ಗುರುವಾರ, ಮೇ 31, 2012

ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆಗೆ ಕಾಯ್ದೆಯ ಯೋಗ: ಸಾಹಿತಿ-ಕಲಾವಿದರಿಗೆ ಸಿಹಿಸಿಹಿ ಸುದ್ದಿ

ಮಾಧ್ಯಮಶೋಧ-19, ಹೊಸದಿಗಂತ, 31 ಮೇ 2012


ಸಂಸತ್ತಿನ ಉಭಯ ಸದನಗಳಲ್ಲೂ ಅನುಮೋದನೆ ಪಡೆಯುವ ಮೂಲಕ ಬಹುನಿರೀಕ್ಷಿತ ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆ [Copyright (Amendment) Bill ] 2012ಕ್ಕೆ ಅಂತಿಮವಾಗಿ ಕಾಯ್ದೆಯಾಗುವ ಯೋಗ ಬಂದಿದೆ. ಆ ಮೂಲಕ ಸಾಹಿತಿ-ಕಲಾವಿದರ ಅದೃಷ್ಟದ ಬಾಗಿಲೂ ತೆರೆದಂತಾಗಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಬಡಪಾಯಿ ಗೀತರಚನೆಕಾರರು, ಹಾಡುಗಾರರು, ಸಂಗೀತ ಸಂಯೋಜಕರು, ಇತರೆ ಕಲಾವಿದರ ಪ್ರತಿಭೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ದುಡ್ಡಿನ ಚೀಲ ತುಂಬಿಸಿಕೊಳ್ಳುತ್ತಿದ್ದ 'ನಿರ್ಮಾಪಕ’ರ ನಾಗಾಲೋಟಕ್ಕೆ ಈಗ ಸರಿಯಾದ ಬ್ರೇಕ್ ಬಿದ್ದಿದೆ. ಯಾರೋ ರಚಿಸಿದ ಇನ್ಯಾರೋ ಸಂಗೀತ ಸಂಯೋಜಿಸಿದ ಮತ್ಯಾರೋ ಹಾಡಿದ ಗೀತೆಗೆ ತಾವೇ ಹಕ್ಕುದಾರರೆಂದು ನಿರ್ಮಾಪಕರು ಬೀಗುವ ಕಾಲ ಕೊನೆಯಾಗಿದೆ. ಹೊಸ ಕಾನೂನಿನ ಪ್ರಕಾರ ಅವರವರ 'ಸೃಷ್ಟಿ’ಗೆ ಅವರವರೇ ಬಾಧ್ಯಸ್ಥರು, ಹಕ್ಕುದಾರರು. ಜನರ ಅಭಿಮಾನ ಅಷ್ಟೇ ಅಲ್ಲ, ಅವರ ಆರ್ಥಿಕ ಬೆಂಬಲದ ಪಾಲೂ ಆಯಾ ಕಲಾವಿದರಿಗೇ ಇನ್ನು ಮುಂದೆ ಸಲ್ಲುತ್ತದೆ.

ಈಗಾಗಲೇ ಐದು ತಿದ್ದುಪಡಿಗಳನ್ನು ಕಂಡಿರುವ ಭಾರತೀಯ ಕೃತಿಸ್ವಾಮ್ಯ ಕಾಯ್ದೆ, ಇದೀಗ ಆರನೆಯ ತಿದ್ದುಪಡಿಯಲ್ಲಿ ಕೆಲವು ಮಹತ್ವದ ಅಂಶಗಳನ್ನು ಸೇರಿಸಿಕೊಳ್ಳುವ ಮೂಲಕ ಬಹುಜನರ ಮನ್ನಣೆಗೆ ಪಾತ್ರವಾಗಿದೆ. ಪುಸ್ತಕ, ನಾಟಕ, ಸಂಗೀತ, ಸಿನಿಮಾ, ಕಲಾಕೃತಿ ಮತ್ತಿತರ ಸೃಜನಶೀಲ ರಚನೆಗಳ ಮೂಲ ಕರ್ತೃಗಳನ್ನು ಗೌರವಿಸುವ ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ 1957ರಲ್ಲಿ ಜಾರಿಗೆ ಬಂದ ಕೃತಿಸ್ವಾಮ್ಯ ಕಾಯ್ದೆ 1983, 1984, 1992, 1994 ಹಾಗೂ 1999ರಲ್ಲೂ ತಿದ್ದುಪಡಿಗೆ ಒಳಗಾಗಿತ್ತು. 1994ರ ತಿದ್ದುಪಡಿ 1991ರ ರೋಮ್ ಒಪ್ಪಂದದ ಆಶಯಗಳಿಗೆ ಅನುಗುಣವಾಗಿ ಕಲಾವಿದರ ಹಾಗೂ ಪೋನೋಗ್ರಾಮ್ ಮತ್ತು ಪ್ರಸಾರ ಸಂಸ್ಥೆಗಳ ಹಕ್ಕುಗಳನ್ನು ರಕ್ಷಿಸುವ ಅಂಶಗಳಿಂದಾಗಿ ಮಹತ್ವದ್ದೆಂದು ಪರಿಗಣಿತವಾಗಿತ್ತು. ಅಲ್ಲದೆ ಇದು ಕೃತಿಸ್ವಾಮ್ಯ ಸಂಘಗಳನ್ನು (Copyright Societies) ನೋಂದಾಯಿಸುವ ಪರಿಕಲ್ಪನೆಯನ್ನೂ ಜಾರಿಗೆ ತಂದಿತ್ತು. 1999ರ ತಿದ್ದುಪಡಿಯು ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧೀ ಅಂಶಗಳ (TRIPS) ಅವಶ್ಯಕತೆಗಳಿಗನುಗುಣವಾದ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿತ್ತು.

ಈ ಬಾರಿಯ ತಿದ್ದುಪಡಿಗಳ ಹಿಂದೆಯೂ ಭಾರತದ ಕೆಲವು ಅಂತಾರಾಷ್ಟ್ರೀಯ ಬಾಧ್ಯತೆಗಳ ಪಾತ್ರವಿರುವುದು ಗಮನಾರ್ಹ. ಜಾಗತಿಕ ಬೌದ್ಧಿಕ ಆಸ್ತಿ ಸಂಘಟನೆ (WIPO)ಯ ಕೃತಿಸ್ವಾಮ್ಯ ಒಪ್ಪಂದ (WCT) ಮತ್ತು ಡಬ್ಲ್ಯೂಐಪಿಒ ಪರ್‌ಫಾರ್ಮೆನ್ಸಸ್ ಅಂಡ್ ಪೋನೋಗ್ರಾಮ್ಸ್ ಟ್ರೀಟಿ (WPPT) ಮೊದಲಾದವುಗಳ ಆಶಯಗಳನ್ನು ಈಡೇರಿಸುವ ಉದ್ದೇಶ ಈ ತಿದ್ದುಪಡಿಗಳ ಹಿಂದೆ ಇದೆ. ಭಾರತದ ಉದಾರೀಕರಣ ನೀತಿ ಈ ವಿಷಯದಲ್ಲಾದರೂ ಕೆಲವು ಧನಾತ್ಮಕ ಬೆಳವಣಿಗೆಗಳಿಗೆ ಕಾರಣವಾಗಿರುವುದು ತುಸು ನಿರಾಳದ ಸಂಗತಿ.

ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆ 2012 ಈ ಹಿಂದಿನ ಕಾಯ್ದೆಗಿಂತ ಹೇಗೆ ವಿಭಿನ್ನ ಎಂಬುದನ್ನು ಗಮನಿಸೋಣ. ಈಗಾಗಲೇ ಹೇಳಿದಂತೆ, ಹೊಸದಾಗಿ ಜಾರಿಯಾಗಲಿರುವ ಕಾಯ್ದೆ ಕಲಾವಿದರ, ಸಾಹಿತಿಗಳ ಬೌದ್ಧಿಕ ಆಸ್ತಿ ಹಕ್ಕನ್ನು ವಿಶೇಷವಾಗಿ ಗುರುತಿಸಿ ಮನ್ನಿಸುವ ಪ್ರಯತ್ನ ಮಾಡಿದೆ. ಉದಾಹರಣೆಗೆ ಒಂದು ಸಿನಿಮಾವನ್ನು ತೆಗೆದುಕೊಂಡರೆ ಅದರ ಹಾಡುಗಳ ಸಂಪೂರ್ಣ ಕೃತಿಸ್ವಾಮ್ಯ ಸಿನಿಮಾ ನಿರ್ಮಾಪಕನದ್ದಾಗಿತ್ತು; ಅಲ್ಲಿ ಅದನ್ನು ರಚಿಸಿದವನಿಗಾಗಲೀ, ಸಂಗೀತ ಸಂಯೋಜಿಸಿದವನಿಗಾಗಲೀ, ಹಾಡಿದವನಿಗಾಗಲೀ ಯಾವುದೇ ಹಕ್ಕು ಇರಲಿಲ್ಲ. ನಿರ್ಮಾಪಕ ಕೊಟ್ಟದ್ದು, ಅವರು ಪಡೆದುಕೊಂಡದ್ದು - ಅಷ್ಟೇ. ಆದರೆ ಈಗ ಹಾಗಲ್ಲ, ತಮ್ಮ 'ಸೃಷ್ಟಿ’ಯ ಮೇಲೆ ಅವರಿಗೆ ಕಾನೂನುರಿತ್ಯಾ ಅಧಿಕಾರವಿದೆ. ಬಡ ಕಲಾವಿದರನ್ನು ಯಾಮಾರಿಸಿ ನಿರ್ಮಾಪಕರು ಜೇಬು ತುಂಬಿಕೊಳ್ಳುವ ಹಾಗಿಲ್ಲ. ಕಲಾವಿದರಿಗೆ ಎಷ್ಟು ಸಂಭಾವನೆ ಸಲ್ಲಬೇಕೋ ಅಷ್ಟನ್ನು ಕಾನೂನು ಪ್ರಕಾರ ಕೊಡಲೇಬೇಕು. ಒಂದು ಸಿನಿಮಾದಲ್ಲಿ ಬಳಕೆಯಾದ ಹಾಡುಗಳನ್ನಾಗಲೀ ಇನ್ಯಾವುದೇ ಭಾಗವನ್ನಾಗಲೀ ಬೇರೆ ವಾಣಿಜ್ಯಾತ್ಮಕ ಉದ್ದೇಶಗಳಿಗೆ ಬಳಸಿಕೊಳ್ಳುವುದಿದ್ದರೆ, ಆಗ ಅದಕ್ಕೆ ಸಂಬಂಧಪಟ್ಟ ಎಲ್ಲ ಕಲಾವಿದರ ಅನುಮತಿ ಪಡೆಯುವುದು ಹಾಗೂ ಅವರಿಗೆ ಸೂಕ್ತ ಸಂಭಾವನೆ ನೀಡುವುದು ಅನಿವಾರ್ಯ.

ಸಿನಿಮಾ ಮಾಡಿದ್ದಷ್ಟೇ ಅಲ್ಲದೆ, ನಿರ್ಮಾಪಕ ತನಗೆ ಇಷ್ಟ ಬಂದಾಗಲೆಲ್ಲ ಇಷ್ಟ ಬಂದಷ್ಟು ಸಂಖ್ಯೆಯ ಸಿ.ಡಿ., ಕ್ಯಾಸೆಟ್ಟುಗಳನ್ನು ತಯಾರಿಸಿ ಮಾರಾಟ ಮಾಡುವಂತಿಲ್ಲ. ಈ ನಿಯಮ ಸಿನಿಮಾ ಅಷ್ಟೇ ಅಲ್ಲ, ಯಾವುದೇ ಬಗೆಯ ಧ್ವನಿಮುದ್ರಣಕ್ಕೂ ಅನ್ವಯಿಸುತ್ತದೆ. ಧ್ವನಿಮುದ್ರಿತ ಸಿ.ಡಿ. ಅಥವಾ ಕ್ಯಾಸೆಟ್‌ನ ಇನ್ನೊಂದು ಆವೃತ್ತಿ ತರಬೇಕಾದರೆ ಮೂಲ ಧ್ವನಿಮುದ್ರಣದ ಬಳಿಕ ಕನಿಷ್ಠ ಐದು ವರ್ಷ ಕಾಯಲೇಬೇಕು ಮತ್ತು ಅದಕ್ಕೆ ಕಾನೂನಾತ್ಮಕ ಪರವಾನಗಿ ಪಡೆದಿರಬೇಕು; ಕನಿಷ್ಠ 50,000 ಧ್ವನಿಮುದ್ರಿತ ಪ್ರತಿಗಳಿಗೊಮ್ಮೆ ಸಂಬಂಧಿತ ಕಲಾವಿದರಿಗೆ ಸಂಭಾವನೆ ನೀಡಬೇಕು (ಈ ಸಂಖ್ಯೆ ನಿರ್ದಿಷ್ಟ ಭಾಷೆ ಹಾಗೂ ಪ್ರಸರಣೆಯನ್ನು ಅನುಲಕ್ಷಿಸಿ ಇನ್ನೂ ಕಡಿಮೆಯಾಗಬಹುದು). ಅಲ್ಲದೆ ರೇಡಿಯೋ, ದೂರದರ್ಶನದಂತಹ ಪ್ರಸಾರ ಸಂಸ್ಥೆಗಳೂ ಪ್ರತೀಬಾರಿ ಒಂದು ಧ್ವನಿಮುದ್ರಣವನ್ನು ಪ್ರಸಾರ ಮಾಡುವಾಗಲೂ ಸಂಬಂಧಪಟ್ಟ ಕಲಾವಿದರನ್ನು ಉಲ್ಲೇಖಿಸಬೇಕು ಮತ್ತು ಮುಂಚಿತವಾಗಿಯೇ ಸಂಭಾವನೆ ನೀಡಬೇಕು. ಎಷ್ಟು ಸಂಭಾವನೆ ನೀಡಬೇಕು ಎಂಬುದನ್ನು ಕೃತಿಸ್ವಾಮ್ಯ ಮಂಡಳಿ ನಿರ್ಧರಿಸುತ್ತದೆ.

ಪ್ರಸ್ತುತ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ದಿ|
ಬಿಸ್ಮಿಲ್ಲಾ ಖಾನ್‌ರಂತಹ ವಿಶ್ವಪ್ರಸಿದ್ಧ ಕಲಾವಿದರು ತಮ್ಮ ಇಳಿವಯಸ್ಸಿನಲ್ಲಿ ಮನೆ ಬಾಡಿಗೆ, ಆಸ್ಪತ್ರೆ ಖರ್ಚುಗಳನ್ನೂ ಭರಿಸಲಾಗದ ದುಸ್ಥಿತಿಯಲ್ಲಿದ್ದುದನ್ನು ನೆನಪಿಸಿಕೊಂಡಿದ್ದರು ಮತ್ತು ಇದಕ್ಕೆ ಕೃತಿಸ್ವಾಮ್ಯ ಕಾಯ್ದೆಯಲ್ಲಿದ್ದ ಲೋಪದೋಷಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದರು. ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೂಡ ಪಂ|
ರವಿಶಂಕರ್, ಎ. ಆರ್. ರೆಹಮಾನ್ ಮುಂತಾದ ಪ್ರಸಿದ್ಧ ಕಲಾವಿದರೂ ಕೃತಿಸ್ವಾಮ್ಯ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಲು ಒತ್ತಾಯಿಸಿದ್ದನ್ನು ನೆನಪಿಸಿ ಪ್ರಸಕ್ತ ಮಸೂದೆ ಕಾಯ್ದೆರೂಪ ಪಡೆದುಕೊಳ್ಳಲು ಪೂರ್ಣ ಬೆಂಬಲ ಸೂಚಿಸಿದ್ದರು. ಎಲ್ಲ ಪಕ್ಷಗಳ ಅವಿರೋಧ ಒತ್ತಾಸೆ ಪಡೆದ ಹೆಮ್ಮೆ ಈ ಶಾಸನದ್ದು.

ಹೊಸ ಕಾಯ್ದೆಯ ಇನ್ನೊಂದು ಮುಖ್ಯ ವಿಚಾರವೆಂದರೆ, ಒಂದು ಚಲನಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಿಬ್ಬರನ್ನೂ ಪ್ರಥಮ ಕೃತಿಕಾರರನ್ನಾಗಿ ಇದು ಪರಿಗಣಿಸುತ್ತದೆ. ಇಲ್ಲಿ, ನಿರ್ಮಾಪಕನ ಕೃತಿಸ್ವಾಮ್ಯದ ಅವಧಿ ಸಿನಿಮಾವೊಂದರ ತಯಾರಿಯ ನಂತರದ 60 ವರ್ಷವಾದರೆ, ಪ್ರಧಾನ ನಿರ್ದೇಶಕನ ಕೃತಿಸ್ವಾಮ್ಯದ ಅವಧಿ 70 ವರ್ಷ. ನಿರ್ಮಾಪಕನು ನಿರ್ದೇಶಕನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡು ತನ್ನ ಕೃತಿಸ್ವಾಮ್ಯದ ಅವಧಿಯನ್ನೂ ಹತ್ತು ವರ್ಷ ವಿಸ್ತರಿಸಲು ಕಾನೂನು ಅವಕಾಶ ನೀಡಿದೆ.

ಹಿಂದಿನ ಕೃತಿಸ್ವಾಮ್ಯ ಕಾಯ್ದೆಯ ಪ್ರಕಾರ ಸಾಹಿತ್ಯ, ನಾಟಕ, ಕಲೆ, ಸಂಗೀತ ಮತ್ತಿತರ ಕೃತಿಗಳ ಮೇಲಿನ ಹಕ್ಕಿನ ಅವಧಿ ಕೃತಿಕಾರನ ಮರಣದ ಬಳಿಕ 60 ವರ್ಷವೂ, ಛಾಯಾಚಿತ್ರ, ಸಿನಿಮಾ ಹಾಗೂ ಧ್ವನಿಮುದ್ರಣದ ಮೇಲಿನ ಹಕ್ಕಿನ ಅವಧಿ ಆ ಕೃತಿಗಳ ಪ್ರಕಟಣೆಯ/ಬಿಡುಗಡೆಯ ಬಳಿಕ 60 ವರ್ಷವೂ ಆಗಿತ್ತು. ಹೊಸ ತಿದ್ದುಪಡಿಯ ಪ್ರಕಾರ, ಛಾಯಾಚಿತ್ರವನ್ನು ಮೊದಲನೆ ವರ್ಗಕ್ಕೆ ಸೇರಿಸಲಾಗಿದೆ. ಅಂದರೆ ಛಾಯಾಚಿತ್ರಕಾರನ ಮರಣದ 60 ವರ್ಷ ನಂತರವೂ ಆತನ ಉತ್ತರಾಧಿಕಾರಿಗೆ ಛಾಯಾಚಿತ್ರದ ಮೇಲೆ ಸ್ವಾಮ್ಯ ಇರುತ್ತದೆ. ಆದರೆ ಯಾವುದೇ ಬಗೆಯ ಕೃತಿಯ ಸ್ವಾಮ್ಯವನ್ನು ಒಬ್ಬ ಕಲಾವಿದ ಅಥವಾ ಸಾಹಿತಿ ತನ್ನ ಕಾನೂನಾತ್ಮಕ ಉತ್ತರಾಧಿಕಾರಿಗೋ ಇಲ್ಲವೇ ಕೃತಿಸ್ವಾಮ್ಯ ಸಂಘಕ್ಕೋ ಮಾತ್ರ ನೀಡಬಹುದಾಗಿದೆ. ಬೇರೆ ಯಾರಿಗೆ ನೀಡಿದರೂ ಅದು ಅಸಿಂಧುವಾಗುತ್ತದೆ.

ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆ 2012 ಅಂಗವಿಕಲರಿಗೆ ಸಂಬಂಧಪಟ್ಟಂತೆ ಎರಡು ಪ್ರಮುಖ ಅನುಕೂಲಗಳನ್ನು ಮಾಡಿಕೊಟ್ಟಿದೆ. ಒಂದು, ಯಾವುದೇ ಕೃತಿಯನ್ನು ಬ್ರೈಲ್‌ನಂತಹ ವಿಶೇಷ ಮಾದರಿಗಳಲ್ಲಿ ಪ್ರಕಟಿಸುವುದಾದರೆ ಅದಕ್ಕೆ ಕೃತಿಸ್ವಾಮ್ಯದಿಂದ ವಿನಾಯಿತಿ ಇದೆ. ಎರಡು, ಅಂಗವಿಕಲರ ಅಭ್ಯುದಯಕ್ಕಾಗಿ ಸ್ಥಾಪನೆಯಾದ ಸಂಸ್ಥೆಗಳು ಯಾವುದೇ ಕೃತಿಯನ್ನು ಸಾಮಾನ್ಯ ಮಾದರಿಗಳಲ್ಲೂ ಮರುಪ್ರಕಟಿಸಬಹುದಾಗಿದೆ. ಆದರೆ ಇಂತಹ ಸಂಸ್ಥೆಗಳು ಕಡ್ಡಾಯವಾಗಿ ಅಂಗವಿಕಲ ವ್ಯಕ್ತಿಗಳ ಕಾಯ್ದೆ 1995ರ ಅಡಿಯಲ್ಲಿ ಮಾನ್ಯತೆಯನ್ನೂ, ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ತೆರಿಗೆ ವಿನಾಯಿತಿಯನ್ನೂ ಪಡೆದವಾಗಿರಬೇಕು.

ಕೃತಿಸ್ವಾಮ್ಯ ಕಾಯ್ದೆಯಲ್ಲಿ ಹೆಚ್ಚು ಸ್ಪಷ್ಟತೆಯನ್ನು ತರುವುದು, ಅನುಷ್ಠಾನದಲ್ಲಿನ ಕೆಲವು ತೊಡಕುಗಳನ್ನು ಹೋಗಲಾಡಿಸುವುದು ಮತ್ತು ಇಂಟರ್ನೆಟ್-ಡಿಜಿಟಲ್ ಯುಗದ ಸಂದರ್ಭದ ಕೆಲವು ಹೊಸ ಸವಾಲುಗಳನ್ನು ಎದುರಿಸುವುದು ತಿದ್ದುಪಡಿಯ ಉದ್ದೇಶ ಎಂದು ಹೇಳಲಾಗಿತ್ತಾದರೂ, ಅದರಲ್ಲಿನ ಕೆಲವು ಸಂಶಯಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಉದಾಹರಣೆಗೆ, ಕೃತಿಸ್ವಾಮ್ಯ ಅವಧಿಯನ್ನು ನಿರ್ಮಾಪಕರಿಗೆ 60 ವರ್ಷ ಎಂದೂ, ಪ್ರಧಾನ ನಿರ್ದೇಶಕರಿಗೆ 70 ವರ್ಷ ಎಂದೂ ನಿಗದಿಪಡಿಸಲಾಗಿದೆ. ಈ ವ್ಯತ್ಯಾಸದ ಹಿಂದಿನ ತಾರ್ಕಿಕತೆಗೆ ಯಾವುದೇ ಸಮರ್ಥನೆ ಇಲ್ಲ. ಅಲ್ಲದೆ 'ಪ್ರಧಾನ ನಿರ್ದೇಶಕ’ ಎಂಬ ಪದಕ್ಕೆ ಎಲ್ಲೂ ವ್ಯಾಖ್ಯಾನ ಇಲ್ಲ. ಎಲ್ಲ ಕಾನೂನುಗಳ ಬಗ್ಗೆ ಬರಬಹುದಾದ ಕೆಲವು ಆಕ್ಷೇಪಗಳು ಇದರ ಬಗೆಗೂ ಇವೆ, ಅದರಲ್ಲಿ ಅತಿಶಯವೇನೂ ಇಲ್ಲ. ಆದರೆ ಕಲಾವಿದರಿಗೆ ಸ್ವತಂತ್ರ ಹಕ್ಕುಸ್ವಾಮ್ಯವನ್ನು ಕಲ್ಪಿಸುವುದರ ಮೂಲಕ ಕಾಯ್ದೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದಿದೆ. ಈ ಕಾರಣಕ್ಕಾಗಿಯಾದರೂ ಅದಕ್ಕೆ ವಿಶೇಷ ಪ್ರಶಂಸೆ ಸಲ್ಲಬೇಕು.

ಕಾಮೆಂಟ್‌ಗಳಿಲ್ಲ: