ಮಂಗಳವಾರ, ಮಾರ್ಚ್ 3, 2026

ವಿವೇಕವೇ ಸಾಮಾಜಿಕ ವರ್ತನೆಯ ದಿಕ್ಸೂಚಿ

ಬೋಧಿವೃಕ್ಷ, 21-27 ಫೆಬ್ರವರಿ 2026ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಅಧ್ಯಯನ ಯೋಜನೆಯೊಂದರ ಭಾಗವಾಗಿ ಇತ್ತೀಚೆಗೆ ಭೂತಾನ್ ದೇಶದಲ್ಲಿ ಕೆಲವು ದಿನ ಕಳೆಯುವ ಅವಕಾಶ ಒದಗಿತ್ತು. ಈ ಸಂದರ್ಭದಲ್ಲಿ ವಿಶಿಷ್ಟ ಅಂಶವೊಂದು ನಮ್ಮನ್ನು ಚಕಿತಗೊಳಿಸಿತು. ಅದೇನೆಂದರೆ, ಇಡೀ ಭೂತಾನ್ ದೇಶದಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲದಿರುವುದು! ಅರೆ, ಈ ಕಾಲದಲ್ಲೂ ಟ್ರಾಫಿಕ್ ಸಿಗ್ನಲ್ ಇಲ್ಲದೆ ವಾಹನ ಸಂಚಾರವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಅಚ್ಚರಿ ಎನಿಸಬಹುದು. ಆದರೆ ಆ ದೇಶದ ಮಟ್ಟಿಗೆ ಈ ಅಚ್ಚರಿಯೇ ನಿಜ. ದೇಶದ ರಾಜಧಾನಿ ಥಿಂಪುವಿನಲ್ಲೇ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಕಾಣಸಿಗುವುದಿಲ್ಲ. ಟ್ರಾಫಿಕ್ ಸಿಗ್ನಲ್ ಅಷ್ಟೇ ಅಲ್ಲ, ರಸ್ತೆ ಉಬ್ಬುಗಳು ಕೂಡ ಕಾಣಸಿಗುವುದಿಲ್ಲ. ರಸ್ತೆಗಳು ಕೂಡುವ ಜಾಗದಲ್ಲಿ ಇರುವ ವೃತ್ತಗಳು ಕೂಡ ತೀರಾ ಸಣ್ಣವು.

ಒಂದು ದೇಶದ ರಸ್ತೆಗಳು ಆ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂಬ ಪ್ರಸಿದ್ಧ ಮಾತೊಂದು ಇದೆ. ರಸ್ತೆಗಳು ಎಂಬಲ್ಲಿ ಸಂಚಾರ ವ್ಯವಸ್ಥೆ ಎಂದರೂ ಚೆನ್ನಾಗಿ ಒಪ್ಪುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭೂತಾನ್‌ನಲ್ಲಿ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ಸಂಚಾರ ವ್ಯವಸ್ಥೆಯನ್ನು ನಿಭಾಯಿಸುವುದು ಸುಲಭ ಎಂಬ ತಾಂತ್ರಿಕ ಕಾರಣವನ್ನು ಕೊಡಬಹುದಾದರೂ, ವಾಸ್ತವವಾಗಿ ಇಂತಹದೊಂದು ಸೋಜಿಗ ಸಾಧ್ಯವಾಗಿರುವುದು ಅಲ್ಲಿನ ಜನರು ಮತ್ತವರ ಗುಣನಡತೆಯಿಂದಾಗಿ ಎಂಬುದೇ ನಿಜ.

ಭೂತಾನ್ ನಾಗರಿಕರ ಸಾಮಾಜಿಕ ವರ್ತನೆಯು ಸಾಂಸ್ಕೃತಿಕ ಮೌಲ್ಯಗಳು ಮತ್ತು ಅದರಿಂದ ಹುಟ್ಟಿಕೊಂಡಿರುವ ವಿಶಿಷ್ಟವಾಗಿರುವ ನೈತಿಕ ಪ್ರಜ್ಞೆಯಿಂದ ಪ್ರಭಾವಿಸಲ್ಪಟ್ಟಿದೆ. ಅವರ ಪ್ರತಿ ವರ್ತನೆಯಲ್ಲೂ ಅಪಾರ ಸಂಯಮ ಮತ್ತು ಸೌಜನ್ಯ ಎದ್ದು ಕಾಣುತ್ತದೆ. ನಮ್ಮಿಂದಾಗಿ ಇನ್ನೊಬ್ಬರಿಗೆ ತೊಂದರೆ ಆಗಬಾರದು, ಸಾಧ್ಯವಾದಷ್ಟು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂಬ ಅವರ ಮನಸ್ಸೇ ಈ ಬಗೆಯ ವ್ಯಕ್ತಿತ್ವಕ್ಕೆ ಕಾರಣ. ಹೀಗಾಗಿ ರಸ್ತೆಯ ಮೇಲೆ ನಡೆಯುವಾಗಲಾಗಲೀ, ವಾಹನ ಚಲಾಯಿಸುವಾಗಲಾಗಲೀ ಅವರಿಗೆ ಧಾವಂತವಿಲ್ಲ. ಅನಗತ್ಯವಾಗಿ ಹಾರ್ನ್ ಮಾಡುವುದಿಲ್ಲ, ಸ್ಪರ್ಧೆಗೆ ಬಿದ್ದವರಂತೆ ಓವರ್‌ಟೇಕ್ ಮಾಡುವುದಿಲ್ಲ, ಒಂದು ನಿರ್ದಿಷ್ಟ ವೇಗಮಿತಿಯಿಂದಾಚೆ ವಾಹನ ಚಾಲನೆ ಮಾಡುವುದಿಲ್ಲ. ತಾಳ್ಮೆಯೇ ಅಲ್ಲಿನ ಸಂಚಾರ ವ್ಯವಸ್ಥೆಯ ಸ್ಥಾಯೀಭಾವ.

ಹೀಗಾಗಿ ರಸ್ತೆಗಳು ಸೇರುವಲ್ಲಿ ಟ್ರಾಫಿಕ್ ದೀಪಗಳು ಬೇಕೆಂದು ಅವರಿಗೆ ಅನ್ನಿಸಿಯೇ ಇಲ್ಲ.
ಎದುರಿನಿಂದಲೋ, ಪಕ್ಕದಿಂದಲೋ ವಾಹನವೊಂದು ಬಂತೆಂದರೆ ಈ ಕಡೆಯ ವಾಹನ ಸವಾರರು ಆ ವಾಹನ ಮೊದಲು ಹೋಗುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ. ಅವರ ಮಧ್ಯೆ ತಮ್ಮದೇ ಆದ ಒಂದು ಸಂವಹನ ಇರುತ್ತದೆ. ಇನ್ನೊಬ್ಬರ ಅಗತ್ಯವನ್ನು ಅರ್ಥ ಮಾಡಿಕೊಂಡು ವ್ಯವಹರಿಸುವ ವಿಶೇಷ ಸಂವಹನವದು. ತಾವೇ ಮೊದಲು ಹೋಗಿಬಿಡಬೇಕು ಎಂಬ ಮನಸ್ಥಿತಿಗೂ ಇನ್ನೊಬ್ಬ ಮೊದಲು ಹೋಗಿಬಿಡಲಿ ಎಂಬ ಮನಸ್ಥಿತಿಗೂ ಎಷ್ಟೊಂದು ವ್ಯತ್ಯಾಸ ಅಲ್ಲವೇ?

ಪರಸ್ಪರ ಗೌರವ:

ಪರಸ್ಪರರನ್ನು ಗೌರವಿಸುವ ಗುಣ ಜನರಲ್ಲಿ ಇದ್ದಾಗ ಮಾತ್ರ ಇಂತಹದೊಂದು ಮನಸ್ಥಿತಿ ಮತ್ತು ವರ್ತನೆ ಸಾಧ್ಯವಾಗುತ್ತದೆ. ತಮಗೊಬ್ಬರಿಗೆ ಮಾತ್ರ ತುರ್ತು ಕೆಲಸವಿರುವುದು, ಬೇರೆಯವರ ಅಗತ್ಯಗಳ ಬಗ್ಗೆ ತಾನೇಕೆ ತಲೆಕೆಡಿಸಿಕೊಳ್ಳಲಿ ಎಂಬ ಮನೋಭಾವ ನಮ್ಮ ನಾಗರಿಕ ಪ್ರಜ್ಞೆಯನ್ನೇ ಹಾಳುಮಾಡಿಬಿಡುತ್ತದೆ. ಇದು ಕೇವಲ ರಸ್ತೆಯ ಮೇಲಿನ ವಿಷಯ ಮಾತ್ರವಲ್ಲ, ನಮ್ಮ ದಿನನಿತ್ಯದ ಜೀವನದ ಪ್ರತಿ ಹಂತದಲ್ಲೂ ನಡೆಯುತ್ತದೆ. ಇನ್ನೊಬ್ಬರ ಇಷ್ಟಾನಿಷ್ಟಗಳ ಬಗ್ಗೆ ಯೋಚಿಸಿಕೊಂಡು ತಾವೇಕೆ ಸಮಯ ಕಳೆಯಬೇಕು, ನಮ್ಮನಮ್ಮ ಕೆಲಸ ನೋಡಿಕೊಂಡರಾಯಿತು ಎಂಬುದು ನಮ್ಮ ಸಾಮಾನ್ಯ ಯೋಚನಾವಿಧಾನ. ಇನ್ನೊಬ್ಬರ ತಂಟೆಗೆ ಹೋಗದಿರುವುದು ಸರಿ, ಆದರೆ ಇನ್ನೊಬ್ಬರ ಅವಶ್ಯಕತೆಗಳ ಬಗ್ಗೆ ಗೌರವ ಮತ್ತು ಕಾಳಜಿ ಇಲ್ಲದೆ ಹೋದಾಗ ನಾವು ಕೇವಲ ಯಂತ್ರಗಳಾಗಿಬಿಡುತ್ತೇವೆ.

ಹೇಳಿಕೇಳಿ ಮನುಷ್ಯ ಸಂಘಜೀವಿ, ಸಮಾಜಜೀವಿ. ಭೂಮಿಯ ಮೇಲೆ ನಾಗರಿಕತೆಯ ವಿಕಾಸ ಆರಂಭವಾದಲ್ಲಿಂದಲೂ ಮನುಷ್ಯ ಜತೆಯಾಗಿಯೇ ಬದುಕುವುದನ್ನು ಅಭ್ಯಾಸ ಮಾಡಿಕೊಂಡ. ಜತೆಯಾಗಿಯೇ ವಾಸ, ಜತೆಯಾಗಿಯೇ ಊಟ, ಜತೆಯಾಗಿಯೇ ಓಡಾಟ. ಒಂಟಿಯಾಗಿರುವುದು ಬಲುಕಷ್ಟ. ಹಾಗೆ ನೋಡಿದರೆ ಒಂಟಿಯಾಗಿರುವುದಕ್ಕಿಂತಲೂ ಒಟ್ಟಿಗೆ ಬಾಳುವುದು ಇನ್ನೂ ಕಷ್ಟ. “ಎಷ್ಟು ಕಷ್ಟವೋ ಹೊಂದಿಕೆಯೆAಬುದು ನಾಲ್ಕು ದಿನದ ಈ ಬದುಕಿನಲಿ?” ಎಂದು ಕವಿ ಇದನ್ನೇ ಉದ್ದೇಶಿಸಿ ಕೇಳಿರುವುದು. ಇದೇ ಕವಿ “ಇಲ್ಲಿದೆ ನಂದನ ಇಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ” ಅಂತಲೂ ಸೂಚನೆ ಕೊಟ್ಟಿದ್ದಾರೆ. ನಮ್ಮನಮ್ಮ ಬದುಕನ್ನು ಸ್ವರ್ಗವಾಗಿಯೋ ನರಕವಾಗಿಯೋ ಮಾಡಿಕೊಳ್ಳುವುದು ನಮ್ಮಲ್ಲೇ ಇದೆ. ಇನ್ನೊಬ್ಬರಿಂದಾಗಿ ನಮ್ಮ ಬದುಕು ಅಸಹನೀಯವಾಯಿತು ಎಂಬ ಭಾವನೆಯೇ ಮೂರ್ಖತನದ್ದು.

ವಿವೇಕವೇ ಬದುಕು:

ಸರಿತಪ್ಪುಗಳ ವಿವೇಚನೆ, ಸಮಾಜದಲ್ಲಿ ಇನ್ನೊಬ್ಬರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ವಿವೇಕ ನಮ್ಮ ಬದುಕನ್ನು ನಿರ್ಧರಿಸುತ್ತದೆ. ಪ್ರತಿದಿನ ಹತ್ತುಹಲವು ಮಂದಿಯೊಂದಿಗೆ ನಾವು ವ್ಯವಹರಿಸುತ್ತಿರುತ್ತೇವೆ. ಅಪ್ಪ-ಅಮ್ಮ, ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳು, ಗುರುಗಳು, ವಿದ್ಯಾರ್ಥಿಗಳು, ನೆರೆಹೊರೆಯವರು, ಅಪರಿಚಿತರು... ಇವರೆಲ್ಲರೊಂದಿಗೆ ಒಂದಲ್ಲ ಒಂದು ರೀತಿ ಸಂವಹನ ನಡೆಸುವ ಸಂದರ್ಭ ಇದ್ದೇ ಇರುತ್ತದೆ. ತಾನು, ತನ್ನದು, ತಾನು ಮಾಡಿದ್ದು ಸರಿ, ಉಳಿದವರೆಲ್ಲ ಅವಿವೇಕಿಗಳು ಎಂಬ ಭಾವನೆ ಇದ್ದಾಗ ಸಹಬಾಳ್ವೆ, ಸಾಮರಸ್ಯ ಮರೀಚಿಕೆಯಾಗುತ್ತದೆ.

ಹೆತ್ತವರ ಮಾತನ್ನು ಯಾಕೆ ಕೇಳಬೇಕು, ಗುರುಗಳನ್ನು ಯಾಕೆ ಗೌರವಿಸಬೇಕು, ಸಹಪ್ರಯಾಣಿಕರೊಂದಿಗೆ ಯಾಕೆ ಹೊಂದಾಣಿಕೆ ಮಾಡಿಕೊಳ್ಳಬೇಕು, ರಸ್ತೆಯ ಮೇಲೆ ಯಾಕೆ ಸಂಯಮದಿಂದ ವರ್ತಿಸಬೇಕು, ಸಾಮಾಜಿಕ ಮಾಧ್ಯಮಗಳನ್ನು ಯಾಕೆ ಜವಾಬ್ದಾರಿಯಿಂದ ಬಳಸಬೇಕು, ನನ್ನ ಪರಿಸರವನ್ನು ಯಾಕೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು – ಇಂತಹ ಪ್ರಶ್ನೆಗಳನ್ನು ಕೇಳುವವರ ಮನಸ್ಸಿನಲ್ಲಿ “ಇದೆಲ್ಲ ನನ್ನ ಕೆಲಸವಲ್ಲ, ಬೇರೆ ಯಾರಾದರೂ ಮಾಡಲಿ” ಎಂಬ ಉಡಾಫೆಯೊಂದು ಸದಾ ಇರುತ್ತದೆ. ಈ ಉಡಾಫೆಯೇ ಅವರ ಬಾಹ್ಯ ವರ್ತನೆಗಳಿಗೆ ಕಾರಣ. ಇದರಿಂದಾಗಿಯೇ ಅವರು ಹಿರಿಯರ ಸಲಹೆಗಳಿಗೆ ಕಿವಿಗೊಡುವುದಿಲ್ಲ, ಗುರುಗಳನ್ನು ಗೌರವಿಸುವುದಿಲ್ಲ, ಸಹಪ್ರಯಾಣಿಕರೊಂದಿಗೋ ಸಹೋದ್ಯೋಗಿಗಳೊಂದಿಗೋ ಸಂಯಮದಿಂದ ವರ್ತಿಸುವುದಿಲ್ಲ, ಸಾಮಾಜಿಕ ಮಾಧ್ಯಮಗಳನ್ನು ವಿವೇಕದಿಂದ ಬಳಸುವುದಿಲ್ಲ. 

ಇಂಥವರು ಕಾನೂನನ್ನಾಗಲೀ ಸಾಮಾಜಿಕ ಮೌಲ್ಯಗಳನ್ನಾಗಲೀ ಗೌರವಿಸುವುದಿಲ್ಲ. ಸಾರ್ವಜನಿಕ ಸೌಲಭ್ಯಗಳನ್ನು ಜವಾಬ್ದಾರಿಯಿಂದ ಬಳಸಬೇಕು, ಅದು ಎಲ್ಲರಿಗೂ ಸಂಬಂಧಪಟ್ಟದ್ದು ಎಂಬ ತಿಳುವಳಿಕೆ ಇಲ್ಲದವರು ಇವರಲ್ಲ. ಶಿಕ್ಷಿತರೇ ಆಗಿರುತ್ತಾರೆ. ಆದರೆ ಶಿಕ್ಷಿತರಿಗೂ ವಿದ್ಯಾವಂತರಿಗೂ ವ್ಯತ್ಯಾಸ ಇದೆ. ಶಿಕ್ಷಣ ಕೇವಲ ಅಂಕಪಟ್ಟಿಗಳಿಗೆ, ಪ್ರಮಾಣಪತ್ರಗಳಿಗೆ ಸೀಮಿತವಾಗಿದ್ದಾಗ ಆಗುವ ಸಮಸ್ಯೆ ಇದು. ಶಿಕ್ಷಣ ವಿದ್ಯೆ ಆಗಿ ಪರಿವರ್ತನೆ ಆದರೆ ಸಾಮಾಜಿಕ ವಿವೇಕ ತಾನಾಗಿಯೇ ರೂಪುಗೊಳ್ಳುತ್ತಾ ಹೋಗುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ವಿದ್ಯಾರ್ಥಿಗಳು, ಯುವಕರು ಓದಲೇಬೇಕಾದ ಪುಸ್ತಕ ʼಸಕ್ಸೆಸ್‌ ಮಂತ್ರʼ

ಇಂಥದ್ದೊಂದು ಪುಸ್ತಕ ಬರೆಯಬೇಕೆನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು.

ಅಪ್ಪ ಮೊಬೈಲ್‌ ಕೊಡಿಸಲಿಲ್ಲ, ಅಮ್ಮ ಗೇಮ್‌ ಆಡಲು ಬಿಡಲಿಲ್ಲ, ಮೇಷ್ಟ್ರು ಬೈದರು, ಪ್ರೀತಿಸಿದವರು ಕೈಕೊಟ್ಟರು ಎಂಬ ಕಾರಣಗಳಿಗೆ ಜೀವ ಕಳೆದುಕೊಳ್ಳುವ ಎಳೆಯ ವಯಸ್ಸಿನ ಹುಡುಗರು; ಸಾಮಾನ್ಯ ಜ್ಞಾನವೇ ಇಲ್ಲದ ತೊಂಬತ್ತೊಂಬತ್ತು ಪರ್ಸೆಂಟೇಜಿನ ಬುದ್ಧಿವಂತರು; ಕಿರಿಯರೊಂದಿಗೆ, ಓರಗೆಯವರೊಂದಿಗೆ, ಹಿರಿಯರೊಂದಿಗೆ ಹೇಗೆ ವ್ಯವಹರಿಸಬೇಕೆಂದೇ ಗೊತ್ತಿಲ್ಲದ rank ಹೋಲ್ಡರುಗಳು; ಇಂಜಿನಿಯರಿಂಗ್‌, ಮೆಡಿಕಲ್‌ ಬಿಟ್ಟರೆ ಬದುಕುವುದಕ್ಕೆ ಬೇರೆ ದಾರಿಗಳೇ ಇಲ್ಲ ಎಂಬ ಮನಸ್ಥಿತಿಗೆ ಬಂದಿರುವ ಸಮಾಜ; ಸಣ್ಣಪುಟ್ಟ ಸೋಲುಗಳನ್ನೂ ನಿಭಾಯಿಸಲಾಗದ ದುರ್ಬಲ ತರುಣರು...
ಇಂತಹ ಸುದ್ದಿಗಳು ಪ್ರತಿದಿನ ನಮ್ಮ ಕಣ್ಣು-ಕಿವಿಗಳಿಗೆ ಬೀಳುತ್ತಿರುತ್ತವೆ. ಆಗೆಲ್ಲ ಮನಸ್ಸು ವಿಹ್ವಲವಾಗುತ್ತದೆ. ಇದಕ್ಕೆಲ್ಲ ಏನು ಕಾರಣ? ಯಾರು ಕಾರಣ? ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯವೇ? ಶಿಕ್ಷಕರ, ಹೆತ್ತವರ ಸೋಲೇ? ಆಧುನಿಕತೆಯ ಪರಿಣಾಮವೇ? ಕುಟುಂಬ ವ್ಯವಸ್ಥೆ ಕುಸಿದಿರುವ ಸೂಚನೆಯೇ? ಯಾವುದೂ ಆಗಿರಬಹುದು; ಎಲ್ಲವೂ ಆಗಿರಬಹುದು.
ಆದರೆ ಇದರ ಬಲಿಪಶುಗಳು ಮಾತ್ರ ಮುಂದೆ ಬಾಳಿ ಬದುಕಬೇಕಾದ ನಮ್ಮ ಮಕ್ಕಳು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡದೊಂದು ಕೊರತೆಯಿದೆ. ಅದನ್ನು ಹೇಗಾದರೂ ಮಾಡಿ ನಮ್ಮಿಂದಾದ ಮಟ್ಟಿಗೆ ಸರಿಪಡಿಸಬೇಕು. ಮಕ್ಕಳ ಹೃದಯ-ಮನಸ್ಸು-ವ್ಯಕ್ತಿತ್ವ ಸಮರ್ಪಕವಾಗಿ ಬೆಳೆದುಬರಬೇಕು. ಅವರು ಒಳಗಿಂದಲೇ ಗಟ್ಟಿಯಾಗಬೇಕು.
ಹೀಗೆಂದು ಯೋಚಿಸುತ್ತಲೇ ಹುಟ್ಟಿಕೊಂಡ ಬರಹಗಳಿವು. ʼವಿಜಯ ಕರ್ನಾಟಕʼದ ವಿದ್ಯಾರ್ಥಿ ಆವೃತ್ತಿ (ವಿಕ ಮಿನಿ)ಯಲ್ಲಿ ಇದೇ ʼಸಕ್ಸೆಸ್‌ ಮಂತ್ರʼ ಎಂಬ ಶೀರ್ಷಿಕೆಯಲ್ಲಿ ಐವತ್ತು ಕಂತುಗಳಲ್ಲಿ ಪ್ರಕಟವಾದವು. ಕೆಲವನ್ನು ಫೇಸ್ಬುಕ್‌ ಇತ್ಯಾದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡದ್ದೂ ಇದೆ. (ಬೇರೆ ಕೆಲವು ಲೇಖನಗಳೂ ಇವೆ).

ಆದರೆ ಇವು ಒಟ್ಟಾಗಿ ಒಂದೇ ಕಡೆ ನಮ್ಮ ವಿದ್ಯಾರ್ಥಿಗಳಿಗೆ, ಅವರ ಹೆತ್ತವರಿಗೆ, ಶಿಕ್ಷಕರಿಗೆ ದೊರೆಯಬೇಕು ಎಂಬುದು ನನ್ನ ಬಯಕೆ. ಪ್ರಕಟಿಸುತ್ತೀರಾ ಎಂದು ಅಯೋಧ್ಯಾ ಪ್ರಕಾಶನವನ್ನು ಕೇಳಿಕೊಂಡೆ. ಅವರು ಮರುಮಾತಿಲ್ಲದೆ ಆಯಿತು ಎಂದರು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಈಗ ʼಸಕ್ಸೆಸ್‌ ಮಂತ್ರʼ ಪುಸ್ತಕರೂಪದಲ್ಲಿ ನಿಮ್ಮ ಮುಂದಿದೆ. ಪ್ರಾಥಮಿಕ ಶಾಲೆಯಿಂದ ತೊಡಗಿ ಪದವಿ ಹಂತದ ವಿದ್ಯಾರ್ಥಿಗಳವರೆಗೆ ವಿವಿಧ ಸ್ತರಗಳ ವಿದ್ಯಾರ್ಥಿಗಳು ಓದಬೇಕಾದ ಪುಸ್ತಕವಿದು.
ಪುಟ: 180
ಬೆಲೆ: ರೂ. 200
ನಿಮ್ಮ ಪ್ರತಿಯನ್ನು
ಇಲ್ಲಿಂದ ನೇರವಾಗಿ ಪಡೆದುಕೊಳ್ಳಬಹುದು.
ಅಥವಾ-
ನನಗೆ ಒಂದು ವಾಟ್ಸಾಪ್‌ ಮೆಸೇಜ್‌ ಮಾಡಬಹುದು: 9449525854
- ಸಿಬಂತಿ ಪದ್ಮನಾಭ

ಬುಧವಾರ, ಫೆಬ್ರವರಿ 18, 2026

ಮಾಧ್ಯಮ: ಎಐ ಕಾಲದ ನೈತಿಕ ಸವಾಲುಗಳು

(ʻದಿ ಚೆನ್ನುಡಿʼ ವಾರಪತ್ರಿಕೆಯ ಚೊಚ್ಚಲ ಸಂಚಿಕೆಗೆ ಬರೆದ ಮುನ್ನುಡಿ) 

17 ಫೆಬ್ರವರಿ 2026


ಎಪ್ಸ್ಟೀನ್ ಕಡತಗಳ ವಿಚಾರ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋಲಾಹಲ ಎಬ್ಬಿಸಿದ ಬೆನ್ನಲ್ಲೇ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೆಫ್ರಿ ಎಪ್ಸ್ಟೀನ್  ಹಾಗೂ ಒಬ್ಬ ಯುವತಿಯೊಂದಿಗೆ ನಿಂತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಮೇಲ್ನೋಟಕ್ಕೆ ಅದೊಂದು ಫೇಕ್ ಫೋಟೋ ಎಂದು ಅರ್ಥೈಸಿಕೊಳ್ಳಬಹುದಾದರೂ ಅನೇಕ ಫ್ಯಾಕ್ಟ್ಚೆಕ್ ಸಂಸ್ಥೆಗಳು ಅದನ್ನು ದುರುದ್ದೇಶಪೂರಿತ ನಕಲಿ ಚಿತ್ರವೆಂದು ದೃಢಪಡಿಸಿದವು. ಇದರ ಬೆನ್ನಲ್ಲೇ ಮೋದಿಯವರಿದ್ದ ಜಾಗದಲ್ಲಿ ರಾಹುಲ್ ಗಾಂಧಿಯವರಿದ್ದ ಇನ್ನೊಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತು. ಮೊದಲನೆಯದು ಫೇಕ್ ಎಂದ ಮೇಲೆ ಎರಡನೆಯದು ಫೇಕ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇದು ಏಕಾಯಿತು ಎಂಬುದಕ್ಕೆ ದೊಡ್ಡ ತರ್ಕವೇನೂ ಬೇಕಾಗಿಲ್ಲ. ಇದರ ಹಿಂದಿರುವುದು ನೂರಕ್ಕೆ ನೂರು ರಾಜಕೀಯ ಕೆಸರೆರಚಾಟದ ತಂತ್ರಗಳು. ಇಂಥವುಗಳನ್ನು ಮಾಡುವುದಕ್ಕಾಗಿಯೇ ಸಾಮಾಜಿಕ ಜಾಲತಾಣಗಳ ಹಿಂದೆ ಸಾವಿರಾರು ಮಂದಿ ಮಾರುವೇಷಗಳಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ. ಎಪ್ಸ್ಟೀನ್ ಹಾಗೂ ಯುವತಿಯ ಜೊತೆ ಮೋದಿಯವರನ್ನು ತೋರಿಸಿ ಒಂದು ವರ್ಗ ವಿಕೃತ ಸಂತೋಷ ಅನುಭವಿಸಿದರೆ, ಎದುರಿನ ಇನ್ನೊಂದು ವರ್ಗ ತಾನೇಕೆ ರಾಹುಲ್ ಗಾಂಧಿಯವರನ್ನು ಆ ಜಾಗದಲ್ಲಿ ತೋರಿಸಬಾರದು ಎಂದು ಭಾವಿಸುತ್ತದೆ. ಮುಯ್ಯಿಗೆ ಮುಯ್ಯಿ ತಂತ್ರ. ಇದರಲ್ಲಿ ಯಾರು ಸರಿ ಯಾರು ತಪ್ಪು ಎಂಬ ವಾದ ಅನಗತ್ಯ. ಎಲ್ಲರದೂ ತಪ್ಪೇ. ಇದೊಂದು ತುದಿಮೊದಲಿಲ್ಲದ ವಿಷವೃತ್ತ ಎಂಬುದು ಮಾತ್ರ ನಿಜ. ಇಂಥವು ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ಸರ್ವೇಸಾಮಾನ್ಯವಾಗಿವೆ. ದಿನಕ್ಕೆ ಇಂತಹ ನೂರಾರು ವಿಕೃತ ವಿಚಾರಗಳನ್ನು ಹರಡುವ ಕಾರ್ಖಾನೆಗಳು ಎಗ್ಗಿಲ್ಲದೆ ಕಾರ್ಯನಿರ್ವಹಿಸುತ್ತಿವೆ.


ಅವಿವೇಕಿಗಳ ಕೈಗೆ ಆಯುಧ:

ಕೃತಕ ಬುದ್ಧಿಮತ್ತೆ (ಎಐ)ಯ ಕರಾಳಮುಖ ಹೀಗೆ ಇಷ್ಟಿಷ್ಟೇ ಬೆಳಕಿಗೆ ಬರುತ್ತಿದೆ. ಎಐ ಜಗತ್ತಿಗೆ ವರವೇ ಶಾಪವೇ ಎಂಬ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿವೆ, ನಡೆಯುತ್ತಲೇ ಇವೆ. ಎಷ್ಟೋ ಮಂದಿ ಅದನ್ನೊಂದು ಶಾಪವೆಂದು ಒಪ್ಪುವುದೇ ಇಲ್ಲ. ಅದೇನಿದ್ದರೂ ಬಳಸುವವರ ಮನಸ್ಸು ಮತ್ತು ಕೈಗಳಲ್ಲಿದೆ ಎಂಬುದು ಅವರ ವಾದ. ಎಐ ಆಯುಧವಿದ್ದ ಹಾಗೆ. ಆಯುಧವೆಂದ ಕೂಡಲೇ ಹಾನಿಯನ್ನೇ ಮಾಡಬೇಕಿಲ್ಲ. ಆತ್ಮರಕ್ಷಣೆಗೂ ಆಯುಧ ಬೇಕು. ತಾನು ದುರ್ಬಲನಲ್ಲ ಎಂದು ತೋರಿಸಿಕೊಳ್ಳುವುದಕ್ಕೂ ಆಯುಧ ಬೇಕು. ಆದರೆ ಯಾರು ಆಯುಧವನ್ನು ಧರಿಸುತ್ತಾನೋ ಅವನಿಗೆ ವಿವೇಕ ಇರಬೇಕು. ಅವಿವೇಕಿಯ ಕೈಗೆ ಆಯುಧ ಕೊಟ್ಟರೆ ಅವಿವೇಕತನದ್ದಲ್ಲದೆ ಬೇರೆ ಯಾವ ಕೆಲಸ ಮಾಡಲು ಸಾಧ್ಯ? ಎಐ ಎಂಬ ಆಯುಧ ಅವಿವೇಕಿಗಳ ಕೈಗೆ ಸಿಕ್ಕರೂ ಆಗುವುದು ಇದೇ.

ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಕಾಣಸಿಗುವ ಚಿತ್ರಗಳು ಮತ್ತು ವೀಡಿಯೋಗಳಲ್ಲಿ ಅಸಲಿ ಯಾವುದು, ನಕಲಿ ಯಾವುದು ಎಂದು ಪ್ರತ್ಯೇಕಿಸಿ ನೋಡಲಾಗದ ಅಸಹಾಯಕ ಸ್ಥಿತಿಗೆ ಜಗತ್ತು ತಲುಪಿದೆ. ಕೆಲವನ್ನು ಮನರಂಜನೆಯ ಉದ್ದೇಶಕ್ಕಾಗಿ ಬಳಸಲಾಗುತ್ತಿದ್ದರೆ ಹಲವನ್ನು ದುರುದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲಿಂದಲೋ ಬಂದ ಹುಲಿಯೊಂದು ಒಂಟಿ ವ್ಯಕ್ತಿಯನ್ನು ಎತ್ತಿಕೊಂಡು ಕಾಡಿನೊಳಗೆ ಓಡುತ್ತದೆ. ನದಿಯಿಂದ ಜಿಗಿಯುವ ಮೊಸಳೆಯೊಂದು ಯುವತಿಯನ್ನು ಇಡಿಯಾಗಿ ನುಂಗಿಬಿಡುತ್ತದೆ. ದೈತ್ಯ ಹೆಬ್ಬಾವೊಂದು ಮಗುವನ್ನು ಅದರ ಅಮ್ಮನೆದುರೇ ತಿಂದುಹಾಕಿದೆ. ಇವೆಲ್ಲ ಫೇಸ್‌ಬುಕ್, ಇನ್‌ಸ್ಟಾಗ್ರಾಮಿನಂತಹ ಸಾಮಾಜಿಕ ತಾಣಗಳಲ್ಲಿ ಕಂಡುಬರುತ್ತಿರುವ ಎಐ ಆಧಾರಿತ ವೀಡಿಯೋಗಳು. ಎಲ್ಲೋ ಮೂಲೆಯಲ್ಲಿ ಸಣ್ಣ ಅಕ್ಷರಗಳಲ್ಲಿ ‘ಇದು ಎಐ ಪ್ರೇರಿತ ವೀಡಿಯೋವೆಂದೂ, ಯಾರೂ ಸತ್ಯವೆಂದು ತಿಳಿಯಬಾರದೆಂದೂ, ಮನರಂಜನೆಯ ಉದ್ದೇಶಕ್ಕಾಗಿ ಮಾಡಲಾಗಿದೆಯೆಂದೂ’ ನಮೂದಿಸಲ್ಪಟ್ಟಿರುತ್ತದೆ.

ಇಂತಹ ವೀಡಿಯೋಗಳಿಂದ ಜನರ ಮನರಂಜಿಸಿ ಆಗಬೇಕಾದ ಘನಕಾರ್ಯವಾದರೂ ಏನಿದೆ? ಇದನ್ನು ಮನರಂಜನೆ ಎಂದು ತಿಳಿದವರಾದರೂ ಎಂತಹ ಮನಸ್ಥಿತಿಯವರು? ಜನರ ಮನಸ್ಸನ್ನು ವಿಹ್ವಲಗೊಳಿಸಿ, ಮುಗ್ಧರನ್ನು ವಂಚಿಸಿ ದೊರೆಯುವ ಕ್ಲಿಕ್ಸ್, ವ್ಯೂಸ್‌ಗಳಿಂದ ಇವರು ದುಡಿಯುವ ದುಡ್ಡಿಗೆ ಯಾವ ನೈತಿಕತೆ ಇದೆ? ಈ ದುಡ್ಡು ಎಷ್ಟು ಕಾಲ ಉಳಿಯುತ್ತದೆ?

ಎಐ ಬಳಸಿ ಇಂತಹ ವೀಡಿಯೋಗಳನ್ನು ತಯಾರಿಸುವವರಿಗೂ ರಾಜಕೀಯ ಪ್ರೇರಿತವಾಗಿರುವ ಮತ್ತು ಜನರ ಧಾರ್ಮಿಕ ಭಾವನೆಗಳನ್ನು ಕೆದಕುವ ವೀಡಿಯೋಗಳನ್ನು ಸಿದ್ಧಪಡಿಸುವವರಿಗೂ ಮೂಲತಃ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರೂ ಪರಮಧೂರ್ತರೇ. ಆದರೆ ಎರಡನೆಯ ವರ್ಗದವರು ಸಮಾಜದಲ್ಲಿ ಸೃಷ್ಟಿಮಾಡುವ ಸಮಸ್ಯೆಗಳು ಮಾತ್ರ ಮಾರಣಾಂತಿಕವಾದವು. ಅವರನ್ನು ಯಾವ ಕಟು ಶಬ್ದಗಳಿಂದ ಜರೆದರೂ ಕಡಿಮೆಯೇ. ಎಐ ಬಳಸಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯುವ, ಜನರ ಧಾರ್ಮಿಕ ನಂಬಿಕೆಗಳಲ್ಲಿ ವಿಷ ಹರಡುವ ಕೆಲಸಗಳಂತೂ ಇತ್ತೀಚಿನ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ.

ಮಾಧ್ಯಮಗಳಿಗೆ ಎಐ ಕಾಟ:

ಕೇವಲ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಷ್ಟೇ ಅಲ್ಲದೆ ಸಾಂಪ್ರದಾಯಿಕ ಮಾಧ್ಯಮಗಳಾದ ಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೂ ಎಐ ಶಾಪ ಮತ್ತು ತಾಪ ಆವರಿಸಿಕೊಂಡಿದೆ. ಏಕೆಂದರೆ ಸಾಂಪ್ರದಾಯಿಕ ಮಾಧ್ಯಮಗಳಿಗೆ ಇಂದು ಡಿಜಿಟಲ್ ಮಾಧ್ಯಮಗಳೇ ಪ್ರಮುಖ ಸುದ್ದಿಮೂಲಗಳಾಗಿವೆ. ತಲೆಯ ಮೇಲೆ ಎರೆದದ್ದು ಕಾಲಿಗೆ ಇಳಿಯುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗುವುದಿಲ್ಲವಲ್ಲ! ಸಾಮಾಜಿಕ ಮಾಧ್ಯಮಗಳಲ್ಲಿ ಬಂದದ್ದು ಪತ್ರಿಕೆ ಹಾಗೂ ಟಿವಿ ಚಾನೆಲ್‌ಗಳಿಗೂ ಕಾಳ್ಗಿಚ್ಚಿನಂತೆ ಹರಡುತ್ತದೆ. ಈ ಮಾಧ್ಯಮಗಳಲ್ಲಿ ಅಸಲಿ ಮತ್ತು ನಕಲಿಗಳನ್ನು ಪರಿಶೀಲಿಸುವುದಕ್ಕೊಂದು ಗೇಟ್ ಕೀಪಿಂಗ್ ವ್ಯವಸ್ಥೆ ಇದ್ದರೂ, ಒಂದು ಹಂತದಲ್ಲಿ ವಿಷವಾಯು ಈ ಎಲ್ಲ ತಡೆಗೋಡೆಗಳನ್ನು ದಾಟಿಕೊಂಡು ಹೋಗುತ್ತದೆ. 

ಇಂದು ಲೇಖನವೊಂದನ್ನು ಸಿದ್ಧಪಡಿಸಿಕೊಡಲು ವಿಷಯದ ತಿಳುವಳಿಕೆಯೂ ಬೇಕಿಲ್ಲ, ಭಾಷಾಜ್ಞಾನವೂ ಬೇಕಿಲ್ಲ. ಒಂದೆರಡು ಪದಗಳಲ್ಲಿ ವಿನಂತಿಸಿಕೊಂಡರೆ ಸಾಕು, ಎಐ ಎರಡೇ ಕ್ಷಣಗಳಲ್ಲಿ ಎಷ್ಟು ಬೇಕೋ ಅಷ್ಟು ಪದಗಳಲ್ಲಿ ಲೇಖನ ಸಿದ್ಧಪಡಿಸಿಕೊಡುತ್ತದೆ. ಕಥೆ-ಕವನ ಬೇಕಾದರೂ ಬರೆದುಕೊಡುತ್ತದೆ. ಹೀಗಾಗಿ ಯಾರು ಬೇಕಾದರೂ ಈಗ ದಿನಬೆಳಗಾಗುವುದರೊಳಗೆ ಲೇಖಕ, ಕಥೆಗಾರ, ಕವಿ, ಸಂಶೋಧಕ ಎಲ್ಲ ಆಗಬಹುದು. ತಮಗೆ ಬಂದಿರುವ ಬರಹಗಳಲ್ಲಿ ನೈಜವಾದವು ಎಷ್ಟು, ಕೃತಕ ಬುದ್ಧಿಮತ್ತೆಯವೆಷ್ಟು ಎಂದು ಸಂಪಾದಕರೇ ನಿರ್ಧರಿಸಲಾಗದೆ ಬಸವಳಿಯುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಇನ್ನು ಅವುಗಳನ್ನು ಓದುವವರ ಗತಿಯೇನು?

ಎಐಯನ್ನು ಹೇಗೆ ಬಳಸಬೇಕು, ಎಷ್ಟು ಬಳಸಬೇಕು ಎಂಬುದರ ಬಗ್ಗೆ ಸಮಾಜಕ್ಕೆ ಸ್ಪಷ್ಟತೆಯಿಲ್ಲ. ಎಲ್ಲರೂ ಬಳಸುತ್ತಾರೆ, ನಾವು ಬಳಸಿದರೆ ತಪ್ಪೇನು? ತಂತ್ರಜ್ಞಾನ ಇರುವುದೇ ಬಳಸುವುದಕ್ಕೆ ಅಲ್ಲವೇ? ಬಳಸಿದರೆ ಏನಾಗುತ್ತದೆ? ಹೀಗೆ ಸಾಗುತ್ತದೆ ಮನುಷ್ಯನ ಆಲೋಚನಾ ಲಹರಿ. ಮಾಧ್ಯಮಗಳಿಗೂ, ಉದ್ಯಮಗಳಿಗೂ, ಜನಸಾಮಾನ್ಯರಿಗೂ, ಪತ್ರಕರ್ತರಿಗೂ ವ್ಯತ್ಯಾಸಗಳು ಉಳಿಯದಿರುವ ಈ ಕಾಲದಲ್ಲಿ ಎಐ ಬಳಕೆಯ ಇತಿಮಿತಿಗಳ ಸ್ಪಷ್ಟತೆ ಮಾಧ್ಯಮ ಜಗತ್ತಿನಲ್ಲಿಯೂ ಇಲ್ಲದಿರುವುದು ಅಚ್ಚರಿಯೇನಲ್ಲ.

ಆಧುನಿಕ ಸಮಾಜದ ಅತಿದೊಡ್ಡ ಬಿಕ್ಕಟ್ಟು ಇದು: ಸರಿ-ತಪ್ಪುಗಳ ವಿವೇಚನೆಯಲ್ಲಿರುವ ಸಮಸ್ಯೆ. ಯಾವುದು ನೈತಿಕ, ಯಾವುದು ಅನೈತಿಕ ಎಂಬುದರ ವಿವೇಚನೆಯಲ್ಲಿರುವ ಸಮಸ್ಯೆ. ಪತ್ರಿಕೋದ್ಯಮದಲ್ಲಿಯೂ ಈ ಬಿಕ್ಕಟ್ಟು ಸಾಕಷ್ಟು ಹಿಂದಿನಿಂದಲೂ ಇದೆ. ಈ ರಂಗವನ್ನು ಉದ್ಯಮ ಎಂದು ಪರಿಗಣಿಸಿದ ಮೇಲೆ ಲಾಭ-ನಷ್ಟಗಳ ಪ್ರಶ್ನೆ ಅಸಂಗತವೇನೂ ಅಲ್ಲ. ಯಾರೂ ಯಾವ ವೃತ್ತಿಯನ್ನೂ ಶುದ್ಧಾಂಗ ಸೇವೆಯನ್ನಾಗಿ ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ಕಾಲ ಇದಾಗಿರುವಾಗ ಮಾಧ್ಯಮ ಜಗತ್ತೂ ಲೌಕಿಕ ಲಾಭದ ಅಪೇಕ್ಷೆಯಿಲ್ಲದೆ ಮುಂದುವರಿಯುವುದು ಅಸಾಧ್ಯ. ಆದರೆ ಬೇರೆ ಉದ್ಯಮಗಳಿಗೂ ಮಾಧ್ಯಮರಂಗಕ್ಕೂ ಒಂದು ನಿರ್ದಿಷ್ಟ ವ್ಯತ್ಯಾಸ ಇದೆ. ಅದು ‘ಸಾಮಾಜಿಕ ಹೊಣೆಗಾರಿಕೆ’ಯದ್ದು. ಏನೇ ಲಾಭ-ನಷ್ಟದ ಲೆಕ್ಕಾಚಾರವಿದ್ದರೂ ಸಾಮಾಜಿಕ ಹೊಣೆಗಾರಿಕೆಯಿಲ್ಲದೆ ಮಾಧ್ಯಮದ ವಿಚಾರವನ್ನು ಮಾತಾಡುವುದಕ್ಕೆ ಬರುವುದಿಲ್ಲ. ಮಾಧ್ಯಮಗಳನ್ನು ಸಮಾಜ ವಿಶಿಷ್ಟವಾಗಿ ನೋಡುವುದಕ್ಕೂ ಇದೇ ಕಾರಣ. ಮಾಧ್ಯಮಗಳು ಯಾವಾಗ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆಯುತ್ತವೋ, ಆಗ ಅವುಗಳಿಗೂ ಬೇರೆ ಉದ್ಯಮಗಳಿಗೂ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ. ಎಐ ಬಳಕೆಯ ನೈತಿಕ ಹೊಣೆಗಾರಿಕೆಯೂ ಈ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವೆಂದು ನಾವು ಅರ್ಥ ಮಾಡಿಕೊಳ್ಳಬೇಕು.

‘ಚೆನ್ನುಡಿ’ ಚಿರಾಯುವಾಗಲಿ:

ಪತ್ರಿಕೆಯಿಂದ ತೊಡಗಿ ಡಿಜಿಟಲ್ ಮಾಧ್ಯಮದವರೆಗೆ ಯಾವ ಹೊಸ ಉಪಕ್ರಮವನ್ನು ಆರಂಭಿಸುವುದಕ್ಕೂ ಈ ಕಾಲದಲ್ಲಿ ಎಂಟೆದೆ ಇರಬೇಕು. ಮಾಧ್ಯಮವೊಂದನ್ನು ನಡೆಸಿಕೊಂಡು ಹೋಗುವುದು ಯಾವ ಕಾಲದಲ್ಲೂ ಸುಲಭದ ವಿಚಾರವಲ್ಲ. ಅದರಲ್ಲೂ ಲಕ್ಷಾಂತರ ಸಂಖ್ಯೆಯ ಮಾಧ್ಯಮಗಳು ಇರುವ ಈ ಕಾಲದಲ್ಲಿ ವಿದ್ಯಾರ್ಥಿಮಿತ್ರರಾದ ಶ್ರೀ ಚನ್ನಬಸವ ಮತ್ತು ಶ್ರೀ ಗಿರೀಶ್ ‘ದಿ ಚೆನ್ನುಡಿ’ ಎಂಬ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಮುಂದಿರುವ ಎಲ್ಲ ಸವಾಲುಗಳನ್ನು ಅರಿತುಕೊಂಡೇ ಅವರು ಈ ಸಾಹಸದಲ್ಲಿ ತೊಡಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗೆಂದು ತಾವೇನೋ ವಿಶಿಷ್ಟವಾದುದನ್ನು ಮಾಡುತ್ತೇವೆ ಎಂದು ವಿದ್ಯಾರ್ಥಿಗಳಾಗಿದ್ದವರು ಹೊರಟಾಗ ಅವರ ಅಧ್ಯಾಪಕನಾಗಿ ಅವರ ಉತ್ಸಾಹವನ್ನು ತಗ್ಗಿಸುವ, ಕುಗ್ಗಿಸುವ ಮಾತುಗಳನ್ನಾಡಲಾರೆ. ಆದರೆ ಎಚ್ಚರಿಕೆಯ ಮಾತನ್ನಾಡುವುದು ನನ್ನ ಕರ್ತವ್ಯ. ಅವರು ಕೇವಲ ವಾಣಿಜ್ಯಕ ಉದ್ದೇಶವನ್ನಷ್ಟೇ ಇಟ್ಟುಕೊಳ್ಳದಿರಲಿ. ಸಾಮಾಜಿಕ ಹೊಣೆಗಾರಿಕೆ ಪತ್ರಿಕೆಯ ಸ್ಥಾಯೀಗುಣವಾಗಿರಲಿ. ಕೃತಕ ಬುದ್ಧಿಮತ್ತೆ ಒಡ್ಡಿರುವ ನೈತಿಕ ಸವಾಲುಗಳನ್ನು ಅವರು ಸದಾ ನೆನಪಿನಲ್ಲಿ ಇಟ್ಟುಕೊಳ್ಳಲಿ. ವಿಶ್ವಾಸಾರ್ಹತೆಯೇ ಪತ್ರಿಕೋದ್ಯಮದ ಬೆನ್ನೆಲುಬು ಮತ್ತು ಅದರ ಅಂತಿಮ ಗುರಿ. ವಿಶ್ವಾಸಾರ್ಹತೆ ಕಳೆದುಹೋದ ದಿನ ಮಾಧ್ಯಮ ಮತ್ತು ಅದರ ಸಂಪಾದಕರು ಸತ್ತುಹೋದಂತೆ. ‘ದಿ ಚೆನ್ನುಡಿ’ ಚಿರಾಯುವಾಗಲಿ.

