ಶುಕ್ರವಾರ, ಏಪ್ರಿಲ್ 17, 2020

ಆನ್‌ಲೈನ್ ಶಿಕ್ಷಣ ಮತ್ತು ಡಿಜಿಟಲ್ ಕಂದಕ

ದಿನಾಂಕ: 18-04-2020ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ.

ಕೊರೋನಾ ಸೃಷ್ಟಿಸಿದ ಪಲ್ಲಟ ಉಳಿದೆಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ಹೊಸ ರೀತಿಯಲ್ಲಿ ಯೋಚಿಸುವಂತೆ ಮಾಡಿದೆ. ಐದೋ ಹತ್ತೋ ವರ್ಷಕ್ಕೆ ಅನಿವಾರ್ಯವಾಗಬಹುದಾಗಿದ್ದ ಆನ್‌ಲೈನ್ ಬೋಧನೆ-ಕಲಿಕೆ ಈಗಲೇ ಅನಿವಾರ್ಯವಾಗಿಬಿಟ್ಟಿದೆ. ಕೊರೋನಾ ಬಿಕ್ಕಟ್ಟಿನಿಂದಾಗಿ ಅನೇಕ ರಂಗಗಳು ಹಲವು ವರ್ಷ ಹಿಂದಕ್ಕೆ ಚಲಿಸುವಂತಾಗಿದ್ದರೆ, ಶಿಕ್ಷಣ ರಂಗ ತಂತ್ರಜ್ಞಾನದ ಬಳಕೆಯ ದೃಷ್ಟಿಯಿಂದಲಾದರೂ ಒಂದಷ್ಟು ವರ್ಷ ಮುಂದಕ್ಕೆ ಸಾಗುವಂತಾಗಿದೆ.

'ವರ್ಚುವಲ್ ಕ್ಲಾಸ್‌ರೂಂ’ ಎಂದಾಕ್ಷಣ ದೊಡ್ಡ ನಗರಗಳ ಶ್ರೀಮಂತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನೋ, ಪಶ್ಚಿಮದ ದೇಶಗಳನ್ನೋ ಮನಸ್ಸಿಗೆ ತಂದುಕೊಳ್ಳುವುದು ಸಾಮಾನ್ಯವಾಗಿತ್ತು. ಅದು ನಮಗಿರುವುದಲ್ಲ ಅಥವಾ ನಮ್ಮಂಥವರಿಗಲ್ಲ ಎಂಬುದೇ ಬಹುಪಾಲು ಭಾರತೀಯರ ಮನಸ್ಥಿತಿಯಾಗಿತ್ತು- ಇಲ್ಲಿಯವರೆಗೆ. ಕೇವಲ ಒಂದೆರಡು ತಿಂಗಳಲ್ಲೇ ಒಟ್ಟಾರೆ ಜಗತ್ತಿನ ಮನಸ್ಥಿತಿಯೇ ಬದಲಾಗಿದೆ, ಜತೆಗೆ ನಮ್ಮದೂ. ವರ್ಚುವಲ್ ಕ್ಲಾಸ್‌ರೂಂಗಳ ಅನಿವಾರ್ಯತೆ ನಮ್ಮ ಮನೆ ಬಾಗಿಲಿಗೇ ಈಗ ಬಂದು ನಿಂತಿದೆ. ಎಷ್ಟಾದರೂ ಅನಿವಾರ್ಯತೆ ಅನ್ವೇಷಣೆಯ ತಾಯಿ.

ಪ್ರಜಾವಾಣಿ | 18-04-2020
ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣದವರೆಗಿನದ್ದು ಒಂದು ಕತೆಯಾದರೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳದ್ದು ಇನ್ನೊಂದು ಕತೆ. ಪದವಿ ತರಗತಿಗಳು ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದರೆ, ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವರ್ಷದ ಎರಡನೆಯ ಭಾಗ ಅರ್ಧದಲ್ಲೇ ಇದೆ. ಪಾಠಪ್ರವಚನಗಳನ್ನು ಮುಂದುವರಿಸುವುದಕ್ಕೆ ಲಾಕ್‌ಡೌನ್ ಅಡ್ಡಿ, ಆದರೆ ಮುಂದುವರಿಸದೆ ವಿಧಿಯಿಲ್ಲ. ಒಟ್ಟಿನಲ್ಲಿ, ಕಾಲೇಜು-ವಿಶ್ವವಿದ್ಯಾನಿಲಯಗಳಿಗೆ ಆನ್‌ಲೈನ್ ಕಲಿಕೆಯ ಹೊರತು ಬೇರೆ ದಾರಿಯಿಲ್ಲ ಎಂಬಂತಾಗಿದೆ.

ಬಹುತೇಕ ವಿಶ್ವವಿದ್ಯಾನಿಲಯಗಳು, ಒಂದಷ್ಟು ಕಾಲೇಜುಗಳು ಈ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುತ್ತಿವೆ. ವಿದೇಶಗಳ ಪರಿಸ್ಥಿತಿಗೆ ಹೋಲಿಸಿದರೆ ನಾವು ಕನಿಷ್ಠ ಹತ್ತು ವರ್ಷ ಹಿಂದೆ ಇದ್ದರೂ ಈಗಲಾದರೂ ಈ ಹಂತದಿಂದ ಆರಂಭಿಸುವುದು ಅನಿವಾರ್ಯವಾಗಿದೆ. ಕೆಲವರು ಜೂಮ್‌ನಂತಹ ಆಪ್‌ಗಳ ಸಹಾಯದಿಂದ ತರಗತಿಗಳನ್ನು ನಡೆಸಲು ಪ್ರಯತ್ನಿಸುತ್ತಿದ್ದರೆ, ಇನ್ನು ಕೆಲವರು ಯೂಟ್ಯೂಬ್‌ನಲ್ಲಿ ವೀಡಿಯೋ ಉಪನ್ಯಾಸಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದಾರೆ. ವಾಟ್ಸ್‌ಆಪ್‌ನಲ್ಲಿ ಆಡಿಯೋ ಪಾಠ, ಅಧ್ಯಯನ ಸಾಮಗ್ರಿಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸ್ಕೈಪ್, ವಿಮಿಯೋ, ಗೂಗಲ್ ಮೀಟ್, ಗೋಟುಮೀಟಿಂಗ್, ಗೋಟುವೆಬಿನಾರ್, ವೆಬಿನಾರ್ ಜಾಮ್, ಲೈವ್‌ಸ್ಟ್ರೀಂ - ಹೀಗೆ ಲಭ್ಯವಿರುವ ಹತ್ತು ಹಲವು ಸಾಧ್ಯತೆಗಳನ್ನು ಹುಡುಕಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ.

ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಇದೊಂದು ಹೊಸ ಅನುಭವ. ಒಂದೆಡೆ ತರಗತಿಗಳಲ್ಲಿ ಮಾತ್ರ ಸಿಗುತ್ತಿದ್ದ ಅಧ್ಯಾಪಕರು ಆನ್‌ಲೈನ್ ಮೂಲಕ ತಮ್ಮನ್ನು ತಲುಪುತಿದ್ದಾರೆ ಎಂಬ ಸಂಭ್ರಮ ವಿದ್ಯಾರ್ಥಿಗಳದ್ದಾರೆ, ಹೀಗೆಲ್ಲ ಮಾಡಬಹುದೇ ಎಂಬ ಸೋಜಿಗ ಅನೇಕ ಅಧ್ಯಾಪಕರದ್ದು. ಕಂಪ್ಯೂಟರ್, ಪ್ರೊಜೆಕ್ಟರ್ ಎಂದರೆ ಮೂಗುಮುರಿಯುತ್ತಾ ಇನ್ನೂ ಕರಿಹಲಗೆ-ಪಠ್ಯಪುಸ್ತಕಗಳಿಗೆ ಅಂಟಿಕೊಂಡಿದ್ದ ಅವರು ತಾವು ಸದಾ ಬಳಸುವ ಮೊಬೈಲಿನಲ್ಲೇ ಇಷ್ಟೊಂದು ಸಾಧ್ಯತೆಗಳಿವೆಯೇ ಎಂದು ನಿಧಾನಕ್ಕೆ ಅರ್ಥಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಯಾಪನೆ ಮಾಡುವುದಲ್ಲದೆ ಮೊಬೈಲಿನಿಂದ ಇನ್ನೂ ಅನೇಕ ಉಪಯೋಗಗಳಿವೆ ಎಂದು ಮನದಟ್ಟಾಗುತ್ತಿದೆ.

ಇಂತಹ ಅನಿವಾರ್ಯ ಇಷ್ಟೊಂದು ಬೇಗನೆ ಮತ್ತು ಅಚಾನಕ್ಕಾಗಿ ಎದುರಾದೀತು ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಹೀಗಾಗಿ ಇಂಥದ್ದೊಂದು ಪರಿಸ್ಥಿತಿ ಎದುರಾದಾಗ ಅದನ್ನು ಹೇಗೆ ನಿಭಾಯಿಸಬೇಕೆಂಬ ಚಿಂತನೆಯನ್ನೂ ಮಾಡಿದವರು ಕಡಿಮೆಯೇ. ಆನ್‌ಲೈನ್ ಕೋರ್ಸುಗಳು ಕೆಲವು ವರ್ಷಗಳಿಂದ ನಮ್ಮಲ್ಲಿ ಲಭ್ಯವಿದ್ದರೂ ಅವು ಐಚ್ಛಿಕ. ಬಹುತೇಕ ಖಾಸಗಿ ವಲಯದಲ್ಲೇ ಇವೆ. ಈಗಾಗಲೇ ಉದ್ಯೋಗದಲ್ಲಿರುವವರು, ಹೆಚ್ಚುವರಿ ಶೈಕ್ಷಣಿಕ ಅರ್ಹತೆ ಬಯಸುವವರು, ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುವವರು ಇಂಥವುಗಳನ್ನು ಆಯ್ದುಕೊಳ್ಳುತ್ತಿದ್ದುದು ಇದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 'ಸ್ವಯಂ’ ಎಂಬ ಆನ್‌ಲೈನ್ ಕಲಿಕಾ ವೇದಿಕೆಯನ್ನು 2017ರಲ್ಲಿ ಆರಂಭಿಸಿ ನೂರಾರು ಮುಕ್ತ ಕೋರ್ಸುಗಳನ್ನು ಪರಿಚಯಿಸಿದ್ದರೂ, ಅವೆಲ್ಲವೂ ಐಚ್ಛಿಕ. ಅವನ್ನು ಔಪಚಾರಿಕ ಕೋರ್ಸುಗಳ ಭಾಗವನ್ನಾಗಿಸುವ ಅಥವಾ ಕಡ್ಡಾಯಗೊಳಿಸುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.

ಹೌದು, ಆನ್‌ಲೈನ್ ತರಗತಿಗಳಿಂದ ಅನೇಕ ಲಾಭಗಳಿದ್ದರೂ ಅವುಗಳ ಇತಿಮಿತಿಗಳೂ ಅಷ್ಟೇ ಇವೆ. ನಮಗೆ ಬೇಕಾದ ಸಮಯವನ್ನು ಹೊಂದಿಸಿಕೊಂಡು ಪಾಠ ಮಾಡಬಹುದು ಅಥವಾ ಕೇಳಬಹುದು, ವಿದ್ಯಾರ್ಥಿಗಳು ಅಂತರಜಾಲವನ್ನು ಬಳಸಿಕೊಂಡು ಯಥೇಚ್ಛ ಅಧ್ಯಯನ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು. ಆದರೆ ಈ ತಂತ್ರಜ್ಞಾನದ ಲಾಭ ಪಡೆಯುವ ಮಂದಿಯ ಪ್ರಮಾಣ ಎಷ್ಟು ಎಂಬುದೂ ಮುಖ್ಯವಾದ ಪ್ರಶ್ನೆ.

ವಿದೇಶಗಳಲ್ಲಿ ಆನ್‌ಲೈನ್ ಬೋಧನೆ-ಕಲಿಕೆ ಯಶಸ್ವಿಯಾಗಿದ್ದರೆ ಅದರ ಹಿಂದೆ ಅಲ್ಲಿನ ಮೂಲಭೂತ ಸೌಕರ್ಯ, ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ನೀಡಲಾಗಿರುವ ಹೆಚ್ಚುವರಿ ತರಬೇತಿಯ ಪಾತ್ರ ಇದೆ. ಅಲ್ಲಿ ಪ್ರತಿಕ್ರಿಯಾತ್ಮಕ ಅಧ್ಯಯನ ಸಾಮಗ್ರಿಗಳು, ಆನ್‌ಲೈನ್ ಪರೀಕ್ಷಾ ವ್ಯವಸ್ಥೆ, ತೆರೆದ ಪುಸ್ತಕದ ಪರೀಕ್ಷೆ- ಎಲ್ಲವೂ ಸಾಕಷ್ಟು ಮೊದಲಿನಿಂದಲೂ ಜಾರಿಯಲ್ಲಿದೆ. ನಮಗೆ ಎದುರಾಗಿರುವ ಪರಿಸ್ಥಿತಿ ತೀರಾ ಅನಿರೀಕ್ಷಿತವಾದದ್ದು.

ಭಾರತದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ. 32.5ರಷ್ಟು ಮಂದಿ ನಗರಗಳಲ್ಲಿದ್ದಾರೆ, ಶೇ. 67.5ರಷ್ಟು ಹಳ್ಳಿಗಳಲ್ಲಿದ್ದಾರೆ. ನಮ್ಮ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಸುಮಾರು 60 ಕೋಟಿ. ಅಂದರೆ ಅರ್ಧಕ್ಕಿಂತಲೂ ಕಡಿಮೆ. ಅವರಲ್ಲಿಯೂ ಮೊಬೈಲ್ ಇಂಟರ್ನೆಟ್ ಬಳಕೆದಾರರೇ ಹೆಚ್ಚು. ಟ್ರಾಯ್ ವರದಿ ಪ್ರಕಾರ, ಹಳ್ಳಿಗಳಲ್ಲೇ ಮುಕ್ಕಾಲು ಪಾಲು ಜನರಿದ್ದರೂ ಅಲ್ಲಿನ ಇಂಟರ್ನೆಟ್ ಸಾಂಧ್ರತೆ ಶೇ. 25. ಉಳಿದಿರುವ ಜನರಷ್ಟೇ ನಗರಗಳಲ್ಲಿದ್ದರೂ ಅಲ್ಲಿನ ಇಂಟರ್ನೆಟ್ ಸಾಂಧ್ರತೆ ಶೇ. 97. ಇದು ನಮ್ಮ ದೇಶದ ಡಿಜಿಟಲ್ ಕಂದಕದ ಆಳ-ಅಗಲ. ಹೀಗಾಗಿ ನಮ್ಮಲ್ಲಿ ಆನ್‌ಲೈನ್ ಕಲಿಕೆಯ ಪರಿಣಾಮಕಾರಿ ಅನುಷ್ಠಾನ ಅಷ್ಟು ಸುಲಭದ ಕೆಲಸವೇನೂ ಅಲ್ಲ.

ನಮ್ಮ ಬಹುತೇಕ ವಿದ್ಯಾರ್ಥಿಗಳು ಹಳ್ಳಿಗಳಲ್ಲಿದ್ದಾರೆ. ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳಿದ್ದರೂ ಮೊಬೈಲ್ ಇಲ್ಲದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಅನೇಕ ಕಡೆ ಆನ್‌ಲೈನ್ ಕಲಿಕಾ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಬಲ್ಲ ೪ಜಿ ನೆಟ್‌ವರ್ಕ್ ಇಲ್ಲ. ಆನ್‌ಲೈನ್ ಪಾಠಗಳನ್ನು ಶೇ. 60ರಷ್ಟು ವಿದ್ಯಾರ್ಥಿಗಳು ಬಳಸುತ್ತಿದ್ದಾರೆ ಎಂದರೂ ಉಳಿದ ಶೇ. 40 ವಿದ್ಯಾರ್ಥಿಗಳ ಕಥೆಯೇನು? ಅವರನ್ನು ಬಿಟ್ಟು ನಾವು ಮುಂದಕ್ಕೆ ಹೋಗುವುದಾದರೂ ಹೇಗೆ? ಡಿಜಿಟಲ್ ಕಂದಕದ ನಡುವೆ ನಮ್ಮ ವಿದ್ಯಾರ್ಥಿಗಳು ಸಿಲುಕಿಕೊಳ್ಳದಂತೆ ನೋಡಿಕೊಳ್ಳುವುದು ಶಿಕ್ಷಣ ವಲಯದ ದೊಡ್ಡ ಜವಾಬ್ದಾರಿ. ಜತೆಗೆ ಅಧ್ಯಾಪಕರಿಗೂ ಶಿಕ್ಷಕರಿಗೂ ವಿಶೇಷ ತರಬೇತಿಯ ಅಗತ್ಯವೂ ಇದೆ. ತರಗತಿ ಪಾಠಪ್ರವಚನಗಳಿಗೆ ಆನ್‌ಲೈನ್ ಶಿಕ್ಷಣ ಸಂಪೂರ್ಣವಾಗಿ ಪರ್ಯಾಯವೂ ಆಗಲಾರದು ಎಂಬದೂ ಗಮನಾರ್ಹ.

ಸಾಗಬೇಕಿರುವ ದಾರಿ ಬಲುದೂರ ಇದೆ. ಆದರೆ ಕೊರೋನಾ ಆ ದಾರಿಯ ಅನಿವಾರ್ಯ, ಇತಿಮಿತಿ ಹಾಗೂ ಅಗತ್ಯ ತಯಾರಿಗಳ ಕುರಿತು ನಾವು ಯೋಚಿಸುವಂತೆ ಮಾಡಿದೆ.

-ಸಿಬಂತಿ ಪದ್ಮನಾಭ ಕೆ. ವಿ. 

ಭಾನುವಾರ, ಏಪ್ರಿಲ್ 5, 2020

ಆಂಜನೇಯನೆಂಬ ಸ್ಫೂರ್ತಿಯ ಚಿಲುಮೆ

ಏಪ್ರಿಲ್ 4-10, 2020ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತ|
ಅಜಾಡ್ಯಂ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್ ಭವೇತ್||
ಇದು ಜಗತ್ತಿನ ಕೋಟ್ಯಂತರ ಆಸ್ತಿಕರ ದಿನನಿತ್ಯದ ಪ್ರಾರ್ಥನೆ. ಆಂಜನೇಯನ ಸ್ಮರಣೆಯಿಂದ ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತ್ವ, ಆರೋಗ್ಯ, ವಾಕ್‌ಪ್ರತಿಭೆ ಇವೆಲ್ಲವೂ ತಾವಾಗಿಯೇ ಒಲಿದುಬರುತ್ತವೆ ಎಂಬುದು ಅವರೆಲ್ಲರ ಗಾಢ ನಂಬಿಕೆ. ಹನೂಮಂತ ವಜ್ರಕಾಯ, ಜಿತೇಂದ್ರಿಯ, ಶತ್ರುಭಯಂಕರ, ಮಹಾನ್ ಶಕ್ತಿಶಾಲಿ; ಹೀಗಾಗಿ ಆತ ನಂಬಿದವರ ರಕ್ಷಕ, ಉತ್ಸಾಹದ ಚಿಲುಮೆ, ಎಂತಹ ಜುಗುಪ್ಸೆಯಿಂದ ಬೆಂದ ಮನಸ್ಸಿಗೂ ನೆಮ್ಮದಿ, ಧೈರ್ಯ, ಸ್ಫೂರ್ತಿಯನ್ನು ತುಂಬಬಲ್ಲ ಐಂದ್ರಜಾಲಿಕ ಎಂಬ ಭಾವನೆಗೆ ಸಾವಿರಾರು ವರ್ಷಗಳ ಇತಿಹಾಸ.

ಸಿಬಂತಿ ಪದ್ಮನಾಭ | ಬೋಧಿವೃಕ್ಷ |  ಏಪ್ರಿಲ್ 4-10, 2020
ಆಂಜನೇಯ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವುದು ನೂರೆಂಟು ಚಿತ್ರ. ಬಲಗಡೆ ಲಕ್ಷ್ಮಣ, ಎಡಗಡೆ ಸೀತೆಯನ್ನು ಒಡಗೂಡಿ ನಿಂತಿರುವ ಕೋದಂಡರಾಮನ ಎದುರು ಮಂಡಿಯೂರಿ ಕುಳಿತಿರುವ ಮಾರುತಿ, ರಾಮ-ಲಕ್ಷ್ಮಣರನ್ನು ಎರಡೂ ಭುಜಗಳಲ್ಲಿ ಹೊತ್ತು ಸಾಗುತ್ತಿರುವ ಹನೂಮಂತ, ಕೈಗಳನ್ನು ಮುಂದಕ್ಕೆ ಚಾಚಿ ಸಾಗರಲ್ಲೋಂಘನ ಮಾಡುತ್ತಿರುವ ಪವನಸುತ, ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಬರುತ್ತಿರುವ ವಾತಾತ್ಮಜ, ತನ್ನೆದೆಯನ್ನೇ ಸೀಳಿ ರಾಮ ಇಲ್ಲಿದ್ದಾನೆ ಎಂದು ತೋರಿಸುವ ರಾಮದೂತ... ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಚಿತ್ರ.

ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬೇಕಾದವನು ಈ ಆಂಜನೇಯ. ಮಕ್ಕಳಿಗಂತೂ ಹನೂಮಂತ ಒಬ್ಬ ಆಪ್ತ ಗೆಳೆಯ. ತಾವು ಇಷ್ಟಪಡುವ ಮಹಿಮಾವಿಶೇಷಗಳನ್ನು ಕ್ಷಣಮಾತ್ರದಲ್ಲಿ ಮಾಡಿತೋರಿಸಬಲ್ಲ ಪವಾಡಪುರುಷ. ತಮ್ಮೊಂದಿಗೆ ಓರಗೆಯವನಾಗಿ ಆಟವಾಡಬಲ್ಲ ಬಾಲಮಾರುತಿ. ಹನೂಮಂತ ನಾಯಕನಾಗಿರುವ ಕಾರ್ಟೂನು ಇಲ್ಲದಿದ್ದರೆ ಅದು ಮಕ್ಕಳಿಗೆ ಟಿವಿ ಚಾನೆಲೇ ಅಲ್ಲ. ಯುವಕರಿಗೆ ಈ ಬ್ರಹ್ಮಚಾರಿ ಮನೋಬಲದ ಪ್ರತೀಕವಾದರೆ, ವೃದ್ಧರಿಗೆ ಮೋಕ್ಷಮಾರ್ಗದ ದಿಕ್ಸೂಚಿ. ಶರೀರಬಲ, ಬುದ್ಧಿಬಲ, ಆತ್ಮಬಲಗಳ ತ್ರಿವೇಣಿ ಸಂಗಮ. ಆದರ್ಶದಲ್ಲಿ, ಚಾರಿತ್ರ್ಯದಲ್ಲಿ, ಸದಾಚಾರದಲ್ಲಿ, ಕಾರ್ಯಕ್ಷಮತೆಯಲ್ಲಿ ಅವನಿಗೆ ಸರಿಮಿಗಿಲಾದವರು ಇನ್ನೊಬ್ಬರಿಲ್ಲ. 'ನ ಸಮಃ ಸ್ಯಾತ್ ಹನೂಮತಃ’ - ಹನೂಮಂತನಿಗೆ ಸಮ ಬೇರಾರೂ ಇಲ್ಲ ಎಂದು ಸ್ವತಃ ರಾಮಚಂದ್ರನಿಂದಲೇ ಪ್ರಶಂಸೆಗೆ ಪಾತ್ರನಾದವನು ಅವನು.

ಋಷ್ಯಮೂಕದ ಪಾದದಲ್ಲಿದ್ದ ಪಂಪಾಸರೋವರದ ತಟದಲ್ಲಿ ಆರಂಭವಾದ ರಾಮ-ಹನುಮರ ಸಖ್ಯ ಅಖಂಡ, ಚಿರಸ್ಥಾಯಿ. 'ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾ ಕ್ಲಿಷ್ಟಕರ್ಮಣಃ’ - ಉತ್ತಮ ಕರ್ಮಗಳನ್ನೇ ಎಸಗುವ ರಾಮಚಂದ್ರನಿಗೆ ನಾನು ಎಂದೆಂದಿಗೂ ದಾಸಾನುದಾಸ ಹೀಗೆ ಘೋಷಿಸಿಕೊಂಡ ಆಂಜನೇಯ ಅದನ್ನೇ ಯುಗಯುಗಗಳ ಪರ್ಯಂತ ಸಾಧಿಸಿಕೊಂಡು ಬಂದ. ಅವನು ಬಯಸಿದ್ದರೆ ರಾಮನು ವಾಲಿಯನ್ನು ವಧಿಸಿದ ಮೇಲೆ ಕಿಷ್ಕಿಂಧೆಯ ರಾಜನಾಗಬಹುದಿತ್ತು. ಆದರೆ ಅವನಿಗೆ ಬೇಕಿದ್ದದ್ದು ರಾಮನ ಸಾಹಚರ್ಯವೇ ಹೊರತು ರಾಜಕಾರಣವಾಗಲೀ, ಅಧಿಕಾರವಾಗಲೀ ಆಗಿರಲಿಲ್ಲ. ರಾಮಾವತಾರದ ಕೊನೆಯಲ್ಲಿ ’ಮುಂದೇನು’ ಎಂದು ಆಂಜನೇಯನನ್ನು ರಾಮ ಕೇಳಿದಾಗ ಅವನು ಹೇಳಿದ್ದು ಅದನ್ನೇ: ಭೂಮಿಯ ಮೇಲೆ ರಾಮಕಥೆ ಇರುವವರೆಗೆ ನನಗೆ ಅದೇ ನಾಮಸ್ಮರಣೆಯಲ್ಲಿ ಉಳಿಯುವ ಆಸೆ.

ಆಗ ರಾಮ ಹೇಳಿದನಂತೆ: ಹನುಮಾ, ನಿನ್ನ ಉಪಕಾರಗಳನ್ನು ನಾನು ಹೇಗೆ ತೀರಿಸಲಿ? ನೀನು ಮಾಡಿರುವ ಒಂದೊಂದು ಉಪಕಾರಕ್ಕೂ ನನ್ನ ಒಂದೊಂದು ಪ್ರಾಣವನ್ನು ನೀಡಬೇಕೆಂದರೂ ನನಗಿರುವುದು ಐದೇ ಪ್ರಾಣಗಳು. ಹೆಚ್ಚೆಂದರೆ ನಿನ್ನ ಐದು ಉಪಕಾರಗಳಿಗೆ ಮಾತ್ರ ಅವನ್ನು ನೀಡಬಹುದು. ಉಳಿದುದಕ್ಕೆ ಏನೂ ಕೊಡಲಾರೆ. ನಾನು ಎಂದೆಂದಿಗೂ ನಿನಗೆ ಋಣಿಯೇ.... ರಾಮ-ಹನುಮರದ್ದು ದೇವರು ಭಕ್ತರ ಸಂಬಂಧವೋ, ಸೇವ್ಯ-ಸೇವಕರ ಸಂಬಂಧವೋ, ಓರಗೆಯ ಸ್ನೇಹಿತರ ನಡುವಿನ ಸಂಬಂಧವೋ ಅವರಿಗೆ ಮಾತ್ರ ಗೊತ್ತು. ಆದರೆ ಅಂತಹದೊಂದು ಗಾಢ ಸಂಬಂಧವನ್ನು ಜಗತ್ತಿನಲ್ಲಿ ಬೇರೆಲ್ಲೂ ಕಾಣೆವು.

ಹನುಮ ಸಾಮಾನ್ಯ ಕಪಿಯಲ್ಲ. ಚತುರ್ವೇದ ಪರಿಣತ. ವ್ಯಾಕರಣ ಪಂಡಿತ. ತರ್ಕ ಮೀಮಾಂಸೆಗಳಲ್ಲಿ ಪಾರಂಗತ. ರಸಪ್ರಜ್ಞೆ, ಸಮಯಪ್ರಜ್ಞೆ, ಸೌಂದರ್ಯಪ್ರಜ್ಞೆ, ವಾಕ್ಚಾತುರ್ಯ ಹೊಂದಿದ್ದ ಅಸೀಮ ರಾಮಭಕ್ತ. ಇಂದ್ರಾದಿ ದೇವತೆಗಳಿಂದ ಅನೇಕ ವಿದ್ಯೆಗಳನ್ನು ವರರೂಪವಾಗಿ ಪಡೆದವನು. ಇನ್ನೂ ಬಾಲಕನಿದ್ದಾಗಲೇ ಸೂರ್ಯನೆಂದು ಹಣ್ಣೆಂದು ಭ್ರಮಿಸಿ ನುಂಗಹೋದವನು. ಸೀತಾನ್ವೇಷಣೆಗಾಗಿ ಸಹಸ್ರ ಯೋಜನ ವಿಸ್ತಾರದ ಸಮುದ್ರವನ್ನು ಒಂದೇ ನೆಗೆತಕ್ಕೆ ಹಾರಿದವನು. ನಡುವೆ ಎದುರಾದ ಸುರಸೆ, ಸಿಂಹಿಣಿ, ಲಂಕಿಣಿಯರನ್ನು ನಿವಾರಿಸಿ ಅಶೋಕವನದಲ್ಲಿ ಸೀತೆಯನ್ನು ಪತ್ತೆಹಚ್ಚಿ ಆಕೆಗೆ ಶುಭಸಮಾಚಾರವನ್ನು ತಲುಪಿಸಿದವನು. ಜಂಬೂಮಾಲಿ, ಅಕ್ಷಯಕುಮಾರರನ್ನೆಲ್ಲ ಸದೆಬಡಿದು ಸ್ವರ್ಣಲಂಕೆಯನ್ನು ದಹಿಸಿ ರಾಮನಿಗೆ ವರ್ತಮಾನ ಮುಟ್ಟಿಸಿದವನು. ಮಹಾಪರಾಕ್ರಮಿ. 'ನ ರಾವಣ ಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್’ - ಸಾವಿರ ರಾವಣರು ಎದುರಾದರೂ ನನಗೆ ಸರಿಸಮ ಎದುರಾಳಿ ಆಗಲಾರರು ಎಂದು ಘರ್ಜಿಸಿದವನು. ಅದಕ್ಕೇ ಜನಸಾಮಾನ್ಯರಿಗೆ ಅವನೊಂದು ಮಹಾಪ್ರೇರಣೆ.

ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ||
ಅದು ಜಗತ್ತಿನ ಕೋಟಿಕೋಟಿ ಜನ ರಾಮದೂತನಿಗೆ ಪ್ರತಿದಿನ ವಂದಿಸುವ ಬಗೆ. ನಿರಾಶೆ, ಕತ್ತಲು ಮನಸ್ಸುಗಳನ್ನು, ಜಗತ್ತನ್ನು ತುಂಬಿರುವಾಗ ಚಿರಂಜೀವಿ ಆಂಜನೇಯನ ಚಿತ್ರ ಆಶಾವಾದ, ಧೈರ್ಯವನ್ನು ಕೊಡಬಲ್ಲುದಾದರೆ ಆ ಚಿತ್ರ ಸರ್ವವ್ಯಾಪಿಯಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಮಾರ್ಚ್ 31, 2020

ಕಾಡಿನ ನಡುವೆ ಕಲಿಕೆಯ ಕನಸು: ಮುಂಡೂರುಪಳಿಕೆ ಶಾಲೆ ಎಂಬ ಊರ ಸಮಸ್ತರ ಕೂಸು

ಸುಮಾರು 11 ವರ್ಷಗಳ ಹಿಂದೆ, ಅಂದರೆ 2009ರಲ್ಲಿ, ಅಪ್ಪನ ನೆನಪುಗಳನ್ನು ಕೆದಕಿ ನಿರೂಪಿಸಿದ ಬರೆಹ  ಇದು. ನಮ್ಮ ಮುಂಡೂರುಪಳಿಕೆ ಶಾಲೆ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾಗ ಬೆಳ್ತಂಗಡಿಯ 'ಸುದ್ದಿ ಬಿಡುಗಡೆ'ಗಾಗಿ ಬರೆದದ್ದು. ಆಗ ಅದು ಪ್ರಕಟವಾಗಲಿಲ್ಲ. ಯಾಕೆ ಎಂದು ನನಗೆ ನೆನಪಿಲ್ಲ. ಈಗ ಯಾಕೋ ಪ್ರಕಟಿಸಬೇಕೆನಿಸಿತು.


ಗೊಂಡಾರಣ್ಯ. ಮೈಲುದೂರಕ್ಕೊಂದು ಮನೆ. ಜನರ ಮುಖ ಕಾಣಸಿಗುವುದೇ ಅಪರೂಪ.  ರಸ್ತೆ, ವಾಹನಗಳಂತೂ ಕನಸಿಗೂ ಮೀರಿದ ವಿಷಯಗಳು. ಇಂತಿಪ್ಪ ಮುಂಡೂರುಪಳಿಕೆಯೆಂಬೋ ಕಾಡೂರಿನಲ್ಲಿ ಒಂದು ಶಾಲೆ ಬೇಕೆಂಬ ಬಯಕೆ ನಮ್ಮಲ್ಲಿ ಯಾವ ಕ್ಷಣ ಮೊಳಕೆಯೊಡೆಯಿತೋ ಗೊತ್ತಿಲ್ಲ. ಆದರೆ ನಮ್ಮ ಮಕ್ಕಳಾದರೂ ಒಳ್ಳೆ ವಿದ್ಯಾವಂತರಾಗಿ ಈ ಊರಿಗೆ ಅಂಟಿರುವ ಪ್ರಗತಿಯ ತೊಡಕುಗಳನ್ನು, ಇಲ್ಲಿನ ಬಡತನವನ್ನು ನಿವಾರಿಸುವಂತಾಗಬೇಕು ಎಂಬುದು ನಮ್ಮೆಲ್ಲರ ಮಹದಂಬಲವಾಗಿದ್ದಂತೂ ನೂರಕ್ಕೆ ನೂರು ನಿಜ.

ನಾನು 1975ರ ಜೂನಿನಲ್ಲಿ ಮುಂಡೂರುಪಳಿಕೆಗಿಂತ ಇನ್ನೂ ಎರಡು ಮೈಲು ಆಚೆಗಿರುವ ಸಿಬಂತಿಯಲ್ಲಿ ಬಂದು ನೆಲೆಯೂರಿದ್ದೆ. ನಾನಿದ್ದ ಗುಡಿಸಲು ಬಿಟ್ಟರೆ ಅಲ್ಲೆಲ್ಲೋ ದೂರದ ಸಂಕುವೈಲು, ಅದರಾಚೆಯ ಬಾಳ್ತಿಮಾರು, ಕಕ್ಕುದೋಳಿಗಳಲ್ಲಿ ಎರಡು ಮೂರು ಕುಟುಂಬಗಳು. ಮೈಲುಗಳಷ್ಟು ದೂರ ದಟ್ಟ ಕಾಡಿನಲ್ಲಿ ನಡೆಯಲು ಸಾಧ್ಯವಾದರೆ ನೇತ್ರಾವತಿ ದಂಡೆಯಲ್ಲಿರುವ ಬೀಬಿಮಜಲು, ಸುದೆಪೊರ್ದು, ಚೆಂಬುಕೇರಿ, ಮೈಪಾಳ. ಇನ್ನೊಂದು ದಿಕ್ಕಿನಲ್ಲಿ ಹೋದರೆ  ಮಿತ್ತಡ್ಕ, ಪೊನ್ನಿತ್ತಿಮಾರು, ಕುರ್ಲೆ, ತೆಂಕುಬೈಲು, ಬದಿಜಾಲು. ನೀವು ನಂಬಲೇಬೇಕು- ಇಷ್ಟು ವಿಸ್ತಾರವಾದ ವ್ಯಾಪ್ತಿಯಲ್ಲಿ ಹುಟ್ಟಿದ ಯಾವುದೇ ಮಗುವೂ ಶಿಕ್ಷಣದಿಂದ ವಂಚಿತವಾಗಿಯೇ ಉಳಿಯಬೇಕಿತ್ತು. ಶಾಲೆ ಬೇಕೆಂದರೆ ಎಂಟೋ ಹತ್ತೋ ಕಿಲೋಮೀಟರ್ ನಡೆಯಬೇಕು. ಐದು ವರ್ಷದ ಒಂದು ಮಗು ಅಷ್ಟು ದೂರ ನಡೆದುಹೋಗಿ ಒಂದನೇ ಕ್ಲಾಸಾದರೂ ಮುಗಿಸುವುದುಂಟೇ?

ಮೊದಲೇ ಹೇಳಿದಂತೆ ನಮ್ಮದು ಅಂತಹ ಜನದಟ್ಟಣೆಯ ಊರಂತೂ ಆಗಿರಲಿಲ್ಲ. ಹಾಗೆಂದು ಇರುವ ಮಕ್ಕಳಿಗಾದರೂ ಶಿಕ್ಷಣದ ಬೆಳಕು ಕಾಣಿಸಲೇಬೇಕಿತ್ತು. ನಾನು ಪ್ರಾಥಮಿಕ ಶಿಕ್ಷಣವನ್ನೇ ಪೂರ್ತಿಯಾಗಿ ಮುಗಿಸಿರಲಿಲ್ಲವಾದರೂ ಜೀವನಾನುಭವದ ಪಾಠ ನನಗಿತ್ತು. ಒಂದು ಶಾಲೆ ಕೇವಲ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಸೀಮಿತವಲ್ಲ, ಅದಕ್ಕೆ ಇಡೀ ಊರಿನ ಚಿತ್ರಣ ಬದಲಾಯಿಸುವ ಸಾಮರ್ಥ್ಯವಿದೆ ಎಂಬುದು ನನಗೆ ತಿಳಿದಿತ್ತು. ಆ ಪ್ರದೇಶದ ಕೆಲವು ಹಿರಿಕಿರಿಯ ತಲೆಗಳೂ ನನ್ನ ಯೋಚನೆಯನ್ನು ಬೆಂಬಲಿಸಿದವು. ಹಾಗೆ ಹುಟ್ಟಿಕೊಂಡಿತು ಒಂದು ಶಾಲೆಯ ಕನಸು.

ಆದರೆ ಸ್ವಂತ ಹಣ ಹಾಕಿ ಒಂದು ಖಾಸಗಿ ಶಾಲೆ ಆರಂಭಿಸುವ ಸಾಮರ್ಥ್ಯದವರು ನಾವ್ಯಾರೂ ಆಗಿರಲಿಲ್ಲ. ಮೂರು ಹೊತ್ತು ಗಂಜಿ ಊಟಕ್ಕೆ ಪರದಾಡುವವರೇ ಎಲ್ಲರೂ. ಹೆಚ್ಚಿನವರೂ ಕೂಲಿನಾಲಿ ಮಾಡಿ ಬದುಕುವವರು. ನಮಗೆ ಒಂದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯೇ ಬೇಕಾಗಿತ್ತು.

ಅವು 1980ರ ದಶಕದ ಆರಂಭಿಕ ವರ್ಷಗಳು. ಕೊಕ್ಕಡ ಪಟ್ರಮೆ ಗ್ರಾಮಗಳಿಗೆ ಮಂಗನ ಕಾಯಿಲೆ (KFD)ಯ ಬರಸಿಡಿಲು ಬಡಿದಿತ್ತು. ಸಾವಿನ ಸಂಖ್ಯೆ ದಿನೇದಿನೇ ಬೆಳೆಯುತ್ತಲೇ ಇತ್ತು. ಊರಿನ ಅಭಿವೃದ್ಧಿಯ ಕನಸು ಹೊತ್ತಿದ್ದ ನಾವು ಅದಾಗಲೇ ಅಡ್ಡೈ-ಮುಂಡೂರುಪಳಿಕೆ-ಮೈಪಾಳ ರಸ್ತೆ ನಿರ್ಮಿಸಿಯಾಗಿತ್ತು. ವಿಪರ್ಯಾಸವೆಂದರೆ ಅದೇ ಹೊಸ ರಸ್ತೆಯಲ್ಲಿ ಬಂದ ಮೊದಲ ವಾಹನ ಮಂಗನಕಾಯಿಲೆಗೆ ಬಲಿಯಾದ ಇಬ್ಬರ ಶವವನ್ನು ಹೊತ್ತು ತಂದುದಾಗಿತ್ತು... ಇದೇ ಕೊನೆ, ಇನ್ನು ಈ ಊರಿನಲ್ಲಿ ಈ ರೀತಿ ಮೃತ್ಯುವಿನ ಪ್ರವೇಶವಾಗಬಾರದು ಎಂದು ನಿರ್ಧರಿಸಿದ ನಾವು ಊರಿನ ಹತ್ತು ಸಮಸ್ತರು ಒಂದಾಗಿ ಹೋಗಿ ಕೊಕ್ಕಡ ಮತ್ತು ಸೌತೆಡ್ಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಮನಸಾರೆ ಪ್ರಾರ್ಥಿಸಿದೆವು. ಹೌದು, ಅದೇ ದಿನ ನಾವು ದೇವರ ಎದುರು ನಿಂತು ನಮ್ಮೂರಿಗೊಂದು ಶಾಲೆ ತರುವ ಸಂಕಲ್ಪವನ್ನೂ ಮಾಡಿದೆವು.

ನಾನೂ ಮುಂಡೂರು ಲಕ್ಷ್ಮೀನಾರಾಯಣ ಶಬರಾಯರೂ ಒಂದೆಡೆ ಕುಳಿತು ಶಾಲೆ ಆರಂಭವಾದರೆ ಎಷ್ಟು ಮಕ್ಕಳು ಒಂದನೇ ಕ್ಲಾಸಿಗೆ ಸೇರಬಹುದೆಂದು ಒಂದು ಪಟ್ಟಿ ತಯಾರಿಸಿದೆವು. ಮೂವತ್ತು ಮಕ್ಕಳ ಪಟ್ಟಿ ಸಿದ್ಧವಾಯಿತು. ನಿಜ ಹೇಳಬೇಕೆಂದರೆ ಆ ಊರಿನಲ್ಲಿ ಏಕಾಏಕಿ ಆ ಕಾಲದಲ್ಲಿ 30 ಮಕ್ಕಳನ್ನು ಶಾಲೆಗೆ ಕರೆತರುವುದು ಸಾಧ್ಯವೇ ಇರಲಿಲ್ಲ. ಹಾಗೆಂದು ಒಂದು ಉತ್ಸಾಹದಾಯಕ ಸಂಖ್ಯೆಯನ್ನು ಸರ್ಕಾರಕ್ಕೆ ನಾವು ತೋರಿಸಲೇಬೇಕಿತ್ತು. ಆ ಪಟ್ಟಿ ಹಿಡಿದುಕೊಂಡು ನಾನೂ ಶಬರಾಯರೂ ಬೆಳ್ತಂಗಡಿಯಲ್ಲಿದ್ದ ಎಇಒ ಕಚೇರಿಗೆ ಹೋದೆವು. ನಮ್ಮ ಬೇಡಿಕೆ ಆಲಿಸಿದ ಆಗಿನ ಎಇಒ ರಾಮಚಂದ್ರರಾಯರು ನಮಗೇ ಆಶ್ಚರ್ಯವಾಗುವ ಹಾಗೆ, ಇಷ್ಟು ದಿನ ಯಾಕೆ ಬರಲಿಲ್ಲ? ಈಗ ಮೈಲಿಗೊಂದು ಶಾಲೆ ಎಂಬ ಸರ್ಕಾರದ ಕಾನೂನೇ ಇದೆಯಲ್ಲ? ಎಂದು ಕೇಳಿ ನಮ್ಮ ಉತ್ಸಾಹವನ್ನು ಇಮ್ಮಡಿಸಿದರು. ನಾಡಿದ್ದು ಮಂಗಳೂರಲ್ಲಿ ಡಿಡಿಪಿಐ ಅವರ ಮೀಟಿಂಗಿದೆ. ಎಲ್ಲ ವಿವರಗಳನ್ನು ನಾಳೆ ಸಂಜೆಯೊಳಗೆ ತಂದುಕೊಡಿ. ತಡ ಮಾಡಿದರೆ ಮುಂದಿನ ವರ್ಷದವರೆಗೆ ಕಾಯಬೇಕಾಗುತ್ತೆ, ಎಂದು ಪ್ರತ್ಯೇಕವಾಗಿ ನೆನಪಿಸಿದರು.
ಅಪ್ಪ
ಸರಿ, ತಿರುಗಿ ಬಂದವರೇ ನಾಳೆ ಮಾಡಬೇಕಾದ ಕೆಲಸಗಳ ತಯಾರಿಗೆ ತೊಡಗಿದೆವು. ಎಇಒ ಗ್ರಾಮನಕ್ಷೆ ಕೇಳಿದ್ದರು. ಅದು ಬೋಳೋಡಿ ವೆಂಕಟ್ರಮಣ ಭಟ್ರ ಕೈಲಿತ್ತು. ರಾತೋರಾತ್ರಿ ಅಲ್ಲಿಂದ ಅದನ್ನು ತಂದಾಯಿತು. ಮರುದಿನವೇ ನಮ್ಮ ಅರ್ಜಿ ಮತ್ತಿತರ ವಿವರಗಳನ್ನು ಎಇಒ ಅವರಿಗೆ ತಲುಪಿಸಿಯೂ ಆಯಿತು. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಸೌತೆಡ್ಕದಲ್ಲಿ ನಾವೆಲ್ಲ ಸೇರಿ ಪ್ರಾರ್ಥನೆ ಸಲ್ಲಿಸಿದ 14ನೇ ದಿನಕ್ಕೆ ಮುಂಡೂರುಪಳಿಕೆಗೆ ಶಾಲೆ ಮಂಜೂರಾಯಿತು. ಬಹುಶಃ ಈಗಿನ ಕಾಲದಲ್ಲೂ ಸರ್ಕಾರಿ ಸೌಲಭ್ಯವೊಂದು ಇಷ್ಟೊಂದು ಶೀಘ್ರವಾಗಿ ಮಂಜೂರಾಗದೇನೋ?

ಅಲ್ಲಿಗೆ ದೊಡ್ಡದೊಂದು ಕೆಲಸ ಮುಗಿಯಿತು. ಆಗಿನ ಕೊಕ್ಕಡದ ಗ್ರಾಮಲೆಕ್ಕಿಗರಾಗಿದ್ದ ಭಂಡಾರಿ ಎಂಬವರೊಬ್ಬರು ಶಾಲೆಗೆಂದು ಒಂದೂವರೆ ಎಕ್ರೆಯಷ್ಟು ಜಾಗ ಅಳೆದು ಕೊಟ್ಟರು. ಆದರೆ ಕೂಡಲೇ ತರಗತಿ ಆರಂಭಿಸಬೇಕಿದ್ದರಿಂದ ನಮಗೆ ಮತ್ತೆ ಸಂಕಷ್ಟಕ್ಕಿಟ್ಟುಕೊಂಡಿತು. ಅಷ್ಟು ಬೇಗ ಕಟ್ಟಡ ಎಲ್ಲಿಂದ ಬರಬೇಕು? ಆ ಹೊತ್ತಿಗೆ ಮತ್ತೆ ಆಪದ್ಬಾಂಧವರಾದವರು ಮುಂಡೂರು ಶಬರಾಯರು. ತಮ್ಮ ಮನೆಯ ಒತ್ತಿಗಿದ್ದ ಕೊಟ್ಟಿಗೆಯಲ್ಲೇ ತತ್ಕಾಲಕ್ಕೆ ಶಾಲೆ ಆರಂಭಿಸಬಹುದೆಂದರು. ಜೂನ್ 27, 1984ರ ಶುಭಮುಹೂರ್ತದಲ್ಲಿ ಎಲಿಕಳ ಸೂರ್ಯನಾರಾಯಣ ಶರ್ಮರ ಅಧ್ಯಕ್ಷತೆಯಲ್ಲಿ ದ.ಕ.ಜಿ.ಪ. ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟನೆಯಾಯಿತು. ಹಾಗೂಹೀಗೂ 13 ವಿದ್ಯಾರ್ಥಿಗಳು ಸೇರ್ಪಡೆಗೊಂಡರು. ಶಬರಾಯರನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆವು. ಆಗ ಜೋಡುಮಾರ್ಗ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ದಿ. ಲಿಗೋರಿ ಮಿನೆಜಸ್ ಡೆಪ್ಯುಟೇಶನ್ ಮೇಲೆ ಮೊದಲ ಅಧ್ಯಾಪಕರಾಗಿ ನಮ್ಮಲ್ಲಿಗೆ ಬಂದರು. ಆ ನಂತರ ಸ್ವಲ್ಪ ಸಮಯ ಅಶೋಕ ಮಾಸ್ಟ್ರು ಎಂಬವರು ಇದ್ದರು; ಅವರು ಪರವೂರಿನವರಾದ್ದರಿಂದ ನಮ್ಮ ಜೋಪಡಿಯಲ್ಲೇ ಉಳಿದುಕೊಂಡಿದ್ದರು.

ಅಲ್ಲಿಗೆ ನಮ್ಮ ಬಹುದಿನಗಳ ಕನಸೊಂದು ನನಸಾಯಿತಾದರೂ ಜವಾಬ್ದಾರಿ ಮುಗಿದಿರಲಿಲ್ಲ. ಶಾಲೆಗೊಂದು ಸ್ವಂತ ಕಟ್ಟಡ ಬೇಕಿತ್ತು. ಅದರ ಕೆಲಸವೂ ಆರಂಭವಾಯಿತು. ನಿಜ ಹೇಳಬೇಕೆಂದರೆ, ನಮ್ಮ ಶಾಲಾ ಕಟ್ಟಡಕ್ಕೆ ಯಾವ ಎಂಜಿನಿಯರೂ ಇರಲಿಲ್ಲ, ಯಾವ ಬಜೆಟ್ಟೂ ಇರಲಿಲ್ಲ. ಊರಿನ ಹಿರಿತಲೆಗಳೇ ಎಂಜಿನಿಯರುಗಳು, ನಮ್ಮ ಶ್ರಮದಾನವೇ ಬಜೆಟ್ಟು! ಅದೊಂದು ಏಕಕೊಠಡಿಯ ಮುಳಿಹುಲ್ಲು ಛಾವಣಿಯ ಮಣ್ಣಿನ ಗೋಡೆಯ ಸಣ್ಣ ಶಾಲಾ ಕಟ್ಟಡ. ಬದಿಜಾಲು ರಾಮಣ್ಣ ಗೌಡರು ಗೋಡೆ ಇಟ್ಟರು; ಕುರ್ಲೆಯ ಕಿಟ್ಟಣ್ಣ ಅದಕ್ಕೆ ಪೊಳಿಮ್ಮಣೆ ಹಾಕಿದರು; ಮುಂಡೂರಿನ ಶಬರಾಯ ಸಹೋದರರು ಎರಡು ಕಿಟಕಿ ಕೊಟ್ಟರು; ತೆಂಕುಬೈಲು ಶ್ಯಾಮ ಭಟ್ರು ಬಾಗಿಲು ಮಾಡಿಸಿಕೊಟ್ಟರು; ಸಿಬಂತಿಯ ಚಣ್ಣ ಗೌಡರು, ಸುದೆಪೊರ್ದು ಈಶ್ವರಗೌಡರು, ಕೊರಗಪ್ಪ ಗೌಡರು, ಚೆಂಬುಕೇರಿಯ ಬೋರ ಗೌಡರು ಹಗಲಿರುಳು ದುಡಿದರು. ಊರಿನ ಮಂದಿಯೆಲ್ಲ ಎಷ್ಟು ಉತ್ಸುಕರಾಗಿದ್ದರೆಂದರೆ ಪ್ರತೀ ಮನೆಯಿಂದ ಕನಿಷ್ಟ ಒಬ್ಬರಾದರೂ ಖುದ್ದು ಬಂದು ಶ್ರಮದಾನದಲ್ಲಿ ಪಾಲ್ಗೊಂಡರು. ಮೂರು ಪ್ರತ್ಯೇಕ ತಂಡಗಳಲ್ಲಿ ಜನ ದುಡಿದರು. ಒಟ್ಟು ೪೦ ಆಳಿನ ಕೆಲಸದಲ್ಲಿ ನಮ್ಮ ಶಾಲಾ ಕಟ್ಟಡ ಎದ್ದು ನಿಂತಿತು.
ನಮ್ಮೂರ ಮುಂಡೂರುಪಳಿಕೆ ಶಾಲೆ
ಇದೆಲ್ಲ ನಡೆದು ಈಗ 25 ವರ್ಷಗಳೇ ಉರುಳಿಹೋಗಿವೆ [ಈಗ 36 ವರ್ಷ ಆಯಿತು]. ನನಗೆ 78 ವರ್ಷ ದಾಟಿದೆ [ಈಗ 90]. ಅರೆ, ಇಷ್ಟು ಬೇಗ ನಮ್ಮ ಶಾಲೆಗೆ ರಜತ ಸಂಭ್ರಮ ಬಂತೇ ಎಂದು ಆಶ್ಚರ್ಯವಾಗುತ್ತದೆ. ಶಾಲೆಯಲ್ಲಿ, ಊರಿನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಶಾಲೆಗೆ ಸಿಮೆಂಟಿನ ಗೋಡೆ, ಹೆಂಚಿನ ಮಾಡು, ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಬಂದಿದೆ. ನೂರಾರು ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಹತ್ತಾರು ಅಧ್ಯಾಪಕರು ಬಂದು ಹೋಗಿದ್ದಾರೆ. ಊರಿನಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಜನ ಮೊದಲಿನಷ್ಟು ಬಡವರಾಗಿಲ್ಲ. ಅವರು ಬೇರೆಬೇರೆ ವಿಚಾರದಲ್ಲಿ ಜಾಗೃತಿ ಹೊಂದಿದ್ದಾರೆ. ಆದಾಗ್ಯೂ ಜನರ ಹತ್ತು ಹಲವು ಬೇಡಿಕೆಗಳು ಹಾಗೆಯೇ ಇವೆ. ಈಗ ಶಾಲೆಗೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ [ಈಗ 36] ಮುಖ್ಯೋಪಾಧ್ಯಾಯರಾಗಿರುವ ಜೋಸೆಫ್ ಪಿರೇರಾ ಅವರು ಈ ಊರಿಗೆ ಏನಾದರೂ ಶಾಶ್ವತವಾದ ಕೊಡುಗೆ ನೀಡಬೇಕೆಂಬ ವಿಶಿಷ್ಟ ಯೋಜನೆ ಹಾಕಿಕೊಂಡಿದ್ದಾರೆ. ಊರಿನ ಮಂದಿಯನ್ನೆಲ್ಲ ಒಟ್ಟು ಸೇರಿಸಿ ಇಲ್ಲಿನ ಸಮಸ್ಯೆ ಸವಾಲುಗಳಿಗೆ ಅವರ ಮೂಲಕವೇ ಪರಿಹಾರ ಹುಡುಕಿಸುವ ಹೊಸ ಪ್ರಯತ್ನಕ್ಕೆ ಧುಮುಕಿದ್ದಾರೆ. ಜನರೆಲ್ಲ ಅವರೊಂದಿಗೆ ಕೈಗೂಡಿಸಿ ಒಗ್ಗಟ್ಟಾಗಿ ದುಡಿದರೆ ಇದೊಂದು ಮಾದರಿ ಊರಾಗಿ ಬೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಿಗೆ ಕಾಡಿನ ನಡುವೆ ಹುಟ್ಟಿದ ಈ ಕಲಿಕೆಯ ಕನಸಿಗೆ ನಿಜವಾದ ಅರ್ಥ ಬರುತ್ತದೆ.
- ಸಿಬಂತಿ ವೆಂಕಟ್ರಮಣ ಭಟ್

ಗುರುವಾರ, ಜನವರಿ 16, 2020

ಈಗ ನಿಮ್ಮ ಟೈಮ್ ಶುರು

14 ಜನವರಿ 2020ರ 'ಉದಯವಾಣಿ'ಯ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

Winners don't do different things, but they do the things differently- ಅಂತಾರೆ ಮ್ಯಾನೇಜ್ಮೆಂಟ್ ಗುರು ಶಿವ ಖೇರಾ. ಗೆಲ್ಲುವವರು ಆ ವಿಧಾನ ಈ ವಿಧಾನ ಅಂತ ಸಮಯಹರಣ ಮಾಡುವುದಿಲ್ಲವಂತೆ, ಅವರು ಮಾಡುವುದನ್ನೇ ಉಳಿದವರಿಗಿಂತ ವಿಭಿನ್ನವಾಗಿ ಮಾಡುತ್ತಾರಂತೆ. ಪರೀಕ್ಷೆಗೆ ಸಿದ್ಧವಾಗುವವರೂ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಹೀಗೆ ಓದಿದರೆ ಸರಿಯೋ, ಹಾಗೆ ಓದಿದರೆ ಸರಿಯೋ ಎಂದು ಅಳೆದು ಸುರಿಯುವುದರಲ್ಲೇ ಸಮಯ ಕಳೆಯುವುದು ಜಾಣತನವಲ್ಲ. ಪರೀಕ್ಷಾ ತಯಾರಿಯಲ್ಲಿ ತೊಡಗಿರುವವರಿಗೆ ಸಮಯ ಬಹಳ ಮುಖ್ಯ; ಪರೀಕ್ಷೆ ಸಮೀಪಿಸಿದಾಗಲಂತೂ ಒಂದೊಂದು ನಿಮಿಷವೂ ಅಮೂಲ್ಯ.

ಉದಯವಾಣಿ- ಜೋಶ್ 14-01-2020
ಹೀಗಾಗಿ ಯಾವ ಸಬ್ಜೆಕ್ಟನ್ನು ಎಷ್ಟೆಷ್ಟು ಹೊತ್ತು ಓದಬೇಕು, ಹೇಗೆ ಪ್ಲಾನ್ ಮಾಡಿಕೊಳ್ಳಬೇಕು ಎಂದು ಅರ್ಥ ಮಾಡಿಕೊಳ್ಳದೇ ಹೋದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಎಲ್ಲರಿಗೂ ಎಲ್ಲ ಸಬ್ಜೆಕ್ಟೂ ಒಂದೇ ಥರ ಇರುವುದಿಲ್ಲ. ಕೆಲವರಿಗೆ ವಿಜ್ಞಾನ ಕಷ್ಟ, ಇನ್ನು ಕೆಲವರಿಗೆ ಗಣಿತ ಕಷ್ಟ. ಹೀಗಾಗಿ ಎಲ್ಲರಿಗೂ ಸರಿ ಬರುವಂತಹ ಒಂದು ಕಾಮನ್ ವೇಳಾಪಟ್ಟಿ ಹಾಕಿಕೊಳ್ಳಲಾಗದು. ಒಬ್ಬೊಬ್ಬರೂ ತಮ್ಮ ಪರಿಸ್ಥಿತಿಯನ್ನು ಗಮನಿಸಿಕೊಂಡು ಅದಕ್ಕೆ ತಕ್ಕುದಾದ ವೇಳಾಪಟ್ಟಿ ಮಾಡಿಕೊಳ್ಳಬೇಕು. ಅಂತೂ ಟೈಮ್‍ಟೇಬಲ್ ಹಾಕಿಕೊಳ್ಳದೆ ಓದುವುದೆಂದರೆ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದ ಹಾಗೆಯೇ ಸರಿ.

ಎರಡು ರೀತಿಯ ವೇಳಾಪಟ್ಟಿ ಮಾಡಿಕೊಳ್ಳಬಹುದು. ಒಂದು ತರಗತಿಗಳು ನಡೆಯುತ್ತಿರುವಾಗ ಓದಿಕೊಳ್ಳುವುದಕ್ಕೆ; ಇನ್ನೊಂದು ಪರೀಕ್ಷೆಗಾಗಿಯೇ ಕೊಡುವ ರೀಡಿಂಗ್ ಹಾಲಿಡೇಸ್‍ನಲ್ಲಿ ಅಥವಾ ವಾರಾಂತ್ಯದಲ್ಲಿ ಓದಿಕೊಳ್ಳುವುದಕ್ಕೆ. ತರಗತಿಗಳಿನ್ನೂ ನಡೆಯುತ್ತಿರುವಾಗ ಓದುವುದಕ್ಕೆ ತಮ್ಮತಮ್ಮ ಶಾಲಾ/ಕಾಲೇಜು ಅವಧಿಯನ್ನು ಗಮನಿಸಿಕೊಂಡು ಟೈಮ್ ಟೇಬಲ್ ಸಿದ್ಧಪಡಿಸಿಕೊಳ್ಳಬೇಕು. ಉದಾಹರಣೆಗೆ, ಬೆಳಗ್ಗೆ 5ರಿಂದ 8ಗಂಟೆಯವರೆಗೆ, ಸಂಜೆ 8ರಿಂದ 11 ಗಂಟೆಯವರೆಗೆ ಓದುವ ಸಮಯ ಅಂತ ಮೀಸಲಿಡಬಹುದಾದರೆ, ಒಟ್ಟು ಐದು ಗಂಟೆ ಸಿಕ್ಕಹಾಗಾಯ್ತು.

ಒಂದೇ ದಿನ ಎಲ್ಲ ಸಬ್ಜೆಕ್ಟ್‍ಗಳನ್ನೂ ಒಂದಿಷ್ಟಿಷ್ಟು ಓದಿಕೊಳ್ತೀನಿ ಅಂತ ಹೊರಡುವುದಕ್ಕಿಂತ ಎರಡು ದಿನಗಳಲ್ಲಿ ಎಲ್ಲವನ್ನೂ ಕವರ್ ಮಾಡಿಕೊಳ್ಳುವುದು ಉತ್ತಮ. ಮೊದಲ ದಿನ ಬೆಳಗ್ಗೆ ದೊರೆಯುವ ಮೂರು ಗಂಟೆಗಳನ್ನು ನಿಮಗೆ ಅತ್ಯಂತ ಕಷ್ಟವೆನಿಸುವ ವಿಷಯಕ್ಕೆ ಮೀಸಲಿಡಿ. ಉದಾ: ಗಣಿತ ಅಥವಾ ವಿಜ್ಞಾನ. ಸಂಜೆಯ ವೇಳೆ, 7ರಿಂದ 8 ಗಂಟೆಯ ನಡುವೆ ಆಯಾ ದಿನ ಮಾಡಬೇಕಾದ ಹೋಂವರ್ಕ್ ಇತ್ಯಾದಿಗಳನ್ನು ಪೂರೈಸಿಕೊಳ್ಳಿ. ಆಮೇಲೆ ಒಂದರ್ಧ ಗಂಟೆ ಊಟದ ಬ್ರೇಕ್ ತೆಗೆದುಕೊಂಡರೆ 8-30ರಿಂದ 11 ಗಂಟೆಯವರೆಗೆ ಇನ್ನೊಂದು ಸಬ್ಜೆಕ್ಟನ್ನು ಓದಿಕೊಳ್ಳಬಹುದು.

ಎರಡನೆಯ ದಿನ ಇದೇ ಸಮಯದ ಮಿತಿಯಲ್ಲಿ ಉಳಿದ ನಾಲ್ಕು ಸಬ್ಜೆಕ್ಟ್‍ಗಳನ್ನು ಓದುವ ಪ್ಲಾನ್ ಮಾಡಿಕೊಳ್ಳಬೇಕು. ಅವರವರ ಆದ್ಯತೆಗನುಗುಣವಾಗಿ ಸಮಯವನ್ನು ಒಂದರಿಂದ ಒಂದೂವರೆಗಂಟೆವರೆಗೆ ಒಂದೊಂದು ವಿಷಯಕ್ಕೆ ಹಂಚಿಕೊಳ್ಳಬಹುದು. ಮರುದಿನದಿಂದ ಮತ್ತೆ ಇದೇ ಯೋಜನೆ ಪುನರಾವರ್ತನೆ ಆಗಬೇಕು.

ಇನ್ನು ರೀಡಿಂಗ್ ಹಾಲಿಡೇಸ್‍ನಲ್ಲಿ ಇಡೀ ದಿನಕ್ಕೆ ವೇಳಾಪಟ್ಟಿ ಹಾಕಿಕೊಳ್ಳುವುದು ತುಂಬ ಮುಖ್ಯ. ಇಲ್ಲವಾದರೆ ನಮಗೆ ಗೊತ್ತಿಲ್ಲದಂತೆಯೇ ಅಮೂಲ್ಯ ಸಮಯ ಎಲ್ಲೋ ಕಳೆದುಹೋಗಿಬಿಡಬಹುದು. ಸರಿಯಾಗಿ ಪ್ಲಾನ್ ಮಾಡಿಕೊಂಡರೆ ರಜಾದಿನದಲ್ಲಿ ಏನಿಲ್ಲವೆಂದರೂ 10-12 ಗಂಟೆ ಓದಿಗಾಗಿಯೇ ಬಳಸಿಕೊಳ್ಳಬಹುದು. ಉದಾಹರಣೆಗೆ, ಬೆಳಗ್ಗೆ 5ರಿಂದ 8ರವರೆಗೆ ನಿಮ್ಮ ಆಯ್ಕೆಯ ಪ್ರಮುಖ ವಿಷಯವನ್ನು ಅಭ್ಯಾಸ ಮಾಡುವುದು; 8ರಿಂದ 9ರವರೆಗೆ ಒಂದು ಬ್ರೇಕ್ ತೆಗೆದುಕೊಂಡು ಸ್ನಾನ, ತಿಂಡಿ ಪೂರೈಸಿಕೊಂಡರೆ 9ರಿಂದ 11ರವರೆಗೆ ಇನ್ನೊಂದು ಸಬ್ಜೆಕ್ಟ್ ತೆಗೆದುಕೊಳ್ಳಬಹುದು. ಆಮೇಲೆ ಒಂದರ್ಧ ಗಂಟೆ ಬ್ರೇಕ್ ತೆಗೆದುಕೊಂಡು ರಿಫ್ರೆಶ್ ಆದರೆ ಮತ್ತೆ ಮಧ್ಯಾಹ್ನ 1-30ರವರೆಗೂ ಓದಬಹುದು. ಅರ್ಧ ಗಂಟೆ ಲಂಚ್ ಬ್ರೇಕ್ ಎಂದುಕೊಂಡರೆ, ಇನ್ನೊಂದರ್ಧ ಗಂಟೆ ಸಣ್ಣ ನಿದ್ದೆ ಮಾಡಿ ರಿಫ್ರೆಶ್ ಆಗುವುದೂ ತಪ್ಪಲ್ಲ.

ಬಳಿಕ 2-30ರಿಂದ 4-30ರವರೆಗೆ ಒಂದು ಸ್ಲಾಟ್, 5ರಿಂದ 8ರವರೆಗೆ ಇನ್ನೊಂದು ಸ್ಲಾಟ್, 8-30ರಿಂದ 10-30ರವರೆಗೆ ಅಂದಿನ ಕೊನೆಯ ಸ್ಲಾಟ್. ಅಂತೂ ಪ್ರತೀ ಸ್ಲಾಟಿನ ನಡುವೆಯೂ ಒಂದಿಷ್ಟು ಗ್ಯಾಪ್ ತೆಗೆದುಕೊಳ್ಳವುದು ತುಂಬ ಮುಖ್ಯ. ಇಲ್ಲಿ ಯಾವ ಯಾವ ಸಬ್ಜೆಕ್ಟ್‍ಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಬೇಕು. ಬೆಳಗ್ಗೆ 5ರಿಂದ 8 ಎಷ್ಟು ಪ್ರಮುಖವಾದ ಸಮಯವೋ, ಸಂಜೆ 5ರಿಂದ 8 ಕೂಡ ಅಷ್ಟೇ ಪ್ರಮುಖ ಸಮಯ. ಊಟದ ಬಳಿಕ ಕೆಲವರಿಗೆ ಒಂದಿಷ್ಟು ಬಳಲಿಕೆ ಕಾಡಬಹುದು, ಆದರೆ 5ರಿಂದ 8ರ ಅವಧಿ ಮನಸ್ಸು ತುಂಬ ಆಕ್ಟೀವ್ ಆಗಿರುವ ಅವಧಿ.

ಎಲ್ಲ ಸಬ್ಜೆಕ್ಟ್‍ಗಳಿಗೂ ಒಂದೇ ಅಪ್ರೋಚ್‍ನಿಂದ ಅನುಕೂಲವಾಗದು. ಆಯಾ ವಿಷಯಕ್ಕನುಗುಣವಾಗಿ ತಯಾರಿಯ ವಿಧಾನದಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಗಣಿತವನ್ನೇ ತೆಗೆದುಕೊಳ್ಳಿ. ಅದಕ್ಕೆ ಪ್ರಾಕ್ಟೀಸ್, ಪ್ರಾಕ್ಟೀಸ್, ಪ್ರಾಕ್ಟೀಸ್ ಎಂಬುದೇ ಮೂಲಮಂತ್ರ. ಓದಿ, ಕೇಳಿ ಕಲಿಯುವ ಸಬ್ಜೆಕ್ಟ್ ಅದಲ್ಲ, ಮಾಡಿ ಕರಗತ ಮಾಡಿಕೊಳ್ಳಬೇಕಾದ ಸಬ್ಜೆಕ್ಟ್ ಅದು. ಜಗತ್ತಿನಲ್ಲಿ ಜೀನಿಯಸ್ ಎನಿಸಿದ ಐನ್‍ಸ್ಟೀನ್ ಏನು ಹೇಳಿದ್ದಾನೆ ಗೊತ್ತಾ? ‘ನಾನೇನೂ ತುಂಬ ಬುದ್ಧಿವಂತ ಅಲ್ಲ. ಸಮಸ್ಯೆಗಳೊಂದಿಗೆ ಸ್ವಲ್ಪ ಹೆಚ್ಚು ಹೊತ್ತು ಕಳೆಯುತ್ತೇನೆ ಅಷ್ಟೇ’ ಅಂತ. ಎಷ್ಟೇ ಕಠಿಣ ವಿಷಯವಾದರೂ ನಮ್ಮ ಸಮಯ ಹಾಗೂ ಪ್ರಾಕ್ಟೀಸಿನ ಎದುರು ಸೋಲಲೇ ಬೇಕು. ಈ ಹಂತದಲ್ಲಿ ಮಾಡಬೇಕಾದ ಎರಡನೇ ಕೆಲಸ ಅಂದ್ರೆ ತಪ್ಪುಗಳನ್ನು ಅರ್ಥ ಮಾಡಿಕೊಳ್ಳುವುದು. ಗಣಿತದಲ್ಲಿ ಒಂದು ಸ್ಟೆಪ್‍ನಲ್ಲಿ ತಪ್ಪಾದರೆ ಉಳಿದದ್ದೆಲ್ಲ ತಪ್ಪಾದಂತೆಯೇ ಅಲ್ಲವೇ? ಹಾಗಾಗಿ ಯಾವ ಹಂತದಲ್ಲಿ ತಪ್ಪು ಮಾಡುತ್ತಿದ್ದೇವೆ ಎಂಬುದನ್ನು ಗಮನಿಸಿಕೊಳ್ಳಬೇಕು.

ಇನ್ನೊಂದು ಪ್ರಮುಖ ಸಂಗತಿ ಎಂದರೆ ಬೇಸಿಕ್ಸ್ ಅನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು. ಗಣಿತದಲ್ಲಿ ಫಾರ್ಮುಲಾ ಬಿಟ್ಟು ಬೇರೆ ಏನನ್ನೂ ಬೈಹಾರ್ಟ್‍ಮಾಡುವುದು ತುಂಬ ಕೆಟ್ಟದು. ಅರ್ಥವಾಗದ ಪ್ರಾಥಮಿಕ ವಿಷಯಗಳನ್ನು ಅಧ್ಯಾಪಕರು ಅಥವಾ ಸ್ನೇಹಿತರ ಸಹಾಯದಿಂದ ಆರಂಭದಲ್ಲೇ ಬಗೆಹರಿಸಿಕೊಳ್ಳಬೇಕು. ಗಣಿತದ ಓದಿನಲ್ಲಿ ತಾಳ್ಮೆ ತುಂಬ ಮುಖ್ಯ. ನಿಮ್ಮ ಮನಸ್ಥಿತಿಗೆ ಹೊಂದಿಕೊಳ್ಳುವ ಒಬ್ಬ ಅಥವಾ ಇಬ್ಬರು ಗೆಳೆಯರಿದ್ದರೆ ಅವರೊಂದಿಗೆ ಅಭ್ಯಾಸ ಮಾಡುವುದರಿಂದ ಅನುಕೂಲವಾಗಬಹುದು. ಅನೇಕ ಸಲ ಗಣಿತ ನಮ್ಮ ನಿಜ ಬದುಕಿಗೆ ತುಂಬ ಹತ್ತಿರವಾಗಿರುತ್ತದೆ. ದಿನನಿತ್ಯದ ಉದಾಹರಣೆಗಳೊಂದಿಗೆ ಅದನ್ನು ಸಮೀಕರಿಸಿಕೊಂಡಾಗ ಬೇಗ ಅರ್ಥವಾಗುತ್ತದೆ ಮತ್ತು ಮರೆತು ಹೋಗುವುದಿಲ್ಲ.

ಇನ್ನು ವಿಜ್ಞಾನಕ್ಕೆ ಬಂದರೆ, ಗೆಳೆಯನೊಬ್ಬನಿಗೆ ಪಾಠ ಮಾಡುವ ವಿಧಾನ ತುಂಬ ಉಪಯುಕ್ತ. ಇದರಿಂದ ವಿಷಯಗಳು ಮನಸ್ಸಿನಲ್ಲಿ ತುಂಬ ಗಟ್ಟಿಯಾಗಿ ನೆಲೆಯಾಗುತ್ತವೆ. ಓದುತ್ತಲೇ ಪಾಯಿಂಟ್ಸ್ ಮಾಡಿಕೊಳ್ಳುವುದು, ಈಕ್ವೇಶನ್‍ಗಳನ್ನು ಪ್ರತ್ಯೇಕ ಕಾರ್ಡ್‍ಗಳಲ್ಲಿ ಬರೆದಿಟ್ಟುಕೊಳ್ಳುವುದು, ಬೇಸಿಕ್ಸ್ ಯಾವುದನ್ನೂ ಬಿಡದೆ ಅರ್ಥ ಮಾಡಿಕೊಳ್ಳುವುದು, ಓದಿದ್ದನ್ನು ಆಗಾಗ ನೆನಪು ಮಾಡಿಕೊಳ್ಳಲು ಪ್ರಯತ್ನಿಸುವುದು, ಮಾಕ್ ಟೆಸ್ಟ್‍ಗಳನ್ನು ಬರೆಯುವುದು ಬಹಳ ಅಗತ್ಯ. ಕೊನೇ ಕ್ಷಣದಲ್ಲಿ ಹೊಸ ಟಾಪಿಕ್ ಅನ್ನು ಓದಲು ಹೊರಡದಿರುವುದೇ ಒಳ್ಳೆಯದು.

ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಜನವರಿ 3, 2020

ಅಹಂನ ಅಂತ್ಯ, ಸಾಧನೆಯ ಆರಂಭ

ಡಿಸೆಂಬರ್ 28, 2019ರಿಂದ ಜನವರಿ 3, 2020ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ನೂರಾರು ಯುದ್ಧಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸಿ ‘ದಿ ಗ್ರೇಟ್’ ಎಂದು ಕರೆಸಿಕೊಂಡ ಅಲೆಕ್ಸಾಂಡರ್ ತನ್ನ
ದಂಡಯಾತ್ರೆಯಿಂದ ಮರಳುತ್ತಿದ್ದಾಗಲೇ ಕಾಯಿಲೆ ಬಿದ್ದುಬಿಟ್ಟ. ರೋಗ ದೇಹವನ್ನೆಲ್ಲ ವ್ಯಾಪಿಸಿ ಗುಣಪಡಿಸಲಾರದ ಹಂತಕ್ಕೆ ಬಂದು ಮರಣಶಯ್ಯೆಯ ಮೇಲೆ ಮಲಗಿದ. ಸಾವನ್ನು ಎದುರು ನೋಡುತ್ತಿದ್ದ ಅಲೆಕ್ಸಾಂಡರ್ ತನ್ನ ಸೇನಾಧಿಪತಿಗಳನ್ನು ಕರೆದು ಹೀಗೆಂದನಂತೆ:

ಬೋಧಿವೃಕ್ಷ: ಸಿಬಂತಿ ಪದ್ಮನಾಭ
‘ನಾನು ಇನ್ನೇನು ಕೊನೆಯುಸಿರು ಎಳೆಯಲಿದ್ದೇನೆ. ನನ್ನ ಮೂರು ಆಸೆಗಳನ್ನು ದಯಮಾಡಿ ಈಡೇರಿಸಿ. ಮೊದಲನೆಯದು, ನನ್ನ ಶವಪೆಟ್ಟಿಗೆಯನ್ನು ಈವರೆಗೆ ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ಹೊತ್ತೊಯ್ಯಬೇಕು. ಎರಡನೆಯದು, ನನ್ನ ಶವಯಾತ್ರೆ ಸಾಗುವ ದಾರಿಯಲ್ಲಿ ನನ್ನ ಭಂಡಾರದಲ್ಲಿರುವ ಮುತ್ತುರತ್ನಗಳನ್ನೆಲ್ಲ ಚೆಲ್ಲಿರಬೇಕು. ಮೂರನೆಯದು, ನನ್ನ ಎರಡೂ ಕೈಗಳನ್ನು ಶವಪೆಟ್ಟಿಗೆಯಿಂದ ಆಚೆ ಕಾಣುವಂತೆ ಹೊರಚಾಚಿಸಿ ಇಟ್ಟಿರಬೇಕು.’

ದುಃಖಭರಿತರಾಗಿದ್ದ ಮಂತ್ರಿ ಸೇನಾಧಿಪತಿಗಳು, ‘ತಮ್ಮ ಆಸೆಗಳನ್ನು ಖಂಡಿತ ಈಡೇರಿಸುವೆವು ದೊರೆ. ಆದರೆ ಇವುಗಳ ಮರ್ಮವೇನು ತಿಳಿಯಲಿಲ್ಲವಲ್ಲ?’ ಎಂದು ಕೇಳಿದರಂತೆ. ಪ್ರಾಣೋತ್ಕ್ರಮಣದ ಸ್ಥಿತಿಯಲ್ಲೂ ಅಲೆಕ್ಸಾಂಡರ್ ವಿವರಿಸಿದನಂತೆ: ‘ನನಗೆ ಚಿಕಿತ್ಸೆ ನೀಡಿದ ವೈದ್ಯರುಗಳೇ ನನ್ನ ಶವಪೆಟ್ಟಿಗೆ ಹೊರುವುದನ್ನು ನೋಡಿ ಮರಣ ಸಮೀಪಿಸಿದವನನ್ನು ವಾಸ್ತವವಾಗಿ ಯಾವ ವೈದ್ಯನೂ ಉಳಿಸಲಾರ ಎಂಬುದನ್ನು ಪ್ರಪಂಚ ಅರಿಯಲಿ.  ಶವಯಾತ್ರೆಯ ದಾರಿಯಲ್ಲಿ ಚೆಲ್ಲಿರುವ ಮುತ್ತು ರತ್ನಗಳನ್ನು ನೋಡಿ ನಾನು ಈವರೆಗೆ ಗುಡ್ಡೆಹಾಕಿದ ಯಾವ ಸಂಪತ್ತೂ ನನ್ನ ಪ್ರಾಣ ಉಳಿಸಲಿಲ್ಲ ಎಂಬುದನ್ನು ಜನ ತಿಳಿಯಲಿ. ಶವಪೆಟ್ಟಿಗೆಯಿಂದ ಹೊರಚಾಚಿರುವ ಕೈಗಳನ್ನು ನೋಡಿ ಇಷ್ಟೆಲ್ಲ ಸಾಧಿಸಿದ ಅಲೆಕ್ಸಾಂಡರ್ ಕೊನೆಗೆ ಬರಿಗೈಯಲ್ಲೇ ಮರಳಿದ ಎಂಬುದನ್ನು ಜಗತ್ತು ಅರ್ಥಮಾಡಿಕೊಳ್ಳಲಿ.’

ಹೌದು, ಮನುಷ್ಯ ತಾನೇನೇ ಸಾಧಿಸಿದ್ದೇನೆ ಅಂದುಕೊಂಡರೂ ಅಂತಿಮವಾಗಿ ಯಾವುದೂ ಉಳಿಯುವುದಿಲ್ಲ. ತನ್ನೊಳಗಿನ ಅಹಂ ಕರಗದ ಹೊರತು ತಾನೇನು, ತನ್ನ ಬದುಕಿನ ಉದ್ದೇಶವೇನು ಎಂಬುದು ಅರ್ಥವಾಗುವುದೂ ಇಲ್ಲ. ತಾವು ಯಾರನ್ನೋ ಸೋಲಿಸಿದ್ದೇವೆ, ಏನನ್ನೋ ಸಾಧಿಸಿದ್ದೇವೆ, ಮುಂದೇನೋ ಮಹತ್ತರವಾದದ್ದನ್ನು ಪಡೆಯಲಿದ್ದೇವೆ ಎಂದು ಬೀಗುವವರು ಬಹಳ. ಕೊನೆಗೆ ತಮಗೂ ಅಲೆಕ್ಸಾಂಡರನ ಗತಿಯೇ ಎಂಬ ಪ್ರಜ್ಞೆಯಿರುವವರು ವಿರಳ. ಆ ಪ್ರಜ್ಞೆಯಿರುವವರ ಒಳಗೆ ಅಹಂಕಾರ ಬೆಳೆಯುವುದಾದರೂ ಹೇಗೆ?

ಆಶಾಪಾಶಶತೈರ್ಬದ್ಧಾಃ ಕಾಮಕ್ರೋಧಪರಾಯಣಾಃ ||
ಈಹಂತೇ ಕಾಮಭೋಗಾರ್ಥಮನ್ಯಾಯೇನಾರ್ಥಂಚಯಾನ್ ||
ಎನ್ನುತ್ತಾನೇ ಗೀತಾಚಾರ್ಯ. ಆಶಾರೂಪೀ ನೂರಾರು ಹಗ್ಗಗಳಿಂದ ಬಂಧಿಸಲ್ಪಟ್ಟು, ಕಾಮ-ಕ್ರೋಧಾದಿಗಳ ಪರಾಯಣರಾಗಿ ವಿಷಯಭೋಗಗಳ ಪೂರೈಕೆಗಾಗಿ ಜನರು ಅನ್ಯಾಯದಿಂದ ಹಣವೇ ಮುಂತಾದ ವಸ್ತುಗಳನ್ನು ಕೂಡಿಡಲು ಪ್ರಯತ್ನಿಸುತ್ತಾರೆ. ಆಮೇಲೆ ತಾನೇ ಶ್ರೀಮಂತ, ತಾನೇ ಬಲಾಢ್ಯ, ತನ್ನ ಸಮಾನರು ಬೇರೆ ಯಾರೂ ಇಲ್ಲ ಎಂಬ ಮದವನ್ನು ಬೆಳೆಸಿಕೊಂಡು ಘೋರ ನರಕದಲ್ಲಿ ಬೀಳುತ್ತಾರೆ.

ಕೃಷ್ಣ ಮತ್ತೆ ಅರ್ಜುನನಿಗೆ ಹೇಳುತ್ತಾನೆ:
ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಚ ಸಂಶ್ರಿತಾಃ |
ಮಾಮಾತ್ಮ ಪರದೇಹೇಷು ಪ್ರದ್ವಿಷಂತೋಭ್ಯಸೂಯಕಾಃ ||
ಅಂದರೆ, ಅಹಂಕಾರ, ಬಲ, ದರ್ಪ, ಕಾಮ-ಕ್ರೋಧಾದಿ ಪರಾಯಣರೂ ಮತ್ತು ಪರನಿಂದಕರೂ ಆದ ಅವರು ತಮ್ಮ ಮತ್ತು ಇತರರೆಲ್ಲರ ದೇಹದಲ್ಲಿರುವ ಅಂತರ್ಯಾಮಿಯಾದ ನನ್ನನ್ನು ದ್ವೇಷಿಸುತ್ತಾರೆ.

ವಾಸ್ತವವಾಗಿ ತಮ್ಮೊಳಗನ್ನೇ ದ್ವೇಷಿಸುವ ಇಂತಹ ಮಂದಿ ಅಂತಿಮವಾಗಿ ತಮ್ಮನ್ನು ಅರಿಯುವ ಪ್ರಯತ್ನವನ್ನೇ ಮಾಡುವುದಿಲ್ಲ. ‘ಕಾಮ, ಕ್ರೋಧ ಹಾಗೂ ಲೋಭ ಈ ಮೂರು ವಿಧವಾದ ನರಕದ ದ್ವಾರವು ಆತ್ಮನನ್ನು ನಾಶಮಾಡುವವು ಅರ್ಥಾತ್ ಅಧೋಗತಿಗೆ ತಳ್ಳುವವು’ ಎಂದು ಎಚ್ಚರಿಸುತ್ತಾನೆ ಶ್ರೀಕೃಷ್ಣ.

ಇದನ್ನು ಅರ್ಥಮಾಡಿಕೊಂಡ ದಿನವೇ ಸಿದ್ಧಾರ್ಥನೂ ತನ್ನ ಸಕಲ ಸುಖಗಳನ್ನು ತೊರೆದು ಜ್ಞಾನೋದಯದ ಮಾರ್ಗ ಹುಡುಕಿ ಹೊರಟದ್ದು? ಕಾಯಿಲೆ, ಮುಪ್ಪು, ಸಾವು- ಈ ಮೂರು ಯಾವ ಮನುಷ್ಯನನ್ನೂ ಬಿಡಲಾರವು, ಎಲ್ಲರ ಬದುಕೂ ಒಂದು ದಿನ ಕೊನೆಯಾಗಲೇಬೇಕು ಎಂದ ಮೇಲೆ ಅಂತಹ ಬದುಕನ್ನು ಅಹಂಕಾರದಿಂದಲೇ ಕಳೆಯುವ ಬದಲು ಆತ್ಮಶೋಧನೆಯಲ್ಲಿ ಕಳೆಯುವುದು ಮೇಲಲ್ಲವೇ ಎಂದು ಅವನಿಗೆ ಅನಿಸಿದ್ದು ಆತನ ನಿಜವಾದ ಯಶಸ್ಸಿನ ಹಾದಿ ಆರಂಭವಾದ ಕ್ಷಣ.

‘ಅಹಂ ಎಂಬುದು ನಮ್ಮ ಕಣ್ಣಿಗೆ ಕವಿದ ಧೂಳು. ಈ ಧೂಳನ್ನು ತೊಲಗಿಸಿದರಷ್ಟೇ ನಮ್ಮನ್ನೂ ಪ್ರಪಂಚವನ್ನೂ ಸ್ಪಷ್ಟವಾಗಿ ನೋಡಿಕೊಳ್ಳಬಹುದು’ ಎಂದ ಬುದ್ಧ. ಧೂಳನ್ನಾದರೂ ತೊಳೆದುಕೊಳ್ಳಬಹುದು, ಆದರೆ ಅಹಂ ಧೂಳಿಗಿಂತಲೂ ಹೆಚ್ಚಾದ ಒಂದು ಭ್ರಮೆ. ಅದನ್ನೇ ಮಾಯೆ ಎಂದು ಕರೆದರು. ಮಾಯೆಯಿಂದ ಬಿಡಿಸಿಕೊಳ್ಳುವುದು ಬಲುಕಷ್ಟ. ಅಹಂನ ಮಾಯೆ ದೃಷ್ಟಿಯನ್ನು ಮಂದಗೊಳಿಸುವುದಷ್ಟೇ ಅಲ್ಲ, ಮನುಷ್ಯನನ್ನೇ ಸಂಪೂರ್ಣ ಕುರುಡನನ್ನಾಗಿಸಬಹುದು. ಅಂಧತ್ವ ಶಾಪ ಅಲ್ಲ, ಆದರೆ ಒಳಗಣ್ಣನ್ನು ಕಳೆದುಕೊಳ್ಳುವುದು ಮಾತ್ರ ಮಹಾಶಾಪ.

ಪಕ್ಕದ ಸಹಪ್ರಯಾಣಿಕನೊಂದಿಗೆ ಒಂದಿಂಚು ಹೊಂದಾಣಿಕೆ ಮಾಡಿಕೊಳ್ಳಲಾಗದ, ತನ್ನೆದುರಿನ ಸಣ್ಣ ವಾಹನಕ್ಕೆ ಸಂಯಮದಿಂದ ದಾರಿ ಬಿಟ್ಟುಕೊಡಲಾಗದ ಭೂಪ ಪ್ರಯಾಣದುದ್ದಕ್ಕೂ ಕಾಣಸಿಗುವ ದೇವಸ್ಥಾನಗಳಿಗೆಲ್ಲ ಕೈಮುಗಿಯುತ್ತಾ ಸಾಗುತ್ತಾನೆ. ಎಂತಹ ವಿಪರ್ಯಾಸ! ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲುಮಣ್ಣುಗಳ ಗುಡಿಯೊಳಗೆ/ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನನ್ನೊಳಗೆ’ ಎಂದು ಆತ್ಮಶೋಧನೆ ಮಾಡಿಕೊಳ್ಳುತ್ತಾರೆ ಕವಿ ಜಿಎಸ್ಸೆಸ್. ತನ್ನೊಳಗಿನ ಅಂಧಕಾರವನ್ನು ನೀಗಿಸಿಕೊಳ್ಳದೆ ಯಾವ ದೇವರ ಮೊರೆಹೊಕ್ಕರೂ ಆತನ ಸಾಮೀಪ್ಯ ಅರಿವಿಗೆ ಬಾರದು.  ತೇನವಿನಾ ತೃಣಮಪಿ ನ ಚಲತಿ - ನೀನಿಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸದು, ನಾನೆಂಬುದು ಈ ಜಗತ್ತಿನಲ್ಲಿ ಏನೂ ಅಲ್ಲ ಎಂದು ಅರ್ಥ ಮಾಡಿಕೊಂಡವನಿಗೆ ಮುಂದಿನ ದಾರಿ ಸುಗಮ.

ನೀನು ಸ್ವರ್ಗಕ್ಕೆ ಹೋಗಬಲ್ಲೆಯಾ? ಎಂದು ಕೇಳಿದರಂತೆ ಶಿಷ್ಯ ಕನಕದಾಸರನ್ನು ಗುರುಗಳಾದ ವ್ಯಾಸರಾಯರು. ‘ನಾನು ಹೋದರೆ ಹೋದೇನು’ ಎಂದು ಉತ್ತರಿಸಿದರಂತೆ ಕನಕದಾಸರು. ನಾನು ಎಂಬುದನ್ನು ಕಳೆದುಕೊಳ್ಳುವುದೇ ಸಾಧನೆಯ ಆರಂಭ.
- ಸಿಬಂತಿ ಪದ್ಮನಾಭ ಕೆ. ವಿ.

ಭಾನುವಾರ, ನವೆಂಬರ್ 17, 2019

ನವಯುಗದ ಮಾಧ್ಯಮಗಳ ಮುಂದಿರುವ ಅವಕಾಶಗಳು ಮತ್ತು ಸವಾಲುಗಳು

ರಾಷ್ಟ್ರೀಯ ಪತ್ರಿಕಾ ದಿನದ ಅಂಗವಾಗಿ ದಿನಾಂಕ: 17-11-2019ರಂದು ಬೆಂಗಳೂರಿನ 'ಮಿಥಿಕ್ ಸೊಸೈಟಿ' ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೀಡಿದ ಉಪನ್ಯಾಸದ ಸಂಕ್ಷಿಪ್ತ ರೂಪ

ಪ್ರೊ. ಕೆ. ಆರ್. ವೇಣುಗೋಪಾಲ್, ಶ್ರೀ ದು.ಗು. ಲಕ್ಷ್ಮಣ ಅವರೊಂದಿಗೆ
ಎಲ್ಲರಿಗೂ ನಮಸ್ಕಾರ. ಇಲ್ಲಿ ಕುಳಿತಿರುವ ಬಹುತೇಕರು ತುಂಬ ಹಿರಿಯರಿದ್ದೀರಿ. ನಿಮ್ಮ ಅನುಭವಕ್ಕಿಂತಲೂ ನನ್ನ ವಯಸ್ಸು ತುಂಬ ಸಣ್ಣದೆಂದು ನಾನು ತಿಳಿದಿದ್ದೇನೆ. ಈ ಅಳುಕಿನ ಜತೆಗೆ ನಿಮ್ಮೆದುರು ಮಾತನಾಡುವುದಕ್ಕಿರುವ ಸಣ್ಣ ಧೈರ್ಯವೆಂದರೆ ನೀವು ಹಿರಿಯರಿದ್ದೀರಿ ಎಂಬುದೇ ಆಗಿದೆ. ಏಕೆಂದರೆ ತಪ್ಪಾಗಿರುವುದನ್ನು ಹಿರಿಯರು ತಿದ್ದಬಲ್ಲರು.

ಇರಲಿ, ಇಂದು ನಾನು ಮಾತಾಡಬೇಕಿರುವ ವಿಷಯಕ್ಕೆ ಬರೋಣ. ಮಾಧ್ಯಮಗಳ ಬಗ್ಗೆ ಮಾತನಾಡುವುದೆಂದರೆ ಡಿಜಿಟಲ್ ಮಾಧ್ಯಮಗಳ ಬಗ್ಗೆ ಮಾತನಾಡುವುದೆಂದೇ ಆಗಿದೆ. ಏಕೆಂದರೆ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಎಂಬಿತ್ಯಾದಿ ಪ್ರತ್ಯೇಕ ಅಸ್ಮಿತೆಗಳು ಇವತ್ತು ಉಳಿದುಕೊಂಡಿಲ್ಲ. We are in the age of media convergence.  ನಾವು ಮಾಧ್ಯಮ ಸಂಗಮದ ಕಾಲದಲ್ಲಿದ್ದೇವೆ. ಪತ್ರಿಕೆ, ಟಿವಿ ಎಲ್ಲವೂ ಡಿಜಿಟಲ್ ಆಗಿವೆ. ಆನ್‌ಲೈನ್ ಆವೃತ್ತಿ ಇಲ್ಲದ ಪತ್ರಿಕೆ ಇಲ್ಲ. ಮುದ್ರಣಕ್ಕೆ ಸೀಮಿತವಾಗಿದ್ದ ಪತ್ರಿಕೆಗಳಲ್ಲಿ ಇವತ್ತು ಆಡಿಯೋ ಇದೆ, ವೀಡಿಯೋ ಇದೆ. ಅತ್ತ ಟಿವಿ ಚಾನೆಲ್‌ಗಳು ತಮ್ಮ ಜಾಲತಾಣಗಳಲ್ಲಿ ಪಠ್ಯ ರೂಪದಲ್ಲೂ ಸುದ್ದಿ ಪ್ರಕಟಿಸುತ್ತವೆ. ಎಲ್ಲವೂ ಒಟ್ಟಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೂಪಗಳಲ್ಲಿ, ವಿವಿಧ ವೇಷಗಳಲ್ಲಿ ಹರಿದಾಡುತ್ತವೆ. ಹೀಗಾಗಿ ಸೋಷಿಯಲ್ ಮೀಡಿಯಾವನ್ನೇ ನಾನಿಲ್ಲಿ 'ನವಯುಗದ ಮಾಧ್ಯಮ'ಗಳೆಂದು ವ್ಯಾಖ್ಯಾನಿಸಿಕೊಂಡಿದ್ದೇನೆ.

ಜಗತ್ತಿನ ಸುಮಾರು 770 ಕೋಟಿ ಜನಸಂಖ್ಯೆಯಲ್ಲಿ 402 ಕೋಟಿಯಷ್ಟು - ಅಂದರೆ ಶೇ. 53 - ಇಂಟರ್ನೆಟ್ ಬಳಕೆದಾರರಿದ್ದಾರೆ. ಸುಮಾರು 319 ಕೋಟಿ ಮಂದಿ (ಶೇ. 42) ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರು.

ಭಾರತದ ಪ್ರಸಕ್ತ ಜನಸಂಖ್ಯೆ 137 ಕೋಟಿ. ಇವರಲ್ಲಿ ಅರ್ಧದಷ್ಟು ಮಂದಿ ಇಂಟರ್ನೆಟ್ ಬಳಕೆದಾರರು. ಸುಮಾರು 35 ಕೋಟಿ ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರು. ಭಾರತದಲ್ಲಿ ಸುಮಾರು 40 ಕೋಟಿ ಮಂದಿ ವಾಟ್ಸಾಪನ್ನೂ, 27 ಕೋಟಿ ಮಂದಿ ಫೇಸ್ಬುಕ್ಕನ್ನೂ, ತಲಾ 8 ಕೋಟಿ ಮಂದಿ ಇನ್‌ಸ್ಟಾಗ್ರಾಮನ್ನೂ, ಟ್ವಿಟರನ್ನೂ ಬಳಸುತ್ತಾರೆ. ಸಮೀಕ್ಷೆಗಳ ಪ್ರಕಾರ ಭಾರತೀಯ ಇಂಟರ್ನೆಟ್ ಬಳಕೆದಾರರು ದಿನಕ್ಕೆ ಸರಾಸರಿ 2.4 ಗಂಟೆಯಷ್ಟು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ.

ಇಂಟರ್ನೆಟ್ ಇಷ್ಟೊಂದು ಕ್ಷಿಪ್ರವಾಗಿ ಭಾರತದಲ್ಲಿ ಪಸರಿಸಲು ಪ್ರಮುಖ ಕಾರಣ ನಮ್ಮಲ್ಲಿ ದೊರೆಯುತ್ತಿರುವ ಅಗ್ಗದ ಡೇಟಾ. ಒಂದು ಜಿಬಿ ಡೇಟಾದ ದರ ಸ್ವಿಟ್ಜರ್ಲೆಂಡಿನಲ್ಲಿ ರೂ. 1425-00, ಅಮೇರಿಕದಲ್ಲಿ ರೂ. 872-00, ಇಂಗ್ಲೆಂಡಿನಲ್ಲಿ ರೂ. 470-00; ಆದರೆ ಭಾರತದಲ್ಲಿ ಕೇವಲ ರೂ. 18-00.

ಜನರು ಡಿಜಿಟಲ್/ ಸಾಮಾಜಿಕ ಮಾಧ್ಯಮಗಳನ್ನು ಪರ್ಯಾಯ ಮಾಧ್ಯಮಗಳನ್ನಾಗಿ ಕಂಡುಕೊಳ್ಳಲು ಇರುವ ಇನ್ನೊಂದು ಪ್ರಮುಖ ಕಾರಣ ಮುಖ್ಯ ವಾಹಿನಿಯ ಮಾಧ್ಯಮಗಳಲ್ಲಿ ಅವರ ಕಳೆದುಕೊಂಡಿರುವ ವಿಶ್ವಾಸ. ಮುಖ್ಯವಾಹಿನಿಯ ಮಾಧ್ಯಮಗಳು ವಾಣಿಜ್ಯೀಕರಣದ ಹಿಂದೆ ಬಿದ್ದಿರುವುದು, ಹೆಚ್ಚಿನ ಓದುಗರನ್ನು/ ಪ್ರೇಕ್ಷಕರನ್ನು ಸೆಳೆಯುವ ಮತ್ತು ಆ ಮೂಲಕ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅಪರಾಧ, ಹಿಂಸೆಗಳನ್ನು ವೈಭವೀಕರಿಸುತ್ತಿರುವುದು, ಅತಿಯಾದ ಸ್ಪರ್ಧೆ, ಧಾವಂತ,  ಕ್ಷುಲ್ಲಕ ವಿಚಾರಗಳನ್ನು ಮಹತ್ವದ ಸುದ್ದಿಗಳೆಂಬಂತೆ ಬಿಂಬಿಸುವುದು, ಬದ್ಧತೆಯ ಕೊರತೆ, ಬಹುತೇಕ ಮಾಧ್ಯಮಗಳೂ ಒಂದಲ್ಲ ಒಂದು ರಾಜಕೀಯ ಅಜೆಂಡಾ ಇಟ್ಟುಕೊಂಡಿರುವುದು, ಮಾಧ್ಯಮ ಮಾಲೀಕತ್ವದಲ್ಲಿ ಹೆಚ್ಚಿರುವ ಏಕಸ್ವಾಮ್ಯತೆ- ಇವೆಲ್ಲವನ್ನೂ ಈಗ ಜನಸಾಮಾನ್ಯರೂ ಅರ್ಥ ಮಾಡಿಕೊಂಡಿದ್ದಾರೆ. ಅದಕ್ಕೇ ಅವರಿಗೆ ಮಾಧ್ಯಮಗಳ ಮೇಲೆ ವಿಶ್ವಾಸ ಕುಸಿದಿದೆ.

ಮಾಧ್ಯಮಗಳಲ್ಲಿ ಪ್ರಕಟವಾದ ವಿಚಾರಗಳನ್ನೂ ತಮ್ಮ ಸ್ನೇಹಿತರಲ್ಲಿ ಕೇಳಿ ಖಚಿತಪಡಿಸಿಕೊಳ್ಳುವ ಮಟ್ಟಿಗೆ ಜನ ಬದಲಾಗಿದ್ದಾರೆ. ಹಿಂದೆ ಜನರ ಬಾಯಲ್ಲಿ ಕೇಳಿದ್ದನ್ನು ಮಾಧ್ಯಮಗಳ ಮೂಲಕ ಖಚಿತಪಡಿಸಿಕೊಳ್ಳುವ ಪರಿಪಾಠ ಇತ್ತು; ಇಂದು ಮಾಧ್ಯಮಗಳಲ್ಲಿ ಬಂದುದನ್ನು ತಮ್ಮ ಪರಿಚಯದವರಲ್ಲಿ ಕೇಳಿ ಖಚಿತಪಡಿಸಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ ಎಂಬುದು ವಿಪರ್ಯಾಸ.

ಇಂತಹ ಪರಿಸ್ಥಿತಿಯಲ್ಲಿ ಆನ್‌ಲೈನ್ ಮಾಧ್ಯಮ ಜನರಿಗೆ ಪರ್ಯಾಯ ಸಂವಹನ ವೇದಿಕೆಯಾಗಿ ಒದಗಿಬಂದಿದೆ. ಇದು ನಾಗರಿಕ ಪತ್ರಿಕೋದ್ಯಮ - Citizen Journalism - ನ ಸುವರ್ಣಯುಗ. ನಾವು ನೀಡಿದ್ದನ್ನು ನೀವು ತೆಗೆದುಕೊಳ್ಳಿ ಎಂಬ ಮುಖ್ಯವಾಹಿನಿಯ ಮಾಧ್ಯಮಗಳ ಉಡಾಫೆಗೆ ಇಲ್ಲಿ ಎಡೆಯಿಲ್ಲ. ಇಲ್ಲಿ ಎಲ್ಲರಿಗೂ ಮಾತನಾಡಲು ಅವಕಾಶ ಇದೆ. ಇಲ್ಲಿ ಸಂಪಾದಕರಿಲ್ಲ. ಸುದ್ದಿಯನ್ನೋ ಲೇಖನವನ್ನೋ ಹೀಗೆಯೇ ಬರೆಯಬೇಕು ಎಂಬ ಕಟ್ಟುಪಾಡು ಇಲ್ಲ. ಯಾರು ಬೇಕಾದರೂ ಮಾತನಾಡಬಹುದು.  Consumers of news have become producers of news. ಧ್ವನಿಯೇ ಇಲ್ಲದವರಿಗೆ ಸಾಮಾಜಿಕ ಮಾಧ್ಯಮಗಳು ಧ್ವನಿ ನೀಡಿವೆ. ಮುಖ್ಯವಾಹಿನಿ ಮಾಧ್ಯಮಗಳ ಅಜೆಂಡಾಗಳು ಇಲ್ಲಿ ಕ್ಷಣಗಳಲ್ಲಿ ಬಯಲಾಗುತ್ತವೆ. ಇಲ್ಲಿ ಸುಳ್ಳು ಹೇಳುವುದು ಸುಲಭವಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರಮೋಚ್ಛ ಸ್ಥಿತಿ ಇದು.

ಪ್ರಧಾನಮಂತ್ರಿ, ಮುಖ್ಯಮಂತ್ರಿ, ಇನ್ನೆಲ್ಲ ನಾಯಕರು ಫೇಸ್ಬುಕ್, ಟ್ವಿಟರ್‌ಗಳಲ್ಲಿ ಸಾಮಾನ್ಯ ನಾಗರಿಕರಿಗೆ ಎದುರಾಗುತ್ತಾರೆ. ಜನ ಸಾಮಾನ್ಯರೂ ಅವರನ್ನು ಟ್ಯಾಗ್ ಮಾಡಿ ಕಮೆಂಟ್ ಮಾಡಬಹುದು. ಆ ಮಟ್ಟಿನ ನಮನೀಯತೆ ಸಾಮಾಜಿಕ ಮಾಧ್ಯಮಗಳಲ್ಲಿದೆ. ಸಂವಹನ ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಿತಿಯೂ ಇದೇ ಆಗಿದೆ. ಸಣ್ಣಪುಟ್ಟ ಸಮಸ್ಯೆಗಳನ್ನೂ ತುಂಬ ಕ್ಷಿಪ್ರವಾಗಿ ಸಂಬಂಧಿಸಿದವರ ಗಮನಕ್ಕೆ ತರುವುದಕ್ಕೆ ಸಾಮಾಜಿಕ ಮಾಧ್ಯಮಗಳು ಸಹಕಾರಿ. ಒಂದರ್ಥದಲ್ಲಿ ಜಾಗೃತಿ ಹಾಗೂ ಅಭಿವೃದ್ಧಿಯ ಅತ್ಯುತ್ತಮ ವೇಗವರ್ಧಕಗಳು. ಇವುಗಳಿಗೆ ಭೌಗೋಳಿಕ ಸೀಮೆಗಳೂ ಇಲ್ಲದಿರುವುದರಿಂದ ಜಗತ್ತಿನ ಯಾವುದೇ ಮೂಲೆಯಲ್ಲಿರುವ ಮಂದಿಯೂ ಒಂದು ಕರೆಗೆ ಓಗೊಟ್ಟು ಸಾಮೂಹಿಕ ಆಂದೋಲನಗಳಲ್ಲಿ ಸೇರಿಕೊಳ್ಳುವಂತೆ ಮಾಡುವುದರಲ್ಲಿ ಇವುಗಳ ಪಾತ್ರ ತುಂಬ ದೊಡ್ಡದು. ಅನೇಕ ಬೃಹತ್ ಆಂದೋಲನಗಳು ಸಾಮಾಜಿಕ ಮಾಧ್ಯಮಗಳ ನೆರವಿನಿಂದಲೇ ನಡೆದಿರುವ ಜೀವಂತ ಉದಾಹರಣೆಗಳು ನಮ್ಮ ಮುಂದೆ ಇವೆ.

ಇವೆಲ್ಲ ಹೊಸ ಕಾಲದ ಮಾಧ್ಯಮಗಳ ಅವಕಾಶಗಳೆಂದು ತಿಳಿದುಕೊಂಡರೆ, ಇವುಗಳ ಮುಂದಿರುವ ಸವಾಲುಗಳು ನೂರಾರು. ಮುಖ್ಯವಾಗಿ ನಿಯಂತ್ರಣದ ಕೊರತೆ. ಇಲ್ಲಿ ಸಂಪಾದಕರಿಲ್ಲ ಎಂಬುದು ಹೇಗೆ ಅನುಕೂಲವೋ, ಹಾಗೇ ಅನಾನುಕೂಲವೂ ಹೌದು. ಪತ್ರಿಕೆ, ಟಿವಿಗಳಲ್ಲಿ ಯಾವುದನ್ನು, ಎಷ್ಟು, ಹೇಗೆ ಪ್ರಕಟಿಸಬೇಕು ಎಂಬುದನ್ನು ನಿರ್ಧರಿಸಲು ವಿವಿಧ ಮಂದಿಯಿದ್ದಾರೆ. ಇಲ್ಲಿ ಅವರಿಲ್ಲ- ಗೇಟ್ ಕೀಪಿಂಗ್ ಇಲ್ಲ- ಎಂಬುದೇ ದೊಡ್ಡ ಮಿತಿ. ಇಲ್ಲಿ ಎಲ್ಲರೂ ಪತ್ರಕರ್ತರೇ. ಎಲ್ಲರೂ ಸುದ್ದಿಗಾರರೇ. ಹೀಗಾಗಿ ಯಾವುದು, ಎಷ್ಟು, ಹೇಗೆ ಪ್ರಕಟವಾಗಬೇಕು ಎಂದು ನಿರ್ಧರಿಸಲು ಯಾರೂ ಇಲ್ಲ. ಇದು ಎಷ್ಟೊಂದು ಅನಾಹುತಗಳಿಗೂ ಕಾರಣವಾಗುತ್ತದೆ ಎನ್ನುವುದನ್ನು ಸಾಮಾಜಿಕ ಮಾಧ್ಯಮಗಳ ಬಳಕೆದಾರರಾದ ನಾವು ಪ್ರತಿನಿತ್ಯ ಕಾಣುತ್ತಿದ್ದೇವೆ.

ಮಾಧ್ಯಮಗಳಿಗೆ ಪ್ರಮುಖವಾಗಿ ಬೇಕಾಗಿರುವ ವಸ್ತುನಿಷ್ಠತೆ, ಸ್ಪಷ್ಟತೆ, ನಿಖರತೆ, ಮರುಪರಿಶೀಲನೆ, ಪೂರ್ವಾಗ್ರಹಮುಕ್ತತೆ ಮುಂತಾದ ತತ್ತ್ವಗಳನ್ನು ಎಲ್ಲರೂ ಪತ್ರಕರ್ತರಾಗಿರುವ ಸನ್ನಿವೇಶದಲ್ಲಿ ಅನುಷ್ಠಾನಕ್ಕೆ ತರುವುದು ಕಡುಕಷ್ಟ.  ಇಲ್ಲಿ ವದಂತಿಗಳು, ಸುಳ್ಳುಸುದ್ದಿಗಳೇ ಜನಪ್ರಿಯ. ಸಾಮಾಜಿಕ ಮಾಧ್ಯಮಗಳು ಒಂದರ್ಥದಲ್ಲಿ ಸುಳ್ಳುಸುದ್ದಿಗಳ ಕಾರ್ಖಾನೆಗಳೇ ಆಗಿವೆ. ಕ್ಷಿಪ್ರತೆ ಎಂಬ ಗುಣ ಸಾಮಾಜಿಕ ಮಾಧ್ಯಮಗಳ ದೊಡ್ಡ ಸವಾಲೂ ಹೌದು. ಇಲ್ಲಿ ಒಳ್ಳೆಯದಕ್ಕಿಂತಲೂ ಕೆಟ್ಟದು ಬೇಗ ಹರಡುತ್ತದೆ- ಕಾಳ್ಗಿಚ್ಚಿನ ಹಾಗೆ. ಸಮಷ್ಟಿ ಹಿತದ ಚರ್ಚೆಗಳಿಗಿಂತಲೂ ವೈಯಕ್ತಿಕ ಕೆಸರೆರಚಾಟಗಳಲ್ಲಿ ಜನರಿಗೆ ಹೆಚ್ಚು ಆಸಕ್ತಿ.

ಇವನ್ನೆಲ್ಲ ನೋಡುತ್ತ ನೋಡುತ್ತ ಮುಖ್ಯವಾಹಿನಿಯ ಮಾಧ್ಯಮಗಳೂ ಸಾಮಾಜಿಕ ಮಾಧ್ಯಮಗಳ ಜಾಯಮಾನವನ್ನು ಬೆಳೆಸಿಕೊಳ್ಳುತ್ತಿವೆ. ತಮ್ಮ ಮೂಲ ರೂಪಗಳಲ್ಲಿ ಗಂಭೀರವಾಗಿರುವ ಪತ್ರಿಕೆ, ಚಾನೆಲ್‌ಗಳೂ ಸಾಮಾಜಿಕ ತಾಣಗಳಲ್ಲಿ ಬಾಲಿಶವಾಗಿ ವರ್ತಿಸುತ್ತಿರುವುದು ಇಂದಿನ ವಿದ್ಯಮಾನ. ಸೆಲೆಬ್ರಿಟಿಗಳ ಖಾಸಗಿ ಬದುಕಿನ ವಿಚಾರಗಳೇ ಅವರಿಗೆ ಪ್ರಮುಖ ಸುದ್ದಿಯಾಗುತ್ತಿವೆ. ಖಾಸಗಿಗೂ ಸಾರ್ವಜನಿಕವಾದುದಕ್ಕೂ ವ್ಯತ್ಯಾಸವೇ ಉಳಿದಿಲ್ಲ. ಎಲ್ಲವೂ ಬಟಾಬಯಲಲ್ಲೇ ನಡೆಯಬೇಕು ಎಂಬುದು ಮಾಧ್ಯಮಗಳ ಹೊಸ ನೀತಿ.

ಹೊಸ ಮಾಧ್ಯಮಗಳಿಂದ ಒಂದು ಬಗೆಯ ಮಾಹಿತಿ ಅತಿಸಾರ ಸೃಷ್ಟಿಯಾಗಿದೆ. ಎಲ್ಲ ಕಡೆಗಳಿಂದಲೂ ಬರುತ್ತಿರುವ ಭರಪೂರ ಮಾಹಿತಿಗಳಲ್ಲಿ ತಮಗೆ ಬೇಕಾದುದೇನು ಬೇಡದ್ದೇನು ಎಂದು ನಿರ್ಧರಿಸಿಕೊಳ್ಳಲಾಗದ ಸಂಕಷ್ಟ ಜನಸಾಮಾನ್ಯರನ್ನು ಕಾಡುತ್ತಿದೆ. ಅದರ ನಡುವೆ ಸುಳ್ಳುಪೊಳ್ಳುಗಳು ಸೇರಿಕೊಂಡಾಗಲಂತೂ ಜನರ ಪರಿಸ್ಥಿತಿ ಹೇಳತೀರದು. ಆಹಾರದ ಡಯೆಟ್ ಬಗ್ಗೆ ಮಾತ್ರ ಯೋಚಿಸುತ್ತಿದ್ದವರು ಇಂದು ಮೀಡಿಯಾ ಡಯೆಟ್ ಬಗ್ಗೆ ಯೋಚಿಸುವ ಸಂದರ್ಭ ಬಂದಿದೆ.

ಸಾಮಾಜಿಕ ತಾಣಗಳಲ್ಲಿ ನಾವು ಹಂಚಿಕೊಳ್ಳುತ್ತಿರುವ ಮಾಹಿತಿಗಳು ಎಲ್ಲಿ ಸಂಗ್ರಹವಾಗುತ್ತಿವೆ, ಅವು ಎಷ್ಟರಮಟ್ಟಿಗೆ ಸುರಕ್ಷಿತ ಎಂಬ ಚರ್ಚೆಗಳೂ ಈಗ ಮುನ್ನೆಲೆಗೆ ಬಂದಿವೆ. ಜನ ಡೇಟಾ ವಸಾಹತುಗಳ ಬಗ್ಗೆ ಎಚ್ಚರವಾಗತೊಡಗಿದ್ದಾರೆ. ದೇಶದ ಭದ್ರತೆ, ವೈಯಕ್ತಿಕ ಮಾಹಿತಿಗಳ ಗೌಪ್ಯತೆ, ಇವುಗಳ ಸುತ್ತಮುತ್ತ ಹರಡಿಕೊಂಡಿರುವ ಸೈಬರ್ ಅಪರಾಧ, ಮೋಸ-ವಂಚನೆಗಳು ಪರ್ಯಾಯ ಮಾಧ್ಯಮಗಳ ಕಡೆಗೂ ಜನ ಅಪನಂಬಿಕೆಯಿಂದ ನೋಡುವಂತೆ ಮಾಡಿವೆ.

ಒಟ್ಟಿನಲ್ಲಿ ಮಾಧ್ಯಮಗಳ ಜತೆಗಿನ ಒಡನಾಟ ಜನಸಾಮಾನ್ಯರಿಗೆ ಕತ್ತಿಯಂಚಿನ ನಡಿಗೆಯೇ ಆಗಿದೆ. ಈ ಒಟ್ಟಾರೆ ಪರಿಸ್ಥಿತಿಗೆ ಪರಿಹಾರ ಏನು ಎಂಬುದು ನಮ್ಮೆದುರಿನ ದೊಡ್ಡ ಪ್ರಶ್ನೆ. ಆ ಬಗ್ಗೆ ಮಾತನಾಡುವುದು ಇನ್ನೊಂದು ಸುದೀರ್ಘ ಚರ್ಚೆಯಾದೀತು. ಅದನ್ನು ಇನ್ನೊಮ್ಮೆ ಮಾಡೋಣ. ಧನ್ಯವಾದ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 22, 2019

ಬೀಗಿದಷ್ಟೂ ಬಾಗುವುದು ಕಷ್ಟ

19-25 ಅಕ್ಟೋಬರ್ 2019ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ಬದುಕಲಿಕ್ಕೊಂದು ಭ್ರಾಂತಿ ಬೇಕಾಗ್ತದೆ, ಪ್ರಜೆಗಳಿಗೂ, ಸುಲ್ತಾನರಿಗೂ.’ ಹಾಗೆನ್ನುತ್ತದೆ ಕಾರ್ನಾಡರ ‘ರಾಕ್ಷಸತಂಗಡಿ’ ನಾಟಕದ ಒಂದು ಪಾತ್ರ. ಹೌದು, ಒಬ್ಬೊಬ್ಬರು ಸದಾ ಒಂದೊಂದು ಭ್ರಾಂತಿಯಲ್ಲೇ ಇರುತ್ತಾರೆ. ಕೆಲವರಿಗೆ ತಾವೇನೋ ಸಾಧಿಸಿದೆವೆನ್ನುವ, ಇನ್ನು ಕೆಲವರಿಗೆ ತಾವು ಯಾರನ್ನೋ ಸೋಲಿಸಿದೆವೆನ್ನುವ, ಇನ್ನು ಹಲವರಿಗೆ ತಾವು ಸಮಾಜವನ್ನು ಬದಲಾಯಿಸಿಬಿಡುತ್ತೇವೆನ್ನುವ, ಇನ್ನುಳಿದವರಿಗೆ ತಾವು ತುಂಬ ಸುಖ-ಸಂತೋಷದಿಂದ ಬದುಕುತ್ತಿದ್ದೇವೆನ್ನುವ ಭ್ರಾಂತಿ. ಸ್ವಲ್ಪ ಮಟ್ಟಿಗೆ ಇವೆಲ್ಲ ಬೇಕು. ಭ್ರಾಂತಿಯಿಂದ ಚಿಂತೆ ದೂರವಾಗುವುದಿದ್ದರೆ, ನಿರಾಸೆ ಒತ್ತಟ್ಟಿಗೆ ಸರಿಯುವುದಿದ್ದರೆ, ದುಃಖ ಕ್ಷಣಕಾಲ ಮರೆಯಾಗುವುದಿದ್ದರೆ, ಒಂದಷ್ಟು ಹುಮ್ಮಸ್ಸು-ಉತ್ಸಾಹ ಬೆನ್ನಿಗೆ ನಿಲ್ಲುವುದಿದ್ದರೆ ಕೊಂಚ ಭ್ರಾಂತಿ ಇದ್ದರೆ ಒಳ್ಳೆಯದು. ಆದರೆ ಭ್ರಾಂತಿಯೇ ಬದುಕಾಗಬಾರದಲ್ಲ!

ಬೋಧಿವೃಕ್ಷ | 19-25 ಅಕ್ಟೋಬರ್ 2019
‘ನಾನು ಯಾರು?’ ಎಂಬ ಪ್ರಶ್ನೆಯನ್ನು ಎಂದಾದರೂ ನಾವು ಅಂತರ್ಯಕ್ಕೆ ಕೇಳಿಕೊಂಡದ್ದಿದೆಯೇ? ಹಾಗೆ ಕೇಳಿಕೊಂಡರೆ ಮೊದಲ ಉತ್ತರವಾಗಿ ನಮ್ಮ ಹೆಸರು ಬರಬಹುದು. ಅದು ನಮ್ಮ ಹೆಸರಾಯಿತೇ ಹೊರತು ನಾವು ಯಾರೆಂದು ಹೇಳಿದಂತಾಗಲಿಲ್ಲ ಅಲ್ಲವೇ? ನಮ್ಮ ಹೆಸರನ್ನು ಬದಲಾಯಿಸಿಕೊಂಡರೆ ನಾವು ಬದಲಾಗುತ್ತೇವೆಯೇ? ಇಲ್ಲ. ಹೆಸರು ಮಾತ್ರ ಬದಲಾಗುವುದು; ನಾವು ಹಾಗೆಯೇ ಉಳಿಯುತ್ತೇವೆ. ಹಾಗಾದರೆ ನಾವೆಂದರೆ ನಮ್ಮ ಹೆಸರಲ್ಲ ಎಂದಾಯಿತು.

ಮತ್ತೆ ಪ್ರಶ್ನಿಸಿದರೆ ನಾನು ಇಂಥವರ ಮಗ ಅಥವಾ ಮಗಳು ಎಂದೋ, ಇಂಥ ಕುಟುಂಬಕ್ಕೆ ಸೇರಿದವರು ಎಂದೋ, ಇಂಥ ಜಾತಿ ಅಥವಾ ಪಂಗಡದವರು ಎಂದೋ, ಇಂಥ ಊರಿನವರು ಎಂದೋ, ಇಂಥ ಉದ್ಯೋಗದಲ್ಲಿರುವವರು ಎಂದೋ- ನಾನಾ ಉತ್ತರಗಳು ಬರುತ್ತಲೇ ಇರಬಹುದು. ಅವೆಲ್ಲ ನಮ್ಮ ವಿಳಾಸದ ವಿಚಾರವಾಯಿತೇ ಹೊರತು ನಾವು ಯಾರು ಎಂದು ಸಿದ್ಧಪಡಿಸಿದಂತೆ ಆಗಲಿಲ್ಲ.

ಹೆಚ್ಚೆಂದರೆ ಎಲ್ಲವಕ್ಕೂ ಒಂದೊಂದು ಗುರುತಿನ ಪತ್ರವನ್ನು ತಂದು ತೋರಿಸಬಹುದು. ಮಳೆಯಲ್ಲಿ ನೆನೆದರೆ, ಬೆಂಕಿಯಲ್ಲಿ ಬೆಂದರೆ ಆ ಗುರುತಿನ ಪತ್ರ ಉಳಿಯುವುದಿಲ್ಲ. ಮತ್ತೆ ಹೊಸದಾಗಿ ಮಾಡಿಸಬೇಕು. ಗುರುತಿನ ಪತ್ರ ಇಲ್ಲದೆಯೇ ನಮ್ಮನ್ನು ನಾವು ಉದ್ಘಾಟಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲವೇ?

ಸಮಾಜದಲ್ಲಿ ನಾವು ವಿವಿಧ ಅಸ್ಮಿತೆಗಳಿಂದ ಗುರುತಿಸಿಕೊಳ್ಳುತ್ತೇವೆ: ತಂದೆ, ಗಂಡ, ಹೆಂಡತಿ, ಪ್ರಯಾಣಿಕ, ಗೆಳೆಯ, ಅಧ್ಯಾಪಕ... ಮಕ್ಕಳಿರುವುದರಿಂದ ತಂದೆ, ಹೆಂಡತಿಯಿರುವುದರಿಂದ ಗಂಡ, ಗಂಡ ಇರುವುದರಿಂದ ಹೆಂಡತಿ, ಪಾಠ ಮಾಡುತ್ತಿರುವುದರಿಂದ ಅಧ್ಯಾಪಕ, ಬಸ್ಸಿನಲ್ಲಿರುವುದರಿಂದ ಪ್ರಯಾಣಿಕ. ಅಂದರೆ ಅವೆಲ್ಲ ನಾವಿರುವ ಪರಿಸರ ಅಥವಾ ಸ್ಥಾನದಿಂದಾಗಿ ಅಥವಾ ನಾವು ನಿರ್ವಹಿಸುತ್ತಿರುವ ಕಾರ್ಯದಿಂದಾಗಿ ಒದಗಿರುವ ಉಪಾಧಿಗಳೇ ಹೊರತು ನಿಜವಾದ ಅಸ್ಮಿತೆಗಳಲ್ಲ. ಪಾತ್ರಗಳು ಬದಲಾದಂತೆ ನಮ್ಮ ಉಪಾಧಿಗಳು, ಅಸ್ಮಿತೆಗಳು ಬದಲಾಗುತ್ತಾ ಹೋಗುತ್ತವೆ. ಹೊಸ ಉಪಾಧಿಗಳು ಬಂದಂತೆಲ್ಲ ವಾಸ್ತವದಿಂದ ದೂರ ಸರಿಯುತ್ತಲೇ ಇರುತ್ತೇವೆ.

ಹಾಗಾದರೆ ‘ನಾನು ಯಾರು?’ ಮತ್ತದೇ ಪ್ರಶ್ನೆ. ಈ ಪ್ರಶ್ನೆಯನ್ನು ಮನಸ್ಸಿಗೆ ಮತ್ತೆ ಮತ್ತೆ ಕೇಳಿದಾಗೆಲ್ಲ ಸತ್ಯದ ಅರಿವಾಗುತ್ತಾ ಹೋಗುತ್ತದೆ. ನಮ್ಮ ಅಸ್ಮಿತೆಯಷ್ಟೇ ಅಲ್ಲದೆ, ನಮ್ಮ ಇತಿಮಿತಿಗಳೂ ಅರ್ಥವಾಗುತ್ತಾ ಹೋಗುತ್ತವೆ. ನಾವು ಏನು ಎಂದು ತಿಳಿಯುವಷ್ಟೇ ನಾವು ಏನಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವುದೂ ಮುಖ್ಯ. ನಾವು ಏನು ಮತ್ತು ಏನಲ್ಲ ಎಂದು ತಿಳಿದುಕೊಳ್ಳುವುದಕ್ಕೆ ಸ್ವಸ್ಥಾನಪರಿಜ್ಞಾನವೆಂದು ಹೆಸರು. ಬದುಕಿನಲ್ಲಿ ಎದುರಾಗುವ ಹಲವು ದುಃಖ, ಸಂಕಟಗಳಿಗೆ ಸ್ವಸ್ಥಾನಪರಿಜ್ಞಾನ ಇಲ್ಲದಿರುವುದೇ ಕಾರಣ.

ಶ್ರೀಮಂತಿಕೆಯಿದೆಯೆಂದು ಬೀಗುತ್ತೇವೆ. ತುಂಬ ಸಂಪಾದಿಸಿದ್ದೇವೆ ಎಂದು ಬೀಗುತ್ತೇವೆ. ಜನಪ್ರಿಯರಾಗಿದ್ದೇವೆ ಎಂದು ಬೀಗುತ್ತೇವೆ. ಹಲವು ಪ್ರಶಸ್ತಿ-ಪದವಿಗಳನ್ನು ಪಡೆದುಕೊಂಡಿದ್ದೇವೆ ಎಂದು ಬೀಗುತ್ತೇವೆ. ಬೀಗಿದಷ್ಟೂ ಬಾಗುವುದು ಕಡಿಮೆಯಾಗುತ್ತದೆ. ಬಾಗದೇ ಹೋದರೆ ಕೆಲವೊಮ್ಮೆ ಫಟ್ಟನೆ ತುಂಡಾಗಿಬಿಡುವುದೂ ಇದೆ. ಸಾಧನೆಯ ತುತ್ತತುದಿಯಲ್ಲಿದ್ದೇವೆ ಎಂಬ ಭ್ರಮೆಯಲ್ಲಿರುವಾಗಲೇ ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡ ಪ್ರಪಾತಕ್ಕೆ ಬಿದ್ದಿರುತ್ತೇವೆ.

ಕೆಲವೊಮ್ಮೆ ತುಂಬ ಕೊರಗುತ್ತೇವೆ. ಎಷ್ಟು ವರ್ಷ ದುಡಿದರೂ ಬದುಕಿನ ಬಂಡಿ ಒಂದು ಹದಕ್ಕೆ ಬಂದಿಲ್ಲವೆಂದೋ, ಎಷ್ಟು ಸಂಪಾದಿಸಿದರೂ ಕೈಯಲ್ಲೊಂದು ಕಾಸೂ ಉಳಿಯುತ್ತಿಲ್ಲವೆಂದೋ, ಕಷ್ಟಗಳೆಲ್ಲ ನಮಗೇ ಬರುತ್ತಿವೆ ಎಂದೋ, ಮಕ್ಕಳು ಮಾತನ್ನು ಕೇಳುತ್ತಿಲ್ಲ ಎಂದೋ, ಉಪಕಾರ ಪಡೆದುಕೊಂಡವರೆಲ್ಲ ತಿರುಗಿಬಿದ್ದಿದ್ದಾರೆಂದೋ, ಸುತ್ತಮುತ್ತಲಿನವರೆಲ್ಲ ನಮ್ಮ ವಿರುದ್ಧವೇ ಪಿತೂರಿ ಮಾಡುತ್ತಿದ್ದಾರೆಂದೋ ಕೊರಗುತ್ತಲೇ ಇರುತ್ತೇವೆ. ಯಾವುದೋ ಒಂದು ದಿನ ಎಲ್ಲ ಕೊರಗುವಿಕೆಗಳೂ ಏಕಾಏಕಿ ಮಾಯವಾಗಿ ಸಂತೋಷದ ಉತ್ತುಂಗಕ್ಕೆ ತಲುಪಿರುತ್ತೇವೆ.

ಅಂದರೆ ಯಾವುದೂ ಶಾಶ್ವತವಲ್ಲ. ಬದಲಾವಣೆಯೊಂದೇ ಶಾಶ್ವತವಾದದ್ದು. ಬದುಕೊಂದು ಜಲಚಕ್ರ. ಕೆಳಗಿರುವುದು ಮೇಲೇರುತ್ತದೆ. ಮೇಲೇರಿದ್ದು ಕೆಳಗಿಳಿಯುತ್ತದೆ. ಇದು ಸಂಪೂರ್ಣ ಅರ್ಥವಾದಾಗ ಭ್ರಾಂತಿ ತೊಲಗುತ್ತದೆ. ಯಾರೋ ಔಪಚಾರಿಕತೆಗಾಗಿಯೋ, ಸ್ವಂತ ಲಾಭಕ್ಕಾಗಿಯೋ ನಮ್ಮನ್ನು ಬಹುವಾಗಿ ಹೊಗಳಿ ಉಬ್ಬಿಸಲು ಪ್ರಯತ್ನಿಸಬಹುದು. ಇನ್ಯಾರೋ ಮತ್ಸರದಿಂದಲೋ, ಘಾತಿಸುವ ಉದ್ದೇಶದಿಂದಲೋ ನಮ್ಮಲ್ಲಿ ನಿರಾಶೆಯನ್ನು ತುಂಬಲು ಪ್ರಯತ್ನಿಸಬಹುದು. ಸ್ವಸ್ಥಾನಪರಿಜ್ಞಾನವುಳ್ಳವನು ಹೊಗಳಿಯಿಂದ ಹಿಗ್ಗುವುದೋ, ನಿಂದೆಯಿಂದ ಕುಗ್ಗುವುದೋ ಆಗಬಾರದು. ತನ್ನ ಸಾಮರ್ಥ್ಯ
 ಮತ್ತು ಮಿತಿಗಳ ಅರಿವು ಇರುವವನಿಗೆ ಇವುಗಳಿಂದ ಯಾವ ಪರಿಣಾಮವೂ ಆಗುವುದಿಲ್ಲ. ಆ ಸ್ಥಿತಿಗೆ ಸ್ಥಿತಪ್ರಜ್ಞತೆ ಎಂದು ಹೆಸರು. ಅದು ಸ್ವಸ್ಥಾನಪರಿಜ್ಞಾನದಿಂದ ಹುಟ್ಟಿಕೊಳ್ಳುವ ಆನಂದದ ಭಾವ.

‘ನೀನು ಯಾವ ಪುಸ್ತಕ ಓದುತ್ತೀಯೋ, ಅದು ನೀನಾಗುತ್ತಿ; ಯಾವ ಸಿನಿಮಾ ನೋಡುತ್ತೀಯೋ, ಅದು ನೀನಾಗುತ್ತಿ; ಯಾವ ಸಂಗೀತ ಕೇಳುತ್ತೀಯೋ ಅದು ನೀನಾನುತ್ತಿ; ಯಾರೊಂದಿಗೆ ಸಮಯ ಕಳೆಯುತ್ತೀಯೋ, ಅವರೇ ನೀನಾಗುತ್ತಿ. ಆದ್ದರಿಂದ ನೀನು ಯಾರಾಗಬೇಕು ಎಂಬುದನ್ನು ನಿರ್ಧರಿಸಬೇಕಾದುದು ನೀನೇ’ ಎನ್ನುತ್ತಾನೆ ಒಬ್ಬ ದಾರ್ಶನಿಕ.

‘ಬ್ರಹ್ಮ ಸತ್ಯಂ, ಜಗನ್ಮಿಥ್ಯಾ, ಜೀವೋ ಬ್ರಹ್ಮೈವನಾಪರಃ’ ಎಂದರು ಆಚಾರ್ಯ ಶಂಕರರು. ಬ್ರಹ್ಮವು ಸತ್ಯ, ಜಗತ್ತು ಮಿಥ್ಯ, ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ ಎಂಬುದು ಅವರ ಅದ್ವೈತ ದರ್ಶನದ ಸಾರ. ಈ ಜಗತ್ತನ್ನು ತನ್ನ ಪ್ರಭಾವಳಿಯಲ್ಲಿ ಹಿಡಿದಿಟ್ಟುಕೊಂಡಿರುವ ಒಂದು ಮಹೋನ್ನತ ಶಕ್ತಿಯಿದೆ; ಅದನ್ನು ಕೆಲವರು ದೇವರು ಎಂದರು, ಇನ್ನು ಕೆಲವರು ಪ್ರಕೃತಿ ಎಂದರು. ಅಂತೂ ತಾನು ಅದರ ಒಂದು ಭಾಗ, ಅಥವಾ ಅದೇ ತಾನು ಎಂದು ಅರ್ಥವಾದಾಗ ಉಳಿದೆಲ್ಲ ಅಸ್ಮಿತೆಗಳ ಭ್ರಮೆ ತಾನಾಗಿಯೇ ಕರಗಿ ಹೋಗುತ್ತದೆ. ಆಗ ಉಳಿಯುವುದು ನಿರುಮ್ಮಳತೆಯ, ನಿರ್ವ್ಯಾಮೋಹದ, ಆನಂದದ ಭಾವ.

ಈ ಸತ್-ಚಿತ್-ಆನಂದದ ಸ್ವರೂಪ ಅಷ್ಟು ಸುಲಭವಾಗಿ ದಕ್ಕುವುದೇ? ‘ನಾನು ಹೋದರೆ ಹೋದೇನು’ ಎಂದು ಹೇಳಿದ ಕನಕದಾಸರ ಹಿಂದೆ ವ್ಯಾಸತೀರ್ಥರಿದ್ದರು. ಹೌದು, ಲೋಹಗಳ ನಡುವಿನಿಂದ ಚಿನ್ನವನ್ನು ಬೇರ್ಪಡಿಸುವುದಕ್ಕೆ ಒಬ್ಬ ಚಿನಿವಾರ ಬೇಕಿರುವಂತೆ ನಾವು ಯಾರು ಎಂದು ಅಂತಿಮವಾಗಿ ಅರ್ಥ ಮಾಡಿಕೊಳ್ಳಲು ಒಬ್ಬ ಗುರು ಬೇಕು. ಆತ ನಮ್ಮ ಅಂತರಂಗಕ್ಕೆ ಇಳಿದು ಬೆಳಕಿನ ಹಣತೆ ಹಚ್ಚಬಲ್ಲ. ಕತ್ತಲಲ್ಲಿರುವ ಎಲ್ಲರಿಗೂ ಬೇಕಾಗಿರುವುದು ಒಬ್ಬ ಗುರು. ಗುರುವನ್ನು ಹುಡುಕಿಹೊರಟವನಿಗೆ ಕತ್ತಲೆಂಬುದೇ ಇಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.