ಸಾಹಿತ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸಾಹಿತ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮಾರ್ಚ್ 13, 2022

ಹೀಗುಂಟು ಸಾಹಿತ್ಯ-ಮಾಧ್ಯಮಗಳ ನಂಟು

ಮಾರ್ಚ್ 2022ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾಗಿರುವ ಲೇಖನ

‘ಪತ್ರಿಕೋದ್ಯಮವು ಒಂದು ಅವಸರದ ಸಾಹಿತ್ಯ’ ಎಂಬ ಮಾತಿದೆ. ಪತ್ರಿಕಾ ಬರೆಹಗಳು ಅವಸರದಲ್ಲಿ ತಯಾರಾಗುವ ಪಾಕ ಎಂಬ ಧ್ವನಿ ಇಲ್ಲಿರುವಂತೆಯೇ, ಅವು ಸಾಹಿತ್ಯದ ಒಂದು ಭಾಗ ಎಂಬ ಸೂಚನೆಯೂ ಇದೆ. ಸಾಹಿತ್ಯಕ್ಕೂ ಪತ್ರಿಕಾವೃತ್ತಿಗೂ ಮೊದಲಿನಿಂದಲೂ ಒಂದು ಅವಿಭಾಜ್ಯ ಸಂಬಂಧ. ಒಂದೆಡೆ, ಪತ್ರಿಕಾವೃತ್ತಿ ಬೆಳೆಯುವಲ್ಲಿ ಸಾಹಿತ್ಯದ ಕೊಡುಗೆ ಗಣನೀಯವಾಗಿದ್ದರೆ, ಇನ್ನೊಂದೆಡೆ ಭಾಷೆ ಹಾಗೂ ಸಾಹಿತ್ಯದ ವಿಕಾಸದಲ್ಲಿ ಪತ್ರಿಕೋದ್ಯಮದ ಕೊಡುಗೆ ವಿಶಿಷ್ಟವಾಗಿದೆ. ಜನರಿಗೆ ಸುದ್ದಿಸಮಾಚಾರಗಳ ಕುರಿತಾದ ಕುತೂಹಲ ತುಸು ಹೆಚ್ಚೇ. ಆದರೆ ಅಷ್ಟಕ್ಕೇ ಅವರ ಆಸಕ್ತಿ ಮುಗಿಯವುದಿಲ್ಲ. ಕೇವಲ ಸುದ್ದಿಯಷ್ಟೇ ಅವರಿಗೆ ಸಾಕಾಗುವುದಿಲ್ಲ. ಸುದ್ದಿಸಮಾಚಾರಗಳೊಂದಿಗೆ ಸಾಹಿತ್ಯದ ವಿವಿಧ ಪ್ರಕಾರಗಳನ್ನೂ ಆಸ್ವಾದಿಸುವ ಅವಕಾಶ ಸಿಕ್ಕಾಗಲಷ್ಟೇ ಅವರಿಗೆ ಪತ್ರಿಕೆ ಇತ್ಯಾದಿ ಮಾಧ್ಯಮಗಳು ಹೆಚ್ಚು ಕುತೂಹಲಕರ ಹಾಗೂ ಪ್ರಯೋಜನಕರ ಎನಿಸುತ್ತವೆ.

ಆದರೆ ಸಾಹಿತ್ಯ ಮತ್ತು ಮಾಧ್ಯಮಗಳ ಸಂಬಂಧವನ್ನು ಗಮನಿಸಿದಾಗ, ಅದು ಕೇವಲ ಮುದ್ರಣ ಮಾಧ್ಯಮಕ್ಕಷ್ಟೇ ಸೀಮಿತವಾದದ್ದಲ್ಲ ಎಂಬುದು ಅರಿವಾಗುತ್ತದೆ. ಪತ್ರಿಕೆಗಳಿಂದ ತೊಡಗಿ ಆನ್ಲೈನ್ ವೇದಿಕೆಗಳವರೆಗೆ ವಿವಿಧ ಸಮೂಹ ಮಾಧ್ಯಮಗಳು ತಮ್ಮದೇ ನೆಲೆಯಲ್ಲಿ ಸಾಹಿತ್ಯದ ಪೋಷಣೆಯಲ್ಲಿ ತೊಡಗಿಸಿಕೊಂಡಿವೆ. ಕಾಲದಿಂದ ಕಾಲಕ್ಕೆ ಬದಲಾಗುವ ಜನರ ಆಸಕ್ತಿ-ಅಭಿರುಚಿಗಳನ್ನು ಮಾಧ್ಯಮಗಳು ಗಮನಿಸಿಕೊಂಡು ತಮ್ಮನ್ನು ತಾವು ಮರುರೂಪಿಸಿಕೊಳ್ಳಬೇಕಾಗುತ್ತದೆ.

ಪತ್ರಿಕಾ ಮಾಧ್ಯಮ:

ಮುದ್ರಣ ಮಾಧ್ಯಮದ ಸಾಹಿತ್ಯ ಪರಿಚಾರಿಕೆ ಎರಡು ಬಗೆಯದ್ದು. ಕಲೆ-ಸಾಹಿತ್ಯಕ್ಕೆಂದೇ ಮೀಸಲಾದ ಪತ್ರಿಕೆಗಳ ಕಾರ್ಯವೈಖರಿ ಒಂದು ತೆರನಾದರೆ, ಮುಖ್ಯ ವಾಹಿನಿಯ ಪತ್ರಿಕೆಗಳು ಸಾಹಿತ್ಯಕ್ಕೆ ಕೊಡುವ ಮಹತ್ವ ಇನ್ನೊಂದು ವಿಧವಾದದ್ದು. ಎರಡೂ ಬಗೆಯ ಪತ್ರಿಕೆಗಳು ತಮ್ಮದೇ ಆದ ರೀತಿಯಲ್ಲಿ ಸಾರಸ್ವತಲೋಕದ ಬೆಳವಣಿಗೆಯಲ್ಲಿ ಪಾತ್ರ ವಹಿಸಿವೆ. ಸಾಹಿತ್ಯ ಕ್ಷೇತ್ರದ ಹಲವು ದಿಗ್ಗಜರು ಸ್ವತಃ ಪತ್ರಕರ್ತರಾಗಿದ್ದರು ಎಂಬುದು ಗಮನಾರ್ಹ ಸಂಗತಿ. ಆಂಗ್ಲಸಾಹಿತ್ಯದ ಶ್ರೇಷ್ಠ ಪ್ರಬಂಧಕಾರರೆನಿಸಿದ ರಿಚರ್ಡ್ ಸ್ಟೀಲ್, ಡೇನಿಯಲ್ ಡೆಫೋ ಮೊದಲಾದವರೆಲ್ಲ ಉತ್ತಮ ಪತ್ರಿಕಾ ಬರೆಹಗಾರರೂ ಆಗಿದ್ದರು. ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ ಮಾಸ್ತಿ, ಡಿವಿಜಿ, ತಿ. ತಾ. ಶರ್ಮ, ನಿರಂಜನ, ನಂಜನಗೂಡು ತಿರುಮಲಾಂಬಾ, ಸಿದ್ಧವನಹಳ್ಳಿ ಕೃಷ್ಣಶರ್ಮ, ಅ.ನ.ಕೃ. ಮುಂತಾದವರು ಸಾಹಿತ್ಯವನ್ನೂ ಪತ್ರಿಕೋದ್ಯಮವನ್ನೂ ಜತೆಜತೆಗೇ ಬೆಳೆಸಿಕೊಂಡು ಬಂದರು.

19ನೇ ಶತಮಾನ ಹೊಸಗನ್ನಡ ಸಾಹಿತ್ಯದ ಉದಯಕಾಲ. ಕನ್ನಡ ಪತ್ರಿಕೋದ್ಯಮವೂ ಅದೇ ಅವಧಿಯಲ್ಲೇ ಬೆಳೆಯಿತು. ಸಾಹಿತ್ಯ ಹಾಗೂ ಪತ್ರಿಕೋದ್ಯಮ ಕ್ಷೇತ್ರಗಳ ವಿಕಾಸದ ಪಾತಳಿ ಒಂದೇ ಎಂಬುದಕ್ಕೆ ಇದೊಂದು ಸ್ಪಷ್ಟ ನಿದರ್ಶನ. ಮುದ್ರಣಕಲೆ ಬೆಳೆದುದಕ್ಕೂ, ಸಾಹಿತ್ಯ ಕೃತಿಗಳು ದೊಡ್ಡ ಸಂಖ್ಯೆಯಲ್ಲಿ ಮುದ್ರಣಗೊಂಡು ವಿಸ್ತಾರ ಓದುಗವರ್ಗವನ್ನು ತಲುಪಿದ್ದಕ್ಕೂ ಸಂಬಂಧವಿರುವುದನ್ನು ಕೂಡ ನಾವಿಲ್ಲಿ ಗಮನಿಸಬಹುದು. ಪತ್ರಿಕೋದ್ಯಮವು ಮುದ್ರಣತಂತ್ರಜ್ಞಾನದ ಇನ್ನೊಂದು ಕೂಸು.

ಪತ್ರಿಕಾವೃತ್ತಿ ಬೆಳೆದುಬರುತ್ತಾ, ರಂಗಭೂಮಿ, ಸಂಗೀತ, ಜಾನಪದ, ಯಕ್ಷಗಾನ, ಕಾವ್ಯ, ಹಾಸ್ಯ, ಕತೆ - ಹೀಗೆ ಸಾಹಿತ್ಯದ ವಿವಿಧ ಮಗ್ಗುಲುಗಳಿಗೆ ಸಂಬಂಧಿಸಿದ ವಿಶೇಷ ಪತ್ರಿಕೆಗಳು ಹುಟ್ಟಿಕೊಂಡವು. ಬೆನೆಗಲ್ ರಾಮರಾಯರ ‘ಸುವಾಸಿನಿ’, ರಾಶಿಯವರ ‘ಕೊರವಂಜಿ’, ಅನಕೃ ಅವರ ‘ಕಥಾಂಜಲಿ’, ಮಾಸ್ತಿಯವರ ‘ಜೀವನ’, ಅಡಿಗರ ‘ಸಾಕ್ಷಿ’, ಕಾರಂತರ ‘ವಸಂತ’, ಮೈಸೂರು ವಿವಿ ಪ್ರಕಟಿಸುತ್ತಿದ್ದ ‘ಪ್ರಬುದ್ಧ ಕರ್ನಾಟಕ’- ಹೀಗೆ ಹತ್ತಾರು ಉಪಕ್ರಮಗಳನ್ನು ಗುರುತಿಸಬಹುದು ಪತ್ರಿಕೋದ್ಯಮ ಪ್ರಾಧ್ಯಾಪಕ ಡಾ. ನಿರಂಜನ ವಾನಳ್ಳಿಯವರು ತಮ್ಮ ‘ಕನ್ನಡದಲ್ಲಿ ಕಲೆ-ಸಾಹಿತ್ಯ ಪತ್ರಿಕೆಗಳು’ ಎಂಬ ಪಿಎಚ್.ಡಿ. ಪ್ರಬಂಧದಲ್ಲಿ ಈ ಐತಿಹಾಸಿಕ ಹೆಜ್ಜೆಗಳನ್ನು ವಿಸ್ತಾರವಾಗಿ ಚರ್ಚಿಸಿದ್ದಾರೆ. 

ಕನ್ನಡ ಪತ್ರಿಕೆಗಳ ಸಾಹಿತ್ಯ ಸೇವೆಯನ್ನು ಅವರು ಈ ಕೆಳಕಂಡಂತೆ ಪಟ್ಟಿಮಾಡಿದ್ದಾರೆ:

1. ದಿನಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಸಾಮಾನ್ಯ ಆಸಕ್ತಿಯ ಪತ್ರಿಕೆಗಳೇ ಆಗಿರುವ ಸಂದರ್ಭದಲ್ಲಿಯೂ ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಹಾಸ್ಯಬರಹಗಳು, ಮುಂತಾದವನ್ನು ತಪ್ಪದೇ ಪ್ರಕಟಿಸುತ್ತವೆ.

2. ಕಾದಂಬರಿಗಳು ಧಾರಾವಾಹಿಗಳಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ. ಹಿಂದೆ ನಿಯತಕಾಲಿಕಗಳಿಗಷ್ಟೇ ಧಾರಾವಾಹಿಗಳು ಸೀಮಿತವಾಗಿದ್ದವು. ಈಗ ದಿನಪತ್ರಿಕೆಗಳೂ ಧಾರಾವಾಹಿಗಳನ್ನು ಪ್ರಕಟಿಸುತ್ತವೆ.

3. ಸಾಹಿತಿಗಳ ಅಂಕಣಗಳನ್ನು ಪ್ರಕಟಿಸುವ ಮೂಲಕ ಅಂಕಣ ಸಾಹಿತ್ಯವೇ ಕನ್ನಡದಲ್ಲಿ ಪ್ರತ್ಯೇಕ ಸಮೃದ್ಧ ಸಾಹಿತ್ಯ ಪ್ರಕಾರವಾಗಿ ಬೆಳೆಯಲು ಕಾರಣವಾಗಿವೆ.

4. ಪತ್ರಿಕೆಗಳು ಏರ್ಪಡಿಸುವ ಸಾಹಿತ್ಯ ಸ್ಪರ್ಧೆಗಳು ಹೊಸತಲೆಮಾರಿನ ಬರಹರಾರರನ್ನು ಹೆಕ್ಕಿ ತೆಗೆಯಲು ನೆರವಾಗುತ್ತವೆ.

5. ದೀಪಾವಳಿ, ಯುಗಾದಿ, ಸಂಕ್ರಾಂತಿ, ಮುಂತಾದ ಹಬ್ಬದ ಸಂದರ್ಭಗಳಲ್ಲಿ ನಮ್ಮ ಪತ್ರಿಕೆಗಳು ಹೊರತರುವ ವಿಶೇಷಾಂಕಗಳು ಸಾಹಿತ್ಯ ಸಂಪುಟಗಳೇ ಎಂದು ಕರೆಯಬಹುದಾದಷ್ಟು ಸಮೃದ್ಧವಾಗಿರುತ್ತವೆ.

6. ಕಾಲಕಾಲಕ್ಕೆ ಪ್ರಶ್ನೆ ಮಾಲಿಕೆಗಳನ್ನು ಏರ್ಪಡಿಸಿ ಒಂದೇ ರೀತಿಯ ಪ್ರಶ್ನೆಗಳಿಗೆ ಸಾಹಿತಿಗಳಿಂದ ಉತ್ತರಗಳನ್ನು ಬರೆಯಿಸಿ ಸಾಹಿತ್ಯ ಪಡೆದುಕೊಳ್ಳುವ ತಿರುವುಗಳಿಗೆ ಸೈದ್ಧಾಂತಿಕ ರೂಪ ನೀಡುತ್ತವೆ.

7. ಪತ್ರಿಕೆಗಳೇ ಸಾಹಿತ್ಯ ಪ್ರಕಾಶನದ ಸಂಸ್ಥೆಗಳಾಗಿ ಕೆಲಸ ಮಾಡುವುದಿದೆ. ಅಂದರೆ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವುದು.

8. ನವ ಪ್ರಕಾಶನಗಳ ಪಟ್ಟಿಯನ್ನು ಪ್ರಕಟಿಸಿ ಓದುಗರಿಗೆ ಹೊಸ ಕೃತಿ ಹೊರಬಂದುದರ ಬಗ್ಗೆ ತಿಳಿಯಲು ಅನುವುಮಾಡಿಕೊಡುತ್ತವೆ.

9. ಪುಸ್ತಕಗಳ ಸಮೀಕ್ಷೆ, ವಿಮರ್ಶೆಗಳನ್ನು ತಜ್ಞರಿಂದ ಬರೆಸುತ್ತವೆ.

10. ಓದುಗರಿಗೆ ವಿಮರ್ಶಾ ಸ್ಪರ್ಧೆಗಳನ್ನು ಏರ್ಪಡಿಸುತ್ತವೆ.

11. ಚಿತ್ರಕವನ ಸ್ಪರ್ಧೆ ಹಾಗೂ ಅಪೂರ್ಣ ಕಥೆಗಳನ್ನು ಪೂರ್ಣಗೊಳಿಸುವಂಥ ಸ್ಪರ್ಧೆಗಳ ಮೂಲಕ ಓದುಗರ ಸೃಜನಶೀಲತೆಯನ್ನು ಹೆಚ್ಚಿಸುತ್ತವೆ.

12. ಇವೆಲ್ಲ ಸಾಮಾನ್ಯ ಆಸಕ್ತಿಯ ಪತ್ರಿಕೆಗಳ ಮಾತಾದರೆ, ಸಾಹಿತ್ಯಕ್ಕೇ ಮೀಸಲಾಗಿ ನಿಯತಕಾಲಿಕಗಳನ್ನು ಹೊರಡಿಸುವುದೂ ಕನ್ನಡ ಪತ್ರಿಕೋದ್ಯಮ ಮಾಡುವ ಸಾಹಿತ್ಯ ಸೇವೆಯ ಮಾದರಿ.

ಸಾಹಿತ್ಯದ ಬೆನ್ನೆಲುಬೆನಿಸಿರುವ ಭಾಷೆಯ ಬೆಳವಣಿಗೆಯಲ್ಲೂ ಪತ್ರಿಕೆಗಳ ಕೊಡುಗೆ ಅದ್ವಿತೀಯ. ಕಾಲದಿಂದ ಕಾಲಕ್ಕೆ ಭಾಷೆ ವಿಕಾಸವಾಗುವಲ್ಲಿ, ಹೊಸ ಪದಗಳ ಸೃಷ್ಟಿಯಾಗುವಲ್ಲಿ, ಹೊಸ ಪದಪುಂಜಗಳ ಅನ್ವೇಷಣೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ತುಂಬ ದೊಡ್ಡದು. ಆಧುನೀಕರಣ ಮತ್ತು ಆ ಕಾರಣದಿಂದ ನಡೆದಿರುವ ಟಂಕೀಕರಣ, ಭಾಷಾಂತರೀಕರಣ, ಅನ್ಯ ಭಾಷಾ ಸ್ವೀಕರಣ, ನುಡಿಬೆರಕೆ ಮೊದಲಾದವುಗಳಿಂದ ಒಂದು ಭಾಷೆಗೆ ಹೊಸ ಪದಗಳು ಸೇರ್ಪಡೆಯಾಗುತ್ತಾ ಹೋಗುತ್ತವೆ; ಈ ಪ್ರಕ್ರಿಯೆಯಲ್ಲಿ ಮಾಧ್ಯಮಗಳ ಪಾತ್ರ ತುಂಬ ದೊಡ್ಡದು ಎಂದು ಭಾಷಾತಜ್ಞರು ಗುರುತಿಸಿದ್ದುಂಟು. ಉದಾಹರಣೆಗೆ: ಕಪ್ಪುಹಣ, ಪ್ರಣಾಳಿಕೆ, ಏಕಸ್ವಾಮ್ಯ, ಯಥಾಸ್ಥಿತಿ, ಭೂಗತಲೋಕ, ಸ್ವಜನಪಕ್ಷಪಾತ, ಮಾಹಿತಿ ತಂತ್ರಜ್ಞಾನ, ಶೀತಲ ಸಮರ, ವಿಕೇಂದ್ರೀಕರಣ, ಬೆರಳಚ್ಚು, ನುಡಿಚಿತ್ರ, ಗೃಹಬಂಧ, ಪ್ರಣಾಳಶಿಶು, ಹಕ್ಕೊತ್ತಾಯ, ಅಜೇಯ ಶತಕ- ಇವೆಲ್ಲ ಆಯಾ ಸಂದರ್ಭದ ಅನಿವಾರ್ಯಗಳಲ್ಲಿ ಹುಟ್ಟಿಕೊಂಡಿರುವ ಬಳಕೆಗಳು.

ಗಣನೀಯ ಇಳಿಮುಖ:

ಕಲೆ-ಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಇಳಿಮುಖವಾಗಿದೆ. ಓದುಗರ ಸಾಹಿತ್ಯಾಸಕ್ತಿಯಲ್ಲಿ ಆಗಿರುವ ಬದಲಾವಣೆ, ಪತ್ರಿಕೆ ನಡೆಸುವವರ ಹಣಕಾಸಿನ ಸಂಕಷ್ಟ, ಮಾರಾಟ-ಪ್ರಸರಣೆಯಲ್ಲಿ ವೃತ್ತಿಪರತೆಯನ್ನು ಕಾಯ್ದುಕೊಳ್ಳಲು ಆಗದೇ ಇರುವುದು, ಬಹುತೇಕ ಸಾಹಿತ್ಯ ಪತ್ರಿಕೆಗಳ ವಹಿವಾಟು ಏಕವ್ಯಕ್ತಿ ಹೋರಾಟ ಆಗಿರುವುದು- ಹೀಗೆ ಅನೇಕ ಕಾರಣಗಳನ್ನು ಈ ನಿಟ್ಟಿನಲ್ಲಿ ಊಹಿಸಬಹುದು.

ಮುಖ್ಯವಾಹಿನಿಯ ಪತ್ರಿಕೆಗಳನ್ನು ಗಮನಿಸಿದರಂತೂ ಬಹುತೇಕ ಪತ್ರಿಕೆಗಳು ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯವನ್ನು ದೂರ ಸರಿಸಿರುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಮೇಲೆ ಪಟ್ಟಿಮಾಡಿರುವ, ನಿರಂಜನ ವಾನಳ್ಳಿಯವರು ಗುರುತಿಸಿರುವ ಅಂಶಗಳನ್ನು ಗಮನಿಸಿದರೆ, ದಶಕಗಳ ಹಿಂದೆ ಪತ್ರಿಕೆಗಳು ಸಾಹಿತ್ಯಕ್ಕೆ ನೀಡುತ್ತಿದ್ದ ಆದ್ಯತೆಗೂ ಇಂದಿನ ವಾಸ್ತವಕ್ಕೂ ಸ್ಪಷ್ಟ ವ್ಯತ್ಯಾಸವಿರುವುದು ಸಾಮಾನ್ಯ ಓದುಗನಿಗೂ ಅರ್ಥವಾಗುತ್ತದೆ.

ಒಂದು ಕಾಲದಲ್ಲಿ ಪತ್ರಿಕೆಗಳ ಭಾನುವಾರದ ಪುರವಣಿ, ವಾರ್ಷಿಕ ವಿಶೇಷಾಂಕಗಳಲ್ಲಿ ಕಥೆ-ಕವಿತೆಗಳನ್ನು ಬರೆದು ಬಹುಮಾನ ಪಡೆದು ಸಾಹಿತ್ಯ ಕ್ಷೇತ್ರ ಪ್ರವೇಶಿಸಿದ ನೂರಾರು ಮಂದಿಯ ಉದಾಹರಣೆ ಇದ್ದರೆ, ಅಂತಹದೊಂದು ಕಾಲ ಇತ್ತೇ ಎಂದು ಅಚ್ಚರಿಪಡುವ ಸಂದರ್ಭ ಇಂದಿನದು. ಕಳೆದ ಹತ್ತು ವರ್ಷಗಳಲ್ಲಿ ಅನೇಕ ಪತ್ರಿಕೆಗಳ ಸಾಹಿತ್ಯ ಪುರವಣಿಗಳು ಗುರುತೇ ಸಿಗದಷ್ಟು ಸೊರಗಿ ಹೋಗಿವೆ. ಕಥೆ, ಕಾವ್ಯ ವಿಭಾಗಗಳೆಲ್ಲ ಮಾಯವಾಗಿವೆ. ‘ಅವನ್ನೆಲ್ಲ ಓದುವವರು ಇಲ್ಲ’ ಎಂಬುದು ಎಲ್ಲರೂ ಕೊಡುವ ಸುಲಭ ಸಬೂಬು. ‘ಜಾಹೀರಾತುದಾರರಿಗೆ ಅಂತಹ ಪುಟಗಳ ಬಗ್ಗೆ ಆಸಕ್ತಿ ಇಲ್ಲ’ ಎಂಬುದು ಒಳಗಿನಿಂದ ಕೇಳುವ ಧ್ವನಿ. ವಾಸ್ತವ ಏನು ಎಂಬುದು ಯಕ್ಷಪ್ರಶ್ನೆ. ಕೊರೋನ ಅಂತೂ ಸಾಪ್ತಾಹಿಕ ಪುರವಣಿಗಳನ್ನೇ ನಿಲ್ಲಿಸಿಬಿಡುವುದಕ್ಕೆ ಒಳ್ಳೆಯ ನೆಪವಾಗಿದೆ. ಕೊರೋನದ ಆತಂಕಗಳು ಕಡಿಮೆಯಾಗಿ ಮಾಧ್ಯಮಗಳು ಆರ್ಥಿಕವಾಗಿ ಚೇತರಿಸಿಕೊಂಡರೂ, ಅವುಗಳ ಸಾಹಿತ್ಯಪ್ರೀತಿ ಚೇತರಿಸಿಕೊಂಡಂತೆ ಕಾಣುವುದಿಲ್ಲ. ಸಾಧ್ಯವಾದಷ್ಟು ಕಾಲ ಯಥಾಸ್ಥಿತಿ ಮುಂದುವರಿದರೆ ವ್ಯಾವಹಾರಿಕ ದೃಷ್ಟಿಯಿಂದ ಅನುಕೂಲವೇ ಹೆಚ್ಚು ಎಂದು ಅವು ಭಾವಿಸಿಕೊಂಡಂತಿದೆ.

ವಿದ್ಯುನ್ಮಾನ ಮಾಧ್ಯಮ:

ವಿದ್ಯುನ್ಮಾನ ಮಾಧ್ಯಮಗಳ ಪೈಕಿ, ದೂರದರ್ಶನ ಮೊದಲಿನಿಂದಲೂ ಕಲೆ-ಸಾಹಿತ್ಯಕ್ಕೆ ಸಾಕಷ್ಟು ಒತ್ತು ನೀಡುತ್ತಾ ಬಂದಿದೆ. ಸಾಹಿತ್ಯ, ಕಲಾ ಮೌಲ್ಯವುಳ್ಳ ಧಾರಾವಾಹಿಗಳು ವಿವಿಧ ಭಾಷೆಗಳಲ್ಲಿ ಬಂದಿವೆ. ಹಿಂದಿಯಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರಿದ ರಾಮಾಯಣ, ಮಹಾಭಾರತ ಧಾರಾವಾಹಿಗಳು, ಕನ್ನಡದಲ್ಲಿ ಬಂದ ಮಲೆಗಳಲ್ಲಿ ಮದುಮಗಳು, ಗೃಹಭಂಗ, ಕಾನೂರು ಹೆಗ್ಗಡತಿ; ‘ಕತೆಗಾರ’ನಂತಹ ಸರಣಿಗಳು, ಲೇಖಕರು-ಕಲಾವಿದರ ಕುರಿತ ಸಾಕ್ಷ್ಯಚಿತ್ರ, ಸಂದರ್ಶನಗಳು, ನಿಯಮಿತವಾಗಿ ಪ್ರಸಾರವಾಗುವ ನಾಟಕ, ಸಿನಿಮಾ, ಯಕ್ಷಗಾನ, ಹರಿಕಥೆ, ಸಂಗೀತ, ನೃತ್ಯ, ರೂಪಕಗಳು ಒಟ್ಟಾರೆ ಸಾಹಿತ್ಯ ಸಂವರ್ಧನೆಗೆ ಗಣನೀಯ ಕೊಡುಗೆ ನೀಡಿವೆ. 

ಆದರೆ ಖಾಸಗಿ ವಾಹಿನಿಗಳಲ್ಲಿ ಈ ಕುರಿತ ಆಸಕ್ತಿಯಾಗಲೀ ಕಾಳಜಿಯಾಗಲೀ ವ್ಯಕ್ತವಾಗುವುದು ಅಪರೂಪ. ಟಿಆರ್‍ಪಿಯನ್ನು ಹುಟ್ಟಿಸದಿರುವ ಯಾವ ವಿಷಯದಲ್ಲೂ ಅವುಗಳಿಗೆ ಆಸಕ್ತಿ ಇಲ್ಲ. ಟಿವಿ ವಾಹಿನಿಗಳು ಕಲೆ-ಸಾಹಿತ್ಯಕ್ಕೆ ಒತ್ತು ನೀಡುವ ಬಗ್ಗೆ ಮಾತಾಡುವುದು ವ್ಯಾವಹಾರಿಕ ಜಗತ್ತಿನ ಬಗ್ಗೆ ಏನೂ ಅರಿವಿಲ್ಲದವರ ಹಳಹಳಿಕೆ ಎಂಬಂತಾಗಿದೆ.

ನಾಡು-ನುಡಿ-ಸಂಸ್ಕೃತಿಯ ಪ್ರಸರಣೆಯಲ್ಲಿ ಆಕಾಶವಾಣಿಯೂ ಹಿಂದೆ ಬಿದ್ದಿಲ್ಲ. ಕಲೆ-ಸಾಹಿತ್ಯಗಳನ್ನು ಜನಸಾಮಾನ್ಯರ ಬಳಿಗೆ ಒಯ್ಯುವಲ್ಲಿ ಬಾನುಲಿಯ ಪಾತ್ರವನ್ನು ಯಾರೂ ಅಲ್ಲಗಳೆಯಲಾಗದು. ಶಾಸ್ತ್ರೀಯ ಸಂಗೀತ, ಜಾನಪದ ಹಾಡುಗಳು, ಚಲನಚಿತ್ರ ಗೀತೆಗಳು, ಭಾವಗೀತೆ, ಗಮಕ ವಾಚನ, ನಾಟಕ, ರೂಪಕ, ಭಾಷಣ, ಸಂವಾದ, ಹರಿಕಥೆ, ಯಕ್ಷಗಾನ, ಹೀಗೆ ವಿವಿಧ ಮಾದರಿಗಳಲ್ಲಿ ಅಭಿವ್ಯಕ್ತಗೊಳ್ಳುವ ಆಕಾಶವಾಣಿಯ ಸಾಹಿತ್ಯಪ್ರೀತಿಯಿಂದಾಗಿ ಅದು ಸಾಮಾನ್ಯ ಕೇಳುಗರ ಹೃದಯದಲ್ಲಿ ಸುಭದ್ರ ಸ್ಥಾನ ಪಡೆದುಕೊಂಡಿದೆ. ಆದರೆ ಆಕಾಶವಾಣಿಯ ಪ್ರಾದೇಶಿಕ ಪ್ರಸಾರಕ್ಕೆ ದೊರೆಯುತ್ತಿದ್ದ ಪ್ರಾಮುಖ್ಯತೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಆಕಾಶವಾಣಿಯ ಅಸ್ತಿತ್ವ ಇರುವುದೇ ಅದರ ಪ್ರಾದೇಶಿಕ ಪ್ರಸಾರದಲ್ಲಿ ಮತ್ತು ಅದು ಒಳಗೊಂಡಿರುವ ಕಲೆ-ಸಾಹಿತ್ಯ-ಸಂಸ್ಕೃತಿಯ ಸತ್ವದಲ್ಲಿ. ಅದೇ ಕಳೆದುಹೋದರೆ ಬಾನುಲಿ ಇನ್ನೊಂದು ಯಾಂತ್ರಿಕ ಮಾಧ್ಯಮವಾಗುವುದರಲ್ಲಿ ಸಂಶಯವಿಲ್ಲ.

ನವಮಾಧ್ಯಮ:

ನಾವು ಗಮನಿಸಬೇಕಾಗಿರುವ ಮಾಧ್ಯಮಗಳ ಇನ್ನೊಂದು ಮುಖ ಆನ್ಲೈನ್ ಮಾಧ್ಯಮ ಅಥವಾ ನವ ಮಾಧ್ಯಮ. ಇಂಟರ್ನೆಟ್ ಇಂದು ಬಹುಜನರನ್ನು, ಅದರಲ್ಲೂ ಯುವತಲೆಮಾರನ್ನು ಬಹುವಾಗಿ ಆಕರ್ಷಿಸಿದೆ. ಅದನ್ನು ನಾವು ಅಲಕ್ಷಿಸುವಂತಿಲ್ಲ. ಯುವಕರು ಹೆಚ್ಚುಹೆಚ್ಚಾಗಿ ಅಂತರಜಾಲವನ್ನು, ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ ಎಂದರೆ ಅಲ್ಲಿ ಸಾಹಿತ್ಯದ ನೆಲೆ-ಬೆಲೆ ಏನು, ಎಷ್ಟು ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ಸಾಮಾನ್ಯ ಆಸಕ್ತಿಯ ಜಾಲತಾಣಗಳು, ಸಾಹಿತ್ಯಕ್ಕೇ ಮೀಸಲಾದ ವೆಬ್ ಮ್ಯಾಗಜಿನ್‍ಗಳು ಇಂದು ನೂರಾರು ಸಂಖ್ಯೆಯಲ್ಲಿ ಇವೆ. ಅವುಗಳನ್ನು ಗಮನಿಸುವವರ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲೇ ಇದೆ. ಫೇಸ್ಬುಕ್, ವಾಟ್ಸಾಪ್‍ನಂತಹ ಮಾಧ್ಯಮಗಳಲ್ಲೂ ಸಾಹಿತ್ಯದ ಗಂಭೀರ ಚರ್ಚೆಗಳಾಗುವುದಿದೆ. ಕೊರೋನ ಒಂದು ನೆಪವಾಗಿ ಮುಖ್ಯಭೂಮಿಕೆಗೆ ಬಂದ ಆನ್ಲೈನ್ ವೇದಿಕೆಗಳು, ಇತ್ತೀಚೆಗೆ ಜನಪ್ರಿಯವಾದ ಕ್ಲಬ್‍ಹೌಸ್ – ಇವನ್ನೆಲ್ಲ ನಾವು ಕಡೆಗಣಿಸುವಂತಿಲ್ಲ.

ಹಾಗೆ ನೋಡಿದರೆ, ಯುವಕರಲ್ಲಿ ಸಾಹಿತ್ಯಾಸಕ್ತಿ ಕುಸಿದಿದೆ ಎಂದು ಸಾರಾಸಗಟಾಗಿ ಹೇಳಿಬಿಡುವಂತಿಲ್ಲ. ಅವರು ಬಯಸುವ ಸಾಹಿತ್ಯ ಹಾಗೂ ಅದು ಅನಾವರಣಗೊಳ್ಳುವ ಮಾಧ್ಯಮದ ಸ್ವರೂಪ ಬದಲಾಗಿದೆ ಎಂದು ಅರ್ಥಮಾಡಿಕೊಳ್ಳಬೇಕು.  ಪುಸ್ತಕ ಹಿಡಿದು ಓದುವವರಿಗಿಂತ ಮೊಬೈಲ್, ಕಂಪ್ಯೂಟರ್, ಟ್ಯಾಬ್ ಅಥವಾ ಕಿಂಡಲ್ ಮೂಲಕ ಓದುವವರ ಪ್ರಮಾಣ ಹೆಚ್ಚಾಗುತ್ತಿದೆ. ಈಗಿನ ಹೊಸ ತಲೆಮಾರಿಗೆ ಈ ಪರಿಕರಗಳು ಹೆಚ್ಚು ಆಕರ್ಷಕವೂ, ಅನುಕೂಲಕರವೂ ಆಗಿರಬಹುದು. ಅವರಿಗೆ ನಾವು ಪುಸ್ತಕಗಳ ಹಾರ್ಡ್ ಪ್ರತಿಯನ್ನೇ ಓದಿ ಎಂದು ಒತ್ತಾಯಿಸುವುದರಲ್ಲಿ ಅರ್ಥವಿಲ್ಲ. ಅವರು ಬಯಸುವ ಮಾದರಿಗೆ ಬದಲಾಯಿಸಿಕೊಡುವುದು ಹೆಚ್ಚು ಪ್ರಶಸ್ತ. ಕಾಲ ಬದಲಾದಂತೆ ಜನರ ಅವಶ್ಯಕತೆ, ಆದ್ಯತೆಗಳಲ್ಲಿ ಬದಲಾವಣೆ ಉಂಟಾಗುವುದು ವಿಚಿತ್ರವೇನೂ ಅಲ್ಲ. ಈ ಬದಲಾವಣೆಯನ್ನು ಗಮನಿಸದೆ, ಅದಕ್ಕೆ ಹೊಂದಿಕೊಳ್ಳದೆ ಹೋದರೆ ನಷ್ಟವೇ ಹೆಚ್ಚು.

‘ಸಾಹಿತ್ಯ ಮತ್ತು ಮಾಧ್ಯಮ’ ವಿಚಾರವನ್ನು ಧನಾತ್ಮಕ ದೃಷ್ಟಿಕೋನದಿಂದ ನೋಡುತ್ತಾ ಹೋದರೆ ಈ ಬಗೆಯ ಆಯಾಮಗಳು ಗೊತ್ತಾಗುತ್ತಾ ಹೋಗುತ್ತವೆ. ಆದ್ದರಿಂದ ನಿರಾಶೆಗೊಳ್ಳದೆ, ಬದಲಾದ ಕಾಲದಲ್ಲಿ ಒಟ್ಟಾರೆ ಸಮಾಜ ಮಾಡಬಹುದಾದ್ದೇನು ಎಂದು ಯೋಚಿಸುವುದು, ಮತ್ತು ಇರುವ ಅವಕಾಶಗಳನ್ನು ಗರಿಷ್ಠ ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಡಿಸೆಂಬರ್ 24, 2021

ಸಾಹಿತ್ಯ ಪ್ರೀತಿ ಮತ್ತು ಹೊಸ ತಲೆಮಾರಿನ ವೈರುಧ್ಯ

ಡಿಸೆಂಬರ್ 2021ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಈಗಿನ ಯುವಜನರಲ್ಲಿ ಭಾಷೆ-ಸಾಹಿತ್ಯ ಪ್ರೀತಿ ಹೇಗಿದೆ ಎಂದು ಸೂಕ್ಷ್ಮವಾಗಿ ಗಮನಿಸಿದರೆ ಎರಡು ವೈರುಧ್ಯಗಳು ಗೋಚರಿಸುತ್ತವೆ: ಒಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಸಾಕಷ್ಟು ಅಭಿಮಾನ ಬೆಳೆಸಿಕೊಂಡಿರುವ, ಸಾಹಿತ್ಯದ ಅಧ್ಯಯನ ಮತ್ತು ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಯುವಜನತೆ; ಇನ್ನೊಂದು ಕಡೆ, ಭಾಷೆ-ಸಾಹಿತ್ಯದ ಕುರಿತು ಯಾವ ಆದರಾಭಿಮಾನವೂ ಇಲ್ಲದ, ಬದುಕು ಹಾಗೂ ಭವಿಷ್ಯದ ಕುರಿತು ಹೇರಳವಾದ ಸಿನಿಕತೆಯನ್ನು ಬೆಳೆಸಿಕೊಂಡಿರುವ ಯುವಜನತೆ. ಈ ಎರಡು ಅಂಚುಗಳು ನಮ್ಮನ್ನು ಚಕಿತರನ್ನಾಗಿಯೂ, ವಿಷಣ್ಣರನ್ನಾಗಿಯೂ ಮಾಡುವುದಿದೆ. ಸಮಾಜದಲ್ಲಿರುವ ಎಲ್ಲರೂ ಏಕಪ್ರಕಾರವಾಗಿ ಸಾಹಿತ್ಯ-ಮಾನವಿಕಶಾಸ್ತ್ರಗಳ ಬಗ್ಗೆ ಪ್ರೀತಿಯನ್ನೋ ಅಭಿಮಾನವನ್ನೋ ಬೆಳೆಸಿಕೊಳ್ಳಬೇಕಾಗಿಲ್ಲ ನಿಜ, ಆದರೆ ಅವುಗಳಿಂದ ತೀರಾ ದೂರಸರಿದರೆ ಬದುಕಿಗೇನು ಸ್ವಾರಸ್ಯ? ನಾವಿರುವ ಕ್ಷೇತ್ರ, ಮಾಡುತ್ತಿರುವ ಉದ್ಯೋಗಗಳು ಭಿನ್ನವಾಗಿರಬಹುದು, ಆದರೆ ಭಾಷೆ-ಸಾಹಿತ್ಯದ ಪ್ರೀತಿ ಒಟ್ಟಾರೆ ಜೀವನಕ್ಕೆ ತಂದುಕೊಡುವ ವೈವಿಧ್ಯತೆ, ಜೀವಂತಿಕೆ, ಚೆಲುವು, ಒಲವುಗಳು ಸುಖಾಸುಮ್ಮನೆ ಹೇಗೆ ಬರುವುದು ಸಾಧ್ಯ?

ಇಂತಹದೊಂದು ಸನ್ನಿವೇಶ ಉದ್ಭವಿಸಲು ಏನು ಕಾರಣ ಎಂದು ಯೋಚಿಸಿದರೆ ಅನೇಕ ಅಂಶಗಳು ಕಣ್ಣಮುಂದೆ ಬರುತ್ತವೆ. ಕಾಲದ ಓಟದಲ್ಲಿ ನಾವು ಬಹಳ ದೂರ ಸಾಗಿ ಬಂದಿದ್ದೇವೆ. ಬದುಕಿನ ಉದ್ದೇಶ, ವಿಧಾನ, ದೃಷ್ಟಿಕೋನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ಬದುಕಿನ ಮೊದಲ ಹದಿನೈದು-ಇಪ್ಪತ್ತು ವರ್ಷಗಳು ಅನೇಕ ಪ್ರಭಾವಗಳಿಂದ ಸುತ್ತುವರಿದಿವೆ. ಜೀವನ ರೂಪೀಕರಣಗೊಳ್ಳುವ ಈ ಸುವರ್ಣಕಾಲದಲ್ಲಿ ವಾಸ್ತವವಾಗಿಯೂ ಏನು ನಡೆಯುತ್ತಿದೆ ಎಂದು ನೋಡೋಣ.

ಕೌಟುಂಬಿಕ ವಾತಾವರಣ:

ಬಾಲ್ಯಕಾಲವು ನಮ್ಮ ಜೀವನವನ್ನು ನಿರ್ಧರಿಸುವ ಬಹುಮುಖ್ಯ ಘಟ್ಟ ಎಂಬುದನ್ನು ಎಲ್ಲರೂ ಬಲ್ಲೆವು. ಈ ಬಾಲ್ಯ ಎಷ್ಟರಮಟ್ಟಿಗೆ ಬಾಲ್ಯವಾಗಿ ಉಳಿದಿದೆ? ಯೋಚಿಸಿದರೆ ಅನೇಕ ಸಲ ಆತಂಕವಾಗುತ್ತದೆ. ಸಮಾಜದ ವಿನ್ಯಾಸ, ಚಲನೆ, ಚಟುವಟಿಕೆಗಳು ಬದಲಾಗಿವೆ. ಕುಟುಂಬದ ಸ್ವರೂಪದಲ್ಲಿ ಮಹತ್ವದ ಸ್ಥಿತ್ಯಂತರಗಳುಂಟಾಗಿವೆ. ಕೂಡುಕುಟುಂಬಗಳು ಇಲ್ಲವೇ ಇಲ್ಲ ಎಂಬಷ್ಟು ಇಲ್ಲ. ನ್ಯೂಕ್ಲಿಯರ್ ಕುಟುಂಬಗಳ ದೆಸೆಯಲ್ಲಿ ಅಜ್ಜಿ, ತಾತ, ಅತ್ತೆ, ಮಾವ, ದೊಡ್ಡಪ್ಪ, ಚಿಕ್ಕಮ್ಮ, ಅತ್ತಿಗೆ, ಸೊಸೆ ಇತ್ಯಾದಿ ಸಂಬಂಧಗಳೆಲ್ಲ ಬಹುತೇಕ ಹೊರಟುಹೋಗಿವೆ. ಪರಿಚಯವಾಗುವ ಹೊಸ ವ್ಯಕ್ತಿ ಒಂದೋ ಅಂಕಲ್ ಇಲ್ಲವೇ ಆಂಟಿ. 

ಕೌಟುಂಬಿಕ ಸಮಾರಂಭಗಳು, ಹಬ್ಬ-ಹರಿದಿನಗಳು ಇತ್ಯಾದಿಗಳೆಲ್ಲ ಮಾಯವಾಗಿವೆ; ಇದ್ದರೂ ಎಲ್ಲವೂ ಯಾಂತ್ರಿಕ, ಎಲ್ಲದರಲ್ಲೂ ವಾಣಿಜ್ಯಕ ದೃಷ್ಟಿಕೋನ. ಎಲ್ಲರೂ ತಮ್ಮ ಉದ್ಯೋಗ, ಸಾಧನೆಗಳಲ್ಲಿ ವ್ಯಸ್ತರಾಗಿದ್ದಾರೆ. ಬಾಲ್ಯಕಾಲದಲ್ಲಿ ವ್ಯಕ್ತಿಯ ಭಾವಪೋಷಣೆ ಮಾಡುವ ಸಹಜ ಸುಂದರ ವಾತಾವರಣ ಈಗ ಹಳ್ಳಿಗಳಲ್ಲೂ ಉಳಿದುಕೊಂಡಿಲ್ಲ. ಮನೆಗಳಲ್ಲಿ ಪತ್ರಿಕೆ, ಪುಸ್ತಕ ಓದುವ ವಾತಾವರಣ ಇದ್ದರೆ ಮಕ್ಕಳಲ್ಲೂ ಆ ಪ್ರೀತಿ ಸಹಜವಾಗಿಯೇ ಬೆಳೆಯುತ್ತದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಬದುಕನ್ನು ಸ್ಪರ್ಧೆಯನ್ನಾಗಿ ತೆಗೆದುಕೊಂಡಿರುವ ಅನೇಕ ಕುಟುಂಬಗಳಲ್ಲಿ ಇಂತಹ ಸನ್ನಿವೇಶ ನಿಧಾನಕ್ಕೆ ಮರೆಯಾಗುತ್ತಿದೆ. ದೊರೆತ ಅಲ್ಪಸ್ವಲ್ಪ ಸಮಯವನ್ನು ಮೊಬೈಲ್, ಟಿವಿಗಳು ಆವರಿಸಿಕೊಂಡಿವೆ.

ಶಾಲಾ ಪರಿಸರ:

ಮೊದಲ ಪಾಠಶಾಲೆಯೆನಿಸಿದ ಮನೆಯಲ್ಲಿ ಆರಂಭವಾದ ಭಾವಪೋಷಣೆ ಶಾಲೆಯಲ್ಲಿ ಮುಂದುವರಿಯಬೇಕು; ಅದು ಎರಡನೆಯ ಮನೆ, ಅಥವಾ ಮನೆಯ ವಿಸ್ತರಣೆ. ಆದರೆ ಅಂತಹ ವಾತಾವರಣವೂ ಉಳಿದುಕೊಂಡಿಲ್ಲ. ಬದುಕಿನ ವೇಗದ ಓಟಕ್ಕೆ ಶಾಲೆಯಲ್ಲಿಯೇ ಟೊಂಕ ಕಟ್ಟಿಯಾಯಿತು. ಇದು ಸ್ಪರ್ಧಾತ್ಮಕ ಜಗತ್ತು, ನೀನು ಓಡದೇ ಇದ್ದರೆ ಹಿಂದೆ ಉಳಿಯುತ್ತೀಯಾ ಎಂಬ ಮಂತ್ರಪಠನೆ ಅಲ್ಲಿಯೇ ಆರಂಭವಾಗುತ್ತದೆ. ಅಲ್ಲಿಗೆ ಪಠ್ಯಪುಸ್ತಕ, ಪರೀಕ್ಷೆಗಳ ಹೊರತಾಗಿ ಬೇರೇನೂ ಬೇಡ ಎಂಬ ಮನಸ್ಥಿತಿ ಮೂಡಿಯಾಯಿತು; ಈ ಮಕ್ಕಳಿಗೆ ಇನ್ನೇನೂ ಮುಖ್ಯವಲ್ಲ. ಮೊದಲಾದರೆ ಆರಂಭದ ಆರು ವರ್ಷದ ಅವಧಿಯಾದರೂ ಮನೆಯಲ್ಲಿಯೇ ಕಳೆದುಹೋಗುತ್ತಿತ್ತು. ಈಗ ಮಗುವಿಗೆ ಉಸಿರಾಡಲೂ ಸಮಯವಿಲ್ಲ. ಅಂಬೆಗಾಲಿಕ್ಕುವ ಮಗು ಹಾಗೆ ಎದ್ದುನಿಲ್ಲಲು ಪ್ರಯತ್ನಿಸುವ ಹೊತ್ತಿಗೆ ಪ್ಲೇಹೋಂ ಸೇರಿಯಾಯಿತು. ಆಮೇಲೆ ಪ್ರೀನರ್ಸರಿ, ನರ್ಸರಿ, ಕೇಜಿಗಳ ಗೌಜು ಆರಂಭ. ಹಾಗೆ ಕಳೆದುಹೋದ ಮಗು ಮತ್ತೆ ಕೈಗೆ ಸಿಗುವುದೇ ಇಲ್ಲ.

ಬದಲಾದ ವಿದ್ಯಾರ್ಥಿ ಜೀವನ:

ದಶಕಗಳ ಹಿಂದೆ ಶಾಲಾ-ಕಾಲೇಜುಗಳಲ್ಲಿ ಭಾಷೆ-ಸಾಹಿತ್ಯ-ಸಂಸ್ಕೃತಿಯ ಪ್ರೀತಿ ಪೋಷಣೆಗೆ ಹೇರಳ ಅವಕಾಶಗಳಿದ್ದವು. ವಾರಕ್ಕೊಂದಾದರೂ ಚರ್ಚಾಕೂಟ, ಆಗಿಂದಾಗ್ಗೆ ಸ್ಪರ್ಧೆಗಳು, ವ್ಯಕ್ತಿತ್ವ ವಿಕಸನ ಶಿಬಿರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರವಾಸ, ಸಂಭ್ರಮದ ವಾರ್ಷಿಕೋತ್ಸವ- ಎಲ್ಲವೂ ವಿದ್ಯಾರ್ಥಿ ಬದುಕಿನ ಭಾಗವಾಗಿದ್ದವು. ಈಗ ಅವುಗಳಿಗೆ ಬಿಡುವಿಲ್ಲ, ಇದ್ದರೂ ಎಲ್ಲವೂ ಪ್ರಚಾರಕ್ಕಾಗಿ ಎಂಬಷ್ಟು ಕೃತಕ.

ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆ ಎಂಬುದೇ ಇಲ್ಲ. ಗ್ರಂಥಾಲದ ಅವಧಿ, ಆಟದ ಅವಧಿಗಳಿಲ್ಲ. ಅನೇಕ ಶಾಲೆ-ಕಾಲೇಜುಗಳಲ್ಲಿ ಗ್ರಂಥಾಲಯಗಳೇ ಇಲ್ಲ. ಲಕ್ಷಗಟ್ಟಲೆ ಶುಲ್ಕ ಪೀಕುವ ಸಂಸ್ಥೆಗಳು ಎಲ್ಲವನ್ನೂ ‘ರೆಡಿ-ಟು-ಈಟ್’ ಮಾದರಿಯಲ್ಲಿ ವಿದ್ಯಾರ್ಥಿಗಳೆದುರು ತಂದು ಸುರಿಯುತ್ತಿರುವಾಗ ಅವರಿಗೆ ಗ್ರಂಥಾಲಯ ಅವಶ್ಯಕ ಎಂದು ಅನಿಸುವುದೂ ಇಲ್ಲ. ಗ್ರಂಥಾಲಯ ಮಾಡಿ ಜಾಗ ಕಳೆಯುವ ಬದಲು ಹೊಸದೊಂದು ಸೆಕ್ಷನ್ ತೆರೆಯಬಹುದಲ್ಲ ಎಂಬುದೇ ಈ ಸಿರಿ ಗರ ಬಡಿದ ಆಡಳಿತ ಮಂಡಳಿಗಳ ಯೋಚನೆ.

ವೃತ್ತಿಪರ ಕೋರ್ಸೇ ಸರ್ವಸ್ವ:

ಸ್ಪರ್ಧೆಯಲ್ಲಿ ಗೆಲ್ಲುವುದೇ ಶ್ರೇಷ್ಠ ಎಂಬ ಭಾವನೆ ಬಿತ್ತುವುದರ ಜೊತೆಗೆ ಈ ಶಿಕ್ಷಣ ಸಂಸ್ಥೆಗಳು ವೃತ್ತಿಪರ ಕೋರ್ಸುಗಳಿಂದಲೇ ಜೀವನ ಉದ್ಧಾರವೆಂಬ ಭಾವನೆಯನ್ನು ವಿದ್ಯಾರ್ಥಿಗಳಲ್ಲೂ ಪೋಷಕರಲ್ಲೂ ಪರಿಣಾಮಕಾರಿಯಾಗಿ ಬೆಳೆಸಿಬಿಟ್ಟಿವೆ. ಇದರ ಹಿಂದಿರುವುದು ಇವರ ದುಡ್ಡಿನ ದುರಾಸೆಯ ರಾಜಕಾರಣ. ಇಂತಹದೊಂದು ಮನಸ್ಥಿತಿಯನ್ನು ಬೆಳೆಸದೆ ಹೋದರೆ ಲಕ್ಷಗಟ್ಟಲೆ ಶುಲ್ಕ ವಿಧಿಸುವುದಾದರೂ ಹೇಗೆ?

ಎಂಬಲ್ಲಿಗೆ ಇಂಟರ್‍ನ್ಯಾಷನಲ್ ಶಾಲೆ-ಕಾಲೇಜುಗಳ ಮೆರವಣಿಗೆ, ಎಂಟನೇ ತರಗತಿಯಿಂದಲೇ ಇಂಜಿನಿಯರಿಂಗ್-ಮೆಡಿಕಲ್ ಸೀಟುಗಳಿಗೆ ತರಬೇತಿ, ಇದೇ ಅಧ್ಯಾಪಕರು ಹೊರಗೆ ತಮ್ಮದೇ ಕೋಚಿಂಗೆ ಸೆಂಟರುಗಳನ್ನು ತೆರೆದು ಕೋಚಿಂಗ್‍ಗೆ ಸೇರದ ವಿದ್ಯಾರ್ಥಿಗಳು ನಿಷ್ಪ್ರಯೋಜಕರು ಎಂಬ ಭಾವನೆಯನ್ನು ಬಿತ್ತುವುದು: ಎಲ್ಲವೂ ಆರಂಭವಾಯಿತು. ಜತೆಗೆ ವೃತ್ತಿಪರ ಕೋರ್ಸುಗಳನ್ನು ಓದುವವರಿಗೆ ಭಾಷಾ ಪಾಠಗಳು ಮುಖ್ಯವಲ್ಲ ಎಂಬ ಭಾವನೆಯನ್ನೂ ವ್ಯವಸ್ಥಿತವಾಗಿ ಬಿತ್ತುವ ಪ್ರವೃತ್ತಿ ಆರಂಭವಾಯಿತು. ಇವರಿಗೆಲ್ಲ ಭಾಷಾ ಶಿಕ್ಷಕರುಗಳು ಎಂದರೆ ಉಳಿದ ಅಧ್ಯಾಪಕರಿಗೆ ಪಾಠದ ನಡುವೆ ಕೊಂಚ ವಿರಾಮ ಒದಗಿಸುವ ಗ್ಯಾಪ್ ಫಿಲ್ಲರುಗಳು ಮತ್ತು ವಿದ್ಯಾರ್ಥಿಗಳಿಗೆ ಒಂದಿಷ್ಟು ನಿರಾಳತೆ ನೀಡುವ ಹಾಸ್ಯಗಾರರು.

ಅಧ್ಯಾಪಕರು ಹೇಗಿದ್ದಾರೆ?

ವಿದ್ಯಾರ್ಥಿಗಳಲ್ಲಿ ಸಾಹಿತ್ಯ-ಸಂಸ್ಕೃತಿ-ಭಾಷೆಗಳ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವಲ್ಲಿ ಅಧ್ಯಾಪಕರ ಪಾತ್ರವೂ ಮಹತ್ವದ್ದು. ಈ ವಿಚಾರದಲ್ಲಿ ಅವರು ಏನು ಮಾಡುತ್ತಿದ್ದಾರೆ ಎಂದರೆ ಮತ್ತೆ ಅಲ್ಲಿಯೂ ಕಾಡುವುದು ನಿರಾಶೆಯೇ. ಪ್ರಾಥಮಿಕ ಶಾಲೆಯಲ್ಲಿ ಭಾಷೆಯನ್ನು ಸುಪುಷ್ಟವಾಗಿ ಬೋಧಿಸುವ ಕೆಲಸ ಬಹುತೇಕ ಕಡೆ ಯಶಸ್ವಿಯಾಗಿ ನಡೆದಿಲ್ಲ. ಅಧ್ಯಾಪಕರೇ ಸಮರ್ಪಕವಾಗಿ ಕಲಿತಿಲ್ಲವೋ, ಮಕ್ಕಳಿಗೆ ಕಲಿಸುವಲ್ಲಿ ಆಸಕ್ತಿ-ಬದ್ಧತೆಗಳಿಲ್ಲವೋ, ಅಂತೂ ಎಲ್ಲಿ ಗಟ್ಟಿ ತಳಹದಿ ದೊರೆಯಬೇಕಿತ್ತೋ ಅಲ್ಲಿ ದೊರೆಯುತ್ತಿಲ್ಲ. ಇದೇ ಸಡಿಲ ಪಾಯದೊಂದಿಗೆ ಮಕ್ಕಳು ಪ್ರೌಢಶಾಲೆ, ಅಲ್ಲಿಂದ ಪಿಯುಸಿ, ಅಲ್ಲಿಂದ ಕಾಲೇಜುಗಳಿಗೆ ಭಡ್ತಿ ಪಡೆಯುತ್ತಿದ್ದಾರೆ. ಆಗಿರುವ ತಪ್ಪುಗಳಿಗೆ ಒಬ್ಬರು ಇನ್ನೊಬ್ಬರೆಡೆಗೆ ಬೆರಳು ತೋರಿಸುವ ಕೆಲಸ ನಡೆಯುತ್ತಿದೆಯೇ ಹೊರತು ಆತ್ಮಾವಲೋಕನ ನಡೆಸಲು ಯಾರೂ ಸಿದ್ಧರಿಲ್ಲ. ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲೂ ಕಾಗುಣಿತ ತಿದ್ದಿಲ್ಲ, ಸ್ವತಂತ್ರವಾಗಿ ಅರ್ಥಪೂರ್ಣ ವಾಕ್ಯಗಳನ್ನು ರಚಿಸಲು ಬರುತ್ತಿಲ್ಲ ಎಂದರೆ ಏನರ್ಥ?

ಅಧ್ಯಾಪಕರು ಮನಸ್ಸು ಮಾಡಿದರೆ ಭಾಷೆ, ಸಾಹಿತ್ಯ ಎರಡರ ಕಡೆಗೂ ಮಕ್ಕಳನ್ನು ಧಾರಾಳವಾಗಿ ಸೆಳೆಯಬಹುದು. ಪ್ರೌಢಶಾಲೆ, ಕಾಲೇಜು ಹಂತದಲ್ಲಂತೂ ಇದಕ್ಕೆ ಹೇರಳ ಅವಕಾಶ ಇದೆ. ಸಾಹಿತ್ಯ ಪ್ರೀತಿ ಮೂಡಿಸುವ ನಾಲ್ಕು ಒಳ್ಳೆಯ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ಕಡೇ ಪಕ್ಷ ತಮ್ಮ ವಿದ್ಯಾರ್ಥಿಗಳಿಗೆ ಒಳ್ಳೊಳ್ಳೆಯ ಪುಸ್ತಕಗಳನ್ನು ಓದಿಸುವುದು, ಅವರು ಆ ಬಗ್ಗೆ ವಿಚಾರ ವಿನಿಮಯ ಮಾಡುವಂತೆ ನೋಡಿಕೊಳ್ಳುವುದು- ಇಷ್ಟನ್ನು ಮಾಡಿದರೂ ಹೊಸ ತಲೆಮಾರಿನ ಹುಡುಗರಿಗೆ ಉಪಕಾರ ಮಾಡಿದ ಪುಣ್ಯ ಅವರಿಗೆ ಸಲ್ಲುತ್ತದೆ. ಆದರೆ ಅವರಿಗೇ ಸ್ವತಃ ಭಾಷೆ-ಸಾಹಿತ್ಯಗಳ ಮೇಲೆ ಅಭಿಮಾನ ಇಲ್ಲದೇ ಹೋದರೆ ಮುಂದಿನದನ್ನು ಮಾತಾಡುವುದು ವ್ಯರ್ಥ. ಸಂಬಳ, ಭಡ್ತಿ, ವರ್ಗಾವಣೆ- ವೃತ್ತಿಜೀವನಕ್ಕೆ ಮುಖ್ಯವಾದ ವಿಚಾರಗಳು ನಿಜ, ಆದರೆ ಉಳಿದ ಉದ್ಯೋಗಗಳಿಗಿಂತ ಭಿನ್ನವಾದ ಬದ್ಧತೆಯೊಂದು ಅಧ್ಯಾಪಕರಿಗೆ ಇದೆಯಲ್ಲ?

ಪಠ್ಯಪುಸ್ತಕಗಳ ಕಥೆ 

ಪ್ರಾಥಮಿಕ ಹಂತದಿಂದ ತೊಡಗಿ ಉನ್ನತಶಿಕ್ಷಣದವರೆಗೆ ಪಠ್ಯಪುಸ್ತಕಗಳ ಸ್ವರೂಪವೇ ಬದಲಾಗಿದೆ. ಮೂವತ್ತು ವರ್ಷಗಳ ಹಿಂದಿನ ಪಠ್ಯವನ್ನೇ ಈಗಲೂ ಬೋಧಿಸಲು ಬರುತ್ತದೆಯೇ ಎಂಬುದು ನ್ಯಾಯವಾದ ಪ್ರಶ್ನೆ. ಆದರೆ ಕಾಲ ಎಷ್ಟೇ ಬದಲಾದರೂ ಶಿಕ್ಷಣದ ಮೂಲ ಉದ್ದೇಶ ಬದಲಾಗಬಾರದಲ್ಲ? ಹೊಸ ಕಾಲಕ್ಕೆ ಹೊಂದುವ ನೆಪದಲ್ಲಿ, ಹೊಸ ಚಿಂತನೆಗಳನ್ನು ಬೆಳೆಸುವ ನೆಪದಲ್ಲಿ ನಾವು ಪಠ್ಯಪುಸ್ತಕಗಳ ಸೊಗಸನ್ನೇ ಹಾಳುಗೆಡವಿದ್ದೇವೆಯೇ ಎಂದು ಅನೇಕ ಸಲ ಅನಿಸುವುದಿದೆ. 

ಖಾಸಗಿ ಶಾಲೆಗಳ ದರ್ಬಾರಿನಲ್ಲಂತೂ ಪಠ್ಯಪುಸ್ತಕಗಳಲ್ಲಿ ವಿವಿಧ ಮಾದರಿಗಳು ಬಂದಿವೆ. ಒಂದೊಂದು ಶಾಲೆ ಒಂದೊಂದು ‘ಕಂಪೆನಿ’ಯ ಪಠ್ಯಕ್ರಮವನ್ನು ಅನುಸರಿಸುವುದೂ ಇದೆ. ಈ ಪುಸ್ತಕಗಳೆಲ್ಲ ಬಣ್ಣಬಣ್ಣ, ಫಳಫಳ, ಸಾಮಾನ್ಯರ ಕೈಗೆ ಎಟುಕದಷ್ಟು ತುಟ್ಟಿ. ಹಾಗೆ ನೋಡಿದರೆ ಅವುಗಳಲ್ಲಿರುವ ಹೂರಣವೂ ಚೆನ್ನಾಗಿದೆ, ಆದರೆ ದಶಕದ ಹಿಂದೆ ಇರುತ್ತಿದ್ದ ಪಠ್ಯಗಳ ಸೊಗಸು ಅಲ್ಲಿ ಕಾಣುತ್ತಿಲ್ಲ. ಅವೆಲ್ಲ ಮುಗ್ಧತೆ ಮಾಸಿದ ಮಕ್ಕಳಂತೆ ಪೇಲವವಾಗಿವೆ ಎನಿಸುತ್ತದೆ. ಬಾಲ್ಯಕ್ಕೆ ತರ್ಕಕ್ಕಿಂತಲೂ ಭಾವಪೋಷಣೆಯೇ ಮುಖ್ಯವಲ್ಲವೇ?

ಹೊಸ ಸಾಧ್ಯತೆಗಳು

ಕಾಲದೊಂದಿಗೆ ಓದು-ಅಧ್ಯಯನದ ಸ್ವರೂಪ ಬದಲಾಗಿದೆ. ಮಾಧ್ಯಮಗಳು ಬದಲಾಗಿವೆ. ಹೊಸ ತಲೆಮಾರಿನ ಆಯ್ಕೆಗಳು ಬದಲಾಗಿವೆ. ಎಲ್ಲವನ್ನೂ ಮುದ್ರಿತ ಪುಸ್ತಕ ರೂಪದಲ್ಲೇ ಓದಬೇಕಾಗಿಲ್ಲ. ಯುವಕರು ಅಂತರಜಾಲವನ್ನು ಧಾರಾಳವಾಗಿ ಬಳಸುತ್ತಿದ್ದಾರೆ. ಅಂತರಜಾಲದ ಬಳಕೆಯೂ ಸಾಹಿತ್ಯದ ಓದಿನ ಒಂದು ಪ್ರಮುಖ ಭಾಗ ಆಗಿರಬಹುದು. ಪುಸ್ತಕಗಳು ಡಿಜಿಟಲ್ ರೂಪದಲ್ಲಿ, ಆಡಿಯೋ ರೂಪದಲ್ಲಿ ದೊರೆಯುತ್ತಿವೆ. ಹೊಸ ತಲೆಮಾರಿಗೆ ಅವುಗಳನ್ನು ಬಳಸುವುದು ಸುಲಭವೆನಿಸಬಹುದು. ಹೀಗಾಗಿ ಇಂದಿನ ವಿದ್ಯಾರ್ಥಿಗಳು ಮುದ್ರಿತ ಪುಸ್ತಕಗಳನ್ನು ಓದುವುದು ಕಡಿಮೆಯಾಗಿದೆ ಎಂದು ತೀರಾ ಆತಂಕಪಡುವ ಅಗತ್ಯವೇನೂ ಇಲ್ಲ. ಆದರೆ ಈ ಪ್ರವೃತ್ತಿಯಲ್ಲಾದರೂ ಇರುವವರ ಸಂಖ್ಯೆ ಎಷ್ಟು ಎಂದು ಯೋಚಿಸಬೇಕು.

ಕಂಪ್ಯೂಟರ್, ಮೊಬೈಲ್ ಬಳಸುವ ಯುವಕರೆಲ್ಲರೂ ಅವುಗಳನ್ನು ಸಾಹಿತ್ಯ-ಭಾಷೆ ಇತ್ಯಾದಿಗಳ ಅಭ್ಯಾಸಕ್ಕೂ ಬಳಸುತ್ತಿದ್ದಾರೆ ಎಂದು ಹೇಳಲು ಬರುವುದಿಲ್ಲ. ಬಹುಪಾಲು ಮಂದಿ ಸೋಶಿಯಲ್ ಮೀಡಿಯಾದಲ್ಲಿ, ವೀಡಿಯೋ ಗೇಮ್‍ಗಳಲ್ಲಿ ಕಳೆದುಹೋಗುತ್ತಿದ್ದಾರೆ. ಆಧುನಿಕ ಮಾಧ್ಯಮಗಳನ್ನು ಬಳಸುತ್ತಿರುವ ಈ ತಲೆಮಾರು ಅವುಗಳನ್ನು ಒಳ್ಳೆಯ ಓದು, ಅಧ್ಯಯನಕ್ಕೆ ಬಳಸುವಂತೆ ಮಾಡುವ ಜವಾಬ್ದಾರಿ ನಾಗರಿಕ ಸಮಾಜಕ್ಕೆ ಇದೆ.

ಕೊರೋನೋತ್ತರ ಕಾಲದಲ್ಲಂತೂ ಶಿಕ್ಷಣ-ಸಂವಹನದ ಪರಿಕರಗಳು ಆಮೂಲಾಗ್ರ ಬದಲಾವಣೆ ಕಂಡಿವೆ. ಗೂಗಲ್ ಮೀಟ್, ಜೂಮ್‍ನಂತಹ ಆನ್ಲೈನ್ ವೇದಿಕೆಗಳು ಪ್ರಸಿದ್ಧಿಗೆ ಬಂದಿವೆ. ಇವುಗಳು ಭಾಷೆ, ಸಾಹಿತ್ಯ, ಸಮಾಜ ಹಿತಚಿಂತನೆಯ ಸಂವಾದಗಳಿಗೂ ಒಳ್ಳೆಯ ವೇದಿಕೆಗಳಾಗಿ ಬಳಕೆಯಾಗುತ್ತಿವೆ. ಕ್ಲಬ್‍ಹೌಸಿನಂತಹ ಪರಿಕರಗಳನ್ನೂ ಒಳ್ಳೆಯ ಅಧ್ಯಯನಕೂಟಗಳನ್ನಾಗಿ ಬಳಸಿಕೊಳ್ಳುವುದಕ್ಕೆ ಅವಕಾಶವಿದೆ. ಉಪಕ್ರಮ ವಹಿಸುವವರಿದ್ದರೆ ಅವರನ್ನು ಅನುಸರಿಸುವ ಮಂದಿಯೂ ಇರುತ್ತಾರೆ. ಇಂತಹ ಸಾಕಷ್ಟು ಪ್ರಯತ್ನಗಳೂ ವಿದ್ಯಾರ್ಥಿಗಳ ನಡುವೆ, ಯುವತಲೆಮಾರಿನ ನಡುವೆ ಈಚೆಗೆ ನಡೆಯುತ್ತಿವೆ. ಒಳ್ಳೆಯದು ಎಲ್ಲಿ, ಹೇಗೆ ನಡೆದರೂ ಸಂತೋಷದ ವಿಷಯವೇ. ಆದರೆ ಇವೆಲ್ಲ ಆರಂಭಶೂರತನ ಆಗಬಾರದು ಅಷ್ಟೇ.

- ಸಿಬಂತಿ ಪದ್ಮನಾಭ ಕೆ. ವಿ.