ಶುಕ್ರವಾರ, ಸೆಪ್ಟೆಂಬರ್ 14, 2012

ಕ್ಲಾಸ್‌ರೂಂ ಪತ್ರಿಕೋದ್ಯಮ ವೇಸ್ಟಾ? ಮಾಧ್ಯಮ ಶಿಕ್ಷಣ ಚರ್ಚೆಯ ಸುತ್ತಮುತ್ತ

ಮಾಧ್ಯಮಶೋಧ-25, ಹೊಸದಿಗಂತ, 13 ಸೆಪ್ಟೆಂಬರ್ 2012 

ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, 250ರಷ್ಟು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು, ಸಾವಿರಾರು ಜಾಹೀರಾತು ಏಜೆನ್ಸಿಗಳು, ಆಷ್ಟೇ ಪ್ರಮಾಣದ ಪಬ್ಲಿಕ್ ರಿಲೇಶನ್ಸ್-ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗಳು... ಭಾರತದ ಸಂವಹನ ಕ್ಷೇತ್ರ ಕ್ಷಣದಿಂದ ಕ್ಷಣಕ್ಕೆ ದಿನದಿಂದ ದಿನಕ್ಕೆ ಬಲೂನಿನಂತೆ ಹಿಗ್ಗುತ್ತಲೇ ಇದೆ. ಪತ್ರಿಕೋದ್ಯಮದ ಬಗ್ಗೆ 50-60 ವರ್ಷಗಳ ಹಿಂದೆ ಇದ್ದ ಕಲ್ಪನೆಗೂ ನಮ್ಮ ಕಣ್ಣಮುಂದಿನ ವಾಸ್ತವಕ್ಕೂ ಅಜಗಜಾಂತರ. ಅರ್ಧಶತಮಾನದ ಹಿಂದಿನ ಕಥೆ ಬದಿಗಿರಲಿ, ಮಾಧ್ಯಮ ಕ್ಷೇತ್ರದಲ್ಲಿ ಅರ್ಧದಿನದ ಹಿಂದಿನ ಸನ್ನಿವೇಶವೂ ಹಾಗೆಯೇ ಉಳಿಯುವ ಪರಿಸ್ಥಿತಿ ಇಲ್ಲ. ತಂತ್ರಜ್ಞಾನದ ಜತೆಜತೆಗೇ ಕ್ಷಣಕ್ಷಣಕ್ಕೂ ಬದಲಾಗುತ್ತಾ ಹೋಗುವ ಪ್ರಚಂಡ ಕ್ಷೇತ್ರ ಅದು. ಪತ್ರಿಕೋದ್ಯಮ ಎಂಬ ಪದದ ವ್ಯಾಪ್ತಿಯೇ ತುಂಬ ಕಿರಿದೆನ್ನಿಸಿ ಎಲ್ಲವನ್ನೂ ಒಟ್ಟಾಗಿ ಸಮೂಹ ಸಂವಹನದ ಪರಿಭಾಷೆಯಲ್ಲೇ ಅರ್ಥಮಾಡಿಕೊಳ್ಳಬೇಕಾದ ಕಾಲ ನಮ್ಮದು.

ಇಷ್ಟು ದೊಡ್ಡ ಕ್ಷೇತ್ರಕ್ಕೆ ಅವಶ್ಯಕವಾದ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸುವುದಕ್ಕೆ ನಮ್ಮ ದೇಶ, ಅಂದರೆ ನಮ್ಮ ಶಿಕ್ಷಣರಂಗ ಸನ್ನದ್ಧವಾಗಿದೆಯೇ ಎಂಬುದು ಆಗೀಗ ಚರ್ಚೆಗೆ ಬರುವ ವಿಷಯ. ಮಾಧ್ಯಮ ಶಿಕ್ಷಣವಾಗಿ ಮಾರ್ಪಾಟುಗೊಂಡಿರುವ ಪತ್ರಿಕೋದ್ಯಮ ಶಿಕ್ಷಣ ಎಷ್ಟರಮಟ್ಟಿಗೆ ಆಧುನಿಕ ಕಾಲದ ಮಾಧ್ಯಮಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಮರ್ಥವಾಗಿದೆ ಎಂಬ ಬಗ್ಗೆ ಈಚಿನ ದಿನಗಳಲ್ಲಂತೂ ಸಾಕಷ್ಟು ಚರ್ಚೆ, ವಾಗ್ವಾದಗಳು ನಡೆಯುತ್ತಿವೆ. ಕ್ಲಾಸ್‌ರೂಮಿನಲ್ಲೇನು ಪತ್ರಿಕೋದ್ಯಮ ಕಲಿಸುತ್ತಾರೆ, ಅಲ್ಲಿ ಕಲಿತದಕ್ಕೂ ಪತ್ರಿಕೆ ಅಥವಾ ಟಿವಿಯೊಳಗಿನ ವಾಸ್ತವಕ್ಕೂ ಏನಾದರೂ ಸಂಬಂಧವಿದೆಯಾ? ಎಂಬುದು ಬಹುತೇಕ ವೃತ್ತಿನಿರತ ಪತ್ರಕರ್ತರ ಟೀಕೆಯಾದರೆ, ಪತ್ರಿಕೆಯಲ್ಲಿ ಕೆಲಸಮಾಡುವವರೆಲ್ಲ ಮಹಾನ್ ವೃತ್ತಿಪರರೇ? ಅವರಲ್ಲಿ ಬುದ್ಧಿಗೇಡಿಗಳಿಲ್ಲವೇ? ವರದಿ-ಲೇಖನ ಬರೆಯುವ ಕೌಶಲವಷ್ಟೇ ಪತ್ರಿಕೋದ್ಯಮವೇ? ಎಂಬ ಚೋದ್ಯ ಅನೇಕ ಅಧ್ಯಾಪಕರದ್ದು.

ಎರಡೂ ಕಡೆಯ ವಾದದಲ್ಲೂ ಹುರುಳಿಲ್ಲದಿಲ್ಲ. ಹಾಗಂತ ಯಾವುದೋ ಒಂದು ವಾದ ಮಾತ್ರ ಸರಿ ಎಂದು ನಿರ್ಧರಿಸಿಬಿಡುವಂತೆಯೂ ಇಲ್ಲ. ಇದನ್ನೊಂದು ಚರ್ಚೆಯಾಗಿ ಮಾತ್ರ ಮುಂದುವರಿಸಿಕೊಂಡು ಹೋಗುವಲ್ಲಿ ಯಾವ ಅರ್ಥವೂ ಇಲ್ಲ. ಏಕೆಂದರೆ ಇಂತಹ ಚರ್ಚೆಗಳಿಗೆ ತುದಿಮೊದಲಿಲ್ಲ. ಎರಡೂ ಕಡೆಯವರು ವಾಸ್ತವಾಂಶಗಳನ್ನು ಅರ್ಥಮಾಡಿಕೊಂಡು ಯೋಚನೆ ಮಾಡಿದರೆ ಮಾತ್ರ ಒಂದು ಸಮಾಧಾನದ ಹಾದಿ ಹೊಳೆಯಬಹುದು. ಏಕೆಂದರೆ ಇದು ’ಹೋಗಲಿ ಬಿಡಿ’ ಎಂದು ಸುಮ್ಮನಾಗುವ ಕ್ಷುಲ್ಲಕ ವಿಚಾರವೇನೂ ಅಲ್ಲ; ಬೃಹದಾಕಾರವಾಗಿ ಬೆಳೆದಿರುವ ಮತ್ತು ಇನ್ನೂ ಬೆಳೆಯುತ್ತಲೇ ಇರುವ ಮಾಧ್ಯಮ ಕ್ಷೇತ್ರದ ಭವಿಷ್ಯದ ಪ್ರಶ್ನೆ.

ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸುವವರು ಪತ್ರಿಕೋದ್ಯಮವನ್ನೇ ಓದಿರಬೇಕು ಎಂಬ ನಿಯಮವೇನೂ ಹಿಂದೆ ಇರಲಿಲ್ಲ. ಈಗಲೂ ಇಲ್ಲ. ಆ ಕ್ಷೇತ್ರದಲ್ಲಿ ಆಸಕ್ತಿಯಿರುವ, ಅದು ಬಯಸುವ ಕೌಶಲ್ಯಗಳನ್ನು ಹೊಂದಿರುವ ಯಾರಿಗೇ ಆದರೂ ಪತ್ರಿಕೋದ್ಯಮಕ್ಕೆ ಸ್ವಾಗತ ಇತ್ತು. ಈಗಲೂ ಇದೆ. ಕಾನೂನು, ಸಾಹಿತ್ಯ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ... ಇತ್ಯಾದಿ ಯಾವುದೇ ವಿಷಯ ಓದಿದವರಿಗೂ ಪತ್ರಿಕೋದ್ಯಮದಲ್ಲಿ ಅವಕಾಶಕ್ಕೇನೂ ಕೊರತೆಯಿಲ್ಲ. ಡಿಗ್ರಿಗಳ ಕಥೆ ಹಾಗಿರಲಿ, ಹೈಸ್ಕೂಲನ್ನೇ ಮುಗಿಸದ ಮಂದಿಯೂ ಪತ್ರಿಕೋದ್ಯಮದ ದಂತಕತೆಗಳಾದ ಇತಿಹಾಸ ನಮ್ಮ ಮುಂದಿದೆ. ಪತ್ರಿಕೋದ್ಯಮ ಬಯಸುವುದು ಅದನ್ನು ಪ್ರೀತಿಸಬಲ್ಲ ಮನಸ್ಸು ಮತ್ತು ನಿಭಾಯಿಸಬಲ್ಲ ಪ್ರತಿಭೆಯನ್ನು ಮಾತ್ರ. ಆದರೆ ಕಾಲವೂ ತುಂಬ ಬದಲಾಗಿಬಿಟ್ಟಿದೆ. ಪತ್ರಿಕೆ, ಚಾನೆಲ್, ರೇಡಿಯೋ, ಇಂಟರ್ನೆಟ್ ಇತ್ಯಾದಿ ಸಂವಹನ ಮಾಧ್ಯಮಗಳ ಸಂಖ್ಯೆ ಊಹನೆಗೂ ಮೀರಿ ಬೆಳೆಯುತ್ತಿದೆ. ಮೇಲಾಗಿ ಇದು ಸ್ಪೆಷಲೈಸೇಶನ್ ಯುಗ. ಎಲ್ಲದರಲ್ಲೂ ವೃತ್ತಿಪರತೆಯನ್ನು ಬಯಸುವ ಕಾಲ. ಹೀಗಾಗಿ ಮಾಧ್ಯಮ ಶಿಕ್ಷಣ ಹಿನ್ನೆಲೆಯಿಂದ ಬಂದವರಿಗೇ ಮಾಧ್ಯಮಗಳಲ್ಲಿ ಆದ್ಯತೆ ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಆದರೆ ಇಷ್ಟೊಂದು ಮುಂದುವರಿದಿರುವ ಮಾಧ್ಯಮ ಪ್ರಪಂಚಕ್ಕೆ ಒಪ್ಪುವ ಸಮರ್ಥ ಮಾನವ ಸಂಪನ್ಮೂಲ ದೊರೆಯುತ್ತಿಲ್ಲ ಎಂಬುದೇ ಸದ್ಯದ ಚರ್ಚೆ. 'Journalists are born, not made' ಎಂಬ ಸಾಂಪ್ರದಾಯಿಕ ನಿಲುವಿನ ನಡುವೆಯೇ ಪತ್ರಿಕೋದ್ಯಮ ಶಿಕ್ಷಣ ಬೆಳೆದು ಬಂತು. 'Journalists may be born, but they are made too' ಎಂಬ ಮಾತಿಗೆ ಬೆಂಬಲ ದೊರೆಯಿತು. ಅನೇಕ ಮಾನವಿಕ ಮತ್ತು ಶಾಸ್ತ್ರೀಯ ವಿಷಯಗಳಿಗೆ ಹೋಲಿಸಿದರೆ ಒಂದು ಅಧ್ಯಯನದ ವಿಷಯವಾಗಿ ಪತ್ರಿಕೋದ್ಯಮವೂ ತುಂಬಾ ಹೊಸತೇ. ಆದರೆ ಅದು ಬೆಳೆದ ವೇಗ ಅಗಾಧವಾದದ್ದು. ಪತ್ರಿಕೋದ್ಯಮ ಒಂದು ಅಧ್ಯಯನದ ವಿಷಯವಾಗಿ ಬೆಳೆದ ಮೇಲೂ ಮಾಧ್ಯಮಗಳಿಗೆ ಅವಶ್ಯಕವಾದ, ಅವು ಬಯಸುವ ಕೌಶಲಗಳುಳ್ಳ ಮಂದಿ ತಯಾರಾಗುತ್ತಿಲ್ಲವಲ್ಲ ಎಂಬ ಕೊರಗು ನ್ಯಾಯವಾದದ್ದೇ.

ತರಗತಿಯಲ್ಲಿ ಕಲಿತ ಪತ್ರಿಕೋದ್ಯಮ ವೃತ್ತಿಯ ಅವಶ್ಯಕತೆಗಳನ್ನು ಸರಿಯಾಗಿ ಪೂರೈಸುತ್ತಿಲ್ಲ ಎಂಬ ಮಾತಲ್ಲಿ ಆಕ್ಷೇಪಿಸುವಂಥದ್ದೇನೂ ಇಲ್ಲ. ಹಾಗಂತ ಕ್ಲಾಸ್‌ರೂಂನಲ್ಲಿ ಕಲಿತದ್ದು ಪೂರ್ತಿ ವೇಸ್ಟು ಎಂದು ಪತ್ರಿಕೋದ್ಯಮ ಶಿಕ್ಷಣವನ್ನೇ ಸಾರಾಸಗಟಾಗಿ ಹೀಗಳೆಯುವ ಪ್ರವೃತ್ತಿ ಮಾತ್ರ ಒಳ್ಳೆಯ ಬೆಳವಣಿಗೆ ಅಲ್ಲ. ಯಾವ ಅಧ್ಯಯನದ ವಿಷಯವೂ ಅದರಷ್ಟಕ್ಕೇ ಒಳ್ಳೆಯದೂ ಆಗುವುದಿಲ್ಲ, ನಿಷ್ಪ್ರಯೋಜಕವೂ ಆಗುವುದಿಲ್ಲ. ಸಮಸ್ಯೆಯಿದೆ ಎಂದಾದರೆ ಅದು ಒಟ್ಟು ವ್ಯವಸ್ಥೆಯಲ್ಲಿ: ಅಂದರೆ, ಕಲಿಯುವವರಲ್ಲಿ, ಕಲಿಸುವವರಲ್ಲಿ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ. ಹಾಗಾದರೆ ಚರ್ಚೆ ನಡೆಯಬೇಕಾದ್ದು ಈ ವ್ಯವಸ್ಥೆಯನ್ನು ಸರಿಪಡಿಸುವ ಬಗೆಗೇ ಹೊರತು ಒಟ್ಟು ಮಾಧ್ಯಮ ಶಿಕ್ಷಣವನ್ನೇ ಜೊಳ್ಳು ಅಥವಾ ಟೊಳ್ಳು ಎಂದು ಟೀಕೆ ಮಾಡುವುದರಲ್ಲಲ್ಲ.

ಪತ್ರಿಕೋದ್ಯಮ ಪಾಠ ಮಾಡುವ ಅಧ್ಯಾಪಕರಲ್ಲೇ ಪ್ರಾಯೋಗಿಕ ತಿಳುವಳಿಕೆಯ ಕೊರತೆ ಇದೆ ಎಂಬ ಮಾತು ಒಪ್ಪುವಂಥದ್ದೇ. ಅನೇಕ ಪತ್ರಿಕೋದ್ಯಮ ಅಧ್ಯಾಪಕರಿಗೆ ಪತ್ರಿಕೆ, ಟಿವಿ, ರೇಡಿಯೋ ಯಾವುದೋ ಒಂದರಲ್ಲಾದರೂ ಕೆಲಸ ಮಾಡಿದ ಕನಿಷ್ಠ ಅನುಭವ ಇಲ್ಲ. ಸ್ವತಃ ವರದಿಗಾರಿಕೆ ಮಾಡಿ ಗೊತ್ತಿಲ್ಲದವರು ವಿದ್ಯಾರ್ಥಿಗಳಿಗೆ ರಿಪೋರ್ಟಿಂಗ್ ಹೇಗೆ ತಾನೇ ಹೇಳಿಕೊಟ್ಟಾರು? ಸ್ವತಃ ಎಡಿಟಿಂಗ್ ಮಾಡಲಾರದವರು ತಮ್ಮ ವಿದ್ಯಾರ್ಥಿಗಳಿಗೆ ಎಂತಹ ಎಡಿಟಿಂಗ್ ಅಭ್ಯಾಸ ಮಾಡಿಸಿಯಾರು? ಸ್ವತಃ ಸಂದರ್ಶನ ಮಾಡಿದ ಅನುಭವವಾಗಲೀ ಕೌಶಲವಾಗಲೀ ಇಲ್ಲದವರು ಅದರಲ್ಲಿ ವಿದ್ಯಾರ್ಥಿಗಳನ್ನೆಷ್ಟು ತಯಾರು ಮಾಡಿಯಾರು ಎಂಬ ಪ್ರಶ್ನೆಗಳು ಸಹಜವಾದವೇ. ಅನೇಕ ಮಂದಿ ಸ್ನಾತಕೋತ್ತರ ಪದವಿ ಮುಗಿಸಿ ಇಲ್ಲವೇ ಪಿಎಚ್.ಡಿ. ಸಂಶೋಧನೆ ಕೈಗೊಂಡು ನೇರವಾಗಿ ಅಧ್ಯಾಪನಕ್ಕೆ ಬಂದುಬಿಡುತ್ತಾರೆ. ವಿದ್ಯಾರ್ಥಿಗಳಾಗಿದ್ದಾಗ ಅಥವಾ ಸಂಶೋಧನೆಯಲ್ಲಿ ತೊಡಗಿದ್ದಾಗಲಾದರೂ ನಾಲ್ಕಕ್ಷರ ಬರೆದು ಅಭ್ಯಾಸವಿದೆಯಾ ಎಂದರೆ ದಿನಕ್ಕೆ ಒಂದಿಷ್ಟು ಪತ್ರಿಕೆಗಳನ್ನಾದರೂ ವಿವರವಾಗಿ ಓದಿದವರು ಅವರಲ್ಲ; ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರ ತಿಳುವಳಿಕೆ ಬಗೆಗಂತೂ ಕೇಳುವುದೇ ಬೇಡ. ಇಂಥವರು ಮಾಧ್ಯಮಗಳಿಗಾಗಿ ಎಂತಹ ಮಂದಿಯನ್ನು ತಯಾರು ಮಾಡಿಯಾರು ಎಂದು ಯಾರಾದರೂ ಊಹಿಸಬಹುದು.

ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಬಳಕೆಯಲ್ಲಿರುವ ಪತ್ರಿಕೋದ್ಯಮ ಸಿಲೆಬಸ್ ಕಾಲದ ವೇಗಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಿಲ್ಲ ಎಂಬ ವಿಷಯದಲ್ಲೂ ಹುರುಳಿದೆ. ಒಂದು ವೇಳೆ ಅಪ್‌ಡೇಟ್ ಆಗುತ್ತಿದ್ದರೂ ಅದನ್ನು ಕಲಿಸುವ ಅಧ್ಯಾಪಕರೇ ಅಪ್‌ಡೇಟ್ ಆಗದಿದ್ದರೆ ಎಂತಹ ಸಿಲೆಬಸ್ ರೂಪಿಸಿಯೂ ಪ್ರಯೋಜನ ಇಲ್ಲ ಎಂದಾಗುತ್ತದೆ. ಆದರೆ ಪದವಿ ಅಥವಾ ಸ್ನಾತಕೋತ್ತರ ಹಂತದಲ್ಲಿ ತರಗತಿಯಲ್ಲಿ ಹೇಳುವ ವಿಷಯಗಳೆಲ್ಲ ಅಪ್ರಸ್ತುತ, ಪತ್ರಿಕಾಲಯಕ್ಕೆ ಕಾಲಿಟ್ಟ ಮೇಲೆ ಬೇಕಾಗುವ ಅವಶ್ಯಕತೆಗಳೇ ಬೇರೆ ಎಂಬ ಮಾತು ಶುದ್ಧ ಅಪ್ರಬುದ್ಧ. ಮಾಧ್ಯಮದಲ್ಲಿ ಕೆಲಸ ಮಾಡುವುದೆಂದರೆ ಬರೀ ವರದಿ ಬರೆಯುವುದೋ, ಸುದ್ದಿ ಪರಿಷ್ಕರಿಸುವುದೋ, ಸುದ್ದಿ ಪ್ರಸ್ತುತಪಡಿಸುವುದೋ ಅಲ್ಲ; ಪತ್ರಕರ್ತ ವೈಯುಕ್ತಿಕವಾಗಿ ಅದಕ್ಕಿಂತಲೂ ಆಚೆ ಬೆಳೆಯಬೇಕು. ಅಂತಹ ಪತ್ರಕರ್ತ ಮಾತ್ರ ತನ್ನ ಪತ್ರಿಕೆ/ಚಾನೆಲ್‌ನ್ನು ಅಥವಾ ಒಟ್ಟು ಮಾಧ್ಯಮ ಕ್ಷೇತ್ರವನ್ನು ಬೆಳೆಸಬಲ್ಲ. ಪತ್ರಕರ್ತನಾಗುವವನು ತನ್ನ ವೃತ್ತಿಯ ಇತಿಹಾಸವನ್ನು, ಅದರ ಮಹತ್ವವನ್ನು, ಅದರ ನೈತಿಕ ನೆಲೆಗಟ್ಟನ್ನು, ವಿವಿಧ ಆಯಾಮಗಳನ್ನು, ಜೊತೆಗೆ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಿದ್ಧಾಂತಗಳನ್ನು ಅರಿತುಕೊಳ್ಳುವುದು ತುಂಬ ಮುಖ್ಯ. ಇದನ್ನು ಪತ್ರಕರ್ತರಾಗಲು ಉತ್ಸುಕರಾದವರು, ಅವರ ಅಧ್ಯಾಪಕರು ಮತ್ತು ವೃತ್ತಿನಿರತರು - ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪತ್ರಕರ್ತ ಮಾಗುತ್ತಾ ಹೋಗಬೇಕು, ಅದರ ಆರಂಭಿಕ ತಯಾರಿಯನ್ನಾದರೂ ಅಧ್ಯಾಪಕ ಮಾಡಿಕಳಿಸಬೇಕು. ಮಾಗಿದವನು ಬಾಗಿಯಾನು.

ಕಾಲೇಜು ಹಂತದಲ್ಲಾಗಲೀ, ವಿಶ್ವವಿದ್ಯಾನಿಲಯ ಹಂತದಲ್ಲಾಗಲೀ ಪತ್ರಿಕೋದ್ಯಮವನ್ನು ಇಂದಿಗೂ ಇತರೆ ಮಾನವಿಕ ವಿಷಯಗಳ ಜತೆಗಿಟ್ಟು ನೋಡುವ ಪರಿಸ್ಥಿತಿಯಿರುವುದೇ ಒಂದು ಸಮಸ್ಯೆ. ಇದರರ್ಥ ಬೇರೆ ವಿಷಯಗಳು ಕಮ್ಮಿ ಎಂದಲ್ಲ; ಪತ್ರಿಕೋದ್ಯಮ ಒಂದು ಕೌಶಲ ಆಧಾರಿತ, ವೃತ್ತಿಪರ ವಿಷಯವಾಗಿರುವುದರಿಂದ ಅದನ್ನು ನೋಡುವ ರೀತಿ ಬೇರೆ ಆಗಬೇಕೆಂದಷ್ಟೇ. ಸಮಾಜಶಾಸ್ತ್ರವನ್ನೋ ಇತಿಹಾಸವನ್ನೋ ಸಾಹಿತ್ಯವನ್ನೋ ಬೋಧಿಸಿದ ಹಾಗೆ ಪತ್ರಿಕೋದ್ಯಮವನ್ನು ಬೋಧಿಸಲಾಗದು. ಬರೀ ಪತ್ರಿಕೋದ್ಯಮ ಪದವಿಯನ್ನಷ್ಟೇ ಹೊಂದಿರುವವರನ್ನು ಅಧ್ಯಾಪಕರನ್ನಾಗಿಯೂ ನೇಮಿಸಲಾಗದು. ಪತ್ರಿಕೋದ್ಯಮಕ್ಕಿರುವ ಬೇಡಿಕೆಯನ್ನು ಕಂಡು ಅನೇಕ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಪತ್ರಿಕೋದ್ಯಮವನ್ನು ಒಂದು ಅಧ್ಯಯನದ ವಿಷಯವನ್ನಾಗಿ ಹೊಂದಲು ಆಸಕ್ತಿಯನ್ನೇನೋ ತೋರಿಸುತ್ತವೆ; ಆದರೆ ಅದರ ಬೋಧನೆಗೆ ಅವಶ್ಯಕವಿರುವ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಬಹುತೇಕರಿಗೆ ಅಂತಹ ಆಸಕ್ತಿ ಇದ್ದಂತಿಲ್ಲ. ಒಂದೇ ಒಂದು ಕಂಪ್ಯೂಟರ್, ಒಂದಾದರೂ ಕ್ಯಾಮರಾ ಇಲ್ಲದ ಪತ್ರಿಕೋದ್ಯಮ ವಿಭಾಗಗಳನ್ನು ಹೊಂದಿರುವ ಸಾಕಷ್ಟು ಕಾಲೇಜುಗಳು ಕರ್ನಾಟಕದಲ್ಲೇ ಸಿಗುತ್ತವೆ. ಈಚಿನ ವರ್ಷಗಳಲ್ಲಿ ಸಾಕಷ್ಟು ಖಾಸಗಿ ಮಾಧ್ಯಮ ಶಿಕ್ಷಣ ಸಂಸ್ಥೆಗಳೇನೋ ಹುಟ್ಟಿಕೊಳ್ಳುತ್ತಿವೆ, ಆದರೆ ಅವರು ಲಕ್ಷಗಳಲ್ಲಿ ನಿರೀಕ್ಷಿಸುವ ಶುಲ್ಕವನ್ನು ನಮ್ಮ ಗ್ರಾಮಭಾರತದ ಉತ್ಸಾಹಿಗಳು ಊಹಿಸುವಂತೆಯೂ ಇಲ್ಲ.

ಮೆಡಿಕಲ್, ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸುಗಳನ್ನು ನಿಯಂತ್ರಿಸಲು ರಾಷ್ಟ್ರಮಟ್ಟದಲ್ಲಿ ಶಾಸನಬದ್ಧ ಸಂಸ್ಥೆಗಳಿವೆ; ಪತ್ರಿಕೋದ್ಯಮ ಅಥವಾ ಮಾಧ್ಯಮ ಶಿಕ್ಷಣದ ಒಟ್ಟು ಅಭಿವೃದ್ಧಿ-ನಿಯಂತ್ರಣಕ್ಕೂ ಈ ಬಗೆಯ ಒಂದು ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ನಮ್ಮ ಸರ್ಕಾರ ಏಕೆ ಯೋಚಿಸಬಾರದು? ಒಂದು ಪತ್ರಿಕೋದ್ಯಮ ವಿಭಾಗ ತೆರೆಯಬೇಕಾದರೆ ಇಂತಿಷ್ಟು ಸೌಲಭ್ಯಗಳು ಇರಲೇಬೇಕು, ಒಬ್ಬ ಪತ್ರಿಕೋದ್ಯಮ ಅಧ್ಯಾಪಕನಿಗೆ ಇಂತಿಷ್ಟು ವರ್ಷಗಳ ಪ್ರಾಯೋಗಿಕ ಅನುಭವ ಇರಲೇಬೇಕು, ಆತ ಇಂತಿಷ್ಟು ವರ್ಷಗಳಿಗೊಮ್ಮೆ ಪತ್ರಿಕಾಲಯದಲ್ಲೋ ಟಿವಿ ಚಾನೆಲ್‌ಗಳಲ್ಲೋ ಒಂದಷ್ಟು ದಿನ ಕೆಲಸ ಮಾಡಿ ತನ್ನನ್ನು ತಾನು ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎಂಬ ನಿಯಮಗಳನ್ನು ಈ ಸಂಸ್ಥೆ ಏಕೆ ರೂಪಿಸಬಾರದು?

ಈ ನಿಟ್ಟಿನಲ್ಲಿ ಏನಾದರೂ ಪ್ರಗತಿ ನಿರೀಕ್ಷಿಸೋಣವೇ?

ಬುಧವಾರ, ಸೆಪ್ಟೆಂಬರ್ 5, 2012

ಸೈಬರ್ ಸಮರದ ಕರಿನೆರಳಲ್ಲಿ ಭಾರತ


ಮಾಧ್ಯಮಶೋಧ-24, ಹೊಸದಿಗಂತ, 30-08-2012

ವಿಲಿಯಂ ಗಿಬ್ಸನ್, ಜಾನ್ ಫೋರ್ಡ್ ಮೊದಲಾದವರು ಎಂಭತ್ತರ ದಶಕದಲ್ಲಿ ಸೈಬರ್ ಸ್ಪೇಸ್, ಸೈಬರ್ ಅಟ್ಯಾಕ್, ಸೈಬರ್ ವಾರ್ ಎಂದೆಲ್ಲ ವೈಜ್ಞಾನಿಕ ಕಥೆ-ಕಾದಂಬರಿಗಳನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಿದ್ದರೆ ಜನ ಅವುಗಳನ್ನು ಬಾಯಿ ಚಪ್ಪರಿಸಿಕೊಂಡು ಓದುತ್ತ ಹೀಗೂ ಉಂಟೆ ಎಂದು ವಿಸ್ಮಯಪಡುತ್ತಿದ್ದುದುಂಟು. ಮೂವತ್ತು ವರ್ಷಗಳ ನಂತರ ಈ ಥ್ರಿಲ್ಲರ್‌ಗಳು ತಮ್ಮ ಕಣ್ಣೆದುರೇ ಸಂಭವಿಸಬಹುದೆಂದು ಅವರು ಬಹುಶಃ ಕನಸಿನಲ್ಲೂ ಭಾವಿಸಿರಲಿಕ್ಕಿಲ್ಲ. ಅಂದಿನ ಕಲ್ಪನೆ, ಕಟ್ಟುಕಥೆಗಳು ಇಂದು ಜಾಗತಿಕ ಆತಂಕಗಳಾಗಿ ನಮ್ಮೆದುರು ಧುತ್ತೆಂದು ವಕ್ಕರಿಸಿರುವುದು ಸಂಪರ್ಕಮಾಧ್ಯಮಗಳ ಕ್ರಾಂತಿಯೋ ಆಧುನಿಕತೆಯ ವಿಪರ್ಯಾಸವೋ ಅರ್ಥವಾಗುವುದಿಲ್ಲ.

ಅದೆಲ್ಲೋ ಈ-ಮೇಲ್ ಹ್ಯಾಕಿಂಗ್ ಮಾಡಿದ್ದಾರಂತೆ, ಇನ್ಯಾರದೋ ಕಂಪ್ಯೂಟರ್‌ನಲ್ಲಿರುವ ಫೈಲ್‌ಗಳನ್ನು ವೈರಸ್‌ಗಳು ತಿಂದುಹಾಕಿವೆಯಂತೆ, ಮತ್ಯಾರದೋ ಬ್ಯಾಂಕ್ ಅಕೌಂಟ್‌ನಲ್ಲಿರುವ ಲಕ್ಷಾಂತರ ರೂಪಾಯಿ ಹಣವನ್ನು ಇನ್ಯಾರೋ ಆನ್‌ಲೈನಲ್ಲೇ ಎಗರಿಸಿದ್ದಾರಂತೆ ಎಂಬಿತ್ಯಾದಿ ಸುದ್ದಿಗಳನ್ನು ಆಗೊಮ್ಮೆ ಈಗೊಮ್ಮೆ ಓದುತ್ತಾ ಅದೇನೆಂದು ಅರ್ಥವಾಗದೆ ತಲೆಕೊಡವಿಕೊಂಡವರು ಈಗ ಇವೆಲ್ಲ ನಮಗೂ ಸಂಭವಿಸಿಬಿಡಬಹುದೇ ಎಂದು ಚಿಂತಾಕ್ರಾಂತರಾಗುವ ಕಾಲ ಎದುರಾಗಿದೆ. ಇಡೀ ಜಗತ್ತನ್ನು ಸೈಬರ್ ಲೋಕದ ಸಂಭವನೀಯ ವಿಪತ್ತಿನ ಕರಿಛಾಯೆ ಆವರಿಸಿಕೊಂಡಿದೆ.

ದೇಶವನ್ನು ಚಿಂತೆಗೀಡು ಮಾಡಿದ ಈಚಿನ ಅಸ್ಸಾಂ ಹಿಂಸಾಚಾರ ಮತ್ತು ಅದರ ಮುಂದುವರಿದ ಭಾಗವೆಂಬಂತೆ ನಡೆದ ಸಾಮಾಜಿಕ ಸಾಮರಸ್ಯವನ್ನು ಕದಡುವ ದೇಶವ್ಯಾಪಿ ಹುನ್ನಾರಗಳು ಸೈಬರ್ ಮಾಯಾವಿ ಸೃಷ್ಟಿಸಬಹುದಾದ ದುರಂತಗಳನ್ನು ದೇಶಕ್ಕೆ ಮನದಟ್ಟು ಮಾಡಿವೆ; ಅಂತರ್ಜಾಲ, ಸಾಮಾಜಿಕ ಜಾಲತಾಣ, ಮೊಬೈಲ್ ದೂರವಾಣಿ ಮೊದಲಾದ ಆಧುನಿಕ ಸಂವಹನದ ಮಾಧ್ಯಮಗಳು ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡುವ ಜೊತೆಗೆ ಎಂತೆಂತಹ ವಿಪತ್ತುಗಳನ್ನು ತಂದೊಡ್ಡಬಹುದು ಎಂಬುದರ ಬಗೆಗೂ ಗಂಭೀರವಾಗಿ ಯೋಚಿಸುವಂತೆ ಮಾಡಿವೆ.

ಅನೇಕ ಅಭಿವೃದ್ಧಿಶೀಲ ದೇಶಗಳಂತೆಯೇ ನಾವೂ ಕೂಡ ಇಂಟರ್ನೆಟ್ ವಿಷಯದಲ್ಲಿ ಅಷ್ಟೊಂದು ವೇಗವಾಗಿಯೇನೂ ಇರಲಿಲ್ಲ. ಸಹಜವಾಗಿಯೇ ಅದರ ಭದ್ರತೆಯ ಬಗೆಗಿನ ನಮ್ಮ ಗಮನವೂ ಸಾಧಾರಣವಾಗಿಯೇ ಇತ್ತು. ಅಮೇರಿಕ, ಚೀನಾದಂತಹ ದೇಶಗಳು ತಮ್ಮ ದೇಶದ ಗಡಿಗಳನ್ನು ಕಾಯುವುದಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಅಂತರ್ಜಾಲದ ಗೋಡೆಗಳನ್ನು ರಕ್ಷಿಸುವುದಕ್ಕೆ ಕೊಡುತ್ತಿದ್ದರೂ ನಾವು ನಿಧಾನವಾಗಿ ಕಣ್ಣುತೆರೆದುಕೊಳ್ಳುತ್ತಿದ್ದೆವು. ಹ್ಯಾಕಿಂಗ್, ರಹಸ್ಯ ಮಾಹಿತಿ ಕಳವು ಇತ್ಯಾದಿ ಅಪಾಯಗಳ ಬಗೆಗಷ್ಟೇ ಎಚ್ಚರವಾಗಿದ್ದ ಸರ್ಕಾರ ಡೇವಿಡ್ ಹೆಡ್ಲಿಯಂತಹ ಪಾತಕಿಗಳು ಸಾವಿರಾರು ಮೈಲಿ ದೂರದಲ್ಲಿ ಕುಳಿತು ಇಂಟರ್ನೆಟ್ ಮೂಲಕವೇ ಹತ್ಯಾಕಾಂಡಗಳ ನಿರ್ದೇಶನ ಮಾಡುತ್ತಿದ್ದುದು ಅರಿವಿಗೆ ಬಂದಾಗ, ಭಯೋತ್ಪಾದಕ ಸಂಘಟನೆಗಳು ಯಾವುದೋ ದೇಶದಲ್ಲಿ ನೆಲೆಯೂರಿಕೊಂಡು ಜಾಲತಾಣಗಳ ನೆರವಿನಿಂದ ತಮ್ಮ ಸೈನ್ಯಕ್ಕೆ ಇನ್ನಷ್ಟು ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದುದು ಗೊತ್ತಾದಾಗ ಮಾತ್ರ ಬೆಚ್ಚಿಬಿದ್ದಿತ್ತು. ಅದರಲ್ಲೂ ಭಯೋತ್ಪಾದಕ ಸಂಘಟನೆಗಳು ಇಂಟರ್ನೆಟ್‌ನ್ನು ಬಳಸಿಕೊಂಡು ವದಂತಿಗಳನ್ನು ಹಬ್ಬಿಸಿ ದೇಶದ ಏಕತೆ ಹಾಗೂ ಧಾರ್ಮಿಕ ಸಾಮರಸ್ಯವನ್ನೇ ಕದಡಿಸಿ ಬುಡಮೇಲು ಕೃತ್ಯಗಳನ್ನು ಎಸಗುವ ಪ್ರಯತ್ನಗಳನ್ನು ನಡೆಸಿದಾಗ ನಾವು ನಿಜವಾಗಿಯೂ ಒಂದು ಸೈಬರ್ ಸಮರದ ಹೊಸಿಲಲ್ಲಿ ನಿಂತಿದ್ದೇವೆಯೇ ಎಂಬ ಆತಂಕ ಸರ್ಕಾರದ ನಿದ್ದೆಗೆಡಿಸಿಬಿಟ್ಟಿದೆ. ಇದು ಕೇವಲ ಸರ್ಕಾರದ ಆತಂಕ ಮಾತ್ರ ಅಲ್ಲ, ದೇಶದ ಒಬ್ಬೊಬ್ಬ ಪ್ರಜೆಯ ತಲ್ಲಣ ಎಂಬುದೇ ಗಮನಿಸಬೇಕಾದ ವಿಷಯ.

ಅಂತಾರಾಷ್ಟ್ರೀಯ ಸಂಬಂಧಗಳ ಪರಿಣಿತ ಜೋಸೆಫ್ ನೀ ಎಂಬವರನ್ನು ಉಲ್ಲೇಖಿಸುತ್ತಾ ಮಾಜಿ ವಿದೇಶಾಂಗ ಸಚಿವ ಶಶಿ ತರೂರ್ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಸೈಬರ್ ಲೋಕದ ನಾಲ್ಕು ಬಗೆಯ ಅಪಾಯಗಳನ್ನು ಪಟ್ಟಿ ಮಾಡಿದ್ದಾರೆ. ಒಂದು, ಸೈಬರ್ ಯುದ್ಧ. ಅಂದರೆ ಒಂದು ದೇಶ ಇನ್ನೊಂದು ದೇಶದ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸಂಪರ್ಕ ಜಾಲವನ್ನು ಅನಧಿಕೃತವಾಗಿ ಹತೋಟಿಗೆ ತೆಗೆದುಕೊಂಡು ಅದನ್ನು ಹಾಳುಗೆಡಹುವ ಮೂಲಕ ಆ ದೇಶದ ಸಮಸ್ತ ಚಟುವಟಿಕೆಗಳನ್ನು ಬುಡಮೇಲು ಮಾಡುವುದು. ಎರಡನೆಯದು, ಸೈಬರ್ ಕಳ್ಳತನ. ಅಂದರೆ ಕಂಪ್ಯೂಟರ್ ತಂತ್ರಜ್ಞಾನ ಬಳಸಿಕೊಂಡು ವಿವಿಧ ಸಂಸ್ಥೆ ಅಥವಾ ಸರ್ಕಾರಗಳ ರಹಸ್ಯ ಮಾಹಿತಿಗಳನ್ನು ಕಳವು ಮಾಡಿ ಅದನ್ನು ವಿನಾಶಕಾರಿ ಕೃತ್ಯಗಳಿಗೆ ಬಳಸಿಕೊಳ್ಳುವುದು. ಮೂರನೆಯದು, ಸೈಬರ್ ಕ್ರೈಂ. ಅಂದರೆ ಈ -ಮೇಲ್ ಹ್ಯಾಕಿಂಗ್ ಮಾಡುವುದು, ವೈರಸ್‌ಗಳನ್ನು ಛೂಬಿಡುವುದು, ಅಂತರ್ಜಾಲದ ಮೂಲಕ ವಂಚಿಸುವುದು, ಬೇಹುಗಾರಿಕೆ ನಡೆಸುವುದು, ವೇಶ್ಯಾವಾಟಿಕೆ, ಜೂಜು, ಕಳ್ಳಸಾಗಣೆ ಮುಂತಾದವುಗಳನ್ನು ಪ್ರೇರೇಪಿಸುವುದು, ಮಾನಹಾನಿ ಎಸಗುವುದು ಇತ್ಯಾದಿ. ನಾಲ್ಕನೆಯದು, ಸೈಬರ್ ಭಯೋತ್ಪಾದನೆ. ಅಂದರೆ ಭಯೋತ್ಪಾದಕ ಯೋಜನೆಗಳನ್ನು ಮತ್ತು ದಾಳಿಗಳನ್ನು ಇಂಟರ್ನೆಟ್ ಮೂಲಕ ಕಾರ್ಯಾಚರಣೆಗೆ ತರುವುದು, ತಮ್ಮದೇ ಸಿದ್ಧಾಂತಗಳನ್ನು ವಿವಿಧ ಜಾಲತಾಣಗಳ ಮೂಲಕ ಪ್ರಚಾರ ಮಾಡುವುದು, ತಮ್ಮ ಸಂಘಟನೆಗಳಿಗೆ ಹೆಚ್ಚುಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳುವುದು ಇತ್ಯಾದಿ.

ಒಂದು ಬಾಂಬ್ ದಾಳಿಯ ಮೂಲಕ ಒಂದು ದೇಶ ತನ್ನ ಶತ್ರು ದೇಶದ ನಿರ್ದಿಷ್ಟ ಭಾಗವನ್ನಷ್ಟೇ ನಾಶಮಾಡಬಹುದು; ಆದರೆ ಸೈಬರ್ ದಾಳಿಯ ಮೂಲಕ ಒಂದು ದೇಶ ಇನ್ನೊಂದು ದೇಶದ ಸಮಸ್ತ ನರನಾಡಿಗಳನ್ನೇ ನಿಷ್ಕ್ರಿಯಗೊಳಿಸಿಬಿಡಬಹುದು. ಒಂದು ದೇಶ ತನ್ನ ರಕ್ಷಣೆಗೆ ಕ್ಷಿಪಣಿಗಳನ್ನು, ಬಾಂಬುಗಳನ್ನೇನೋ ತಯಾರಿಸಿ ಗುಡ್ಡೆಹಾಕಬಹುದು, ಆದರೆ ಅವುಗಳ ಕಾರ್ಯಾಚರಣೆಗೆ ಬಳಸುವ ತಂತ್ರಜ್ಞಾನ, ಸಾಫ್ಟ್‌ವೇರ್‌ಗಳನ್ನೇ ಶತ್ರು ದೇಶ ನಾಶ ಮಾಡಿಬಿಟ್ಟರೆ ಈ ಕ್ಷಿಪಣಿಗಳ, ಬಾಂಬುಗಳ ಗತಿಯೇನಾಗಬೇಕು! ಒಂದು ದೇಶದ ಭದ್ರತಾ ವ್ಯವಸ್ಥೆಯಿಂದ ತೊಡಗಿ ಹಣಕಾಸು ವ್ಯವಹಾರಗಳವರೆಗೆ, ಆಡಳಿತದಿಂದತೊಡಗಿ ಸಾರಿಗೆ ಸಂಪರ್ಕದವರೆಗೆ ಎಲ್ಲವೂ ಕಂಪ್ಯೂಟರ್ ಜಾಲ ಅಥವಾ ವರ್ಲ್ಡ್ ವೈಡ್ ವೆಬ್ ಅಂಬ ಮಹಾಮಾಯೆಯ ಕೃಪೆಯಿಂದಲೇ ನಡೆಯುತ್ತಿರಬೇಕಾದರೆ ಈ ವ್ಯವಸ್ಥೆಯಲ್ಲಿ ಉಂಟಾಗುವ ಸಣ್ಣಸಣ್ಣ ಲೋಪಗಳೂ ದೊಡ್ಡದೊಡ್ದ ಪ್ರಮಾದಗಳಿಗೆ ಕಾರಣವಾಗುತ್ತವೆ. ಅದರಲ್ಲೂ ವೈರಿರಾಷ್ಟ್ರಗಳು ಅಥವಾ ಭಯೋತ್ಪಾದಕ ಸಂಘಟನೆಗಳೇ ನಮ್ಮ ಕಂಪ್ಯೂಟರ್ ಜಾಲದೊಳಕ್ಕೆ ಲಗ್ಗೆಯಿಟ್ಟುಬಿಟ್ಟರೆ ಎಲ್ಲ ನಿಯಂತ್ರಣವೂ ನಮ್ಮ ಕೈತಪ್ಪಿಹೋದಂತೆ. ಕಂಪ್ಯೂಟರ್-ಇಂಟರ್ನೆಟ್‌ನ್ನು ಬಳಸದ ಇಲಾಖೆ, ಸಂಸ್ಥೆಗಳೇ ಇಲ್ಲ ಎಂದಾದಮೇಲೆ ಬಾಹ್ಯಶಕ್ತಿಗಳು ಒಮ್ಮೆ ಇವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ದೇಶದ ಸಮಸ್ತ ಚಟುವಟಿಕೆಗಳೂ ನಿಷ್ಕ್ರಿಯವಾದಂತೆ. ಹೀಗಾಗಿ ಕ್ಷಿಪಣಿ ಬಾಂಬುಗಳ ಯುದ್ಧಕ್ಕಿಂತಲೂ ಈ ಸೈಬರ್ ಯುದ್ಧವೇ ಹೆಚ್ಚು ಅಪಾಯಕಾರಿ. ಸರ್ಕಾರಗಳು ಇನ್ನೂ ದೇಶದ ಭೌತಿಕ ಗಡಿಗಳನ್ನು ಕಾಯುವ ಬಗೆಗೇ ತಲೆಕೆಡಿಸಿಕೊಂಡಿದ್ದರೆ ಭಯೋತ್ಪಾದಕ ಸಂಘಟನೆಗಳು, ದುಷ್ಕರ್ಮಿಗಳು ಮಾತ್ರ ಇವರಿಗಿಂತ ನೂರು ಸಾವಿರ ಮೈಲಿ ವೇಗದಲ್ಲಿ ಸಾಗಿ ಕಣ್ಣಿಗೆ ಕಾಣದ ಸೈಬರ್ ಲೋಕದ ಸೀಮೆಗಳನ್ನು ಬೇಧಿಸಿ ತಮಾಷೆ ನೋಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಅಸ್ಸಾಂ ಗಲಭೆ, ಕರ್ನಾಟಕ-ತಮಿಳುನಾಡು ರಾಜ್ಯಗಳಿಂದ ನಡೆದ ಈಶಾನ್ಯ ಭಾಗದ ಜನರ ವಲಸೆ, ದೇಶಾದ್ಯಂತ ಹಬ್ಬಿದ ಕೋಮುಭಾವನೆ ಕೆರಳಿಸುವ ಸಂದೇಶಗಳು ಇತ್ಯಾದಿ ಘಟನೆಗಳ ಹಿನ್ನೆಲೆಯಲ್ಲಿ ಸಂಭವನೀಯ ಸೈಬರ್ ದಾಳಿಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿದೆ. ತಿರುಚಿದ ಸಂದೇಶಗಳನ್ನು ಹೊಂದಿರುವ ಮತ್ತು ಹಿಂಸಾಚಾರವನ್ನು ಪ್ರೇರೇಪಿಸುವ 300ಕ್ಕೂ ಅಧಿಕ ವೆಬ್‌ಸೈಟ್‌ಗಳನ್ನು ಸರ್ಕಾರ ಈಗಾಗಲೇ ನಿರ್ಬಂಧಿಸಿದೆ, 90ಕ್ಕೂ ಹೆಚ್ಚು ಜಾಲತಾಣಗಳನ್ನು ನಿಷೇಧಿಸಿದೆ. ಪ್ರಧಾನಿ ಕಾರ್ಯಾಲಯದ ಹೆಸರಿನಲ್ಲಿದ್ದ ಆರು ಖೋಟಾ ಟ್ವಿಟರ್ ಖಾತೆಗಳನ್ನು ತೆಗೆದುಹಾಕಿದೆ.

ಸರ್ಕಾರದ ಈ ಬಗೆಯ ಕ್ರಮಗಳು ಟೀಕೆಗೂ ಗುರಿಯಾಗಿವೆ. ನೆಗಡಿಯಾಯಿತೆಂದು ಮೂಗನ್ನೇ ಕತ್ತರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆಯಲ್ಲ ಎಂಬ ಆರೋಪ ಕೇಳಿಬಂದಿದೆ. ವೆಬ್‌ಸೈಟುಗಳನ್ನು, ಬ್ಲಾಗ್‌ಗಳನ್ನು, ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಮೂಲಕ ಸರ್ಕಾರ ಜನರ ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ತರುತ್ತಿದೆ ಎಂಬ ಚರ್ಚೆಯೂ ಜೀವಂತವಾಗಿದೆ. ’ವದಂತಿ ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳನ್ನು ಶಾಶ್ವತವಾಗಿ ಕೊನೆಗಾಣಿಸುವುದಕ್ಕೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆಯೇ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕಲ್ಲ’ ಎಂಬ ಸಮರ್ಥನೆ ಸರ್ಕಾರದಿಂದ ಹೊರಬಿದ್ದರೂ, ಅನಪೇಕ್ಷಿತ ವಿಚಾರಗಳನ್ನು ನಿಯಂತ್ರಿಸುವ, ನಿಷೇಧಿಸುವ ಅವಕಾಶವನ್ನು ಬಳಸಿಕೊಂಡು ಸರ್ಕಾರ ತನಗಾಗದವರ ಮೇಲೆ ಸೆನ್ಸಾರ್ ಹೇರಿ ದ್ವೇಷ ಸಾಧಿಸುತ್ತಿದೆ ಎಂಬ ಆರೋಪ ಹಾಗೆಯೇ ಉಳಿದುಕೊಂಡಿದೆ.

ಇನ್ನೊಂದೆಡೆ ಈ ಬಗೆಯ ಸೈಬರ್ ದಾಳಿಗಳನ್ನು ನಿರ್ವಹಿಸುವುದಕ್ಕೆ ಅಥವಾ ತಡೆಗಟ್ಟುವುದಕ್ಕೆ ಭಾರತದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ ಎಂಬ ಟೀಕೆಯೂ ಇದೆ. ಅಮೇರಿಕ ಅಥವಾ ಚೀನಾ ಮಾಡಿಕೊಂಡಷ್ಟು ಸೈಬರ್ ಭದ್ರತಾ ವ್ಯವಸ್ಥೆಗಳು ನಮ್ಮ ಸೇನಾವ್ಯಾಪ್ತಿಯಲ್ಲಿ ಇಲ್ಲ, ಮತ್ತು ಸೈಬರ್ ಅಪರಾಧಗಳನ್ನು ಶಿಕ್ಷಿಸುವ ಸಾಕಷ್ಟು ಕಾನೂನುಗಳೂ ನಮ್ಮಲ್ಲಿ ಇಲ್ಲ ಎಂಬ ಅಭಿಪ್ರಾಯ ಇದೆ. ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಗೃಹಸಚಿವಾಲಯ, ಮಾಹಿತಿ ತಂತ್ರಜ್ಞಾನ ಇಲಾಖೆ ಮೊದಲಾದ 10-12 ಸಂಸ್ಥೆಗಳು ಸಕ್ರಿಯವಾಗಿದ್ದರೂ, ಅದನ್ನೊಂದನ್ನೇ ಗಮನಿಸುವ ಒಂದು ಪ್ರತ್ಯೇಕ ಸಶಕ್ತ ಪಡೆಯ ಅವಶ್ಯಕತೆಯಿದೆ ಎಂಬ ಮಾತು ತಳ್ಳಿಹಾಕುವಂತಹದ್ದಲ್ಲ. ಅಲ್ಲದೆ ಈಗ ಚಾಲ್ತಿಯಲ್ಲಿರುವ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಹೊರತಾಗಿ ಸೈಬರ್ ದುಷ್ಕೃತ್ಯಗಳನ್ನು ಶಿಕ್ಷಿಸುವ ಪ್ರತ್ಯೇಕವಾದ ವಿಶೇಷ ಕಾನೂನೊಂದನ್ನು ರೂಪಿಸಬೇಕಾಗಿದೆ ಎಂಬ ಬಗೆಗೂ ಗಂಭೀರ ಚಿಂತನೆ ನಡೆಸಬೇಕಿದೆ.