ಮಂಗಳವಾರ, ಮೇ 13, 2014

ರಾಷ್ಟ್ರೀಯ ವಿಚಾರಸಂಕಿರಣಗಳೆಂಬ ವಿನೋದ ನಾಟಕಗಳು

(ಮೇ 11, 2014ರ 'ವಿಜಯವಾಣಿ'ಯ ಸಾಪ್ತಾಹಿಕ ಸಂಚಿಕೆ 'ವಿಜಯವಿಹಾರ'ದಲ್ಲಿ ಈ ಲೇಖನ 'ವಿನೋದ ನಾಟಕಗಳು' ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. "ಸೆಮಿ'ನಾರು' ಎಂಬ ವ್ಯಾಪಾರ "- ಎಂಬ ಉಪಶೀರ್ಷಿಕೆಯ ನಂತರದ ಭಾಗ ಮಾತ್ರ ಅಪ್ರಕಟಿತ).

ರಾಷ್ಟ್ರೀಯ ವಿಚಾರಸಂಕಿರಣವೊಂದು ನಡೆಯುವುದರಲ್ಲಿತ್ತು. 'ಸೆಮಿನಾರ್‌ಗೆ ನೀವು ಬರ್ತಿದ್ದೀರಾ ಸಾರ್?’ ಎಂದು ಹಿರಿಯ ಪ್ರಾಧ್ಯಾಪಕರೊಬ್ಬರನ್ನು ಕೇಳಿದೆ. ಅವರು ಮೈಮೇಲೆ ಹಾವು ಬೀಳಿಸಿಕೊಂಡವರಂತೆ ಹೌಹಾರಿ 'ಅಯ್ಯಯ್ಯೋ... ನನ್ನ ಮೇಲೆ ನಿನಗೇನಾದರೂ ಹಗೆಯಿದ್ದರೆ ಬೇರೆ ರೀತಿ ತೀರಿಸಿಕೋ ಪುಣ್ಯಾತ್ಮ... ಸೆಮಿನಾರಿಗೆ ಮಾತ್ರ ಕರೀಬೇಡ’ ಎಂದರಲ್ಲದೆ, ಸೆಮಿನಾರೆಂಬೋ ಸೆಮಿನಾರುಗಳ ಎರಡು ದಿನವನ್ನು ಕಳೆಯುವುದು ಎಂತಹ ನರಕಯಾತನೆಯಾಗಿಬಿಟ್ಟಿದೆ ಎಂಬುದನ್ನೂ ವಿವರಿಸಿದರು.

ಅವರ ಪ್ರತಿಕ್ರಿಯೆಯಲ್ಲಿ ಎಳ್ಳಷ್ಟೂ ಅತಿಶಯವಿರಲಿಲ್ಲ. ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಹೆಸರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಸೆಮಿನಾರು, ಕಾನ್ಫರೆನ್ಸ್‌ಗಳೆಂಬ ವಿನೋದ ನಾಟಕಗಳ ಬಗ್ಗೆ ತುಂಬ ಬೇಸರವಿತ್ತು. ಗುಣಮಟ್ಟದ ಬಗ್ಗೆ ಒಂದಿಷ್ಟೂ ಕಾಳಜಿಯಿಲ್ಲದಿರುವ ಇಂತಹ ಕಾರ್ಯಕ್ರಮಗಳಿಂದಾಗಿ ವಿಚಾರಗೋಷ್ಠಿ, ಸಮ್ಮೇಳನಗಳೆಲ್ಲ ಎಷ್ಟೊಂದು ನಗೆಪಾಟಲಿಗೀಡಾಗುತ್ತಿದೆ ಎಂಬ ವಿಷಾದವೂ ಇತ್ತು.

ಉನ್ನತ ಶಿಕ್ಷಣದಲ್ಲಿ ಸಂಶೋಧನೆ ಹಾಗೂ ವಿದ್ವತ್ಪೂರ್ಣ ಚರ್ಚೆಗಳನ್ನು ಹುಟ್ಟುಹಾಕಿ ಅದರ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ನಡೆಯಬೇಕಾಗಿರುವ ವಿಚಾರಸಂಕಿರಣಗಳು ಈಚಿನ ವರ್ಷಗಳಲ್ಲಿ ಕಾಟಾಚಾರದ ಸಮಾರಂಭಗಳಾಗಿ ಬದಲಾಗಿರುವುದು ವಿದ್ವಾಂಸರ ವಲಯದಲ್ಲಷ್ಟೇ ಅಲ್ಲದೆ ಜನಸಾಮಾನ್ಯರಲ್ಲೂ ಆತಂಕಕ್ಕೆ ಕಾರಣವಾಗಿದೆ. ಸಾವಿರಾರು ರೂಪಾಯಿಗಳ ಖರ್ಚಿನಲ್ಲಿ ಆಯೋಜಿಸಲ್ಪಡುವ ಈ ಸೆಮಿನಾರುಗಳೆಂಬ ಸಿದ್ಧಪಾಕಗಳು ಹೆಚ್ಚಿನ ಸಂದರ್ಭಗಳಲ್ಲಿ ಸಮಯ ಹಾಗೂ ಹಣದ ದುರ್ವಿನಿಯೋಗವಷ್ಟೇ ಅಲ್ಲದೆ ಇನ್ನೇನೂ ಆಗುತ್ತಿಲ್ಲ.

ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ವಿಚಾರಸಂಕಿರಣಗಳಿಗೆ ತಮ್ಮದೇ ಆದ ಗಾಂಭೀರ್ಯ ಹಾಗೂ ವೈಶಿಷ್ಠ್ಯತೆಗಳಿದ್ದವು. ವಿಚಾರಸಂಕಿರಣವೊಂದಕ್ಕೆ ಒಬ್ಬನ ಪ್ರಬಂಧ ಆಯ್ಕೆಯಾಗುವುದೇ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅವುಗಳಲ್ಲಿ ಪ್ರಬಂಧ ಮಂಡಿಸುವುದೇ ಒಂದು ಅಪೂರ್ವ ಅವಕಾಶವೆಂಬ ಭಾವನೆಯಿತ್ತು. ತಿಂಗಳುಗಟ್ಟಲೆ ಅಧ್ಯಯನ ಹಾಗೂ ಸಂಶೋಧನೆಯಿಂದ ರೂಪುಗೊಳ್ಳುವ ಒಂದು ಪ್ರಬಂಧ ವಿದ್ವತ್ ವೇದಿಕೆಯಲ್ಲಿ ಮಂಡನೆಯಾಗಿ ತಜ್ಞರುಗಳ ನಡುವೆ ಚರ್ಚೆಗೊಳಗಾದಾಗ ಪ್ರಬಂಧಕಾರನಿಗೆ ಅದೇನೋ ಸಾರ್ಥಕತೆ, ಸಮಾಧಾನ.

ಈಗ ಯಾರು ಬೇಕಾದರೂ ಸಮ್ಮೇಳನ ಆಯೋಜಿಸಬಹುದು, ಯಾರು ಬೇಕಾದರೂ ಪ್ರಬಂಧ ಮಂಡಿಸಬಹುದು ಎಂಬಷ್ಟರ ಮಟ್ಟಿಗೆ ಸಮ್ಮೇಳನದ ಆಯೋಜನೆ, ಪ್ರಬಂಧ ಮಂಡನೆ ಅಗ್ಗವಾಗಿಬಿಟ್ಟಿದೆ. ಪ್ರಬಂಧ ಮಂಡಿಸಿದಾತ ಪ್ರಮಾಣಪತ್ರ ಪಡೆದಲ್ಲಿಗೆ, ಸಂಕಿರಣದ ಆಯೋಜಕರು ಬಂದವರೆಲ್ಲರಿಗೂ ಪ್ರಮಾಣಪತ್ರ ನೀಡಿ ಕೈತೊಳೆದುಕೊಂಡಲ್ಲಿಗೆ ಇಬ್ಬರಿಗೂ ಜೀವನ ಪಾವನವಾದ ಅನುಭವ. ರೋಗಿ ಬಯಸಿದ್ದೂ ವೈದ್ಯ ಕೊಟ್ಟದ್ದೂ ಒಂದೇ ಆಗಿರುವುದರಿಂದ ವಿಚಾರಸಂಕಿರಣದ ನೋಂದಣಿ ಹಾಗೂ ಪ್ರಮಾಣಪತ್ರ ವಿತರಣೆಗಳ ನಡುವೆ ನಡೆಯುವ ಪ್ರಹಸನವನ್ನು ಕೇಳುವವರೇ ಇಲ್ಲ ಎನಿಸಿಬಿಟ್ಟಿದೆ.

ಸಮ್ಮೇಳನದ ಕುರಿತ ಪರಿಚಯ ಪತ್ರವನ್ನಂತೂ ಆಯೋಜಕರು ಭರ್ಜರಿಯಾಗಿಯೇ ರೂಪಿಸಿರುತ್ತಾರೆ. ತಮ್ಮ ಸಮ್ಮೇಳನ ಯಾವ ಅಂತಾರಾಷ್ಟ್ರೀಯ ಸಮಾರಂಭಕ್ಕೂ ಕಮ್ಮಿಯಿಲ್ಲ ಎಂದು ನಿರೂಪಿಸುವುದೇ ಅವರ ಮೊಟ್ಟಮೊದಲ ಯಶಸ್ಸು. ಪ್ರಬಂಧಗಳನ್ನು ಸಿದ್ಧಪಡಿಸುವಾಗ ಅನುಸರಿಸಬೇಕಾದ ಅಂತಾರಾಷ್ಟ್ರೀಯ ನಿಯಮಾವಳಿ, ಅವುಗಳನ್ನು ಸಮ್ಮೇಳನಕ್ಕೆ ಆಯ್ಕೆ ಮಾಡುವಾಗ ಆಯೋಜಕರು ಅನುಸರಿಸುವ ಕಠಿಣ ವಿಧಾನಗಳ ಬಗ್ಗೆ ಸ್ಪಷ್ಟ ಉಲ್ಲೇಖ ಇರುತ್ತದೆ. ಸಂಸ್ಥೆಯ ಪರಿಚಯ, ಅಲ್ಲಿನ ಸೌಲಭ್ಯಗಳು, ಪ್ರವಾಸೀತಾಣಗಳು ಇತ್ಯಾದಿಗಳ ವಿಸ್ತೃತ ಮಾಹಿತಿಯನ್ನೆಲ್ಲ ತುಂಬ ಎಚ್ಚರಿಕೆಯಿಂದಲೇ ವಿನ್ಯಾಸಗೊಳಿಸಿರುತ್ತಾರೆ. ಅಂತೂ ಇಡೀ ಮಾಹಿತಿಪತ್ರದ ಸೊಗಸಿಗೆ ಮಾರುಹೋಗಿ ತುಂಬ ಆಸ್ಥೆಯಿಂದ ಪ್ರಬಂಧ ಸಿದ್ಧಪಡಿಸಿ ಅವರು ಕೇಳುವ ಒಂದೋ ಎರಡೋ ಸಾವಿರ ರೂಪಾಯಿಗಳನ್ನು ನೋಂದಣಿ ಶುಲ್ಕವೆಂದು ಪಾವತಿಸಿ ಸಮ್ಮೇಳನಕ್ಕೆ ನೀವು ಹೋದಿರೋ, ಆಮೇಲಿನ ಸಕಲ ಭ್ರಮನಿರಸನಗಳಿಗೆ ಸಂಘಟಕರು ಜವಾಬ್ದಾರರಲ್ಲ.

ಇದೋ ಇಲ್ಲಿದೆ ಸ್ಯಾಂಪಲ್

ಇತ್ತೀಚೆಗಿನ ಒಂದು ಸಮ್ಮೇಳನದ ಸ್ಯಾಂಪಲ್ ಕೇಳಿ: ಅದು ಬೆಂಗಳೂರಿನ 'ಪ್ರತಿಷ್ಠಿತ’ ಖಾಸಗಿ ಕಾಲೇಜು. ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಆಯೋಜಿಸುತ್ತಿರುವುದಾಗಿ ಅವರು ಪ್ರಕಟಿಸಿದ್ದಾರೆ. ಬರೋಬ್ಬರಿ ಮೂರು ತಿಂಗಳಿನಿಂದ ಭರ್ಜರಿ ತಯಾರಿ ನಡೆದಿದೆ.  ಪ್ರಬಂಧಗಳ ಆಹ್ವಾನ, ಪರಿಶೀಲನೆ, ಸ್ವೀಕೃತಿ ಎಲ್ಲ ಆಗಿದೆ. ಎಲ್ಲ ಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲಾಗುವುದೆಂದು ಆರಂಭದಲ್ಲೇ ಅವರು ಹೇಳಿದ್ದಾರೆ. ಪ್ರತಿ ಸಮ್ಮೇಳನಾರ್ಥಿಯಿಂದ ನೋಂದಣಿಶುಲ್ಕ ಒಂದು ಸಾವಿರ ರೂಪಾಯಿಗಳನ್ನು ಮುಂಗಡವಾಗಿಯೇ ಸ್ವೀಕರಿಸಲಾಗಿದೆ. ದಿನಕ್ಕೆ ಮೂರು ಬಾರಿ ಫೋನ್, ಇ-ಮೇಲ್ ಮೂಲಕ ಸಮ್ಮೇಳನಾರ್ಥಿಗಳ ಬರುವಿಕೆ ಬಗ್ಗೆ ಸಂಘಟಕರು ಪರಿಪರಿಯಾಗಿ ಖಚಿತಪಡಿಸಿಕೊಂಡಿದ್ದಾರೆ.

ಅಂತೂ ಸಮ್ಮೇಳನದ ದಿನ ಬಂತು. ಮಹಾನಗರದ ಹೊರವಲಯದಲ್ಲಿ ಧಾರಾಳವಾಗಿ ದೊರೆತ ಹೆಕ್ಟೇರ್‌ಗಟ್ಟಲೆ ಜಮೀನಿನಲ್ಲಿ ಎದ್ದುನಿಂತಿದೆ ಚಮಕ್ ಚಮಕ್ ಕ್ಯಾಂಪಸ್. ಬೆಳಗ್ಗೆ ಹತ್ತೂವರೆತನಕವೂ ನೋಂದಣಿ, ಉಪಾಹಾರದ ಔಪಚಾರಿಕತೆಗಳು ಮುಗಿದ ಮೇಲೆ ಸಮ್ಮೇಳನವೆಂಬೋ ಸಮ್ಮೇಳನದ ಆರಂಭ. ಮೊದಲ ಅರ್ಧ-ಮುಕ್ಕಾಲು ಗಂಟೆ ತಮ್ಮ ಆಲ್ಟ್ರಾಮಾಡರ್ನ್ ಕಾಲೇಜಿನ ಬಗ್ಗೆ ವೀಡಿಯೋ, ಫೋಟೋ, ಗಡಚಿಕ್ಕುವ ಸಂಗೀತ ಇತ್ಯಾದಿಗಳನ್ನೊಳಗೊಂಡ ಪರಿಚಯ, ಅಮೇಲೆ ಅತಿಥಿ ಆಭ್ಯಾಗತರ ಸ್ವಾಗತ, ಮತ್ತೆ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಪ್ರಾಂಶುಪಾಲ ಮತ್ತಿತರರಿಂದ ಭಾಷಣ ವೈವಿಧ್ಯ, ಉಳಿದ ಒಂದಿಷ್ಟು ಸಮಯದಲ್ಲಿ ಮುಖ್ಯ ಅತಿಥಿಯೆಂಬ ಬಡಪಾಯಿಯಿಂದ ದಿಕ್ಸೂಚಿ ಉಪನ್ಯಾಸ. ಅಯ್ಯೋ ಮಧ್ಯಾಹ್ನವೇ ಆಗಿಹೋಯಿತಲ್ಲ; ಇನ್ನು ಊಟ.

ಸಮ್ಮೇಳನದ ಸಂತ್ರಸ್ಥರೆಲ್ಲ ಸರತಿಯಲ್ಲಿ ನಿಂತು ಹೈಟೆಕ್ ಊಟದ ಪೊಟ್ಟಣಗಳನ್ನು ಪಡೆದು ರುಚಿಸಿದಷ್ಟು ತಿಂದು ಮತ್ತೆ ಸಭಾಂಗಣ ಸೇರುವ ಹೊತ್ತಿಗೆ ಮೂರು ಗಂಟೆ. ಇನ್ನು ನಿಜವಾದ ಸೆಮಿನಾರು ಆರಂಭ. ಸಮ್ಮೇಳನಕ್ಕೆ ಆಯ್ಕೆಯಾದ ನೂರಾರು ಪ್ರಬಂಧಗಳ ಮಂಡನೆಯಾಗಬೇಕು. ದೂರದೂರಿನಿಂದ ಬಂದವರಿಗೆ ತಡವಾಗುತ್ತದಲ್ಲ ಎಂಬುದು ಸಂಘಟಕರ ಕಾಳಜಿಯಾದ್ದರಿಂದ ನಾಲ್ಕೂವರೆಯೊಳಗೆ ಕಾರ್ಯಕ್ರಮ ಮುಗಿಸಿಬಿಡುವ ತರಾತುರಿ. ಅದಕ್ಕಾಗಿಯೇ ಅವರು ಐದಾರು ಕಡೆ ಸಮಾನಾಂತರ ಗೋಷ್ಠಿಗಳನ್ನು ಆಯೋಜಿಸಿದ್ದಾರೆ. ಪ್ರತೀ ಕೊಠಡಿಯಲ್ಲೂ ಇಪ್ಪತ್ತು ಪ್ರಬಂಧಗಳ ಮಂಡನೆ. ಒಬ್ಬಬ್ಬರಿಗೆ ಮೂರೂವರೆ ನಿಮಿಷ ಅವಧಿ. ಕೆಲವು ಸಮ್ಮೇಳನಾರ್ಥಿಗಳ ಎರಡುಮೂರು ಪ್ರಬಂಧಗಳು ಆಯ್ಕೆಯಾಗಿರುವುದರಿಂದ ಅವರು ಒಂದು ಕಡೆ ತಮ್ಮ ಪ್ರಬಂಧವನ್ನಷ್ಟೇ ಮಂಡಿಸಿ ಸಭಾತ್ಯಾಗ ಮಾಡಿ ಇನ್ನೊಂದು ಗೋಷ್ಠಿಯಲ್ಲಿ ಪ್ರತ್ಯಕ್ಷರಾಗುತ್ತಾರೆ. ಉಳಿದವರಿಗೆ ಆಗಲೇ ತಡವಾಗಿರುವುದರಿಂದ ತಮ್ಮತಮ್ಮ ಪ್ರಬಂಧಗಳ ಮಂಡನೆ ಮುಗಿಯುತ್ತಿದ್ದಂತೆ ಜಾಗ ಖಾಲಿಮಾಡುತ್ತಾರೆ. ಅಂತೂ ಗೋಷ್ಠಿಯ ಅಂತ್ಯಕ್ಕೆ ಉಳಿದವರು ಇಬ್ಬರೇ- ಕೊನೆಯ ಪ್ರಬಂಧಕಾರ ಮತ್ತು ಆ ಗೋಷ್ಠಿಯ ಅಸಹಾಯಕ ಅಧ್ಯಕ್ಷ.

ಅಷ್ಟು ಹೊತ್ತಿಗೆ ಎಲ್ಲರಿಗೂ ಪ್ರಮಾಣಪತ್ರಗಳು ತಲುಪಿರುತ್ತವೆ. ಪ್ರಮಾಣಪತ್ರ ಬಂದಲ್ಲಿಗೆ ಸಮ್ಮೇಳನ ಸಮಾರೋಪವಾಯಿತು ಎಂದೇ ಅರ್ಥ. ಮತ್ತೆ ಸಮ್ಮೇಳನದ ಎರಡನೇ ದಿನ? 'ನೀವೆಲ್ಲ ತುಂಬ ಬ್ಯುಸಿ ಇರುತ್ತೀರೆಂದು ನಮಗೆ ಗೊತ್ತು ಸಾರ್! ನಿಮಗೆ ಯಾಕೆ ಸುಮ್ಮನೇ ತೊಂದರೆ ಎಂದು ನಾವೇ ಒಂದು ದಿನದಲ್ಲಿ ಎಲ್ಲ ಪ್ರೆಸೆಂಟೇಶನುಗಳೂ ಮುಗಿಯುವಂತೆ ಪ್ಲಾನ್ ಮಾಡಿದ್ವಿ. ನಾಳೆ ಸಿನಿಮಾ ಸ್ಕ್ರೀನಿಂಗ್ ಇಟ್ಕೊಂಡಿದೀವಿ. ಇಂಟರೆಸ್ಟ್ ಇದ್ರೆ ನೀವು ನಮ್ಮೊಂದಿಗೆ ಇರಬಹುದು. ಡೋಂಟ್ ವರಿ, ನಿಮಗೆ ಅವಶ್ಯವಿದ್ರೆ ಎರಡೂ ದಿನ ಸಮ್ಮೇಳನದಲ್ಲಿ ನೀವು ಭಾಗವಹಿಸಿದ್ದೀರೆಂದು ಅಟೆಂಡೆನ್ಸ್ ಸರ್ಟಿಫಿಕೇಟ್ ಕೊಡ್ತೀವಿ...’ ಅದು ಸಂಘಟಕರ ಸಮಜಾಯುಷಿ. ಹೋಗಲಿ, ಸಮ್ಮೇಳನದ ಪುಸ್ತಕ? ಅದು ಖುದ್ದು ಸಂಘಟಕರಿಗೇ ಮರೆತುಹೋಗಿದೆ. ಅಳಿದುಳಿದ ಸಮ್ಮೇಳನಾರ್ಥಿಗಳು ಸಂಘಟಕರ ಆ ದಿನದ ಆದಾಯ  ಎಷ್ಟಾಗಿರಬಹುದೆಂದು ಲೆಕ್ಕಾಚಾರ ಹಾಕುತ್ತಾ ನಿಧಾನವಾಗಿ ಕ್ಯಾಂಪಸ್‌ನಿಂದ ಹೊರನಡೆಯುತ್ತಾರೆ.

ಇದು ನಮ್ಮ ಸುತ್ತಮುತ್ತ ನಡೆಯುವ ಹತ್ತಾರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಸಮ್ಮೇಳನಗಳ ಪೈಕಿ ಒಂದರ ಉದಾಹರಣೆ ಅಷ್ಟೇ. ಎಲ್ಲ ವಿಚಾರಸಂಕಿರಣ, ಸಮ್ಮೇಳನಗಳನ್ನು ಒಂದೇ ವರ್ಗಕ್ಕೆ ಸೇರಿಸುವುದೇನೋ ಸರಿಯಲ್ಲ, ಆದರೆ ಇಂದಿನ ಬಹುತೇಕ ಸಮ್ಮೇಳನಗಳ ಕಥೆ ಇದೇ ಆಗಿ ಸೆಮಿನಾರ್ ಎಂದಾಕ್ಷಣ ಬೆಚ್ಚಿಬೀಳುವ ಪರಿಸ್ಥಿತಿ ಬಂದಿರುವುದಂತೂ ನಿಜ.

ಸೆಮಿ'ನಾರು' ಎಂಬ ವ್ಯಾಪಾರ

ಕಾಲೇಜುಗಳಿಗೆ ನ್ಯಾಕ್ ಮಾನ್ಯತೆ, ಸ್ವಂತದ ಪ್ರತಿಷ್ಠೆ ಹಾಗೂ ಪ್ರಚಾರದ ಹಕೀಕತ್ತಾದರೆ ಸಮ್ಮೇಳನಾರ್ಥಿಗಳಿಗೆ ತಮ್ಮ ಶೈಕ್ಷಣಿಕೆ ಸಾಧನೆಯ ಕಡತವನ್ನು ಹಿಗ್ಗಿಸಿಕೊಳ್ಳುವ ತವಕ. ಕಾಲೇಜು, ವಿಶ್ವವಿದ್ಯಾನಿಲಯಗಳ ಅಧ್ಯಾಪಕರ ಸಾಧನೆ-ಭಡ್ತಿಗಳಿಗೆ, ಪಿಎಚ್‌ಡಿ ಸಂಶೋಧನಾರ್ಥಿಗಳ ಪ್ರೌಢಿಮೆಗೆ ಅವರ ಪ್ರಬಂಧ ಮಂಡನೆ, ಪ್ರಕಟಣೆಗಳೇ ಮಾನದಂಡವೆಂದು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ನಿರ್ಧರಿಸಿದ ಮೇಲಂತೂ ಸೆಮಿನಾರು ನಡೆಸುವುದು, ಪ್ರಬಂಧ ಮಂಡಿಸುವುದೇ ಒಂದು ದೊಡ್ಡ ವ್ಯಾಪಾರವಾಗಿಬಿಟ್ಟಿದೆ.

ಬಂದಿರುವ ಪ್ರಬಂಧಗಳ ಪೈಕಿ ಗುಣಮಟ್ಟದವೆಷ್ಟು, ಕಳಪೆಯೆಷ್ಟು, ಇಂಟರ್ನೆಟ್ಟಿನಿಂದ ಕದ್ದಿರುವುದೆಷ್ಟು, ಮೌಲಿಕವಾದದ್ದೆಷ್ಟು ಎಂದು ಪರಿಶೀಲಿಸುವುದಕ್ಕೆ ಯಾವುದೇ ವ್ಯವಸ್ಥೆಯಿಲ್ಲ. ಯಾರೆಲ್ಲ ನೋಂದಣಿ ಶುಲ್ಕ ಕೊಡಲು ತಯಾರಿದ್ದಾರೋ ಅವರೆಲ್ಲರ ಪ್ರಬಂಧಗಳು ಆಯ್ಕೆಯಾದವೆಂದೇ ಅರ್ಥ. ಅವುಗಳ ಮಂಡನೆಗೆ ಮೂರು ನಿಮಿಷವಾದರೂ ಸಿಗುವುದೇ ಹೆಚ್ಚು, ಇನ್ನು ಚರ್ಚೆ ಸಂವಾದಗಳ ಮಾತೇ ಇಲ್ಲ. ಅವರೇನೋ ಹೇಳಿದರು, ಇವರೇನೋ ಕೇಳಿಸಿಕೊಂಡರು, ಅಷ್ಟೇ. ವಾಸ್ತವವಾಗಿ ವಿದ್ವತ್ಪೂರ್ಣ ಚರ್ಚೆ ನಡೆಯುವುದಾಗಲೀ, ಅದರ ದಾಖಲೀಕರಣವಾಗುವುದಾಗಲೀ ಯಾರಿಗೂ ಬೇಕಿಲ್ಲ. ಯಾರ‍್ಯಾರೆಲ್ಲ ಯಾವ್ಯಾವ ಹೊತ್ತಿಗೆ ಬಂದರೋ ಹೋದರೋ ತಿಳಿಯದು; ಸಮ್ಮೇಳನಕ್ಕೇ ಹಾಜರಾಗದೆ ಪ್ರಬಂಧಗಳನ್ನು ಮಂಡಿಸದೇ ಪ್ರಮಾಣಪತ್ರ ತರಿಸಿಕೊಂಡವರು ಇನ್ನೆಷ್ಟಿದ್ದಾರೋ ಲೆಕ್ಕವಿಲ್ಲ. ಕೆಲವರಂತೂ ಖುದ್ದು ವೇದಿಕೆ ಹತ್ತಿ ಒಂದೂ ಪ್ರಬಂಧ ಮಂಡಿಸದೆಯೂ ವರ್ಷಕ್ಕೆ ಹತ್ತಾರು ಪ್ರಬಂಧಗಳ ಕರ್ತೃತ್ವ ಪಡೆಯುತ್ತಾರೆ. ಯಾರೋ ಶ್ರಮಪಟ್ಟು ಪ್ರಬಂಧ ಬರೆದಿದ್ದರೆ ಅವರಿಗೆ ದುಂಬಾಲು ಬಿದ್ದು ತಮ್ಮನ್ನು ಎರಡನೆಯೋ ಮೂರನೆಯೋ ಕರ್ತೃವನ್ನಾಗಿ 'ಹಾಕಿಸಿ’ಕೊಳ್ಳುವುದೇ ಇವರ ಸಾಧನೆಯ ಗುಟ್ಟು.

ನಮ್ಮ ಸೆಮಿ'ನಾರು’ಗಳ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಇನ್ನೊಂದೆರಡು ವರ್ಷಗಳಲ್ಲಿ ಇದು ಎಲ್ಲಿಗೆ ಬಂದು ನಿಂತೀತೋ ಅರ್ಥವಾಗುವುದಿಲ್ಲ. ಇವುಗಳ ಬಗ್ಗೆ ಯುಜಿಸಿಯೋ ಸರ್ಕಾರವೋ ಶಿಕ್ಷಣ ಇಲಾಖೆಯೋ ತಕ್ಷಣ ಗಮನ ಹರಿಸದೇ ಹೋದರೆ ಅನಾಹುತವಂತೂ ತಪ್ಪಿದ್ದಲ್ಲ.

ಕಾಮೆಂಟ್‌ಗಳಿಲ್ಲ: