ಭಾನುವಾರ, ಏಪ್ರಿಲ್ 5, 2020

ಆಂಜನೇಯನೆಂಬ ಸ್ಫೂರ್ತಿಯ ಚಿಲುಮೆ

ಏಪ್ರಿಲ್ 4-10, 2020ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತ|
ಅಜಾಡ್ಯಂ ವಾಕ್ಪಟುತ್ವಂಚ ಹನುಮತ್ ಸ್ಮರಣಾತ್ ಭವೇತ್||
ಇದು ಜಗತ್ತಿನ ಕೋಟ್ಯಂತರ ಆಸ್ತಿಕರ ದಿನನಿತ್ಯದ ಪ್ರಾರ್ಥನೆ. ಆಂಜನೇಯನ ಸ್ಮರಣೆಯಿಂದ ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯತ್ವ, ಆರೋಗ್ಯ, ವಾಕ್‌ಪ್ರತಿಭೆ ಇವೆಲ್ಲವೂ ತಾವಾಗಿಯೇ ಒಲಿದುಬರುತ್ತವೆ ಎಂಬುದು ಅವರೆಲ್ಲರ ಗಾಢ ನಂಬಿಕೆ. ಹನೂಮಂತ ವಜ್ರಕಾಯ, ಜಿತೇಂದ್ರಿಯ, ಶತ್ರುಭಯಂಕರ, ಮಹಾನ್ ಶಕ್ತಿಶಾಲಿ; ಹೀಗಾಗಿ ಆತ ನಂಬಿದವರ ರಕ್ಷಕ, ಉತ್ಸಾಹದ ಚಿಲುಮೆ, ಎಂತಹ ಜುಗುಪ್ಸೆಯಿಂದ ಬೆಂದ ಮನಸ್ಸಿಗೂ ನೆಮ್ಮದಿ, ಧೈರ್ಯ, ಸ್ಫೂರ್ತಿಯನ್ನು ತುಂಬಬಲ್ಲ ಐಂದ್ರಜಾಲಿಕ ಎಂಬ ಭಾವನೆಗೆ ಸಾವಿರಾರು ವರ್ಷಗಳ ಇತಿಹಾಸ.

ಸಿಬಂತಿ ಪದ್ಮನಾಭ | ಬೋಧಿವೃಕ್ಷ |  ಏಪ್ರಿಲ್ 4-10, 2020
ಆಂಜನೇಯ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವುದು ನೂರೆಂಟು ಚಿತ್ರ. ಬಲಗಡೆ ಲಕ್ಷ್ಮಣ, ಎಡಗಡೆ ಸೀತೆಯನ್ನು ಒಡಗೂಡಿ ನಿಂತಿರುವ ಕೋದಂಡರಾಮನ ಎದುರು ಮಂಡಿಯೂರಿ ಕುಳಿತಿರುವ ಮಾರುತಿ, ರಾಮ-ಲಕ್ಷ್ಮಣರನ್ನು ಎರಡೂ ಭುಜಗಳಲ್ಲಿ ಹೊತ್ತು ಸಾಗುತ್ತಿರುವ ಹನೂಮಂತ, ಕೈಗಳನ್ನು ಮುಂದಕ್ಕೆ ಚಾಚಿ ಸಾಗರಲ್ಲೋಂಘನ ಮಾಡುತ್ತಿರುವ ಪವನಸುತ, ಸಂಜೀವಿನಿ ಪರ್ವತವನ್ನು ಹೊತ್ತುಕೊಂಡು ಬರುತ್ತಿರುವ ವಾತಾತ್ಮಜ, ತನ್ನೆದೆಯನ್ನೇ ಸೀಳಿ ರಾಮ ಇಲ್ಲಿದ್ದಾನೆ ಎಂದು ತೋರಿಸುವ ರಾಮದೂತ... ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಚಿತ್ರ.

ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಬೇಕಾದವನು ಈ ಆಂಜನೇಯ. ಮಕ್ಕಳಿಗಂತೂ ಹನೂಮಂತ ಒಬ್ಬ ಆಪ್ತ ಗೆಳೆಯ. ತಾವು ಇಷ್ಟಪಡುವ ಮಹಿಮಾವಿಶೇಷಗಳನ್ನು ಕ್ಷಣಮಾತ್ರದಲ್ಲಿ ಮಾಡಿತೋರಿಸಬಲ್ಲ ಪವಾಡಪುರುಷ. ತಮ್ಮೊಂದಿಗೆ ಓರಗೆಯವನಾಗಿ ಆಟವಾಡಬಲ್ಲ ಬಾಲಮಾರುತಿ. ಹನೂಮಂತ ನಾಯಕನಾಗಿರುವ ಕಾರ್ಟೂನು ಇಲ್ಲದಿದ್ದರೆ ಅದು ಮಕ್ಕಳಿಗೆ ಟಿವಿ ಚಾನೆಲೇ ಅಲ್ಲ. ಯುವಕರಿಗೆ ಈ ಬ್ರಹ್ಮಚಾರಿ ಮನೋಬಲದ ಪ್ರತೀಕವಾದರೆ, ವೃದ್ಧರಿಗೆ ಮೋಕ್ಷಮಾರ್ಗದ ದಿಕ್ಸೂಚಿ. ಶರೀರಬಲ, ಬುದ್ಧಿಬಲ, ಆತ್ಮಬಲಗಳ ತ್ರಿವೇಣಿ ಸಂಗಮ. ಆದರ್ಶದಲ್ಲಿ, ಚಾರಿತ್ರ್ಯದಲ್ಲಿ, ಸದಾಚಾರದಲ್ಲಿ, ಕಾರ್ಯಕ್ಷಮತೆಯಲ್ಲಿ ಅವನಿಗೆ ಸರಿಮಿಗಿಲಾದವರು ಇನ್ನೊಬ್ಬರಿಲ್ಲ. 'ನ ಸಮಃ ಸ್ಯಾತ್ ಹನೂಮತಃ’ - ಹನೂಮಂತನಿಗೆ ಸಮ ಬೇರಾರೂ ಇಲ್ಲ ಎಂದು ಸ್ವತಃ ರಾಮಚಂದ್ರನಿಂದಲೇ ಪ್ರಶಂಸೆಗೆ ಪಾತ್ರನಾದವನು ಅವನು.

ಋಷ್ಯಮೂಕದ ಪಾದದಲ್ಲಿದ್ದ ಪಂಪಾಸರೋವರದ ತಟದಲ್ಲಿ ಆರಂಭವಾದ ರಾಮ-ಹನುಮರ ಸಖ್ಯ ಅಖಂಡ, ಚಿರಸ್ಥಾಯಿ. 'ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾ ಕ್ಲಿಷ್ಟಕರ್ಮಣಃ’ - ಉತ್ತಮ ಕರ್ಮಗಳನ್ನೇ ಎಸಗುವ ರಾಮಚಂದ್ರನಿಗೆ ನಾನು ಎಂದೆಂದಿಗೂ ದಾಸಾನುದಾಸ ಹೀಗೆ ಘೋಷಿಸಿಕೊಂಡ ಆಂಜನೇಯ ಅದನ್ನೇ ಯುಗಯುಗಗಳ ಪರ್ಯಂತ ಸಾಧಿಸಿಕೊಂಡು ಬಂದ. ಅವನು ಬಯಸಿದ್ದರೆ ರಾಮನು ವಾಲಿಯನ್ನು ವಧಿಸಿದ ಮೇಲೆ ಕಿಷ್ಕಿಂಧೆಯ ರಾಜನಾಗಬಹುದಿತ್ತು. ಆದರೆ ಅವನಿಗೆ ಬೇಕಿದ್ದದ್ದು ರಾಮನ ಸಾಹಚರ್ಯವೇ ಹೊರತು ರಾಜಕಾರಣವಾಗಲೀ, ಅಧಿಕಾರವಾಗಲೀ ಆಗಿರಲಿಲ್ಲ. ರಾಮಾವತಾರದ ಕೊನೆಯಲ್ಲಿ ’ಮುಂದೇನು’ ಎಂದು ಆಂಜನೇಯನನ್ನು ರಾಮ ಕೇಳಿದಾಗ ಅವನು ಹೇಳಿದ್ದು ಅದನ್ನೇ: ಭೂಮಿಯ ಮೇಲೆ ರಾಮಕಥೆ ಇರುವವರೆಗೆ ನನಗೆ ಅದೇ ನಾಮಸ್ಮರಣೆಯಲ್ಲಿ ಉಳಿಯುವ ಆಸೆ.

ಆಗ ರಾಮ ಹೇಳಿದನಂತೆ: ಹನುಮಾ, ನಿನ್ನ ಉಪಕಾರಗಳನ್ನು ನಾನು ಹೇಗೆ ತೀರಿಸಲಿ? ನೀನು ಮಾಡಿರುವ ಒಂದೊಂದು ಉಪಕಾರಕ್ಕೂ ನನ್ನ ಒಂದೊಂದು ಪ್ರಾಣವನ್ನು ನೀಡಬೇಕೆಂದರೂ ನನಗಿರುವುದು ಐದೇ ಪ್ರಾಣಗಳು. ಹೆಚ್ಚೆಂದರೆ ನಿನ್ನ ಐದು ಉಪಕಾರಗಳಿಗೆ ಮಾತ್ರ ಅವನ್ನು ನೀಡಬಹುದು. ಉಳಿದುದಕ್ಕೆ ಏನೂ ಕೊಡಲಾರೆ. ನಾನು ಎಂದೆಂದಿಗೂ ನಿನಗೆ ಋಣಿಯೇ.... ರಾಮ-ಹನುಮರದ್ದು ದೇವರು ಭಕ್ತರ ಸಂಬಂಧವೋ, ಸೇವ್ಯ-ಸೇವಕರ ಸಂಬಂಧವೋ, ಓರಗೆಯ ಸ್ನೇಹಿತರ ನಡುವಿನ ಸಂಬಂಧವೋ ಅವರಿಗೆ ಮಾತ್ರ ಗೊತ್ತು. ಆದರೆ ಅಂತಹದೊಂದು ಗಾಢ ಸಂಬಂಧವನ್ನು ಜಗತ್ತಿನಲ್ಲಿ ಬೇರೆಲ್ಲೂ ಕಾಣೆವು.

ಹನುಮ ಸಾಮಾನ್ಯ ಕಪಿಯಲ್ಲ. ಚತುರ್ವೇದ ಪರಿಣತ. ವ್ಯಾಕರಣ ಪಂಡಿತ. ತರ್ಕ ಮೀಮಾಂಸೆಗಳಲ್ಲಿ ಪಾರಂಗತ. ರಸಪ್ರಜ್ಞೆ, ಸಮಯಪ್ರಜ್ಞೆ, ಸೌಂದರ್ಯಪ್ರಜ್ಞೆ, ವಾಕ್ಚಾತುರ್ಯ ಹೊಂದಿದ್ದ ಅಸೀಮ ರಾಮಭಕ್ತ. ಇಂದ್ರಾದಿ ದೇವತೆಗಳಿಂದ ಅನೇಕ ವಿದ್ಯೆಗಳನ್ನು ವರರೂಪವಾಗಿ ಪಡೆದವನು. ಇನ್ನೂ ಬಾಲಕನಿದ್ದಾಗಲೇ ಸೂರ್ಯನೆಂದು ಹಣ್ಣೆಂದು ಭ್ರಮಿಸಿ ನುಂಗಹೋದವನು. ಸೀತಾನ್ವೇಷಣೆಗಾಗಿ ಸಹಸ್ರ ಯೋಜನ ವಿಸ್ತಾರದ ಸಮುದ್ರವನ್ನು ಒಂದೇ ನೆಗೆತಕ್ಕೆ ಹಾರಿದವನು. ನಡುವೆ ಎದುರಾದ ಸುರಸೆ, ಸಿಂಹಿಣಿ, ಲಂಕಿಣಿಯರನ್ನು ನಿವಾರಿಸಿ ಅಶೋಕವನದಲ್ಲಿ ಸೀತೆಯನ್ನು ಪತ್ತೆಹಚ್ಚಿ ಆಕೆಗೆ ಶುಭಸಮಾಚಾರವನ್ನು ತಲುಪಿಸಿದವನು. ಜಂಬೂಮಾಲಿ, ಅಕ್ಷಯಕುಮಾರರನ್ನೆಲ್ಲ ಸದೆಬಡಿದು ಸ್ವರ್ಣಲಂಕೆಯನ್ನು ದಹಿಸಿ ರಾಮನಿಗೆ ವರ್ತಮಾನ ಮುಟ್ಟಿಸಿದವನು. ಮಹಾಪರಾಕ್ರಮಿ. 'ನ ರಾವಣ ಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್’ - ಸಾವಿರ ರಾವಣರು ಎದುರಾದರೂ ನನಗೆ ಸರಿಸಮ ಎದುರಾಳಿ ಆಗಲಾರರು ಎಂದು ಘರ್ಜಿಸಿದವನು. ಅದಕ್ಕೇ ಜನಸಾಮಾನ್ಯರಿಗೆ ಅವನೊಂದು ಮಹಾಪ್ರೇರಣೆ.

ಮನೋಜವಂ ಮಾರುತತುಲ್ಯ ವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ|
ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ||
ಅದು ಜಗತ್ತಿನ ಕೋಟಿಕೋಟಿ ಜನ ರಾಮದೂತನಿಗೆ ಪ್ರತಿದಿನ ವಂದಿಸುವ ಬಗೆ. ನಿರಾಶೆ, ಕತ್ತಲು ಮನಸ್ಸುಗಳನ್ನು, ಜಗತ್ತನ್ನು ತುಂಬಿರುವಾಗ ಚಿರಂಜೀವಿ ಆಂಜನೇಯನ ಚಿತ್ರ ಆಶಾವಾದ, ಧೈರ್ಯವನ್ನು ಕೊಡಬಲ್ಲುದಾದರೆ ಆ ಚಿತ್ರ ಸರ್ವವ್ಯಾಪಿಯಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: