ಮಂಗಳವಾರ, ಮಾರ್ಚ್ 3, 2026

ವಿವೇಕವೇ ಸಾಮಾಜಿಕ ವರ್ತನೆಯ ದಿಕ್ಸೂಚಿ

ಬೋಧಿವೃಕ್ಷ, 21-27 ಫೆಬ್ರವರಿ 2026ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಅಧ್ಯಯನ ಯೋಜನೆಯೊಂದರ ಭಾಗವಾಗಿ ಇತ್ತೀಚೆಗೆ ಭೂತಾನ್ ದೇಶದಲ್ಲಿ ಕೆಲವು ದಿನ ಕಳೆಯುವ ಅವಕಾಶ ಒದಗಿತ್ತು. ಈ ಸಂದರ್ಭದಲ್ಲಿ ವಿಶಿಷ್ಟ ಅಂಶವೊಂದು ನಮ್ಮನ್ನು ಚಕಿತಗೊಳಿಸಿತು. ಅದೇನೆಂದರೆ, ಇಡೀ ಭೂತಾನ್ ದೇಶದಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲದಿರುವುದು! ಅರೆ, ಈ ಕಾಲದಲ್ಲೂ ಟ್ರಾಫಿಕ್ ಸಿಗ್ನಲ್ ಇಲ್ಲದೆ ವಾಹನ ಸಂಚಾರವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಅಚ್ಚರಿ ಎನಿಸಬಹುದು. ಆದರೆ ಆ ದೇಶದ ಮಟ್ಟಿಗೆ ಈ ಅಚ್ಚರಿಯೇ ನಿಜ. ದೇಶದ ರಾಜಧಾನಿ ಥಿಂಪುವಿನಲ್ಲೇ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಕಾಣಸಿಗುವುದಿಲ್ಲ. ಟ್ರಾಫಿಕ್ ಸಿಗ್ನಲ್ ಅಷ್ಟೇ ಅಲ್ಲ, ರಸ್ತೆ ಉಬ್ಬುಗಳು ಕೂಡ ಕಾಣಸಿಗುವುದಿಲ್ಲ. ರಸ್ತೆಗಳು ಕೂಡುವ ಜಾಗದಲ್ಲಿ ಇರುವ ವೃತ್ತಗಳು ಕೂಡ ತೀರಾ ಸಣ್ಣವು.

ಒಂದು ದೇಶದ ರಸ್ತೆಗಳು ಆ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂಬ ಪ್ರಸಿದ್ಧ ಮಾತೊಂದು ಇದೆ. ರಸ್ತೆಗಳು ಎಂಬಲ್ಲಿ ಸಂಚಾರ ವ್ಯವಸ್ಥೆ ಎಂದರೂ ಚೆನ್ನಾಗಿ ಒಪ್ಪುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭೂತಾನ್‌ನಲ್ಲಿ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ಸಂಚಾರ ವ್ಯವಸ್ಥೆಯನ್ನು ನಿಭಾಯಿಸುವುದು ಸುಲಭ ಎಂಬ ತಾಂತ್ರಿಕ ಕಾರಣವನ್ನು ಕೊಡಬಹುದಾದರೂ, ವಾಸ್ತವವಾಗಿ ಇಂತಹದೊಂದು ಸೋಜಿಗ ಸಾಧ್ಯವಾಗಿರುವುದು ಅಲ್ಲಿನ ಜನರು ಮತ್ತವರ ಗುಣನಡತೆಯಿಂದಾಗಿ ಎಂಬುದೇ ನಿಜ.

ಭೂತಾನ್ ನಾಗರಿಕರ ಸಾಮಾಜಿಕ ವರ್ತನೆಯು ಸಾಂಸ್ಕೃತಿಕ ಮೌಲ್ಯಗಳು ಮತ್ತು ಅದರಿಂದ ಹುಟ್ಟಿಕೊಂಡಿರುವ ವಿಶಿಷ್ಟವಾಗಿರುವ ನೈತಿಕ ಪ್ರಜ್ಞೆಯಿಂದ ಪ್ರಭಾವಿಸಲ್ಪಟ್ಟಿದೆ. ಅವರ ಪ್ರತಿ ವರ್ತನೆಯಲ್ಲೂ ಅಪಾರ ಸಂಯಮ ಮತ್ತು ಸೌಜನ್ಯ ಎದ್ದು ಕಾಣುತ್ತದೆ. ನಮ್ಮಿಂದಾಗಿ ಇನ್ನೊಬ್ಬರಿಗೆ ತೊಂದರೆ ಆಗಬಾರದು, ಸಾಧ್ಯವಾದಷ್ಟು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂಬ ಅವರ ಮನಸ್ಸೇ ಈ ಬಗೆಯ ವ್ಯಕ್ತಿತ್ವಕ್ಕೆ ಕಾರಣ. ಹೀಗಾಗಿ ರಸ್ತೆಯ ಮೇಲೆ ನಡೆಯುವಾಗಲಾಗಲೀ, ವಾಹನ ಚಲಾಯಿಸುವಾಗಲಾಗಲೀ ಅವರಿಗೆ ಧಾವಂತವಿಲ್ಲ. ಅನಗತ್ಯವಾಗಿ ಹಾರ್ನ್ ಮಾಡುವುದಿಲ್ಲ, ಸ್ಪರ್ಧೆಗೆ ಬಿದ್ದವರಂತೆ ಓವರ್‌ಟೇಕ್ ಮಾಡುವುದಿಲ್ಲ, ಒಂದು ನಿರ್ದಿಷ್ಟ ವೇಗಮಿತಿಯಿಂದಾಚೆ ವಾಹನ ಚಾಲನೆ ಮಾಡುವುದಿಲ್ಲ. ತಾಳ್ಮೆಯೇ ಅಲ್ಲಿನ ಸಂಚಾರ ವ್ಯವಸ್ಥೆಯ ಸ್ಥಾಯೀಭಾವ.

ಹೀಗಾಗಿ ರಸ್ತೆಗಳು ಸೇರುವಲ್ಲಿ ಟ್ರಾಫಿಕ್ ದೀಪಗಳು ಬೇಕೆಂದು ಅವರಿಗೆ ಅನ್ನಿಸಿಯೇ ಇಲ್ಲ.
ಎದುರಿನಿಂದಲೋ, ಪಕ್ಕದಿಂದಲೋ ವಾಹನವೊಂದು ಬಂತೆಂದರೆ ಈ ಕಡೆಯ ವಾಹನ ಸವಾರರು ಆ ವಾಹನ ಮೊದಲು ಹೋಗುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ. ಅವರ ಮಧ್ಯೆ ತಮ್ಮದೇ ಆದ ಒಂದು ಸಂವಹನ ಇರುತ್ತದೆ. ಇನ್ನೊಬ್ಬರ ಅಗತ್ಯವನ್ನು ಅರ್ಥ ಮಾಡಿಕೊಂಡು ವ್ಯವಹರಿಸುವ ವಿಶೇಷ ಸಂವಹನವದು. ತಾವೇ ಮೊದಲು ಹೋಗಿಬಿಡಬೇಕು ಎಂಬ ಮನಸ್ಥಿತಿಗೂ ಇನ್ನೊಬ್ಬ ಮೊದಲು ಹೋಗಿಬಿಡಲಿ ಎಂಬ ಮನಸ್ಥಿತಿಗೂ ಎಷ್ಟೊಂದು ವ್ಯತ್ಯಾಸ ಅಲ್ಲವೇ?

ಪರಸ್ಪರ ಗೌರವ:

ಪರಸ್ಪರರನ್ನು ಗೌರವಿಸುವ ಗುಣ ಜನರಲ್ಲಿ ಇದ್ದಾಗ ಮಾತ್ರ ಇಂತಹದೊಂದು ಮನಸ್ಥಿತಿ ಮತ್ತು ವರ್ತನೆ ಸಾಧ್ಯವಾಗುತ್ತದೆ. ತಮಗೊಬ್ಬರಿಗೆ ಮಾತ್ರ ತುರ್ತು ಕೆಲಸವಿರುವುದು, ಬೇರೆಯವರ ಅಗತ್ಯಗಳ ಬಗ್ಗೆ ತಾನೇಕೆ ತಲೆಕೆಡಿಸಿಕೊಳ್ಳಲಿ ಎಂಬ ಮನೋಭಾವ ನಮ್ಮ ನಾಗರಿಕ ಪ್ರಜ್ಞೆಯನ್ನೇ ಹಾಳುಮಾಡಿಬಿಡುತ್ತದೆ. ಇದು ಕೇವಲ ರಸ್ತೆಯ ಮೇಲಿನ ವಿಷಯ ಮಾತ್ರವಲ್ಲ, ನಮ್ಮ ದಿನನಿತ್ಯದ ಜೀವನದ ಪ್ರತಿ ಹಂತದಲ್ಲೂ ನಡೆಯುತ್ತದೆ. ಇನ್ನೊಬ್ಬರ ಇಷ್ಟಾನಿಷ್ಟಗಳ ಬಗ್ಗೆ ಯೋಚಿಸಿಕೊಂಡು ತಾವೇಕೆ ಸಮಯ ಕಳೆಯಬೇಕು, ನಮ್ಮನಮ್ಮ ಕೆಲಸ ನೋಡಿಕೊಂಡರಾಯಿತು ಎಂಬುದು ನಮ್ಮ ಸಾಮಾನ್ಯ ಯೋಚನಾವಿಧಾನ. ಇನ್ನೊಬ್ಬರ ತಂಟೆಗೆ ಹೋಗದಿರುವುದು ಸರಿ, ಆದರೆ ಇನ್ನೊಬ್ಬರ ಅವಶ್ಯಕತೆಗಳ ಬಗ್ಗೆ ಗೌರವ ಮತ್ತು ಕಾಳಜಿ ಇಲ್ಲದೆ ಹೋದಾಗ ನಾವು ಕೇವಲ ಯಂತ್ರಗಳಾಗಿಬಿಡುತ್ತೇವೆ.

ಹೇಳಿಕೇಳಿ ಮನುಷ್ಯ ಸಂಘಜೀವಿ, ಸಮಾಜಜೀವಿ. ಭೂಮಿಯ ಮೇಲೆ ನಾಗರಿಕತೆಯ ವಿಕಾಸ ಆರಂಭವಾದಲ್ಲಿಂದಲೂ ಮನುಷ್ಯ ಜತೆಯಾಗಿಯೇ ಬದುಕುವುದನ್ನು ಅಭ್ಯಾಸ ಮಾಡಿಕೊಂಡ. ಜತೆಯಾಗಿಯೇ ವಾಸ, ಜತೆಯಾಗಿಯೇ ಊಟ, ಜತೆಯಾಗಿಯೇ ಓಡಾಟ. ಒಂಟಿಯಾಗಿರುವುದು ಬಲುಕಷ್ಟ. ಹಾಗೆ ನೋಡಿದರೆ ಒಂಟಿಯಾಗಿರುವುದಕ್ಕಿಂತಲೂ ಒಟ್ಟಿಗೆ ಬಾಳುವುದು ಇನ್ನೂ ಕಷ್ಟ. “ಎಷ್ಟು ಕಷ್ಟವೋ ಹೊಂದಿಕೆಯೆAಬುದು ನಾಲ್ಕು ದಿನದ ಈ ಬದುಕಿನಲಿ?” ಎಂದು ಕವಿ ಇದನ್ನೇ ಉದ್ದೇಶಿಸಿ ಕೇಳಿರುವುದು. ಇದೇ ಕವಿ “ಇಲ್ಲಿದೆ ನಂದನ ಇಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ” ಅಂತಲೂ ಸೂಚನೆ ಕೊಟ್ಟಿದ್ದಾರೆ. ನಮ್ಮನಮ್ಮ ಬದುಕನ್ನು ಸ್ವರ್ಗವಾಗಿಯೋ ನರಕವಾಗಿಯೋ ಮಾಡಿಕೊಳ್ಳುವುದು ನಮ್ಮಲ್ಲೇ ಇದೆ. ಇನ್ನೊಬ್ಬರಿಂದಾಗಿ ನಮ್ಮ ಬದುಕು ಅಸಹನೀಯವಾಯಿತು ಎಂಬ ಭಾವನೆಯೇ ಮೂರ್ಖತನದ್ದು.

ವಿವೇಕವೇ ಬದುಕು:

ಸರಿತಪ್ಪುಗಳ ವಿವೇಚನೆ, ಸಮಾಜದಲ್ಲಿ ಇನ್ನೊಬ್ಬರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ವಿವೇಕ ನಮ್ಮ ಬದುಕನ್ನು ನಿರ್ಧರಿಸುತ್ತದೆ. ಪ್ರತಿದಿನ ಹತ್ತುಹಲವು ಮಂದಿಯೊಂದಿಗೆ ನಾವು ವ್ಯವಹರಿಸುತ್ತಿರುತ್ತೇವೆ. ಅಪ್ಪ-ಅಮ್ಮ, ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳು, ಗುರುಗಳು, ವಿದ್ಯಾರ್ಥಿಗಳು, ನೆರೆಹೊರೆಯವರು, ಅಪರಿಚಿತರು... ಇವರೆಲ್ಲರೊಂದಿಗೆ ಒಂದಲ್ಲ ಒಂದು ರೀತಿ ಸಂವಹನ ನಡೆಸುವ ಸಂದರ್ಭ ಇದ್ದೇ ಇರುತ್ತದೆ. ತಾನು, ತನ್ನದು, ತಾನು ಮಾಡಿದ್ದು ಸರಿ, ಉಳಿದವರೆಲ್ಲ ಅವಿವೇಕಿಗಳು ಎಂಬ ಭಾವನೆ ಇದ್ದಾಗ ಸಹಬಾಳ್ವೆ, ಸಾಮರಸ್ಯ ಮರೀಚಿಕೆಯಾಗುತ್ತದೆ.

ಹೆತ್ತವರ ಮಾತನ್ನು ಯಾಕೆ ಕೇಳಬೇಕು, ಗುರುಗಳನ್ನು ಯಾಕೆ ಗೌರವಿಸಬೇಕು, ಸಹಪ್ರಯಾಣಿಕರೊಂದಿಗೆ ಯಾಕೆ ಹೊಂದಾಣಿಕೆ ಮಾಡಿಕೊಳ್ಳಬೇಕು, ರಸ್ತೆಯ ಮೇಲೆ ಯಾಕೆ ಸಂಯಮದಿಂದ ವರ್ತಿಸಬೇಕು, ಸಾಮಾಜಿಕ ಮಾಧ್ಯಮಗಳನ್ನು ಯಾಕೆ ಜವಾಬ್ದಾರಿಯಿಂದ ಬಳಸಬೇಕು, ನನ್ನ ಪರಿಸರವನ್ನು ಯಾಕೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು – ಇಂತಹ ಪ್ರಶ್ನೆಗಳನ್ನು ಕೇಳುವವರ ಮನಸ್ಸಿನಲ್ಲಿ “ಇದೆಲ್ಲ ನನ್ನ ಕೆಲಸವಲ್ಲ, ಬೇರೆ ಯಾರಾದರೂ ಮಾಡಲಿ” ಎಂಬ ಉಡಾಫೆಯೊಂದು ಸದಾ ಇರುತ್ತದೆ. ಈ ಉಡಾಫೆಯೇ ಅವರ ಬಾಹ್ಯ ವರ್ತನೆಗಳಿಗೆ ಕಾರಣ. ಇದರಿಂದಾಗಿಯೇ ಅವರು ಹಿರಿಯರ ಸಲಹೆಗಳಿಗೆ ಕಿವಿಗೊಡುವುದಿಲ್ಲ, ಗುರುಗಳನ್ನು ಗೌರವಿಸುವುದಿಲ್ಲ, ಸಹಪ್ರಯಾಣಿಕರೊಂದಿಗೋ ಸಹೋದ್ಯೋಗಿಗಳೊಂದಿಗೋ ಸಂಯಮದಿಂದ ವರ್ತಿಸುವುದಿಲ್ಲ, ಸಾಮಾಜಿಕ ಮಾಧ್ಯಮಗಳನ್ನು ವಿವೇಕದಿಂದ ಬಳಸುವುದಿಲ್ಲ. 

ಇಂಥವರು ಕಾನೂನನ್ನಾಗಲೀ ಸಾಮಾಜಿಕ ಮೌಲ್ಯಗಳನ್ನಾಗಲೀ ಗೌರವಿಸುವುದಿಲ್ಲ. ಸಾರ್ವಜನಿಕ ಸೌಲಭ್ಯಗಳನ್ನು ಜವಾಬ್ದಾರಿಯಿಂದ ಬಳಸಬೇಕು, ಅದು ಎಲ್ಲರಿಗೂ ಸಂಬಂಧಪಟ್ಟದ್ದು ಎಂಬ ತಿಳುವಳಿಕೆ ಇಲ್ಲದವರು ಇವರಲ್ಲ. ಶಿಕ್ಷಿತರೇ ಆಗಿರುತ್ತಾರೆ. ಆದರೆ ಶಿಕ್ಷಿತರಿಗೂ ವಿದ್ಯಾವಂತರಿಗೂ ವ್ಯತ್ಯಾಸ ಇದೆ. ಶಿಕ್ಷಣ ಕೇವಲ ಅಂಕಪಟ್ಟಿಗಳಿಗೆ, ಪ್ರಮಾಣಪತ್ರಗಳಿಗೆ ಸೀಮಿತವಾಗಿದ್ದಾಗ ಆಗುವ ಸಮಸ್ಯೆ ಇದು. ಶಿಕ್ಷಣ ವಿದ್ಯೆ ಆಗಿ ಪರಿವರ್ತನೆ ಆದರೆ ಸಾಮಾಜಿಕ ವಿವೇಕ ತಾನಾಗಿಯೇ ರೂಪುಗೊಳ್ಳುತ್ತಾ ಹೋಗುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: