ಬುಧವಾರ, ಆಗಸ್ಟ್ 28, 2019

ಯಾಣದ ಸೊಬಗಿನ ಹಿಂದಿನ ಕೈಗಳ ಕಾಣಾ!

27 ಆಗಸ್ಟ್ 2019ರ ಪ್ರಜಾವಾಣಿ - ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟವಾದ ಲೇಖನ
ಮೂಲ ಲೇಖನಕ್ಕೆ ಇಲ್ಲಿ ಕ್ಲಿಕ್ಕಿಸಿ.

ಶೈಲಾ ಪಟಗಾರ ಮತ್ತು ವಿನೋದ ಮರಾಟಿ. ಈ ಹೆಸರುಗಳನ್ನು ನೀವು ಕೇಳದೇ ಇರಬಹುದು. ಆದರೆ ಕಳೆದ ಒಂದೆರಡು ವರ್ಷಗಳಲ್ಲಿ ಯಾಣಕ್ಕೇನಾದರೂ ಪ್ರವಾಸ ಕೈಗೊಂಡಿದ್ದರೆ ಖಾಕಿ ಸಮವಸ್ತ್ರದಲ್ಲಿರುವ ಈ ಇಬ್ಬರು ಮಹಿಳೆಯರನ್ನು ಮಾತ್ರ ನೋಡದೆ ಇದ್ದಿರಲಾರಿರಿ.

ಯಾಣದ ಪ್ರವೇಶದ್ವಾರದಿಂದ ತೊಡಗಿ ವಿಶ್ವಪ್ರಸಿದ್ಧ ಅವಳಿ ಶಿಲೆಗಳವರೆಗಿನ ಒಂದು ಮೈಲಿ ದೂರದ ಕಾಲುಹಾದಿಗುಂಟ ಬೆಳಗ್ಗಿನಿಂದ ಸಂಜೆಯವರೆಗೂ ಅತ್ತಿಂದಿತ್ತ ಇತ್ತಿಂದತ್ತ ಹೆಜ್ಜೆಹಾಕುವ ಈ ಹೆಣ್ಮಕ್ಕಳ ಬದ್ಧತೆ ನಿಮ್ಮಲ್ಲಿ ಸೋಜಿಗ ಹಾಗೂ ಹೆಮ್ಮೆಯನ್ನು ತುಂಬದೆ ಇರಲಾರದು.

ಕೈಯ್ಯಲ್ಲೊಂದು ಕಬ್ಬಿಣದ ಕೊಕ್ಕೆ ಹಿಡಿದು ಹೊರಟರೆಂದರೆ ಕುಡಿದು ಎಸೆದ ನೀರಿನ ಬಾಟಲ್, ತಿಂದು ಮುದುರಿದ ಕುರುಕಲಿನ ಕವರು – ಇಂಥವುಗಳನ್ನು ಬಿಟ್ಟರೆ ಅವರಿಗೆ ಬೇರೇನೂ ಕಾಣುವುದೇ ಇಲ್ಲ. ಕಂಡಲ್ಲೆಲ್ಲ ಅವುಗಳನ್ನು ಕೊಕ್ಕೆಯ ಸಹಾಯದಿಂದ ಹೆಕ್ಕಿ ಅಲ್ಲಲ್ಲೇ ಇರುವ ಕಸದ ಬುಟ್ಟಿಗಳಿಗೆ ತುಂಬಿಸುತ್ತಾ ಹೋಗುವುದೇ ಅವರ ಏಕೈಕ ಕಾಯಕ.

ಕೆಲಸ ಸರಳವಾಗಿ ಕಾಣಬಹುದು. ಆದರೆ ನಮ್ಮ ಸುತ್ತಲಿನ ನೂರಾರು ಪ್ರವಾಸೀ ತಾಣಗಳ ಪೈಕಿ ಇಂದು ಪ್ಲಾಸ್ಟಿಕ್ ಹಾವಳಿ ತೀರಾ ಕಡಿಮೆಯಿರುವುದು ಕತಗಾಲ ಅರಣ್ಯ ವಲಯಕ್ಕೆ ಸೇರುವ ಯಾಣದಲ್ಲಿ ಎಂದರೆ ಅದಕ್ಕೆ ಈ ಇಬ್ಬರು ಹೆಣ್ಮಕ್ಕಳ ಶ್ರದ್ಧೆ ಮತ್ತು ಬದ್ಧತೆಯೇ ಕಾರಣ. ಶೈಲಾ ಮತ್ತು ವಿನೋದ ಇಬ್ಬರೂ ಯಾಣದ ಸ್ಥಳೀಯರೇ. ಗ್ರಾಮ ಅರಣ್ಯ ಸಮಿತಿಯಿಂದ ಇವರು ನೇಮಕಗೊಂಡಿರುವುದೇ ಯಾಣವನ್ನು ಪ್ಲಾಸ್ಟಿಕ್‍ಮುಕ್ತವನ್ನಾಗಿ ಇರಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿರುವ ಯಾಣಕ್ಕೆ ಪ್ರತಿವರ್ಷ ಏನಿಲ್ಲವೆಂದರೂ ಒಂದು ಲಕ್ಷ ಪ್ರವಾಸಿಗರು ಭೇಟಿನೀಡುತ್ತಾರೆ.  ಯಾಣದ ನಿತ್ಯಹರಿದ್ವರ್ಣ ಕಾಡು, ಕಲ್ಮಶರಹಿತ ಗಾಳಿ, ಅಲ್ಲಲ್ಲಿ ಜಿನುಗುವ ನೀರಿನ ಒರತೆ, ಕಪ್ಪುಮಣ್ಣಿನ ಮೇಲೆ ಒಪ್ಪವಾಗಿ ಹರಡಿಕೊಂಡಿರುವ ಮೆತ್ತಗಿನ ಹುಲ್ಲು, ಎಂತಹ ಒತ್ತಡದ ಮನಸ್ಸುಗಳನ್ನೂ ಕ್ಷಣಕಾಲ ನಿರಾಳವಾಗಿಸಬಲ್ಲ ತಂಪುತಂಪು ವಾತಾವರಣ, ಎಲ್ಲವಕ್ಕೂ ಕಿರೀಟವಿಟ್ಟಂತೆ ಆಕಾಶದತ್ತ ಚಾಚಿಕೊಂಡು ನೋಡುಗರನ್ನು ನಿಬ್ಬೆರಗಾಗಿಸುವಂತೆ ನಿಂತಿರುವ ಭೈರವೇಶ್ವರ ಶಿಖರ ಮತ್ತು ಮೋಹಿನಿ ಶಿಖರಗಳೆಂಬ ಕಡುಕಪ್ಪು ಅವಳಿ ಶಿಲೆಗಳು- ಇವುಗಳತ್ತ ಪ್ರತಿದಿನ ನಾಡಿನ ವಿವಿಧ ದಿಕ್ಕುಗಳಿಂದ ನೂರಾರು ಮಂದಿ ಆಕರ್ಷಿತರಾಗಿ ಓಡಿಬರುತ್ತಾರೆ ಎಂದರೆ ಅಚ್ಚರಿಯೇನೂ ಇಲ್ಲ. ಅಚ್ಚರಿಯಾಗುವುದು ಇಂತಹ ರಮಣೀಯ ಪರಿಸರಕ್ಕೆ ಕೈಗೆ ಸಿಕ್ಕಿದ ತ್ಯಾಜ್ಯಗಳನ್ನೆಲ್ಲ ಎಸೆದು ಹೋಗುವ ಮನಸ್ಸಾದರೂ ಜನರಿಗೆ ಹೇಗೆ ಬರುತ್ತದೆ ಎಂಬ ಪ್ರಶ್ನೆಗೆ. ಇದನ್ನು ಅಚ್ಚರಿ ಎಂಬುದಕ್ಕಿಂತಲೂ ಬೇಸರ ಎಂಬುದೇ ಹೆಚ್ಚು ಸರಿ.

“ದಿನಕ್ಕೆ ಏನಿಲ್ಲವೆಂದರೂ ಐದು ಕೆ.ಜಿ. ಪ್ಲಾಸ್ಟಿಕ್ ಸಂಗ್ರಹವಾಗುತ್ತದೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಾಗಿರುವುದರಿಂದ ಈ ಪ್ರಮಾಣ ಇಮ್ಮಡಿಯಾಗುವುದೂ ಇದೆ,” ಎನ್ನುತ್ತಾರೆ ಶೈಲಾ ಪಟಗಾರ. “ಪ್ಲಾಸ್ಟಿಕ್ ಎಸೀಬೇಡಿ ಅಂತ ಕಂಡವರನ್ನೆಲ್ಲ ಬೇಡಿಕೊಳ್ಳುತ್ತೇವೆ. ಆದರೆ ಕಿವಿಗೆ ಹಾಕಿಕೊಳ್ಳುವವರು ಕಡಿಮೆ. ಬಿದ್ದ ಪ್ಲಾಸ್ಟಿಕ್ ಹೆಕ್ಕಿ ಮುಂದಕ್ಕೆ ಹೋಗುತ್ತಿದ್ದ ಹಾಗೆ ಅಲ್ಲೇ ಮತ್ತೆ ಕಸ ಎಸೆಯುವವರಿಗೇನೂ ಕಮ್ಮಿಯಿಲ್ಲ. ಅಲ್ಲೊಂದು ಪ್ಲಾಸ್ಟಿಕ್ ಉಳಿದುಕೊಂಡಿದೆ ನೋಡಿ, ಹೆಕ್ಕಿಕೊಳ್ಳಿ ಎಂದು ನಮಗೇ ತಿಳಿಹೇಳುವವರೂ ಇದ್ದಾರೆ” ಎಂದು ನೆನಪಿಸಿಕೊಳ್ಳುತ್ತಾರೆ ವಿನೋದ.

ಯಾಣದ ಶಿಲೆಗಳತ್ತ ಸಾಗುವ ಹಾದಿಯುದ್ದಕ್ಕೂ ಸ್ವಚ್ಛತೆಯನ್ನು ಕಾಪಾಡುವಂತೆ ಪ್ರವಾಸಿಗರನ್ನು ಕೋರುವ ಹತ್ತಾರು ಫಲಕಗಳನ್ನು ಅರಣ್ಯ ಇಲಾಖೆ ಸ್ಥಾಪಿಸಿದೆ. ಹೆಜ್ಜೆಗೊಂದರಂತೆ ಕಸದ ಬುಟ್ಟಿಗಳನ್ನು ಇರಿಸಿದೆ. ಆದರೆ ಅವುಗಳತ್ತ ಗಮನ ಕೊಡುವವರು ಮಾತ್ರ ವಿರಳ.

2017ರ ಆರಂಭದಲ್ಲಿ ನೇಮಕಗೊಂಡ ಶೈಲಾ-ವಿನೋದ ಇಬ್ಬರೂ ದಿನಕ್ಕೆ ಹತ್ತು-ಹದಿನೈದು ಕಿ.ಮೀ. ಓಡಾಡುತ್ತಲೇ ಈವರೆಗೆ ಮೂರು ಟನ್ ಆದರೂ ಪ್ಲಾಸ್ಟಿಕ್‍ನ್ನು ಸಂಗ್ರಹಿಸಿರಬಹುದು. ನೆಲದೊಳಕ್ಕೆ ಸೇರಿಹೋಗಬಹುದಾಗಿದ್ದ ಎಷ್ಟು ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಅನ್ನು ಈ ಹೆಮ್ಮಕ್ಕಳು ತಡೆಹಿಡಿದಿದ್ದಾರೆ ಎಂಬುದೇ ದೊಡ್ಡದೊಂದು ಹೆಮ್ಮೆಯ ಸಂಗತಿ. ಪ್ರತೀ ವಾರಾಂತ್ಯದಲ್ಲಿ ಅವರು ಸಂಗ್ರಹಿಸಿದ ಕಸವನ್ನು ಕುಮಟಾ ನಗರಸಭೆಯ ವಾಹನಗಳು ಕೊಂಡೊಯ್ದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುತ್ತವೆ.

“ಈ ಮಹಿಳೆಯರು ಮಾಡುವ ಕೆಲಸಕ್ಕೆ ಗ್ರಾಮ ಅರಣ್ಯ ಸಮಿತಿಯಿಂದ ಪುಟ್ಟ ಸಂಭಾವನೆ ಇದೆ. ಆದರೆ ಅವರು ಮಾಡುವ ಕೆಲಸ, ಶ್ರದ್ಧೆ, ಬದ್ಧತೆ ಮತ್ತು ನಿರಂತರತೆಯ ಎದುರು ಆ ಸಂಭಾವನೆ ಏನೇನೂ ಅಲ್ಲ. ಅವರು ಮಹಿಳೆಯರಾಗಿರುವುದರಿಂದಲೇ ಈ ಬದ್ಧತೆ ಸಾಧ್ಯವಾಗಿರಬೇಕು” ಎನ್ನುತ್ತಾರೆ ಸ್ಥಳೀಯ ನಿವಾಸಿಯೊಬ್ಬರು. “ಆದರೆ ಸ್ವತಃ ಪ್ಲಾಸ್ಟಿಕ್ ಹೆಕ್ಕುವುದಕ್ಕಿಂತಲೂ ಪ್ರವಾಸಿಗರು ಅವನ್ನು ಎಸೆದುಹೋಗದಂತೆ ಅವರಿಗೆ ತಿಳಿಹೇಳುವ ಕೆಲಸವನ್ನೂ ಇವರು ಮಾಡಬೇಕು. ನಮ್ಮ ಒಂದೊಂದು ಪ್ರವಾಸಿ ತಾಣಗಳಲ್ಲೂ ಇಂತಹ ಯೋಜನೆ ಜಾರಿಗೆ ಬಂದರೆ ಅದರ ಒಟ್ಟಾರೆ ಪರಿಣಾಮ ನಿಜಕ್ಕೂ ತುಂಬ ವಿಭಿನ್ನವಾಗಿರಬಹುದು” ಎನ್ನುತ್ತಾರೆ ಅವರು.

“ವಾಸ್ತವವಾಗಿ ನಾವು ಪ್ರಕೃತಿಗಾಗಿ ಹೊಸದೇನನ್ನೂ ಮಾಡಬೇಕಿಲ್ಲ. ಅದು ಸಹಜವಾಗಿ ತನ್ನಪಾಡಿಗೆ ತಾನು ಇರಲು ಅವಕಾಶ ಮಾಡಿಕೊಟ್ಟರೆ ಸಾಕು. ಆದರೆ ಪ್ರವಾಸಿಗರಿಗೆ ಈ ವಿಷಯ ಅರ್ಥವೇ ಆಗುವುದಿಲ್ಲ. ಈ ಇಬ್ಬರು ಮಹಿಳೆಯರ ನಿಸ್ವಾರ್ಥ ಸೇವೆ ಖಂಡಿತ ಪ್ರಶಂಸಾರ್ಹ” ಎನ್ನುತ್ತಾರೆ ಯಾದಗಿರಿ ಜಿಲ್ಲೆಯ ಮಂಜಲಾಪುರದಿಂದ ಬಂದ ಪ್ರವಾಸಿ ಪರಶುರಾಮ ಐಕೂರು.

ಯಾಣದಂತಹ ರಮಣೀಯ ತಾಣಗಳು ಅಂದಗೆಡಿಸಿಕೊಳ್ಳುತ್ತಿರುವುದು ವಿದ್ಯಾವಂತ ಮಂದಿಯಿಂದಲೇ ಎಂಬುದು ಗುಬ್ಬಿ ತಾಲೂಕಿನ ಕಡಬದ ಪ್ರವಾಸಿ ಪಿ. ಕವಿತ ಅವರ ಅಭಿಮತ. “ನಿರ್ದಿಷ್ಟವಾಗಿ ವಾರಾಂತ್ಯಗಳಲ್ಲಿ ಇಂತಹ ಪ್ರದೇಶಗಳಿಗೆ ಭೇಟಿ ನೀಡುವುದು ವಿದ್ಯಾವಂತ ಉದ್ಯೋಗಸ್ಥ ಮಂದಿಯೇ. ಅವರು ತಮ್ಮ ಕನಿಷ್ಟ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದಿರುವುದು ಮಾತ್ರ ವಿಚಿತ್ರ. ಬರೀ ಕಾನೂನು-ನಿಯಮಗಳಿಂದ ಏನು ತಾನೇ ಸಾಧಿಸಲು ಸಾಧ್ಯ? ಬದಲಾಗಬೇಕಿರುವುದು ಜನರ ಮನಸ್ಥಿತಿ,” ಎನ್ನುತ್ತಾರೆ ಅವರು.

ಪ್ಲಾಸ್ಟಿಕ್ ತ್ಯಾಜ್ಯ ವಿಷಯವಾಗಿ ರಾಜ್ಯ ಮತ್ತು ದೇಶದಲ್ಲಿರುವ ನೂರಾರು ಪ್ರಸಿದ್ಧ ಪ್ರವಾಸಿ ಹಾಗೂ ಚಾರಣ ತಾಣಗಳು ಎಚ್ಚೆತ್ತುಕೊಳ್ಳುವುದು ಇಂದಿನ ಅನಿವಾರ್ಯತೆ. ಹೊಸದೇನನ್ನು ಮಾಡಲಾಗದಿದ್ದರೂ ಅರಣ್ಯ ಇಲಾಖೆ ಪೋಷಿಸಿರುವ ಯಾಣದ ಸಿದ್ಧ ಮಾದರಿಯೊಂದನ್ನು ಅಳವಡಿಸಿಕೊಳ್ಳುವುದು ಅಂತಹ ಕಷ್ಟವೇನೂ ಆಗಲಾರದು.
- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: