ಶುಕ್ರವಾರ, ಏಪ್ರಿಲ್ 14, 2023

ಮನದೊಳಗಣ ಕಿಚ್ಚು ಮನವ ಸುಡುವುದು

15-21 ಏಪ್ರಿಲ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ.

ಕಿಚ್ಚನಾರಿಸಬಹುದು ಹೊಟ್ಟೆಯ | ಕಿಚ್ಚಿಗೌಷಧವುಂಟೆ ಲೋಕದಿ | ಮಚ್ಚರವು ಜೀವಂತ ಸುಡುವುದು ನಿಚ್ಚವೆಮ್ಮ || ಎಂದು ಬರೆಯುತ್ತಾರೆ ಯುವ ಯಕ್ಷಗಾನ ಕವಿ ಶಿವಕುಮಾರ ಅಳಗೋಡು. ಅಸೂಯೆ ಎಷ್ಟು ಘೋರವಾದದ್ದು ಎಂಬುದನ್ನು ಎಷ್ಟೊಂದು ಸರಳವಾಗಿ ಚಿತ್ರಿಸಿದ್ದಾರೆ! ಭೌತಿಕವಾಗಿ ಕಾಣುವ ಬೆಂಕಿಯನ್ನು ಹೇಗಾದರೂ ನಂದಿಸಬಹುದು, ಆದರೆ ಒಳಗಿನ ಕಿಚ್ಚಿಗೆ ಪರಿಹಾರವಿಲ್ಲ; ಅದು ವ್ಯಕ್ತಿಯನ್ನು ದಿನವೂ ಸುಡುತ್ತಿರುತ್ತದೆ ಎಂಬ ಮಾತು ನೂರು ಪ್ರತಿಶತ ಸತ್ಯ.

ಅಸೂಯೆ ಎಂಬ ಬೆಂಕಿ ವ್ಯಕ್ತಿಗಳನ್ನಷ್ಟೇ ಅಲ್ಲ, ರಾಜ್ಯ-ಕೋಶಗಳನ್ನೇ ಸುಟ್ಟುಹಾಕಿದೆ,  ಸಾಮ್ರಾಜ್ಯಗಳನ್ನೇ ಬೂದಿಮಾಡಿದೆ, ವಂಶಗಳೇ ಅಳಿದುಹೋಗುವಂತೆ ಮಾಡಿದೆ. ಅದು ಅಂತಿಂಥ ಕಿಚ್ಚಲ್ಲ. ಬದುಕನ್ನೇ ನಿರ್ನಾಮ ಮಾಡುವ ಕಿಚ್ಚು. ಕಾಳ್ಗಿಚ್ಚನ್ನಾದರೂ ಕಟ್ಟಿಹಾಕಬಹುದು, ಈರ್ಷ್ಯೆಯನ್ನಲ್ಲ. ಬರಿಗಣ್ಣಿಗೆ ತಕ್ಷಣ ಕಾಣದೆ ಇರುವ ಈ ಜ್ವಾಲೆ ಕೆನ್ನಾಲಿಗೆಯಾದ ಮೇಲೆ ತಡೆಯುವುದು ಕಷ್ಟ.

ಕೈಕೇಯಿಯ ಅಸೂಯೆಯಿಂದ ರಾಮಾಯಣವಾಯಿತು; ಗಾಂಧಾರಿಯ ಅಸೂಯೆಯಿಂದ ಮಹಾಭಾರತವೇ ಸೃಷ್ಟಿಯಾಯಿತು. ರಾಮ ಕಾಡಿಗೆ ಹೋದದ್ದರಿಂದಲಾದರೂ ಭೂಭಾರ ಹರಣ ಆಯಿತು. ಆದರೆ ಗಾಂಧಾರಿ ಹೊಟ್ಟೆ ಹಿಸುಕಿಕೊಂಡದ್ದರಿಂದ ನೂರೊಂದು ಕೌರವರು ಹುಟ್ಟಿಕೊಂಡುಬಿಟ್ಟರು. ಇಡೀ ಮಹಾಭಾರತವೇ ದಾಯಾದಿ ಕಲಹದ ವೇದಿಕೆಯಾಯಿತು. ಗಾಂಧಾರಿ ಯಾವ ಅಸಹನೆಯಿಂದ ತನ್ನ ಗರ್ಭವನ್ನು ಹಿಸುಕಿಕೊಂಡಳೋ ಅದೇ ಅಸಹನೆ ಸಮಸ್ತ ಕೌರವರ ಸ್ಥಾಯೀಗುಣವೇ ಆಗಿ ಕೊನೆಗೆ ಕುರುಕ್ಷೇತ್ರವೇ ನಿರ್ಮಾಣವಾಯಿತು.

ಧೃತರಾಷ್ಟ್ರನಂತೂ ಹುಟ್ಟುಕುರುಡ. ಆತನಿಗಿಲ್ಲದ ದೃಷ್ಟಿ ತನಗೂ ಬೇಡ ಎಂದು ಗಾಂಧಾರಿ ತಾನೂ ದೃಷ್ಟಿಯನ್ನು ಬಂಧಿಸಿಕೊಂಡಳು. ವಿಚಿತ್ರವೆಂದರೆ ಕೌರವರೆಲ್ಲರೂ ಈರ್ಷ್ಯೆಯೆಂಬ ಬಟ್ಟೆಯಿಂದ ತಮ್ಮ ಅಂತರಂಗದ ಕಣ್ಣುಗಳನ್ನೇ ಕಟ್ಟಿಕೊಂಡರು. ಅಸೂಯೆ ಒಳಗಣ್ಣನ್ನೇ ಕುರುಡಾಗಿಸುತ್ತದೆ. ಅದು ಮನುಷ್ಯನನ್ನು ಯೋಚಿಸದಂತೆ ಮಾಡುತ್ತದೆ, ಆತ್ಮಾವಲೋಕನದ ಶಕ್ತಿಯನ್ನು ಕುಂದಿಸುತ್ತದೆ. ಹೇಗಾದರೂ ಮಾಡಿ ತನ್ನ ಪ್ರತಿಸ್ಪರ್ಧಿಯನ್ನು ಮಣಿಸಬೇಕು ಎಂಬ ಉದ್ದೇಶ ಪ್ರಬಲವಾಗುತ್ತದೆಯೇ ಹೊರತು ತಾನೇಕೆ ಹೀಗಾಗಿದ್ದೇನೆ ಎಂದು ಚಿಂತಿಸುವುದೇ ಇಲ್ಲ. ತನ್ನ ಒಂದು ಕಣ್ಣು ಹೋದರೂ ಅಡ್ಡಿಯಿಲ್ಲ, ಎದುರಾಳಿಯ ಎರಡೂ ಕಣ್ಣು ಹೋಗಲಿ ಎಂಬ ಭಾವನೆಯೇ ಇಲ್ಲಿ ಪ್ರಬಲ.

ಉದ್ಯೋಗ, ವ್ಯವಹಾರ, ಸಂಪತ್ತು, ಸಂಬಂಧ- ಎಲ್ಲ ಕಡೆಗಳಲ್ಲೂ ಮತ್ಸರ ಅನಾಹುತಗಳನ್ನು ಸೃಷ್ಟಿಸಬಲ್ಲದು. ಇನ್ನೊಬ್ಬ ತನಗಿಂತ ಮುಂದಿರಬಾರದು ಎಂಬ ಮನಸ್ಥಿತಿಯೇ ಈ ಮತ್ಸರಕ್ಕೆ ಕಾರಣ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಈ ಮನಸ್ಥಿತಿಯ ಮೂಲಕಾರಣ ಸ್ಪರ್ಧೆ ಎಂಬುದಕ್ಕಿಂತಲೂ ವ್ಯಕ್ತಿಯ ಕೀಳರಿಮೆ ಎಂಬುದೇ ನಿಜ. ‘ಅಸೂಯೆ ಎಂಬುದು ಒಬ್ಬ ವ್ಯಕ್ತಿಯ ಕೀಳರಿಮೆಯ ಅಂತಃಪ್ರಜ್ಞೆ. ಅದೊಂದು ಮಾನಸಿಕ ಕ್ಯಾನ್ಸರ್’ ಎನ್ನುತ್ತಾನೆ ಫೋರ್ಬ್ಸ್. ಗುಣ, ರೂಪ, ಹಣ, ಜ್ಞಾನ, ಅಂತಸ್ತು, ಜನಪ್ರಿಯತೆ- ಯಾವ ವಿಷಯದಲ್ಲಾದರೂ ಈ ಕೀಳರಿಮೆ ಹುಟ್ಟಿಕೊಳ್ಳಬಹುದು. ಇಂತಹ ವಿಷಯಗಳಲ್ಲಿ ಇನ್ನೊಬ್ಬನ ಮಟ್ಟಕ್ಕೆ ಏರುವುದು ತನಗೆ ಸಾಧ್ಯವಿಲ್ಲ ಎಂದು ವ್ಯಕ್ತಿಗೆ ಅನ್ನಿಸಿದಾಗ ಅದು ಕೀಳರಿಮೆಯಾಗಿ ಬೆಳೆಯುವುದುಂಟು. ಅಸೂಯೆ ಕೀಳರಿಮೆಯ ಇನ್ನೊಂದು ಮುಖ.

ಕೀಳರಿಮೆಗೆ ಕಾರಣ ವಾಸ್ತವವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ. ಒಬ್ಬೊಬ್ಬ ವ್ಯಕ್ತಿಯೂ ಅವನದೇ ನೆಲೆಯಲ್ಲಿ ವಿಶಿಷ್ಟ ಮತ್ತು ಅನನ್ಯ. ಒಬ್ಬ ವ್ಯಕ್ತಿ ಯಾವುದೋ ಒಂದು ವಿಷಯದಲ್ಲಿ ಗಟ್ಟಿಗನಾಗಿದ್ದಾನೆಂದರೆ ಇನ್ನೊಬ್ಬ ವ್ಯಕ್ತಿ ಎಲ್ಲ ವಿಷಯಗಳಲ್ಲೂ ದುರ್ಬಲ ಎಂದರ್ಥವಲ್ಲ. ಅವನಿಗೆ ಅವನದ್ದೇ ಆದ ವೈಶಿಷ್ಟ್ಯಗಳಿರಬಹುದು, ಮತ್ತು ಅವುಗಳ ಮೂಲಕ ಯಶಸ್ಸು ಸಾಧಿಸಬಹುದು. ಒಂದು ವಿಷಯದಲ್ಲಿ ಗಟ್ಟಿಗ ಎನಿಸಿಕೊಂಡವನು ಉಳಿದ ಹತ್ತಾರು ವಿಷಯಗಳಲ್ಲಿ ದುರ್ಬಲನಾಗಿರಬಹುದು. ನಿಜವಾಗಿ ನೋಡಿದರೆ ಪರಿಪೂರ್ಣತೆಯೆಂಬುದು ಒಂದು ಭ್ರಮೆ. ಒಬ್ಬ ವ್ಯಕ್ತಿ ಪರಿಪೂರ್ಣನಾಗಿರುವುದು ಸಾಧ್ಯವೇ ಇಲ್ಲ. ಇದಿಷ್ಟು ಸ್ಪಷ್ಟ ಇರುವವನಿಗೆ ಇನ್ನೊಬ್ಬನ ಕುರಿತು ಮತ್ಸರ ಹುಟ್ಟಿಕೊಳ್ಳುವುದು ಸಾಧ್ಯವೇ ಇಲ್ಲ. ‘ಹೋಲಿಸಿಕೊಳ್ಳದೆ ಬದುಕುವುದೆಂದರೆ ದೊಡ್ಡ ಹೊರೆಯೊಂದನ್ನು ಇಳಿಸಿಕೊಂಡಂತೆ’ ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ. 

ತಾನು ಯಾರೊಂದಿಗೂ ಸ್ಪರ್ಧಿಸಬೇಕಿಲ್ಲ, ತನಗೆ ತಾನೇ ಸ್ಪರ್ಧಿ; ಪ್ರತಿದಿನವೂ ತನ್ನನ್ನು ತಾನು ಮೀರುವ ದಾರಿಯಲ್ಲಿ ಸಾಗಬೇಕು ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಪ್ರತಿಸ್ಪರ್ಧಿಗಳಿಂದ ತನಗೆ ತೊಂದರೆಯಿದೆ ಎಂದು ಯಾವ ವ್ಯಕ್ತಿಗೂ ಅನ್ನಿಸಲಾರದು. ಉದ್ಯೋಗ ಸ್ಥಳದಲ್ಲೇ ಆಗಿರಲಿ, ತಾನು ಗರಿಷ್ಠ ಪ್ರಯತ್ನದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದಕ್ಕೆ ಸೂಕ್ತ ಪ್ರತಿಫಲ ಇಂದಲ್ಲ ನಾಳೆಯಾದರೂ ಸಿಕ್ಕಿಯೇ ಸಿಗುತ್ತದೆ ಎಂದು ಭಾವಿಸಿದವನಿಗೆ ಅಸೂಯೆಯ ಕಿಚ್ಚು ಕಾಡಲಾರದು. 

ಇದು ನಮ್ಮನ್ನು ಅಸೂಯೆ ಕಾಡದಂತೆ ನೋಡಿಕೊಳ್ಳುವ ಬಗೆಯಾಯಿತು. ನಮ್ಮನ್ನು ನೋಡಿ ಇನ್ನೊಬ್ಬ ಅಸೂಯೆಪಟ್ಟುಕೊಳ್ಳುತ್ತಿದ್ದಾನೆ, ಹೋದ ದಾರಿಗೆಲ್ಲ ಅಡ್ಡಬರುತ್ತಿದ್ದಾನೆ ಎಂದು ಅನಿಸುತ್ತಿದೆಯೇ? ಅಂಥವರ ಬಗ್ಗೆ ಎಳ್ಳಷ್ಟೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಮತ್ಸರವೆಂಬುದು ವ್ಯಕ್ತಿಯ ಒಳಗಿನ ಕಿಚ್ಚು ಎಂದು ಆಗಲೇ ಹೇಳಿಯಾಯಿತು. ಕಿಚ್ಚು ಒಳಗೆ ಇದೆ ಎಂದ ಮೇಲೆ ಅದು ಲೋಕವನ್ನು ಸುಡುವುದಕ್ಕಿಂತ ಮುಂಚೆ ವ್ಯಕ್ತಿಯನ್ನೇ ಸುಡುತ್ತದೆ. ವಾಸ್ತವವಾಗಿ ಅಂಥವರು ಪ್ರತಿದಿನವೂ ತಮ್ಮೊಳಗೇ ಸುಟ್ಟುಹೋಗುತ್ತಿರುತ್ತಾರೆ; ಯಾವುದೋ ಒಂದು ದಿನ ನೋಡನೋಡುತ್ತಿದ್ದಂತೆಯೇ ಕರಕಲಾಗುತ್ತಾರೆ. ‘ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದು’ ಎಂದು ಬಸವಣ್ಣನೇ ಹೇಳಿಲ್ಲವೇ? ಇನ್ನೊಬ್ಬನನ್ನು ನೋಡಿ ಅಸೂಯೆಪಡುವವರಿಗೆ ಮಾನಸಿಕ ನೆಮ್ಮದಿಯೇ ಇರುವುದಿಲ್ಲ. ಅವರು ಸದಾ ಅತೃಪ್ತಿ, ಅಶಾಂತಿಗಳಿಂದ ಒಳಗೊಳಗೇ ಬೇಯುತ್ತಿರುತ್ತಾರೆ. ಕುದಿಯುವವರು ಆವಿಯಾಗುತ್ತಾರೆ, ಉರಿಯುವವರು ಬೂದಿಯಾಗುತ್ತಾರೆ ಎಂಬ ಮಾತೇ ಇದೆಯಲ್ಲ! 

ಇನ್ನೊಂದು ವಿಚಾರ ಏನೆಂದರೆ, ಯಾರೋ ನಮ್ಮನ್ನು ನೋಡಿ ಮತ್ಸರಪಡುತ್ತಿದ್ದಾರೆ ಎಂದರೆ ನಾವು ಸಾಧನೆಯ ದಾರಿಯಲ್ಲಿದ್ದೇವೆ ಎಂದು ಅರ್ಥ. ಸೋತವರನ್ನು ನೋಡಿ ಯಾರೂ ಅಸೂಯೆಪಡುವುದಿಲ್ಲವಲ್ಲ! “ನಿಮ್ಮನ್ನು ನೋಡಿ ಅಸೂಯೆಪಡುವವರನ್ನು ದ್ವೇಷಿಸಬೇಡಿ. ಅವರು ವಾಸ್ತವವಾಗಿ ತಮಗಿಂತ ನೀವೇ ಉತ್ತಮ ಎಂದು ಭಾವಿಸಿಕೊಂಡಿರುತ್ತಾರೆ. ಅಂಥವರಿಗೆ ಮನಸ್ಸಿನಲ್ಲೇ ಕೃತಜ್ಞತೆ ಹೇಳಿ ಮುಂದಕ್ಕೆ ಹೋಗುತ್ತಾ ಇರಿ” ಎಂದು ದಾರ್ಶನಿಕರು ಇದೇ ಕಾರಣಕ್ಕೆ ಹೇಳಿರುವುದು.

