ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕನ್ನಡ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮಾರ್ಚ್ 29, 2024

ಪ್ರತಿಯೊಬ್ಬ ಕನ್ನಡಿಗನ ಬಳಿ ಇರಬೇಕಾದ ಕೃತಿ ʼಸರಿಗನ್ನಡ-ಸರಿಕನ್ನಡʼ

  • ಪುಸ್ತಕ: ಸರಿಗನ್ನಡ-ಸರಿಕನ್ನಡ
  • ಲೇಖಕರು: ಕೊಕ್ಕಡ ವೆಂಕಟ್ರಮಣ ಭಟ್‌, ಮಂಡ್ಯ
  • ಪ್ರಕಾಶಕರು: ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.)
  • ವರ್ಷ: 2023
  • ಪುಟಗಳು: 180
  • ಬೆಲೆ: ರೂ. 200
  • ಸಂಪರ್ಕ: ಕೊಕ್ಕಡ ವೆಂಕಟ್ರಮಣ ಭಟ್‌ (9972448183), ಸಿರಿಬಾಗಿಲು ರಾಮಕೃಷ್ಣ ಮಯ್ಯ (9448344380)

ಎಲ್ಲರೂ ಕನ್ನಡ ರಕ್ಷಣೆಯ ಬಗ್ಗೆ ಮಾತಾಡುವವರೇ; ಆದರೆ ಕನ್ನಡ ಮಾತ್ರ ದಿನೇದಿನೇ ಸೊರಗುತ್ತಲೇ ಇದೆ. ದಿನಬೆಳಗಾದರೆ ಅಪಭ್ರಂಶಗಳೇ ಕಣ್ಣಿಗೆ ರಾಚುತ್ತಿರುತ್ತವೆ. ಭಾಷೆಯ ಸರಿಯಾದ ಬಳಕೆಯ ಬಗ್ಗೆ ಮಾತಾಡುವವರು ಬೆರಳೆಣಿಕೆಯಷ್ಟು. ಮಾತಾಡಿದರೂ ನೂರೆಂಟು ಕಾರಣ ಹೇಳಿ ಅವರ ಬಾಯಿ ಮುಚ್ಚಿಸುವವರೇ ಹೆಚ್ಚು.

ರಸ್ತೆಯಲ್ಲಿ ಐದು ನಿಮಿಷ ಓಡಾಡಿದರೆ ʼಶುಭಾಷಯʼದ ದೊಡ್ಡದೊಡ್ಡ ಫ್ಲೆಕ್ಸುಗಳು ಕಾಣುತ್ತವೆ. ಮೊಬೈಲು, ಸಾಮಾಜಿಕ ತಾಣಗಳಲ್ಲಂತೂ ದಿನಕ್ಕೆ ಹತ್ತಾರು ಬಾರಿ ʼಶುಭಾಷಯʼಗಳ ವಿನಿಮಯ ಆಗುತ್ತಾ ಇರುತ್ತದೆ. ಮೊನ್ನೆ ಒಂದು ಅಂಗಡಿಯ ಎದುರು ʼಹೊಸವರ್ಷದ ಶುಭಾಶಯಗಳುʼ ಎಂದು ಸರಿಯಾಗಿಯೇ ಬರೆದಿದ್ದರು. ಅಂಗಡಿಗೆ ಬಂದಿದ್ದಾತ ತನ್ನ ಹೆಂಡತಿಗೆ ಅದನ್ನು ತೋರಿಸಿ, “ನೋಡು! ಎಷ್ಟೊಂದು ತಪ್ಪು ಬರೆದಿದ್ದಾರೆ; ಅದು ಶುಭಾಷಯ ಆಗಬೇಕು” ಎಂದು ತಿಳಿಹೇಳುತ್ತಿದ್ದ. ತಪ್ಪುಗಳನ್ನೇ ಎಲ್ಲೆಡೆ ಬರೆಯುತ್ತಾ ಕೊನೆಗೆ ಸರಿಯಾದುದನ್ನೇ ತಪ್ಪು ಎಂದು ಜನರು ಸಾಧಿಸುವ ಕಾಲಕ್ಕೆ ಬಂದಿದ್ದೇವೆ. "ಸರಿಯಾಗಿ ಬರೆಯಲು ಬರುತ್ತಿಲ್ಲವೇ? ತಪ್ಪುಗಳನ್ನೇ ಜನಸ್ನೇಹೀ ಪರ್ಯಾಯ ಭಾಷೆಯೆಂದು ಬಿಂಬಿಸಿದರಾಯ್ತು" ಎಂಬ ಹೊಸ ವಾದಗಳನ್ನೂ ಹುಟ್ಟುಹಾಕುತ್ತಿದ್ದೇವೆ. ಇದು ಕೊನೆಗೆ ಎಲ್ಲಿಗೆ ತಲುಪೀತು? ಕನ್ನಡ ರಕ್ಷಣೆಗಾಗಿ ಕಲಾವಿದರು ಸಾಹಿತಿಗಳ ಹೊಸ ಸಂಘಟನೆ ಮಾಡುತ್ತಿರುವುದಾಗಿಯೂ, ಇದಕ್ಕೆ ಸಹಕರಿಸಿದರೆ "ನಿಮಗೆ ಹೊಳ್ಳೆದು ಹಾಗುತದೆ" ಎಂಬುದಾಗಿಯೂ ಒಬ್ಬ ಸಂಘಟಕರು ನನಗೆ ಇತ್ತೀಚೆಗೆ ಸಂದೇಶ ಕಳಿಸಿದ್ದರು. ಇವರ ಪ್ರಕಾರ ಕನ್ನಡದ ರಕ್ಷಣೆ ಎಂದರೆ ಏನು?

ಮಾಧ್ಯಮಗಳು ಭಾಷೆಯನ್ನು ಉಳಿಸಿ, ಬೆಳೆಸುವ ವೇದಿಕೆಗಳೆಂಬ ಹೆಗ್ಗಳಿಕೆ ಹೊಂದಿದ್ದವು. ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಮುದ್ರಣ ಮಾಧ್ಯಮದ ಕೊಡುಗೆಯಂತೂ ಅಪಾರ. “ಪತ್ರಿಕೆಯೆಂದರೆ ಪದಗಳ ಟಂಕಸಾಲೆ”ಯೆಂದು ಹಿರಿಯರು ಹೇಳಿದ್ದುಂಟು. ಆದರೆ ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳು, ಟಿವಿ ವಾಹಿನಿಗಳಲ್ಲಿ ಭಾಷೆಯ ಕಗ್ಗೊಲೆಯಾಗುತ್ತಿರುವುದು ನೋಡಿದರೆ ತೀರಾ ಕಸಿವಿಸಿ ಎನಿಸುತ್ತದೆ. ಹೆಜ್ಜೆಹೆಜ್ಜೆಗೂ ಅಪಶಬ್ದಗಳು, ಕಾಗುಣಿತ ದೋಷಗಳು… ಇವು ಮಾಧ್ಯಮಗಳ ಗುಣಮಟ್ಟವನ್ನು ಹೇಳುವುದಕ್ಕಿಂತಲೂ ನಮ್ಮ ಶಿಕ್ಷಣದ ಹಾಗೂ ಅಧ್ಯಾಪಕರ ಗುಣಮಟ್ಟದತ್ತಲೇ ಹೆಚ್ಚು ಬೊಟ್ಟು ಮಾಡುತ್ತಿರುವಂತಿದೆ.

ಇರಲಿ. ಭಾಷೆಯ ಉಳಿವಿಗೆ, ಸರಿಯಾದ ಬಳಕೆಯ ಬೆಳವಣಿಗೆಗೆ ನಾವೇನು ಮಾಡಬಹುದು ಎಂಬ ಪ್ರಶ್ನೆಗೆ ಇತ್ತೀಚೆಗೆ ಪ್ರಕಟವಾಗಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರ ʼಸರಿಗನ್ನಡ-ಸರಿನ್ನಡʼ ಕೃತಿಯು ಅತ್ಯಂತ ಸೂಕ್ತ ಉತ್ತರದಂತಿದೆ. ಕನ್ನಡವನ್ನು ಸಾಕಷ್ಟು ಚೆನ್ನಾಗಿ ಬಲ್ಲವರೂ ಪ್ರತಿದಿನ ಮಾಡುವ ಹತ್ತಾರು ತಪ್ಪುಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ, ಸರಿಯಾದ ಬಳಕೆ ಯಾವುದೆಂಬುದನ್ನು ತಿಳಿಸುವ ಅಮೂಲ್ಯ ಕೆಲಸವನ್ನು ಭಟ್ಟರು ಈ ಪುಸ್ತಕದ ಮೂಲಕ ಮಾಡಿದ್ದಾರೆ.

ಪತ್ರಿಕೆಗಳಲ್ಲಿ ದಿನಕ್ಕೊಮ್ಮೆಯಾದರೂ ʼಅಪ್ರಾಪ್ತನ ಬಂಧನʼ ಎಂಬ ಬಳಕೆಯನ್ನು ಕಾಣುತ್ತೇವೆ. ಭಾಷಣಕಾರರು ಮಾತಿಗೆ ತೊಡಗಿದರೆ ʼಅಜಗಜಾಂತರ ವ್ಯತ್ಯಾಸʼ ಎನ್ನುತ್ತಾರೆ. ಅನಾನುಕೂಲ, ಯಡವಟ್ಟು, ನಾಗರೀಕ, ಜಾತ್ಯಾತೀತ, ಕೋಟ್ಯಾಧಿಪತಿ, ಸದಾವಕಾಶ, ರೋಧನ, ಪೂರ್ವಾಗ್ರಹ, ಧಾಳಿ, ಅಮೂಲಾಗ್ರ… ಹೀಗೆ ತಪ್ಪುಬಳಕೆಗಳನ್ನೇ ಎಲ್ಲೆಡೆ ಕಾಣುತ್ತೇವೆ. ಕನ್ನಡ ಅಧ್ಯಾಪಕರು, ಕನ್ನಡ ಪತ್ರಕರ್ತರು, ಸಾಹಿತಿಗಳು… ಇವುಗಳನ್ನೇ ಸಲೀಸಾಗಿ ಬರೆಯುತ್ತಿರುತ್ತಾರೆ. ತಪ್ಪುಗಳನ್ನೇ ಬರೆಯುತ್ತಾ ಇವೇ ಸರಿಯಾದ ಬಳಕೆಗಳು ಎಂದು ವಾದಿಸುವಷ್ಟರಮಟ್ಟಿಗೆ ಇವು ದಿನನಿತ್ಯದ ಬಳಕೆಗಳಲ್ಲಿ ಗಟ್ಟಿಯಾಗಿಬಿಟ್ಟಿವೆ. ಇವು ಯಾಕೆ ತಪ್ಪು, ಸರಿಯಾದ ಬಳಕೆ ಯಾವುದು, ಸರಿಯಾದುದನ್ನು ಉಳಿಸಿ ಬೆಳೆಸಬೇಕಾದ ಅಗತ್ಯ ಏನು ಎಂಬುದನ್ನು ತಮ್ಮ ಪುಸ್ತಕದಲ್ಲಿ ಸಮರ್ಥವಾಗಿ ವಿವರಿಸಿದ್ದಾರೆ ಶ್ರೀ ವೆಂಕಟ್ರಮಣ ಭಟ್ಟರು.

ಈ ರೀತಿಯ ಪದಗಳನ್ನು ಅಕಾರಾದಿ ಜೋಡಿಸಿರುವುದರಿಂದ ಪರಾಮರ್ಶನದ ದೃಷ್ಟಿಯಿಂದಲೂ ಕೃತಿ ಅನುಕೂಲಕರವಾಗಿದೆ. ಕೃತಿಕಾರರು ಸುಮಾರು ನಾಲ್ಕು ದಶಕಗಳ ಕಾಲ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವುದರಿಂದ ಪದಗಳ ವ್ಯುತ್ಪತ್ತಿ, ಅವುಗಳ ಅರ್ಥ, ತಪ್ಪು ಬಳಕೆಯಿಂದ ಆಗುವ ಅನರ್ಥಗಳನ್ನು ಅಧಿಕೃತವಾಗಿ ಹೇಳಬಲ್ಲವರಾಗಿದ್ದಾರೆ.

ʼಸರಿಗನ್ನಡ-ಸರಿಕನ್ನಡʼ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡದೊಂದು ಕೊಡುಗೆ. ಪ್ರತೀ ಕನ್ನಡ ಪತ್ರಿಕೆ, ಟಿವಿ ವಾಹಿನಿಗಳೇ ಮೊದಲಾದ ಮಾಧ್ಯಮಗಳು ತಮ್ಮ ಕಚೇರಿಗಳಲ್ಲಿ ಇಟ್ಟುಕೊಳ್ಳಬೇಕಾದ ಪುಸ್ತಕ ಇದು. ಕನ್ನಡ ಅಧ್ಯಾಪಕರು, ವಿದ್ಯಾರ್ಥಿಗಳು, ಪತ್ರಕರ್ತರಂತೂ ತಮ್ಮ ಬಳಿ ಸದಾ ಇರಿಸಿಕೊಳ್ಳಬೇಕಾದ ಕೃತಿಯಿದು. ಅಷ್ಟೇ ಏಕೆ, ಭಾಷೆಯ ಬಗ್ಗೆ ಪ್ರೀತಿ-ಅಭಿಮಾನವುಳ್ಳ ಪ್ರತಿಯೊಬ್ಬ ಕನ್ನಡಿಗನೂ ಗಮನಿಸಬೇಕಾದ, ಪರಸ್ಪರ ಹಂಚಿಕೊಳ್ಳಬೇಕಾದ ಪುಸ್ತಕ ಇದೆಂದರೆ ಅತಿಶಯವೇನೂ ಇಲ್ಲ.

ಈ ಕಾಲಕ್ಕೆ ಬಹಳ ಅಗತ್ಯವಿರುವ ಕೃತಿಯಿದು. ಇಂತಹದೊಂದು ಮಹತ್ವದ ಪುಸ್ತಕ ರಚಿಸಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರಿಗೂ, ಇದನ್ನು ಪ್ರಕಟಿಸಿರುವ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೂ ನಾವು ಆಭಾರಿಗಳಾಗಿರಬೇಕು. ಭೌಗೋಳಿಕವಾಗಿ ಕರ್ನಾಟಕದ ಹೊರಗಿರುವ, ಗಡಿನಾಡಿನ ಸಂಸ್ಥೆಯೊಂದು ಇಂತಹ ಘನಕಾರ್ಯವನ್ನು ಮಾಡಿದೆ ಎಂಬುದನ್ನು ನಾವೆಲ್ಲ ಗಮನಿಸಬೇಕು ಮತ್ತು ಅಭಿನಂದಿಸಬೇಕು.

 - ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಆಗಸ್ಟ್ 7, 2023

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕೆ.ಪಿ.ರಾವ್

06 ಆಗಸ್ಟ್‌ 2023ರ ʼಉದಯವಾಣಿʼ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಲೇಖನ

ಕರಾವಳಿ ತೀರದ ಕಿನ್ನಿಕಂಬಳದ ಪುಟ್ಟದೊಂದು ಮನೆ. ಅಲ್ಲಿನ ಹೆಣ್ಣುಮಗುವೊಂದಕ್ಕೆ ಅಕ್ಷರಾಭ್ಯಾಸ ಮಾಡಿಸುವುದಕ್ಕೆ ಪುರೋಹಿತರು ಬಂದಿದ್ದರು. ರಂಗೋಲಿ ಪುಡಿಯಲ್ಲಿ ʻಗʼ ಮತ್ತು ʻಶ್ರೀʼ ಎಂಬೆರಡು ಅಕ್ಷರಗಳನ್ನು ಒಂದೆಡೆ ಬರೆದಿದ್ದರು. ಇದನ್ನು ನೋಡುತ್ತ ಕುಳಿತಿದ್ದ ಹೆಣ್ಮಗುವಿನ ಎರಡು ವರ್ಷದ ತಮ್ಮ ಅದೇ ರಂಗೋಲಿ ಪುಡಿಯನ್ನೆತ್ತಿಕೊಂಡು ಸಂಜೆ ವೇಳೆಗೆ ಮನೆ ತುಂಬಾ ʻಗʼ ಮತ್ತು ʻಶ್ರೀʼ ಬರೆದುಬಿಟ್ಟಿದ್ದ. ಎರಡು ವರ್ಷದ ಕಂದಮ್ಮನ ಒಳಗೆ ಅದ್ಯಾವ ಶಕ್ತಿಯಿತ್ತೋ, ಮುಂದೆ ಅದೇ ಕಂದಮ್ಮ ಕಂಪ್ಯೂಟರುಗಳಿಗೆ ಕನ್ನಡ ಕಲಿಸಿಬಿಟ್ಟಿತು! ಹೌದು, ಆ ಮಗು ಬೇರಾರೂ ಅಲ್ಲ; ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ರೂಪಿಸಿದ ಪ್ರೊ. ಕಿನ್ನಿಕಂಬಳ ಪದ್ಮನಾಭ ರಾವ್, ಅಂದರೆ ಕೆ. ಪಿ. ರಾವ್.

ಹಾಗೆ ನೋಡಿದರೆ, ಕೆ. ಪಿ. ರಾವ್ ಅವರನ್ನು ಕಂಪ್ಯೂಟರಿಗೆ ಕನ್ನಡ ಕಲಿಸಿದವರು ಎಂದರೆ ಸಾಲದು; ಭಾರತೀಯ ಭಾಷೆಗಳನ್ನು ಕಂಪ್ಯೂಟರಿಗೆ ಕಲಿಸಿದವರು ಎನ್ನಬೇಕು. ಯಾವುದೇ ಭಾರತೀಯ ಭಾಷೆ ಕಂಪ್ಯೂಟರಿನಲ್ಲಿ ಇಲ್ಲದ ಕಾಲದಲ್ಲಿ ಅವುಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಹಗಲಿರುಳು ಶ್ರಮಿಸಿದವರು ಕೆ. ಪಿ. ರಾವ್. ಬಡುಗ, ತುಳು, ಬ್ರಾಹ್ಮಿ, ಖರೋಷ್ಠಿ, ಕದಂಬ ಮುಂತಾದ ಅನೇಕ ಲಿಪಿಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಅವರು ಪಟ್ಟ ಶ್ರಮ ಅದ್ವಿತೀಯ. ʼಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹʼ ಎಂಬ ಅಭಿದಾನ ಅವರಿಗೆ ಚೆನ್ನಾಗಿಯೇ ಒಪ್ಪುತ್ತದೆ.

ಗುರುವಿನ ಕೃಪೆ ಅಂದರು...

ಬಾಲ್ಯದ ಪರಿಸರ ಹಾಗೂ ಶ್ರೇಷ್ಠ ಅಧ್ಯಾಪಕರೇ ತಮ್ಮ ಎಲ್ಲ ಅನ್ವೇಷಣೆಗಳ ಪ್ರೇರಣೆ ಎಂಬುದನ್ನು ರಾಯರು ಮುಕ್ತ ಮನಸ್ಸಿನಿಂದ ಹೇಳುತ್ತಾರೆ. ಅದರಲ್ಲೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾವು ಬಿಎಸ್ಸಿ ಓದುತ್ತಿದ್ದಾಗ ಕನ್ನಡ ಪ್ರಾಧ್ಯಾಪಕರಾಗಿದ್ದ ಸೇಡಿಯಾಪು ಕೃಷ್ಣ ಭಟ್ಟರು ತಮಗೆ ಪ್ರಾತಃಸ್ಮರಣೀಯರು ಎನ್ನುತ್ತಾರೆ. “ಸೇಡಿಯಾಪು ನನ್ನ ಮರೆಯಲಾಗದ ಗುರು. ಪಾಣಿನಿಯನ್ನು ಅರ್ಥ ಮಾಡಿಸಿದವರು ಅವರು. ಲೋಕದ ಎಲ್ಲ ಭಾಷೆಗಳ ಮೂಲ ತತ್ವ ಏನು ಎಂಬುದನ್ನು ಮನಸ್ಸಿನಲ್ಲಿ ನಾಟಿಸಿಬಿಟ್ಟಿದ್ದರು. ಅವರಿಂದಾಗಿ ಕನ್ನಡದ ಜತೆಜತೆಗೆ ಜಗತ್ತಿನ ಎಲ್ಲ ಭಾಷೆಗಳ ಮೇಲೆ ನನಗೆ ಮಮತೆ ಹುಟ್ಟಿಬಿಟ್ಟಿತು,” ಎಂದು ನೆನಪಿಸಿಕೊಳ್ಳುತ್ತಾರೆ ರಾಯರು.

ಅವರಿಗೆ ಮೊದಲಿನಿಂದಲೂ ಗಣಿತವೆಂದರೆ ಪ್ರೀತಿ. ಜಗತ್ತಿನ ಎಲ್ಲ ಜ್ಞಾನಶಿಸ್ತು ಹಾಗೂ ಭಾಷೆಗಳ ಹಿಂದೆ ಇರುವ ಮೂಲತತ್ವ ಗಣಿತದ್ದು ಎಂಬುದನ್ನು ಅವರು ವಿದ್ಯಾರ್ಥಿದೆಸೆಯಲ್ಲೇ ಅರ್ಥಮಾಡಿಕೊಂಡಿದ್ದರು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಅವರಿಗೆ ಸಾಧ್ಯವಾದದ್ದು ಇದೇ ಕಾರಣದಿಂದ. ಕಂಪ್ಯೂಟರ್ ಅಂತೂ ಗಣಿತವನ್ನೇ ಆಧಾರವಾಗಿಸಿಕೊಂಡಿರುವ ʻಗಣಕಯಂತ್ರʼ ಅಲ್ಲವೇ?

ವೈವಿಧ್ಯಮಯ ವೃತ್ತಿಬದುಕು:

ವೈವಿಧ್ಯಮಯ ವೃತ್ತಿಬದುಕು ಕೆ. ಪಿ. ರಾವ್ ಅವರದ್ದು. ಅವರ ವೃತ್ತಿಜೀವನ ಆರಂಭವಾದದ್ದು ಮುಂಬೈಯ ಪ್ರತಿಷ್ಠಿತ ಬಾಬಾ ಅಟೊಮಿಕ್ ರೀಸರ್ಚ್ ಸೆಂಟರಿನಲ್ಲಿ. ಅಲ್ಲಿ ಹೋಮಿ ಭಾಭಾ, ಡಿ. ಡಿ. ಕೊಸಾಂಬಿ, ಎ.ಕೆ. ಗಂಗೂಲಿ, ರಾಜಾರಾಮಣ್ಣ ಮೊದಲಾದ ದಾರ್ಶನಿಕರ ಒಡನಾಟ.  ಮುಂದೆ ಟಾಟಾ ಪ್ರೆಸ್ಸಿಗೆ ಇಂಜಿನಿಯರ್ ಆಗಿ ಸೇರಿಕೊಂಡಾಗಲೂ ಮುದ್ರಣದ ಹೊಸ ಸಾಧ್ಯತೆಗಳ ಕುರಿತ ಚಿಂತನೆ ಸಾಧ್ಯವಾಯಿತು. ಬೆರಳಚ್ಚು ಯಂತ್ರಕ್ಕೆ ಸಿಂಧೂ ಕಣಿವೆ ಲಿಪಿಯ ಸಂಕೇತಗಳನ್ನು ಅಳವಡಿಸುವ ಮಹತ್ತರ ಕಾರ್ಯವೂ ರಾಯರಿಂದ ಇದೇ ಸಮಯದಲ್ಲಿ ನಡೆಯಿತು.

ಟಾಟಾ ಪ್ರೆಸ್ಸಿನಲ್ಲಿ ಅಕ್ಷರಗಳೊಂದಿಗೆ ಆರಂಭವಾದ ರಾಯರ ಒಡನಾಟ ಬೆಂಗಳೂರಿನ ಮಾನೋಟೈಪ್ ಇಂಡಿಯಾ ಕಂಪೆನಿಯಲ್ಲಿ ಯಶಸ್ವಿಯಾಗಿ ಮುಂದುವರಿಯಿತು. ಭಾರತೀಯ ಭಾಷೆಗಳಿಗೆ ಫಾಂಟ್ಗಳನ್ನು ವಿನ್ಯಾಸಮಾಡುವ ಮಹತ್ಕಾರ್ಯಕ್ಕೆ ಅವರ ಪ್ರತಿಭೆ ಬಳಕೆಯಾಯಿತು. ಕಂಪ್ಯೂಟರಿನಲ್ಲಿ ಕನ್ನಡವನ್ನು ಮೂಡಿಸುವ ಬೇರೆಬೇರೆ ಪ್ರಯತ್ನಗಳು ಆ ಹಂತದಲ್ಲಿ ನಡೆದಿದ್ದರೂ, ಅವೆಲ್ಲವನ್ನು ಏಕಸೂತ್ರದಲ್ಲಿ ಒಯ್ಯುವ ಕೆಲಸ ಆಗಿರಲಿಲ್ಲ. ಆ ಕೆಲಸ ಸಾಧ್ಯವಾದದ್ದು ಕೆ. ಪಿ. ರಾಯರು ಒಂದು ಪ್ರಮಾಣಿತ ಕೀಲಿಮಣೆ ವಿನ್ಯಾಸವನ್ನು ಸಂಶೋಧಿಸಿದಾಗ. ರಾಯರು ತಮ್ಮ ಶಬ್ದಾಧಾರಿತ ಕೀಲಿಮಣೆಗೆ ʻಸೇಡಿಯಾಪುʼ ಎಂದು ನಾಮಕರಣ ಮಾಡಿದರು. 

ರಾಯರು ತಮ್ಮ ತಂತ್ರಾಂಶಕ್ಕೆ ತಮ್ಮ ಗುರುಗಳ ಹೆಸರನ್ನಿಟ್ಟು ಕೃತಾರ್ಥರಾದರೆ, ಕರ್ನಾಟಕ ಸರ್ಕಾರ 2002ರಲ್ಲಿ ಇದನ್ನೇ ರಾಜ್ಯದ ಅಧಿಕೃತ ಕೀಲಿಮಣೆ ವಿನ್ಯಾಸ ಎಂದು ಸ್ವೀಕರಿಸಿ ರಾಯರ ಶ್ರಮವನ್ನು ಗೌರವಿಸಿತು. ಇಂದು ಇದೇ ತಂತ್ರಾಂಶ ʻನುಡಿʼ ಎಂದು ಪ್ರಸಿದ್ಧವಾಗಿರುವುದು ಎಲ್ಲರಿಗೂ ತಿಳಿದದ್ದೇ. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಮಾಡಲು ಇನ್ನೂ ಕೆಲವು ತಂತ್ರಾಂಶಗಳು ಬಳಕೆಯಾಗುತ್ತಿದ್ದರೂ, ʻನುಡಿʼ ತನ್ನ ಸರಳ ಪ್ರಮಾಣಿತ ಸ್ವರೂಪದಿಂದಾಗಿ ಹೆಚ್ಚು ಜನಪ್ರಿಯವೆನಿಸಿದೆ. 

ದುಡ್ಡಿನಿಂದ ಸಂತೋಷ ಸಿಗಲ್ಲ...

ವಿಶೇಷವೆಂದರೆ, ತಮ್ಮದೇ ತಂತ್ರಾಂಶ ʻಸೇಡಿಯಾಪುʼವಿನ ಸಂಶೋಧನೆಗೆ ರಾಯರು ಪೇಟೆಂಟ್ ಪಡೆದುಕೊಂಡಿಲ್ಲ. 80ರ ದಶಕದಲ್ಲೇ ಅದನ್ನು ಕೇಳಿದವರಿಗೆಲ್ಲ ಅವರು ಉಚಿತವಾಗಿ ಕೊಟ್ಟಿದ್ದರು. ಕರ್ನಾಟಕ ಸರ್ಕಾರದ ಗಣಕ ಪರಿಷತ್ತು ಕೂಡ ʼನುಡಿʼಯನ್ನು ಉಚಿತವಾಗಿಯೇ ಒದಗಿಸುತ್ತಿದೆ. “ನೀವು ಪೇಟೆಂಟ್ ತೆಗೆದುಕೊಂಡಿದ್ದರೆ ಸಾಕಷ್ಟು ಹಣಸಂಪಾದನೆ ಮಾಡಬಹುದಿತ್ತು ಎಂದು ತುಂಬ ಮಂದಿ ನನಗೆ ಹೇಳುತ್ತಾರೆ. ನನ್ನ ದೊಡ್ಡ ಸಮಸ್ಯೆ ಎಂದರೆ ನನಗೆ ದುಡ್ಡಿನ ಬೆಲೆ ಗೊತ್ತಿಲ್ಲ. ಈ ತಂತ್ರಾಂಶವನ್ನಿಟ್ಟುಕೊಂಡು ಹಣಸಂಪಾದಿಸಬೇಕು ಎಂದು ನನಗೆಂದೂ ಅನಿಸಿಯೇ ಇಲ್ಲ. ನಮ್ಮ ಭಾಷೆಗಾಗಿ, ತಂತ್ರಜ್ಞಾನದೊಂದಿಗೆ ಅದನ್ನು ಬೆಳೆಸುವುದಕ್ಕಾಗಿ ಕೆಲಸ ಮಾಡುವುದರಲ್ಲಿ ನನಗೆ ದೊರೆಯುವ ಸಂತೋಷ ಹಣದಿಂದ ದೊರೆಯದು ಅನಿಸುತ್ತದೆ,” ಎಂದು ಮುಗುಳ್ನಗುತ್ತಾರೆ ಕೆ. ಪಿ. ರಾಯರು. ಇಂತಹ ಮಂದಿ ಈ ಕಾಲದಲ್ಲಿ ದೊರೆಯುವುದು ಬಹಳ ಕಷ್ಟ.

ಮಾನೋಟೈಪ್ನ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಬಳಿಕ ರಾಯರು ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಗೌಹಾಟಿಯ ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ತಮ್ಮ ಜ್ಞಾನ-ಅನುಭವವನ್ನು ಹೊಸಪೀಳಿಗೆಗೆ ಧಾರೆಯೆರೆದರು. ಪ್ರತಿಷ್ಠಿತ ಅಡೋಬಿ ಕಂಪೆನಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.  ಅನೇಕ ವೈಜ್ಞಾನಿಕ ಹಾಗೂ ಸೃಜನಶೀಲ ಕೃತಿಗಳನ್ನು ರಚಿಸಿದರು.

ಪ್ರಶಸ್ತಿ-ಗೌರವ:

ರಾಯರ ಸಾಧನೆ-ಶ್ರಮವನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಗೌರವ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಪ್ರಮುಖವಾದವು. ಕನ್ನಡ ಮಾಧ್ಯಮದಲ್ಲಿ ಕಲಿತ ಹಳ್ಳಿಗಾಡಿನ ಬಡಕುಟುಂಬದ ಹುಡುಗನೊಬ್ಬ ದೇಶವಿದೇಶ ಸುತ್ತಿ ಕನ್ನಡಕ್ಕಾಗಿ ಇಂತಹದೊಂದು ಶಾಶ್ವತ ಕೊಡುಗೆ ನೀಡಿರುವುದು ಕನ್ನಡಿಗರು ಎಂದೂ ಮರೆಯಲಾಗದ ವಿಷಯ. ಅದರಲ್ಲೂ “ನನಗೇನೂ ಬೇಡ, ಭಾಷೆ ಬೆಳೆದರೆ ಅಷ್ಟೇ ಸಾಕು,” ಎನ್ನುವುದಂತೂ ಯಾವ ಪ್ರಶಸ್ತಿಯೂ ಸರಿಗಟ್ಟದ ಒಂದು ಮನಸ್ಥಿತಿ. ಇಂತಹವರ ಸಂತತಿ ಅಸಂಖ್ಯವಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.


ಭಾನುವಾರ, ನವೆಂಬರ್ 29, 2020

ಶಿಕ್ಷಣದಲ್ಲಿ ಕನ್ನಡ: ಸಾಧ್ಯತೆ, ಸವಾಲು

ನವೆಂಬರ್ 2020ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

(ಇದೇ ವಿಚಾರವನ್ನು 2019ರಲ್ಲಿ ನಡೆದ ಕಡಬ ತಾಲೂಕು ಮೊದಲನೇ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾಗಿತ್ತು).

ಕನ್ನಡವೆಂಬ ಭಾಷೆಯಿಂದಲೇ ಅಸ್ಮಿತೆಯನ್ನು ಪಡೆದುಕೊಂಡಿರುವ ಕರ್ನಾಟಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಬಗ್ಗೆ
ಆಂದೋಲನಗಳು ನಡೆಯಬೇಕಾಗಿ ಬಂದಿರುವುದು ಕಾಲದ ವಿಪರ್ಯಾಸವೇ ಇರಬೇಕು. ಕನ್ನಡದ ಅಳಿವು-ಉಳಿವಿನ ಪ್ರಶ್ನೆ ಬಂದಾಗಲೆಲ್ಲ ಶಿಕ್ಷಣದ ವಿಚಾರ ಮುನ್ನೆಲೆಗೆ ಬರುತ್ತದೆ. ಏಕೆಂದರೆ ಒಂದು ಭಾಷೆಯ ವರ್ತಮಾನ ಮತ್ತು ಭವಿಷ್ಯದ ಚರ್ಚೆಗಳಲ್ಲಿ ಶಿಕ್ಷಣದ ಪಾತ್ರ ತುಂಬ ದೊಡ್ಡದು. ಇಲ್ಲಿ ನಾವು ಶಿಕ್ಷಣದಲ್ಲಿ ಕನ್ನಡವನ್ನು ಬಳಸುವ ಸವಾಲು ಹಾಗೂ ಸಾಧ್ಯತೆಗಳನ್ನು ವಿಶ್ಲೇಷಿಸಬೇಕಾಗಿದೆ. ‘ಶಿಕ್ಷಣದಲ್ಲಿ ಕನ್ನಡ’ ಎಂಬ ವಿಚಾರವನ್ನು ಎರಡು ಆಯಾಮಗಳಿಂದ ನೋಡಬಹುದು. ಮೊದಲನೆಯದು, ಭಾಷೆಯಾಗಿ ಕನ್ನಡವನ್ನು ಕಲಿಯುವುದು; ಎರಡನೆಯದು, ಕನ್ನಡ ಮಾಧ್ಯಮದಲ್ಲಿ ಕಲಿಯುವುದು. 

ಕನ್ನಡ ಕಲಿಕೆಯ ಸ್ಥಿತಿಗತಿ:

ಸಮಾಜದ ಒಂದು ಭಾಗ ಕನ್ನಡದಲ್ಲಿ ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸುತ್ತಾ ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ತನ್ನ ಕೊಡುಗೆಯನ್ನು ನೀಡುತ್ತಿದ್ದರೆ, ಇನ್ನೊಂದೆಡೆ ಭಾಷೆಯ ಬಗ್ಗೆ ತೀವ್ರ ಅನಾದರ ಹಾಗೂ ಅನಾಸಕ್ತಿಯನ್ನು ಹೊಂದಿರುವ ಮಂದಿಯನ್ನು ಇಂದು ನಾವು ಕಾಣುತ್ತಿದ್ದೇವೆ. ವಿಶ್ವವಿದ್ಯಾನಿಲಯ ಹಂತದಲ್ಲಿ ಶಿಕ್ಷಣ ಪಡೆಯುತ್ತಿರುವವರಲ್ಲೂ ಸಾಕಷ್ಟು ಮಂದಿ ಸ್ವತಂತ್ರವಾದ, ಅರ್ಥಪೂರ್ಣ, ತಪ್ಪಿಲ್ಲದ ಒಂದು ಕನ್ನಡ ವಾಕ್ಯ ಬರೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ವಿಪರೀತವಾದ ಕಾಗುಣಿತ ತಪ್ಪುಗಳು, ವಾಕ್ಯರಚನೆಯ ದೋಷಗಳು ನಮ್ಮನ್ನು ಕಂಗೆಡಿಸುತ್ತವೆ. ಜ್ಞಾನಸಂಪಾದನೆಯ ವಿಷಯ ಹಾಗಿರಲಿ, ಕಡೇಪಕ್ಷ ತಪ್ಪಿಲ್ಲದೆ ತಮ್ಮ ಮಾತೃಭಾಷೆಯನ್ನು ಬಳಸುವ ಸಾಮರ್ಥ್ಯವನ್ನಾದರೂ ನಮ್ಮ ಯುವಕರು ಏಕೆ ಕರಗತ ಮಾಡಿಕೊಂಡಿಲ್ಲ ಎಂಬ ಆತಂಕ ಸಮಾಜದ ಪ್ರಜ್ಞಾವಂತರನ್ನು ಕಾಡದೆ ಇರದು.

ಇಂತಹ ಪರಿಸ್ಥಿತಿಗೆ ಏನು ಕಾರಣವೆಂದು ಪ್ರಶ್ನೆಮಾಡಿದರೆ, ವಿಶ್ವವಿದ್ಯಾನಿಲಯಗಳು ಕಾಲೇಜುಗಳತ್ತಲೂ, ಕಾಲೇಜುಗಳು ಪ್ರೌಢಶಾಲೆಗಳತ್ತಲೂ, ಪ್ರೌಢಶಾಲೆಗಳು ಪ್ರಾಥಮಿಕ ಶಾಲೆಗಳತ್ತಲೂ ಬೊಟ್ಟು ಮಾಡುವುದು ನಡೆದೇ ಇದೆ. ಅಂದರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಸ್ನಾತಕ ಮತ್ತು ಪದವಿಪೂರ್ವ ಉಪನ್ಯಾಸಕರು ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ಟೀಕಿಸುವುದು, ಕಾಲೇಜು ಉಪನ್ಯಾಸಕರು ಪ್ರೌಢಶಾಲೆಗಳಲ್ಲಿ ಸರಿಯಾಗಿ ಕನ್ನಡ ಕಲಿಸಿಲ್ಲ ಎಂದು ದೂರುವುದು, ಅವರು ಪ್ರಾಥಮಿಕ ಶಾಲೆಗಳ ಅಧ್ಯಾಪಕರು ಸರಿಯಾದ ರೀತಿಯಲ್ಲಿ ಪಾಠ ಮಾಡಿಲ್ಲ ಎಂದು ತೆಗಳುವುದು ಸರ್ವೇಸಾಮಾನ್ಯವಾಗಿದೆ. ಸಮಸ್ಯೆಗಳ ವಿಚಾರ ಬಂದಾಗ ಒಬ್ಬರು ಇನ್ನೊಬ್ಬರತ್ತ ಕೈತೋರಿಸುವುದು ಹೊಸದೇನಲ್ಲ. ಆದರೆ ಇದು ಅಷ್ಟಕ್ಕೇ ಬಿಟ್ಟುಬಿಡಬಹುದಾದ ವಿಚಾರ ಅಲ್ಲ. ಏಕೆಂದರೆ ಇದು ಶಿಕ್ಷಣಕ್ಕೆ ಹಾಗೂ ಸಮಾಜದ ಒಟ್ಟಾರೆ ಭವಿಷ್ಯಕ್ಕೆ ಸಂಬಂಧಿಸಿದ ಪ್ರಶ್ನೆ.

ಕನ್ನಡದ ಕಲಿಕೆ ಈ ಬಗೆಯ ಕಳವಳಕಾರಿ ಪರಿಸ್ಥಿತಿಯನ್ನು ತಲುಪುವುದಕ್ಕೆ ಯಾರು ಕಾರಣ ಎಂಬ ಚರ್ಚೆಗಿಂತಲೂ, ವಿದ್ಯಾರ್ಥಿಗಳಿಗೆ ಕನ್ನಡವನ್ನು ಸಮರ್ಥವಾಗಿ ಕಲಿಸುವ ಜವಾಬ್ದಾರಿ ಶಿಕ್ಷಣದ ಎಲ್ಲ ಹಂತದಲ್ಲೂ ಇದೆ ಎಂಬುದನ್ನು ಒಪ್ಪಿಕೊಳ್ಳುವುದು ಮುಖ್ಯ. ಭಾಷೆಯನ್ನು ಕಲಿಸುವುದು ಪ್ರಾಥಮಿಕ ಶಾಲಾ ಶಿಕ್ಷಕರ ಜವಾಬ್ದಾರಿಯೆಂದು ಹೇಳಿ ಉಳಿದವರು ಕೈತೊಳೆದುಕೊಳ್ಳುವುದು ಸರಿಯಲ್ಲ. ಆದರೂ ಬುನಾದಿ ಸರಿ ಇರಬೇಕು ಎಂದು ಅಪೇಕ್ಷಿಸುವುದರಲ್ಲಿ ತಪ್ಪಿಲ್ಲ. ಆರಂಭದಲ್ಲೇ ಸರಿಯಾದುದನ್ನು ಹೇಳಿಕೊಡದೇ ಹೋದರೆ ತಪ್ಪಾಗಿರುವುದೇ ಭದ್ರವಾಗುತ್ತದೆ ಮತ್ತು ಅದೇ ಮುಂದುವರಿಯುತ್ತದೆ. ಕಾಲೇಜು ಹಂತದಲ್ಲಿ ಬರೆವಣಿಗೆಯಲ್ಲಿ ಕಾಗುಣಿತ ತಪ್ಪು, ವಾಕ್ಯರಚನೆಯ ದೋಷಗಳನ್ನು ಮಾಡುವ ವಿದ್ಯಾರ್ಥಿಗಳಲ್ಲಿ ಬಹುತೇಕರಿಗೆ ತಾವು ಬರೆಯುತ್ತಿರುವುದು ತಪ್ಪು ಎಂಬುದನ್ನು ಮನದಟ್ಟು ಮಾಡುವುದೇ ದೊಡ್ಡ ಸಾಹಸವೆನಿಸಿದೆ. ‘ನಮಗೆ ಕಲಿಸಿದ್ದೇ ಹೀಗೆ ಸಾರ್’ ಎಂದು ಎಷ್ಟೋ ವಿದ್ಯಾರ್ಥಿಗಳು ಹೇಳುವುದನ್ನು ಕೇಳಿದ್ದೇನೆ. ಈ ಆರಂಭದ ಕಲಿಕೆಯ ದೋಷ ಎಷ್ಟು ತೀವ್ರವೆಂದರೆ ಈ ವಿದ್ಯಾರ್ಥಿಗಳಿಗೆ ಸರಿಯಾದ ಒಂದು ಪಠ್ಯವನ್ನು ನಕಲು ಮಾಡಲೂ ಬರುವುದಿಲ್ಲ. ಕಣ್ಣೆದುರೇ ಇರುವ ಪಠ್ಯವೊಂದನ್ನು ನೋಡಿ ಟಿಪ್ಪಣಿ ಮಾಡಲು ಹೇಳಿದರೂ ಅದರಲ್ಲಿ ಹತ್ತಾರು ತಪ್ಪುಗಳು ನುಸುಳಿರುತ್ತವೆ. ಇದು ಪ್ರಾಥಮಿಕ ಶಾಲೆಯಲ್ಲೇ ಆರಂಭವಾದ ಸಮಸ್ಯೆ ಎಂಬುದು ನಿಸ್ಸಂಶಯ. ಎಂದರೆ, ಪ್ರಾಥಮಿಕ ಶಾಲಾ ಹಂತದಲ್ಲೇ ಉತ್ತಮ ಕನ್ನಡವನ್ನು ಕಲಿಸುವ ಸಮರ್ಥ ಶಿಕ್ಷಕರ ಕೊರತೆ ನಮ್ಮಲ್ಲಿ ಇದೆ ಎಂದಂತಾಯಿತು. ಇದು ಕಡೆಗಣಿಸಲಾಗದ ಒಂದು ಗಂಭೀರ ಸವಾಲೇ ಹೌದು. 

ಇನ್ನೊಂದು ಸೂಕ್ಷ್ಮವಾದ ವಿಚಾರವೆಂದರೆ, ಪ್ರಾಥಮಿಕ ಶಾಲೆಯನ್ನೂ ಒಳಗೊಂಡಂತೆ ಶಿಕ್ಷಣದ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯ ಸಮಸ್ಯೆ ಇದೆ. ಎಷ್ಟೋ ಮಕ್ಕಳು ನಿಯಮಿತವಾಗಿ ತರಗತಿಗಳಿಗೆ ಹೋಗುವುದೇ ಇಲ್ಲ. ಶಾಲೆಗೆ ದಾಖಲಾಗುವುದು, ಪರೀಕ್ಷೆ ಬರೆಯುವುದು, ಮುಂದಿನ ತರಗತಿಗೆ ಪ್ರವೇಶ ಪಡೆಯುವುದು- ಇಷ್ಟಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುವ ಸಾವಿರಾರು ಮಕ್ಕಳು (ಮತ್ತು ಅವರ ಪೋಷಕರು) ನಮ್ಮಲ್ಲಿದ್ದಾರೆ. ಇದಕ್ಕೆ ಬಡತನ, ಮಕ್ಕಳೂ ಹೆತ್ತವರೊಂದಿಗೆ ದುಡಿಮೆಯಲ್ಲಿ ಕೈಜೋಡಿಸುವ ಅನಿವಾರ್ಯತೆ ಇತ್ಯಾದಿ ಮಾನವೀಯ ಮುಖವೂ ಇದೆ. ಆದರೆ ವಿದ್ಯಾರ್ಥಿಗಳು ಪ್ರಾಥಮಿಕ ಶಾಲಾ ಹಂತದಲ್ಲೇ ನಿಯಮಿತವಾಗಿ ತರಗತಿಗೆ ಹಾಜರಾಗದೆ ಇದ್ದಾಗ ಅವರಿಗೆ ಉತ್ತಮ ಭಾಷಾ ಕೌಶಲಗಳ ಪಾಠ ದೊರೆಯುವುದು ಕಷ್ಟವೇ. ಇದು ಮುಂದಿನ ಹಂತಗಳಲ್ಲಾದರೂ ಸರಿ ಹೋಗದೆ ಇದ್ದಾಗ ಅವರು ಮುಖ್ಯವಾಹಿನಿಯೊಂದಿಗೆ ಸೇರುವುದೇ ಇಲ್ಲ.

ಭಾಷಾ ಬಳಕೆಯಲ್ಲಿ ಪ್ರಾದೇಶಿಕ ವಿಭಿನ್ನತೆಯ ಇನ್ನೊಂದು ವಿಷಯವನ್ನೂ ಇಲ್ಲಿ ಪ್ರಸ್ತಾಪಿಸಬಹುದು. ಕರ್ನಾಟಕದಲ್ಲಿ ಹಲವು ಕನ್ನಡಗಳಿವೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಾಷಾ ಬಳಕೆ ವ್ಯತ್ಯಾಸವಾಗುತ್ತದೆ, ಆದರೆ ಪಠ್ಯಪುಸ್ತಕ ಒಂದೇ ಇರುತ್ತದೆ. ತಾವು ರೂಢಿಯಲ್ಲಿ ಆಡುವ ಮಾತಿಗೂ, ಪಠ್ಯಪುಸ್ತಕದ ಭಾಷೆಗೂ ವ್ಯತ್ಯಾಸವಿದೆ ಎಂಬುದನ್ನು ಅನೇಕ ವಿದ್ಯಾರ್ಥಿಗಳು ಗಮನಿಸುವುದಿಲ್ಲ. ಭಾಷಾ ವೈವಿಧ್ಯತೆಗಳನ್ನು ಗೌರವಿಸುವುದು, ಒಂದು ಪ್ರಮಾಣಿತ ಭಾಷೆಯನ್ನು ಅಭ್ಯಾಸ ಮಾಡುವುದು ಎರಡೂ ಪ್ರಮುಖ ಸಂಗತಿಗಳೇ. ಇವೆರಡನ್ನೂ ಸಮತೋಲನದಿಂದ ಒಯ್ಯುವುದು ಒಂದು ದೊಡ್ಡ ಸವಾಲೇ. ಪ್ರಾದೇಶಿಕ ವೈವಿಧ್ಯತೆಗಳನ್ನು ಉಳಿಸಿಕೊಳ್ಳುವಷ್ಟೇ ಕುಮಾರವ್ಯಾಸ, ರಾಘವಾಂಕರನ್ನೂ ನಮ್ಮ ವಿದ್ಯಾರ್ಥಿಗಳು ಓದಿ ಆಸ್ವಾದಿಸುವುದು ತುಂಬ ಮುಖ್ಯ ಅಲ್ಲವೇ?

ಇಂಜಿನಿಯರಿಂಗ್‍ನಂತಹ ಕೋರ್ಸುಗಳಲ್ಲಿ ಒಂದು ಭಾಷೆಯಾಗಿ ಕನ್ನಡವನ್ನು ಅಭ್ಯಾಸ ಮಾಡುವುದು ಕಡ್ಡಾಯವಾಗಿದ್ದರೂ, ಬಹುತೇಕ ಕಡೆ ಅದೊಂದು ಕಾಟಾಚಾರವಾಗಿ ಉಳಿದಿರುವುದು ಸುಳ್ಳಲ್ಲ. ಅಲ್ಲಿ ಕನ್ನಡ ಕಲಿಕೆಗೆ ಎಷ್ಟು ಪೂರಕವಾದ ವಾತಾವರಣ ಇದೆ, ಪ್ರಾಧಾನ್ಯತೆ ಇದೆ, ಪರೀಕ್ಷೆಗಳನ್ನು ಎಷ್ಟು ಆಸ್ಥೆಯಿಂದ ಮಾಡುತ್ತಾರೆ ಎಂಬುದೆಲ್ಲವೂ ವಿದ್ಯಾರ್ಥಿಗಳ ಮನಸ್ಥಿತಿಯನ್ನು ನಿರ್ಧರಿಸುತ್ತದೆ.

ಉಳಿದಂತೆ, ಅಂಕಗಳಿಕೆಯ ಓಟಕ್ಕಷ್ಟೇ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ ಖಾಸಗಿ ಕಾಲೇಜುಗಳೆಂಬ ಕಾರ್ಖಾನೆಗಳಲ್ಲಿ ಭಾಷೆಯ ಬಗ್ಗೆ ತೀವ್ರ ಅನಾದರ ಇದೆ. ಅಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಇತ್ಯಾದಿ ವಿಜ್ಞಾನದ ವಿಷಯಗಳಿಗಷ್ಟೇ ಮನ್ನಣೆ; ಭಾಷೆಯ ಬಗ್ಗೆ ಉಪೇಕ್ಷೆ. ಅವರಿಗೆ ಭಾಷಾ ಶಿಕ್ಷಕರು ‘ಬಿಟ್ಟ ಸ್ಥಳ ತುಂಬುವುದಕ್ಕಷ್ಟೇ’ ಬೇಕು. ಆಡಳಿತ ಮಂಡಳಿಗಳ ಈ ಮನಸ್ಥಿತಿ ಸಹಜವಾಗಿಯೇ ವಿದ್ಯಾರ್ಥಿಗಳ ಮನಸ್ಥಿತಿಯನ್ನೂ ನಿರ್ಧರಿಸುತ್ತದೆ. ತಮಗೆ ‘ಕೋರ್ ಸಬ್ಜೆಕ್ಟ್’ಗಳು ಮಾತ್ರ ಮುಖ್ಯ, ಭಾಷಾ ವಿಷಯಗಳಲ್ಲಿ ತೇರ್ಗಡೆಯಾದರೆ ಸಾಕು ಎಂಬ ಧೋರಣೆಯನ್ನು ಅವರೂ ಬೆಳೆಸಿಕೊಂಡರೆ ಭಾಷಾ ವಿಷಯಗಳ ಅಧ್ಯಾಪಕರ ಗತಿ ದೇವರಿಗೇ ಪ್ರೀತಿ.

ಮಾಧ್ಯಮವಾಗಿ ಕನ್ನಡ

ಕನ್ನಡ ಮಾಧ್ಯಮ ಶಿಕ್ಷಣದ ವಿಷಯವೂ ಮೇಲ್ನೋಟಕ್ಕೆ ಕಾಣುವಷ್ಟು ಸರಳ ಅಲ್ಲ. ಇದಕ್ಕೆ ಕಾನೂನು ಹಾಗೂ ಮನಸ್ಥಿತಿ ಎಂಬ ಎರಡು ಮುಖಗಳಿವೆ. ಕನ್ನಡ ಮಾಧ್ಯಮಕ್ಕೆ ಸಂಬಂಧಿಸಿದ ಕಾನೂನಿನ ಹೋರಾಟಕ್ಕೆ ದಶಕಗಳ ಇತಿಹಾಸ ಇದೆ. 1980ರ ದಶಕದ ಗೋಕಾಕ ವರದಿಯ ಬಳಿಕ ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳು ನಡೆದಿವೆ. ಇವುಗಳ ಫಲವೆಂಬಂತೆ, 4ನೇ ತರಗತಿಯವರೆಗೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡುವುದನ್ನು ಕಡ್ಡಾಯಗೊಳಿಸಿ 1994ರಲ್ಲಿ ರಾಜ್ಯ ಸರ್ಕಾರ ಆದೇಶ ನೀಡಿತು. ಆದರೆ ಇದರ ವಿರುದ್ಧ ಖಾಸಗಿ ಶಾಲೆಗಳು ಸರ್ವೋಚ್ಛ ನ್ಯಾಯಾಲಯದ ಮರೆ ಹೊಕ್ಕವು. ಈ ನಡುವೆ 2006ರಲ್ಲಿ, ಎಲ್ಲ ಕನ್ನಡ ಮಾಧ್ಯಮ ಮತ್ತು ಭಾಷಾ ಅಲ್ಪಸಂಖ್ಯಾತರ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕೆಂದು ರಾಜ್ಯ ಸರ್ಕಾರ ಇನ್ನೊಂದು ಆದೇಶ ಹೊರಡಿಸಿತು. 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿ, ‘ಭಾಷಾ ಮಾಧ್ಯಮದ ಆಯ್ಕೆ ಪೋಷಕರ ವಿವೇಚನೆಗೆ ಬಿಟ್ಟದ್ದು, ಸರ್ಕಾರ ಬಲವಂತ ಮಾಡುವಂತಿಲ್ಲ’ ಎನ್ನುವ ಮೂಲಕ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ ಎಂಬ ಒತ್ತಾಯಕ್ಕೆ ಬೆಂಬಲವಾಗಿ ನಿಂತಿತು.

ಅಲ್ಲಿಗೆ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನಾದರೂ ನೀಡಬೇಕೆಂಬ ಚಿಂತನೆಗೆ ಬಲವಾದ ಹಿನ್ನಡೆ ಉಂಟಾಯಿತು. ವಾಸ್ತವವಾಗಿ ಕನ್ನಡ ಮಾಧ್ಯಮದ ವಿಷಯ ಕೇವಲ ಕಾನೂನಿಗೆ ಸಂಬಂಧಿಸಿದ್ದಲ್ಲ. ಅದು ಮನಸ್ಥಿತಿಗೆ ಸಂಬಂಧಿಸಿದ್ದು. ಯಾವ ಮಾಧ್ಯಮವನ್ನೂ ಬಲವಂತವಾಗಿ ಹೇರುವಂತಿಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿರುವಾಗ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ಅವಕಾಶವೂ ಹೆತ್ತವರಿಗಿದೆ ಎಂದಾಯಿತು. ಆ ಅವಕಾಶವನ್ನು ಉಪಯೋಗ ಮಾಡಿಕೊಳ್ಳುವ ಮನಸ್ಥಿತಿ ಎಷ್ಟು ಮಂದಿಗಿದೆ? 

ಯುನೇಸ್ಕೋ ಒಳಗೊಂಡಂತೆ ಎಲ್ಲ ಸ್ತರದ ಸಂಸ್ಥೆಗಳು, ಶಿಕ್ಷಣ ತಜ್ಞರು ಮಾತೃಭಾಷೆಯ ಶಿಕ್ಷಣವನ್ನು ಪ್ರತಿಪಾದಿಸುತ್ತಲೇ ಬಂದಿದ್ದಾರೆ. “ಮಾನಸಿಕ ಬೆಳವಣಿಗೆ ಹಾಗೂ ಚಿಂತನೆಗಳನ್ನು ಬಲಪಡಿಸುವುದಕ್ಕೆ ತಾಯ್ನುಡಿ ಸಹಕಾರಿ. ಇದು ಪರಿಕಲ್ಪನಾತ್ಮಕ ಯೋಚನೆಯನ್ನು ಬೆಳೆಸುತ್ತದೆ” ಎಂದು ಯುನೇಸ್ಕೋ ಹೇಳಿದೆ. ಪೋಷಕರಿಗೆ ಇರುವ ಮೂರು ಬಗೆಯ ತಪ್ಪು ಕಲ್ಪನೆಗಳ ಬಗ್ಗೆ ಅದು ಹೇಳುತ್ತದೆ:

1. ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಅತ್ಯುತ್ತಮ ರೀತಿ ಎಂದರೆ ಇಂಗ್ಲಿಷ್ ಮಾಧ್ಯಮದಲ್ಲೇ ಕಲಿಸುವುದು.

2. ಇಂಗ್ಲಿಷ್ ಕಲಿಕೆಯನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಆರಂಭಿಸಬೇಕು.

3. ಇಂಗ್ಲಿಷ್ ಕಲಿಕೆಗೆ ಮಾತೃಭಾಷೆ ಅಡ್ಡಿಯಾಗುತ್ತದೆ.

ಈ ತಪ್ಪುಕಲ್ಪನೆಯೇ ನಮ್ಮ ಜನರನ್ನು ಇಂಗ್ಲಿಷ್ ಮಾಧ್ಯಮದ ಕುರಿತು ಅತಿಯಾದ ವ್ಯಾಮೋಹ ಹೊಂದುವಂತೆ ಮಾಡಿದೆ. ಕನ್ನಡ ಮಾಧ್ಯಮದಲ್ಲಿ ಕಲಿತರೆ ಭವಿಷ್ಯ ಇಲ್ಲ, ಉತ್ತಮ ಉದ್ಯೋಗಾವಕಾಶಗಳು ದೊರೆಯುವುದಿಲ್ಲ ಎಂಬ ಯೋಚನೆ ಸಮಾಜದ ಬಹುಪಾಲು ಮಂದಿಯಲ್ಲಿ ಭದ್ರವಾಗಿ ಬೇರೂರಿದೆ. ಆದರೆ ಇದಕ್ಕೆ ಯಾವುದೇ ಆಧಾರ ಇಲ್ಲ ಎಂಬುದನ್ನು ಇನ್ಫೋಸಿಸ್ ಅನ್ನು ಹುಟ್ಟುಹಾಕಿದ ನಾರಾಯಣ ಮೂರ್ತಿ, ಭಾರತರತ್ನ ಸಿ. ಎನ್. ಆರ್. ರಾವ್, ಉದ್ಯಮಿ ಕ್ಯಾ| ಗೋಪಿನಾಥ್ ಮೊದಲಾದ ಗಣ್ಯಾತಿಗಣ್ಯರು ಸಾಬೀತುಪಡಿಸಿದ್ದಾರೆ. ಆದರೆ ಜನರು ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲ. ಇದರ ಬೀಜ ಭಾರತಕ್ಕೆ ಇಂಗ್ಲಿಷ್ ಶಿಕ್ಷಣವನ್ನು ತಂದ ಮೆಕಾಲೆಯ ಚಿಂತನೆಯಲ್ಲೇ ಇದೆ. ಇದನ್ನು ಅಳಿಸಿಹಾಕುವುದೋ ಪರಿವರ್ತನೆ ತರುವುದೋ ಅಷ್ಟು ಸುಲಭದ ಕೆಲಸ ಅಲ್ಲ.

ಇಂಗ್ಲಿಷ್ ಮಾತೃಭಾಷೆಯಲ್ಲದ ಯಾವ ದೇಶದಲ್ಲೂ ಶಿಕ್ಷಣದ ಮಾಧ್ಯಮ ಇಂಗ್ಲಿಷ್ ಅಲ್ಲ ಎಂಬುದನ್ನು ನಾವು ಗಮನಿಸಬೇಕು. ಅಲ್ಲಿ ಇಂಗ್ಲಿಷ್ ಶ್ರೇಷ್ಠ, ಅದರಿಂದಲೇ ಜನರ ಉದ್ಧಾರ ಎಂಬ ಮನಸ್ಥಿತಿಯೇ ಇಲ್ಲ. “ಇಂಗ್ಲಿಷ್ ಮಾಧ್ಯಮದ ಶಿಕ್ಷಣವು ಗ್ರಹಿಕೆಯ ಅಭಿವೃದ್ಧಿಯನ್ನು, ವಿಚಾರದ ಖಚಿತತೆಯನ್ನು, ಅಭಿಪ್ರಾಯಗಳ ಸ್ಪಷ್ಟತೆಯನ್ನು ಕುಂಠಿತಗೊಳಿಸುತ್ತದೆ. ವಿಚಾರಗಳ ಶ್ರೀಮಂತ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮಾತ್ರವಲ್ಲ, ತಮ್ಮನ್ನು ಪರಿಣಾಮಕಾರಿಯಾಗಿ, ಸ್ಪಷ್ಟವಾಗಿ ಮತ್ತು ಸರಳವಾಗಿ ಅಭಿವ್ಯಕ್ತಿಗೊಳಿಸುವುದಕ್ಕೆ ಮಾತೃಭಾಷೆಯೇ ಸಹಕಾರಿ” ಎಂದು ಮಹಾತ್ಮ ಗಾಂಧೀಜಿ ಬಹಳ ಹಿಂದೆಯೇ ಹೇಳಿದ್ದಾರೆ.

ಅನ್ನದ ಭಾಷೆಯಾಗಲಿ ಕನ್ನಡ

ಕನ್ನಡ ಮಾಧ್ಯಮದಲ್ಲಿ ಕಲಿತವರೂ ಒಳ್ಳೆಯ ಉದ್ಯೋಗ ಪಡೆದು, ಸಾಧನೆ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬಹುದು ಎಂಬುದು ಸಿದ್ಧವಾಗುವವರೆಗೆ ಇಂಗ್ಲಿಷ್ ಮೇಲಿನ ವ್ಯಾಮೋಹ ಕರಗದು, ಕನ್ನಡದ ಮೇಲಿನ ಅಭಿಮಾನ ಗಟ್ಟಿಯಾಗದು. ಕನ್ನಡ ಅನ್ನದ ಭಾಷೆಯಾಗುವುದು ಇಂದಿನ ಅನಿವಾರ್ಯತೆ. ಹಾಗೆಂದು ಇದು ಒಂದೆರಡು ದಿನಗಳಲ್ಲಿ ಆಗುವ ಕೆಲಸ ಅಲ್ಲ.

ಪ್ರಾಥಮಿಕ ಶಾಲೆಯಿಂದಲೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸುವ ಕೆಲಸ ಆಗಬೇಕು. ಅದನ್ನು ಅಧ್ಯಾಪಕರು, ಹೆತ್ತವರು ಮನಃಪೂರ್ವಕವಾಗಿ ಮಾಡಬೇಕು. ಮನೆಯಲ್ಲೂ, ಸಂಬಂಧಿಕರ ನಡುವೆಯೂ ಮಕ್ಕಳೊಂದಿಗೆ ಇಂಗ್ಲಿಷಿನಲ್ಲಿ ಮಾತನಾಡುವ, ಮಕ್ಕಳೂ ಹಾಗೆಯೇ ವರ್ತಿಸುವುದು ಪ್ರತಿಷ್ಠೆಯ ವಿಚಾರ ಎಂದು ತಿಳಿಯುವ ಪೋಷಕರಿರುವವರೆಗೆ ಈ ಬದಲಾವಣೆ ಆರಂಭವಾಗುವುದೇ ಕಷ್ಟ. ಕಲಿಕೆಯ ಪ್ರತೀ ಹಂತದಲ್ಲೂ ಕನ್ನಡ ಭಾಷೆಯನ್ನು ಉತ್ತಮಪಡಿಸುವ, ಅದರ ಕುರಿತು ಪ್ರೀತಿಯನ್ನು ಬೆಳೆಸುವ ಜವಾಬ್ದಾರಿಯನ್ನು ಎಲ್ಲ ಹಂತದ ಅಧ್ಯಾಪಕರೂ ವಹಿಸಿಕೊಳ್ಳಬೇಕು. ಕನ್ನಡದ ಬಗ್ಗೆ ಕಾಳಜಿ ಮಾಡಬೇಕಾದವರು, ಮಕ್ಕಳಿಗೆ ಕನ್ನಡ ಕಲಿಸಬೇಕಾದವರು ಕನ್ನಡ ಅಧ್ಯಾಪಕರು ಮಾತ್ರ ಎಂಬ ಧೋರಣೆಯೂ ತೊಲಗಬೇಕು. ಶಾಲಾ ಕಾಲೇಜುಗಳಲ್ಲಿ ಭಾಷಾ ಶಿಕ್ಷಕರಿಗೆ ಉಳಿದ ಶಿಕ್ಷಕರಷ್ಟೇ ಪ್ರಾಧಾನ್ಯತೆ ದೊರೆತಾಗ ವಿದ್ಯಾರ್ಥಿಗಳಲ್ಲೂ ಭಾಷೆ ಪ್ರಮುಖವಾದದ್ದು ಎಂಬ ಮನಸ್ಸು ದೃಢವಾಗುತ್ತದೆ.

ಕನ್ನಡವನ್ನು ಅನ್ನದ ಭಾಷೆಯಾಗಿಸುವಲ್ಲಿ ಸರೋಜಿನಿ ಮಹಿಷಿ ವರದಿಯ ಪರಿಣಾಮಕಾರಿ ಜಾರಿಗೆ ಪ್ರಮುಖ ಪಾತ್ರವಿದೆ. ಸರೋಜಿನಿ ಮಹಿಷಿ ವರದಿಯು ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ಪ್ರಮುಖ ಸಲಹೆಗಳನ್ನು ನೀಡಿದೆ. ಉದಾಹರಣೆಗೆ, ‘ಎ’ ಗುಂಪಿನ ಉದ್ಯೋಗಗಳಲ್ಲಿ ಶೇ. 65ನ್ನೂ ‘ಬಿ’ ಗುಂಪಿನ ಹುದ್ದೆಗಳಲ್ಲಿ ಶೇ. 80ನ್ನೂ ಸ್ಥಳೀಯರಿಗೆ ಮೀಸಲಿಡಬೇಕು, ‘ಸಿ’ ಗುಂಪಿನ ಹುದ್ದೆಗಳಲ್ಲಿ ಶೇ. 100 ನ್ನೂ ಸ್ಥಳೀಯರಿಗೇ ನೀಡಬೇಕು ಎಂಬ ಶಿಫಾರಸು ಸಮರ್ಪಕವಾಗಿ ಜಾರಿಗೆ ಬಂದಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಉದ್ಯೋಗಾವಕಾಶ ಹೆಚ್ಚಾಗಬಹುದು. ಆದರೆ ನಾವು ಕೇವಲ ಉದ್ಯೋಗಾವಕಾಶಗಳಿಗಾಗಿ ಹಕ್ಕುಮಂಡಿಸಿದರೆ ಸಾಲದು, ಆಧುನಿಕ ಕಾಲ ಬಯಸುವ ಜ್ಞಾನವನ್ನೂ ಕೌಶಲವನ್ನೂ ರೂಢಿಸಿಕೊಳ್ಳುವುದು ಅನಿವಾರ್ಯ. ಕನ್ನಡ ಮಾಧ್ಯಮವನ್ನು ಪ್ರತಿಪಾದಿಸುತ್ತಾ ಹೆಚ್ಚು ಉದ್ಯೋಗಾವಕಾಶಗಳನ್ನು ಅಪೇಕ್ಷಿಸುತ್ತಾ ಆಧುನಿಕ ಕಾಲ ಬಯಸುವ ಜ್ಞಾನ-ಕೌಶಲಗಳನ್ನು ನಮ್ಮ ಮಕ್ಕಳು ರೂಢಿಸಿಕೊಳ್ಳದೇ ಹೋದರೆ ನಮ್ಮ ಪ್ರತಿಪಾದನೆಗಳಲ್ಲಿ ಯಾವ ತಿರುಳೂ ಉಳಿಯುವುದಿಲ್ಲ.

ಕನ್ನಡ ಭಾಷೆಯ ಅಳಿವು-ಉಳಿವು ಕೇವಲ ಕಾನೂನಿನ ಕೆಲಸವೂ ಅಲ್ಲ, ಸರ್ಕಾರದ ಕೆಲಸವೂ ಅಲ್ಲ. ಅದು ಎಲ್ಲರೂ ಸೇರಿ ಮಾಡಬೇಕಾದ ಕೆಲಸ. ಧೋರಣೆಯಲ್ಲಿ ಆಗಬೇಕಾದ ಬದಲಾವಣೆಯ ವಿಚಾರ. ಎಲ್ಲವನ್ನೂ ಸರ್ಕಾರ ಮತ್ತು ಕಾನೂನು ಮಾಡುತ್ತದೆಂದು ನಿರೀಕ್ಷಿಸುತ್ತಾ ಕೂರಲಾಗದು. ಕನ್ನಡ ಮಾಧ್ಯಮ ಶಿಕ್ಷಣಕ್ಕೆ ಕಟಿಬದ್ಧವಾಗಿರುವ ಸುಳ್ಯದ ‘ಸ್ನೇಹ’ ಶಿಕ್ಷಣ ಸಂಸ್ಥೆಯಂತಹ ಪ್ರಯತ್ನಗಳು ನಮಗೆ ಸ್ಫೂರ್ತಿಯಾಗಬೇಕು.

- ಸಿಬಂತಿ ಪದ್ಮನಾಭ ಕೆ. ವಿ.