ಬುಧವಾರ, ಜೂನ್ 1, 2016

ಹಾಜರಾತಿ ಕೊರತೆಯ ಅಡಕತ್ತರಿ

ಜೂನ್ 2, 2016ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಬರೆಹ. ಓದಲು ಇಲ್ಲಿ ಕ್ಲಿಕ್ಕಿಸಿ

ಹಾಜರಾತಿ ಕೊರತೆ ಶೈಕ್ಷಣಿಕ ವಲಯದಲ್ಲಿ ಬಹುಚರ್ಚಿತ ವಿಷಯ. ಪಿಯುಸಿಯಿಂದ ತೊಡಗಿ ಸ್ನಾತಕೋತ್ತರ ಅಧ್ಯಯನದವರೆಗೂ ಹಾಜರಾತಿ ಕೊರತೆಯ ಸಮಸ್ಯೆಯನ್ನು ಬಹು ಆಯಾಮಗಳಿಂದ ವಿಶ್ಲೇಷಿಸಲಾಗುತ್ತಿದೆ. ತರಗತಿಗಳಲ್ಲಿ ಕಡ್ಡಾಯ ಹಾಜರಾತಿ ಎಂಬುದು ಒಂದು ಅಮಾನವೀಯ ಕ್ರಮ ಎಂದೂ, ಇದು ವಿದ್ಯಾರ್ಥಿಗಳ ಸ್ವತಂತ್ರ ಕಲಿಕಾ ಪ್ರವೃತ್ತಿಗೆ ದೊಡ್ಡ ಅಡಚಣೆಯೆಂದೂ ವಾದಿಸುವವರು ಒಂದು ಕಡೆಯಾದರೆ, ಹಾಜರಾತಿ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳಲು ತುಂಬ ಅವಶ್ಯಕವೆಂದೂ, ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಗಂಭೀರವಾಗಿ ಪಾಲ್ಗೊಳ್ಳಲು ಅದು ಅನಿವಾರ್ಯ ಎಂದೂ ವಾದಿಸುವವರು ಇನ್ನೊಂದು ಕಡೆ.

ಈ ಎಲ್ಲದರ ನಡುವೆ ಪ್ರತೀವರ್ಷ ಒಂದಷ್ಟು ವಿದ್ಯಾರ್ಥಿಗಳು ಹಾಜರಾತಿ ಕೊರತೆಯ ಕಾರಣದಿಂದ ಪರೀಕ್ಷೆ ಬರೆಯಲು ಅನರ್ಹರಾಗುವುದು, ಅವರು ಕಾಲೇಜುಗಳ ಅಥವಾ ವಿಶ್ವವಿದ್ಯಾನಿಲಯಗಳ ಎದುರು ಧರಣಿ ಕೂರುವುದು, ಸಂಘಟನೆಗಳನ್ನು ಬೆನ್ನಿಗೆ ಕಟ್ಟಿಕೊಳ್ಳುವುದು, ಆತ್ಮಹತ್ಯೆ ಬೆದರಿಕೆ ಹಾಕುವುದು, ಕೆಲವೊಮ್ಮೆ ಈ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗುವುದು, ಪರಿಹಾರಕ್ಕೆ ಕೋರ್ಟ್ ಮೊರೆಹೋಗುವುದು ಇತ್ಯಾದಿಗಳು ನಡೆದೇ ಇವೆ.

ಹಾಜರಾತಿ ಕೊರತೆ ಎದುರಿಸುವ ಬಹುತೇಕ ವಿದ್ಯಾರ್ಥಿಗಳು ನೀಡುವ ಕಾರಣ ತಾವು ನಿಯಮಿತವಾಗಿ ತರಗತಿಗಳಿಗೆ ಹಾಜರಾಗುವ ಪರಿಸ್ಥಿತಿ ಇಲ್ಲ ಎಂದು. ಅವರ ಮಾತಿನಲ್ಲಿ ನಿಜಾಂಶ ಇಲ್ಲದಿಲ್ಲ. ಗ್ರಾಮೀಣ ಹಿನ್ನೆಲೆಯ ಅನೇಕ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕಿಂತಲೂ ಹೊಟ್ಟೆಪಾಡೇ ಹೆಚ್ಚು ಮುಖ್ಯವಾಗುತ್ತದೆ.

