ಗುರುವಾರ, ಸೆಪ್ಟೆಂಬರ್ 29, 2016

'ಶಿಕ್ಷಣ ಶಿಲ್ಪ'ದ ಬಗ್ಗೆ ಒಂದಿಷ್ಟು...

ಸುತ್ತೂರಿನ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮಶತಮಾನೋತ್ಸವದ ಅಂಗವಾಗಿ ‘ಶಿಕ್ಷಣ ಶಿಲ್ಪ’ ಎಂಬೊಂದು ಶೈಕ್ಷಣಿಕ ಸಂಪುಟವನ್ನು ಪ್ರಕಟಿಸಲಾಗಿದೆ. ಹಿರಿಯ ಸಂಶೋಧಕ ಡಾ. ಷ. ಶೆಟ್ಟರ್ ಇದರ ಪ್ರಧಾನ ಸಂಪಾದಕರು; ಡಾ. ಗುರುರಾಜ ಕರಜಗಿ ಸಂಪಾದಕರು. ಸುಮಾರು 800 ಪುಟಗಳ ಈ ಬೃಹತ್ ಸಂಪುಟದಲ್ಲಿ ಭಾರತೀಯ ಶೈಕ್ಷಣಿಕ ಪರಂಪರೆಯ ಆಳ-ಅಳವು, ವೈವಿಧ್ಯತೆ ಹಾಗೂ ವೈಶಿಷ್ಟ್ಯತೆಗಳನ್ನು ದಾಖಲಿಸುವ ಒಟ್ಟು 46 ಲೇಖನಗಳಿವೆ. ಗ್ರಂಥ ಒಳಗೊಂಡಿರುವ ಲೇಖನಗಳ ವಿಷಯ ವಿಸ್ತಾರ ಹಾಗೂ ಅವುಗಳನ್ನು ಬರೆದಿರುವ ವಿದ್ವಾಂಸ ಗಡಣದ ಕಾರಣದಿಂದಾಗಿ ಇದು ಈ ಕ್ಷೇತ್ರದ ಆಸಕ್ತರೆಲ್ಲರಿಗೂ ನಿಸ್ಸಂಶಯವಾಗಿ ಒಂದು ಮಹತ್ವದ ಆಕರ ಕೃತಿ ಆದೀತು.

ಪ್ರೊ. ವೈ. ಎನ್. ಶ್ರೀಧರ್, ಡಾ. ತುಳಸೀ ರಾಮಚಂದ್ರ, ಡಾ. ಚೂಡಾಮಣಿ ನಂದಗೋಪಾಲ್, ಪ್ರೊ. ಕೆ. ರಾಮಮೂರ್ತಿ ರಾವ್, ಪ್ರೊ. ಎಂ. ಎಚ್. ಕೃಷ್ಣಯ್ಯ, ಶ್ರೀ ನಾಗೇಶ ಹೆಗಡೆ, ಡಾ. ಕೃಷ್ಣಮೂರ್ತಿ ಹನೂರು, ಡಾ. ನಿರಂಜನ ವಾನಳ್ಳಿ,  ಸ್ವಾಮಿ ಹರ್ಷಾನಂದಜಿ, ಡಾ. ಎಚ್. ವಿ. ನಾಗರಾಜರಾವ್, ಪ್ರೊ. ಹಂ.ಪ.ನಾ., ಶ್ರೀ ಜಿ. ಎಸ್. ಜಯದೇವ, ಪ್ರೊ. ಎಂ. ಎಸ್. ವೇಣುಗೋಪಾಲ, ಶ್ರೀ ಸುರೇಂದ್ರ ಕೌಲಗಿ, ಡಾ. ರಾಜೇಂದ್ರ  ಚೆನ್ನಿ, ಶ್ರೀ ವಾಸುದೇವ ಶರ್ಮಾ, ಶ್ರೀ ನಾಗತಿಹಳ್ಳಿ ಚಂದ್ರಶೇಖರ, ಡಾ. ಎಂ. ಮಹದೇವಪ್ಪ, ಡಾ. ಪಿ. ಎಸ್. ಶಂಕರ್, ಡಾ. ಎಚ್. ಆರ್. ಕುಲಕರ್ಣಿ, ಪ್ರೊ. ಮಲೆಯೂರು ಗುರುಸ್ವಾಮಿ, ಡಾ. ಕೆ.. ಎಸ್. ಸಮೀರಸಿಂಹ ಮೊದಲಾದ ಹಿರಿಯರು ಹತ್ತುಹಲವು ಕ್ಷೇತ್ರಗಳ ಶೈಕ್ಷಣಿಕ ವ್ಯಾಪ್ತಿಯ ಕುರಿತು ವಿಸ್ತೃತವಾಗಿ ಬರೆದಿದ್ದಾರೆ.

ಭಾರತೀಯ ನೃತ್ಯ, ಶಿಲ್ಪಕಲೆ, ಕರಕುಶಲ ಕಲೆ, ನಾಟಕ, ಜನಪದ, ಛಾಯಾಗ್ರಹಣ, ಸಿನಿಮಾ, ಯೋಗ, ಜೈನ-ಬೌದ್ಧ ಧರ್ಮ, ಹರಿದಾಸರು, ಪಾರಂಪರಿಕ ಕೃಷಿ, ಸಮೂಹ ಮಾಧ್ಯಮ, ತಂತ್ರಜ್ಞಾನ, ಪಶುಸಂಗೋಪನೆ, ಪ್ರವಾಸೋದ್ಯಮ, ಪರಿಸರ, ವೈದ್ಯಕೀಯ, ಮಾನವಹಕ್ಕು- ಹೀಗೆ ಈ ಗ್ರಂಥ ಹತ್ತಾರು ಕ್ಷೇತ್ರಗಳ ಶೈಕ್ಷಣಿಕ ಆಳವನ್ನು ಗಂಭೀರ ಪರಿಶೀಲನೆಗೆ ಒಳಪಡಿಸಿರುವುದು ಕುತೂಹಲಕಾರಿ. ಗ್ರಂಥ ಹೊರಬರುವಲ್ಲಿ ಜನ್ಮಶತಮಾನೋತ್ಸವ ಪ್ರಕಟಣ ಸಮಿತಿಯ ಸಂಚಾಲಕ ಡಾ. ನಂದೀಶ್ ಹಂಚೆಯವರ ಪರಿಶ್ರಮ ವಿಶೇಷವಾದದ್ದು. ಅವರಿಗೆ ಅಭಿನಂದನೆಗಳು ಸಲ್ಲಬೇಕು.
***
ಅಂದಹಾಗೆ, ಈ ಎಲ್ಲ ಹಿರಿಯರ ಬರೆಹಗಳ ನಡುವೆ ಸಮೂಹ ಮಾಧ್ಯಮ ಶಿಕ್ಷಣಕ್ಕೆ ಸಂಬಂಧಿಸಿದ ನನ್ನದೊಂದು ಲೇಖನವೂ ಇದೆ. ‘ಸಮೂಹ ಮಾಧ್ಯಮಗಳು, ಶಿಕ್ಷಣ ಮತ್ತು ಸಮಾಜ’ ಎಂಬ ಈ ಲೇಖನದಲ್ಲಿ ಭಾರತದ ಮಾಧ್ಯಮರಂಗದ ವಿಸ್ತಾರ, ಮಾಧ್ಯಮ ಶಿಕ್ಷಣದ ಇತಿಹಾಸ,  ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸಲು ಅಗತ್ಯವಿರುವ ಜ್ಞಾನ-ಕೌಶಲಗಳು ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು, ಮಾಧ್ಯಮರಂಗದ ಉದ್ಯೋಗಾವಕಾಶಗಳ ವಿವರ, ಸಮೂಹ ಮಾಧ್ಯಮಗಳ ಸಾಮಾಜಿಕ ಪ್ರಭಾವ ಹಾಗೂ ಒಟ್ಟಾರೆ ಶಿಕ್ಷಣದಲ್ಲಿ ಸಮೂಹ ಮಾಧ್ಯಮಗಳು ವಹಿಸುವ ಪಾತ್ರ – ಇತ್ಯಾದಿ ಅನೇಕ ಮಗ್ಗುಲುಗಳತ್ತ ಗಮನ ಹರಿಸಲಾಗಿದೆ. ಎಷ್ಟೊಂದು ಹಿರಿಯ ತಲೆಗಳ ನಡುವೆ ಪತ್ರಿಕೋದ್ಯಮ ಶಿಕ್ಷಣದ ಬಗ್ಗೆ ಬರೆಯುವ ಅವಕಾಶ ನನಗೆ ಒದಗಿ ಬಂದದ್ದು ನಿಜಕ್ಕೂ ಒಂದು ಸುಯೋಗ. ನನ್ನ ಅನುಭವ ಹಾಗೂ ತಿಳುವಳಿಕೆಯ ಇತಿಮಿತಿಗಳ ನಡುವೆ ಬರೆದಿರುವ ಈ ಲೇಖನ ಪತ್ರಿಕೋದ್ಯಮ ಶಿಕ್ಷಣದ ಆಸಕ್ತರಿಗೆ ಒಂದೇ ಕಡೆ ಒಂದಷ್ಟು ವಿಚಾರಗಳನ್ನು ಒದಗಿಸಬಹುದು ಎಂದು ಆಶಿಸುತ್ತೇನೆ.
***
ಕೃತಿ:  ಶಿಕ್ಷಣ ಶಿಲ್ಪ
ಸಂಪಾದಕರು: ಡಾ. ಷ. ಶೆಟ್ಟರ್, ಡಾ. ಗುರುರಾಜ ಕರ್ಜಗಿ
ಪ್ರಕಟಣೆ:  ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮಶತಮಾನೋತ್ಸವ ಸಮಿತಿ
ಪುಟಗಳು:  18+814
ಬೆಲೆ:  ರೂ. 1000 
ವರ್ಷ: 2016

1 ಕಾಮೆಂಟ್‌:

SP ಹೇಳಿದರು...

ಮಾನ್ಯರೆ,
ಈ ಪುಸ್ತಕ ಎಲ್ಲಿ ದೊರೆಯುತ್ತದೆ? ಡಾವಣಗೆರೆಯಲ್ಲಿ ಸಿಗುತ್ತದಾ? ಅದರೆ ಬೆಲೆ ಏನು ತಿಳಿಸ ಬಹುದಾ?
ಡಾ ಶ್ರೀವತ್ಸ ದೇಸಾಯಿ, ಯು ಕೆ