ಮಂಗಳವಾರ, ನವೆಂಬರ್ 6, 2012

ನಾಲ್ಕನೆಯ ಸ್ತಂಭದ ಮುಂದೆ ನಾಲ್ಕು ಪ್ರಶ್ನೆಗಳು

ಮಾಧ್ಯಮಶೋಧ-28, ಹೊಸದಿಗಂತ, 25 ಅಕ್ಟೋಬರ್ 2012

ಕೃಷ್ಣಪ್ರಸಾದ್
"ಭಾರತದಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆ ಇಂದು ಅತ್ಯಂತ ಕನಿಷ್ಠ ಮಟ್ಟವನ್ನು ತಲುಪಿದೆ. Credibility of Indian media is at the lowest." ಹೀಗೆಂದು ಯಾರೋ ಒಬ್ಬ ಅನಾಮಧೇಯ ಹೇಳಿರುತ್ತಿದ್ದರೆ ಇದು ಇನ್ನೊಂದು ಕ್ಲೀಷೆ ಎಂದು ಭಾವಿಸಿ ಸುಮ್ಮನಿರಬಹುದಿತ್ತು. ಈ ಅರ್ಥದ ಹೇಳಿಕೆಗಳನ್ನು ನಾವು ಆಗಿಂದಾಗ್ಗೆ ಕೇಳುತ್ತಲೇ ಇದ್ದೇವೆ. ಮಾಧ್ಯಮ ವಿಶ್ಲೇಷಕರಿಂದ ತೊಡಗಿ ಸಾಮಾನ್ಯ ಓದುಗರು/ನೋಡುಗರವರೆಗೆ ಎಲ್ಲರಿಗೂ ನಮ್ಮ ಅನೇಕ ಮಾಧ್ಯಮಗಳ ವಿಶ್ವಾಸಾರ್ಹತೆಯ ಕಥೆ ಗೊತ್ತಿದೆ. ಆದರೆ ಮೇಲಿನ ಹೇಳಿಕೆ ಬಂದಿರುವುದು ಒಬ್ಬ ಸಾಮಾನ್ಯ ಓದುಗನಿಂದ ಅಲ್ಲ; ಒಬ್ಬ ಪ್ರತಿಭಾವಂತ ಪತ್ರಕರ್ತನಿಂದ. ಅವರು ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಒಂದು ಎಂದು ಗುರುತಿಸಲಾಗಿರುವ 'ಔಟ್‌ಲುಕ್’ನ ಸಂಪಾದಕ ಕೃಷ್ಣಪ್ರಸಾದ್ ಅಥವಾ ಕೆ.ಪಿ.

ಕೃಷ್ಣಪ್ರಸಾದ್ ಈ ಮಾತನ್ನಾಡಿದ್ದು ಮೊನ್ನೆ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ೬೫ನೇ ಮಹಾಧಿವೇಶನದಲ್ಲಿ - ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 2000 ಪತ್ರಕರ್ತರ ಸಮ್ಮುಖದಲ್ಲಿ. ಬಹುಶಃ ಈ ಮಾತನ್ನು ಕೇಳಿದ ಯಾರಿಗೂ ಅಂತಹ ಆಶ್ಚರ್ಯವೇನೂ ಆಗಿರಲಿಕ್ಕಿಲ್ಲ. ಏಕೆಂದರೆ ಈಗಾಗಲೇ ಹೇಳಿರುವಂತೆ ಇದೊಂದು ಹೊಸ ಉದ್ಗಾರವೇನೂ ಅಲ್ಲ. ಆದರೆ ಒಂದು ಮಾತನ್ನು ಯಾರು ಎಲ್ಲಿ ಹೇಳಿದರೆಂಬುದು ತುಂಬ ಮುಖ್ಯವಾಗುತ್ತದೆ ಮತ್ತು ಅದು ಗಂಭೀರ ಚಿಂತನೆಯೊಂದಕ್ಕೆ ಪ್ರೇರಣೆಯಾಗುತ್ತದೆ.

ಮ್ಯಾಚ್ ಫಿಕ್ಸಿಂಗ್, ನೀರಾ ರಾಡಿಯಾ ಟೇಪ್ ಹಗರಣ, ಬಹುಕೋಟಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣ ಮುಂತಾದ ಕುಪ್ರಸಿದ್ಧ ಹಗರಣಗಳನ್ನು ಪ್ರಜಾಪ್ರಭುಗಳೆದುರು ಬಯಲುಮಾಡಿದ್ದ 'ಔಟ್‌ಲುಕ್’ನ ಕೆ.ಪಿ. ಪತ್ರಕರ್ತರ ಸಮ್ಮೇಳನದ ವೇದಿಕೆಯ ಮೂಲಕ ಹೇಳಿದ ನಾಲ್ಕು ವಿಚಾರಗಳು ಇಡೀ ಭಾರತೀಯ ಮಾಧ್ಯಮರಂಗದ ಆತ್ಮಾವಲೋಕನದ ದಿಕ್ಕುಗಳಾಗಬೇಕಿರುವುದು ಸುಸ್ಪಷ್ಟ.

ಕೃಷ್ಣಪ್ರಸಾದ್ ಬೊಟ್ಟುಮಾಡಿರುವ ನಾಲ್ಕು ಅಂಶಗಳಲ್ಲಿ ಮೊದಲನೆಯದು ಮಾಧ್ಯಮಗಳ ಮಾಲೀಕತ್ವದ ವಿಚಾರ. ನಮ್ಮ ಮಾಧ್ಯಮರಂಗದ ಮಾಲೀಕರುಗಳ ಕೈಯಲ್ಲಿ ಮಾಧ್ಯಮಗಳಾಗಲೀ, ಅವುಗಳ ಉದ್ಯೋಗಿಗಳಾಗಲೀ, ಸಾಮಾನ್ಯ ಓದುಗರು/ನೋಡುಗರಾಗಲೀ ಸುರಕ್ಷಿತವಾಗಿದ್ದಾರೆಯೇ? Cross-media ownership ಹಾಗೂ ಹೆಚ್ಚುತ್ತಿರುವ ಏಕಸ್ವಾಮ್ಯತೆಯ ಪ್ರವೃತ್ತಿಗಳು ಪ್ರಜಾಪ್ರಭುತ್ವದ ಮೂಲನಂಬಿಕೆಗಳನ್ನು ಛಿದ್ರಗೊಳಿಸದೆ ಬಿಟ್ಟಾವೆಯೇ? ಎಂಬುದು.

ಎರಡನೆಯದು, ಮಾಧ್ಯಮ ಶಿಕ್ಷಣ. ಟಿವಿ ಚಾನೆಲ್‌ಗಳವರು ಇಂದು ತಮ್ಮ ಯುವಪತ್ರಕರ್ತರಲ್ಲಿ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಬಿತ್ತುವುದಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಯೇ? ತಮ್ಮ ಸಂಸ್ಥೆಗೆ ಉತ್ತಮ ಗುಣಮಟ್ಟದ ಪತ್ರಕರ್ತರನ್ನು ಪಡೆಯುವುದಕ್ಕೆ ಅವರು ಸಾಕಷ್ಟು ಬಂಡವಾಳ ಹೂಡುತ್ತಿದ್ದಾರೆಯೇ? ಟಿವಿ ಚಾನೆಲ್‌ಗಳವರು ಮಾಧ್ಯಮಗಳಿಗಾಗಿ ಒಳ್ಳೆಯ ಮಾನವ ಸಂಪನ್ಮೂಲವನ್ನು ರೂಪಿಸುವುದಕ್ಕಾಗಿ ತಮ್ಮ ಸುತ್ತಲಿನ ಶಿಕ್ಷಣ ಸಂಸ್ಥೆಗಳೊಂದಿಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿದ್ದಾರೆಯೇ? ಇದು ಕೆ.ಪಿ. ಪ್ರಶ್ನೆ.

ಮೂರನೆಯದು, ವಿಶ್ವಾಸಾರ್ಹತೆ. ಇದನ್ನೇ ಈ ಬರೆಹದ ಆರಂಭದಲ್ಲಿ ಪ್ರಸ್ತಾಪಿಸಿದ್ದು. ಭಾರತೀಯ ಮಾಧ್ಯಮರಂಗದಲ್ಲಿ ವಿಶ್ವಾಸಾರ್ಹತೆಯೆಂಬುದು ಕನಿಷ್ಠ ಮಟ್ಟವನ್ನು ತಲುಪಿದೆ. ವಿಶ್ವಾಸಾರ್ಹತೆಯ ವಿಷಯಕ್ಕೆ ಬಂದಾಗ ಎರಡು ಹಂತದಲ್ಲಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ: ಒಂದು ವೈಯುಕ್ತಿಕ ಮಟ್ಟದಲ್ಲಿ ಅಂದರೆ ಪತ್ರಕರ್ತರ ಮಟ್ಟದಲ್ಲಿ; ಎರಡು ಮಾಧ್ಯಮ ಸಂಸ್ಥೆಗಳ ಮಟ್ಟದಲ್ಲಿ. ಪತ್ರಕರ್ತ ಹಾಗೂ ಆತ ಕೆಲಸ ಮಾಡುವ ಸಂಸ್ಥೆ ಎರಡನ್ನೂ ನಂಬದ ಸ್ಥಿತಿಗೆ ಜನ ಬಂದಿದ್ದಾರೆ ಎಂಬುದು ಕೆ.ಪಿ. ಕಳವಳ.

ನಾಲ್ಕನೆಯದು, ಕಂಟೆಂಟ್ ಅಥವಾ ಮಾಧ್ಯಮಗಳ ಹೂರಣ. ಮಾಧ್ಯಮಗಳು ಸುದ್ದಿ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅನುಸರಿಸುವ ಮಾನದಂಡ ಯಾವುದು? ವಸ್ತುನಿಷ್ಠವಾಗಿ ಸುದ್ದಿಮೌಲ್ಯಗಳ ಆಧಾರದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿವೆಯೇ ಅಥವಾ ವೈಯುಕ್ತಿಕ ಪೂರ್ವಾಗ್ರಹಗಳು ಕೆಲಸ ಮಾಡುತ್ತಿವೆಯೇ? ಪತ್ರಿಕೆಗಳು ಹಾಗೂ ಚಾನೆಲ್‌ಗಳ ಹೂರಣವನ್ನು ಜನರು ನಿರ್ಧರಿಸಬೇಕೋ ಅಥವಾ ಜನರಿಗೆ ಏನು ಬೇಕೆಂಬುದನ್ನು ಮಾಧ್ಯಮಗಳು ನಿರ್ಧರಿಸಬೇಕೋ?

ಒಟ್ಟಿನಲ್ಲಿ ಇಡಿಯ ಮಾಧ್ಯಮರಂಗ ಇಂದು ಎದುರಿಸುತ್ತಿರುವ ಅಷ್ಟೂ ಸವಾಲುಗಳನ್ನು ಕೃಷ್ಣಪ್ರಸಾದ್ ನಾಲ್ಕೇ ಅಂಶಗಳಲ್ಲಿ ಸಾಂಧ್ರೀಕರಿಸಿದ್ದಾರೆ. ಅವರು ಎತ್ತಿರುವ ಒಂದೊಂದು ಪ್ರಶ್ನೆಯೂ ಒಂದೊಂದು ದೊಡ್ಡ ಸಮ್ಮೇಳನಗಳ ವಿಷಯವಾಗಬಹುದು.
ಭಾರತದಲ್ಲಿರುವ ಒಟ್ಟು ಪತ್ರಿಕೆ, ಚಾನೆಲ್, ರೇಡಿಯೋ ಇತ್ಯಾದಿಗಳ ಸಂಖ್ಯೆ ಈ ದೇಶದ ಮಾಧ್ಯಮರಂಗದ ಬಹುತ್ವ ಹಾಗೂ ವೈವಿಧ್ಯತೆಯನ್ನು ತೋರಿಸುತ್ತಾದರೂ ಈ ಕ್ಷೇತ್ರವನ್ನು ಬರೀ ನೂರರಷ್ಟು ಸಂಖ್ಯೆಯ ದೊಡ್ಡ ಮಾಧ್ಯಮ ಕುಳಗಳು ಆಳುತ್ತಿವೆ ಎಂಬುದು ವಿಚಿತ್ರವಾದರೂ ಸತ್ಯ: ’ಹಳ್ಳಿಗಳ ಮತ್ತು ಬಡವರ ದೇಶ’ವಾದ ಭಾರತದಲ್ಲಿ ವಿಶ್ವದ ಟಾಪ್-10 ಬಿಲಿಯನೇರ್‌ಗಳಿದ್ದ ಹಾಗೆ! ನಮ್ಮಲ್ಲಿ ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, ಅದಕ್ಕಿಂತಲೂ ಹೆಚ್ಚು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು ಇವೆಲ್ಲ ಇದ್ದರೂ ನಾವು ಏನನ್ನು ಓದಬೇಕು, ಏನನ್ನು ನೋಡಬೇಕು, ಏನನ್ನು ಕೇಳಬೇಕು ಮತ್ತು ಯಾವುದರಿಂದ ಪ್ರಭಾವಿತವಾಗಬೇಕು ಎಂದು ನಿರ್ಧರಿಸುವವರು ಬೆರಳೆಣಿಕೆಯ ಮಂದಿ. ನಾವೆಲ್ಲ cross-media ownerಗಳ ಹಾಗೂ monopolyಗಳ ಮನದಿಚ್ಛೆಯಂತೆ ಬದುಕಬೇಕಾದ ಕಾಲದಲ್ಲಿದ್ದೇವೆ. ನಮಗೆ ಗೊತ್ತಿಲ್ಲದಂತೆಯೇ ನಾವೊಂದು ಹೊಸಬಗೆಯ ಗುಲಾಮಗಿರಿಯತ್ತ ಸಾಗುತ್ತಿದ್ದೇವೆಯೇ?

ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಒಂದು ಉದಾಹರಣೆ ಕೊಡುತ್ತಾರೆ: ದೆಹಲಿ ಮಹಾನಗರದಲ್ಲಿ ೧೬ ಇಂಗ್ಲಿಷ್ ದಿನಪತ್ರಿಕೆಗಳು ಕಾರ್ಯಾಚರಿಸುತ್ತಿವೆ. ಇವುಗಳ ಪೈಕಿ ಮೊದಲ ಮೂರು ಪತ್ರಿಕೆಗಳಾದ 'ಟೈಮ್ಸ್ ಆಫ್ ಇಂಡಿಯಾ’, 'ಹಿಂದೂಸ್ತಾನ್ ಟೈಮ್ಸ್’ ಹಾಗೂ 'ಇಕನಾಮಿಕ್ ಟೈಮ್ಸ್’ ಪತ್ರಿಕೆಗಳು ಎಲ್ಲ ಪತ್ರಿಕೆಗಳ ಒಟ್ಟು ಮಾರುಕಟ್ಟೆಯ ನಾಲ್ಕನೇ ಮೂರು ಪಾಲನ್ನು ಹೊಂದಿವೆಯಂತೆ. ಅಂದರೆ, ಇಡೀ ದೆಹಲಿಯ ಜನತೆ ಏನು ಓದಬೇಕೆಂಬುದನ್ನು ಬಹುತೇಕ ಈ ಮೂರು ಪತ್ರಿಕೆಗಳೇ ನಿರ್ಧರಿಸುವ ಸ್ಥಾನದಲ್ಲಿವೆಂದಂತಾಯ್ತು. ಅದರಲ್ಲೂ ಮೊದಲ ಮತ್ತು ಮೂರನೇ ಪತ್ರಿಕೆಗೆ ಒಬ್ಬನೇ ಮಾಲೀಕ.
ದೆಹಲಿ ಒಂದು ನಿದರ್ಶನ ಅಷ್ಟೆ. ಭಾರತದ ಬಹುತೇಕ ರಾಜ್ಯಗಳ ಕಥೆಯೂ ಇದೇ. ಕೆಲವೇ ಜನ ಮಾಲೀಕರು, ಶ್ರೀಮಂತ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳು ನಮ್ಮ ಮಾಧ್ಯಮಗಳ ಕಂಟೆಂಟ್, ದೃಷ್ಟಿಕೋನ ಹಾಗೂ ಸಂಪಾದಕೀಯ ನೀತಿಯನ್ನು ನಿರ್ಧರಿಸುವ ಪರಿಸ್ಥಿತಿ ಇದೆ. ಸರ್ಕಾರವೇನಾದರೂ ಈ ಪ್ರವೃತ್ತಿಯನ್ನು ನಿಯಂತ್ರಿಸುವ ಪ್ರಸ್ತಾಪ ಮುಂದಿಟ್ಟರೆ ಅದನ್ನು ಒಕ್ಕೊರಲಿನಿಂದ ವಿರೋಧಿಸುವುದಕ್ಕೆ ಈ ಎಲ್ಲ ಕುಳಗಳೂ ತಯಾರಾಗಿಯೇ ಇರುತ್ತವೆ. ಬರೀ ಮಾಧ್ಯಮ ಮಾಲೀಕರುಗಳಷ್ಟೇ ಅಲ್ಲ, ರಾಜಕಾರಣಿಗಳೂ ಇದನ್ನು ವಿರೋಧಿಸುತ್ತಾರೆ. ಏಕೆಂದರೆ ರಾಜಕೀಯ ಪಕ್ಷಗಳಿಗೂ ದೊಡ್ಡದೊಡ್ಡ ಮಾಧ್ಯಮ ಮಹಾಶಯರುಗಳ ಕೃಪಾಕಟಾಕ್ಷದ ಅನಿವಾರ್ಯತೆ ಇದ್ದೇ ಇದೆ. ತಾವು ಬೆಳೆಯಬೇಕಾದರೆ ಅವುಗಳಿಗೆ ಮಾಧ್ಯಮಗಳ ಬೆಂಬಲ ಬೇಕೇಬೇಕಲ್ಲ? ಅದರಲ್ಲೂ ಎರಡು ಮೂರು ಪತ್ರಿಕೆಗಳು, ಚಾನೆಲ್‌ಗಳು 'ಒಪೀನಿಯನ್ ಲೀಡರ್’ಗಳಾಗಿಬಿಟ್ಟರೆ ರಾಜಕೀಯದವರ ಕೆಲಸ ಇನ್ನೂ ಸುಲಭವಾಯಿತು.

ಇದನ್ನು ವಿರೋಧಿಸುವುದಕ್ಕೆ ಯಾವ ಮಾಧ್ಯಮಗಳಿಗೂ ನೈತಿಕ ಶಕ್ತಿಯಿಲ್ಲದಂತಹ ಒಂದು ಅಸಹಾಯಕ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಡೆ ಪೇಯ್ಡ್ ನ್ಯೂಸ್, ನ್ಯೂಸ್ ಪ್ಯಾಕೇಜ್, ಮೀಡಿಯಾನೆಟ್‌ನಂತಹ ಮಾಧ್ಯಮ ಹಾದರ ಎಗ್ಗಿಲ್ಲದಂತೆ ನಡೆಯುತ್ತಲೇ ಇದೆ, ಇನ್ನೊಂದೆಡೆ ರಾಜಕಾರಣಿಗಳು ಮತ್ತು ಉದ್ಯಮಿಗಳು ಮಾಧ್ಯಮಗಳ ಆಡಳಿತದಲ್ಲಿ ಪಾಲುಪಡೆದುಕೊಳ್ಳುವುದೂ ನಿರಂತರವಾಗಿ ಸಾಗಿದೆ. ಮಾಧ್ಯಮಗಳಲ್ಲಿ ಉದ್ಯಮಿಗಳು-ರಾಜಕಾರಣಿಗಳು ಯಾರು, ಉದ್ಯಮಿ-ರಾಜಕಾರಣಿಗಳಲ್ಲಿ ಮಾಧ್ಯಮವರ್ಗಕ್ಕೆ ಸೇರಿದವರ್ಯಾರು ಎಂದು ತಿಳಿದುಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಈ ಸಖ್ಯ ಒಂದಕ್ಕೊಂದು ಬೆಸೆದುಬಿಟ್ಟಿದೆ.

ಬಿರ್ಲಾ ಕುಟುಂಬದ ಶೋಭನಾ ಭಾರ್ತಿಯಾ ಈಗ ’ಹಿಂದೂಸ್ತಾನ್ ಟೈಮ್ಸ್’ ಸಮೂಹದ ಅಧ್ಯಕ್ಷೆ. ’ಲೋಕಮತ್’ ಸಮೂಹವನ್ನು ನಡೆಸುತ್ತಿರುವುದು ರಾಜಕಾರಣ ಹಾಗೂ ಉದ್ಯಮದಲ್ಲಿರುವ ದರ್ದಾ ಕುಟುಂಬ. ’ಸನ್ ನೆಟ್‌ವರ್ಕ್’ ಮಾರನ್ ಕುಟುಂಬದ ಒಡೆತನದ್ದು. ಜಾಗರಣ್ ಪಬ್ಲಿಕೇಶನ್ಸ್, ಎಚ್‌ಟಿ ಮೀಡಿಯಾ, ದೈನಿಕ್ ಭಾಸ್ಕರ್ ಸಮೂಹ, ಎನ್‌ಡಿಟಿವಿಯಂತಹ ದೊಡ್ಡ ಸಂಸ್ಥೆಗಳ ನಿರ್ದೇಶಕರುಗಳ ಮಂಡಳಿಯಲ್ಲಿ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದೇ ಸಿಂಹಪಾಲು. ಜಗನ್ ಮೋಹನ್ ರೆಡ್ಡಿಯ ’ಸಾಕ್ಷಿ’, ರಾಜೀವ್ ಶುಕ್ಲಾ ಒಡೆತನದ ’ನ್ಯೂಸ್24’, ಜಯಲಲಿತಾ ಒಡೆತನದ ’ಜಯಾ ಟಿವಿ’ ಮತ್ತಿತರ ಚಾನೆಲ್‌ಗಳು, ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಬೇರೆಬೇರೆ ಹೆಸರುಗಳಲ್ಲಿ ಬೇರೆಬೇರೆ ಭಾಷೆಗಳಲ್ಲಿ ನಡೆಸುವ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು... ದೇಶದಾದ್ಯಂತ ಇಂತಹ ಹತ್ತಾರು ನಿದರ್ಶನಗಳಿವೆ. ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಂತೂ ರಾಜಕಾರಣಿಗಳು ಚಾನೆಲ್ ಹಾಗೂ ಪತ್ರಿಕೆ ನಡೆಸುವುದು ಒಂದು ಫ್ಯಾಶನ್ನೇ ಆಗಿಬಿಟ್ಟಿದೆ.