- ಡಾ. ಸಿಬಂತಿ ಪದ್ಮನಾಭ ಕೆ.ವಿ.

ಬುಧವಾರ, ಏಪ್ರಿಲ್ 17, 2024

ಪರ್ಸೆಂಟೇಜಿಗಿಂತ ಬದುಕು ದೊಡ್ಡದು

14 ಏಪ್ರಿಲ್‌ 2024ರ ʻಉದಯವಾಣಿʼ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.

ಹಿರಿಯರೊಬ್ಬರು ಮುಖದ ತುಂಬ ನೋವು ಹೊತ್ತುಕೊಂಡು ಹೇಳುತ್ತಿದ್ದರು: ‘ಈ ರಿಸಲ್ಟುಗಳು
ಯಾಕಾದರೂ ಬರುತ್ತವೋ... ರಿಸಲ್ಟಿನ ಮರುದಿನ ಪತ್ರಿಕೆ ನೋಡಲು ಭಯ... ಯಾವ ಎಳೆಯ ಹುಡುಗರು ಏನು ಅನಾಹುತ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಓದುವ ಆತಂಕ...’ ಇದು ಅವರದೊಬ್ಬರದೇ ಭಯ ಅಲ್ಲ. ಪ್ರತಿವರ್ಷ ನೂರಾರು ಮಂದಿಯ ಎದೆಯಲ್ಲಿ ಹುಟ್ಟಿಕೊಳ್ಳುವ ನಡುಕ. ಫಲಿತಾಂಶದ ಮರುದಿನ ಏನು, ಪರೀಕ್ಷೆಯ ಮರುದಿನದಿಂದಲೇ ಇದು ಆರಂಭವಾಗುತ್ತದೆ. ಪರೀಕ್ಷೆ ಚೆನ್ನಾಗಿ ಮಾಡಿಲ್ಲ ಎಂದು ನೇಣಿಗೆ ತಲೆಯೊಡ್ಡುವ ಮಕ್ಕಳು, ಮರುದಿನ ಬರುವ ರಿಸಲ್ಟಿಗೆ ಹೆದರಿಯೇ ರೈಲುಹಳಿಗೆ ಬಲಿಯಾಗುವ ಮಕ್ಕಳು... ಇವರಿಗೆ ಫಲಿತಾಂಶದವರೆಗೆ ಕಾಯುವ ತಾಳ್ಮೆಯೇ ಇಲ್ಲ. ಫಲಿತಾಂಶವನ್ನು ಊಹಿಸಿಕೊಂಡೇ ಬದುಕನ್ನು ಮುಗಿಸುವ ಮಕ್ಕಳಿವರು.

ಜೀವನಕ್ಕಿಂತ ಪರೀಕ್ಷೆಯೇ ದೊಡ್ಡದು ಎಂದು ಭಾವಿಸಿರುವ ಮಕ್ಕಳ ಕತೆಯಿದು. ವಾಸ್ತವವಾಗಿ ಇದು ಮಕ್ಕಳ ಸಮಸ್ಯೆ ಅಲ್ಲ, ಅವರ ತಂದೆತಾಯಿಯರದು, ಹತ್ತಿರದ ಬಂಧುಗಳದು ಮತ್ತು ಸುತ್ತಲಿನ ಸಮಾಜದ್ದು. ಇವರೆಲ್ಲ ಸೇರಿ ನಿರ್ಮಿಸಿರುವ ದೊಡ್ಡದೊಂದು ವ್ಯೂಹವಿದು- ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಗಳೆಂಬ ಭೂತ. ಭವಿಷ್ಯದ ದೃಷ್ಟಿಯಿಂದ ಇವರೆಡೂ ಹಂತಗಳು ಪ್ರಮುಖ ಎಂಬುದೇನೋ ನಿಜ. ಮುಂದೇನು ಓದಬೇಕು ಎಂಬ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ದೃಷ್ಟಿಯಿಂದ ಇವು ಪ್ರಮುಖವೇ ಹೊರತು ಇಲ್ಲಿ ಒಂದೆರಡು ಪರ್ಸೆಂಟೇಜು ಕಡಿಮೆಯಾದರೆ ಬದುಕೇ ಮುಗಿಯಿತು ಎಂದು ಭಾವಿಸಬೇಕಾಗಿಲ್ಲ.

ಆದರೆ ನಮ್ಮ ಸಮಾಜ ಈ ಎರಡು ಪರೀಕ್ಷೆಗಳನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದೆ ಅಥವಾ ಮಾಡಿಕೊಳ್ಳುವಂತೆ ನೋಡಿಕೊಳ್ಳಲಾಗಿದೆ. ಮೂಲತಃ ಇದರ ಹಿಂದೆ ಇರುವುದು ಹಣದ ಬೆನ್ನುಹತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಷಡ್ಯಂತ್ರವೇ ಹೊರತು ಇನ್ನೇನೂ ಅಲ್ಲ. ಇಂಜಿನಿಯರಿಂಗ್-ಮೆಡಿಕಲ್‍ಗಳಂತಹ ಒಂದೆರಡು ವೃತ್ತಿಗಳನ್ನೇ ಭೂಮಿಯ ಮೇಲಿನ ಮಹೋನ್ನತ ಉದ್ಯೋಗಗಳೆಂದು ಬಿಂಬಿಸಿರುವುದರ ಹಿಂದೆಯೂ ಇದೇ ಷಡ್ಯಂತ್ರ ಇದೆ. ಈ ಎರಡು ವೃತ್ತಿಪರ ಕೋರ್ಸುಗಳಿಗೆ ಲಕ್ಷಾಂತರ ಹಣ ಬೇಕೆಂಬುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ನಂಬಿಕೆ. ಇವುಗಳಿಗೆ ಪ್ರವೇಶ ಪಡೆಯುವುದೂ ಭಾರೀ ದೊಡ್ಡ ಸ್ಪರ್ಧೆಯೆಂಬ ಭ್ರಮೆಯನ್ನು ಕೂಡ ಬಹು ವ್ಯವಸ್ಥಿತವಾಗಿ ರೂಪಿಸಲಾಗಿದೆ.

‘ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸುಗಳಿಗೆ ಸೇರಬೇಕೆಂದರೆ ಒಳ್ಳೆಯ ಕಡೆ ಪಿಯುಸಿ ಮಾಡಬೇಕು. ಅಲ್ಲಿ ಉತ್ಕøಷ್ಟ ಮಟ್ಟದ ಸಿಇಟಿ-ಜೆಇಇ-ನೀಟ್ ಕೋಚಿಂಗ್ ಸಿಗಬೇಕು. ಅಂತಹ ಕಾಲೇಜು ಸಿಗಬೇಕೆಂದರೆ ಎಸ್.ಎಸ್.ಎಲ್.ಸಿ.ಯಲ್ಲಿ ಒಂದೊಂದು ಅಂಕವೂ ಮುಖ್ಯ’ – ಇದು ಬಹುಪಾಲು ತಂದೆತಾಯಂದಿರಲ್ಲಿ ಇರುವ ಧಾವಂತ. ಈ ಧಾವಂತ ಕ್ಷಣಕ್ಷಣವೂ ಮಕ್ಕಳ ತಲೆಗೆ ವರ್ಗಾವಣೆ ಆಗುತ್ತಾ ಇರುತ್ತದೆ. ಬೆಳಗೆಂದರೇನು, ಸಂಜೆಯೆಂದರೇನು, ಮಳೆಯೆಂದರೇನು, ಬಿಸಿಲೆಂದರೇನು ಎಂದು ತಿಳಿಯದ ಮಕ್ಕಳು. ಬೆಳಕಾಗುವ ಮುನ್ನವೇ ಬಾಗಿಲು ತೆರೆಯುವ ಕೋಚಿಂಗ್ ಸಂಸ್ಥೆಗಳು, ಮಧ್ಯರಾತ್ರಿ ಕಳೆದರೂ ಮಲಗಲು ಬಿಡದ ಹಾಸ್ಟೆಲುಗಳು. ಓದಲೇಬೇಕು, ಕೋಚಿಂಗ್ ಪಡೆಯಲೇಬೇಕು, ಓದಿದ್ದನ್ನೇ ಓದಬೇಕು, ಉರುಹೊಡೆಯಲೇಬೇಕು, ಮತ್ತಮತ್ತೆ ಪರೀಕ್ಷೆ ಬರೆಯಬೇಕು, ಪರ್ಸೆಂಟೇಜು ಹೆಚ್ಚಾಗಬೇಕು...

ಈ ನಿರೀಕ್ಷೆಗಳ ಭಾರದಲ್ಲಿ ಮಕ್ಕಳ ಮನಸ್ಸಿನ ಪಾಡು ಯಾರಿಗೂ ಬೇಕಾಗಿಲ್ಲ. ಮನಸ್ಸು-ಬುದ್ಧಿಗಳು ಉಲ್ಲಾಸದಿಂದ ವಿಕಸಿತಗೊಳ್ಳಬೇಕಾದ ಬಂಗಾರದ ಕಾಲವದು. ಮನುಷ್ಯನ ಒಟ್ಟಾರೆ ವ್ಯಕ್ತಿತ್ವ ನಿರ್ಮಾಣವಾಗುವುದೇ ಈ ಹದಿಹರೆಯದ ಪರ್ವಕಾಲದಲ್ಲಿ. ಆದರೆ ಈಗ ಅಲ್ಲಿ ನಡೆಯುವುದು ಅಂಕ ಮೊಗೆಯುವ ಯಂತ್ರಗಳನ್ನು ತಯಾರು ಮಾಡುವ ಪ್ರಕ್ರಿಯೆ ಮಾತ್ರ. ಬುದ್ಧಿಭಾವಗಳು ಬಲಿಯಬೇಕಾದ ಕಾಲದಲ್ಲಿ ಇದೇನು ಮಾಡುತ್ತಿದ್ದೇವೆ ಎಂಬ ವಿವೇಕ ಯಾರಿಗೂ ಬೇಕಾಗಿಲ್ಲ. ಯಾವುದೋ ವೇಗೋತ್ಕರ್ಷದ ಬಲದಲ್ಲಿ ಆಸಕ್ತಿಯಿರುವ ಇಲ್ಲದಿರುವ ಎಲ್ಲ ಮಕ್ಕಳು ಮುಂದಮುಂದಕ್ಕೆ ತೇಲಿಕೊಂಡೇನೋ ಹೋಗುತ್ತವೆ. ಅವರ ನಿಜವಾದ ಭವಿಷ್ಯ ಏನು? ಮುಂದೆ ತಾವು ಜೀವನ ನಡೆಸಬೇಕಾದವರೊಂದಿಗೆ, ಸುತ್ತಲಿನ ಸಮಾಜದೊಂದಿಗೆ ಹೊಂದಿಕೊಂಡು ಸಂತೋಷವಾಗಿ ಬದುಕಬಲ್ಲರೇ ಇವರು?

ಸಂತೋಷ ಎಂದರೇನು? ಮುಂದೆ ದೊರೆಯಲಿರುವ ಉದ್ಯೋಗ, ಅದರಿಂದ ಸಂಪಾದನೆಯಾಗುವ ಹಣ ಮತ್ತು ಆ ಮೂಲಕ ದೊರೆಯುವ ಸಾಮಾಜಿಕ ಪ್ರತಿಷ್ಠೆ. ಸಮಾಜದ ಕಣ್ಣಿನಲ್ಲಿ ಇದೇ ಸಂತೋಷ. ಇದುವೇ ವೃತ್ತಿಪರ ಕೋರ್ಸುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಧಾವಂತದಲ್ಲಿ ದೆಸೆಗೆಟ್ಟು ಓಡುತ್ತಿರುವ ಒಟ್ಟಾರೆ ಸಮಾಜದ ಪರಮ ಉದ್ದೇಶ. ಇದರ ಹಿಂದಿರುವುದು ಶಿಕ್ಷಣ ಸಂಸ್ಥೆಗಳನ್ನು ಹಣದ ಮಳೆಗರೆಯುವ ಕಲ್ಪವೃಕ್ಷ-ಕಾಮಧೇನುಗಳನ್ನಾಗಿ ಮಾಡಿಕೊಂಡಿರುವ ಮಂದಿಯ ಸ್ವಾರ್ಥಬುದ್ಧಿ ಎಂಬುದು ನಮ್ಮ ಸಮಾಜಕ್ಕಿನ್ನೂ ಅರ್ಥವಾಗದಿರುವುದು ದುರಂತ.

ಈ ಕಾಲದಲ್ಲಿ ಒಂದೊಳ್ಳೆಯ ಜೀವನ ಕಟ್ಟಿಕೊಳ್ಳಬೇಕೆಂದರೆ ಹಣಕಾಸಿನ ಸ್ಥಿತಿಗತಿ ಚೆನ್ನಾಗಿರಬೇಕೆಂಬುದರಲ್ಲಿ ಅನುಮಾನವೇನೂ ಇಲ್ಲ. ಆದರೆ ಅದು ಎಷ್ಟು ಬೇಕು, ಹೇಗೆ ಬೇಕು ಎಂಬ ಬಗ್ಗೆ ಪ್ರಾಮಾಣಿಕವಾಗಿ ಯಾರೂ ಯೋಚಿಸಿಲ್ಲ. ಸಂಪಾದನೆ ಮಾಡುವುದು ತಪ್ಪಲ್ಲ; ಸಮಾಜದಲ್ಲಿ ನಾಲ್ಕು ಮಂದಿಯ ಗೌರವಕ್ಕೆ ಪಾತ್ರರಾಗಬೇಕು ಎಂಬ ಅಪೇಕ್ಷೆಯಿರುವುದು ತಪ್ಪಲ್ಲ. ಆದರೆ ಅದಕ್ಕೆ ಯಾವುದೋ ಒಂದೆರಡು ದಾರಿಗಳು ಮಾತ್ರ ಇರುವುದು ಎಂಬುದು ಮಾತ್ರ ಶುದ್ಧ ಭ್ರಮೆ. ಮರ್ಯಾದೆಯಿಂದ ಬದುಕುವುದಕ್ಕೆ ಸಾವಿರ ದಾರಿಗಳಿವೆ. ಎಲ್ಲರೂ ಒಂದೇ ರಸ್ತೆಯಲ್ಲಿ ಸಾಗುತ್ತಿದ್ದರೆ ಆಮೇಲೆ ಅವರೆಲ್ಲ ಅದೇ ಟ್ರಾಫಿಕ್ಕಿನಲ್ಲಿ ಬದುಕನ್ನೆಲ್ಲ ಕಳೆಯಬೇಕಾಗುತ್ತದೆ. ವಾಸ್ತವವಾಗಿ ಬೇರೆ ರಸ್ತೆ ಹಿಡಿದವರು ಉಳಿದವರಿಗಿಂತ ಮೊದಲೇ ಗಮ್ಯ ಸೇರಿರುತ್ತಾರೆ.

ರಿಲಯನ್ಸ್ ಎಂಬ ಸಾಮ್ರಾಜ್ಯವನ್ನು ಕಟ್ಟಿದ ಧೀರೂಭಾಯ್ ಅಂಬಾನಿ ಆರಂಭದಲ್ಲಿ ಏನಾಗಿದ್ದರು? ಹ್ಯಾರಿಪಾಟರ್ ಪುಸ್ತಕಗಳಿಂದಲೇ ಲೋಕಪ್ರಸಿದ್ಧಿ ಪಡೆದ ಜೆ.ಕೆ. ರೌಲಿಂಗ್ ಏನಾಗಿದ್ದರು? ಜಗತ್ಪ್ರಸಿದ್ಧ ಬ್ಯಾಗುಗಳ ಬ್ರಾಂಡ್ ಅನ್ನು ಕಟ್ಟಿಬೆಳೆಸಿದ ಗುಚಿಯೋ ಗುಚಿ ಏನಾಗಿದ್ದರು? ಮಸ್ಯಾಚುಸೆಟ್ಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪಡೆದ ಮೊದಲ ಅಂತಾರಾಷ್ಟ್ರೀಯ ಅಂಧವ್ಯಕ್ತಿ ಶ್ರೀಕಾಂತ್ ಬೊಲ್ಲಾ ಅಲ್ಲಿಯವರೆಗೆ ಎದುರಿಸಿದ ನೋವು-ಅವಮಾನಗಳೇನು? ನಾವು ನಮ್ಮ ಸುತ್ತಲಿನ ಸಮಾಜವನ್ನು ಕಣ್ಣುತೆರೆದು ನೋಡುವುದೇ ಇಲ್ಲ. ಯಾರೋ ಬೆಳೆಸಿದ ಭ್ರಮೆಯಲ್ಲಿ, ನಾವೇ ಹಾಕಿಕೊಂಡ ಕನ್ನಡಕದಲ್ಲಿ ಬಂಧಿಯಾಗಿರುತ್ತೇವೆ. 

ಪರ್ಸೆಂಟೇಜಿಗಿಂತ ಬದುಕು ತುಂಬ ದೊಡ್ಡದು. ಬದುಕಿನ ತೃಪ್ತಿಯನ್ನು ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿಯ ಪರ್ಸೆಂಟೇಜಿನಿಂದ ಅಳೆಯಲು ಬರುವುದಿಲ್ಲ. ಮೂಲತಃ ಪರ್ಸೆಂಟೇಜು ಒಬ್ಬ ವ್ಯಕ್ತಿಯ ಒಟ್ಟಾರೆ ವ್ಯಕ್ತಿತ್ವವನ್ನು, ಪ್ರತಿಭೆಯನ್ನು ಅಳೆಯುವ ಮಾನದಂಡವೇ ಅಲ್ಲ. ಅದು ಮಗುವಿನೊಳಗೆ ಸುಪ್ತವಾಗಿಯೇ ಇರುತ್ತದೆ. ಅದನ್ನು ಸಶಕ್ತವಾಗಿ ಹೊರಗೆ ತರುವುದಕ್ಕೆ ಹತ್ತಾರು ಮಾರ್ಗಗಳಿವೆ. ಅದು ಕೋಚಿಂಗ್ ಸೆಂಟರುಗಳಲ್ಲಿ ವಿಕಾಸವಾಗುವುದಿಲ್ಲ. ಹಾರ್ವರ್ಡ್‍ನ ಮನಃಶಾಸ್ತ್ರಜ್ಞ ಹೊವಾರ್ಡ್ ಗಾರ್ಡನರ್ ಪ್ರತಿಪಾದಿಸಿರುವ ‘ಬಹುಬುದ್ಧಿವಂತಿಕೆಯ ಸಿದ್ಧಾಂತ’ವೂ (ಮಲ್ಟಿಪಲ್ ಇಂಟೆಲಿಜೆನ್ಸಸ್ ಥಿಯರಿ) ಇದನ್ನೇ ಪ್ರತಿಪಾದಿಸುತ್ತದೆ. ಬುದ್ಧಿವಂತಿಕೆಗೆ ಏಳೆಂಟು ಆಯಾಮಗಳಿವೆ, ಅವುಗಳಲ್ಲಿ ಯಾವುದಾರೂ ಒಂದೋ ಎರಡೋ ಮೂರೋ ಮಗುವಿನಲ್ಲಿ ಪ್ರಬಲವಾಗಿರಬಹುದು. ಅವುಗಳನ್ನು ಆರಂಭದಿಂದಲೇ ಗಮನಿಸಿ ಬೆಳೆಸಿದರೆ ಆ ಮಗು ಮುಂದೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಅಸಾಧಾರಣವಾದುದನ್ನು ಸಾಧಿಸಬಹುದು ಎಂದಿದ್ದಾರೆ ಗಾರ್ಡನರ್.

ಕೆಲವರಲ್ಲಿ ದೃಶ್ಶಿಕ (ವಿಶುವಲ್) ಶಕ್ತಿ ಪ್ರಬಲವಾಗಿರುತ್ತದೆ - ಆ ಶಕ್ತಿಯನ್ನು ಬೆಳೆಸಿದರೆ ಮುಂದೆ ಅವರು ಉತ್ತಮ ವಿನ್ಯಾಸಕಾರರಾಗಿ ಬೆಳೆಯಬಹುದು. ಕೆಲವರಲ್ಲಿ ಶಾಬ್ದಿಕ (ವರ್ಬಲ್) ಪ್ರತಿಭೆ ದಟ್ಟವಾಗಿರುತ್ತದೆ- ಮುಂದೆ ಅವರು ಉತ್ತಮ ಬರೆಹಗಾರರಾಗಿ, ಮಾತುಗಾರರಾಗಿ ಬೆಳೆಯಬಹುದು. ಇನ್ನು ಕೆಲವರಲ್ಲಿ ಸಂಗೀತದ (ಮ್ಯೂಸಿಕಲ್) ಕೌಶಲ ಆಳದಲ್ಲಿ ಬೇರೂರಿರುತ್ತದೆ- ಅವರು ಮುಂದೆ ಜಗತ್ತು ಮೆಚ್ಚುವ ಸಂಗೀತಗಾರರಾಗಿ ಬೆಳೆಯಬಹುದು. ಮತ್ತೆ ಕೆಲವರಲ್ಲಿ ತಾರ್ಕಿಕ (ಲಾಜಿಕಲ್) ಶಕ್ತಿ ಪ್ರಬಲವಾಗಿರುತ್ತದೆ- ಅವರು ಮುಂದೆ ವಿಜ್ಞಾನಿಯಾಗಿಯೋ, ಇಂಜಿನಿಯರಾಗಿಯೋ ಹೆಸರು ಮಾಡಬಹುದು. ಹಲವರಲ್ಲಿ ದೈಹಿಕ (ಬಾಡಿಲೀ) ಕೌಶಲಗಳು ಅಪೂರ್ವವಾಗಿರುತ್ತವೆ- ಅಂಥವರು ಮುಂದೆ ಕ್ರೀಡಾಕ್ಷೇತ್ರದಲ್ಲಿ ಪ್ರಸಿದ್ಧಿಗೇರಬಹುದು... ಇದನ್ನು ಗಾರ್ಡನರ್ ‘ಮಲ್ಟಿಪಲ್ ಇಂಟೆಲಿಜೆನ್ಸಸ್’ ಎಂದು ಕರೆದಿರುವುದು. ತಂದೆತಾಯಿಯರು ಮತ್ತು ಅಧ್ಯಾಪಕರು ಇದನ್ನು ಗುರುತಿಸುವುದನ್ನು ಮರೆತರೆ ತಮ್ಮ ಮಕ್ಕಳಿಗೆ ಬಹುದೊಡ್ಡ ಅನ್ಯಾಯ ಮಾಡಿದಂತೆ. ಇಂಜಿನಿಯರ್ ಆಗಲಾರದ ವ್ಯಕ್ತಿಯೊಬ್ಬ ನಾಳೆ ದೊಡ್ಡ ಹಾಡುಗಾರ ಆಗಬಹುದು, ವೈದ್ಯಕೀಯ ವಿಜ್ಞಾನ ಓದಲಾಗದವನೊಬ್ಬ ನಾಳೆ ದೊಡ್ಡ ಕ್ರೀಡಾಪಟುವಾಗಿ ಹೊರಹೊಮ್ಮಬಹುದು, ಚಿತ್ರಕಾರನೋ, ಸಾಹಿತಿಯೋ, ವಕೀಲನೋ, ಪತ್ರಕರ್ತನೋ, ಸಂಶೋಧನಕೋ, ಲೆಕ್ಕಪರಿಶೋಧಕನೋ, ಅಧಿಕಾರಿಯೋ, ಉದ್ಯಮಿಯೋ ಆಗಬಹುದು. ಈ ಸ್ಥಾನಗಳಲ್ಲಿರುವುದು ಅವಮಾನವೇ? ಇವುಗಳಿಂದ ವ್ಯಕ್ತಿಯೊಬ್ಬ ತನ್ನ ಬದುಕಿನ ತೃಪ್ತಿ ಕಂಡುಕೊಳ್ಳಲು ಸಾಧ್ಯವಿಲ್ಲವೇ?

ಎಲ್ಲರಿಗಿಂತ ಮೊದಲು ಅಪ್ಪ-ಅಮ್ಮಂದಿರು ತಮ್ಮ ಭ್ರಮೆಗಳಿಂದ ಹೊರಬರಬೇಕು. ಧನದಾಹಿಗಳ ಸ್ವಾರ್ಥದಲ್ಲಿ ನಲುಗುತ್ತಿರುವ ಶಿಕ್ಷಣವಲಯ ನಿರ್ಮಿಸಿರುವ ವ್ಯೂಹದೊಳಗೆ ತಾವು ಬಂಧಿಗಳಾಗಿದ್ದೇವೆ ಎಂಬುದನ್ನು ತಿಳಿಯಬೇಕು. ಮಕ್ಕಳು ನಮ್ಮ ಭ್ರಮೆಗಳನ್ನೆಲ್ಲ ಹೊತ್ತುಕೊಂಡು ಓಡಬೇಕಾದ ಕತ್ತೆಗಳಲ್ಲ. ಅವರಿಗೂ ಅವರದ್ದೇ ಆದ ಮನಸ್ಸು, ಕೌಶಲ, ಪ್ರತಿಭೆ, ಕನಸುಗಳು ಇರುತ್ತವೆ. ಅವು ಹೂವಿನಂತೆ ಸ್ವಾಭಾವಿಕವಾಗಿ ವಿಕಾಸವಾಗಿ, ಹೀಚಾಗಿ, ಕಾಯಿಯಾಗಿ, ಹಣ್ಣಾಗಿ ಸುತ್ತಲಿನ ಸಮಾಜಕ್ಕೆ ಹಿತವಾಗಿ, ಉಪಯುಕ್ತವಾಗಿ ಪರಿಣಮಿಸಲು ಅವಕಾಶ ಮಾಡಿಕೊಡೋಣ. ಇಲ್ಲವಾದರೆ ಭವಿಷ್ಯ ನಮ್ಮನ್ನು ಕ್ಷಮಿಸಲಾರದು.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಮಾರ್ಚ್ 29, 2024

ಪ್ರತಿಯೊಬ್ಬ ಕನ್ನಡಿಗನ ಬಳಿ ಇರಬೇಕಾದ ಕೃತಿ ʼಸರಿಗನ್ನಡ-ಸರಿಕನ್ನಡʼ

  • ಪುಸ್ತಕ: ಸರಿಗನ್ನಡ-ಸರಿಕನ್ನಡ
  • ಲೇಖಕರು: ಕೊಕ್ಕಡ ವೆಂಕಟ್ರಮಣ ಭಟ್‌, ಮಂಡ್ಯ
  • ಪ್ರಕಾಶಕರು: ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.)
  • ವರ್ಷ: 2023
  • ಪುಟಗಳು: 180
  • ಬೆಲೆ: ರೂ. 200
  • ಸಂಪರ್ಕ: ಕೊಕ್ಕಡ ವೆಂಕಟ್ರಮಣ ಭಟ್‌ (9972448183), ಸಿರಿಬಾಗಿಲು ರಾಮಕೃಷ್ಣ ಮಯ್ಯ (9448344380)

ಎಲ್ಲರೂ ಕನ್ನಡ ರಕ್ಷಣೆಯ ಬಗ್ಗೆ ಮಾತಾಡುವವರೇ; ಆದರೆ ಕನ್ನಡ ಮಾತ್ರ ದಿನೇದಿನೇ ಸೊರಗುತ್ತಲೇ ಇದೆ. ದಿನಬೆಳಗಾದರೆ ಅಪಭ್ರಂಶಗಳೇ ಕಣ್ಣಿಗೆ ರಾಚುತ್ತಿರುತ್ತವೆ. ಭಾಷೆಯ ಸರಿಯಾದ ಬಳಕೆಯ ಬಗ್ಗೆ ಮಾತಾಡುವವರು ಬೆರಳೆಣಿಕೆಯಷ್ಟು. ಮಾತಾಡಿದರೂ ನೂರೆಂಟು ಕಾರಣ ಹೇಳಿ ಅವರ ಬಾಯಿ ಮುಚ್ಚಿಸುವವರೇ ಹೆಚ್ಚು.

ರಸ್ತೆಯಲ್ಲಿ ಐದು ನಿಮಿಷ ಓಡಾಡಿದರೆ ʼಶುಭಾಷಯʼದ ದೊಡ್ಡದೊಡ್ಡ ಫ್ಲೆಕ್ಸುಗಳು ಕಾಣುತ್ತವೆ. ಮೊಬೈಲು, ಸಾಮಾಜಿಕ ತಾಣಗಳಲ್ಲಂತೂ ದಿನಕ್ಕೆ ಹತ್ತಾರು ಬಾರಿ ʼಶುಭಾಷಯʼಗಳ ವಿನಿಮಯ ಆಗುತ್ತಾ ಇರುತ್ತದೆ. ಮೊನ್ನೆ ಒಂದು ಅಂಗಡಿಯ ಎದುರು ʼಹೊಸವರ್ಷದ ಶುಭಾಶಯಗಳುʼ ಎಂದು ಸರಿಯಾಗಿಯೇ ಬರೆದಿದ್ದರು. ಅಂಗಡಿಗೆ ಬಂದಿದ್ದಾತ ತನ್ನ ಹೆಂಡತಿಗೆ ಅದನ್ನು ತೋರಿಸಿ, “ನೋಡು! ಎಷ್ಟೊಂದು ತಪ್ಪು ಬರೆದಿದ್ದಾರೆ; ಅದು ಶುಭಾಷಯ ಆಗಬೇಕು” ಎಂದು ತಿಳಿಹೇಳುತ್ತಿದ್ದ. ತಪ್ಪುಗಳನ್ನೇ ಎಲ್ಲೆಡೆ ಬರೆಯುತ್ತಾ ಕೊನೆಗೆ ಸರಿಯಾದುದನ್ನೇ ತಪ್ಪು ಎಂದು ಜನರು ಸಾಧಿಸುವ ಕಾಲಕ್ಕೆ ಬಂದಿದ್ದೇವೆ. "ಸರಿಯಾಗಿ ಬರೆಯಲು ಬರುತ್ತಿಲ್ಲವೇ? ತಪ್ಪುಗಳನ್ನೇ ಜನಸ್ನೇಹೀ ಪರ್ಯಾಯ ಭಾಷೆಯೆಂದು ಬಿಂಬಿಸಿದರಾಯ್ತು" ಎಂಬ ಹೊಸ ವಾದಗಳನ್ನೂ ಹುಟ್ಟುಹಾಕುತ್ತಿದ್ದೇವೆ. ಇದು ಕೊನೆಗೆ ಎಲ್ಲಿಗೆ ತಲುಪೀತು? ಕನ್ನಡ ರಕ್ಷಣೆಗಾಗಿ ಕಲಾವಿದರು ಸಾಹಿತಿಗಳ ಹೊಸ ಸಂಘಟನೆ ಮಾಡುತ್ತಿರುವುದಾಗಿಯೂ, ಇದಕ್ಕೆ ಸಹಕರಿಸಿದರೆ "ನಿಮಗೆ ಹೊಳ್ಳೆದು ಹಾಗುತದೆ" ಎಂಬುದಾಗಿಯೂ ಒಬ್ಬ ಸಂಘಟಕರು ನನಗೆ ಇತ್ತೀಚೆಗೆ ಸಂದೇಶ ಕಳಿಸಿದ್ದರು. ಇವರ ಪ್ರಕಾರ ಕನ್ನಡದ ರಕ್ಷಣೆ ಎಂದರೆ ಏನು?

ಮಾಧ್ಯಮಗಳು ಭಾಷೆಯನ್ನು ಉಳಿಸಿ, ಬೆಳೆಸುವ ವೇದಿಕೆಗಳೆಂಬ ಹೆಗ್ಗಳಿಕೆ ಹೊಂದಿದ್ದವು. ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಮುದ್ರಣ ಮಾಧ್ಯಮದ ಕೊಡುಗೆಯಂತೂ ಅಪಾರ. “ಪತ್ರಿಕೆಯೆಂದರೆ ಪದಗಳ ಟಂಕಸಾಲೆ”ಯೆಂದು ಹಿರಿಯರು ಹೇಳಿದ್ದುಂಟು. ಆದರೆ ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳು, ಟಿವಿ ವಾಹಿನಿಗಳಲ್ಲಿ ಭಾಷೆಯ ಕಗ್ಗೊಲೆಯಾಗುತ್ತಿರುವುದು ನೋಡಿದರೆ ತೀರಾ ಕಸಿವಿಸಿ ಎನಿಸುತ್ತದೆ. ಹೆಜ್ಜೆಹೆಜ್ಜೆಗೂ ಅಪಶಬ್ದಗಳು, ಕಾಗುಣಿತ ದೋಷಗಳು… ಇವು ಮಾಧ್ಯಮಗಳ ಗುಣಮಟ್ಟವನ್ನು ಹೇಳುವುದಕ್ಕಿಂತಲೂ ನಮ್ಮ ಶಿಕ್ಷಣದ ಹಾಗೂ ಅಧ್ಯಾಪಕರ ಗುಣಮಟ್ಟದತ್ತಲೇ ಹೆಚ್ಚು ಬೊಟ್ಟು ಮಾಡುತ್ತಿರುವಂತಿದೆ.

