್ಕೆ ಬಡಿಯುವ ಗ್ರಹಣದ ಬಗ್ಗೆ ನಾವು ಯೋಚಿಸಬೇಡವೇ? ಜ್ಞಾನಾಧಾರಿತ ಅರ್ಥ ವ್ಯವಸ್ಥೆಯ ಈ ಕಾಲದಲ್ಲಿ ಮಾಹಿತಿಯೇ ಸರ್ವಸ್ವ ಎಂಬ ಭಾವನೆ ಅತಿರೇಕದ್ದೇನೂ ಅಲ್ಲ. ಅದಕ್ಕೇ, ಅಮೆರಿಕದ ಉಪಾಧ್ಯಕ್ಷರಾಗಿದ್ದ ಅಲ್ ಗೋರೆ ಇಂಟರ್ನೆಟ್‌ ಅನ್ನು ‘ಇನ್‌ಫರ್ಮೇಶನ್‌ ಸೂಪರ್‌ಹೈವೇ’ ಎಂದಾಗ ಜಗತ್ತು  ಕಣ್ಣರಳಿಸಿ ನೋಡಿದ್ದು. ಆದರೆ ಬದುಕೆಂದರೆ ಬರೀ ಮಾಹಿತಿಯಷ್ಟೇ ಅಲ್ಲ. ಎಲ್ಲದಕ್ಕೂ ಒಂದು ಮಿತಿಯಿದೆ. ಎಷ್ಟು ಹಸಿದವನಿಗೂ ಹೊಟ್ಟೆ ತುಂಬಿದ ಮೇಲೆ ಮೃಷ್ಟಾನ್ನ ಸುರಿದರೂ ಅದು ಬೇಡ. ಉಪ್ಪಿಗಿಂತ ರುಚಿ ಇನ್ನಿಲ್ಲವಾದರೂ ಅದನ್ನೇ ಊಟ ಮಾಡುವುದಕ್ಕಾಗದು.
ಮಾಹಿತಿಯ ಮಹಾಪೂರ ಕೆಲವೊಮ್ಮೆ ಅನುಕೂಲಕ್ಕಿಂತಲೂ ಅಧ್ವಾನವನ್ನೇ ಉಂಟುಮಾಡೀತು ಎಂಬ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೆ ಸಾಕಷ್ಟು ಸಂಶೋಧನೆಗಳು ನಡೆದಿವೆ. ‘ಇನ್‌ಫರ್ಮೇಶನ್‌ ಗ್ಲಟ್’ ಅಥವಾ ‘ಇನ್‌ಫರ್ಮೇಶನ್‌ ಓವರ್‌ಲೋಡ್’ ಕುರಿತು ನಮ್ಮಲ್ಲೂ ಗಹನವಾದ ಚರ್ಚೆಗಳಾಗಬೇಕಿದೆ. 
ಹೈವೇಗಳು, ಸೂಪರ್‌ಹೈವೇಗಳು ಇದ್ದರೆ ಒಳ್ಳೆಯದೇ. ಆದರೆ ಕೆಲವೊಮ್ಮೆ ಬರೀ ಹೆದ್ದಾರಿಗಳೇ ಸಾಕಾಗುವುದಿಲ್ಲ. ಒಬ್ಬರೇ ಧ್ಯಾನಸ್ಥವಾಗಿ ನಡೆಯುವುದಕ್ಕೆ  ಸಣ್ಣ ಕಾಲುಹಾದಿಯೂ ಬೇಕಾಗುತ್ತದೆ, ಅಲ್ಲವೇ?