ಯಾವ ಸುಯೋಧನನ ಮತ್ಸರದಿಂದ ಕುರುಕ್ಷೇತ್ರ ಸೃಷ್ಟಿಯಾಯಿತೋ, ಅದೇ ಸುಯೋಧನ ಒಂದು ಹಂತದಲ್ಲಿ ತನ್ನ ಪ್ರತಿಸ್ಪರ್ಧಿಯ ಶೌರ್ಯವನ್ನು ಮೆಚ್ಚಿದ್ದುಂಟಂತೆ. ಯುದ್ಧದಲ್ಲಿ ಭೀಮನ ಪರಾಕ್ರಮವನ್ನು ನೋಡಿದ ಕೌರವ ‘ಸದ್ಗುಣಕೆ ಮತ್ಸರವೆ’ ಎಂದುಕೊಳ್ಳುತ್ತಾನೆ (ಕುಮಾರವ್ಯಾಸಭಾರತ). ಇನ್ನೊಬ್ಬನ ಸದ್ಗುಣವನ್ನು, ಒಳ್ಳೆಯತನವನ್ನು, ನ್ಯಾಯಮಾರ್ಗದಲ್ಲಿ ಗಳಿಸುವ ಯಶಸ್ಸನ್ನು ನೋಡಿ ಖಂಡಿತ ಮತ್ಸರಪಟ್ಟುಕೊಳ್ಳಬಾರದು. ಇನ್ನೊಬ್ಬನನ್ನು ಪ್ರಾಮಾಣಿಕವಾಗಿ ಅಭಿನಂದಿಸುವುದರಲ್ಲಿ ಇರುವ ಆತ್ಮಸಂತೋಷ ಬೇರೆಡೆ ಸಿಗಲಾರದು. ‘ಸರ್ವಂ ಪರಿಕ್ರೋಶಮ್ ಜಹಿ’ (ಎಲ್ಲ ಬಗೆಯ ಮತ್ಸರವನ್ನು ತ್ಯಜಿಸು) ಎನ್ನುತ್ತದೆ ಋಗ್ವೇದ. ವೇದದ ಬೆಳಕು ನಮ್ಮನ್ನು ಮುನ್ನಡೆಸಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಏಪ್ರಿಲ್ 11, 2023

ಉದ್ಯೋಗಸೇತುವಾಗಬಲ್ಲ ಕೌಶಲ ಕೋರ್ಸುಗಳು

03 ಏಪ್ರಿಲ್ 2023ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಉದ್ಯೋಗರಂಗದ ನಡುವೆ ಅಡ್ಡ ನಿಂತಿರುವ ದೊಡ್ಡ ಗೋಡೆ ಕೌಶಲಗಳ ಕೊರತೆ. ಶಿಕ್ಷಣ ಸಂಸ್ಥೆಗಳಿಂದ ಲಕ್ಷಾಂತರ ಪದವೀಧರರು ಪ್ರತಿವರ್ಷ ಹೊರಬರುತ್ತಲೇ ಇದ್ದರೂ ಉದ್ಯೋಗಜಗತ್ತಿನ ಅವಶ್ಯಕತೆಗಳು ಪೂರೈಕೆಯಾಗುತ್ತಿಲ್ಲ. ಒಂದೆಡೆ ಖಾಲಿ ಉಳಿದಿರುವ ಅಸಂಖ್ಯ ಉದ್ಯೋಗಗಳು, ಇನ್ನೊಂದೆಡೆ ಹೆಚ್ಚುತ್ತಲೇ ಇರುವ ನಿರುದ್ಯೋಗ.

ಈ ವೈರುಧ್ಯವನ್ನು ಸರಿಪಡಿಸುವ ಏಕೈಕ ದಾರಿಯೆಂದರೆ ಶಿಕ್ಷಣ ಹಾಗೂ ಉದ್ಯೋಗಜಗತ್ತಿನ ನಡುವಿನ ಅಂತರವನ್ನು ನಿವಾರಿಸುವುದು; ಅಂದರೆ ನಮ್ಮ ಯುವಕರನ್ನು ಹೊಸಕಾಲದ ಕೌಶಲ್ಯಗಳೊಂದಿಗೆ ಸಶಕ್ತರೂ ಸಮರ್ಥರೂ ಆಗಿ ಬೆಳೆಸುವುದು. ಕಾಲ ಬದಲಾಗಿದೆ, ಉದ್ಯೋಗಗಳೂ ಬದಲಾಗಿವೆ, ಅದಕ್ಕೆ ತಕ್ಕಂತೆ ಶಿಕ್ಷಣ ಹಾಗೂ ತರಬೇತಿ ಬದಲಾಗದೆ ಇರುವುದೇ ಇಂದಿನ ಎಲ್ಲ ಸಮಸ್ಯೆಗಳ ಮೂಲ. 

ಉದ್ಯೋಗ ಜಗತ್ತು ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯುರಿಟಿ, ವರ್ಚುವಲ್ ರಿಯಾಲಿಟಿ, 3-ಡಿ ಪ್ರಿಂಟಿಂಗ್, ರೋಬೋಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ಕ್ಷೇತ್ರಗಳೆಡೆಗೆ ಭರದಿಂದ ವ್ಯಾಪಿಸುತ್ತಿದೆ. ನಾವು ಕೇವಲ ಸಾಂಪ್ರದಾಯಿಕ ಉದ್ಯೋಗಗಳ ಕಡೆಗಷ್ಟೇ ಗಮನಹರಿಸಿದರೆ ಏನೇನೂ ಸಾಲದು. ಹೊಸತನದತ್ತ ತೆರೆದುಕೊಳ್ಳುವುದು ಇಂದಿನ ಅನಿವಾರ್ಯ.

ಹೊಸ ಉದ್ಯೋಗ ಸಾಧ್ಯತೆಗಳನ್ನು ಗಮನಿಸಿದಾಗ ತಕ್ಷಣಕ್ಕೆ ಇವೆಲ್ಲ ತಾಂತ್ರಿಕ ಹುದ್ದೆಗಳು ಎನಿಸಿದರೂ, ಇವು ಎಲ್ಲ ಹಿನ್ನೆಲೆಯ ಮಂದಿಯನ್ನೂ ಸ್ವಾಗತಿಸುವ ಕ್ಷೇತ್ರಗಳೆಂಬುದು ವಾಸ್ತವ ಸಂಗತಿ. ಬಿಎ, ಬಿಕಾಂ, ಬಿಎಸ್ಸಿಯಂತಹ ಸಾಂಪ್ರದಾಯಿಕ ಪದವಿಗಳನ್ನು ಪಡೆದವರೂ ಇವುಗಳನ್ನು ಪ್ರವೇಶಿಸಿ ಯಶಸ್ಸು ಸಾಧಿಸಬಹುದು. ದೊಡ್ಡದೊಡ್ಡ ಕಂಪೆನಿಗಳು ಇಂದು ಎದುರು ನೋಡುತ್ತಿರುವುದು ಕೌಶಲಗಳನ್ನೇ ಹೊರತು ಅಂಕಪಟ್ಟಿಗಳನ್ನಲ್ಲ. ಪದವಿ ವ್ಯಾಸಂಗ ಮಾಡುತ್ತಿರುವವರು ಅದರ ಜೊತೆಜೊತೆಗೆ ಕಲಿಯಬಹುದಾದ ನೂರಾರು ಕೋರ್ಸುಗಳು ಈಗ ಲಭ್ಯವಿವೆ. ಇವುಗಳಲ್ಲಿ ಅನೇಕವು ಉಚಿತ ಹಾಗೂ ಆನ್ಲೈನ್ ವಿಧಾನದಲ್ಲಿ ಲಭ್ಯ.  ಬಿಡುವಿನ ವೇಳೆಯಲ್ಲಿ ಒಂದೆರಡು ಕೋರ್ಸುಗಳನ್ನು ಮಾಡಿಕೊಂಡರೆ ಇವುಗಳ ನೆರವಿನಿಂದಲೇ ಒಳ್ಳೆಯ ಉದ್ಯೋಗಗಳನ್ನೂ ಪಡೆಯಬಹುದು.

ಡಿಜಿಟಲ್ ಮಾರ್ಕೆಟಿಂಗ್: ಯಾವುದೇ ಉತ್ಪನ್ನದ ಮಾರಾಟಗಾರರೂ ಇಂದು ಪ್ರಚಾರಕ್ಕಾಗಿ ಅವಲಂಬಿಸಿರುವುದು ಡಿಜಿಟಲ್ ಮಾಧ್ಯಮವನ್ನು. ಸಾಂಪ್ರದಾಯಿಕ ಮಾಧ್ಯಮಗಳ ಜಾಹೀರಾತು ಸಾಕಾಗುವುದಿಲ್ಲ. ಕಂಟೆAಟ್ ಡೆವಲಪ್ಮೆಂಟ್, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್- ಹೀಗೆ ಡಿಜಿಟಲ್ ಮಾರ್ಕೆಟಿಂಗ್‌ಗೆ ಸಂಬಂಧಿಸಿದಂತೆ ಹತ್ತಾರು ಆನ್ಲೈನ್ ಕೋರ್ಸುಗಳಿವೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್: ಬಹುತೇಕ ಆನ್ಲೈನ್ ಚಟುವಟಿಕೆಗಳು ಇಂದು ಕೃತಕ ಬುದ್ಧಿಮತ್ತೆ ಆಧರಿತವಾಗಿವೆ. ಅದನ್ನು ಬಳಸಿಕೊಂಡು ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಹತ್ತಾರು ಉಚಿತ ಕೋರ್ಸುಗಳು ಲಭ್ಯವಿವೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಪ್ರಾಜೆಕ್ಟ್ಸ್, ಇಂಟ್ರೊಡಕ್ಷನ್ ಟು ಎಐ, ಸೆಕ್ಯೂರ್ & ಪ್ರೈವೇಟ್ ಎಐ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಫಾರ್ ರೋಬೋಟಿಕ್ಸ್, ಡೆವಲಪಿಂಗ್ ಎಐ ಅಪ್ಲಿಕೇಶನ್ಸ್ – ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.

ಡೇಟಾ ಅನಲಿಟಿಕ್ಸ್: ತಂತ್ರಜ್ಞಾನ ಬೆಳೆದಂತೆ ವಿವಿಧ ರಂಗಗಳಿಗೆ ಸಂಬಂಧಿಸಿದ ದತ್ತಾಂಶ ಬೆಟ್ಟದಂತೆ ಬೆಳೆಯುತ್ತಿದೆ. ಇದರ ವಿಶ್ಲೇಷಣೆ ಮತ್ತು ಅನ್ವಯ ದುಸ್ತರವಾಗುತ್ತಿದೆ. ಹೀಗಾಗಿ ಡೇಟಾ ಅನಲಿಟಿಕ್ಸ್ ಎಂಬ ಪ್ರಧಾನ ಉದ್ಯೋಗ ಕ್ಷೇತ್ರವೊಂದು ತೆರೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಕಂಪ್ಯೂಟಿಂಗ್  ಫಾರ್ ಡೇಟಾ ಅನಾಲಿಸಿಸ್, ಕ್ರಿಪ್ಟೋಗ್ರಫಿ & ನೆಟ್ವರ್ಕ್ ಸೆಕ್ಯುರಿಟಿ, ಡೇಟಾ ಅನಲಿಟಿಕ್ಸ್ ವಿದ್ ಪೈಥಾನ್. ಡೇಟಾ ಅನಾಲಿಸಿಸ್ ಫಾರ್ ಡಿಸಿಶನ್ ಮೇಕಿಂಗ್, ವಿಶುವಲೈಸೇಶನ್ ಫಾರ್ ಡೇಟಾ ಜರ್ನಲಿಸಂ- ಇಂತಹ ಹತ್ತಾರು ಕೋರ್ಸುಗಳಿವೆ.

ಸೈಬರ್ ಸೆಕ್ಯುರಿಟಿ: ಆನ್ಲೈನ್ ಜಗತ್ತಿನ ಕಳ್ಳಕಾಕರಿಂದ ಸುರಕ್ಷಿತವಾಗಿರುವುದು ಇಂದಿನ ಆದ್ಯತೆಗಳಲ್ಲೊಂದು. ಹೀಗಾಗಿ ಸೈಬರ್ ಭದ್ರತೆಯ ಜ್ಞಾನ ಹಾಗೂ ಕೌಶಲಗಳನ್ನು ಬೆಳೆಸಿಕೊಂಡವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಸರ್ಟಿಫಿಕೇಟ್ ಇನ್ ಸೈಬರ್ ಸೆಕ್ಯುರಿಟಿ, ಇನ್ಫಾರ್ಮೇಶನ್ ಸೆಕ್ಯುರಿಟಿ & ಸೈಬರ್ ಫಾರೆನ್ಸಿಕ್ಸ್, ಆನ್ಲೈನ್ ಪ್ರೈವಸಿ, ಸೈಬರ್ ಸೆಕ್ಯುರಿಟಿ ಇನ್ ಹೆಲ್ತ್ಕೇರ್ ಪ್ರೋಗ್ರಾಮ್ಸ್- ಈ ಕ್ಷೇತ್ರದಲ್ಲಿ ಲಭ್ಯವಿರುವ ಕೆಲವು ಕೋರ್ಸುಗಳು.

ಡೇಟಾ ಸೈನ್ಸ್: ದತ್ತಾಂಶ ನಿರ್ವಹಣೆ ಕುರಿತ ಆನ್ಲೈನ್ ಕೋರ್ಸುಗಳನ್ನು ಇಂದು ಅಂತಾರಾಷ್ಟ್ರೀಯ ಮಟ್ಟದ ಕಂಪೆನಿಗಳು ಹಾಗೂ ವಿಶ್ವವಿದ್ಯಾನಿಲಯಗಳು ನೀಡುತ್ತಿವೆ. ಇವು ಉಚಿತವಾಗಿಯೂ ಲಭ್ಯವಿವೆ. ಪರ್ಡ್ಯು ಯೂನಿವರ್ಸಿಟಿಯ ಡೇಟಾ ಸೈನ್ಸ್ ಫಾರ್ ಸ್ಮಾರ್ಟ್ ಸಿಟೀಸ್, ಎಂಐಟಿ ಕೇಂಬ್ರಿಜ್‌ನ ಕೊಲಾಬೊರೇಟಿವ್ ಡೇಟಾ ಸೈನ್ಸ್ ಫಾರ್ ಹೆಲ್ತ್ಕೇರ್, ಐಬಿಎಂನ ಡೇಟಾ ಸೈನ್ಸ್ ಟೂಲ್ಸ್, ಯೂನಿವರ್ಸಿಟಿ ಆಫ್ ಲಂಡನ್‌ನ ಫೌಂಡೇಶನ್ಸ್ ಆಫ್ ಡೇಟಾ ಸೈನ್ಸ್ ಇಂತಹ ಉಪಯುಕ್ತ ಕೋರ್ಸುಗಳಿಗೆ ಉದಾಹರಣೆಗಳು.

ಗ್ರಾಫಿಕ್ ಡಿಸೈನಿಂಗ್: ಯೋಚನೆ-ಯೋಜನೆಗಳ ದೃಶ್ಶಿಕ ವಿವರಣೆ ಹೊಸಕಾಲದ ಅವಶ್ಯಕತೆಗಳಲ್ಲೊಂದು. ಹೀಗಾಗಿ ಎಲ್ಲೆಡೆಯೂ ಗ್ರಾಫಿಕ್ ವಿನ್ಯಾಸಕಾರರು ಇಂದು ಬೇಕೇಬೇಕು. ಜಾಹೀರಾತಿನಿಂದ ತೊಡಗಿ ಸಿನಿಮಾರಂಗದವರೆಗೆ ನೂರಾರು ಕ್ಷೇತ್ರಗಳು ಅವರನ್ನು ಸ್ವಾಗತಿಸುತ್ತವೆ. ಇಂಟ್ರೊಡಕ್ಷನ್ ಟು ಗ್ರಾಫಿಕ್ ಡಿಸೈನ್ ವಿದ್ ಫೋಟೋಶಾಪ್, ಫಂಡಮೆಂಟಲ್ಸ್ ಆಫ್ ಗ್ರಾಫಿಕ್ ಡಿಸೈನ್, ಗ್ರಾಫಿಕ್ಸ್ & ಅನಿಮೇಶನ್ ಡೆವಲಪ್ಮಂಟ್, ಕಂಪ್ಯೂಟರ್ ಗ್ರಾಫಿಕ್ಸ್- ಹೀಗೆ ಅನೇಕ ಕೋರ್ಸುಗಳು ಉಚಿತವಾಗಿ ದೊರೆಯುತ್ತವೆ.

ಫೋಟೋಗ್ರಫಿ & ವೀಡಿಯೋಗ್ರಫಿ: ಕೌಟುಂಬಿಕ ಕಾರ್ಯಕ್ರಮಗಳಿಂದ ತೊಡಗಿ ಕಾರ್ಪೋರೇಟ್ ಸಮಾರಂಭಗಳವರೆಗೆ ಎಲ್ಲರಿಗೂ ಬೇಕಾಗಿರುವುದು ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ. ಹೀಗಾಗಿ ಕ್ಯಾಮೆರಾ ನಿರ್ವಹಿಸಬಲ್ಲವರಿಗೆ ಈಗ ಎಲ್ಲೆಡೆಯೂ ಬೇಡಿಕೆ. ಫೋಟೋಗ್ರಫಿ, ವೀಡಿಯೋಗ್ರಫಿ ಬಲ್ಲವರು ನಿರುದ್ಯೋಗಿಗಳಾಗಿ ಕುಳಿತುಕೊಳ್ಳುವ ಪ್ರಮೇಯವೇ ಇಲ್ಲ. ಹತ್ತಾರು ಸಂಖ್ಯೆಯಲ್ಲಿ ಲಭ್ಯವಿರುವ ಉಚಿತ ಆನ್ಲೈನ್ ಕೋರ್ಸುಗಳ ಮೂಲಕ ನಮ್ಮ ಫೋಟೋಗ್ರಫಿ ಕೌಶಲಗಳನ್ನು ಸುಲಭವಾಗಿ ಬೆಳೆಸಿಕೊಳ್ಳಬಹುದು.

ವೆಬ್ ಡಿಸೈನಿಂಗ್: ತಾಂತ್ರಿಕ ಪದವಿಗಳ ವ್ಯಾಸಂಗ ಮಾಡದೆಯೂ ಜಾಲತಾಣಗಳನ್ನು ಹಾಗೂ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವುದು ಈಗಿನ ಪ್ರವೃತ್ತಿಗಳಲ್ಲೊಂದು. ಅನೇಕ ಯುವಕರು ಇದನ್ನೊಂದು ಹವ್ಯಾಸವನ್ನಾಗಿ ಬೆಳೆಸಿಕೊಂಡು ದೊಡ್ಡ ಯಶಸ್ಸು ಸಾಧಿಸಿರುವುದುಂಟು. ಇಂಟ್ರೊಡಕ್ಷನ್ ಟು ವೆಬ್ ಡೆವಲಪ್ಮೆಂಟ್, ಯುಎಕ್ಸ್ ಡಿಸೈನ್ ಫಾರ್ ಮೊಬೈಲ್ ಡೆವಲಪರ್ಸ್, ಯೂಸರ್ ಇಂಟರ್‌ಫೇಸ್ ಡಿಸೈನ್. ಯೂಸರ್ ಎಕ್ಸ್ಪೀರಿಯನ್ಸ್ ಡಿಸೈನ್- ಈ ವರ್ಗಕ್ಕೆ ಸಂಬಂಧಿಸಿದ ಕೆಲವು ಕೋರ್ಸುಗಳು.

ಎಲ್ಲಿ ದೊರೆಯುತ್ತವೆ?

ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನಾ (PMKVY), ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ (NSDC), ಸ್ವಯಂ (SWAYAM) ಮುಂತಾದ ಸರ್ಕಾರಿ ಸಂಸ್ಥೆಗಳಲ್ಲದೆ ನಾಸ್‌ಕಾಮ್, ಇನ್ಫೋಸಿಸ್‌ನಂತಹ ಸರ್ಕಾರೇತರ ಸಂಸ್ಥೆಗಳು ನೂರಾರು ಉಚಿತ ಹಾಗೂ ಪಾವತಿ ಕೋರ್ಸುಗಳನ್ನು ಒದಗಿಸುತ್ತಿವೆ. ಪ್ರಮಾಣಪತ್ರವನ್ನೂ ನೀಡುತ್ತವೆ. ಕೆಲವು ಉಪಯುಕ್ತ ಲಿಂಕ್‌ಗಳು ಇಲ್ಲಿವೆ:

https://infyspringboard.onwingspan.com/

http://www.pmkvyofficial.org/

https://futureskillsprime.in/

https://swayam.gov.in/

https://www.careers360.com/

2020ರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪದವಿ ಹಾಗೂ ಉದ್ಯೋಗಗಳ ನಡುವಿನ ಅಂತರವನ್ನು ಮೌಲ್ಯ ಹಾಗೂ ಕೌಶಲ್ಯಗಳ ಚೌಕಟ್ಟಿನಲ್ಲಿ ನಿವಾರಿಸಿಕೊಳ್ಳುವ ದೊಡ್ಡ ಕನಸು ಇಟ್ಟುಕೊಂಡಿದೆ. ಇದರ ಸಮರ್ಥ ಅನುಷ್ಠಾನ ವಿದ್ಯಾರ್ಥಿಗಳ ಉತ್ಸಾಹ ಹಾಗೂ ಅಧ್ಯಾಪಕರ ಬದ್ಧತೆಯ ಮೇಲೆ ನಿಂತಿದೆ. ಕೌಶಲಾಭಿವೃದ್ಧಿ ಕೋರ್ಸುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಇದಕ್ಕಿರುವ ಸರಳ ಮಾರ್ಗ.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಫೆಬ್ರವರಿ 24, 2023

ಒತ್ತಡ ಒಳ್ಳೆಯದು!

18-24 ಫೆಬ್ರವರಿ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಕಾಲೇಜು ಕಾಲದ ಅಥವಾ ಬೇರೆ ಯಾವುದೋ ಪರೀಕ್ಷೆಯ ದಿನಗಳನ್ನೊಮ್ಮೆ ನೆನಪಿಸಿಕೊಳ್ಳಿ. ತಡರಾತ್ರಿಯವರೆಗೆ, ಕೆಲವೊಮ್ಮ ರಾತ್ರಿಯೆಲ್ಲ ಓದು, ನಿದ್ದೆಯ ಕೊರತೆ, ದೈಹಿಕ-ಮಾನಸಿಕ ನಿತ್ರಾಣ... ಅಬ್ಬಾ, ಈ ಪರೀಕ್ಷೆ ಒಮ್ಮೆ ಮುಗಿದರೆ ಸಾಕಪ್ಪಾ, ಆಮೇಲೆ ಮೂರು ಹಗಲು ಮೂರು ರಾತ್ರಿ ಉದ್ದಕ್ಕೆ ನಿದ್ದೆ ಮಾಡುವುದೇ ಎಂದೆಲ್ಲ ನೀವು ಕನಸು ಕಾಣುತ್ತಿದ್ದಿರಬಹುದು. ಸರಿ, ಪರೀಕ್ಷೆ ಮುಗಿಯಿತು, ಇನ್ನು ಆರಾಮ; ಎಷ್ಟು ಬೇಕಾದರೂ ನಿದ್ದೆ ಮಾಡಬಹುದು ಅಂತೇನಾದರೂ ಮಲಗಲು ಪ್ರಯತ್ನಪಟ್ಟಿರೋ, ನಿದ್ದೆ ಅಷ್ಟು ಸುಲಭಕ್ಕೆ ನಿಮ್ಮ ಬಳಿ ಸುಳಿಯದು. ಪರೀಕ್ಷೆಯ ಜೊತೆಗೆ ಅದೂ ಎಲ್ಲೋ ದೂರಕ್ಕೆ ಹಾರಿರುತ್ತದೆ. ಒಂದೆರಡು ದಿನ ನೀವೂ ಅಯೋಮಯರಾಗಿ ಮಂಕುಬಡಿದವರಂತೆ ಕುಳಿತಿರುತ್ತೀರಿ. ನಿದ್ರೆಯೂ ಬಾರದು, ಹೊಸದೇನನ್ನಾದರೂ ಮಾಡುವುದಕ್ಕೆ ಮನಸ್ಸೂ ಒಪ್ಪದು. ‘ನನ್ನ ತಲೆಯೇ ಓಡುತ್ತಿಲ್ಲ’ ಎಂದು ಸಹವರ್ತಿಗಳ ಜೊತೆ ನೀವು ಹೇಳಿದ್ದನ್ನು ಜ್ಞಾಪಿಸಿಕೊಳ್ಳಿ.

ಪರೀಕ್ಷೆಯ ದಿನಗಳೇ ಆಗಬೇಕಿಲ್ಲ. ಬೇರೆ ಯಾವುದೇ ಒತ್ತಡದ ಸಂದರ್ಭ ಆಗಿರಬಹುದು. ಒಂದಷ್ಟು ದಿನ ನಿಮಿಷವೂ ಬಿಡುವಿಲ್ಲದೆ ನಿರಂತರವಾಗಿ ಕೆಲಸಕಾರ್ಯಗಳಲ್ಲಿ ವ್ಯಸ್ತರಾಗಿದ್ದು, ಅದು ಮುಗಿದ ಮೇಲೆ ಕಾಡುವ ಖಾಲಿತನವನ್ನು ನೆನಪಿಸಿಕೊಳ್ಳಿ. ಅಲ್ಲಿಯೂ ಹೀಗೆಯೇ ಆಗುತ್ತದೆ. ಎಲ್ಲ ಕೆಲಸ ಮುಗಿಸಿ ಕೊಂಚ ಬಿಡುವಾದ ಮೇಲೆ ಯಾವುದೋ ಒಂದು ಹೊಸದನ್ನು ಕೈಗೆತ್ತಿಕೊಳ್ಳೋಣ ಎಂದುಕೊAಡಿದ್ದರೆ, ಅದಕ್ಕೊಂದು ಮುಹೂರ್ತವೇ ಒದಗುವುದಿಲ್ಲ. ಮನಸ್ಸು ಏಕಾಗ್ರತೆ ಇಲ್ಲದೆ ಅತ್ತಿಂದಿತ್ತ ಇತ್ತಿಂದತ್ತ ಎತ್ತೆತ್ತಲೋ ಅಡ್ಡಾಡಿಕೊಂಡಿರುತ್ತದೆ. ಅರೆ, ಹತ್ತುಹಲವು ಕೆಲಸಗಳಿದ್ದಾಗ ಇದೊಂದನ್ನು ಮಾಡಿಮುಗಿಸಲು ಅರ್ಧ ಗಂಟೆ ಸಾಕಾಗುತ್ತಿತ್ತು, ಈಗ ದಿನಗಟ್ಟಲೆ ತೆಗೆದುಕೊಂಡರೂ ಕೆಲಸ ಪೂರ್ತಿಯಾಗುತ್ತಿಲ್ಲ ಎಂದು ನಿಮ್ಮೊಳಗೆಯೇ ಅಚ್ಚರಿಪಟ್ಟುಕೊಂಡ ಉದಾಹರಣೆಗಳೂ ಇರಬಹುದು.

ಹೌದು, ಇದು ಮನುಷ್ಯನ ಮೂಲಸ್ವಭಾವ. ಯಾವುದೇ ಕೆಲಸವನ್ನು ಗುಣಮಟ್ಟದೊಂದಿಗೆ ನಿರ್ವಹಿಸಬೇಕಾದರೆ ಒಂದು ‘ಫೋಕಸ್’ ಬೇಕು. ಈ ಫೋಕಸ್ ಹುಟ್ಟಿಕೊಳ್ಳುವುದು ಒತ್ತಡದಲ್ಲಿ. ‘ಅನಿವಾರ್ಯವೇ ಅನ್ವೇಷಣೆಯ ತಾಯಿ’ ಎಂಬ ಮಾತೇ ಇದೆಯಲ್ಲ! ಇಲ್ಲಿ ಒಂದು ಕೆಲಸವನ್ನು ಮಾಡಿಮುಗಿಸಲೇಬೇಕಾದ ಅನಿವಾರ್ಯವೇ ಕೆಲಸದ ಹಿಂದಿನ ಪ್ರೇರಣಾಶಕ್ತಿ. ಆಗ ಫೋಕಸ್ ತಾನೇತಾನಾಗಿ ಸೃಷ್ಟಿಯಾಗಿರುತ್ತದೆ. ಅದು ಇದ್ದಾಗ ಮನಸ್ಸು ಅಸ್ಥಿರಗೊಳ್ಳುವುದಿಲ್ಲ; ಮರ್ಕಟನಂತೆ ಅಲ್ಲಿ ಇಲ್ಲಿ ಅಡ್ಡಾಡುವುದಕ್ಕೆ ಎಡೆಯೇ ಇರುವುದಿಲ್ಲ. ಅರ್ಧ ದಿನದಲ್ಲಿ ಮಾಡಿಮುಗಿಸಬಹುದಾದ ಕೆಲಸ ಅರ್ಧ ಗಂಟೆಯಲ್ಲೇ ಆಗುವುದೂ ಇದೆ. 

ಸೃಜನಶೀಲ ಕೆಲಸಗಳಿಗೂ ಅನೇಕ ಬಾರಿ ಇಂತಹ ಒತ್ತಡ ಬೇಕು. ಒಂದು ಲೇಖನ ಬರೆಯಬೇಕೆಂದುಕೊಂಡಿರುತ್ತೇವೆ. ಹಾಗಂದುಕೊಂಡೇ ದಿನಗಟ್ಟಲೆ ಸಮಯ ಕಳೆದಿರುತ್ತೇವೆ. ಬರೆವಣಿಗೆ ಒಂದಂಗುಲವೂ ಮುಂದೆ ಹೋಗಿರುವುದಿಲ್ಲ. ಯಾವುದೋ ಒಂದು ದಿನ ನಾಳೆ ಬೆಳಗ್ಗೆ ಆ ಲೇಖನ ಮುಗಿದಿರಲೇಬೇಕು ಎಂಬ ಅನಿವಾರ್ಯ ಹುಟ್ಟಿಕೊಳ್ಳುತ್ತದೆ ನೋಡಿ; ಅನುಮಾನವೇ ಬೇಡ, ಲೇಖನ ಸಿದ್ಧವಾಗುತ್ತದೆ. ಕೆಲಸ ಆಗಲೇಬೇಕು ಎಂಬ ಒಳಗಿನ ಒತ್ತಡ ಕೆಲಸವನ್ನು ಆಗುಮಾಡುತ್ತದೆ. ತರ್ಕಗಳು, ಯೋಚನೆಗಳು, ಅಗತ್ಯ ನಿದರ್ಶನಗಳು ತಾವಾಗಿಯೇ ಹುಟ್ಟಿಕೊಂಡು ಮನಸ್ಸಿನ ಎದುರು ಬಂದು ಕುಣಿಯುತ್ತವೆ. ಕೈ ಬರೆಯುತ್ತಾ ಸಾಗುತ್ತದೆ. 

ಇದರರ್ಥ ಮನುಷ್ಯ ಸದಾ ಒತ್ತಡಗಳ ಮಧ್ಯೆ ಬದುಕಬೇಕು ಎಂದಲ್ಲ. ವ್ಯಕ್ತಿಗೆ ಬಿಡುವು, ವಿಶ್ರಾಂತಿ ಬಹಳ ಮುಖ್ಯ. ಅವುಗಳ ಕೊರತೆಯಿಂದ ಆರೋಗ್ಯವೇ ಹಾಳಾಗುತ್ತದೆ. ಆರೋಗ್ಯ ಕೈಕೊಟ್ಟರೆ ಉತ್ಸಾಹವೇ ಕುಂದಿಬಿಡುತ್ತದೆ. ಯಾವ ಹೊಸ ಕೆಲಸವೂ ಆಗುವುದಿಲ್ಲ. ದೈಹಿಕ, ಮಾನಸಿಕ ಆರೋಗ್ಯ ಎಲ್ಲದಕ್ಕಿಂತಲೂ ಮುಖ್ಯ. ಅದು ಇದ್ದಾಗ ಮಾತ್ರ ಎಂತಹ ಒತ್ತಡಗಳನ್ನೂ ನಿಭಾಯಿಸಬಹುದು. ಮನಸ್ಸನ್ನು ಜಡವಾಗಿರಲು ಬಿಡಬಾರದು ಎಂಬುದಷ್ಟೇ ಇಲ್ಲಿ ಒತ್ತಡ, ಗಮನ ಇತ್ಯಾದಿ ಪದಗಳನ್ನು ಬಳಸಿರುವ ಉದ್ದೇಶ.

An idle mind is a devils' workshop ಎಂಬ ನಾಣ್ಣುಡಿಯೇ ಇದೆ. ಸೋಮಾರಿ ಮನಸ್ಸು ದೆವ್ವಗಳ ಕಮ್ಮಟವಂತೆ! ಯಾವುದನ್ನೇ ಖಾಲಿಬಿಟ್ಟರೂ ಅದನ್ನು ಇನ್ನೊಬ್ಬರು ಆಕ್ರಮಿಸಿಕೊಳ್ಳುವ ಕಾಲ ಇದು. ಇನ್ನು ಮನಸ್ಸನ್ನು ಖಾಲಿ ಬಿಟ್ಟರೆ ಆಗುತ್ತದೆಯೇ? ಇಲ್ಲಸಲ್ಲದ ಯೋಚನೆಗಳು, ಅನಗತ್ಯ ವಿಚಾರಗಳು ಅಲ್ಲಿ ಬಂದು ತುಂಬಿಕೊಳ್ಳುತ್ತವೆ. ಅವುಗಳಿಗಿಂತ ದೊಡ್ಡ ದೆವ್ವಗಳಿಲ್ಲ. ನಮ್ಮ ಮನಸ್ಸನ್ನು, ಕೆಲಸಗಳನ್ನು ಕೆಡಿಸಲು ಬೇರೆಯಾರೂ ಬರಬೇಕಿಲ್ಲ. ಅದಕ್ಕೆ ನಾವೇ ಸಾಕು. ಮನಸ್ಸು ಸದಾ ಯಾವುದೋ ಕಾರ್ಯದ ಕಡೆ ವ್ಯಸ್ತವಾಗಿದ್ದರೆ ಅಲ್ಲಿ ಬೇರೆ ಇನ್ನೇನೋ ಬಂದು ಠಿಕಾಣಿ ಹೂಡುವುದಕ್ಕೆ ಅವಕಾಶವೇ ಇರುವುದಿಲ್ಲ. ನಿಮ್ಮ ಅನುಮತಿಯಿಲ್ಲದೆ ಅದು ಹೇಗೆ ಅನಗತ್ಯ ಕಿರಿಕಿರಿಗಳು ನಿಮ್ಮ ಮನಸ್ಸಿನ ಮನೆಯೊಳಗೆ ಬಂದು ಬಾಡಿಗೆ ಹಿಡಿಯುತ್ತವೆ ಹೇಳಿ?

ಬ್ಯುಸಿ ಆಗಿರುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ‘ಬ್ಯುಸಿ ಆಗಿರುವುದು ಒಳ್ಳೆಯದು. ಏಕೆಂದರೆ ಅಂತಹ ಸಮಯದಲ್ಲಿ ಬೇರೆಯವರನ್ನು ಟೀಕಿಸುವುದಕ್ಕೆ ಸಮಯ ಇರುವುದಿಲ್ಲ’ ಎನ್ನುತ್ತಾನೆ ಒಬ್ಬ ಲೇಖಕ. ಇದಂತೂ ಒಂದು ಅದ್ಭುತ ಮಾತು. ಬಹಳ ಮಂದಿ ಇನ್ನೊಬ್ಬರ ತಪ್ಪುಗಳನ್ನು ಹುಡುಕುವುದರಲ್ಲಿ, ಅವರನ್ನು ಹಳಿಯುವಲ್ಲೇ ತಮ್ಮ ಆಯುಷ್ಯವನ್ನು ಕಳೆದುಬಿಡುತ್ತಾರೆ. ಬೇರೆಯವರನ್ನು ಸದಾ ವಿಮರ್ಶೆಯ ತಕ್ಕಡಿಯಲ್ಲಿ ತೂಗುವ ಇವರಿಗೆ ತಮ್ಮ ತಪ್ಪುಗಳು ಕಾಣಿಸುವುದೇ ಇಲ್ಲ, ಅಥವಾ ಕಂಡರೂ ಕಾಣದಂತೆ ಇರುತ್ತಾರೆ. ಯಾವಾಗಲೂ ಇನ್ನೊಬ್ಬರನ್ನು ದೂರುತ್ತಾ ಕೂರುವವರಿಗೆ ತಮ್ಮ ಉದ್ಧಾರದ ದಾರಿ ಕಾಣಿಸುವುದೇ ಇಲ್ಲ. ಅವರು ಸರಿ ಇಲ್ಲ, ಇವರು ಸರಿ ಇಲ್ಲ ಎನ್ನುತ್ತಲೇ ಇಂಥವರು ಮನಸ್ಸನ್ನು ಸದಾ ವಿಷದ ಕುಲುಮೆ ಮಾಡಿಕೊಂಡು ಅಸಂತುಷ್ಟಿಯಲ್ಲಿ ಒದ್ದಾಡುತ್ತಿರುತ್ತಾರೆ. ‘ಉದ್ಧರೇದಾತ್ಮನಾತ್ಮಾನಾಂ’ ಎಂದು ಗೀತಾಚಾರ್ಯನೇ ಹೇಳಿಲ್ಲವೇ? ಆತನ ಮಾತನ್ನು ನಾವು ಪ್ರಮಾಣವನ್ನಾಗಿ ಇಟ್ಟುಕೊಳ್ಳಬಹುದು. ನಮ್ಮ ಉದ್ಧಾರವನ್ನು ಮಾಡಲು ಇನ್ನೊಬ್ಬ ಬರುವುದಿಲ್ಲ, ಅದನ್ನು ನಾವೇ ಮಾಡಿಕೊಳ್ಳಬೇಕು. ಅದಾಗಬೇಕೆಂದರೆ ಮನಸ್ಸು ಭೂತಬಂಗಲೆಯಾಗದಂತೆ ಎಚ್ಚರವಹಿಸಬೇಕು. ‘ಏನಾದರೊಂದು ಕೆಲಸದಲ್ಲಿ ಸದಾ ನಿರತವಾಗಿರಿ, ಕಾರ್ಯನಿರತ ವ್ಯಕ್ತಿಗೆ ಅಸಂತೋಷದಿಂದಿರಲು ಸಮಯವೇ ಸಿಗುವುದಿಲ್ಲ’ ಎಂದಿದ್ದ ಪ್ರಸಿದ್ಧ ಕವಿ ಆರ್. ಎಲ್. ಸ್ಟೀವನ್‌ಸನ್. 

ಸದಾ ಬ್ಯುಸಿ ಆಗಿರುವುದು, ಒತ್ತಡಗಳ ಮಧ್ಯೆ ಬದುಕವುದು ಸರಿ; ಆದರೆ ಅದು ಎಂತಹ ಒತ್ತಡ ಎಂಬುದರ ಕುರಿತೂ ನಮಗೆ ಸ್ಪಷ್ಟತೆ ಬೇಕು. ಇಲ್ಲಿ ಬ್ಯುಸಿ ಆಗಿರುವುದು ಎಂದರೆ ನಮ್ಮಿಂದಾಗದ ಕೆಲಸಗಳನ್ನು ತಲೆಯ ಮೇಲೆ ಎಳೆದುಕೊಳ್ಳುವುದು ಎಂದಲ್ಲ, ನಮಗೆ ಒಗ್ಗುವ ಕೆಲಸಗಳಲ್ಲಿ ಸದಾ ನಿರತವಾಗಿರುವುದು ಎಂದರ್ಥ. ನಮಗೆ ಇಷ್ಟವಾದ ಕೆಲಸಗಳು ಎಷ್ಟಿದ್ದರೂ ಅದು ಒತ್ತಡ ಎನಿಸುವುದೇ ಇಲ್ಲ. ‘ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಒತ್ತಡವೆಂದರೆ ಸ್ನೇಹಮಯ ಒತ್ತಡ’ ಎಂಬ ಮಾತೊಂದಿದೆ. ನಮ್ಮ ಹೊಣೆಗಾರಿಕೆಗಳನ್ನು ಸ್ನೇಹಮಯ ಒತ್ತಡಗಳನ್ನಾಗಿ ಮಾಡಿಕೊಳ್ಳುವುದು ನಮ್ಮ ಮನಸ್ಥಿತಿಯಲ್ಲಿ ಇದೆ. 

ಕೆಲಸಗಳ ಅಡಾವುಡಿಯಲ್ಲಿ, ಈಗಿಂದೀಗಲೇ ಆಗಬೇಕು ಎಂಬ ಒತ್ತಡದಲ್ಲಿ ಕವಿತೆಯೊಂದು ಹುಟ್ಟಿಕೊಳ್ಳುವುದು ಸಾಧ್ಯವೇ ಎಂದು ನೀವು ಕೇಳಬಹುದು. ಆ ಪ್ರಶ್ನೆ ಸರಿಯಾದದ್ದೇ ಆಗಿದೆ. ಸೃಜನಶೀಲ ಕೃತಿಯೊಂದು ಹುಟ್ಟಿಕೊಳ್ಳುವುದರ ಹಿಂದೆ ತಣ್ಣನೆಯ ಧ್ಯಾನವೊಂದು ಅಗತ್ಯ. ಸದಾ ಧಾವಂತದಲ್ಲಿ ಓಡಾಡುವ ಮಂದಿಗೆ ಇಂತಹ ಧ್ಯಾನಕ್ಕೆ ಸಮಯ ದೊರೆಯುವುದಿಲ್ಲ. ಧಾವಂತಗಳ ಮಧ್ಯೆ ನಮ್ಮನ್ನು ನಾವು ಕಳೆದುಕೊಳ್ಳುವ ಪರಿಸ್ಥಿತಿ ಬರಬಾರದು. ಎಲ್ಲ ಒತ್ತಡಗಳ ನಡುವೆಯೂ ನಮ್ಮದೇ ಆದ ಒಂದು ಪುಟ್ಟ ಏಕಾಂತ ಬೇಕು. ದಿನಚರಿಯನ್ನು ಸರಿಯಾಗಿ ನಿಭಾಯಿಸಿಕೊಳ್ಳಲು ಕಲಿತರೆ ಎಲ್ಲ ಒತ್ತಡಗಳ ಮಧ್ಯೆ ನಮ್ಮದೇ ಆದ ಸಮಯವೂ ಸಿಗುತ್ತದೆ. ‘ಬ್ಯುಸಿ ಆಗಿದ್ದರಷ್ಟೇ ಸಾಲದು; ಇರುವೆಗಳೂ ಬ್ಯುಸಿ ಆಗಿರುತ್ತವೆ. ನಾವು ಯಾವುದರಲ್ಲಿ ಬ್ಯುಸಿ ಆಗಿರುತ್ತೇವೆ ಎಂಬುದು ಮುಖ್ಯವಾದ ಪ್ರಶ್ನೆ’ ಎನ್ನುತ್ತಾನೆ ಒಬ್ಬ ಕವಿ. ಯಾವುದರಲ್ಲಿ ಬ್ಯುಸಿ ಆಗಿರಬೇಕು, ಅದರೊಳಗೆ ಎಷ್ಟು ಸಮಯವನ್ನು ಏಕಾಂತಕ್ಕಾಗಿ ಇಟ್ಟುಕೊಳ್ಳಬೇಕು ಎಂದು ಅರ್ಥಮಾಡಿಕೊಂಡವರನ್ನು ಯಶಸ್ಸು ಹುಡುಕಿಕೊಂಡು ಬರುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಜನವರಿ 21, 2023

ಹೇಳದೆ ನೆಪ, ಮಾಡೋಣ ಶಿಸ್ತಿನ ಜಪ

(24-30 ಡಿಸೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ)

ಇವತ್ತು ಟ್ರೇನು ಹಿಡಿಯಲೇಬೇಕೆಂದು ಹೊರಟಿದ್ದೆ, ಒಂದೇ ನಿಮಿಷದಲ್ಲಿ ಮಿಸ್ ಆಯ್ತು. ಇವತ್ತು ಬಸ್ಸು ತಪ್ಪಿಸಿಕೊಳ್ಳಲೇಬಾರದು
ಅಂದುಕೊಂಡಿದ್ದೆ; ಕಣ್ಣೆದುರೇ ಹೊರಟುಹೋಯ್ತು... ಇಂತಹ ಮಾತುಗಳನ್ನು ಪ್ರತಿದಿನ ಅವರಿವರಿಂದ ಕೇಳಿಸಿಕೊಳ್ಳುತ್ತಲೇ ಇರುತ್ತೇವೆ. ಪ್ರತಿದಿನ ಯಾಕೆ ಕೇಳುತ್ತೇವೆ ಎಂದರೆ ಈ ಬಗೆಯ ಮಂದಿ ಎಲ್ಲ ಕಡೆ ಇರುತ್ತಾರೆ ಅಥವಾ ಇವರು ಪ್ರತಿದಿನವೂ ಟ್ರೇನು-ಬಸ್ಸುಗಳನ್ನು ತಪ್ಪಿಸಿಕೊಳ್ಳುತ್ತಲೇ ಇರುತ್ತಾರೆ. ಕೊನೆಗೆ ಇವರು ‘ನನ್ನ ಹಣೆಬರಹವೇ ಸರಿ ಇಲ್ಲ’ ಎಂದೋ, ಇನ್ನೊಬ್ಬರಿಂದಾಗಿ ಹೀಗಾಯ್ತು ಎಂದೋ ಷರಾ ಬರೆದುಕೊಳ್ಳುತ್ತಾ ಹೋಗುತ್ತಾರೆ. ಆದರೆ ಸಮಸ್ಯೆ ಸರಿಹೋಗುವುದಿಲ್ಲ. ಸಾಮಾನ್ಯ ಟ್ರೇನು-ಬಸ್ಸುಗಳು ತಪ್ಪಿಹೋದರೆ ಚಿಂತೆಯಿಲ್ಲ, ನಿಜಜೀವನದ ಬಂಡಿಗಳನ್ನು ತಪ್ಪಿಸಿಕೊಂಡರೆ ಮುಂದೆ ದೊಡ್ಡ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

ಇವರು ಟ್ರೇನು-ಬಸ್ಸುಗಳ ವಿಷಯದಲ್ಲಿ ಮಾತ್ರವಲ್ಲ, ಬಹುತೇಕ ಎಲ್ಲ ವಿಷಯಗಳಲ್ಲೂ ಗೊಂದಲ-ಗೋಜಲು ಮಾಡಿಕೊಳ್ಳುತ್ತಾರೆ. ಯಾವುದೋ ದಿನದ ಒಳಗೆ ನಿರ್ದಿಷ್ಟ ಉದ್ದೇಶಕ್ಕೆ ಅರ್ಜಿ ಸಲ್ಲಿಸಬೇಕಿರುತ್ತದೆ; ಕೊನೆಯ ದಿನಾಂಕ ಮುಗಿದ ಮರುದಿನ ಅದು ನೆನಪಾಗಿ ತಲೆತಲೆ ಚಚ್ಚಿಕೊಳ್ಳುತ್ತಾರೆ. ಇವತ್ತು ಐದು ಕೆಲಸ ಮಾಡಿ ಮುಗಿಸಲೇಬೇಕು ಎಂದು ಮನೆಯಿಂದ ಹೊರಟಿರುತ್ತಾರೆ. ಸಂಜೆಯ ವೇಳೆಗೆ ಅವುಗಳಲ್ಲಿ ಒಂದೆರಡನ್ನೂ ಮಾಡಲಾಗದೆ ಆತಂಕ ಹೆಚ್ಚಿಸಿಕೊಳ್ಳುತ್ತಾರೆ. ಯಾಕೆ ಹೀಗಾಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅರ್ಥವಾಗುವುದೇನೆಂದರೆ ಇವರು ‘ಫೋಕಸ್’ ಕಳೆದುಕೊಂಡಿರುತ್ತಾರೆ, ಅಥವಾ ಎಂದೂ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡುವ ಬಗ್ಗೆ ತಲೆಕೆಡಿಸಿಕೊಂಡಿರುವುದಿಲ್ಲ. ಸರಳವಾಗಿ ಹೇಳಬೇಕೆಂದರೆ ಜೀವನಶಿಸ್ತು ಕುರಿತು ಇವರಿಗೆ ಆಸಕ್ತಿ ಕಡಿಮೆ.

‘ಅಶಿಸ್ತಿನಿಂದ ಬದುಕಿರಿ! ಆರಾಮವಾಗಿರಿ!’ ಎಂದು ಹೇಳುವ ಕೆಲವು ಮಂದಿ ಸಿಗುತ್ತಾರೆ. ಆದರೆ ಈ ಅಶಿಸ್ತಿನ ಸೂತ್ರ ಕೆಲವರಿಗಷ್ಟೇ ಸಂತೋಷ-ಸಮಾಧಾನ ತಂದುಕೊಡಬಹುದು. ಬೇರೆಯವರಿಗೆ ಮಾದರಿಯಾಗುವಂತೆ, ಪ್ರೇರಣೆಯಾಗುವಂತೆ ಬದುಕುವುದು ಕಷ್ಟ. ಜೀವನದಲ್ಲಿ ಎಲ್ಲವನ್ನೂ ನಿರೀಕ್ಷಿಸಿದಂತೆ, ನಿರ್ದಿಷ್ಟ ಯೋಜನೆಯಂತೆ ಮಾಡಿಕೊಂಡು ಹೋಗುವುದು ಅಸಾಧ್ಯ ಎಂಬುದೇನೋ ನಿಜ. ಆದರೆ ಎಲ್ಲರೂ ಅಶಿಸ್ತಿನಿಂದ ಬದುಕುತ್ತೇವೆ, ಆರಾಮವಾಗಿರುತ್ತೇವೆ ಎಂದುಕೊಂಡರೆ ಬದುಕೇ ಗೊಂದಲದ ಗೂಡಾಗಬಹುದು.

ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಪಾತ್ರದ ಚೌಕಟ್ಟಿನಲ್ಲೇ ಜೀವಿಸುತ್ತ ಇರುತ್ತಾನೆ. ವಿದ್ಯಾರ್ಥಿ, ಉದ್ಯೋಗಿ, ಮಾಲೀಕ, ತಂದೆ, ತಾಯಿ, ಪತಿ, ಪತ್ನಿ, ಗೃಹಿಣಿ... ಯಾವುದೋ ಒಂದು ಹೊಣೆಗಾರಿಕೆ ಹೆಗಲ ಮೇಲೆ ಸದಾ ಇರುತ್ತದೆ. ಅನೇಕ ಬಾರಿ ಒಬ್ಬ ವ್ಯಕ್ತಿ ಅನೇಕ ಚೌಕಟ್ಟುಗಳೊಳಗೆ ಏಕಕಾಲಕ್ಕೆ ಪಾತ್ರನಿರ್ವಹಿಸುತ್ತಾ ಇರುತ್ತಾನೆ. ಪ್ರತಿ ಚೌಕಟ್ಟೂ ಮಹತ್ವದ್ದೇ. ಅಲ್ಲಿ ನಿರ್ದಿಷ್ಟ ಯೋಚನೆ-ಯೋಜನೆಗಳು ಇಲ್ಲದೇ ಹೋದಾಗ ಬದುದು ಪ್ರತಿದಿನವೂ ಆತಂಕಕಾರಿ ಎನಿಸತೊಡಗುತ್ತದೆ.

ಟ್ರೇನು ತಪ್ಪಿಸಿಕೊಳ್ಳುವವನ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಆ ಟ್ರೇನಿಗೆ ಆತ ಮೊದಲ ಬಾರಿ ಹೋಗುವವನೇನಲ್ಲ. ಪ್ರತಿದಿನದ ಪ್ರಯಾಣಿಕನೇ. ಅದು ಇಂತಹ ಸಮಯಕ್ಕೆ ಬರುತ್ತದೆ ಎಂಬ ತಿಳುವಳಿಕೆ ಸಹಜವಾಗಿಯೇ ಇರುತ್ತದೆ. ಆದರೂ ಯಾಕೆ ಪದೇಪದೇ ತಪ್ಪಿಸಿಕೊಳ್ಳುತ್ತಾನೆ? ಎಲ್ಲೋ ಒಂದು ಕಡೆ ಆತ ಸಮಯವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿಕೊಳ್ಳುವಲ್ಲಿ, ಮುಂದಾಲೋಚನೆ ಮಾಡುವಲ್ಲಿ ಸೋತಿದ್ದಾನೆ ಎಂದು ಅರ್ಥ. ಅನಿರೀಕ್ಷಿತವಾಗಿ ಬರುವ ಕೆಲವು ಅಡೆತಡೆಗಳು ಎಲ್ಲ ಕಡೆ ಇರುತ್ತವೆ, ಅವುಗಳಿಂದ ತೊಂದರೆಗೊಳಗಾಗುವುದನ್ನು ತಪ್ಪಿಸಿಕೊಳ್ಳಲಾಗದು. ಆದರೆ ಅನಿರೀಕ್ಷಿತವೇ ಒಂದು ದಿನಚರಿ ಆಗಬಾರದು. 

ಕೆಲವರಿಗೆ ಜೀವನಶಿಸ್ತು ಸಹಜವಾಗಿಯೇ ಬಂದಿರುತ್ತದೆ. ಅವರ ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದುಕಾಣುತ್ತದೆ. ಅವರು ಏನೇ ಮಾಡಿದರೂ ಚಂದ. ‘ಅಯ್ಯೋ ಯಾವುದಕ್ಕೂ ಟೈಮೇ ಸಿಗುತ್ತಿಲ್ಲ’ ಎಂಬ ದೂರು ಅವರಲ್ಲಿ ಕಡಿಮೆ. ಇರುವ ಸಮಯವನ್ನು ಅವರು ಅತ್ಯುತ್ತಮವಾಗಿ ಬಳಸಿಕೊಳ್ಳಬಲ್ಲರು. ಇನ್ನು ಕೆಲವರು ಯಾವುದನ್ನೂ ಸರಿಯಾಗಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧ. ದಿನಕ್ಕೆ ನಲ್ವತ್ತೆಂಟು ಗಂಟೆ ಕೊಟ್ಟರೂ ಅವರು ಅದನ್ನು ಯಶಸ್ವಿಯಾಗಿ ಹಾಳುಗೆಡಹಬಲ್ಲರು. ಇವರಿಗೆ ಪ್ರತಿಯೊಂದಕ್ಕೂ ಏನಾದರೊಂದು ನೆಪ ಇದ್ದೇ ಇರುತ್ತದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಿಡಬೇಕೆಂದು ಅಂದುಕೊಳ್ಳುತ್ತೇನೆ, ಆದರೆ ನಮ್ಮ ಮನೆ ತುಂಬ ಸಣ್ಣದು. ಯಾವುದಕ್ಕೂ ಜಾಗ ಇಲ್ಲ ಎನ್ನುತ್ತಾರೆ. ತಮಾಷೆಯೆಂದರೆ ದೊಡ್ಡ ಮನೆ ಕೊಟ್ಟರೂ ಇವರು ಹೀಗೆಯೇ ಇರುತ್ತಾರೆ. ಏಕೆಂದರೆ ಅಶಿಸ್ತನ್ನು ಇವರು ಹುಟ್ಟುತ್ತಲೇ ಆವಾಹಿಸಿಕೊಂಡಿರುತ್ತಾರೆ. ಇವರು ಯಾವುದನ್ನೂ ಎತ್ತಿದಲ್ಲೇ ಮತ್ತೆ ಇಡಲಾರರು. ಇರುವ ಜಾಗವನ್ನು ಸದುಪಯೋಗಪಡಿಸಿಕೊಳ್ಳಲಾರರು. 

ಬಾಚಣಿಗೆ, ಪೌಡರು, ಕ್ಲಿಪ್ಪು, ಮತ್ತೊಂದು- ಇಂಥವನ್ನೆಲ್ಲ ಇಡಲು ಗೊತ್ತುಪಡಿಸಿದ ಒಂದು ನಿರ್ದಿಷ್ಟ ಜಾಗ ಇದ್ದರೂ ಅವನ್ನು ಅಲ್ಲೇ ಇಡಲಾರರು. ತಾವೆಲ್ಲಿಗೆ ಎತ್ತಿಕೊಂಡು ಹೋಗಿರುತ್ತಾರೋ ಅಲ್ಲೇ ಬಿಟ್ಟು ಮುಂದಿನ ಕೆಲಸಕ್ಕೆ ಹೋದಾರು. ಮುಂದಿನ ಸಲ ಆ ಜಾಗ ಮರೆತುಹೋಗಿರುತ್ತದೆ. ಅವುಗಳನ್ನು ಮನೆಯೆಲ್ಲ ಹುಡುಕಿ ಇರುವ ಸಮಯವನ್ನು ಕಳೆದುಕೊಂಡಾರು. ನೈಲ್ ಕಟ್ಟರ್ ಬಳಸಿ ಮತ್ತೆ ಅಲ್ಲೇ ತಂದು ಇಡಲಾರರು. ಮತ್ತೊಮ್ಮೆ ನೈಲ್ ಕಟ್ಟರ್ ಬಳಸುವ ಸಂದರ್ಭ ಬಂದಾಗ ಮತ್ತೆ ಮನೆಯೆಲ್ಲ ಹುಡುಕಾಟ. ತಮ್ಮ ಸ್ನಾನದ ಟವೆಲನ್ನು ಒಂದೇ ಕಡೆ ಒಣಹಾಕುವ ಅಭ್ಯಾಸ ಬೆಳೆಸಿಕೊಳ್ಳಲಾರರು. ಸ್ನಾನದ ಹೊತ್ತಿಗೆ ಗಡಿಬಿಡಿ ಮಾಡಿಕೊಂಡು ಅದೆಲ್ಲೆಂದು ಸಿಗದೆ ಹೊಸದೊಂದು ಟವೆಲ್ ಎಳೆದುಕೊಂಡಾರು. ತಾವು ಪ್ರತಿದಿನ ಬಳಸುವ ಪೆನ್ನು-ಪುಸ್ತಕ-ವಾಚು-ಬ್ಯಾಗುಗಳನ್ನೇ ಒಂದು ನಿರ್ದಿಷ್ಟ ಕಡೆ ಇರಿಸಿಕೊಳ್ಳಲಾರರು. ಆಮೇಲೆ ಅವುಗಳನ್ನೇ ಹುಡುಕುತ್ತಾ ಅರ್ಧರ್ಧ ಗಂಟೆ ಕಳೆದುಕೊಂಡಾರು, ಬರಿದೇ ಆತಂಕ ಹೆಚ್ಚಿಸಿಕೊಂಡಾರು.

ಇವೆಲ್ಲ ಸಣ್ಣಪುಟ್ಟ ಸಂಗತಿಗಳು ಎನಿಸಬಹುದು. ಆದರೆ ದಿನನಿತ್ಯದ ಬದುಕನ್ನು ಕಟ್ಟಿಕೊಡುವ ಸಣ್ಣ ತುಣುಕುಗಳು ಇವೇ. ಸ್ವಭಾವತಃ ಈ ಶಿಸ್ತು ಬಂದಿಲ್ಲ ಎಂದಿಟ್ಟುಕೊಳ್ಳಿ; ಕೆಲವನ್ನಾದರೂ ಪ್ರಜ್ಞಾಪೂರ್ವಕ ರೂಢಿಸಿಕೊಳ್ಳಬಹುದು. ಹುಟ್ಟುಗುಣ ಸುಟ್ಟರೂ ಹೋಗದು ಎಂಬ ಮಾತಿದೆ. ಆದರೆ ನಮ್ಮದೇ ಬದುಕಿನ ನಿರಾಳತೆಗಾಗಿ, ನೆಮ್ಮದಿಗಾಗಿ ಕೆಲವು ವಿಷಯಗಳನ್ನು ಪ್ರಜ್ಞಾಪೂರ್ವಕವಾಗಿಯೇ ಅಳವಡಿಸಿಕೊಳ್ಳುವುದು ಅನಿವಾರ್ಯ.

ದಿನಚರಿಯಲ್ಲಿ ಒಂದು ಸರಳ ವೇಳಾಪಟ್ಟಿಯನ್ನು ಅಳವಡಿಸಿಕೊಳ್ಳುವುದರಿಂದ ಬಹುತೇಕ ಅಶಿಸ್ತನ್ನು ಮತ್ತು ಅದರಿಂದುAಟಾಗುವ ಗೊಂದಲಗಳನ್ನು ತಡೆಯಬಹುದು. ಇದು ಶಾಲೆಯ ಟೈಂಟೇಬಲ್ ರೀತಿಯಲ್ಲಿ ಇರಬೇಕಾಗಿಲ್ಲ. ದಿನನಿತ್ಯದ ಅನೇಕ ಕೆಲಸಗಳನ್ನು ನಿಮಿಷ, ಸೆಕೆಂಡುಗಳ ಲೆಕ್ಕ ಇಟ್ಟುಕೊಂಡು ಮಾಡಲಾಗುವುದಿಲ್ಲ. ಆದರೆ ಅಂತಹದೊಂದು ವೇಳಾಪಟ್ಟಿಯ ಚೌಕಟ್ಟು ಇಲ್ಲದೆ ಹೋದಾಗ ಆಯಾ ದಿನದ ಉದ್ದೇಶ-ಗುರಿಗಳೆಲ್ಲ ಗೊಂದಲಗಳಾಗಿ ಮಾರ್ಪಟ್ಟು ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಡುತ್ತೇವೆ. ಅದೇ ನಾವೆಂದುಕೊAಡAತೆ ಕೆಲಸಗಳು ನಡೆದಾಗ ಒಂದು ಸಂತೃಪ್ತಿಯ ನಿದ್ದೆಗೆ ಜಾರುತ್ತೇವೆ. ಮನುಷ್ಯನಿಗೆ ಆತ್ಯಂತಿಕವಾಗಿ ಬೇಕಾದುದು ಒಂದು ಸಮಾಧಾನದ ನಿದ್ದೆಯೇ ಹೊರತು ಇನ್ನೇನು!

ಬೆಳಗ್ಗೆ ಬೇಗನೆ ಏಳುವ ಅಭ್ಯಾಸದಿಂದ ಸಾಕಷ್ಟು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಆರೂವರೆಗೋ ಏಳೂವರೆಗೋ ಏಳುವವರಿದ್ದರೆ ಐದುಗಂಟೆಗೆ ಎದ್ದುನೋಡಿ, ನಿಮ್ಮ ದಿನಚರಿಯೇ ಬದಲಾಗಿ ಹೋಗುತ್ತದೆ. ಸಾಮಾನ್ಯ ದಿನಗಳಿಗಿಂತ ಒಂದೆರಡು ಗಂಟೆ ಹೆಚ್ಚು ಸಮಯ ನಿಮ್ಮದಾಗುತ್ತದೆ. ನಾನು ರಾತ್ರಿ ತಡವಾಗಿ ಮಲಗುವವನು, ಆದ್ದರಿಂದ ಬೆಳಗ್ಗೆ ತಡವಾಗಿ ಏಳುವವನು- ಹೀಗೆ ಸಮಜಾಯುಷಿ ಕೊಡುವುದುಂಟು. ಕೆಲವರಿಗೆ ಒಂದೊAದು ಬಗೆಯ ದಿನಚರಿ ಒಗ್ಗುವುದುಂಟು; ಕೆಲವರ ಕೆಲಸದ ಸ್ವರೂಪ ಹೆಚ್ಚಿನ ಸಮಯ ಬೇಡುವುದೂ ಉಂಟು. ಆದರೂ ಮುಂಜಾನೆಯ ಸದುಪಯೋಗದ ಮೌಲ್ಯ ಒಂದು ಬೇರೆಯದೇ ಮಟ್ಟದ್ದು. ಮುಂಜಾನೆ ಎದ್ದು ನೀವು ಏನೇ ಮಾಡಿ, ಅದು ಉತ್ಕೃಷ್ಟವಾಗಿಯೇ ಇರುತ್ತದೆ. ಮುಂಜಾನೆ ಕೇಳುವ ಒಂದೊಳ್ಳೆಯ ಹಾಡು ಇಡೀ ದಿನ ಮನಸ್ಸಿನಲ್ಲಿ ಗುನುಗುವಂತೆ ಇರುವುದಿಲ್ಲವೇ- ಹಾಗೆ. ಇದರ ಜೊತೆಗೆ ಸಣ್ಣದೊಂದು ‘ಪ್ಲಾನಿಂಗ್’ ನಮ್ಮ ದಿನಚರಿಗೆ ಕೊಂಚ ನಿರಾಳತೆಯನ್ನು ತಂದುಕೊಡಬಹುದು. ರಾತ್ರಿ ಮಲಗುವ ಮುನ್ನ ಇವತ್ತೇನು ಮಾಡಿದೆ, ಏನೆಲ್ಲ ಬಾಕಿಯಿದೆ, ನಾಳೆಯೇನು ಮಾಡಬೇಕು ಎಂಬ ಒಂದೆರಡು ನಿಮಿಷಗಳ ಯೋಚನೆ, ಬೆಳಗ್ಗೆ ಎದ್ದ ತಕ್ಷಣ ಆ ದಿನ ಮಾಡಬೇಕಾದ ಕೆಲಸಗಳ ಕುರಿತ ಸಣ್ಣದೊಂದು ಚಿಂತನೆ- ಸಾಕಷ್ಟು ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅನೇಕ ಜವಾಬ್ದಾರಿಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುವವರಾದರೆ ಬಾಕಿ ಕೆಲಸಗಳ ಚೆಕ್‌ಲಿಸ್ಟ್ ಮಾಡಿಕೊಳ್ಳುವುದು ಉತ್ತಮ. ಇದರಿಂದ ಸಣ್ಣಪುಟ್ಟ ಕೆಲಸಗಳು ಮರೆತುಹೋಗುವುದನ್ನು ನಿವಾರಿಸಬಹುದು.

ನಮ್ಮ ಯಶಸ್ಸಿಗೆ ನಾವೇ ಕಾರಣರು ಎನ್ನುವುದು ನಿಜವಾದರೆ, ನಮ್ಮ ಗೊಂದಲಗಳಿಗೂ ನಾವೇ ಕಾರಣರು.

- ಸಿಬಂತಿ ಪದ್ಮನಾಭ ಕೆ.ವಿ.

ಸೋಮವಾರ, ಅಕ್ಟೋಬರ್ 31, 2022

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಮುಖ್ಯಮಂತ್ರಿಗಳ ಇ-ಆಡಳಿತ
ಸಲಹೆಗಾರರೂ ಮುಕ್ತಜ್ಞಾನದ ಪ್ರತಿಪಾದಕರೂ ಆದ
ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ:

ರಾಜ್ಯದ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ಪದವಿ ವಿದ್ಯಾರ್ಥಿಗಳಿಗಾಗಿ ರೂಪಿತವಾದ ಈ ಪುಸ್ತಕವು ಕನ್ನಡದಲ್ಲಿ ಈ ವರ್ಗದ ಮೊಟ್ಟಮೊದಲ ಮತ್ತು ಸರ್ವಸ್ಪರ್ಶೀ ಪಠ್ಯವಾಗಿದೆ ಎಂದು ಹೇಳಲು ನನಗೆ ಬೇರಾವ ದಾಖಲೆಯೂ ಬೇಡ. ಏಕೆಂದರೆ ಅಂತಹ ದಾಖಲೆಗಳು ಸಿಗುವುದೂ ಇಲ್ಲ! ಹೆಚ್ಚೆಂದರೆ 2005-07 ರ ನಡುವೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ದೂರಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಗಣಕ ಪರಿಚಯ, ಯಂತ್ರಾಂಶ – ತಂತ್ರಾಂಶ ಕುರಿತ ಪಠ್ಯಪುಸ್ತಕಗಳನ್ನು ಇಲ್ಲಿ ಉಲ್ಲೇಖಿಸಬಹುದು. ಖಾಸಗಿ ಪ್ರಕಟಣಾ ರಂಗದಲ್ಲಿ ಈ ಕುರಿತ ಬಿಡಿ ವಿಷಯಗಳ ಕೆಲವು ಪುಸ್ತಕಗಳೂ ಬಂದಿರಬಹುದು. ಆದರೆ ಪತ್ರಿಕಾರಂಗದ ವಿದ್ಯಾರ್ಥಿ - ಶಿಕ್ಷಕರಿಗೆಂದು ರೂಪಿಸಿದ ಈ ಪುಸ್ತಕವು ಈ ಕಾಲದ ಮಹತ್ವದ ಕೃತಿ. 

ಮಾಹಿತಿಸ್ಫೋಟದ ಈ ಯುಗದಲ್ಲಿ ಮಾಹಿತಿ – ಜ್ಞಾನದ ನಡುವಣ ಅಂತರವೇ ತೆಳುವಾಗುತ್ತಿದೆ. ಹುಸಿ  ವ್ಯಾಖ್ಯಾನಗಳಿಂದ, ತಪ್ಪು  ಅಂಕಿ ಅಂಶ ಮತ್ತು ವಿವರಣೆಗಳಿಂದ ಅಂತರಜಾಲವು ಕಲುಷಿತಗೊಂಡಿದೆ. ವಿಕಿಪೀಡಿಯದಂತಹ ಸ್ವಯಂಘೋಷಿತ ಮುಕ್ತಜ್ಞಾನದ ವೇದಿಕೆಗಳಲ್ಲೂ ಕುಂದುಕೊರತೆಗಳು ಕಾಣುತ್ತಿವೆ.  ಫೇಸ್‌ಬುಕ್ - ಇನ್‌ಸ್ಟಾಗ್ರಾಂ ನಂತಹ ಸಿಮ್ ಆಧಾರಿತವಲ್ಲದ ಸಮಾಜತಾಣಗಳಿಂದ ಹಿಡಿದು ವಾಟ್ಸಪ್, ಕ್ಲಬ್‌ಹೌಸ್‌ನಂತಹ ಸಿಮ್ ಆಧಾರಿತ ಸಮೂಹ ಮಾಧ್ಯಮಗಳಲ್ಲೂ ಸತ್ಯದೊಂದಿಗೇ ಅಸತ್ಯದ ಅಂಶಗಳೂ ಢಾಳಾಗಿ ವಿಜೃಂಭಿಸತೊಡಗಿವೆ. ಆನ್‌ಲೈನ್ ಪತ್ರಿಕಾ ಜಾಲತಾಣಗಳಲ್ಲಿ ಹುಸಿ ವರದಿಗಳನ್ನು ಹುಡುಕುವುದೇ ದೊಡ್ಡ ಉದ್ಯಮವಾಗಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ಜಾಲತಾಣಗಳೂ ಹುಟ್ಟಿಕೊಂಡಿದ್ದು ಅವುಗಳಲ್ಲೂ ಪಕ್ಷಪಾತಿ ವರ್ತನೆಯನ್ನು ಕಾಣಬಹುದಾಗಿದೆ. ಕಳೆದೆರಡು ವರ್ಷಗಳ ಕೊರೋನಾ ಮಹಾಪಿಡುಗಿನ ನಂತರ ಪತ್ರಿಕಾರಂಗದ ಚಹರೆಗಳು ಇನ್ನಿಲ್ಲದಂತೆ ಬದಲಾಗಿವೆ. ಮುದ್ರಣ ಮಾಧ್ಯಮವು ಕುಗ್ಗಿ ಆನ್‌ಲೈನ್ ಮಾಧ್ಯಮದ ಸಾಧ್ಯತೆಗಳು ವಿಸ್ತರಿಸಿವೆ. ಪತ್ರಿಕಾರಂಗದ ಆರ್ಥಿಕ ಲೆಕ್ಕಾಚಾರಗಳೂ ಬದಲಾಗಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಜನರಿಗೆ ನೇರವಾಗಿ ತಲುಪುವ ಆನ್‌ಲೈನ್ ಮಾಧ್ಯಮಗಳಿಗೆ ಬೇಡಿಕೆ ಒದಗಿದೆ. ಆದರೆ ಜಾಹೀರಾತು ಕೊಡುತ್ತಿದ್ದ ಹಲವು ಸಂಸ್ಥೆಗಳು ನೇರವಾಗಿಯೇ ಗ್ರಾಹಕರನ್ನು ಮುಟ್ಟುವ ತಂತ್ರಗಳಿಗೆ ಮೊರೆಹೋಗಿರುವುದು ಪತ್ರಿಕಾರಂಗದ ವರಮಾನದ ಕುಸಿತಕ್ಕೆ ಕಾರಣವಾಗಿರುವುದು ವಾಸ್ತವ. 

ಹೀಗೆ ಮಾಹಿತಿಸ್ಫೋಟದ ಯುಗವು ‘ಮಾಹಿತಿ ವಿಪ್ಲವ’ದ ಕಾಲಘಟ್ಟವಾಗಿ ನಮ್ಮೆದುರಿಗೆ ನಿಂತಿರುವ, ವೆಬ್ 1.0 ರಿಂದ ವೆಬ್ 2.0 ಅನ್ನು ದಾಟಿ ವೆಬ್ 3.0 ಅನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡದ ಮಾಧ್ಯಮ ವಿದ್ಯಾರ್ಥಿಗಳು ಮಾಡಬೇಕಾದ್ದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಇದು ಈ ಮುನ್ನುಡಿಯ ವ್ಯಾಪ್ತಿಯನ್ನು ಮೀರಿದ ಸಂಗತಿ. ‘ಮಾಧ್ಯಮ ತಂತ್ರಜ್ಞಾನ’ ಪುಸ್ತಕವು ಈ ವಿಪ್ಲವವನ್ನು ಅರಿತು ಬಾಳುವ ಹಲವು ದಿಕ್ಸೂಚಿ ಮಾಹಿತಿಗಳನ್ನು ನೀಡಿದೆ. ಇದನ್ನು ಕಂಪ್ಯೂಟರಿನ ಮಾಹಿತಿಯೆಂದೋ, ತಂತ್ರಾಂಶಗಳ ಕಸರತ್ತಿನ ವಿವರಣೆಗಳೆಂದೋ, ಆನ್‌ಲೈನ್ ಆಗುಹೋಗುಗಳ ದಾಖಲಾತಿಯೆಂದೋ ಭಾವಿಸುವಂತಿಲ್ಲ. ಈ ಪಠ್ಯವು ಜಗತ್ತಿನ ಮಾಹಿತಿ ತಂತ್ರಜ್ಞಾನ ಆಧಾರಿತ ಸಂವಹನದ ಎಲ್ಲ ಸಮಕಾಲೀನ ಆಯಾಮಗಳನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ದಾಖಲಿಸಿದ ಮಹತ್ವದ ಪ್ರಯತ್ನ. 

ಇಂತಹ ನವಮಾಧ್ಯಮದ ಪಠ್ಯಪುಸ್ತಕಗಳು ಹೆಚ್ಚುಕಡಿಮೆ ಅಂತರಜಾಲದಲ್ಲಿ ಸಿಗುವ ವಿವರಣೆಗಳ ನಕಲಿನಿಂದಲೇ ತುಂಬಿಕೊಂಡಿರುವ ಅಪಾಯ ಇದ್ದೇ ಇತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಶ್ರೀ ಸಿಬಂತಿ ಪದ್ಮನಾಭ ಮತ್ತು ಪತ್ರಿಕಾರಂಗದ ಯುವಪೀಳಿಗೆಯ ಬರಹಗಾರ ಶ್ರೀ ಶ್ರೀಶ ಪುಣಚ ಅವರಿಬ್ಬರೂ ಮೂಲತಃ ಸ್ವಂತ ಮಾಹಿತಿ ಸಂಗ್ರಹದಲ್ಲಿ ತೊಡಗಿರುವುದರಿಂದ ಈ ಪುಸ್ತಕವೂ ಅವರ ಅರಿವಿನ ಮೂಸೆಯಿಂದಲೇ ಅತ್ಯಂತ ಸ್ವಂತ ಕೃತಿಯಾಗಿ ಮೂಡಿದೆ. ವಿಕಿಪೀಡಿಯ ಪುಟಗಳಲ್ಲಿ ಇಂಥದ್ದೇ ಮಾಹಿತಿ ಸಿಗಬಹುದು; ಆದರೆ ಈ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಬೇಕಾದ ಮಾಹಿತಿಗಳನ್ನು ವಿವಿಯ ಪಠ್ಯಕ್ರಮದ ಅನುಸಾರವಾಗಿಯೇ ಸ್ವತಂತ್ರವಾಗಿ ರೂಪಿಸಲಾಗಿದೆ. ಈ ಅಧ್ಯಾಯಗಳ ಬರಹದ ಶೈಲಿಯನ್ನು ನೋಡಿದಾಗ, ವಿಷಯಗಳನ್ನು ಚೆನ್ನಾಗಿ ಅರಿತು ವಿಶ್ಲೇಷಿಸಿ ಬರೆದಿರುವುದನ್ನು ಖಚಿತವಾಗಿ ಗುರುತಿಸಿದ್ದೇನೆ. ಇದೇ ಈ ಪುಸ್ತಕದ ಜೀವಿತಾವಧಿ ಹೆಚ್ಚಿಸಬಲ್ಲ ಒಂದು ಮುಖ್ಯ ಗುಣವಾಗಿದೆ. 

ಹೀಗಿದ್ದೂ, ಈ ಪುಸ್ತಕವು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ರಂಗಕ್ಕೆ ಒಂದು ಸಮಕಾಲೀನ ದಿಕ್ಸೂಚಿಯೇ ಹೊರತು, ಅರಿವಿನ ಸಮಗ್ರ ವಿಶ್ವಕೋಶವಲ್ಲ ಎಂಬುದೂ ನಿಜ. ಶ್ರಮವಹಿಸುವ ಮಾಧ್ಯಮ ವಿದ್ಯಾರ್ಥಿಗಳು ಈ ಪುಸ್ತಕದ ಮೂಲಕ ಹಲವು ರಂಗಗಳ ಬ್ರಹ್ಮಾಂಡ ಕಲಿಕೆಗೆ ಕೀಲಿಕೈ ಪಡೆಯುತ್ತಾರೆ. ಇಲ್ಲಿ ಬರೆದ ಪ್ರತಿಯೊಂದೂ ಅಧ್ಯಾಯ, ಉಪಶೀರ್ಷಿಕೆಗಳೇ ಪ್ರತ್ಯೇಕ ಮಾಧ್ಯಮ ತಂತ್ರಜ್ಞಾನ ರಂಗಗಳು. ಉದಾಹರಣೆಗೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನೇ ತೆಗೆದುಕೊಳ್ಳಿ. ಅದು ಮಾಹಿತಿ ತಂತ್ರಜ್ಞಾನದ ಭಾಗವಾಗಿ ಹ್ಯಾಶ್‌ಟ್ಯಾಗ್ ಹೆಸರಿನಲ್ಲಿ ಎರಡು ದಶಕಗಳಿಂದಲೂ ಬಳಕೆಯಲ್ಲಿತ್ತು. ಅದರ ಅವತಾರವೇ ಈಗ ಬದಲಾಗಿದೆ. ಈಗ ಬ್ಲಾಕ್‌ಚೈನನ್ನು ಎಲ್ಲ ಬಗೆಯ ಸತ್ಯದ ಮೂಲಕ್ಕೆ ಅಡಿಪಾಯ ಎಂದೇ ಬಗೆದು ವಿಜ್ಞಾನ, ಹಣಕಾಸು, ಭೂದಾಖಲೆ – ಹೀಗೆ ಹಲವು ರಂಗಗಳಲ್ಲಿ ಅಳವಡಿಸುತ್ತಿದ್ದಾರೆ. ಬ್ಲಾಕ್‌ಚೈನ್ ಕುರಿತಾಗಿ ಕನಿಷ್ಟ 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳು ಕಳೆದೆರಡು ವರ್ಷಗಳಲ್ಲೇ ಬಂದಿವೆ. ಇನ್ನು ಎಐ, ವಿಆರ್‌ಗಳ ಬಗ್ಗೆ ಹೇಳಿದಷ್ಟೂ ಕಡಿಮೆ. 

ಈ ಉತ್ತಮ ಸಂಗತಿಗಳ ನಡುವೆಯೂ ಪಠ್ಯಕ್ರಮಕ್ಕೆ ಅನುಸಾರವಾಗಿಯೇ ಪುಸ್ತಕವನ್ನು ಬರೆಯುವ ಅನಿವಾರ್ಯತೆಯಲ್ಲಿ ಮಾಧ್ಯಮರಂಗಕ್ಕೆ ಬೇಕಾದ ಕೆಲವು ಅತಿಮುಖ್ಯ ತಂತ್ರಜ್ಞಾನಗಳ ಮಾಹಿತಿಗಳು ಲಭ್ಯವಿಲ್ಲ. ಉದಾಹರಣೆಗೆ ಡೇಟಾ ಜರ್ನಲಿಸಂ. ಇಂದು ಅಂಕಿಅಂಶಗಳ ಖಚಿತ ನೆರವಿಲ್ಲದೆ ಏನನ್ನೂ ಪ್ರತಿಪಾದಿಸಲು ಆಗದು; ಅಥವಾ ಅಂಕಿಅಂಶಗಳ ನೆರವಿನಿಂದ ಹಲವು ಸುದ್ದಿಗಳನ್ನು ಹೆಕ್ಕಿ ತೆಗೆಯಬಹುದು. ಇದು ಮೂಲತಃ ಪತ್ರಿಕಾರಂಗ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನವನ್ನು ಮೇಳೈಸಿದ ಒಂದು ಮಾಧ್ಯಮ ತಂತ್ರಜ್ಞಾನ. ವೈಜ್ಞಾನಿಕವಾಗಿ ದತ್ತಾಂಶಗಳನ್ನು ವಿಶ್ಲೇಷಿಸುವ ಮೂಲಕ ನಾಡಿನ ಹಲವು ಸಮಸ್ಯೆಗಳನ್ನು ಹುಡುಕುವ, ಪರಿಹಾರಗಳನ್ನು ಅರಸುವ ಕೆಲಸವನ್ನು ಮಾಡಬಹುದು. ಈಗಾಗಲೇ ಭಾರತ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳು ಮುಕ್ತ ದತ್ತಾಂಶ ಪೋರ್ಟಲ್‌ಗಳನ್ನೇ ತೆರೆದಿವೆ. ಇವನ್ನೆಲ್ಲ ಮಾಧ್ಯಮ ರಂಗದ ವಿದ್ಯಾರ್ಥಿಗಳು ಅರಿತಿರಲೇಬೇಕು.  

ಪಠ್ಯಕ್ರಮಕ್ಕೇ ಹೊಂದಿಸಿಕೊಂಡು ಈ ಪುಸ್ತಕವನ್ನು ಬರೆದಿರುವುದು ಈ ಪುಸ್ತಕದ ಮಿತಿಯೂ ಹೌದು. ಇಂತಹ ಮಾಹಿತಿಪೂರ್ಣ ಪುಸ್ತಕವು ಸಾರ್ವಜನಿಕ ಓದಿಗೂ ಸಿಗಬೇಕು ಎಂಬ ಅಪೇಕ್ಷೆಯನ್ನು ಈ ಪುಸ್ತಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದ ವಿವಿಧ ಹೊಸ ಆಯಾಮಗಳಾದ ಮೊಬೈಲ್ ಜರ್ನಲಿಸಂ, ಡಿಜಿಟಲ್ ಸುರಕ್ಷತೆ, ಗಣಿತ ತಂತ್ರಜ್ಞಾನ, ಲಿಪ್ಯಂತರಣ, ಇ–ಸಂವಹನ, ಡಿಜಿಟಲ್ ಕಥಾ ನಿರೂಪಣೆ, ಇನ್‌ಫೋಗ್ರಾಫಿಕ್ಸ್, ಡೇಟಾ ವಿಜುಯಲೈಸೇಶನ್, ಡಿಜಿಟಲ್ ಸಂಶೋಧನೆ, ಸಮುದಾಯ ಪತ್ರಿಕಾಕಾಯಕದ ತಂತ್ರಜ್ಞಾನ ಸಾಧ್ಯತೆಗಳು, ಪೋಡ್‌ಕಾಸ್ಟಿಂಗ್, ವಿಡಿಯೋ ಜರ್ನಲಿಸಂ – ಹೀಗೆ ಹಲವು ಮಾಹಿತಿ ತಂತ್ರಜ್ಞಾನ ಆಧಾರಿತ ಪತ್ರಕರ್ತರಿಗೆ ಅತ್ಯಾವಶ್ಯಕವಾದ ಸಂಗತಿಗಳ ಬಗ್ಗೆ ಕಲಿಯಲು ಈ ಪುಸ್ತಕವು ಮೊದಲ ಹೆಜ್ಜೆ ಆಗುವುದಂತೂ ನಿಶ್ಚಿತ.       

ಇನ್ನು ಈ ಪುಸ್ತಕದ ತಿರುಳೇ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ಸಂಗತಿಗಳು. ಆದ್ದರಿಂದ ಮುದ್ರಿತ ಪುಸ್ತಕವಾಗಿ ಈ ಪುಸ್ತಕದ ಬಾಳಿಕೆ (ಅದರಲ್ಲೂ ಹೊಸ - ಬೆಳೆಯುತ್ತಿರುವ ತಂತ್ರಜ್ಞಾನಗಳ ಕುರಿತಾಗಿ) ಅಲ್ಪವೇ ಎಂಬುದು ಲೇಖಕರಿಗೆ ಗೊತ್ತಿರುವ ಹಾಗೆಯೇ ಶಿಕ್ಷಕ – ವಿದ್ಯಾರ್ಥಿಗಳೂ ಅರಿಯಬೇಕು. ಪತ್ರಿಕಾರಂಗದಲ್ಲಿ ವೃತ್ತಿಗೆ ಸೇರುವ ವಿದ್ಯಾರ್ಥಿಗಳ ಕಲಿಕೆಯ ಹೊಣೆಯರಿತ ಈ ವಿಶಿಷ್ಟ ಮತ್ತು ಮಾಹಿತಿಪೂರ್ಣ ಪುಸ್ತಕವನ್ನು ಸದಾ ತತ್‌ಸಾಮಯಿಕವಾಗಿ ಇರಿಸುವ ಆನ್‌ಲೈನ್ ತಾಣವನ್ನೂ ರೂಪಿಸುವುದು ಅತ್ಯಂತ ಅವಶ್ಯಕ. ಆಗ ಈ ಪುಸ್ತಕವನ್ನೇ ವಿಸ್ತರಿಸಿ ಹಲವು ಆಕರಗಳ ತಾಣಗಳಿಗೆ ಕೊಂಡಿಗಳನ್ನು ನೀಡಬಹುದು; ಬದಲಾದ ಮಾಹಿತಿಗಳನ್ನು ಸೂಕ್ತ ಉಲ್ಲೇಖದೊಂದಿಗೆ ಸೇರಿಸಬಹುದು; ಹೊಸ ಸಂಗತಿಗಳು ಅನಾವರಣಗೊಂಡ ಹಾಗೆಲ್ಲ ಸೇರಿಸುತ್ತ ಹೋಗಬಹುದು. ಇದೇ ಒಂದು ಮುಕ್ತಜ್ಞಾನ ಮಾದರಿಯ ಮಾಧ್ಯಮತಾಣ ಆಗುತ್ತದೆ. ಇಂತಹ ತಾಣವನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಖರ್ಚುಗಳನ್ನು ವಹಿಸಿಕೊಳ್ಳುವ ಬಗ್ಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಒಂದು ಏಕಾಭಿಪ್ರಾಯಕ್ಕೆ ಬರಬಹುದು. ಆಗ ಇಂತಹ ಸದಾ ಬದಲಾಗುವ ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ವರ್ಷಕ್ಕೊಂದು ಆವೃತ್ತಿಯಾಗಿ ಹೊಸತಾಗಿ ನೀಡಬಹುದು. ಜ್ಞಾನವನ್ನು ಮುಕ್ತವಾಗಿಟ್ಟು, ಜ್ಞಾನ ನಿರ್ವಹಣೆಗೆ ನಿಧಿ ನೀಡುವುದು ಈ ಕಾಲದ ಸಹಜ ಕ್ರಮವಾಗಿದೆ.  ಆಗಲೇ ಈ ಲೇಖಕರ ಶ್ರಮಕ್ಕೂ ಸೂಕ್ತ ಬೆಲೆ ಒದಗಿಸಿದಂತಾಗುತ್ತದೆ.  

ಮಾಧ್ಯಮ ತಂತ್ರಜ್ಞಾನವೆಂದರೆ ಕೇವಲ ಓದಿನ ಸರಕಲ್ಲ. ಸ್ವತಃ ಕಂಪ್ಯೂಟರ್ ಒಂದನ್ನು ಬಳಸಿ ಕಲಿಯಬೇಕಾದ ಸಂಗತಿಗಳು ಹೇರಳವಾಗಿವೆ. ಅದರಲ್ಲೂ ಮಾಧ್ಯಮ ವಿದ್ಯಾರ್ಥಿಗಳು ಡೆಸ್ಕ್ಟಾಪ್ ಕಂಪ್ಯೂಟರ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು ಎಂಬುದು ನನ್ನ ಅನುಭವದ ಮಾತು. ಕಂಪ್ಯೂಟರ್‌ಗಳನ್ನು ಬೈಪಾಸ್ ಮಾಡಿ ಸ್ಮಾರ್ಟ್ಫೋನ್‌ಗಳನ್ನೇ ಬಳಸುತ್ತಿರುವ ಈ ಸಂದರ್ಭದಲ್ಲಿ ಈ ಮಾತು ವಿಚಿತ್ರವೆನ್ನಿಸಬಹುದು. ಆದರೆ ಡೆಸ್ಕ್ಟಾಪ್ ಕಂಪ್ಯೂಟರ್ ಎಂಬುದು ಪ್ರತಿಯೊಬ್ಬ ಪತ್ರಕರ್ತನ ವೃತ್ತಿಕೋಶ. ಮಾಹಿತಿ, ಕಲಿಕೆ, ತಂತ್ರಜ್ಞಾನ, ವಿಶ್ಲೇಷಣೆ, ಚಿತ್ರಣ, ವಿಷಯ ಸಂಪಾದನೆ, ಸಂಗ್ರಹ, ಸಂವಹನ - ಎಲ್ಲವನ್ನೂ ಸಾಧ್ಯವಾಗಿಸುವ ಕಂಪ್ಯೂಟರ್‌ಗಳನ್ನು ಅಂತರಜಾಲದ ಹೊಣೆಗಾರಿಕೆಯ ಬಳಕೆಯೊಂದಿಗೆ ಪತ್ರಕರ್ತರು ಸಮಾಜಮುಖಿಯಾಗಿ ಹಲವು ವರದಿಗಳನ್ನು ರೂಪಿಸಬಹುದು. 

ಕೊನೆಯ ಮಾತಾಗಿ ಹೇಳಬಹುದಾದರೆ, ಮಾಹಿತಿ ತಂತ್ರಜ್ಞಾನ, ಮಾಧ್ಯಮ ತಂತ್ರಜ್ಞಾನ – ಎಲ್ಲವೂ ನಾಡಿನ ಕಷ್ಟ ಸುಖಗಳನ್ನು ವರದಿಗಳ ಮೂಲಕ, ವಿವಿಧ ಮಾಧ್ಯಮಗಳ ಮೂಲಕ ಜನತೆಗೆ ತಲುಪಿಸುವ, ಸರ್ಕಾರಕ್ಕೆ ತಿಳಿಸುವ ಮೂಲ ಹೊಣೆಗಾರಿಕೆಗೆ ಸಹಕಾರಿಯಾಗುವ ಅಂಶಗಳೇ ಹೊರತು, ತಂತ್ರಜ್ಞಾನವೇ ಎಲ್ಲದಕ್ಕೂ ಪರಿಹಾರವಲ್ಲ. ತಂತ್ರಜ್ಞಾನವನ್ನು ಅರಿತರೆ ಪತ್ರಕರ್ತರು ಖಂಡಿತ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಪತ್ರಿಕಾರಂಗದಲ್ಲೂ ಉದ್ಯೋಗದ ಅವಕಾಶಗಳು ವೈವಿಧ್ಯವೂ, ವಿಸ್ತಾರವೂ ಆಗಿರುವ ಈ ಹೊತ್ತಿನಲ್ಲಿ ಈ ಪುಸ್ತಕವು ಹೊಸಕಾಲದ ಉದ್ಯೋಗಾವಕಾಶಗಳಿಗೆ ಕಿಟಕಿಯಾಗಿದೆ.     

ಇಂತಹ ತಾಜಾ ಪುಸ್ತಕವನ್ನು ಬರೆದ ಲೇಖಕರಿಬ್ಬರಿಗೂ ನನ್ನ ಅಭಿನಂದನೆಗಳು, ಶುಭಾಶಯಗಳು. ಜವಾಬ್ದಾರಿಯುತ ಮತ್ತು ತಂತ್ರಜ್ಞಾನಾಧಾರಿತ ಪತ್ರಿಕಾಕಾಯಕಕ್ಕೆ ಈ ಪುಸ್ತಕವು ನೆರವಾಗಲಿ ಎಂದು ಆಶಿಸುತ್ತೇನೆ. 

- ಬೇಳೂರು ಸುದರ್ಶನ 

  • ಪುಸ್ತಕದ ಶೀರ್ಷಿಕೆ: ಮಾಧ್ಯಮ ತಂತ್ರಜ್ಞಾನ
  • ಲೇಖಕರು: ಡಾ. ಸಿಬಂತಿ ಪದ್ಮನಾಭ ಕೆ. ವಿ. & ಡಾ.  ಶ್ರೀಶ ಎಂ. ಪುಣಚ
  • ಪ್ರಕಾಶನ: ಅಂಕುರ್ ಮೀಡಿಯಾ ಪಬ್ಲಿಕೇಶನ್ಸ್, ತುಮಕೂರು
  • ISBN: 978-81-958059-1-4
  • ಪ್ರಕಟಣೆಯ ವರ್ಷ: 2022
  • ಪುಟಗಳು: 234
  • ಬೆಲೆ: ರೂ. 250-00
  • ಪುಸ್ತಕಗಳಿಗಾಗಿ ಸಂಪರ್ಕ: 9449525854

ಗುರುವಾರ, ಅಕ್ಟೋಬರ್ 20, 2022

ಅಂಕಪಟ್ಟಿಯಿದ್ದರೆ ಅಷ್ಟೇ ಸಾಕೆ?

17 ಅಕ್ಟೋಬರ್ 2022ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಬರಹ

(ಉದ್ಯೋಗಾರ್ಹತೆಯ ಕೌಶಲಗಳು: ಭಾಗ-1)

ಅಂಕಪಟ್ಟಿ ನೋಡಿ ಉದ್ಯೋಗ ಕೊಡುವ ಪ್ರವೃತ್ತಿ ಹೋಗಿ ಬಹಳ ಕಾಲವೇ ಆಯಿತು. ಕೆಲವೇ ಕೆಲವು ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಇನ್ನೂ ಪಿಯುಸಿ ಅಥವಾ ಪದವಿ ಅಂಕಗಳನ್ನು ನೋಡಿ ಮೆರಿಟ್‌ಲಿಸ್ಟ್ ತಯಾರಿಸುವ ಪದ್ಧತಿಯಿದೆ. ಉಳಿದಂತೆ ಉದ್ಯೋಗದಾತರಿಗೆ ಅಭ್ಯರ್ಥಿಗಳ ಅಂಕಗಳಿಸುವ ತಾಕತ್ತು ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಸಂಬಳಕ್ಕೆ ಪ್ರತಿಯಾಗಿ ಇವರು ಏನನ್ನು ನೀಡಬಲ್ಲರು ಎಂಬ ಪ್ರಶ್ನೆಗೆ ಉತ್ತರ ಮಾತ್ರ. ಈ ನಿರೀಕ್ಷೆಯನ್ನು ‘ಉದ್ಯೋಗಾರ್ಹತೆ’ ಎಂದೋ, ‘ಉದ್ಯೋಗಾರ್ಹತೆಯ ಕೌಶಲಗಳು’ ಎಂದೋ ಕರೆಯಬಹುದು.

ಅಂಕಪಟ್ಟಿ ತೋರಿಸುವ ಪರ್ಸೆಂಟೇಜು ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸುವ ಅನೇಕ ಮಾನದಂಡಗಳಲ್ಲಿ ಒಂದಷ್ಟೇ. ಬಹುತೇಕ ಆಯ್ಕೆ ಪ್ರಕ್ರಿಯೆಗಳಲ್ಲಿ ಸಂದರ್ಶನವೇ ಪ್ರಧಾನ ಭಾಗ. ನಾಗರಿಕ ಸೇವಾ ಪರೀಕ್ಷೆಗಳಲ್ಲಂತೂ ಸಂದರ್ಶನ ಎಂಬ ಪದವನ್ನೂ ಬಳಸುವುದಿಲ್ಲ. ಅವರು ಅದನ್ನು ‘ವ್ಯಕ್ತಿತ್ವ ಪರೀಕ್ಷೆ’ ಎಂದು ಕರೆಯುತ್ತಾರೆ. ಈ ವ್ಯಕ್ತಿತ್ವ ಮಾಪನ ಪ್ರಕ್ರಿಯೆಯಲ್ಲಿ ಅವರು ಹುಡುಕುವುದು ಅಭ್ಯರ್ಥಿಯ ಉದ್ಯೋಗಾರ್ಹತೆಯನ್ನೇ.

ಯಾವುದೇ ಉದ್ಯೋಗವನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಹೋಗಬೇಕಾದರೆ ಶೈಕ್ಷಣಿಕ ವಿದ್ಯಾರ್ಹತೆಗಿಂತ ಹೊರತಾದ ಅನೇಕ ಗುಣಗಳು ಬೇಕೇಬೇಕು. ಸಂವಹನ ಕೌಶಲ, ಹೊಂದಾಣಿಕೆಯ ಪ್ರವೃತ್ತಿ, ಸಮಸ್ಯೆ ಬಗೆಹರಿಸುವಿಕೆ, ಸಮಯ ನಿರ್ವಹಣೆ, ತಂಡ ಮನೋಭಾವ, ಸಂಘಟನಾ ಕೌಶಲ, ಲಭ್ಯ ಮಾಹಿತಿಯ ಬಳಕೆ, ತಂತ್ರಜ್ಞಾನದ ಸದುಪಯೋಗ, ವ್ಯಕ್ತಿತ್ವ ಕೌಶಲಗಳು, ನಾಯಕತ್ವ- ಹೀಗೆ ಹತ್ತಾರು ಇವೆ. ಇವುಗಳಲ್ಲಿ ಕೆಲವು ಆಯಾ ಉದ್ಯೋಗವನ್ನು ನಿರ್ವಹಿಸಲು ಪ್ರಾಥಮಿಕ ಅವಶ್ಯಕತೆಗಳಾದರೆ, ಇನ್ನು ಕೆಲವು ಅದರಲ್ಲಿ ಕ್ಷಮತೆಯನ್ನು ಸಾಧಿಸಲು ಅನಿವಾರ್ಯ.

ಉದ್ಯೋಗಾರ್ಹತೆಯ ಕೌಶಲಗಳು:

ಯಾವುದೇ ಉದ್ಯೋಗದಲ್ಲಿರುವವನಿಗೆ ಪ್ರತಿದಿನ ಒಂದಲ್ಲ ಒಂದು ಸವಾಲು ಎದುರಾಗಿಯೇ ಆಗುತ್ತದೆ. ಸಣ್ಣ ಹುದ್ದೆಗಳಲ್ಲಿರುವವರಿಗೆ ಅವರ ಜವಾಬ್ದಾರಿ ನಿರ್ವಹಿಸುವಲ್ಲಿ ಸವಾಲುಗಳಾದರೆ, ದೊಡ್ಡ ಹುದ್ದೆಗಳಲ್ಲಿರುವವರಿಗೆ ಸಂಸ್ಥೆಯನ್ನೇ ಮುಂದಕ್ಕೆ ಒಯ್ಯುವಲ್ಲಿ ಸವಾಲುಗಳಿರುತ್ತವೆ. ಅವುಗಳು ಎದುರಾದ ತಕ್ಷಣ ಎದೆಗುಂದುವ ಬದಲು, ಅವುಗಳನ್ನು ಅಲ್ಲಲ್ಲಿಯೇ ವಿಶ್ಲೇಷಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದು, ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುವುದು ನಿಜಕ್ಕೂ ಒಂದು ಕೌಶಲವೇ.

ಸಂವಹನ ಕೌಶಲವಂತೂ ಒಂದು ಅತಿಪ್ರಮುಖ ಅರ್ಹತೆ. ಹೇಳಬೇಕಾದುದನ್ನು ಗೊಂದಲವಿಲ್ಲದಂತೆ ಸ್ಪಷ್ಟವಾಗಿ ಇನ್ನೊಬ್ಬರಿಗೆ ಹೇಳುವುದೊಂದು ದೊಡ್ಡ ಕಲೆ. ಅನೇಕ ಸಲ ಇದನ್ನೇ ಸರಿಯಾಗಿ ಮಾಡದೆ ಎಡವಟ್ಟುಗಳನ್ನು ಮಾಡಿಕೊಂಡುಬಿಡುತ್ತೇವೆ. ಸಂವಹನವೆಂದಮೇಲೆ ಅದು ಬರವಣಿಗೆ ಮತ್ತು ಮಾತು ಎರಡನ್ನೂ ಒಳಗೊಂಡಿದೆ. ಕೆಲವು ಉದ್ಯೋಗಗಳಲ್ಲಿ ಬರವಣಿಗೆ ಮುಖ್ಯವಾದರೆ ಕೆಲವದರಲ್ಲಿ ಮಾತು ಮುಖ್ಯವಾಗುವುದೂ ಇದೆ. ಸರಿಯಾದ ಮಾತೊಂದರಿಂದ ಯುದ್ಧವನ್ನೇ ತಪ್ಪಿಸಬಹುದಂತೆ, ಇನ್ನು ಉದ್ಯೋಗದಲ್ಲಿ ಯಶಸ್ಸು ಕಾಣಲಾಗದೇ?

ಬಹುತೇಕ ಕೆಲಸಗಳನ್ನು ತಂಡಗಳಲ್ಲಿ ನಿರ್ವಹಿಸಬೇಕಾಗುತ್ತದೆ. ಒಬ್ಬಂಟಿಯಾಗಿ ಮಾಡುವ ಕೆಲಸಗಳು ಅಪರೂಪ. ಕಾರ್ಪೋರೇಟ್ ಯುಗದಲ್ಲಂತೂ ಟೀಂವರ್ಕ್ ಒಂದು ಮಹಾಮಂತ್ರ. ನಾವು ಕೆಲಸ ಮಾಡುವ ಕಂಪೆನಿಗಳಲ್ಲಿ ವಿವಿಧ ವಯೋಮಾನದ, ಸಾಮಾಜಿಕ ಹಿನ್ನೆಲೆಯ, ಭಿನ್ನ ರಾಜಕೀಯ ನಿಲುವುಗಳ ಸಹೋದ್ಯೋಗಿಗಳಿರುತ್ತಾರೆ. ಉದ್ಯೋಗದ ವೇಳೆ ಇವು ಯಾವುವೂ ಅಡ್ಡಿಯಾಗದಂತೆ ನೋಡಿಕೊಳ್ಳುವುದೊಂದು ಪ್ರಮುಖ ಕೌಶಲ. ಸಣ್ಣಪುಟ್ಟ ಅಡಚಣೆಗಳನ್ನು ನಿರ್ಲಕ್ಷಿಸಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡುವುದೇ ಇಲ್ಲಿ ಮುಖ್ಯ.

ಯೋಜನೆ ಮತ್ತು ಸಂಘಟನೆ ಉದ್ಯೋಗ ಜಗತ್ತು ಬಯಸುವ ಇನ್ನೊಂದು ವಿಶಿಷ್ಟ ಕೌಶಲ. ಸಂಘಟನಾ ಕಲೆ ಎಲ್ಲರಿಗೂ ಒಲಿಯುವುದು ಕಷ್ಟವಾದರೂ, ಯಾವುದೇ ಉದ್ಯೋಗ ಕೈಗೊಂಡವರಿಗೆ ಅದರ ಪ್ರಾಥಮಿಕ ತಿಳುವಳಿಕೆಯಾದರೂ ಬೇಕಾಗುತ್ತದೆ. ಆಗಬೇಕಿರುವ ಕೆಲಸಗಳನ್ನು ಹೇಗೆ ವಿಭಾಗಿಸಿಕೊಳ್ಳಬೇಕು, ಯಾರಿಗೆ ಯಾವ ಹೊಣೆಗಾರಿಕೆಗಳನ್ನು ಹಂಚಬೇಕು, ಎಷ್ಟು ಸಮಯದೊಳಗೆ ಅವುಗಳನ್ನು ಪೂರೈಸುವಂತೆ ನೋಡಿಕೊಳ್ಳಬೇಕು, ಸಂಪನ್ಮೂಲಗಳನ್ನು ಹೇಗೆ ಒಟ್ಟು ಮಾಡಬೇಕು- ಇತ್ಯಾದಿಗಳನ್ನು ಅರಿತವರು ಉತ್ತಮ ಸಂಘಟಕರಾಗುತ್ತಾರೆ.

ಎಲ್ಲರೂ ರೂಢಿಸಿಕೊಳ್ಳಬೇಕೆಂದು ಬಯಸುವ ಆದರೆ ಬಹುತೇಕರು ವಿಫಲವಾಗುವ ಒಂದು ವಿಚಾರವೆಂದರೆ ಸಮಯ ನಿರ್ವಹಣೆ. ಯಾವುದೇ ವೃತ್ತಿಯ ಯಶಸ್ಸಿನಲ್ಲಿ ಸಮಯನಿರ್ವಹಣೆಯ ಪಾತ್ರ ಬಲು ಪ್ರಮುಖ. ನಿರ್ದಿಷ್ಟ ಕೆಲಸವೊಂದು ನಿಗದಿತ ಸಮಯದಲ್ಲಿ ಆಗದೇಹೋದರೆ ಕಂಪೆನಿಯ ನಿರ್ಣಾಯಕ ಯೋಜನೆಯೊಂದು ಕೈತಪ್ಪಿಹೋಗಬಹುದು. ನಾವು ಹತ್ತಬೇಕಾದ ಬಸ್ಸೋ ರೈಲೋ ತಪ್ಪಿಹೋದರೆ ಎಷ್ಟೊಂದು ಸಮಸ್ಯೆಯಾಗುತ್ತದೆ; ಇನ್ನು ಯೋಜನೆಯೇ ತಪ್ಪಿಹೋದರೆ ಆಗುವ ನಷ್ಟ ಎಷ್ಟು ದೊಡ್ಡದು? ಸಮಯ ನಿರ್ವಹಣೆಯಲ್ಲಿ ನಾವು ಯಶಸ್ವಿಯಾದರೆ ಅರ್ಧ ಉದ್ಯೋಗಜೀವನವೇ ಯಶಸ್ವಿಯಾದಂತೆ.

ಹೊಸತನ್ನು ಕಲಿಯುವುದು, ಅಗತ್ಯ ಮಾಹಿತಿಯನ್ನು ಕಲೆಹಾಕುವುದು, ಲಭ್ಯವಿರುವ ಮಾಹಿತಿಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವುದು, ತಂತ್ರಜ್ಞಾನವನ್ನು ಬಳಸುವ ಪ್ರಾಥಮಿಕ ತಿಳುವಳಿಕೆ ಹೊಂದಿರುವುದು ಇಂದು ಯಾವುದೇ ಉದ್ಯೋಗಕ್ಕೆ ಅಗತ್ಯ. ಕೆಲವು ವರ್ಷಗಳ ಹಿಂದೆ ಕಂಪ್ಯೂಟರ್ ಜ್ಞಾನ ಅನಿವಾರ್ಯವೇನೂ ಇರಲಿಲ್ಲ. ಇಂದು ಸಾಮಾನ್ಯ ವೃತ್ತಿಯೊಂದನ್ನು ನಿಭಾಯಿಸಬೇಕೆಂದರೂ ತಂತ್ರಜ್ಞಾನದ ಪ್ರಾಥಮಿಕ ತಿಳುವಳಿಕೆ ಅನಿವಾರ್ಯ.

ಆಯ್ದುಕೊಂಡ ವೃತ್ತಿಯಲ್ಲಿ ದಿನೇದಿನೇ ಪರಿಣತಿಯನ್ನು ಸಾಧಿಸುವುದು, ಆತ್ಮವಿಶ್ವಾಸ ಬತ್ತದಂತೆ ನೋಡಿಕೊಳ್ಳುವುದು, ಸೃಜನಶೀಲತೆಯನ್ನು ರೂಢಿಸಿಕೊಳ್ಳುವುದು ಕೂಡ ಉದ್ಯೋಗಾರ್ಹತೆಯ ಕೌಶಲವೆನಿಸಿದೆ. ಇವೆಲ್ಲಕ್ಕೂ ಕಿರೀಟಪ್ರಾಯವಾಗಿರುವುದು ಹೊಸತನಕ್ಕೆ ಉಪಕ್ರಮಿಸುವ ಮನೋಭಾವ ಮತ್ತು ನಾಯಕತ್ವದ ಗುಣ. ಇನ್ನೊಬ್ಬರನ್ನು ಮುನ್ನಡೆಸುವ ಗುಣ ಹೊಂದಿರುವವನು ತನ್ನ ಹುದ್ದೆಯಲ್ಲಿ ಉನ್ನತಿಗೇರುತ್ತಾನೆ.

ಇವೆಲ್ಲ ಆಧುನಿಕ ಉದ್ಯೋಗ ಜಗತ್ತು ಅಭ್ಯರ್ಥಿಗಳಿಂದ ಬಯಸುವ ಪ್ರಮುಖ ಕೌಶಲಗಳು. ನಮ್ಮ ಶೈಕ್ಷಣಿಕ ಅರ್ಹತೆಯ ಹಿಂದೆ ವರ್ಷಗಳ ಶ್ರಮ, ಸಾವಿರಾರು ರುಪಾಯಿಗಳ ಖರ್ಚು ಇರುತ್ತದೆ. ಅಚ್ಚರಿಯೆಂದರೆ ಇದರಾಚೆಗಿರುವ ಉದ್ಯೋಗ ಕೌಶಲಗಳಲ್ಲಿ ಹೆಚ್ಚಿನವೂ ಯಾವುದೇ ಖರ್ಚಿಲ್ಲದೆ ನಮ್ಮಷ್ಟಕ್ಕೆ ನಾವೇ ರೂಢಿಸಿಕೊಳ್ಳುವಂಥವು. ಅಂದಮೇಲೆ ಶಿಕ್ಷಣದ ಜತೆಜತೆಗೇ ಅವುಗಳನ್ನು ಪಡೆಯುವಲ್ಲಿ ಉದಾಸೀನ ಸಲ್ಲದು. ನೂರಕ್ಕೆ ನೂರು ಅಂಕ ಗಳಿಸಿದ ಅಭ್ಯರ್ಥಿ ತಾನೇ ಮಾರುಕಟ್ಟೆಗೆ ಹೋಗಿ ಆ ದಿನಕ್ಕೆ ಬೇಕಾದ ದಿನಸಿ ಸಾಮಗ್ರಿ ತಾರದೇ ಹೋದರೆ ಮನೆಮಂದಿಯೇ ಆತನನ್ನು/ಆಕೆಯನ್ನು ಜಾಣ/ಜಾಣೆ ಎಂದು ಒಪ್ಪುವುದಿಲ್ಲ. ಇನ್ನು ಪ್ರತಿತಿಂಗಳೂ ಸಂಬಳ ಕೊಡುವ ಉದ್ಯೋಗದಾತ ಪರ್ಸೆಂಟೇಜಿಗಿಂತ ಹೊರತಾದ ಅಗತ್ಯ ಕೌಶಲಗಳನ್ನು ಬಯಸುವುದರಲ್ಲಿ ಏನು ಅತಿಶಯ ಅಲ್ಲವೇ?

- ಸಿಬಂತಿ ಪದ್ಮನಾಭ ಕೆ. ವಿ.

ಗುರುವಾರ, ಸೆಪ್ಟೆಂಬರ್ 29, 2022

ಸೋಶಿಯಲ್ ಫೋಬಿಯಾ: ಆತ್ಮವಿಶ್ವಾಸವೇ ಅಭಯ

18-24 ಸೆಪ್ಟೆಂಬರ್ 2022ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಕೆಲವು ವರ್ಷಗಳ ಹಿಂದಿನ ಘಟನೆ. ಅದು ಕಾಲೇಜಿನ ಹೊಸ ಬ್ಯಾಚಿನ ಮೊದಲನೇ ಕ್ಲಾಸು. ಒಬ್ಬೊಬ್ಬರನ್ನೇ ತರಗತಿಯ ಎದುರಿಗೆ ಕರೆಸಿಕೊಂಡು ಅವರಿಂದ ಸ್ವಪರಿಚಯ ಹೇಳಿಸುತ್ತಿದ್ದೆ. ಕೆಲವರು ಸಲೀಸಾಗಿಯೂ ಇನ್ನು ಕೆಲವರು ಕೊಂಚ ಆತಂಕದಿಂದಲೂ ತಮ್ಮತಮ್ಮ ಪರಿಚಯ ಹೇಳಿಕೊಂಡರು. ಒಬ್ಬಳು ಮಾತ್ರ ಎದುರು ಬರುವುದಕ್ಕೇ ಒಪ್ಪಲಿಲ್ಲ. ಹೇಗೋ ಒತ್ತಾಯ ಮಾಡಿ ಅವಳನ್ನು ಈಚೆ ಕರೆತಂದದ್ದಾಯಿತು. ಮಾತು ಆರಂಭಿಸುವುದಕ್ಕೇ ಒಂದು ನಿಮಿಷ ತೆಗೆದುಕೊಂಡಳು. ಸ್ವಲ್ಪ ಹೊತ್ತಲ್ಲೇ ಏನೂ ಮಾತಾಡಲಾಗದೆ ಪೂರ್ತಿ ಬೆವರಿ ಒದ್ದೆಯಾಗಿ ಗೋಳೋ ಎಂದಳುತ್ತಾ ಅಲ್ಲೇ ಕುಸಿದುಕುಳಿತಳು. ಅವಳನ್ನು ಸಂತೈಸಿ ಅಂದಿನ ತರಗತಿ ಮುಗಿಸಿದ್ದಾಯಿತು.

ಅಚ್ಚರಿಯೆಂದರೆ ತರಗತಿ ಬಳಿಕ ತಾನಾಗಿಯೇ ಆ ಹುಡುಗಿ ವಿಭಾಗಕ್ಕೆ ಬಂದು ಭೇಟಿಯಾದಳು. ತನ್ನ ಕಷ್ಟ ಹೇಳಿಕೊಂಡಳು. ‘ಕ್ಲಾಸ್ ಅಂತ ಅಲ್ಲ ಸರ್, ಎಲ್ಲ ಕಡೆಯೂ ಹೀಗೇ ಆಗುತ್ತೆ. ಹೊಸಬರನ್ನೇನು, ಪ್ರತಿದಿನ ಎದುರಾಗುವವರು ಸಿಕ್ಕರೂ ಆತಂಕ ಆಗಿಬಿಡುತ್ತೆ. ಯಾವುದೋ ಫಂಕ್ಷನಿಗೆ ಹೋದರೂ ಟೆನ್ಷನ್ ಮಾಡ್ಕೋತೀನಿ. ಅದಕ್ಕೆ ಈಗೀಗ ಹೊರಗೆ ಹೋಗೋದನ್ನೇ ನಿಲ್ಲಿಸಿದೀನಿ. ಕಾಲೇಜಿಗೆ ಯಾಕಾದರೂ ಸೇರಿದೆನೋ ಅನ್ನಿಸ್ತಿದೆ’ ಎಂದಳು. 

‘ನಿಧಾನವಾಗಿ ಎಲ್ಲ ಸರಿ ಹೋಗುತ್ತಮ್ಮ. ನೋಡೋಣ. ಈಗ ನನ್ನ ಬಗ್ಗೆ ವಿಶ್ವಾಸ ಬಂದಿದೆ ತಾನೇ? ದಿನಕ್ಕೊಮ್ಮೆ ಬಂದು ಭೇಟಿಯಾಗು. ಏನೇ ಹೇಳಬೇಕು ಅನ್ನಿಸಿದರೂ ಹೇಳು’ ಎಂದು ಒಂದಷ್ಟು ಸಮಾಧಾನ ಹೇಳಿದೆ. ಕೆಲವು ದಿನಗಳ ಬಳಿಕ ‘ನಿನ್ನ ಹವ್ಯಾಸಗಳೇನು? ಬಿಡುವಿನ ವೇಳೆಯಲ್ಲಿ ಏನು ಮಾಡುತ್ತಿ?’ ಕೇಳಿದೆ. ‘ಸಣ್ಣಪುಟ್ಟ ಕವಿತೆ ಬರೀತೀನಿ ಸರ್. ಆದ್ರೆ ಈವರೆಗೆ ಯಾರಿಗೂ ಒಮ್ಮೆಯೂ ತೋರಿಸಿಲ್ಲ. ಎಲ್ಲ ಬರೆದು ಒಂದು ಕಡೆ ಇಟ್ಟಿದೀನಿ. ಯಾರು ಏನಂದ್ಕೋತಾರೋ ಅನ್ನೋ ಭಯ’ ಅಂದಳು. ಅವನ್ನೆಲ್ಲ ಅವಶ್ಯ ತಂದು ತೋರಿಸು, ತಪ್ಪಿದ್ದರೂ ನಾನು ತಮಾಷೆ ಮಾಡೋದಿಲ್ಲ ಅಂತ ಭರವಸೆ ತುಂಬಿದೆ.

ಅವಳ ಕವಿತೆಗಳು ನಿಜಕ್ಕೂ ಚೆನ್ನಾಗಿದ್ದವು. ಅವುಗಳಲ್ಲಿ ಹೊಸತನ ಇತ್ತು. ಅವಳನ್ನು ಅಭಿನಂದಿಸಿದೆ. ಬೇರೆ ಕೆಲವು ಕವನ ಸಂಕಲನಗಳನ್ನು ಕೊಟ್ಟು ಓದಲು ಹೇಳಿದೆ. ಅವಳು ಹೆಚ್ಚುಹೆಚ್ಚು ಬರೆದು ತೋರಿಸತೊಡಗಿದಳು. ಕೆಲವು ಕಾಲೇಜು ಮ್ಯಾಗಜಿನ್‌ನಲ್ಲಿ, ಪತ್ರಿಕೆಗಳಲ್ಲಿ ಪ್ರಕಟವಾದವು. ಸಹಪಾಠಿಗಳಿಂದ, ಬೇರೆ ಅಧ್ಯಾಪಕರಿಂದ ಅವಳಿಗೆ ಪ್ರಶಂಸೆ ಸಿಕ್ಕಿತು. ಆಕೆಯ ವ್ಯಕ್ತಿತ್ವ, ವರ್ತನೆಯಲ್ಲೂ ಕ್ರಮೇಣ ಸುಧಾರಣೆ ಕಾಣುತ್ತಿತ್ತು. ಒಂದು ವರ್ಷ ಕಳೆಯುವ ಹೊತ್ತಿಗೆ ಇದೇ ಹಳ್ಳಿಹುಡುಗಿ ಮೊದಲ ತರಗತಿಯಲ್ಲಿ ಭಯದಿಂದ ನಡುಗಿ ಬಿದ್ದುಹೋದಳಾ ಎಂದು ಅಚ್ಚರಿಯಾಗುವಷ್ಟರ ಮಟ್ಟಿಗೆ ಆಕೆ ಬದಲಾದಳು. ಪದವಿ ಮುಗಿಯುವ ಹೊತ್ತಿಗೆ ಅವಳ ಚೊಚ್ಚಲ ಕವನ ಸಂಕಲನ ಪ್ರಕಟವಾಯಿತು, ಮತ್ತು ಅದಕ್ಕೆ ರಾಜ್ಯಸರ್ಕಾರದ ಬಹುಮಾನ ಕೂಡ ಬಂತು!

ಸಾರ್ವಜನಿಕ ಸನ್ನಿವೇಶಗಳಲ್ಲಿ ಒಂದು ಬಗೆಯ ಭಯ, ಆತಂಕ ಕಾಡುವುದು ಸಾಮಾನ್ಯ. ಇದು ಎಲ್ಲರಿಗೂ ಒಂದಲ್ಲ ಒಂದು ಸಂದರ್ಭ ಎದುರಾಗುವಂಥದ್ದೇ. ಇದಕ್ಕೆ ಹಳ್ಳಿಯವರು, ಪಟ್ಟಣದವರು ಎಂಬ ಭೇದವಿಲ್ಲ. ಗಂಡು-ಹೆಣ್ಣೆAಬ ವ್ಯತ್ಯಾಸ ಇಲ್ಲ. ಇದು ಹದಿಹರೆಯದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾದರೂ, ಆಮೇಲೆಯೂ ಇರಬಾರದು ಎಂದಿಲ್ಲ. ಕೆಲವೊಮ್ಮೆ ಇವು ದೀರ್ಘಕಾಲ ಮುಂದುವರಿಯುತ್ತವೆ. ಇದಕ್ಕೆ ‘ಸಾಮಾಜಿಕ ಭಯ’ (ಸೋಶಿಯಲ್ ಫೋಬಿಯಾ) ಎಂದು ಹೆಸರು. ಈ ದೀರ್ಘಕಾಲೀನ ಉದ್ವಿಗ್ನತೆ ವೈಯಕ್ತಿಕ ಹಾಗೂ ಸಾಮಾಜಿಕ ಬದುಕಿನ ಮೇಲೆ, ಉದ್ಯೋಗದ ಮೇಲೆ ಪರಿಣಾಮ ಬೀರುತ್ತದೆ. ವ್ಯಕ್ತಿ ತನ್ನಷ್ಟಕ್ಕೇ ಒಂಟಿಯಾಗುತ್ತಾ ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವುದೂ ಇದೆ. 

ಸಾಮಾಜಿಕ ಭಯ ಕೇವಲ ನಾಚಿಕೆ ಅಲ್ಲ. ಅದಕ್ಕಿಂತ ಹೆಚ್ಚಾದ ಭಯ. ಗುಂಪುಗಳಲ್ಲಿ ಇರುವ, ಹೊಸಬರನ್ನು ಭೇಟಿಯಾಗುವ, ಸಭೆಯನ್ನು ಎದುರಿಸುವ- ಅಂದರೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಒಬ್ಬ ವ್ಯಕ್ತಿ ಎದುರಿಸುವ ತೀವ್ರ ಉದ್ವಿಗ್ನತೆ. ತನ್ನ ಪ್ರತೀ ಚಟುವಟಿಕೆಯನ್ನೂ ಯಾರೋ ಗಮನಿಸುತ್ತಿರುತ್ತಾರೆ; ಅವುಗಳಲ್ಲಿ ಅಕಸ್ಮಾತ್ ತಪ್ಪುಗಳಾದರೆ ಎಲ್ಲರೂ ಆಡಿಕೊಳ್ಳುತ್ತಾರೆ ಎಂಬ ಭಾವನೆಯೇ ಈ ಆತಂಕದ ಬೇರು. ಆತ್ಮವಿಶ್ವಾಸವನ್ನೇ ಕುಗ್ಗಿಸುವ ಈ ಭಯದಿಂದಾಗಿ ವ್ಯಕ್ತಿ ಜೀವನದಲ್ಲೇ ಜುಗುಪ್ಸೆಯನ್ನು ತಾಳುವುದೂ ಇದೆ. ‘ನಾನು ಎಲ್ಲಿಯೂ ಸಲ್ಲದವನು, ಯಾವ ಕೆಲಸಕ್ಕೂ ಆಗದವನು, ನಿಷ್ಪ್ರಯೋಜಕ’ ಎಂಬ ಭಾವ ಬಂದರೆ ಅರ್ಧ ಬದುಕು ಮುಗಿದ ಹಾಗೆ. ಎಲ್ಲಿಯವರೆಗೆ ಎಂದರೆ ಇಂತಹ ವ್ಯಕ್ತಿಗಳು ಅಕ್ಕಪಕ್ಕ ಯಾರಾದರೂ ಇದ್ದರೆ ಶೌಚಾಲಯಕ್ಕೆ ಹೋಗಲೂ ಹಿಂಜರಿಯುತ್ತಾರೆ.

ಹೊರಬರುವುದು ಹೇಗೆ?

ಯಾವುದೇ ಸಮಸ್ಯೆಗೆ ಸುಲಭ ಪರಿಹಾರ ಎಂದರೆ ಸಮಸ್ಯೆಯ ಕಾರಣವನ್ನು ಅರ್ಥಮಾಡಿಕೊಳ್ಳುವುದು. ಇದು ಮೂರನೆಯ ವ್ಯಕ್ತಿಗಿಂತಲೂ ಸಮಸ್ಯೆಯನ್ನು ಎದುರಿಸುತ್ತಿರುವ ವ್ಯಕ್ತಿ ತಾನೇ ಮಾಡುವುದೇ ಸರಿ. ತಾನು ಯಾವ ಸನ್ನಿವೇಶದಲ್ಲಿ ಆತಂಕಕ್ಕೊಳಗಾಗುತ್ತೇನೋ ಅದರ ಬಗ್ಗೆ ಗಾಢವಾಗಿ ಯೋಚನೆ ಮಾಡಿ ಅದರ ನಿರ್ದಿಷ್ಟ ಕಾರಣವನ್ನು ಅರ್ಥಮಾಡಿಕೊಳ್ಳುವುದು ಈ ನಿಟ್ಟಿನಲ್ಲಿ ಮೊದಲನೇ ಹೆಜ್ಜೆ. 

ಋಣಾತ್ಮಕ ಯೋಚನೆಗಳನ್ನು ದೂರವಿಟ್ಟು ತಾನು ಉಳಿದವರಿಗಿಂತ ಕಮ್ಮಿಯಿಲ್ಲ ಎಂಬ ಭಾವನೆಯನ್ನು ಗಟ್ಟಿಮಾಡಿಕೊಳ್ಳುವುದು ಎರಡನೇ ಹೆಜ್ಜೆ. ಯಾರೋ ತನ್ನನ್ನು ಗಮನಿಸುತ್ತಾರೆ, ಅವರು ಆಡಿಕೊಳ್ಳುತ್ತಾರೆ ಎಂಬ ಯೋಚನೆಯಿಂದ ಮೊದಲು ಹೊರಬರಬೇಕು. ಇನ್ನೊಬ್ಬರನ್ನು ಗಮನಿಸುವುದೇ ಎಲ್ಲರ ಕೆಲಸ ಅಲ್ಲ, ಅವರಿಗೆ ತಮ್ಮದೇ ಆದ ಕೆಲಸಗಳಿರುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಯಾರೋ ಅದನ್ನೇ ಮಾಡುತ್ತಾರೆ ಎಂದುಕೊಳ್ಳೋಣ, ಅದರಿಂದ ಅವರ ನೆಗೆಟಿವ್ ವ್ಯಕ್ತಿತ್ವ ಗೊತ್ತಾಗುತ್ತದೆಯೇ ಹೊರತು ನಾವು ಕಳೆದುಕೊಳ್ಳುವಂಥದ್ದೇನೂ ಇಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಇನ್ನೊಂದು ಮುಖ್ಯ ವಿಷಯವೆಂದರೆ, ನಾವು ಯಾವುದೋ ಸಣ್ಣ ತಪ್ಪು ಮಾಡಿದೆವು ಎಂದುಕೊಳ್ಳೋಣ, ಅದನ್ನು ನೋಡಿದವರು ಬಹುತೇಕ ತಾವೂ ಹಿಂದೆ ಅಂತಹದೇ ತಪ್ಪು ಮಾಡಿದ್ದೆವಲ್ಲ ಎಂದು ಒಳಗೊಳಗಿಂದಲೇ ನೆನಪಿಸಿಕೊಳ್ಳುತ್ತಿರುತ್ತಾರೆ.

ಪ್ರತಿಯೊಬ್ಬನಲ್ಲೂ ಒಂದಲ್ಲ ಒಂದು ಪ್ರತಿಭೆ, ವಿಶಿಷ್ಟ ಗುಣ ಇದ್ದೇ ಇರುತ್ತದೆ. ಅದನ್ನು ತನಗೆ ತಾನೇ ಪೋಷಿಸಿಕೊಂಡು, ಅದರಿಂದ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವುದು ಮುಖ್ಯ. ಬರವಣಿಗೆ, ಕ್ರೀಡೆ, ಹಾಡು, ಮಾತುಗಾರಿಕೆ, ಪೈಂಟಿಂಗ್, ಕಸೂತಿ, ಡ್ಯಾನ್ಸ್, ನಾಟಕ- ಯಾವುದಾದರೊಂದು ಕಲೆ ನಮ್ಮೊಳಗೆ ಇರುತ್ತದೆ. ಅದನ್ನು ಗಮನಿಸಿಕೊಂಡು ಗಟ್ಟಿಗೊಳಿಸುವುದೇ ಒಂದು ಪ್ರಮುಖ ಪರಿಹಾರ. 

ಬರೆಯುವ ಕೌಶಲ ಇರುವವರು ಒಂದು ಕವಿತೆ, ಕತೆ, ಲೇಖನವನ್ನು ಸ್ನೇಹಿತರೊಂದಿಗೆ ಹಂಚಿಕೊಂಡಾಗ, ಎಲ್ಲೋ ಪ್ರಕಟಿಸಿದಾಗ ದೊರೆಯುವ ಪ್ರತಿಕ್ರಿಯೆಯ ಮೌಲ್ಯ, ಅದರಿಂದ ದೊರೆಯುವ ಆತ್ಮವಿಶ್ವಾಸ ಬಹಳ ದೊಡ್ಡದು. ಹಾಡುವ ಹವ್ಯಾಸ ಇರುವವರು ನಾಕು ಮಂದಿಯ ಮುಂದೆ ಹಾಡಿದಾಗ ದೊರೆಯುವ ಒಂದು ಸಣ್ಣ ಪ್ರಶಂಸೆ ಅಪೂರ್ವ ಬದಲಾವಣೆ ತರಬಲ್ಲದು. ಆಟೋಟ, ಪ್ರದರ್ಶನ ಕಲೆ- ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಮನ್ನಣೆಯನ್ನೂ, ಪ್ರತಿಫಲವಾಗಿ ಧೈರ್ಯವನ್ನೂ ತಂದುಕೊಡುತ್ತದೆ. ಪ್ರೇರಣಾದಾಯಿ ಪುಸ್ತಕಗಳ ಓದೂ ಈ ನಿಟ್ಟಿನಲ್ಲಿ ಸಹಕಾರಿ.

ಆತ್ಮವಿಶ್ವಾಸ ಎಂಬುದು ಯಾರೋ ಬೆಂಕಿಕಡ್ಡಿ ಗೀರಿ ಹಚ್ಚಲಿ ಎಂದು ಕಾಯುವ ದೀಪ ಅಲ್ಲ; ಸ್ವಯಂ ಬೆಳಗಬೇಕಾದ ಮಿಂಚುಹುಳ. 

- ಸಿಬಂತಿ ಪದ್ಮನಾಭ ಕೆ.ವಿ.