ಇರಲಿ. ಭಾಷೆಯ ಉಳಿವಿಗೆ, ಸರಿಯಾದ ಬಳಕೆಯ ಬೆಳವಣಿಗೆಗೆ ನಾವೇನು ಮಾಡಬಹುದು ಎಂಬ ಪ್ರಶ್ನೆಗೆ ಇತ್ತೀಚೆಗೆ ಪ್ರಕಟವಾಗಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರ ʼಸರಿಗನ್ನಡ-ಸರಿನ್ನಡʼ ಕೃತಿಯು ಅತ್ಯಂತ ಸೂಕ್ತ ಉತ್ತರದಂತಿದೆ. ಕನ್ನಡವನ್ನು ಸಾಕಷ್ಟು ಚೆನ್ನಾಗಿ ಬಲ್ಲವರೂ ಪ್ರತಿದಿನ ಮಾಡುವ ಹತ್ತಾರು ತಪ್ಪುಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ, ಸರಿಯಾದ ಬಳಕೆ ಯಾವುದೆಂಬುದನ್ನು ತಿಳಿಸುವ ಅಮೂಲ್ಯ ಕೆಲಸವನ್ನು ಭಟ್ಟರು ಈ ಪುಸ್ತಕದ ಮೂಲಕ ಮಾಡಿದ್ದಾರೆ.

ಪತ್ರಿಕೆಗಳಲ್ಲಿ ದಿನಕ್ಕೊಮ್ಮೆಯಾದರೂ ʼಅಪ್ರಾಪ್ತನ ಬಂಧನʼ ಎಂಬ ಬಳಕೆಯನ್ನು ಕಾಣುತ್ತೇವೆ. ಭಾಷಣಕಾರರು ಮಾತಿಗೆ ತೊಡಗಿದರೆ ʼಅಜಗಜಾಂತರ ವ್ಯತ್ಯಾಸʼ ಎನ್ನುತ್ತಾರೆ. ಅನಾನುಕೂಲ, ಯಡವಟ್ಟು, ನಾಗರೀಕ, ಜಾತ್ಯಾತೀತ, ಕೋಟ್ಯಾಧಿಪತಿ, ಸದಾವಕಾಶ, ರೋಧನ, ಪೂರ್ವಾಗ್ರಹ, ಧಾಳಿ, ಅಮೂಲಾಗ್ರ… ಹೀಗೆ ತಪ್ಪುಬಳಕೆಗಳನ್ನೇ ಎಲ್ಲೆಡೆ ಕಾಣುತ್ತೇವೆ. ಕನ್ನಡ ಅಧ್ಯಾಪಕರು, ಕನ್ನಡ ಪತ್ರಕರ್ತರು, ಸಾಹಿತಿಗಳು… ಇವುಗಳನ್ನೇ ಸಲೀಸಾಗಿ ಬರೆಯುತ್ತಿರುತ್ತಾರೆ. ತಪ್ಪುಗಳನ್ನೇ ಬರೆಯುತ್ತಾ ಇವೇ ಸರಿಯಾದ ಬಳಕೆಗಳು ಎಂದು ವಾದಿಸುವಷ್ಟರಮಟ್ಟಿಗೆ ಇವು ದಿನನಿತ್ಯದ ಬಳಕೆಗಳಲ್ಲಿ ಗಟ್ಟಿಯಾಗಿಬಿಟ್ಟಿವೆ. ಇವು ಯಾಕೆ ತಪ್ಪು, ಸರಿಯಾದ ಬಳಕೆ ಯಾವುದು, ಸರಿಯಾದುದನ್ನು ಉಳಿಸಿ ಬೆಳೆಸಬೇಕಾದ ಅಗತ್ಯ ಏನು ಎಂಬುದನ್ನು ತಮ್ಮ ಪುಸ್ತಕದಲ್ಲಿ ಸಮರ್ಥವಾಗಿ ವಿವರಿಸಿದ್ದಾರೆ ಶ್ರೀ ವೆಂಕಟ್ರಮಣ ಭಟ್ಟರು.

ಈ ರೀತಿಯ ಪದಗಳನ್ನು ಅಕಾರಾದಿ ಜೋಡಿಸಿರುವುದರಿಂದ ಪರಾಮರ್ಶನದ ದೃಷ್ಟಿಯಿಂದಲೂ ಕೃತಿ ಅನುಕೂಲಕರವಾಗಿದೆ. ಕೃತಿಕಾರರು ಸುಮಾರು ನಾಲ್ಕು ದಶಕಗಳ ಕಾಲ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವುದರಿಂದ ಪದಗಳ ವ್ಯುತ್ಪತ್ತಿ, ಅವುಗಳ ಅರ್ಥ, ತಪ್ಪು ಬಳಕೆಯಿಂದ ಆಗುವ ಅನರ್ಥಗಳನ್ನು ಅಧಿಕೃತವಾಗಿ ಹೇಳಬಲ್ಲವರಾಗಿದ್ದಾರೆ.

ʼಸರಿಗನ್ನಡ-ಸರಿಕನ್ನಡʼ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡದೊಂದು ಕೊಡುಗೆ. ಪ್ರತೀ ಕನ್ನಡ ಪತ್ರಿಕೆ, ಟಿವಿ ವಾಹಿನಿಗಳೇ ಮೊದಲಾದ ಮಾಧ್ಯಮಗಳು ತಮ್ಮ ಕಚೇರಿಗಳಲ್ಲಿ ಇಟ್ಟುಕೊಳ್ಳಬೇಕಾದ ಪುಸ್ತಕ ಇದು. ಕನ್ನಡ ಅಧ್ಯಾಪಕರು, ವಿದ್ಯಾರ್ಥಿಗಳು, ಪತ್ರಕರ್ತರಂತೂ ತಮ್ಮ ಬಳಿ ಸದಾ ಇರಿಸಿಕೊಳ್ಳಬೇಕಾದ ಕೃತಿಯಿದು. ಅಷ್ಟೇ ಏಕೆ, ಭಾಷೆಯ ಬಗ್ಗೆ ಪ್ರೀತಿ-ಅಭಿಮಾನವುಳ್ಳ ಪ್ರತಿಯೊಬ್ಬ ಕನ್ನಡಿಗನೂ ಗಮನಿಸಬೇಕಾದ, ಪರಸ್ಪರ ಹಂಚಿಕೊಳ್ಳಬೇಕಾದ ಪುಸ್ತಕ ಇದೆಂದರೆ ಅತಿಶಯವೇನೂ ಇಲ್ಲ.

ಈ ಕಾಲಕ್ಕೆ ಬಹಳ ಅಗತ್ಯವಿರುವ ಕೃತಿಯಿದು. ಇಂತಹದೊಂದು ಮಹತ್ವದ ಪುಸ್ತಕ ರಚಿಸಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರಿಗೂ, ಇದನ್ನು ಪ್ರಕಟಿಸಿರುವ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೂ ನಾವು ಆಭಾರಿಗಳಾಗಿರಬೇಕು. ಭೌಗೋಳಿಕವಾಗಿ ಕರ್ನಾಟಕದ ಹೊರಗಿರುವ, ಗಡಿನಾಡಿನ ಸಂಸ್ಥೆಯೊಂದು ಇಂತಹ ಘನಕಾರ್ಯವನ್ನು ಮಾಡಿದೆ ಎಂಬುದನ್ನು ನಾವೆಲ್ಲ ಗಮನಿಸಬೇಕು ಮತ್ತು ಅಭಿನಂದಿಸಬೇಕು.

 - ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಜನವರಿ 27, 2024

ಭಾರತೀಯ ಪತ್ರಿಕಾಲೋಕದ ಹಿಂದಿನ ಕಥೆ

28 ಜನವರಿ 2024ರ ʻಉದಯವಾಣಿ ಸಾಪ್ತಾಹಿಕ ಸಂಪದʼದಲ್ಲಿ ಪ್ರಕಟವಾದ ಲೇಖನ

ಕಾಫಿಯಿಲ್ಲದ ಬೆಳಗನ್ನಾದರೂ ಊಹಿಸಬಹುದು, ಪತ್ರಿಕೆಯಿಲ್ಲದ ಮುಂಜಾವನ್ನು ಊಹಿಸಿಕೊಳ್ಳುವುದು ಕಡುಕಷ್ಟ. ಪತ್ರಿಕೆಯ ಜಾಗದಲ್ಲಿ ಮೊಬೈಲೇನೋ ಬಂದು ಕೂತಿರಬಹುದು, ಆದರೆ ಮನುಷ್ಯನ ದಿನದ ಬಾಗಿಲನ್ನು ತೆರೆಯುವುದು ಯಾವುದೋ ಒಂದು ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಮಾಧ್ಯಮ ಬಂದರೂ ಪತ್ರಿಕೆಯ ಮೇಲೆ ಕಣ್ಣಾಡಿಸದೆ ತೃಪ್ತಿಯಿಲ್ಲ ಎನ್ನುವ ಮಂದಿಯಂತೂ ಬೇಕಾದಷ್ಟಿದ್ದಾರೆ.

ಪತ್ರಿಕೆಗಳನ್ನು ಇಷ್ಟೊಂದು ಹಚ್ಚಿಕೊಂಡಿರುವ ಎಲ್ಲರಿಗೂ ‘ಜನರನ್ನು ಈ ಮಟ್ಟಕ್ಕೆ ಪ್ರಭಾವಿಸಿರುವ ಇಂತಹದೊಂದು ಮಾಧ್ಯಮ ಹೇಗೆ ಹುಟ್ಟಿಕೊಂಡಿತು? ಯಾವಾಗ ಹುಟ್ಟಿಕೊಂಡಿತು?’ ಎಂಬ ಪ್ರಶ್ನೆ ಕಾಡದಿರದು.  ಆ ಕಥೆ ಬಹಳ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಾವು ಭಾರತದಲ್ಲಿ ಪತ್ರಿಕೆಗಳು ಹೇಗೆ ಹುಟ್ಟಿಕೊಂಡವು? ನಮ್ಮ ದೇಶದ ಮೊದಲ ಪತ್ರಿಕೆಯ ಕಥೆ ಏನು? ಆರಂಭಿಸಿದವರು ಯಾರು? ಇತ್ಯಾದಿಗಳನ್ನು ಗಮನಿಸೋಣ. 

ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಭಾರತದಲ್ಲಿ ಪತ್ರಿಕೆಗಳೇ ಇರಲಿಲ್ಲ. ಇರಲಿಲ್ಲ ಎಂದರೆ ಜನ ಪತ್ರಿಕೆಗಳನ್ನು ಕಂಡೇ ಇರಲಿಲ್ಲ ಎಂದಲ್ಲ. ಯುರೋಪಿನ ಪತ್ರಿಕೆಗಳನ್ನು ಜನರು ಓದುತ್ತಿದ್ದುದುಂಟು. ಇಲ್ಲಿ ಬ್ರಿಟಿಷರ ವ್ಯಾಪಾರ ವ್ಯವಹಾರ ಜೋರಾಗಿದ್ದುದರಿಂದ, ಇಂಗ್ಲೆಂಡಿನಿಂದ ಹಡಗುಗಳ ಮೂಲಕ ಪತ್ರಿಕೆಗಳೂ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದವು. ಅವು ಮೂರ್ನಾಲ್ಕು ತಿಂಗಳು ಹಳೆಯ ಪತ್ರಿಕೆಗಳು. ಅವನ್ನೇ ಇಲ್ಲಿನ ಮಂದಿ ಬಿಸಿಬಿಸಿ ಸುದ್ದಿಗಳೆಂದು ಭಾವಿಸಿ ಓದಬೇಕಿತ್ತು.

ವ್ಯಾಪಾರಿಯ ಕನಸು:

ಭಾರತದಲ್ಲೇ ಪತ್ರಿಕೆಗಳನ್ನು ಮುದ್ರಿಸಬೇಕು ಎಂಬ ಯೋಚನೆ ಮೊದಲು ಬಂದದ್ದು ವಿಲಿಯಂ ಬೋಲ್ಟ್ಸ್ ಎಂಬ ಯುರೋಪಿಯನ್ ವ್ಯಾಪಾರಿಗೆ. ಭಾರತದಲ್ಲಿ ಪತ್ರಿಕೆಗಳಿಲ್ಲದೆ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದೂ, ಯಾರಾದರೂ ಮುದ್ರಣಾಲಯವನ್ನು ಸ್ಥಾಪಿಸುವ ಆಸಕ್ತರಿದ್ದರೆ ಅವರಿಗೆ ತಾನು ಸಹಾಯ ಮಾಡುತ್ತೇನೆ ಎಂದೂ, ತನ್ನಲ್ಲಿ ಸಾಕಷ್ಟು ವಿಶೇಷ ಸುದ್ದಿಗಳಿದ್ದು ಅವನ್ನು ಓದಬಯಸುವವರು ತನ್ನಮನೆಗೆ ಬೆಳಗ್ಗಿನ ಹೊತ್ತು ಬರಬಹುದು ಎಂದೂ ಒಂದು ಕರಪತ್ರವನ್ನು ಸಿದ್ಧಪಡಿಸಿ ಅವನು ಕಲ್ಕತ್ತಾದ ಕೌನ್ಸಿಲ್ ಹೌಸಿನ ಹೆಬ್ಬಾಗಿಲಿನಲ್ಲಿ ಅಂಟಿಸಿದ. ಅದು 1760ರ ದಶಕದ ಕೊನೆಯ ಭಾಗ.

ಕಂಪೆನಿ ಸರ್ಕಾರಕ್ಕೆ ಅಲ್ಲೇ ಅಪಾಯದ ಮುನ್ಸೂಚನೆ ಕಂಡಿತು. ಇದನ್ನು ಚಿಗುರಲ್ಲೇ ಚಿವುಟದೆ ಹೋದರೆ ನಮಗೇ ಸಂಚಕಾರ ಉಂಟಾದೀತು ಎಂದು ಭಾವಿಸಿದ ಕಂಪೆನಿ ಅಧಿಕಾರಿಗಳು ಬೋಲ್ಟ್ಸ್‍ನನ್ನು ಗಡಿಪಾರು ಮಾಡುವುದೇ ಸರಿ ಎಂದು ಯೋಚಿಸಿದರು. ಆತ ಕೂಡಲೇ ಬಂಗಾಲ ತೊರೆದು ಮದ್ರಾಸಿಗೆ ಹೋಗಿ, ಅಲ್ಲಿಂದ ಇಂಗ್ಲೆಂಡ್‍ನ ಹಡಗು ಹಿಡಿಯಬೇಕು ಎಂದು ಸರ್ಕಾರ ಆದೇಶಿಸಿತು. ಅಲ್ಲಿಗೆ ಭಾರತದ ಮೊದಲ ಪತ್ರಿಕೆ ಹುಟ್ಟುವ ಮೊದಲೇ ಸತ್ತುಹೋಯಿತು.

ಬೆಂಗಾಲ್ ಗಜೆಟ್:

ಇದಾಗಿ ಹನ್ನೆರಡು ವರ್ಷಗಳ ಬಳಿಕ ಭಾರತದ ಮೊತ್ತಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ನ ಉಗಮವಾಯಿತು. 1780ರ ಜನವರಿ 29ರಂದು ಜೇಮ್ಸ್ ಆಗಸ್ಟಸ್ ಹಿಕಿ ಎಂಬ ಇನ್ನೊಬ್ಬ ಯುರೋಪಿಯನ್ ವ್ಯಾಪಾರಿ ‘ಬೆಂಗಾಲ್ ಗಜೆಟ್’ನ ಮೊದಲ ಸಂಚಿಕೆಯನ್ನು ಹೊರಡಿಸಿದ. ಅದಕ್ಕೆ ‘ದಿ ಒರಿಜಿನಲ್ ಕಲ್ಕತ್ತಾ ಜನರಲ್ ಅಡ್ವಟೈಸರ್’ ಎಂಬ ಇನ್ನೊಂದು ಹೆಸರೂ ಇತ್ತು. ಆ ಪತ್ರಿಕೆಗೆ ಹಿಕಿಯೇ ಲೇಖಕ, ವರದಿಗಾರ, ಪ್ರಕಾಶಕ, ಮುದ್ರಕ ಎಲ್ಲವೂ ಆಗಿದ್ದರಿಂದ ಅದಕ್ಕೆ ‘ಹಿಕೀಸ್ ಗಜೆಟ್’ ಎಂಬ ಹೆಸರೂ ಇತ್ತು.

ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕೇಂದ್ರಸ್ಥಾನ ಬಂಗಾಳದ ಕಲ್ಕತ್ತಾವೇ ಆಗಿದ್ದುದರಿಂದ ನಮ್ಮ ಪತ್ರಿಕೋದ್ಯಮದ ಜನ್ಮಸ್ಥಳವೂ ಅದೇ ಆಯಿತು. ‘ಬೆಂಗಾಲ್ ಗಜೆಟ್’ ಇಂಗ್ಲಿಷ್ ಭಾಷೆಯ ವಾರಪತ್ರಿಕೆ ಆಗಿತ್ತು. 12 ಇಂಚು ಉದ್ದ, 8 ಇಂಚು ಅಗಲದ ಈ ಪುಟ್ಟ ಪತ್ರಿಕೆಯಲ್ಲಿ ನಾಲ್ಕು ಪುಟಗಳಿದ್ದವು. ಪುಟಗಳನ್ನು ತಲಾ ಮೂರು ಕಾಲಂಗಳಾಗಿ ವಿಭಾಗಿಸಲಾಗಿತ್ತು. ಕಂಪೆನಿ ಅಧಿಕಾರಿಗಳು, ಇಂಗ್ಲಿಷ್ ಬಲ್ಲ ಕೆಲವು ಭಾರತೀಯರು ಇದರ ಓದುಗರಾಗಿದ್ದರು. ಸರಾಸರಿ 400 ಪ್ರತಿಗಳಷ್ಟು ‘ಗಜೆಟ್’ ಪ್ರಕಟವಾಗುತ್ತಿತ್ತು. ಅದರ ಮುದ್ರಣವೇನೂ ಅಷ್ಟೊಂದು ಸೊಗಸಾಗಿರಲಿಲ್ಲ. ಸುದ್ದಿಗಳಿಗಿಂತ ಜಾಹೀರಾತುಗಳೇ ಹೆಚ್ಚಾಗಿದ್ದವು.

ಯಾರೀತ ಹಿಕಿ?

‘ಈಸ್ಟ್ ಇಂಡಿಯಾ ಕಂಪೆನಿಯ ಮಾಜಿ ಮುದ್ರಕ’ ಎಂದು ಜೇಮ್ಸ್ ಆಗಸ್ಟಸ್ ಹಿಕಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ಆತ ಮೂಲತಃ ಐರ್ಲೆಂಡಿನವನು. 1740ರ ಆಸುಪಾಸಿನಲ್ಲಿ ಜನಿಸಿದ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹಿಕಿ 1772ರಲ್ಲಿ ಭಾರತಕ್ಕೆ ಬಂದು ಈಸ್ಟ್ ಇಂಡಿಯಾ ಕಂಪೆನಿ ಸೇರಿಕೊಂಡ. ‘ಶಸ್ತ್ರಚಿಕಿತ್ಸಕ’ನಾಗಿ, ಮುದ್ರಣ ಸಹಾಯಕನಾಗಿ ಆತ ಕಾರ್ಯನಿರ್ವಹಿಸುತ್ತಿದ್ದ. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ಜೈಲುಪಾಲಾದ. ಜೈಲಿನಲ್ಲಿದ್ದಾಗಲೇ ಒಂದು ಮುದ್ರಣ ಯಂತ್ರ ಪಡೆದುಕೊಂಡು ಮುದ್ರಣದ ಕೆಲಸ ಆರಂಭಿಸಿದ. 1777ರಲ್ಲಿ ಜೈಲಿನಿಂದ ಹೊರಬಂದು ತನ್ನದೇ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ. ಮೂರು ವರ್ಷಗಳ ಬಳಿಕ ಅವನಿಂದಲೇ ಭಾರತದ ಮೊದಲ ಪತ್ರಿಕೆ ಆರಂಭವಾಯಿತು.

ಹಿಕಿ ಒಬ್ಬ ವಿಲಕ್ಷಣ ಪ್ರವೃತ್ತಿಯ ವ್ಯಕ್ತಿ. ಆತನ ‘ಬೆಂಗಾಲ್ ಗಜೆಟ್’ ಆರಂಭದಲ್ಲಿ ಗಂಭೀರವಾಗಿಯೇ ಪ್ರಕಟವಾಗುತ್ತಿತ್ತು. ತನ್ನದು “ಎಲ್ಲ ಪಕ್ಷಗಳಿಗೂ ಮುಕ್ತವಾದ ಆದರೆ ಯಾರಿಂದಲೂ ಪ್ರಭಾವಕ್ಕೊಳಗಾಗದ ಪತ್ರಿಕೆ” ಎಂದು ಪತ್ರಿಕೆಯ ಮೇಲ್ಭಾಗದಲ್ಲೇ ಹಿಕಿ ಪ್ರಕಟಿಸುತ್ತಿದ್ದ. ಆದರೆ ಎಂಟ್ಹತ್ತು ತಿಂಗಳಲ್ಲಿ ‘ಇಂಡಿಯಾ ಗಜೆಟ್’ ಎಂಬ ಇನ್ನೊಂದು ಪತ್ರಿಕೆ ಆರಂಭವಾದಾಗ, ಹಿಕಿಗೆ ಆತಂಕವಾಯಿತು. ತನ್ನ ಓದುಗರು ಎಲ್ಲಿ ಕಡಿಮೆಯಾಗುತ್ತಾರೋ ಎಂಬ ಆತಂಕದಲ್ಲಿ ತನ್ನ ಪತ್ರಿಕೆಯ ಧ್ವನಿಯನ್ನೇ ಬದಲಾಯಿಸಿಕೊಂಡ. ಸುದ್ದಿಗಳಲ್ಲಿ, ಲೇಖನಗಳಲ್ಲಿ ಅಲ್ಲಿಯವರೆಗೆ ಇದ್ದ ಸಮತೋಲನ ಕಳೆದುಹೋಗಿ ವೈಯಕ್ತಿಕ ಪ್ರಹಾರಗಳನ್ನು ಆರಂಭಿಸಿದ.

ಪ್ರಖರ ಟೀಕಾಕಾರ:

ಸ್ವತಃ ಯುರೋಪಿಯನ್ನನಾಗಿದ್ದೂ ಹಿಕಿ ಈಸ್ಟ್ ಇಂಡಿಯಾ ಕಂಪೆನಿಯ ಪ್ರಖರ ಟೀಕಾಕಾರನಾಗಿದ್ದ. ಅಲ್ಲಿನ ಅಧಿಕಾರಿಗಳ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರಗಳನ್ನು ತೀಕ್ಷ್ಣವಾಗಿ ಖಂಡಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದ. ‘ಬೆಂಗಾಲ್ ಗಜೆಟ್’ ಬ್ರಿಟಿಷ್ ಅಧಿಕಾರಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು. ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್, ಸುಪ್ರೀಂಕೋರ್ಟಿನ ಮುಖ್ಯನಾಯಾಧೀಶರಾಗಿದ್ದ ಸರ್ ಎಲಿಜಾ ಇಂಪೆಯವರನ್ನೂ ಬಿಡದೆ ಕಾಡಿದ ಹಿಕಿ.

ಆದರೆ ಟೀಕೆಯ ಭರದಲ್ಲಿ ಹಿಕಿ ವೈಯಕ್ತಿಕ ದಾಳಿಯಲ್ಲಿ ತೊಡಗಿದ. ತನಗಾಗದಿದ್ದವರ ಖಾಸಗಿ ಬದುಕಿನ ಕುರಿತು ವ್ಯಂಗ್ಯವಾಡಿದ. ಹೇಸ್ಟಿಂಗ್ಸ್‍ನ ಪತ್ನಿಯ ಕುರಿತೂ ದೋಷಾರೋಪಣೆ ಮಾಡಿದ. ಇದರಿಂದಾಗಿ ಹಿಕಿ ಪದೇಪದೇ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಕೋರ್ಟು ಕಚೇರಿ ಅಲೆದಾಡಬೇಕಾಯಿತು. ಸಾವಿರಾರು ರುಪಾಯಿ ದಂಡ ಹಾಕಿಸಿಕೊಳ್ಳಬೇಕಾಯಿತು. ಬೆಂಗಾಲ್ ಗಜೆಟ್‍ನ ಅಂಚೆ ಸೌಲಭ್ಯ ರದ್ದಾಯಿತು. ಕೊನೆಗೊಂದು ದಿನ ಹಿಕಿಯ ಮುದ್ರಣಾಲಯವನ್ನೇ ಸರ್ಕಾರ ವಶಪಡಿಸಿಕೊಂಡು ಬೀಗ ಜಡಿಯಿತು. 1782ರ ಮಾರ್ಚ್ 23ರಂದು ಗಜೆಟ್‍ನ ಕೊನೆಯ ಸಂಚಿಕೆ ಪ್ರಕಟವಾಯಿತು.

ಮರೆತುಹೋದ ಮಹಾನುಭಾವ:

ಹಿಕಿಯ ಬಗ್ಗೆ ಇತಿಹಾಸದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ಆದರೆ ಆತನಿಂದಲೇ ಭಾರತೀಯ ಪತ್ರಿಕಾಲೋಕ ಹುಟ್ಟಿಕೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. ಆತ ಒಳ್ಳೆಯ ಉದ್ದೇಶದಿಂದಲೇ ಪತ್ರಿಕೆ ಆರಂಭಿಸಿದ, ಬ್ರಿಟಿಷರ ಭ್ರಷ್ಟಾಚಾರಗಳನ್ನು ಕಟುವಾಗಿ ಟೀಕಿಸಿದ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕೊನೆಯವರೆಗೂ ಹೋರಾಡಿದ. ಆದರೆ ಒಂದು ಹಂತದಲ್ಲಿ ಆತ ಬೆಳೆಸಿಕೊಂಡ ಕೀಳು ಅಭಿರುಚಿ ಹಾಗೂ ಕಂಪೆನಿಯ ಪೂರ್ವಗ್ರಹದಿಂದ ಆತನಿಗೆ ಹೆಚ್ಚುಸಮಯ ಪತ್ರಿಕೆಯನ್ನು ನಡೆಸಲಾಗಲಿಲ್ಲ. ಆತನನ್ನು ‘ಮರೆತುಹೋದ ಮಹಾನುಭಾವ’ ‘ಭಾರತೀಯ ಪತ್ರಿಕೋದ್ಯಮದ ಪಿತಾಮಹ’ ಅಂತಲೂ ಇತಿಹಾಸಕಾರರು ದಾಖಲಿಸಿದ್ದುಂಟು.

ಒಟ್ಟಿನಲ್ಲಿ, ಬೆಂಗಾಲ್ ಗಜೆಟ್‍ನ ಹುಟ್ಟಿನ ನೆನಪಲ್ಲಿ ಜನವರಿ 29 ‘ಭಾರತೀಯ ಪತ್ರಿಕಾ ದಿನ’ ಎಂದು ಪ್ರಸಿದ್ಧಿಪಡೆದಿದೆ. ನಮ್ಮ ಪತ್ರಿಕಾಲೋಕದ ಸಿಂಹಾವಲೋಕನಕ್ಕೆ ಇದು ಸುದಿನ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 31, 2023

ಸವಾಲುಗಳೆಂಬ ಬದುಕಿನ ದೀಪಸ್ತಂಭಗಳು

23-29 ಸೆಪ್ಟೆಂಬರ್‌ 2023ರ ʻಬೋಧಿವೃಕ್ಷʼದಲ್ಲಿ ಪ್ರಕಟವಾದ ಲೇಖನ

:

:

ತೇಜಸ್ವಿ ಪಿಯುಸಿಗೆ ಬರುವ ಹೊತ್ತಿಗೆ ಕೋವಿಡ್ ಮಹಾಮಾರಿ ಜಗತ್ತನ್ನು ಆವರಿಸಿಕೊಂಡಿತ್ತು. ಎಲ್ಲೆಡೆ ಲಾಕ್‌ಡೌನ್, ಎಲ್ಲರಿಗೂ ಗೃಹಬಂಧನ. ಅವನು ಕಾಲೇಜನ್ನು ನೋಡಿದ್ದೇ ಕಡಿಮೆ. ಪಾಠ, ಪರೀಕ್ಷೆ ಎಲ್ಲವೂ ಆನ್ಲೆನಿನಲ್ಲೇ ನಡೆಯುತ್ತಿದ್ದವು. ಅಂತರಜಾಲದ ಹೊಸ ಸಾಧ್ಯತೆ ಹೊಸಹೊಸ ಆತಂಕಗಳನ್ನೂ ತಂದಿತ್ತು. ತೇಜಸ್ವಿಯ ವಯಸ್ಸಿನ ಬಹುತೇಕ ಹುಡುಗರು ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗಿದ್ದರು. ತೇಜಸ್ವಿಯೂ ಅವುಗಳಲ್ಲಿ ಮುಳುಗಿದ್ದ- ಆದರೆ ಕಾಲಯಾಪನೆಗೆ ಅಲ್ಲ.

ಅವನು ಭವಿಷ್ಯದ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿದ್ದ. ಇಂಜಿನಿಯರಿಂಗ್, ಮೆಡಿಕಲ್ ಬಿಟ್ಟು ಜಗತ್ತಿನಲ್ಲಿ ಇನ್ನೇನಿದೆ ಎಂದು ಹುಡುಕುತ್ತಿದ್ದ. ಕೊಂಚ ಸಾಹಸಪ್ರವೃತ್ತಿಯ ಅವನನ್ನು ಸೆಳೆದದ್ದು ಮರ್ಚೆಂಟ್ ನೇವಿ. ಪ್ರಪಂಚದ ಒಟ್ಟಾರೆ ವಾಣಿಜ್ಯಕ ಸರಕು ಸಾಗಾಣಿಕೆಯ ಶೇ. ೯೦ರಷ್ಟು ವ್ಯವಹಾರ ಈ ಮರ್ಚೆಂಟ್ ನೇವಿಯ ಮೂಲಕವೇ ನಡೆಯುತ್ತದಾದರೂ ಇದರ ಬಗ್ಗೆ ತಿಳಿದುಕೊಂಡವರು ನಮ್ಮಲ್ಲಿ ಕಡಿಮೆ. ಕೋವಿಡ್ ತೆರೆದುತೋರಿಸಿದ ಆನ್ಲೈನ್ ಪ್ರಪಂಚ ತೇಜಸ್ವಿಗೆ ಅಜ್ಞಾತ ಪ್ರಪಂಚದ ಅನಾವರಣ ಮಾಡಿತು.

ಅಲ್ಲಿಂದ ಆರಂಭವಾಯಿತು ಹೊಸ ಧ್ಯಾನ. ಮರ್ಚೆಂಟ್ ನೇವಿ ಸೇರಬೇಕೆಂದರೆ ಅಗತ್ಯವಿರುವ ದೇಹದಾರ್ಢ್ಯ, ಮಾನಸಿಕ ದೃಢತೆ, ತಿಳುವಳಿಕೆ ಸಂಪಾದಿಸಲು ಸದಾ ತಯಾರಿ. ಊಟಕ್ಕೆ ಕೂರುವಾಗ ಪಕ್ಕದಲ್ಲಿ ತಕ್ಕಡಿ ಇಟ್ಟುಕೊಳ್ಳುವ ಅವನನ್ನು ನೋಡಿ ಮನೆಮಂದಿಗೆ ಸೋಜಿಗ. ಬಾಲ್ಯದಿಂದಲೂ ವೈವಿಧ್ಯಮಯ ತಿಂಡಿತಿನಿಸಿನಲ್ಲಿ ಆಸಕ್ತಿಯಿದ್ದ ಹುಡುಗ ಹೊಸ ಜಗತ್ತಿನ ಸೆಳೆತ ಹುಟ್ಟಿಕೊಂಡ ಮೇಲೆ ಶಿಸ್ತಿನ ಸಿಪಾಯಿಯಾಗಿಬಿಟ್ಟ. ಅವನದ್ದೇ ದಿನಚರಿ, ಅವನದ್ದೇ ಆಹಾರ ವಿಹಾರ, ಅವನದ್ದೇ ಕನಸಿನಲೋಕ. ಅಂತರಜಾಲದ ಅಷ್ಟೂ ಸಾಧ್ಯತೆಗಳನ್ನು ಬಳಸಿಕೊಂಡು ಮುಂದಿನ ವರ್ಷಕ್ಕೆ ಸಿದ್ಧವಾಗುತ್ತಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಮರ್ಚೆಂಟ್ ನೇವಿಯಲ್ಲಿದ್ದ ಅನುಭವಸ್ಥರ ಸಂಪರ್ಕ ಮಾಡಿಕೊಂಡು ಅವರಿಂದ ಮಾರ್ಗದರ್ಶನ ಪಡೆದ. ಮಾಕ್ ಟೆಸ್ಟ್, ಮಾಕ್ ಇಂಟರ್ವ್ಯೂಗಳಲ್ಲಿ ಭಾಗವಹಿಸಿದ. ನೋಟ್ಸ್, ಪ್ರಶ್ನೋತ್ತರಗಳನ್ನು ಬರೆಯುತ್ತಾ ನೂರಾರು ಪುಟ ಮುಗಿಸಿದ. 

ನೋಡುತ್ತಲೇ ಪುಣೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ತಾನು ಬಯಸಿದ ಕೋರ್ಸಿಗೆ ಆಯ್ಕೆಯಾದ. ಕೋವಿಡ್ ಆತಂಕದಿಂದ ಜಗತ್ತು ನಿಧಾನಕ್ಕೆ ಹೊರಬರುವ ಹೊತ್ತಿಗೆ ಅವನ ಹೊಸ ಪಯಣ ಆರಂಭವಾಯಿತು. ಒಂದು ವರ್ಷದ ಥಿಯರಿ ತರಗತಿಗಳನ್ನು ಮುಗಿಸಿ ಪ್ರಾಯೋಗಿಕ ತರಬೇತಿಗಾಗಿ ಸಿಂಗಾಪುರದಿಂದ ಹಡಗನ್ನೇರಿದ. ಹತ್ತಾರು ದೇಶಗಳ ಕಡಲಕಿನಾರೆಗಳನ್ನು ಮುಟ್ಟಿ, ತನ್ನ ಮೊದಲ ವರ್ಷದ ಸಮುದ್ರಯಾನ ಮುಗಿಸಿ ಮೊನ್ನೆಮೊನ್ನೆ ವಾಪಸಾದ. ತಾನು ಇಷ್ಟಪಟ್ಟದ್ದನ್ನು ಸಾಧಿಸಿದ ತೃಪ್ತಿ ಅವನ ಮುಖದಲ್ಲಿ. ಮಗನ ಬಗ್ಗೆ ಹೆಮ್ಮೆ ಅಪ್ಪ-ಅಮ್ಮನ ಮುಖದಲ್ಲಿ.

ಇದು ಕನ್ನಡದ ಹುಡುಗನೊಬ್ಬನ ಕಥೆ. ಅತ್ತಿತ್ತ ಕಣ್ಣಾಡಿಸಿದರೆ ಇಂತಹ ನೂರೆಂಟು ಕಥೆಗಳು ನಮಗೆ ಸಿಗಬಹುದು- ಕೋವಿಡ್ ಮಹಾಮಾರಿಯಿಂದ ಜಗತ್ತೇ ಕಂಗೆಟ್ಟಿರುವಾಗ, ಅದು ತಂದಿಟ್ಟ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡವರ ಕಥೆಗಳು.

ಜೀವನದಲ್ಲಿ ಎದುರಾಗುವ ಬಹುತೇಕ ಕಷ್ಟಗಳು, ಸವಾಲುಗಳು ವಾಸ್ತವವಾಗಿ ಕಷ್ಟಗಳೇ ಆಗಿರುವುದಿಲ್ಲ. ನಿಜವಾಗಿಯೂ ಅವು ನಮ್ಮೆದುರಿನ ದೊಡ್ಡ ಅವಕಾಶಗಳಾಗಿರುತ್ತವೆ. ಇದನ್ನು ಅರ್ಥ ಮಾಡಿಕೊಂಡವರು ಯಶಸ್ಸು ಪಡೆಯುತ್ತಾರೆ, ಅರ್ಥ ಮಾಡಿಕೊಳ್ಳಲು ವಿಫಲರಾದವರು ಜೀವನದಲ್ಲೂ ವೈಫಲ್ಯ ಕಾಣುತ್ತಾರೆ. ಇನ್ನೇನು ಪ್ರವಾಹದಲ್ಲಿ ಮುಳುಗಿಯೇ ಹೋಗುತ್ತೇನೆ ಎಂದುಕೊಂಡವನಿಗೆ ಕೈಗೆ ಸಿಗುವ ಹುಲ್ಲುಕಡ್ಡಿಯೂ ಆಸರೆಯಾಗುತ್ತದಂತೆ. ಹುಲ್ಲುಕಡ್ಡಿಯಲ್ಲಿ ಆತ ತನ್ನ ಪುನರ್ಜನ್ಮದ ಶಕ್ತಿಯನ್ನು ಕಂಡುಕೊಳ್ಳುವುದು ಮುಖ್ಯ ಅಷ್ಟೇ. 

ಅಡೆತಡೆಗಳು ಇಲ್ಲದಾಗ ಬದುಕು ನೀರಸವೆನಿಸುತ್ತದೆ. ನಿಂತ ನೀರು ಮಾತ್ರ ಉಬ್ಬರವಿಳಿತವಿಲ್ಲದೆ ಇರಬಲ್ಲುದು. ಬದುಕು ಹರಿಯುವ ನದಿಯೆಂದು ನಾವು ಒಪ್ಪಿಕೊಳ್ಳುವುದಾದರೆ ಅಲ್ಲಲ್ಲಿ ಕಲ್ಲುಬಂಡೆಗಳು, ಜಲಪಾತಗಳು, ಕೊರಕಲುಗಳು ಇದ್ದೇ ಇರುತ್ತವೆ. ನೀರು ನಿಂತಲ್ಲೇ ಇದ್ದರೆ ಪಾಚಿ ಕಟ್ಟಿಕೊಂಡು ದುರ್ವಾಸನೆ ಬೀರುತ್ತದೆ. ಅದು ಹರಿಯಲೇಬೇಕು- ಬದುಕಿನ ಥರ. ‘ಸವಾಲುಗಳು ಬದುಕನ್ನು ಆಸಕ್ತಿದಾಯಕವನ್ನಾಗಿಸುತ್ತವೆ. ಅವುಗಳನ್ನು ಮೀರಿದಾಗ ಬದುಕು ಅರ್ಥಪೂರ್ಣವೆನಿಸುತ್ತದೆ’ ಎಂಬ ಮಾತನ್ನು ಇದೇ ಅರ್ಥದಲ್ಲಿ ಹೇಳಿರುವುದು.

ಎಂತೆಂತಹವರೆಲ್ಲ ಆರಾಮ ಜೀವನ ನಡೆಸುತ್ತಿರುತ್ತಾರೆ, ಕಷ್ಟಗಳೆಲ್ಲ ನಮಗೆ ಮಾತ್ರ ಬರುತ್ತಿರುತ್ತವೆ ಎಂದು ಕೊರಗುವವರು ಬಹಳ ಮಂದಿ. ಅವರೆಲ್ಲ ಅರ್ಥ ಮಾಡಿಕೊಳ್ಳಬೇಕಿರುವುದು ಇಷ್ಟೇ: ಕಹಿಯಿಲ್ಲದೆ ಹೋದರೆ ಸಿಹಿ ಯಾವುದೆಂದು ತಿಳಿಯುವುದಿಲ್ಲ, ಕತ್ತಲೆಯೆಂಬುದು ಇಲ್ಲದೆ ಹೋದರೆ ಬೆಳಕಿನ ಮಹಿಮೆ ತಿಳಿಯುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲೂ ನಮ್ಮೆದುರಿನ ಸವಾಲುಗಳ ಅಂತರ್ಯದಲ್ಲಿ ಜಗತ್ತನ್ನು ಬೆರಗುಗೊಳಿಸಬಲ್ಲ ಹೊಸ ಸಾಧ್ಯತೆಗಳಿರುತ್ತವೆ. ನೋಡುವ ಕಣ್ಣುಗಳು ನಮ್ಮದಾಗಿರಬೇಕು ಅಷ್ಟೇ. ಅಡುಗೆ ಮನೆಯಲ್ಲಿ ಒಂದು ಹಿಡಿ ತರಕಾರಿ ಇಲ್ಲದಾಗಲೂ ರುಚಿಕಟ್ಟಾದ ಅಡುಗೆ ಮಾಡಿ ಉಣಬಡಿಸುತ್ತಾಳೆ ಅಮ್ಮ. ಅಂತಹದೊಂದು ಮನಸ್ಸು, ಸಾಮರ್ಥ್ಯ ಅಮ್ಮನಿಗೆ ಇರುತ್ತದೆ. ಇದ್ದುದರಲ್ಲಿ ನಳಪಾಕ ಮಾಡುತ್ತಾಳೆ ಅವಳು. ಬದುಕಿನ ಇತಿಮಿತಿಗಳ ಕಥೆಯೂ ಇದೇ. ಸಾಧ್ಯವೇ ಇಲ್ಲ ಎಂಬ ಸನ್ನಿವೇಶದಲ್ಲೂ ಏನಾದರೊಂದು ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಬಳಸಿಕೊಳ್ಳುವುದು ನಮ್ಮ ಧೋರಣೆಯನ್ನು ಅವಲಂಬಿಸಿದೆ ಅಷ್ಟೇ. 

ಹಿರಿಯರು ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ- ‘ಜೀವನದಲ್ಲಿ ಕಷ್ಟಗಳು ಬರುವುದು ನಮ್ಮನ್ನು ನಾಶ ಮಾಡುವುದಕ್ಕಲ್ಲ; ನಮ್ಮ ಅಂತಃಸತ್ವವನ್ನು ನಮಗೆ ಪರಿಚಯಿಸಿಕೊಡುವುದಕ್ಕೆ’. ನಾವು ಏನು ಎಂದು ನಮಗೆ ಅರ್ಥವಾಗುವುದು ಸವಾಲುಗಳು ಎದುರಾದಾಗಲೇ. ತುಪ್ಪವಾಗಿ ಪರಿಮಳ ಬೀರುವುದಕ್ಕೆ ಬೆಣ್ಣೆಮುದ್ದೆಗೂ ಬಿಸಿ ಬೇಕೇಬೇಕು. ಸದಾ ತಣ್ಣಗೇ ಇರುತ್ತೇನೆಂದರೆ ಸುಮ್ಮನೇ ಮಜ್ಜಿಗೆಯ ಮೇಲೆ ತೇಲುತ್ತಾ ಕಾಲಯಾಪನೆ ಮಾಡಬೇಕಷ್ಟೆ. ಅನಿವಾರ್ಯತೆಯೇ ಅನ್ವೇಷಣೆಯ ತಾಯಿ ಎಂಬ ನಾಣ್ಣುಡಿಯಿದೆ. ಅನಿವಾರ್ಯಗಳು ಎದುರಾದಾಗ ಹೊಸ ಹಾದಿಗಳು ಗೋಚರಿಸುತ್ತವೆ. ಸವಾಲುಗಳು ಎದುರಾದಾಗ ಬುದ್ಧಿ ಚುರುಕಾಗುತ್ತದೆ, ಮನಸ್ಸು ಗಟ್ಟಿಯಾಗುತ್ತದೆ, ಕ್ರಿಯಾಶೀಲತೆ ತೆರೆದುಕೊಳ್ಳುತ್ತದೆ. ಪರಿಹಾರದ ದಾರಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಅನಿವಾರ್ಯಗಳೇ ಇಲ್ಲದಾಗ ಮನಸ್ಸು ಜಡವಾಗುತ್ತದೆ, ಬುದ್ಧಿಗೆ ಮಂಕು ಕವಿಯುತ್ತದೆ. ಸೋಮಾರಿ ಮನಸ್ಸು ದೆವ್ವಗಳ ಆಡುಂಬೊಲ. ಏನೂ ಕೆಲಸವಿಲ್ಲದ ಮನಸ್ಸಿಗೆ ಕುಚೇಷ್ಟೆ, ದುರ್ವ್ಯಸನಗಳೇ ಆಕರ್ಷಕ, ರುಚಿಕರ ಎನಿಸುತ್ತವೆ. ಅವು ಚಟಗಳಾಗಿ ಬದಲಾಗುತ್ತವೆ. ಮನುಷ್ಯ ಬದುಕಿದ್ದಾಗಲೇ ಶವವಾಗುವುದಕ್ಕೆ ಇವು ಧಾರಾಳ ಸಾಕು.

ನಡೆಯುವ ಹಾದಿಯಲ್ಲಿ ವಾಸ್ತವವಾಗಿ ನಮಗೆ ಅಡೆತಡೆ ಗೋಚರಿಸುವುದು ತಲುಪಬೇಕಾದ ಗುರಿಯ ಬಗ್ಗೆ ಗೊಂದಲವಿದ್ದಾಗ ಮಾತ್ರ. ಉಳಿದೆಲ್ಲ ದ್ರೋಣಶಿಷ್ಯರಿಗೆ ಮರ, ರೆಂಬೆಕೊಂಬೆ, ಎಲೆ, ಬಳ್ಳಿ, ಹೂವು, ಹಕ್ಕಿ ಕಾಣಿಸಿದಾಗ ಅರ್ಜುನನೊಬ್ಬನಿಗೆ ಹಕ್ಕಿಯ ಕಣ್ಣು ಕಾಣಿಸಿತಲ್ಲ, ಅಂತಹದೇ ಸನ್ನಿವೇಶ ಇದು. ಗಮ್ಯಸ್ಥಾನದ ಬಗ್ಗೆ ಸ್ಪಷ್ಟತೆಯಿದ್ದಾಗ, ಉಳಿದವೆಲ್ಲ ನಗಣ್ಯ ಎನಿಸುತ್ತದೆ. ಗುರಿಯ ಕುರಿತೇ ಅನಾಸಕ್ತಿಯಿದ್ದಾಗ ಹತ್ತಾರು ನೆಪಗಳು ತಾವಾಗಿಯೇ ಎದ್ದುಬಂದು ಕೈಕಾಲಿಗೆ ತೊಡರಿಕೊಳ್ಳುತ್ತವೆ.

ಅನೇಕ ಬಾರಿ ನಮಗೆ ಕಷ್ಟಗಳು ಎದುರಾಗುವುದು ನಾವು ತಪ್ಪು ಮಾಡುತ್ತಿದ್ದೇವೆ ಎಂಬ ಕಾರಣಕ್ಕಲ್ಲ, ಸರಿಯಾದುದನ್ನು ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ. ಸವಾಲುಗಳು ಎದುರಾದಾಗ ನಮ್ಮ ಹಾದಿ ಸರಿಯಿದೆ ಎಂದು ಭಾವಿಸಿಕೊಳ್ಳುವುದೇ ಸೂಕ್ತ. ನಮ್ಮತ್ತ ಎಸೆದ ಕಲ್ಲುಗಳನ್ನೇ ಆರಿಸಿಕೊಂಡು ಭವಿಷ್ಯದ ಸೌಧ ಕಟ್ಟಿಕೊಳ್ಳುವ ಛಾತಿ, ಆತ್ಮವಿಶ್ವಾಸ ನಮ್ಮದಿರಬೇಕು ಅಷ್ಟೇ. ಇಂತಹ ಅನುಭವಗಳಿರುವ ಕಾರಣಕ್ಕೇ ಹಿರಿಯರ ಮಾತುಗಳನ್ನು ದಾರಿದೀಪ ಎಂದು ನಾವು ತಿಳಿಯಬೇಕಿರುವುದು- “ಬದುಕೇ ಒಂದು ಸವಾಲು, ಏಕೆಂದರೆ ಸವಾಲುಗಳಿಂದ ಮಾತ್ರ ನಾವು ಬೆಳೆಯುವುದು ಸಾಧ್ಯ.” 

- ಸಿಬಂತಿ ಪದ್ಮನಾಭ ಕೆ. ವಿ.