ಶುಕ್ರವಾರ, ಫೆಬ್ರವರಿ 24, 2023

ಒತ್ತಡ ಒಳ್ಳೆಯದು!

18-24 ಫೆಬ್ರವರಿ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಕಾಲೇಜು ಕಾಲದ ಅಥವಾ ಬೇರೆ ಯಾವುದೋ ಪರೀಕ್ಷೆಯ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ತಡರಾತ್ರಿಯವರೆಗೆ, ಕೆಲವೊಮ್ಮ ರಾತ್ರಿಯೆಲ್ಲ ಓದು, ನಿದ್ದೆಯ ಕೊರತೆ, ದೈಹಿಕ-ಮಾನಸಿಕ ನಿತ್ರಾಣ... ಅಬ್ಬಾ, ಈ ಪರೀಕ್ಷೆ ಒಮ್ಮೆ ಮುಗಿದರೆ ಸಾಕಪ್ಪಾ, ಆಮೇಲೆ ಮೂರು ಹಗಲು ಮೂರು ರಾತ್ರಿ ಉದ್ದಕ್ಕೆ ನಿದ್ದೆ ಮಾಡುವುದೇ ಎಂದೆಲ್ಲ ನೀವು ಕನಸು ಕಾಣುತ್ತಿದ್ದಿರಬಹುದು. ಸರಿ, ಪರೀಕ್ಷೆ ಮುಗಿಯಿತು, ಇನ್ನು ಆರಾಮ; ಎಷ್ಟು ಬೇಕಾದರೂ ನಿದ್ದೆ ಮಾಡಬಹುದು ಅಂತೇನಾದರೂ ಮಲಗಲು ಪ್ರಯತ್ನಪಟ್ಟಿರೋ, ನಿದ್ದೆ ಅಷ್ಟು ಸುಲಭಕ್ಕೆ ನಿಮ್ಮ ಬಳಿ ಸುಳಿಯದು. ಪರೀಕ್ಷೆಯ ಜೊತೆಗೆ ಅದೂ ಎಲ್ಲೋ ದೂರಕ್ಕೆ ಹಾರಿರುತ್ತದೆ. ಒಂದೆರಡು ದಿನ ನೀವೂ ಅಯೋಮಯರಾಗಿ ಮಂಕುಬಡಿದವರಂತೆ ಕುಳಿತಿರುತ್ತೀರಿ. ನಿದ್ರೆಯೂ ಬಾರದು, ಹೊಸದೇನನ್ನಾದರೂ ಮಾಡುವುದಕ್ಕೆ ಮನಸ್ಸೂ ಒಪ್ಪದು. ‘ನನ್ನ ತಲೆಯೇ ಓಡುತ್ತಿಲ್ಲ’ ಎಂದು ಸಹವರ್ತಿಗಳ ಜೊತೆ ನೀವು ಹೇಳಿದ್ದನ್ನು ಜ್ಞಾಪಿಸಿಕೊಳ್ಳಿ.

ಪರೀಕ್ಷೆಯ ದಿನಗಳೇ ಆಗಬೇಕಿಲ್ಲ. ಬೇರೆ ಯಾವುದೇ ಒತ್ತಡದ ಸಂದರ್ಭ ಆಗಿರಬಹುದು. ಒಂದಷ್ಟು ದಿನ ನಿಮಿಷವೂ ಬಿಡುವಿಲ್ಲದೆ ನಿರಂತರವಾಗಿ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದು, ಅದು ಮುಗಿದ ಮೇಲೆ ಕಾಡುವ ಖಾಲಿತನವನ್ನು ನೆನಪಿಸಿಕೊಳ್ಳಿ. ಅಲ್ಲಿಯೂ ಹೀಗೆಯೇ ಆಗುತ್ತದೆ. ಎಲ್ಲ ಕೆಲಸ ಮುಗಿಸಿ ಕೊಂಚ ಬಿಡುವಾದ ಮೇಲೆ ಯಾವುದೋ ಒಂದು ಹೊಸದನ್ನು ಕೈಗೆತ್ತಿಕೊಳ್ಳೋಣ ಎಂದುಕೊAಡಿದ್ದರೆ, ಅದಕ್ಕೊಂದು ಮುಹೂರ್ತವೇ ಒದಗುವುದಿಲ್ಲ. ಮನಸ್ಸು ಏಕಾಗ್ರತೆ ಇಲ್ಲದೆ ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಲೋ ಅಡ್ಡಾಡಿಕೊಂಡಿರುತ್ತದೆ. ಅರೆ, ಹತ್ತುಹಲವು ಕೆಲಸಗಳಿದ್ದಾಗ ಇದೊಂದನ್ನು ಮಾಡಿಮುಗಿಸಲು ಅರ್ಧ ಗಂಟೆ ಸಾಕಾಗುತ್ತಿತ್ತು, ಈಗ ದಿನಗಟ್ಟಲೆ ತೆಗೆದುಕೊಂಡರೂ ಕೆಲಸ ಪೂರ್ತಿಯಾಗುತ್ತಿಲ್ಲ ಎಂದು ನಿಮ್ಮೊಳಗೆಯೇ ಅಚ್ಚರಿಪಟ್ಟುಕೊಂಡ ಉದಾಹರಣೆಗಳೂ ಇರಬಹುದು.

ಹೌದು, ಇದು ಮನುಷ್ಯನ ಮೂಲಸ್ವಭಾವ. ಯಾವುದೇ ಕೆಲಸವನ್ನು ಗುಣಮಟ್ಟದೊಂದಿಗೆ ನಿರ್ವಹಿಸಬೇಕಾದರೆ ಒಂದು ‘ಫೋಕಸ್’ ಬೇಕು. ಈ ಫೋಕಸ್ ಹುಟ್ಟಿಕೊಳ್ಳುವುದು ಒತ್ತಡದಲ್ಲಿ. ‘ಅನಿವಾರ್ಯವೇ ಅನ್ವೇಷಣೆಯ ತಾಯಿ’ ಎಂಬ ಮಾತೇ ಇದೆಯಲ್ಲ! ಇಲ್ಲಿ ಒಂದು ಕೆಲಸವನ್ನು ಮಾಡಿಮುಗಿಸಲೇಬೇಕಾದ ಅನಿವಾರ್ಯವೇ ಕೆಲಸದ ಹಿಂದಿನ ಪ್ರೇರಣಾಶಕ್ತಿ. ಆಗ ಫೋಕಸ್ ತಾನೇತಾನಾಗಿ ಸೃಷ್ಟಿಯಾಗಿರುತ್ತದೆ. ಅದು ಇದ್ದಾಗ ಮನಸ್ಸು ಅಸ್ಥಿರಗೊಳ್ಳುವುದಿಲ್ಲ; ಮರ್ಕಟನಂತೆ ಅಲ್ಲಿ ಇಲ್ಲಿ ಅಡ್ಡಾಡುವುದಕ್ಕೆ ಎಡೆಯೇ ಇರುವುದಿಲ್ಲ. ಅರ್ಧ ದಿನದಲ್ಲಿ ಮಾಡಿಮುಗಿಸಬಹುದಾದ ಕೆಲಸ ಅರ್ಧ ಗಂಟೆಯಲ್ಲೇ ಆಗುವುದೂ ಇದೆ. 

ಸೃಜನಶೀಲ ಕೆಲಸಗಳಿಗೂ ಅನೇಕ ಬಾರಿ ಇಂತಹ ಒತ್ತಡ ಬೇಕು. ಒಂದು ಲೇಖನ ಬರೆಯಬೇಕೆಂದುಕೊಂಡಿರುತ್ತೇವೆ. ಹಾಗಂದುಕೊಂಡೇ ದಿನಗಟ್ಟಲೆ ಸಮಯ ಕಳೆದಿರುತ್ತೇವೆ. ಬರೆವಣಿಗೆ ಒಂದಂಗುಲವೂ ಮುಂದೆ ಹೋಗಿರುವುದಿಲ್ಲ. ಯಾವುದೋ ಒಂದು ದಿನ ನಾಳೆ ಬೆಳಗ್ಗೆ ಆ ಲೇಖನ ಮುಗಿದಿರಲೇಬೇಕು ಎಂಬ ಅನಿವಾರ್ಯ ಹುಟ್ಟಿಕೊಳ್ಳುತ್ತದೆ ನೋಡಿ; ಅನುಮಾನವೇ ಬೇಡ, ಲೇಖನ ಸಿದ್ಧವಾಗುತ್ತದೆ. ಕೆಲಸ ಆಗಲೇಬೇಕು ಎಂಬ ಒಳಗಿನ ಒತ್ತಡ ಕೆಲಸವನ್ನು ಆಗುಮಾಡುತ್ತದೆ. ತರ್ಕಗಳು, ಯೋಚನೆಗಳು, ಅಗತ್ಯ ನಿದರ್ಶನಗಳು ತಾವಾಗಿಯೇ ಹುಟ್ಟಿಕೊಂಡು ಮನಸ್ಸಿನ ಎದುರು ಬಂದು ಕುಣಿಯುತ್ತವೆ. ಕೈ ಬರೆಯುತ್ತಾ ಸಾಗುತ್ತದೆ. 

ಇದರರ್ಥ ಮನುಷ್ಯ ಸದಾ ಒತ್ತಡಗಳ ಮಧ್ಯೆ ಬದುಕಬೇಕು ಎಂದಲ್ಲ. ವ್ಯಕ್ತಿಗೆ ಬಿಡುವು, ವಿಶ್ರಾಂತಿ ಬಹಳ ಮುಖ್ಯ. ಅವುಗಳ ಕೊರತೆಯಿಂದ ಆರೋಗ್ಯವೇ ಹಾಳಾಗುತ್ತದೆ. ಆರೋಗ್ಯ ಕೈಕೊಟ್ಟರೆ ಉತ್ಸಾಹವೇ ಕುಂದಿಬಿಡುತ್ತದೆ. ಯಾವ ಹೊಸ ಕೆಲಸವೂ ಆಗುವುದಿಲ್ಲ. ದೈಹಿಕ, ಮಾನಸಿಕ ಆರೋಗ್ಯ ಎಲ್ಲದಕ್ಕಿಂತಲೂ ಮುಖ್ಯ. ಅದು ಇದ್ದಾಗ ಮಾತ್ರ ಎಂತಹ ಒತ್ತಡಗಳನ್ನೂ ನಿಭಾಯಿಸಬಹುದು. ಮನಸ್ಸನ್ನು ಜಡವಾಗಿರಲು ಬಿಡಬಾರದು ಎಂಬುದಷ್ಟೇ ಇಲ್ಲಿ ಒತ್ತಡ, ಗಮನ ಇತ್ಯಾದಿ ಪದಗಳನ್ನು ಬಳಸಿರುವ ಉದ್ದೇಶ.

An idle mind is a devils' workshop ಎಂಬ ನಾಣ್ಣುಡಿಯೇ ಇದೆ. ಸೋಮಾರಿ ಮನಸ್ಸು ದೆವ್ವಗಳ ಕಮ್ಮಟವಂತೆ! ಯಾವುದನ್ನೇ ಖಾಲಿಬಿಟ್ಟರೂ ಅದನ್ನು ಇನ್ನೊಬ್ಬರು ಆಕ್ರಮಿಸಿಕೊಳ್ಳುವ ಕಾಲ ಇದು. ಇನ್ನು ಮನಸ್ಸನ್ನು ಖಾಲಿ ಬಿಟ್ಟರೆ ಆಗುತ್ತದೆಯೇ? ಇಲ್ಲಸಲ್ಲದ ಯೋಚನೆಗಳು, ಅನಗತ್ಯ ವಿಚಾರಗಳು ಅಲ್ಲಿ ಬಂದು ತುಂಬಿಕೊಳ್ಳುತ್ತವೆ. ಅವುಗಳಿಗಿಂತ ದೊಡ್ಡ ದೆವ್ವಗಳಿಲ್ಲ. ನಮ್ಮ ಮನಸ್ಸನ್ನು, ಕೆಲಸಗಳನ್ನು ಕೆಡಿಸಲು ಬೇರೆಯಾರೂ ಬರಬೇಕಿಲ್ಲ. ಅದಕ್ಕೆ ನಾವೇ ಸಾಕು. ಮನಸ್ಸು ಸದಾ ಯಾವುದೋ ಕಾರ್ಯದ ಕಡೆ ವ್ಯಸ್ತವಾಗಿದ್ದರೆ ಅಲ್ಲಿ ಬೇರೆ ಇನ್ನೇನೋ ಬಂದು ಠಿಕಾಣಿ ಹೂಡುವುದಕ್ಕೆ ಅವಕಾಶವೇ ಇರುವುದಿಲ್ಲ. ನಿಮ್ಮ ಅನುಮತಿಯಿಲ್ಲದೆ ಅದು ಹೇಗೆ ಅನಗತ್ಯ ಕಿರಿಕಿರಿಗಳು ನಿಮ್ಮ ಮನಸ್ಸಿನ ಮನೆಯೊಳಗೆ ಬಂದು ಬಾಡಿಗೆ ಹಿಡಿಯುತ್ತವೆ ಹೇಳಿ?

ಬ್ಯುಸಿ ಆಗಿರುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ‘ಬ್ಯುಸಿ ಆಗಿರುವುದು ಒಳ್ಳೆಯದು. ಏಕೆಂದರೆ ಅಂತಹ ಸಮಯದಲ್ಲಿ ಬೇರೆಯವರನ್ನು ಟೀಕಿಸುವುದಕ್ಕೆ ಸಮಯ ಇರುವುದಿಲ್ಲ’ ಎನ್ನುತ್ತಾನೆ ಒಬ್ಬ ಲೇಖಕ. ಇದಂತೂ ಒಂದು ಅದ್ಭುತ ಮಾತು. ಬಹಳ ಮಂದಿ ಇನ್ನೊಬ್ಬರ ತಪ್ಪುಗಳನ್ನು ಹುಡುಕುವುದರಲ್ಲಿ, ಅವರನ್ನು ಹಳಿಯುವಲ್ಲೇ ತಮ್ಮ ಆಯುಷ್ಯವನ್ನು ಕಳೆದುಬಿಡುತ್ತಾರೆ. ಬೇರೆಯವರನ್ನು ಸದಾ ವಿಮರ್ಶೆಯ ತಕ್ಕಡಿಯಲ್ಲಿ ತೂಗುವ ಇವರಿಗೆ ತಮ್ಮ ತಪ್ಪುಗಳು ಕಾಣಿಸುವುದೇ ಇಲ್ಲ, ಅಥವಾ ಕಂಡರೂ ಕಾಣದಂತೆ ಇರುತ್ತಾರೆ. ಯಾವಾಗಲೂ ಇನ್ನೊಬ್ಬರನ್ನು ದೂರುತ್ತಾ ಕೂರುವವರಿಗೆ ತಮ್ಮ ಉದ್ಧಾರದ ದಾರಿ ಕಾಣಿಸುವುದೇ ಇಲ್ಲ. ಅವರು ಸರಿ ಇಲ್ಲ, ಇವರು ಸರಿ ಇಲ್ಲ ಎನ್ನುತ್ತಲೇ ಇಂಥವರು ಮನಸ್ಸನ್ನು ಸದಾ ವಿಷದ ಕುಲುಮೆ ಮಾಡಿಕೊಂಡು ಅಸಂತುಷ್ಟಿಯಲ್ಲಿ ಒದ್ದಾಡುತ್ತಿರುತ್ತಾರೆ. ‘ಉದ್ಧರೇದಾತ್ಮನಾತ್ಮಾನಾಂ’ ಎಂದು ಗೀತಾಚಾರ್ಯನೇ ಹೇಳಿಲ್ಲವೇ? ಆತನ ಮಾತನ್ನು ನಾವು ಪ್ರಮಾಣವನ್ನಾಗಿ ಇಟ್ಟುಕೊಳ್ಳಬಹುದು. ನಮ್ಮ ಉದ್ಧಾರವನ್ನು ಮಾಡಲು ಇನ್ನೊಬ್ಬ ಬರುವುದಿಲ್ಲ, ಅದನ್ನು ನಾವೇ ಮಾಡಿಕೊಳ್ಳಬೇಕು. ಅದಾಗಬೇಕೆಂದರೆ ಮನಸ್ಸು ಭೂತಬಂಗಲೆಯಾಗದಂತೆ ಎಚ್ಚರವಹಿಸಬೇಕು. ‘ಏನಾದರೊಂದು ಕೆಲಸದಲ್ಲಿ ಸದಾ ನಿರತವಾಗಿರಿ, ಕಾರ್ಯನಿರತ ವ್ಯಕ್ತಿಗೆ ಅಸಂತೋಷದಿಂದಿರಲು ಸಮಯವೇ ಸಿಗುವುದಿಲ್ಲ’ ಎಂದಿದ್ದ ಪ್ರಸಿದ್ಧ ಕವಿ ಆರ್. ಎಲ್. ಸ್ಟೀವನ್‌ಸನ್. 

ಸದಾ ಬ್ಯುಸಿ ಆಗಿರುವುದು, ಒತ್ತಡಗಳ ಮಧ್ಯೆ ಬದುಕವುದು ಸರಿ; ಆದರೆ ಅದು ಎಂತಹ ಒತ್ತಡ ಎಂಬುದರ ಕುರಿತೂ ನಮಗೆ ಸ್ಪಷ್ಟತೆ ಬೇಕು. ಇಲ್ಲಿ ಬ್ಯುಸಿ ಆಗಿರುವುದು ಎಂದರೆ ನಮ್ಮಿಂದಾಗದ ಕೆಲಸಗಳನ್ನು ತಲೆಯ ಮೇಲೆ ಎಳೆದುಕೊಳ್ಳುವುದು ಎಂದಲ್ಲ, ನಮಗೆ ಒಗ್ಗುವ ಕೆಲಸಗಳಲ್ಲಿ ಸದಾ ನಿರತವಾಗಿರುವುದು ಎಂದರ್ಥ. ನಮಗೆ ಇಷ್ಟವಾದ ಕೆಲಸಗಳು ಎಷ್ಟಿದ್ದರೂ ಅದು ಒತ್ತಡ ಎನಿಸುವುದೇ ಇಲ್ಲ. ‘ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಒತ್ತಡವೆಂದರೆ ಸ್ನೇಹಮಯ ಒತ್ತಡ’ ಎಂಬ ಮಾತೊಂದಿದೆ. ನಮ್ಮ ಹೊಣೆಗಾರಿಕೆಗಳನ್ನು ಸ್ನೇಹಮಯ ಒತ್ತಡಗಳನ್ನಾಗಿ ಮಾಡಿಕೊಳ್ಳುವುದು ನಮ್ಮ ಮನಸ್ಥಿತಿಯಲ್ಲಿ ಇದೆ. 

ಕೆಲಸಗಳ ಅಡಾವುಡಿಯಲ್ಲಿ, ಈಗಿಂದೀಗಲೇ ಆಗಬೇಕು ಎಂಬ ಒತ್ತಡದಲ್ಲಿ ಕವಿತೆಯೊಂದು ಹುಟ್ಟಿಕೊಳ್ಳುವುದು ಸಾಧ್ಯವೇ ಎಂದು ನೀವು ಕೇಳಬಹುದು. ಆ ಪ್ರಶ್ನೆ ಸರಿಯಾದದ್ದೇ ಆಗಿದೆ. ಸೃಜನಶೀಲ ಕೃತಿಯೊಂದು ಹುಟ್ಟಿಕೊಳ್ಳುವುದರ ಹಿಂದೆ ತಣ್ಣನೆಯ ಧ್ಯಾನವೊಂದು ಅಗತ್ಯ. ಸದಾ ಧಾವಂತದಲ್ಲಿ ಓಡಾಡುವ ಮಂದಿಗೆ ಇಂತಹ ಧ್ಯಾನಕ್ಕೆ ಸಮಯ ದೊರೆಯುವುದಿಲ್ಲ. ಧಾವಂತಗಳ ಮಧ್ಯೆ ನಮ್ಮನ್ನು ನಾವು ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು. ಎಲ್ಲ ಒತ್ತಡಗಳ ನಡುವೆಯೂ ನಮ್ಮದೇ ಆದ ಒಂದು ಪುಟ್ಟ ಏಕಾಂತ ಬೇಕು. ದಿನಚರಿಯನ್ನು ಸರಿಯಾಗಿ ನಿಭಾಯಿಸಿಕೊಳ್ಳಲು ಕಲಿತರೆ ಎಲ್ಲ ಒತ್ತಡಗಳ ಮಧ್ಯೆ ನಮ್ಮದೇ ಆದ ಸಮಯವೂ ಸಿಗುತ್ತದೆ. ‘ಬ್ಯುಸಿ ಆಗಿದ್ದರಷ್ಟೇ ಸಾಲದು; ಇರುವೆಗಳೂ ಬ್ಯುಸಿ ಆಗಿರುತ್ತವೆ. ನಾವು ಯಾವುದರಲ್ಲಿ ಬ್ಯುಸಿ ಆಗಿರುತ್ತೇವೆ ಎಂಬುದು ಮುಖ್ಯವಾದ ಪ್ರಶ್ನೆ’ ಎನ್ನುತ್ತಾನೆ ಒಬ್ಬ ಕವಿ. ಯಾವುದರಲ್ಲಿ ಬ್ಯುಸಿ ಆಗಿರಬೇಕು, ಅದರೊಳಗೆ ಎಷ್ಟು ಸಮಯವನ್ನು ಏಕಾಂತಕ್ಕಾಗಿ ಇಟ್ಟುಕೊಳ್ಳಬೇಕು ಎಂದು ಅರ್ಥಮಾಡಿಕೊಂಡವರನ್ನು ಯಶಸ್ಸು ಹುಡುಕಿಕೊಂಡು ಬರುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಜನವರಿ 21, 2023

ಹೇಳದೆ ನೆಪ, ಮಾಡೋಣ ಶಿಸ್ತಿನ ಜಪ

(24-30 ಡಿಸೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ)

ಇವತ್ತು ಟ್ರೇನು ಹಿಡಿಯಲೇಬೇಕೆಂದು ಹೊರಟಿದ್ದೆ, ಒಂದೇ ನಿಮಿಷದಲ್ಲಿ ಮಿಸ್ ಆಯ್ತು. ಇವತ್ತು ಬಸ್ಸು ತಪ್ಪಿಸಿಕೊಳ್ಳಲೇಬಾರದು
ಅಂದುಕೊಂಡಿದ್ದೆ; ಕಣ್ಣೆದುರೇ ಹೊರಟುಹೋಯ್ತು... ಇಂತಹ ಮಾತುಗಳನ್ನು ಪ್ರತಿದಿನ ಅವರಿವರಿಂದ ಕೇಳಿಸಿಕೊಳ್ಳುತ್ತಲೇ ಇರುತ್ತೇವೆ. ಪ್ರತಿದಿನ ಯಾಕೆ ಕೇಳುತ್ತೇವೆ ಎಂದರೆ ಈ ಬಗೆಯ ಮಂದಿ ಎಲ್ಲ ಕಡೆ ಇರುತ್ತಾರೆ ಅಥವಾ ಇವರು ಪ್ರತಿದಿನವೂ ಟ್ರೇನು-ಬಸ್ಸುಗಳನ್ನು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಕೊನೆಗೆ ಇವರು ‘ನನ್ನ ಹಣೆಬರಹವೇ ಸರಿ ಇಲ್ಲ’ ಎಂದೋ, ಇನ್ನೊಬ್ಬರಿಂದಾಗಿ ಹೀಗಾಯ್ತು ಎಂದೋ ಷರಾ ಬರೆದುಕೊಳ್ಳುತ್ತಾ ಹೋಗುತ್ತಾರೆ. ಆದರೆ ಸಮಸ್ಯೆ ಸರಿಹೋಗುವುದಿಲ್ಲ. ಸಾಮಾನ್ಯ ಟ್ರೇನು-ಬಸ್ಸುಗಳು ತಪ್ಪಿಹೋದರೆ ಚಿಂತೆಯಿಲ್ಲ, ನಿಜಜೀವನದ ಬಂಡಿಗಳನ್ನು ತಪ್ಪಿಸಿಕೊಂಡರೆ ಮುಂದೆ ದೊಡ್ಡ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಇವರು ಟ್ರೇನು-ಬಸ್ಸುಗಳ ವಿಷಯದಲ್ಲಿ ಮಾತ್ರವಲ್ಲ, ಬಹುತೇಕ ಎಲ್ಲ ವಿಷಯಗಳಲ್ಲೂ ಗೊಂದಲ-ಗೋಜಲು ಮಾಡಿಕೊಳ್ಳುತ್ತಾರೆ. ಯಾವುದೋ ದಿನದ ಒಳಗೆ ನಿರ್ದಿಷ್ಟ ಉದ್ದೇಶಕ್ಕೆ ಅರ್ಜಿ ಸಲ್ಲಿಸಬೇಕಿರುತ್ತದೆ; ಕೊನೆಯ ದಿನಾಂಕ ಮುಗಿದ ಮರುದಿನ ಅದು ನೆನಪಾಗಿ ತಲೆತಲೆ ಚಚ್ಚಿಕೊಳ್ಳುತ್ತಾರೆ. ಇವತ್ತು ಐದು ಕೆಲಸ ಮಾಡಿ ಮುಗಿಸಲೇಬೇಕು ಎಂದು ಮನೆಯಿಂದ ಹೊರಟಿರುತ್ತಾರೆ. ಸಂಜೆಯ ವೇಳೆಗೆ ಅವುಗಳಲ್ಲಿ ಒಂದೆರಡನ್ನೂ ಮಾಡಲಾಗದೆ ಆತಂಕ ಹೆಚ್ಚಿಸಿಕೊಳ್ಳುತ್ತಾರೆ. ಯಾಕೆ ಹೀಗಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುವುದೇನೆಂದರೆ ಇವರು ‘ಫೋಕಸ್’ ಕಳೆದುಕೊಂಡಿರುತ್ತಾರೆ, ಅಥವಾ ಎಂದೂ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಜೀವನಶಿಸ್ತು ಕುರಿತು ಇವರಿಗೆ ಆಸಕ್ತಿ ಕಡಿಮೆ.

‘ಅಶಿಸ್ತಿನಿಂದ ಬದುಕಿರಿ! ಆರಾಮವಾಗಿರಿ!’ ಎಂದು ಹೇಳುವ ಕೆಲವು ಮಂದಿ ಸಿಗುತ್ತಾರೆ. ಆದರೆ ಈ ಅಶಿಸ್ತಿನ ಸೂತ್ರ ಕೆಲವರಿಗಷ್ಟೇ ಸಂತೋಷ-ಸಮಾಧಾನ ತಂದುಕೊಡಬಹುದು. ಬೇರೆಯವರಿಗೆ ಮಾದರಿಯಾಗುವಂತೆ, ಪ್ರೇರಣೆಯಾಗುವಂತೆ ಬದುಕುವುದು ಕಷ್ಟ. ಜೀವನದಲ್ಲಿ ಎಲ್ಲವನ್ನೂ ನಿರೀಕ್ಷಿಸಿದಂತೆ, ನಿರ್ದಿಷ್ಟ ಯೋಜನೆಯಂತೆ ಮಾಡಿಕೊಂಡು ಹೋಗುವುದು ಅಸಾಧ್ಯ ಎಂಬುದೇನೋ ನಿಜ. ಆದರೆ ಎಲ್ಲರೂ ಅಶಿಸ್ತಿನಿಂದ ಬದುಕುತ್ತೇವೆ, ಆರಾಮವಾಗಿರುತ್ತೇವೆ ಎಂದುಕೊಂಡರೆ ಬದುಕೇ ಗೊಂದಲದ ಗೂಡಾಗಬಹುದು.

ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಪಾತ್ರದ ಚೌಕಟ್ಟಿನಲ್ಲೇ ಜೀವಿಸುತ್ತ ಇರುತ್ತಾನೆ. ವಿದ್ಯಾರ್ಥಿ, ಉದ್ಯೋಗಿ, ಮಾಲೀಕ, ತಂದೆ, ತಾಯಿ, ಪತಿ, ಪತ್ನಿ, ಗೃಹಿಣಿ... ಯಾವುದೋ ಒಂದು ಹೊಣೆಗಾರಿಕೆ ಹೆಗಲ ಮೇಲೆ ಸದಾ ಇರುತ್ತದೆ. ಅನೇಕ ಬಾರಿ ಒಬ್ಬ ವ್ಯಕ್ತಿ ಅನೇಕ ಚೌಕಟ್ಟುಗಳೊಳಗೆ ಏಕಕಾಲಕ್ಕೆ ಪಾತ್ರನಿರ್ವಹಿಸುತ್ತಾ ಇರುತ್ತಾನೆ. ಪ್ರತಿ ಚೌಕಟ್ಟೂ ಮಹತ್ವದ್ದೇ. ಅಲ್ಲಿ ನಿರ್ದಿಷ್ಟ ಯೋಚನೆ-ಯೋಜನೆಗಳು ಇಲ್ಲದೇ ಹೋದಾಗ ಬದುದು ಪ್ರತಿದಿನವೂ ಆತಂಕಕಾರಿ ಎನಿಸತೊಡಗುತ್ತದೆ.

ಟ್ರೇನು ತಪ್ಪಿಸಿಕೊಳ್ಳುವವನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಆ ಟ್ರೇನಿಗೆ ಆತ ಮೊದಲ ಬಾರಿ ಹೋಗುವವನೇನಲ್ಲ. ಪ್ರತಿದಿನದ ಪ್ರಯಾಣಿಕನೇ. ಅದು ಇಂತಹ ಸಮಯಕ್ಕೆ ಬರುತ್ತದೆ ಎಂಬ ತಿಳುವಳಿಕೆ ಸಹಜವಾಗಿಯೇ ಇರುತ್ತದೆ. ಆದರೂ ಯಾಕೆ ಪದೇಪದೇ ತಪ್ಪಿಸಿಕೊಳ್ಳುತ್ತಾನೆ? ಎಲ್ಲೋ ಒಂದು ಕಡೆ ಆತ ಸಮಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಳ್ಳುವಲ್ಲಿ, ಮುಂದಾಲೋಚನೆ ಮಾಡುವಲ್ಲಿ ಸೋತಿದ್ದಾನೆ ಎಂದು ಅರ್ಥ. ಅನಿರೀಕ್ಷಿತವಾಗಿ ಬರುವ ಕೆಲವು ಅಡೆತಡೆಗಳು ಎಲ್ಲ ಕಡೆ ಇರುತ್ತವೆ, ಅವುಗಳಿಂದ ತೊಂದರೆಗೊಳಗಾಗುವುದನ್ನು ತಪ್ಪಿಸಿಕೊಳ್ಳಲಾಗದು. ಆದರೆ ಅನಿರೀಕ್ಷಿತವೇ ಒಂದು ದಿನಚರಿ ಆಗಬಾರದು. 

ಕೆಲವರಿಗೆ ಜೀವನಶಿಸ್ತು ಸಹಜವಾಗಿಯೇ ಬಂದಿರುತ್ತದೆ. ಅವರ ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದುಕಾಣುತ್ತದೆ. ಅವರು ಏನೇ ಮಾಡಿದರೂ ಚಂದ. ‘ಅಯ್ಯೋ ಯಾವುದಕ್ಕೂ ಟೈಮೇ ಸಿಗುತ್ತಿಲ್ಲ’ ಎಂಬ ದೂರು ಅವರಲ್ಲಿ ಕಡಿಮೆ. ಇರುವ ಸಮಯವನ್ನು ಅವರು ಅತ್ಯುತ್ತಮವಾಗಿ ಬಳಸಿಕೊಳ್ಳಬಲ್ಲರು. ಇನ್ನು ಕೆಲವರು ಯಾವುದನ್ನೂ ಸರಿಯಾಗಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧ. ದಿನಕ್ಕೆ ನಲ್ವತ್ತೆಂಟು ಗಂಟೆ ಕೊಟ್ಟರೂ ಅವರು ಅದನ್ನು ಯಶಸ್ವಿಯಾಗಿ ಹಾಳುಗೆಡಹಬಲ್ಲರು. ಇವರಿಗೆ ಪ್ರತಿಯೊಂದಕ್ಕೂ ಏನಾದರೊಂದು ನೆಪ ಇದ್ದೇ ಇರುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಡಬೇಕೆಂದು ಅಂದುಕೊಳ್ಳುತ್ತೇನೆ, ಆದರೆ ನಮ್ಮ ಮನೆ ತುಂಬ ಸಣ್ಣದು. ಯಾವುದಕ್ಕೂ ಜಾಗ ಇಲ್ಲ ಎನ್ನುತ್ತಾರೆ. ತಮಾಷೆಯೆಂದರೆ ದೊಡ್ಡ ಮನೆ ಕೊಟ್ಟರೂ ಇವರು ಹೀಗೆಯೇ ಇರುತ್ತಾರೆ. ಏಕೆಂದರೆ ಅಶಿಸ್ತನ್ನು ಇವರು ಹುಟ್ಟುತ್ತಲೇ ಆವಾಹಿಸಿಕೊಂಡಿರುತ್ತಾರೆ. ಇವರು ಯಾವುದನ್ನೂ ಎತ್ತಿದಲ್ಲೇ ಮತ್ತೆ ಇಡಲಾರರು. ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳಲಾರರು. 

ಬಾಚಣಿಗೆ, ಪೌಡರು, ಕ್ಲಿಪ್ಪು, ಮತ್ತೊಂದು- ಇಂಥವನ್ನೆಲ್ಲ ಇಡಲು ಗೊತ್ತುಪಡಿಸಿದ ಒಂದು ನಿರ್ದಿಷ್ಟ ಜಾಗ ಇದ್ದರೂ ಅವನ್ನು ಅಲ್ಲೇ ಇಡಲಾರರು. ತಾವೆಲ್ಲಿಗೆ ಎತ್ತಿಕೊಂಡು ಹೋಗಿರುತ್ತಾರೋ ಅಲ್ಲೇ ಬಿಟ್ಟು ಮುಂದಿನ ಕೆಲಸಕ್ಕೆ ಹೋದಾರು. ಮುಂದಿನ ಸಲ ಆ ಜಾಗ ಮರೆತುಹೋಗಿರುತ್ತದೆ. ಅವುಗಳನ್ನು ಮನೆಯೆಲ್ಲ ಹುಡುಕಿ ಇರುವ ಸಮಯವನ್ನು ಕಳೆದುಕೊಂಡಾರು. ನೈಲ್ ಕಟ್ಟರ್ ಬಳಸಿ ಮತ್ತೆ ಅಲ್ಲೇ ತಂದು ಇಡಲಾರರು. ಮತ್ತೊಮ್ಮೆ ನೈಲ್ ಕಟ್ಟರ್ ಬಳಸುವ ಸಂದರ್ಭ ಬಂದಾಗ ಮತ್ತೆ ಮನೆಯೆಲ್ಲ ಹುಡುಕಾಟ. ತಮ್ಮ ಸ್ನಾನದ ಟವೆಲನ್ನು ಒಂದೇ ಕಡೆ ಒಣಹಾಕುವ ಅಭ್ಯಾಸ ಬೆಳೆಸಿಕೊಳ್ಳಲಾರರು. ಸ್ನಾನದ ಹೊತ್ತಿಗೆ ಗಡಿಬಿಡಿ ಮಾಡಿಕೊಂಡು ಅದೆಲ್ಲೆಂದು ಸಿಗದೆ ಹೊಸದೊಂದು ಟವೆಲ್ ಎಳೆದುಕೊಂಡಾರು. ತಾವು ಪ್ರತಿದಿನ ಬಳಸುವ ಪೆನ್ನು-ಪುಸ್ತಕ-ವಾಚು-ಬ್ಯಾಗುಗಳನ್ನೇ ಒಂದು ನಿರ್ದಿಷ್ಟ ಕಡೆ ಇರಿಸಿಕೊಳ್ಳಲಾರರು. ಆಮೇಲೆ ಅವುಗಳನ್ನೇ ಹುಡುಕುತ್ತಾ ಅರ್ಧರ್ಧ ಗಂಟೆ ಕಳೆದುಕೊಂಡಾರು, ಬರಿದೇ ಆತಂಕ ಹೆಚ್ಚಿಸಿಕೊಂಡಾರು.

ಇವೆಲ್ಲ ಸಣ್ಣಪುಟ್ಟ ಸಂಗತಿಗಳು ಎನಿಸಬಹುದು. ಆದರೆ ದಿನನಿತ್ಯದ ಬದುಕನ್ನು ಕಟ್ಟಿಕೊಡುವ ಸಣ್ಣ ತುಣುಕುಗಳು ಇವೇ. ಸ್ವಭಾವತಃ ಈ ಶಿಸ್ತು ಬಂದಿಲ್ಲ ಎಂದಿಟ್ಟುಕೊಳ್ಳಿ; ಕೆಲವನ್ನಾದರೂ ಪ್ರಜ್ಞಾಪೂರ್ವಕ ರೂಢಿಸಿಕೊಳ್ಳಬಹುದು. ಹುಟ್ಟುಗುಣ ಸುಟ್ಟರೂ ಹೋಗದು ಎಂಬ ಮಾತಿದೆ. ಆದರೆ ನಮ್ಮದೇ ಬದುಕಿನ ನಿರಾಳತೆಗಾಗಿ, ನೆಮ್ಮದಿಗಾಗಿ ಕೆಲವು ವಿಷಯಗಳನ್ನು ಪ್ರಜ್ಞಾಪೂರ್ವಕವಾಗಿಯೇ ಅಳವಡಿಸಿಕೊಳ್ಳುವುದು ಅನಿವಾರ್ಯ.

ದಿನಚರಿಯಲ್ಲಿ ಒಂದು ಸರಳ ವೇಳಾಪಟ್ಟಿಯನ್ನು ಅಳವಡಿಸಿಕೊಳ್ಳುವುದರಿಂದ ಬಹುತೇಕ ಅಶಿಸ್ತನ್ನು ಮತ್ತು ಅದರಿಂದುAಟಾಗುವ ಗೊಂದಲಗಳನ್ನು ತಡೆಯಬಹುದು. ಇದು ಶಾಲೆಯ ಟೈಂಟೇಬಲ್ ರೀತಿಯಲ್ಲಿ ಇರಬೇಕಾಗಿಲ್ಲ. ದಿನನಿತ್ಯದ ಅನೇಕ ಕೆಲಸಗಳನ್ನು ನಿಮಿಷ, ಸೆಕೆಂಡುಗಳ ಲೆಕ್ಕ ಇಟ್ಟುಕೊಂಡು ಮಾಡಲಾಗುವುದಿಲ್ಲ. ಆದರೆ ಅಂತಹದೊಂದು ವೇಳಾಪಟ್ಟಿಯ ಚೌಕಟ್ಟು ಇಲ್ಲದೆ ಹೋದಾಗ ಆಯಾ ದಿನದ ಉದ್ದೇಶ-ಗುರಿಗಳೆಲ್ಲ ಗೊಂದಲಗಳಾಗಿ ಮಾರ್ಪಟ್ಟು ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಡುತ್ತೇವೆ. ಅದೇ ನಾವೆಂದುಕೊAಡAತೆ ಕೆಲಸಗಳು ನಡೆದಾಗ ಒಂದು ಸಂತೃಪ್ತಿಯ ನಿದ್ದೆಗೆ ಜಾರುತ್ತೇವೆ. ಮನುಷ್ಯನಿಗೆ ಆತ್ಯಂತಿಕವಾಗಿ ಬೇಕಾದುದು ಒಂದು ಸಮಾಧಾನದ ನಿದ್ದೆಯೇ ಹೊರತು ಇನ್ನೇನು!

ಬೆಳಗ್ಗೆ ಬೇಗನೆ ಏಳುವ ಅಭ್ಯಾಸದಿಂದ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆರೂವರೆಗೋ ಏಳೂವರೆಗೋ ಏಳುವವರಿದ್ದರೆ ಐದುಗಂಟೆಗೆ ಎದ್ದುನೋಡಿ, ನಿಮ್ಮ ದಿನಚರಿಯೇ ಬದಲಾಗಿ ಹೋಗುತ್ತದೆ. ಸಾಮಾನ್ಯ ದಿನಗಳಿಗಿಂತ ಒಂದೆರಡು ಗಂಟೆ ಹೆಚ್ಚು ಸಮಯ ನಿಮ್ಮದಾಗುತ್ತದೆ. ನಾನು ರಾತ್ರಿ ತಡವಾಗಿ ಮಲಗುವವನು, ಆದ್ದರಿಂದ ಬೆಳಗ್ಗೆ ತಡವಾಗಿ ಏಳುವವನು- ಹೀಗೆ ಸಮಜಾಯುಷಿ ಕೊಡುವುದುಂಟು. ಕೆಲವರಿಗೆ ಒಂದೊAದು ಬಗೆಯ ದಿನಚರಿ ಒಗ್ಗುವುದುಂಟು; ಕೆಲವರ ಕೆಲಸದ ಸ್ವರೂಪ ಹೆಚ್ಚಿನ ಸಮಯ ಬೇಡುವುದೂ ಉಂಟು. ಆದರೂ ಮುಂಜಾನೆಯ ಸದುಪಯೋಗದ ಮೌಲ್ಯ ಒಂದು ಬೇರೆಯದೇ ಮಟ್ಟದ್ದು. ಮುಂಜಾನೆ ಎದ್ದು ನೀವು ಏನೇ ಮಾಡಿ, ಅದು ಉತ್ಕೃಷ್ಟವಾಗಿಯೇ ಇರುತ್ತದೆ. ಮುಂಜಾನೆ ಕೇಳುವ ಒಂದೊಳ್ಳೆಯ ಹಾಡು ಇಡೀ ದಿನ ಮನಸ್ಸಿನಲ್ಲಿ ಗುನುಗುವಂತೆ ಇರುವುದಿಲ್ಲವೇ- ಹಾಗೆ. ಇದರ ಜೊತೆಗೆ ಸಣ್ಣದೊಂದು ‘ಪ್ಲಾನಿಂಗ್’ ನಮ್ಮ ದಿನಚರಿಗೆ ಕೊಂಚ ನಿರಾಳತೆಯನ್ನು ತಂದುಕೊಡಬಹುದು. ರಾತ್ರಿ ಮಲಗುವ ಮುನ್ನ ಇವತ್ತೇನು ಮಾಡಿದೆ, ಏನೆಲ್ಲ ಬಾಕಿಯಿದೆ, ನಾಳೆಯೇನು ಮಾಡಬೇಕು ಎಂಬ ಒಂದೆರಡು ನಿಮಿಷಗಳ ಯೋಚನೆ, ಬೆಳಗ್ಗೆ ಎದ್ದ ತಕ್ಷಣ ಆ ದಿನ ಮಾಡಬೇಕಾದ ಕೆಲಸಗಳ ಕುರಿತ ಸಣ್ಣದೊಂದು ಚಿಂತನೆ- ಸಾಕಷ್ಟು ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅನೇಕ ಜವಾಬ್ದಾರಿಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುವವರಾದರೆ ಬಾಕಿ ಕೆಲಸಗಳ ಚೆಕ್‌ಲಿಸ್ಟ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ಸಣ್ಣಪುಟ್ಟ ಕೆಲಸಗಳು ಮರೆತುಹೋಗುವುದನ್ನು ನಿವಾರಿಸಬಹುದು.

ನಮ್ಮ ಯಶಸ್ಸಿಗೆ ನಾವೇ ಕಾರಣರು ಎನ್ನುವುದು ನಿಜವಾದರೆ, ನಮ್ಮ ಗೊಂದಲಗಳಿಗೂ ನಾವೇ ಕಾರಣರು.

- ಸಿಬಂತಿ ಪದ್ಮನಾಭ ಕೆ.ವಿ.

ಸೋಮವಾರ, ಅಕ್ಟೋಬರ್ 31, 2022

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಮುಖ್ಯಮಂತ್ರಿಗಳ ಇ-ಆಡಳಿತ
ಸಲಹೆಗಾರರೂ ಮುಕ್ತಜ್ಞಾನದ ಪ್ರತಿಪಾದಕರೂ ಆದ
ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ:

ರಾಜ್ಯದ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ಪದವಿ ವಿದ್ಯಾರ್ಥಿಗಳಿಗಾಗಿ ರೂಪಿತವಾದ ಈ ಪುಸ್ತಕವು ಕನ್ನಡದಲ್ಲಿ ಈ ವರ್ಗದ ಮೊಟ್ಟಮೊದಲ ಮತ್ತು ಸರ್ವಸ್ಪರ್ಶೀ ಪಠ್ಯವಾಗಿದೆ ಎಂದು ಹೇಳಲು ನನಗೆ ಬೇರಾವ ದಾಖಲೆಯೂ ಬೇಡ. ಏಕೆಂದರೆ ಅಂತಹ ದಾಖಲೆಗಳು ಸಿಗುವುದೂ ಇಲ್ಲ! ಹೆಚ್ಚೆಂದರೆ 2005-07 ರ ನಡುವೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ದೂರಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಗಣಕ ಪರಿಚಯ, ಯಂತ್ರಾಂಶ – ತಂತ್ರಾಂಶ ಕುರಿತ ಪಠ್ಯಪುಸ್ತಕಗಳನ್ನು ಇಲ್ಲಿ ಉಲ್ಲೇಖಿಸಬಹುದು. ಖಾಸಗಿ ಪ್ರಕಟಣಾ ರಂಗದಲ್ಲಿ ಈ ಕುರಿತ ಬಿಡಿ ವಿಷಯಗಳ ಕೆಲವು ಪುಸ್ತಕಗಳೂ ಬಂದಿರಬಹುದು. ಆದರೆ ಪತ್ರಿಕಾರಂಗದ ವಿದ್ಯಾರ್ಥಿ - ಶಿಕ್ಷಕರಿಗೆಂದು ರೂಪಿಸಿದ ಈ ಪುಸ್ತಕವು ಈ ಕಾಲದ ಮಹತ್ವದ ಕೃತಿ. 

ಮಾಹಿತಿಸ್ಫೋಟದ ಈ ಯುಗದಲ್ಲಿ ಮಾಹಿತಿ – ಜ್ಞಾನದ ನಡುವಣ ಅಂತರವೇ ತೆಳುವಾಗುತ್ತಿದೆ. ಹುಸಿ  ವ್ಯಾಖ್ಯಾನಗಳಿಂದ, ತಪ್ಪು  ಅಂಕಿ ಅಂಶ ಮತ್ತು ವಿವರಣೆಗಳಿಂದ ಅಂತರಜಾಲವು ಕಲುಷಿತಗೊಂಡಿದೆ. ವಿಕಿಪೀಡಿಯದಂತಹ ಸ್ವಯಂಘೋಷಿತ ಮುಕ್ತಜ್ಞಾನದ ವೇದಿಕೆಗಳಲ್ಲೂ ಕುಂದುಕೊರತೆಗಳು ಕಾಣುತ್ತಿವೆ.  ಫೇಸ್‌ಬುಕ್ - ಇನ್‌ಸ್ಟಾಗ್ರಾಂ ನಂತಹ ಸಿಮ್ ಆಧಾರಿತವಲ್ಲದ ಸಮಾಜತಾಣಗಳಿಂದ ಹಿಡಿದು ವಾಟ್ಸಪ್, ಕ್ಲಬ್‌ಹೌಸ್‌ನಂತಹ ಸಿಮ್ ಆಧಾರಿತ ಸಮೂಹ ಮಾಧ್ಯಮಗಳಲ್ಲೂ ಸತ್ಯದೊಂದಿಗೇ ಅಸತ್ಯದ ಅಂಶಗಳೂ ಢಾಳಾಗಿ ವಿಜೃಂಭಿಸತೊಡಗಿವೆ. ಆನ್‌ಲೈನ್ ಪತ್ರಿಕಾ ಜಾಲತಾಣಗಳಲ್ಲಿ ಹುಸಿ ವರದಿಗಳನ್ನು ಹುಡುಕುವುದೇ ದೊಡ್ಡ ಉದ್ಯಮವಾಗಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ಜಾಲತಾಣಗಳೂ ಹುಟ್ಟಿಕೊಂಡಿದ್ದು ಅವುಗಳಲ್ಲೂ ಪಕ್ಷಪಾತಿ ವರ್ತನೆಯನ್ನು ಕಾಣಬಹುದಾಗಿದೆ. ಕಳೆದೆರಡು ವರ್ಷಗಳ ಕೊರೋನಾ ಮಹಾಪಿಡುಗಿನ ನಂತರ ಪತ್ರಿಕಾರಂಗದ ಚಹರೆಗಳು ಇನ್ನಿಲ್ಲದಂತೆ ಬದಲಾಗಿವೆ. ಮುದ್ರಣ ಮಾಧ್ಯಮವು ಕುಗ್ಗಿ ಆನ್‌ಲೈನ್ ಮಾಧ್ಯಮದ ಸಾಧ್ಯತೆಗಳು ವಿಸ್ತರಿಸಿವೆ. ಪತ್ರಿಕಾರಂಗದ ಆರ್ಥಿಕ ಲೆಕ್ಕಾಚಾರಗಳೂ ಬದಲಾಗಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಜನರಿಗೆ ನೇರವಾಗಿ ತಲುಪುವ ಆನ್‌ಲೈನ್ ಮಾಧ್ಯಮಗಳಿಗೆ ಬೇಡಿಕೆ ಒದಗಿದೆ. ಆದರೆ ಜಾಹೀರಾತು ಕೊಡುತ್ತಿದ್ದ ಹಲವು ಸಂಸ್ಥೆಗಳು ನೇರವಾಗಿಯೇ ಗ್ರಾಹಕರನ್ನು ಮುಟ್ಟುವ ತಂತ್ರಗಳಿಗೆ ಮೊರೆಹೋಗಿರುವುದು ಪತ್ರಿಕಾರಂಗದ ವರಮಾನದ ಕುಸಿತಕ್ಕೆ ಕಾರಣವಾಗಿರುವುದು ವಾಸ್ತವ. 

ಹೀಗೆ ಮಾಹಿತಿಸ್ಫೋಟದ ಯುಗವು ‘ಮಾಹಿತಿ ವಿಪ್ಲವ’ದ ಕಾಲಘಟ್ಟವಾಗಿ ನಮ್ಮೆದುರಿಗೆ ನಿಂತಿರುವ, ವೆಬ್ 1.0 ರಿಂದ ವೆಬ್ 2.0 ಅನ್ನು ದಾಟಿ ವೆಬ್ 3.0 ಅನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡದ ಮಾಧ್ಯಮ ವಿದ್ಯಾರ್ಥಿಗಳು ಮಾಡಬೇಕಾದ್ದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಇದು ಈ ಮುನ್ನುಡಿಯ ವ್ಯಾಪ್ತಿಯನ್ನು ಮೀರಿದ ಸಂಗತಿ. ‘ಮಾಧ್ಯಮ ತಂತ್ರಜ್ಞಾನ’ ಪುಸ್ತಕವು ಈ ವಿಪ್ಲವವನ್ನು ಅರಿತು ಬಾಳುವ ಹಲವು ದಿಕ್ಸೂಚಿ ಮಾಹಿತಿಗಳನ್ನು ನೀಡಿದೆ. ಇದನ್ನು ಕಂಪ್ಯೂಟರಿನ ಮಾಹಿತಿಯೆಂದೋ, ತಂತ್ರಾಂಶಗಳ ಕಸರತ್ತಿನ ವಿವರಣೆಗಳೆಂದೋ, ಆನ್‌ಲೈನ್ ಆಗುಹೋಗುಗಳ ದಾಖಲಾತಿಯೆಂದೋ ಭಾವಿಸುವಂತಿಲ್ಲ. ಈ ಪಠ್ಯವು ಜಗತ್ತಿನ ಮಾಹಿತಿ ತಂತ್ರಜ್ಞಾನ ಆಧಾರಿತ ಸಂವಹನದ ಎಲ್ಲ ಸಮಕಾಲೀನ ಆಯಾಮಗಳನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ದಾಖಲಿಸಿದ ಮಹತ್ವದ ಪ್ರಯತ್ನ. 

ಇಂತಹ ನವಮಾಧ್ಯಮದ ಪಠ್ಯಪುಸ್ತಕಗಳು ಹೆಚ್ಚುಕಡಿಮೆ ಅಂತರಜಾಲದಲ್ಲಿ ಸಿಗುವ ವಿವರಣೆಗಳ ನಕಲಿನಿಂದಲೇ ತುಂಬಿಕೊಂಡಿರುವ ಅಪಾಯ ಇದ್ದೇ ಇತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಶ್ರೀ ಸಿಬಂತಿ ಪದ್ಮನಾಭ ಮತ್ತು ಪತ್ರಿಕಾರಂಗದ ಯುವಪೀಳಿಗೆಯ ಬರಹಗಾರ ಶ್ರೀ ಶ್ರೀಶ ಪುಣಚ ಅವರಿಬ್ಬರೂ ಮೂಲತಃ ಸ್ವಂತ ಮಾಹಿತಿ ಸಂಗ್ರಹದಲ್ಲಿ ತೊಡಗಿರುವುದರಿಂದ ಈ ಪುಸ್ತಕವೂ ಅವರ ಅರಿವಿನ ಮೂಸೆಯಿಂದಲೇ ಅತ್ಯಂತ ಸ್ವಂತ ಕೃತಿಯಾಗಿ ಮೂಡಿದೆ. ವಿಕಿಪೀಡಿಯ ಪುಟಗಳಲ್ಲಿ ಇಂಥದ್ದೇ ಮಾಹಿತಿ ಸಿಗಬಹುದು; ಆದರೆ ಈ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಬೇಕಾದ ಮಾಹಿತಿಗಳನ್ನು ವಿವಿಯ ಪಠ್ಯಕ್ರಮದ ಅನುಸಾರವಾಗಿಯೇ ಸ್ವತಂತ್ರವಾಗಿ ರೂಪಿಸಲಾಗಿದೆ. ಈ ಅಧ್ಯಾಯಗಳ ಬರಹದ ಶೈಲಿಯನ್ನು ನೋಡಿದಾಗ, ವಿಷಯಗಳನ್ನು ಚೆನ್ನಾಗಿ ಅರಿತು ವಿಶ್ಲೇಷಿಸಿ ಬರೆದಿರುವುದನ್ನು ಖಚಿತವಾಗಿ ಗುರುತಿಸಿದ್ದೇನೆ. ಇದೇ ಈ ಪುಸ್ತಕದ ಜೀವಿತಾವಧಿ ಹೆಚ್ಚಿಸಬಲ್ಲ ಒಂದು ಮುಖ್ಯ ಗುಣವಾಗಿದೆ. 

ಹೀಗಿದ್ದೂ, ಈ ಪುಸ್ತಕವು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ರಂಗಕ್ಕೆ ಒಂದು ಸಮಕಾಲೀನ ದಿಕ್ಸೂಚಿಯೇ ಹೊರತು, ಅರಿವಿನ ಸಮಗ್ರ ವಿಶ್ವಕೋಶವಲ್ಲ ಎಂಬುದೂ ನಿಜ. ಶ್ರಮವಹಿಸುವ ಮಾಧ್ಯಮ ವಿದ್ಯಾರ್ಥಿಗಳು ಈ ಪುಸ್ತಕದ ಮೂಲಕ ಹಲವು ರಂಗಗಳ ಬ್ರಹ್ಮಾಂಡ ಕಲಿಕೆಗೆ ಕೀಲಿಕೈ ಪಡೆಯುತ್ತಾರೆ. ಇಲ್ಲಿ ಬರೆದ ಪ್ರತಿಯೊಂದೂ ಅಧ್ಯಾಯ, ಉಪಶೀರ್ಷಿಕೆಗಳೇ ಪ್ರತ್ಯೇಕ ಮಾಧ್ಯಮ ತಂತ್ರಜ್ಞಾನ ರಂಗಗಳು. ಉದಾಹರಣೆಗೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನೇ ತೆಗೆದುಕೊಳ್ಳಿ. ಅದು ಮಾಹಿತಿ ತಂತ್ರಜ್ಞಾನದ ಭಾಗವಾಗಿ ಹ್ಯಾಶ್‌ಟ್ಯಾಗ್ ಹೆಸರಿನಲ್ಲಿ ಎರಡು ದಶಕಗಳಿಂದಲೂ ಬಳಕೆಯಲ್ಲಿತ್ತು. ಅದರ ಅವತಾರವೇ ಈಗ ಬದಲಾಗಿದೆ. ಈಗ ಬ್ಲಾಕ್‌ಚೈನನ್ನು ಎಲ್ಲ ಬಗೆಯ ಸತ್ಯದ ಮೂಲಕ್ಕೆ ಅಡಿಪಾಯ ಎಂದೇ ಬಗೆದು ವಿಜ್ಞಾನ, ಹಣಕಾಸು, ಭೂದಾಖಲೆ – ಹೀಗೆ ಹಲವು ರಂಗಗಳಲ್ಲಿ ಅಳವಡಿಸುತ್ತಿದ್ದಾರೆ. ಬ್ಲಾಕ್‌ಚೈನ್ ಕುರಿತಾಗಿ ಕನಿಷ್ಟ 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳು ಕಳೆದೆರಡು ವರ್ಷಗಳಲ್ಲೇ ಬಂದಿವೆ. ಇನ್ನು ಎಐ, ವಿಆರ್‌ಗಳ ಬಗ್ಗೆ ಹೇಳಿದಷ್ಟೂ ಕಡಿಮೆ. 

ಈ ಉತ್ತಮ ಸಂಗತಿಗಳ ನಡುವೆಯೂ ಪಠ್ಯಕ್ರಮಕ್ಕೆ ಅನುಸಾರವಾಗಿಯೇ ಪುಸ್ತಕವನ್ನು ಬರೆಯುವ ಅನಿವಾರ್ಯತೆಯಲ್ಲಿ ಮಾಧ್ಯಮರಂಗಕ್ಕೆ ಬೇಕಾದ ಕೆಲವು ಅತಿಮುಖ್ಯ ತಂತ್ರಜ್ಞಾನಗಳ ಮಾಹಿತಿಗಳು ಲಭ್ಯವಿಲ್ಲ. ಉದಾಹರಣೆಗೆ ಡೇಟಾ ಜರ್ನಲಿಸಂ. ಇಂದು ಅಂಕಿಅಂಶಗಳ ಖಚಿತ ನೆರವಿಲ್ಲದೆ ಏನನ್ನೂ ಪ್ರತಿಪಾದಿಸಲು ಆಗದು; ಅಥವಾ ಅಂಕಿಅಂಶಗಳ ನೆರವಿನಿಂದ ಹಲವು ಸುದ್ದಿಗಳನ್ನು ಹೆಕ್ಕಿ ತೆಗೆಯಬಹುದು. ಇದು ಮೂಲತಃ ಪತ್ರಿಕಾರಂಗ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನವನ್ನು ಮೇಳೈಸಿದ ಒಂದು ಮಾಧ್ಯಮ ತಂತ್ರಜ್ಞಾನ. ವೈಜ್ಞಾನಿಕವಾಗಿ ದತ್ತಾಂಶಗಳನ್ನು ವಿಶ್ಲೇಷಿಸುವ ಮೂಲಕ ನಾಡಿನ ಹಲವು ಸಮಸ್ಯೆಗಳನ್ನು ಹುಡುಕುವ, ಪರಿಹಾರಗಳನ್ನು ಅರಸುವ ಕೆಲಸವನ್ನು ಮಾಡಬಹುದು. ಈಗಾಗಲೇ ಭಾರತ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳು ಮುಕ್ತ ದತ್ತಾಂಶ ಪೋರ್ಟಲ್‌ಗಳನ್ನೇ ತೆರೆದಿವೆ. ಇವನ್ನೆಲ್ಲ ಮಾಧ್ಯಮ ರಂಗದ ವಿದ್ಯಾರ್ಥಿಗಳು ಅರಿತಿರಲೇಬೇಕು.  

ಪಠ್ಯಕ್ರಮಕ್ಕೇ ಹೊಂದಿಸಿಕೊಂಡು ಈ ಪುಸ್ತಕವನ್ನು ಬರೆದಿರುವುದು ಈ ಪುಸ್ತಕದ ಮಿತಿಯೂ ಹೌದು. ಇಂತಹ ಮಾಹಿತಿಪೂರ್ಣ ಪುಸ್ತಕವು ಸಾರ್ವಜನಿಕ ಓದಿಗೂ ಸಿಗಬೇಕು ಎಂಬ ಅಪೇಕ್ಷೆಯನ್ನು ಈ ಪುಸ್ತಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದ ವಿವಿಧ ಹೊಸ ಆಯಾಮಗಳಾದ ಮೊಬೈಲ್ ಜರ್ನಲಿಸಂ, ಡಿಜಿಟಲ್ ಸುರಕ್ಷತೆ, ಗಣಿತ ತಂತ್ರಜ್ಞಾನ, ಲಿಪ್ಯಂತರಣ, ಇ–ಸಂವಹನ, ಡಿಜಿಟಲ್ ಕಥಾ ನಿರೂಪಣೆ, ಇನ್‌ಫೋಗ್ರಾಫಿಕ್ಸ್, ಡೇಟಾ ವಿಜುಯಲೈಸೇಶನ್, ಡಿಜಿಟಲ್ ಸಂಶೋಧನೆ, ಸಮುದಾಯ ಪತ್ರಿಕಾಕಾಯಕದ ತಂತ್ರಜ್ಞಾನ ಸಾಧ್ಯತೆಗಳು, ಪೋಡ್‌ಕಾಸ್ಟಿಂಗ್, ವಿಡಿಯೋ ಜರ್ನಲಿಸಂ – ಹೀಗೆ ಹಲವು ಮಾಹಿತಿ ತಂತ್ರಜ್ಞಾನ ಆಧಾರಿತ ಪತ್ರಕರ್ತರಿಗೆ ಅತ್ಯಾವಶ್ಯಕವಾದ ಸಂಗತಿಗಳ ಬಗ್ಗೆ ಕಲಿಯಲು ಈ ಪುಸ್ತಕವು ಮೊದಲ ಹೆಜ್ಜೆ ಆಗುವುದಂತೂ ನಿಶ್ಚಿತ.       

ಇನ್ನು ಈ ಪುಸ್ತಕದ ತಿರುಳೇ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ಸಂಗತಿಗಳು. ಆದ್ದರಿಂದ ಮುದ್ರಿತ ಪುಸ್ತಕವಾಗಿ ಈ ಪುಸ್ತಕದ ಬಾಳಿಕೆ (ಅದರಲ್ಲೂ ಹೊಸ - ಬೆಳೆಯುತ್ತಿರುವ ತಂತ್ರಜ್ಞಾನಗಳ ಕುರಿತಾಗಿ) ಅಲ್ಪವೇ ಎಂಬುದು ಲೇಖಕರಿಗೆ ಗೊತ್ತಿರುವ ಹಾಗೆಯೇ ಶಿಕ್ಷಕ – ವಿದ್ಯಾರ್ಥಿಗಳೂ ಅರಿಯಬೇಕು. ಪತ್ರಿಕಾರಂಗದಲ್ಲಿ ವೃತ್ತಿಗೆ ಸೇರುವ ವಿದ್ಯಾರ್ಥಿಗಳ ಕಲಿಕೆಯ ಹೊಣೆಯರಿತ ಈ ವಿಶಿಷ್ಟ ಮತ್ತು ಮಾಹಿತಿಪೂರ್ಣ ಪುಸ್ತಕವನ್ನು ಸದಾ ತತ್‌ಸಾಮಯಿಕವಾಗಿ ಇರಿಸುವ ಆನ್‌ಲೈನ್ ತಾಣವನ್ನೂ ರೂಪಿಸುವುದು ಅತ್ಯಂತ ಅವಶ್ಯಕ. ಆಗ ಈ ಪುಸ್ತಕವನ್ನೇ ವಿಸ್ತರಿಸಿ ಹಲವು ಆಕರಗಳ ತಾಣಗಳಿಗೆ ಕೊಂಡಿಗಳನ್ನು ನೀಡಬಹುದು; ಬದಲಾದ ಮಾಹಿತಿಗಳನ್ನು ಸೂಕ್ತ ಉಲ್ಲೇಖದೊಂದಿಗೆ ಸೇರಿಸಬಹುದು; ಹೊಸ ಸಂಗತಿಗಳು ಅನಾವರಣಗೊಂಡ ಹಾಗೆಲ್ಲ ಸೇರಿಸುತ್ತ ಹೋಗಬಹುದು. ಇದೇ ಒಂದು ಮುಕ್ತಜ್ಞಾನ ಮಾದರಿಯ ಮಾಧ್ಯಮತಾಣ ಆಗುತ್ತದೆ. ಇಂತಹ ತಾಣವನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಖರ್ಚುಗಳನ್ನು ವಹಿಸಿಕೊಳ್ಳುವ ಬಗ್ಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಒಂದು ಏಕಾಭಿಪ್ರಾಯಕ್ಕೆ ಬರಬಹುದು. ಆಗ ಇಂತಹ ಸದಾ ಬದಲಾಗುವ ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ವರ್ಷಕ್ಕೊಂದು ಆವೃತ್ತಿಯಾಗಿ ಹೊಸತಾಗಿ ನೀಡಬಹುದು. ಜ್ಞಾನವನ್ನು ಮುಕ್ತವಾಗಿಟ್ಟು, ಜ್ಞಾನ ನಿರ್ವಹಣೆಗೆ ನಿಧಿ ನೀಡುವುದು ಈ ಕಾಲದ ಸಹಜ ಕ್ರಮವಾಗಿದೆ.  ಆಗಲೇ ಈ ಲೇಖಕರ ಶ್ರಮಕ್ಕೂ ಸೂಕ್ತ ಬೆಲೆ ಒದಗಿಸಿದಂತಾಗುತ್ತದೆ.  

ಮಾಧ್ಯಮ ತಂತ್ರಜ್ಞಾನವೆಂದರೆ ಕೇವಲ ಓದಿನ ಸರಕಲ್ಲ. ಸ್ವತಃ ಕಂಪ್ಯೂಟರ್ ಒಂದನ್ನು ಬಳಸಿ ಕಲಿಯಬೇಕಾದ ಸಂಗತಿಗಳು ಹೇರಳವಾಗಿವೆ. ಅದರಲ್ಲೂ ಮಾಧ್ಯಮ ವಿದ್ಯಾರ್ಥಿಗಳು ಡೆಸ್ಕ್ಟಾಪ್ ಕಂಪ್ಯೂಟರ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು ಎಂಬುದು ನನ್ನ ಅನುಭವದ ಮಾತು. ಕಂಪ್ಯೂಟರ್‌ಗಳನ್ನು ಬೈಪಾಸ್ ಮಾಡಿ ಸ್ಮಾರ್ಟ್ಫೋನ್‌ಗಳನ್ನೇ ಬಳಸುತ್ತಿರುವ ಈ ಸಂದರ್ಭದಲ್ಲಿ ಈ ಮಾತು ವಿಚಿತ್ರವೆನ್ನಿಸಬಹುದು. ಆದರೆ ಡೆಸ್ಕ್ಟಾಪ್ ಕಂಪ್ಯೂಟರ್ ಎಂಬುದು ಪ್ರತಿಯೊಬ್ಬ ಪತ್ರಕರ್ತನ ವೃತ್ತಿಕೋಶ. ಮಾಹಿತಿ, ಕಲಿಕೆ, ತಂತ್ರಜ್ಞಾನ, ವಿಶ್ಲೇಷಣೆ, ಚಿತ್ರಣ, ವಿಷಯ ಸಂಪಾದನೆ, ಸಂಗ್ರಹ, ಸಂವಹನ - ಎಲ್ಲವನ್ನೂ ಸಾಧ್ಯವಾಗಿಸುವ ಕಂಪ್ಯೂಟರ್‌ಗಳನ್ನು ಅಂತರಜಾಲದ ಹೊಣೆಗಾರಿಕೆಯ ಬಳಕೆಯೊಂದಿಗೆ ಪತ್ರಕರ್ತರು ಸಮಾಜಮುಖಿಯಾಗಿ ಹಲವು ವರದಿಗಳನ್ನು ರೂಪಿಸಬಹುದು. 

ಕೊನೆಯ ಮಾತಾಗಿ ಹೇಳಬಹುದಾದರೆ, ಮಾಹಿತಿ ತಂತ್ರಜ್ಞಾನ, ಮಾಧ್ಯಮ ತಂತ್ರಜ್ಞಾನ – ಎಲ್ಲವೂ ನಾಡಿನ ಕಷ್ಟ ಸುಖಗಳನ್ನು ವರದಿಗಳ ಮೂಲಕ, ವಿವಿಧ ಮಾಧ್ಯಮಗಳ ಮೂಲಕ ಜನತೆಗೆ ತಲುಪಿಸುವ, ಸರ್ಕಾರಕ್ಕೆ ತಿಳಿಸುವ ಮೂಲ ಹೊಣೆಗಾರಿಕೆಗೆ ಸಹಕಾರಿಯಾಗುವ ಅಂಶಗಳೇ ಹೊರತು, ತಂತ್ರಜ್ಞಾನವೇ ಎಲ್ಲದಕ್ಕೂ ಪರಿಹಾರವಲ್ಲ. ತಂತ್ರಜ್ಞಾನವನ್ನು ಅರಿತರೆ ಪತ್ರಕರ್ತರು ಖಂಡಿತ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಪತ್ರಿಕಾರಂಗದಲ್ಲೂ ಉದ್ಯೋಗದ ಅವಕಾಶಗಳು ವೈವಿಧ್ಯವೂ, ವಿಸ್ತಾರವೂ ಆಗಿರುವ ಈ ಹೊತ್ತಿನಲ್ಲಿ ಈ ಪುಸ್ತಕವು ಹೊಸಕಾಲದ ಉದ್ಯೋಗಾವಕಾಶಗಳಿಗೆ ಕಿಟಕಿಯಾಗಿದೆ.     

ಇಂತಹ ತಾಜಾ ಪುಸ್ತಕವನ್ನು ಬರೆದ ಲೇಖಕರಿಬ್ಬರಿಗೂ ನನ್ನ ಅಭಿನಂದನೆಗಳು, ಶುಭಾಶಯಗಳು. ಜವಾಬ್ದಾರಿಯುತ ಮತ್ತು ತಂತ್ರಜ್ಞಾನಾಧಾರಿತ ಪತ್ರಿಕಾಕಾಯಕಕ್ಕೆ ಈ ಪುಸ್ತಕವು ನೆರವಾಗಲಿ ಎಂದು ಆಶಿಸುತ್ತೇನೆ. 

- ಬೇಳೂರು ಸುದರ್ಶನ 

  • ಪುಸ್ತಕದ ಶೀರ್ಷಿಕೆ: ಮಾಧ್ಯಮ ತಂತ್ರಜ್ಞಾನ
  • ಲೇಖಕರು: ಡಾ. ಸಿಬಂತಿ ಪದ್ಮನಾಭ ಕೆ. ವಿ. & ಡಾ.  ಶ್ರೀಶ ಎಂ. ಪುಣಚ
  • ಪ್ರಕಾಶನ: ಅಂಕುರ್ ಮೀಡಿಯಾ ಪಬ್ಲಿಕೇಶನ್ಸ್, ತುಮಕೂರು
  • ISBN: 978-81-958059-1-4
  • ಪ್ರಕಟಣೆಯ ವರ್ಷ: 2022
  • ಪುಟಗಳು: 234
  • ಬೆಲೆ: ರೂ. 250-00
  • ಪುಸ್ತಕಗಳಿಗಾಗಿ ಸಂಪರ್ಕ: 9449525854

ಗುರುವಾರ, ಅಕ್ಟೋಬರ್ 20, 2022

ಅಂಕಪಟ್ಟಿಯಿದ್ದರೆ ಅಷ್ಟೇ ಸಾಕೆ?

17 ಅಕ್ಟೋಬರ್ 2022ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಬರಹ

(ಉದ್ಯೋಗಾರ್ಹತೆಯ ಕೌಶಲಗಳು: ಭಾಗ-1)

ಅಂಕಪಟ್ಟಿ ನೋಡಿ ಉದ್ಯೋಗ ಕೊಡುವ ಪ್ರವೃತ್ತಿ ಹೋಗಿ ಬಹಳ ಕಾಲವೇ ಆಯಿತು. ಕೆಲವೇ ಕೆಲವು ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಇನ್ನೂ ಪಿಯುಸಿ ಅಥವಾ ಪದವಿ ಅಂಕಗಳನ್ನು ನೋಡಿ ಮೆರಿಟ್‌ಲಿಸ್ಟ್ ತಯಾರಿಸುವ ಪದ್ಧತಿಯಿದೆ. ಉಳಿದಂತೆ ಉದ್ಯೋಗದಾತರಿಗೆ ಅಭ್ಯರ್ಥಿಗಳ ಅಂಕಗಳಿಸುವ ತಾಕತ್ತು ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸಂಬಳಕ್ಕೆ ಪ್ರತಿಯಾಗಿ ಇವರು ಏನನ್ನು ನೀಡಬಲ್ಲರು ಎಂಬ ಪ್ರಶ್ನೆಗೆ ಉತ್ತರ ಮಾತ್ರ. ಈ ನಿರೀಕ್ಷೆಯನ್ನು ‘ಉದ್ಯೋಗಾರ್ಹತೆ’ ಎಂದೋ, ‘ಉದ್ಯೋಗಾರ್ಹತೆಯ ಕೌಶಲಗಳು’ ಎಂದೋ ಕರೆಯಬಹುದು.

ಅಂಕಪಟ್ಟಿ ತೋರಿಸುವ ಪರ್ಸೆಂಟೇಜು ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಅನೇಕ ಮಾನದಂಡಗಳಲ್ಲಿ ಒಂದಷ್ಟೇ. ಬಹುತೇಕ ಆಯ್ಕೆ ಪ್ರಕ್ರಿಯೆಗಳಲ್ಲಿ ಸಂದರ್ಶನವೇ ಪ್ರಧಾನ ಭಾಗ. ನಾಗರಿಕ ಸೇವಾ ಪರೀಕ್ಷೆಗಳಲ್ಲಂತೂ ಸಂದರ್ಶನ ಎಂಬ ಪದವನ್ನೂ ಬಳಸುವುದಿಲ್ಲ. ಅವರು ಅದನ್ನು ‘ವ್ಯಕ್ತಿತ್ವ ಪರೀಕ್ಷೆ’ ಎಂದು ಕರೆಯುತ್ತಾರೆ. ಈ ವ್ಯಕ್ತಿತ್ವ ಮಾಪನ ಪ್ರಕ್ರಿಯೆಯಲ್ಲಿ ಅವರು ಹುಡುಕುವುದು ಅಭ್ಯರ್ಥಿಯ ಉದ್ಯೋಗಾರ್ಹತೆಯನ್ನೇ.

ಯಾವುದೇ ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗಬೇಕಾದರೆ ಶೈಕ್ಷಣಿಕ ವಿದ್ಯಾರ್ಹತೆಗಿಂತ ಹೊರತಾದ ಅನೇಕ ಗುಣಗಳು ಬೇಕೇಬೇಕು. ಸಂವಹನ ಕೌಶಲ, ಹೊಂದಾಣಿಕೆಯ ಪ್ರವೃತ್ತಿ, ಸಮಸ್ಯೆ ಬಗೆಹರಿಸುವಿಕೆ, ಸಮಯ ನಿರ್ವಹಣೆ, ತಂಡ ಮನೋಭಾವ, ಸಂಘಟನಾ ಕೌಶಲ, ಲಭ್ಯ ಮಾಹಿತಿಯ ಬಳಕೆ, ತಂತ್ರಜ್ಞಾನದ ಸದುಪಯೋಗ, ವ್ಯಕ್ತಿತ್ವ ಕೌಶಲಗಳು, ನಾಯಕತ್ವ- ಹೀಗೆ ಹತ್ತಾರು ಇವೆ. ಇವುಗಳಲ್ಲಿ ಕೆಲವು ಆಯಾ ಉದ್ಯೋಗವನ್ನು ನಿರ್ವಹಿಸಲು ಪ್ರಾಥಮಿಕ ಅವಶ್ಯಕತೆಗಳಾದರೆ, ಇನ್ನು ಕೆಲವು ಅದರಲ್ಲಿ ಕ್ಷಮತೆಯನ್ನು ಸಾಧಿಸಲು ಅನಿವಾರ್ಯ.

ಉದ್ಯೋಗಾರ್ಹತೆಯ ಕೌಶಲಗಳು:

ಯಾವುದೇ ಉದ್ಯೋಗದಲ್ಲಿರುವವನಿಗೆ ಪ್ರತಿದಿನ ಒಂದಲ್ಲ ಒಂದು ಸವಾಲು ಎದುರಾಗಿಯೇ ಆಗುತ್ತದೆ. ಸಣ್ಣ ಹುದ್ದೆಗಳಲ್ಲಿರುವವರಿಗೆ ಅವರ ಜವಾಬ್ದಾರಿ ನಿರ್ವಹಿಸುವಲ್ಲಿ ಸವಾಲುಗಳಾದರೆ, ದೊಡ್ಡ ಹುದ್ದೆಗಳಲ್ಲಿರುವವರಿಗೆ ಸಂಸ್ಥೆಯನ್ನೇ ಮುಂದಕ್ಕೆ ಒಯ್ಯುವಲ್ಲಿ ಸವಾಲುಗಳಿರುತ್ತವೆ. ಅವುಗಳು ಎದುರಾದ ತಕ್ಷಣ ಎದೆಗುಂದುವ ಬದಲು, ಅವುಗಳನ್ನು ಅಲ್ಲಲ್ಲಿಯೇ ವಿಶ್ಲೇಷಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದು, ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುವುದು ನಿಜಕ್ಕೂ ಒಂದು ಕೌಶಲವೇ.

ಸಂವಹನ ಕೌಶಲವಂತೂ ಒಂದು ಅತಿಪ್ರಮುಖ ಅರ್ಹತೆ. ಹೇಳಬೇಕಾದುದನ್ನು ಗೊಂದಲವಿಲ್ಲದಂತೆ ಸ್ಪಷ್ಟವಾಗಿ ಇನ್ನೊಬ್ಬರಿಗೆ ಹೇಳುವುದೊಂದು ದೊಡ್ಡ ಕಲೆ. ಅನೇಕ ಸಲ ಇದನ್ನೇ ಸರಿಯಾಗಿ ಮಾಡದೆ ಎಡವಟ್ಟುಗಳನ್ನು ಮಾಡಿಕೊಂಡುಬಿಡುತ್ತೇವೆ. ಸಂವಹನವೆಂದಮೇಲೆ ಅದು ಬರವಣಿಗೆ ಮತ್ತು ಮಾತು ಎರಡನ್ನೂ ಒಳಗೊಂಡಿದೆ. ಕೆಲವು ಉದ್ಯೋಗಗಳಲ್ಲಿ ಬರವಣಿಗೆ ಮುಖ್ಯವಾದರೆ ಕೆಲವದರಲ್ಲಿ ಮಾತು ಮುಖ್ಯವಾಗುವುದೂ ಇದೆ. ಸರಿಯಾದ ಮಾತೊಂದರಿಂದ ಯುದ್ಧವನ್ನೇ ತಪ್ಪಿಸಬಹುದಂತೆ, ಇನ್ನು ಉದ್ಯೋಗದಲ್ಲಿ ಯಶಸ್ಸು ಕಾಣಲಾಗದೇ?

ಬಹುತೇಕ ಕೆಲಸಗಳನ್ನು ತಂಡಗಳಲ್ಲಿ ನಿರ್ವಹಿಸಬೇಕಾಗುತ್ತದೆ. ಒಬ್ಬಂಟಿಯಾಗಿ ಮಾಡುವ ಕೆಲಸಗಳು ಅಪರೂಪ. ಕಾರ್ಪೋರೇಟ್ ಯುಗದಲ್ಲಂತೂ ಟೀಂವರ್ಕ್ ಒಂದು ಮಹಾಮಂತ್ರ. ನಾವು ಕೆಲಸ ಮಾಡುವ ಕಂಪೆನಿಗಳಲ್ಲಿ ವಿವಿಧ ವಯೋಮಾನದ, ಸಾಮಾಜಿಕ ಹಿನ್ನೆಲೆಯ, ಭಿನ್ನ ರಾಜಕೀಯ ನಿಲುವುಗಳ ಸಹೋದ್ಯೋಗಿಗಳಿರುತ್ತಾರೆ. ಉದ್ಯೋಗದ ವೇಳೆ ಇವು ಯಾವುವೂ ಅಡ್ಡಿಯಾಗದಂತೆ ನೋಡಿಕೊಳ್ಳುವುದೊಂದು ಪ್ರಮುಖ ಕೌಶಲ. ಸಣ್ಣಪುಟ್ಟ ಅಡಚಣೆಗಳನ್ನು ನಿರ್ಲಕ್ಷಿಸಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವುದೇ ಇಲ್ಲಿ ಮುಖ್ಯ.

ಯೋಜನೆ ಮತ್ತು ಸಂಘಟನೆ ಉದ್ಯೋಗ ಜಗತ್ತು ಬಯಸುವ ಇನ್ನೊಂದು ವಿಶಿಷ್ಟ ಕೌಶಲ. ಸಂಘಟನಾ ಕಲೆ ಎಲ್ಲರಿಗೂ ಒಲಿಯುವುದು ಕಷ್ಟವಾದರೂ, ಯಾವುದೇ ಉದ್ಯೋಗ ಕೈಗೊಂಡವರಿಗೆ ಅದರ ಪ್ರಾಥಮಿಕ ತಿಳುವಳಿಕೆಯಾದರೂ ಬೇಕಾಗುತ್ತದೆ. ಆಗಬೇಕಿರುವ ಕೆಲಸಗಳನ್ನು ಹೇಗೆ ವಿಭಾಗಿಸಿಕೊಳ್ಳಬೇಕು, ಯಾರಿಗೆ ಯಾವ ಹೊಣೆಗಾರಿಕೆಗಳನ್ನು ಹಂಚಬೇಕು, ಎಷ್ಟು ಸಮಯದೊಳಗೆ ಅವುಗಳನ್ನು ಪೂರೈಸುವಂತೆ ನೋಡಿಕೊಳ್ಳಬೇಕು, ಸಂಪನ್ಮೂಲಗಳನ್ನು ಹೇಗೆ ಒಟ್ಟು ಮಾಡಬೇಕು- ಇತ್ಯಾದಿಗಳನ್ನು ಅರಿತವರು ಉತ್ತಮ ಸಂಘಟಕರಾಗುತ್ತಾರೆ.

ಎಲ್ಲರೂ ರೂಢಿಸಿಕೊಳ್ಳಬೇಕೆಂದು ಬಯಸುವ ಆದರೆ ಬಹುತೇಕರು ವಿಫಲವಾಗುವ ಒಂದು ವಿಚಾರವೆಂದರೆ ಸಮಯ ನಿರ್ವಹಣೆ. ಯಾವುದೇ ವೃತ್ತಿಯ ಯಶಸ್ಸಿನಲ್ಲಿ ಸಮಯನಿರ್ವಹಣೆಯ ಪಾತ್ರ ಬಲು ಪ್ರಮುಖ. ನಿರ್ದಿಷ್ಟ ಕೆಲಸವೊಂದು ನಿಗದಿತ ಸಮಯದಲ್ಲಿ ಆಗದೇಹೋದರೆ ಕಂಪೆನಿಯ ನಿರ್ಣಾಯಕ ಯೋಜನೆಯೊಂದು ಕೈತಪ್ಪಿಹೋಗಬಹುದು. ನಾವು ಹತ್ತಬೇಕಾದ ಬಸ್ಸೋ ರೈಲೋ ತಪ್ಪಿಹೋದರೆ ಎಷ್ಟೊಂದು ಸಮಸ್ಯೆಯಾಗುತ್ತದೆ; ಇನ್ನು ಯೋಜನೆಯೇ ತಪ್ಪಿಹೋದರೆ ಆಗುವ ನಷ್ಟ ಎಷ್ಟು ದೊಡ್ಡದು? ಸಮಯ ನಿರ್ವಹಣೆಯಲ್ಲಿ ನಾವು ಯಶಸ್ವಿಯಾದರೆ ಅರ್ಧ ಉದ್ಯೋಗಜೀವನವೇ ಯಶಸ್ವಿಯಾದಂತೆ.

ಹೊಸತನ್ನು ಕಲಿಯುವುದು, ಅಗತ್ಯ ಮಾಹಿತಿಯನ್ನು ಕಲೆಹಾಕುವುದು, ಲಭ್ಯವಿರುವ ಮಾಹಿತಿಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು, ತಂತ್ರಜ್ಞಾನವನ್ನು ಬಳಸುವ ಪ್ರಾಥಮಿಕ ತಿಳುವಳಿಕೆ ಹೊಂದಿರುವುದು ಇಂದು ಯಾವುದೇ ಉದ್ಯೋಗಕ್ಕೆ ಅಗತ್ಯ. ಕೆಲವು ವರ್ಷಗಳ ಹಿಂದೆ ಕಂಪ್ಯೂಟರ್ ಜ್ಞಾನ ಅನಿವಾರ್ಯವೇನೂ ಇರಲಿಲ್ಲ. ಇಂದು ಸಾಮಾನ್ಯ ವೃತ್ತಿಯೊಂದನ್ನು ನಿಭಾಯಿಸಬೇಕೆಂದರೂ ತಂತ್ರಜ್ಞಾನದ ಪ್ರಾಥಮಿಕ ತಿಳುವಳಿಕೆ ಅನಿವಾರ್ಯ.

ಆಯ್ದುಕೊಂಡ ವೃತ್ತಿಯಲ್ಲಿ ದಿನೇದಿನೇ ಪರಿಣತಿಯನ್ನು ಸಾಧಿಸುವುದು, ಆತ್ಮವಿಶ್ವಾಸ ಬತ್ತದಂತೆ ನೋಡಿಕೊಳ್ಳುವುದು, ಸೃಜನಶೀಲತೆಯನ್ನು ರೂಢಿಸಿಕೊಳ್ಳುವುದು ಕೂಡ ಉದ್ಯೋಗಾರ್ಹತೆಯ ಕೌಶಲವೆನಿಸಿದೆ. ಇವೆಲ್ಲಕ್ಕೂ ಕಿರೀಟಪ್ರಾಯವಾಗಿರುವುದು ಹೊಸತನಕ್ಕೆ ಉಪಕ್ರಮಿಸುವ ಮನೋಭಾವ ಮತ್ತು ನಾಯಕತ್ವದ ಗುಣ. ಇನ್ನೊಬ್ಬರನ್ನು ಮುನ್ನಡೆಸುವ ಗುಣ ಹೊಂದಿರುವವನು ತನ್ನ ಹುದ್ದೆಯಲ್ಲಿ ಉನ್ನತಿಗೇರುತ್ತಾನೆ.

ಇವೆಲ್ಲ ಆಧುನಿಕ ಉದ್ಯೋಗ ಜಗತ್ತು ಅಭ್ಯರ್ಥಿಗಳಿಂದ ಬಯಸುವ ಪ್ರಮುಖ ಕೌಶಲಗಳು. ನಮ್ಮ ಶೈಕ್ಷಣಿಕ ಅರ್ಹತೆಯ ಹಿಂದೆ ವರ್ಷಗಳ ಶ್ರಮ, ಸಾವಿರಾರು ರುಪಾಯಿಗಳ ಖರ್ಚು ಇರುತ್ತದೆ. ಅಚ್ಚರಿಯೆಂದರೆ ಇದರಾಚೆಗಿರುವ ಉದ್ಯೋಗ ಕೌಶಲಗಳಲ್ಲಿ ಹೆಚ್ಚಿನವೂ ಯಾವುದೇ ಖರ್ಚಿಲ್ಲದೆ ನಮ್ಮಷ್ಟಕ್ಕೆ ನಾವೇ ರೂಢಿಸಿಕೊಳ್ಳುವಂಥವು. ಅಂದಮೇಲೆ ಶಿಕ್ಷಣದ ಜತೆಜತೆಗೇ ಅವುಗಳನ್ನು ಪಡೆಯುವಲ್ಲಿ ಉದಾಸೀನ ಸಲ್ಲದು. ನೂರಕ್ಕೆ ನೂರು ಅಂಕ ಗಳಿಸಿದ ಅಭ್ಯರ್ಥಿ ತಾನೇ ಮಾರುಕಟ್ಟೆಗೆ ಹೋಗಿ ಆ ದಿನಕ್ಕೆ ಬೇಕಾದ ದಿನಸಿ ಸಾಮಗ್ರಿ ತಾರದೇ ಹೋದರೆ ಮನೆಮಂದಿಯೇ ಆತನನ್ನು/ಆಕೆಯನ್ನು ಜಾಣ/ಜಾಣೆ ಎಂದು ಒಪ್ಪುವುದಿಲ್ಲ. ಇನ್ನು ಪ್ರತಿತಿಂಗಳೂ ಸಂಬಳ ಕೊಡುವ ಉದ್ಯೋಗದಾತ ಪರ್ಸೆಂಟೇಜಿಗಿಂತ ಹೊರತಾದ ಅಗತ್ಯ ಕೌಶಲಗಳನ್ನು ಬಯಸುವುದರಲ್ಲಿ ಏನು ಅತಿಶಯ ಅಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಗುರುವಾರ, ಸೆಪ್ಟೆಂಬರ್ 29, 2022

ಸೋಶಿಯಲ್ ಫೋಬಿಯಾ: ಆತ್ಮವಿಶ್ವಾಸವೇ ಅಭಯ

18-24 ಸೆಪ್ಟೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಕೆಲವು ವರ್ಷಗಳ ಹಿಂದಿನ ಘಟನೆ. ಅದು ಕಾಲೇಜಿನ ಹೊಸ ಬ್ಯಾಚಿನ ಮೊದಲನೇ ಕ್ಲಾಸು. ಒಬ್ಬೊಬ್ಬರನ್ನೇ ತರಗತಿಯ ಎದುರಿಗೆ ಕರೆಸಿಕೊಂಡು ಅವರಿಂದ ಸ್ವಪರಿಚಯ ಹೇಳಿಸುತ್ತಿದ್ದೆ. ಕೆಲವರು ಸಲೀಸಾಗಿಯೂ ಇನ್ನು ಕೆಲವರು ಕೊಂಚ ಆತಂಕದಿಂದಲೂ ತಮ್ಮತಮ್ಮ ಪರಿಚಯ ಹೇಳಿಕೊಂಡರು. ಒಬ್ಬಳು ಮಾತ್ರ ಎದುರು ಬರುವುದಕ್ಕೇ ಒಪ್ಪಲಿಲ್ಲ. ಹೇಗೋ ಒತ್ತಾಯ ಮಾಡಿ ಅವಳನ್ನು ಈಚೆ ಕರೆತಂದದ್ದಾಯಿತು. ಮಾತು ಆರಂಭಿಸುವುದಕ್ಕೇ ಒಂದು ನಿಮಿಷ ತೆಗೆದುಕೊಂಡಳು. ಸ್ವಲ್ಪ ಹೊತ್ತಲ್ಲೇ ಏನೂ ಮಾತಾಡಲಾಗದೆ ಪೂರ್ತಿ ಬೆವರಿ ಒದ್ದೆಯಾಗಿ ಗೋಳೋ ಎಂದಳುತ್ತಾ ಅಲ್ಲೇ ಕುಸಿದುಕುಳಿತಳು. ಅವಳನ್ನು ಸಂತೈಸಿ ಅಂದಿನ ತರಗತಿ ಮುಗಿಸಿದ್ದಾಯಿತು.

ಅಚ್ಚರಿಯೆಂದರೆ ತರಗತಿ ಬಳಿಕ ತಾನಾಗಿಯೇ ಆ ಹುಡುಗಿ ವಿಭಾಗಕ್ಕೆ ಬಂದು ಭೇಟಿಯಾದಳು. ತನ್ನ ಕಷ್ಟ ಹೇಳಿಕೊಂಡಳು. ‘ಕ್ಲಾಸ್ ಅಂತ ಅಲ್ಲ ಸರ್, ಎಲ್ಲ ಕಡೆಯೂ ಹೀಗೇ ಆಗುತ್ತೆ. ಹೊಸಬರನ್ನೇನು, ಪ್ರತಿದಿನ ಎದುರಾಗುವವರು ಸಿಕ್ಕರೂ ಆತಂಕ ಆಗಿಬಿಡುತ್ತೆ. ಯಾವುದೋ ಫಂಕ್ಷನಿಗೆ ಹೋದರೂ ಟೆನ್ಷನ್ ಮಾಡ್ಕೋತೀನಿ. ಅದಕ್ಕೆ ಈಗೀಗ ಹೊರಗೆ ಹೋಗೋದನ್ನೇ ನಿಲ್ಲಿಸಿದೀನಿ. ಕಾಲೇಜಿಗೆ ಯಾಕಾದರೂ ಸೇರಿದೆನೋ ಅನ್ನಿಸ್ತಿದೆ’ ಎಂದಳು. 

‘ನಿಧಾನವಾಗಿ ಎಲ್ಲ ಸರಿ ಹೋಗುತ್ತಮ್ಮ. ನೋಡೋಣ. ಈಗ ನನ್ನ ಬಗ್ಗೆ ವಿಶ್ವಾಸ ಬಂದಿದೆ ತಾನೇ? ದಿನಕ್ಕೊಮ್ಮೆ ಬಂದು ಭೇಟಿಯಾಗು. ಏನೇ ಹೇಳಬೇಕು ಅನ್ನಿಸಿದರೂ ಹೇಳು’ ಎಂದು ಒಂದಷ್ಟು ಸಮಾಧಾನ ಹೇಳಿದೆ. ಕೆಲವು ದಿನಗಳ ಬಳಿಕ ‘ನಿನ್ನ ಹವ್ಯಾಸಗಳೇನು? ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಿ?’ ಕೇಳಿದೆ. ‘ಸಣ್ಣಪುಟ್ಟ ಕವಿತೆ ಬರೀತೀನಿ ಸರ್. ಆದ್ರೆ ಈವರೆಗೆ ಯಾರಿಗೂ ಒಮ್ಮೆಯೂ ತೋರಿಸಿಲ್ಲ. ಎಲ್ಲ ಬರೆದು ಒಂದು ಕಡೆ ಇಟ್ಟಿದೀನಿ. ಯಾರು ಏನಂದ್ಕೋತಾರೋ ಅನ್ನೋ ಭಯ’ ಅಂದಳು. ಅವನ್ನೆಲ್ಲ ಅವಶ್ಯ ತಂದು ತೋರಿಸು, ತಪ್ಪಿದ್ದರೂ ನಾನು ತಮಾಷೆ ಮಾಡೋದಿಲ್ಲ ಅಂತ ಭರವಸೆ ತುಂಬಿದೆ.

ಅವಳ ಕವಿತೆಗಳು ನಿಜಕ್ಕೂ ಚೆನ್ನಾಗಿದ್ದವು. ಅವುಗಳಲ್ಲಿ ಹೊಸತನ ಇತ್ತು. ಅವಳನ್ನು ಅಭಿನಂದಿಸಿದೆ. ಬೇರೆ ಕೆಲವು ಕವನ ಸಂಕಲನಗಳನ್ನು ಕೊಟ್ಟು ಓದಲು ಹೇಳಿದೆ. ಅವಳು ಹೆಚ್ಚುಹೆಚ್ಚು ಬರೆದು ತೋರಿಸತೊಡಗಿದಳು. ಕೆಲವು ಕಾಲೇಜು ಮ್ಯಾಗಜಿನ್‌ನಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾದವು. ಸಹಪಾಠಿಗಳಿಂದ, ಬೇರೆ ಅಧ್ಯಾಪಕರಿಂದ ಅವಳಿಗೆ ಪ್ರಶಂಸೆ ಸಿಕ್ಕಿತು. ಆಕೆಯ ವ್ಯಕ್ತಿತ್ವ, ವರ್ತನೆಯಲ್ಲೂ ಕ್ರಮೇಣ ಸುಧಾರಣೆ ಕಾಣುತ್ತಿತ್ತು. ಒಂದು ವರ್ಷ ಕಳೆಯುವ ಹೊತ್ತಿಗೆ ಇದೇ ಹಳ್ಳಿಹುಡುಗಿ ಮೊದಲ ತರಗತಿಯಲ್ಲಿ ಭಯದಿಂದ ನಡುಗಿ ಬಿದ್ದುಹೋದಳಾ ಎಂದು ಅಚ್ಚರಿಯಾಗುವಷ್ಟರ ಮಟ್ಟಿಗೆ ಆಕೆ ಬದಲಾದಳು. ಪದವಿ ಮುಗಿಯುವ ಹೊತ್ತಿಗೆ ಅವಳ ಚೊಚ್ಚಲ ಕವನ ಸಂಕಲನ ಪ್ರಕಟವಾಯಿತು, ಮತ್ತು ಅದಕ್ಕೆ ರಾಜ್ಯಸರ್ಕಾರದ ಬಹುಮಾನ ಕೂಡ ಬಂತು!

ಸಾರ್ವಜನಿಕ ಸನ್ನಿವೇಶಗಳಲ್ಲಿ ಒಂದು ಬಗೆಯ ಭಯ, ಆತಂಕ ಕಾಡುವುದು ಸಾಮಾನ್ಯ. ಇದು ಎಲ್ಲರಿಗೂ ಒಂದಲ್ಲ ಒಂದು ಸಂದರ್ಭ ಎದುರಾಗುವಂಥದ್ದೇ. ಇದಕ್ಕೆ ಹಳ್ಳಿಯವರು, ಪಟ್ಟಣದವರು ಎಂಬ ಭೇದವಿಲ್ಲ. ಗಂಡು-ಹೆಣ್ಣೆAಬ ವ್ಯತ್ಯಾಸ ಇಲ್ಲ. ಇದು ಹದಿಹರೆಯದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾದರೂ, ಆಮೇಲೆಯೂ ಇರಬಾರದು ಎಂದಿಲ್ಲ. ಕೆಲವೊಮ್ಮೆ ಇವು ದೀರ್ಘಕಾಲ ಮುಂದುವರಿಯುತ್ತವೆ. ಇದಕ್ಕೆ ‘ಸಾಮಾಜಿಕ ಭಯ’ (ಸೋಶಿಯಲ್ ಫೋಬಿಯಾ) ಎಂದು ಹೆಸರು. ಈ ದೀರ್ಘಕಾಲೀನ ಉದ್ವಿಗ್ನತೆ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ಮೇಲೆ, ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ತನ್ನಷ್ಟಕ್ಕೇ ಒಂಟಿಯಾಗುತ್ತಾ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವುದೂ ಇದೆ. 

ಸಾಮಾಜಿಕ ಭಯ ಕೇವಲ ನಾಚಿಕೆ ಅಲ್ಲ. ಅದಕ್ಕಿಂತ ಹೆಚ್ಚಾದ ಭಯ. ಗುಂಪುಗಳಲ್ಲಿ ಇರುವ, ಹೊಸಬರನ್ನು ಭೇಟಿಯಾಗುವ, ಸಭೆಯನ್ನು ಎದುರಿಸುವ- ಅಂದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಒಬ್ಬ ವ್ಯಕ್ತಿ ಎದುರಿಸುವ ತೀವ್ರ ಉದ್ವಿಗ್ನತೆ. ತನ್ನ ಪ್ರತೀ ಚಟುವಟಿಕೆಯನ್ನೂ ಯಾರೋ ಗಮನಿಸುತ್ತಿರುತ್ತಾರೆ; ಅವುಗಳಲ್ಲಿ ಅಕಸ್ಮಾತ್ ತಪ್ಪುಗಳಾದರೆ ಎಲ್ಲರೂ ಆಡಿಕೊಳ್ಳುತ್ತಾರೆ ಎಂಬ ಭಾವನೆಯೇ ಈ ಆತಂಕದ ಬೇರು. ಆತ್ಮವಿಶ್ವಾಸವನ್ನೇ ಕುಗ್ಗಿಸುವ ಈ ಭಯದಿಂದಾಗಿ ವ್ಯಕ್ತಿ ಜೀವನದಲ್ಲೇ ಜುಗುಪ್ಸೆಯನ್ನು ತಾಳುವುದೂ ಇದೆ. ‘ನಾನು ಎಲ್ಲಿಯೂ ಸಲ್ಲದವನು, ಯಾವ ಕೆಲಸಕ್ಕೂ ಆಗದವನು, ನಿಷ್ಪ್ರಯೋಜಕ’ ಎಂಬ ಭಾವ ಬಂದರೆ ಅರ್ಧ ಬದುಕು ಮುಗಿದ ಹಾಗೆ. ಎಲ್ಲಿಯವರೆಗೆ ಎಂದರೆ ಇಂತಹ ವ್ಯಕ್ತಿಗಳು ಅಕ್ಕಪಕ್ಕ ಯಾರಾದರೂ ಇದ್ದರೆ ಶೌಚಾಲಯಕ್ಕೆ ಹೋಗಲೂ ಹಿಂಜರಿಯುತ್ತಾರೆ.

ಹೊರಬರುವುದು ಹೇಗೆ?

ಯಾವುದೇ ಸಮಸ್ಯೆಗೆ ಸುಲಭ ಪರಿಹಾರ ಎಂದರೆ ಸಮಸ್ಯೆಯ ಕಾರಣವನ್ನು ಅರ್ಥಮಾಡಿಕೊಳ್ಳುವುದು. ಇದು ಮೂರನೆಯ ವ್ಯಕ್ತಿಗಿಂತಲೂ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ತಾನೇ ಮಾಡುವುದೇ ಸರಿ. ತಾನು ಯಾವ ಸನ್ನಿವೇಶದಲ್ಲಿ ಆತಂಕಕ್ಕೊಳಗಾಗುತ್ತೇನೋ ಅದರ ಬಗ್ಗೆ ಗಾಢವಾಗಿ ಯೋಚನೆ ಮಾಡಿ ಅದರ ನಿರ್ದಿಷ್ಟ ಕಾರಣವನ್ನು ಅರ್ಥಮಾಡಿಕೊಳ್ಳುವುದು ಈ ನಿಟ್ಟಿನಲ್ಲಿ ಮೊದಲನೇ ಹೆಜ್ಜೆ. 

ಋಣಾತ್ಮಕ ಯೋಚನೆಗಳನ್ನು ದೂರವಿಟ್ಟು ತಾನು ಉಳಿದವರಿಗಿಂತ ಕಮ್ಮಿಯಿಲ್ಲ ಎಂಬ ಭಾವನೆಯನ್ನು ಗಟ್ಟಿಮಾಡಿಕೊಳ್ಳುವುದು ಎರಡನೇ ಹೆಜ್ಜೆ. ಯಾರೋ ತನ್ನನ್ನು ಗಮನಿಸುತ್ತಾರೆ, ಅವರು ಆಡಿಕೊಳ್ಳುತ್ತಾರೆ ಎಂಬ ಯೋಚನೆಯಿಂದ ಮೊದಲು ಹೊರಬರಬೇಕು. ಇನ್ನೊಬ್ಬರನ್ನು ಗಮನಿಸುವುದೇ ಎಲ್ಲರ ಕೆಲಸ ಅಲ್ಲ, ಅವರಿಗೆ ತಮ್ಮದೇ ಆದ ಕೆಲಸಗಳಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾರೋ ಅದನ್ನೇ ಮಾಡುತ್ತಾರೆ ಎಂದುಕೊಳ್ಳೋಣ, ಅದರಿಂದ ಅವರ ನೆಗೆಟಿವ್ ವ್ಯಕ್ತಿತ್ವ ಗೊತ್ತಾಗುತ್ತದೆಯೇ ಹೊರತು ನಾವು ಕಳೆದುಕೊಳ್ಳುವಂಥದ್ದೇನೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಇನ್ನೊಂದು ಮುಖ್ಯ ವಿಷಯವೆಂದರೆ, ನಾವು ಯಾವುದೋ ಸಣ್ಣ ತಪ್ಪು ಮಾಡಿದೆವು ಎಂದುಕೊಳ್ಳೋಣ, ಅದನ್ನು ನೋಡಿದವರು ಬಹುತೇಕ ತಾವೂ ಹಿಂದೆ ಅಂತಹದೇ ತಪ್ಪು ಮಾಡಿದ್ದೆವಲ್ಲ ಎಂದು ಒಳಗೊಳಗಿಂದಲೇ ನೆನಪಿಸಿಕೊಳ್ಳುತ್ತಿರುತ್ತಾರೆ.

ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಪ್ರತಿಭೆ, ವಿಶಿಷ್ಟ ಗುಣ ಇದ್ದೇ ಇರುತ್ತದೆ. ಅದನ್ನು ತನಗೆ ತಾನೇ ಪೋಷಿಸಿಕೊಂಡು, ಅದರಿಂದ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಮುಖ್ಯ. ಬರವಣಿಗೆ, ಕ್ರೀಡೆ, ಹಾಡು, ಮಾತುಗಾರಿಕೆ, ಪೈಂಟಿಂಗ್, ಕಸೂತಿ, ಡ್ಯಾನ್ಸ್, ನಾಟಕ- ಯಾವುದಾದರೊಂದು ಕಲೆ ನಮ್ಮೊಳಗೆ ಇರುತ್ತದೆ. ಅದನ್ನು ಗಮನಿಸಿಕೊಂಡು ಗಟ್ಟಿಗೊಳಿಸುವುದೇ ಒಂದು ಪ್ರಮುಖ ಪರಿಹಾರ. 

ಬರೆಯುವ ಕೌಶಲ ಇರುವವರು ಒಂದು ಕವಿತೆ, ಕತೆ, ಲೇಖನವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ, ಎಲ್ಲೋ ಪ್ರಕಟಿಸಿದಾಗ ದೊರೆಯುವ ಪ್ರತಿಕ್ರಿಯೆಯ ಮೌಲ್ಯ, ಅದರಿಂದ ದೊರೆಯುವ ಆತ್ಮವಿಶ್ವಾಸ ಬಹಳ ದೊಡ್ಡದು. ಹಾಡುವ ಹವ್ಯಾಸ ಇರುವವರು ನಾಕು ಮಂದಿಯ ಮುಂದೆ ಹಾಡಿದಾಗ ದೊರೆಯುವ ಒಂದು ಸಣ್ಣ ಪ್ರಶಂಸೆ ಅಪೂರ್ವ ಬದಲಾವಣೆ ತರಬಲ್ಲದು. ಆಟೋಟ, ಪ್ರದರ್ಶನ ಕಲೆ- ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಮನ್ನಣೆಯನ್ನೂ, ಪ್ರತಿಫಲವಾಗಿ ಧೈರ್ಯವನ್ನೂ ತಂದುಕೊಡುತ್ತದೆ. ಪ್ರೇರಣಾದಾಯಿ ಪುಸ್ತಕಗಳ ಓದೂ ಈ ನಿಟ್ಟಿನಲ್ಲಿ ಸಹಕಾರಿ.

ಆತ್ಮವಿಶ್ವಾಸ ಎಂಬುದು ಯಾರೋ ಬೆಂಕಿಕಡ್ಡಿ ಗೀರಿ ಹಚ್ಚಲಿ ಎಂದು ಕಾಯುವ ದೀಪ ಅಲ್ಲ; ಸ್ವಯಂ ಬೆಳಗಬೇಕಾದ ಮಿಂಚುಹುಳ. 

- ಸಿಬಂತಿ ಪದ್ಮನಾಭ ಕೆ.ವಿ.

ಬುಧವಾರ, ಸೆಪ್ಟೆಂಬರ್ 14, 2022

ಅಜ್ಜ ಅಜ್ಜಿ ಇರಲವ್ವ ಮನೆಯಲ್ಲಿ...

11 ಸೆಪ್ಟೆಂಬರ್ 2022ರ 'ವಿಜಯ ಕರ್ನಾಟಕ' ಭಾನುವಾರದ ಪುರವಣಿಯಲ್ಲಿ ಪ್ರಕಟವಾದ ಲೇಖನ

ಅಜ್ಜ-ಅಜ್ಜಿ ಅಂದ್ರೆ ನಿಮಗೇಕೆ ಇಷ್ಟ? ಹಾಗೊಂದು ಪ್ರಶ್ನೆಯನ್ನು ಮಕ್ಕಳ ಮುಂದಿಟ್ಟೆ. ಹೆಚ್ಚುಕಮ್ಮಿ ಒಂದೇ ಅರ್ಥದ ಉತ್ತರ ಸರಕ್ಕನೆ ಬಂತು: ‘ಅವರು ನಮಗೆ ಬಯ್ಯೋದೇ ಇಲ್ಲ’. ಮಕ್ಕಳನ್ನು ಬಯ್ಯದೆಯೂ ತಿದ್ದಿತೀಡುವ ಕಲೆ ಅಜ್ಜ-ಅಜ್ಜಿಯಂದಿರಿಗೆ ಕರತಲಾಮಲಕ. ಅದಕ್ಕೇ ಅವರು ಗ್ರ್ಯಾಂಡ್ ಪೇರೆಂಟ್ಸ್ ಮಾತ್ರವಲ್ಲ ಗ್ರೇಟ್‌ಪೇರೆಂಟ್ಸ್ ಕೂಡ.

ಭೂಮಿಯ ಮೇಲೆ ನಿಮ್ಮನ್ನು ಬಯ್ಯದೆ ಇರುವ ಏಕೈಕ ಜೀವಿಗಳೆಂದರೆ ಅಜ್ಜ-ಅಜ್ಜಿ ಮಾತ್ರ. ಅದರರ್ಥ ಅವರು ನಿಮ್ಮನ್ನು ಟೀಕೆ ಮಾಡುವುದೇ ಇಲ್ಲ ಎಂದಲ್ಲ. ಕಹಿಗುಳಿಗೆಗಳನ್ನೂ ಅಕ್ಕರೆಯೆಂಬ ಸಕ್ಕರೆ ಪಾಕದಲ್ಲಿ ಅದ್ದಿ ನುಂಗಿಸುವುದು ಹೇಗೆಂದು ಅವರಿಗೆ ಗೊತ್ತು. ಅದು ಬಹಳ ಮುಖ್ಯ ಕೂಡ. ಬರೀ ಸಕ್ಕರೆ ಪಾಕ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ. ಅಜ್ಜಿ ಸಾಕಿದ ಮಗು ಬೊಜ್ಜಕ್ಕೂ ಬಾರ ಅಂತೊಂದು ಗಾದೆ ಬೇರೆ ಉಂಟಲ್ಲ! ತೀರಾ ಮುಚ್ಚಟೆಯಿಂದ ಬೆಳೆದ ಮಗು ನಿಷ್ಪ್ರಯೋಜಕ ಆಗುತ್ತದೆ ಎಂಬ ಧ್ವನಿ ಅಷ್ಟೇ.

ಅದೊಂದು ಕಾಲ ಇತ್ತು: ಅಜ್ಜನ ಮನೆ ಎಂಬುದು ಸರ್ವತಂತ್ರ ಸ್ವಾತಂತ್ರ್ಯಕ್ಕೊಂದು ಪರ್ಯಾಯ ಪದ. ಅಜ್ಜನ ಮನೆಗೆ ಹೋಗುವ ಕಲ್ಪನೆಯಂತೂ ಆ ಸ್ವಾತಂತ್ರ್ಯದೆಡೆಗೊಂದು ಮಹಾ ನಡಿಗೆ. ಕೆಂಪು ಬಸ್ಸಿನಲ್ಲಿ ಕಿಟಕಿ ಪಕ್ಕ ಕೂರುವ, ಬಿರುಬಿಸಿಲಿನ ಮಧ್ಯೆ ಐವತ್ತು ಪೈಸೆಯ ಐಸ್‌ಕ್ಯಾಂಡಿ ಸವಿಯುವ, ಅಜ್ಜಿ ಮಾಡಿಟ್ಟ ಕುರುಕಲುಗಳನ್ನು ಹಗಲೂ ರಾತ್ರಿ ಮೆಲ್ಲುವ ಆ ಕಲ್ಪನೆಯೇ ಬಲು ರೋಚಕ. ಕನಿಷ್ಟ ಎರಡು ಮೂರು ತಿಂಗಳಿನಿಂದ ‘ದೊಡ್ಡರಜೆ’ಗೆ ಕಾಯುವ, ಅಜ್ಜನ ಮನೆಗೆ ಹೋಗಲು ಇನ್ನೆಷ್ಟು ದಿನ ಬಾಕಿ ಎಂದು ದಿನಾ ರಾತ್ರಿ ಕೌಂಟ್‌ಡೌನ್ ಮಾಡುವ, ಇಂಥಾ ದಿನವೇ ಹೋಗುವುದೆಂದು ಅಮ್ಮನ ಬಾಯಿಂದ ಅಧಿಕೃತವಾಗಿ ಹೇಳಿಸುವ, ಅದಕ್ಕೆ ಪೂರ್ವತಯಾರಿ ರೂಪದಲ್ಲಿ ಅಪ್ಪನನ್ನು ಒಪ್ಪಿಸುವ- ಆ ಕಾಲವಂತೂ ಒಂದು ಕನಸಿನ ಲೋಕ.

ಅಲ್ಲಿಗೆ ತಲುಪಿದ ಮೇಲಂತೂ ಮೊಮ್ಮಕ್ಕಳದ್ದೇ ಸಾಮ್ರಾಜ್ಯ. ಅಲ್ಲಿನ ಆಟಾಟೋಪಗಳಿಗೆ ಲಂಗುಲಗಾಮಿಲ್ಲ. ಯಾಕೆಂದು ಗೊತ್ತಲ್ಲ- ಅಜ್ಜನಿಗೆ ಸಿಟ್ಟು ಬರುವುದೇ ಇಲ್ಲ, ಅಜ್ಜಿ ಬಯ್ಯವುದೇ ಇಲ್ಲ. ತೋಟ ಸುತ್ತು, ಗುಡ್ಡ ಹತ್ತು, ತೋಡಿನಲ್ಲಿ ಓಡು, ಬೇಕಾದ್ದು ಮಾಡು... ಅಜ್ಜಅಜ್ಜಿ ಗದರುವ ಕ್ರಮವೇ ಇಲ್ಲ. ರಾತ್ರಿಯಾದರೂ ‘ತಡವಾಯ್ತು ಮಲಕ್ಕೊಳ್ರೋ’ ಎಂದು ಎಚ್ಚರಿಸಿಯಾರು; ಬೆಳಗ್ಗಂತೂ ಎಬ್ಬಿಸುವ ಪ್ರಶ್ನೆಯೇ ಇಲ್ಲ. ‘ಪಾಪ ಮಕ್ಳು, ರಜೆ ಅಲ್ವಾ, ಸ್ವಲ್ಪ ಹೊತ್ತು ಮಲಕ್ಕೊಳ್ಳಿ...’ ಹಾಗೆ ಹೇಳದಿದ್ದರೆ ಆಕೆ ಅಜ್ಜಿಯೇ ಅಲ್ಲ.

ಅಜ್ಜಿಗಂತೂ ದಿನವಿಡೀ ಬಿಡುವೇ ಇಲ್ಲ. ಆಕೆಗೆ ತರಹೇವಾರಿ ತಿಂಡಿತಿನಿಸು ಮಾಡಲು ಗೊತ್ತಿರುವುದೇ ಇದಕ್ಕೆ ಕಾರಣ. ಅಜ್ಜಿಗೆ ಗೊತ್ತಿಲ್ಲದ ತಿಂಡಿ ಇಲ್ಲ, ಅಜ್ಜನಿಗೆ ಗೊತ್ತಿಲ್ಲದ ಕಥೆ ಇಲ್ಲ. ಅಜ್ಜನ ಕಥೆ ಕೇಳುವುದಕ್ಕೆ ಹಗಲು-ರಾತ್ರಿ ಎಂಬ ಭೇದಗಳೂ ಇಲ್ಲ. ರಾತ್ರಿ ಹೇಗೂ ಬ್ಯಾಕ್ ಟು ಬ್ಯಾಕ್ ಕಥೆ ಇದೆ, ಹಗಲು ಹೆಚ್ಚುವರಿ ಕಥೆ ಹೇಳಿಸಿಕೊಳ್ಳುವುದು ರಜೆಗೆ ಬೋನಸ್. ಈ ಅಜ್ಜ ಎಂಬುದೊಂದು ಕಥೆಗಳ ಮಹಾಕಣಜ. ತೆಗೆದಷ್ಟೂ ಮುಗಿಯದ ಅಕ್ಷಯಪಾತ್ರೆ ಅದು. ಕಥೆ ತೆಗೆಯುತ್ತಾ ಹೋದರೆ ಅಜ್ಜನ ಜೋಳಿಗೆ ಬರಿದಾಗುವುದಿಲ್ಲ, ಕಥೆ ಹೇಳಿಹೇಳಿ ಅಜ್ಜನಿಗೆ ಬೇಜಾರೂ ಬರುವುದಿಲ್ಲ. ನಿನ್ನೆ ಹೇಳಿದ ಕಥೆಯನ್ನೇ ಇಂದು ಅಜ್ಜ ಮತ್ತೊಮ್ಮೆ ಹೇಳಿದರೆ ಮೊಮ್ಮಕ್ಕಳಿಗೂ ಆಕ್ಷೇಪ ಇಲ್ಲ. ಏಕೆಂದರೆ ಅಜ್ಜನ ಕಥೆಯೆಂದರೆ ಪ್ರತಿದಿನ ಹೊಸ ಲೋಕವನ್ನು ಕಟ್ಟಿನಿಲ್ಲಿಸುವ ವರ್ಣರಂಜಿತ ಬಯಲಾಟ. 

‘ನೋಡಿ ನಿರ್ಮಲ ಜಲಸಮೀಪದಿ ಮಾಡಿಕೊಂಡರು ಪರ್ಣಶಾಲೆಯ...’ ಅಂತ ಅಜ್ಜ ಪದ್ಯ ಸಮೇತ ಕಥೆ ಆರಂಭಿಸಿದರೆ ಅಲ್ಲಿ ರಾಮ-ಸೀತೆ-ಲಕ್ಷ್ಮಣರೆಲ್ಲ ಥಟ್ಟನೆ ಪ್ರತ್ಯಕ್ಷ. ಕಥೆ ಮುಂದಕ್ಕೆ ಹೋದಂತೆ ವಾನರಸೇನೆಯೇನೂ ಪ್ರತ್ಯೇಕ ಬರುವ ಅಗತ್ಯ ಇಲ್ಲ. ಅಜ್ಜನ ಕೋಣೆಯೇ ಕಿಷ್ಕಿಂಧೆಯಾಗಿಯೂ, ಸುತ್ತಮುತ್ತಲೆಲ್ಲ ಹತ್ತಿಹಾರುವವರು ಈ ಸೇನೆಯ ಪಟುಭಟರಾಗಿಯೂ ಬದಲಾಗುವುದುಂಟು. ಆದರೆ ಕಥೆ ಮಗ್ಗುಲು ಬದಲಾಯಿಸಿ, ಚಂದ್ರಮತಿಯ ಪ್ರಲಾಪಕ್ಕೋ, ದಮಯಂತಿಯ ಶೋಕಕ್ಕೋ ಹೊರಳಿಕೊಂಡರೆ ವಾನರವೀರರೆಲ್ಲ ಮತ್ತೆ ಎಳೆಯ ಮಕ್ಕಳಾಗಿ ಬದಲಾಗಿ ಅಜ್ಜನ ಜೊತೆ ಕಣ್ಣೀರು ಮಿಡಿಯುವುದೂ ಉಂಟು.

ಏತನ್ಮಧ್ಯೆ ಅಜ್ಜನೂ ಮೊಮ್ಮಗುವಾಗಿ ಅವತರಿಸುವ ಕ್ರಮವೂ ಉಂಟು. ಕಥೆ ಹೇಳಬೇಕೆಂದರೆ ವೀಳ್ಯಕ್ಕೆ ಬೇಕಾದ ಅಡಿಕೆಯನ್ನು ಗುದ್ದಿ ಸಿದ್ಧಪಡಿಸುವ, ಅಜ್ಜಿಗೆ ಸಿಟ್ಟು ಬರದಂತೆ ಕಾಫಿಗೆ ಡಬಲ್ ಸಕ್ಕರೆ ಹಾಕಿಸಿಕೊಂಡು ಬರುವ, ಸಮಯಕ್ಕೆ ಸರಿಯಾಗಿ ರೇಡಿಯೋ ನ್ಯೂಸು ಕೇಳಿಸುವ ಸಣ್ಣಪುಟ್ಟ ಲೋಕೋಪಕಾರಿ ಕೆಲಸ ಮಾಡಬೇಕಾಗುವ ಒತ್ತಡ ಅಜ್ಜನಿಂದ ಬಂದರೆ ಅಚ್ಚರಿಯಿಲ್ಲ. ಹಾಗೆಂದು ಕಥೆ ಹೇಳು ಅಂದಾಕ್ಷಣ ಕಥೆ ಆರಂಭಿಸುವ ಪಾಪದ ಅಜ್ಜ ಅವರಲ್ಲ. ಸಾಕಷ್ಟು ಕಾಡಿಸದೆ ಪೀಡಿಸದೆ ಅವರಿಂದ ಕಥೆ ಹೊರಡದು. ‘ನಿಂಗೆ ಕೇಳಿದ ಕಥೆ ಬೇಕೋ ಮಗಾ, ಕೇಳದ ಕಥೆ ಬೇಕಾ?’ ಅಜ್ಜನ ಪ್ರಶ್ನೆ. ‘ನಂಗೆ ಕೇಳದ ಕಥೆ ಬೇಕು ಅಜ್ಜ’ ಮೊಮ್ಮಕ್ಕಳ ಕೌತುಕ. ‘ಕೇಳದ ಕಥೆಯಲ್ವ, ಅದು ಕೇಳಿಸ್ತಾ ಇಲ್ಲ, ನಾನು ಹೇಳ್ತಾ ಇದ್ದೇನೆ’ ಅಜ್ಜ ಪೂರ್ತಿ ಸೈಲೆಂಟು. ‘ಓಹೋ ಹಾಗಾ, ಹಾಗಾದ್ರೆ ಕೇಳಿದ ಕಥೆ ಹೇಳು’ ಮೊಮ್ಮಕಳ ಜಾಣ ಪ್ರಶ್ನೆ. ‘ಕೇಳಿದ ಕಥೆಯಲ್ವ, ಮತ್ತೆ ಪುನಃ ಯಾಕೆ ಹೇಳ್ಬೇಕು’ ಅಜ್ಜ ಇನ್ನಷ್ಟು ಇಂಟೆಲಿಜೆAಟು. ಅಂತೂ ಅಜ್ಜನ ಕಥಾವಾಹಿನಿ ಆರಂಭವಾಗಬೇಕೆAದರೆ ಹತ್ತುಹಲವು ಸರ್ಕಸ್ಸು ಬೇಕು. ಒಮ್ಮೆ ಆರಂಭವಾದರೆ ಮಾತ್ರ ಅದು ಎಂದೂ ಮುಗಿಯದ ನಿರಂತರ ನೇತ್ರಾವತಿ.

ಬದಲಾಯ್ತು ಕಾಲ:

ಮತ್ತೆ ಬಂದೀತಾ ಅಂತಹದೊಂದು ಕಾಲ? ಆ ಪ್ರಶ್ನೆಯ ಜತೆಗೆ ಒಂದು ವಿಸ್ಮಯವೂ, ಅದರ ಬೆನ್ನಿಗೊಂದು ವಿಷಾದವೂ ಹಿಂಬಾಲಿಸೀತು. ಮನೆಯಲ್ಲೇ ಅಜ್ಜ-ಅಜ್ಜಿಯರಿರುವುದಿತ್ತು, ಅವರು ಕಾಲವಾಗಿದ್ದರೆ ಅಮ್ಮನ ತವರಿನಲ್ಲಾದರೂ ಅವರ ಒಟನಾಡ ಇರುತ್ತಿತ್ತು. ಅವರ ಸಾಮೀಪ್ಯ ನೀಡುವ ಬಿಸುಪು, ಭದ್ರತೆಯ ಬುತ್ತಿ, ಭಾವಪೋಷಣೆ ಅನ್ಯತ್ರ ಅಲಭ್ಯ.

ಬದುಕು ಬದಲಾಗಿ ಹೋಗಿದೆ. ಅವಿಭಕ್ತ ಕುಟುಂಬಗಳು ಸಣ್ಣಸಣ್ಣ ತುಣುಕುಗಳಾಗಿ ವಿಘಟಿಸಿವೆ. ಗಂಡ-ಹೆಂಡತಿ ಇಬ್ಬರಿಗೂ ಉದ್ಯೋಗ ಇದೆ. ಮನೆಯಲ್ಲಿ ಅಕಸ್ಮಾತ್ ಬೇರೆ ಸದಸ್ಯರಿದ್ದರೆ ಅವರಿಗೂ ಓದು, ಆಫೀಸು ಇದೆ. ಯಾರಿಗೂ ಬಿಡುವಿಲ್ಲ. ಅಜ್ಜ-ಅಜ್ಜಿ ಇದ್ದರೂ ಅವರು ಊರಲ್ಲಿದ್ದಾರೆ. ಅವರು ತಮ್ಮ ಜಮೀನನ್ನು, ಅದರೊಂದಿಗಿನ ಹಳೆಯ ನೆನಪುಗಳನ್ನು ಬಿಟ್ಟು ಬರಲಾರರು. ಬಂದರೂ ಪಟ್ಟಣದ ಗದ್ದಲದ ಮಧ್ಯೆ ಹೆಚ್ಚು ದಿನ ಉಳಿಯಲಾರರು. ಉಳಿದರೂ ನೆಮ್ಮದಿಯಿಂದ ಇರಲಾರರು. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಎರಡು ದಿನ ಹೆಚ್ಚು ಉಳಿದಾರು ಅಷ್ಟೇ. ಹೆಚ್ಚುತ್ತಿರುವ ವೃದ್ಧಾಶ್ರಮಗಳ ಬಗ್ಗೆ ಮಾತನಾಡದಿರುವುದೇ ಒಳ್ಳೆಯದು.

ಅನೇಕ ಸಲ ಮನೆಯಲ್ಲಿ ವಯಸ್ಸಾದ ಹಿರಿಯರಿದ್ದರೆ ಉದ್ಯೋಗಸ್ಥ ದಂಪತಿಗೆ ಕಿರಿಕಿರಿ. ‘ಹಿರಿಯರಿದ್ದರೆ ಮಕ್ಕಳನ್ನು ನೋಡಿಕೊಳ್ಳುವುದಕ್ಕಾದರೂ ಆಗುತ್ತದೆ’ ಎಂಬೊಂದು ಕಾಲ ಇತ್ತು. ಈಗ ಅದೂ ಹೋಗಿದೆ. ಎಲ್ಲರ ಕೈಯಲ್ಲೂ ದುಡ್ಡಿದೆ. ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ. ಸಂಬಳ ಕೊಟ್ಟರೆ ಆಯಾ ಬರುತ್ತಾಳೆ. ಮಗುವನ್ನು ಪ್ರೊಫೆಶನಲ್ ಆಗಿ ನೋಡಿಕೊಳ್ಳುತ್ತಾಳೆ. ಆಕೆ ಮಗುವಿನ ಅಜ್ಜಿ ಆಗಬಲ್ಲಳಾ?

ದುಡಿಯುವ ದಂಪತಿ ಮಧ್ಯೆ ನಾವು ಹೋಗಿ ತೊಂದರೆ ಯಾಕೆ, ಕೈಕಾಲಿಗೆ ಬಲ ಇರುವಷ್ಟು ದಿನ ನಮ್ಮಷ್ಟಕ್ಕೇ ಇರೋಣ- ಎಂಬುದು ಅಜ್ಜ-ಅಜ್ಜಿಯ ವರಸೆ. ಕೈಕಾಲು ಬಿದ್ದಮೇಲೆ ಮಕ್ಕಳ ಮನೆಗೆ ಹೋಗಿ ಮಾಡಬೇಕಿರುವುದಾದರೂ ಏನು? ಆರೋಗ್ಯವಾಗಿದ್ದಾಗಲೇ ಎಲ್ಲರೂ ಜತೆಯಾಗಿದ್ದರೆ ಮೊಮ್ಮಕ್ಕಳಿಗಾದರೂ ಅನುಕೂಲ. ಈಗಿನ ಮಕ್ಕಳಿಗೋ ಬಾಲ್ಯವೇ ಇಲ್ಲ, ಎರಡು ವರ್ಷವಾದರೆ ಅವರ ದಿನಚರಿಯೇ ಬದಲು: ಪ್ಲೇಹೋಮು, ನರ್ಸರಿ, ಶಾಲೆ, ಇತ್ಯಾದಿ. ಆ ವೇಳೆಗೆ ಅಜ್ಜ-ಅಜ್ಜಿ ದೊರೆತರೂ ಅವರು ಬಹುಪಾಲು ಅಪರಿಚಿತರಾಗಿಯೇ ಉಳಿಯುವುದು ಸಿದ್ಧ. ಮೊದಲೇ ಆಧುನಿಕತೆಯ ರಂಗಿನಾಟ: ತಾತ-ಮೊಮ್ಮಕ್ಕಳ ನಡುವೆ ತಲೆಮಾರಿನ ಅಂತರ ಅಷ್ಟೇ ಅಲ್ಲ, ಶತಮಾನಗಳ ಅಂತರ. ಮಕ್ಕಳ ಆಹಾರ-ವಿಹಾರ, ಉಡುಗೆ-ತೊಡುಗೆ, ವೇಷ-ಭಾಷೆ ಎಲ್ಲವೂ ಭಿನ್ನ. ಮಗುವಿಗೆ ಮನೆಭಾಷೆ ಬರದು, ಅಜ್ಜ-ಅಜ್ಜಿಗೆ ಇಂಗ್ಲೀಷು ತಿಳಿಯದು. ಮನೆಯೊಳಗಿನ ದೀಪಗಳೆಲ್ಲ ದ್ವೀಪಗಳಾಗಿ ಬೆಳೆಯುವ ಸಂಕಟ ಅವರಿಗೆ. ಆದರೆ ಅದನ್ನು ಹೇಳಿಕೊಳ್ಳಲಾರರು. 

ಇಷ್ಟರ ಮಧ್ಯೆ, ಯಾರ ಮನೆಯಲ್ಲಾದರೂ ಅಜ್ಜ-ಅಜ್ಜಿ ಇದ್ದರೆ ಅದೊಂದು ಅದ್ಭುತ ವಿದ್ಯಮಾನ. ಅವರೆಲ್ಲರೂ ಪರಸ್ಪರ ಹೊಂದಾಣಿಕೆಯಿಂದ ಇದ್ದರೆ ಮಕ್ಕಳಿಗೆ ಅದಕ್ಕಿಂತ ದೊಡ್ಡ ವರಪ್ರಸಾದ ಇಲ್ಲ. ಭಾರತೀಯ ಸಮಾಜದಲ್ಲಿ ಕುಟುಂಬ ಒಂದು ಘಟಕ ಮಾತ್ರ ಅಲ್ಲ, ಸಂಸ್ಥೆ ಕೂಡ. ಅಜ್ಜಿ-ತಾತ ಈ ಮಹಾವೃಕ್ಷದ ತಾಯಿಬೇರು. ಯಾವ ಮನೆಯಲ್ಲಿ ಅಜ್ಜ-ಅಜ್ಜಿ ಇದ್ದಾರೋ ಆ ಮನೆಯ ಮಕ್ಕಳಲ್ಲಿರುವ ಭದ್ರತೆಯ ಭಾವ, ಕೌಟುಂಬಿಕ ಮೌಲ್ಯಗಳು, ಸಂಸ್ಕಾರ, ಪರಸ್ಪರ ನಂಬಿಕೆ, ಸಹಕಾರ ಪ್ರವೃತ್ತಿ, ಸಮಷ್ಟಿ ಪ್ರಜ್ಞೆ, ಹಿರಿಯರ ಕುರಿತಾದ ಗೌರವ- ಉಳಿದ ಮಕ್ಕಳಿಗಿಂತ ಒಂದು ಹಿಡಿ ಹೆಚ್ಚೇ. 

‘ಪ್ರತೀ ತಲೆಮಾರೂ ತನ್ನ ತಂದೆಯವರ ವಿರುದ್ಧ ದಂಗೆಯೇಳುತ್ತದೆ, ಆದರೆ ತಾತಂದಿರೊಂದಿಗೆ ಸ್ನೇಹವನ್ನು ಬಯಸುತ್ತದೆ’ ಎಂಬ ಲೂಯಿ ಮನ್‌ಫೋರ್ಡ್ ಮಾತಿದೆ. ನಮ್ಮ ಹೊಸ ತಲೆಮಾರಿಗೆ ಅವರ ತಾತಂದಿರು ಮಾದರಿಯಾಗಬಲ್ಲರು. ಆದರೆ ಅದಕ್ಕೆ ಅವಕಾಶವನ್ನು ನಾವು ಒದಗಿಸಿಕೊಡಬೇಕಷ್ಟೇ. ‘ಒಬ್ಬ ಮನುಷ್ಯನನ್ನು ನೀವು ನಾಗರಿಕನನ್ನಾಗಿ ಬೆಳೆಸಬೇಕೆಂದರೆ ಆತನ ಅಜ್ಜನಿಂದ ಆ ಕೆಲಸವನ್ನು ಆರಂಭಿಸಿ’ ಎಂದು ವಿಕ್ಟರ್ ಹ್ಯೂಗೋ ಕೂಡ ಇದೇ ಅರ್ಥದಲ್ಲಿ ಹೇಳಿದ್ದು.

‘ಅಜ್ಜ-ಅಜ್ಜಿಯರ ದಿನ’ ಎಂಬ ಈ ಆಚರಣೆ ಮೊದಲು ಆರಂಭವಾಗಿದ್ದು ಅಮೇರಿಕದಲ್ಲಿ- ಸುಮಾರು ಅರ್ಧ ಶತಮಾನದ ಹಿಂದೆ. ಅಲ್ಲಿ ಆಗಲೇ ಅದರ ಅನಿವಾರ್ಯತೆ ಇತ್ತು. ಈಗ ನಾವೂ ಅಂತಹದೊಂದು ದಿನವನ್ನು ನೆನಪಿಸಿಕೊಳ್ಳುವ ಸಂದರ್ಭ ಬಂದಿದೆ ಎಂದರೆ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ನಾವೂ ಪಶ್ಚಿಮದ ಅಂಚಿಗೆ ಸರಿದಿದ್ದೇವೆ ಎಂದು ಅರ್ಥ. ಕಾಲದ ಓಟದಲ್ಲಿ ಇದೆಲ್ಲ ಅನಿವಾರ್ಯ, ತಡೆಯುವುದಕ್ಕಾಗದು. ಆದರೆ ಇದನ್ನು ನಾವು ಎಚ್ಚರದಿಂದಲೂ ಜವಾಬ್ದಾರಿಯಿಂದಲೂ ಗಮನಿಸಬೇಕು. ಏಕೆಂದರೆ, ಮನೆಯ ಹಿರಿಜೀವಗಳು ಕೇವಲ ಭೂತಕಾಲದ ಧ್ವನಿಗಳಲ್ಲ, ಭವಿಷ್ಯದ ಬಾಗಿಲುಗಳು ಕೂಡ.

- ಸಿಬಂತಿ ಪದ್ಮನಾಭ ಕೆ. ವಿ. 

ಮಂಗಳವಾರ, ಸೆಪ್ಟೆಂಬರ್ 13, 2022

ಯಕ್ಷಗಾನಕ್ಕೆ ಕಾಲಮಿತಿ: ಪರಿವರ್ತನೆ ಎಂಬ ಕಾಲಧರ್ಮ

11 ಸೆಪ್ಟೆಂಬರ್ 2022ರ 'ಉದಯವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.

ಯಕ್ಷಗಾನ ನಿರಂತರ ಪರಿಷ್ಕರಣೆಗೆ ಒಳಗಾಗುತ್ತಾ ಬಂದಿರುವ ಕಲೆ. ಅದರ ವಸ್ತು, ವಿನ್ಯಾಸ, ರಂಗಭಾಷೆ, ವೇಷಭೂಷಣ, ಪ್ರಸ್ತುತಿ- ಎಲ್ಲ ಆಯಾಮಗಳಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ, ಆಗುತ್ತಲೇ ಇವೆ. ಇವುಗಳಲ್ಲಿ ಕೆಲವನ್ನು ಪ್ರೇಕ್ಷಕರು, ಕಲಾವಿದರು, ವಿದ್ವಾಂಸರು ಒಪ್ಪಿಕೊಂಡರು, ಇನ್ನು ಕೆಲವನ್ನು ಟೀಕಿಸಿದರು. ಕಾಳುಗಳು ಉಳಿದವು; ಜಳ್ಳುಗಳು ತೂರಿಹೋದವು. ಇದು ಕಾಲಧರ್ಮ.

ಯಾವುದೇ ಕಲೆಯನ್ನು ಒಂದು ಸಜೀವ ಅಸ್ತಿತ್ವವೆಂದು ಪರಿಗಣಿಸಬಹುದಾದರೆ, ಅದರಲ್ಲಿ ಬದಲಾವಣೆ ಸಹಜ. ಕಲೆ ಬದುಕಿನ ಭಾಗ. ಜೀವನ ಬೇರೆ ಅಲ್ಲ, ಕಲೆ ಬೇರೆ ಅಲ್ಲ. ಬದುಕಿನ ಸೃಜನಶೀಲ ಭಾಗವೇ ಕಲೆ. ಬದುಕು ಶತಮಾನಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇಲ್ಲ. ಅಂದಮೇಲೆ ಕಲೆಯೂ ಯಥಾಸ್ಥಿತಿಯಲ್ಲಿರುವುದು ಸಾಧ್ಯವಿಲ್ಲ. ಅದೂ ಕಾಲಾನುಕ್ರಮದಲ್ಲಿ ಬಯಸುವ ಬದಲಾವಣೆಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ ಈ ಪರಿಷ್ಕಾರಗಳು ಕಲೆಯ ಉನ್ನತಿಗೆ ಪೂರಕವಾಗಿರಬೇಕು ಎಂಬುದಷ್ಟೇ ಕಲೋಪಾಸಕರ ಆಗ್ರಹ.

ಯಕ್ಷಗಾನ ಕ್ಷೇತ್ರದಲ್ಲಿ ಯಾವುದೇ ಹೊಸ ವಿಚಾರ ಪ್ರಸ್ತಾಪವಾದಾಗಲೂ ಚರ್ಚೆ ಸಾಮಾನ್ಯ. ಅದಕ್ಕೆ ಕಾರಣ ಯಕ್ಷಗಾನಕ್ಕಿರುವ ದೊಡ್ಡಸಂಖ್ಯೆಯ ಪ್ರೇಕ್ಷಕರು ಮತ್ತು ಯಕ್ಷಗಾನದ ಕುರಿತು ಅವರಲ್ಲಿರುವ ವಿಶೇಷ ಅಭಿಮಾನ. ಮೂಲತಃ ಆರಾಧನಾ ಕಲೆಯಾಗಿದ್ದ ಯಕ್ಷಗಾನ ಕಾಲಕ್ರಮೇಣ ಮುಕ್ತತೆಗೆ ತೆರೆದುಕೊಂಡರೂ ಬಹುಪಾಲು ಪ್ರೇಕ್ಷಕರ ಮನಸ್ಸಿನಲ್ಲಿ ಅದರ ಕುರಿತೊಂದು ಪೂಜ್ಯ ಭಾವವೇ ಇದೆ. ಅವರು ಅದನ್ನೊಂದು ಕೇವಲ ಪ್ರದರ್ಶನ ಕಲೆಯಾಗಿ ಒಪ್ಪಿಕೊಳ್ಳಲಾರರು. ಯಕ್ಷಗಾನಕ್ಕಿರುವ ಜಾನಪದ ಸ್ವರೂಪವೂ ಇದಕ್ಕಿರುವ ಪ್ರಮುಖ ಕಾರಣ.

ಕಟೀಲು ಮೇಳಗಳು ಮುಂದಿನ ತಿರುಗಾಟದಿಂದ ಕಾಲಮಿತಿ ಪ್ರದರ್ಶನಗಳನ್ನು ನೀಡಲಿವೆ ಎಂದು ಇತ್ತೀಚೆಗೆ ಘೋಷಿಸಿದಲ್ಲಿಂದ ಯಕ್ಷಗಾನ ವಲಯದಲ್ಲಿ ಈ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕಾಲಮಿತಿಯ ವಿಚಾರ ಯಕ್ಷಗಾನಕ್ಕೆ ಹೊಸದೇನಲ್ಲ. ಕಾಲಮಿತಿಯ ಪರಿಕಲ್ಪನೆಯನ್ನು 1955ರಷ್ಟು ಹಿಂದೆಯೇ 'ಕಾಂಚನ ಮೇಳ' ಜಾರಿಗೆ ತಂದಿತೆಂದು ನೆನಪಿಸಿಕೊಳ್ಳುತ್ತಾರೆ ಯಕ್ಷಗಾನ ಕಲಾವಿದ-ಸಂಘಟಕ ಉಜಿರೆ ಅಶೋಕ ಭಟ್ಟರು. 1985ರಲ್ಲಿ ಕೆರೆಮನೆ ಮೇಳವೂ ಕಾಲಮಿತಿಯನ್ನು ಅಳವಡಿಸಿಕೊಂಡಿತು. ಹೊಸ ಸಹಸ್ರಮಾನದಲ್ಲಿ ಹೊಸನಗರ ಮೇಳ ಕಾಲಮಿತಿಯ ಪ್ರದರ್ಶನಗಳನ್ನು ಆರಂಭಿಸಿತು. ಹೊಸಕಾಲದ ವೃತ್ತಿಪರ ಮೇಳಗಳ ಮಟ್ಟಿಗೆ ಇದೊಂದು ಕ್ರಾಂತಿಕಾರಕ ಹೆಜ್ಜೆಯೇ ಆಗಿತ್ತು.  ಇದರಿಂದ ಪ್ರೇರಿತವಾದ ಧರ್ಮಸ್ಥಳ ಮೇಳವು 2015ರಲ್ಲಿ ಕಾಲಮಿತಿ ಪ್ರದರ್ಶನಗಳನ್ನು ನೀಡಲಾರಂಭಿಸಿತು. ಮುಂದೆ ಹನುಮಗಿರಿ, ಪಾವಂಜೆ ಮೊದಲಾದ ಮೇಳಗಳೂ ಕಾಲಮಿತಿಯ ಪ್ರದರ್ಶನಗಳಿಗೆ ಒಗ್ಗಿಕೊಂಡವು. ಆದರೆ ಕಟೀಲು ಮೇಳಗಳು ಕಾಲಮಿತಿಯ ಪ್ರಸ್ತಾಪ ಮಾಡಿದಾಗ ಅದರ ಬಗ್ಗೆ ಕಲಾವಿದರು ಹಾಗೂ ಪ್ರೇಕ್ಷಕರ ವಲಯದಿಂದ ಮತ್ತೆ ಪರ-ವಿರೋಧದ ಅಭಿಪ್ರಾಯಗಳು ಬರಲಾರಂಭಿಸಿವೆ.

ಯಾಕೆ ವಿರೋಧ?

ಕಟೀಲು ಮೇಳ ಯಕ್ಷಗಾನದ ಪೂರ್ವರಂಗವನ್ನೂ ಉಳಿಸಿಕೊಂಡು ಇಡೀ ರಾತ್ರಿ ಪ್ರದರ್ಶನ ನೀಡುತ್ತಿರುವ ತೆಂಕುತಿಟ್ಟಿನ ಏಕೈಕ ಮೇಳ (ಒಟ್ಟು ಆರು ಮೇಳಗಳಿವೆ). ಮುಸ್ಸಂಜೆಯ ಹೊತ್ತಲ್ಲಿ ಆರಂಭವಾಗುವ ಯಕ್ಷಗಾನದ ಪ್ರಕ್ರಿಯೆ, ರಾತ್ರಿ ಎಂಟರ ಸುಮಾರಿಗೆ ಸಭಾಲಕ್ಷಣದೊಂದಿಗೆ ಮುಂದುವರಿದು, ಹನ್ನೊಂದರ ಆಸುಪಾಸಲ್ಲಿ ಪ್ರಸಂಗವನ್ನು ಆರಂಭಿಸಿ, ಮುಂಜಾನೆ ಐದೂವರೆ-ಆರರ ಸುಮಾರಿಗೆ ಮಂಗಳವಾಗುವುದು ವಾಡಿಕೆ. ಇಡೀ ರಾತ್ರಿ ನಡೆಯುವ ಈ ಒಟ್ಟಾರೆ ಪ್ರಕ್ರಿಯೆ ಪ್ರೇಕ್ಷಕರ ಮನಸ್ಸಿನಲ್ಲೊಂದು ರಮ್ಯಾದ್ಭುತ ವರ್ಣಮಯ ಲೋಕವನ್ನು ಸೃಷ್ಟಿಸುವ ಪರಿ ಅನನ್ಯ.  

ಕಟೀಲು ಮೇಳಗಳೂ ಈ ಕಾಲಮಿತಿಯ ಪ್ರದರ್ಶನಗಳಿಗೆ ಒಳಪಟ್ಟರೆ ತೆಂಕುತಿಟ್ಟಿನಲ್ಲಿ ಉಳಿದಿರುವ ಪೂರ್ಣಾವಧಿಯ ಏಕೈಕ ಮಾದರಿಯೂ ಇಲ್ಲವಾಗುತ್ತದಲ್ಲ ಎಂಬುದು ಪ್ರಸ್ತುತ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ನೋವು. ಇದು ನಮ್ಮ ಸಾಂಸ್ಕೃತಿಕ ಪರಂಪರೆಗೆ ಬೀಳುತ್ತಿರುವ ಏಟು ಎಂಬ ವ್ಯಾಖ್ಯಾನವೂ ಕೇಳಿಬಂದಿದೆ. ಅವಧಿಯನ್ನು ಮೊಟಕುಗೊಳಿಸುವುದರಿಂದ ಅನೇಕ ಕಲಾವಿದರಿಗೆ ಅವಕಾಶ ತಪ್ಪಿಹೋಗುತ್ತದೆ, ಪೂರ್ವರಂಗ ಇಲ್ಲವಾಗುವುದರಿಂದ ಅಭ್ಯಾಸಿಗಳಿಗೆ ತರಬೇತಿ ಸಿಗುವುದಿಲ್ಲ, ಮಧ್ಯರಾತ್ರಿ ಆಟ ಮುಕ್ತಾಯವಾಗುವುದರಿಂದ ಪ್ರೇಕ್ಷಕರು ಮನೆಗಳಿಗೆ ಹಿಂತಿರುವುದು ಕಷ್ಟ, ಪ್ರಸಂಗಗಳನ್ನು ಸಂಕ್ಷೇಪಗೊಳಿಸುವುದರಿಂದ ಗುಣಮಟ್ಟ ಕಡಿಮೆಯಾಗುತ್ತದೆ ಇತ್ಯಾದಿ ಕಾರಣಗಳೂ ಪ್ರಸ್ತಾಪವಾಗಿವೆ.

ಬದಲಾವಣೆ ಅನಿವಾರ್ಯ:

ಆದರೆ ಕಾಲವೆಂಬುದು ಎಲ್ಲದಕ್ಕಿಂತ ಮೇಲಿನದ್ದು. ಅದು ಇಚ್ಛೆಯುಳ್ಳವರನ್ನು ಕರೆದುಕೊಂಡು ಹೋಗುತ್ತದೆ, ಇಚ್ಛೆಯಿಲ್ಲದವರನ್ನು ಎಳೆದುಕೊಂಡು ಹೋಗುತ್ತದೆ. ಮುಂದಕ್ಕೆ ಹೋಗುವುದಂತೂ ಹೋಗಲೇಬೇಕು. "ಕಾಲದ ಅನಿವಾರ್ಯಗಳನ್ನು ಅರ್ಥಮಾಡಿಕೊಳ್ಳದ ಕಲೆ ಕಾಲಗರ್ಭವನ್ನು ಸೇರಬೇಕಾಗುತ್ತದೆ" ಎಂಬ ಕಲಾವಿದ-ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿಯವರ ಮಾತು ಚಿಂತನಾರ್ಹ.

ಇದೇ ಅರ್ಥವನ್ನು ಹಿರಿಯ ವಿದ್ವಾಂಸ, ಯಕ್ಷಗಾನ ಕವಿ ಪ್ರೊ. ಅಮೃತ ಸೋಮೇಶ್ವರರೂ ಧ್ವನಿಸಿದ್ದುಂಟು: “ಚಲನಶೀಲತೆಯಿರುವ ಯಾವುದೇ ಜೀವಂತ ಕಲೆಯು ವರ್ತಮಾನ, ಭವಿಷ್ಯತ್ಕಾಲಗಳ ಪರಿಕಲ್ಪನೆಯಿಲ್ಲದೆ ಕೇವಲ ಭೂತಕಾಲವಿಹಾರಿಯಾಗುವಂತಿಲ್ಲ. ಒಂದು ವೇಳೆ ಅಂಥ ಹಳೇ ಹವ್ಯಾಸವನ್ನೇ ಮುಂದುವರಿಸಿದರೆ ಅಂಥ ಕಲೆ ಪ್ರತಿಗಾಮಿಯೂ ಪ್ರಗತಿ ವಿಮುಖವೂ ಎನಿಸುತ್ತದೆ. ವರ್ತಮಾನದ ಅರ್ಥಪೂರ್ಣ ಸಂಬಂಧವನ್ನು ಕಳೆದುಕೊಳ್ಳುತ್ತದೆ.”

ನಾವೀಗ ಅಂತಹದೊಂದು ಪರಿವರ್ತನೆಯ ಸಂಕ್ರಮಣಕಾಲದಲ್ಲಿದ್ದೇವೆ. ಸಮಾಜ ಆಧುನಿಕತೆಗೆ ತೆರೆದುಕೊಂಡಿದೆ. ಆಧುನಿಕ ಸಂವಹನ ಮಾಧ್ಯಮಗಳು ಜನರನ್ನು ಇನ್ನಿಲ್ಲದಂತೆ ಆವರಿಸಿಕೊಂಡಿವೆ. ಇಂತಹ ಸನ್ನಿವೇಶದಲ್ಲೂ ಜನರು ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಗಳಲ್ಲಿ ಆಸಕ್ತಿ ಉಳಿಸಿಕೊಂಡಿದ್ದಾರೆ ಎಂಬುದೇ ವಿಶೇಷ. ಬಹುಶಃ ಅದು ಆ ಕಲೆಗಳ ಶಕ್ತಿ ಕೂಡಾ.

“ಈಗ ಎಲ್ಲರೂ ಒಂದಲ್ಲ ಒಂದು ಉದ್ಯೋಗ ಹಿಡಿದಿರುವವರೇ. ಯಾರೂ ಇಡೀ ರಾತ್ರಿ ನಿದ್ದೆಗೆಟ್ಟು ಆಟ ನೋಡುವ ಪರಿಸ್ಥಿತಿಯಲ್ಲಿ ಇಲ್ಲ. ಅವರು ನೋಡಬೇಕು ಎಂಬುದು ಅಪೇಕ್ಷಣೀಯವೂ ಅಲ್ಲ. ದಿನಬೆಳಗಾದರೆ ಎಲ್ಲರಿಗೂ ಅವರವರದ್ದೇ ಕೆಲಸಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಕಾಲಮಿತಿ ಪ್ರದರ್ಶನಗಳು ಖಂಡಿತ ಸ್ವಾಗತಾರ್ಹ” ಎನ್ನುತ್ತಾರೆ ಹಿರಿಯ ಕಲಾವಿದ, ಯಕ್ಷಗಾನ ಕವಿ ಡಿ. ಎಸ್. ಶ್ರೀಧರ.

“ಕಟೀಲು ಮೇಳದ್ದೇ ಜನಪ್ರಿಯ ಪ್ರಸಂಗ ‘ದೇವಿಮಹಾತ್ಮೆ’ಯನ್ನು ಮಧ್ಯರಾತ್ರಿ ಬಳಿಕ ನೋಡುವವರ ಸಂಖ್ಯೆ ಬೆರಳೆಣಿಕೆಯಷ್ಟು. ಆಟದ ವೀಳ್ಯ ಕೊಟ್ಟವರೇ ಬೆಳಗಿನವರೆಗೆ ಕೂರುವುದು ಕಡಿಮೆ. ರಕ್ತಬೀಜನ ಪಾತ್ರವನ್ನು ಸಾಮಾನ್ಯವಾಗಿ ಅನುಭವೀ ಹಿರಿಯ ಕಲಾವಿದರು ನಿರ್ವಹಿಸುತ್ತಾರೆ. ಆ ಪಾತ್ರದ ಪ್ರವೇಶವಾಗುವುದೇ ಬೆಳಗ್ಗೆ ನಾಲ್ಕು ಗಂಟೆಗೆ. ಆ ಹೊತ್ತಿಗೆ ರಂಗದ ಎದುರು ನಾಲ್ಕೈದು ಮಂದಿ ತೂಕಡಿಸುತ್ತಾ ಕುಳಿತಿದ್ದರೆ ಆ ಕಲಾವಿದರ ಶ್ರಮಕ್ಕೆ ಏನು ಬೆಲೆ?” ಎಂದು ಪ್ರಶ್ನಿಸುತ್ತಾರೆ ಯಕ್ಷಗಾನ ಸಂಘಟಕ ಡಾ. ಚಂದ್ರಶೇಖರ ದಾಮ್ಲೆ.

ಯಕ್ಷಗಾನದ ಅವಧಿ ಮೊಟಕುಗೊಳಿಸುವ ವಿದ್ಯಮಾನ ಇತ್ತೀಚಿನದ್ದೇನೂ ಅಲ್ಲವೆನ್ನುತ್ತಾರೆ ಕಲಾವಿದ-ಲೇಖಕ ಗಣರಾಜ ಕುಂಬ್ಳೆ. “ದೇವಿಮಹಾತ್ಮೆ, ಸಂಪೂರ್ಣ ರಾಮಾಯಣ ಇತ್ಯಾದಿ ಪ್ರಸಂಗಗಳನ್ನು ಮೂರು ದಿನ, ಐದು ದಿನ- ಹೀಗೆ ಪ್ರದರ್ಶಿಸುವುದು ಹಿಂದೆ ಚಾಲ್ತಿಯಲ್ಲಿತ್ತು. ಕಾಲಕ್ರಮೇಣ ಅವೆಲ್ಲ ಮರೆಯಾಗುತ್ತಾ ಒಂದು ರಾತ್ರಿಯ ಅವಧಿಗೆ ಬಂದು ನಿಂತಿತು. ಈಗಲೂ ಇಡೀ ರಾತ್ರಿ ಆಡುವುದಿದ್ದರೂ ಹೆಚ್ಚೆಂದರೆ ಆರು ಗಂಟೆ ಸಿಗಬಹುದು ಅಷ್ಟೆ. ಅದನ್ನು ನಾಲ್ಕೋ ಐದೋ ಗಂಟೆಗೆ ಸಂಕ್ಷೇಪಗೊಳಿಸುವುದು ಕಷ್ಟವೇನೂ ಅಲ್ಲ” ಎನ್ನುತ್ತಾರೆ ಅವರು.

ಇದರೊಂದಿಗೆ ಇನ್ನೊಂದು ಎಚ್ಚರಿಕೆಯ ಮಾತನ್ನೂ ಕುಂಬ್ಳೆಯವರು ಸೇರಿಸುತ್ತಾರೆ: "ಕಲೆಯಲ್ಲಿ ಆಗುವ ಭೌತಿಕ ಬದಲಾವಣೆಗಳು ಕಲೆಯ ಆಂತರಿಕ ಗುಣಕ್ಕೆ ತೊಂದರೆ ಉಂಟುಮಾಡಬಾರದು. ಇದು ಪ್ರಬುದ್ಧ ಪ್ರೇಕ್ಷಕರು ಬಯಸುವ ವಿಷಯ. ಪ್ರದರ್ಶನದ ವೇಗ ಪ್ರಸಂಗದ ಆಶಯಕ್ಕೆ ವಿರುದ್ಧವಾಗಿ ಹೋಗುವುದು, ಪ್ರಾಮುಖ್ಯತೆ ಸಿಗಬೇಕಾದ ಭಾಗವನ್ನು ಬಿಟ್ಟು ಇನ್ಯಾವುದೋ ಭಾಗಕ್ಕೆ ಮಹತ್ವ ನೀಡುವುದು- ಇಂತಹ ಅಪಸವ್ಯಗಳು ಆಗದಂತೆ ಕಲಾವಿದರು ಎಚ್ಚರಿಕೆ ವಹಿಸಬೇಕು.  ಹೀಗೆ ಮಾಡಿದರೆ ಕಾಲಮಿತಿಯ ಪ್ರದರ್ಶನಗಳೂ ಹಿಂದಿನ ರಸಾನುಭವವನ್ನೇ ಪ್ರೇಕ್ಷಕರಿಗೆ ನೀಡಬಲ್ಲವು."

ವಾಸ್ತವಕ್ಕೆ ಬನ್ನಿ:

“ಇಡೀ ರಾತ್ರಿ ಯಕ್ಷಗಾನ ಬೇಕು ಎಂಬ ಬೇಡಿಕೆಯನ್ನು ಒಪ್ಪೋಣ. ಆದರೆ ಅದಕ್ಕೆ ಪ್ರೇಕ್ಷಕರು ಎಲ್ಲಿದ್ದಾರೆ? ಯಕ್ಷಗಾನವನ್ನೇ ಸಂಪೂರ್ಣ ನಂಬಿರುವ ಕಲಾವಿದರು ಎಲ್ಲಿದ್ದಾರೆ? ನಾವು ವಾಸ್ತವ ಅರ್ಥಮಾಡಿಕೊಳ್ಳಬೇಕು” ಎನ್ನುತ್ತಾರೆ ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್. “ಯಕ್ಷಗಾನದಿಂದಲೇ ಬದುಕು ಸಾಗಬೇಕು ಎನ್ನುವ ಮಂದಿ ಈಗ ಇಲ್ಲ. ಮೇಳಗಳು ಕೊಡುವ ಹದಿನೈದಿಪ್ಪತ್ತು ಸಾವಿರ ಸಂಬಳ ತಿಂಗಳ ಖರ್ಚಿಗೆ ಸಾಕಾಗುವುದಿಲ್ಲ. ಎಲ್ಲರಿಗೂ ಉಪವೃತ್ತಿ ಅನಿವಾರ್ಯವಾಗಿದೆ. ಮೇಳಗಳಿಗೆ ಕೆಲಸದಾಳುಗಳು ಸಿಗುವುದಿಲ್ಲ. ಇನ್ನೂ ಏಳೆಂಟು ವರ್ಷ ಕಳೆದರೆ ಒಂದು ಮೇಳಕ್ಕೆ ಬದ್ಧವಾಗಿರುವ ಖಾಯಂ ಕಲಾವಿದರ ತಂಡ ಸಿಗುವುದು ಕಷ್ಟ. ಆಗ ಸ್ಥಳೀಯ ಮಟ್ಟದಲ್ಲಿ ಲಭ್ಯವಿರುವ ಕಲಾವಿದರನ್ನೇ ಬಳಸಿಕೊಂಡು ಯಕ್ಷಗಾನ ಪ್ರದರ್ಶನ ಮಾಡಬೇಕಾಗುತ್ತದೆ. ಹೀಗಾಗಿ ಕಾಲಮಿತಿ ಯಕ್ಷಗಾನದ ಚಿಂತನೆಯಲ್ಲಿ ಆಕ್ಷೇಪಾರ್ಹವೇನೂ ಇಲ್ಲ” ಎನ್ನುತ್ತಾರವರು.

ಎಡಿಟಿಂಗ್ ಸಾಧ್ಯ:

ಯಕ್ಷಗಾನದ ಮೂಲಸೊಗಡನ್ನು ಕಳೆಯದೆ, ಪ್ರಸಂಗವನ್ನು ವಿರೂಪಗೊಳಿಸದೆ ಎಡಿಟಿಂಗ್ ಮಾಡುವುದು ಸಾಧ್ಯ ಎಂಬುದು ಈ ಎಲ್ಲ ಅನುಭವಿಗಳ ಅಭಿಪ್ರಾಯ. “ಪರಿಷ್ಕರಣೆ ಎಂದರೆ ಪ್ರಸಂಗವನ್ನು ಮನಬಂದಂತೆ ಕತ್ತರಿಸುವುದಲ್ಲ. ಯಾವುದು ಎಷ್ಟು ಬೇಕು ಎಂಬ ವಿವೇಚನೆಯನ್ನು ಇಟ್ಟುಕೊಂಡು ಎಡಿಟ್ ಮಾಡುವುದು. ಪೂರ್ವರಂಗವನ್ನು ಉಳಿಸಿಕೊಂಡು, ಪ್ರದರ್ಶನದ ಕಾಲಗತಿಯನ್ನು ಕಡೆಗಣಿಸದೆ, ಸನ್ನಿವೇಶಗಳನ್ನೂ ಬಿಡದೆ ಒಟ್ಟಾರೆ ಪ್ರದರ್ಶನವನ್ನು ಸಂಕ್ಷೇಪಗೊಳಿಸುವುದಕ್ಕೆ ಅವಕಾಶವಿದೆ. ಒಂದೇ ವಿಷಯಕ್ಕೆ ಸಂಬಂಧಿಸಿದ ನಾಲ್ಕೈದು ಪದ್ಯಗಳನ್ನು ಕೈಬಿಟ್ಟು ಅಗತ್ಯವಿರುವ ಒಂದೋ ಎರಡೋ ಪದ್ಯಗಳನ್ನು ವಿವೇಚನೆಯಿಂದ ತೆಗೆದುಕೊಳ್ಳಬಹುದು. ಕೋವಿಡ್ ಸಮಯದಲ್ಲಿ ಕಟೀಲು ಮೇಳಗಳೂ ಅನಿವಾರ್ಯವಾಗಿ ಕಾಲಮಿತಿ ಪ್ರದರ್ಶನ ಆರಂಭಿಸಿದಾಗ ಪ್ರೇಕ್ಷಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾದದ್ದು ಉಲ್ಲೇಖಾರ್ಹ” ಎನ್ನುತ್ತಾರೆ ಭಾಗವತ ಪುತ್ತೂರು ರಮೇಶ ಭಟ್.

“ಸೂಕ್ತ ವಿವೇಚನಾ ಸಾಮರ್ಥ್ಯವುಳ್ಳ ಸಮರ್ಥ ಭಾಗವತನೊಬ್ಬ ಈ ಎಡಿಟಿಂಗನ್ನು ಮಾಡಬಲ್ಲ. ಪೂರ್ವರಂಗದ ಪ್ರಸ್ತುತತೆಯನ್ನೂ ನಾವೀಗ ವಿವೇಚಿಸಬೇಕು. ಅದರ ಹಿಂದಿರುವುದು ಮೂಲತಃ ತರಬೇತಿಯ ಉದ್ದೇಶ. ಈಗ ತಕ್ಕಮಟ್ಟಿಗೆ ತರಬೇತಿ ಪಡೆದವರೇ ಮೇಳಕ್ಕೆ ಸೇರುತ್ತಾರೆ. ಅಲ್ಲಿ ಎರಡುಗಂಟೆಯ ಪೂರ್ವರಂಗ ಪ್ರದರ್ಶಿಸುವ ಅಗತ್ಯವೇ ಇಲ್ಲ. ಈಗಾಗಲೇ ಕಾಲಮಿತಿ ಪ್ರದರ್ಶನಕ್ಕೆ ಒಗ್ಗಿಕೊಂಡ ಮೇಳಗಳಿಂದಾಗಿಯೂ ಯಕ್ಷಗಾನಕ್ಕೆ ಅಂತಹ ನಷ್ಟವೇನೂ ಆದಂತೆ ಕಾಣುವುದಿಲ್ಲ” ಎನ್ನುತ್ತಾರೆ ಕಲಾವಿದ-ಲೇಖಕ ರಾಧಾಕೃಷ್ಣ ಕಲ್ಚಾರ್.

ರಾತ್ರಿ ಹತ್ತರ ಬಳಿಕ 50 ಡೆಸಿಬಲ್‌ಗಳಿಗಿಂತ ಹೆಚ್ಚಿನ ಧ್ವನಿಹೊಮ್ಮಿಸುವ ಮೈಕ್‌ಗಳನ್ನು ಬಳಸದಂತೆಯೂ ಸರ್ಕಾರ ಇತ್ತೀಚೆಗೆ ಧಾರ್ಮಿಕ ಕೇಂದ್ರಗಳಿಗೆ ಸೂಚನೆ ನೀಡಿದೆ. ನೆಲದ ಕಾನೂನುಗಳನ್ನು ಗೌರವಿಸುವುದೂ ನಮ್ಮ ಅನಿವಾರ್ಯಗಳಲ್ಲೊಂದು. ಕಾಲಕಳೆದಂತೆ ಸಮಾಜದ ಅದ್ಯತೆ, ದೃಷ್ಟಿಕೋನಗಳು ಬದಲಾಗುವುದು ಸಾಮಾನ್ಯ. ಅದನ್ನು ಗಮನಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳದೆ ಹೋದರೆ ಕಲೆಯೂ ಅಪ್ರಸ್ತುತವಾಗುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.