ಅವರಲ್ಲಿ ತುಂಬ ಮಂದಿ ಕೂಲಿಕಾರರ ಇಲ್ಲವೇ ಕಡುಬಡವರ ಮಕ್ಕಳಿದ್ದಾರೆ. ಮನೆಯಲ್ಲಿ ಅಶಕ್ತ ತಂದೆತಾಯಿಯರಿದ್ದು ಒಬ್ಬನೇ ಮಗನೋ ಮಗಳೋ ಆಗಿದ್ದರಂತೂ ಅದೇ ದೊಡ್ಡ ಸಮಸ್ಯೆ. ಅವರಿಗೆ ದುಡಿಮೆ ಅನಿವಾರ್ಯ. ಇಂತಹವರಿಗೆ ಅನೇಕ ಸಲ ಉನ್ನತ ಶಿಕ್ಷಣ ಗಗನ ಕುಸುಮ. ಆದರೂ ಮುಂದೆ ಒಳ್ಳೆ ಉದ್ಯೋಗ ಸಿಗಬಹುದು ಎಂಬ ಆಸೆಯಿಂದ ಕಾಲೇಜು ಸೇರುವವರು ಹಲವರು. ಓದುವ ಆಸೆಯಿದ್ದರೂ ಕೆಲವೊಮ್ಮೆ ದುಡಿಮೆಯೇ ಹೆಚ್ಚು ಅನಿವಾರ್ಯವಾದರೆ ಆಶ್ಚರ್ಯವೇನೂ ಇಲ್ಲ.

ಇಂತಹ ವಿದ್ಯಾರ್ಥಿಗಳನ್ನು ಹಾಜರಾತಿಯ ವಿಷಯದಲ್ಲಿ ಮಾನವೀಯ ದೃಷ್ಟಿಯಿಂದ ನೋಡಬೇಕು ಎಂಬ ಮಾತು ಒಪ್ಪತಕ್ಕದ್ದೇ. ಆದರೆ ಒಂದು ಕುತೂಹಲದ ವಿಷಯ ಹೇಳುತ್ತೇನೆ: ನಾನು ಪಾಠ ಮಾಡುತ್ತಿರುವ ಕಾಲೇಜಿನ ಶೇ. ೯೦ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಬಡತನದ ಮತ್ತು ಗ್ರಾಮೀಣ ಹಿನ್ನೆಲೆಯವರು. ಅನೇಕರು ತಮ್ಮ ಶುಲ್ಕ ತುಂಬಲು ತಾವೇ ದುಡಿಯುವ ಅನಿವಾರ್ಯತೆ ಇರುವವರು. ಅದಕ್ಕಾಗಿ ಅರೆಕಾಲಿಕ ಉದ್ಯೋಗಗಳನ್ನು ಹಿಡಿದವರೂ ಇದ್ದಾರೆ.

ದುಡಿಮೆಯ ಆದಾಯದ ಒಂದು ಪಾಲನ್ನು ತಮ್ಮ ಕುಟುಂಬಕ್ಕೂ ಇನ್ನೊಂದು ಪಾಲನ್ನು ತಮ್ಮ ವಿದ್ಯಾಭ್ಯಾಸಕ್ಕೂ ಬಳಸುವ ನೂರಾರು ವಿದ್ಯಾರ್ಥಿಗಳು ಕಾಣಸಿಗುತ್ತಾರೆ. ವಿಶೇಷವೆಂದರೆ, ಇವರೆಲ್ಲ ಅತ್ಯಂತ ಶಿಸ್ತಿನ ಮತ್ತು ಶ್ರದ್ಧೆಯ ವಿದ್ಯಾರ್ಥಿಗಳು. ಇವರಿಗೆ ಕನಿಷ್ಠ ಹಾಜರಾತಿಯ ಕೊರತೆ ಇಲ್ಲ. ತಮ್ಮ ಕಾಲೇಜಿನ ಸಮಯ ಮತ್ತು ದುಡಿಮೆಯ ಸಮಯವನ್ನು ಅತ್ಯಂತ ಜತನದಿಂದ ಯೋಜಿಸಿಕೊಂಡು ಬದುಕಿನಲ್ಲಿ ಹೇಗಾದರೂ ಮುಂದೆ ಬರಬೇಕೆಂದು ಒದ್ದಾಡುವ ಇವರನ್ನು ಕಂಡಾಗ ಅಭಿಮಾನ ಉಂಟಾಗುತ್ತದೆ.

ಹಾಜರಾತಿ ಕೊರತೆ ಎದುರಿಸುವ ಬಹುತೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಮತ್ತು ಸಾಮಾಜಿಕ ಹಿನ್ನೆಲೆ ಒಂದು ಕುಂಟುನೆಪ ಮಾತ್ರ. ಕಾಲೇಜು ಆವರಣದಲ್ಲೇ ಇದ್ದು ತರಗತಿಗಳಿಗೆ ಹಾಜರಾಗದೆ, ಸ್ನೇಹಿತರ ದಂಡುಕಟ್ಟಿಕೊಂಡು ಬೀದಿ ಸುತ್ತುವ, ಟಾಕೀಸುಗಳಲ್ಲಿ ಕಾಲ ಕಳೆಯುವ ವಿದ್ಯಾರ್ಥಿಗಳಿಗೂ ಪರೀಕ್ಷಾ ಸಮಯ ಸಮೀಪಿಸಿದಾಗ ತಮ್ಮ ಕೌಟುಂಬಿಕ ಹಿನ್ನೆಲೆ ನೆನಪಾಗುವುದನ್ನು ನೋಡಿದಾಗ ಮಾತ್ರ ಅಯ್ಯೋ ಎನಿಸುತ್ತದೆ. ಇಂತಹವರಿಗೆ ಎಲ್ಲ ಸಂಕಷ್ಟಗಳ ನಡುವೆಯೂ ವಿದ್ಯಾಭ್ಯಾಸದ ವಿಷಯದಲ್ಲಿ ಶ್ರದ್ಧೆಯನ್ನು ರೂಢಿಸಿಕೊಂಡಿರುವ ವಿದ್ಯಾರ್ಥಿಗಳು ಮಾದರಿಯಾಗಬೇಕು.

ಕರ್ನಾಟಕ ಶಿಕ್ಷಣ ಕಾಯ್ದೆ 2006ರ ಪ್ರಕಾರ ಪದವಿಪೂರ್ವ ಹಂತದಲ್ಲಿ ಶೇ. 75ರಷ್ಟು ಹಾಜರಾತಿ ಕಡ್ಡಾಯ. ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಹಾಜರಾತಿ ಇರಬೇಕೆಂದು ನಿಯಮ ರೂಪಿಸಿವೆ. ವೈದ್ಯಕೀಯ ಕಾರಣಗಳೇ ಮೊದಲಾದ ತೀರಾ ಅನಿವಾರ್ಯ ಸಂದರ್ಭಗಳಿದ್ದಾಗ ಅಭ್ಯರ್ಥಿಗೆ ಮಾನವೀಯ ದೃಷ್ಟಿಯಿಂದ ಶೇ. 5ರಷ್ಟು ವಿನಾಯಿತಿ ನೀಡಲು ಕುಲಪತಿಗಳಿಗೆ ಮಾತ್ರ ಸ್ವವಿವೇಚನೆಯ ಅವಕಾಶವಿದೆ. ನ್ಯಾ| ಜೆ. ಎಂ. ಲಿಂಗ್ಡೋ ಸಮಿತಿ ಕೂಡ ವಿದ್ಯಾರ್ಥಿ ಚುನಾವಣೆಗಳಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಶೇ. 75 ಹಾಜರಾತಿ ಕಡ್ಡಾಯವಾಗಿ ಇರಬೇಕೆಂದು ಶಿಫಾರಸು ಮಾಡಿದೆ. ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವುದಕ್ಕೆ ಹಾಜರಾತಿಯಲ್ಲಿ ಕಟ್ಟುನಿಟ್ಟು ಪಾಲಿಸುವುದು ಮುಖ್ಯ ಎಂಬುದನ್ನು ಅನೇಕ ಉಚ್ಚ ನ್ಯಾಯಾಲಯಗಳು, ಭಾರತದ ಸರ್ವೋಚ್ಛ ನ್ಯಾಯಾಲಯವೂ ಮತ್ತೆಮತ್ತೆ ಹೇಳಿವೆ.

'ವಿದ್ಯಾರ್ಥಿಗಳು ತಾರುಣ್ಯ ಸಹಜ ವರ್ತನೆಗಳಿಂದಲೋ, ಅಸೌಖ್ಯದಿಂದಲೋ ತರಗತಿಗಳಿಗೆ ಗೈರುಹಾಜರಾಗುವ ಸಂದರ್ಭ ಇದೆ. ಆದರೆ ಅದಕ್ಕಾಗಿಯೇ ಅವರಿಗೆ ಶೇ. 25ರಷ್ಟು ತರಗತಿಗಳಿಗೆ ಗೈರುಹಾಜರಾಗುವ ಸ್ವಾತಂತ್ರ್ಯ ಇದೆ. ಇನ್ನಷ್ಟು ವಿನಾಯಿತಿ ನೀಡಬೇಕೆಂಬುದು ನ್ಯಾಯ ಸಮ್ಮತ ಅಲ್ಲ. ಈ ಪ್ರವೃತ್ತಿಯಿಂದ ಶ್ರದ್ಧಾವಂತ ವಿದ್ಯಾರ್ಥಿಗಳ ನೈತಿಕತೆ ಮತ್ತು ನಂಬಿಕೆಯನ್ನು ದುರ್ಬಲಗೊಳಿಸಿದಂತಾಗುತ್ತದೆ’ ಎಂದು ತನ್ನ ತೀರ್ಪೊಂದರಲ್ಲಿ ದೆಹಲಿ ಹೈಕೋರ್ಟ್ ಹೇಳಿದೆ.

'ಅಪಾತ್ರರಿಗೆ ಅನುಕಂಪ ತೋರುವ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಕುಂಠಿತಗೊಳಿಸಬಾರದು. ಉಚ್ಚ ನ್ಯಾಯಾಲಯಗಳು ಕೂಡ ಕಾನೂನು ತತ್ವಗಳ ಉಲ್ಲಂಘನೆ ಆಗದ ಹೊರತು ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿ ಹಾಗೂ ನಿಯಮಾವಳಿಗಳಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡಬಾರದು’ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳುತ್ತಲೇ ಬಂದಿದೆ.

ಕಡ್ಡಾಯ ಹಾಜರಾತಿಯ ಅಸ್ತ್ರವನ್ನು ಶಿಕ್ಷಣ ಸಂಸ್ಥೆಗಳು ಮತ್ತು ಅಧ್ಯಾಪಕರು ದುರ್ಬಳಕೆ ಮಾಡುತ್ತಿದ್ದಾರೆ ಎಂಬುದು ಅನೇಕ ವಿದ್ಯಾರ್ಥಿಗಳ ಆರೋಪ. ತಮಗಾಗದ ವಿದ್ಯಾರ್ಥಿಗಳ ಮೇಲೆ ಸೇಡು ತೀರಿಸಿಕೊಳ್ಳಲು ಕೆಲವು ಅಧ್ಯಾಪಕರು ಸುಳ್ಳೇ ಹಾಜರಾತಿ ಕೊರತೆ ತೋರಿಸುತ್ತಾರೆ ಎಂಬುದು ಕೆಲವರ ದೂರು. ಹಾಜರಾತಿ ಕೊರತೆಯ ನೆಪವೊಡ್ಡಿ ವಿದ್ಯಾರ್ಥಿಗಳಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಸಾವಿರಾರು ರೂಪಾಯಿ ಕೀಳುವ ದಂಧೆ ಮಾಡಿಕೊಂಡಿವೆ ಎಂಬುದು ಇನ್ನು ಕೆಲವರ ಆರೋಪ. ಈ ಆರೋಪಗಳೂ ತಳ್ಳಿಹಾಕುವಂಥವಲ್ಲ. ಸಾಕಷ್ಟು ಶೈಕ್ಷಣಿಕ ಅರ್ಹತೆ ಪಡೆದು ಉಪನ್ಯಾಸಕರಾದ ಮೇಲೂ ಎಲ್ಲವನ್ನೂ ಎಲ್ಲರನ್ನೂ ಜಾತಿಯ ಲೆಕ್ಕಾಚಾರದಲ್ಲೇ ಅಳೆದು ತೂಗುವ, ವಿದ್ಯಾರ್ಥಿಗಳನ್ನು ಸಮಾನವಾಗಿ ಕಾಣಲಾಗದ ಸಂಕುಚಿತ ಮನೋಭಾವದ ಮಂದಿ ನಮ್ಮ ನಡುವೆ ಇದ್ದಾರೆ. ಪ್ರತೀ ವಿಷಯದ ಹಾಜರಾತಿ ಕೊರತೆಗೆ ಇಂತಿಷ್ಟು ದಂಡ ನಿಗದಿ ಮಾಡಿ ವಿದ್ಯಾರ್ಥಿಗಳಿಂದ ಹಣ ಕೀಳುವ ಸಂಸ್ಥೆಗಳೂ ಇವೆ. ಇದಕ್ಕೆ ಪೂರಕವಾಗಿ ಹಾಜರಾತಿ ಕೊರತೆಯಿದ್ದರೆ ಏನಂತೆ ಇಂತಿಷ್ಟು ಹಣ ಚೆಲ್ಲಿದರಾಯಿತು ಎಂಬ ಉಡಾಫೆ ಮನಸ್ಸಿನ ವಿದ್ಯಾರ್ಥಿಗಳೂ ಇದ್ದಾರೆ.

ಆದರೆ ಇಂತಹ ಸಮಸ್ಯೆಗಳ ಪರಿಹಾರದ ದಾರಿಯನ್ನು ನಾವು ಹುಡುಕಬೇಕೇ ಹೊರತು ಹಾಜರಾತಿಯ ಪರಿಕಲ್ಪನೆಯನ್ನೇ ಒಂದು ಅನವಶ್ಯಕ ಮತ್ತು ಅನಾಗರಿಕ ಕ್ರಮವೆಂದು ವಾದಿಸುವುದು ಹಾಸ್ಯಾಸ್ಪದ. ಶಿಕ್ಷಣದ ಘನತೆಯನ್ನು ಎತ್ತಿಹಿಡಿಯಬೇಕಾದರೆ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕುರಿತಾದ ಗಾಂಭೀರ್ಯತೆಯನ್ನೂ ಶ್ರದ್ಧೆಯನ್ನೂ ಬೆಳೆಸಬೇಕಾದರೆ ಉತ್ತಮ ಹಾಜರಾತಿ ಒಂದು ಪ್ರಮುಖ ಮಾರ್ಗ. ತರಗತಿಗೆ ಅನಿವಾರ್ಯವಾಗಿಯಾದರೂ ಹಾಜರಾದಾಗ ವಿದ್ಯಾರ್ಥಿಗಳು ಅನಗತ್ಯ ವಿಚಾರಗಳಲ್ಲಿ ಕಳೆದುಹೋಗುವುದು ತಪ್ಪಿ ಕಲಿಕೆಯಲ್ಲಿ ಒಂದಿಷ್ಟಾದರೂ ಶಿಸ್ತು ಮೂಡಬಹುದು. ಇಷ್ಟವಿಲ್ಲದಿದ್ದರೂ ವಿದ್ಯಾರ್ಥಿಗಳನ್ನು ತರಗತಿಗೆ ಹಾಜರಾಗುವಂತೆ ಮಾಡಿದರೆ ಅವರಿಂದ ತೊಂದರೆಯೇ ಹೆಚ್ಚು ಎಂಬ ಮಾತೂ ಅತಾರ್ಕಿಕವಾದದ್ದು. ಸ್ವತಂತ್ರ ಕಲಿಕೆಯ ವಾತಾವರಣ ಬೆಳೆಸುವುದೆಂದರೆ ವಿದ್ಯಾರ್ಥಿಗಳು ಮನಬಂದಂತೆ ತರಗತಿಗೆ ಹಾಜರಾಗುವ ಅಥವಾ ಹಾಜರಾಗದಿರುವ ಅವಕಾಶ ಮಾಡಿಕೊಡುವುದೇ?

ತರಗತಿಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಂತೆ ಗುಣಮಟ್ಟದ ಅಧ್ಯಾಪನ ಮಾಡುವುದು ಉಪನ್ಯಾಸಕರ ಜವಾಬ್ದಾರಿ; ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವುದು ಶಿಕ್ಷಣ ಸಂಸ್ಥೆಗಳ ಮತ್ತು ಸರ್ಕಾರದ ಹೊಣೆ. ತಮ್ಮದೇ ಬೇಜವಾಬ್ದಾರಿಯಿಂದ ಹಾಜರಾತಿ ಕೊರತೆ ಎದುರಿಸುವ ವಿದ್ಯಾರ್ಥಿಗಳ ಬೆಂಬಲಕ್ಕೆ ಬರುವ ಜಾತಿ ಸಂಘಟನೆಗಳು ದುಡುಕಿನ ಹೋರಾಟ ಮಾಡುವ ಬದಲು ಅಂತಹ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ, ಅವರಿಗೆ ಆರ್ಥಿಕ ಸಹಾಯ ಮಾಡುವ ಕುರಿತು ಯೋಚಿಸುವುದೊಳ್ಳೆಯದು. ಉಳಿದಂತೆ, ಹಾಜರಾತಿ ಕೊರತೆಯನ್ನು ಒಂದು ಸೇಡಿನ ಅಥವಾ ಆದಾಯದ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಅಧ್ಯಾಪಕರ ಮತ್ತು ಕಾಲೇಜುಗಳ ವರ್ತನೆಯನ್ನು ನಿಯಂತ್ರಿಸುವುದಕ್ಕೆ ಬಯೋಮೆಟ್ರಿಕ್ ಹಾಜರಾತಿಯಂತಹ ಕ್ರಮಗಳು ಸಹಕಾರಿಯಾಗಬಲ್ಲವು.

ಕಾಮೆಂಟ್‌ಗಳಿಲ್ಲ: