ಮಂಗಳವಾರ, ಮೇ 7, 2019

ಚುನಾವಣೆ ಉಳಿಸಿಹೋಗಿರುವ ಪ್ರಶ್ನೆಗಳು

ಮೇ 6, 2019ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ 

ರಾಜ್ಯದ ಪುಟ್ಟಹಳ್ಳಿಯ ಮತಗಟ್ಟೆಯೊಂದರಲ್ಲಿ ಪ್ರಿಸೈಡಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಾ ಬಂದುಹೋಗುವವರನ್ನು ಕುತೂಹಲದಿಂದ ಗಮನಿಸುತ್ತಾ ಇದ್ದೆ. ಮೊದಲ ಬಾರಿ ಮತ ಚಲಾಯಿಸುವ ಉಮೇದಿನ ನವತರುಣರು, ಈಗಷ್ಟೇ ಹಟ್ಟಿಯ ಗಂಜಳ ಬಳಿದು ಉಟ್ಟ ಬಟ್ಟೆಯಲ್ಲೇ ಬಂದು ಸರತಿಯಲ್ಲಿ ನಿಂತ ಹೆಮ್ಮಕ್ಕಳು, ಆಡು ಕುರಿ ಮಂದೆಯನ್ನು ಎಬ್ಬುತ್ತಾ ಒಂದಿಷ್ಟು ಹೊತ್ತು ವಿರಾಮ ತೆಗೆದುಕೊಂಡು ಹಾಗೇ ಓಟು ಹಾಕಿ ಹೋಗೋಣ ಎಂದು ಅಡಾವುಡಿಯಿಂದ ಧಾವಿಸುವ ಮಧ್ಯವಯಸ್ಕರು, ಏರಿದ ನಶೆಯಿಂದ ಓಲಾಡುತ್ತಿದ್ದರೂ ಮತಹಾಕುವ ಪ್ರಜ್ಞೆ ಮರೆಯದ ಮದ್ಯಪಾನಿಗಳು, ಮನೆಮಂದಿಯ ನೆರೆಹೊರೆಯವರ ಸಹಾಯದಿಂದಲಾದರೂ ಓಟು ಹಾಕೇಬಿಡಬೇಕೆನ್ನುವ ಹಠದಿಂದ ಬೂತಿಗೆ ಕಾಲಿಡುವ ವಯೋವೃದ್ಧರು, ಅಂಗವಿಕಲರು... ಅದೊಂದು ಪುಟ್ಟ ಗ್ರಾಮಭಾರತವೇ ಸರಿ.

ಪ್ರಜಾವಾಣಿ, ಮೇ 6-2019
ಹಳ್ಳಿ ಪುಟ್ಟದಾದರೂ ಒಂದೇ ಮತಗಟ್ಟೆಯಲ್ಲಿ 1200ಕ್ಕಿಂತಲೂ ಹೆಚ್ಚು ಮತದಾರರಿದ್ದರು. ಸಂಜೆಯಾಗುತ್ತಿದ್ದಂತೆ ಸರತಿ ಕರಗುವ ಬದಲು ಬೆಳೆಯುತ್ತಲೇ ಹೋಯಿತು. ತಾಂತ್ರಿಕ ದೋಷದಿಂದಾಗಿ ಎರಡು ಬಾರಿ ಮತದಾನದಲ್ಲಿ ಅರ್ಧರ್ಧ ಗಂಟೆ ತಡವಾದ್ದರಿಂದಲೂ ಮತಹಾಕಬೇಕಾದವರ ಗುಂಪು ಕೊಂಚ ದೊಡ್ಡದಾಗಿಯೇ ಇತ್ತು. ಇನ್ನೇನು ಐದೂವರೆ ಆಗುತ್ತಿದ್ದಾಗ ಹಳ್ಳಿಜನರಲ್ಲಿ ಆತಂಕ, ನೂಕಾಟ ತಳ್ಳಾಟ ಹೆಚ್ಚಾಯಿತು. ಏನಿಲ್ಲವೆಂದರೂ ನೂರೈವತ್ತು ಮಂದಿ ಸರತಿಯಲ್ಲಿದ್ದರು.

‘ನೋಡಿ, ಯಾರೊಬ್ಬರೂ ಗಡಿಬಿಡಿ ಮಾಡಿಕೊಳ್ಳಬೇಡಿ. ರಾತ್ರಿ ಹತ್ತಾದರೂ ಪರ್ವಾಗಿಲ್ಲ. ಎಲ್ಲರನ್ನೂ ಓಟು ಹಾಕಿಸಿಯೇ ಕಳಿಸೋದು. ನೀವು ಶಾಂತವಾಗಿದ್ದರೆ ನಮಗೆ ಅನುಕೂಲವಾಗುತ್ತೆ’ ಎಂಬ ಸಮಾಧಾನದ ಮಾತುಗಳನ್ನಾಡಿದ ಮೇಲೆ ಜನರು ಸುಮ್ಮನಾದರು. ಅಷ್ಟಾದರೆ ನಮ್ಮ ತಕರಾರಿಲ್ಲ ಎಂಬ ಹಾಗೆ ಮತ್ತೆ ಶಿಸ್ತಾಗಿ ನಿಂತರು. ಅಂತೂ ಬೂತಿಗೆ ಬಂದ ಪ್ರತಿಯೊಬ್ಬನೂ ಓಟು ಹಾಕಿದ್ದಾನೆಂದು ಖಾತ್ರಿಪಡಿಸಿ ಮತದಾನ ಮುಕ್ತಾಯಗೊಳಿಸಿದಾಗ ಸಂಜೆ ಏಳೂಮುಕ್ಕಾಲು.

ಹೊಸ ಸಹಸ್ರಮಾನ ಹೊಕ್ಕು ಎರಡು ದಶಕಗಳೇ ಉರುಳಿದರೂ ಮತದಾರರ ರಿಜಿಸ್ಟರಿನಲ್ಲಿ ಹೆಬ್ಬೆಟ್ಟು ಹಾಕಿದ ಮಂದಿ ಏನಿಲ್ಲವೆಂದರೂ ಶೇ. 40ರಷ್ಟು ಇದ್ದರು. ಉದ್ಯೋಗಕ್ಕಾಗಿ ಪಟ್ಟಣಕ್ಕೆ ವಲಸೆ ಹೋದವರಾದರೂ ಬಂದು ಮತದಾನದಲ್ಲಿ ಪಾಲ್ಗೊಳ್ಳದಿರಬಹುದು, ಆದರೆ ಈ ಹೆಬ್ಬೆಟ್ಟು ಮಂದಿ ಮಾತ್ರ ಓಟು ಹಾಕುವ ತಮ್ಮ ಹಕ್ಕನ್ನು ಬಿಟ್ಟುಕೊಟ್ಟವರಲ್ಲ. ಎಂಬತ್ತೈದು ದಾಟಿದ ಓರ್ವ ವೃದ್ಧನಂತೂ ತನ್ನ ಸಂಗಡಿಗನಿಗೆ ‘ಮಷಿನ್ ಬಳಿ ಬರ್ಬೇಕಾಗಿಲ್ಲ, ಓಟು ಒತ್ತೋದು ಹೆಂಗೇಂತ ನನಗ್ಗೊತ್ತು’ ಎಂದು ನಯವಾಗಿ ಗದರಿದ ರೀತಿಯಂತೂ ನೆನಪಿನಲ್ಲಿ ಉಳಿಯುವ ದೃಶ್ಯವಾಗಿತ್ತು. ಭಾರತದ ಆತ್ಮವು ಆಕೆಯ ಹಳ್ಳಿಗಳಲ್ಲಿದೆ ಎಂಬ ಮಾತಿನ ಅಂತರಾರ್ಥ ಮನವರಿಕೆಯಾಗುವುದು ಓಟಿನ ಬೂತಿನಲ್ಲಿಯೇ ಇರಬೇಕು.

ಇನ್ನೊಂದೆಡೆ ಬೆಂಗಳೂರಿನಲ್ಲಿ ಈ ಬಾರಿಯೂ ಶೇ. 55 ಮೀರಲಿಲ್ಲವಂತೆ ಎಂಬ ಸುದ್ದಿ ಒಳಮನಸ್ಸನ್ನು ಕಲಕುತ್ತಿತ್ತು. ‘ಯಾರೊಬ್ಬನೂ ಮತದಾನದಿಂದ ವಂಚಿತನಾಗಕೂಡದು’ ಎಂಬುದು ಈ ಬಾರಿ ಚುನಾವಣಾ ಆಯೋಗದ ಪ್ರಮುಖ ಘೋಷಣೆ. ಸಾಮಾಜಿಕ ಮಾಧ್ಯಮಗಳೂ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲೂ ಮತದಾನ ಮಾಡುವುದು ಎಷ್ಟು ಮಹತ್ವದ್ದು, ಯಾಕೆ ಆ ವಿಷಯದಲ್ಲಿ ಬೇಜವಾಬ್ದಾರಿ ತೋರಬಾರದು ಎಂಬ ಜಾಗೃತಿ ಅಭಿಯಾನ ನಭೂತೋ ಎಂಬಷ್ಟು ಜೋರಾಗಿ ನಡೆದಿತ್ತು. ಆದರೂ ಮಹಾನಗರಗಳಲ್ಲಿ ಮತದಾನದ ಪ್ರಮಾಣದಲ್ಲಿ ಅಂತಹ ಬದಲಾವಣೆಯೇನೂ ಆಗಲಿಲ್ಲ.

ಬೆಂಗಳೂರಿನಲ್ಲೇಕೆ ಮತದಾನದ ಪ್ರಮಾಣ ಹೆಚ್ಚಾಗಿಲ್ಲ ಎಂಬ ಪ್ರಶ್ನೆಗೆ ಈ ಬಾರಿ ಸಾಮಾಜಿಕ ತಾಣಗಳಲ್ಲಿ ಒಂದಿಷ್ಟು ಹೊಸ ವಿಶ್ಲೇಷಣೆಗಳು ಹೊರಬರುತ್ತಿವೆ. ಅವುಗಳಲ್ಲಿ ಒಪ್ಪುವಂಥವೂ ಇವೆ. ಬೆಂಗಳೂರಿನಲ್ಲಿರುವವರಲ್ಲಿ ಬಹುಪಾಲು ಉದ್ಯೋಗ ನಿಮಿತ್ತ ಬೇರೆ ಊರುಗಳಿಂದ ಬಂದವರು. ಅವರು ತಮ್ಮ ಊರಿನಲ್ಲಿಯೇ ಮತ ಹಾಕುತ್ತಾರೆ. ವಿಳಾಸದ ಉದ್ದೇಶಕ್ಕೆ ಬೆಂಗಳೂರಿನಲ್ಲಿಯೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿಕೊಂಡಿದ್ದಾರೆ. ಇನ್ನೊಂದಷ್ಟು ಮಂದಿ ತಮಿಳುನಾಡು, ಆಂಧ್ರಪ್ರದೇಶ ಮತ್ತಿತರ ನೆರೆರಾಜ್ಯಗಳ ವಲಸಿಗರು. ಅವರ ಕತೆಯೂ ಇಷ್ಟೇ. ಎರಡೆರಡು ಕಡೆಗಳಲ್ಲಿ ಹೆಸರು, ಗುರುತಿನ ಚೀಟಿ. ಇದರಿಂದಾಗಿ ನಮ್ಮಲ್ಲಿ ಮತದಾನದ ಪ್ರಮಾಣ ಹೆಚ್ಚಾಗುತ್ತಿಲ್ಲ ಎಂಬುದೊಂದು ವಿಶ್ಲೇಷಣೆ.

ಇದು ನಿಜವಾಗಿದ್ದರೆ ಇದೂ ಇನ್ನೊಂದು ಅಕ್ರಮವಾಗುತ್ತದೆ. ಏಕೆಂದರೆ ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವುದೂ ಕಾನೂನು ಬಾಹಿರ. ಎರಡೆರಡು ಕಡೆ ಮತದಾನ ಮಾಡಿದಷ್ಟೇ ತಪ್ಪಾಗುತ್ತದೆ ಇದು. ಜೊತೆಗೆ ಹೀಗೆ ಒಬ್ಬನ ಹೆಸರು ಎರಡೆರಡು ಕಡೆ ಹೇಗೆ ಸೇರಿಕೊಂಡಿತು ಎಂಬುದು ಇನ್ನೊಂದು ಪ್ರಶ್ನೆಯಾಗುತ್ತದೆ. ಹೀಗೆ ಸೇರಿಸಿದವರು ಯಾರು? ಒಂದು ಕಡೆ ಹೆಸರು ಅಳಿಸಿದ ಮೇಲೆ, ಅದಕ್ಕೆ ಸೂಕ್ತ ದಾಖಲೆ ನೀಡಿದ ಮೇಲೆಯೇ ಇನ್ನೊಂದು ಕಡೆ ಹೆಸರು ಸೇರಿಸಲು ಸಾಧ್ಯ. ಹಾಗಾದರೆ ಇವರು ಹೇಗೆ ಅಕ್ರಮವಾಗಿ ಹೆಸರು ಸೇರಿಸಿಕೊಂಡರು? ಇನ್ನೊಂದೆಡೆ ಮತದಾನ ಮಾಡಲು ಹೋದರೂ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಹಿಂತಿರುಗಿದವರ ಸಂಖ್ಯೆಯೂ ದೊಡ್ಡದಿದೆ. ಇದೆಲ್ಲ ಹೇಗಾಯಿತು? ಯಾಕಾಯಿತು?

ಇಂತಹ ಪ್ರಕರಣಗಳ ಹೊರತಾಗಿಯೂ ಮತದಾನದಿಂದ ಹೊರಗುಳಿದವರ ಪ್ರಮಾಣ ದೊಡ್ಡದಾಗಿಯೇ ಇದೆ. ‘ಮತದಾನ ಮಾಡದಿರುವುದೂ ಒಂದು ಹಕ್ಕು, ನನ್ನನ್ನು ಯಾರೂ ಒತ್ತಾಯಿಸಲಾಗದು’ ಎಂಬ ಮಾತುಗಳೂ ಈ ಬಾರಿ ಕೇಳಿ ಬಂದವು. ಯಾವುದನ್ನೂ ಯಾರ ಮೇಲೂ ಒತ್ತಾಯಪೂರ್ವಕವಾಗಿ ಹೇರಬಾರದು ಎಂಬುದು ಪ್ರಜಾಪ್ರಭುತ್ವದ ಮೌಲ್ಯವಾಗಿದ್ದರೂ ಮತದಾನದ ವಿಷಯಕ್ಕೆ ಅದನ್ನು ಅನ್ವಯಿಸುವುದು ಎಷ್ಟು ಸಮಂಜಸವಾಗುತ್ತದೆ?

ಹಾಗಾದರೆ ಓಟು ಹಾಕದವರು ಯಾರು, ಅವರು ಯಾವ ಕಾರಣಕ್ಕೆ ಓಟು ಹಾಕಿಲ್ಲ ಎಂಬುದರ ಬಗ್ಗೆ ಒಂದು ಗಂಭೀರ ಅಧ್ಯಯನ ನಡೆಯಬೇಡವೇ? ಎಲ್ಲರಿಗೂ ಒಂದಲ್ಲ ಒಂದು ಕಾರಣ ಇದ್ದೇ ಇರುತ್ತದೆ. ಕೆಲವರು ಉದಾಸೀನದಿಂದ ದೂರವುಳಿದಿರಬಹುದು, ಇನ್ನು ಕೆಲವರು ಮತಪಟ್ಟಿಯಲ್ಲಿನ ದೋಷಕ್ಕೆ ಬಲಿಪಶುಗಳಾಗಿರಬಹುದು, ಅಥವಾ ತಮ್ಮದೇ  ಸಮಜಾಯುಷಿ ಹೊಂದಿರಬಹುದು. ಹಾಗಾದರೆ ಅದು ಏನು ಎಂಬುದನ್ನು ತಿಳಿದುಕೊಳ್ಳುವುದು ಭವಿಷ್ಯದ ಚುನಾವಣೆಗಳ ದೃಷ್ಟಿಯಿಂದ ಪ್ರಮುಖವಾಗುತ್ತದೆ.

ಈ ಬಾರಿಯ ಚುನಾವಣೆಯಂತೂ ನೂರು ಪ್ರತಿಶತ ಸೋಷಿಯಲ್ ಮೀಡಿಯಾ ಚುನಾವಣೆ ಆಗಿ ಹೋಯಿತು. ಚುನಾವಣಾ ಪ್ರಚಾರ, ಚುನಾವಣಾ ಪೂರ್ವ ವಿಶ್ಲೇಷಣೆ-ಸಮೀಕ್ಷೆ, ಮತದಾನ ಪ್ರಕ್ರಿಯೆ, ಫಲಿತಾಂಶ ಎಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲೇ ನಡೆಯುತ್ತಿದೆ. ಸಾವಿರಾರು ಮಂದಿ ತಾವು ಯಾವ ಪಕ್ಷಕ್ಕೆ, ಯಾವ ಅಭ್ಯರ್ಥಿಗೆ ಮತ ಹಾಕಿದೆವೆಂದು ಕೂಡಲೇ ವಾಟ್ಸಾಪ್, ಫೇಸ್‍ಬುಕ್ಕಿನಲ್ಲಿ ಘೋಷಿಸಿಬಿಟ್ಟರು- ಎಂಬಲ್ಲಿಗೆ ಭಾರತದ ಸಂವಿಧಾನ ಒಪ್ಪಿಕೊಂಡಿರುವ ರಹಸ್ಯ ಮತದಾನ ಪದ್ಧತಿ ಸಂಪೂರ್ಣವಾಗಿ ಬಟಾಬಯಲಿಗೆ ಬಂತು.

ಜನಸಾಮಾನ್ಯರೇನು, ಚುನಾವಣೆಯ ವಿದ್ಯಮಾನಗಳನ್ನು ಸರಿಯಾಗಿ ಬಲ್ಲವರು, ಪತ್ರಕರ್ತರು- ಎಲ್ಲರೂ ಈ ವಿಚಾರದಲ್ಲಿ ಒಂದೇ ರೀತಿ ವರ್ತಿಸಿದರು. ತಾನು ಇಂಥವರಿಗೆ ಓಟ್ ಮಾಡಿದೆ, ನೀವೂ ಅವರಿಗೇ ಓಟ್ ಮಾಡಿ, ಅಥವಾ ನೀವು ಇಂಥ ವ್ಯಕ್ತಿಯ ವಿರುದ್ಧ ಮತ ಚಲಾಯಿಸಿ ಎಂದು ರಾಜಾರೋಷವಾಗಿ ಕರೆಕೊಟ್ಟರು. ಇದು ಸೀಕ್ರೆಟ್ ಬ್ಯಾಲಟ್ ಪದ್ಧತಿಯ ಸ್ಪಷ್ಟ ಉಲ್ಲಂಘನೆಯಲ್ಲವೇ?  ತಿಳುವಳಿಕೆಯಿಲ್ಲದವರಿಗೆ ತಿಳಿಸಿ ಹೇಳಬಹುದು, ಎಲ್ಲವನ್ನೂ ಬಲ್ಲವರಿಗೆ ಏನೆಂದು ಹೇಳಬೇಕು?

ಆದಾಗ್ಯೂ ಪೂರ್ತಿ ಚುನಾವಣೆಯೇ ಜಾತಿ ಲೆಕ್ಕಾಚಾರದ ಮೇಲೆ ನಡೆಯುತ್ತಿರುವಾಗ, ವೈಯುಕ್ತಿಕ ತೇಜೋವಧೆಯೇ ಚುನಾವಣಾ ಪ್ರಚಾರ ಆಗಿರುವಾಗ, ಹಾಡುಹಗಲೇ ಕೋಟ್ಯಂತರ ರೂಪಾಯಿ ಸಾಗಾಟ ನಡೆಯುತ್ತಿರುವಾಗ, ಹಣ-ಹೆಂಡ-ಉಡುಗೊರೆಗಳ ಆಧಾರದಲ್ಲೇ ಬಹುಪಾಲು ಮತದಾನ ನಡೆಯುತ್ತಿರುವಾಗ ಸೋಷಿಯಲ್ ಮೀಡಿಯಾದಲ್ಲಿ ಸೀಕ್ರೆಟ್ ಬ್ಯಾಲಟ್ ಪದ್ಧತಿಯನ್ನು ಉಲ್ಲಂಘಿಸಿದರು ಎಂದು ಪ್ರಲಾಪಿಸುವುದೂ ತಮಾಷೆಯಾಗಿ ಕಾಣಬಹುದು.

ಕಾಮೆಂಟ್‌ಗಳಿಲ್ಲ: