ಭಾನುವಾರ, ಆಗಸ್ಟ್ 13, 2017

ಭುವನೇಶ್ವರಿ ಹೆಗಡೆ: ಹೊಸ ಬರಹಗಾರರ ಪ್ರೇರಕ ಶಕ್ತಿ

'ಬನಸಿರಿ' - ಶ್ರೀಮತಿ ಭುವನೇಶ್ವರಿ ಹೆಗಡೆ ಅಭಿನಂದನ ಗ್ರಂಥದಲ್ಲಿ ಪ್ರಕಟವಾಗಿರುವ ಲೇಖನ (2017)

ಶ್ರೀಮತಿ ಭುವನೇಶ್ವರಿ ಹೆಗಡೆ
ಅಭಿನಂದನ ಗ್ರಂಥ
ತರಂಗ, ಸುಧಾ ಪತ್ರಿಕೆಗಳೆಲ್ಲ ವಾರವಾರವೂ ಅಜ್ಜನ ಮನೆಗೆ ಬರುತ್ತಿದ್ದುದರಿಂದ ಅಲ್ಲೇ ಓದಿ ಬೆಳೆದ ನನಗೆ ಹೈಸ್ಕೂಲು
ದಿನಗಳಿಂದಲೇ ಭುವನೇಶ್ವರಿ ಹೆಗಡೆ ಎಂಬ ಹೆಸರು ಚಿರಪರಿಚಿತವಾಗಿತ್ತು. ಓದಿದರೆ ನಗು ಗ್ಯಾರಂಟಿ ಎಂದು ಗೊತ್ತಿದ್ದರಿಂದ ಆ ಹೆಸರು ಕಂಡ ಕೂಡಲೇ ಇಡೀ ಲೇಖನವನ್ನು ಒಂದೇ ಗುಕ್ಕಿಗೆ ಓದಿ ಮುಗಿಸುತ್ತಿದ್ದೆ. ಸಣ್ಣಮಾವ ಅಂತೂ ಅವರ ಲೇಖನಗಳನ್ನು ಓದಿದರೆ ಆಯ್ದ ಭಾಗಗಳನ್ನು ಅಲ್ಲಲ್ಲೇ ಜೋರಾಗಿ ವಾಚಿಸಿ ಮನೆಮಂದಿಗೆಲ್ಲ ನಗುವಿನ ವಿತರಣೆ ಮಾಡುತ್ತಿದ್ದುದು ನನಗಿನ್ನೂ ಚೆನ್ನಾಗಿಯೇ ನೆನಪಿದೆ.

ಪಿಯುಸಿ ಕನ್ನಡ ಪಠ್ಯಪುಸ್ತಕ ಕೈಗೆ ಬಂದ ದಿನವಂತೂ ಹೊಸದೊಂದು ಅಚ್ಚರಿ ಕಾದಿತ್ತು. ನಮಗೆಲ್ಲ ಮೋಸ್ಟ್ ವಾಂಟೆಡ್ ಆಗಿದ್ದ ಭುವನೇಶ್ವರಿ ಹೆಗಡೆ ಸೀದಾ ಪಠ್ಯಪುಸ್ತಕಕ್ಕೇ ಬಂದುಬಿಟ್ಟಿದ್ದರು. ಅವರ ‘ಮೂಢನಂಬಿಕೆಗಳ ಬೀಡಿನಲ್ಲಿ’ ಲೇಖನ ಪಠ್ಯವಾಗಿತ್ತು. ‘ಇವರು ನನಗೆ ಬಹಳ ಸಮಯದಿಂದ ಗೊತ್ತು’ ಎಂದು ಸಹಪಾಠಿಗಳ ಬಳಿ ಹೇಳಿಕೊಂಡು ಸಂಭ್ರಮಪಟ್ಟದ್ದಿದೆ. ಅದೊಂದು ಪಾಠವನ್ನಂತೂ ಶ್ರದ್ಧಾಭಕ್ತಿಗಳಿಂದ ಮತ್ತೆಮತ್ತೆ ಓದಿ ಖುಷಿಪಟ್ಟದ್ದಿದೆ. ಬೆಣ್ಣೆ ಮಜ್ಜಿಗೆಯಲ್ಲಿ ಪೂರ್ತಿ ಮುಳುಗಿದ ದಿನ ಜಗತ್ಪ್ರಳಯ ಎಂಬ ಕಥೆ ಕೇಳಿದ್ದ ಲೇಖಕಿ ತನ್ನ ತಮ್ಮನೊಂದಿಗೆ ಸೇರಿಕೊಂಡು ಮನೆಯಲ್ಲಿದ್ದ ಬೆಣ್ಣೆಮುದ್ದೆಯನ್ನು ಮುಳುಗಿಸಲು ಹವಣಿಸಿದ ಪ್ರಸಂಗವನ್ನಂತೂ ಎಂದೂ ಮರೆಯಲಿಕ್ಕಾಗದು.

ಇಂತಿಪ್ಪ ಭುವನೇಶ್ವರಿ ಹೆಗಡೆಯವರೇ ಸಾಕ್ಷಾತ್ ಕಣ್ಣೆದುರು ಪ್ರತ್ಯಕ್ಷವಾಗಿಬಿಟ್ಟರೆ ಏನು ಗತಿ? ಆ ದಿನವೂ ಬಂತು. ಬಿ.ಎ. ಮೊದಲ ವರ್ಷದಲ್ಲಿದ್ದಾಗ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಎನ್.ಎಸ್.ಎಸ್.ನ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ನಾನು ಭಾಗವಹಿಸಿದ್ದೆ. ಮಧ್ಯಾಹ್ನದ ಉಪನ್ಯಾಸ ಕಾರ್ಯಕ್ರಮಕ್ಕೆ ಭುವನೇಶ್ವರಿ ಹೆಗಡೆ ಬರುತ್ತಿದ್ದಾರೆ ಎಂದು ಸಂಘಟಕರು ಹೇಳಿದಾಗ ತುಂಬ ಸಂತೋಷವಾಗಿತ್ತು. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಮೇಡಂ ಅಂದು ತುಂಬ ರಸವತ್ತಾಗಿ ಮಾತಾಡಿ ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಂಡರು. ಓಹೋ ಇವರು ಬರೆಯುವಷ್ಟೇ ಚೆನ್ನಾಗಿ ಮಾತಾಡಬಲ್ಲರು ಕೂಡಾ ಎಂದು ಗೊತ್ತಾಗಿ ಅವರ ಬಗೆಗಿನ ಅಭಿಮಾನ ಹೆಚ್ಚಾಯಿತು.

ಕ್ಯಾಂಪಿನ ಭಾಗವಾಗಿ ನಮ್ಮದೊಂದು ದೈನಿಕ ಭಿತ್ತಿಪತ್ರಿಕೆಯಿತ್ತು. ಅದನ್ನು ಸಂಪಾದಿಸುವ ಹೊಣೆ ನನ್ನದೇ ಆಗಿದ್ದರಿಂದ ಪ್ರತಿದಿನ ಬರುವ ಅತಿಥಿಗಳ ಸಂದರ್ಶನ ಮಾಡುತ್ತಿದ್ದೆ. ಹೀಗಾಗಿ ಭುವನೇಶ್ವರಿ ಹೆಗಡೆಯವರನ್ನು ಸಂದರ್ಶಿಸುವ ಅವಕಾಶವೂ ಸಹಜವಾಗಿಯೇ ಒದಗಿಬಂತು. ಅವರಿಗೆ ಅಂದು ಏನೆಲ್ಲ ಪ್ರಶ್ನೆ ಕೇಳಿದ್ದೆನೋ ನೆನಪಿಲ್ಲ, ಆದರೆ ಸಂದರ್ಶನದ ಕೊನೆಗೆ ಅವರು ನನ್ನ ಬೆನ್ನು ಚಪ್ಪರಿಸಿ, ‘ಈ ಡೇಟು ಬರೆದಿಟ್ಟುಕೋ. ಒಂದು ದಿನ ನೀನು ಖಂಡಿತ ದೊಡ್ಡದೊಂದು ಪೊಸಿಶನ್‍ಗೆ ಹೋಗುತ್ತೀಯಾ’ ಎಂದು ಹೇಳಿದ್ದು ಮಾತ್ರ ನೂರಕ್ಕೆ ನೂರು ನೆನಪಿದೆ. ಕಿರಿಯರನ್ನು ಈ ರೀತಿ ಪ್ರೋತ್ಸಾಹಿಸುವ ಗುಣ ಎಲ್ಲರಿಗೂ ಬರುವುದಿಲ್ಲ. ಮೇಡಂ, ನಿಮ್ಮ ನಿಷ್ಕಲ್ಮಶ ಹೃದಯದ ಮಾತು ನಿಜವಾಗಲಿ. ಆದರೆ ಆ ದಿನ ಮಾತ್ರ ನಾನು ನಿಮ್ಮನ್ನು ಖ್ಯಾತ ಜ್ಯೋತಿಷಿ ಎಂದು ಕರೆಯುವುದು ಶತಃಸಿದ್ಧ.

ಆರೇಳು ವರ್ಷಗಳ ನಂತರ ನನ್ನ ಮತ್ತು ಸಂಗಾತಿ ಆರತಿಯ ಕವನ ಸಂಕಲನಗಳನ್ನು ನಮ್ಮ ಮದುವೆಯ ದಿನವೇ ಬಿಡುಗಡೆ ಮಾಡುವ ಅವಕಾಶ ಬಂದಾಗ ನನಗೆ ಮತ್ತೆ ನೆನಪಾದದ್ದು ಶ್ರೀಮತಿ ಹೆಗಡೆಯವರೇ. ‘ಮದುವೆಗೆ ಬಂದರೆ ಸಾಲದು, ಕವನ ಸಂಕಲನಗಳನ್ನೂ ಬಿಡುಗಡೆ ಮಾಡತಕ್ಕದ್ದು’ ಎಂಬ ನಮ್ಮ ಅಕ್ಕರೆಯ ಆದೇಶವನ್ನು ಅಷ್ಟೇ ಪ್ರೀತಿಯಿಂದ ಮನ್ನಿಸಿದವರು ಅವರು. ಮನಸ್ಸಿಗೆ ಹತ್ತಿರವಾದವಳನ್ನು ಮದುವೆಯಾದದ್ದು, ಇಬ್ಬರ ಕವನ ಸಂಕಲನಗಳೂ ಮದುವೆಯ ದಿನವೇ ಅನಾವರಣಗೊಂಡದ್ದು, ಅವನ್ನು ಹೆಗಡೆಯವರೇ ಬಿಡುಗಡೆ ಮಾಡಿ ‘ಖುಷಿಯಿಂದ ಇರ್ರಪ್ಪ’ ಎಂದು ಆಶೀರ್ವದಿಸಿ ಹೋದದ್ದು ಎಲ್ಲವೂ ಯೋಗಾಯೋಗವೆಂದೇ ನನಗನ್ನಿಸುತ್ತದೆ.

***

ಪತ್ರಿಕೆ ಪುಸ್ತಕಗಳನ್ನೆಲ್ಲ ಓದಿಕೊಂಡು ಬೆಳೆದ ನನ್ನಂತಹ ನೂರಾರು ಯುವಕರಿಗೆ ಭುವನೇಶ್ವರಿ ಹೆಗಡೆಯವರು ನಿಸ್ಸಂಶಯವಾಗಿ ಒಂದು ದೊಡ್ಡ ಪ್ರೇರಣೆ. ಬರವಣಿಗೆಯಲ್ಲಿ ಇರಬೇಕಾದ ಲಯ, ಸ್ವಾರಸ್ಯ, ಮೊನಚು, ವಿನೋದ, ಮಾಧುರ್ಯ, ಸರಳತೆ, ಲಾಲಿತ್ಯ ಎಲ್ಲವಕ್ಕೂ ತಮ್ಮ ಪ್ರಬಂಧಗಳ ಮೂಲಕ ತುಂಬ ಸುಂದರ ಮಾದರಿಗಳನ್ನು ಒದಗಿಸಿದವರು ಅವರು. ಅವರ ಬರಹಗಳು ಓದುಗರು ಗಹಗಹಿಸಿ ನಗುವಂತೆ ಮಾಡುವ ಕ್ಷಣಿಕ ಜೋಕುಗಳಲ್ಲ, ಉದ್ದಕ್ಕೂ ಮುಗುಳ್ನಗು ಮಿನುಗಿಸುತ್ತಾ ಅಲ್ಲಲ್ಲಿ ನಗುವಿನ ಒರತೆ ಚಿಮ್ಮಿಸುತ್ತಾ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುವ ಸುಲಲಿತ ಪ್ರಬಂಧಗಳು.

ಅವರ ಎಲ್ಲ ಪ್ರಬಂಧಗಳು ಸ್ವಾನುಭವದ ನಿರೂಪಣೆಗಳ ಶೈಲಿಯಲ್ಲಿದ್ದರೂ ಅವು ಒಣ, ಗಂಭೀರ ಸ್ವಗತಗಳಲ್ಲ; ಅವು ಓದುಗರೊಂದಿಗೆ ನಡೆಸುವ ಆಪ್ತ ಸಂವಾದ. ದಿನನಿತ್ಯದ ಬದುಕಿನ ಸಣ್ಣಪುಟ್ಟ ಸಂಗತಿಗಳನ್ನೂ ಓದುಗರ ಕಣ್ಣಿಗೆ ಕಟ್ಟುವಂತೆ ನವಿರಾಗಿ ವಿವರಿಸುವ ಚಿತ್ರಕ ಶಕ್ತಿ ಈ ಪ್ರಬಂಧಗಳಿಗಿದೆ. ಸ್ವಚ್ಛಂದ ಬಂಧ, ಸಂಕ್ಷಿಪ್ತತೆ, ಆತ್ಮೀಯತೆ, ತಿಳಿಹಾಸ್ಯ, ಜೀವನಪ್ರೀತಿ, ವಿನೋದ, ವಿಡಂಬನೆ – ಇವೆಲ್ಲ ಪ್ರಬಂಧಗಳ ಮುಖ್ಯ ಲಕ್ಷಣಗಳೆಂದು ಹಿರಿಯರು ಗುರುತಿಸಿದ್ದಿದೆ. ಈ ಎಲ್ಲವನ್ನೂ ತಮ್ಮ ಒಂದೊಂದು ಬರಹಗಳಲ್ಲೂ ಅಚ್ಚುಕಟ್ಟಾಗಿ ಉಣಬಡಿಸುವ ಹೆಗಡೆಯವರು ನಮ್ಮನ್ನು ವಿದ್ಯಾರ್ಥಿ ಜೀವನದಲ್ಲೇ ಆಕರ್ಷಿಸಿದ್ದರಲ್ಲಿ ಅತಿಶಯವಿಲ್ಲ.

“ಮನುಷ್ಯ ಸಂತೋಷವಾಗಿರಬೇಕಾದರೆ ತನ್ನನ್ನು ತಾನು ತಮಾಷೆ ಮಾಡಿಕೊಳ್ಳಲು ಕಲಿಯಬೇಕು” ಎಂದು ಹೆಗಡೆಯವರು ಬೇರೆಬೇರೆ ಸಂದರ್ಭಗಳಲ್ಲಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಸಹಜವಾಗಿಯೇ ಅವರ ಪ್ರಬಂಧಗಳಲ್ಲೂ ಅಂತಹದೊಂದು ವಿಶಿಷ್ಟ ಗುಣ ಎದ್ದು ಕಾಣುತ್ತದೆ. ತಮ್ಮ ಬಾಲ್ಯ, ಶಾಲಾ ಜೀವನ, ಕಾಲೇಜು, ಹಾಸ್ಟೆಲು, ವೃತ್ತಿಜೀವನಗಳಿಂದಲೇ ವಸ್ತುಗಳನ್ನು ಆಯ್ದುಕೊಳ್ಳುವ ಅವರು ತಮ್ಮನ್ನು ವಿಡಂಬಿಸಿಕೊಳ್ಳುತ್ತಲೇ ತಾವೂ ಖುಷಿಪಡುತ್ತಾ ಓದುಗರನ್ನೂ ಖುಷಿಪಡಿಸುತ್ತಾ ಹೋಗುವ ರೀತಿ ತುಂಬ ವಿಶಿಷ್ಟವಾದದ್ದು. ಬದುಕಿನ ಸಣ್ಣಪುಟ್ಟ ಘಟನೆಗಳನ್ನೂ ನೆನಪಿಸಿಕೊಂಡು ಆನಂದಿಸುವ ಅವರ ಜೀವನಪ್ರೀತಿಯೇ ಬಹುಶಃ ಅವರ ವಯಸ್ಸನ್ನು ಮರೆಸಿದೆ. ಅವರ ನಿಷ್ಕಪಟ ನಗು, ಆತ್ಮೀಯತೆ, ಸರಳತೆ, ಚುರುಕುತನಗಳೆಲ್ಲ ಅವರ ಬರವಣಿಗೆಯಲ್ಲೂ ಗೋಚರಿಸುತ್ತದೆ. ಬರವಣಿಗೆ-ವ್ಯಕ್ತಿತ್ವ ಎರಡೂ ಒಂದೇ ಆಗಿರುವುದರ ಚಂದವೇ ಬೇರೆ.

“ಲಘು ಪ್ರಬಂಧಕ್ಕೆ ವಿಷಯ ಇಂತಹದೇ ಆಗಬೇಕೆಂಬ ನಿಯಮವಿಲ್ಲ. ಸಣ್ಣ ವಿಷಯ ದೊಡ್ಡ ವಿಷಯ ಯಾವುದು ಬೇಕಾದರೂ ಆಗಬಹುದು. ಲಘು ಪ್ರಬಂಧವನ್ನು ಓದಿದ ಕೂಡಲೇ ಒಂದು ತೃಪ್ತಿಯ ಮನೋಭಾವ ಉಂಟಾಗಬೇಕು. ಹೇಳುವುದನ್ನೆಲ್ಲ ಹೇಳಿಯಾಯಿತು ಎಂಬಂತೆ ಇರಬಾರದು.... ಭಾವನೆಗಳು ಅನುಭವಗಳು ಹಾಸ್ಯನಗೆ ಇವು ಉದ್ದಕ್ಕೂ ಮಿಂಚುತ್ತಿರಬೇಕು. ಗುರಿಮುಟ್ಟುವುದೊಂದೇ ಮುಖ್ಯವಲ್ಲ, ಮಾರ್ಗ ಪ್ರಯಾಣವೂ ಆಕರ್ಷಕವಾಗಿರಬೇಕು” ಎನ್ನುತ್ತಾರೆ ಗೊರೂರು ರಾಮಸ್ವಾಮಿ ಅಯ್ಯಂಗಾರ್. ಭುವನೇಶ್ವರಿ ಹೆಗಡೆಯವರ ಪ್ರಬಂಧಗಳು ಈ ಚೌಕಟ್ಟಿನೊಳಗೆ ಎಷ್ಟು ಚೆನ್ನಾಗಿ ಕೂರುತ್ತವೆ!

ಹೆಗಡೆಯವರ ಬರಹಗಳು ಹೀಗೆ ಓದಿ ಹಾಗೆ ಮರೆಯುವ ಸಾಮಾನ್ಯ ಜೋಕುಗಳಲ್ಲವೆಂಬುದನ್ನು ಆಗಲೇ ಹೇಳಿದೆ. ಅವರ ಪ್ರತೀ ಪ್ರಬಂಧದಲ್ಲೂ ಒಂದು ಹೊಸತನ, ಕವಿಸಹಜ ಪ್ರತಿಭಾಸಂಪನ್ನತೆ, ಸೃಜನಶೀಲ ಅಭಿವ್ಯಕ್ತಿ ಥಟ್ಟನೆ ಎದ್ದುಕಾಣುತ್ತದೆ. ತಾಯಿಯ ಹೊಟ್ಟೆಯ ಮಾಂಸತೂಲಿಕಾತಲ್ಪ, ನನ್ನ ಬಾಲಾಗ್ರಫಿ, ಆಂಗ್ಲಾಶುಕವಿತ್ವ, ಹಳತಾವಾದಿಗಳು, ತರ್ಕಬದ್ಧ ಪ್ರೇಮ, ರೇಡಿಯಾಂಗನೆ, ಗದ್ಯವಿಮುಖೀ ಧೋರಣೆ, ವಿದ್ಯಾರ್ಥಿಗಳೆಂಬ ಪರೀಕ್ಷಾ ರೋಗಿಗಳು, ಮಾರಣಾಂತಿಕ ಕಾರಣಗಳು, ದೇಹ ಮನಸ್ಸು ಎಂಬೀ ಉಭಯ ಸದನಗಳಲ್ಲಿ... ಅವರ ಪ್ರಬಂಧಗಳಲ್ಲಿ ಧಾರಾಳವಾಗಿ ಸಿಗುವ ಈ ತರಹದ ಒರಿಜಿನಲ್ ಅಭಿವ್ಯಕ್ತಿಗಳಿಗೆ ಓದುಗರು ಭೇಷ್ ಅನ್ನದಿರಲಾರರು.

‘ಭಾಸ ಮೊದಲಾದ ಕವಿಗಳು ಸಾಕಿಕೊಂಡ ಬೆಕ್ಕೂ ಆ ಬೆಳದಿಂಗಳನ್ನು ಹಾಲೆಂದು ತಿಳಿದು ನೆಕ್ಕಬೇಕು’, ‘ಕೊಟ್ಟಿಗೆಯಲ್ಲಿರುವ ನಮ್ಮ ಎಮ್ಮೆ ತನ್ನ ಸಚ್ಚಿದಾನಂದ ಸ್ಥಿತಿಯಲ್ಲಿ ತನ್ನ ಕೋಡನ್ನು ಕಂಬಕ್ಕೆ ತಿಕ್ಕುತ್ತಿತ್ತು’ ಎಂಬಂತಹ ಅವರ ಅಭಿವ್ಯಕ್ತಿಗಳಲ್ಲಿ ಹಾಸ್ಯವಷ್ಟೇ ಅಲ್ಲದೆ, ಅವರಿಗಿರುವ ಸಾಹಿತ್ಯದ ವಿಸ್ತಾರ ಓದು ಕೂಡ ನಿಚ್ಚಳವಾಗಿ ಕಾಣುತ್ತದೆ. ಲಲಿತ ಪ್ರಬಂಧವೆಂದರೆ ನಾಲ್ಕು ಹಾಸ್ಯ ಚಟಾಕಿಗಳನ್ನು ಹಾರಿಸಿ ಜನರನ್ನು ನಗಿಸಿಬಿಡುವ ಸುಲಭಕಲೆಯಲ್ಲ, ಅದಕ್ಕೆ ಸಾಹಿತ್ಯದ ವಿಸ್ತಾರ ಓದಿನ ಹಿನ್ನೆಲೆ ಬೇಕು ಎಂಬುದಕ್ಕೆ ಹೆಗಡೆಯವರ ಬರಹಗಳು ಒಳ್ಳೆಯ ಉದಾಹರಣೆ. ಫೇಸ್‍ಬುಕ್ ವಾಟ್ಸಾಪುಗಳಲ್ಲಿ ನಾಲ್ಕು ಸಾಲು ಬರೆದು ದಿಢೀರ್ ಸಾಹಿತಿಗಳಾಗಿ ಹೊರಹೊಮ್ಮುವ ಇಂದಿನ ಹೊಸಹುಡುಗರು ಭುವನೇಶ್ವರಿ ಹೆಗಡೆಯವನ್ನು ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ.

ಭುವನೇಶ್ವರಿ ಹೆಗಡೆಯವರು ಇನ್ನೂ ಹತ್ತಾರು ವರ್ಷ ಹೀಗೆಯೇ ಬರೆಯುತ್ತಿರಲಿ. ನಮ್ಮಂತಹ ಕಿರಿಯರಿಗೆ ಪ್ರೋತ್ಸಾಹವನ್ನೂ ಪ್ರೇರಣೆಯನ್ನೂ ಪ್ರೀತಿಯನ್ನೂ ನೀಡುತ್ತಿರಲಿ.

ಮಂಗಳವಾರ, ಆಗಸ್ಟ್ 8, 2017

ನುಡಿಯೊಳಗಾಗಿ ನಡೆಯದಿದ್ದರೆ...

2017 ಜುಲೈ 29 - ಆಗಸ್ಟ್ 4ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ.

ಪ್ರಸಿದ್ಧ ಚಿಂತಕ ಬಟ್ರ್ರೆಂಡ್ ರಸೆಲ್ ಬರೆಯುತ್ತಾರೆ: ನಮ್ಮಲ್ಲಿ ಎರಡು ಬಗೆಯ ನೈತಿಕತೆಗಳು ಇವೆ – ಒಂದು, ನಾವು ಬೋಧಿಸುತ್ತೇವೆ ಆದರೆ ಆಚರಿಸುವುದಿಲ್ಲ, ಇನ್ನೊಂದು ನಾವು ಆಚರಿಸುತ್ತೇವೆ ಆದರೆ ಎಂದೂ ಬೋಧಿಸುವುದಿಲ್ಲ. ನಿಜ, ಜಗತ್ತಿನ ಬಹುಪಾಲು ಸಮಸ್ಯೆಗಳಿಗೆ ಕಾರಣ ಬೋಧನೆ ಮತ್ತು ಆಚರಣೆಯ ನಡುವೆ ಇರುವ ಆಕಾಶ-ಪಾತಾಳದಂತಹ ಅಂತರ. ಬಟ್ರ್ರೆಂಡ್ ರಸೆಲ್ ಹೇಳುವ ಎರಡನೆಯ ನೈತಿಕತೆ ಎಲ್ಲರಲ್ಲೂ ಮನೆ ಮಾಡಿದರೆ ಸಮಾಜದಲ್ಲಿ ಯಾವ ಸಮಸ್ಯೆಯೂ ಉಳಿಯಲಾರದು. ಆದರೆ ಅನುಷ್ಠಾನಕ್ಕಿಂತ ಭಾಷಣಗಳು ಹೆಚ್ಚಾಗಿರುವುದೇ ನಮ್ಮ ಕಾಲದ ಅತ್ಯಂತ ದೊಡ್ಡ ವ್ಯಂಗ್ಯ.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರದ ಬಗೆಗೇ ಸದಾ ಭಾಷಣ ಮಾಡುವ ರಾಜಕಾರಣಿಗಳು, ಯೋಜನೆಗಳ ಸಂಪೂರ್ಣ ಅನುಷ್ಠಾನವೇ ತಮ್ಮ ಪರಮಗುರಿಯೆಂದು ವಚನ ನೀಡುವ ಭ್ರಷ್ಟ ಅಧಿಕಾರಿಗಳು, ಜಾತ್ಯತೀತ ಸಮಾಜದ ನಿರ್ಮಾಣದ ಬಗ್ಗೆ ವೇದಿಕೆ ಸಿಕ್ಕಲ್ಲೆಲ್ಲ ಬಡಬಡಿಸುವ ಮಹಾನ್ ಜಾತೀವಾದಿಗಳು,  ಹುಟ್ಟುಹಬ್ಬದ ದಿನ ಅನಾಥಾಶ್ರಮದ ಮಕ್ಕಳಿಗೆ ಕೇಕು ತಿನ್ನಿಸುವ ಗ್ಲಾಮರ್ ಲೋಕದ ತಾರೆಗಳು, ನಿಷ್ಕಾಮ ಕರ್ಮ ಮತ್ತು ಸರ್ವಸಂಗ ಪರಿತ್ಯಾಗದ ಬಗ್ಗೆ ಪ್ರವಚನ ನೀಡುವ ಶ್ರೀಮಂತ ಧರ್ಮಗುರುಗಳು, ನೈತಿಕತೆ ಮತ್ತು ಸನ್ನಡತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಥಾನುಗಟ್ಟಲೆ ಬೋಧಿಸುವ ನೀತಿಗೆಟ್ಟ ಶಿಕ್ಷಕರು... ಸಮಾಜ ಇಂಥವರಿಂದಲೇ ತುಂಬಿ ಹೋದಾಗ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಮಾತ್ರ ಉಳಿಯುತ್ತದೆ.

ಕುಟಿಲವ ಬಿಡದಿಹ ಮನುಜರು ಮಂತ್ರವ /  
ಪಠನೆಯ ಮಾಡಿದರೇನು ಫಲ? 
ಸಟೆಯನ್ನಾಡುವ ಮನುಜರು ಸಂತತ / 
ನಟನೆಯ ಮಾಡಿದರೇನು ಫಲ?’
ಎಂದು ಕೇಳುತ್ತಾರೆ ಪುರಂದರದಾಸರು. ಮನಸ್ಸು ಪೂರ್ತಿ ವಿಷವನ್ನೇ ತುಂಬಿಕೊಂಡು ಊರೆಲ್ಲ ಅಮೃತವೇ ತುಂಬಿ ಹರಿಯಬೇಕೆಂದು ಬಯಸುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ. ಆಚಾರಕ್ಕೂ ವಿಚಾರಕ್ಕೂ ತಾಳಮೇಳಗಳಿಲ್ಲದೇ ಹೋದಾಗ ಸಮಾಜ ಬರೀ ನಾಟಕ ಪ್ರದರ್ಶನಗಳ ವೇದಿಕೆ ಆಗಿಬಿಡುತ್ತದೆ.

ಕಪಟತನದಲ್ಲಿ ಕಾಡುತ ಜನರನು /
ಜಪವನು ಮಾಡಿದರೇನು ಫಲ? 
ಕಲುಷಿತ ತನುವನು ಬಿಡದೆ ನಿರಂತರ / 
ಜಪವನು ಮಾಡಿದರೇನು ಫಲ?’
ಎಂದು ದಾಸರು ನಮ್ಮ ಸುತ್ತಲಿನ ನಟಭಯಂಕರರನ್ನು ಉದ್ದೇಶಿಸಿಯೇ ಕೇಳಿದ್ದಾರೆ.

ವಿದ್ಯೆಗೆ ವಿನಯವೇ ಭೂಷಣ ಎನ್ನುವ ತಥಾಕಥಿತ ವಿದ್ವಾಂಸ ತಾನೇ ಮಹಾಜ್ಞಾನಿಯೆಂದು ಬೀಗುತ್ತಾ ಕುಳಿತರೆ, ದೊಡ್ಡವರೆಂದರೆ ಬೆಲೆಯೇ ಇಲ್ಲ ಎಂದು ಮಕ್ಕಳೆದುರು ಹಲ್ಲುಕಡಿಯುವ ಅಪ್ಪ-ಅಮ್ಮ ತಮ್ಮ ಹಿರಿಯರೆದುರು ಹೇಗೆ ವರ್ತಿಸಬೇಕೆಂದು ಅರ್ಥ ಮಾಡಿಕೊಳ್ಳದೇ ಹೋದರೆ, ಮಾತಾಡುವುದೇ ಸಾಧನೆಯಾಗಬಾರದು ಸಾಧನೆ ಮಾತನಾಡಬೇಕು ಎಂದು ಪುಟಗಟ್ಟಲೆ ಬರೆಯುವ ಸಾಹಿತಿಯು ಪ್ರಶಸ್ತಿಗಳಿಗೆ ಲಾಬಿ ಮಾಡುವುದರಲ್ಲೇ ಕಾಲ ಕಳೆದರೆ ಸಮಾಜಕ್ಕೆ ನಿಜವಾಗಿಯೂ ಮಾದರಿ ಒದಗಿಸಬೇಕಾದವರು ಯಾರು ಎಂಬ ಪ್ರಶ್ನೆ ಉತ್ತರವಿಲ್ಲದೇ ಒದ್ದಾಡುತ್ತದೆ.

ಪಾತಾಳ ಗಂಗೆಯಲ್ಲಿ ಮುಳುಗೆದ್ದರೆ
ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ
ನಿನ್ನ ಪಾಪವು ಹೋಗಲಿಲ್ಲವು
ಎನ್ನುತ್ತಾರೆ ಅಂಬಿಗರ ಚೌಡಯ್ಯ. ಅಂತರಂಗ ಶುದ್ಧಿಯಾಗದೆ ಬಹಿರಂಗದಲ್ಲಿ ಮಿರಿಮಿರಿ ಮಿಂಚಿದರೆ ಆ ತೋರಿಕೆಯ ಹೊಳಪಿಗೆ ಯತಾರ್ಥವಾಗಿ ಯಾವ ಮೌಲ್ಯವೂ ಉಳಿದುಕೊಳ್ಳುವುದಿಲ್ಲ. ಬಡಜನರ ತಲೆಯೊಡೆದು ಕೋಟಿಗಟ್ಟಲೆ ಸಂಪಾದಿಸಿ ದೇವರಿಗೆ ರತ್ನಖಚಿತ ಕಿರೀಟ ಅರ್ಪಿಸಿದರೆ ಆ ದೇವರು ಒಲಿಯುತ್ತಾನೆಯೇ? ಅನ್ಯಾಯದಿಂದ ಅರ್ಜಿಸಿದ ಸಂಪತ್ತಿನಿಂದ ಚಿನ್ನದ ರಥ ಮಾಡಿಸಿ ಹರಕೆ ತೀರಿಸಿದರೆ ಭಗವಂತ ಒಪ್ಪಿಕೊಳ್ಳುತ್ತಾನೆಯೇ? ‘ಕುಂಬಳ ಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ ಕೊಳೆವುದಲ್ಲದೆ ಬಲುಹಾಗಬಲ್ಲುದೆ?’ ಎಂದು ಬಸವಣ್ಣ ಇಂತಹ ಡಾಂಬಿಕರನ್ನುದ್ದೇಶಿಸಿಯೇ ಕೇಳಿರುವುದು.

ಧರ್ಮದ ರಹಸ್ಯ ಸಿದ್ಧಾಂತಗಳಲ್ಲಿಲ್ಲ, ಅದರ ಅನುಷ್ಠಾನದಲ್ಲಿದೆ ಎಂದರು ಸ್ವಾಮಿ ವಿವೇಕಾನಂದರು. ಇಪ್ಪತ್ತು ಸಾವಿರ ಟನ್ನು ಬೋಧನೆಗಿಂತ ಒಂದು ಹಿಡಿ ಆಚರಣೆ ಮೇಲು ಎಂಬುದು ಅವರ ನಂಬಿಕೆಯಾಗಿತ್ತು. ಹಸಿದವನ ಮುಂದೆ ಪ್ರವಚನ ಮಾಡಬೇಡಿ, ಒಂದು ತುತ್ತು ಅನ್ನ ಹಾಕಿ ಎಂಬ ಅವರ ಮಾತಿನ ಹಿಂದಿರುವುದೂ ಇದೇ ಆಶಯ. ನುಡಿಯೊಳಗಾಗಿ ನಡೆಯದಿದ್ದರೆ ನಮ್ಮ ಕೂಡಲಸಂಗಮ ದೇವನೊಲಿಯನಯ್ಯ ಎಂದ ಬಸವಣ್ಣನವರು ತಮ್ಮ ಜೀವನಪೂರ್ತಿ ಅಚಾರ-ವಿಚಾರಗಳ ನಡುವಿನ ಸಾಂಗತ್ಯದ ಬಗೆಗೇ ಮಾತನಾಡುತ್ತಾ ಹೋದರು.

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದಡೆ ನಡೆಯೆಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ
ಎಂಬ ಅವರ ವಚನ ಜನರ ಮಾತಿಗೂ ಕೃತಿಗೂ ಇರುವ ವ್ಯತ್ಯಾಸದ ಕೈಗನ್ನಡಿಯಷ್ಟೇ ಅಲ್ಲ, ಸಿದ್ಧಾಂತಕ್ಕೂ ಆಚರಣೆಗೂ ಸಂಬಂಧವಿಲ್ಲದೇ ಹೋದಾಗ ವಾಸ್ತವ ಎಷ್ಟು ನಗೆಪಾಟಲಿಗೀಡಾಗುತ್ತದೆ ಎಂಬ ಎಚ್ಚರಿಕೆಯೂ ಆಗಿದೆ.

ಹೆತ್ತ ತಾಯನು ಮಾರಿ | ತೊತ್ತ ತಂದಾ ತೆರದಿ
ತುತ್ತಿನಾತುರಕೆ ತತ್ತ್ವವನು ತೊರೆದಿಹನು
ಕತ್ತೆ ತಾನೆಂದ! ಸರ್ವಜ್ಞ
ಎಂಬ ಸರ್ವಜ್ಞ ಕವಿಯ ವಚನದಲ್ಲೂ ಆಚಾರ-ವಿಚಾರಗಳ ತುಲನೆಯೇ ಮುಖ್ಯವಾಗಿದೆ. ತಂದೆ-ತಾಯಿಗಳನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಲಾಗದ ಮಕ್ಕಳು ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಮಕ್ಕಳು ಚೆನ್ನಾಗಿ ನೋಡಿಕೊಳ್ಳಲಿ ಎಂದು ಬಯಸುವುದರಲ್ಲಿ ಏನು ನ್ಯಾಯವಿದೆ? ಶಿಷ್ಯರೆದುರು ಗೌರವಕ್ಕೆ ಅರ್ಹವಾಗಿ ನಡೆದುಕೊಳ್ಳಲಾಗದ ಗುರುಗಳು ಅದೇ ಶಿಷ್ಯರು ತಮ್ಮನ್ನು ಗೌರವಾದರಗಳಿಂದ ಕಾಣಬೇಕೆಂದು ನಿರೀಕ್ಷಿಸುವುದರಲ್ಲಿ ಏನು ಅರ್ಥವಿದೆ?

ಸದಾಚಾರ ಭಾರತೀಯ ನೆಲದ ಅಂತಃಸತ್ವ. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ನಂಬಿದ ನಾಡು ಇದು. ಆಚಾರಕ್ಕರಸಾಗು ನೀತಿಗೆ ಪ್ರಭುವಾಗು ಎಂದು ಹಾಡಿದ ಜನಪದರ ಭೂಮಿ ಇದು. ಈ ಸದಾಚಾರ ಸಮಾಜದ ಯಾವುದೋ ಮೂಲೆಯಿಂದ ತಾನೇತಾನಾಗಿ ಉದಿಸಿಬರಬೇಕೆಂದು ನಿರೀಕ್ಷಿಸುವುದು ಹೇಗೆ? ಅದರ ಜವಾಬ್ದಾರಿ ಒಬ್ಬೊಬ್ಬ ವ್ಯಕ್ತಿಯ  ಮೇಲೂ ಇದೆ. ಪ್ರತಿಯೊಬ್ಬನೂ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ಮಾಡುತ್ತಾ ಹೋದರೆ ನಡೆ-ನುಡಿಯ ವ್ಯತ್ಯಾಸಗಳೇ ಉಳಿಯುವುದಿಲ್ಲ; ಇನ್ನೊಬ್ಬನನ್ನು ದೂರುವ ಪ್ರಶ್ನೆಯೂ ಇರುವುದಿಲ್ಲ. ಈ ಕರ್ತವ್ಯ ಮನೆಯಿಂದಲೇ ಆರಂಭವಾಗಲಿ. ಏಕೆಂದರೆ ಮನೆಯೆ ಮೊದಲ ಪಾಠಶಾಲೆ. ಈ ಶಾಲೆಯಲ್ಲಿ ನಡತೆಯೇ ಪಾಠ, ಪರಿಣಾಮವೇ ಪರೀಕ್ಷೆ. ವಿಚಾರವೆಲ್ಲವೂ ಆಚಾರ ರೂಪದಲ್ಲಿಯೇ ಇರುವ ಏಕೈಕ ಸ್ಥಳವದು. ಮನೆಯಲ್ಲಿ ಕಲಿತ ಪಾಠ ಶಾಶ್ವತ. ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ ಎಂಬ ಗಾದೆಯೇ ಇದೆಯಲ್ಲ? ನಮ್ಮ ನಡೆನುಡಿ ಚಿಂತನೆಗಳಂತೆ ನಮ್ಮ ಮಕ್ಕಳು ರೂಪುಗೊಳ್ಳುತ್ತಾರೆ. ನುಡಿಯೊಳಗಾಗಿ ನಡೆಯುವ ವ್ರತದ ಬೀಜ ಮನೆಗಳಲ್ಲೇ ಮೊಳೆತರೆ ಸಮಾಜ ಸ್ವಾಸ್ಥ್ಯದ ಹೊಲವಾಗುವುದು ನಿಸ್ಸಂಶಯ.