ಪತ್ರಿಕೋದ್ಯಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪತ್ರಿಕೋದ್ಯಮ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಅಕ್ಟೋಬರ್ 31, 2022

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ

ಸಿಬಂತಿ ಪದ್ಮನಾಭ ಹಾಗೂ ಶ್ರೀಶ ಪುಣಚ ಅವರ 'ಮಾಧ್ಯಮ ತಂತ್ರಜ್ಞಾನ' ಕೃತಿಗೆ ಮುಖ್ಯಮಂತ್ರಿಗಳ ಇ-ಆಡಳಿತ
ಸಲಹೆಗಾರರೂ ಮುಕ್ತಜ್ಞಾನದ ಪ್ರತಿಪಾದಕರೂ ಆದ
ಶ್ರೀ ಬೇಳೂರು ಸುದರ್ಶನ ಅವರು ಬರೆದ ಮುನ್ನುಡಿ:

ರಾಜ್ಯದ ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ಪದವಿ ವಿದ್ಯಾರ್ಥಿಗಳಿಗಾಗಿ ರೂಪಿತವಾದ ಈ ಪುಸ್ತಕವು ಕನ್ನಡದಲ್ಲಿ ಈ ವರ್ಗದ ಮೊಟ್ಟಮೊದಲ ಮತ್ತು ಸರ್ವಸ್ಪರ್ಶೀ ಪಠ್ಯವಾಗಿದೆ ಎಂದು ಹೇಳಲು ನನಗೆ ಬೇರಾವ ದಾಖಲೆಯೂ ಬೇಡ. ಏಕೆಂದರೆ ಅಂತಹ ದಾಖಲೆಗಳು ಸಿಗುವುದೂ ಇಲ್ಲ! ಹೆಚ್ಚೆಂದರೆ 2005-07 ರ ನಡುವೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ದೂರಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಗಾಗಿ ರೂಪಿಸಿದ ಗಣಕ ಪರಿಚಯ, ಯಂತ್ರಾಂಶ – ತಂತ್ರಾಂಶ ಕುರಿತ ಪಠ್ಯಪುಸ್ತಕಗಳನ್ನು ಇಲ್ಲಿ ಉಲ್ಲೇಖಿಸಬಹುದು. ಖಾಸಗಿ ಪ್ರಕಟಣಾ ರಂಗದಲ್ಲಿ ಈ ಕುರಿತ ಬಿಡಿ ವಿಷಯಗಳ ಕೆಲವು ಪುಸ್ತಕಗಳೂ ಬಂದಿರಬಹುದು. ಆದರೆ ಪತ್ರಿಕಾರಂಗದ ವಿದ್ಯಾರ್ಥಿ - ಶಿಕ್ಷಕರಿಗೆಂದು ರೂಪಿಸಿದ ಈ ಪುಸ್ತಕವು ಈ ಕಾಲದ ಮಹತ್ವದ ಕೃತಿ. 

ಮಾಹಿತಿಸ್ಫೋಟದ ಈ ಯುಗದಲ್ಲಿ ಮಾಹಿತಿ – ಜ್ಞಾನದ ನಡುವಣ ಅಂತರವೇ ತೆಳುವಾಗುತ್ತಿದೆ. ಹುಸಿ  ವ್ಯಾಖ್ಯಾನಗಳಿಂದ, ತಪ್ಪು  ಅಂಕಿ ಅಂಶ ಮತ್ತು ವಿವರಣೆಗಳಿಂದ ಅಂತರಜಾಲವು ಕಲುಷಿತಗೊಂಡಿದೆ. ವಿಕಿಪೀಡಿಯದಂತಹ ಸ್ವಯಂಘೋಷಿತ ಮುಕ್ತಜ್ಞಾನದ ವೇದಿಕೆಗಳಲ್ಲೂ ಕುಂದುಕೊರತೆಗಳು ಕಾಣುತ್ತಿವೆ.  ಫೇಸ್‌ಬುಕ್ - ಇನ್‌ಸ್ಟಾಗ್ರಾಂ ನಂತಹ ಸಿಮ್ ಆಧಾರಿತವಲ್ಲದ ಸಮಾಜತಾಣಗಳಿಂದ ಹಿಡಿದು ವಾಟ್ಸಪ್, ಕ್ಲಬ್‌ಹೌಸ್‌ನಂತಹ ಸಿಮ್ ಆಧಾರಿತ ಸಮೂಹ ಮಾಧ್ಯಮಗಳಲ್ಲೂ ಸತ್ಯದೊಂದಿಗೇ ಅಸತ್ಯದ ಅಂಶಗಳೂ ಢಾಳಾಗಿ ವಿಜೃಂಭಿಸತೊಡಗಿವೆ. ಆನ್‌ಲೈನ್ ಪತ್ರಿಕಾ ಜಾಲತಾಣಗಳಲ್ಲಿ ಹುಸಿ ವರದಿಗಳನ್ನು ಹುಡುಕುವುದೇ ದೊಡ್ಡ ಉದ್ಯಮವಾಗಿದೆ. ಇದಕ್ಕಾಗಿಯೇ ಪ್ರತ್ಯೇಕವಾದ ಜಾಲತಾಣಗಳೂ ಹುಟ್ಟಿಕೊಂಡಿದ್ದು ಅವುಗಳಲ್ಲೂ ಪಕ್ಷಪಾತಿ ವರ್ತನೆಯನ್ನು ಕಾಣಬಹುದಾಗಿದೆ. ಕಳೆದೆರಡು ವರ್ಷಗಳ ಕೊರೋನಾ ಮಹಾಪಿಡುಗಿನ ನಂತರ ಪತ್ರಿಕಾರಂಗದ ಚಹರೆಗಳು ಇನ್ನಿಲ್ಲದಂತೆ ಬದಲಾಗಿವೆ. ಮುದ್ರಣ ಮಾಧ್ಯಮವು ಕುಗ್ಗಿ ಆನ್‌ಲೈನ್ ಮಾಧ್ಯಮದ ಸಾಧ್ಯತೆಗಳು ವಿಸ್ತರಿಸಿವೆ. ಪತ್ರಿಕಾರಂಗದ ಆರ್ಥಿಕ ಲೆಕ್ಕಾಚಾರಗಳೂ ಬದಲಾಗಿವೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಜನರಿಗೆ ನೇರವಾಗಿ ತಲುಪುವ ಆನ್‌ಲೈನ್ ಮಾಧ್ಯಮಗಳಿಗೆ ಬೇಡಿಕೆ ಒದಗಿದೆ. ಆದರೆ ಜಾಹೀರಾತು ಕೊಡುತ್ತಿದ್ದ ಹಲವು ಸಂಸ್ಥೆಗಳು ನೇರವಾಗಿಯೇ ಗ್ರಾಹಕರನ್ನು ಮುಟ್ಟುವ ತಂತ್ರಗಳಿಗೆ ಮೊರೆಹೋಗಿರುವುದು ಪತ್ರಿಕಾರಂಗದ ವರಮಾನದ ಕುಸಿತಕ್ಕೆ ಕಾರಣವಾಗಿರುವುದು ವಾಸ್ತವ. 

ಹೀಗೆ ಮಾಹಿತಿಸ್ಫೋಟದ ಯುಗವು ‘ಮಾಹಿತಿ ವಿಪ್ಲವ’ದ ಕಾಲಘಟ್ಟವಾಗಿ ನಮ್ಮೆದುರಿಗೆ ನಿಂತಿರುವ, ವೆಬ್ 1.0 ರಿಂದ ವೆಬ್ 2.0 ಅನ್ನು ದಾಟಿ ವೆಬ್ 3.0 ಅನ್ನು ಅನುಭವಿಸುತ್ತಿರುವ ಈ ಹೊತ್ತಿನಲ್ಲಿ ಕನ್ನಡದ ಮಾಧ್ಯಮ ವಿದ್ಯಾರ್ಥಿಗಳು ಮಾಡಬೇಕಾದ್ದೇನು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಇದು ಈ ಮುನ್ನುಡಿಯ ವ್ಯಾಪ್ತಿಯನ್ನು ಮೀರಿದ ಸಂಗತಿ. ‘ಮಾಧ್ಯಮ ತಂತ್ರಜ್ಞಾನ’ ಪುಸ್ತಕವು ಈ ವಿಪ್ಲವವನ್ನು ಅರಿತು ಬಾಳುವ ಹಲವು ದಿಕ್ಸೂಚಿ ಮಾಹಿತಿಗಳನ್ನು ನೀಡಿದೆ. ಇದನ್ನು ಕಂಪ್ಯೂಟರಿನ ಮಾಹಿತಿಯೆಂದೋ, ತಂತ್ರಾಂಶಗಳ ಕಸರತ್ತಿನ ವಿವರಣೆಗಳೆಂದೋ, ಆನ್‌ಲೈನ್ ಆಗುಹೋಗುಗಳ ದಾಖಲಾತಿಯೆಂದೋ ಭಾವಿಸುವಂತಿಲ್ಲ. ಈ ಪಠ್ಯವು ಜಗತ್ತಿನ ಮಾಹಿತಿ ತಂತ್ರಜ್ಞಾನ ಆಧಾರಿತ ಸಂವಹನದ ಎಲ್ಲ ಸಮಕಾಲೀನ ಆಯಾಮಗಳನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ದಾಖಲಿಸಿದ ಮಹತ್ವದ ಪ್ರಯತ್ನ. 

ಇಂತಹ ನವಮಾಧ್ಯಮದ ಪಠ್ಯಪುಸ್ತಕಗಳು ಹೆಚ್ಚುಕಡಿಮೆ ಅಂತರಜಾಲದಲ್ಲಿ ಸಿಗುವ ವಿವರಣೆಗಳ ನಕಲಿನಿಂದಲೇ ತುಂಬಿಕೊಂಡಿರುವ ಅಪಾಯ ಇದ್ದೇ ಇತ್ತು. ಆದರೆ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿರುವ ಶ್ರೀ ಸಿಬಂತಿ ಪದ್ಮನಾಭ ಮತ್ತು ಪತ್ರಿಕಾರಂಗದ ಯುವಪೀಳಿಗೆಯ ಬರಹಗಾರ ಶ್ರೀ ಶ್ರೀಶ ಪುಣಚ ಅವರಿಬ್ಬರೂ ಮೂಲತಃ ಸ್ವಂತ ಮಾಹಿತಿ ಸಂಗ್ರಹದಲ್ಲಿ ತೊಡಗಿರುವುದರಿಂದ ಈ ಪುಸ್ತಕವೂ ಅವರ ಅರಿವಿನ ಮೂಸೆಯಿಂದಲೇ ಅತ್ಯಂತ ಸ್ವಂತ ಕೃತಿಯಾಗಿ ಮೂಡಿದೆ. ವಿಕಿಪೀಡಿಯ ಪುಟಗಳಲ್ಲಿ ಇಂಥದ್ದೇ ಮಾಹಿತಿ ಸಿಗಬಹುದು; ಆದರೆ ಈ ಪಠ್ಯಪುಸ್ತಕದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಬೇಕಾದ ಮಾಹಿತಿಗಳನ್ನು ವಿವಿಯ ಪಠ್ಯಕ್ರಮದ ಅನುಸಾರವಾಗಿಯೇ ಸ್ವತಂತ್ರವಾಗಿ ರೂಪಿಸಲಾಗಿದೆ. ಈ ಅಧ್ಯಾಯಗಳ ಬರಹದ ಶೈಲಿಯನ್ನು ನೋಡಿದಾಗ, ವಿಷಯಗಳನ್ನು ಚೆನ್ನಾಗಿ ಅರಿತು ವಿಶ್ಲೇಷಿಸಿ ಬರೆದಿರುವುದನ್ನು ಖಚಿತವಾಗಿ ಗುರುತಿಸಿದ್ದೇನೆ. ಇದೇ ಈ ಪುಸ್ತಕದ ಜೀವಿತಾವಧಿ ಹೆಚ್ಚಿಸಬಲ್ಲ ಒಂದು ಮುಖ್ಯ ಗುಣವಾಗಿದೆ. 

ಹೀಗಿದ್ದೂ, ಈ ಪುಸ್ತಕವು ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ರಂಗಕ್ಕೆ ಒಂದು ಸಮಕಾಲೀನ ದಿಕ್ಸೂಚಿಯೇ ಹೊರತು, ಅರಿವಿನ ಸಮಗ್ರ ವಿಶ್ವಕೋಶವಲ್ಲ ಎಂಬುದೂ ನಿಜ. ಶ್ರಮವಹಿಸುವ ಮಾಧ್ಯಮ ವಿದ್ಯಾರ್ಥಿಗಳು ಈ ಪುಸ್ತಕದ ಮೂಲಕ ಹಲವು ರಂಗಗಳ ಬ್ರಹ್ಮಾಂಡ ಕಲಿಕೆಗೆ ಕೀಲಿಕೈ ಪಡೆಯುತ್ತಾರೆ. ಇಲ್ಲಿ ಬರೆದ ಪ್ರತಿಯೊಂದೂ ಅಧ್ಯಾಯ, ಉಪಶೀರ್ಷಿಕೆಗಳೇ ಪ್ರತ್ಯೇಕ ಮಾಧ್ಯಮ ತಂತ್ರಜ್ಞಾನ ರಂಗಗಳು. ಉದಾಹರಣೆಗೆ ಬ್ಲಾಕ್‌ಚೈನ್ ತಂತ್ರಜ್ಞಾನವನ್ನೇ ತೆಗೆದುಕೊಳ್ಳಿ. ಅದು ಮಾಹಿತಿ ತಂತ್ರಜ್ಞಾನದ ಭಾಗವಾಗಿ ಹ್ಯಾಶ್‌ಟ್ಯಾಗ್ ಹೆಸರಿನಲ್ಲಿ ಎರಡು ದಶಕಗಳಿಂದಲೂ ಬಳಕೆಯಲ್ಲಿತ್ತು. ಅದರ ಅವತಾರವೇ ಈಗ ಬದಲಾಗಿದೆ. ಈಗ ಬ್ಲಾಕ್‌ಚೈನನ್ನು ಎಲ್ಲ ಬಗೆಯ ಸತ್ಯದ ಮೂಲಕ್ಕೆ ಅಡಿಪಾಯ ಎಂದೇ ಬಗೆದು ವಿಜ್ಞಾನ, ಹಣಕಾಸು, ಭೂದಾಖಲೆ – ಹೀಗೆ ಹಲವು ರಂಗಗಳಲ್ಲಿ ಅಳವಡಿಸುತ್ತಿದ್ದಾರೆ. ಬ್ಲಾಕ್‌ಚೈನ್ ಕುರಿತಾಗಿ ಕನಿಷ್ಟ 20ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳು ಕಳೆದೆರಡು ವರ್ಷಗಳಲ್ಲೇ ಬಂದಿವೆ. ಇನ್ನು ಎಐ, ವಿಆರ್‌ಗಳ ಬಗ್ಗೆ ಹೇಳಿದಷ್ಟೂ ಕಡಿಮೆ. 

ಈ ಉತ್ತಮ ಸಂಗತಿಗಳ ನಡುವೆಯೂ ಪಠ್ಯಕ್ರಮಕ್ಕೆ ಅನುಸಾರವಾಗಿಯೇ ಪುಸ್ತಕವನ್ನು ಬರೆಯುವ ಅನಿವಾರ್ಯತೆಯಲ್ಲಿ ಮಾಧ್ಯಮರಂಗಕ್ಕೆ ಬೇಕಾದ ಕೆಲವು ಅತಿಮುಖ್ಯ ತಂತ್ರಜ್ಞಾನಗಳ ಮಾಹಿತಿಗಳು ಲಭ್ಯವಿಲ್ಲ. ಉದಾಹರಣೆಗೆ ಡೇಟಾ ಜರ್ನಲಿಸಂ. ಇಂದು ಅಂಕಿಅಂಶಗಳ ಖಚಿತ ನೆರವಿಲ್ಲದೆ ಏನನ್ನೂ ಪ್ರತಿಪಾದಿಸಲು ಆಗದು; ಅಥವಾ ಅಂಕಿಅಂಶಗಳ ನೆರವಿನಿಂದ ಹಲವು ಸುದ್ದಿಗಳನ್ನು ಹೆಕ್ಕಿ ತೆಗೆಯಬಹುದು. ಇದು ಮೂಲತಃ ಪತ್ರಿಕಾರಂಗ, ಗಣಿತ ಮತ್ತು ಮಾಹಿತಿ ತಂತ್ರಜ್ಞಾನವನ್ನು ಮೇಳೈಸಿದ ಒಂದು ಮಾಧ್ಯಮ ತಂತ್ರಜ್ಞಾನ. ವೈಜ್ಞಾನಿಕವಾಗಿ ದತ್ತಾಂಶಗಳನ್ನು ವಿಶ್ಲೇಷಿಸುವ ಮೂಲಕ ನಾಡಿನ ಹಲವು ಸಮಸ್ಯೆಗಳನ್ನು ಹುಡುಕುವ, ಪರಿಹಾರಗಳನ್ನು ಅರಸುವ ಕೆಲಸವನ್ನು ಮಾಡಬಹುದು. ಈಗಾಗಲೇ ಭಾರತ ಸರ್ಕಾರ, ವಿವಿಧ ರಾಜ್ಯ ಸರ್ಕಾರಗಳು ಮುಕ್ತ ದತ್ತಾಂಶ ಪೋರ್ಟಲ್‌ಗಳನ್ನೇ ತೆರೆದಿವೆ. ಇವನ್ನೆಲ್ಲ ಮಾಧ್ಯಮ ರಂಗದ ವಿದ್ಯಾರ್ಥಿಗಳು ಅರಿತಿರಲೇಬೇಕು.  

ಪಠ್ಯಕ್ರಮಕ್ಕೇ ಹೊಂದಿಸಿಕೊಂಡು ಈ ಪುಸ್ತಕವನ್ನು ಬರೆದಿರುವುದು ಈ ಪುಸ್ತಕದ ಮಿತಿಯೂ ಹೌದು. ಇಂತಹ ಮಾಹಿತಿಪೂರ್ಣ ಪುಸ್ತಕವು ಸಾರ್ವಜನಿಕ ಓದಿಗೂ ಸಿಗಬೇಕು ಎಂಬ ಅಪೇಕ್ಷೆಯನ್ನು ಈ ಪುಸ್ತಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮದ ವಿವಿಧ ಹೊಸ ಆಯಾಮಗಳಾದ ಮೊಬೈಲ್ ಜರ್ನಲಿಸಂ, ಡಿಜಿಟಲ್ ಸುರಕ್ಷತೆ, ಗಣಿತ ತಂತ್ರಜ್ಞಾನ, ಲಿಪ್ಯಂತರಣ, ಇ–ಸಂವಹನ, ಡಿಜಿಟಲ್ ಕಥಾ ನಿರೂಪಣೆ, ಇನ್‌ಫೋಗ್ರಾಫಿಕ್ಸ್, ಡೇಟಾ ವಿಜುಯಲೈಸೇಶನ್, ಡಿಜಿಟಲ್ ಸಂಶೋಧನೆ, ಸಮುದಾಯ ಪತ್ರಿಕಾಕಾಯಕದ ತಂತ್ರಜ್ಞಾನ ಸಾಧ್ಯತೆಗಳು, ಪೋಡ್‌ಕಾಸ್ಟಿಂಗ್, ವಿಡಿಯೋ ಜರ್ನಲಿಸಂ – ಹೀಗೆ ಹಲವು ಮಾಹಿತಿ ತಂತ್ರಜ್ಞಾನ ಆಧಾರಿತ ಪತ್ರಕರ್ತರಿಗೆ ಅತ್ಯಾವಶ್ಯಕವಾದ ಸಂಗತಿಗಳ ಬಗ್ಗೆ ಕಲಿಯಲು ಈ ಪುಸ್ತಕವು ಮೊದಲ ಹೆಜ್ಜೆ ಆಗುವುದಂತೂ ನಿಶ್ಚಿತ.       

ಇನ್ನು ಈ ಪುಸ್ತಕದ ತಿರುಳೇ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಮಾಧ್ಯಮ ತಂತ್ರಜ್ಞಾನದ ಸಂಗತಿಗಳು. ಆದ್ದರಿಂದ ಮುದ್ರಿತ ಪುಸ್ತಕವಾಗಿ ಈ ಪುಸ್ತಕದ ಬಾಳಿಕೆ (ಅದರಲ್ಲೂ ಹೊಸ - ಬೆಳೆಯುತ್ತಿರುವ ತಂತ್ರಜ್ಞಾನಗಳ ಕುರಿತಾಗಿ) ಅಲ್ಪವೇ ಎಂಬುದು ಲೇಖಕರಿಗೆ ಗೊತ್ತಿರುವ ಹಾಗೆಯೇ ಶಿಕ್ಷಕ – ವಿದ್ಯಾರ್ಥಿಗಳೂ ಅರಿಯಬೇಕು. ಪತ್ರಿಕಾರಂಗದಲ್ಲಿ ವೃತ್ತಿಗೆ ಸೇರುವ ವಿದ್ಯಾರ್ಥಿಗಳ ಕಲಿಕೆಯ ಹೊಣೆಯರಿತ ಈ ವಿಶಿಷ್ಟ ಮತ್ತು ಮಾಹಿತಿಪೂರ್ಣ ಪುಸ್ತಕವನ್ನು ಸದಾ ತತ್‌ಸಾಮಯಿಕವಾಗಿ ಇರಿಸುವ ಆನ್‌ಲೈನ್ ತಾಣವನ್ನೂ ರೂಪಿಸುವುದು ಅತ್ಯಂತ ಅವಶ್ಯಕ. ಆಗ ಈ ಪುಸ್ತಕವನ್ನೇ ವಿಸ್ತರಿಸಿ ಹಲವು ಆಕರಗಳ ತಾಣಗಳಿಗೆ ಕೊಂಡಿಗಳನ್ನು ನೀಡಬಹುದು; ಬದಲಾದ ಮಾಹಿತಿಗಳನ್ನು ಸೂಕ್ತ ಉಲ್ಲೇಖದೊಂದಿಗೆ ಸೇರಿಸಬಹುದು; ಹೊಸ ಸಂಗತಿಗಳು ಅನಾವರಣಗೊಂಡ ಹಾಗೆಲ್ಲ ಸೇರಿಸುತ್ತ ಹೋಗಬಹುದು. ಇದೇ ಒಂದು ಮುಕ್ತಜ್ಞಾನ ಮಾದರಿಯ ಮಾಧ್ಯಮತಾಣ ಆಗುತ್ತದೆ. ಇಂತಹ ತಾಣವನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಖರ್ಚುಗಳನ್ನು ವಹಿಸಿಕೊಳ್ಳುವ ಬಗ್ಗೆ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಒಂದು ಏಕಾಭಿಪ್ರಾಯಕ್ಕೆ ಬರಬಹುದು. ಆಗ ಇಂತಹ ಸದಾ ಬದಲಾಗುವ ಪಠ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ವರ್ಷಕ್ಕೊಂದು ಆವೃತ್ತಿಯಾಗಿ ಹೊಸತಾಗಿ ನೀಡಬಹುದು. ಜ್ಞಾನವನ್ನು ಮುಕ್ತವಾಗಿಟ್ಟು, ಜ್ಞಾನ ನಿರ್ವಹಣೆಗೆ ನಿಧಿ ನೀಡುವುದು ಈ ಕಾಲದ ಸಹಜ ಕ್ರಮವಾಗಿದೆ.  ಆಗಲೇ ಈ ಲೇಖಕರ ಶ್ರಮಕ್ಕೂ ಸೂಕ್ತ ಬೆಲೆ ಒದಗಿಸಿದಂತಾಗುತ್ತದೆ.  

ಮಾಧ್ಯಮ ತಂತ್ರಜ್ಞಾನವೆಂದರೆ ಕೇವಲ ಓದಿನ ಸರಕಲ್ಲ. ಸ್ವತಃ ಕಂಪ್ಯೂಟರ್ ಒಂದನ್ನು ಬಳಸಿ ಕಲಿಯಬೇಕಾದ ಸಂಗತಿಗಳು ಹೇರಳವಾಗಿವೆ. ಅದರಲ್ಲೂ ಮಾಧ್ಯಮ ವಿದ್ಯಾರ್ಥಿಗಳು ಡೆಸ್ಕ್ಟಾಪ್ ಕಂಪ್ಯೂಟರ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಬೇಕು ಎಂಬುದು ನನ್ನ ಅನುಭವದ ಮಾತು. ಕಂಪ್ಯೂಟರ್‌ಗಳನ್ನು ಬೈಪಾಸ್ ಮಾಡಿ ಸ್ಮಾರ್ಟ್ಫೋನ್‌ಗಳನ್ನೇ ಬಳಸುತ್ತಿರುವ ಈ ಸಂದರ್ಭದಲ್ಲಿ ಈ ಮಾತು ವಿಚಿತ್ರವೆನ್ನಿಸಬಹುದು. ಆದರೆ ಡೆಸ್ಕ್ಟಾಪ್ ಕಂಪ್ಯೂಟರ್ ಎಂಬುದು ಪ್ರತಿಯೊಬ್ಬ ಪತ್ರಕರ್ತನ ವೃತ್ತಿಕೋಶ. ಮಾಹಿತಿ, ಕಲಿಕೆ, ತಂತ್ರಜ್ಞಾನ, ವಿಶ್ಲೇಷಣೆ, ಚಿತ್ರಣ, ವಿಷಯ ಸಂಪಾದನೆ, ಸಂಗ್ರಹ, ಸಂವಹನ - ಎಲ್ಲವನ್ನೂ ಸಾಧ್ಯವಾಗಿಸುವ ಕಂಪ್ಯೂಟರ್‌ಗಳನ್ನು ಅಂತರಜಾಲದ ಹೊಣೆಗಾರಿಕೆಯ ಬಳಕೆಯೊಂದಿಗೆ ಪತ್ರಕರ್ತರು ಸಮಾಜಮುಖಿಯಾಗಿ ಹಲವು ವರದಿಗಳನ್ನು ರೂಪಿಸಬಹುದು. 

ಕೊನೆಯ ಮಾತಾಗಿ ಹೇಳಬಹುದಾದರೆ, ಮಾಹಿತಿ ತಂತ್ರಜ್ಞಾನ, ಮಾಧ್ಯಮ ತಂತ್ರಜ್ಞಾನ – ಎಲ್ಲವೂ ನಾಡಿನ ಕಷ್ಟ ಸುಖಗಳನ್ನು ವರದಿಗಳ ಮೂಲಕ, ವಿವಿಧ ಮಾಧ್ಯಮಗಳ ಮೂಲಕ ಜನತೆಗೆ ತಲುಪಿಸುವ, ಸರ್ಕಾರಕ್ಕೆ ತಿಳಿಸುವ ಮೂಲ ಹೊಣೆಗಾರಿಕೆಗೆ ಸಹಕಾರಿಯಾಗುವ ಅಂಶಗಳೇ ಹೊರತು, ತಂತ್ರಜ್ಞಾನವೇ ಎಲ್ಲದಕ್ಕೂ ಪರಿಹಾರವಲ್ಲ. ತಂತ್ರಜ್ಞಾನವನ್ನು ಅರಿತರೆ ಪತ್ರಕರ್ತರು ಖಂಡಿತ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಬಹುದು. ಪತ್ರಿಕಾರಂಗದಲ್ಲೂ ಉದ್ಯೋಗದ ಅವಕಾಶಗಳು ವೈವಿಧ್ಯವೂ, ವಿಸ್ತಾರವೂ ಆಗಿರುವ ಈ ಹೊತ್ತಿನಲ್ಲಿ ಈ ಪುಸ್ತಕವು ಹೊಸಕಾಲದ ಉದ್ಯೋಗಾವಕಾಶಗಳಿಗೆ ಕಿಟಕಿಯಾಗಿದೆ.     

ಇಂತಹ ತಾಜಾ ಪುಸ್ತಕವನ್ನು ಬರೆದ ಲೇಖಕರಿಬ್ಬರಿಗೂ ನನ್ನ ಅಭಿನಂದನೆಗಳು, ಶುಭಾಶಯಗಳು. ಜವಾಬ್ದಾರಿಯುತ ಮತ್ತು ತಂತ್ರಜ್ಞಾನಾಧಾರಿತ ಪತ್ರಿಕಾಕಾಯಕಕ್ಕೆ ಈ ಪುಸ್ತಕವು ನೆರವಾಗಲಿ ಎಂದು ಆಶಿಸುತ್ತೇನೆ. 

- ಬೇಳೂರು ಸುದರ್ಶನ 

  • ಪುಸ್ತಕದ ಶೀರ್ಷಿಕೆ: ಮಾಧ್ಯಮ ತಂತ್ರಜ್ಞಾನ
  • ಲೇಖಕರು: ಡಾ. ಸಿಬಂತಿ ಪದ್ಮನಾಭ ಕೆ. ವಿ. & ಡಾ.  ಶ್ರೀಶ ಎಂ. ಪುಣಚ
  • ಪ್ರಕಾಶನ: ಅಂಕುರ್ ಮೀಡಿಯಾ ಪಬ್ಲಿಕೇಶನ್ಸ್, ತುಮಕೂರು
  • ISBN: 978-81-958059-1-4
  • ಪ್ರಕಟಣೆಯ ವರ್ಷ: 2022
  • ಪುಟಗಳು: 234
  • ಬೆಲೆ: ರೂ. 250-00
  • ಪುಸ್ತಕಗಳಿಗಾಗಿ ಸಂಪರ್ಕ: 9449525854

ಸೋಮವಾರ, ಡಿಸೆಂಬರ್ 13, 2021

ಬದಲಾಗಿರುವ ಮಾಧ್ಯಮರಂಗದಲ್ಲಿ ಉದ್ಯೋಗಾವಕಾಶ ಮತ್ತು ನಿರೀಕ್ಷೆಗಳು

13 ಡಿಸೆಂಬರ್ 2021ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಮಾಧ್ಯಮರಂಗ ಯುವತಲೆಮಾರಿನ ಕನಸಿನ ಲೋಕ. ಸಾಮಾಜಿಕ ಮನ್ನಣೆ, ಒಳ್ಳೆಯ ಸಂಪಾದನೆ- ಎರಡನ್ನೂ ಒಂದೇ ಹೆಜ್ಜೆಯಲ್ಲಿ ಸಾಧಿಸಿಕೊಳ್ಳುವ ತವಕ ಹಲವರದು. ಈ ಕನಸು ಅತಿರಂಜಿತವೂ ಅಲ್ಲ, ಅಸಾಧ್ಯವೂ ಅಲ್ಲ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಬದುಕು ಕಂಡುಕೊಳ್ಳುವ ಹಂಬಲ ಹೊಂದಿರುವವರು ಅಲ್ಲಿನ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅದರ ನಿರೀಕ್ಷೆಗಳಿಗೆ ಸರಿಹೊಂದುವ ಅರ್ಹತೆಗಳನ್ನು ರೂಢಿಸಿಕೊಳ್ಳುವುದು ಮುಖ್ಯ.

ಮಾಧ್ಯಮಲೋಕ ಕಳೆದ ಒಂದು ದಶಕದಲ್ಲಿ ಊಹೆಗೂ ಮೀರಿ ಬದಲಾಗಿದೆ. ಒಂದು ಕಾಲಕ್ಕೆ ಪತ್ರಿಕೆ, ಟಿವಿ, ರೇಡಿಯೋಗಳಿಗೆ ಸೀಮಿತವಾಗಿದ್ದ ಮಾಧ್ಯಮಕ್ಷೇತ್ರ ಈಗ ಹಲವು ಆಯಾಮಗಳನ್ನು ಮೈಗೂಡಿಸಿಕೊಂಡು ಬಹುಕೋಟಿ ಉದ್ಯಮವಾಗಿ ಬೆಳೆದಿದೆ. ಅದನ್ನು ‘ಮಾಧ್ಯಮ ಮತ್ತು ಮನರಂಜನಾ ಉದ್ಯಮ’ ಎಂದು ಕರೆಯುವವರೆಗೆ ಅದರ ಸ್ವರೂಪ ಬದಲಾಗಿದೆ. 

ಭಾರತದಲ್ಲಿ ಇಂದು ಉಳಿದೆಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರ ಇದುವೇ. 2020ರಲ್ಲಿ ನಮ್ಮ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಗಾತ್ರ ರೂ. 1.38 ಲಕ್ಷ ಕೋಟಿ (ಟ್ರಿಲಿಯನ್) ಆಗಿತ್ತು. ಸದ್ಯದಲ್ಲೇ ಅದು 1.80 ಟ್ರಿಲಿಯನ್‍ಗೆ ತಲುಪುವ ನಿರೀಕ್ಷೆ ಇದೆ. ಕೋವಿಡ್ ಉಳಿದೆಲ್ಲ ಕ್ಷೇತ್ರಗಳಂತೆ ಮಾಧ್ಯಮ ಕ್ಷೇತ್ರಕ್ಕೂ ಮಹಾಹೊಡೆತ ನೀಡಿದೆ ಎಂಬುದು ಮೇಲ್ನೋಟದ ತಿಳುವಳಿಕೆ ಆದರೂ ಒಟ್ಟಾರೆ ರಂಗದ ಮೇಲೆ ಬೇರೆ ಕ್ಷೇತ್ರಗಳಿಗೆ ಆದಷ್ಟು ತೊಂದರೆ ಆಗಿಲ್ಲ; ಅಥವಾ ಮಾಧ್ಯಮ ಮತ್ತು ಮನರಂಜನಾ ಉದ್ಯಮ ಬಹುಬೇಗನೆ ಚೇತರಿಸಿಕೊಂಡಿದೆ. 

ಹಾಗೆ ನೋಡಿದರೆ ಕೋವಿಡ್ ಮಾಧ್ಯಮರಂಗದ ಸ್ವರೂಪದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಮಾಧ್ಯಮಗಳ ಡಿಜಿಟಲ್ ಆಯಾಮ ವಿಕಾಸವಾಗಿರುವುದರ ಹಿಂದೆ ಕೋವಿಡ್‍ನ ಕೊಡುಗೆಯೂ ಬಹಳ ಇದೆ. ಇನ್ನು ಎರಡು-ಮೂರು ವರ್ಷಗಳಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಶೇ. 40 ಪಾಲನ್ನು ಟಿವಿ, ಶೇ. 13 ಮುದ್ರಣ ಮಾಧ್ಯಮ, ಶೇ. 12 ಜಾಹೀರಾತು, ಶೇ. 9 ಸಿನಿಮಾ ಹಾಗೂ ಶೇ. 8ರಷ್ಟನ್ನು ಒಟಿಟಿ ಮತ್ತು ಗೇಮಿಂಗ್ ಹೊಂದಲಿವೆ ಎಂದು ಅಧ್ಯಯನಗಳು ತಿಳಿಸಿವೆ.

ಬದಲಾಗಿರುವ ಸ್ವರೂಪ

ಕೆಲವು ವರ್ಷಗಳ ಹಿಂದೆ ಒಳ್ಳೆಯ ಬರವಣಿಗೆ, ಒಳ್ಳೆಯ ಮಾತುಗಾರಿಕೆ, ವಿವಿಧ ರಂಗಗಳ ಉತ್ತಮ ತಿಳುವಳಿಕೆ ಇದ್ದರೆ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳಿಗೆ ಪ್ರವೇಶ ಸುಲಭವಾಗಿತ್ತು. ಈಗ ಮಾಧ್ಯಮರಂಗವೂ ಬದಲಾಗಿದೆ, ನಿರೀಕ್ಷೆಗಳೂ ಬದಲಾಗಿವೆ. ಇದನ್ನು ಆ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಯಸುವವರು ಅರ್ಥಮಾಡಿಕೊಳ್ಳಬೇಕು. ಬದಲಾಗಿರುವ ಕಾಲಕ್ಕೆ ತಕ್ಕಂತೆ ತಮ್ಮ ಕೌಶಲಗಳನ್ನು ಬೆಳೆಸಿಕೊಳ್ಳದೆ ಹೋದರೆ ಮಾಧ್ಯಮರಂಗಕ್ಕೆ ಪ್ರವೇಶ ಇಲ್ಲ, ಪ್ರವೇಶಿಸಿದರೂ ಯಶಸ್ಸು ಇಲ್ಲ, ಉಳಿಗಾಲವೂ ಇಲ್ಲ.

ಮಾಧ್ಯಮಗಳನ್ನು ಮುದ್ರಣ ಮತ್ತು ವಿದ್ಯುನ್ಮಾನವೆಂದು ವಿಂಗಡಿಸುವ ಪದ್ಧತಿಯೇ ಹಳತಾಯಿತು. ಅಂತಹ ಪ್ರತ್ಯೇಕತೆ ಈಗ ಉಳಿದುಕೊಂಡಿಲ್ಲ. ಮುದ್ರಣ ಮಾಧ್ಯಮ, ಟಿವಿ ಚಾನೆಲ್‍ಗಳು ಇಂಟರ್ನೆಟ್‍ನಲ್ಲಿವೆ, ಫೇಸ್‍ಬುಕ್‍ನಂತಹ ಸಾಮಾಜಿಕ ತಾಣಗಳಲ್ಲಿವೆ, ಯೂಟ್ಯೂಬ್ ಚಾನೆಲ್‍ಗಳನ್ನು ಹೊಂದಿವೆ. ಪತ್ರಿಕೆಗಳು ಸಾಮಾಜಿಕ ತಾಣಗಳಲ್ಲಿ ಲೈವ್ ಕಾರ್ಯಕ್ರಮಗಳನ್ನು ನೀಡುತ್ತಿವೆ, ಪಾಡ್‍ಕಾಸ್ಟ್, ಕ್ಲಬ್‍ಹೌಸ್ ಚರ್ಚೆಗಳನ್ನು ನಡೆಸುತ್ತಿವೆ, ದೃಶ್ಯ-ಶ್ರವ್ಯ ಸಾಮಗ್ರಿಗಳನ್ನು ಹೆಚ್ಚುಹೆಚ್ಚಾಗಿ ಒದಗಿಸುತ್ತಿವೆ. ಹೆಚ್ಚೆಂದರೆ ಎಲ್ಲವನ್ನೂ ಒಟ್ಟಾಗಿ ಡಿಜಿಟಲ್ ಮಾಧ್ಯಮಗಳು ಎಂದು ಕರೆಯಬಹುದೇನೋ? ಡಿಜಿಟಲೇ ಮಾಧ್ಯಮರಂಗದ ಭವಿಷ್ಯ ಎಂದು ದಶಕದ ಹಿಂದೆಯೇ ಘೋಷಿಸಿಯಾಗಿದೆ; ಕೋವಿಡ್ ಅದನ್ನು ಬೇಗನೇ ನಿಜವಾಗಿಸಿದೆ.

ಅಗತ್ಯ ಕೌಶಲಗಳು

ಮಾಧ್ಯಮರಂಗದಲ್ಲಾಗಿರುವ ಬದಲಾವಣೆ ತಂತ್ರಜ್ಞಾನದ ಕೊಡುಗೆ ಎಂದ ಮೇಲೆ ಅದರ ಜ್ಞಾನ ಇಂದು ನಿರ್ಣಾಯಕ. ಮಾಧ್ಯಮ ಕೌಶಲಗಳ ಕೊತೆಗೆ ತಾಂತ್ರಿಕ ನೈಪುಣ್ಯವುಳ್ಳವರಿಗೆ ಇಂದು ಮೀಡಿಯಾದಲ್ಲಿ ತೆರೆದತೋಳಿನ ಸ್ವಾಗತ. ತಪ್ಪಿಲ್ಲದ ಬರವಣಿಗೆ, ತಡವರಿಸದ ಮಾತು, ಪ್ರಚಲಿತ ವಿದ್ಯಮಾನಗಳ ಉತ್ತಮ ಮಾಹಿತಿ, ಇತಿಹಾಸ, ಸಾಹಿತ್ಯ, ಆರ್ಥಿಕತೆ, ರಾಜಕೀಯ ಮೊದಲಾದ ಕ್ಷೇತ್ರಗಳ ವಿಸ್ತೃತ ತಿಳುವಳಿಕೆ, ಕಂಪ್ಯೂಟರ್ ಜ್ಞಾನ- ಇವೆಲ್ಲವುಗಳ ಹೊತೆಗೆ ಮಾಧ್ಯಮರಂಗಕ್ಕೆ ಸೇರಬಯಸುವವರಿಗೆ ಇಂದು ಡಿಜಿಟಲ್ ಕೌಶಲಗಳು ಬಹಳ ಅಗತ್ಯ. 

ಸೃಜನಶೀಲ ಚಿಂತನೆ, ಆಡಿಯೋ-ವೀಡಿಯೋ ಎಡಿಟಿಂಗ್, ಸಾಮಾಜಿಕ ಮಾಧ್ಯಮಗಳ ಕಾರ್ಯವೈಖರಿಯ ತಿಳುವಳಿಕೆ, ಡಿಜಿಟಲ್ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್ (SEO) ಕೌಶಲಗಳನ್ನೂ ಇಂದು ಕರಗತ ಮಾಡಿಕೊಳ್ಳುವುದು ಅಗತ್ಯ.

ಅನಿಮೇಶನ್, ವಿಶುವಲ್ ಇಫೆಕ್ಟ್, ಗೇಮಿಂಗ್, ಕಾಮಿಕ್ಸ್- ಇವನ್ನು ‘ಛಾಂಪಿಯನ್ ಸೆಕ್ಟರ್ಸ್’ ಎಂದು ಮಾರುಕಟ್ಟೆ ಹಾಗೂ ಸರ್ಕಾರ ಎರಡೂ ಗುರುತಿಸಿವೆ. ಮಾಧ್ಯಮರಂಗ ಈ ಆಯಾಮಗಳನ್ನು ತನ್ನೊಳಗೆ ಆವಾಹಿಸಿಕೊಳ್ಳುತ್ತಿದೆ. ಪತ್ರಿಕೆ-ಟಿವಿಗಳ ಆದಾಯ ಮೂಲದ ಲೆಕ್ಕಾಚಾರ ಬದಲಾಗಿದೆ. ಸರ್ಕ್ಯುಲೇಶನ್, ಟಿ.ಆರ್.ಪಿ. ಜಾಗದಲ್ಲಿ ಕ್ಲಿಕ್ಸ್, ವ್ಯೂಸ್ ಪದಗಳು ಕೂಡ ಸೇರಿಕೊಂಡಿವೆ. ಕೃತಕ ಬುದ್ಧಿಮತ್ತೆ, ಮಶಿನ್ ಲರ್ನಿಂಗ್‍ಗಳು ಮಾಧ್ಯಮಗಳ ಕಾರ್ಯವೈಖರಿಯ ಮೇಲೂ ಪ್ರಭಾವ ಬೀರಿವೆ. ಮಾಧ್ಯಮಕ್ಷೇತ್ರದಲ್ಲಿ ಉದ್ಯೋಗ, ಭವಿಷ್ಯ ಬಯಸುವವರು ಈ ಬದಲಾವಣೆಗಳನ್ನೂ ಆರ್ಥಮಾಡಿಕೊಳ್ಳಬೇಕು. ಮಾಧ್ಯಮ ಶಿಕ್ಷಣ-ತರಬೇತಿ ನೀಡುವ ಕಾಲೇಜು, ವಿಶ್ವವಿದ್ಯಾನಿಲಯಗಳೂ ಇವನ್ನು ಗಮನಿಸದೆ ಹೋದರೆ ಅವರ ಕೋರ್ಸುಗಳೂ ಅಪ್ರಸ್ತುತವಾಗಿಬಿಡುತ್ತವೆ. ಅವುಗಳ ಪಠ್ಯಕ್ರಮ, ತರಬೇತಿಯ ವಿಧಾನ, ಅಧ್ಯಾಪಕರ ತಿಳುವಳಿಕೆ- ಎಲ್ಲವೂ ಕಾಲಕ್ಕೆ ಅನುಗುಣವಾಗಿ ‘ಅಪ್ಡೇಟ್’ ಆಗುವುದು ಅನಿವಾರ್ಯ.

ಇಷ್ಟೆಲ್ಲ ಹೇಳಿದ ಮೇಲೂ ಮರೆಯದಿರಬೇಕಾದ ಒಂದು ಮಾತು: ತಂತ್ರಜ್ಞಾನದಲ್ಲಿ ಎಷ್ಟೇ ಪ್ರಗತಿ ಆದರೂ ಸಾಮಾಜಿಕ ಬದ್ಧತೆಯೇ ಮಾಧ್ಯಮರಂಗದ ಶಾಶ್ವತ ಅಂತರ್ಗತ ಮೌಲ್ಯ. ಅದಿಲ್ಲದೆ ಮಾಧ್ಯಮಗಳಿಗೆ ಅಸ್ತಿತ್ವ ಇಲ್ಲ. ಮಾಧ್ಯಮರಂಗದಲ್ಲಿ ಉದ್ಯೋಗ ಕಂಡುಕೊಳ್ಳಬಯಸುವವರಿಗೂ ಅಂತಿಮವಾಗಿ ಇದೇ ದಾರಿದೀಪ.

ಹೊಸ ಉದ್ಯೋಗಾವಕಾಶಗಳು

ವೆಬ್ ಕಂಟೆಂಟ್ ಮ್ಯಾನೇಜರ್: ವಿವಿಧ ಉದ್ಯಮ, ಸಂಸ್ಥೆಗಳ ವೆಬ್ಸೈಟ್, ಆನ್ಲೈನ್ ಹೂರಣವನ್ನು ನಿರ್ವಹಿಸುವುದು.

ಸೋಶಿಯಲ್ ಮೀಡಿಯಾ ಮ್ಯಾನೇಜರ್: ಉದ್ಯಮಗಳು ಹಾಗೂ ಗಣ್ಯರ ಸಾಮಾಜಿಕ ಜಾಲತಾಣ ಪುಟಗಳ ನಿರ್ವಹಣೆ.

ಮೀಡಿಯಾ ಪ್ಲಾನರ್: ಯಾವ ಕಂಪೆನಿಗಳು ತಮ್ಮ ಜಾಹೀರಾತು, ಪ್ರಚಾರಕ್ಕಾಗಿ ಯಾವ ಮಾಧ್ಯಮಗಳನ್ನು ಹೇಗೆ ಬಳಸಿಕೊಳ್ಳಬೇಕೆಂದು ನಿರ್ಧರಿಸುವುದು.

ಪಿಆರ್‍ಒ (ಸಾರ್ವಜನಿಕ ಸಂಪರ್ಕ ಅಧಿಕಾರಿ): ವಿವಿಧ ಉದ್ಯಮ, ವ್ಯಕ್ತಿ, ಸಂಸ್ಥೆಗಳ ವರ್ಚಸ್ಸು ವೃದ್ಧಿ, ಈವೆಂಟ್ ಮ್ಯಾನೇಜ್ಮೆಂಟ್ ಹಾಗೂ ಮಾಧ್ಯಮ ಸಂಬಂಧದ ಜವಾಬ್ದಾರಿ ನಿರ್ವಹಿಸುವುದು.

ಡಿಜಿಟಲ್ ಮಾರ್ಕೆಟರ್: ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಮೊಬೈಲ್ ಮಾರ್ಕೆಟಿಂಗ್ ಇತ್ಯಾದಿಗಳನ್ನು ನೋಡಿಕೊಳ್ಳುವುದು.

ಜಾಹೀರಾತು ಕ್ಷೇತ್ರ: ಜಾಹೀರಾತು ಸ್ಕ್ರಿಪ್ಟ್, ವಿನ್ಯಾಸ ರಚನೆ, ಆಡಿಯೋ-ವಿಶುವಲ್ ಎಡಿಟಿಂಗ್, ಇತ್ಯಾದಿ.

ಟೆಕ್ನಿಕಲ್ ರೈಟರ್: ತಾಂತ್ರಿಕ ಕ್ಷೇತ್ರಗಳಿಗೆ ವಿಶಿಷ್ಟವಾದ ಬರವಣಿಗೆ, ಪ್ರಚಾರ ಹಾಗೂ ತರಬೇತಿ ಸಾಮಗ್ರಿಗಳ ತಯಾರಿ, ಭಾಷಾಂತರ ಮುಂತಾದ ಜವಾಬ್ದಾರಿ.

ಅನಿಮೇಟರ್/ಮಲ್ಟಿಮೀಡಿಯಾ ಸ್ಪೆಶಲಿಸ್ಟ್: ಜಾಹೀರಾತು, ಟಿವಿ, ಸಿನಿಮಾ, ಧಾರಾವಾಹಿ, ಡಿಜಿಟಲ್ ಮೀಡಿಯಾಗಳಲ್ಲಿ ಹೇರಳ ಅವಕಾಶ.

- ಸಿಬಂತಿ ಪದ್ಮನಾಭ ಕೆ. ವಿ.


ಬುಧವಾರ, ಆಗಸ್ಟ್ 18, 2021

ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಪತ್ರಿಕೆಗಳು

ವಿದ್ಯಾರ್ಥಿ ಪಥಆಗಸ್ಟ್ 2021 ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ಅವಿಸ್ಮರಣೀಯ. ಒಂದೆಡೆ ರಾಷ್ಟ್ರೀಯ ಆಂದೋಲನದ ಕಿಚ್ಚನ್ನು ದೇಶದ ಮೂಲೆಮೂಲೆಗೆ ಪಸರಿಸುತ್ತಲೇ, ಇನ್ನೊಂದೆಡೆ ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ ಹೆಗ್ಗಳಿಕೆ ಪತ್ರಿಕೆಗಳದ್ದು. ಹಾಗೆ ನೋಡಿದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವೂ ಪತ್ರಿಕೋದ್ಯಮದ ಇತಿಹಾಸವೂ ಜತೆಜತೆಯಾಗಿ ಸಾಗುತ್ತದೆ. ಸ್ವಾತಂತ್ರ್ಯ ಚಳುವಳಿ ತೀವ್ರ ಸ್ವರೂಪ ಪಡೆದಂತೆಲ್ಲಾ ಪತ್ರಿಕೋದ್ಯಮದ ಬೇರುಗಳು ಕೂಡ ವಿಸ್ತಾರಗೊಳ್ಳುತ್ತಾ ಹೋದವು. ಸ್ವಾತಂತ್ರ್ಯ ಚಳುವಳಿ, ರಾಷ್ಟ್ರೀಯತೆಯ ಭಾವ ಹಾಗೂ ಪತ್ರಿಕಾಲೋಕಗಳು ಒಟ್ಟೊಟ್ಟಿಗೆ ಬೆಳೆದವು. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರಾಗಿದ್ದರು; ಪತ್ರಿಕೆಗಳನ್ನು ಸ್ವಾತಂತ್ರ್ಯ ಹೋರಾಟದ ಪ್ರೇರಕ ಸಾಧನಗಳೆಂದು ಬಲವಾಗಿ ನಂಬಿದ್ದರು.


ಇನ್ನೊಂದು ಪ್ರಮುಖ ವಿಚಾರವೆಂದರೆ, ನಮ್ಮ ಪತ್ರಿಕೋದ್ಯಮದ ಇತಿಹಾಸದ ಒಳಗೆಯೇ ಒಂದು ಸ್ವಾತಂತ್ರ್ಯಕ್ಕಾಗಿನ ಹೋರಾಟದ ಗಾಥೆಯಿದೆ. ಅದು ಪತ್ರಿಕಾ ಸ್ವಾತಂತ್ರ್ಯದ ಹೋರಾಟ; ಪತ್ರಿಕೆಗಳು ಹಾಗೂ ಪತ್ರಕರ್ತರು ತಮ್ಮ ಅಸ್ತಿತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ. ಪತ್ರಿಕೆಗಳಿಂದ ಯಾವ ಕಾಲಕ್ಕೂ ತಮಗೆ ತೊಂದರೆ ತಪ್ಪಿದ್ದಲ್ಲವೆಂದು ತಿಳಿದ ಬ್ರಿಟಿಷರು ಒಂದರ ಮೇಲೊಂದರತೆ ಪತ್ರಿಕಾ ಶಾಸನಗಳನ್ನು ಜಾರಿಗೊಳಿಸುತ್ತಾ ಹೋದರು. ಪತ್ರಿಕೆಗಳ ಬಾಯಿಮುಚ್ಚಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದರು. ಅದಕ್ಕೆ ಪ್ರತಿಯಾಗಿ ನಮ್ಮ ಪತ್ರಿಕಾಲೋಕವೂ ಇನ್ನಷ್ಟು ಬಲಿಷ್ಟವಾಗುತ್ತಲೇ ಹೋಯಿತು- ಕೆಳಕ್ಕೆ ಬಡಿದಷ್ಟೂ ಹೆಚ್ಚು ಚೈತನ್ಯದಿಂದ ಚಿಮ್ಮುವ ಚೆಂಡಿನ ಹಾಗೆ. ಭಾರತದ ಪತ್ರಿಕೋದ್ಯಮದ ಇತಿಹಾಸವೆಂದರೆ ಪತ್ರಿಕಾ ಸ್ವಾತಂತ್ರ್ಯಕ್ಕಾಗಿನ ನಡೆದ ಹೋರಾಟದ ಇತಿಹಾಸ ಎಂಬ ಮಾತೂ ಇದೆ.

ಭಾರತದ ಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ (1780) ಅನ್ನು ಆರಂಭಿಸಿದ ಜೇಮ್ಸ್ ಆಗಸ್ಟಸ್ ಹಿಕ್ಕಿಯೇ ಕಂಪೆನಿ ಸರ್ಕಾರದಿಂದ ಸಾಕಷ್ಟು ದಬ್ಬಾಳಿಕೆಗೆ ಒಳಗಾಗಬೇಕಾಯಿತು. ಆತ ಸ್ವತಃ ಈಸ್ಟ್ ಇಂಡಿಯಾ ಕಂಪೆನಿಯ ನೌಕರನಾಗಿದ್ದವನು. ಎರಡು ವರ್ಷ ಪತ್ರಿಕೆ ನಡೆಸುವುದೇ ಅವನಿಗೆ ಹರಸಾಹಸ ಆಗಿಹೋಯಿತು. ಅಷ್ಟರಮಟ್ಟಿಗೆ ಪ್ರಭುತ್ವ ಆತನ ಬೆನ್ನಿಗೆ ಬಿದ್ದಿತ್ತು. ತನ್ನ ಪ್ರಕಟಣೆಯುದ್ದಕ್ಕೂ ಬೆಂಗಾಲ್ ಗೆಜೆಟ್ ಆಗಿನ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ನ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ಭಾರತದ ಪತ್ರಿಕಾ ಇತಿಹಾಸದ ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ಪತ್ರಿಕೆಗಳನ್ನು ಯುರೋಪಿಯನ್ನರೇ ಆರಂಭಿಸಿದ್ದರು. ಕುತೂಹಲಕರ ಅಂಶವೆಂದರೆ ಭಾರತದ ಸ್ವಾತಂತ್ರ್ಯವನ್ನು ಬೆಂಬಲಿಸಿದವರಲ್ಲೂ ಸಾಕಷ್ಟು ಮಂದಿ ಯುರೋಪಿಯನ್ನರಿದ್ದಾರೆ. ಅವರಲ್ಲಿ ಅನೇಕರು ಪತ್ರಕರ್ತರೂ ಆಗಿದ್ದರು. ‘ಕಲ್ಕತ್ತ ಜರ್ನಲ್’ (1818) ಆರಂಭಿಸಿದ ಜೇಮ್ಸ್ ಸಿಲ್ಕ್ ಬಕಿಂಗ್‌ಹ್ಯಾಮ್ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯುರೋಪಿಯನ್ನರಲ್ಲಿ ಮೊದಲಿಗ. ಇನ್ನೊಬ್ಬ ಬ್ರಿಟಿಷ್ ಪತ್ರಕರ್ತ ಬಿ. ಜಿ. ಹಾರ್ನಿಮನ್ ಭಾರತದ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕನಾಗಿದ್ದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿದ್ದ. ಅನೇಕ ಭಾರತೀಯ ಪತ್ರಕರ್ತರಿಗೆ ಸ್ಫೂರ್ತಿಯಾಗಿದ್ದ.

‘ಭಾರತೀಯ ಪುನರುತ್ಥಾನದ ಪಿತಾಮಹ’ ಎಂದು ಹೆಸರಾಗಿದ್ದ ಶ್ರೇಷ್ಠ ಸಮಾಜಸುಧಾರಕ ರಾಜಾ ರಾಮಮೋಹನ ರಾಯರಿಗೂ ತಮ್ಮ ಧ್ಯೇಯೋದ್ದೇಶಗಳನ್ನು ಸಾಧಿಸಲು ಪತ್ರಿಕೆಗಳು ಪ್ರಮುಖ ಪರಿಕರಗಳಾಗಿದ್ದವು. ಜನರನ್ನು ವೈಚಾರಿಕವಾಗಿ ತಲುಪಲು ಪತ್ರಿಕೆ ಒಂದು ಸಮರ್ಥ ಮಾಧ್ಯಮ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಂಡ ಮೊದಲ ಭಾರತೀಯರಾದ ಅವರು ಸಂಬದ್ ಕೌಮುದಿ, ಮೀರತ್-ಉಲ್-ಅಕ್ಬರ್, ಬ್ರಾಹ್ಮಿನಿಕಲ್ ಮ್ಯಾಗಜಿನ್, ಬ್ರಾಹ್ಮಿನ್ ಸೇವಡಿ ಪತ್ರಿಕೆಗಳನ್ನು ನಡೆಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅವರು ನಡೆಸಿದ ಹೋರಾಟವೂ ದೊಡ್ಡದೇ. 1823ರಲ್ಲಿ ಕಂಪೆನಿ ಸರ್ಕಾರ ಪತ್ರಿಕಾ ನಿಯಂತ್ರಣ ಕಾಯ್ದೆ ಜಾರಿಮಾಡಲು ಹೊರಟಾಗ ಅದನ್ನು ಸಾರ್ವಜನಿಕವಾಗಿ ವಿರೋಧಿಸಿ ಸರ್ಕಾರಕ್ಕೆ ಬಲವಾದ ಸಂದೇಶ ಕಳಿಸಿದವರು ಅವರು. ಸಮಾನ ಮನಸ್ಕರೊಂದಿಗೆ ಅವರು ಸರ್ಕಾರಕ್ಕೆ ಸಲ್ಲಿಸಿದ ಲಿಖಿತ ಮನವಿ ‘ಭಾರತದ ಪತ್ರಿಕಾಲೋಕದ ಏರೋಪಗಿಟಿಕಾ’ ಎಂದೇ ಪ್ರಸಿದ್ಧ. ರಾಮಮೋಹನರಾಯರಿಗೆ ‘ದೇಶಭಾಷಾ ಪತ್ರಿಕೋದ್ಯಮದ ಪಿತಾಮಹ’ ಎಂಬ ಶ್ರೇಷ್ಠ ಮನ್ನಣೆಯೂ ಇದೆ.

1857ರ ಸಂಗ್ರಾಮದ ಬಳಿಕ:

ಭಾರತೀಯ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕುದೆಸೆ ಒದಗಿದ್ದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ. ಒಂದು ದೃಷ್ಟಿಯಲ್ಲಿ ಈ ಘಟನೆ ಭಾರತೀಯ ವೃತ್ತಪತ್ರಿಕೆಗಳ ಬೆಳವಣಿಗೆಗೆ ತಾತ್ಕಾಲಿಕ ಅಡ್ಡಿಯುಂಟುಮಾಡಿದರೂ, ಅಲ್ಲಿಂದ ನಂತರ ಪತ್ರಿಕೆಗಳು ಭಿನ್ನ ಹಾದಿ ಹಿಡಿದವು. ಶಿಶಿರ್ ಕುಮಾರ್ ಘೋಷರ ‘ಅಮೃತ ಬಜಾರ್ ಪತ್ರಿಕೆ’, ತಿಲಕರ ‘ಕೇಸರಿ’, ಜಿ. ಸುಬ್ರಹ್ಮಣ್ಯ ಅಯ್ಯರ್ ಹಾಗೂ ವೀರರಾಘವಾಚಾರಿಯವರ ‘ದಿ ಹಿಂದೂ’, ಪಂಡಿತ ಮದನ ಮೋಹನ ಮಾಳವೀಯರ ‘ಅಭ್ಯುದಯ’ ಮೊದಲಾದ ಪತ್ರಿಕೆಗಳು ಬ್ರಿಟಿಷ್ ವಿರೋಧಿ ಸತ್ಯವನ್ನು ಹೇಳುವ ಕೆಲಸವನ್ನು ಸ್ವಯಂಪ್ರೇರಣೆಯಿಂದ ಹಾಗೂ ದಿಟ್ಟತನದಿಂದ ಮಾಡುತ್ತಾಹೋದವು.

ಬ್ರಿಟಿಷರ ಕಣ್ಣಲ್ಲಿ ಸಿಪಾಯಿ ದಂಗೆ ಎನಿಸಿಕೊಂಡ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪತ್ರಿಕೆಗಳಿಂದ ದೊರೆತ ವ್ಯಾಪಕ ಬೆಂಬಲ ನೋಡಿ, ಅವುಗಳನ್ನು ಹೇಗಾದರೂ ಮಾಡಿ ಹೊಸಕಿ ಹಾಕುವ ಯೋಚನೆಗಳು ಬ್ರಿಟಿಷರಲ್ಲಿ ಮೂಡತೊಡಗಿದವು.  ಅಲ್ಲಿಂದ ಪತ್ರಿಕಾ ನಿರ್ಬಂಧಗಳ ಸರಣಿ ಆರಂಭವಾಯಿತು. 1857 ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸದೊಂದು ಅಧ್ಯಾಯವಾಗಿದ್ದರೆ, ಭಾರತೀಯ ಪತ್ರಿಕೆಗಳ ಪಾಲಿಗೆ ಕರಾಳಯುಗದ ಆರಂಭವೂ ಆಯಿತು. 1857ರಲ್ಲೇ ಜಾರಿಗೆ ಬಂದ ಪತ್ರಿಕಾ ಕಾನೂನಿಗೆ ಪತ್ರಿಕೆ ಹಾಗೂ ಪುಸ್ತಕಗಳ ಪ್ರಸಾರವನ್ನು ನಿಯಂತ್ರಿಸುವ ಉದ್ದೇಶವೇ ಇತ್ತು. ಅದರ ಮೊದಲ ಬಲಿಯೇ ದ್ವಾರಕಾನಾಥ ಠಾಕೂರ್ ಮತ್ತು ಇತರ ದೇಶಪ್ರೇಮಿಗಳು ನಡೆಸುತ್ತಿದ್ದ ‘ಬೆಂಗಾಲ್ ಹರಕಾರು’ ಎಂಬ ಪತ್ರಿಕೆ.

ದೇಶಭಾಷಾ ಪತ್ರಿಕೆಗಳಾದ ಬಾಂಬೆ ಸಮಾಚಾರ, ಜಾಮೆ-ಜಮ್‌ಷೀರ್, ರಾಸ್ತ್ಗಾಫ್ತರ್ ಪತ್ರಿಕೆಗಳು ಮೊದಲನೇ ಸ್ವಾತಂತ್ರ್ಯ ಸಂಗ್ರಾಮವನ್ನು ಕೊಂಡಾಡಿದವು. ಅದರ ಮಹತ್ವವನ್ನು ಪ್ರಭಾವಶಾಲಿಯಾಗಿ ಓದುಗರಿಗೆ ತಲುಪಿಸಿದವು. ಇದನ್ನು ಮುಂಬೈಯ ಗುಜರಾತಿ ಪತ್ರಿಕಾ ಲೋಕವೂ ಬೆಂಬಲಿಸಿತು. ಹರೀಶ್‌ಚಂದ್ರ ಮುಖರ್ಜಿಯವರ ‘ಹಿಂದೂ ಪೇಟ್ರಿಯಟ್’ ಎಂಬ ಪತ್ರಿಕೆಯದ್ದು ಇಲ್ಲಿ ಪ್ರಮುಖ ಪಾತ್ರ. 

ಈಶ್ವರಚಂದ್ರ ವಿದ್ಯಾಸಾಗರ ಮತ್ತು ದ್ವಾರಕಾನಾಥ ವಿದ್ಯಾಭೂಷಣರು ನಡೆಸುತ್ತಿದ್ದ ‘ಸೋಮ್ ಪ್ರಕಾಶ್’ ಎಂಬ ಬಂಗಾಳಿ ಪತ್ರಿಕೆ ರಾಜಕೀಯ ಸ್ವಾತಂತ್ರ್ಯ ತತ್ವಗಳನ್ನು ಪ್ರತಿಪಾದಿಸಿತು. ಅದರಲ್ಲಿ ಪ್ರಕಟವಾಗುತ್ತಿದ್ದ ಬಿರುಸಾದ ಸಂಪಾದಕೀಯ, ಲೇಖನಗಳನ್ನು ಎದುರಿಸುವ ಶಕ್ತಿ ಸರ್ಕಾರಕ್ಕೆ ಇದ್ದಂತಿರಲಿಲ್ಲ. ಅದನ್ನೂ ಪತ್ರಿಕಾ ಕಾನೂನು ತಡೆದಾಗ ‘ನವಾಭಿ ಬಾಕರ್’ ಎಂಬ ಹೊಸ ಹೆಸರಿನೊಂದಿಗೆ ಪ್ರಕಟವಾಗತೊಡಗಿತು.

ಲಾರ್ಡ್ ಲಿಟ್ಟನ್ ಪ್ರಕಾರವಂತೂ ಸರ್ಕಾರದ ವಿರುದ್ಧ ಯಾವುದೇ ಸುದ್ದಿ, ಲೇಖನವನ್ನು ಪ್ರಕಟಿಸುವುದು ಕೂಡ ರಾಜದ್ರೋಹಕ್ಕೆ ಸಮನಾಗಿತ್ತು. ಈ ರಾಜದ್ರೋಹವನ್ನು ಹತ್ತಿಕ್ಕಲೆಂದೇ ಆತ 1878ರಲ್ಲಿ ಇನ್ನೊಂದು ಪತ್ರಿಕಾಶಾಸವನ್ನು ಜಾರಿಗೆ ತಂದ. ಇದರಲ್ಲಿ ದೇಶಭಾಷಾ ಪತ್ರಿಕೆಗಳ ಸುದ್ದಿನಿಯಂತ್ರಣಕ್ಕೆ ಅವಕಾಶವಿತ್ತು. ಆಗಷ್ಟೇ ಬೆಳೆಯತ್ತಿದ್ದ ಭಾರತೀಯ ಭಾಷೆಗಳ ಪತ್ರಿಕೋದ್ಯಮಕ್ಕೂ, ಸ್ವಾತಂತ್ರ್ಯ ಹೋರಾಟಕ್ಕೂ ಈ ಶಾಸನ ಕೊಡಲಿಪೆಟ್ಟು ನೀಡಿದ ಹಾಗಾಯಿತು. ಈ ಶಾಸನದ ಏಟಿನಿಂದ ತಪ್ಪಿಸಿಕೊಳ್ಳಲು ‘ಅಮೃತ ಬಜಾರ್ ಪತ್ರಿಕಾ’ ರಾತೋರಾತ್ರಿ ಬಂಗಾಳಿಯಿAದ ಇಂಗ್ಲಿಷ್ ಭಾಷೆಗೆ ಬದಲಾಯಿತು.

ಅಖಿಲ ಭಾರತ ಕಾಂಗ್ರೆಸ್‌ನ ಹುಟ್ಟು ಪತ್ರಿಕೋದ್ಯಮಕ್ಕೆ ಹೊಸ ಹುರುಪು ನೀಡಿತು. ದಿನಪತ್ರಿಕೆಗಳ ಬೆಳವಣಿಗೆ ದೃಷ್ಟಿಯಿಂದ ಪತ್ರಿಕಾರಂಗದಲ್ಲಿ ಸಾಕಷ್ಟು ಉತ್ಸಾಹ ಕಾಣಿಸಿಕೊಂಡಿತು. ಭಾರತೀಯ ನಾಯಕರುಗಳ ಭಾಷಣಗಳನ್ನು, ರಾಜಕೀಯ ವಿದ್ಯಮಾನಗಳನ್ನು ವಿವರವಾಗಿ ಪ್ರಕಟಿಸುವ ಪ್ರವೃತ್ತಿ ಆರಂಭವಾಯಿತು. ‘ದೇಶಭಾಷಾ ಪತ್ರಿಕೆಗಳ ಭಾಷೆಯಲ್ಲಿ ಸಮತೂಕ ತರುವ ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ನ್ಯಾಯವಿಮರ್ಶಕ ಭಾವನೆಯನ್ನುಂಟುಮಾಡುವ’ ಉದ್ದೇಶದಿಂದ 1891ರಲ್ಲಿ ಭಾರತದಲ್ಲಿ ಪ್ರಥಮ ಪತ್ರಿಕಾ ಸಂಘಟನೆ ‘ನೇಟಿವ್ ಪ್ರೆಸ್ ಅಸೋಯೇಶನ್’ ಆರಂಭವಾದದ್ದು ಕೂಡ ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯೇ.

ತಿಲಕರ ಮರಾಠ ಹಾಗೂ ಕೇಸರಿ ಪತ್ರಿಕೆಗಳು ಭಾರತೀಯರ ಅಂತರಂಗವನ್ನು ಬಹುವಾಗಿ ತಟ್ಟಿದವು. ತಿಲಕರು ತಮ್ಮ ವಾಕ್ಚಾತುರ್ಯದಿಂದ ಹೋರಾಟಗಾರರನ್ನು ಬಡಿದೆಬ್ಬಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಅವರ ಲೇಖನಗಳು ಕ್ರಾಂತಿಯ ಕಿಡಿಯನ್ನು ಹಚ್ಚುವಷ್ಟು ಪ್ರಖರವಾಗಿದ್ದವು. 1897ರಲ್ಲಿ ಅವರು ಕೇಸರಿಯಲ್ಲಿ ಬರೆದ ಲೇಖನವೊಂದು ರಾಜದ್ರೋಹಕರವಾಗಿದೆಯೆಂದು ಆರೋಪಿಸಿ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಲಾಯಿತು; ಇನ್ನೊಂದು ಸಂದರ್ಭವನ್ನು ಬಳಸಿ ಆರು ವರ್ಷ ಗಡೀಪಾರು ಮಾಡಲಾಯಿತು.

20ನೇ ಶತಮಾನದಲ್ಲಿ:

20ನೇ ಶತಮಾನದ ಆರಂಭ ರಾಷ್ಟ್ರೀಯತೆ ಒಂದು ಧರ್ಮವಾಗಿ ಬೆಳೆದ ಕಾಲ. 1905ರ ಬಂಗಾಳದ ವಿಭಜನೆಯನ್ನು ಪತ್ರಿಕೆಗಳು ವಿರೋಧಿಸಿ ಬರೆದವು. ಬ್ರಿಟಿಷ್ ಸರ್ಕಾರದ ಒಡೆದು ಆಳುವ ನೀತಿಯನ್ನು ಟೀಕಿಸಿದವು. ಹಾಗೆಯೇ, ಸ್ವದೇಶಿ ಚಳುವಳಿಯನ್ನು ಬೆಂಬಲಿಸಿದವು. ಆದರೆ ಮಾರ್ಲೆ ಮಿಂಟೋ ಸುಧಾರಣೆಗಳ ವಿಷಯದಲ್ಲಿ ಉದಾರವಾದಿ ಮತ್ತು ಉಗ್ರರಾಷ್ಟ್ರೀಯವಾದಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಂತೆ ಪತ್ರಿಕಾಲೋಕದಲ್ಲೂ ಎರಡು ಪಂಗಡಗಳಾದವು. ಇದೊಂದು ರೀತಿಯಲ್ಲಿ ಪತ್ರಿಕೆಗಳ ಸಂಘಟಿತ ಹೋರಾಟಕ್ಕೆ ಆದ ಒಂದು ಸಣ್ಣ ಹಿನ್ನಡೆಯೇ. ಆದರೂ ಎರಡೂ ಗುಂಪಿನ ಪತ್ರಿಕೆಗಳು ತಮ್ಮದೇ ಆದ ರೀತಿಯಲ್ಲಿ ಹೋರಾಟದ ಕಾವು ಉಳಿಸಿಕೊಂಡವು. ಸುಧಾರಣೆಗಳು ಅಪಕ್ಷವಾಗಿಯೆಂದು ಟೀಕಿಸಿದವು. ಸುಧಾರಣೆಗಳನ್ನು ಖಂಡಿಸಿದ ರಾಷ್ಟ್ರೀಯವಾದಿ ನಾಯಕರಿಗೆ ಜೈಲುಶಿಕ್ಷೆಯಾಯಿತು. ಪೂನಾದ ‘ಕೇಸರಿ’ ಹಾಗೂ ನಾಗಪುರದ ‘ದೇಶಸೇವಕ’ ಪತ್ರಿಕೆಗಳು ಉಗ್ರಪಂಥವನ್ನು ಬೆಂಬಲಿಸಿದವು. 1908ರ ಪತ್ರಿಕಾ ಶಾಸನದ ಪರಿಣಾಮವಾಗಿ ಏಳು ಮುದ್ರಣಾಲಯಗಳ ಜಪ್ತಿಯಾಯಿತು, ಐವರು ಸಂಪಾದಕರ ಮೇಲೆ ಮೊಕದ್ದಮೆ ಹೂಡಲಾಯಿತು, ಹಾಗೂ ಅನೇಕರಿಗೆ ಎಚ್ಚರಿಕೆ ನೀಡಲಾಯಿತು.

1910ರ ವೇಳೆಗೆ ಮಾಧವರಾವ್ ಮಧ್ಯೆ ಎಂಬವರು ‘ಹಿತವಾದ’ ಎಂಬ ಮರಾಠಿ ಪತ್ರಿಕೆಯನ್ನು ಆರಂಭಿಸಿದರು. 1913ರಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಪತ್ರಿಕೆ ಅದರ ಮಾಲೀಕತ್ವ ವಹಿಸಿಕೊಂಡು ಇಂಗ್ಲಿಷ್ ಪತ್ರಿಕೆಯನ್ನಾಗಿ ಪರಿವರ್ತಿಸಿತು. ಅದೇ ವರ್ಷ ಫಿರೋಜ್ ಷಾ ಮೆಹ್ತಾ ‘ಬಾಂಬೆ ಕ್ರಾನಿಕಲ್’ ಆರಂಭಿಸಿದರು. ಪ್ರಸಿದ್ಧ ಪತ್ರಕರ್ತ ಬಿ. ಜಿ. ಹಾರ್ನಿಮನ್ ಅದರ ಸಂಪಾದಕರಾಗಿದ್ದರು. ಅನೇಕ ಸಂಕಷ್ಟಗಳ ನಡುವೆಯೂ ಸ್ವಾತಂತ್ರ್ಯ ಚಳುವಳಿಗೆ ಬೆಂಬಲ ನೀಡಿದ ಹಾರ್ನಿಮನ್ ಸ್ವತಂತ್ರ, ಮುಕ್ತ ಹಾಗೂ ನಿರ್ಭೀತ ಪತ್ರಿಕೋದ್ಯಮದ ಪ್ರವರ್ತಕರೂ ಆಗಿದ್ದರು.

ಆ ಕಾಲದ ಉರ್ದು ಪತ್ರಿಕೆಗಳು ಬ್ರಿಟಿಷರನ್ನು ಟೀಕಿಸಲು ಹಿಂಜರಿಯುತ್ತಿದ್ದ ಸಂದರ್ಭ ಮೌಲಾನಾ ಅಬುಲ್ ಕಲಾಂ ಆಜಾದ್ ‘ಅಲ್-ಹಿಲಾಲ್’ ಸ್ಥಾಪಿಸಿದರು. ಅಸಹಕಾರ ಚಳುವಳಿ ಉತ್ತುಂಗದಲ್ಲಿದ್ದ ಕಾಲದಲ್ಲಿ ಗಾಂಧೀವಾದಿ ಶಿವಪ್ರಸಾದ್ ಗುಪ್ತಾ ‘ಆಜ್’ ಎಂಬ ಹಿಂದಿ ಪತ್ರಿಕೆಯನ್ನು ಆರಂಭಿಸಿದರು.

1919ರ ಮಾಂಟೆಗೋ ಚೆಲ್ಮ್ಸ್’ಫರ್ಡ್  ಸುಧಾರಣೆಗಳ ಸಂದರ್ಭದಲ್ಲಿ ಮಂದಗಾಮಿಗಳು ತಮ್ಮ ಪಂಥವನ್ನು ಬಲಪಡಿಸಲು ಹೊಸ ಪತ್ರಿಕೆಯೊಂದರ ಅವಶ್ಯಕತೆ ಮನಗಂಡರು. ಪರಿಣಾವಾಗಿ ಪಂಡಿತ ಮದನಮೋಹನ ಮಾಳವೀಯರ ನೇತೃತ್ವದಲ್ಲಿ ‘ಲೀಡರ್’ ಎಂಬ ದಿನಪತ್ರಿಕೆ ಹುಟ್ಟಿಕೊಂಡಿತು. ಫಿರೋಜ್ ಷಾ ಮೆಹ್ತಾ, ಗೋಪಾಲಕೃಷ್ಣ ಗೋಖಲೆ ಮುಂತಾದವರು ಇದಕ್ಕೆ ಬೆಂಬಲ ನೀಡಿದರು. ಮಾಂಟೆಗೋ ಚೆಲ್ಮ್ಸ್’ಫರ್ಡ್  ಸುಧಾರಣೆಗಳ ಕಾರಣದಿಂದ ಭಾರತೀಯರಲ್ಲಿ ತೀವ್ರ ಅಸಮಾಧಾನ ಉಂಟಾದ ಹಿನ್ನೆಲಯಲ್ಲಿ ಅವುಗಳನ್ನು ಮರುಪರಿಶೀಲಿಸುವ ಉದ್ದೇಶದಿಂದ ಸೈಮನ್ ಆಯೋಗ ನೇಮಕವಾಯಿತು. ಆದರೆ ಸ್ವಾತಂತ್ರ್ಯ ಹೋರಾಟಗಾರರು ಇದಕ್ಕೆ ಪಂಥಗಳ ಭೇದವಿಲ್ಲದೆ ಒಕ್ಕೊರಲ ವಿರೋಧ ವ್ಯಕ್ತಪಡಿಸಿದರು ಮತ್ತು ಇದಕ್ಕೆ ಭಾರತದ ಪತ್ರಿಕೆಗಳು ಕೂಡ ದೊಡ್ಡ ಮಟ್ಟದ ಪ್ರಚಾರ ನೀಡಿದವು. ಪತ್ರಿಕೆಗಳು ತಮ್ಮ ಮುಕ್ಕಾಲು ಭಾಗವನ್ನೂ ಸೈಮನ್ ಆಯೋಗದ ವಿರೋಧದ ಸುದ್ದಿಗಳಿಗೆ ಮೀಸಲಿರಿಸಿದವು.

ಹಿಂದ್ ಸ್ವರಾಜ್ಯ, ಯುಗಾಂತರ, ಗುಜರಾತ್, ಶಕ್ತಿ, ಕಾಳ್, ಧರ್ಮ, ಹಿತೈಷಿ, ಖುಲ್ನವಾಸಿ, ಕಲ್ಯಾಣಿ, ಬೀದಾರಿ, ಪ್ರೇಮ, ವರ್ತಮಾನ್, ಆಕಾಶ್, ಕೇಸರಿ, ಕರ್ನಾಟಕ ವೈಭವ, ರಾಷ್ಟçಮತ, ವಿಶ್ವವೃತ್ತ, ನ್ಯೂ ಇಂಡಿಯಾ, ವಂದೇ ಮಾತರಂ, ಸಂಧ್ಯಾ, ಬೆಂಗಾಲಿ, ಹಿತವಾದಿ, ಡೆಕ್ಕಾ ಗಜೆಟ್, ನವಶಕ್ತಿ, ಸಹಾಯಕ್ ಮುಂತಾದ ಪತ್ರಿಕೆಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದ ಗದಾಪ್ರಹಾರಕ್ಕೆ ತುತ್ತಾದವು. ಜಲಿಯನ್ ವಾಲಾಭಾಗ್ ಹತ್ಯಾಂಕಾಂಡವನ್ನು ಪತ್ರಿಕೆಗಳು ತೀವ್ರವಾಗಿ ವಿರೋಧಿಸಿದವು. ತಮಗೊದಗಬಹುದಾದ ತೊಂದರೆಗಳನ್ನೂ ಲೆಕ್ಕಿಸದೆ ಬ್ರಿಟಿಷರ ಪೈಶಾಚಿಕ ಕೃತ್ಯವನ್ನು ಉಗ್ರ ಪದಗಳಲ್ಲಿ ಜರೆದವು. 

ಮೂಲತಃ ಭಾರತದವರಲ್ಲದೇ ಹೋದರೂ ಸ್ವಾತಂತ್ರ್ಯ ಆಂದೋಲನವನ್ನು ಬೆಂಬಲಿಸಿದವರಲ್ಲಿ ಆ್ಯನಿಬೆಸೆಂಟ್ ಕೂಡ ಒಬ್ಬರು. ಅವರು ಅನೇಕ ರಾಷ್ಟ್ರೀಯವಾದಿ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು. ತಿಲಕರ ಬೆಂಬಲದೊಂದಿಗೆ ಹೋಂ ರೂಲ್ ಚಳುವಳಿ ಆರಂಭಿಸಿದ ಅವರು ಅದಕ್ಕೆ ಪೂರಕವಾಗಿಯೇ ‘ಕಾಮನ್ ವೀಲ್’ ಹಾಗೂ ‘ನ್ಯೂ ಇಂಡಿಯಾ’ ಪತ್ರಿಕೆಗಳನ್ನು ಹೊರತಂದರು. ಸರ್ಕಾರ ಆ್ಯನಿಬೆಸೆಂಟರನ್ನೂ ರಾಜದ್ರೋಹದ ಆರೋಪದಲ್ಲಿ ಜೈಲಿಗೆ ತಳ್ಳಿದಾಗ ಮದ್ರಾಸ್‌ನ ‘ದಿ ಹಿಂದೂ’ ಅವರ ಬೆಂಬಲಕ್ಕೆ ನಿಂತಿತು. ಅವರನ್ನು ‘ಭಾರತೀಯ ಸ್ವಾತಂತ್ರ್ಯದ ನಂದಾದೀಪ’ ಎಂದು ಅರ್ಹವಾಗಿಯೇ ಕರೆಯಲಾಗಿದೆ. 1920ರಲ್ಲಿ ಮದ್ರಾಸ್ ಸಮೀಪದ ಅಡ್ಯಾರಿನಲ್ಲಿ ದೇಶದ ಮೊತ್ತಮೊದಲ ಪತ್ರಿಕಾ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆಯೂ ಆ್ಯನಿಬೆಸೆಂಟರದ್ದೇ. ‘ನ್ಯೂ ಇಂಡಿಯಾ’ ಕಚೇರಿಯೇ ಕಲಿಕಾರ್ಥಿಗಳ ಪ್ರಯೋಗಾಲಯ ಆಗಿತ್ತು.

ಮೋತಿಲಾಲ ನೆಹರು ಹಾಗೂ ಸಿ. ಆರ್. ದಾಸ್ ಸ್ಥಾಪಿಸಿದ್ದ ಸ್ವರಾಜ್ಯ ಪಕ್ಷ ತನ್ನ ಅಭಿಪ್ರಾಯಗಳ ಪ್ರಸಾರಕ್ಕಾಗಿ ಅದಾಗಲೇ ಆಕಾಲಿ ಸಿಖ್ಖರಿಂದ ಸ್ಥಾಪಿತವಾಗಿದ್ದ ‘ಹಿಂದೂಸ್ಥಾನ್ ಟೈಮ್ಸ್’ ಅನ್ನು ಖರೀದಿಸಿದರು. ಅದಕ್ಕೆ ಮದನ ಮೋಹನ ಮಾಳವೀಯ, ಲಾಲಾ ಲಜಪತರಾಯ್, ರಾಜಾ ನರೇಂದ್ರನಾಥ್, ಎಂ. ಆರ್. ಜಯಕರ್ ಬೆಂಬಲವಿತ್ತು. ಬಂಗಾಳ ಪ್ರಾಂತದಲ್ಲಿ ಸ್ವರಾಜ್ಯ ಪಕ್ಷಕ್ಕೆ ಬೆಂಬಲ ನೀಡಲು ಸಿ. ಆರ್. ದಾಸ್ 1923ರಲ್ಲಿ ‘ಫಾರ್ವರ್ಡ್’ ಎಂಬ ಪತ್ರಿಕೆ ಆರಂಭಿಸಿದರು. ಅವರು ಅರವಿಂದ ಘೋಷರ ‘ವಂದೇ ಮಾತರಂ’ ಪತ್ರಿಕೆಗೆ ಕ್ರಮವಾಗಿ ಲೇಖನ ಬರೆಯುತ್ತಿದ್ದರು.

ಗಾಂಧೀಯುಗದ ಪತ್ರಿಕೋದ್ಯಮ:

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರವೇಶ ಹೇಗೆ ಹೊಸ ಅಧ್ಯಾಯವನ್ನು ಆರಂಭಿಸಿತೋ, ಭಾರತೀಯ ಪತ್ರಿಕೋದ್ಯಮದಲ್ಲೂ ಹೊಸ ಹಾದಿಯನ್ನು ತೆರೆಯಿತು. ಗಾಂಧೀಜಿಯವರು ಸ್ವತಃ ಅಭಿಜಾತ ಪತ್ರಕರ್ತರಾಗಿದ್ದುದೇ ಇದಕ್ಕೆ ಪ್ರಮುಖ ಕಾರಣ. ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ‘ಇಂಡಿಯನ್ ಒಪಿನಿಯನ್’ ಪತ್ರಿಕೆ ನಡೆಸಿದ, ಅದರ ಮೂಲಕ ಹೋರಾಟಗಳನ್ನು ಸಂಘಟಿಸಿದ ಅನುಭವವಿತ್ತು. ತಮ್ಮ ತತ್ವ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದಕ್ಕೆ ಗಾಂಧೀಜಿಯವರಿಗೆ ಪತ್ರಿಕೆಗಳು ಪ್ರಧಾನ ಸಾಧನಗಳಾಗಿದ್ದವು. ಈ ವಿಚಾರದಲ್ಲಿ ಇಂಗ್ಲಿಷ್ ಪತ್ರಿಕೆಗಳಿಗಿಂತಲೂ ದೇಶಭಾಷಾ ಪತ್ರಿಕೆಗಳು ಹೆಚ್ಚಿನ ಪಾತ್ರ ವಹಿಸಬಲ್ಲವು ಎಂದು ಅವರಿಗೆ ತಿಳಿದಿತ್ತು. ಸತ್ಯ, ಅಹಿಂಸೆ, ಸತ್ಯಾಗ್ರಹ, ಚರಕ, ಖಾದಿ, ಪಾನನಿರೋಧ ಮೊದಲಾದ ಅವರ ವಿಶಿಷ್ಟ ಚಿಂತನೆಗಳನ್ನು ಪಸರಿಸಿ ಹಳ್ಳಿಹಳ್ಳಿಗೂ ಗಾಂಧೀವಾದವನ್ನು ಒಯ್ದ ಕೀರ್ತಿ ಪತ್ರಿಕೆಗಳಿಗೆ ಸಲ್ಲುತ್ತದೆ. ಅವರು ನಡೆಸಿದ ‘ಯಂಗ್ ಇಂಡಿಯಾ’, ‘ನವಜೀವನ’ ಹಾಗೂ ‘ಹರಿಜನ’ ಪತ್ರಿಕೆಗಳು ಕೂಡ ಅವರ ಒಟ್ಟಾರೆ ಹೋರಾಟದ ಮಾದರಿಯನ್ನೇ ಅನುಸರಿಸುತ್ತವೆ.

ಗಾಂಧೀಜಿಯವರ ಲೇಖನಗಳು ದೇಶದಾದ್ಯಂತ ವಿವಿಧ ಪತ್ರಿಕೆಗಳಲ್ಲಿ ಹಾಗೂ ವಿವಿಧ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದವು. ಸರಳ ಹಾಗೂ ನೇರ ವಾಕ್ಯಗಳ ಪ್ರಭಾವಶಾಲಿ ಬರವಣಿಗೆ ಅವರಿಗೆ ಕರತಲಾಮಲಕವಾಗಿತ್ತು. ಅಲಂಕಾರಿಕ, ಉತ್ಪೆçÃಕ್ಷೆಯ ಭಾಷೆಯಲ್ಲಿ ಅವರು ಬರೆಯುತ್ತಿರಲಿಲ್ಲ. ವಾಸ್ತವಾಂಶಗಳಿAದ ದೂರಸರಿಯುತ್ತಿರಲಿಲ್ಲ. ವಿವೇಚನಾರಹಿತ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ವಿಚಾರಗಳನ್ನು ಹರಡುವಲ್ಲಿ ಸುದ್ದಿಪತ್ರಿಕೆಗಳು ಶಕ್ತಿಯುತ ಮಾಧ್ಯಮವಾಗಬಲ್ಲವು ಎಂಬುದನ್ನು ಅವರು ಅರಿತಿದ್ದರು. 1922ರಲ್ಲಿ ‘ಶೇಕಿಂಗ್ ದಿ ಮೀನ್’ ಎಂಬ ಲೇಖನದಲ್ಲಿ ಸರ್ಕಾರವನ್ನು ಉಗ್ರವಾಗಿ ಟೀಕಿಸಿದ್ದಕ್ಕೆ ರಾಷ್ಟçದ್ರೋಹದ ಆರೋಪದಲ್ಲಿ 6 ವರ್ಷ ಜೈಲುಶಿಕ್ಷೆಯಾಯಿತು.

ಅಸಹಕಾರ ಚಳುವಳಿ, ಕಾನೂನು ಭಂಗ ಚಳುವಳಿ ಹಾಗೂ ಕ್ವಿಟ್ ಇಂಡಿಯಾ ಹೋರಾಟಗಳಲ್ಲೂ ಪತ್ರಿಕೆಗಳು ಭಾಗವಹಿಸಿದ ರೀತಿ ಅನನ್ಯ. ಅಸಹಕಾರ ಚಳುವಳಿ ಆರಂಭವಾದಾಗ ಅದಕ್ಕೆ ಉತ್ತೇಜನ ಕೊಡುವ ಲೇಖನಗಳನ್ನು ಪ್ರಕಟಿಸುವ ಪತ್ರಿಕೆಗಳ ಮೇಲೆ ಕ್ರಮ ಕೈಗೊಳ್ಳುವ ಹೊಸ ಕಲಂ ಅನ್ನು ಆಗಿನ ಪತ್ರಿಕಾ ಶಾಸನಕ್ಕೆ ಸೇರಿಸಲಾಯಿತು. 1937ರಲ್ಲೂ ಇನ್ನೂ ಎರಡು ಹೊಸ ಕಾನೂನುಗಳನ್ನು ಜಾರಿಗೊಳಿಸಲಾಯಿತು. ಗಾಂಧೀಜಿಯವರ ದಂಡಿ ನಡಿಗೆಯನ್ನು ಪತ್ರಿಕೆಗಳು ಚೆನ್ನಾಗಿಯೇ ಬೆಂಬಲಿಸಿದವು. ಉಪ್ಪಿನ ಮೇಲೆ ಬ್ರಿಟಿಷರು ವಿಧಿಸಿದ ತೆರಿಗೆಯನ್ನು ಕಟುಶಬ್ದಗಳಿಂದ ಟೀಕಿಸಿದವು. ಇದೇ ಸಂದರ್ಭದಲ್ಲಿ ಜಾರಿಯಾದ ಭಾರತ ಪತ್ರಿಕೆಗಳ ತುರ್ತು ಶಾಸನಕ್ಕೆ ಅನೇಕ ಪತ್ರಿಕೆಗಳು ತುತ್ತಾದವು. ಠೇವಣಿ, ಮುದ್ರಣಾಲಯಗಳನ್ನು ಕಳೆದುಕೊಂಡವು.

ಪತ್ರಿಕೆಗಳಿಗೆ ಉಂಟಾದ ಚಿಂತಾಜನಕ ಪರಿಸ್ಥಿತಿಯನ್ನು ವಿರೋಧಿಸಲು ‘ದಿ ಹಿಂದೂ’ ಪತ್ರಿಕೆಯ ಸಂಪಾದಕ ಎ. ರಂಗಸ್ವಾಮಿ ಅಯ್ಯಂಗಾರರ ನೇತೃತ್ವದಲ್ಲಿ ಪತ್ರಿಕೋದ್ಯಮಿಗಳು ಹಾಗೂ ಸಂಪಾದಕರ ಮೊದಲ ರಾಷ್ಟçಮಟ್ಟದ ಸಭೆ ನಡೆಯಿತು. ಪತ್ರಿಕಾ ಶಾಸನವನ್ನು ಹಿಂತೆಗೆದುಕೊಳ್ಳಲು ಒತ್ತಡ ಹೇರಲಾಯಿತು. ಆದರೆ ಸರ್ಕಾರ ಅದನ್ನು ಲೆಕ್ಕಿಸಲಿಲ್ಲ. ಬದಲಿಗೆ, ಪತ್ರಿಕೆಗಳ ಮೇಲಿನ ದಬ್ಬಾಳಿಕೆಯೇ ಇನ್ನಷ್ಟು ಹೆಚ್ಚಾಯಿತು.

ಮದ್ರಾಸ್ ಪ್ರಾಂತ್ಯದಲ್ಲಿ ನವಜೀವನ, ಸ್ವರಾಜ್ಯ, ಸ್ವದೇಶಿ ಮಿತ್ರನ್, ದ್ರಾವಿಡಿಯನ್ ಪ್ರೆಸ್, ತಮಿಳುನಾಡು ಪ್ರೆಸ್, ಆಂಧ್ರಪತ್ರಿಕಾ ಪ್ರೆಸ್, ಹಿಂದಿ ಪ್ರಚಾರ ಪ್ರೆಸ್‌ಗಳನ್ನು ಮುಚ್ಚಲಾಯಿತು. ಅಮೃತ ಬಜಾರ್ ಪತ್ರಿಕಾ, ಸಕಾಲ್, ಹಿತವಾದ, ಬಾಂಬೆ ಕ್ರಾನಿಕಲ್, ಅಲ್ ಹಿಲಾಲ್, ಯಂಗ್ ಇಂಡಿಯಾ, ಆಜ್, ಹರಿಜನ್, ನವಜೀವನ್, ಫ್ರೀ ಪ್ರೆಸ್ ಜರ್ನಲ್, ಸಂಯುಕ್ತ ಕರ್ನಾಟಕ, ದಿ ಹಿಂದೂ, ಮಾತೃಭೂಮಿ, ಮಲಯಾಳ ಮನೋರಮ- ಈ ಕಾಲದ ಹೋರಾಟವನ್ನು ಬೆಳೆಸಿದ ಪ್ರಮುಖ ಪತ್ರಿಕೆಗಳು.

ಸ್ವಾತಂತ್ರ್ಯ ಚಳುವಳಿ ಉತ್ತುಂಗದಲ್ಲಿದ್ದಾಗ ದೇಶಾಭಿಮಾನಿ ಪತ್ರಕರ್ತ ಎಸ್. ಸದಾನಂದ ಆರಂಭಿಸಿದ ‘ಫ್ರೀ ಪ್ರೆಸ್ ಜರ್ನಲ್’ ಒಂದು ದೊಡ್ಡ ಕೊಡುಗೆ. ಅವರು ಅದಕ್ಕಿಂತ ಮೊದಲೇ ಸ್ವಾತಂತ್ರ್ಯ ಹೋರಾಟದ ಸುದ್ದಿಗಳನ್ನು ಪತ್ರಿಕೆಗಳಿಗೆ ಹಂಚುವುದಕ್ಕಾಗಿ ‘ಫ್ರೀ ಪ್ರೆಸ್ ಇಂಡಿಯಾ’ ಎಂಬ ಸುದ್ದಿಸಂಸ್ಥೆಯನ್ನು ಆರಂಭಿಸಿದ್ದರು. ಆದರೆ ಅನೇಕ ಪತ್ರಿಕೆಗಳು ಇದಕ್ಕೆ ಚಂದಾದಾರರಾಗಲು ಹೆದರಿದವು. ಕೊನೆಗೆ ಅವರೇ ಸ್ವತಃ ಪತ್ರಿಕೆ ಆರಂಭಿಸಬೇಕಾಯಿತು. ಗಾಂಧೀಜಿಯಂತೆ ಸದಾನಂದ ಕೂಡ ಪತ್ರಿಕವೃತ್ತಿಯನ್ನು ಸಮಾಜಸೇವೆ ಎಂದು ಪರಿಗಣಿಸಿದ್ದರು. ಗಾಂಧೀಜಿಯವರ ‘ಯಂಗ್ ಇಂಡಿಯಾ’ದಲ್ಲೇ ಅವರಿಗೆ ತರಬೇತಿ, ಮಾರ್ಗದರ್ಶನಗಳು ಲಭಿಸಿದ್ದವು.

ಭಾರತೀಯರ ಆತ್ಮಾಭಿಮಾನವನ್ನೂ, ಹೋರಾಟದ ಛಲವನ್ನೂ ಇಮ್ಮಡಿಗೊಳಿಸಿದ ಹೆಗ್ಗಳಿಕೆ ಪತ್ರಿಕೆಗಳದ್ದು. ಭ್ರೂಣಾವಸ್ಥೆಯಲ್ಲಿದ್ದ ರಾಷ್ಟ್ರೀಯತೆ ಪತ್ರಿಕೆಗಳ ನಿರಂತರ ಶ್ರಮದಿಂದ ವ್ಯಾಪಕವಾಗಿ ಹರಡಿತು. ಇದರ ಅರ್ಥ ಭಾರತದಲ್ಲಿದ್ದ ಎಲ್ಲ ಪತ್ರಿಕೆಗಳೂ ಸ್ವಾತಂತ್ರ್ಯ ಹೋರಾಟಕ್ಕೆ ಟೊಂಕ ಕಟ್ಟಿ ನಿಂತವು ಎಂದಲ್ಲ.  ಚಳುವಳಿಯನ್ನು ಬೆಂಬಲಿಸದ ಪತ್ರಿಕೆಗಳೂ ಇದ್ದವು. ಆಂಗ್ಲರ ಒಡೆತನದಲ್ಲಿದ್ದ ಟೈಮ್ಸ್ ಆಫ್ ಇಂಡಿಯಾ, ದಿ ಸ್ಟೇಟ್ಸ್ಮನ್, ಪಯೋನೀರ್ ಮುಂತಾದ ಪತ್ರಿಕೆಗಳು ರಾಷ್ಟ್ರೀಯ ಹೋರಾಟವನ್ನು ಖಂಡಿಸಿದವು. ದೇಶವಿಭಜನೆಯನ್ನು ಬೆಂಬಲಿಸಿದ ಪತ್ರಿಕೆಗಳೂ ಇದ್ದವು. ಉಳಿದ ಚಳವಳಿಗೆ ಸೃಷ್ಟಿಯಾದ ಜನಾಭಿಪ್ರಾಯವನ್ನು ದೇಶ ವಿಭಜನೆಯ ವಿರುದ್ಧವಾಗಿ ಪತ್ರಿಕೆಗಳು ಮೂಡಿಸಲಿಲ್ಲ ಎಂಬ ಅಭಿಪ್ರಾಯವೂ ಪತ್ರಿಕಾ ಇತಿಹಾಸಕಾರರಲ್ಲಿ ಇದೆ. ಆದರೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ಪತ್ರಿಕಾ ಇತಿಹಾಸವನ್ನು ಒಟ್ಟಾಗಿ ನೋಡುವಾಗ ಅವೆರಡೂ ಪರಸ್ಪರ ಪೂರಕವಾಗಿ ಕೆಲಸ ಮಾಡಿದ್ದೇ ಪ್ರಧಾನವಾಗಿ ಕಾಣಿಸುತ್ತದೆ. ಅಂತಹದೊಂದು ಮಹಾನ್ ಪರಂಪರೆ ನಮ್ಮ ಪತ್ರಿಕೆಗಳಿಗೆ ಇದೆ ಎಂಬ ಭಾವನೆಯೇ ಅವುಗಳ ಕುರಿತಾದ ಗೌರವ ಹಾಗೂ ಆಶಾಭಾವನೆಯನ್ನು ಹೆಚ್ಚಿಸುತ್ತದೆ.

ಆಧಾರ:

1. ಭಾರತೀಯ ಪತ್ರಿಕೋದ್ಯಮ: ಡಾ. ನಾಡಿಗ ಕೃಷ್ಣಮೂರ್ತಿ, 1969

2. ಹಿಸ್ಟರಿ ಆಫ್ ಇಂಡಿಯನ್ ಪ್ರೆಸ್: ಬಿ. ಎನ್. ಅಹುಜಾ, 2009

3. ಜರ್ನಲಿಸಂ ಇನ್ ಇಂಡಿಯಾ: ರಂಗಸ್ವಾಮಿ ಪಾರ್ಥಸಾರಥಿ, 1997

4. ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಪತ್ರಿಕೋದ್ಯಮ: ಡಾ. ಎಲ್. ಪಿ. ರಾಜು, 2008


ಲೇಖನ: ಸಿಬಂತಿ ಪದ್ಮನಾಭ, ತುಮಕೂರು ವಿಶ್ವವಿದ್ಯಾನಿಲಯ

ಗುರುವಾರ, ಡಿಸೆಂಬರ್ 31, 2020

ಮಾಧ್ಯಮ ಶಿಕ್ಷಣಕ್ಕೆ ನೂರು: ಸವಾಲು ನೂರಾರು

31 ಡಿಸೆಂಬರ್ 2020ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಭಾರತದ ಮಾಧ್ಯಮ ಶಿಕ್ಷಣಕ್ಕೆ ನೂರು ವರ್ಷ ತುಂಬಿತು. ಶತಮಾನವೆಂಬುದು ಚರಿತ್ರೆಯಲ್ಲಿ ಬಹುದೊಡ್ಡ ಅವಧಿ. ಒಂದು ಲಕ್ಷಕ್ಕೂ ಹೆಚ್ಚು ಪತ್ರಿಕೆಗಳು, 900ರಷ್ಟು ಟಿವಿ ಚಾನೆಲ್‌ಗಳು, 800ರಷ್ಟು ರೇಡಿಯೋ ಕೇಂದ್ರಗಳು, ಅಸಂಖ್ಯ ಆನ್ಲೈನ್ ಸುದ್ದಿತಾಣಗಳಿರುವ ಈ ದೇಶದಲ್ಲಿ ನೂರು ವರ್ಷ ಪೂರೈಸಿರುವ ಮಾಧ್ಯಮ ಶಿಕ್ಷಣ ಏನು ಮಾಡಿದೆ, ಏನು ಮಾಡಬೇಕು ಎಂಬ ಪ್ರಶ್ನೆ ಮಹತ್ವದ್ದು.

ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆ ಸಮಾಜ ಸುಧಾರಕಿ ಆನಿಬೆಸೆಂಟ್‌ಗೆ ಸಲ್ಲುತ್ತದೆ. ಅವರು 1920ರಲ್ಲಿ ತಮ್ಮ ಥಿಯೋಸಾಫಿಕಲ್ ಸೊಸೈಟಿಯ ಅಡಿಯಲ್ಲಿ ಮದ್ರಾಸ್‌ನ ಅಡ್ಯಾರ್‌ನಲ್ಲಿರುವ ನ್ಯಾಷನಲ್ ಯೂನಿವರ್ಸಿಟಿಯ ಮೂಲಕ ಮೊದಲ ಬಾರಿಗೆ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದರು. ಅವರೇ ನಡೆಸುತ್ತಿದ್ದ 'ನ್ಯೂ ಇಂಡಿಯಾ' ಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಪಡೆಯುವ ವ್ಯವಸ್ಥೆಯೂ ಇತ್ತು.

ಮುಂದೆ ಆಲಿಘಡ ಮುಸ್ಲಿಂ ವಿಶ್ವವಿದ್ಯಾನಿಲಯ (1938), ಲಾಹೋರಿನ ಪಂಜಾಬ್ ವಿಶ್ವವಿದ್ಯಾನಿಲಯ (1941), ಮದ್ರಾಸ್ (1947) ಮತ್ತು ಕಲ್ಕತ್ತಾ (1948) ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮದ ಕೋರ್ಸುಗಳು ಬಂದವು. 1951ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಪರಿಚಯಿಸುವುದರೊಂದಿಗೆ ಕರ್ನಾಟಕಕ್ಕೆ ಮಾಧ್ಯಮ ಶಿಕ್ಷಣ ಪ್ರವೇಶಿಸಿತು.

ಆನಿಬೆಸೆಂಟ್ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದಾಗ ಅವರ ಗಮನ ಇದ್ದುದು ಪತ್ರಿಕೆಗಳಿಗಾಗಿ ಬರೆಯುವುದರ ಮತ್ತು ಸಂಪಾದಿಸುವುದರ ಬಗ್ಗೆ. ಆಗ ಇದ್ದ ಪತ್ರಿಕೆಗಳ ಸಂಖ್ಯೆಯೂ ಬೆರಳೆಣಿಕೆಯಷ್ಟು. ಭಾರತಕ್ಕೆ ರೇಡಿಯೋ ಬಂದದ್ದೇ 1921ರಲ್ಲಿ. ಸಿನಿಮಾ ಇನ್ನೂ ಮೂಕಿಯುಗದಲ್ಲೇ ಇತ್ತು. ಟಿವಿ, ಕಂಪ್ಯೂಟರ್, ಇಂಟರ್ನೆಟ್‌ಗಳೆಲ್ಲ ನಮ್ಮ ಕಲ್ಪನೆಗೂ ಮೀರಿದವಾಗಿದ್ದವು. ಹೀಗಾಗಿ 'ಜರ್ನಲಿಸಂ' ಎಂದಾಗ ಮುದ್ರಣ ಮಾಧ್ಯಮದ ಆಚೆಗೆ ಯೋಚಿಸುವಂತಹ ಅಗತ್ಯವೇನೂ ಇರಲಿಲ್ಲ.

ಒಂದು ಶತಮಾನದ ಅಂತರದಲ್ಲಿ ಮಾಧ್ಯಮ ಜಗತ್ತು ಊಹೆಗೂ ಮೀರಿ ಬದಲಾಗಿದೆ- ಪತ್ರಿಕೋದ್ಯಮ ಎಂಬ ಪದವೇ ಅಸಹಜ ಎನಿಸುವಷ್ಟು. ಮುದ್ರಣ, ವಿದ್ಯುನ್ಮಾನ ಇತ್ಯಾದಿ ವರ್ಗೀಕರಣದ ಕಾಲವೇ ಹೊರಟುಹೋಗಿದೆ. ಎಲ್ಲವೂ ಡಿಜಿಟಲ್ ಎಂಬ ನಾಲ್ಕಕ್ಷರದೊಳಗೆ ನುಸುಳಿಕೊಂಡಿವೆ. ಡಿಜಿಟಲೇ ನಮ್ಮ ಭವಿಷ್ಯ ಎಂದು ನಿರ್ಧರಿಸಿಯಾಗಿದೆ. ಕೋವಿಡ್ ಅಂತೂ ಮಾಧ್ಯಮರಂಗದ ಒಟ್ಟಾರೆ ದೃಷ್ಟಿಕೋನವನ್ನೇ ಬದಲಾಯಿಸಿದೆ. ಜಾಹೀರಾತು, ಕಾರ್ಪೋರೇಟ್ ಕಮ್ಯೂನಿಕೇಶನ್, ಮನರಂಜನಾ ಉದ್ಯಮ, ಈವೆಂಟ್ ಮ್ಯಾನೇಜ್ಮೆಂಟ್, ವಿಎಫ್‌ಎಕ್ಸ್, ಅನಿಮೇಶನ್, ಡಿಜಿಟಲ್ ಕಂಟೆಂಟ್, ವೀಡಿಯೋ ಗೇಮ್, ಸಾಮಾಜಿಕ ಮಾಧ್ಯಮಗಳ ನಿರ್ವಹಣೆ, ಭಾಷಾಂತರ ಮುಂತಾದ ಹತ್ತಾರು ಅವಕಾಶಗಳು ಮಾಧ್ಯಮರಂಗವೆಂಬ ತೆರೆದಬಯಲಲ್ಲಿ ಬಿಡಾರ ಹೂಡಿವೆ. 

ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಮಾಧ್ಯಮ ಶಿಕ್ಷಣದ ಪರಿಕಲ್ಪನೆ ಬದಲಾಗಿದೆಯೇ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ದೇಶದಾದ್ಯಂತ ಇರುವ ವಿವಿಧ ಬಗೆಯ ಸುಮಾರು 1000ದಷ್ಟು ಮಾಧ್ಯಮ ಶಿಕ್ಷಣ ಸಂಸ್ಥೆಗಳಿಂದ ಅಂದಾಜು 20,000ದಷ್ಟು ಯುವಕರು ಪ್ರತಿವರ್ಷ ಹೊರಬರುತ್ತಿದ್ದಾರೆ. ಹೊಸ ಮಾಧ್ಯಮ ಜಗತ್ತು ಬಯಸುವ ಜ್ಞಾನ-ಕೌಶಲಗಳು ಇವರಲ್ಲಿವೆಯೇ, ಅದಕ್ಕೆ ಬೇಕಾದಂತೆ ಹೊಸಬರನ್ನು ತರಬೇತುಗೊಳಿಸುವುದಕ್ಕೆ ನಮ್ಮ ಮಾಧ್ಯಮ ಶಿಕ್ಷಣ ವ್ಯವಸ್ಥೆ ಸನ್ನದ್ಧವಾಗಿದೆಯೇ ಎಂದು ಕೇಳಿಕೊಳ್ಳಬೇಕಾಗಿದೆ.

ಮಾಧ್ಯಮರಂಗ ಅನಿಮೇಶನ್ ಯುಗದಲ್ಲಿದ್ದರೂ ಶಿಕ್ಷಣಸಂಸ್ಥೆಗಳು ಇನ್ನೂ ಅಚ್ಚುಮೊಳೆಗಳ ಬಗೆಗೇ ಪಾಠಮಾಡುತ್ತಿವೆ, ಪತ್ರಿಕೋದ್ಯಮ ತರಗತಿಗಳಲ್ಲಿ ಬೋಧಿಸಿದ್ದಕ್ಕೂ ವಾಸ್ತವಕ್ಕೂ ಸಂಬಂಧ ಇಲ್ಲ ಎಂಬುದು ಇತ್ತೀಚಿನವರೆಗೂ ಇದ್ದ ಆರೋಪವಾಗಿತ್ತು. ವರ್ತಮಾನದ ಮಾಧ್ಯಮರಂಗ ಬಯಸುವ ಕೌಶಲಗಳು ವಿದ್ಯಾರ್ಥಿಗಳಲ್ಲಿ ಬೆಳೆಯುತ್ತಿಲ್ಲ ಎಂಬುದು ಇದರ ಸಾರ. ಮಾಧ್ಯಮ ಶಿಕ್ಷಣ ಸಂಸ್ಥೆಗಳು ಈ ಆರೋಪದಿಂದ ಹೊರಬರಲು ತಕ್ಕಮಟ್ಟಿಗೆ ಪ್ರಯತ್ನಿಸಿವೆ. ವಿಶ್ವವಿದ್ಯಾನಿಲಯಗಳ ಮಾಧ್ಯಮ ಪಠ್ಯಕ್ರಮ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಪರಿಷ್ಕರಣೆಗೆ ಒಳಗಾಗಿದೆ. ಸಿದ್ಧಾಂತ-ಪ್ರಯೋಗ ಎರಡಕ್ಕೂ ಸಮಾನ ಆದ್ಯತೆಯನ್ನು ನೀಡುವ, ಮಾಧ್ಯಮರಂಗದಲ್ಲಿನ ಹೊಸತುಗಳನ್ನು ಆಗಿಂದಾಗ್ಗೆ ಪಠ್ಯಕ್ರಮದೊಳಗೆ ಸೇರಿಸುವ ಪ್ರಯತ್ನಗಳು ನಡೆದಿವೆ.

ಆದರೆ ಪಠ್ಯಕ್ರಮದಷ್ಟೇ ಅದರ ಅನುಷ್ಠಾನವೂ ಮುಖ್ಯ. ಇದಕ್ಕೆ ಬೇಕಾದ ತಜ್ಞ ಅಧ್ಯಾಪಕರು, ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯ ಇದೆಯೇ ಎಂದರೆ ನಿರುತ್ತರ. ಮಾಧ್ಯಮ ಕೋರ್ಸುಗಳನ್ನು ತೆರೆಯುವಲ್ಲಿ ಇರುವ ಉತ್ಸಾಹ ಅವುಗಳನ್ನು ಪೋಷಿಸುವಲ್ಲಿ ಇಲ್ಲ. ಟಿವಿ, ಜಾಹೀರಾತು, ಪತ್ರಿಕೆ, ಅನಿಮೇಶನ್, ಸಿನಿಮಾ, ಗ್ರಾಫಿಕ್ಸ್, ಡಿಜಿಟಲ್ ಎಂದರೆ ಸಾಲದು; ಅವುಗಳ ಕೌಶಲಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವುದಕ್ಕೆ ಪರಿಣತಿ ಬೇಕು, ಸೌಕರ್ಯಗಳು ಇರಬೇಕು. ಈ ವಿಷಯದಲ್ಲಿ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳ ನಡುವೆ ಅಜಗಜಾಂತರ ಇದೆ. 

ಸರ್ಕಾರಿ ಕಾಲೇಜುಗಳಲ್ಲಿರುವ ಪತ್ರಿಕೋದ್ಯಮ ವಿಭಾಗಗಳ ಸ್ಥಿತಿಯಂತೂ ಶೋಚನೀಯ. ಒಂದೆರಡು ಕಂಪ್ಯೂಟರುಗಳಾದರೂ ಇಲ್ಲದ ಪತ್ರಿಕೋದ್ಯಮ ವಿಭಾಗಗಳು ಇನ್ನೂ ಇವೆ ಎಂದರೆ ನಂಬಲೇಬೇಕು. ಸಾಹಿತ್ಯ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ ಬೋಧಿಸಿದಂತೆ ಪತ್ರಿಕೋದ್ಯಮವನ್ನೂ ಬೋಧಿಸಬೇಕು ಎಂದರೆ ಅದೆಷ್ಟು ಪರಿಣಾಮಕಾರಿಯಾದೀತು? ಅನೇಕ ಕಾಲೇಜುಗಳಲ್ಲಿ ಖಾಯಂ ಉಪನ್ಯಾಸಕರೇ ಇಲ್ಲ. ವಿಶ್ವವಿದ್ಯಾನಿಲಯಗಳಲ್ಲೂ ಅನೇಕ ಹುದ್ದೆಗಳು ಖಾಲಿ ಬಿದ್ದಿವೆ. ಖಾಸಗಿ ಸಂಸ್ಥೆಗಳೇನೋ ಒಂದಷ್ಟು ಸೌಕರ್ಯಗಳನ್ನು ಹೊಂದಿವೆ ಎಂದರೆ ಅಂತಹ ನಗರ ಕೇಂದ್ರಿತ ಕಾಲೇಜುಗಳು, ಅವು ವಿಧಿಸುವ ಶುಲ್ಕದ ಕಾರಣದಿಂದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಗಗನಕುಸುಮ. 

ವಿಶ್ವವಿದ್ಯಾನಿಲಯಗಳ ಮಾಧ್ಯಮ ಅಧ್ಯಯನ ವಿಭಾಗಗಳು ವಿದ್ಯಾರ್ಥಿಗಳನ್ನು ಅಕಡೆಮಿಕ್ ಆಗಿ ಬೆಳೆಸಬೇಕೇ ಕೌಶಲಗಳಿಗೆ ಗಮನಕೊಡಬೇಕೇ ಎಂಬ ವಿಷಯದಲ್ಲಿ ಇನ್ನೂ ಅಭಿಪ್ರಾಯ ಭೇದಗಳಿವೆ. ಆದರೆ ವೃತ್ತಿಪರರು ಮತ್ತು ಶಿಕ್ಷಣ ಸಂಸ್ಥೆಗಳ ನಡುವೆ ಪರಸ್ಪರ ಕೊಡುಕೊಳ್ಳುವಿಕೆ ಬೇಕು, ಉತ್ತಮ ಸಂಬಂಧ ಬೆಳೆಯಬೇಕು, ಅಧ್ಯಾಪಕರೂ ಕಾಲದಿಂದ ಕಾಲಕ್ಕೆ ಅಪ್ಡೇಟ್ ಆಗಬೇಕು ಎಂಬಲ್ಲಿ ಗೊಂದಲ ಇಲ್ಲ. ಇಚ್ಛಾಶಕ್ತಿ ಎಲ್ಲದಕ್ಕಿಂತ ದೊಡ್ಡದು.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಏಪ್ರಿಲ್ 2, 2019

ಮಾಧ್ಯಮ ಶಿಕ್ಷಣ: ನಿನ್ನೆ-ಇಂದು-ನಾಳೆ

17 ಮಾರ್ಚ್ 2019ರ 'ಪ್ರಜಾಪ್ರಗತಿ' ಶಿಕ್ಷಣ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ

ಮಾಧ್ಯಮಗಳು ಉಸಿರು, ಅನ್ನ, ನೀರಿನಷ್ಟೇ ಸಹಜವಾಗಿ ಮತ್ತು ಅನಿವಾರ್ಯವಾಗಿ ಮನುಷ್ಯನ ಜೀವನದಲ್ಲಿ ಬೆರೆತು ಹೋಗಿವೆ. ಮಾಧ್ಯಮಗಳಿಲ್ಲದ ಜಗತ್ತನ್ನು ಊಹಿಸುವುದೇ ಕಷ್ಟವೇನೋ ಎಂಬಷ್ಟರ ಮಟ್ಟಿಗೆ ಅವು ಆಧುನಿಕ ಸಮಾಜದ ಅವಿಭಾಜ್ಯ ಅಂಗಗಳಾಗಿವೆ. ಮಾಧ್ಯಮಗಳ ಕಾರ್ಯವೈಖರಿ ಬಗ್ಗೆ ಬರುತ್ತಿರುವ ಟೀಕೆಟಿಪ್ಪಣಿಗಳು ಏನೇ ಇರಲಿ, ಪ್ರಜಾಪ್ರಭುತ್ವದಲ್ಲಿ ಅವುಗಳ ಪಾತ್ರವನ್ನು ನಿರ್ಲಕ್ಷಿಸುವಂತಿಲ್ಲ.
ಪ್ರಜಾಪ್ರಗತಿ, 17 ಮಾರ್ಚ್ 2019

ಭಾರತದಲ್ಲಂತೂ ಮಾಧ್ಯಮರಂಗದ ಬೆಳೆದಿರುವ ಪರಿ ಯಾರಿಗಾದರೂ ಸೋಜಿಗ ಹುಟ್ಟಿಸುವಂಥದ್ದು.  ಭಾರತದ ಪತ್ರಿಕಾ ನೋಂದಣಿ ಸಂಸ್ಥೆಯ ಇತ್ತೀಚಿನ ಮಾಹಿತಿಯ ಪ್ರಕಾರ, ದೇಶದಲ್ಲಿ ಒಟ್ಟು 1,18,239 ವೃತ್ತಪತ್ರಿಕೆಗಳು ಹಾಗೂ ನಿಯತಕಾಲಿಕಗಳಿವೆ. ಈ ಎಲ್ಲ ಪತ್ರಿಕೆಗಳ ಒಟ್ಟಾರೆ ಪ್ರಸರಣೆಯು 43 ಕೋಟಿಗಿಂತಲೂ ಹೆಚ್ಚಿದೆ. ಪ್ರತಿದಿನ ಸುಮಾರು 104 ಕೋಟಿ ಮಂದಿ ಪತ್ರಿಕೆಗಳನ್ನು ಓದುತ್ತಿದ್ದಾರೆ.

ಭಾರತದ ಆಕಾಶವಾಣಿ ಇಡೀ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಸಾರ ಜಾಲವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದಲ್ಲಿ ಶೇ. 92ರಷ್ಟು ಭೌಗೋಳಿಕ ಪ್ರದೇಶ ಹಾಗೂ ಶೇ. 99.19ರಷ್ಟು ಜನಸಂಖ್ಯೆಯು ರೇಡಿಯೋ ಪ್ರಸಾರದ ವ್ಯಾಪ್ತಿಗೆ ಒಳಪಟ್ಟಿದೆ. ನಮ್ಮ ದೂರದರ್ಶನವೂ ಪ್ರಪಂಚದ ಅತ್ಯಂತ ದೊಡ್ಡ ಟಿವಿ ಪ್ರಸಾರ ಜಾಲವೆಂಬ ಹಿರಿಮೆಯನ್ನು ಹೊಂದಿದ್ದು, ಶೇ. 92 ಜನಸಂಖ್ಯೆಯನ್ನೂ, ಶೇ. 81 ಭೌಗೋಳಿಕ ಪ್ರದೇಶವನ್ನೂ ತಲುಪಬಲ್ಲುದಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ 832 ಟಿವಿ ಚಾನೆಲ್‍ಗಳಿವೆ.

ಇಂಟರ್ನೆಟ್ ಕ್ರಾಂತಿಯು ಭಾರತದ ಸಂವಹನ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಇಂಟರ್ನೆಟ್ ಬಳಕೆಯಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಿದೆ. ಇಂದು ಭಾರತದಲ್ಲಿ 56 ಕೋಟಿ ಜನರು ಇಂಟರ್ನೆಟ್ ಬಳಸುತ್ತಿದ್ದು, 2022ರ ವೇಳೆಗೆ ಇದು 83 ಕೋಟಿಯ ಗಡಿಯನ್ನು ದಾಟಲಿದೆ ಎಂದು ಅಂದಾಜಿಸಲಾಗಿದೆ.

ಒಟ್ಟಿನಲ್ಲಿ, ಭಾರತದ ಮಾಧ್ಯಮ ರಂಗವು ಒಂದು ಬಹುಕೋಟಿ ವ್ಯವಹಾರದ ಕೈಗಾರಿಕೆಯಾಗಿ ಬೆಳೆದು ನಿಂತಿದೆ. 50 ವರ್ಷಗಳ ಹಿಂದಿನ ಪರಿಸ್ಥಿತಿ ಈಗಿಲ್ಲ. ಈಗ ಮಾಧ್ಯಮ ಕ್ಷೇತ್ರವು ಕೆಲವು ನೂರು ಪತ್ರಿಕೆಗಳಿಗೆ ಸೀಮಿತವಾದ ಪತ್ರಿಕಾವೃತ್ತಿ ಆಗಿ ಉಳಿದಿಲ್ಲ. ಎಫ್‍ಐಸಿಸಿಐ-ಕೆಪಿಎಂಜಿ ವರದಿಯ ಪ್ರಕಾರ- ಟಿವಿ, ಸಿನಿಮಾ, ಮುದ್ರಣ ಮಾಧ್ಯಮ, ರೇಡಿಯೋ, ಅಂತರ್ಜಾಲ, ಜಾಹೀರಾತು ಮುಂತಾದ ಮಾಧ್ಯಮಗಳನ್ನು ಒಳಗೊಂಡಂತೆ ಭಾತರದ ಒಟ್ಟಾರೆ ಮಾಧ್ಯಮ ರಂಗದ ಗಾತ್ರ 1,436 ಬಿಲಿಯನ್ ರೂ.ಗಳು!

ಇಷ್ಟು ವಿಸ್ತಾರವಾಗಿರುವ ಮಾಧ್ಯಮರಂಗಕ್ಕೆ ಪ್ರತಿಭಾವಂತ, ಕ್ರಿಯಾಶೀಲ ಮಾನವ ಸಂಪನ್ಮೂಲದ ಅಗತ್ಯತೆ ತುಂಬ ಇದೆ. ಮಾಧ್ಯಮರಂಗದ ಕುರಿತು ಕುತೂಹಲ ಆಸಕ್ತಿಗಳುಳ್ಳ ಯಾರೇ ಆದರೂ ಅದರಲ್ಲಿ ತಾವೂ ಕೆಲಸ ಮಾಡಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾದವರು ಯಾರು ಎಂಬ ಪ್ರಶ್ನೆ ಮುಖ್ಯವಾದದ್ದು. ‘ಎ ಜರ್ನಲಿಸ್ಟ್ ಈಸ್ ಬಾರ್ನ್, ಬಟ್ ನಾಟ್ ಮೇಡ್’ ಎಂಬ ಮಾತಿದೆ. ಪತ್ರಿಕಾವೃತ್ತಿ ಒಂದು ಹುಟ್ಟುಗುಣ, ಅದು ರಕ್ತದಲ್ಲಿಯೇ ಬರಬೇಕು, ಶಿಕ್ಷಣ ನೀಡಿ ಅದನ್ನು ರೂಪಿಸಲಾಗದು ಎಂಬುದು ಈ ಮಾತಿನ ಅರ್ಥ.

ಇದಕ್ಕೆ ಪರ ಮತ್ತು ವಿರೋಧವಾದ ಅಭಿಪ್ರಾಯಗಳೂ ಸಾಕಷ್ಟು ಬಂದಿವೆ. ‘ಪತ್ರಿಕೋದ್ಯಮ ಕಾಲೇಜು, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕಲಿಸುವ ಒಂದು ವಿಷಯವೇ?’ ಎಂದು ಪ್ರಶ್ನಿಸುವವರೆಗೆ ಅದರ ಕುರಿತು ಒಂದು ಬಗೆಯ ಉಡಾಫೆಯ ಮನೋಭಾವ ಕಳೆದ ಕೆಲವು ದಶಕಗಳ ಹಿಂದಿನವರೆಗೆ ಇತ್ತು. ಆರಂಭದಲ್ಲಂತೂ ಪತ್ರಿಕೋದ್ಯಮ ಶಿಕ್ಷಣದ ಬಗ್ಗೆ ತಿರಸ್ಕಾರದ ಮನೋಭಾವವವೇ ಇತ್ತು. ಎಲ್ಲ ಚರ್ಚೆಗಳ ನಡುವೆಯೂ ಸರಿಸುಮಾರು ನೂರು ವರ್ಷಗಳಿಂದ ಭಾರತದಲ್ಲಿ ಮಾಧ್ಯಮ ಶಿಕ್ಷಣವು ನಿರಂತರವಾಗಿ ಸಾಗಿ ಬಂದಿದೆ. ವರ್ಷದಿಂದ ವರ್ಷಕ್ಕೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ.

ಆದರೆ ಒಂದು ಮಾತು ನಿಜ: ಪತ್ರಿಕೋದ್ಯಮ ಅಥವಾ ಸಂವಹನದ ಕ್ಷೇತ್ರದ ಯಾವುದೇ ಕೆಲಸವೂ ಸರಳವಾದದ್ದಲ್ಲ, ಅದಕ್ಕೆ ವಿಶೇಷ ಕೌಶಲ ಬೇಕು; ಮತ್ತು ಆ ಕಾರಣಕ್ಕೆ ಮಾಧ್ಯಮ ಕ್ಷೇತ್ರದ ಉದ್ಯೋಗಕ್ಕೆ ವಿಶೇಷ ತರಬೇತಿಯ ಅವಶ್ಯಕತೆಯಿದೆ. ವರದಿಗಾರಿಕೆಯಾಗಲೀ, ಸಂಪಾದನೆಯಾಗಲೀ, ಪುಟ ವಿನ್ಯಾಸವಾಗಲೀ, ಟಿವಿ ಕಾರ್ಯಕ್ರಮ ನಿರ್ಮಾಣ ತಂತ್ರವಾಗಲೀ ತರಬೇತಿಯನ್ನು ಬಯಸುವ ಕೌಶಲಗಳು. ಇಂತಹದೊಂದು ತರಬೇತಿಯನ್ನು ನೀಡುವುದು ಮಾಧ್ಯಮ ಶಿಕ್ಷಣದಿಂದ ಸಾಧ್ಯ.

ಮಾಧ್ಯಮ ಶಿಕ್ಷಣ: ನಿನ್ನೆ
ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಕೀರ್ತಿ ಡಾ. ಆ್ಯನಿ ಬೆಸೆಂಟರಿಗೆ ಸಲ್ಲುತ್ತದೆ. 1929ರಲ್ಲಿ ಅವರು ತಮಿಳುನಾಡಿನ ಅಡಿಯಾರಿನ ನ್ಯಾಶನಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ತರಬೇತಿ ಕಾರ್ಯಕ್ರಮವನ್ನು ಪ್ರಥಮವಾಗಿ ಆರಂಭಿಸಿದರು. ಪ್ರಾಯೋಗಿಕ ತರಬೇತಿಗಾಗಿ ವಿದ್ಯಾರ್ಥಿಗಳನ್ನು ಅವರು ತಮ್ಮ ‘ನ್ಯೂ ಇಂಡಿಯಾ’ ಕಛೇರಿಗೆ ಕಳುಹಿಸುತ್ತಿದ್ದರು. 1936ರಲ್ಲಿ ಡಾ. ಜೆ. ಬಿ. ಕುಮಾರಪ್ಪ ಮುಂಬೈನಲ್ಲಿ ‘ಅಮೇರಿಕನ್ ಕಾಲೇಜ್ ಆಫ್ ಜರ್ನಲಿಸಂ’ ಎಂಬ ಹೆಸರಿನ ಸಂಸ್ಥೆಯನ್ನು (ಈಗಿನ ಬಿ. ಜಿ. ಹಾರ್ನಿಮನ್ ಕಾಲೇಜ್ ಆಫ್ ಜರ್ನಲಿಸಂ) ಆರಂಭಿಸಿದರು. 1938ರಲ್ಲಿ ಆಲಿಘರ್ ವಿ.ವಿ.ಯಲ್ಲಿ ಪತ್ರಕರ್ತರಿಗೆ ತರಬೇತಿ ನೀಡುವ ಪ್ರಯತ್ನವೊಂದನ್ನು ಆರಂಭಿಸಲಾಯಿತು. ಆದರೆ ಎರಡೇ ವರ್ಷಗಳಲ್ಲಿ ಅದು ನಿಂತುಹೋಯಿತು.

ಪತ್ರಿಕೋದ್ಯಮದಲ್ಲಿ ಔಪಚಾರಿಕ ಶಿಕ್ಷಣವು ಆರಂಭವಾದದ್ದು ಪಂಜಾಬ್ ವಿ.ವಿ.ಯಲ್ಲಿ. ಆಗ ಲಾಹೋರ್‍ನಲ್ಲಿದ್ದ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ 1941ರಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಕೋರ್ಸ್ ಆರಂಭವಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ವಿವಿಯು ದೆಹಲಿಗೆ ಸ್ಥಳಾಂತರವಾಯಿತು. 1947ರಲ್ಲಿ ಮದ್ರಾಸ್ ವಿವಿಯಲ್ಲೂ, 1950ರಲ್ಲಿ ಕಲ್ಕತ್ತಾ ವಿವಿಯಲ್ಲೂ, 1954ರಲ್ಲಿ ಉಸ್ಮಾನಿಯಾ ವಿವಿಯಲ್ಲೂ ಪತ್ರಿಕೋದ್ಯಮ ವಿಭಾಗಗಳು ಆರಂಭವಾದವು. 60ರ ದಶಕದ ಮಧ್ಯಭಾಗದಲ್ಲಿ ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯು ಔಪಚಾರಿಕ ಪತ್ರಿಕೋದ್ಯಮ ತರಬೇತಿ ಕೋರ್ಸನ್ನು ಆರಂಭಿಸಿತು.

1956ರಲ್ಲಿ ಕಲ್ಕತ್ತಾದಲ್ಲಿ ‘ಇಂಡಿಯನ್ ಅಸೋಸಿಯೇಶನ್ ಆಫ್ ಎಜುಕೇಶನ್ ಇನ್ ಜರ್ನಲಿಸಂ’ನ್ನು ಸ್ಥಾಪಿಸಲಾಯಿತು. ಹಾಗೆಯೇ ಕೆಲವು ಪ್ರಮುಖ ಪತ್ರಿಕೆಗಳು, ಯುಎನ್‍ಡಿಪಿ ಹಾಗೂ ಪ್ರೆಸ್ ಫೌಂಡೇಶನ್ ಆಫ್ ಇಂಡಿಯಾದ ಸಹಕಾರದೊಂದಿಗೆ 1963ರಲ್ಲಿ ದೆಹಲಿಯಲ್ಲಿ ಪ್ರೆಸ್ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾವನ್ನು ಸ್ಥಾಪಿಸಲಾಯಿತು (ಮುಂದೆ ಇದನ್ನು ಚೆನ್ನೈಗೆ ಸ್ಥಳಾಂತರಿಸಲಾಯಿತು). ಇದೇ ಅವಧಿಯಲ್ಲಿ ನಾಗ್ಪುರ, ಹೈದರಾಬಾದ್, ಮದ್ರಾಸ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯಗಳಲ್ಲೂ ಪತ್ರಿಕೋದ್ಯಮ ವಿಭಾಗಗಳು ಆರಂಭವಾದವು.

1965ರಲ್ಲಿ ಕೇಂದ್ರ ಸರ್ಕಾರವು ಇಂಡಿಯನ್ ಇನ್ಸ್‍ಟಿಟ್ಯೂಟ್ ಆಫ್ ಮಾಸ್ ಕಮ್ಯೂನಿಕೇಶನ್ (ಐಐಎಂಸಿ)ನ್ನು ಸ್ಥಾಪಿಸಿದ್ದು ಇನ್ನೊಂದು ಪ್ರಮುಖ ಮೈಲಿಗಲ್ಲು. 1980ರ ದಶಕದಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ)ವು ದೆಹಲಿ ವಿವಿ, ಜಾಮಿಯಾ ಮಿಲಿಯಾ ಇಸ್ಲಾಮಿಯ ವಿವಿ, ಫಿಲ್ಮ್ ಇನ್ಸ್‍ಟಿಟ್ಯೂಟ್ ಆಫ್ ಇಂಡಿಯಾ, ಪುಣೆ ವಿವಿ ಹಾಗೂ ಬನಾರಸ್ ಹಿಂದೂ ವಿವಿ ಮೊದಲಾದ ಕೇಂದ್ರೀಯ ವಿವಿಗಳ, ಹಾಗೂ ಅನೇಕ ರಾಜ್ಯ ಸರ್ಕಾರಿ ವಿವಿಗಳ ಪತ್ರಿಕೋದ್ಯಮ ವಿಭಾಗಗಳಿಗೆ ವಿಶೇಷ ಅನುದಾನ ಪೋಷಿಸಿತು.

ಕರ್ನಾಟಕದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆ ಮೈಸೂರು ವಿಶ್ವವಿದ್ಯಾನಿಲಯದ್ದು. 1951ರಲ್ಲಿ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಬಿ.ಎ. ಹಂತದಲ್ಲಿ ಪರಿಚಯಿಸಲಾಯಿತು. ಅಮೇರಿಕದ ಮಿಸ್ಸೋರಿ ವಿ.ವಿ.ಯಲ್ಲಿ ಪತ್ರಿಕೋದ್ಯಮ ಪದವಿ ಪಡೆದ ಡಾ. ನಾಡಿಗ ಕೃಷ್ಣಮೂರ್ತಿಯವರ ನೇತೃತ್ವದಲ್ಲಿ ಅದು ವಿಶೇಷ ಉತ್ಕರ್ಷವನ್ನು ಕಂಡಿತು. ಮುಂದೆ ಮೈಸೂರು ವಿ.ವಿ.ಯಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗ ಆರಂಭವಾಯಿತು.

1990ರಲ್ಲಿ ಭೋಪಾಲ್‍ನಲ್ಲಿ ಸ್ಥಾಪನೆಯಾದ ಮಖನ್‍ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ವಿಶ್ವವಿದ್ಯಾನಿಲಯವು ಮಾಧ್ಯಮ ಶಿಕ್ಷಣಕ್ಕಾಗಿಯೇ ಆರಂಭವಾದ ದೇಶದ ಮೊದಲ ವಿಶ್ವವಿದ್ಯಾನಿಲಯ. ಹಿಂದಿಯೂ ಒಳಗೊಂಡಂತೆ ದೇಶೀಯ ಭಾಷೆಗಳಲ್ಲಿ ಪತ್ರಿಕೋದ್ಯಮ ಹಾಗೂ ಶಿಕ್ಷಣವನ್ನು ಪೋಷಿಸುವ ಉದ್ದೇಶ ಅದರದ್ದು. 2004ರಲ್ಲಿ ಛತ್ತೀಸ್‍ಗಡದಲ್ಲಿ ಆರಂಭವಾದ ‘ಕುಶಭಾವು ಠಾಕ್ರೆ ಪತ್ರಕರಿತ ಏವಂ ಜನಸಂಚಾರ್ ವಿ.ವಿ.’ಯೂ ಪತ್ರಿಕೋದ್ಯಮ ಶಿಕ್ಷಣಕ್ಕೇ ಮೀಸಲಾದ ಇನ್ನೊಂದು ವಿಶ್ವವಿದ್ಯಾನಿಲಯ.

ಮಾಧ್ಯಮ ಶಿಕ್ಷಣ: ಇಂದು
ಇಂದು ಪತ್ರಿಕೋದ್ಯಮ ಹಾಗೂ ಇತರ ಆನ್ವಯಿಕ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ನೀಡುವ 300ಕ್ಕೂ ಹೆಚ್ಚು ಸಂಸ್ಥೆಗಳು ದೇಶದಲ್ಲಿವೆ. 1980ರ ದಶಕದಲ್ಲಿ ಇದ್ದುದು ಕೇವಲ 25 ಸಂಸ್ಥೆಗಳು ಮಾತ್ರ ಎಂದರೆ ಮಾಧ್ಯಮ ಶಿಕ್ಷಣ ಕ್ಷೇತ್ರ ಬೆಳೆದ ವೇಗ ಅರ್ಥವಾಗುತ್ತದೆ. 25 ಕೇಂದ್ರೀಯ ವಿವಿಗಳು, 80 ರಾಜ್ಯ ವಿವಿಗಳು, 30 ಖಾಸಗಿ ವಿವಿಗಳು, 50 ದೂರಶಿಕ್ಷಣ ಸಂಸ್ಥೆಗಳು, 50 ಖಾಸಗಿ ಸಂಸ್ಥೆಗಳು, 10 ಡೀಮ್ಡ್ ವಿವಿಗಳು, 11 ಮಾಧ್ಯಮ ಮಾಲೀಕತ್ವದ ಸಂಸ್ಥೆಗಳು ಪತ್ರಿಕೋದ್ಯಮ ಶಿಕ್ಷಣ ನೀಡುತ್ತಿವೆ. ಇವಲ್ಲದೆ ನೂರಾರು ಕಾಲೇಜುಗಳು ಪದವಿ ಹಂತದಲ್ಲಿ ಪತ್ರಿಕೋದ್ಯಮ ಶಿಕ್ಷಣ ಅಳವಡಿಸಿಕೊಂಡಿವೆ.

ಮಾಧ್ಯಮ ಕ್ಷೇತ್ರದ ಆಳ-ಅಗಲಗಳಿಗೆ ಅನುಗುಣವಾಗಿ ಉದ್ಯೋಗ ಕ್ಷೇತ್ರವೂ ಬೆಳೆದು ನಿಂತಿದೆ. ಭಾರತದಲ್ಲಿ ಪ್ರತಿ ವರ್ಷ ಏನಿಲ್ಲವೆಂದರೂ 5000 ಪತ್ರಿಕೋದ್ಯಮ ಪದವೀಧರರು ಹೊರಬರುತ್ತಾರೆಂದು ಅಂದಾಜಿಸಲಾಗಿದೆ. ಇಷ್ಟೊಂದು ಮಂದಿಗೆ ನಮ್ಮಲ್ಲಿ ಉದ್ಯೋಗಾವಕಾಶ ಇದೆಯೇ ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆದರೆ ನಾವು ಯೋಚಿಸಬೇಕಿರುವ ಪ್ರಮುಖ ವಿಷಯವೆಂದರೆ, ವೃತ್ತಪತ್ರಿಕೆ ಅಥವಾ ಟಿವಿ ಅಷ್ಟೇ ಇಂದು ಉದ್ಯೋಗ ಸೃಷ್ಟಿಯ ಕ್ಷೇತ್ರಗಳಾಗಿಲ್ಲ. ಮಾಧ್ಯಮ ಶಿಕ್ಷಣವನ್ನು ಸಮರ್ಪಕವಾಗಿ ಪಡೆದವರಿಗೆ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ.

ಮೀಡಿಯಾ ಅಂಡ್ ಎಂಟರ್‍ಟೈನ್ಮೆಂಟ್ ಸ್ಕಿಲ್ಸ್ ಕೌನ್ಸಿಲ್ ನಡೆಸಿರುವ ಅಧ್ಯಯನದಂತೆ, ಭಾರತದ ಮಾಧ್ಯಮ ಹಾಗೂ ಮನರಂಜನಾ ಕ್ಷೇತ್ರದ ಪ್ರಸಕ್ತ ಉದ್ಯೋಗ ಗಾತ್ರ ಸುಮಾರು 4 ಲಕ್ಷ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಮಾಧ್ಯಮರಂಗದಲ್ಲಿ 7-8 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ಇಷ್ಟೊಂದು ಉದ್ಯೋಗಾವಕಾಶಗಳು ಸೃಷ್ಟಿಯಾಗಿರುವುದೇನೋ ನಿಜ; ಆದರೆ ಅದಕ್ಕೆ ಅನುಗುಣವಾದ ಸುಧಾರಿತ ಶಿಕ್ಷಣ ಹಾಗೂ ತರಬೇತಿ ನಮ್ಮಲ್ಲಿ ಲಭ್ಯವಿದೆಯೇ ಎಂಬ ಪ್ರಶ್ನೆಗೆ ‘ಹೌದು’ ಎಂಬ ಆತ್ಮವಿಶ್ವಾಸದ ಉತ್ತರ ದೊರೆಯುವುದಿಲ್ಲ. ಎಷ್ಟೊಂದು ಕಡೆ ಪತ್ರಿಕೋದ್ಯಮ ಶಿಕ್ಷಣ ಇದೆ, ಆದರೆ ನಮಗೆ ಬೇಕಾಗಿರುವ ಬೆರಳೆಣಿಕೆಯ ಸಮರ್ಥ ಅಭ್ಯರ್ಥಿಗಳೂ ಸಿಗುತ್ತಿಲ್ಲವಲ್ಲ ಎಂಬುದು ಪತ್ರಿಕೆಗಳಿಂದ ತೊಡಗಿ ಚಾನೆಲ್‍ಗಳವರೆಗೆ ಇಡೀ ಮಾಧ್ಯಮರಂಗದ ಸಾಮಾನ್ಯ ಆತಂಕ.

ಯಾಕೆ ಹೀಗೆ? ಇದು ಮಾಧ್ಯಮ ಮತ್ತು ಶಿಕ್ಷಣ ಕ್ಷೇತ್ರಗಳೆರಡೂ ಕೇಳಿಕೊಳ್ಳಬೇಕಾದ ಮಹತ್ವದ ಪ್ರಶ್ನೆ. ಅತ್ಯಾಧುನಿಕವಾಗಿ ಬೆಳೆದು ನಿಂತಿರುವ ಬೃಹತ್ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರ ಹಾಗೂ ನಮ್ಮ ಮಾಧ್ಯಮ ಶಿಕ್ಷಣದ ನಡುವೆ ಬಹುದೊಡ್ಡ ಅಂತರ ಇದೆ. ಈ ಅಂತರಕ್ಕೆ ಇರುವ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು:
1) ಸಿದ್ಧಾಂತ ಮತ್ತು ಪ್ರಯೋಗಗಳ ನಡುವಿನ ಭಾರೀ ಅಂತರ. ಪತ್ರಿಕೋದ್ಯಮ ಶಿಕ್ಷಣ ಮೂಲತಃ ಪ್ರಾಯೋಗಿಕವಾದುದು. ಆದರೆ ಇದನ್ನು ಒಪ್ಪಿಕೊಳ್ಳುವುದರಲ್ಲೇ ಮಾಧ್ಯಮ ಕ್ಷೇತ್ರ ಹಾಗೂ ಶಿಕ್ಷಣ ರಂಗದ ನಡುವೆ ಅಪಾರ ಭಿನ್ನಾಭಿಪ್ರಾಯಗಳಿವೆ. ಸ್ನಾತಕೋತ್ತರ ಹಂತದಲ್ಲಂತೂ ಪತ್ರಿಕೋದ್ಯಮ ವಿಭಾಗಗಳಿರುವುದು ಆ ವಿಷಯವನ್ನು ಅಕಡೆಮಿಕ್ ಆಗಿ ಬೆಳೆಸುವುದಕ್ಕೆ ಹಾಗೂ ಸಂವಹನ ಸಂಶೋಧನೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಎಂಬ ಅಭಿಪ್ರಾಯಕ್ಕೆ ಅನೇಕ ಪ್ರಾಧ್ಯಾಪಕರು ಬದ್ಧರಾಗಿದ್ದಾರೆ. ಹಾಗಾದರೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ಕೆಲಸ ಮಾಡಬೇಕು ಅಥವಾ ಆ ಕ್ಷೇತ್ರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ರೂಪುಗೊಳಿಸುವ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆಗೆ ಅವರಲ್ಲಿ ಉತ್ತರವಿಲ್ಲ.

2) ಅನುಭವೀ ಹಾಗೂ ಪೂರ್ಣಕಾಲಿಕ ಅಧ್ಯಾಪಕರ ಕೊರತೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಹಾಗೂ ಪದವಿ ಕಾಲೇಜುಗಳಲ್ಲಿ ಅನುಭವೀ ಮತ್ತು ಪೂರ್ಣಕಾಲಿಕ ಪತ್ರಿಕೋದ್ಯಮ ಅಧ್ಯಾಪಕರ ಕೊರತೆ ಇದೆ. ಬಹುತೇಕರಲ್ಲಿ ಪ್ರಾಯೋಗಿಕ ಜ್ಞಾನ ಇಲ್ಲ. ಅವರೇನಿದ್ದರೂ ಸಿದ್ಧಾಂತಗಳನ್ನು ಓದಿಕೊಂಡವರು. ಪತ್ರಿಕೆ, ಟಿವಿ, ಜಾಹೀರಾತು, ಸಾರ್ವಜನಿಕ ಸಂಪರ್ಕ ಮತ್ತಿತರ ಕ್ಷೇತ್ರಗಳಲ್ಲಿ ಕಾಲಕಾಲಕ್ಕೆ ಆಗುತ್ತಿರುವ ಬದಲಾವಣೆಗಳ ನೇರ ಪರಿಚಯ ಅವರಿಗಿಲ್ಲ. ಅಂತಹ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವೂ ಅವರಿಗಿಲ್ಲ. ಆ ಕ್ಷೇತ್ರಕ್ಕೆ ಬೇಕಾದ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದಕ್ಕೂ ಅವರು ನಿರಾಸಕ್ತರು ಅಥವಾ ಅಸಮರ್ಥರು.

3) ಇಂಗ್ಲಿಷ್ ಪತ್ರಿಕೋದ್ಯಮ ತರಬೇತಿಯ ಏಕಸ್ವಾಮ್ಯ. ಇಡೀ ದೇಶವನ್ನು ಗಮನದಲ್ಲಿರಿಸಿಕೊಂಡರೆ, ಬಹುತೇಕ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಪತ್ರಿಕೋದ್ಯಮದ ಅಗತ್ಯಕ್ಕನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣುತ್ತದೆ. ಪ್ರಾದೇಶಿಕ ಭಾಷೆಗಳ ಪತ್ರಿಕೋದ್ಯಮಕ್ಕೆ ಅಗತ್ಯವಿರುವ ಪತ್ರಕರ್ತರನ್ನು ರೂಪುಗೊಳಿಸುವ ಒಳ್ಳೆಯ ಸಂಸ್ಥೆಗಳ ಕೊರತೆ ಎದ್ದು ಕಾಣುತ್ತದೆ.

4) ಭಾರತೀಯ ಮಾಧ್ಯಮ ಶಿಕ್ಷಣ ಇನ್ನೂ ಪಾಶ್ಚಾತ್ಯ ಮಾದರಿಯ ಗುಂಗಿನಿಂದ ಹೊರಬರದೇ ಇರುವುದು. ನಮ್ಮ ಪಠ್ಯಕ್ರಮಗಳ ಮೇಲೆ ವಿದೇಶೀ ಛಾಯೆ ದಟ್ಟವಾಗಿದೆ. ವಿಪರ್ಯಾಸವೆಂದರೆ, ನಮ್ಮ ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾದ ಸೂಕ್ತ ಪರಾಮರ್ಶನ ಗ್ರಂಥಗಳನ್ನು ನಮ್ಮ ದೇಶದಿಂದಲೇ ನೀಡುವುದಕ್ಕೆ ನಾವಿನ್ನೂ ಸಿದ್ಧವಾಗಿಲ್ಲ. ಯಾವುದೇ ವಿಶ್ವವಿದ್ಯಾನಿಲಯದ ಪಠ್ಯಕ್ರಮವನ್ನು ಗಮನಿಸಿದರೂ ಕೊನೆಯಲ್ಲಿ ನೀಡಿರುವ ಪರಾಮರ್ಶನ ಗ್ರಂಥಗಳಲ್ಲಿ ಶೇ. 90 ಕೂಡ ವಿದೇಶೀ ಲೇಖಕರದ್ದಾಗಿರುತ್ತವೆ.

5) ಮೂಲಸೌಕರ್ಯಗಳ ಕೊರತೆ. ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ವರ್ತಮಾನದ ಮಾಧ್ಯಮ ಜಗತ್ತಿಗೆ ಉದ್ಯೋಗಿಗಳನ್ನು ತರಬೇತುಗೊಳಿಸುವಲ್ಲಿ ಸೂಕ್ತ ಮೂಲಸೌಕರ್ಯಗಳ ಕೊರತೆಯಿದೆ. ಅವುಗಳಲ್ಲಿ ಉತ್ತಮ ಗುಣಮಟ್ಟದ ಸ್ಟುಡಿಯೋ ಆಗಲೀ, ಕ್ಯಾಮರಾಗಳಾಗಲೀ, ಕಂಪ್ಯೂಟರ್‍ಗಳಾಗಲೀ, ತಂತ್ರಾಂಶಗಳಾಗಲೀ ಇಲ್ಲ. ಒಂದು ವೇಳೆ ಇದ್ದರೂ ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳನ್ನು ಶ್ರೇಷ್ಠ ಮಟ್ಟದಲ್ಲಿ ತರಬೇತುಗೊಳಿಸುವಂತಹ ತಾಂತ್ರಿಕ ಪರಿಣತಿ ಸ್ವತಃ ಬೋಧಕರಿಗೇ ಇಲ್ಲ. ಪದವಿ ಹಂತದಲ್ಲಂತೂ ಅನೇಕ ಕಡೆ ಪತ್ರಿಕೋದ್ಯಮ ವಿಭಾಗಗಳ ಕಥೆ ಶೋಚನೀಯವಾಗಿದೆ.  ತರಗತಿ ಕೊಠಡಿ, ಬೆಂಚು-ಡೆಸ್ಕು, ಉಪನ್ಯಾಸಕರು ಇವಿಷ್ಟರಿಂದಲೇ ಪತ್ರಿಕೋದ್ಯಮ ತರಬೇತಿ ನೀಡಬಹುದು ಎಂದು ಸರ್ಕಾರ ಮತ್ತು ಕಾಲೇಜುಗಳು ಭಾವಿಸಿಕೊಂಡಂತಿದೆ. ಅಂತಹ ಕಡೆ ಪತ್ರಿಕೋದ್ಯಮಾಸಕ್ತ ವಿದ್ಯಾರ್ಥಿಗಳು ಎಂತಹ ಶಿಕ್ಷಣ ಪಡೆಯಲು ಸಾಧ್ಯ?

6) ಅನೇಕ ವಿಶ್ವವಿದ್ಯಾನಿಲಯಗಳು ಹಳೇ ಪಠ್ಯಕ್ರಮಕ್ಕೆ ಜೋತುಬಿದ್ದಿರುವುದು. ಆನ್‍ಲೈನ್ ಪತ್ರಿಕೋದ್ಯಮ, ಅನಿಮೇಶನ್, ತಾಂತ್ರಿಕ ಬರೆವಣಿಗೆ, ಜಾಲತಾಣ ಅಭಿವೃದ್ಧಿ, ಗ್ರಾಫಿಕ್ ಡಿಸೈನ್ ಮೊದಲಾದ ಹೊಸಹೊಸ ಕ್ಷೇತ್ರಗಳಲ್ಲಿ ಅಪಾರ ಬೆಳವಣಿಗೆ ಆಗುತ್ತಿದ್ದರೂ ಅನೇಕ ವಿಶ್ವವಿದ್ಯಾನಿಲಯಗಳು ಇನ್ನೂ 10-15 ವರ್ಷಗಳಷ್ಟು ಹಳೆಯ ಪಠ್ಯಕ್ರಮವನ್ನು ಬೋಧಿಸುತ್ತಿರುವುದು ವಿಪರ್ಯಾಸ. ಇದು ಅವಧಿ ಮೀರಿದ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಳಿಸಿಕೊಡುವುದಕ್ಕಿಂತ ಭಿನ್ನವಾಗಿಯೇನೂ ಇಲ್ಲ.

7) ಪತ್ರಿಕೋದ್ಯಮ ವಿಭಾಗಗಳು ಹಾಗೂ ಮಾಧ್ಯಮ ಸಂಸ್ಥೆಗಳ ನಡುವೆ ಇರುವ ದೊಡ್ಡ ಕಂದರ. ಅನೇಕ ಪತ್ರಿಕೋದ್ಯಮ ಪ್ರಾಧ್ಯಾಪಕರುಗಳಲ್ಲಿ ಪತ್ರಿಕಾ ಸಂಸ್ಥೆಗಳಲ್ಲಿರುವ ಉದ್ಯೋಗಿಗಳಿಗಿಂತ ತಾವೇ ಹೆಚ್ಚು ಜ್ಞಾನಿಗಳು ಎಂಬ ಮನೋಭಾವವೂ, ಅನೇಕ ಕಾರ್ಯನಿರತ ಪತ್ರಕರ್ತರುಗಳಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರುಗಳಿಗೇನು ತಿಳಿದಿದೆ ಎಂಬ ಉಡಾಫೆ ಭಾವನೆಯೂ ಬೇರೂರಿದೆ. ಹೀಗೆ ಶಿಕ್ಷಣ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ನಡುವೆ ಸೃಷ್ಟಿಯಾಗಿರುವ ಅಂತರಕ್ಕೆ ಬಲಿಯಾಗಿರುವುದು ಮಾತ್ರ ಮಾಧ್ಯಮ ಶಿಕ್ಷಣ ಎಂಬುದು ಖೇದಕರ.

8) ನಗರ ಕೇಂದ್ರಿತ ತುಟ್ಟಿ ಖಾಸಗಿ ಸಂಸ್ಥೆಗಳು. ಮಾಧ್ಯಮ ಶಿಕ್ಷಣ ಕ್ಷೇತ್ರದ ಅತ್ಯುತ್ತಮ ಸಂಸ್ಥೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ನಮಗೆ ಸಿಗುವುದು ಖಾಸಗಿ ಸಂಸ್ಥೆಗಳು. ಆದರೆ ಇವೆಲ್ಲ ನಗರ ಕೇಂದ್ರಿತವಾದವು, ಜತೆಗೆ ಸಾಮಾನ್ಯ ವಿದ್ಯಾರ್ಥಿಗಳಿಗೆ ಗಗನ ಕುಸಮಗಳು. ಪತ್ರಿಕೋದ್ಯಮದಲ್ಲಿ ವಿಶೇಷ ಆಸಕ್ತಿಯಿರುವ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಯೊಬ್ಬ ದೆಹಲಿ, ಚೆನ್ನೈ, ಅಹಮದಾಬಾದ್, ಮುಂಬೈ, ಪೂನಾದಂತಹ ಮಹಾನಗರಗಳಿಗೆ ತೆರಳಿ ಅಲ್ಲಿನ ಸಂಸ್ಥೆಗಳಿಗೆ ಲಕ್ಷಾಂತರ ರೂ. ಶುಲ್ಕ ತೆತ್ತು ಒಳ್ಳೆಯ ತರಬೇತಿ ಪಡೆಯುವುದು ಕನಸಿನ ಮಾತೇ ಸರಿ.

9) ವಿದ್ಯಾರ್ಥಿಗಳ ಕ್ಷಿಪ್ರ ಪ್ರಸಿದ್ಧಿಯ ಭ್ರಮೆ. ಹೊಸ ತಲೆಮಾರಿನ ವಿದ್ಯಾರ್ಥಿಗಳು ಮಾಧ್ಯಮಗಳ ಗ್ಲಾಮರ್‍ನಿಂದ ಆಕರ್ಷಿತರಾಗಿದ್ದಾರೆಯೇ ಹೊರತು ಅಂತಹದೊಂದು ಕ್ಷೇತ್ರ ಪ್ರವೇಶಿಸುವುದಕ್ಕೆ ತಮ್ಮ ಕಡೆಯಿಂದ ಇರಬೇಕಾದ ವೈಯುಕ್ತಿಕ ಪರಿಶ್ರಮ ಏನು ಎಂಬ ಕನಿಷ್ಟ ವಿವೇಚನೆಯನ್ನೂ ಹೊಂದಿಲ್ಲ. ಪತ್ರಿಕೋದ್ಯಮದಲ್ಲಿ ಪದವಿ ಮಾಡಿದ ತಕ್ಷಣ ಪತ್ರಿಕೆ, ಚಾನೆಲ್‍ಗಳಲ್ಲಿ ಒಳ್ಳೊಳ್ಳೆಯ ಉದ್ಯೋಗ ಪಡೆದು ವಿಶ್ವವೇ ತಮ್ಮತ್ತ ನೋಡುವಂತೆ ಮಾಡಬಹುದು ಎಂಬ ಕಲ್ಪನಾ ಲೋಕದಲ್ಲೇ ಹೆಚ್ಚಿನವರೂ ಇದ್ದಾರೆ. ಮಾಧ್ಯಮ ಕ್ಷೇತ್ರ ಬಯಸುವ ಅಪಾರ ಜ್ಞಾನ, ಅದಕ್ಕೆ ಬೇಕಾದ ವಿಸ್ತಾರ ಓದು, ಸಮರ್ಥ ಭಾಷೆ, ಮಾತು ಹಾಗೂ ಬರವಣಿಗೆಯ ಕೌಶಲ ಇತ್ಯಾದಿಗಳನ್ನು ರೂಢಿಸಿಕೊಳ್ಳುವಲ್ಲಿ ತಮ್ಮ ಜವಾಬ್ದಾರಿಯೇನು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳುತ್ತಿಲ್ಲ. ಶಿಕ್ಷಣ ಎಂಬುದು ಕಾಲೇಜು ಮತ್ತು ಅಧ್ಯಾಪಕರ ಜವಾಬ್ದಾರಿಯಷ್ಟೇ ಅಲ್ಲವಷ್ಟೆ?

ಭವಿಷ್ಯದ ಹಾದಿ:
ಮಾಧ್ಯಮ ಶಿಕ್ಷಣ ಫಲಪ್ರದವಾಗಬೇಕಾದರೆ ಇಂತಹ ಸವಾಲುಗಳನ್ನು ಮೀರಿ ನಿಲ್ಲುವುದು ತುಂಬ ಅವಶ್ಯಕ. ಮೊದಲನೆಯದಾಗಿ, ಸಿದ್ಧಾಂತ ಮತ್ತು ಪ್ರಯೋಗದ ನಡುವಿನ ಅಂತರವನ್ನು ನಿವಾರಣೆಯಾಗಬೇಕು. ಪತ್ರಿಕೋದ್ಯಮ ಓದಿದ ವಿದ್ಯಾರ್ಥಿಗಳು ನಾಳೆ ಪತ್ರಿಕೆಗಳಿಗೋ ಚಾನೆಲ್‍ಗಳಿಗೋ ಸೇರಿಕೊಂಡಾಗ ತಾವು ಓದಿದ್ದಕ್ಕೂ ಇಲ್ಲಿನ ಅವಶ್ಯಕತೆಗಳಿಗೂ ಏನೇನೂ ಸಂಬಂಧವಿಲ್ಲ ಎಂದು ಅನಿಸಬಾರದು. ಪತ್ರಿಕೋದ್ಯಮದ ಇತಿಹಾಸ, ಸಂವಹನ ಸಿದ್ಧಾಂತಗಳನ್ನೆಲ್ಲ ಬೋಧಿಸುವ ಜತೆಜತೆಗೆ ಪ್ರಾಯೋಗಿಕ ಕೌಶಲಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕಡೆಗೂ ಅಧ್ಯಾಪಕರು ಸಮಾನ ಪ್ರಾಶಸ್ತ್ಯ ನೀಡಬೇಕು.

ಇದು ನಡೆಯಬೇಕಾದರೆ, ಎರಡು ಪ್ರಮುಖ ಅವಶ್ಯಕತೆಗಳಿವೆ. ಒಂದು, ಪ್ರಾಯೋಗಿಕ ಕಲಿಕೆಗೆ ಅನಿವಾರ್ಯವಾದ ಮೂಲಭೂತ ಸೌಕರ್ಯಗಳನ್ನು ಕಾಲೇಜು ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಮರ್ಪಕವಾಗಿ ಒದಗಿಸುವುದು. ಎರಡು, ಈ ಸೌಕರ್ಯಗಳನ್ನು ಬಳಸುವ ಪ್ರಾಯೋಗಿಕ ಜ್ಞಾನವುಳ್ಳ ಅಧ್ಯಾಪಕರನ್ನು ನೇಮಿಸುವುದು. ಬೇರೆ ವಿಷಯಗಳನ್ನು ಬೋಧಿಸಿದಂತೆ ಪತ್ರಿಕೋದ್ಯಮವನ್ನು ಬೋಧಿಸಬಹುದು ಎಂಬ ಅಜ್ಞಾನದಿಂದ ಪ್ರಾಂಶುಪಾಲರುಗಳು, ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳು ಹೊರಬರಬೇಕು. ಪತ್ರಿಕೋದ್ಯಮವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಆರಂಭಿಸುವ ಮುನ್ನ ಅದಕ್ಕೆ ಬೇಕಾದ ಕನಿಷ್ಟ ಮೂಲಸೌಕರ್ಯ ಇದೆಯೇ, ಸಾಕಷ್ಟು ಬೋಧಕ ಸಿಬ್ಬಂದಿ ಇದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು.

ಪತ್ರಿಕೋದ್ಯಮ ಉಪನ್ಯಾಸಕರ ನೇಮಕಾತಿಗೆ ಯುಜಿಸಿ ಪ್ರತ್ಯೇಕ ಮಾನದಂಡಗಳನ್ನು ನಿಗದಿಪಡಿಸಬೇಕು. ಯುಜಿಸಿ-ಎನ್‍ಇಟಿ ಅರ್ಹತೆ/ ಪಿಎಚ್.ಡಿ ಜತೆಗೆ ಕನಿಷ್ಟ ನಾಲ್ಕೈದು ವರ್ಷವಾದರೂ ಮುದ್ರಣ ಇಲ್ಲವೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವುಳ್ಳವರನ್ನು ಮಾತ್ರ ನೇಮಕ ಮಾಡಿಕೊಳ್ಳುವ ನಿಯಮಾವಳಿಗಳು ಜಾರಿಗೆ ಬರಬೇಕು. ಸಂಶೋಧನ ಲೇಖನಗಳ ಪ್ರಕಟಣೆ, ಪ್ರಬಂಧಗಳ ಮಂಡನೆಯಂತಹ ಕೆಲಸವನ್ನು ನಿರೀಕ್ಷಿಸುವುದರೊಂದಿಗೆ, ಇಂತಿಷ್ಟು ವರ್ಷಗಳಿಗೊಮ್ಮೆ ಅಧ್ಯಾಪಕರು ಒಂದೆರಡು ತಿಂಗಳಾದರೂ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿ ತಮ್ಮ ಪ್ರಾಯೋಗಿಕ ತಿಳುವಳಿಕೆಯನ್ನು ಅಪ್ಡೇಟ್ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು.

ಮಾಧ್ಯಮ ಶಿಕ್ಷಣದ ಪಠ್ಯಕ್ರಮ ಕಾಲದ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಗಬೇಕು, ಹೊಸತನವನ್ನು ರೂಢಿಸಿಕೊಳ್ಳಬೇಕು. ಮಾಧ್ಯಮ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಅಂತರ ಕಡಿಮೆಯಾಗಬೇಕು. ಪತ್ರಕರ್ತರು ಹಾಗೂ ಅಧ್ಯಾಪಕರು ತಮ್ಮತಮ್ಮ ಅಹಂಗಳನ್ನು ಒಂದಿಷ್ಟು ಬದಿಗಿಟ್ಟು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರಸ್ಪರ ಸಹಕಾರ ಹೆಚ್ಚಿಸಿಕೊಳ್ಳಬೇಕು. ಪ್ರಾಯೋಗಿಕ ಕಲಿಕೆ ಹಾಗೂ ಅನುಭವಿ ಪತ್ರಕರ್ತರ ಕಾರ್ಯಾಗಾರಗಳನ್ನು ಏರ್ಪಡಿಸುವುದಕ್ಕೆ ಪತ್ರಿಕೋದ್ಯಮ ವಿಭಾಗಗಳಿಗೆ ಹೆಚ್ಚಿನ ಅನುದಾನ ಲಭ್ಯವಾಗಬೇಕು. ಕನ್ನಡದಂತಹ ಪ್ರಾದೇಶಿಕ ಭಾಷೆಗಳಲ್ಲಿ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉತ್ತಮ ಪುಸ್ತಕಗಳ ರಚನೆಯಾಗಬೇಕು. ಹಿರಿಯ ಪತ್ರಕರ್ತರು ಹಾಗೂ ಪ್ರಾಧ್ಯಾಪಕರು ತಮ್ಮ ಅನುಭವಗಳ ಆಧಾರದಲ್ಲಿ ಅಧ್ಯಯನಪೂರ್ಣ ಪುಸ್ತಕಗಳನ್ನು ಪ್ರಕಟಿಸಲು ಮನಸ್ಸು ಮಾಡಬೇಕು.

ಗ್ರಾಮೀಣ ವಿದ್ಯಾರ್ಥಿಗಳ ಕೈಗೆಟುಕುವ ಶುಲ್ಕದಲ್ಲಿ ಪತ್ರಿಕೋದ್ಯಮ ಶಿಕ್ಷಣ ಲಭ್ಯವಾಗಬೇಕು. ಬೆಂಗಳೂರು-ಮುಂಬೈ-ದೆಹಲಿಯಂತಹ ಮಹಾನಗರಗಳಲ್ಲಿರುವ ಖಾಸಗಿ ಸಂಸ್ಥೆಗಳ ಶುಲ್ಕವನ್ನು ಭರಿಸಿ ಮಾಧ್ಯಮ ತರಬೇತಿ ಪಡೆಯುವ ಆರ್ಥಿಕ ಪರಿಸ್ಥಿತಿ ಬಡ ವಿದ್ಯಾರ್ಥಿಗಳಿಗೆ ಇಲ್ಲ. ಗ್ರಾಮೀಣ ಪ್ರದೇಶಗಳಲ್ಲೇ ಸುಸಜ್ಜಿತ ಪ್ರಯೋಗಾಲಯಗಳಿರುವ ಉನ್ನತ ಮಟ್ಟದ ಮಾಧ್ಯಮ ತರಬೇತಿ ಸಂಸ್ಥೆಗಳು ವಿದ್ಯಾರ್ಥಿಗಳ ಕೈಗೆಟಕುವ ಶುಲ್ಕದಲ್ಲಿ ದೊರೆಯುವಂತಾಗಬೇಕು. ಇದಕ್ಕೆ ಸರ್ಕಾರ ಹಾಗೂ ಮಾಧ್ಯಮ ಸಂಸ್ಥೆಗಳ ಬೆಂಬಲ ಅನಿವಾರ್ಯ. ದೊಡ್ಡ ಮಾಧ್ಯಮ ಸಂಸ್ಥೆಗಳು ತಮ್ಮ ಲಾಭಾಂಶದ ಒಂದು ಪಾಲನ್ನು ಮಾಧ್ಯಮ ಶಿಕ್ಷಣ-ತರಬೇತಿಗೆ ಮೀಸಲಿಡಬೇಕು. ಆಗ ಕೌಶಲಪೂರ್ಣ ಮಾನವ ಸಂಪನ್ಮೂಲವನ್ನು ನಿರೀಕ್ಷಿಸುವುದಕ್ಕೆ ಅವುಗಳಿಗೂ ಒಂದು ನೈತಿಕ ಸಮರ್ಥನೆಯಿರುತ್ತದೆ.