ಈ ಎಲ್ಲ ಉದ್ಯಮ ಹಾಗೂ ರಾಜಕೀಯಾಸಕ್ತಿಗಳ ನಡುವೆ ಮಾಧ್ಯಮಗಳು ಗುಣಮಟ್ಟದ ಉದ್ಯೋಗಿಗಳನ್ನು ಪಡೆಯುವುದಕ್ಕೆ ಸೂಕ್ತ ಬಂಡವಾಳ ಹೂಡುತ್ತಿಲ್ಲ ಎಂಬ ಸಂಗತಿ ವಿಷಾದನೀಯವೇ. ಸಂಪತ್ತು ಸಂಗ್ರಹಣೆಯತ್ತಲೇ ಮನಸ್ಸು ಲೆಕ್ಕಾಚಾರ ಹಾಕತೊಡಗಿದಾಗ ಗುಣಮಟ್ಟ ಕಡೆಗಣಿಸಲ್ಪಡುತ್ತದೆ. ಉತ್ತಮ ವೇತನ ನೀಡಿ ಒಳ್ಳೆಯ ಪತ್ರಕರ್ತರನ್ನು ನೇಮಿಸಿಕೊಳ್ಳುವುದು ಅವರ ಆದ್ಯತೆಯಾಗಿರುವ ಬದಲು ಮೀಡಿಯೋಕರ್‌ಗಳನ್ನು ಬಳಸಿಕೊಂಡು ಅದೇ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೇ ಅವರ ಮಾಧ್ಯಮ ಸೇವೆ ಸೀಮಿತವಾಗುತ್ತದೆ. ಒಳ್ಳೆಯ ಟಿಆರ್‌ಪಿ ಗಳಿಸಿಕೊಳ್ಳುವುದಕ್ಕೆ ಅವರ ಬಳಿ ಅವರದ್ದೇ ಆದ ತಂತ್ರಗಾರಿಕೆಗಳು ಇದ್ದೇಇವೆ.

ಇಷ್ಟೆಲ್ಲ ಆದ ಮೇಲೆ ಇಂತಹ ಮಾಧ್ಯಮಗಳ ವಿಶ್ವಾಸಾರ್ಹತೆ ಅಥವಾ ಹೂರಣದ ಪ್ರಾಮಾಣಿಕತೆ ಬಗ್ಗೆ ಮಾತನಾಡುವುದು ನಿಷ್ಪ್ರಯೋಜಕ. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬ ಗೊಂದಲವನ್ನು ಜನಸಾಮಾನ್ಯರಲ್ಲಿ ಸೃಷ್ಟಿಸುವುದೇ ಬಹುತೇಕ ಮಾಧ್ಯಮಗಳ ಹೆಚ್ಚುಗಾರಿಕೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೋ ಸ್ತಂಭವೆಂದೋ ಕರೆಸಿಕೊಂಡಿರುವ ನಮ್ಮ ಮಾಧ್ಯಮಗಳು ಆ ಅಭಿದಾನವನ್ನು ಉಳಿಸಿಕೊಳ್ಳುವ ಶ್ರೇಷ್ಠತೆಯನ್ನು ಉಳಿಸಿಕೊಂಡಿದ್ದಾವೆಯೇ ಎಂಬುದು ಸದ್ಯದ ಪ್ರಶ್ನೆ. ಆದರೆ ಅದಕ್ಕೆ ಉತ್ತರಿಸುವ ಮೊದಲು ಕೆ.ಪಿ. ಎತ್ತಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

ಬುಧವಾರ, ಅಕ್ಟೋಬರ್ 24, 2012

ಚಿತ್ರಭಾಷಾಕಾವ್ಯದ 'ಸಾಂಗತ್ಯ'ದಲ್ಲಿ...


ಮಾಧ್ಯಮಶೋಧ-27, ಹೊಸದಿಗಂತ, 11 ಅಕ್ಟೋಬರ್ 2012
ಸಾಂಗತ್ಯ ಬ್ಲಾಗ್ ನಲ್ಲೂ ಪ್ರಕಟವಾಗಿದೆ.

ಮನೆತನದ ವೃತ್ತಿ ಗೊಂಬೆಯಾಟಕ್ಕೆ ಮುಕ್ತಾಯ ಹಾಡಿ ಮುಂಬೈ ಸೇರಿ ಸುಖಜೀವನ ನಡೆಸಬೇಕೆಂಬುದು ಮುಗ್ಧ ಯುವಕ ದಾಸುವಿನ ಅಪೇಕ್ಷೆ. ಗೊಂಬೆಗಳೊಂದಿಗೇ ಬದುಕು ಕಟ್ಟಿಕೊಂಡು ಬಂದ ದಾಸುವಿನ ವೃದ್ಧ ತಂದೆ ದಾದುವಿಗೆ ಇದೆಲ್ಲ ಇಷ್ಟವಿಲ್ಲದ ಸಂಗತಿ. ಅಂತೂ ಇಂತೂ ಮಗನ ಆಸೆಗೆ ಅಪ್ಪ ಸೈ ಎನ್ನುತ್ತಾನೆ. ಇಬ್ಬರೂ ತಮ್ಮ ಗೊಂಬೆಗಳೊಂದಿಗೆ ಮಹಾರಾಷ್ಟ್ರದ ಹಳ್ಳಿಯನ್ನು ತೊರೆದು ಮುಂಬೈ ಮಹಾನಗರ ಸೇರುತ್ತಾರೆ.

ದಾಸುವಿನ ಪೇಟೆ ಕನಸು ಕೆಲವೇ ದಿನಗಳಲ್ಲಿ ಹುಸಿಯಾಗುತ್ತದೆ. ತಂದೆಗಾದರೂ ಒಂದುಹೊತ್ತಿನ ಕೂಳು ಒದಗಿಸುವುದು ತನ್ನಿಂದ ಸಾಧ್ಯವಾಗುತ್ತಿಲ್ಲ ಎಂಬುದು ಅರಿವಾದಾಗ ದಾಸು ಪುನಃ ತನ್ನ ಗೊಂಬೆಗಳ ಮೂಟೆ ಬಿಚ್ಚಲೇಬೇಕಾಗುತ್ತದೆ. ಅಲ್ಲಿಂದ ಮತ್ತೆ ಗೊಂಬೆಯಾಟದ ಬದುಕು ಆರಂಭ. ಆದರೆ ನೆಮ್ಮದಿ ಮರುಕೊಳಿಸಿತು ಎಂಬಷ್ಟರಲ್ಲಿ ದಾಸುವಿಗೆ ಅನಿರೀಕ್ಷಿತ ಬರಸಿಡಿಲು. ಅಪಘಾತವೊಂದರಲ್ಲಿ ಅಪ್ಪ ದಾದು ಸಾವಿಗೀಡಾಗುತ್ತಾನೆ. ಈಗ ಒಬ್ಬಂಟಿ ದಾಸುವಿಗೆ ಗೊಂಬೆಗಳೇ ಕುಟುಂಬ, ಅವೇ ಸ್ನೇಹಿತರು, ಅವೇ ಬಂಧುಗಳು, ಅವೇ ಸರ್ವಸ್ವ.

ಈ ನಡುವೆ ದಾಸು ಬಿಡಾರ ಹೂಡಿದ್ದ ಕೊಂಪೆ ಕೋಮುಗಲಭೆಯ ಉರಿಗೆ ಸಿಲುಕಿ ಭಸ್ಮವಾಗುತ್ತದೆ. ತನ್ನ ಅಳಿದುಳಿದ ಗೊಂಬೆಗಳನ್ನು ಆಯ್ದುಕೊಳ್ಳಲು ಬಂದ ದಾಸುವಿಗೆ ದೊರೆತದ್ದು ಮಾತ್ರ ಅವಶೇಷಗಳ ನಡುವೆ ಒಂದು ಪುಟ್ಟ ಹೆಣ್ಣು ಶಿಶು. ಅದರ ಪಾಲಕರನ್ನು ಹುಡುಕುವ ದಾಸುವಿನ ಪ್ರಯತ್ನಗಳೆಲ್ಲ ವಿಫಲವಾದರೆ, ಇನ್ನೊಂದೆಡೆ ಈ ಮಗು ತನ್ನದೇ ಏನೋ ಎಂಬಷ್ಟರ ಮಟ್ಟಿಗೆ ಆತನಿಗೆ ಮಗುವಿನೊಂದಿಗೆ ಭಾವಬಂಧ ಬೆಳೆಯುತ್ತದೆ. ತನ್ನ ಗೊಂಬೆಗಳಲ್ಲೆಲ್ಲ ಅತ್ಯಂತ ಮುದ್ದಾದ ಈ ಮಗುವಿಗೆ ದಾಸು 'ಬಾಹುಲಿ’ (ಗೊಂಬೆ) ಎಂದೇ ಹೆಸರಿಡುತ್ತಾನೆ. ಆದರೆ ಆಕೆ ತನ್ನ ಗೊಂಬೆಗಳಿಗಿಂತ ಏನೇನೂ ಭಿನ್ನವಾಗಿಲ್ಲ ಎಂಬುದು ಅರ್ಥವಾಗಲು ದಾಸುವಿಗೆ ತುಂಬ ಸಮಯ ಹಿಡಿಯುವುದಿಲ್ಲ. ಬಾಹುಲಿಗೆ ಮಾತು ಬರದು, ಕಣ್ಣು ಕಾಣಿಸದು, ಕಿವಿ ಕೇಳಿಸದು. ಆಕೆ ದಾಸುವಿನ ಗೊಂಬೆ ಕುಟುಂಬದೊಳಗೊಂದು ಸಜೀವ ಗೊಂಬೆ.

ಕ್ರೂರ ಸತ್ಯಕ್ಕೆ ಎದೆಬಿರಿದರೂ ಅದರೊಂದಿಗೆ ರಾಜಿಯಾಗದೆ ದಾಸುವಿಗೆ ವಿಧಿಯಿಲ್ಲ. ಮೂರು ಇಂದ್ರಿಯಗಳು ನಿಷ್ಕ್ರಿಯವಾಗಿದ್ದ ಹೆಣ್ಣುಮಗು ಅನಿವಾರ್ಯವಾಗಿ ಮತ್ತೊಂದು ಗೊಂಬೆಯಾಗುತ್ತದೆ. ಏನಿಲ್ಲದಿದ್ದರೂ ತನ್ನ ಕೈಕಾಲಿನ ದಾರಗಳು ಚಲಿಸಿದಾಗ ಅದಕ್ಕೆ ತಕ್ಕಂತೆ ಕುಣಿಯಬೇಕೆಂಬುದು ಆಕೆಗೆ ಗೊತ್ತು. ಸಂತೆಗಳಲ್ಲಿ, ರಸ್ತೆಗಳಲ್ಲಿ, ಗಲ್ಲಿಗಳಲ್ಲಿ, ನಿಲ್ದಾಣಗಳಲ್ಲಿ, ಸಂದಣಿಯಲ್ಲಿ... ಬಾಹುಲಿ ಜನಾಕರ್ಷಣೆಯ ಕೇಂದ್ರ. ಆದರೆ ದಾಸು-ಬಾಹುಲಿಯನ್ನು ಬೆಸೆದ ದಾರಗಳ ಹಿಂದೆ ಯಾರಿಗೂ ಕಾಣದ ಒಂದು ಅಂತರಂಗದ ಭಾಷೆ ಮೊಳೆತು ಅಪ್ಪ-ಮಗಳ ಸಂಬಂಧ ಇನ್ನಿಲ್ಲದಂತೆ ಭದ್ರವಾಗುತ್ತದೆ.

ಇಷ್ಟೆಲ್ಲ ಆಗುವ ಹೊತ್ತಿಗೆ ಈ ಸಂಗತಿ ಮಾಧ್ಯಮದವರ ಕಣ್ಣಿಗೆ ಬೀಳದೆ ಹೋಗುತ್ತದೆಯೇ? ಟಿವಿ ವಾಹಿನಿಯೊಂದಕ್ಕೆ ದಾಸು-ಬಾಹುಲಿ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಆಗುತ್ತಾರೆ. ಒಬ್ಬ ವರದಿಗಾರ್ತಿಗೆ ಇದು ಮಾನವೀಯ ವರದಿಯಾದರೆ, ಮತ್ತೊಬ್ಬನಿಗೆ ಇದು ಟಿಆರ್‌ಪಿ ಹೆಚ್ಚಿಸುವ ಸುಲಭದ ದಾರಿಯಾಗುತ್ತದೆ. ಏನೇ ಇರಲಿ, ಚಾನೆಲ್ ಕಾರ್ಯಕ್ರಮ ಮಗುವಿನ ನಿಜವಾದ ತಂದೆ-ತಾಯಿ ಪತ್ತೆಗೆ ಕಾರಣವಾಗುತ್ತದೆ. ಮಗುವಿನ ಅಂಗವೈಕಲ್ಯವನ್ನು ಒಪ್ಪಿಕೊಳ್ಳಲಾಗದೆ ಅದನ್ನು ತಾಯಿಗೆ ತಿಳಿಯದಂತೆ ಬೀದಿಗೆಸೆದು ಬಂದಿದ್ದ ತಂದೆ ಈಗ ಹೇಗಾದರೂ ಮಾಡಿ ಆ ಮಗುವನ್ನು ಮರಳಿ ಪಡೆಯಬೇಕೆಂದು ಹಪಹಪಿಸುತ್ತಾನೆ. ಮಗು ಹುಟ್ಟುವಾಗಲೇ ಸತ್ತುಹೋಗಿತ್ತು ಎಂದು ಪತ್ನಿ ಬಳಿ ಸುಳ್ಳು ಹೇಳಿದ್ದ ತಂದೆ ಈಗ ಆಕೆಯ ಬಳಿ ಸತ್ಯ ನುಡಿಯುವುದು ಅನಿವಾರ್ಯವಾಗುತ್ತದೆ. ಆದರೆ ಇಷ್ಟರಲ್ಲಿ ದಾಸು-ಬಾಹುಲಿ ಸಂಬಂಧ ಯಾವ ಏಟಿಗೂ ಛಿದ್ರವಾಗದಷ್ಟು ಭದ್ರವಾಗಿಬಿಟ್ಟಿರುತ್ತದೆ.

ಮಗುವನ್ನು ಬೀದಿಗೆಸೆದು ಆಮೇಲೆ ಅಂತರಂಗದ ಎಳೆ ಜಾಗೃತಗೊಂಡು ಮಗು ತನಗೆ ಬೇಕೇಬೇಕೆಂದು ಪಟ್ಟುಹಿಡಿವ ಮಗುವಿನ ನಿಜವಾದ ತಂದೆ ಒಂದು ಕಡೆ. ಅನಾಥಶಿಶುವನ್ನು ಸಾಕಿಸಲಹಿ ಅದು ಸಜೀವ ಬೊಂಬೆಯಷ್ಟೇ ಆಗಿದ್ದರೂ ಅದನ್ನು ತನ್ನ ಮಗುವಾಗಿ ಸ್ವೀಕರಿಸಿ ಅದನ್ನೇ ಸರ್ವಸ್ವವನ್ನಾಗಿಸಿಕೊಂಡ ದಾಸು ಇನ್ನೊಂದು ಕಡೆ. ತನ್ನದಲ್ಲದ ತಪ್ಪಿಗೆ ಮಗುವಿಂದ ದೂರವಾಗಿ ಅದಕ್ಕಾಗಿ ಹಗಲಿರುಳು ಹಂಬಲಿಸುತ್ತಿರುವ, ಇನ್ನೆಂದೂ ತಾಯಿಯಾಗುವ ಅವಕಾಶ ಇಲ್ಲದ ಅಮ್ಮ ಮತ್ತೊಂದು ಕಡೆ. ಇದೆಲ್ಲದಕ್ಕೂ 'ಮೂಕ-ಕಿವುಡು-ಕುರುಡು ಸಾಕ್ಷಿ’ಯಾಗಿ ಕಾಡುವ ಬಾಹುಲಿ ಮಗದೊಂದು ಕಡೆ. ಸರಿ, ಇದೆಲ್ಲದರ ಅಂತ್ಯ ಹೇಗೆ?
ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಹೇಮಾಂಗಣದ ದೃಕ್-ಶ್ರವಣ ಮಂದಿರದ ಒಳಗೆ ಲೈಟ್ ಹತ್ತಿಕೊಳ್ಳುತ್ತದೆ. ಅಷ್ಟೂ ಹೊತ್ತು ಈ ಕಥೆಯನ್ನು ಬೆಳ್ಳಿತೆರೆಯಲ್ಲಿ ವೀಕ್ಷಿಸುತ್ತಿದ್ದ ಪ್ರೇಕ್ಷಕರೆಲ್ಲ ಅಪ್ರಜ್ಞಾಪೂರ್ವಕವಾಗಿ ತೊಟ್ಟಿಕ್ಕುತ್ತಿದ್ದ ಕಣ್ಣೀರು ಒರೆಸಿಕೊಳ್ಳುವುದನ್ನೂ ಮರೆತು ಹಾಗೆಯೇ ಕುಳಿತಿದ್ದಾರೆ.

ಅದು 'ಸಾಂಗತ್ಯ’ ಬಳಗ ಮೊನ್ನೆ ಅಕ್ಟೋಬರ್ 1 ಮತ್ತು 2ರಂದು ಕುಪ್ಪಳಿಯಲ್ಲಿ ಆಯೋಜಿಸಿದ್ದ ಎಂಟನೇ ಚಲನಚಿತ್ರ ಅಧ್ಯಯನ ಶಿಬಿರದ ಮೊದಲನೇ ಸಿನಿಮಾ. ಇದೇ ಏಪ್ರಿಲ್‌ನಲ್ಲಿ ತೆರೆಕಂಡ 'ಖೇಲ್ ಮಂಡಲ’ ಎಂಬ ಮರಾಠಿ ಭಾಷೆಯ ಚಲನಚಿತ್ರ. ಮೇಲ್ನೋಟಕ್ಕೆ ಸಾಮಾನ್ಯ ಎನಿಸಬಲ್ಲ ಒಂದು ಕಥಾಹಂದರಕ್ಕೆ ಭಾವನೆಗಳ ಬಣ್ಣ ತುಂಬಿ ಪ್ರೇಕ್ಷಕನ ಮನಕಲಕುವಂತಹ ಒಂದು ಸಿನಿಮಾ ಮಾಡಿದ ಹೆಗ್ಗಳಿಕೆ ನಿರ್ದೇಶಕ ವಿಜು ಮಾನೆಯವರದ್ದು. ಅನಾಥ ಮಗುವೊಂದಕ್ಕೆ ಬದುಕು ಕೊಟ್ಟ ಬಡವನ ಕಥೆ ಇದೆಂದು ಒಂದೇ ಮಾತಿನಲ್ಲಿ ಹೇಳಿ ಮುಗಿಸಬಹುದಾದರೂ, ಆ ಹೃದಯವಿದ್ರಾವಕ ಕಥನದ ಮೂಲಕ ನಿರ್ದೇಶಕ ಹೇಳುವ ಮಾನವ ಸಂಬಂಧಗಳ ಬೆರಗು, ಮಹಾನಗರಗಳ ಬದುಕಿನ ಸಂಕೀರ್ಣತೆ, ಜಾಗತೀಕರಣದ ಕರಿಛಾಯೆ, ಮಾಧ್ಯಮಗಳ ಧಾವಂತ, ವರ್ತಮಾನದ ವೈರುಧ್ಯಗಳು... ಇವನ್ನೆಲ್ಲ ವಿವರಿಸುವುದಕ್ಕೆ ಒಂದು ಮಾತು ಸಾಲದು. ಆದರೆ 'ಖೇಲ್ ಮಂಡಲ’ದ ವಿಮರ್ಶೆ ಈ ಬರೆಹದ ಉದ್ದೇಶ ಅಲ್ಲ.

'ಖೇಲ್ ಮಂಡಲ’ ಒಂದು ಗಾಢ ನೆನಪಾಗಿ 'ಸಾಂಗತ್ಯ’ದ ಎರಡು ದಿನ ಪೂರ್ತಿ ಶಿಬಿರಾರ್ಥಿಗಳನ್ನು ಬಿಡದೇ ಕಾಡಿತು. ಮುಂದೆ ಸ್ಟೀವನ್ ಸ್ಪೀಲ್‌ಬರ್ಗ್ ಅವರ 'ಡ್ಯುಯೆಲ್’, (ಇಂಗ್ಲಿಷ್-1971) ಸುಶೀಂದ್ರನ್ ಅವರ 'ಅಳಗರ್‌ಸಾಮಿಯಿನ್ ಕುದಿರೈ’ (ತಮಿಳು-2011), ಒಲಿವಿಯರ್ ಅವರ 'ದಿ ಇನ್‌ಟಚಬಲ್ಸ್’ (ಫ್ರೆಂಚ್-2011), ಸ್ಟೀಫನ್ ಚೌ ಅವರ 'ಶಾವೊಲಿನ್ ಸಾಕರ್’ (ಚೈನೀಸ್-2001) ಹೀಗೆ ಆರೇಳು ಚಲನಚಿತ್ರಗಳನ್ನು ನೋಡಿ ಸಿನಿಮಾಸಕ್ತರು ವಿಚಾರ ವಿಮರ್ಶೆ ನಡೆಸಿದರು. ಆದರೆ 'ಖೇಲ್ ಮಂಡಲ’ದಷ್ಟು ಆಳವಾಗಿ ತಟ್ಟಿದ, ಹೆಚ್ಚಿನ ಪ್ರಶಂಸೆ ಹಾಗೂ ವಿಮರ್ಶೆಗೆ ಕಾರಣವಾದ ಚಿತ್ರ ಇನ್ನೊಂದಿರಲಿಲ್ಲವೇನೋ? ಒಂದೊಂದು ದೃಶ್ಯವೂ ಒಂದೊಂದು ಕಾವ್ಯದಂತೆ, ಒಂದೊಂದು ಮಾತೂ ಒಂದೊಂದು ವ್ಯಾಖ್ಯಾನದಂತೆ ಇದ್ದ ಸಿನಿಮಾವನ್ನು ವೀಕ್ಷಿಸಿ ಹೃದಯ ಒದ್ದೆ ಮಾಡಿಕೊಳ್ಳದ ಶಿಬಿರಾರ್ಥಿಗಳಿರಲಿಲ್ಲ.

'ಸಾಂಗತ್ಯ’ ತೋರಿಸಿದ ಇನ್ನೊಂದು ಸಿನಿಮಾ ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಬ್ಯಾರಿ’(2011). ಧರ್ಮದ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರು ಎಂತಹ ಕಠೋರ ಬದುಕನ್ನು ಎದುರಿಸಬೇಕಾಗುತ್ತದೆ ಎಂಬ ಕಥೆ ಹೊಂದಿರುವ ಈ ಚಿತ್ರದ ಸಂವಾದಕ್ಕೆ ಖುದ್ದು ನಿರ್ದೇಶಕ ಸುವೀರನ್ ಅವರೇ ಬರಬೇಕಿತ್ತಾದರೂ, ಅವರ ಗೈರುಹಾಜರಿಯ ಕೊರತೆಯನ್ನು ತುಂಬಿದವರು ಸಹನಿರ್ದೇಶಕ ರಿಯಾಜ಼್ ಅಶ್ರಫ್. ಸಿನಿಮಾ ಹಿನ್ನೆಲೆ ಮತ್ತು ಅದರ ನಿರ್ಮಾಣದ ಕಥೆಯನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡ ರಿಯಾಜ಼್ ಒಂದು ಅರ್ಥಪೂರ್ಣ ಸಂವಾದವನ್ನು ಹುಟ್ಟುಹಾಕಿದರು.

ಸಮಾನಾಸಕ್ತ ಮನಸ್ಸುಗಳು ಒಂದೆಡೆ ಕಲೆತ ಫಲವಾಗಿ ಮೂರ್ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡ ಸಿನಿಮಾ ಅಧ್ಯಯನದ ತಂಡವೇ ಈ ಸಾಂಗತ್ಯ. ತೀರಾ ಅನೌಪಚಾರಿಕವಾಗಿ ರೂಪುಗೊಂಡ ಈ ಗುಂಪು ನೋಡನೋಡುತ್ತಲೇ ಎಂಟು ಚಲನಚಿತ್ರ ಶಿಬಿರಗಳನ್ನೂ ಆಯೋಜಿಸಿಬಿಟ್ಟಿದೆ. ಚಲನಚಿತ್ರೋತ್ಸವ ಹೊಸ ವಿಚಾರವೇನಲ್ಲ. ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟ ಹೀಗೆ ಸಾಕಷ್ಟು ದೊಡ್ಡಮಟ್ಟದ ’ಉತ್ಸವ’ಗಳು ನಡೆಯುವುದಿದೆ. ಆದರೆ ಸಾಂಗತ್ಯ ಆಯೋಜಿಸುತ್ತಾ ಬಂದಿರುವುದು ಜನಪ್ರಿಯ ಮಾದರಿಯ ಫಿಲ್ಮ್ ಫೆಸ್ಟ್‌ಗಳನ್ನಲ್ಲ, ಬದಲಾಗಿ, ಈಗಾಗಲೇ ಉಲ್ಲೇಖವಾಗಿರುವಂತೆ, ಸಿನಿಮಾ ಅಧ್ಯಯನ ಶಿಬಿರಗಳನ್ನು.

ಸಾಂಗತ್ಯವೇ ಹೇಳಿಕೊಂಡಿರುವಂತೆ ಅದು ಶಿಬಿರಗಳ ಮೂಲಕ ಮಾಡಹೊರಟಿರುವುದು 'ಚಿತ್ರಭಾಷಾಕಾವ್ಯ’ದ ರಸಾಸ್ವಾದನೆ ಅಷ್ಟೆ. ಒಂದು ಸಿನಿಮಾವನ್ನು ಬೇರೆಬೇರೆ ಆಯಾಮಗಳಿಂದ ಅರ್ಥಮಾಡಿಕೊಳ್ಳುವ ಬಗೆ, ಕಥೆ, ಸಂಗೀತ, ಕ್ಯಾಮೆರಾ, ನಿರ್ದೇಶನ, ಬಣ್ಣ, ಬೆಳಕು, ಉಡುಗೆ ತೊಡುಗೆ ಇತ್ಯಾದಿ ತಾಂತ್ರಿಕ ಅಂಶಗಳ ಮಹತ್ವ ಮತ್ತು ಅವುಗಳ ಸಾಧ್ಯತೆಗಳು, ಬೇರೆಬೇರೆ ಭಾಷೆಗಳಲ್ಲಿ, ದೇಶಗಳಲ್ಲಿ ನಡೆಯುತ್ತಿರುವ ಸಿನಿಮಾ ನಿರ್ಮಾಣದ ಹೊಸಹಾದಿಗಳು... ಹೀಗೆ ಶುದ್ಧ ಶೈಕ್ಷಣಿಕ ಉದ್ದೇಶದಿಂದ ಸಿನಿಮಾ ಅಧ್ಯಯನ ನಡೆಸುವ ಆಸಕ್ತರೆಲ್ಲ ಒಂದು ಕಡೆ ಕುಳಿತು ಮುಖಾಮುಖಿಯಾಗುವುದಕ್ಕೆ ಸಾಂಗತ್ಯ ವೇದಿಕೆ ಒದಗಿಸಿದೆ. ಸಾಂಗತ್ಯದ ಈ 'ಸಿನಿಮಾ ಸೇವೆ’ಯನ್ನು ಆರಂಭದಿಂದಲೂ ಬೆಂಬಲಿಸುತ್ತಾ ಬಂದದ್ದು ಕುಪ್ಪಳಿಯ ರಾಷ್ಟ್ರಪತಿ ಕುವೆಂಪು ಪ್ರತಿಷ್ಠಾನ. ತನ್ನ ಮೊದಲನೇ ಶಿಬಿರದಿಂದಲೂ ಸಾಂಗತ್ಯವು ಕುವೆಂಪು ಪ್ರತಿಷ್ಠಾನ ಸ್ಥಾಪಿಸಿರುವ ದೃಕ್-ಶ್ರವಣ ಸ್ಟುಡಿಯೋದಲ್ಲೇ ಸಿನಿಮಾಗಳನ್ನು ಪ್ರದರ್ಶಿಸುತ್ತ ಬಂದಿದೆ.

ಬಹುಶಃ 'ಸಾಂಗತ್ಯ’ದಂತಹ ಸಂಸ್ಥೆ ಆಯೋಜಿಸುವ ವಿಶಿಷ್ಟ ಚಿತ್ರಶಿಬಿರಕ್ಕೆ ಮಲೆನಾಡಿನ ನಯನಮನೋಹರ ಹಸಿರು ಪರಿಸರದ ನಡುವೆ ಕಂಗೊಳಿಸುತ್ತಿರುವ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿನ ಹೇಮಾಂಗಣಕ್ಕಿಂತ ಉತ್ತಮ ತಾಣ ಇನ್ನೊಂದು ಸಿಗಲಾರದು. ಪಕ್ಕದಲ್ಲೇ ಕುವೆಂಪು ಅವರು ಹುಟ್ಟಿಬೆಳೆದ ಕವಿಮನೆ, ಎದುರಿಗೆ ಮಹಾಕವಿಯ ಕಾವ್ಯಸುಧೆಯುಕ್ಕಿಸಿದ ಕವಿಶೈಲ, ಹೋದೆಡೆಯಲ್ಲೆಲ್ಲ ಕುವೆಂಪು ಧ್ಯಾನದ ದಿವ್ಯಾನುಭವಕ್ಕೆ ಪ್ರೇರಣೆಯಾಗುವ ರಮಣೀಯ ಪ್ರಕೃತಿ... ಇದ್ದ ಎರಡು ದಿನವಂತೂ ಚಿತ್ರಭಾಷಾಕಾವ್ಯದ ಸಾಂಗತ್ಯದೊಂದಿಗೆ ನಿಸರ್ಗದ ಒಳದನಿಯ ಸಾಂಗತ್ಯವೂ ತಪ್ಪದು.

'ಸಾಂಗತ್ಯ’ ತನ್ನ ಅಧ್ಯಯನಾಸಕ್ತಿಯ ಮುಂದುವರಿಕೆಯಾಗಿ 'ಸಾಂಗತ್ಯ’ ಎಂಬ ತ್ರೈಮಾಸಿಕವನ್ನು ಹೊರತರುತ್ತಿದೆ. ಅಲ್ಲದೆ, saangatya.wordpress.com ಎಂಬ ಬ್ಲಾಗ್‌ನ್ನೂ ನಿರ್ವಹಿಸುತ್ತಿದೆ. ಚಿತ್ರವೀಕ್ಷಣೆಯ ತಾಜಾ ಅನುಭವಗಳಿಗೆ, ಹೊಸ ಚರ್ಚೆ, ಸಂವಾದಗಳಿಗೆ ಇವೆರಡೂ ಸಮರ್ಥ ವೇದಿಕೆಗಳಾಗಿವೆ. ಹೊಸ ಅಲೆಯ ಚಿತ್ರಗಳಿಗೆ ವೀಕ್ಷಕರು ಸಿಗುತ್ತಿಲ್ಲ, ಸದಭಿರುಚಿಯ ಚಿತ್ರಗಳ ಬಿಡುಗಡೆಗೆ ಥಿಯೇಟರುಗಳೇ ದೊರೆಯುತ್ತಿಲ್ಲ ಎಂಬ ಆತಂಕಗಳಿಗೆ ಸಾಂಗತ್ಯದಂತಹ ಕೂಟಗಳು ಸಮಾಧಾನ ಹೇಳುತ್ತವೆ. ಒಳ್ಳೆಯ ಉದ್ದೇಶದಿಂದ ಮಾಡುವ ಚಿತ್ರಗಳಿಗೆ ಸೂಕ್ತ ಪ್ರತಿಕ್ರಿಯೆ, ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕೊರಗಿನ ನಿವಾರಣೆಗೆ ಈ ಬಗೆಯ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಕೆಲಸ ಸಣ್ಣ ಪ್ರಮಾಣದಲ್ಲಾದರೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದು ಸದ್ಯದ ಅವಶ್ಯಕತೆ ಎನಿಸುತ್ತದೆ.

ಬುಧವಾರ, ಅಕ್ಟೋಬರ್ 10, 2012

ಸುದ್ದಿಗಷ್ಟೇ ಅಲ್ಲ, ಟಿಆರ್‌ಪಿಗೂ ಕಾಸು!


ಮಾಧ್ಯಮಶೋಧ-26, ಹೊಸದಿಗಂತ, 27 ಸೆಪ್ಟೆಂಬರ್ 2012

ಸುದ್ದಿಗೂ ಕಾಸು (ಪೇಯ್ಡ್ ನ್ಯೂಸ್) ವಿಚಾರ ಬಹಿರಂಗ ಚರ್ಚೆಗೆ ಬಂದಾಗ ಜನತೆ ಅಚ್ಚರಿಯನ್ನೂ ಆಘಾತವನ್ನು ಅನುಭವಿಸಿತ್ತು. ಸುದ್ದಿ ಪ್ರಕಟಿಸುವುದಕ್ಕೂ ದುಡ್ಡು ತಗೋತಾರಾ? ಸುದ್ದಿ ಅಂದುಕೊಂಡು ನಾವು ಪತ್ರಿಕೆಗಳಲ್ಲಿ ಓದುವುದೆಲ್ಲವೂ/ಚಾನೆಲ್‌ಗಳಲ್ಲಿ ನೋಡುವುದೆಲ್ಲವೂ ವಾಸ್ತವವಾಗಿ ಸುದ್ದಿಗಳಲ್ಲವಾ? ಜಾಹೀರಾತುಗಳೂ ಛದ್ಮವೇಷ ಧರಿಸಿ ಸುದ್ದಿಗಳ ನಡುವೆ ಬಂದು ಕೂರುತ್ತವಾ? ಎಂದು ಸಾಮಾನ್ಯ ಓದುಗ/ಪ್ರೇಕ್ಷಕ ಅಯೋಮಯಗೊಂಡುಬಿಟ್ಟಿದ್ದ. ’ಈ ಬಗೆಯ ಪತ್ರಿಕೋದ್ಯಮ ವೇಶ್ಯಾವಾಟಿಕೆಗಿಂತಲೂ ಹೀನವಾದದ್ದು’ ಎಂದು ಕೆಲ ಜನರು ಜರಿದರೆ, ’ಜನನ ಪ್ರಮಾಣಪತ್ರದಿಂದ ತೊಡಗಿ ಮರಣ ಪ್ರಮಾಣಪತ್ರದವರೆಗೆ ಪ್ರತಿಯೊಂದಕ್ಕೂ ಹಣ ತೆರಬೇಕಾಗಿರುವ ಈ ದೇಶದಲ್ಲಿ, ಸುದ್ದಿ ಬರೆಯುವುದಕ್ಕೆ ಪತ್ರಕರ್ತರಿಗೂ ಹಣ ಕೊಡಬೇಕಾಗಿದೆಯೆಂದರೆ ಅಚ್ಚರಿಯೇನುಂಟು?’ ಎಂದು ಇನ್ನು ಕೆಲವರು ಜುಗುಪ್ಸೆ ವ್ಯಕ್ತಪಡಿಸಿದರು.

ಈ ಭ್ರಮನಿರಸನದ ಕಹಿಯನ್ನು ಜನತೆ ಇನ್ನೂ ಅರಗಿಸಿಕೊಳ್ಳುವ ಮೊದಲೇ ಮಾಧ್ಯಮಗಳಿಗೆ ಸಂಬಂಧಪಟ್ಟ ಮತ್ತೊಂದು ಆಘಾತಕಾರಿ ಸಂಗತಿ ಅನಾವರಣಗೊಂಡಿದೆ. ಟಿಆರ್‌ಪಿ ಟಿಆರ್‌ಪಿ ಎಂದು ಇಪ್ಪತ್ನಾಲ್ಕು ಗಂಟೆಯೂ ತಲೆಕೆಡಿಸಿಕೊಂಡಿರುವ ಟಿವಿ ವಾಹಿನಿಗಳು ಪ್ರೇಕ್ಷಕ ಸಂಶೋಧನ ಕಂಪೆನಿಗಳಿಗೆ ಖುದ್ದು ಲಂಚ ನೀಡಿ ತಮಗೆ ಬೇಕಾದ ಟಿಆರ್‌ಪಿಯನ್ನು ತರಿಸಿಕೊಳ್ಳುತ್ತವೆ ಎಂಬ ವಿಚಾರ ಜನಸಾಮಾನ್ಯರನ್ನಷ್ಟೇ ಅಲ್ಲ, ಕಾರ್ಪೋರೇಟ್ ವಲಯವನ್ನೂ ಅಲುಗಾಡಿಸಿಬಿಟ್ಟಿದೆ.

ಹಾಗೆ ನೋಡಿದರೆ ಪೇಯ್ಡ್ ನ್ಯೂಸ್ ಮತ್ತು ಪೇಯ್ಡ್ ಟಿಆರ್‌ಪಿಗಳೆರಡೂ ಮಾಧ್ಯಮಗಳಿಗೆ ಅಷ್ಟೊಂದು ಹೊಸ ಸಂಗತಿಗಳೇನಲ್ಲ. ಸಾಕಷ್ಟು ವರ್ಷಗಳಿಂದ ಒಳಗೊಳಗೇ ಇಂತಹ ವ್ಯವಹಾರಗಳೆಲ್ಲ ನಡೆಯುತ್ತಿವೆ ಎಂಬುದು ಮಾಧ್ಯಮ ವಲಯದಲ್ಲಂತೂ ಪರಿಚಿತ ವಿಷಯವೇ ಆಗಿತ್ತು; ಆದರೆ ಅಷ್ಟಾಗಿ ಬಹಿರಂಗ ಚರ್ಚೆಗೆ ಬಂದಿರಲಿಲ್ಲ. ಯಾವಾಗ ಒಂದಷ್ಟು ಪತ್ರಿಕೆಗಳೇ ಇದನ್ನು ದಾಖಲೆ ಸಮೇತ ಬಹಿರಂಗಗೊಳಿಸುವ ಧೈರ್ಯ ಮಾಡಿದವೋ, ಆಗ ಸುದ್ದಿಗೂ ಕಾಸು ವಿಷಯ ಜನಸಾಮಾನ್ಯರ ನಾಲಿಗೆಗಳಲ್ಲೂ ಹರಿದಾಡಿತು.

ಈ ಟಿಆರ್‌ಪಿ ವಿಚಾರವೂ ಅಷ್ಟೇ, ಟಿಆರ್‌ಪಿ ಘೋಷಿಸುವ ಸಂಸ್ಥೆಗಳು ವಾಹಿನಿಗಳಿಂದ ದುಡ್ಡು ಪಡೆದುಕೊಂಡು ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ತಮ್ಮಿಷ್ಟದಂತೆ ತಿದ್ದಿ ಪ್ರಕಟಿಸುತ್ತವೆ ಎಂಬ ವಿಷಯದಲ್ಲಿ ಆಗೊಮ್ಮೆ ಈಗೊಮ್ಮೆ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಅದಕ್ಕೆ ಅಧಿಕೃತತೆಯ ಮುದ್ರೆ ಇರಲಿಲ್ಲ. ಇತ್ತೀಚೆಗೆ ಎನ್‌ಡಿಟಿವಿ ವಾಹಿನಿಯು ಟಾಮ್ (TAM – Television Audience Measurement) ಇಂಡಿಯಾ ಕಂಪೆನಿಯ ಮಾತೃಸಂಸ್ಥೆ ನೀಲ್ಸನ್ ಮತ್ತು ಕ್ಯಾಂಟರ್ ವಿರುದ್ಧ ನ್ಯೂಯಾರ್ಕ್‌ನ ನ್ಯಾಯಾಲಯವೊಂದರಲ್ಲಿ ದಾವೆ ಹೂಡುವುದರೊಂದಿಗೆ ಟಿಆರ್‌ಪಿಯ ಅಸಲಿತನದ ಚರ್ಚೆ ಜನಸಾಮಾನ್ಯರ ಕಿವಿಗೂ ತಲುಪಿದೆ.

ತನ್ನ ಪ್ರತಿಸ್ಪರ್ಧಿ ಚಾನೆಲ್‌ಗಳಿಂದ ಲಂಚ ಪಡೆದುಕೊಂಡು ಅವುಗಳ ಟಿಆರ್‌ಪಿ ಸದಾ ಹೆಚ್ಚಾಗಿರುವಂತೆಯೂ ತನ್ನ ಟಿಆರ್‌ಪಿ ಸದಾ ಕಡಿಮೆ ಇರುವಂತೆಯೂ ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ಟಾಮ್ ಇಂಡಿಯಾ ತಿದ್ದುತ್ತಿದೆ ಎಂಬುದು ಎನ್‌ಡಿಟಿವಿಯ ದಾವೆ. ತನ್ನ ಪ್ರೇಕ್ಷಕ ಸಂಶೋಧನೆಗೆ ಟಾಮ್ ಇಂಡಿಯಾ ಆರಿಸಿಕೊಳ್ಳುತ್ತಿರುವ ಪ್ರದೇಶಗಳು ಮತ್ತು ಕುಟುಂಬಗಳ ಹಾಗೂ ಸಮೀಕ್ಷಾ ಉಪಕರಣಗಳ ಸಂಖ್ಯೆ ನ್ಯಾಯಸಮ್ಮತವಾಗಿಲ್ಲ; ಭಾರತದಲ್ಲಿ ಟಿವಿ ವೀಕ್ಷಿಸುವವರ ಸಂಖ್ಯೆಗೂ ಸಮೀಕ್ಷೆಗೆ ಆಯ್ದುಕೊಳ್ಳುತ್ತಿರುವ ಜನರ ಸಂಖ್ಯೆಗೂ ಏನೇನೂ ಸಮತೋಲನ ಇಲ್ಲ ಎಂಬುದು ಎನ್‌ಡಿಟಿವಿಯ ಇನ್ನೊಂದು ಆರೋಪ. ಒಟ್ಟು 194 ಪುಟಗಳಲ್ಲಿ ತನಗಾಗಿರುವ ಅನ್ಯಾಯವನ್ನು ನ್ಯಾಯಾಲಯಕ್ಕೆ ವಿವರಿಸಿರುವ ಚಾನೆಲ್ ಈ ನಷ್ಟಕ್ಕಾಗಿ ನೀಲ್ಸನ್ ಕಂಪೆನಿ ತನಗೆ 1.3 ಬಿಲಿಯನ್ ಯುಎಸ್ ಡಾಲರ್ ಪರಿಹಾರವನ್ನೂ ನೀಡಬೇಕೆಂದು ಆಗ್ರಹಿಸಿದೆ.

ಎನ್‌ಡಿಟಿವಿ-ನೀಲ್ಸನ್ ಜಗಳ ಬಹಿರಂಗವಾಗುತ್ತಿದ್ದಂತೆ ಟಿಆರ್‌ಪಿಗೂ ಕಾಸು ವಿವಾದದ ಕುರಿತ ಚರ್ಚೆಗೆ ಸಾಕಷ್ಟು ಮಂದಿ ದನಿಗೂಡಿಸುವುದಕ್ಕೆ ಆರಂಭಿಸಿದ್ದಾರೆ. ಎಚ್‌ಎಮ್‌ಟಿವಿ ಎಂಬ ಆಂಧ್ರಪ್ರದೇಶ ಮೂಲದ ಚಾನೆಲೊಂದು ಟಿಆರ್‌ಪಿ ಅವ್ಯವಹಾರದ ಬಗ್ಗೆ ತಾನು ಮಾಡಿದ್ದ ಕುಟುಕು ಕಾರ್ಯಾಚರಣೆಯನ್ನು ಪ್ರಸಾರ ಮಾಡಿದೆ. ಟಾಮ್ ಕಂಪೆನಿಯ ಉದ್ಯೋಗಿಗಳು ಒಂದು ನಿರ್ದಿಷ್ಟ ಚಾನೆಲ್‌ನ್ನು ಮಾತ್ರ ನೋಡುವಂತೆ ಜನರನ್ನು ಕೇಳಿಕೊಳ್ಳುವ, ಅದಕ್ಕೆ ಒಪ್ಪದ ಮಂದಿಯ ಮನೆಯಿಂದ 'ಪೀಪಲ್ ಮೀಟರ್’ನ್ನು ತೆರವುಗೊಳಿಸುವ ದೃಶ್ಯಗಳನ್ನು ಈ ಚಾನೆಲ್ ಪ್ರಸಾರ ಮಾಡಿದ್ದು ಹೆಚ್ಚಿನ ಚರ್ಚೆಗೆ ಇಂಬು ನೀಡಿದೆ.

ಭಾರತದ ಬಹುತೇಕ ಚಾನೆಲ್‌ಗಳ ಮಾಲೀಕತ್ವ ರಾಜಕಾರಣಿಗಳ ಮತ್ತು ದೊಡ್ಡ ದುಡ್ಡಿನ ಕುಳಗಳ ಕೈಯಲ್ಲಿದೆ. ಭಾರತದ ಸುದ್ದಿಜಾಲದ ಮೂರನೇ ಒಂದು ಪಾಲನ್ನೂ, ಕೇಬಲ್ ಜಾಲದ ಶೇ.60 ಪಾಲನ್ನೂ ನಮ್ಮ ರಾಜಕಾರಣಿಗಳೇ ಹೊಂದಿದ್ದಾರೆ. ಇವರಲ್ಲಿ ಅನೇಕರು ತಮ್ಮ ಚಾನೆಲ್‌ಗೆ ಒಳ್ಳೆಯ ಟಿಆರ್‌ಪಿ ಇದೆಯೆಂದು ಬಿಂಬಿಸಿಕೊಳ್ಳುವುದಕ್ಕೆ ಲಂಚರುಷುವತ್ತುಗಳ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅಷ್ಟೇ ಅಲ್ಲ, ಕೇಬಲ್ ಜಾಲದಲ್ಲಿ ತಮ್ಮ ಚಾನೆಲ್ ಇಂತಹ ನಂಬರಿನಲ್ಲಿಯೇ ಸಿಗುವಂತೆ ಮಾಡುವುದಕ್ಕೆ, ಎರಡು ಮನರಂಜನಾ ಚಾನೆಲ್‌ನ ನಡುವೆ ಒಂದು ಸುದ್ದಿವಾಹಿನಿ ಬರುವಂತೆ ಮಾಡುವುದಕ್ಕೆ ಅಥವಾ ಕ್ರಿಕೆಟ್ ಪಂದ್ಯಾವಳಿಯಂತಹ ಜನಪ್ರಿಯ ನೇರಪ್ರಸಾರಗಳನ್ನು ಮಾಡುವ ವಾಹಿನಿಗಳ ಅಕ್ಕಪಕ್ಕ ತಮ್ಮ ವಾಹಿನಿ ಸಿಗುವಂತೆ ಮಾಡುವುದಕ್ಕೆ  ಕೇಬಲ್‌ದಾರರಿಗೆ ಲಂಚದ ಆಮಿಷ ತೋರಿಸುವುದು ಇತ್ಯಾದಿಗಳೂ ನಡೆಯುತ್ತಿವೆ. ಇವೆಲ್ಲ ಪರೋಕ್ಷವಾಗಿ ಟಿಆರ್‌ಪಿ ಹೆಚ್ಚಳದ (ಕು)ತಂತ್ರಗಳೇ. ನಮ್ಮ ಚಾನೆಲ್‌ಗಳಿಗೆ ಜಾಹೀರಾತಿನದ್ದೇ ಪ್ರಧಾನ ಆದಾಯ, ಜಾಹೀರಾತುದಾರರಿಗೆ ಚಾನೆಲ್‌ಗಳ ಟಿಆರ್‌ಪಿಯೇ ಮುಖ್ಯ ಮಾನದಂಡ ಆಗಿರುವುದರಿಂದ ಟಿಆರ್‌ಪಿಗೂ ಕಾಸು ಪಿಡುಗು ನೋಡನೋಡುತ್ತಿರುವಂತೆಯೇ ಹೆಮ್ಮರವಾಗಿ ಬೆಳೆದಿದೆ.

ಆದರೆ ಟಿಆರ್‌ಪಿ ಪ್ರಕಟಣೆಯಲ್ಲೂ ಭ್ರಷ್ಟಾಚಾರ ಇದೆ ಎಂಬ ಅಂಶ ಜಾಹೀರಾತುದಾರರಿಗೂ ಆಘಾತ ತರುವಂಥದ್ದೇ. ಏಕೆಂದರೆ ಇದೇ ಟಿಆರ್‌ಪಿಯ ಆಧಾರದಲ್ಲೇ ಅವರು ಜಾಹೀರಾತಿಗಾಗಿ ದುಡ್ಡಿನ ಹೊಳೆ ಹರಿಸುತ್ತಿರುವುದು. ಯಾವ ಚಾನೆಲ್‌ನ್ನು ಹೆಚ್ಚು ಜನ ವೀಕ್ಷಿಸುತ್ತಾರೋ ಆ ಚಾನೆಲ್ ಕಡೆಗೆ ಅವರ ಒಲವು, ಯಾವ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೇಕ್ಷಕರಿದ್ದಾರೋ ಆ ಕಾರ್ಯಕ್ರಮದತ್ತ ಅವರ ಒಲವು. ಇದನ್ನು ಪ್ರತಿನಿಧಿಸುವ ಟಿಆರ್‌ಪಿಯೇ ನಕಲಿ ಎಂದಾದರೆ ಜಾಹೀರಾತುದಾರರು ಯಾರನ್ನು/ಯಾವುದನ್ನು ನಂಬಬೇಕು? ಇದೇ ಟಿಆರ್‌ಪಿ ವರ್ಷವೊಂದಕ್ಕೆ ರೂ. 11,000 ಕೋಟಿಗೂ ಹೆಚ್ಚಿನ ಟಿವಿ ಜಾಹೀರಾತು ವ್ಯವಹಾರವನ್ನು ನಿರ್ಧರಿಸುವ ಅಂಶವೆಂಬುದನ್ನು ನಾವು ಗಮನಿಸಬೇಕು.

ಎನ್‌ಡಿಟಿವಿಯು ಟಾಮ್ ವಿರುದ್ಧ ದಾವೆ ಹೂಡಿದ ಕೆಲವೇ ದಿನಗಳಲ್ಲಿ ಭಾರತೀಯ ಜಾಹೀರಾತುದಾರರ ಸಂಘ ಹಾಗೂ ಭಾರತೀಯ ಜಾಹೀರಾತು ಸಂಸ್ಥೆಗಳ ಸಂಘ ಟಾಮ್‌ನೊಂದಿಗೆ ಸಭೆ ನಡೆಸಿ ಈ ಸಂಬಂಧ ಚರ್ಚೆ ನಡೆಸಿದ್ದು, ಟಾಮ್ ಟಿಆರ್‌ಪಿ ಅವ್ಯವಹಾರ ನಡೆಯದಂತೆ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ. ಅವುಗಳಲ್ಲಿ ಮುಖ್ಯವಾದದ್ದು: ಟಿಆರ್‌ಪಿ ಸಮೀಕ್ಷೆ ನಡೆಸುವ ಪ್ರಕ್ರಿಯೆಗೆ ಒಂದು ಆಂತರಿಕ ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸುವುದು, ಟಿಆರ್‌ಪಿ ಸಮಗ್ರ ಉಸ್ತುವಾರಿಗೆ ಒಬ್ಬ ಪ್ರತ್ಯೇಕ ’ಭದ್ರತಾ ಅಧಿಕಾರಿ’ಯನ್ನು ನೇಮಿಸುವುದು ಹಾಗೂ ಆರು ಮಹಾನಗರಗಳಲ್ಲಿರುವ ’ಪೀಪಲ್ ಮೀಟರ್’ಗಳ ಸಂಖ್ಯೆಯನ್ನು ಹೆಚ್ಚಿಸುವುದು.

ಪ್ರೇಕ್ಷಕ ಸಂಶೋಧನ ಉಪಕರಣಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವೇನೋ ಒಳ್ಳೆಯದೇ. ಆದರೆ ಮೂಲ ಸಮಸ್ಯೆಯಿರುವುದೇ ಇಲ್ಲಿ. ಏಕೆಂದರೆ ಟಾಮ್ ’ಪೀಪಲ್ ಮೀಟರ್’ಗಳನ್ನು ಹೆಚ್ಚಿಸುತ್ತೇನೆಂದು ಹೇಳಿದ್ದು ಮಹಾನಗರಗಳಲ್ಲಿ. ಟಿವಿ ವೀಕ್ಷಿಸುವ ಮಂದಿಯಿರುವುದು ಮಹಾನಗರಗಳಲ್ಲಿ ಮಾತ್ರವೇ? ಸಾಮಾನ್ಯ ಪಟ್ಟಣಗಳಲ್ಲೋ ಹಳ್ಳಿಗಳಲ್ಲೋ ಜನ ಟಿವಿ ವೀಕ್ಷಿಸುವುದಿಲ್ಲವೇ? ಅವರು ಯಾವ ಚಾನೆಲ್ ನೋಡುತ್ತಾರೆ, ಯಾವ ಹೊತ್ತಿನಲ್ಲಿ ಯಾವಯಾವ ಕಾರ್ಯಕ್ರಮಗಳನ್ನು ನೋಡುತ್ತಾರೆ ಎಂಬುದು ಮುಖ್ಯವಾಗುವುದಿಲ್ಲವೇ? ಹೇಳಿಕೇಳಿ ಇದು ಹಳ್ಳಿಗಳ ಮತ್ತು ಸಣ್ಣಪುಟ್ಟ ಪಟ್ಟಣಗಳ ದೇಶ.

ಟಾಮ್ ಸಂಸ್ಥೆ ತನ್ನ ಸಮೀಕ್ಷೆಗಾಗಿ ಇಡೀ ದೇಶದಲ್ಲಿ ಆರಿಸಿಕೊಳ್ಳುವ ಕುಟುಂಬಗಳ ಸಂಖ್ಯೆ ಕೇವಲ 8,150. ಈ ದೇಶದಲ್ಲಿ 130 ಮಿಲಿಯನ್‌ಗಿಂತಲೂ ಹೆಚ್ಚು ಟಿವಿ ಸೆಟ್‌ಗಳಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಟಿವಿ ವೀಕ್ಷಿಸಬೇಕಾದರೆ ಅವರ ಇಷ್ಟಾನಿಷ್ಟಗಳನ್ನು ಕೇವಲ ಎಂಟುಸಾವಿರ ಚಿಲ್ಲರೆ ಕುಟುಂಬಗಳು ನಿರ್ಧರಿಸುವುದು ಸಾಧ್ಯವೇ? ಹೀಗೆಂದು ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಸಮಿತಿಯೊಂದು ಪ್ರಶ್ನೆ ಮಾಡಿದ್ದಕ್ಕೆ ಟಾಮ್ ಕಂಪೆನಿಯು ’ರಕ್ತ ಪರೀಕ್ಷೆ ಮಾಡಬೇಕಾದರೆ ಇಡೀ ದೇಹದಲ್ಲಿರುವ ರಕ್ತವೇನೂ ಬೇಕಾಗುವುದಿಲ್ಲ, ಒಂದು ಬಿಂದು ರಕ್ತವೂ ಸಾಕಾಗುತ್ತದಲ್ಲ’ ಎಂಬ ಭೋಳೇತನದ ಉತ್ತರ ಕೊಟ್ಟಿತ್ತಂತೆ! ಆದರೆ ತಾನು ಟಿಆರ್‌ಪಿಗಾಗಿ ಸಂಗ್ರಹಿಸುವ ಒಂದು ಬಿಂದು ರಕ್ತದಲ್ಲಿ ಬೆರಳೆಣಿಕೆಯ ನಗರವಾಸಿಗಳ ರಕ್ತ ಮಾತ್ರ ಸೇರಿಕೊಂಡಿದೆಯೆಂಬುದು ಖುದ್ದು ಟಾಮ್‌ಗೂ ಗೊತ್ತಿದೆ.

ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಿಗೆ ಪತ್ರ ಬರೆದು ಟಾಮ್ ಪ್ರಕಟಿಸುವ ಟಿಆರ್‌ಪಿ ಫಲಿತಾಂಶದ ಸ್ವತಂತ್ರ ಮೌಲ್ಯಮಾಪನಕ್ಕೆ ಒಂದು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದೆ. ಟಿಆರ್‌ಪಿ ಸಮೀಕ್ಷೆಗೆ ಭಾರತದಲ್ಲಿರುವುದು ಟಾಮ್ ಮತ್ತು ಎಮ್ಯಾಪ್ ಎಂಬ ಎರಡು ಕಂಪೆನಿಗಳು ಮಾತ್ರ - ಅವೂ ಖಾಸಗಿ ಸ್ವಾಮ್ಯದವು. ಹೀಗಾಗಿ ಇವುಗಳಿಗೆ ಪರ್ಯಾಯವಾಗಿ ಸರ್ಕಾರವೇ ಅಖಿಲ ಭಾರತ ಮಟ್ಟದ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಒಂದೆರಡು ಪ್ರಯತ್ನಗಳನ್ನು ಮಾಡಿದ್ದರೂ ಅವು ಯಶಸ್ವಿಯಾಗಿಲ್ಲ. ಈಗ ಎನ್‌ಡಿಟಿವಿ-ಟಾಮ್ ವಿವಾದದ ಮೂಲಕ ಸಮಸ್ಯೆ ಸಾರ್ವಜನಿಕ ಚರ್ಚೆಗೆ ಬಂದಿರುವುದರಿಂದಲಾದರೂ ಸರ್ಕಾರ ಇದಕ್ಕೊಂದು ಪರಿಹಾರದ ದಾರಿ ಹುಡುಕುತ್ತದೋ, ಕಾದು ನೋಡಬೇಕು.

ಶುಕ್ರವಾರ, ಸೆಪ್ಟೆಂಬರ್ 14, 2012

ಕ್ಲಾಸ್‌ರೂಂ ಪತ್ರಿಕೋದ್ಯಮ ವೇಸ್ಟಾ? ಮಾಧ್ಯಮ ಶಿಕ್ಷಣ ಚರ್ಚೆಯ ಸುತ್ತಮುತ್ತ

ಮಾಧ್ಯಮಶೋಧ-25, ಹೊಸದಿಗಂತ, 13 ಸೆಪ್ಟೆಂಬರ್ 2012 

ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, 250ರಷ್ಟು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು, ಸಾವಿರಾರು ಜಾಹೀರಾತು ಏಜೆನ್ಸಿಗಳು, ಆಷ್ಟೇ ಪ್ರಮಾಣದ ಪಬ್ಲಿಕ್ ರಿಲೇಶನ್ಸ್-ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗಳು... ಭಾರತದ ಸಂವಹನ ಕ್ಷೇತ್ರ ಕ್ಷಣದಿಂದ ಕ್ಷಣಕ್ಕೆ ದಿನದಿಂದ ದಿನಕ್ಕೆ ಬಲೂನಿನಂತೆ ಹಿಗ್ಗುತ್ತಲೇ ಇದೆ. ಪತ್ರಿಕೋದ್ಯಮದ ಬಗ್ಗೆ 50-60 ವರ್ಷಗಳ ಹಿಂದೆ ಇದ್ದ ಕಲ್ಪನೆಗೂ ನಮ್ಮ ಕಣ್ಣಮುಂದಿನ ವಾಸ್ತವಕ್ಕೂ ಅಜಗಜಾಂತರ. ಅರ್ಧಶತಮಾನದ ಹಿಂದಿನ ಕಥೆ ಬದಿಗಿರಲಿ, ಮಾಧ್ಯಮ ಕ್ಷೇತ್ರದಲ್ಲಿ ಅರ್ಧದಿನದ ಹಿಂದಿನ ಸನ್ನಿವೇಶವೂ ಹಾಗೆಯೇ ಉಳಿಯುವ ಪರಿಸ್ಥಿತಿ ಇಲ್ಲ. ತಂತ್ರಜ್ಞಾನದ ಜತೆಜತೆಗೇ ಕ್ಷಣಕ್ಷಣಕ್ಕೂ ಬದಲಾಗುತ್ತಾ ಹೋಗುವ ಪ್ರಚಂಡ ಕ್ಷೇತ್ರ ಅದು. ಪತ್ರಿಕೋದ್ಯಮ ಎಂಬ ಪದದ ವ್ಯಾಪ್ತಿಯೇ ತುಂಬ ಕಿರಿದೆನ್ನಿಸಿ ಎಲ್ಲವನ್ನೂ ಒಟ್ಟಾಗಿ ಸಮೂಹ ಸಂವಹನದ ಪರಿಭಾಷೆಯಲ್ಲೇ ಅರ್ಥಮಾಡಿಕೊಳ್ಳಬೇಕಾದ ಕಾಲ ನಮ್ಮದು.

ಇಷ್ಟು ದೊಡ್ಡ ಕ್ಷೇತ್ರಕ್ಕೆ ಅವಶ್ಯಕವಾದ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸುವುದಕ್ಕೆ ನಮ್ಮ ದೇಶ, ಅಂದರೆ ನಮ್ಮ ಶಿಕ್ಷಣರಂಗ ಸನ್ನದ್ಧವಾಗಿದೆಯೇ ಎಂಬುದು ಆಗೀಗ ಚರ್ಚೆಗೆ ಬರುವ ವಿಷಯ. ಮಾಧ್ಯಮ ಶಿಕ್ಷಣವಾಗಿ ಮಾರ್ಪಾಟುಗೊಂಡಿರುವ ಪತ್ರಿಕೋದ್ಯಮ ಶಿಕ್ಷಣ ಎಷ್ಟರಮಟ್ಟಿಗೆ ಆಧುನಿಕ ಕಾಲದ ಮಾಧ್ಯಮಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಮರ್ಥವಾಗಿದೆ ಎಂಬ ಬಗ್ಗೆ ಈಚಿನ ದಿನಗಳಲ್ಲಂತೂ ಸಾಕಷ್ಟು ಚರ್ಚೆ, ವಾಗ್ವಾದಗಳು ನಡೆಯುತ್ತಿವೆ. ಕ್ಲಾಸ್‌ರೂಮಿನಲ್ಲೇನು ಪತ್ರಿಕೋದ್ಯಮ ಕಲಿಸುತ್ತಾರೆ, ಅಲ್ಲಿ ಕಲಿತದಕ್ಕೂ ಪತ್ರಿಕೆ ಅಥವಾ ಟಿವಿಯೊಳಗಿನ ವಾಸ್ತವಕ್ಕೂ ಏನಾದರೂ ಸಂಬಂಧವಿದೆಯಾ? ಎಂಬುದು ಬಹುತೇಕ ವೃತ್ತಿನಿರತ ಪತ್ರಕರ್ತರ ಟೀಕೆಯಾದರೆ, ಪತ್ರಿಕೆಯಲ್ಲಿ ಕೆಲಸಮಾಡುವವರೆಲ್ಲ ಮಹಾನ್ ವೃತ್ತಿಪರರೇ? ಅವರಲ್ಲಿ ಬುದ್ಧಿಗೇಡಿಗಳಿಲ್ಲವೇ? ವರದಿ-ಲೇಖನ ಬರೆಯುವ ಕೌಶಲವಷ್ಟೇ ಪತ್ರಿಕೋದ್ಯಮವೇ? ಎಂಬ ಚೋದ್ಯ ಅನೇಕ ಅಧ್ಯಾಪಕರದ್ದು.

ಎರಡೂ ಕಡೆಯ ವಾದದಲ್ಲೂ ಹುರುಳಿಲ್ಲದಿಲ್ಲ. ಹಾಗಂತ ಯಾವುದೋ ಒಂದು ವಾದ ಮಾತ್ರ ಸರಿ ಎಂದು ನಿರ್ಧರಿಸಿಬಿಡುವಂತೆಯೂ ಇಲ್ಲ. ಇದನ್ನೊಂದು ಚರ್ಚೆಯಾಗಿ ಮಾತ್ರ ಮುಂದುವರಿಸಿಕೊಂಡು ಹೋಗುವಲ್ಲಿ ಯಾವ ಅರ್ಥವೂ ಇಲ್ಲ. ಏಕೆಂದರೆ ಇಂತಹ ಚರ್ಚೆಗಳಿಗೆ ತುದಿಮೊದಲಿಲ್ಲ. ಎರಡೂ ಕಡೆಯವರು ವಾಸ್ತವಾಂಶಗಳನ್ನು ಅರ್ಥಮಾಡಿಕೊಂಡು ಯೋಚನೆ ಮಾಡಿದರೆ ಮಾತ್ರ ಒಂದು ಸಮಾಧಾನದ ಹಾದಿ ಹೊಳೆಯಬಹುದು. ಏಕೆಂದರೆ ಇದು ’ಹೋಗಲಿ ಬಿಡಿ’ ಎಂದು ಸುಮ್ಮನಾಗುವ ಕ್ಷುಲ್ಲಕ ವಿಚಾರವೇನೂ ಅಲ್ಲ; ಬೃಹದಾಕಾರವಾಗಿ ಬೆಳೆದಿರುವ ಮತ್ತು ಇನ್ನೂ ಬೆಳೆಯುತ್ತಲೇ ಇರುವ ಮಾಧ್ಯಮ ಕ್ಷೇತ್ರದ ಭವಿಷ್ಯದ ಪ್ರಶ್ನೆ.

ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸುವವರು ಪತ್ರಿಕೋದ್ಯಮವನ್ನೇ ಓದಿರಬೇಕು ಎಂಬ ನಿಯಮವೇನೂ ಹಿಂದೆ ಇರಲಿಲ್ಲ. ಈಗಲೂ ಇಲ್ಲ. ಆ ಕ್ಷೇತ್ರದಲ್ಲಿ ಆಸಕ್ತಿಯಿರುವ, ಅದು ಬಯಸುವ ಕೌಶಲ್ಯಗಳನ್ನು ಹೊಂದಿರುವ ಯಾರಿಗೇ ಆದರೂ ಪತ್ರಿಕೋದ್ಯಮಕ್ಕೆ ಸ್ವಾಗತ ಇತ್ತು. ಈಗಲೂ ಇದೆ. ಕಾನೂನು, ಸಾಹಿತ್ಯ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ... ಇತ್ಯಾದಿ ಯಾವುದೇ ವಿಷಯ ಓದಿದವರಿಗೂ ಪತ್ರಿಕೋದ್ಯಮದಲ್ಲಿ ಅವಕಾಶಕ್ಕೇನೂ ಕೊರತೆಯಿಲ್ಲ. ಡಿಗ್ರಿಗಳ ಕಥೆ ಹಾಗಿರಲಿ, ಹೈಸ್ಕೂಲನ್ನೇ ಮುಗಿಸದ ಮಂದಿಯೂ ಪತ್ರಿಕೋದ್ಯಮದ ದಂತಕತೆಗಳಾದ ಇತಿಹಾಸ ನಮ್ಮ ಮುಂದಿದೆ. ಪತ್ರಿಕೋದ್ಯಮ ಬಯಸುವುದು ಅದನ್ನು ಪ್ರೀತಿಸಬಲ್ಲ ಮನಸ್ಸು ಮತ್ತು ನಿಭಾಯಿಸಬಲ್ಲ ಪ್ರತಿಭೆಯನ್ನು ಮಾತ್ರ. ಆದರೆ ಕಾಲವೂ ತುಂಬ ಬದಲಾಗಿಬಿಟ್ಟಿದೆ. ಪತ್ರಿಕೆ, ಚಾನೆಲ್, ರೇಡಿಯೋ, ಇಂಟರ್ನೆಟ್ ಇತ್ಯಾದಿ ಸಂವಹನ ಮಾಧ್ಯಮಗಳ ಸಂಖ್ಯೆ ಊಹನೆಗೂ ಮೀರಿ ಬೆಳೆಯುತ್ತಿದೆ. ಮೇಲಾಗಿ ಇದು ಸ್ಪೆಷಲೈಸೇಶನ್ ಯುಗ. ಎಲ್ಲದರಲ್ಲೂ ವೃತ್ತಿಪರತೆಯನ್ನು ಬಯಸುವ ಕಾಲ. ಹೀಗಾಗಿ ಮಾಧ್ಯಮ ಶಿಕ್ಷಣ ಹಿನ್ನೆಲೆಯಿಂದ ಬಂದವರಿಗೇ ಮಾಧ್ಯಮಗಳಲ್ಲಿ ಆದ್ಯತೆ ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಆದರೆ ಇಷ್ಟೊಂದು ಮುಂದುವರಿದಿರುವ ಮಾಧ್ಯಮ ಪ್ರಪಂಚಕ್ಕೆ ಒಪ್ಪುವ ಸಮರ್ಥ ಮಾನವ ಸಂಪನ್ಮೂಲ ದೊರೆಯುತ್ತಿಲ್ಲ ಎಂಬುದೇ ಸದ್ಯದ ಚರ್ಚೆ. 'Journalists are born, not made' ಎಂಬ ಸಾಂಪ್ರದಾಯಿಕ ನಿಲುವಿನ ನಡುವೆಯೇ ಪತ್ರಿಕೋದ್ಯಮ ಶಿಕ್ಷಣ ಬೆಳೆದು ಬಂತು. 'Journalists may be born, but they are made too' ಎಂಬ ಮಾತಿಗೆ ಬೆಂಬಲ ದೊರೆಯಿತು. ಅನೇಕ ಮಾನವಿಕ ಮತ್ತು ಶಾಸ್ತ್ರೀಯ ವಿಷಯಗಳಿಗೆ ಹೋಲಿಸಿದರೆ ಒಂದು ಅಧ್ಯಯನದ ವಿಷಯವಾಗಿ ಪತ್ರಿಕೋದ್ಯಮವೂ ತುಂಬಾ ಹೊಸತೇ. ಆದರೆ ಅದು ಬೆಳೆದ ವೇಗ ಅಗಾಧವಾದದ್ದು. ಪತ್ರಿಕೋದ್ಯಮ ಒಂದು ಅಧ್ಯಯನದ ವಿಷಯವಾಗಿ ಬೆಳೆದ ಮೇಲೂ ಮಾಧ್ಯಮಗಳಿಗೆ ಅವಶ್ಯಕವಾದ, ಅವು ಬಯಸುವ ಕೌಶಲಗಳುಳ್ಳ ಮಂದಿ ತಯಾರಾಗುತ್ತಿಲ್ಲವಲ್ಲ ಎಂಬ ಕೊರಗು ನ್ಯಾಯವಾದದ್ದೇ.

ತರಗತಿಯಲ್ಲಿ ಕಲಿತ ಪತ್ರಿಕೋದ್ಯಮ ವೃತ್ತಿಯ ಅವಶ್ಯಕತೆಗಳನ್ನು ಸರಿಯಾಗಿ ಪೂರೈಸುತ್ತಿಲ್ಲ ಎಂಬ ಮಾತಲ್ಲಿ ಆಕ್ಷೇಪಿಸುವಂಥದ್ದೇನೂ ಇಲ್ಲ. ಹಾಗಂತ ಕ್ಲಾಸ್‌ರೂಂನಲ್ಲಿ ಕಲಿತದ್ದು ಪೂರ್ತಿ ವೇಸ್ಟು ಎಂದು ಪತ್ರಿಕೋದ್ಯಮ ಶಿಕ್ಷಣವನ್ನೇ ಸಾರಾಸಗಟಾಗಿ ಹೀಗಳೆಯುವ ಪ್ರವೃತ್ತಿ ಮಾತ್ರ ಒಳ್ಳೆಯ ಬೆಳವಣಿಗೆ ಅಲ್ಲ. ಯಾವ ಅಧ್ಯಯನದ ವಿಷಯವೂ ಅದರಷ್ಟಕ್ಕೇ ಒಳ್ಳೆಯದೂ ಆಗುವುದಿಲ್ಲ, ನಿಷ್ಪ್ರಯೋಜಕವೂ ಆಗುವುದಿಲ್ಲ. ಸಮಸ್ಯೆಯಿದೆ ಎಂದಾದರೆ ಅದು ಒಟ್ಟು ವ್ಯವಸ್ಥೆಯಲ್ಲಿ: ಅಂದರೆ, ಕಲಿಯುವವರಲ್ಲಿ, ಕಲಿಸುವವರಲ್ಲಿ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ. ಹಾಗಾದರೆ ಚರ್ಚೆ ನಡೆಯಬೇಕಾದ್ದು ಈ ವ್ಯವಸ್ಥೆಯನ್ನು ಸರಿಪಡಿಸುವ ಬಗೆಗೇ ಹೊರತು ಒಟ್ಟು ಮಾಧ್ಯಮ ಶಿಕ್ಷಣವನ್ನೇ ಜೊಳ್ಳು ಅಥವಾ ಟೊಳ್ಳು ಎಂದು ಟೀಕೆ ಮಾಡುವುದರಲ್ಲಲ್ಲ.

ಪತ್ರಿಕೋದ್ಯಮ ಪಾಠ ಮಾಡುವ ಅಧ್ಯಾಪಕರಲ್ಲೇ ಪ್ರಾಯೋಗಿಕ ತಿಳುವಳಿಕೆಯ ಕೊರತೆ ಇದೆ ಎಂಬ ಮಾತು ಒಪ್ಪುವಂಥದ್ದೇ. ಅನೇಕ ಪತ್ರಿಕೋದ್ಯಮ ಅಧ್ಯಾಪಕರಿಗೆ ಪತ್ರಿಕೆ, ಟಿವಿ, ರೇಡಿಯೋ ಯಾವುದೋ ಒಂದರಲ್ಲಾದರೂ ಕೆಲಸ ಮಾಡಿದ ಕನಿಷ್ಠ ಅನುಭವ ಇಲ್ಲ. ಸ್ವತಃ ವರದಿಗಾರಿಕೆ ಮಾಡಿ ಗೊತ್ತಿಲ್ಲದವರು ವಿದ್ಯಾರ್ಥಿಗಳಿಗೆ ರಿಪೋರ್ಟಿಂಗ್ ಹೇಗೆ ತಾನೇ ಹೇಳಿಕೊಟ್ಟಾರು? ಸ್ವತಃ ಎಡಿಟಿಂಗ್ ಮಾಡಲಾರದವರು ತಮ್ಮ ವಿದ್ಯಾರ್ಥಿಗಳಿಗೆ ಎಂತಹ ಎಡಿಟಿಂಗ್ ಅಭ್ಯಾಸ ಮಾಡಿಸಿಯಾರು? ಸ್ವತಃ ಸಂದರ್ಶನ ಮಾಡಿದ ಅನುಭವವಾಗಲೀ ಕೌಶಲವಾಗಲೀ ಇಲ್ಲದವರು ಅದರಲ್ಲಿ ವಿದ್ಯಾರ್ಥಿಗಳನ್ನೆಷ್ಟು ತಯಾರು ಮಾಡಿಯಾರು ಎಂಬ ಪ್ರಶ್ನೆಗಳು ಸಹಜವಾದವೇ. ಅನೇಕ ಮಂದಿ ಸ್ನಾತಕೋತ್ತರ ಪದವಿ ಮುಗಿಸಿ ಇಲ್ಲವೇ ಪಿಎಚ್.ಡಿ. ಸಂಶೋಧನೆ ಕೈಗೊಂಡು ನೇರವಾಗಿ ಅಧ್ಯಾಪನಕ್ಕೆ ಬಂದುಬಿಡುತ್ತಾರೆ. ವಿದ್ಯಾರ್ಥಿಗಳಾಗಿದ್ದಾಗ ಅಥವಾ ಸಂಶೋಧನೆಯಲ್ಲಿ ತೊಡಗಿದ್ದಾಗಲಾದರೂ ನಾಲ್ಕಕ್ಷರ ಬರೆದು ಅಭ್ಯಾಸವಿದೆಯಾ ಎಂದರೆ ದಿನಕ್ಕೆ ಒಂದಿಷ್ಟು ಪತ್ರಿಕೆಗಳನ್ನಾದರೂ ವಿವರವಾಗಿ ಓದಿದವರು ಅವರಲ್ಲ; ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರ ತಿಳುವಳಿಕೆ ಬಗೆಗಂತೂ ಕೇಳುವುದೇ ಬೇಡ. ಇಂಥವರು ಮಾಧ್ಯಮಗಳಿಗಾಗಿ ಎಂತಹ ಮಂದಿಯನ್ನು ತಯಾರು ಮಾಡಿಯಾರು ಎಂದು ಯಾರಾದರೂ ಊಹಿಸಬಹುದು.

ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಬಳಕೆಯಲ್ಲಿರುವ ಪತ್ರಿಕೋದ್ಯಮ ಸಿಲೆಬಸ್ ಕಾಲದ ವೇಗಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಿಲ್ಲ ಎಂಬ ವಿಷಯದಲ್ಲೂ ಹುರುಳಿದೆ. ಒಂದು ವೇಳೆ ಅಪ್‌ಡೇಟ್ ಆಗುತ್ತಿದ್ದರೂ ಅದನ್ನು ಕಲಿಸುವ ಅಧ್ಯಾಪಕರೇ ಅಪ್‌ಡೇಟ್ ಆಗದಿದ್ದರೆ ಎಂತಹ ಸಿಲೆಬಸ್ ರೂಪಿಸಿಯೂ ಪ್ರಯೋಜನ ಇಲ್ಲ ಎಂದಾಗುತ್ತದೆ. ಆದರೆ ಪದವಿ ಅಥವಾ ಸ್ನಾತಕೋತ್ತರ ಹಂತದಲ್ಲಿ ತರಗತಿಯಲ್ಲಿ ಹೇಳುವ ವಿಷಯಗಳೆಲ್ಲ ಅಪ್ರಸ್ತುತ, ಪತ್ರಿಕಾಲಯಕ್ಕೆ ಕಾಲಿಟ್ಟ ಮೇಲೆ ಬೇಕಾಗುವ ಅವಶ್ಯಕತೆಗಳೇ ಬೇರೆ ಎಂಬ ಮಾತು ಶುದ್ಧ ಅಪ್ರಬುದ್ಧ. ಮಾಧ್ಯಮದಲ್ಲಿ ಕೆಲಸ ಮಾಡುವುದೆಂದರೆ ಬರೀ ವರದಿ ಬರೆಯುವುದೋ, ಸುದ್ದಿ ಪರಿಷ್ಕರಿಸುವುದೋ, ಸುದ್ದಿ ಪ್ರಸ್ತುತಪಡಿಸುವುದೋ ಅಲ್ಲ; ಪತ್ರಕರ್ತ ವೈಯುಕ್ತಿಕವಾಗಿ ಅದಕ್ಕಿಂತಲೂ ಆಚೆ ಬೆಳೆಯಬೇಕು. ಅಂತಹ ಪತ್ರಕರ್ತ ಮಾತ್ರ ತನ್ನ ಪತ್ರಿಕೆ/ಚಾನೆಲ್‌ನ್ನು ಅಥವಾ ಒಟ್ಟು ಮಾಧ್ಯಮ ಕ್ಷೇತ್ರವನ್ನು ಬೆಳೆಸಬಲ್ಲ. ಪತ್ರಕರ್ತನಾಗುವವನು ತನ್ನ ವೃತ್ತಿಯ ಇತಿಹಾಸವನ್ನು, ಅದರ ಮಹತ್ವವನ್ನು, ಅದರ ನೈತಿಕ ನೆಲೆಗಟ್ಟನ್ನು, ವಿವಿಧ ಆಯಾಮಗಳನ್ನು, ಜೊತೆಗೆ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಿದ್ಧಾಂತಗಳನ್ನು ಅರಿತುಕೊಳ್ಳುವುದು ತುಂಬ ಮುಖ್ಯ. ಇದನ್ನು ಪತ್ರಕರ್ತರಾಗಲು ಉತ್ಸುಕರಾದವರು, ಅವರ ಅಧ್ಯಾಪಕರು ಮತ್ತು ವೃತ್ತಿನಿರತರು - ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪತ್ರಕರ್ತ ಮಾಗುತ್ತಾ ಹೋಗಬೇಕು, ಅದರ ಆರಂಭಿಕ ತಯಾರಿಯನ್ನಾದರೂ ಅಧ್ಯಾಪಕ ಮಾಡಿಕಳಿಸಬೇಕು. ಮಾಗಿದವನು ಬಾಗಿಯಾನು.

ಕಾಲೇಜು ಹಂತದಲ್ಲಾಗಲೀ, ವಿಶ್ವವಿದ್ಯಾನಿಲಯ ಹಂತದಲ್ಲಾಗಲೀ ಪತ್ರಿಕೋದ್ಯಮವನ್ನು ಇಂದಿಗೂ ಇತರೆ ಮಾನವಿಕ ವಿಷಯಗಳ ಜತೆಗಿಟ್ಟು ನೋಡುವ ಪರಿಸ್ಥಿತಿಯಿರುವುದೇ ಒಂದು ಸಮಸ್ಯೆ. ಇದರರ್ಥ ಬೇರೆ ವಿಷಯಗಳು ಕಮ್ಮಿ ಎಂದಲ್ಲ; ಪತ್ರಿಕೋದ್ಯಮ ಒಂದು ಕೌಶಲ ಆಧಾರಿತ, ವೃತ್ತಿಪರ ವಿಷಯವಾಗಿರುವುದರಿಂದ ಅದನ್ನು ನೋಡುವ ರೀತಿ ಬೇರೆ ಆಗಬೇಕೆಂದಷ್ಟೇ. ಸಮಾಜಶಾಸ್ತ್ರವನ್ನೋ ಇತಿಹಾಸವನ್ನೋ ಸಾಹಿತ್ಯವನ್ನೋ ಬೋಧಿಸಿದ ಹಾಗೆ ಪತ್ರಿಕೋದ್ಯಮವನ್ನು ಬೋಧಿಸಲಾಗದು. ಬರೀ ಪತ್ರಿಕೋದ್ಯಮ ಪದವಿಯನ್ನಷ್ಟೇ ಹೊಂದಿರುವವರನ್ನು ಅಧ್ಯಾಪಕರನ್ನಾಗಿಯೂ ನೇಮಿಸಲಾಗದು. ಪತ್ರಿಕೋದ್ಯಮಕ್ಕಿರುವ ಬೇಡಿಕೆಯನ್ನು ಕಂಡು ಅನೇಕ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಪತ್ರಿಕೋದ್ಯಮವನ್ನು ಒಂದು ಅಧ್ಯಯನದ ವಿಷಯವನ್ನಾಗಿ ಹೊಂದಲು ಆಸಕ್ತಿಯನ್ನೇನೋ ತೋರಿಸುತ್ತವೆ; ಆದರೆ ಅದರ ಬೋಧನೆಗೆ ಅವಶ್ಯಕವಿರುವ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಬಹುತೇಕರಿಗೆ ಅಂತಹ ಆಸಕ್ತಿ ಇದ್ದಂತಿಲ್ಲ. ಒಂದೇ ಒಂದು ಕಂಪ್ಯೂಟರ್, ಒಂದಾದರೂ ಕ್ಯಾಮರಾ ಇಲ್ಲದ ಪತ್ರಿಕೋದ್ಯಮ ವಿಭಾಗಗಳನ್ನು ಹೊಂದಿರುವ ಸಾಕಷ್ಟು ಕಾಲೇಜುಗಳು ಕರ್ನಾಟಕದಲ್ಲೇ ಸಿಗುತ್ತವೆ. ಈಚಿನ ವರ್ಷಗಳಲ್ಲಿ ಸಾಕಷ್ಟು ಖಾಸಗಿ ಮಾಧ್ಯಮ ಶಿಕ್ಷಣ ಸಂಸ್ಥೆಗಳೇನೋ ಹುಟ್ಟಿಕೊಳ್ಳುತ್ತಿವೆ, ಆದರೆ ಅವರು ಲಕ್ಷಗಳಲ್ಲಿ ನಿರೀಕ್ಷಿಸುವ ಶುಲ್ಕವನ್ನು ನಮ್ಮ ಗ್ರಾಮಭಾರತದ ಉತ್ಸಾಹಿಗಳು ಊಹಿಸುವಂತೆಯೂ ಇಲ್ಲ.

ಮೆಡಿಕಲ್, ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸುಗಳನ್ನು ನಿಯಂತ್ರಿಸಲು ರಾಷ್ಟ್ರಮಟ್ಟದಲ್ಲಿ ಶಾಸನಬದ್ಧ ಸಂಸ್ಥೆಗಳಿವೆ; ಪತ್ರಿಕೋದ್ಯಮ ಅಥವಾ ಮಾಧ್ಯಮ ಶಿಕ್ಷಣದ ಒಟ್ಟು ಅಭಿವೃದ್ಧಿ-ನಿಯಂತ್ರಣಕ್ಕೂ ಈ ಬಗೆಯ ಒಂದು ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ನಮ್ಮ ಸರ್ಕಾರ ಏಕೆ ಯೋಚಿಸಬಾರದು? ಒಂದು ಪತ್ರಿಕೋದ್ಯಮ ವಿಭಾಗ ತೆರೆಯಬೇಕಾದರೆ ಇಂತಿಷ್ಟು ಸೌಲಭ್ಯಗಳು ಇರಲೇಬೇಕು, ಒಬ್ಬ ಪತ್ರಿಕೋದ್ಯಮ ಅಧ್ಯಾಪಕನಿಗೆ ಇಂತಿಷ್ಟು ವರ್ಷಗಳ ಪ್ರಾಯೋಗಿಕ ಅನುಭವ ಇರಲೇಬೇಕು, ಆತ ಇಂತಿಷ್ಟು ವರ್ಷಗಳಿಗೊಮ್ಮೆ ಪತ್ರಿಕಾಲಯದಲ್ಲೋ ಟಿವಿ ಚಾನೆಲ್‌ಗಳಲ್ಲೋ ಒಂದಷ್ಟು ದಿನ ಕೆಲಸ ಮಾಡಿ ತನ್ನನ್ನು ತಾನು ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎಂಬ ನಿಯಮಗಳನ್ನು ಈ ಸಂಸ್ಥೆ ಏಕೆ ರೂಪಿಸಬಾರದು?

ಈ ನಿಟ್ಟಿನಲ್ಲಿ ಏನಾದರೂ ಪ್ರಗತಿ ನಿರೀಕ್ಷಿಸೋಣವೇ?

ಬುಧವಾರ, ಸೆಪ್ಟೆಂಬರ್ 5, 2012

ಸೈಬರ್ ಸಮರದ ಕರಿನೆರಳಲ್ಲಿ ಭಾರತ


ಮಾಧ್ಯಮಶೋಧ-24, ಹೊಸದಿಗಂತ, 30-08-2012

ವಿಲಿಯಂ ಗಿಬ್ಸನ್, ಜಾನ್ ಫೋರ್ಡ್ ಮೊದಲಾದವರು ಎಂಭತ್ತರ ದಶಕದಲ್ಲಿ ಸೈಬರ್ ಸ್ಪೇಸ್, ಸೈಬರ್ ಅಟ್ಯಾಕ್, ಸೈಬರ್ ವಾರ್ ಎಂದೆಲ್ಲ ವೈಜ್ಞಾನಿಕ ಕಥೆ-ಕಾದಂಬರಿಗಳನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಿದ್ದರೆ ಜನ ಅವುಗಳನ್ನು ಬಾಯಿ ಚಪ್ಪರಿಸಿಕೊಂಡು ಓದುತ್ತ ಹೀಗೂ ಉಂಟೆ ಎಂದು ವಿಸ್ಮಯಪಡುತ್ತಿದ್ದುದುಂಟು. ಮೂವತ್ತು ವರ್ಷಗಳ ನಂತರ ಈ ಥ್ರಿಲ್ಲರ್‌ಗಳು ತಮ್ಮ ಕಣ್ಣೆದುರೇ ಸಂಭವಿಸಬಹುದೆಂದು ಅವರು ಬಹುಶಃ ಕನಸಿನಲ್ಲೂ ಭಾವಿಸಿರಲಿಕ್ಕಿಲ್ಲ. ಅಂದಿನ ಕಲ್ಪನೆ, ಕಟ್ಟುಕಥೆಗಳು ಇಂದು ಜಾಗತಿಕ ಆತಂಕಗಳಾಗಿ ನಮ್ಮೆದುರು ಧುತ್ತೆಂದು ವಕ್ಕರಿಸಿರುವುದು ಸಂಪರ್ಕಮಾಧ್ಯಮಗಳ ಕ್ರಾಂತಿಯೋ ಆಧುನಿಕತೆಯ ವಿಪರ್ಯಾಸವೋ ಅರ್ಥವಾಗುವುದಿಲ್ಲ.

ಅದೆಲ್ಲೋ ಈ-ಮೇಲ್ ಹ್ಯಾಕಿಂಗ್ ಮಾಡಿದ್ದಾರಂತೆ, ಇನ್ಯಾರದೋ ಕಂಪ್ಯೂಟರ್‌ನಲ್ಲಿರುವ ಫೈಲ್‌ಗಳನ್ನು ವೈರಸ್‌ಗಳು ತಿಂದುಹಾಕಿವೆಯಂತೆ, ಮತ್ಯಾರದೋ ಬ್ಯಾಂಕ್ ಅಕೌಂಟ್‌ನಲ್ಲಿರುವ ಲಕ್ಷಾಂತರ ರೂಪಾಯಿ ಹಣವನ್ನು ಇನ್ಯಾರೋ ಆನ್‌ಲೈನಲ್ಲೇ ಎಗರಿಸಿದ್ದಾರಂತೆ ಎಂಬಿತ್ಯಾದಿ ಸುದ್ದಿಗಳನ್ನು ಆಗೊಮ್ಮೆ ಈಗೊಮ್ಮೆ ಓದುತ್ತಾ ಅದೇನೆಂದು ಅರ್ಥವಾಗದೆ ತಲೆಕೊಡವಿಕೊಂಡವರು ಈಗ ಇವೆಲ್ಲ ನಮಗೂ ಸಂಭವಿಸಿಬಿಡಬಹುದೇ ಎಂದು ಚಿಂತಾಕ್ರಾಂತರಾಗುವ ಕಾಲ ಎದುರಾಗಿದೆ. ಇಡೀ ಜಗತ್ತನ್ನು ಸೈಬರ್ ಲೋಕದ ಸಂಭವನೀಯ ವಿಪತ್ತಿನ ಕರಿಛಾಯೆ ಆವರಿಸಿಕೊಂಡಿದೆ.

ದೇಶವನ್ನು ಚಿಂತೆಗೀಡು ಮಾಡಿದ ಈಚಿನ ಅಸ್ಸಾಂ ಹಿಂಸಾಚಾರ ಮತ್ತು ಅದರ ಮುಂದುವರಿದ ಭಾಗವೆಂಬಂತೆ ನಡೆದ ಸಾಮಾಜಿಕ ಸಾಮರಸ್ಯವನ್ನು ಕದಡುವ ದೇಶವ್ಯಾಪಿ ಹುನ್ನಾರಗಳು ಸೈಬರ್ ಮಾಯಾವಿ ಸೃಷ್ಟಿಸಬಹುದಾದ ದುರಂತಗಳನ್ನು ದೇಶಕ್ಕೆ ಮನದಟ್ಟು ಮಾಡಿವೆ; ಅಂತರ್ಜಾಲ, ಸಾಮಾಜಿಕ ಜಾಲತಾಣ, ಮೊಬೈಲ್ ದೂರವಾಣಿ ಮೊದಲಾದ ಆಧುನಿಕ ಸಂವಹನದ ಮಾಧ್ಯಮಗಳು ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡುವ ಜೊತೆಗೆ ಎಂತೆಂತಹ ವಿಪತ್ತುಗಳನ್ನು ತಂದೊಡ್ಡಬಹುದು ಎಂಬುದರ ಬಗೆಗೂ ಗಂಭೀರವಾಗಿ ಯೋಚಿಸುವಂತೆ ಮಾಡಿವೆ.

ಅನೇಕ ಅಭಿವೃದ್ಧಿಶೀಲ ದೇಶಗಳಂತೆಯೇ ನಾವೂ ಕೂಡ ಇಂಟರ್ನೆಟ್ ವಿಷಯದಲ್ಲಿ ಅಷ್ಟೊಂದು ವೇಗವಾಗಿಯೇನೂ ಇರಲಿಲ್ಲ. ಸಹಜವಾಗಿಯೇ ಅದರ ಭದ್ರತೆಯ ಬಗೆಗಿನ ನಮ್ಮ ಗಮನವೂ ಸಾಧಾರಣವಾಗಿಯೇ ಇತ್ತು. ಅಮೇರಿಕ, ಚೀನಾದಂತಹ ದೇಶಗಳು ತಮ್ಮ ದೇಶದ ಗಡಿಗಳನ್ನು ಕಾಯುವುದಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಅಂತರ್ಜಾಲದ ಗೋಡೆಗಳನ್ನು ರಕ್ಷಿಸುವುದಕ್ಕೆ ಕೊಡುತ್ತಿದ್ದರೂ ನಾವು ನಿಧಾನವಾಗಿ ಕಣ್ಣುತೆರೆದುಕೊಳ್ಳುತ್ತಿದ್ದೆವು. ಹ್ಯಾಕಿಂಗ್, ರಹಸ್ಯ ಮಾಹಿತಿ ಕಳವು ಇತ್ಯಾದಿ ಅಪಾಯಗಳ ಬಗೆಗಷ್ಟೇ ಎಚ್ಚರವಾಗಿದ್ದ ಸರ್ಕಾರ ಡೇವಿಡ್ ಹೆಡ್ಲಿಯಂತಹ ಪಾತಕಿಗಳು ಸಾವಿರಾರು ಮೈಲಿ ದೂರದಲ್ಲಿ ಕುಳಿತು ಇಂಟರ್ನೆಟ್ ಮೂಲಕವೇ ಹತ್ಯಾಕಾಂಡಗಳ ನಿರ್ದೇಶನ ಮಾಡುತ್ತಿದ್ದುದು ಅರಿವಿಗೆ ಬಂದಾಗ, ಭಯೋತ್ಪಾದಕ ಸಂಘಟನೆಗಳು ಯಾವುದೋ ದೇಶದಲ್ಲಿ ನೆಲೆಯೂರಿಕೊಂಡು ಜಾಲತಾಣಗಳ ನೆರವಿನಿಂದ ತಮ್ಮ ಸೈನ್ಯಕ್ಕೆ ಇನ್ನಷ್ಟು ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದುದು ಗೊತ್ತಾದಾಗ ಮಾತ್ರ ಬೆಚ್ಚಿಬಿದ್ದಿತ್ತು. ಅದರಲ್ಲೂ ಭಯೋತ್ಪಾದಕ ಸಂಘಟನೆಗಳು ಇಂಟರ್ನೆಟ್‌ನ್ನು ಬಳಸಿಕೊಂಡು ವದಂತಿಗಳನ್ನು ಹಬ್ಬಿಸಿ ದೇಶದ ಏಕತೆ ಹಾಗೂ ಧಾರ್ಮಿಕ ಸಾಮರಸ್ಯವನ್ನೇ ಕದಡಿಸಿ ಬುಡಮೇಲು ಕೃತ್ಯಗಳನ್ನು ಎಸಗುವ ಪ್ರಯತ್ನಗಳನ್ನು ನಡೆಸಿದಾಗ ನಾವು ನಿಜವಾಗಿಯೂ ಒಂದು ಸೈಬರ್ ಸಮರದ ಹೊಸಿಲಲ್ಲಿ ನಿಂತಿದ್ದೇವೆಯೇ ಎಂಬ ಆತಂಕ ಸರ್ಕಾರದ ನಿದ್ದೆಗೆಡಿಸಿಬಿಟ್ಟಿದೆ. ಇದು ಕೇವಲ ಸರ್ಕಾರದ ಆತಂಕ ಮಾತ್ರ ಅಲ್ಲ, ದೇಶದ ಒಬ್ಬೊಬ್ಬ ಪ್ರಜೆಯ ತಲ್ಲಣ ಎಂಬುದೇ ಗಮನಿಸಬೇಕಾದ ವಿಷಯ.

ಅಂತಾರಾಷ್ಟ್ರೀಯ ಸಂಬಂಧಗಳ ಪರಿಣಿತ ಜೋಸೆಫ್ ನೀ ಎಂಬವರನ್ನು ಉಲ್ಲೇಖಿಸುತ್ತಾ ಮಾಜಿ ವಿದೇಶಾಂಗ ಸಚಿವ ಶಶಿ ತರೂರ್ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಸೈಬರ್ ಲೋಕದ ನಾಲ್ಕು ಬಗೆಯ ಅಪಾಯಗಳನ್ನು ಪಟ್ಟಿ ಮಾಡಿದ್ದಾರೆ. ಒಂದು, ಸೈಬರ್ ಯುದ್ಧ. ಅಂದರೆ ಒಂದು ದೇಶ ಇನ್ನೊಂದು ದೇಶದ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸಂಪರ್ಕ ಜಾಲವನ್ನು ಅನಧಿಕೃತವಾಗಿ ಹತೋಟಿಗೆ ತೆಗೆದುಕೊಂಡು ಅದನ್ನು ಹಾಳುಗೆಡಹುವ ಮೂಲಕ ಆ ದೇಶದ ಸಮಸ್ತ ಚಟುವಟಿಕೆಗಳನ್ನು ಬುಡಮೇಲು ಮಾಡುವುದು. ಎರಡನೆಯದು, ಸೈಬರ್ ಕಳ್ಳತನ. ಅಂದರೆ ಕಂಪ್ಯೂಟರ್ ತಂತ್ರಜ್ಞಾನ ಬಳಸಿಕೊಂಡು ವಿವಿಧ ಸಂಸ್ಥೆ ಅಥವಾ ಸರ್ಕಾರಗಳ ರಹಸ್ಯ ಮಾಹಿತಿಗಳನ್ನು ಕಳವು ಮಾಡಿ ಅದನ್ನು ವಿನಾಶಕಾರಿ ಕೃತ್ಯಗಳಿಗೆ ಬಳಸಿಕೊಳ್ಳುವುದು. ಮೂರನೆಯದು, ಸೈಬರ್ ಕ್ರೈಂ. ಅಂದರೆ ಈ -ಮೇಲ್ ಹ್ಯಾಕಿಂಗ್ ಮಾಡುವುದು, ವೈರಸ್‌ಗಳನ್ನು ಛೂಬಿಡುವುದು, ಅಂತರ್ಜಾಲದ ಮೂಲಕ ವಂಚಿಸುವುದು, ಬೇಹುಗಾರಿಕೆ ನಡೆಸುವುದು, ವೇಶ್ಯಾವಾಟಿಕೆ, ಜೂಜು, ಕಳ್ಳಸಾಗಣೆ ಮುಂತಾದವುಗಳನ್ನು ಪ್ರೇರೇಪಿಸುವುದು, ಮಾನಹಾನಿ ಎಸಗುವುದು ಇತ್ಯಾದಿ. ನಾಲ್ಕನೆಯದು, ಸೈಬರ್ ಭಯೋತ್ಪಾದನೆ. ಅಂದರೆ ಭಯೋತ್ಪಾದಕ ಯೋಜನೆಗಳನ್ನು ಮತ್ತು ದಾಳಿಗಳನ್ನು ಇಂಟರ್ನೆಟ್ ಮೂಲಕ ಕಾರ್ಯಾಚರಣೆಗೆ ತರುವುದು, ತಮ್ಮದೇ ಸಿದ್ಧಾಂತಗಳನ್ನು ವಿವಿಧ ಜಾಲತಾಣಗಳ ಮೂಲಕ ಪ್ರಚಾರ ಮಾಡುವುದು, ತಮ್ಮ ಸಂಘಟನೆಗಳಿಗೆ ಹೆಚ್ಚುಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳುವುದು ಇತ್ಯಾದಿ.

ಒಂದು ಬಾಂಬ್ ದಾಳಿಯ ಮೂಲಕ ಒಂದು ದೇಶ ತನ್ನ ಶತ್ರು ದೇಶದ ನಿರ್ದಿಷ್ಟ ಭಾಗವನ್ನಷ್ಟೇ ನಾಶಮಾಡಬಹುದು; ಆದರೆ ಸೈಬರ್ ದಾಳಿಯ ಮೂಲಕ ಒಂದು ದೇಶ ಇನ್ನೊಂದು ದೇಶದ ಸಮಸ್ತ ನರನಾಡಿಗಳನ್ನೇ ನಿಷ್ಕ್ರಿಯಗೊಳಿಸಿಬಿಡಬಹುದು. ಒಂದು ದೇಶ ತನ್ನ ರಕ್ಷಣೆಗೆ ಕ್ಷಿಪಣಿಗಳನ್ನು, ಬಾಂಬುಗಳನ್ನೇನೋ ತಯಾರಿಸಿ ಗುಡ್ಡೆಹಾಕಬಹುದು, ಆದರೆ ಅವುಗಳ ಕಾರ್ಯಾಚರಣೆಗೆ ಬಳಸುವ ತಂತ್ರಜ್ಞಾನ, ಸಾಫ್ಟ್‌ವೇರ್‌ಗಳನ್ನೇ ಶತ್ರು ದೇಶ ನಾಶ ಮಾಡಿಬಿಟ್ಟರೆ ಈ ಕ್ಷಿಪಣಿಗಳ, ಬಾಂಬುಗಳ ಗತಿಯೇನಾಗಬೇಕು! ಒಂದು ದೇಶದ ಭದ್ರತಾ ವ್ಯವಸ್ಥೆಯಿಂದ ತೊಡಗಿ ಹಣಕಾಸು ವ್ಯವಹಾರಗಳವರೆಗೆ, ಆಡಳಿತದಿಂದತೊಡಗಿ ಸಾರಿಗೆ ಸಂಪರ್ಕದವರೆಗೆ ಎಲ್ಲವೂ ಕಂಪ್ಯೂಟರ್ ಜಾಲ ಅಥವಾ ವರ್ಲ್ಡ್ ವೈಡ್ ವೆಬ್ ಅಂಬ ಮಹಾಮಾಯೆಯ ಕೃಪೆಯಿಂದಲೇ ನಡೆಯುತ್ತಿರಬೇಕಾದರೆ ಈ ವ್ಯವಸ್ಥೆಯಲ್ಲಿ ಉಂಟಾಗುವ ಸಣ್ಣಸಣ್ಣ ಲೋಪಗಳೂ ದೊಡ್ಡದೊಡ್ದ ಪ್ರಮಾದಗಳಿಗೆ ಕಾರಣವಾಗುತ್ತವೆ. ಅದರಲ್ಲೂ ವೈರಿರಾಷ್ಟ್ರಗಳು ಅಥವಾ ಭಯೋತ್ಪಾದಕ ಸಂಘಟನೆಗಳೇ ನಮ್ಮ ಕಂಪ್ಯೂಟರ್ ಜಾಲದೊಳಕ್ಕೆ ಲಗ್ಗೆಯಿಟ್ಟುಬಿಟ್ಟರೆ ಎಲ್ಲ ನಿಯಂತ್ರಣವೂ ನಮ್ಮ ಕೈತಪ್ಪಿಹೋದಂತೆ. ಕಂಪ್ಯೂಟರ್-ಇಂಟರ್ನೆಟ್‌ನ್ನು ಬಳಸದ ಇಲಾಖೆ, ಸಂಸ್ಥೆಗಳೇ ಇಲ್ಲ ಎಂದಾದಮೇಲೆ ಬಾಹ್ಯಶಕ್ತಿಗಳು ಒಮ್ಮೆ ಇವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ದೇಶದ ಸಮಸ್ತ ಚಟುವಟಿಕೆಗಳೂ ನಿಷ್ಕ್ರಿಯವಾದಂತೆ. ಹೀಗಾಗಿ ಕ್ಷಿಪಣಿ ಬಾಂಬುಗಳ ಯುದ್ಧಕ್ಕಿಂತಲೂ ಈ ಸೈಬರ್ ಯುದ್ಧವೇ ಹೆಚ್ಚು ಅಪಾಯಕಾರಿ. ಸರ್ಕಾರಗಳು ಇನ್ನೂ ದೇಶದ ಭೌತಿಕ ಗಡಿಗಳನ್ನು ಕಾಯುವ ಬಗೆಗೇ ತಲೆಕೆಡಿಸಿಕೊಂಡಿದ್ದರೆ ಭಯೋತ್ಪಾದಕ ಸಂಘಟನೆಗಳು, ದುಷ್ಕರ್ಮಿಗಳು ಮಾತ್ರ ಇವರಿಗಿಂತ ನೂರು ಸಾವಿರ ಮೈಲಿ ವೇಗದಲ್ಲಿ ಸಾಗಿ ಕಣ್ಣಿಗೆ ಕಾಣದ ಸೈಬರ್ ಲೋಕದ ಸೀಮೆಗಳನ್ನು ಬೇಧಿಸಿ ತಮಾಷೆ ನೋಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಅಸ್ಸಾಂ ಗಲಭೆ, ಕರ್ನಾಟಕ-ತಮಿಳುನಾಡು ರಾಜ್ಯಗಳಿಂದ ನಡೆದ ಈಶಾನ್ಯ ಭಾಗದ ಜನರ ವಲಸೆ, ದೇಶಾದ್ಯಂತ ಹಬ್ಬಿದ ಕೋಮುಭಾವನೆ ಕೆರಳಿಸುವ ಸಂದೇಶಗಳು ಇತ್ಯಾದಿ ಘಟನೆಗಳ ಹಿನ್ನೆಲೆಯಲ್ಲಿ ಸಂಭವನೀಯ ಸೈಬರ್ ದಾಳಿಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿದೆ. ತಿರುಚಿದ ಸಂದೇಶಗಳನ್ನು ಹೊಂದಿರುವ ಮತ್ತು ಹಿಂಸಾಚಾರವನ್ನು ಪ್ರೇರೇಪಿಸುವ 300ಕ್ಕೂ ಅಧಿಕ ವೆಬ್‌ಸೈಟ್‌ಗಳನ್ನು ಸರ್ಕಾರ ಈಗಾಗಲೇ ನಿರ್ಬಂಧಿಸಿದೆ, 90ಕ್ಕೂ ಹೆಚ್ಚು ಜಾಲತಾಣಗಳನ್ನು ನಿಷೇಧಿಸಿದೆ. ಪ್ರಧಾನಿ ಕಾರ್ಯಾಲಯದ ಹೆಸರಿನಲ್ಲಿದ್ದ ಆರು ಖೋಟಾ ಟ್ವಿಟರ್ ಖಾತೆಗಳನ್ನು ತೆಗೆದುಹಾಕಿದೆ.

ಸರ್ಕಾರದ ಈ ಬಗೆಯ ಕ್ರಮಗಳು ಟೀಕೆಗೂ ಗುರಿಯಾಗಿವೆ. ನೆಗಡಿಯಾಯಿತೆಂದು ಮೂಗನ್ನೇ ಕತ್ತರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆಯಲ್ಲ ಎಂಬ ಆರೋಪ ಕೇಳಿಬಂದಿದೆ. ವೆಬ್‌ಸೈಟುಗಳನ್ನು, ಬ್ಲಾಗ್‌ಗಳನ್ನು, ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಮೂಲಕ ಸರ್ಕಾರ ಜನರ ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ತರುತ್ತಿದೆ ಎಂಬ ಚರ್ಚೆಯೂ ಜೀವಂತವಾಗಿದೆ. ’ವದಂತಿ ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳನ್ನು ಶಾಶ್ವತವಾಗಿ ಕೊನೆಗಾಣಿಸುವುದಕ್ಕೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆಯೇ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕಲ್ಲ’ ಎಂಬ ಸಮರ್ಥನೆ ಸರ್ಕಾರದಿಂದ ಹೊರಬಿದ್ದರೂ, ಅನಪೇಕ್ಷಿತ ವಿಚಾರಗಳನ್ನು ನಿಯಂತ್ರಿಸುವ, ನಿಷೇಧಿಸುವ ಅವಕಾಶವನ್ನು ಬಳಸಿಕೊಂಡು ಸರ್ಕಾರ ತನಗಾಗದವರ ಮೇಲೆ ಸೆನ್ಸಾರ್ ಹೇರಿ ದ್ವೇಷ ಸಾಧಿಸುತ್ತಿದೆ ಎಂಬ ಆರೋಪ ಹಾಗೆಯೇ ಉಳಿದುಕೊಂಡಿದೆ.

ಇನ್ನೊಂದೆಡೆ ಈ ಬಗೆಯ ಸೈಬರ್ ದಾಳಿಗಳನ್ನು ನಿರ್ವಹಿಸುವುದಕ್ಕೆ ಅಥವಾ ತಡೆಗಟ್ಟುವುದಕ್ಕೆ ಭಾರತದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ ಎಂಬ ಟೀಕೆಯೂ ಇದೆ. ಅಮೇರಿಕ ಅಥವಾ ಚೀನಾ ಮಾಡಿಕೊಂಡಷ್ಟು ಸೈಬರ್ ಭದ್ರತಾ ವ್ಯವಸ್ಥೆಗಳು ನಮ್ಮ ಸೇನಾವ್ಯಾಪ್ತಿಯಲ್ಲಿ ಇಲ್ಲ, ಮತ್ತು ಸೈಬರ್ ಅಪರಾಧಗಳನ್ನು ಶಿಕ್ಷಿಸುವ ಸಾಕಷ್ಟು ಕಾನೂನುಗಳೂ ನಮ್ಮಲ್ಲಿ ಇಲ್ಲ ಎಂಬ ಅಭಿಪ್ರಾಯ ಇದೆ. ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಗೃಹಸಚಿವಾಲಯ, ಮಾಹಿತಿ ತಂತ್ರಜ್ಞಾನ ಇಲಾಖೆ ಮೊದಲಾದ 10-12 ಸಂಸ್ಥೆಗಳು ಸಕ್ರಿಯವಾಗಿದ್ದರೂ, ಅದನ್ನೊಂದನ್ನೇ ಗಮನಿಸುವ ಒಂದು ಪ್ರತ್ಯೇಕ ಸಶಕ್ತ ಪಡೆಯ ಅವಶ್ಯಕತೆಯಿದೆ ಎಂಬ ಮಾತು ತಳ್ಳಿಹಾಕುವಂತಹದ್ದಲ್ಲ. ಅಲ್ಲದೆ ಈಗ ಚಾಲ್ತಿಯಲ್ಲಿರುವ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಹೊರತಾಗಿ ಸೈಬರ್ ದುಷ್ಕೃತ್ಯಗಳನ್ನು ಶಿಕ್ಷಿಸುವ ಪ್ರತ್ಯೇಕವಾದ ವಿಶೇಷ ಕಾನೂನೊಂದನ್ನು ರೂಪಿಸಬೇಕಾಗಿದೆ ಎಂಬ ಬಗೆಗೂ ಗಂಭೀರ ಚಿಂತನೆ ನಡೆಸಬೇಕಿದೆ.

ಶನಿವಾರ, ಜೂನ್ 30, 2012

170ರ ಹೊಸಿಲಲ್ಲಿ ಕನ್ನಡ ಪತ್ರಿಕೋದ್ಯಮ: ಸುನಾಮಿಯಾಗದಿರಲಿ ಬದಲಾವಣೆಯ ಅಲೆ

ಮಾಧ್ಯಮಶೋಧ-21, ಹೊಸದಿಗಂತ 28 ಜೂನ್ 2012

ಮಂಗಳೂರ ಸಮಾಚಾರ -
ಕನ್ನಡದ ಮೊದಲ ಪತ್ರಿಕೆಯ ಒಂದು ಪ್ರತಿ.
 
'....ಈಚೆಗೆ ಕೆಲವು ಪತ್ರಿಕೆಗಳಲ್ಲಿ ಭಾವಚಿತ್ರಗಳೂ ಬರುತ್ತಿವೆ. ನಮ್ಮ ದೇಶದ ಭಾರೀ ಇಂಗ್ಲಿಷ್ ಪತ್ರಿಕೆಗಳಲ್ಲಿ ಬರುವ ಭಾವಚಿತ್ರಗಳೇ ತೆನಾಲಿ ರಾಮಕೃಷ್ಣನ ಚಿತ್ರಗಳಂತೆಯೂ, 'ಪಂಚ್' ಮೊದಲಾದ ಪ್ರಸಿದ್ಧ ಇಂಗ್ಲಿಷ್ ಹಾಸ್ಯಪತ್ರಿಕೆಗಳಲ್ಲಿರುವ ಅಣಕುಚಿತ್ರಗಳಿಗೆ ಪ್ರತಿಯಾದ ವಿಕಾರಗಳಂತೆಯೂ ಇರುವಲ್ಲಿ, ಕನ್ನಡ ಪತ್ರಿಕೆಗಳ ಚಿತ್ರವೈಭವವನ್ನು ವರ್ಣನೆ ಮಾಡುವುದು ಅನವಶ್ಯಕ. ಒಂದು ವೇಳೆ ಈ ಚಿತ್ರಗಳನ್ನು ನೋಡಿದರೆ ಚಿತ್ರಿತರಾದವರಿಗೂ ಅವರ ಬಂಧುಮಿತ್ರರಿಗೂ ನಗು ಬಂದೀತೋ ಅಳು ಬಂದೀತೋ ಊಹಿಸುವುದು ಕಷ್ಟ. ಚಿತ್ರಗಳನ್ನು ಅಚ್ಚು ಮಾಡುವುದು ವೆಚ್ಚದ ಕೆಲಸ. ನುಣುಪಿನ ಕಾಗದ, ಒಳ್ಳೆಯ ಮಶಿ, ಚೊಕ್ಕಟವಾದ ಪಡಿಯಚ್ಚು, ನಯವಾದ ಯಂತ್ರ, ನಾಜೂಕಾದ ಕೈಗಾರಿಕೆ- ಇವುಗಳಲ್ಲಿ ಯಾವುದಿಲ್ಲದಿದ್ದರೂ ಚಿತ್ರವು ಅಂದವಾಗುವುದಿಲ್ಲ. ಈಚೆಗೆ ಬೆಂಗಳೂರಿನ ಒಂದೆರಡು ಪತ್ರಿಕೆಗಳವರು ಪ್ರಕಟಿಸಿರುವ ಭಾವಚಿತ್ರಭರಿತಗಳಾದ ವಿಶೇಷ ಸಂಚಿಕೆಗಳು ಅಂದವಾಗಿವೆ...’

ಅರೆ! ಯಾವ ಕಾಲದ ಪತ್ರಿಕೋದ್ಯಮದ ಬಗ್ಗೆ ಓದುತ್ತಿದ್ದೇವೆ ಎಂದು ಯಾರಿಗಾದರೂ ಸೋಜಿಗವೆನಿಸದಿರದು. ಈ ಮಾಹಿತಿಸ್ಫೋಟದ ಯುಗದಲ್ಲಿ ಹುಟ್ಟಿ ಬೆಳೆಯುತ್ತಿರುವವರಿಗಂತೂ 'ಈಚೆಗೆ ಕೆಲವು ಪತ್ರಿಕೆಗಳಲ್ಲಿ ಭಾವಚಿತ್ರಗಳೂ ಬರುತ್ತಿವೆ’ ಎಂಬಂತಹ ಮಾತುಗಳು ಶುದ್ಧ ತಮಾಷೆಯಂತೆ ಕಂಡರೂ ಅಚ್ಚರಿಯಿಲ್ಲ. ಈ ಅಚ್ಚರಿ-ಅನುಮಾನ ನಿಜ. ೧೯೨೮ರ ಜುಲೈ ೩೧ರಂದು ಬಾಗಲಕೋಟೆಯಲ್ಲಿ ನಡೆದ ಅಖಿಲ ಕರ್ನಾಟಕ ಪತ್ರಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷಸ್ಥಾನದಿಂದ ಪತ್ರಿಕಾಭೀಷ್ಮ ಡಿವಿಜಿಯವರು ಮಾಡಿದ ಭಾಷಣದ ಕೆಲವು ಸಾಲುಗಳಿವು. ಅವರ ಮಾತಿನಲ್ಲಿ ದಾಖಲಾಗಿರುವ ಕಾಲವನ್ನೂ ನಾವೀಗ ಬದುಕುತ್ತಿರುವ ಮಾಧ್ಯಮಕ್ರಾಂತಿಯ ದಿನಗಳನ್ನೂ ಹೋಲಿಸಿ ನೋಡಿದರೆ ಕಳೆದ ಶತಮಾನದುದ್ದಕ್ಕೂ ನಮ್ಮ ಕನ್ನಡ ಪತ್ರಿಕೋದ್ಯಮ ಎಂತೆಂತಹ ಮಜಲುಗಳನ್ನು ದಾಟಿಬಂದಿದೆ ಎಂಬುದು ಒಂದು ಇಂದ್ರಜಾಲದಂತೆ, ಒಂದು ಅಪ್ಪಟ ವಿಸ್ಮಯದಂತೆ ಭಾಸವಾಗುತ್ತದೆ.

ಹೌದು, ಜಾಗತಿಕ ಪತ್ರಿಕೋದ್ಯಮ ಇಂದು ಯಾವೆಲ್ಲ ಸ್ಥಿತ್ಯಂತರಗಳ ನಡುವೆ ನಿಂತಿದೆಯೋ ಆ ಎಲ್ಲ ಸ್ಥಿತ್ಯಂತರಗಳಿಗೆ ಕನ್ನಡ ಪತ್ರಿಕೋದ್ಯಮವೂ ಸಾಕ್ಷಿಯಾಗಿದೆ. ಇದೊಂದು ನಿರಂತರ ಪ್ರವಾಹ. ನೀರು ಮಡುಗಟ್ಟಿ ಪಾಚಿ ಬೆಳೆಯುವ ಮಾತು ಹಾಗಿರಲಿ, ನೆರೆಯ ವಿರುದ್ಧ ಈಜಬಲ್ಲ ಗಟ್ಟಿಕುಳಗಳು ಮಾತ್ರ ಬದುಕುವ ಮಹಾನದಿ ಇದೆಂದು ಪತ್ರಿಕೋದ್ಯಮದ ಈವರೆಗಿನ ಸಾವಿರಾರು ಪ್ರಯೋಗಗಳು ಮನದಟ್ಟು ಮಾಡಿವೆ. ಕನ್ನಡ ಪತ್ರಿಕೋದ್ಯಮವೇ ಏಕೆ, ಭಾರತೀಯ ಪತ್ರಿಕೋದ್ಯಮವೂ ಸೇರಿದಂತೆ ಜಗತ್ತಿನ ಯಾವುದೇ ಭಾಗದ ಪತ್ರಿಕೋದ್ಯಮದ ಇತಿಹಾಸವೂ ಸಂಘರ್ಷಮಯವಾದದ್ದೇ. ಬಹುತೇಕ ಎಲ್ಲ ದೇಶಗಳ ಪತ್ರಿಕಾ ಇತಿಹಾಸಗಳೂ ಪತ್ರಿಕಾ ಸ್ವಾತಂತ್ರ್ಯಕ್ಕಾಗಿನ ಹೋರಾಟದ ಇತಿಹಾಸಗಳೆಂದೇ ಪ್ರಸಿದ್ಧವಾದವು.

ಬದಲಾವಣೆ ಪತ್ರಿಕೋದ್ಯಮದ ಅಂತಃಸತ್ವ. ತಂತ್ರಜ್ಞಾನದ ದೃಷ್ಟಿಯಿಂದ, ಪತ್ರಿಕೆಗಳ ಹೂರಣ, ಪ್ರಸ್ತುತಿ, ಪ್ರಸರಣೆಯ ದೃಷ್ಟಿಯಿಂದ ಕಾಲದಿಂದ ಕಾಲಕ್ಕೆ ಪತ್ರಿಕೋದ್ಯಮದಲ್ಲಿ ಅಸಂಖ್ಯ ಬದಲಾವಣೆಗಳಾಗುತ್ತ ಹೋದವು. ಆದರೆ ಪತ್ರಿಕಾವೃತ್ತಿ-ಪತ್ರಿಕೋದ್ಯೋಗವಾಗಿದ್ದ ಪತ್ರಿಕಾ ಕ್ಷೇತ್ರ ಪತ್ರಿಕೋದ್ಯಮವಾಗಿ ಬದಲಾದದ್ದು ಮಾತ್ರ ತುಂಬ ಹಳೆಯ ಬೆಳವಣಿಗೆಯೇನಲ್ಲ. ಎಂಭತ್ತರ ದಶಕದವರೆಗೂ ಪತ್ರಿಕೋದ್ಯಮ ಒಂದು ಲಾಭಗಳಿಕೆಯ ಉದ್ಯಮವೆಂದು ಯಾರಿಗೂ ಅನಿಸಿರಲೇ ಇಲ್ಲ ಅಥವಾ ಅದನ್ನೊಂದು ಉದ್ಯಮವಾಗಿ ಪರಿಗಣಿಸಲು ಅವರ ತತ್ವಾದರ್ಶಗಳು ಒಪ್ಪಿಗೆ ನೀಡಿರಲಿಲ್ಲ. ಆದರೆ ಯಾವಾಗ ಅವಸಾನದ ಹಾದಿಯಲ್ಲಿದ್ದ ಬೆನೆಟ್ ಅಂಡ್ ಕೋಲ್‌ಮನ್ ಕಂಪೆನಿಯ ಸಾರಥ್ಯವನ್ನು ಸಮೀರ್ ಜೈನ್ ವಹಿಸಿಕೊಂಡರೋ (1986) ಅಲ್ಲಿಂದ ಭಾರತೀಯ ಪತ್ರಿಕೋದ್ಯಮದ ಒಟ್ಟು ಚಿತ್ರಣವೇ ಬದಲಾಯಿತು. ಆಮೇಲಂತೂ ದೂರದರ್ಶನ ಪ್ರವರ್ಧಮಾನಕ್ಕೆ ಬಂದುದು, ಖಾಸಗಿ ಚಾನೆಲ್‌ಗಳ ಪ್ರವೇಶವಾದುದು, ಉದಾರೀಕರಣ-ಖಾಸಗೀಕರಣಗಳ ಗೋಡೆಯಿಲ್ಲದ ಜಗತ್ತಿನಲ್ಲಿ ಜಾಹೀರಾತೆಂಬ ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ಪತ್ರಿಕೆಗಳೂ ಕಂಡು ರೋಮಾಂಚಿತವಾದುದು ಎಲ್ಲವೂ ಎರಡು-ಮೂರು ದಶಕಗಳ ಅತ್ಯಂತ ಕ್ಷಿಪ್ರ ಬೆಳವಣಿಗೆ. 232 ವರ್ಷಗಳ ಭಾರತೀಯ ಪತ್ರಿಕೋದ್ಯಮ ಅಥವಾ 170 ವರ್ಷಗಳ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಇದು ಅತ್ಯಂತ ಸಣ್ಣ ಅವಧಿ.

ತಿರುಮಲೆ ತಾತಾಚಾರ್ಯ ಶರ್ಮ, ಎಂ. ವೆಂಕಟಕೃಷ್ಣಯ್ಯ, ಡಿವಿಜಿ, ಆರ್. ಆರ್. ದಿವಾಕರ್, ಮೊಹರೆ ಹಣಮಂತರಾವ್, ಸಿದ್ಧವನಹಳ್ಳಿ ಕೃಷ್ಣಶರ್ಮ, ಖಾದ್ರಿ ಶಾಮಣ್ಣ, ಟಿ. ಎಸ್. ರಾಮಚಂದ್ರರಾವ್... ಮುಂತಾದ ದಿಗ್ಗಜರನ್ನು ಕಂಡ ಕನ್ನಡ ಪತ್ರಿಕೋದ್ಯಮಕ್ಕಂತೂ ಬದಲಾವಣೆಯ ಗಾಳಿ ಪತ್ರಿಕಾವೃತ್ತಿಯ ಉನ್ನತಿಯ ಗಾಳಿ ಆಯಿತೇ ಹೊರತು ಉದ್ಯಮದ ಗಾಳಿಯಾಗಲಿಲ್ಲ. ಆದರೆ ಜಾಗತೀಕರಣದ ಪ್ರವಾಹದಲ್ಲಿ ದೇಶದ ಅಥವಾ ಜಗತ್ತಿನ ಇತರ ಭಾಗದ ಪತ್ರಿಕೋದ್ಯಮ ಯಾವ ಹಾದಿ ಹಿಡಿಯಿತೋ ಆ ಹಾದಿಯಿಂದ ತಪ್ಪಿಸಿಕೊಳ್ಳುವುದೂ ಕನ್ನಡ ಪತ್ರಿಕೋದ್ಯಮಕ್ಕೆ ಸಾಧ್ಯವಿರಲಿಲ್ಲ.

ಪತ್ರಿಕೆ ಒಂದು 'ಪ್ರಾಡಕ್ಟ್’ ಆಗಿ ಓದುಗ ಒಬ್ಬ 'ಗ್ರಾಹಕ’ ಆದಲ್ಲಿಂದ ಕನ್ನಡ ಪತ್ರಿಕೋದ್ಯಮದ ಗತಿ ಹಾಗೂ ಹಾದಿಗಳೆರಡೂ ಬದಲಾಗಿಬಿಟ್ಟವು. ಆದ್ಯತೆಯೇ ಬದಲಾದ ಮೇಲೆ ಪ್ರಯತ್ನ ಹಾಗೂ ಫಲಿತಾಂಶವೂ ಬದಲಾಗಬೇಕು. ಕಳೆದೊಂದು ದಶಕದಲ್ಲಿ ಅಂದರೆ ಹೊಸ ಸಹಸ್ರಮಾನದ ಈಚಿನ ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ಕಂಡ ಸ್ಥಿತ್ಯಂತರ ನಭೂತೋ ನಭವಿಷ್ಯತಿ ಎಂಬಂತಹದ್ದು. ತಾವು ತಮ್ಮ 'ಕನ್‌ಸ್ಯೂಮರ್’ಗೆ ಮಾರುತ್ತಿರುವ ಪ್ರತಿಯೊಂದು ಸಂಚಿಕೆಯನ್ನೂ 'ಪ್ರಾಡಕ್ಟ್’ ಎಂದು ಪರಿಗಣಿಸಿದ ಮೇಲೆ ಪತ್ರಿಕಾ ಸಂಸ್ಥೆಗಳು ತಮ್ಮ ಅಷ್ಟೂ ವ್ಯವಹಾರವನ್ನೂ 'ಬಿಸಿನೆಸ್ ಮ್ಯಾನೇಜ್‌ಮೆಂಟ್’ನ ಪರಿಭಾಷೆಯಲ್ಲೇ ನಡೆಸಿಕೊಂಡು ಹೋಗಬೇಕಾಗುತ್ತದೆ. ಹೀಗಾಗಿ ಬೇರೆ ಯಾವುದೇ ವ್ಯವಹಾರದ ಸಂಸ್ಥೆ ಬಳಸುವ ಮಾರ್ಕೆಟಿಂಗ್, ಪ್ರೊಮೋಶನ್, ಪ್ಯಾಕೇಜಿಂಗ್ ಮೊದಲಾದ ಅಪ್ಪಟ ವ್ಯವಹಾರದ ಪದಗಳನ್ನೇ ವೃತ್ತಪತ್ರಿಕೆಗಳ ಆಡಳಿತ ವಿಭಾಗಗಳೂ ಬಳಸಲಾರಂಭಿಸಿದವು.

ಯಾವುದೇ ವೈಭವೀಕರಣವಿಲ್ಲದೆ ಹೇಳುವುದಾದರೆ, ಮೂರು ರೂಪಾಯಿ ಕೊಟ್ಟು ಪೇಪರ್ ಕೊಳ್ಳುವ ಓದುಗನಿಗೆ ತಾವು ನ್ಯಾಯ ಒದಗಿಸಬೇಕು ಎಂಬುದಕ್ಕಿಂತಲೂ ಸಾವಿರಾರು ರೂಪಾಯಿ ತೆತ್ತು ಜಾಹೀರಾತು ನೀಡುವ ಕಂಪೆನಿಯವನಿಗೇ ತಾವು ನ್ಯಾಯ ಒದಗಿಸಬೇಕೆಂಬುದು ಈ ಹಾದಿ ಹಿಡಿದಿರುವ ಮುಖ್ಯವಾಹಿನಿ ಪತ್ರಿಕೆಗಳ ಸದ್ಯದ ಪರಿಸ್ಥಿತಿ. ತಮ್ಮ ಮಾಹಿತಿಯಿಂದ ಓದುಗ ಎಷ್ಟು ಮಾಹಿತಿ ಪಡೆದುಕೊಳ್ಳುತ್ತಾನೆ, ಎಷ್ಟು ಎಚ್ಚೆತ್ತುಕೊಳ್ಳುತ್ತಾನೆ ಎಂಬುದಕ್ಕಿಂತಲೂ ಆತ ತಾವು ಪ್ರಕಟಿಸುವ ಜಾಹೀರಾತಿಗೆ ಎಷ್ಟು ಪ್ರತಿಕ್ರಿಯಿಸುತ್ತಾನೆ ಎಂಬುದೇ ಪತ್ರಿಕೆಗಳಿಗೆ ಹೆಚ್ಚು ಮುಖ್ಯ. ಹೀಗಾಗಿ, ಒಂದು ಪತ್ರಿಕೆ ಎಷ್ಟು ಪ್ರಸರಣೆ ಹೊಂದಿದೆ ಎಂಬಷ್ಟೇ ಅದು ಯಾವ ವರ್ಗದ ಯಾವ ಪ್ರದೇಶದ ಓದುಗರಲ್ಲಿ ಪ್ರಸರಣೆ ಹೊಂದಿದೆ ಎಂಬುದೂ ಪತ್ರಿಕೆಗಳಿಗೆ ಅತ್ಯಂತ ಪ್ರಮುಖವಾಗುತ್ತದೆ.

ಹೊಸಯುಗದ ಸ್ಪರ್ಧೆಗೆ ತೆರೆದುಕೊಂಡ ಕನ್ನಡ ಪತ್ರಿಕೆಗಳು ಹೊಸ ಪ್ರಯೋಗಗಳಿಗೂ ಅನಿವಾರ್ಯವಾಗಿ ತೆರೆದುಕೊಂಡವು. ಪ್ರಸರಣೆ-ಪ್ರವರ್ಧನೆ ವಿಭಾಗಳು ಚುರುಕಾದಷ್ಟೇ ಸಂಪಾದಕೀಯ ವಿಭಾಗವೂ ಚುರುಕಾಗಿ ಬದಲಾವಣೆಗಳನ್ನು ತರುವುದು ಅನಿವಾರ್ಯವಾಯಿತು. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿದ್ಯಮಾನಗಳಿಗಿಂತ ಪ್ರಾದೇಶಿಕ ಹಾಗೂ ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಬಂತು. ಒಟ್ಟಾರೆ ರಾಜಕಾರಣದ ಬಗ್ಗೆ ಬರೆಯುವುದಕ್ಕಿಂತಲೂ ರಾಜಕಾರಣಿಗಳ ಬಗ್ಗೆ ಬರೆಯುವುದಕ್ಕೆ ಪತ್ರಿಕೆಗಳು ಹೆಚ್ಚಿನ ಆದ್ಯತೆ ನೀಡಿದವು. ಎಲ್ಲ ಪತ್ರಿಕೆಗಳಿಗೂ ಏಕಾಏಕಿ ಯುವಜನರ ಮೇಲೆ ಪ್ರೀತಿ ಹುಟ್ಟಿತು. ಸಾಧ್ಯವಾದಷ್ಟು ಹೊಸಜನಾಂಗವನ್ನು ತಮ್ಮತ್ತ ಆಕರ್ಷಿಸುವುದರಿಂದ ತಮಗೆ ಹೆಚ್ಚಿನ ಲಾಭವಿದೆ ಎಂದು ಪತ್ರಿಕೆಗಳು ಅರ್ಥಮಾಡಿಕೊಂಡವು. ಪತ್ರಿಕೆಗಳಿಗೂ ಮ್ಯಾಗಜಿನ್‌ಗಳಿಗೂ ಇರುವ ಅಂತರ ಕಡಿಮೆಯಾಗತೊಡಗಿತು. ಬಹುತೇಕ ಪತ್ರಿಕೆಗಳು ಪ್ರತಿನಿತ್ಯ ಪುರವಣಿಗಳನ್ನು ಹೊರಡಿಸಲಾರಂಭಿಸಿದವು. ಸುದ್ದಿಬರವಣಿಗೆ ಹಾಗೂ ಪ್ರಸ್ತುತಿಯ ಶೈಲಿಯಲ್ಲೂ ಸಾಕಷ್ಟು ಬದಲಾವಣೆಗಳಾದವು. ಸಂಕ್ಷಿಪ್ತತೆಯೇ ಸುದ್ದಿಯ ಜೀವಾಳ ಎಂಬ ಮಾತು ನಿಜದರ್ಥದಲ್ಲಿ ಅನುಷ್ಠಾನಕ್ಕೆ ಬಂತು. ಸುದ್ದಿಯನ್ನು ಸುದ್ದಿಯಾಗೇ ಕೊಡುವುದಕ್ಕಿಂತಲೂ ಅದನ್ನು ಸಂಪಾದಕೀಕರಣಗೊಳಿಸಿ ಕೊಡುವುದನ್ನು ಹಲವರು ಜಾರಿಗೆ ತಂದರು. ಚಿತ್ರಗಳಿಗೆ, ಗ್ರಾಫಿಕ್ಸ್‌ಗಳಿಗೆ, ಓದುಗಸ್ನೇಹೀ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಬಂತು. ಅಂದರೆ 'ಕಂಟೆಟ್’ನಷ್ಟೇ 'ಪ್ಯಾಕೇಜಿಂಗ್’ಗೂ ಮಹತ್ವ ದೊರೆಯಿತು.

ಇವೆಲ್ಲ ಬದಲಾವಣೆಗಳಾದವು ಮತ್ತು ಇನ್ನೂ ಆಗುತ್ತಿವೆ ಎಂದಷ್ಟೇ ಹೇಳಲಾಗಿದೆಯೇ ಹೊರತು ಇವುಗಳಿಂದ ಪತ್ರಿಕೋದ್ಯಮಕ್ಕೆ ಒಳ್ಳೆಯದೇ ಆಗಿದೆ ಅಥವಾ ಎಲ್ಲವೂ ಕೆಟ್ಟದ್ದಾಗಿದೆ ಎಂದು ಹೇಳುವುದು ಇಲ್ಲಿನ ಉದ್ದೇಶ ಅಲ್ಲ. ಪತ್ರಿಕೋದ್ಯಮದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ, ಸಮಾಜಕ್ಕೆ ಅದರ ಕೊಡುಗೆಯ ದೃಷ್ಟಿಯಿಂದ ಸಾಕಷ್ಟು ಒಳ್ಳೆಯದೇ ಆಗಿದೆ; ಹಾಗಂತ ಅದರ ಮಗ್ಗುಲ ಮುಳ್ಳು ಕಾಡದೇ ಉಳಿದಿಲ್ಲ. ಪತ್ರಿಕೆಗಳು ಹೆಚ್ಚುಹೆಚ್ಚು ಸ್ಥಳೀಯವಾದದ್ದರಿಂದ ಸ್ಥಳೀಯ ಸುದ್ದಿಗಳಿಗೆ ಆದ್ಯತೆಯೇನೋ ದೊರೆಯಿತು, ಆದರೆ ರಾಜ್ಯ-ರಾಷ್ಟ್ರಮಟ್ಟದಲ್ಲಿ ಪ್ರಾತಿನಿಧ್ಯ ದೊರೆಯಬೇಕಿದ್ದ ಸಾಮಾಜಿಕ ನ್ಯಾಯದ ಹೋರಾಟಗಳೂ ಸ್ಥಳೀಯ ಮಟ್ಟದಲ್ಲೇ ಉಳಿದುಬಿಡುವ ಅಪಾಯ ಎಷ್ಟೋ ಸಂದರ್ಭ ನಿಜವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದ ಅಂತರಂಗದಂತಿರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಮುಖ್ಯವಾಹಿನಿ ಪತ್ರಿಕೆಗಳ ಈ ಭರಾಟೆಯಿಂದ ಕಂಗೆಟ್ಟಿವೆ. ಎಷ್ಟೇ ಆಯೋಗಗಳು-ಮಂಡಳಿಗಳು ಬಂದರೂ ಸಣ್ಣ ಪತ್ರಿಕೆಗಳ ದೊಡ್ಡ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವಾದರೂ ಒದಗಿಸುವ ಕೆಲಸ ನಡೆದಿಲ್ಲ. ಸಾಮಾಜಿಕ ಸ್ವಾಸ್ಥ್ಯ ನೋಡಿಕೊಳ್ಳುವ ವೈದ್ಯರುಗಳೆಂಬ ಮರ್ಯಾದೆಗೆ ಪಾತ್ರವಾಗಿರುವ ಪತ್ರಿಕೆ-ಪತ್ರಕರ್ತರೂ ನೈತಿಕತೆಯ ಹಾದಿಯಲ್ಲಿ ಜಾರಿಬೀಳುತ್ತಿರುವ ನಿದರ್ಶನಗಳು ಆಗಿಂದಾಗ್ಗೆ ಕಾಣಸಿಗುವುದು, ಇದರ ಬಗ್ಗೆ ಜನಸಾಮಾನ್ಯರೂ ಅತ್ಯಂತ ಕೇವಲವಾಗಿ, ತುಚ್ಛವಾಗಿ ಮಾತಾಡಿಕೊಳ್ಳುವ ಪರಿಸ್ಥಿತಿ ಬಂದಿರುವುದು ಪತ್ರಿಕೋದ್ಯಮ ನಿರ್ಮಿಸಿರುವ ಘನಪರಂಪರೆಯ ಸೌಧ ಕುಸಿಯುತ್ತಿರುವುದರ ಸಂಕೇತವಲ್ಲದೆ ಇನ್ನೇನು?

'ಮಂಗಳೂರ ಸಮಾಚಾರ’ದೊಂದಿಗೆ 1843ರಲ್ಲಿ ಆರಂಭಗೊಂಡ ಕನ್ನಡ ಪತ್ರಿಕೋದ್ಯಮ ಇದೇ ಜುಲೈ 1ಕ್ಕೆ 169 ವರ್ಷಗಳನ್ನು ಪೂರೈಸಿ 170ನೇ ವರ್ಷಕ್ಕೆ ಕಾಲಿಡುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಬೀಸುತ್ತಿರುವುದು ಬದಲಾವಣೆಯ ಮಂದಮಾರುತವಾದರೆ ಖಂಡಿತ ಅದಕ್ಕೆ ಸ್ವಾಗತ; ಆದರೆ ಯಾವುದೇ ಕಾರಣಕ್ಕೂ ಅದು ಚಂಡಮಾರುತವಾಗದಿರಲಿ; ಬದಲಾವಣೆಯ ಅಲೆ ಸುನಾಮಿಯಾಗದಿರಲಿ.


ಗುರುವಾರ, ಜೂನ್ 14, 2012

ಟ್ರಾಯ್ (TRAI)-ಟಿವಿ ಚಾನೆಲ್‌ಗಳ ಕದನವಿರಾಮ: ಮುಂದೇನು?


ಮಾಧ್ಯಮಶೋಧ-20, ಹೊಸದಿಗಂತ, 14 ಜೂನ್ 2012

ಸದ್ಯ ಕಿರಿಕಿರಿ ತಪ್ಪಿತು ಎಂದು ನಿರಾಳಗೊಳ್ಳುತ್ತಿದ್ದ ಟಿವಿ ವೀಕ್ಷಕರಿಗೆ ಈಗ ಮತ್ತೆ ನಿರಾಸೆಯ ಸರದಿ; ಇತ್ತ ತಮ್ಮ ಆದಾಯದ ಮೂಲಕ್ಕೇ ಬಿತ್ತಲ್ಲ ಕತ್ತರಿ ಎಂದು ಆತಂಕದಲ್ಲಿದ್ದ ಟಿವಿ ಚಾನೆಲ್‌ಗಳಿಗೆ ಸಂಭ್ರಮದ ಅವಧಿ. ಟಿವಿ ಜಾಹೀರಾತು ಪ್ರಸಾರಕ್ಕೆ ಸಂಬಂಧಿಸಿದಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಕಳೆದ ತಿಂಗಳಷ್ಟೇ ಪ್ರಕಟಿಸಿದ ಹೊಸ ನಿಯಮಾವಳಿಗಳಿಗೆ ದೂರಸಂಪರ್ಕ ವ್ಯಾಜ್ಯಗಳ ಪರಿಹಾರ ಮತ್ತು ಮೇಲ್ಮನವಿ ಮಂಡಳಿ (TDSAT) ತಾತ್ಕಾಲಿಕ ತಡೆ ನೀಡಿದೆ. ಇನ್ನೈದು ವಾರಗಳವರೆಗೆ ಅಂದರೆ ಜುಲೈ 17ರವರೆಗೆ ಯಥಾಸ್ಥಿತಿ ಮುಂದುವರಿಯಲಿ ಎಂದು ಸೂಚಿಸಿದೆ.

ಟಿವಿ ಜಾಹೀರಾತುಗಳ ಬಗ್ಗೆ ಸಾಮಾನ್ಯವಾಗಿ ಬರುವ ಆಕ್ಷೇಪಗಳು ಎರಡು ಬಗೆಯವು: ಒಂದು, ಜಾಹೀರಾತುಗಳ ಗುಣಮಟ್ಟ ಅಥವಾ ಅವು ರವಾನಿಸುವ ತಪ್ಪು ಸಂದೇಶಗಳ ಬಗ್ಗೆ; ಎರಡು, ಮಿತಿಮೀರಿದ ಜಾಹೀರಾತಿನಿಂದಾಗಿ ಟಿವಿ ಕಾರ್ಯಕ್ರಮಗಳೇ ಅಸಹನೀಯ ಅನ್ನಿಸುವ ಬಗ್ಗೆ. ಮೊದಲನೆ ವರ್ಗದ ಜಾಹೀರಾತುಗಳ ಬಗೆಗಿನ ತಕರಾರುಗಳನ್ನು ನೋಡಿಕೊಳ್ಳಲು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ)ದಂತಹ ಸಂಸ್ಥೆಗಳಿವೆ; ಆದರೆ ಕಾರ್ಯಕ್ರಮಗಳಿಗಿಂತಲೂ ಹೆಚ್ಚು ಜಾಹೀರಾತೇ ನೋಡಬೇಕಾದ ಪರಿಸ್ಥಿತಿಯಿಂದ ರೋಸಿಹೋದ ವೀಕ್ಷಕರು ಯಾರನ್ನು ಕೇಳಬೇಕು ಎಂಬ ಗೊಂದಲಕ್ಕೆ ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತೆರೆ ಎಳೆದಿತ್ತು. ೨೦೦೪ರಲ್ಲಿ ಪ್ರಸಾರ ಹಾಗೂ ಕೇಬಲ್ ಸೇವೆಗಳನ್ನು ದೂರಸಂಪರ್ಕ ಸೇವೆಗಳ ವ್ಯಾಪ್ತಿಗೆ ತಂದು ಅಧಿಸೂಚನೆ ಹೊರಡಿಸಿದ ಸಚಿವಾಲಯ, ಪ್ರಸಾರ ಹಾಗೂ ಕೇಬಲ್ ಟಿವಿ ಸೇವೆಗಳ ನಿಯಮಾವಳಿಗಳೂ ಟ್ರಾಯ್ ಪರಿಧಿಗೆ ಬರಬೇಕೆಂದು ನಿರ್ದೇಶನ ನೀಡಿತ್ತು. ಇದರಿಂದ ಟಿವಿ ಪ್ರಸಾರಕ್ಕೆ ಸಂಬಂಧಿಸಿದ ಯಾವುದೇ ದೂರುಗಳನ್ನೂ ಟ್ರಾಯ್‌ಗೆ ಸಲ್ಲಿಸಲು ಗ್ರಾಹಕರಿಗೆ ಅವಕಾಶವಾಯಿತು.

ಮಿತಿಮೀರಿದ ಟಿವಿ ಜಾಹೀರಾತುಗಳ ಕಿರಿಕಿರಿಗಳಿಗೆ ಸಂಬಂಧಿಸಿದಂತೆ ವೀಕ್ಷಕರಿಂದ ಟ್ರಾಯ್ ಸ್ವೀಕರಿಸಿದ ದೂರುಗಳು ನೂರಾರು. ಈ ಹಿನ್ನೆಲೆಯಲ್ಲಿ ಸೂಕ್ತವಾದ್ದೊಂದು ನಿರ್ಧಾರಕ್ಕೆ ಬರಲೇಬೇಕೆಂದು ಟ್ರಾಯ್ ತೀರ್ಮಾನಿಸಿಬಿಟ್ಟಿತ್ತು. ಮಾರ್ಚ್ ೧೬, ೨೦೧೨ದಂದು ತನ್ನ ಪ್ರಸ್ತಾಪಿತ ನಿಯಮಾವಳಿಗಳನ್ನೊಳಗೊಂಡ ಒಂದು 'ಸಮಾಲೋಚನಾ ಪತ್ರ’ವನ್ನು ಹೊರಡಿಸಿದ ಟ್ರಾಯ್ ಈ ಬಗ್ಗೆ ಸಂಬಂಧಪಟ್ಟವರಿಂದ ಆಕ್ಷೇಪಗಳನ್ನು ಆಹ್ವಾನಿಸಿತ್ತು. ಪ್ರತಿಯಾಗಿ ಟಿವಿ ಚಾನೆಲ್‌ಗಳು, ಸಂಘಟನೆಗಳು ಹಾಗೂ ಜಾಹೀರಾತುದಾರರಿಂದ ಒಟ್ಟು ೨೯ ಪ್ರತಿಕ್ರಿಯೆಗಳೂ ಬಂದವು.

ಎಲ್ಲ ಆಕ್ಷೇಪ-ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ಟ್ರಾಯ್ ಟಿವಿ ವೀಕ್ಷಕರಿಗೆ 'ಉತ್ತಮ ವೀಕ್ಷಣಾ ಅನುಭವ’ವನ್ನು ಒದಗಿಸಿಕೊಡುವ ಉದ್ದೇಶದಿಂದ ಕಳೆದ ಮೇ 14ರಂದು ಸೇವೆಯ ಗುಣಮಟ್ಟ (ಟಿವಿ ವಾಹಿನಿಗಳಲ್ಲಿ ಜಾಹೀರಾತುಗಳ ಅವಧಿ) ನಿಯಮಾವಳಿಗಳು 2012 [Standards of Quality of Service (Duration of Advertisements in TV Channels) Regulations 2012] ಅಡಿಯಲ್ಲಿ ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿತು. ತಮ್ಮ ಆಕ್ಷೇಪಗಳ ನಡುವೆಯೂ ಜಾಹೀರಾತು ನಿಯಮಾವಳಿಗಳು ಗೆಜೆಟ್‌ನಲ್ಲಿ ಅಧಿಕೃತವಾಗಿ ಪ್ರಕಟವಾಗಿದ್ದು ನೋಡಿ ಟಿವಿ ಚಾನೆಲ್‌ಗಳು, ಜಾಹೀರಾತುದಾರರು ಕ್ರುದ್ಧರಾಗಿಬಿಟ್ಟರು. ಟಿಡಿಎಸ್‌ಎಟಿಗೆ ಮೇಲ್ಮನವಿಯನ್ನೂ ಸಲ್ಲಿಸಿದರು. ಟಿಡಿಎಸ್‌ಎಟಿ ಟ್ರಾಯ್‌ಗೆ ನೋಟೀಸ್ ಜಾರಿ ಮಾಡಿ ಮೂರು ವಾರಗಳೊಳಗೆ ವಿವರಣೆ ನೀಡಲು ಸೂಚಿಸಿದೆ; ನಂತರದ ಎರಡು ವಾರಗಳಲ್ಲಿ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಚಾನೆಲ್‌ಗಳವರಿಗೆ ಸೂಚಿಸಿದೆ. ಪರ-ವಿರೋಧ ವಾದಗಳನ್ನು ಆಲಿಸಿದ ಬಳಿಕವಷ್ಟೇ ಟಿಡಿಎಸ್‌ಎಟಿಯ ತೀರ್ಮಾನ ಹೊರಬೀಳಲಿದೆ. ಅಲ್ಲಿಯವರೆಗೆ ಕದನವಿರಾಮ. ಹಾಗಾದರೆ ಟಿವಿ ಚಾನೆಲ್‌ಗಳನ್ನು ಆತಂಕಕ್ಕೆ ದೂಡಿದ ಟ್ರಾಯ್ ನಿರ್ದೇಶನಗಳಾದರೂ ಏನು?

ಟ್ರಾಯ್‌ನ ಪ್ರಮುಖ ಉದ್ದೇಶವೇ ಚಾನೆಲ್‌ಗಳಲ್ಲಿ ಜಾಹೀರಾತು ಪ್ರಸಾರದ ಅವಧಿಯನ್ನು ಕಡಿತಗೊಳಿಸುವುದು ಮತ್ತು ಆ ಮೂಲಕ ವೀಕ್ಷಕರಿಗಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವುದು. ಅದಕ್ಕೇ ಟ್ರಾಯ್ ಸೂಚಿಸಿರುವ ಮೊದಲನೆ ನಿಯಮ, ಟಿವಿ ಚಾನೆಲ್‌ಗಳು ಗಂಟೆಯೊಂದರ ಶೇ. ೨೦ ಭಾಗ ಮಾತ್ರ ಜಾಹೀರಾತು ಪ್ರಸಾರಮಾಡಬಹುದೆಂಬುದು. ಅಂದರೆ 60 ನಿಮಿಷಗಳ ಅವಧಿಯಲ್ಲಿ 12 ನಿಮಿಷ ಮಾತ್ರ ಜಾಹೀರಾತು ಪ್ರಸಾರ ಮಾಡಲು ಅವಕಾಶ (ತಮ್ಮದೇ ಕಾರ್ಯಕ್ರಮಗಳ ಕುರಿತ ಪ್ರೊಮೋಗಳೂ ಸೇರಿ). ಎರಡು ಜಾಹೀರಾತು ಸ್ಲಾಟ್‌ಗಳ ನಡುವೆ ೧೫ ನಿಮಿಷಗಳ ಅಂತರ ಇರಲೇಬೇಕು. ಸಿನಿಮಾ ಪ್ರಸಾರದ ಸಂದರ್ಭದಲ್ಲಾದರೆ ಎರಡು ಜಾಹೀರಾತು ಅವಧಿಯ ನಡುವೆ ಕನಿಷ್ಠ ೩೦ ನಿಮಿಷಗಳ ಅಂತರ ಇರಬೇಕು. ಹಾಗಂತ ಒಂದು ಗಂಟೆಯ ನಿರ್ದಿಷ್ಟ ಅವಧಿಯಲ್ಲಿ 12 ನಿಮಿಷ ಜಾಹೀರಾತು ಇಲ್ಲದಿದ್ದರೆ ಅದರ ಪಾಲು ಇನ್ನೊಂದು ಅವಧಿಯಲ್ಲಿ ಜಾಹೀರಾತು ಪ್ರಸಾರ ಮಾಡುವಂತಿಲ್ಲ. ಅಂದರೆ ಒಂದು ಗಂಟೆಯ ಅವಧಿಯಲ್ಲಿ 10 ನಿಮಿಷ ಜಾಹೀರಾತು ಹಾಕಿ, ಇನ್ನೊಂದು ಅವಧಿಯಲ್ಲಿ 14 ನಿಮಿಷ ಜಾಹೀರಾತು ಪ್ರಸಾರ ಮಾಡುವಂತಿಲ್ಲ.

ಅಂತೆಯೇ, ಕ್ರೀಡಾ ಚಾನೆಲ್‌ಗಳು ಪಂದ್ಯಗಳ ನೇರಪ್ರಸಾರ ಮಾಡುವ ಸಂದರ್ಭ ತಮಗೆ ಬೇಕೆನಿಸಿದಾಗೆಲ್ಲ ಜಾಹೀರಾತು ತೋರಿಸುವಂತಿಲ್ಲ. ಪಂದ್ಯದ ನಡುವೆ ಸ್ವಾಭಾವಿಕ ವಿರಾಮ (ನ್ಯಾಚುರಲ್ ಬ್ರೇಕ್) ಇದ್ದಾಗ ಮಾತ್ರ ಜಾಹೀರಾತು ಹಾಕಬಹುದು. ಉದಾಹರಣೆಗೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ವೇಳೆ ಆಟಗಾರ ಔಟ್ ಆದಾಗ, ಚಹಾ ವಿರಾಮ, ಊಟದ ವಿರಾಮ, ಪ್ರತಿಕೂಲ ವಾತಾವರಣ ಇದ್ದಾಗ, ಮಳೆಯಿಂದ ಪಂದ್ಯ ನಿಂತಾಗ... ಇತ್ಯಾದಿ ಸನ್ನಿವೇಶಗಳಲ್ಲಿ ಮಾತ್ರ ಜಾಹೀರಾತು ತೋರಿಸಬಹುದು.

ಇನ್ನೊಂದು ಪ್ರಮುಖ ನಿಯಮವೆಂದರೆ, ಪೂರ್ತಿ ಸ್ಕ್ರೀನ್ ಜಾಹೀರಾತುಗಳಿಗೆ ಮಾತ್ರ ಅವಕಾಶ. ಸ್ಕ್ರೋಲ್‌ನಲ್ಲಿ ಜಾಹೀರಾತು ಪ್ರಕಟಿಸುವುದು, ಕಾರ್ಯಕ್ರಮ ಪ್ರಸಾರ ಆಗುತ್ತಿರುವಾಗಲೇ ತೆರೆಯ ಅರ್ಧಭಾಗದಲ್ಲಿ ಜಾಹೀರಾತು ತೋರಿಸುವುದು, ಇದ್ದಕ್ಕಿದ್ದಂತೆ ಸ್ಕ್ರೀನ್‌ನ ಒಂದು ಅಂಚಿನಿಂದ ಜಾಹೀರಾತು ಕುಪ್ಪಳಿಸಿ ಬರುವುದು (ಅಂದರೆ ಪಾಪ್-ಅಪ್ ಆಗುವುದು) ಇತ್ಯಾದಿಗಳಿಗೆ ಅವಕಾಶ ಇಲ್ಲ. ಇದು ಸುದ್ದಿ, ಮನರಂಜನೆ, ಕ್ರೀಡೆ - ಎಲ್ಲಾ ಚಾನೆಲ್‌ಗಳಿಗೂ ಅನ್ವಯಿಸುವ ನಿಯಮ. ಹಾಗೆಯೇ, ಟಿವಿ ಕಾರ್ಯಕ್ರಮದ ಧ್ವನಿಮಟ್ಟಕ್ಕಿಂತ ಜಾಹೀರಾತಿನ ಧ್ವನಿಮಟ್ಟ ಹೆಚ್ಚಾಗಿರುವಂತಿಲ್ಲ. ಅದೆರಡೂ ಒಂದೇ ರೀತಿ ಇರಬೇಕು. ಟಿವಿ ನೋಡುತ್ತ ಕುಳಿತ ಮಂದಿ ಜಾಹೀರಾತು ಬರುತ್ತಿದ್ದಂತೆ 'ಅರೆ ಅದ್ಯಾರು ಟಿವಿ ವಾಲ್ಯೂಮ್ ಹೆಚ್ಚು ಮಾಡಿದ್ದು’ ಎಂದು ಬೆಪ್ಪಾಗಿ ನೋಡುವುದು ಈಗ ಸಾಮಾನ್ಯ ದೃಶ್ಯ.

ಒಟ್ಟಿನಲ್ಲಿ, ಟ್ರಾಯ್ ಹೊರತಂದಿರುವ ಈ ಎಲ್ಲ ನಿಯಮಾವಳಿಗಳು ಟಿವಿ ಚಾನೆಲ್‌ಗಳನ್ನು, ಜಾಹೀರಾತುದಾರರನ್ನು ಕೆರಳಿಸಿವೆ. ಹೇಳಿಕೇಳಿ ಜಾಹೀರಾತೇ ಚಾನೆಲ್‌ಗಳ ಆದಾಯದ ಬಹುದೊಡ್ಡ ಮೂಲ. ಪೇ ಚಾನೆಲ್‌ಗಳಿಗಾದರೆ ಒಂದಷ್ಟು ಚಂದಾ ಹಣವಾದರೂ ಬರುತ್ತದೆ. ಉಚಿತ ಚಾನೆಲ್‌ಗಳಿಗೆ ಜಾಹೀರಾತಿನ ಹೊರತಾಗಿ ಬೇರೆ ಆದಾಯ ಇಲ್ಲ. ಭಾರತದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 607 ಟಿವಿ ಚಾನೆಲ್‌ಗಳ ಪೈಕಿ 100 ಮಾತ್ರ ಪೇ ಚಾನೆಲ್‌ಗಳು; ಉಳಿದ 507 ಕೂಡ ಉಚಿತ ವಾಹಿನಿಗಳೇ. ಟ್ರಾಯ್ ಹೇರಿರುವ ಮಿತಿಗಳಿಂದಾಗಿ ಟಿವಿ ಚಾನೆಲ್‌ಗಳ ಶೇ. 15-40ರಷ್ಟು ಆದಾಯಕ್ಕೆ ಕತ್ತರಿ ಬೀಳಲಿದೆ ಎಂಬುದೇ ಇವರ ಆತಂಕದ ಮೂಲ ಕಾರಣ. ಒಂದು ಅಂದಾಜಿನ ಪ್ರಕಾರ 2011ರಲ್ಲಿ ದೇಶದ ಟಿವಿ ಜಾಹೀರಾತು ಮಾರುಕಟ್ಟೆಯ ಒಟ್ಟು ಆದಾಯ ರೂ. 12,000 ಕೋಟಿಗಿಂತಲೂ ಹೆಚ್ಚು.

ತಮ್ಮ ಆದಾಯಕ್ಕೆ ಕೊಕ್ಕೆ ಹಾಕಲು ಟ್ರಾಯ್‌ಗೆ ಅಧಿಕಾರ ಕೊಟ್ಟವರಾರು ಎಂಬುದು ಚಾನೆಲ್‌ಗಳ ಮೊದಲನೆ ತಕರಾರು. ’ಜಾಹೀರಾತಿನ ಸಮಯ ಇತ್ಯಾದಿಗಳ ಬಗ್ಗೆ ಮಿತಿ ಹೇರಲು ಕೇಂದ್ರ ಸಂಪರ್ಕ ಸಚಿವಾಲಯ ಅಥವಾ ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳಿವೆ; ಟ್ರಾಯ್‌ಗೆ ಆ ಅಧಿಕಾರ ಇಲ್ಲ. 1997ರ ಟ್ರಾಯ್ ಕಾಯ್ದೆಯ ಪ್ರಕಾರ ಟ್ರಾಯ್‌ಗೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಇದೆ. ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಸಾರ ಹಾಗೂ ಕೇಬಲ್ ಸೇವೆಗಳನ್ನು ಟ್ರಾಯ್ ವ್ಯಾಪ್ತಿಗೆ ತಂದಿದ್ದರೂ ಅದು ಈ ಬಗೆಯ ನಿಯಂತ್ರಣಗಳನ್ನು ಹೇರಬಾರದು’ ಎಂಬುದು ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೌಂಡೇಶನ್ ಹಾಗೂ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್‌ಗಳ ವಾದ.

ಸರ್ವೋಚ್ಛ ನ್ಯಾಯಾಲಯವು ವೃತ್ತಪತ್ರಿಕೆಗಳ ಜಾಹೀರಾತಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪೊಂದನ್ನು ಪ್ರಸ್ತಾಪಿಸಿರುವ ಕೆಲವರು, ಟ್ರಾಯ್ ಹೇರಿರುವ ನಿರ್ದೇಶನಗಳು ಸಂವಿಧಾನದ 19(1)(a)ಯಲ್ಲಿ ವ್ಯಕ್ತವಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಆಶಯಗಳಿಗೆ ವಿರುದ್ಧವಾದವು ಎಂದು ವಾದಿಸಿದ್ದಾರೆ. ಕೇಬಲ್ ಟಿವಿ ವಲಯದ ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರ ಈಗಾಗಲೇ ಮೂರು ವರ್ಷಗಳ ಗಡುವು ವಿಧಿಸಿರುವುದರಿಂದ ಟ್ರಾಯ್ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಮನಸ್ಸು ಮಾಡಬೇಕೇ ಹೊರತು ವಾಹಿನಿಗಳ ಆದಾಯಕ್ಕೆ ಸಂಚಕಾರ ತರುವುದಲ್ಲ ಎಂಬುದು ಇನ್ನು ಕೆಲವರ ವಾದ. ಜಾಹೀರಾತು ಪ್ರಸಾರದ ಮೇಲಿನ ಇತಿಮಿತಿಗಳಿಂದ ವಾಹಿನಿಗಳಿಗಾಗುವ ನಷ್ಟ ತುಂಬಲು ಚಂದಾ ಹಣ ಹೆಚ್ಚಿಸಬೇಕಾಗುತ್ತದೆ ಮತ್ತು ಇದರಿಂದ ಸಾಮಾನ್ಯ ವೀಕ್ಷಕನಿಗೆ ಹೊರೆಯಾಗುತ್ತದೆ. ಇನ್ನೊಂದೆಡೆ ಜಾಹೀರಾತು ದರವನ್ನೂ ಹೆಚ್ಚಿಸಬೇಕಾಗುತ್ತದೆ; ಇದರಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಕಂಪೆನಿಗಳು ತಮ್ಮ ವಸ್ತು-ಸೇವೆಗಳನ್ನು ಜಾಹೀರು ಮಾಡುವುದು ಕಷ್ಟವಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ವಾದಗಳೇನೇ ಇರಲಿ, ಟ್ರಾಯ್ ನಿಯಮಾವಳಿಗಳಿಂದ ವೀಕ್ಷಕರಿಗೆ, ಕೇಬಲ್‌ನವರಿಗಂತೂ ಸಂತೋಷವಾಗಿತ್ತು. ಸದ್ಯ, ವಿಪರೀತ ಜಾಹೀರಾತುಗಳ ಕಾಟವಿಲ್ಲದೆ ಕಾರ್ಯಕ್ರಮಗಳನ್ನು ನೋಡಬಹುದೆಂದು ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದರು. ಇನ್ನೊಂದೆಡೆ ಟಿವಿ ವಾಹಿನಿಗಳು ತಮ್ಮ ಆದಾಯದ ಮೂಲವನ್ನು ಕಳೆದುಕೊಳ್ಳಬೇಕೆಂಬುದೂ ನ್ಯಾಯಸಮ್ಮತವಲ್ಲ. ಹಾಗಂತ ಅತಿಯಾದರೆ ಅಮೃತವೂ ವಿಷ. ಹಣದ ದುರಾಸೆಗೆ ಬಿದ್ದು ದಿಕ್ಕುದೆಸೆಯಿಲ್ಲದೆ ಬೇಕಾಬಿಟ್ಟಿ ಜಾಹೀರಾತು ಪ್ರಸಾರ ಮಾಡುವುದು, 'ಟಿವಿಯೇ ನೋಡೋದು ಬೇಡಪ್ಪ’ ಎಂಬ ಅಸಹಾಯಕ ಪರಿಸ್ಥಿತಿಯನ್ನು ಪ್ರೇಕ್ಷಕನಿಗೆ ತಂದಿಡುವುದು ಶುದ್ಧ ಅನ್ಯಾಯ. ಈ ಸಂದಿಗ್ಧದ ಹಿನ್ನೆಲೆಯಲ್ಲಿ ಮೇಲ್ಮನವಿ ಮಂಡಳಿ ಹೇಗೆ ಒಂದು ಸಮತೋಲನದ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.