ಬುಧವಾರ, ಡಿಸೆಂಬರ್ 22, 2021

ಶುಭಾಶಯಗಳ ನಡುವೆ ಬಂದ ಒಂದು ವಿಷಾದಪತ್ರ

ಹ್ಯಾಪಿ ಬರ್ತ್ ಡೇ ಹ್ಯಾಪಿ ಬರ್ತ್ ಡೇ.. ಒಂದರ ಮೇಲೊಂದು ಬರುತ್ತಿದ್ದ ಭರಪೂರ ಸಂದೇಶಗಳ ನಡುವೆ ಒಂದು ವಿಷಾದಪತ್ರವೂ
ನುಸುಳಿಕೊಂಡಿತ್ತು.

ಅದು ನವದೆಹಲಿಯ ಫುಲ್'ಬ್ರೈಟ್ ಕಮೀಷನ್ನಿಂದ ಬಂದ ಈ-ಮೇಲು: "2022-23ರ Fulbright-Nehru Postdoctoral Research Fellowshipಗಾಗಿ ನೀವು ಸಲ್ಲಿಸಿದ ಅರ್ಜಿ ಮುಂದಿನ ಪ್ರಕ್ರಿಯೆಗೆ ಆಯ್ಕೆಯಾಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇವೆ. ಪ್ರತೀ ಅರ್ಜಿಯ ಬಗ್ಗೆ ನಿರ್ದಿಷ್ಟ ಪ್ರತಿಕ್ರಿಯೆ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ, ಕ್ಷಮಿಸಿ. ನಿಮ್ಮ ಭವಿಷ್ಯದ ಶೈಕ್ಷಣಿಕ ಹಾಗೂ ವೃತ್ತಿ ಬದುಕಿಗೆ ಶುಭಾಶಯಗಳು." ಇದು ಪತ್ರದ ಸಾರಾಂಶ.

ಪಾಸು-ಫೇಲು ಎರಡಕ್ಕೂ ಸಿದ್ಧನಿದ್ದ ವಿದ್ಯಾರ್ಥಿಯಂತೆ ನಾನು ಫಲಿತಾಂಶವನ್ನು ನೋಡಿದ್ದರಿಂದ ಅದು ನನ್ನ ಮೇಲೆ ಅಂತಹ ಪರಿಣಾಮವನ್ನೇನೂ ಬೀರಲಿಲ್ಲ. "ಮಾಹಿತಿ ನೀಡಿದ್ದಕ್ಕೆ ಧನ್ಯವಾದ. ಆದರೆ ಅರ್ಜಿಯ ಕುರಿತ ನಿರ್ದಿಷ್ಟ ಪ್ರತಿಕ್ರಿಯೆಯನ್ನೂ ತಿಳಿಸಿದ್ದರೆ ಸ್ವಸುಧಾರಣೆಗೆ ಅನುಕೂಲವಾಗುತ್ತಿತ್ತು" ಎಂದಷ್ಟೇ ಉತ್ತರಿಸಿ, ಫೆಲೋಶಿಪ್ಪಿನ ಪ್ರಸ್ತಾವನೆಯನ್ನು ಸಾಮುಗೊಳಿಸುವಲ್ಲಿ ನೆರವಾದ ಎಲ್ಲ ಹಿರಿಯರಿಗೆ, ಗೆಳೆಯರಿಗೆ ಈ ವರ್ತಮಾನವನ್ನು ತಿಳಿಸಿ ಸುಮ್ಮನಾದೆ.

ಹಣ್ಣಾಗದ ಹೂವಿನ ಕಥೆಯನ್ನು ಬಿತ್ತರಿಸಬೇಕೇ ಎಂದು ಯೋಚಿಸಿದೆ. ಆದರೆ ಹೇಳುವುದರಿಂದ ಇದರ ಬಗ್ಗೆ ಗೊತ್ತಿಲ್ಲದ ನಾಕು ಮಂದಿಗೆ ಮುಂದಕ್ಕೆ ಪ್ರಯೋಜನವಾಗಬಹುದು ಅನಿಸಿತು. ಹಾಗಾಗಿ ಈ ಪ್ರವರ.

Fulbright-Nehru Fellowship ಭಾರತ-ಅಮೇರಿಕ ಜಂಟಿಯಾಗಿ ಕೊಡಮಾಡುವ ಒಂದು ಪ್ರತಿಷ್ಠಿತ ಫೆಲೋಶಿಪ್. ವಿದ್ಯಾರ್ಥಿಗಳು, ಅಧ್ಯಾಪಕರು, ವೃತ್ತಿಪರರು ಉನ್ನತ ವ್ಯಾಸಂಗ ಹಾಗೂ ಸಂಶೋಧನೆ ನಡೆಸುವುದಕ್ಕೆ ವಿವಿಧ ವಿದ್ಯಾರ್ಥಿವೇತನಗಳನ್ನು ಪ್ರತಿವರ್ಷವೂ ನೀಡಲಾಗುತ್ತದೆ. ಇದು 1950ರಿಂದಲೂ ಚಾಲ್ತಿಯಲ್ಲಿದೆ. ಅಮೇರಿಕವು ಇತರ 150 ದೇಶಗಳೊಂದಿಗೆ ನಡೆಸುವ ಈ ಫೆಲೋಶಿಪ್ ಯೋಜನೆ ವಿಶ್ವದಲ್ಲೇ ಅತ್ಯಂತ ದೊಡ್ಡ ವಿದ್ಯಾರ್ಥಿವೇತನ ಯೋಜನೆಯೆಂಬ ಹೆಗ್ಗಳಿಕೆ ಹೊಂದಿದೆ.

ನನ್ನ ಕೆಲವು ಅಧ್ಯಾಪಕರು ಹಿಂದೆ ಈ ಫೆಲೋಶಿಪ್ಪಿಗೆ ಆಯ್ಕೆಯಾಗಿ ಅಮೇರಿಕಕ್ಕೆ ಹೋಗಿ ಸಂಶೋಧನೆ ನಡೆಸಿ ಬಂದ ವಿಚಾರದ ಹೊರತಾಗಿ, ಅದರ ಬಗ್ಗೆ ನನಗೆ ಇನ್ನೇನೂ ತಿಳಿದಿರಲಿಲ್ಲ. ಪಿಎಚ್.ಡಿ ಆದ ಮೇಲೆ ನಾನೂ ಒಮ್ಮೆ ಪ್ರಯತ್ನಿಸಬೇಕು ಎಂಬ ಕನಸು ಇಟ್ಟುಕೊಂಡಿದ್ದುಂಟು. ಈ ವರ್ಷ ಅದನ್ನು ಜಾರಿಗೊಳಿಸುವ ಸಂದರ್ಭ ಬಂತು.

ಅರ್ಜಿ ಸಲ್ಲಿಸುವ ಯೋಚನೆ ಗಟ್ಟಿಯಾದದ್ದೇ, ದಶಕಗಳ ಹಿಂದೆ ಈ ಫೆಲೋಶಿಪ್ ಪಡೆದ ಹಿರಿಯ ಪ್ರಾಧ್ಯಾಪಕರೊಂದಿಗೆ ಮಾತಾನಾಡಿ, ನನ್ನಂತಹ ಹುಲುಮಾನವರು ಇದಕ್ಕೆ ಪ್ರಯತ್ನಿಸಬಹುದೇ ಎಂದು ಚರ್ಚಿಸಿದೆ. ಅವರೆಲ್ಲ ತಮ್ಮ ಕಾಲದ ಅನುಭವಗಳನ್ನು ನೆನಪಿಸಿಕೊಂಡು “ಆ ಕಾಲ ಬೇರೆ, ಈ ಕಾಲ ಬೇರೆ. ಆದರೆ ಖಂಡಿತ ಪ್ರಯತ್ನಿಸು, ಚೆನ್ನಾಗಿ ತಯಾರಿ ಮಾಡು, ಆಲ್ ದಿ ಬೆಸ್ಟ್” ಅಂದರು. ಇದಕ್ಕೂ ಮೊದಲು ನಮ್ಮ ಹೋಂ ಮಿನಿಸ್ಟ್ರಿಗೆ ಸವಿನಯದಿಂದ ಅರ್ಜಿ ಸಲ್ಲಿಸಿ, “ಹೇಗೆ, ನಾನು ಒಂದು ವರ್ಷ ದೇಶ ಬಿಟ್ಟರೆ ಇಲ್ಲಿ ಪರವಾಗಿಲ್ಲವಾ?” ಎಂದು ತಗ್ಗಿಬಗ್ಗಿ ಕೇಳಿ ಅನುಮತಿ ಪಡೆದಿದ್ದೆ ಎಂದು ಬೇರೆ ಹೇಳಬೇಕಿಲ್ಲ. ಹೈಕಮಾಂಡ್ ಒಪ್ಪಿಗೆಯಿಲ್ಲದೆ ನಾವು ಒಂದು ಹೆಜ್ಜೆ ಹಿಂದೆ ಮುಂದೆ ಇಡುವುದಕ್ಕುಂಟಾ!

ಅಲ್ಲಿಂದ ತಯಾರಿ ಶುರು. ತಿಂಗಳಾನುಗಟ್ಟಲೆ ಪರಿಶ್ರಮ ಬಯಸುವ ಕೆಲಸ ಅದು. ಅತಿಂಥ ಸ್ಪರ್ಧೆಯಲ್ಲ ಅದು. ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ಪಿಗಂತೂ ಇಡೀ ದೇಶದಿಂದ ಆಯ್ಕೆಯಾಗುವವರು ಹತ್ತೋ ಹದಿನೈದೋ ಮಂದಿ. ಕಳೆದ ಕೆಲವು ವರ್ಷಗಳಲ್ಲಿ ಫೆಲೋಶಿಪ್ ಪಡೆದವರ ಬಯೋಡಾಟ ನೋಡಿದರೆ ಎದೆಯೊಳಗೆ ಸಣ್ಣ ನಡುಕ ಹುಟ್ಟುತ್ತಿತ್ತು. ಅವರೆಲ್ಲ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳಿಂದ ಹೊರಬಂದವರು.

ನೀರಿಗೆ ಇಳಿದವನಿಗೆ ಎಂಥಾ ಚಳಿ ಎಂದು ತಯಾರಿ ಶುರು ಮಾಡಿದೆ. ಅದು ಬರೀ ಅರ್ಜಿ ಬರೆವ ಕೆಲಸ ಅಲ್ಲ. ಅಂತಾರಾಷ್ಟ್ರೀಯ ಮಟ್ಟದ ವಿದ್ವಾಂಸರು ಮೆಚ್ಚುವ ಸಂಶೋಧನ ಪ್ರಸ್ತಾವನೆಯೊಂದನ್ನು ಸಿದ್ಧಪಡಿಸಬೇಕು. ಅದು ಅವರೇ ಸೂಚಿಸಿದ 23 ಕ್ಷೇತ್ರಗಳ ವ್ಯಾಪ್ತಿಯಲ್ಲೇ ಇರಬೇಕು. ನನ್ನ ದುರದೃಷ್ಟಕ್ಕೆ ನನ್ನ ಕ್ಷೇತ್ರವಾದ Mass Communication & Journalism ಅವರ ಪಟ್ಟಿಯಲ್ಲಿ ಇರಲಿಲ್ಲ. ಹಾಗಾಗಿ ಅಲ್ಲಿ ಕೊಟ್ಟಿರುವುದರಲ್ಲೇ ಯಾವುದಾದರೊಂದನ್ನು ಆಯ್ದುಕೊಳ್ಳಬೇಕು. ಸದ್ಯಕ್ಕೆ ಅವರು ಕೊಟ್ಟ ಪಟ್ಟಿಯಲ್ಲಿ Performing Arts ನನಗೆ ಸಮೀಪವೆನಿಸಬಲ್ಲ ಒಂದು ಕ್ಷೇತ್ರವಾಗಿತ್ತು. ಯಕ್ಷಗಾನ ಹಾಗೂ ಅಭಿವೃದ್ಧಿ ಸಂವಹನದ ವಿಚಾರವಾಗಿ ನಾನು ಪಿಎಚ್.ಡಿ ಮಾಡಿದ್ದರಿಂದ ಆ ನಿರ್ಧಾರಕ್ಕೆ ಬಂದೆ.

ಸರಿ; ನಾವು ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳುವ ವಿಷಯ ಭಾರತ-ಅಮೇರಿಕ ಎರಡಕ್ಕೂ ಪ್ರಸ್ತುತವಾಗಬೇಕು. ನಮ್ಮ ವೃತ್ತಿಬದುಕಿಗೆ ಪೂರಕವಾಗಿರಬೇಕು. ಅದು ಆಯ್ಕೆ ಮಾಡಿಕೊಂಡ ಕ್ಷೇತ್ರದೊಳಗೆ ಬರಬೇಕು. ಅಂತಹದೊಂದು ವಿಷಯದ ಅಸ್ಪಷ್ಟ ಚಿತ್ರಣ ಸಿಗುವುದಕ್ಕೇ ಎರಡು ತಿಂಗಳು ಹಿಡಿಯಿತು. ಹಾಗೆ ಮಾಡಬಹುದೋ, ಹೀಗೆ ಮಾಡಬಹುದೋ ಎಂದು ಹತ್ತಾರು ಮಂದಿಯೊಂದಿಗೆ ಚರ್ಚಿಸಿದೆ. ಇದಕ್ಕಿಂತಲೂ ಪ್ರಮುಖ ಸವಾಲೆಂದರೆ, ಅರ್ಜಿ ಸಲ್ಲಿಸುವ ಮೊದಲೇ ಅಮೇರಿಕದ ಯಾರಾದರೂ ಒಬ್ಬ ಪ್ರಾಧ್ಯಾಪಕರಿಂದ ಅಲ್ಲಿಗೆ ಬರುವುದಕ್ಕೆ ನಮಗೆ ಆಹ್ವಾನ ಬೇಕು. ಯಾರನ್ನು ಕೇಳುವುದು? ನನಗೆ ಅಂತಹ ಸಂಪರ್ಕ ಇಲ್ಲ. ಗಾಡ್ ಫಾದರುಗಳೂ ಇಲ್ಲ. ಮೊದಲು ಅಂತಹವರೊಬ್ಬರನ್ನು ಹುಡುಕಬೇಕು, ಸಂಪರ್ಕಿಸಬೇಕು, ಅವರಿಗೆ ನಮ್ಮ ಸಂಶೋಧನ ಯೋಜನೆ ಇಷ್ಟವಾಗಬೇಕು, ಬೆಂಬಲಿಸಲು ಒಪ್ಪಬೇಕು, ಆಮೇಲೆ ಅವರ ಪತ್ರ ಕೇಳಬೇಕು.

ಆ ಕೆಲಸವನ್ನೂ ಜತೆಜತೆಗೇ ಮಾಡಿದೆ. ಅಮೇರಿಕದ ಟಾಪ್-50 ವಿಶ್ವವಿದ್ಯಾನಿಲಯಗಳ ಪಟ್ಟಿ ತಯಾರಿಸಿದೆ. ಅಲ್ಲಿನ Performing Arts/Mass Communication ವಿಭಾಗಗಳನ್ನು ಹುಡುಕಿ, ನನ್ನ ಆಸಕ್ತಿಗೆ ಸರಿಹೊಂದುವ ಪ್ರಾಧ್ಯಾಪಕರಿದ್ದಾರೆಯೇ ಎಂದು ನೋಡಿದೆ. ಏಳೆಂಟು ಮಂದಿಯನ್ನು ಶೋಧಿಸಿ, ಅವರಲ್ಲಿ ಅಂತಿಮವಾಗಿ ಮೂವರಿಗೆ ಮೈಲ್ ಮಾಡಿದೆ. ನನ್ನ ಪಿಎಚ್.ಡಿ.ಯ ಸಾರಾಂಶ, ಬಯೋಡಾಟಾ, ಅಲ್ಲಿಗೆ ಹೋಗಿ ಮಾಡಬೇಕು ಅಂದುಕೊಂಡಿರುವ ಸಂಶೋಧನೆ- ಇಷ್ಟನ್ನು ಕಳಿಸಿ, ನನಗೆ ಸಹಾಯ ಮಾಡುವಿರಾ ಎಂದು ಕೇಳಿಕೊಂಡೆ. ಆಶ್ಚರ್ಯ ಎನಿಸುವ ಹಾಗೆ ಒಬ್ಬರು ಪ್ರಾಧ್ಯಾಪಕರು ಮರುದಿನವೇ ಉತ್ತರಿಸಿದರು.

ಅವರೇ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ (ಬರ್ಕ್ಲೀ)ದ Theatre, Dance and Performance Studies ವಿಭಾಗ ಸಹಪ್ರಾಧ್ಯಾಪಕ ಡಾ. ಪೀಟರ್ ಗ್ಲೇಸರ್. ಆ ಪುಣ್ಯಾತ್ಮನ ಬಗ್ಗೆ ಇನ್ನೊಮ್ಮೆ ಪ್ರತ್ಯೇಕವಾಗಿ ಬರೆಯುತ್ತೇನೆ. ಅಂತಹ ವಿಶಿಷ್ಟ ವ್ಯಕ್ತಿ ಅವರು. ನಾನು ಯಾರೋ, ಅವರು ಯಾರೋ. ಈ ತುಮಕೂರೆಂಬ ಊರಲ್ಲಿರುವ ಪದ್ಮನಾಭ ಎಂಬ ಹುಲ್ಲುಕಡ್ಡಿಯ ಬಗ್ಗೆ ಅವರಿಗೆ ಯಾವ ಕಲ್ಪನೆಯೂ ಇರದು. ಯಾರ ರೆಫರೆನ್ಸೂ ಇಲ್ಲದೆ ಅವರನ್ನು ಸಂಪರ್ಕಿಸಿದ್ದೆ. “ನಿಮ್ಮ ಯೋಜನೆ ಆಸಕ್ತಿದಾಯಕವಾಗಿದೆ. ಆದರೆ ನಾನು ನಿಮ್ಮೊಂದಿಗೆ ಒಮ್ಮೆ ಮುಖಾಮುಖಿ ಮಾತಾಡಬೇಕು. ಸಾಧ್ಯವಾದಷ್ಟು ಬೇಗ ಒಂದು ಜೂಮ್ ಮೀಟಿಂಗ್ ಶೆಡ್ಯೂಲ್ ಮಾಡಿ” ಎಂದು ಉತ್ತರಿಸಿದರಲ್ಲದೆ, ಯಕ್ಷಗಾನ ಹಾಗೂ ಭಾರತೀಯ ರಂಗಭೂಮಿ ಕುರಿತಂತೆ ವಿದೇಶೀಯರು ನಡೆಸಿದ ಒಂದಷ್ಟು ಸಂಶೋಧನೆಗಳನ್ನೂ ಪ್ರಸ್ತಾಪಿಸಿದರು. ನಿಜವಾಗಿಯೂ ಬೇಸ್ತು ಬೀಳುವ ಸರದಿ ನನ್ನದಾಗಿತ್ತು. ಒಂದು ಗಂಟೆಯ ಮಾತುಕತೆ ಬಳಿಕ ನನ್ನ ಪ್ರಸ್ತಾವನೆಯನ್ನು ಬೆಂಬಲಿಸುವ ಭರವಸೆ ನೀಡಿದರು. ಆಮೇಲೆ ಎರಡು ಮೂರು ಬಾರಿ ಮೀಟಿಂಗ್ ನಡೆಸಿದ್ದುಂಟು; ಹತ್ತಾರು ಈಮೇಲುಗಳನ್ನು ವಿನಿಮಯ ಮಾಡಿದ್ದುಂಟು. ಅವರ ಶೈಕ್ಷಣಿಕ ಶಿಸ್ತು, ಮಾರ್ಗದರ್ಶನ ಮಾಡುವ ರೀತಿ ನೋಡಿಯೇ ಅಲ್ಲಿ ಖಂಡಿತ ಒಂದು ವರ್ಷ ಕಳೆಯಬೇಕೆಂದು ಆಸೆಪಟ್ಟೆ.

ಆಮೇಲೆ ನನ್ನ ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯಕ್ರಮ. ಮೂರೂವರೆಸಾವಿರ ಪದಗಳ ಪ್ರಸ್ತಾವನೆ ಬರೆಯುವುದಕ್ಕೆ ಮೂರೂವರೆ ತಿಂಗಳು ಹಿಡಿಯಿತು. ಬಹುಶಃ ರಾತ್ರಿ ಎರಡು ಗಂಟೆಯಲ್ಲದೆ ಮಲಗಿದ್ದೇ ಇಲ್ಲ. ಕೆಲವೊಮ್ಮೆ ಬೆಳಗಾದದ್ದೂ ಉಂಟು. ಅಷ್ಟೊಂದು ಕೆಲಸ ಅನಿವಾರ್ಯವಾಗಿತ್ತು. ಈ ನಡುವೆ ವಿದ್ವಾಂಸರೊಂದಿಗೆ, ಅಮೇರಿಕದಲ್ಲಿರುವ ಸ್ನೇಹಿತರೊಂದಿಗೆ, ಯಕ್ಷಗಾನ, ರಂಗಭೂಮಿಗೆ ಸಂಬಂಧಿಸಿದ ಹಿರಿಯರೊಂದಿಗೆ ಮಾತುಕತೆ ನಿರಂತರವಾಗಿತ್ತು. ಎರಡೂ ದೇಶಗಳಿಗೆ ಪ್ರಸ್ತುತವಾಗುವ ಸಂಶೋಧನ ಯೋಜನೆಯೊಂದು ತಯಾರಾಗಬೇಕಾದರೆ ನನಗೆ ಮೊದಲು ಆ ದೇಶದ ಕಲೆ-ಸಮಾಜ-ರಂಗಭೂಮಿಯ ಸಣ್ಣ ಚಿತ್ರಣವಾದರೂ ಬೇಕಲ್ಲ?

ಪ್ರಸ್ತಾವನೆಯನ್ನು 10-15 ಮಂದಿ ಹಿರಿಯರು, ಸ್ನೇಹಿತರು ಓದಿ ಪರಿಷ್ಕರಣೆಗಳನ್ನು ಸೂಚಿಸಿ “ಆಲ್ ದಿ ಬೆಸ್ಟ್” ಅಂದರು. ಸ್ವತಃ ಡಾ. ಗ್ಲೇಸರ್ ವಾಕ್ಯವಾಕ್ಯವನ್ನೂ ಓದಿ ತಿದ್ದುಪಡಿ ಹೇಳಿದರು. ತಮ್ಮ ಯೋಚನೆಗಳನ್ನು ಸೇರಿಸಿದರು. ಓದಿದ ಎಲ್ಲರೂ “ಇದು ಬಹಳ ಪ್ರಬಲವಾದ ಪ್ರಸ್ತಾವನೆ. ಖಂಡಿತ ಫೆಲೋಶಿಪ್ ಗೆಲ್ಲುತ್ತದೆ” ಎಂದು ಅಭಿಪ್ರಾಯಪಟ್ಟರು.

ಇತ್ತ ನನ್ನ ವಿಶ್ವವಿದ್ಯಾನಿಲಯವೂ, ಆಯ್ಕೆಯಾದರೆ ಒಂದು ವರ್ಷ ಅಧ್ಯಯನ ರಜೆ ಮಂಜೂರು ಮಾಡುವುದಾಗಿ ಪತ್ರ ನೀಡಿತು. ಇಷ್ಟೆಲ್ಲ ಆದಲ್ಲಿಗೆ ಅರ್ಧ ದಾರಿ ಕ್ರಮಿಸಿದ ಹಾಗಾಯಿತು. ಅಂತೂ ಸೆಪ್ಟೆಂಬರ್ 9ರ ಸರಿರಾತ್ರಿ ಎರಡೂವರೆ ಹೊತ್ತಿಗೆ ಅರ್ಜಿಯ ಎಲ್ಲ ಅವಶ್ಯಕತೆಗಳನ್ನೂ ಪೂರೈಸಿ, ಸಲ್ಲಿಸಿದ್ದಾಯಿತು.

ನಂತರದ ಬೆಳವಣಿಗೆ ಮೊನ್ನೆ ಬಂದ ವಿಷಾದಪತ್ರ. ಅರ್ಜಿ ಆಯ್ಕೆಯಾಗಲಿಲ್ಲ. ಕಾರಣಗಳು ತಿಳಿದಿಲ್ಲ. ಯಾವುದೋ ಒಂದು ಹಂತದಲ್ಲಿ ಅರ್ಜಿ ಸೋತಿದೆ. ಆಯ್ಕೆಗೆ ಹತ್ತಾರು ಮಾನದಂಡಗಳಿವೆ. ಅವರ ನಿರೀಕ್ಷೆಗಳು ಭಿನ್ನವಾಗಿರಬಹುದು. ಇನ್ನೂ ಏನೋ ಇರಬಹುದು. ಅರ್ಜಿ ಆಯ್ಕೆಯಾದರೆ ಸಾಲದು, ಮುಂದೆ ರಾಷ್ಟ್ರಮಟ್ಟದ ಸಂದರ್ಶನ ಎದುರಿಸಬೇಕು; ಅಲ್ಲಿ 1:2 ಅಭ್ಯರ್ಥಿಗಳ ಆಯ್ಕೆ. ಅಂತಿಮವಾಗಿ ಉಳಿದವರು ಅಮೇರಿಕಕ್ಕೆ ಹೋಗುತ್ತಾರೆ. ಆ ನಂತರದ ಎಲ್ಲ ಖರ್ಚು ಅವರದ್ದೇ.

ಸೋತರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆರಂಭದಲ್ಲೇ ಪ್ರತಿಜ್ಞೆ ಮಾಡಿ ಹೊರಟಿದ್ದರಿಂದ ಇನ್ನು ಆ ಬಗ್ಗೆ ಯೋಚನೆಯಿಲ್ಲ. ಆಯ್ಕೆಯಾಗಿ ಹೋಗಲು ಸಾಧ್ಯವಾಗದಿದ್ದರೆ ನಾನು ಇಲ್ಲಿ ಮಾಡಬೇಕಾಗಿರುವ ಕೆಲಸಗಳೇನು ಎಂಬುದನ್ನೂ ಮೊದಲೇ ನಿರ್ಧರಿಸಿಯಾಗಿದೆ.

ನನ್ನ ಪ್ರಸ್ತಾವನೆಯನ್ನು ಓದಿದ್ದವರಿಗೆ ಮತ್ತು ಪರಿಷ್ಕರಣೆಗಳನ್ನು ಸೂಚಿಸಿದ್ದವರಿಗೆ ಫೆಲೋಶಿಪ್ ಫಲಿತಾಂಶ ತಿಳಿಸಿದಾಗ ಅವರೆಲ್ಲ ಚಕಿತರಾದರು. “ನಿಜವಾಗಿಯೂ ನೀವು ಆಯ್ಕೆಯಾಗುತ್ತೀರಿ ಎಂದುಕೊಂಡಿದ್ದೆವು… ಹೋಗಲಿ, ಇನ್ನೊಮ್ಮೆ ಖಂಡಿತ ಪ್ರಯತ್ನಿಸಿ” ಎಂದರು.

ಇರಲಿ. ಅದು ಬೇರೆ ವಿಷಯ. ಮತ್ತೊಂದು ಆರು ತಿಂಗಳನ್ನು ಅದಕ್ಕಾಗಿ ವ್ಯಯಿಸುವ ಉಮೇದು ಈಗಿನ್ನೂ ಹುಟ್ಟಿಲ್ಲ. ಓದಿದ ವಿಷಯ, ಮಾಡಿದ ಕೆಲಸ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಮೊದಲಿನಿಂದಲೂ ನಂಬಿದವನು ನಾನು. ಅದು ಅನುಭವದಿಂದಲೂ ಸಿದ್ಧವಾಗಿದೆ ಕೂಡ. ಈ ಪ್ರಕ್ರಿಯೆಯಲ್ಲಂತೂ ನಾನು ಕಲಿತದ್ದು ಬೆಟ್ಟದಷ್ಟು.
ಅಂತೂ, ಇದೊಂದು ಕಥೆಯನ್ನು ಬರೆದರೆ ಮುಂದೆ ಪ್ರಯತ್ನಿಸುವ ಯಾರಿಗಾದರೂ ಅನುಕೂಲವಾದೀತು ಎಂದುಕೊಂಡು ಬರೆದೆ ಅಷ್ಟೆ. ಈ ಇಡೀ ಪ್ರಕ್ರಿಯೆಯಲ್ಲಿ ನನಗೆ ನೆರವಾದ, ಬೆಂಬಲಿಸಿದ ಎಲ್ಲ ಹಿರಿಯರು, ಸ್ನೇಹಿತರು, ಹಿತೈಷಿಗಳಿಗೆ- ಎಲ್ಲರಿಗೂ ಪ್ರಾಮಾಣಿಕ ಕೃತಜ್ಞತೆಗಳನ್ನು ಅರ್ಪಿಸುವೆ. ಇಂತಹ ಹತ್ತಾರು ಒಳ್ಳೊಳ್ಳೆಯ ಅಂತಾರಾಷ್ಟ್ರೀಯ ಫೆಲೋಶಿಪ್ ಗಳಿವೆ. ವಿದ್ಯಾರ್ಥಿಗಳು, ಸಂಶೋಧಕರು, ಇತರ ಆಸಕ್ತರು ಪ್ರಯತ್ನಿಸಿದರೆ ಅವುಗಳ ಅನುಕೂಲ ಪಡೆಯಬಹುದು. ಐಎಎಸ್ ಪರೀಕ್ಷೆ ಪಾಸಾಗದಿದ್ದರೂ ಕೋಚಿಂಗ್ ಸೆಂಟರ್ ಆರಂಭಿಸಬಹುದಾದಂತೆ, ಈಗ ಈ ವಿಷಯದಲ್ಲಿ ನಾನೊಂದು ಸ್ಥಳೀಯ ಕನ್ಸಲ್ಟೆನ್ಸಿ ತೆರೆಯುವಷ್ಟು ಸಂಪನ್ಮೂಲ ಉಂಟು.

ಎಲ್ಲ ಬಗೆಯ Fulbright Fellowshipಗಳ ಮಾಹಿತಿಗೆ: www.usief.org.in ನೋಡಿ.

ಅಂದಹಾಗೆ, ಡಾ. ಪೀಟರ್ ಗ್ಲೇಸರ್ ಎಂಬ ಪುಣ್ಯಾತ್ಮನ ಬಗ್ಗೆ ಇನ್ನೊಮ್ಮೆ ಬರೆಯುವೆ.

- ಸಿಬಂತಿ ಪದ್ಮನಾಭ ಕೆ. ವಿ.
sibanthipadmanabha@gmail.com

ಕಾಮೆಂಟ್‌ಗಳಿಲ್ಲ: