ಬುಧವಾರ, ಆಗಸ್ಟ್ 18, 2021

ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಪತ್ರಿಕೆಗಳು

ವಿದ್ಯಾರ್ಥಿ ಪಥಆಗಸ್ಟ್ 2021 ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳು ವಹಿಸಿದ ಪಾತ್ರ ಅವಿಸ್ಮರಣೀಯ. ಒಂದೆಡೆ ರಾಷ್ಟ್ರೀಯ ಆಂದೋಲನದ ಕಿಚ್ಚನ್ನು ದೇಶದ ಮೂಲೆಮೂಲೆಗೆ ಪಸರಿಸುತ್ತಲೇ, ಇನ್ನೊಂದೆಡೆ ಬ್ರಿಟಿಷರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ ಹೆಗ್ಗಳಿಕೆ ಪತ್ರಿಕೆಗಳದ್ದು. ಹಾಗೆ ನೋಡಿದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವೂ ಪತ್ರಿಕೋದ್ಯಮದ ಇತಿಹಾಸವೂ ಜತೆಜತೆಯಾಗಿ ಸಾಗುತ್ತದೆ. ಸ್ವಾತಂತ್ರ್ಯ ಚಳುವಳಿ ತೀವ್ರ ಸ್ವರೂಪ ಪಡೆದಂತೆಲ್ಲಾ ಪತ್ರಿಕೋದ್ಯಮದ ಬೇರುಗಳು ಕೂಡ ವಿಸ್ತಾರಗೊಳ್ಳುತ್ತಾ ಹೋದವು. ಸ್ವಾತಂತ್ರ್ಯ ಚಳುವಳಿ, ರಾಷ್ಟ್ರೀಯತೆಯ ಭಾವ ಹಾಗೂ ಪತ್ರಿಕಾಲೋಕಗಳು ಒಟ್ಟೊಟ್ಟಿಗೆ ಬೆಳೆದವು. ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರು ಸ್ವತಃ ಪತ್ರಕರ್ತರಾಗಿದ್ದರು; ಪತ್ರಿಕೆಗಳನ್ನು ಸ್ವಾತಂತ್ರ್ಯ ಹೋರಾಟದ ಪ್ರೇರಕ ಸಾಧನಗಳೆಂದು ಬಲವಾಗಿ ನಂಬಿದ್ದರು.


ಇನ್ನೊಂದು ಪ್ರಮುಖ ವಿಚಾರವೆಂದರೆ, ನಮ್ಮ ಪತ್ರಿಕೋದ್ಯಮದ ಇತಿಹಾಸದ ಒಳಗೆಯೇ ಒಂದು ಸ್ವಾತಂತ್ರ್ಯಕ್ಕಾಗಿನ ಹೋರಾಟದ ಗಾಥೆಯಿದೆ. ಅದು ಪತ್ರಿಕಾ ಸ್ವಾತಂತ್ರ್ಯದ ಹೋರಾಟ; ಪತ್ರಿಕೆಗಳು ಹಾಗೂ ಪತ್ರಕರ್ತರು ತಮ್ಮ ಅಸ್ತಿತ್ವ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ. ಪತ್ರಿಕೆಗಳಿಂದ ಯಾವ ಕಾಲಕ್ಕೂ ತಮಗೆ ತೊಂದರೆ ತಪ್ಪಿದ್ದಲ್ಲವೆಂದು ತಿಳಿದ ಬ್ರಿಟಿಷರು ಒಂದರ ಮೇಲೊಂದರತೆ ಪತ್ರಿಕಾ ಶಾಸನಗಳನ್ನು ಜಾರಿಗೊಳಿಸುತ್ತಾ ಹೋದರು. ಪತ್ರಿಕೆಗಳ ಬಾಯಿಮುಚ್ಚಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡಿದರು. ಅದಕ್ಕೆ ಪ್ರತಿಯಾಗಿ ನಮ್ಮ ಪತ್ರಿಕಾಲೋಕವೂ ಇನ್ನಷ್ಟು ಬಲಿಷ್ಟವಾಗುತ್ತಲೇ ಹೋಯಿತು- ಕೆಳಕ್ಕೆ ಬಡಿದಷ್ಟೂ ಹೆಚ್ಚು ಚೈತನ್ಯದಿಂದ ಚಿಮ್ಮುವ ಚೆಂಡಿನ ಹಾಗೆ. ಭಾರತದ ಪತ್ರಿಕೋದ್ಯಮದ ಇತಿಹಾಸವೆಂದರೆ ಪತ್ರಿಕಾ ಸ್ವಾತಂತ್ರ್ಯಕ್ಕಾಗಿನ ನಡೆದ ಹೋರಾಟದ ಇತಿಹಾಸ ಎಂಬ ಮಾತೂ ಇದೆ.

ಭಾರತದ ಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ (1780) ಅನ್ನು ಆರಂಭಿಸಿದ ಜೇಮ್ಸ್ ಆಗಸ್ಟಸ್ ಹಿಕ್ಕಿಯೇ ಕಂಪೆನಿ ಸರ್ಕಾರದಿಂದ ಸಾಕಷ್ಟು ದಬ್ಬಾಳಿಕೆಗೆ ಒಳಗಾಗಬೇಕಾಯಿತು. ಆತ ಸ್ವತಃ ಈಸ್ಟ್ ಇಂಡಿಯಾ ಕಂಪೆನಿಯ ನೌಕರನಾಗಿದ್ದವನು. ಎರಡು ವರ್ಷ ಪತ್ರಿಕೆ ನಡೆಸುವುದೇ ಅವನಿಗೆ ಹರಸಾಹಸ ಆಗಿಹೋಯಿತು. ಅಷ್ಟರಮಟ್ಟಿಗೆ ಪ್ರಭುತ್ವ ಆತನ ಬೆನ್ನಿಗೆ ಬಿದ್ದಿತ್ತು. ತನ್ನ ಪ್ರಕಟಣೆಯುದ್ದಕ್ಕೂ ಬೆಂಗಾಲ್ ಗೆಜೆಟ್ ಆಗಿನ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ನ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.

ಭಾರತದ ಪತ್ರಿಕಾ ಇತಿಹಾಸದ ಆರಂಭಿಕ ವರ್ಷಗಳಲ್ಲಿ ಹೆಚ್ಚಿನ ಪತ್ರಿಕೆಗಳನ್ನು ಯುರೋಪಿಯನ್ನರೇ ಆರಂಭಿಸಿದ್ದರು. ಕುತೂಹಲಕರ ಅಂಶವೆಂದರೆ ಭಾರತದ ಸ್ವಾತಂತ್ರ್ಯವನ್ನು ಬೆಂಬಲಿಸಿದವರಲ್ಲೂ ಸಾಕಷ್ಟು ಮಂದಿ ಯುರೋಪಿಯನ್ನರಿದ್ದಾರೆ. ಅವರಲ್ಲಿ ಅನೇಕರು ಪತ್ರಕರ್ತರೂ ಆಗಿದ್ದರು. ‘ಕಲ್ಕತ್ತ ಜರ್ನಲ್’ (1818) ಆರಂಭಿಸಿದ ಜೇಮ್ಸ್ ಸಿಲ್ಕ್ ಬಕಿಂಗ್‌ಹ್ಯಾಮ್ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯುರೋಪಿಯನ್ನರಲ್ಲಿ ಮೊದಲಿಗ. ಇನ್ನೊಬ್ಬ ಬ್ರಿಟಿಷ್ ಪತ್ರಕರ್ತ ಬಿ. ಜಿ. ಹಾರ್ನಿಮನ್ ಭಾರತದ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕನಾಗಿದ್ದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿದ್ದ. ಅನೇಕ ಭಾರತೀಯ ಪತ್ರಕರ್ತರಿಗೆ ಸ್ಫೂರ್ತಿಯಾಗಿದ್ದ.

‘ಭಾರತೀಯ ಪುನರುತ್ಥಾನದ ಪಿತಾಮಹ’ ಎಂದು ಹೆಸರಾಗಿದ್ದ ಶ್ರೇಷ್ಠ ಸಮಾಜಸುಧಾರಕ ರಾಜಾ ರಾಮಮೋಹನ ರಾಯರಿಗೂ ತಮ್ಮ ಧ್ಯೇಯೋದ್ದೇಶಗಳನ್ನು ಸಾಧಿಸಲು ಪತ್ರಿಕೆಗಳು ಪ್ರಮುಖ ಪರಿಕರಗಳಾಗಿದ್ದವು. ಜನರನ್ನು ವೈಚಾರಿಕವಾಗಿ ತಲುಪಲು ಪತ್ರಿಕೆ ಒಂದು ಸಮರ್ಥ ಮಾಧ್ಯಮ ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಂಡ ಮೊದಲ ಭಾರತೀಯರಾದ ಅವರು ಸಂಬದ್ ಕೌಮುದಿ, ಮೀರತ್-ಉಲ್-ಅಕ್ಬರ್, ಬ್ರಾಹ್ಮಿನಿಕಲ್ ಮ್ಯಾಗಜಿನ್, ಬ್ರಾಹ್ಮಿನ್ ಸೇವಡಿ ಪತ್ರಿಕೆಗಳನ್ನು ನಡೆಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅವರು ನಡೆಸಿದ ಹೋರಾಟವೂ ದೊಡ್ಡದೇ. 1823ರಲ್ಲಿ ಕಂಪೆನಿ ಸರ್ಕಾರ ಪತ್ರಿಕಾ ನಿಯಂತ್ರಣ ಕಾಯ್ದೆ ಜಾರಿಮಾಡಲು ಹೊರಟಾಗ ಅದನ್ನು ಸಾರ್ವಜನಿಕವಾಗಿ ವಿರೋಧಿಸಿ ಸರ್ಕಾರಕ್ಕೆ ಬಲವಾದ ಸಂದೇಶ ಕಳಿಸಿದವರು ಅವರು. ಸಮಾನ ಮನಸ್ಕರೊಂದಿಗೆ ಅವರು ಸರ್ಕಾರಕ್ಕೆ ಸಲ್ಲಿಸಿದ ಲಿಖಿತ ಮನವಿ ‘ಭಾರತದ ಪತ್ರಿಕಾಲೋಕದ ಏರೋಪಗಿಟಿಕಾ’ ಎಂದೇ ಪ್ರಸಿದ್ಧ. ರಾಮಮೋಹನರಾಯರಿಗೆ ‘ದೇಶಭಾಷಾ ಪತ್ರಿಕೋದ್ಯಮದ ಪಿತಾಮಹ’ ಎಂಬ ಶ್ರೇಷ್ಠ ಮನ್ನಣೆಯೂ ಇದೆ.

1857ರ ಸಂಗ್ರಾಮದ ಬಳಿಕ:

ಭಾರತೀಯ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕುದೆಸೆ ಒದಗಿದ್ದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಳಿಕ. ಒಂದು ದೃಷ್ಟಿಯಲ್ಲಿ ಈ ಘಟನೆ ಭಾರತೀಯ ವೃತ್ತಪತ್ರಿಕೆಗಳ ಬೆಳವಣಿಗೆಗೆ ತಾತ್ಕಾಲಿಕ ಅಡ್ಡಿಯುಂಟುಮಾಡಿದರೂ, ಅಲ್ಲಿಂದ ನಂತರ ಪತ್ರಿಕೆಗಳು ಭಿನ್ನ ಹಾದಿ ಹಿಡಿದವು. ಶಿಶಿರ್ ಕುಮಾರ್ ಘೋಷರ ‘ಅಮೃತ ಬಜಾರ್ ಪತ್ರಿಕೆ’, ತಿಲಕರ ‘ಕೇಸರಿ’, ಜಿ. ಸುಬ್ರಹ್ಮಣ್ಯ ಅಯ್ಯರ್ ಹಾಗೂ ವೀರರಾಘವಾಚಾರಿಯವರ ‘ದಿ ಹಿಂದೂ’, ಪಂಡಿತ ಮದನ ಮೋಹನ ಮಾಳವೀಯರ ‘ಅಭ್ಯುದಯ’ ಮೊದಲಾದ ಪತ್ರಿಕೆಗಳು ಬ್ರಿಟಿಷ್ ವಿರೋಧಿ ಸತ್ಯವನ್ನು ಹೇಳುವ ಕೆಲಸವನ್ನು ಸ್ವಯಂಪ್ರೇರಣೆಯಿಂದ ಹಾಗೂ ದಿಟ್ಟತನದಿಂದ ಮಾಡುತ್ತಾಹೋದವು.

ಬ್ರಿಟಿಷರ ಕಣ್ಣಲ್ಲಿ ಸಿಪಾಯಿ ದಂಗೆ ಎನಿಸಿಕೊಂಡ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪತ್ರಿಕೆಗಳಿಂದ ದೊರೆತ ವ್ಯಾಪಕ ಬೆಂಬಲ ನೋಡಿ, ಅವುಗಳನ್ನು ಹೇಗಾದರೂ ಮಾಡಿ ಹೊಸಕಿ ಹಾಕುವ ಯೋಚನೆಗಳು ಬ್ರಿಟಿಷರಲ್ಲಿ ಮೂಡತೊಡಗಿದವು.  ಅಲ್ಲಿಂದ ಪತ್ರಿಕಾ ನಿರ್ಬಂಧಗಳ ಸರಣಿ ಆರಂಭವಾಯಿತು. 1857 ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಹೊಸದೊಂದು ಅಧ್ಯಾಯವಾಗಿದ್ದರೆ, ಭಾರತೀಯ ಪತ್ರಿಕೆಗಳ ಪಾಲಿಗೆ ಕರಾಳಯುಗದ ಆರಂಭವೂ ಆಯಿತು. 1857ರಲ್ಲೇ ಜಾರಿಗೆ ಬಂದ ಪತ್ರಿಕಾ ಕಾನೂನಿಗೆ ಪತ್ರಿಕೆ ಹಾಗೂ ಪುಸ್ತಕಗಳ ಪ್ರಸಾರವನ್ನು ನಿಯಂತ್ರಿಸುವ ಉದ್ದೇಶವೇ ಇತ್ತು. ಅದರ ಮೊದಲ ಬಲಿಯೇ ದ್ವಾರಕಾನಾಥ ಠಾಕೂರ್ ಮತ್ತು ಇತರ ದೇಶಪ್ರೇಮಿಗಳು ನಡೆಸುತ್ತಿದ್ದ ‘ಬೆಂಗಾಲ್ ಹರಕಾರು’ ಎಂಬ ಪತ್ರಿಕೆ.

ದೇಶಭಾಷಾ ಪತ್ರಿಕೆಗಳಾದ ಬಾಂಬೆ ಸಮಾಚಾರ, ಜಾಮೆ-ಜಮ್‌ಷೀರ್, ರಾಸ್ತ್ಗಾಫ್ತರ್ ಪತ್ರಿಕೆಗಳು ಮೊದಲನೇ ಸ್ವಾತಂತ್ರ್ಯ ಸಂಗ್ರಾಮವನ್ನು ಕೊಂಡಾಡಿದವು. ಅದರ ಮಹತ್ವವನ್ನು ಪ್ರಭಾವಶಾಲಿಯಾಗಿ ಓದುಗರಿಗೆ ತಲುಪಿಸಿದವು. ಇದನ್ನು ಮುಂಬೈಯ ಗುಜರಾತಿ ಪತ್ರಿಕಾ ಲೋಕವೂ ಬೆಂಬಲಿಸಿತು. ಹರೀಶ್‌ಚಂದ್ರ ಮುಖರ್ಜಿಯವರ ‘ಹಿಂದೂ ಪೇಟ್ರಿಯಟ್’ ಎಂಬ ಪತ್ರಿಕೆಯದ್ದು ಇಲ್ಲಿ ಪ್ರಮುಖ ಪಾತ್ರ. 

ಈಶ್ವರಚಂದ್ರ ವಿದ್ಯಾಸಾಗರ ಮತ್ತು ದ್ವಾರಕಾನಾಥ ವಿದ್ಯಾಭೂಷಣರು ನಡೆಸುತ್ತಿದ್ದ ‘ಸೋಮ್ ಪ್ರಕಾಶ್’ ಎಂಬ ಬಂಗಾಳಿ ಪತ್ರಿಕೆ ರಾಜಕೀಯ ಸ್ವಾತಂತ್ರ್ಯ ತತ್ವಗಳನ್ನು ಪ್ರತಿಪಾದಿಸಿತು. ಅದರಲ್ಲಿ ಪ್ರಕಟವಾಗುತ್ತಿದ್ದ ಬಿರುಸಾದ ಸಂಪಾದಕೀಯ, ಲೇಖನಗಳನ್ನು ಎದುರಿಸುವ ಶಕ್ತಿ ಸರ್ಕಾರಕ್ಕೆ ಇದ್ದಂತಿರಲಿಲ್ಲ. ಅದನ್ನೂ ಪತ್ರಿಕಾ ಕಾನೂನು ತಡೆದಾಗ ‘ನವಾಭಿ ಬಾಕರ್’ ಎಂಬ ಹೊಸ ಹೆಸರಿನೊಂದಿಗೆ ಪ್ರಕಟವಾಗತೊಡಗಿತು.

ಲಾರ್ಡ್ ಲಿಟ್ಟನ್ ಪ್ರಕಾರವಂತೂ ಸರ್ಕಾರದ ವಿರುದ್ಧ ಯಾವುದೇ ಸುದ್ದಿ, ಲೇಖನವನ್ನು ಪ್ರಕಟಿಸುವುದು ಕೂಡ ರಾಜದ್ರೋಹಕ್ಕೆ ಸಮನಾಗಿತ್ತು. ಈ ರಾಜದ್ರೋಹವನ್ನು ಹತ್ತಿಕ್ಕಲೆಂದೇ ಆತ 1878ರಲ್ಲಿ ಇನ್ನೊಂದು ಪತ್ರಿಕಾಶಾಸವನ್ನು ಜಾರಿಗೆ ತಂದ. ಇದರಲ್ಲಿ ದೇಶಭಾಷಾ ಪತ್ರಿಕೆಗಳ ಸುದ್ದಿನಿಯಂತ್ರಣಕ್ಕೆ ಅವಕಾಶವಿತ್ತು. ಆಗಷ್ಟೇ ಬೆಳೆಯತ್ತಿದ್ದ ಭಾರತೀಯ ಭಾಷೆಗಳ ಪತ್ರಿಕೋದ್ಯಮಕ್ಕೂ, ಸ್ವಾತಂತ್ರ್ಯ ಹೋರಾಟಕ್ಕೂ ಈ ಶಾಸನ ಕೊಡಲಿಪೆಟ್ಟು ನೀಡಿದ ಹಾಗಾಯಿತು. ಈ ಶಾಸನದ ಏಟಿನಿಂದ ತಪ್ಪಿಸಿಕೊಳ್ಳಲು ‘ಅಮೃತ ಬಜಾರ್ ಪತ್ರಿಕಾ’ ರಾತೋರಾತ್ರಿ ಬಂಗಾಳಿಯಿAದ ಇಂಗ್ಲಿಷ್ ಭಾಷೆಗೆ ಬದಲಾಯಿತು.

ಅಖಿಲ ಭಾರತ ಕಾಂಗ್ರೆಸ್‌ನ ಹುಟ್ಟು ಪತ್ರಿಕೋದ್ಯಮಕ್ಕೆ ಹೊಸ ಹುರುಪು ನೀಡಿತು. ದಿನಪತ್ರಿಕೆಗಳ ಬೆಳವಣಿಗೆ ದೃಷ್ಟಿಯಿಂದ ಪತ್ರಿಕಾರಂಗದಲ್ಲಿ ಸಾಕಷ್ಟು ಉತ್ಸಾಹ ಕಾಣಿಸಿಕೊಂಡಿತು. ಭಾರತೀಯ ನಾಯಕರುಗಳ ಭಾಷಣಗಳನ್ನು, ರಾಜಕೀಯ ವಿದ್ಯಮಾನಗಳನ್ನು ವಿವರವಾಗಿ ಪ್ರಕಟಿಸುವ ಪ್ರವೃತ್ತಿ ಆರಂಭವಾಯಿತು. ‘ದೇಶಭಾಷಾ ಪತ್ರಿಕೆಗಳ ಭಾಷೆಯಲ್ಲಿ ಸಮತೂಕ ತರುವ ಮತ್ತು ಸಾರ್ವಜನಿಕ ಚರ್ಚೆಗಳಲ್ಲಿ ನ್ಯಾಯವಿಮರ್ಶಕ ಭಾವನೆಯನ್ನುಂಟುಮಾಡುವ’ ಉದ್ದೇಶದಿಂದ 1891ರಲ್ಲಿ ಭಾರತದಲ್ಲಿ ಪ್ರಥಮ ಪತ್ರಿಕಾ ಸಂಘಟನೆ ‘ನೇಟಿವ್ ಪ್ರೆಸ್ ಅಸೋಯೇಶನ್’ ಆರಂಭವಾದದ್ದು ಕೂಡ ಈ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯೇ.

ತಿಲಕರ ಮರಾಠ ಹಾಗೂ ಕೇಸರಿ ಪತ್ರಿಕೆಗಳು ಭಾರತೀಯರ ಅಂತರಂಗವನ್ನು ಬಹುವಾಗಿ ತಟ್ಟಿದವು. ತಿಲಕರು ತಮ್ಮ ವಾಕ್ಚಾತುರ್ಯದಿಂದ ಹೋರಾಟಗಾರರನ್ನು ಬಡಿದೆಬ್ಬಿಸಬಲ್ಲ ಸಾಮರ್ಥ್ಯ ಹೊಂದಿದ್ದರೆ ಅವರ ಲೇಖನಗಳು ಕ್ರಾಂತಿಯ ಕಿಡಿಯನ್ನು ಹಚ್ಚುವಷ್ಟು ಪ್ರಖರವಾಗಿದ್ದವು. 1897ರಲ್ಲಿ ಅವರು ಕೇಸರಿಯಲ್ಲಿ ಬರೆದ ಲೇಖನವೊಂದು ರಾಜದ್ರೋಹಕರವಾಗಿದೆಯೆಂದು ಆರೋಪಿಸಿ ಎರಡು ವರ್ಷ ಕಠಿಣ ಶಿಕ್ಷೆ ವಿಧಿಸಲಾಯಿತು; ಇನ್ನೊಂದು ಸಂದರ್ಭವನ್ನು ಬಳಸಿ ಆರು ವರ್ಷ ಗಡೀಪಾರು ಮಾಡಲಾಯಿತು.

20ನೇ ಶತಮಾನದಲ್ಲಿ:

20ನೇ ಶತಮಾನದ ಆರಂಭ ರಾಷ್ಟ್ರೀಯತೆ ಒಂದು ಧರ್ಮವಾಗಿ ಬೆಳೆದ ಕಾಲ. 1905ರ ಬಂಗಾಳದ ವಿಭಜನೆಯನ್ನು ಪತ್ರಿಕೆಗಳು ವಿರೋಧಿಸಿ ಬರೆದವು. ಬ್ರಿಟಿಷ್ ಸರ್ಕಾರದ ಒಡೆದು ಆಳುವ ನೀತಿಯನ್ನು ಟೀಕಿಸಿದವು. ಹಾಗೆಯೇ, ಸ್ವದೇಶಿ ಚಳುವಳಿಯನ್ನು ಬೆಂಬಲಿಸಿದವು. ಆದರೆ ಮಾರ್ಲೆ ಮಿಂಟೋ ಸುಧಾರಣೆಗಳ ವಿಷಯದಲ್ಲಿ ಉದಾರವಾದಿ ಮತ್ತು ಉಗ್ರರಾಷ್ಟ್ರೀಯವಾದಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾದಂತೆ ಪತ್ರಿಕಾಲೋಕದಲ್ಲೂ ಎರಡು ಪಂಗಡಗಳಾದವು. ಇದೊಂದು ರೀತಿಯಲ್ಲಿ ಪತ್ರಿಕೆಗಳ ಸಂಘಟಿತ ಹೋರಾಟಕ್ಕೆ ಆದ ಒಂದು ಸಣ್ಣ ಹಿನ್ನಡೆಯೇ. ಆದರೂ ಎರಡೂ ಗುಂಪಿನ ಪತ್ರಿಕೆಗಳು ತಮ್ಮದೇ ಆದ ರೀತಿಯಲ್ಲಿ ಹೋರಾಟದ ಕಾವು ಉಳಿಸಿಕೊಂಡವು. ಸುಧಾರಣೆಗಳು ಅಪಕ್ಷವಾಗಿಯೆಂದು ಟೀಕಿಸಿದವು. ಸುಧಾರಣೆಗಳನ್ನು ಖಂಡಿಸಿದ ರಾಷ್ಟ್ರೀಯವಾದಿ ನಾಯಕರಿಗೆ ಜೈಲುಶಿಕ್ಷೆಯಾಯಿತು. ಪೂನಾದ ‘ಕೇಸರಿ’ ಹಾಗೂ ನಾಗಪುರದ ‘ದೇಶಸೇವಕ’ ಪತ್ರಿಕೆಗಳು ಉಗ್ರಪಂಥವನ್ನು ಬೆಂಬಲಿಸಿದವು. 1908ರ ಪತ್ರಿಕಾ ಶಾಸನದ ಪರಿಣಾಮವಾಗಿ ಏಳು ಮುದ್ರಣಾಲಯಗಳ ಜಪ್ತಿಯಾಯಿತು, ಐವರು ಸಂಪಾದಕರ ಮೇಲೆ ಮೊಕದ್ದಮೆ ಹೂಡಲಾಯಿತು, ಹಾಗೂ ಅನೇಕರಿಗೆ ಎಚ್ಚರಿಕೆ ನೀಡಲಾಯಿತು.

1910ರ ವೇಳೆಗೆ ಮಾಧವರಾವ್ ಮಧ್ಯೆ ಎಂಬವರು ‘ಹಿತವಾದ’ ಎಂಬ ಮರಾಠಿ ಪತ್ರಿಕೆಯನ್ನು ಆರಂಭಿಸಿದರು. 1913ರಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಪತ್ರಿಕೆ ಅದರ ಮಾಲೀಕತ್ವ ವಹಿಸಿಕೊಂಡು ಇಂಗ್ಲಿಷ್ ಪತ್ರಿಕೆಯನ್ನಾಗಿ ಪರಿವರ್ತಿಸಿತು. ಅದೇ ವರ್ಷ ಫಿರೋಜ್ ಷಾ ಮೆಹ್ತಾ ‘ಬಾಂಬೆ ಕ್ರಾನಿಕಲ್’ ಆರಂಭಿಸಿದರು. ಪ್ರಸಿದ್ಧ ಪತ್ರಕರ್ತ ಬಿ. ಜಿ. ಹಾರ್ನಿಮನ್ ಅದರ ಸಂಪಾದಕರಾಗಿದ್ದರು. ಅನೇಕ ಸಂಕಷ್ಟಗಳ ನಡುವೆಯೂ ಸ್ವಾತಂತ್ರ್ಯ ಚಳುವಳಿಗೆ ಬೆಂಬಲ ನೀಡಿದ ಹಾರ್ನಿಮನ್ ಸ್ವತಂತ್ರ, ಮುಕ್ತ ಹಾಗೂ ನಿರ್ಭೀತ ಪತ್ರಿಕೋದ್ಯಮದ ಪ್ರವರ್ತಕರೂ ಆಗಿದ್ದರು.

ಆ ಕಾಲದ ಉರ್ದು ಪತ್ರಿಕೆಗಳು ಬ್ರಿಟಿಷರನ್ನು ಟೀಕಿಸಲು ಹಿಂಜರಿಯುತ್ತಿದ್ದ ಸಂದರ್ಭ ಮೌಲಾನಾ ಅಬುಲ್ ಕಲಾಂ ಆಜಾದ್ ‘ಅಲ್-ಹಿಲಾಲ್’ ಸ್ಥಾಪಿಸಿದರು. ಅಸಹಕಾರ ಚಳುವಳಿ ಉತ್ತುಂಗದಲ್ಲಿದ್ದ ಕಾಲದಲ್ಲಿ ಗಾಂಧೀವಾದಿ ಶಿವಪ್ರಸಾದ್ ಗುಪ್ತಾ ‘ಆಜ್’ ಎಂಬ ಹಿಂದಿ ಪತ್ರಿಕೆಯನ್ನು ಆರಂಭಿಸಿದರು.

1919ರ ಮಾಂಟೆಗೋ ಚೆಲ್ಮ್ಸ್’ಫರ್ಡ್  ಸುಧಾರಣೆಗಳ ಸಂದರ್ಭದಲ್ಲಿ ಮಂದಗಾಮಿಗಳು ತಮ್ಮ ಪಂಥವನ್ನು ಬಲಪಡಿಸಲು ಹೊಸ ಪತ್ರಿಕೆಯೊಂದರ ಅವಶ್ಯಕತೆ ಮನಗಂಡರು. ಪರಿಣಾವಾಗಿ ಪಂಡಿತ ಮದನಮೋಹನ ಮಾಳವೀಯರ ನೇತೃತ್ವದಲ್ಲಿ ‘ಲೀಡರ್’ ಎಂಬ ದಿನಪತ್ರಿಕೆ ಹುಟ್ಟಿಕೊಂಡಿತು. ಫಿರೋಜ್ ಷಾ ಮೆಹ್ತಾ, ಗೋಪಾಲಕೃಷ್ಣ ಗೋಖಲೆ ಮುಂತಾದವರು ಇದಕ್ಕೆ ಬೆಂಬಲ ನೀಡಿದರು. ಮಾಂಟೆಗೋ ಚೆಲ್ಮ್ಸ್’ಫರ್ಡ್  ಸುಧಾರಣೆಗಳ ಕಾರಣದಿಂದ ಭಾರತೀಯರಲ್ಲಿ ತೀವ್ರ ಅಸಮಾಧಾನ ಉಂಟಾದ ಹಿನ್ನೆಲಯಲ್ಲಿ ಅವುಗಳನ್ನು ಮರುಪರಿಶೀಲಿಸುವ ಉದ್ದೇಶದಿಂದ ಸೈಮನ್ ಆಯೋಗ ನೇಮಕವಾಯಿತು. ಆದರೆ ಸ್ವಾತಂತ್ರ್ಯ ಹೋರಾಟಗಾರರು ಇದಕ್ಕೆ ಪಂಥಗಳ ಭೇದವಿಲ್ಲದೆ ಒಕ್ಕೊರಲ ವಿರೋಧ ವ್ಯಕ್ತಪಡಿಸಿದರು ಮತ್ತು ಇದಕ್ಕೆ ಭಾರತದ ಪತ್ರಿಕೆಗಳು ಕೂಡ ದೊಡ್ಡ ಮಟ್ಟದ ಪ್ರಚಾರ ನೀಡಿದವು. ಪತ್ರಿಕೆಗಳು ತಮ್ಮ ಮುಕ್ಕಾಲು ಭಾಗವನ್ನೂ ಸೈಮನ್ ಆಯೋಗದ ವಿರೋಧದ ಸುದ್ದಿಗಳಿಗೆ ಮೀಸಲಿರಿಸಿದವು.

ಹಿಂದ್ ಸ್ವರಾಜ್ಯ, ಯುಗಾಂತರ, ಗುಜರಾತ್, ಶಕ್ತಿ, ಕಾಳ್, ಧರ್ಮ, ಹಿತೈಷಿ, ಖುಲ್ನವಾಸಿ, ಕಲ್ಯಾಣಿ, ಬೀದಾರಿ, ಪ್ರೇಮ, ವರ್ತಮಾನ್, ಆಕಾಶ್, ಕೇಸರಿ, ಕರ್ನಾಟಕ ವೈಭವ, ರಾಷ್ಟçಮತ, ವಿಶ್ವವೃತ್ತ, ನ್ಯೂ ಇಂಡಿಯಾ, ವಂದೇ ಮಾತರಂ, ಸಂಧ್ಯಾ, ಬೆಂಗಾಲಿ, ಹಿತವಾದಿ, ಡೆಕ್ಕಾ ಗಜೆಟ್, ನವಶಕ್ತಿ, ಸಹಾಯಕ್ ಮುಂತಾದ ಪತ್ರಿಕೆಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರದ ಗದಾಪ್ರಹಾರಕ್ಕೆ ತುತ್ತಾದವು. ಜಲಿಯನ್ ವಾಲಾಭಾಗ್ ಹತ್ಯಾಂಕಾಂಡವನ್ನು ಪತ್ರಿಕೆಗಳು ತೀವ್ರವಾಗಿ ವಿರೋಧಿಸಿದವು. ತಮಗೊದಗಬಹುದಾದ ತೊಂದರೆಗಳನ್ನೂ ಲೆಕ್ಕಿಸದೆ ಬ್ರಿಟಿಷರ ಪೈಶಾಚಿಕ ಕೃತ್ಯವನ್ನು ಉಗ್ರ ಪದಗಳಲ್ಲಿ ಜರೆದವು. 

ಮೂಲತಃ ಭಾರತದವರಲ್ಲದೇ ಹೋದರೂ ಸ್ವಾತಂತ್ರ್ಯ ಆಂದೋಲನವನ್ನು ಬೆಂಬಲಿಸಿದವರಲ್ಲಿ ಆ್ಯನಿಬೆಸೆಂಟ್ ಕೂಡ ಒಬ್ಬರು. ಅವರು ಅನೇಕ ರಾಷ್ಟ್ರೀಯವಾದಿ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು. ತಿಲಕರ ಬೆಂಬಲದೊಂದಿಗೆ ಹೋಂ ರೂಲ್ ಚಳುವಳಿ ಆರಂಭಿಸಿದ ಅವರು ಅದಕ್ಕೆ ಪೂರಕವಾಗಿಯೇ ‘ಕಾಮನ್ ವೀಲ್’ ಹಾಗೂ ‘ನ್ಯೂ ಇಂಡಿಯಾ’ ಪತ್ರಿಕೆಗಳನ್ನು ಹೊರತಂದರು. ಸರ್ಕಾರ ಆ್ಯನಿಬೆಸೆಂಟರನ್ನೂ ರಾಜದ್ರೋಹದ ಆರೋಪದಲ್ಲಿ ಜೈಲಿಗೆ ತಳ್ಳಿದಾಗ ಮದ್ರಾಸ್‌ನ ‘ದಿ ಹಿಂದೂ’ ಅವರ ಬೆಂಬಲಕ್ಕೆ ನಿಂತಿತು. ಅವರನ್ನು ‘ಭಾರತೀಯ ಸ್ವಾತಂತ್ರ್ಯದ ನಂದಾದೀಪ’ ಎಂದು ಅರ್ಹವಾಗಿಯೇ ಕರೆಯಲಾಗಿದೆ. 1920ರಲ್ಲಿ ಮದ್ರಾಸ್ ಸಮೀಪದ ಅಡ್ಯಾರಿನಲ್ಲಿ ದೇಶದ ಮೊತ್ತಮೊದಲ ಪತ್ರಿಕಾ ಶಿಕ್ಷಣವನ್ನು ಆರಂಭಿಸಿದ ಹೆಗ್ಗಳಿಕೆಯೂ ಆ್ಯನಿಬೆಸೆಂಟರದ್ದೇ. ‘ನ್ಯೂ ಇಂಡಿಯಾ’ ಕಚೇರಿಯೇ ಕಲಿಕಾರ್ಥಿಗಳ ಪ್ರಯೋಗಾಲಯ ಆಗಿತ್ತು.

ಮೋತಿಲಾಲ ನೆಹರು ಹಾಗೂ ಸಿ. ಆರ್. ದಾಸ್ ಸ್ಥಾಪಿಸಿದ್ದ ಸ್ವರಾಜ್ಯ ಪಕ್ಷ ತನ್ನ ಅಭಿಪ್ರಾಯಗಳ ಪ್ರಸಾರಕ್ಕಾಗಿ ಅದಾಗಲೇ ಆಕಾಲಿ ಸಿಖ್ಖರಿಂದ ಸ್ಥಾಪಿತವಾಗಿದ್ದ ‘ಹಿಂದೂಸ್ಥಾನ್ ಟೈಮ್ಸ್’ ಅನ್ನು ಖರೀದಿಸಿದರು. ಅದಕ್ಕೆ ಮದನ ಮೋಹನ ಮಾಳವೀಯ, ಲಾಲಾ ಲಜಪತರಾಯ್, ರಾಜಾ ನರೇಂದ್ರನಾಥ್, ಎಂ. ಆರ್. ಜಯಕರ್ ಬೆಂಬಲವಿತ್ತು. ಬಂಗಾಳ ಪ್ರಾಂತದಲ್ಲಿ ಸ್ವರಾಜ್ಯ ಪಕ್ಷಕ್ಕೆ ಬೆಂಬಲ ನೀಡಲು ಸಿ. ಆರ್. ದಾಸ್ 1923ರಲ್ಲಿ ‘ಫಾರ್ವರ್ಡ್’ ಎಂಬ ಪತ್ರಿಕೆ ಆರಂಭಿಸಿದರು. ಅವರು ಅರವಿಂದ ಘೋಷರ ‘ವಂದೇ ಮಾತರಂ’ ಪತ್ರಿಕೆಗೆ ಕ್ರಮವಾಗಿ ಲೇಖನ ಬರೆಯುತ್ತಿದ್ದರು.

ಗಾಂಧೀಯುಗದ ಪತ್ರಿಕೋದ್ಯಮ:

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪ್ರವೇಶ ಹೇಗೆ ಹೊಸ ಅಧ್ಯಾಯವನ್ನು ಆರಂಭಿಸಿತೋ, ಭಾರತೀಯ ಪತ್ರಿಕೋದ್ಯಮದಲ್ಲೂ ಹೊಸ ಹಾದಿಯನ್ನು ತೆರೆಯಿತು. ಗಾಂಧೀಜಿಯವರು ಸ್ವತಃ ಅಭಿಜಾತ ಪತ್ರಕರ್ತರಾಗಿದ್ದುದೇ ಇದಕ್ಕೆ ಪ್ರಮುಖ ಕಾರಣ. ಅವರಿಗೆ ದಕ್ಷಿಣ ಆಫ್ರಿಕಾದಲ್ಲಿ ‘ಇಂಡಿಯನ್ ಒಪಿನಿಯನ್’ ಪತ್ರಿಕೆ ನಡೆಸಿದ, ಅದರ ಮೂಲಕ ಹೋರಾಟಗಳನ್ನು ಸಂಘಟಿಸಿದ ಅನುಭವವಿತ್ತು. ತಮ್ಮ ತತ್ವ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವುದಕ್ಕೆ ಗಾಂಧೀಜಿಯವರಿಗೆ ಪತ್ರಿಕೆಗಳು ಪ್ರಧಾನ ಸಾಧನಗಳಾಗಿದ್ದವು. ಈ ವಿಚಾರದಲ್ಲಿ ಇಂಗ್ಲಿಷ್ ಪತ್ರಿಕೆಗಳಿಗಿಂತಲೂ ದೇಶಭಾಷಾ ಪತ್ರಿಕೆಗಳು ಹೆಚ್ಚಿನ ಪಾತ್ರ ವಹಿಸಬಲ್ಲವು ಎಂದು ಅವರಿಗೆ ತಿಳಿದಿತ್ತು. ಸತ್ಯ, ಅಹಿಂಸೆ, ಸತ್ಯಾಗ್ರಹ, ಚರಕ, ಖಾದಿ, ಪಾನನಿರೋಧ ಮೊದಲಾದ ಅವರ ವಿಶಿಷ್ಟ ಚಿಂತನೆಗಳನ್ನು ಪಸರಿಸಿ ಹಳ್ಳಿಹಳ್ಳಿಗೂ ಗಾಂಧೀವಾದವನ್ನು ಒಯ್ದ ಕೀರ್ತಿ ಪತ್ರಿಕೆಗಳಿಗೆ ಸಲ್ಲುತ್ತದೆ. ಅವರು ನಡೆಸಿದ ‘ಯಂಗ್ ಇಂಡಿಯಾ’, ‘ನವಜೀವನ’ ಹಾಗೂ ‘ಹರಿಜನ’ ಪತ್ರಿಕೆಗಳು ಕೂಡ ಅವರ ಒಟ್ಟಾರೆ ಹೋರಾಟದ ಮಾದರಿಯನ್ನೇ ಅನುಸರಿಸುತ್ತವೆ.

ಗಾಂಧೀಜಿಯವರ ಲೇಖನಗಳು ದೇಶದಾದ್ಯಂತ ವಿವಿಧ ಪತ್ರಿಕೆಗಳಲ್ಲಿ ಹಾಗೂ ವಿವಿಧ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದವು. ಸರಳ ಹಾಗೂ ನೇರ ವಾಕ್ಯಗಳ ಪ್ರಭಾವಶಾಲಿ ಬರವಣಿಗೆ ಅವರಿಗೆ ಕರತಲಾಮಲಕವಾಗಿತ್ತು. ಅಲಂಕಾರಿಕ, ಉತ್ಪೆçÃಕ್ಷೆಯ ಭಾಷೆಯಲ್ಲಿ ಅವರು ಬರೆಯುತ್ತಿರಲಿಲ್ಲ. ವಾಸ್ತವಾಂಶಗಳಿAದ ದೂರಸರಿಯುತ್ತಿರಲಿಲ್ಲ. ವಿವೇಚನಾರಹಿತ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ವಿಚಾರಗಳನ್ನು ಹರಡುವಲ್ಲಿ ಸುದ್ದಿಪತ್ರಿಕೆಗಳು ಶಕ್ತಿಯುತ ಮಾಧ್ಯಮವಾಗಬಲ್ಲವು ಎಂಬುದನ್ನು ಅವರು ಅರಿತಿದ್ದರು. 1922ರಲ್ಲಿ ‘ಶೇಕಿಂಗ್ ದಿ ಮೀನ್’ ಎಂಬ ಲೇಖನದಲ್ಲಿ ಸರ್ಕಾರವನ್ನು ಉಗ್ರವಾಗಿ ಟೀಕಿಸಿದ್ದಕ್ಕೆ ರಾಷ್ಟçದ್ರೋಹದ ಆರೋಪದಲ್ಲಿ 6 ವರ್ಷ ಜೈಲುಶಿಕ್ಷೆಯಾಯಿತು.

ಅಸಹಕಾರ ಚಳುವಳಿ, ಕಾನೂನು ಭಂಗ ಚಳುವಳಿ ಹಾಗೂ ಕ್ವಿಟ್ ಇಂಡಿಯಾ ಹೋರಾಟಗಳಲ್ಲೂ ಪತ್ರಿಕೆಗಳು ಭಾಗವಹಿಸಿದ ರೀತಿ ಅನನ್ಯ. ಅಸಹಕಾರ ಚಳುವಳಿ ಆರಂಭವಾದಾಗ ಅದಕ್ಕೆ ಉತ್ತೇಜನ ಕೊಡುವ ಲೇಖನಗಳನ್ನು ಪ್ರಕಟಿಸುವ ಪತ್ರಿಕೆಗಳ ಮೇಲೆ ಕ್ರಮ ಕೈಗೊಳ್ಳುವ ಹೊಸ ಕಲಂ ಅನ್ನು ಆಗಿನ ಪತ್ರಿಕಾ ಶಾಸನಕ್ಕೆ ಸೇರಿಸಲಾಯಿತು. 1937ರಲ್ಲೂ ಇನ್ನೂ ಎರಡು ಹೊಸ ಕಾನೂನುಗಳನ್ನು ಜಾರಿಗೊಳಿಸಲಾಯಿತು. ಗಾಂಧೀಜಿಯವರ ದಂಡಿ ನಡಿಗೆಯನ್ನು ಪತ್ರಿಕೆಗಳು ಚೆನ್ನಾಗಿಯೇ ಬೆಂಬಲಿಸಿದವು. ಉಪ್ಪಿನ ಮೇಲೆ ಬ್ರಿಟಿಷರು ವಿಧಿಸಿದ ತೆರಿಗೆಯನ್ನು ಕಟುಶಬ್ದಗಳಿಂದ ಟೀಕಿಸಿದವು. ಇದೇ ಸಂದರ್ಭದಲ್ಲಿ ಜಾರಿಯಾದ ಭಾರತ ಪತ್ರಿಕೆಗಳ ತುರ್ತು ಶಾಸನಕ್ಕೆ ಅನೇಕ ಪತ್ರಿಕೆಗಳು ತುತ್ತಾದವು. ಠೇವಣಿ, ಮುದ್ರಣಾಲಯಗಳನ್ನು ಕಳೆದುಕೊಂಡವು.

ಪತ್ರಿಕೆಗಳಿಗೆ ಉಂಟಾದ ಚಿಂತಾಜನಕ ಪರಿಸ್ಥಿತಿಯನ್ನು ವಿರೋಧಿಸಲು ‘ದಿ ಹಿಂದೂ’ ಪತ್ರಿಕೆಯ ಸಂಪಾದಕ ಎ. ರಂಗಸ್ವಾಮಿ ಅಯ್ಯಂಗಾರರ ನೇತೃತ್ವದಲ್ಲಿ ಪತ್ರಿಕೋದ್ಯಮಿಗಳು ಹಾಗೂ ಸಂಪಾದಕರ ಮೊದಲ ರಾಷ್ಟçಮಟ್ಟದ ಸಭೆ ನಡೆಯಿತು. ಪತ್ರಿಕಾ ಶಾಸನವನ್ನು ಹಿಂತೆಗೆದುಕೊಳ್ಳಲು ಒತ್ತಡ ಹೇರಲಾಯಿತು. ಆದರೆ ಸರ್ಕಾರ ಅದನ್ನು ಲೆಕ್ಕಿಸಲಿಲ್ಲ. ಬದಲಿಗೆ, ಪತ್ರಿಕೆಗಳ ಮೇಲಿನ ದಬ್ಬಾಳಿಕೆಯೇ ಇನ್ನಷ್ಟು ಹೆಚ್ಚಾಯಿತು.

ಮದ್ರಾಸ್ ಪ್ರಾಂತ್ಯದಲ್ಲಿ ನವಜೀವನ, ಸ್ವರಾಜ್ಯ, ಸ್ವದೇಶಿ ಮಿತ್ರನ್, ದ್ರಾವಿಡಿಯನ್ ಪ್ರೆಸ್, ತಮಿಳುನಾಡು ಪ್ರೆಸ್, ಆಂಧ್ರಪತ್ರಿಕಾ ಪ್ರೆಸ್, ಹಿಂದಿ ಪ್ರಚಾರ ಪ್ರೆಸ್‌ಗಳನ್ನು ಮುಚ್ಚಲಾಯಿತು. ಅಮೃತ ಬಜಾರ್ ಪತ್ರಿಕಾ, ಸಕಾಲ್, ಹಿತವಾದ, ಬಾಂಬೆ ಕ್ರಾನಿಕಲ್, ಅಲ್ ಹಿಲಾಲ್, ಯಂಗ್ ಇಂಡಿಯಾ, ಆಜ್, ಹರಿಜನ್, ನವಜೀವನ್, ಫ್ರೀ ಪ್ರೆಸ್ ಜರ್ನಲ್, ಸಂಯುಕ್ತ ಕರ್ನಾಟಕ, ದಿ ಹಿಂದೂ, ಮಾತೃಭೂಮಿ, ಮಲಯಾಳ ಮನೋರಮ- ಈ ಕಾಲದ ಹೋರಾಟವನ್ನು ಬೆಳೆಸಿದ ಪ್ರಮುಖ ಪತ್ರಿಕೆಗಳು.

ಸ್ವಾತಂತ್ರ್ಯ ಚಳುವಳಿ ಉತ್ತುಂಗದಲ್ಲಿದ್ದಾಗ ದೇಶಾಭಿಮಾನಿ ಪತ್ರಕರ್ತ ಎಸ್. ಸದಾನಂದ ಆರಂಭಿಸಿದ ‘ಫ್ರೀ ಪ್ರೆಸ್ ಜರ್ನಲ್’ ಒಂದು ದೊಡ್ಡ ಕೊಡುಗೆ. ಅವರು ಅದಕ್ಕಿಂತ ಮೊದಲೇ ಸ್ವಾತಂತ್ರ್ಯ ಹೋರಾಟದ ಸುದ್ದಿಗಳನ್ನು ಪತ್ರಿಕೆಗಳಿಗೆ ಹಂಚುವುದಕ್ಕಾಗಿ ‘ಫ್ರೀ ಪ್ರೆಸ್ ಇಂಡಿಯಾ’ ಎಂಬ ಸುದ್ದಿಸಂಸ್ಥೆಯನ್ನು ಆರಂಭಿಸಿದ್ದರು. ಆದರೆ ಅನೇಕ ಪತ್ರಿಕೆಗಳು ಇದಕ್ಕೆ ಚಂದಾದಾರರಾಗಲು ಹೆದರಿದವು. ಕೊನೆಗೆ ಅವರೇ ಸ್ವತಃ ಪತ್ರಿಕೆ ಆರಂಭಿಸಬೇಕಾಯಿತು. ಗಾಂಧೀಜಿಯಂತೆ ಸದಾನಂದ ಕೂಡ ಪತ್ರಿಕವೃತ್ತಿಯನ್ನು ಸಮಾಜಸೇವೆ ಎಂದು ಪರಿಗಣಿಸಿದ್ದರು. ಗಾಂಧೀಜಿಯವರ ‘ಯಂಗ್ ಇಂಡಿಯಾ’ದಲ್ಲೇ ಅವರಿಗೆ ತರಬೇತಿ, ಮಾರ್ಗದರ್ಶನಗಳು ಲಭಿಸಿದ್ದವು.

ಭಾರತೀಯರ ಆತ್ಮಾಭಿಮಾನವನ್ನೂ, ಹೋರಾಟದ ಛಲವನ್ನೂ ಇಮ್ಮಡಿಗೊಳಿಸಿದ ಹೆಗ್ಗಳಿಕೆ ಪತ್ರಿಕೆಗಳದ್ದು. ಭ್ರೂಣಾವಸ್ಥೆಯಲ್ಲಿದ್ದ ರಾಷ್ಟ್ರೀಯತೆ ಪತ್ರಿಕೆಗಳ ನಿರಂತರ ಶ್ರಮದಿಂದ ವ್ಯಾಪಕವಾಗಿ ಹರಡಿತು. ಇದರ ಅರ್ಥ ಭಾರತದಲ್ಲಿದ್ದ ಎಲ್ಲ ಪತ್ರಿಕೆಗಳೂ ಸ್ವಾತಂತ್ರ್ಯ ಹೋರಾಟಕ್ಕೆ ಟೊಂಕ ಕಟ್ಟಿ ನಿಂತವು ಎಂದಲ್ಲ.  ಚಳುವಳಿಯನ್ನು ಬೆಂಬಲಿಸದ ಪತ್ರಿಕೆಗಳೂ ಇದ್ದವು. ಆಂಗ್ಲರ ಒಡೆತನದಲ್ಲಿದ್ದ ಟೈಮ್ಸ್ ಆಫ್ ಇಂಡಿಯಾ, ದಿ ಸ್ಟೇಟ್ಸ್ಮನ್, ಪಯೋನೀರ್ ಮುಂತಾದ ಪತ್ರಿಕೆಗಳು ರಾಷ್ಟ್ರೀಯ ಹೋರಾಟವನ್ನು ಖಂಡಿಸಿದವು. ದೇಶವಿಭಜನೆಯನ್ನು ಬೆಂಬಲಿಸಿದ ಪತ್ರಿಕೆಗಳೂ ಇದ್ದವು. ಉಳಿದ ಚಳವಳಿಗೆ ಸೃಷ್ಟಿಯಾದ ಜನಾಭಿಪ್ರಾಯವನ್ನು ದೇಶ ವಿಭಜನೆಯ ವಿರುದ್ಧವಾಗಿ ಪತ್ರಿಕೆಗಳು ಮೂಡಿಸಲಿಲ್ಲ ಎಂಬ ಅಭಿಪ್ರಾಯವೂ ಪತ್ರಿಕಾ ಇತಿಹಾಸಕಾರರಲ್ಲಿ ಇದೆ. ಆದರೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹಾಗೂ ಪತ್ರಿಕಾ ಇತಿಹಾಸವನ್ನು ಒಟ್ಟಾಗಿ ನೋಡುವಾಗ ಅವೆರಡೂ ಪರಸ್ಪರ ಪೂರಕವಾಗಿ ಕೆಲಸ ಮಾಡಿದ್ದೇ ಪ್ರಧಾನವಾಗಿ ಕಾಣಿಸುತ್ತದೆ. ಅಂತಹದೊಂದು ಮಹಾನ್ ಪರಂಪರೆ ನಮ್ಮ ಪತ್ರಿಕೆಗಳಿಗೆ ಇದೆ ಎಂಬ ಭಾವನೆಯೇ ಅವುಗಳ ಕುರಿತಾದ ಗೌರವ ಹಾಗೂ ಆಶಾಭಾವನೆಯನ್ನು ಹೆಚ್ಚಿಸುತ್ತದೆ.

ಆಧಾರ:

1. ಭಾರತೀಯ ಪತ್ರಿಕೋದ್ಯಮ: ಡಾ. ನಾಡಿಗ ಕೃಷ್ಣಮೂರ್ತಿ, 1969

2. ಹಿಸ್ಟರಿ ಆಫ್ ಇಂಡಿಯನ್ ಪ್ರೆಸ್: ಬಿ. ಎನ್. ಅಹುಜಾ, 2009

3. ಜರ್ನಲಿಸಂ ಇನ್ ಇಂಡಿಯಾ: ರಂಗಸ್ವಾಮಿ ಪಾರ್ಥಸಾರಥಿ, 1997

4. ಸ್ವಾತಂತ್ರ್ಯ ಚಳುವಳಿ ಮತ್ತು ಕರ್ನಾಟಕ ಪತ್ರಿಕೋದ್ಯಮ: ಡಾ. ಎಲ್. ಪಿ. ರಾಜು, 2008


ಲೇಖನ: ಸಿಬಂತಿ ಪದ್ಮನಾಭ, ತುಮಕೂರು ವಿಶ್ವವಿದ್ಯಾನಿಲಯ

ಕಾಮೆಂಟ್‌ಗಳಿಲ್ಲ: