ಬುಧವಾರ, ಏಪ್ರಿಲ್ 17, 2024

ಪರ್ಸೆಂಟೇಜಿಗಿಂತ ಬದುಕು ದೊಡ್ಡದು

14 ಏಪ್ರಿಲ್‌ 2024ರ ʻಉದಯವಾಣಿʼ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.

ಹಿರಿಯರೊಬ್ಬರು ಮುಖದ ತುಂಬ ನೋವು ಹೊತ್ತುಕೊಂಡು ಹೇಳುತ್ತಿದ್ದರು: ‘ಈ ರಿಸಲ್ಟುಗಳು
ಯಾಕಾದರೂ ಬರುತ್ತವೋ... ರಿಸಲ್ಟಿನ ಮರುದಿನ ಪತ್ರಿಕೆ ನೋಡಲು ಭಯ... ಯಾವ ಎಳೆಯ ಹುಡುಗರು ಏನು ಅನಾಹುತ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಓದುವ ಆತಂಕ...’ ಇದು ಅವರದೊಬ್ಬರದೇ ಭಯ ಅಲ್ಲ. ಪ್ರತಿವರ್ಷ ನೂರಾರು ಮಂದಿಯ ಎದೆಯಲ್ಲಿ ಹುಟ್ಟಿಕೊಳ್ಳುವ ನಡುಕ. ಫಲಿತಾಂಶದ ಮರುದಿನ ಏನು, ಪರೀಕ್ಷೆಯ ಮರುದಿನದಿಂದಲೇ ಇದು ಆರಂಭವಾಗುತ್ತದೆ. ಪರೀಕ್ಷೆ ಚೆನ್ನಾಗಿ ಮಾಡಿಲ್ಲ ಎಂದು ನೇಣಿಗೆ ತಲೆಯೊಡ್ಡುವ ಮಕ್ಕಳು, ಮರುದಿನ ಬರುವ ರಿಸಲ್ಟಿಗೆ ಹೆದರಿಯೇ ರೈಲುಹಳಿಗೆ ಬಲಿಯಾಗುವ ಮಕ್ಕಳು... ಇವರಿಗೆ ಫಲಿತಾಂಶದವರೆಗೆ ಕಾಯುವ ತಾಳ್ಮೆಯೇ ಇಲ್ಲ. ಫಲಿತಾಂಶವನ್ನು ಊಹಿಸಿಕೊಂಡೇ ಬದುಕನ್ನು ಮುಗಿಸುವ ಮಕ್ಕಳಿವರು.

ಜೀವನಕ್ಕಿಂತ ಪರೀಕ್ಷೆಯೇ ದೊಡ್ಡದು ಎಂದು ಭಾವಿಸಿರುವ ಮಕ್ಕಳ ಕತೆಯಿದು. ವಾಸ್ತವವಾಗಿ ಇದು ಮಕ್ಕಳ ಸಮಸ್ಯೆ ಅಲ್ಲ, ಅವರ ತಂದೆತಾಯಿಯರದು, ಹತ್ತಿರದ ಬಂಧುಗಳದು ಮತ್ತು ಸುತ್ತಲಿನ ಸಮಾಜದ್ದು. ಇವರೆಲ್ಲ ಸೇರಿ ನಿರ್ಮಿಸಿರುವ ದೊಡ್ಡದೊಂದು ವ್ಯೂಹವಿದು- ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಗಳೆಂಬ ಭೂತ. ಭವಿಷ್ಯದ ದೃಷ್ಟಿಯಿಂದ ಇವರೆಡೂ ಹಂತಗಳು ಪ್ರಮುಖ ಎಂಬುದೇನೋ ನಿಜ. ಮುಂದೇನು ಓದಬೇಕು ಎಂಬ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ದೃಷ್ಟಿಯಿಂದ ಇವು ಪ್ರಮುಖವೇ ಹೊರತು ಇಲ್ಲಿ ಒಂದೆರಡು ಪರ್ಸೆಂಟೇಜು ಕಡಿಮೆಯಾದರೆ ಬದುಕೇ ಮುಗಿಯಿತು ಎಂದು ಭಾವಿಸಬೇಕಾಗಿಲ್ಲ.

ಆದರೆ ನಮ್ಮ ಸಮಾಜ ಈ ಎರಡು ಪರೀಕ್ಷೆಗಳನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದೆ ಅಥವಾ ಮಾಡಿಕೊಳ್ಳುವಂತೆ ನೋಡಿಕೊಳ್ಳಲಾಗಿದೆ. ಮೂಲತಃ ಇದರ ಹಿಂದೆ ಇರುವುದು ಹಣದ ಬೆನ್ನುಹತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಷಡ್ಯಂತ್ರವೇ ಹೊರತು ಇನ್ನೇನೂ ಅಲ್ಲ. ಇಂಜಿನಿಯರಿಂಗ್-ಮೆಡಿಕಲ್‍ಗಳಂತಹ ಒಂದೆರಡು ವೃತ್ತಿಗಳನ್ನೇ ಭೂಮಿಯ ಮೇಲಿನ ಮಹೋನ್ನತ ಉದ್ಯೋಗಗಳೆಂದು ಬಿಂಬಿಸಿರುವುದರ ಹಿಂದೆಯೂ ಇದೇ ಷಡ್ಯಂತ್ರ ಇದೆ. ಈ ಎರಡು ವೃತ್ತಿಪರ ಕೋರ್ಸುಗಳಿಗೆ ಲಕ್ಷಾಂತರ ಹಣ ಬೇಕೆಂಬುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ನಂಬಿಕೆ. ಇವುಗಳಿಗೆ ಪ್ರವೇಶ ಪಡೆಯುವುದೂ ಭಾರೀ ದೊಡ್ಡ ಸ್ಪರ್ಧೆಯೆಂಬ ಭ್ರಮೆಯನ್ನು ಕೂಡ ಬಹು ವ್ಯವಸ್ಥಿತವಾಗಿ ರೂಪಿಸಲಾಗಿದೆ.

‘ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸುಗಳಿಗೆ ಸೇರಬೇಕೆಂದರೆ ಒಳ್ಳೆಯ ಕಡೆ ಪಿಯುಸಿ ಮಾಡಬೇಕು. ಅಲ್ಲಿ ಉತ್ಕøಷ್ಟ ಮಟ್ಟದ ಸಿಇಟಿ-ಜೆಇಇ-ನೀಟ್ ಕೋಚಿಂಗ್ ಸಿಗಬೇಕು. ಅಂತಹ ಕಾಲೇಜು ಸಿಗಬೇಕೆಂದರೆ ಎಸ್.ಎಸ್.ಎಲ್.ಸಿ.ಯಲ್ಲಿ ಒಂದೊಂದು ಅಂಕವೂ ಮುಖ್ಯ’ – ಇದು ಬಹುಪಾಲು ತಂದೆತಾಯಂದಿರಲ್ಲಿ ಇರುವ ಧಾವಂತ. ಈ ಧಾವಂತ ಕ್ಷಣಕ್ಷಣವೂ ಮಕ್ಕಳ ತಲೆಗೆ ವರ್ಗಾವಣೆ ಆಗುತ್ತಾ ಇರುತ್ತದೆ. ಬೆಳಗೆಂದರೇನು, ಸಂಜೆಯೆಂದರೇನು, ಮಳೆಯೆಂದರೇನು, ಬಿಸಿಲೆಂದರೇನು ಎಂದು ತಿಳಿಯದ ಮಕ್ಕಳು. ಬೆಳಕಾಗುವ ಮುನ್ನವೇ ಬಾಗಿಲು ತೆರೆಯುವ ಕೋಚಿಂಗ್ ಸಂಸ್ಥೆಗಳು, ಮಧ್ಯರಾತ್ರಿ ಕಳೆದರೂ ಮಲಗಲು ಬಿಡದ ಹಾಸ್ಟೆಲುಗಳು. ಓದಲೇಬೇಕು, ಕೋಚಿಂಗ್ ಪಡೆಯಲೇಬೇಕು, ಓದಿದ್ದನ್ನೇ ಓದಬೇಕು, ಉರುಹೊಡೆಯಲೇಬೇಕು, ಮತ್ತಮತ್ತೆ ಪರೀಕ್ಷೆ ಬರೆಯಬೇಕು, ಪರ್ಸೆಂಟೇಜು ಹೆಚ್ಚಾಗಬೇಕು...

ಈ ನಿರೀಕ್ಷೆಗಳ ಭಾರದಲ್ಲಿ ಮಕ್ಕಳ ಮನಸ್ಸಿನ ಪಾಡು ಯಾರಿಗೂ ಬೇಕಾಗಿಲ್ಲ. ಮನಸ್ಸು-ಬುದ್ಧಿಗಳು ಉಲ್ಲಾಸದಿಂದ ವಿಕಸಿತಗೊಳ್ಳಬೇಕಾದ ಬಂಗಾರದ ಕಾಲವದು. ಮನುಷ್ಯನ ಒಟ್ಟಾರೆ ವ್ಯಕ್ತಿತ್ವ ನಿರ್ಮಾಣವಾಗುವುದೇ ಈ ಹದಿಹರೆಯದ ಪರ್ವಕಾಲದಲ್ಲಿ. ಆದರೆ ಈಗ ಅಲ್ಲಿ ನಡೆಯುವುದು ಅಂಕ ಮೊಗೆಯುವ ಯಂತ್ರಗಳನ್ನು ತಯಾರು ಮಾಡುವ ಪ್ರಕ್ರಿಯೆ ಮಾತ್ರ. ಬುದ್ಧಿಭಾವಗಳು ಬಲಿಯಬೇಕಾದ ಕಾಲದಲ್ಲಿ ಇದೇನು ಮಾಡುತ್ತಿದ್ದೇವೆ ಎಂಬ ವಿವೇಕ ಯಾರಿಗೂ ಬೇಕಾಗಿಲ್ಲ. ಯಾವುದೋ ವೇಗೋತ್ಕರ್ಷದ ಬಲದಲ್ಲಿ ಆಸಕ್ತಿಯಿರುವ ಇಲ್ಲದಿರುವ ಎಲ್ಲ ಮಕ್ಕಳು ಮುಂದಮುಂದಕ್ಕೆ ತೇಲಿಕೊಂಡೇನೋ ಹೋಗುತ್ತವೆ. ಅವರ ನಿಜವಾದ ಭವಿಷ್ಯ ಏನು? ಮುಂದೆ ತಾವು ಜೀವನ ನಡೆಸಬೇಕಾದವರೊಂದಿಗೆ, ಸುತ್ತಲಿನ ಸಮಾಜದೊಂದಿಗೆ ಹೊಂದಿಕೊಂಡು ಸಂತೋಷವಾಗಿ ಬದುಕಬಲ್ಲರೇ ಇವರು?

ಸಂತೋಷ ಎಂದರೇನು? ಮುಂದೆ ದೊರೆಯಲಿರುವ ಉದ್ಯೋಗ, ಅದರಿಂದ ಸಂಪಾದನೆಯಾಗುವ ಹಣ ಮತ್ತು ಆ ಮೂಲಕ ದೊರೆಯುವ ಸಾಮಾಜಿಕ ಪ್ರತಿಷ್ಠೆ. ಸಮಾಜದ ಕಣ್ಣಿನಲ್ಲಿ ಇದೇ ಸಂತೋಷ. ಇದುವೇ ವೃತ್ತಿಪರ ಕೋರ್ಸುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಧಾವಂತದಲ್ಲಿ ದೆಸೆಗೆಟ್ಟು ಓಡುತ್ತಿರುವ ಒಟ್ಟಾರೆ ಸಮಾಜದ ಪರಮ ಉದ್ದೇಶ. ಇದರ ಹಿಂದಿರುವುದು ಶಿಕ್ಷಣ ಸಂಸ್ಥೆಗಳನ್ನು ಹಣದ ಮಳೆಗರೆಯುವ ಕಲ್ಪವೃಕ್ಷ-ಕಾಮಧೇನುಗಳನ್ನಾಗಿ ಮಾಡಿಕೊಂಡಿರುವ ಮಂದಿಯ ಸ್ವಾರ್ಥಬುದ್ಧಿ ಎಂಬುದು ನಮ್ಮ ಸಮಾಜಕ್ಕಿನ್ನೂ ಅರ್ಥವಾಗದಿರುವುದು ದುರಂತ.

ಈ ಕಾಲದಲ್ಲಿ ಒಂದೊಳ್ಳೆಯ ಜೀವನ ಕಟ್ಟಿಕೊಳ್ಳಬೇಕೆಂದರೆ ಹಣಕಾಸಿನ ಸ್ಥಿತಿಗತಿ ಚೆನ್ನಾಗಿರಬೇಕೆಂಬುದರಲ್ಲಿ ಅನುಮಾನವೇನೂ ಇಲ್ಲ. ಆದರೆ ಅದು ಎಷ್ಟು ಬೇಕು, ಹೇಗೆ ಬೇಕು ಎಂಬ ಬಗ್ಗೆ ಪ್ರಾಮಾಣಿಕವಾಗಿ ಯಾರೂ ಯೋಚಿಸಿಲ್ಲ. ಸಂಪಾದನೆ ಮಾಡುವುದು ತಪ್ಪಲ್ಲ; ಸಮಾಜದಲ್ಲಿ ನಾಲ್ಕು ಮಂದಿಯ ಗೌರವಕ್ಕೆ ಪಾತ್ರರಾಗಬೇಕು ಎಂಬ ಅಪೇಕ್ಷೆಯಿರುವುದು ತಪ್ಪಲ್ಲ. ಆದರೆ ಅದಕ್ಕೆ ಯಾವುದೋ ಒಂದೆರಡು ದಾರಿಗಳು ಮಾತ್ರ ಇರುವುದು ಎಂಬುದು ಮಾತ್ರ ಶುದ್ಧ ಭ್ರಮೆ. ಮರ್ಯಾದೆಯಿಂದ ಬದುಕುವುದಕ್ಕೆ ಸಾವಿರ ದಾರಿಗಳಿವೆ. ಎಲ್ಲರೂ ಒಂದೇ ರಸ್ತೆಯಲ್ಲಿ ಸಾಗುತ್ತಿದ್ದರೆ ಆಮೇಲೆ ಅವರೆಲ್ಲ ಅದೇ ಟ್ರಾಫಿಕ್ಕಿನಲ್ಲಿ ಬದುಕನ್ನೆಲ್ಲ ಕಳೆಯಬೇಕಾಗುತ್ತದೆ. ವಾಸ್ತವವಾಗಿ ಬೇರೆ ರಸ್ತೆ ಹಿಡಿದವರು ಉಳಿದವರಿಗಿಂತ ಮೊದಲೇ ಗಮ್ಯ ಸೇರಿರುತ್ತಾರೆ.

ರಿಲಯನ್ಸ್ ಎಂಬ ಸಾಮ್ರಾಜ್ಯವನ್ನು ಕಟ್ಟಿದ ಧೀರೂಭಾಯ್ ಅಂಬಾನಿ ಆರಂಭದಲ್ಲಿ ಏನಾಗಿದ್ದರು? ಹ್ಯಾರಿಪಾಟರ್ ಪುಸ್ತಕಗಳಿಂದಲೇ ಲೋಕಪ್ರಸಿದ್ಧಿ ಪಡೆದ ಜೆ.ಕೆ. ರೌಲಿಂಗ್ ಏನಾಗಿದ್ದರು? ಜಗತ್ಪ್ರಸಿದ್ಧ ಬ್ಯಾಗುಗಳ ಬ್ರಾಂಡ್ ಅನ್ನು ಕಟ್ಟಿಬೆಳೆಸಿದ ಗುಚಿಯೋ ಗುಚಿ ಏನಾಗಿದ್ದರು? ಮಸ್ಯಾಚುಸೆಟ್ಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪಡೆದ ಮೊದಲ ಅಂತಾರಾಷ್ಟ್ರೀಯ ಅಂಧವ್ಯಕ್ತಿ ಶ್ರೀಕಾಂತ್ ಬೊಲ್ಲಾ ಅಲ್ಲಿಯವರೆಗೆ ಎದುರಿಸಿದ ನೋವು-ಅವಮಾನಗಳೇನು? ನಾವು ನಮ್ಮ ಸುತ್ತಲಿನ ಸಮಾಜವನ್ನು ಕಣ್ಣುತೆರೆದು ನೋಡುವುದೇ ಇಲ್ಲ. ಯಾರೋ ಬೆಳೆಸಿದ ಭ್ರಮೆಯಲ್ಲಿ, ನಾವೇ ಹಾಕಿಕೊಂಡ ಕನ್ನಡಕದಲ್ಲಿ ಬಂಧಿಯಾಗಿರುತ್ತೇವೆ. 

ಪರ್ಸೆಂಟೇಜಿಗಿಂತ ಬದುಕು ತುಂಬ ದೊಡ್ಡದು. ಬದುಕಿನ ತೃಪ್ತಿಯನ್ನು ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿಯ ಪರ್ಸೆಂಟೇಜಿನಿಂದ ಅಳೆಯಲು ಬರುವುದಿಲ್ಲ. ಮೂಲತಃ ಪರ್ಸೆಂಟೇಜು ಒಬ್ಬ ವ್ಯಕ್ತಿಯ ಒಟ್ಟಾರೆ ವ್ಯಕ್ತಿತ್ವವನ್ನು, ಪ್ರತಿಭೆಯನ್ನು ಅಳೆಯುವ ಮಾನದಂಡವೇ ಅಲ್ಲ. ಅದು ಮಗುವಿನೊಳಗೆ ಸುಪ್ತವಾಗಿಯೇ ಇರುತ್ತದೆ. ಅದನ್ನು ಸಶಕ್ತವಾಗಿ ಹೊರಗೆ ತರುವುದಕ್ಕೆ ಹತ್ತಾರು ಮಾರ್ಗಗಳಿವೆ. ಅದು ಕೋಚಿಂಗ್ ಸೆಂಟರುಗಳಲ್ಲಿ ವಿಕಾಸವಾಗುವುದಿಲ್ಲ. ಹಾರ್ವರ್ಡ್‍ನ ಮನಃಶಾಸ್ತ್ರಜ್ಞ ಹೊವಾರ್ಡ್ ಗಾರ್ಡನರ್ ಪ್ರತಿಪಾದಿಸಿರುವ ‘ಬಹುಬುದ್ಧಿವಂತಿಕೆಯ ಸಿದ್ಧಾಂತ’ವೂ (ಮಲ್ಟಿಪಲ್ ಇಂಟೆಲಿಜೆನ್ಸಸ್ ಥಿಯರಿ) ಇದನ್ನೇ ಪ್ರತಿಪಾದಿಸುತ್ತದೆ. ಬುದ್ಧಿವಂತಿಕೆಗೆ ಏಳೆಂಟು ಆಯಾಮಗಳಿವೆ, ಅವುಗಳಲ್ಲಿ ಯಾವುದಾರೂ ಒಂದೋ ಎರಡೋ ಮೂರೋ ಮಗುವಿನಲ್ಲಿ ಪ್ರಬಲವಾಗಿರಬಹುದು. ಅವುಗಳನ್ನು ಆರಂಭದಿಂದಲೇ ಗಮನಿಸಿ ಬೆಳೆಸಿದರೆ ಆ ಮಗು ಮುಂದೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಅಸಾಧಾರಣವಾದುದನ್ನು ಸಾಧಿಸಬಹುದು ಎಂದಿದ್ದಾರೆ ಗಾರ್ಡನರ್.

ಕೆಲವರಲ್ಲಿ ದೃಶ್ಶಿಕ (ವಿಶುವಲ್) ಶಕ್ತಿ ಪ್ರಬಲವಾಗಿರುತ್ತದೆ - ಆ ಶಕ್ತಿಯನ್ನು ಬೆಳೆಸಿದರೆ ಮುಂದೆ ಅವರು ಉತ್ತಮ ವಿನ್ಯಾಸಕಾರರಾಗಿ ಬೆಳೆಯಬಹುದು. ಕೆಲವರಲ್ಲಿ ಶಾಬ್ದಿಕ (ವರ್ಬಲ್) ಪ್ರತಿಭೆ ದಟ್ಟವಾಗಿರುತ್ತದೆ- ಮುಂದೆ ಅವರು ಉತ್ತಮ ಬರೆಹಗಾರರಾಗಿ, ಮಾತುಗಾರರಾಗಿ ಬೆಳೆಯಬಹುದು. ಇನ್ನು ಕೆಲವರಲ್ಲಿ ಸಂಗೀತದ (ಮ್ಯೂಸಿಕಲ್) ಕೌಶಲ ಆಳದಲ್ಲಿ ಬೇರೂರಿರುತ್ತದೆ- ಅವರು ಮುಂದೆ ಜಗತ್ತು ಮೆಚ್ಚುವ ಸಂಗೀತಗಾರರಾಗಿ ಬೆಳೆಯಬಹುದು. ಮತ್ತೆ ಕೆಲವರಲ್ಲಿ ತಾರ್ಕಿಕ (ಲಾಜಿಕಲ್) ಶಕ್ತಿ ಪ್ರಬಲವಾಗಿರುತ್ತದೆ- ಅವರು ಮುಂದೆ ವಿಜ್ಞಾನಿಯಾಗಿಯೋ, ಇಂಜಿನಿಯರಾಗಿಯೋ ಹೆಸರು ಮಾಡಬಹುದು. ಹಲವರಲ್ಲಿ ದೈಹಿಕ (ಬಾಡಿಲೀ) ಕೌಶಲಗಳು ಅಪೂರ್ವವಾಗಿರುತ್ತವೆ- ಅಂಥವರು ಮುಂದೆ ಕ್ರೀಡಾಕ್ಷೇತ್ರದಲ್ಲಿ ಪ್ರಸಿದ್ಧಿಗೇರಬಹುದು... ಇದನ್ನು ಗಾರ್ಡನರ್ ‘ಮಲ್ಟಿಪಲ್ ಇಂಟೆಲಿಜೆನ್ಸಸ್’ ಎಂದು ಕರೆದಿರುವುದು. ತಂದೆತಾಯಿಯರು ಮತ್ತು ಅಧ್ಯಾಪಕರು ಇದನ್ನು ಗುರುತಿಸುವುದನ್ನು ಮರೆತರೆ ತಮ್ಮ ಮಕ್ಕಳಿಗೆ ಬಹುದೊಡ್ಡ ಅನ್ಯಾಯ ಮಾಡಿದಂತೆ. ಇಂಜಿನಿಯರ್ ಆಗಲಾರದ ವ್ಯಕ್ತಿಯೊಬ್ಬ ನಾಳೆ ದೊಡ್ಡ ಹಾಡುಗಾರ ಆಗಬಹುದು, ವೈದ್ಯಕೀಯ ವಿಜ್ಞಾನ ಓದಲಾಗದವನೊಬ್ಬ ನಾಳೆ ದೊಡ್ಡ ಕ್ರೀಡಾಪಟುವಾಗಿ ಹೊರಹೊಮ್ಮಬಹುದು, ಚಿತ್ರಕಾರನೋ, ಸಾಹಿತಿಯೋ, ವಕೀಲನೋ, ಪತ್ರಕರ್ತನೋ, ಸಂಶೋಧನಕೋ, ಲೆಕ್ಕಪರಿಶೋಧಕನೋ, ಅಧಿಕಾರಿಯೋ, ಉದ್ಯಮಿಯೋ ಆಗಬಹುದು. ಈ ಸ್ಥಾನಗಳಲ್ಲಿರುವುದು ಅವಮಾನವೇ? ಇವುಗಳಿಂದ ವ್ಯಕ್ತಿಯೊಬ್ಬ ತನ್ನ ಬದುಕಿನ ತೃಪ್ತಿ ಕಂಡುಕೊಳ್ಳಲು ಸಾಧ್ಯವಿಲ್ಲವೇ?

ಎಲ್ಲರಿಗಿಂತ ಮೊದಲು ಅಪ್ಪ-ಅಮ್ಮಂದಿರು ತಮ್ಮ ಭ್ರಮೆಗಳಿಂದ ಹೊರಬರಬೇಕು. ಧನದಾಹಿಗಳ ಸ್ವಾರ್ಥದಲ್ಲಿ ನಲುಗುತ್ತಿರುವ ಶಿಕ್ಷಣವಲಯ ನಿರ್ಮಿಸಿರುವ ವ್ಯೂಹದೊಳಗೆ ತಾವು ಬಂಧಿಗಳಾಗಿದ್ದೇವೆ ಎಂಬುದನ್ನು ತಿಳಿಯಬೇಕು. ಮಕ್ಕಳು ನಮ್ಮ ಭ್ರಮೆಗಳನ್ನೆಲ್ಲ ಹೊತ್ತುಕೊಂಡು ಓಡಬೇಕಾದ ಕತ್ತೆಗಳಲ್ಲ. ಅವರಿಗೂ ಅವರದ್ದೇ ಆದ ಮನಸ್ಸು, ಕೌಶಲ, ಪ್ರತಿಭೆ, ಕನಸುಗಳು ಇರುತ್ತವೆ. ಅವು ಹೂವಿನಂತೆ ಸ್ವಾಭಾವಿಕವಾಗಿ ವಿಕಾಸವಾಗಿ, ಹೀಚಾಗಿ, ಕಾಯಿಯಾಗಿ, ಹಣ್ಣಾಗಿ ಸುತ್ತಲಿನ ಸಮಾಜಕ್ಕೆ ಹಿತವಾಗಿ, ಉಪಯುಕ್ತವಾಗಿ ಪರಿಣಮಿಸಲು ಅವಕಾಶ ಮಾಡಿಕೊಡೋಣ. ಇಲ್ಲವಾದರೆ ಭವಿಷ್ಯ ನಮ್ಮನ್ನು ಕ್ಷಮಿಸಲಾರದು.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಮಾರ್ಚ್ 29, 2024

ಪ್ರತಿಯೊಬ್ಬ ಕನ್ನಡಿಗನ ಬಳಿ ಇರಬೇಕಾದ ಕೃತಿ ʼಸರಿಗನ್ನಡ-ಸರಿಕನ್ನಡʼ

  • ಪುಸ್ತಕ: ಸರಿಗನ್ನಡ-ಸರಿಕನ್ನಡ
  • ಲೇಖಕರು: ಕೊಕ್ಕಡ ವೆಂಕಟ್ರಮಣ ಭಟ್‌, ಮಂಡ್ಯ
  • ಪ್ರಕಾಶಕರು: ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.)
  • ವರ್ಷ: 2023
  • ಪುಟಗಳು: 180
  • ಬೆಲೆ: ರೂ. 200
  • ಸಂಪರ್ಕ: ಕೊಕ್ಕಡ ವೆಂಕಟ್ರಮಣ ಭಟ್‌ (9972448183), ಸಿರಿಬಾಗಿಲು ರಾಮಕೃಷ್ಣ ಮಯ್ಯ (9448344380)

ಎಲ್ಲರೂ ಕನ್ನಡ ರಕ್ಷಣೆಯ ಬಗ್ಗೆ ಮಾತಾಡುವವರೇ; ಆದರೆ ಕನ್ನಡ ಮಾತ್ರ ದಿನೇದಿನೇ ಸೊರಗುತ್ತಲೇ ಇದೆ. ದಿನಬೆಳಗಾದರೆ ಅಪಭ್ರಂಶಗಳೇ ಕಣ್ಣಿಗೆ ರಾಚುತ್ತಿರುತ್ತವೆ. ಭಾಷೆಯ ಸರಿಯಾದ ಬಳಕೆಯ ಬಗ್ಗೆ ಮಾತಾಡುವವರು ಬೆರಳೆಣಿಕೆಯಷ್ಟು. ಮಾತಾಡಿದರೂ ನೂರೆಂಟು ಕಾರಣ ಹೇಳಿ ಅವರ ಬಾಯಿ ಮುಚ್ಚಿಸುವವರೇ ಹೆಚ್ಚು.

ರಸ್ತೆಯಲ್ಲಿ ಐದು ನಿಮಿಷ ಓಡಾಡಿದರೆ ʼಶುಭಾಷಯʼದ ದೊಡ್ಡದೊಡ್ಡ ಫ್ಲೆಕ್ಸುಗಳು ಕಾಣುತ್ತವೆ. ಮೊಬೈಲು, ಸಾಮಾಜಿಕ ತಾಣಗಳಲ್ಲಂತೂ ದಿನಕ್ಕೆ ಹತ್ತಾರು ಬಾರಿ ʼಶುಭಾಷಯʼಗಳ ವಿನಿಮಯ ಆಗುತ್ತಾ ಇರುತ್ತದೆ. ಮೊನ್ನೆ ಒಂದು ಅಂಗಡಿಯ ಎದುರು ʼಹೊಸವರ್ಷದ ಶುಭಾಶಯಗಳುʼ ಎಂದು ಸರಿಯಾಗಿಯೇ ಬರೆದಿದ್ದರು. ಅಂಗಡಿಗೆ ಬಂದಿದ್ದಾತ ತನ್ನ ಹೆಂಡತಿಗೆ ಅದನ್ನು ತೋರಿಸಿ, “ನೋಡು! ಎಷ್ಟೊಂದು ತಪ್ಪು ಬರೆದಿದ್ದಾರೆ; ಅದು ಶುಭಾಷಯ ಆಗಬೇಕು” ಎಂದು ತಿಳಿಹೇಳುತ್ತಿದ್ದ. ತಪ್ಪುಗಳನ್ನೇ ಎಲ್ಲೆಡೆ ಬರೆಯುತ್ತಾ ಕೊನೆಗೆ ಸರಿಯಾದುದನ್ನೇ ತಪ್ಪು ಎಂದು ಜನರು ಸಾಧಿಸುವ ಕಾಲಕ್ಕೆ ಬಂದಿದ್ದೇವೆ. "ಸರಿಯಾಗಿ ಬರೆಯಲು ಬರುತ್ತಿಲ್ಲವೇ? ತಪ್ಪುಗಳನ್ನೇ ಜನಸ್ನೇಹೀ ಪರ್ಯಾಯ ಭಾಷೆಯೆಂದು ಬಿಂಬಿಸಿದರಾಯ್ತು" ಎಂಬ ಹೊಸ ವಾದಗಳನ್ನೂ ಹುಟ್ಟುಹಾಕುತ್ತಿದ್ದೇವೆ. ಇದು ಕೊನೆಗೆ ಎಲ್ಲಿಗೆ ತಲುಪೀತು? ಕನ್ನಡ ರಕ್ಷಣೆಗಾಗಿ ಕಲಾವಿದರು ಸಾಹಿತಿಗಳ ಹೊಸ ಸಂಘಟನೆ ಮಾಡುತ್ತಿರುವುದಾಗಿಯೂ, ಇದಕ್ಕೆ ಸಹಕರಿಸಿದರೆ "ನಿಮಗೆ ಹೊಳ್ಳೆದು ಹಾಗುತದೆ" ಎಂಬುದಾಗಿಯೂ ಒಬ್ಬ ಸಂಘಟಕರು ನನಗೆ ಇತ್ತೀಚೆಗೆ ಸಂದೇಶ ಕಳಿಸಿದ್ದರು. ಇವರ ಪ್ರಕಾರ ಕನ್ನಡದ ರಕ್ಷಣೆ ಎಂದರೆ ಏನು?

ಮಾಧ್ಯಮಗಳು ಭಾಷೆಯನ್ನು ಉಳಿಸಿ, ಬೆಳೆಸುವ ವೇದಿಕೆಗಳೆಂಬ ಹೆಗ್ಗಳಿಕೆ ಹೊಂದಿದ್ದವು. ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಮುದ್ರಣ ಮಾಧ್ಯಮದ ಕೊಡುಗೆಯಂತೂ ಅಪಾರ. “ಪತ್ರಿಕೆಯೆಂದರೆ ಪದಗಳ ಟಂಕಸಾಲೆ”ಯೆಂದು ಹಿರಿಯರು ಹೇಳಿದ್ದುಂಟು. ಆದರೆ ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳು, ಟಿವಿ ವಾಹಿನಿಗಳಲ್ಲಿ ಭಾಷೆಯ ಕಗ್ಗೊಲೆಯಾಗುತ್ತಿರುವುದು ನೋಡಿದರೆ ತೀರಾ ಕಸಿವಿಸಿ ಎನಿಸುತ್ತದೆ. ಹೆಜ್ಜೆಹೆಜ್ಜೆಗೂ ಅಪಶಬ್ದಗಳು, ಕಾಗುಣಿತ ದೋಷಗಳು… ಇವು ಮಾಧ್ಯಮಗಳ ಗುಣಮಟ್ಟವನ್ನು ಹೇಳುವುದಕ್ಕಿಂತಲೂ ನಮ್ಮ ಶಿಕ್ಷಣದ ಹಾಗೂ ಅಧ್ಯಾಪಕರ ಗುಣಮಟ್ಟದತ್ತಲೇ ಹೆಚ್ಚು ಬೊಟ್ಟು ಮಾಡುತ್ತಿರುವಂತಿದೆ.

ಇರಲಿ. ಭಾಷೆಯ ಉಳಿವಿಗೆ, ಸರಿಯಾದ ಬಳಕೆಯ ಬೆಳವಣಿಗೆಗೆ ನಾವೇನು ಮಾಡಬಹುದು ಎಂಬ ಪ್ರಶ್ನೆಗೆ ಇತ್ತೀಚೆಗೆ ಪ್ರಕಟವಾಗಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರ ʼಸರಿಗನ್ನಡ-ಸರಿನ್ನಡʼ ಕೃತಿಯು ಅತ್ಯಂತ ಸೂಕ್ತ ಉತ್ತರದಂತಿದೆ. ಕನ್ನಡವನ್ನು ಸಾಕಷ್ಟು ಚೆನ್ನಾಗಿ ಬಲ್ಲವರೂ ಪ್ರತಿದಿನ ಮಾಡುವ ಹತ್ತಾರು ತಪ್ಪುಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ, ಸರಿಯಾದ ಬಳಕೆ ಯಾವುದೆಂಬುದನ್ನು ತಿಳಿಸುವ ಅಮೂಲ್ಯ ಕೆಲಸವನ್ನು ಭಟ್ಟರು ಈ ಪುಸ್ತಕದ ಮೂಲಕ ಮಾಡಿದ್ದಾರೆ.

ಪತ್ರಿಕೆಗಳಲ್ಲಿ ದಿನಕ್ಕೊಮ್ಮೆಯಾದರೂ ʼಅಪ್ರಾಪ್ತನ ಬಂಧನʼ ಎಂಬ ಬಳಕೆಯನ್ನು ಕಾಣುತ್ತೇವೆ. ಭಾಷಣಕಾರರು ಮಾತಿಗೆ ತೊಡಗಿದರೆ ʼಅಜಗಜಾಂತರ ವ್ಯತ್ಯಾಸʼ ಎನ್ನುತ್ತಾರೆ. ಅನಾನುಕೂಲ, ಯಡವಟ್ಟು, ನಾಗರೀಕ, ಜಾತ್ಯಾತೀತ, ಕೋಟ್ಯಾಧಿಪತಿ, ಸದಾವಕಾಶ, ರೋಧನ, ಪೂರ್ವಾಗ್ರಹ, ಧಾಳಿ, ಅಮೂಲಾಗ್ರ… ಹೀಗೆ ತಪ್ಪುಬಳಕೆಗಳನ್ನೇ ಎಲ್ಲೆಡೆ ಕಾಣುತ್ತೇವೆ. ಕನ್ನಡ ಅಧ್ಯಾಪಕರು, ಕನ್ನಡ ಪತ್ರಕರ್ತರು, ಸಾಹಿತಿಗಳು… ಇವುಗಳನ್ನೇ ಸಲೀಸಾಗಿ ಬರೆಯುತ್ತಿರುತ್ತಾರೆ. ತಪ್ಪುಗಳನ್ನೇ ಬರೆಯುತ್ತಾ ಇವೇ ಸರಿಯಾದ ಬಳಕೆಗಳು ಎಂದು ವಾದಿಸುವಷ್ಟರಮಟ್ಟಿಗೆ ಇವು ದಿನನಿತ್ಯದ ಬಳಕೆಗಳಲ್ಲಿ ಗಟ್ಟಿಯಾಗಿಬಿಟ್ಟಿವೆ. ಇವು ಯಾಕೆ ತಪ್ಪು, ಸರಿಯಾದ ಬಳಕೆ ಯಾವುದು, ಸರಿಯಾದುದನ್ನು ಉಳಿಸಿ ಬೆಳೆಸಬೇಕಾದ ಅಗತ್ಯ ಏನು ಎಂಬುದನ್ನು ತಮ್ಮ ಪುಸ್ತಕದಲ್ಲಿ ಸಮರ್ಥವಾಗಿ ವಿವರಿಸಿದ್ದಾರೆ ಶ್ರೀ ವೆಂಕಟ್ರಮಣ ಭಟ್ಟರು.

ಈ ರೀತಿಯ ಪದಗಳನ್ನು ಅಕಾರಾದಿ ಜೋಡಿಸಿರುವುದರಿಂದ ಪರಾಮರ್ಶನದ ದೃಷ್ಟಿಯಿಂದಲೂ ಕೃತಿ ಅನುಕೂಲಕರವಾಗಿದೆ. ಕೃತಿಕಾರರು ಸುಮಾರು ನಾಲ್ಕು ದಶಕಗಳ ಕಾಲ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವುದರಿಂದ ಪದಗಳ ವ್ಯುತ್ಪತ್ತಿ, ಅವುಗಳ ಅರ್ಥ, ತಪ್ಪು ಬಳಕೆಯಿಂದ ಆಗುವ ಅನರ್ಥಗಳನ್ನು ಅಧಿಕೃತವಾಗಿ ಹೇಳಬಲ್ಲವರಾಗಿದ್ದಾರೆ.

ʼಸರಿಗನ್ನಡ-ಸರಿಕನ್ನಡʼ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡದೊಂದು ಕೊಡುಗೆ. ಪ್ರತೀ ಕನ್ನಡ ಪತ್ರಿಕೆ, ಟಿವಿ ವಾಹಿನಿಗಳೇ ಮೊದಲಾದ ಮಾಧ್ಯಮಗಳು ತಮ್ಮ ಕಚೇರಿಗಳಲ್ಲಿ ಇಟ್ಟುಕೊಳ್ಳಬೇಕಾದ ಪುಸ್ತಕ ಇದು. ಕನ್ನಡ ಅಧ್ಯಾಪಕರು, ವಿದ್ಯಾರ್ಥಿಗಳು, ಪತ್ರಕರ್ತರಂತೂ ತಮ್ಮ ಬಳಿ ಸದಾ ಇರಿಸಿಕೊಳ್ಳಬೇಕಾದ ಕೃತಿಯಿದು. ಅಷ್ಟೇ ಏಕೆ, ಭಾಷೆಯ ಬಗ್ಗೆ ಪ್ರೀತಿ-ಅಭಿಮಾನವುಳ್ಳ ಪ್ರತಿಯೊಬ್ಬ ಕನ್ನಡಿಗನೂ ಗಮನಿಸಬೇಕಾದ, ಪರಸ್ಪರ ಹಂಚಿಕೊಳ್ಳಬೇಕಾದ ಪುಸ್ತಕ ಇದೆಂದರೆ ಅತಿಶಯವೇನೂ ಇಲ್ಲ.

ಈ ಕಾಲಕ್ಕೆ ಬಹಳ ಅಗತ್ಯವಿರುವ ಕೃತಿಯಿದು. ಇಂತಹದೊಂದು ಮಹತ್ವದ ಪುಸ್ತಕ ರಚಿಸಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರಿಗೂ, ಇದನ್ನು ಪ್ರಕಟಿಸಿರುವ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೂ ನಾವು ಆಭಾರಿಗಳಾಗಿರಬೇಕು. ಭೌಗೋಳಿಕವಾಗಿ ಕರ್ನಾಟಕದ ಹೊರಗಿರುವ, ಗಡಿನಾಡಿನ ಸಂಸ್ಥೆಯೊಂದು ಇಂತಹ ಘನಕಾರ್ಯವನ್ನು ಮಾಡಿದೆ ಎಂಬುದನ್ನು ನಾವೆಲ್ಲ ಗಮನಿಸಬೇಕು ಮತ್ತು ಅಭಿನಂದಿಸಬೇಕು.

 - ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಜನವರಿ 27, 2024

ಭಾರತೀಯ ಪತ್ರಿಕಾಲೋಕದ ಹಿಂದಿನ ಕಥೆ

28 ಜನವರಿ 2024ರ ʻಉದಯವಾಣಿ ಸಾಪ್ತಾಹಿಕ ಸಂಪದʼದಲ್ಲಿ ಪ್ರಕಟವಾದ ಲೇಖನ

ಕಾಫಿಯಿಲ್ಲದ ಬೆಳಗನ್ನಾದರೂ ಊಹಿಸಬಹುದು, ಪತ್ರಿಕೆಯಿಲ್ಲದ ಮುಂಜಾವನ್ನು ಊಹಿಸಿಕೊಳ್ಳುವುದು ಕಡುಕಷ್ಟ. ಪತ್ರಿಕೆಯ ಜಾಗದಲ್ಲಿ ಮೊಬೈಲೇನೋ ಬಂದು ಕೂತಿರಬಹುದು, ಆದರೆ ಮನುಷ್ಯನ ದಿನದ ಬಾಗಿಲನ್ನು ತೆರೆಯುವುದು ಯಾವುದೋ ಒಂದು ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಮಾಧ್ಯಮ ಬಂದರೂ ಪತ್ರಿಕೆಯ ಮೇಲೆ ಕಣ್ಣಾಡಿಸದೆ ತೃಪ್ತಿಯಿಲ್ಲ ಎನ್ನುವ ಮಂದಿಯಂತೂ ಬೇಕಾದಷ್ಟಿದ್ದಾರೆ.

ಪತ್ರಿಕೆಗಳನ್ನು ಇಷ್ಟೊಂದು ಹಚ್ಚಿಕೊಂಡಿರುವ ಎಲ್ಲರಿಗೂ ‘ಜನರನ್ನು ಈ ಮಟ್ಟಕ್ಕೆ ಪ್ರಭಾವಿಸಿರುವ ಇಂತಹದೊಂದು ಮಾಧ್ಯಮ ಹೇಗೆ ಹುಟ್ಟಿಕೊಂಡಿತು? ಯಾವಾಗ ಹುಟ್ಟಿಕೊಂಡಿತು?’ ಎಂಬ ಪ್ರಶ್ನೆ ಕಾಡದಿರದು.  ಆ ಕಥೆ ಬಹಳ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಾವು ಭಾರತದಲ್ಲಿ ಪತ್ರಿಕೆಗಳು ಹೇಗೆ ಹುಟ್ಟಿಕೊಂಡವು? ನಮ್ಮ ದೇಶದ ಮೊದಲ ಪತ್ರಿಕೆಯ ಕಥೆ ಏನು? ಆರಂಭಿಸಿದವರು ಯಾರು? ಇತ್ಯಾದಿಗಳನ್ನು ಗಮನಿಸೋಣ. 

ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಭಾರತದಲ್ಲಿ ಪತ್ರಿಕೆಗಳೇ ಇರಲಿಲ್ಲ. ಇರಲಿಲ್ಲ ಎಂದರೆ ಜನ ಪತ್ರಿಕೆಗಳನ್ನು ಕಂಡೇ ಇರಲಿಲ್ಲ ಎಂದಲ್ಲ. ಯುರೋಪಿನ ಪತ್ರಿಕೆಗಳನ್ನು ಜನರು ಓದುತ್ತಿದ್ದುದುಂಟು. ಇಲ್ಲಿ ಬ್ರಿಟಿಷರ ವ್ಯಾಪಾರ ವ್ಯವಹಾರ ಜೋರಾಗಿದ್ದುದರಿಂದ, ಇಂಗ್ಲೆಂಡಿನಿಂದ ಹಡಗುಗಳ ಮೂಲಕ ಪತ್ರಿಕೆಗಳೂ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದವು. ಅವು ಮೂರ್ನಾಲ್ಕು ತಿಂಗಳು ಹಳೆಯ ಪತ್ರಿಕೆಗಳು. ಅವನ್ನೇ ಇಲ್ಲಿನ ಮಂದಿ ಬಿಸಿಬಿಸಿ ಸುದ್ದಿಗಳೆಂದು ಭಾವಿಸಿ ಓದಬೇಕಿತ್ತು.

ವ್ಯಾಪಾರಿಯ ಕನಸು:

ಭಾರತದಲ್ಲೇ ಪತ್ರಿಕೆಗಳನ್ನು ಮುದ್ರಿಸಬೇಕು ಎಂಬ ಯೋಚನೆ ಮೊದಲು ಬಂದದ್ದು ವಿಲಿಯಂ ಬೋಲ್ಟ್ಸ್ ಎಂಬ ಯುರೋಪಿಯನ್ ವ್ಯಾಪಾರಿಗೆ. ಭಾರತದಲ್ಲಿ ಪತ್ರಿಕೆಗಳಿಲ್ಲದೆ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದೂ, ಯಾರಾದರೂ ಮುದ್ರಣಾಲಯವನ್ನು ಸ್ಥಾಪಿಸುವ ಆಸಕ್ತರಿದ್ದರೆ ಅವರಿಗೆ ತಾನು ಸಹಾಯ ಮಾಡುತ್ತೇನೆ ಎಂದೂ, ತನ್ನಲ್ಲಿ ಸಾಕಷ್ಟು ವಿಶೇಷ ಸುದ್ದಿಗಳಿದ್ದು ಅವನ್ನು ಓದಬಯಸುವವರು ತನ್ನಮನೆಗೆ ಬೆಳಗ್ಗಿನ ಹೊತ್ತು ಬರಬಹುದು ಎಂದೂ ಒಂದು ಕರಪತ್ರವನ್ನು ಸಿದ್ಧಪಡಿಸಿ ಅವನು ಕಲ್ಕತ್ತಾದ ಕೌನ್ಸಿಲ್ ಹೌಸಿನ ಹೆಬ್ಬಾಗಿಲಿನಲ್ಲಿ ಅಂಟಿಸಿದ. ಅದು 1760ರ ದಶಕದ ಕೊನೆಯ ಭಾಗ.

ಕಂಪೆನಿ ಸರ್ಕಾರಕ್ಕೆ ಅಲ್ಲೇ ಅಪಾಯದ ಮುನ್ಸೂಚನೆ ಕಂಡಿತು. ಇದನ್ನು ಚಿಗುರಲ್ಲೇ ಚಿವುಟದೆ ಹೋದರೆ ನಮಗೇ ಸಂಚಕಾರ ಉಂಟಾದೀತು ಎಂದು ಭಾವಿಸಿದ ಕಂಪೆನಿ ಅಧಿಕಾರಿಗಳು ಬೋಲ್ಟ್ಸ್‍ನನ್ನು ಗಡಿಪಾರು ಮಾಡುವುದೇ ಸರಿ ಎಂದು ಯೋಚಿಸಿದರು. ಆತ ಕೂಡಲೇ ಬಂಗಾಲ ತೊರೆದು ಮದ್ರಾಸಿಗೆ ಹೋಗಿ, ಅಲ್ಲಿಂದ ಇಂಗ್ಲೆಂಡ್‍ನ ಹಡಗು ಹಿಡಿಯಬೇಕು ಎಂದು ಸರ್ಕಾರ ಆದೇಶಿಸಿತು. ಅಲ್ಲಿಗೆ ಭಾರತದ ಮೊದಲ ಪತ್ರಿಕೆ ಹುಟ್ಟುವ ಮೊದಲೇ ಸತ್ತುಹೋಯಿತು.

ಬೆಂಗಾಲ್ ಗಜೆಟ್:

ಇದಾಗಿ ಹನ್ನೆರಡು ವರ್ಷಗಳ ಬಳಿಕ ಭಾರತದ ಮೊತ್ತಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ನ ಉಗಮವಾಯಿತು. 1780ರ ಜನವರಿ 29ರಂದು ಜೇಮ್ಸ್ ಆಗಸ್ಟಸ್ ಹಿಕಿ ಎಂಬ ಇನ್ನೊಬ್ಬ ಯುರೋಪಿಯನ್ ವ್ಯಾಪಾರಿ ‘ಬೆಂಗಾಲ್ ಗಜೆಟ್’ನ ಮೊದಲ ಸಂಚಿಕೆಯನ್ನು ಹೊರಡಿಸಿದ. ಅದಕ್ಕೆ ‘ದಿ ಒರಿಜಿನಲ್ ಕಲ್ಕತ್ತಾ ಜನರಲ್ ಅಡ್ವಟೈಸರ್’ ಎಂಬ ಇನ್ನೊಂದು ಹೆಸರೂ ಇತ್ತು. ಆ ಪತ್ರಿಕೆಗೆ ಹಿಕಿಯೇ ಲೇಖಕ, ವರದಿಗಾರ, ಪ್ರಕಾಶಕ, ಮುದ್ರಕ ಎಲ್ಲವೂ ಆಗಿದ್ದರಿಂದ ಅದಕ್ಕೆ ‘ಹಿಕೀಸ್ ಗಜೆಟ್’ ಎಂಬ ಹೆಸರೂ ಇತ್ತು.

ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕೇಂದ್ರಸ್ಥಾನ ಬಂಗಾಳದ ಕಲ್ಕತ್ತಾವೇ ಆಗಿದ್ದುದರಿಂದ ನಮ್ಮ ಪತ್ರಿಕೋದ್ಯಮದ ಜನ್ಮಸ್ಥಳವೂ ಅದೇ ಆಯಿತು. ‘ಬೆಂಗಾಲ್ ಗಜೆಟ್’ ಇಂಗ್ಲಿಷ್ ಭಾಷೆಯ ವಾರಪತ್ರಿಕೆ ಆಗಿತ್ತು. 12 ಇಂಚು ಉದ್ದ, 8 ಇಂಚು ಅಗಲದ ಈ ಪುಟ್ಟ ಪತ್ರಿಕೆಯಲ್ಲಿ ನಾಲ್ಕು ಪುಟಗಳಿದ್ದವು. ಪುಟಗಳನ್ನು ತಲಾ ಮೂರು ಕಾಲಂಗಳಾಗಿ ವಿಭಾಗಿಸಲಾಗಿತ್ತು. ಕಂಪೆನಿ ಅಧಿಕಾರಿಗಳು, ಇಂಗ್ಲಿಷ್ ಬಲ್ಲ ಕೆಲವು ಭಾರತೀಯರು ಇದರ ಓದುಗರಾಗಿದ್ದರು. ಸರಾಸರಿ 400 ಪ್ರತಿಗಳಷ್ಟು ‘ಗಜೆಟ್’ ಪ್ರಕಟವಾಗುತ್ತಿತ್ತು. ಅದರ ಮುದ್ರಣವೇನೂ ಅಷ್ಟೊಂದು ಸೊಗಸಾಗಿರಲಿಲ್ಲ. ಸುದ್ದಿಗಳಿಗಿಂತ ಜಾಹೀರಾತುಗಳೇ ಹೆಚ್ಚಾಗಿದ್ದವು.

ಯಾರೀತ ಹಿಕಿ?

‘ಈಸ್ಟ್ ಇಂಡಿಯಾ ಕಂಪೆನಿಯ ಮಾಜಿ ಮುದ್ರಕ’ ಎಂದು ಜೇಮ್ಸ್ ಆಗಸ್ಟಸ್ ಹಿಕಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ಆತ ಮೂಲತಃ ಐರ್ಲೆಂಡಿನವನು. 1740ರ ಆಸುಪಾಸಿನಲ್ಲಿ ಜನಿಸಿದ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹಿಕಿ 1772ರಲ್ಲಿ ಭಾರತಕ್ಕೆ ಬಂದು ಈಸ್ಟ್ ಇಂಡಿಯಾ ಕಂಪೆನಿ ಸೇರಿಕೊಂಡ. ‘ಶಸ್ತ್ರಚಿಕಿತ್ಸಕ’ನಾಗಿ, ಮುದ್ರಣ ಸಹಾಯಕನಾಗಿ ಆತ ಕಾರ್ಯನಿರ್ವಹಿಸುತ್ತಿದ್ದ. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ಜೈಲುಪಾಲಾದ. ಜೈಲಿನಲ್ಲಿದ್ದಾಗಲೇ ಒಂದು ಮುದ್ರಣ ಯಂತ್ರ ಪಡೆದುಕೊಂಡು ಮುದ್ರಣದ ಕೆಲಸ ಆರಂಭಿಸಿದ. 1777ರಲ್ಲಿ ಜೈಲಿನಿಂದ ಹೊರಬಂದು ತನ್ನದೇ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ. ಮೂರು ವರ್ಷಗಳ ಬಳಿಕ ಅವನಿಂದಲೇ ಭಾರತದ ಮೊದಲ ಪತ್ರಿಕೆ ಆರಂಭವಾಯಿತು.

ಹಿಕಿ ಒಬ್ಬ ವಿಲಕ್ಷಣ ಪ್ರವೃತ್ತಿಯ ವ್ಯಕ್ತಿ. ಆತನ ‘ಬೆಂಗಾಲ್ ಗಜೆಟ್’ ಆರಂಭದಲ್ಲಿ ಗಂಭೀರವಾಗಿಯೇ ಪ್ರಕಟವಾಗುತ್ತಿತ್ತು. ತನ್ನದು “ಎಲ್ಲ ಪಕ್ಷಗಳಿಗೂ ಮುಕ್ತವಾದ ಆದರೆ ಯಾರಿಂದಲೂ ಪ್ರಭಾವಕ್ಕೊಳಗಾಗದ ಪತ್ರಿಕೆ” ಎಂದು ಪತ್ರಿಕೆಯ ಮೇಲ್ಭಾಗದಲ್ಲೇ ಹಿಕಿ ಪ್ರಕಟಿಸುತ್ತಿದ್ದ. ಆದರೆ ಎಂಟ್ಹತ್ತು ತಿಂಗಳಲ್ಲಿ ‘ಇಂಡಿಯಾ ಗಜೆಟ್’ ಎಂಬ ಇನ್ನೊಂದು ಪತ್ರಿಕೆ ಆರಂಭವಾದಾಗ, ಹಿಕಿಗೆ ಆತಂಕವಾಯಿತು. ತನ್ನ ಓದುಗರು ಎಲ್ಲಿ ಕಡಿಮೆಯಾಗುತ್ತಾರೋ ಎಂಬ ಆತಂಕದಲ್ಲಿ ತನ್ನ ಪತ್ರಿಕೆಯ ಧ್ವನಿಯನ್ನೇ ಬದಲಾಯಿಸಿಕೊಂಡ. ಸುದ್ದಿಗಳಲ್ಲಿ, ಲೇಖನಗಳಲ್ಲಿ ಅಲ್ಲಿಯವರೆಗೆ ಇದ್ದ ಸಮತೋಲನ ಕಳೆದುಹೋಗಿ ವೈಯಕ್ತಿಕ ಪ್ರಹಾರಗಳನ್ನು ಆರಂಭಿಸಿದ.

ಪ್ರಖರ ಟೀಕಾಕಾರ:

ಸ್ವತಃ ಯುರೋಪಿಯನ್ನನಾಗಿದ್ದೂ ಹಿಕಿ ಈಸ್ಟ್ ಇಂಡಿಯಾ ಕಂಪೆನಿಯ ಪ್ರಖರ ಟೀಕಾಕಾರನಾಗಿದ್ದ. ಅಲ್ಲಿನ ಅಧಿಕಾರಿಗಳ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರಗಳನ್ನು ತೀಕ್ಷ್ಣವಾಗಿ ಖಂಡಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದ. ‘ಬೆಂಗಾಲ್ ಗಜೆಟ್’ ಬ್ರಿಟಿಷ್ ಅಧಿಕಾರಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು. ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್, ಸುಪ್ರೀಂಕೋರ್ಟಿನ ಮುಖ್ಯನಾಯಾಧೀಶರಾಗಿದ್ದ ಸರ್ ಎಲಿಜಾ ಇಂಪೆಯವರನ್ನೂ ಬಿಡದೆ ಕಾಡಿದ ಹಿಕಿ.

ಆದರೆ ಟೀಕೆಯ ಭರದಲ್ಲಿ ಹಿಕಿ ವೈಯಕ್ತಿಕ ದಾಳಿಯಲ್ಲಿ ತೊಡಗಿದ. ತನಗಾಗದಿದ್ದವರ ಖಾಸಗಿ ಬದುಕಿನ ಕುರಿತು ವ್ಯಂಗ್ಯವಾಡಿದ. ಹೇಸ್ಟಿಂಗ್ಸ್‍ನ ಪತ್ನಿಯ ಕುರಿತೂ ದೋಷಾರೋಪಣೆ ಮಾಡಿದ. ಇದರಿಂದಾಗಿ ಹಿಕಿ ಪದೇಪದೇ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಕೋರ್ಟು ಕಚೇರಿ ಅಲೆದಾಡಬೇಕಾಯಿತು. ಸಾವಿರಾರು ರುಪಾಯಿ ದಂಡ ಹಾಕಿಸಿಕೊಳ್ಳಬೇಕಾಯಿತು. ಬೆಂಗಾಲ್ ಗಜೆಟ್‍ನ ಅಂಚೆ ಸೌಲಭ್ಯ ರದ್ದಾಯಿತು. ಕೊನೆಗೊಂದು ದಿನ ಹಿಕಿಯ ಮುದ್ರಣಾಲಯವನ್ನೇ ಸರ್ಕಾರ ವಶಪಡಿಸಿಕೊಂಡು ಬೀಗ ಜಡಿಯಿತು. 1782ರ ಮಾರ್ಚ್ 23ರಂದು ಗಜೆಟ್‍ನ ಕೊನೆಯ ಸಂಚಿಕೆ ಪ್ರಕಟವಾಯಿತು.

ಮರೆತುಹೋದ ಮಹಾನುಭಾವ:

ಹಿಕಿಯ ಬಗ್ಗೆ ಇತಿಹಾಸದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ಆದರೆ ಆತನಿಂದಲೇ ಭಾರತೀಯ ಪತ್ರಿಕಾಲೋಕ ಹುಟ್ಟಿಕೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. ಆತ ಒಳ್ಳೆಯ ಉದ್ದೇಶದಿಂದಲೇ ಪತ್ರಿಕೆ ಆರಂಭಿಸಿದ, ಬ್ರಿಟಿಷರ ಭ್ರಷ್ಟಾಚಾರಗಳನ್ನು ಕಟುವಾಗಿ ಟೀಕಿಸಿದ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕೊನೆಯವರೆಗೂ ಹೋರಾಡಿದ. ಆದರೆ ಒಂದು ಹಂತದಲ್ಲಿ ಆತ ಬೆಳೆಸಿಕೊಂಡ ಕೀಳು ಅಭಿರುಚಿ ಹಾಗೂ ಕಂಪೆನಿಯ ಪೂರ್ವಗ್ರಹದಿಂದ ಆತನಿಗೆ ಹೆಚ್ಚುಸಮಯ ಪತ್ರಿಕೆಯನ್ನು ನಡೆಸಲಾಗಲಿಲ್ಲ. ಆತನನ್ನು ‘ಮರೆತುಹೋದ ಮಹಾನುಭಾವ’ ‘ಭಾರತೀಯ ಪತ್ರಿಕೋದ್ಯಮದ ಪಿತಾಮಹ’ ಅಂತಲೂ ಇತಿಹಾಸಕಾರರು ದಾಖಲಿಸಿದ್ದುಂಟು.

ಒಟ್ಟಿನಲ್ಲಿ, ಬೆಂಗಾಲ್ ಗಜೆಟ್‍ನ ಹುಟ್ಟಿನ ನೆನಪಲ್ಲಿ ಜನವರಿ 29 ‘ಭಾರತೀಯ ಪತ್ರಿಕಾ ದಿನ’ ಎಂದು ಪ್ರಸಿದ್ಧಿಪಡೆದಿದೆ. ನಮ್ಮ ಪತ್ರಿಕಾಲೋಕದ ಸಿಂಹಾವಲೋಕನಕ್ಕೆ ಇದು ಸುದಿನ.

- ಸಿಬಂತಿ ಪದ್ಮನಾಭ ಕೆ. ವಿ.