ಗುರುವಾರ, ಮೇ 3, 2012

ನ್ಯಾಯಾಲಯ ವರದಿಗಾರಿಕೆ: ಮಾರ್ಗಸೂಚಿ ಬೇಕೆ?

ಮಾಧ್ಯಮಶೋಧ-17, ಹೊಸದಿಗಂತ, 03-05-2012

ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಅಂಗಳದಲ್ಲಿ ಆರಂಭವಾಗಿರುವ ಚರ್ಚೆ ಸಾರ್ವಜನಿಕವಾಗಿಯೂ ಕಾವು ಪಡೆದುಕೊಂಡಿದೆ. ಪ್ರಸ್ತಾಪದ ಹಿನ್ನೆಲೆಯಲ್ಲಿ ನ್ಯಾಯಿಕ ತಜ್ಞರು ಹಾಗೂ ಹಿರಿಯ ಪತ್ರಕರ್ತರು ವ್ಯಕ್ತಪಡಿಸುತ್ತಿರುವ ಪರ ಹಾಗೂ ವಿರೋಧ ಅಭಿಪ್ರಾಯಗಳು ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚಿಂತನೆಗೆ ಕಾರಣವಾಗಿದ್ದು, ಒಟ್ಟು ಸನ್ನಿವೇಶ ಒಂದು ಕುತೂಹಲಕಾರಿ ಘಟ್ಟ ತಲುಪಿದೆ.

ಮಾಧ್ಯಮಗಳಿಗೆ ನಿಯಂತ್ರಣ ಬೇಕು/ಬೇಡ ಎನ್ನುವ ಚರ್ಚೆ ಹೊಸದೇನೂ ಅಲ್ಲ. ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ, ಅವುಗಳನ್ನು ನಿಯಂತ್ರಿಸುವುದು ಅವಶ್ಯಕ ಎಂಬ ವಾದ ಒಂದು ಕಡೆ; ಮಾಧ್ಯಮಗಳು ಮಿತಿಮೀರಿ ಹೋಗದಿರಲು ಸ್ವನಿಯಂತ್ರಣವೇ ಸರಿಯಾದ ಉಪಾಯ, ಅದಕ್ಕೆ ಮೂರನೆಯ ಸಂಸ್ಥೆ ಅಥವಾ ವ್ಯಕ್ತಿ ಮೂಗುದಾರ ತೊಡಿಸುವ ಅಗತ್ಯ ಇಲ್ಲ ಎಂಬ ವಾದ ಇನ್ನೊಂದೆಡೆ; ಸ್ವನಿಯಂತ್ರಣವೆಂಬುದು ಶುದ್ಧ ಬೊಗಳೆ, ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮಾಧ್ಯಮಗಳೇ ಸರ್ಕಾರದ ಎಲ್ಲ ಅಂಗಗಳನ್ನೂ ನಿಯಂತ್ರಿಸುವ ಸನ್ನಿವೇಶ ಸೃಷ್ಟಿಯಾಗಿ ಪ್ರಜಾಪ್ರಭುತ್ವವೆಂಬುದು ಕೇವಲ ಮರೀಚೆಕೆಯಾದೀತು ಎಂಬ ಆತಂಕ ಮತ್ತೊಂದೆಡೆ. ಈ ಎಲ್ಲ ಚರ್ಚೆಗಳು ಸಾಕಷ್ಟು ಹಿಂದಿನಿಂದಲೂ ಜೀವಂತವಾಗಿಯೇ ಇವೆ.

ಆದರೆ ಸ್ವತಃ ಸರ್ವೋಚ್ಛ ನ್ಯಾಯಾಲಯವೇ ಈಗ ರಂಗಪ್ರವೇಶ ಮಾಡಿರುವುದರಿಂದ ಈ ಚರ್ಚೆಗೆ ಹೊಸದೊಂದು ತಿರುವು ಸಿಕ್ಕಿರುವುದು ಸ್ಪಷ್ಟವಾಗಿದೆ. ಮಾಧ್ಯಮಗಳನ್ನು ಒಟ್ಟಾರೆಯಾಗಿ ನಿಯಂತ್ರಿಸುವ ಬಗೆಗೇನೂ ನ್ಯಾಯಾಲಯ ಮಾತಾಡುತ್ತಿಲ್ಲವಾದರೂ, ನಿರ್ದಿಷ್ಟವಾಗಿ ನ್ಯಾಯಾಲಯ ವರದಿಗಾರಿಕೆಯ ವಿಷಯದಲ್ಲಿ ಮಾಧ್ಯಮಗಳಿಗೆ ತಮ್ಮ ಮಿತಿಯನ್ನು ತೋರಿಸಿಕೊಡುವ ಇಚ್ಛೆಯನ್ನು ಅದು ವ್ಯಕ್ತಪಡಿಸಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ| ಎಸ್. ಎಚ್. ಕಪಾಡಿಯಾ ನೇತೃತ್ವದ ಐದು ಮಂದಿ ಸದಸ್ಯರ ಸಂವಿಧಾನ ಪೀಠ ನ್ಯಾಯಾಲಯ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಪ್ರಸ್ತಾಪವನ್ನು ಮುಂದಿಟ್ಟು ಮಾಧ್ಯಮ ಸಂಸ್ಥೆಗಳೂ ಸೇರಿದಂತೆ ಸಮಾಜದ ವಿವಿಧ ವಲಯಗಳ ಅಭಿಪ್ರಾಯಗಳನ್ನು ಆಲಿಸುತ್ತಿದ್ದು, ಇದರ ತಾತ್ವಿಕ ಅಂತ್ಯ ಹೇಗಿರಬಹುದು ಎಂಬುದು ಮಾಧ್ಯಮ ವೀಕ್ಷಕರಿಗೆ ಒಂದು ಕೌತುಕದ ವಿಚಾರವೇ ಆಗಿದೆ.

ಸಂವಿಧಾನದ ೨೧ನೇ ಪರಿಚ್ಛೇದ (ಬದುಕು ಮತ್ತು ಸ್ವಾತಂತ್ರ್ಯದ ಹಕ್ಕು) ಹಾಗೂ ೧೯(೧)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ)ದ ನಡುವೆ ಒಂದು ಸಮತೋಲನವನ್ನು ತರುವುದೇ ತಾವು ಆರಂಭಿಸಿರುವ ಹೊಸ ಚರ್ಚೆಯ ಉದ್ದೇಶ ಎಂದು ಸಂವಿಧಾನ ಪೀಠ ಮಾರ್ಮಿಕವಾಗಿ ಹೇಳಿದೆ. 'ಮಾಧ್ಯಮಗಳ ಸಂಪಾದಕೀಯ ವಸ್ತುವಿಚಾರ(editorial content)ಗಳನ್ನು ನಿಯಂತ್ರಿಸುವಲ್ಲಿ ನಮಗೆ ಆಸಕ್ತಿ ಇಲ್ಲ. ತಪ್ಪು ಮಾಡುವ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಅಂತಹ ತಪ್ಪುಗಳಾಗದಂತೆ ತಡೆಗಟ್ಟುವುದಷ್ಟೇ ನಮ್ಮ ಉದ್ದೇಶ' ಎಂದು ಆರಂಭದಲ್ಲೇ ಮುಖ್ಯ ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.
 
ನ್ಯಾಯಾಲಯ ಕಲಾಪಗಳನ್ನು ತಪ್ಪಾಗಿ ವರದಿಮಾಡುವ ಮೂಲಕ ಜನಸಾಮಾನ್ಯರನ್ನು ಹಾದಿತಪ್ಪಿಸುವ ಕೆಲಸವನ್ನು ಅನೇಕ ಬಾರಿ ಮಾಧ್ಯಮಗಳು ಮಾಡುತ್ತವೆ ಎಂಬುದು ನ್ಯಾಯಾಲಯದ ಬೇಸರ. ಅಲ್ಲದೆ, ಒಬ್ಬ ಆಪಾದಿತನ ವಿಚಾರಣೆ ನಡೆದು ನ್ಯಾಯಾಲಯ ಇನ್ನೂ ತೀರ್ಪು ನೀಡುವ ಮುನ್ನವೇ ಆತನ ಬಗ್ಗೆ ಪೂರ್ವಾಗ್ರಹಪೀಡಿತ ವರದಿಗಳನ್ನು ಪ್ರಕಟಿಸುವುದು, ಆತನೇ ಅಪರಾಧಿಯೋ ಎಂಬ ಹಾಗೆ ಬಿಂಬಿಸುತ್ತಾ ಹೋಗುವುದು ನ್ಯಾಯಿಕ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಒಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ ಅದರ ಬಗ್ಗೆ ಯಾವ ರೀತಿ ವರದಿ ಮಾಡಬೇಕು, ಅಲ್ಲಿನ ಕಲಾಪಗಳನ್ನು ವರದಿಮಾಡುವಾಗ ತಪ್ಪುಸಂದೇಶ ರವಾನೆಯಾಗದಂತೆ ಯಾವ ಎಚ್ಚರ ವಹಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ತಾನು ಮಾರ್ಗಸೂಚಿ ರೂಪಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

'ಮಾಧ್ಯಮಗಳು ತಮ್ಮ ಮಿತಿಯನ್ನು ಅರಿಯಬೇಕು ಎಂಬುದು ನಮ್ಮ ಉದ್ದೇಶ. ಪತ್ರಕರ್ತರು ಜೈಲಿಗೆ ಹೋಗಬೇಕು ಎಂಬುದು ನಮ್ಮ ಇಚ್ಛೆ ಅಲ್ಲ' ಎಂದು ನ್ಯಾ| ಕಪಾಡಿಯಾ ಸ್ಪಷ್ಟೀಕರಿಸಿದ್ದಾರೆ. ಏತನ್ಮಧ್ಯೆ ಮಾಧ್ಯಮ ಸಂಸ್ಥೆಗಳು, ಹಿರಿಯ ಪತ್ರಕರ್ತರು ಈ ಪ್ರಸ್ತಾಪಕ್ಕೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿರುವುದೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

'ನೀವು ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಬೇಡಿ, ಅದರ ಬದಲು ಸಂಪಾದಕರುಗಳನ್ನು ಕರೆಸಿ ಚರ್ಚೆ ಮಾಡಿ' ಎಂದು ಭಾರತೀಯ ಸಂಪಾದಕರ ಒಕ್ಕೂಟ ಒತ್ತಾಯಿಸಿದೆ. 'ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡುವುದು ಸಂವಿಧಾನದತ್ತವಾಗಿರುವ ಮುಕ್ತ ಅಭಿವ್ಯಕ್ತಿ ಪರಿಕಲ್ಪನೆಗೆ ಮಾರಕವಾದದ್ದು... ೧೯(೧)(ಎ)ಯನ್ನು ಒಳಗೊಂಡಂತೆ ಸಂವಿಧಾನದ ೧೯ನೇ ಪರಿಚ್ಛೇದದಲ್ಲಿ ದತ್ತವಾಗಿರುವ ಎಲ್ಲ ಮೂಲಭೂತ ಹಕ್ಕುಗಳನ್ನು ಸಕಾರಣ ನಿರ್ಬಂಧಗಳ (reasonable restrictions) ಮೂಲಕ ಮಾತ್ರ ಕಾನೂನಿನ ಚೌಕಟ್ಟಿನಲ್ಲಿ ನಿರ್ಬಂಧಿಸಬಹುದು. ೨೧ನೇ ಪರಿಚ್ಛೇದವನ್ನು ಮುಂದಿಟ್ಟುಕೊಂಡು ೧೯ನೇ ಪರಿಚ್ಛೇದವನ್ನು ತಳ್ಳಿಹಾಕಲಾಗದು...' ಎಂದು ಸಂಪಾದಕರ ಒಕ್ಕೂಟದ ಪರವಾಗಿ ಹಿರಿಯ ನ್ಯಾಯವಾದಿ ರಾಜೀವ್ ಧವನ್ ವಾದಿಸಿದ್ದಾರೆ.

'ನ್ಯಾಯಾಲಯ ಆರಂಭಿಸಿರುವ ಸದರಿ ಪ್ರಕ್ರಿಯೆಯೇ ಕೊನೆಗೆ ನಿಷ್ಪ್ರಯೋಜಕವೆನಿಸುವ ಸಾಧ್ಯತೆಯಿದೆ. ಇದರಿಂದ ಯಾವ ಉದ್ದೇಶವೂ ಸಾಧನೆಯಾಗದು' ಎಂದು ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಕೂಡ ವಾದಿಸಿದ್ದಾರೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ| ಎ. ಎನ್. ರೇ ಇಂತಹ ಪ್ರಕರಣವೊಂದರಲ್ಲಿ ನೇಮಿಸಲಾಗಿದ್ದ ೧೩ ಸದಸ್ಯರ ಪೀಠವನ್ನು ಬರ್ಕಾಸ್ತುಗೊಳಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

'ದಿ ಹಿಂದೂ' ಪತ್ರಿಕೆಯ ಪರವಾಗಿ ವಾದಿಸಿರುವ ಹಿರಿಯ ವಕೀಲ ಅನಿಲ್ ದಿವಾನ್ ಅವರು 'ಇತರ ಯಾವುದೇ ಹಕ್ಕುಗಳಿಗೋಸ್ಕರ ಪತ್ರಿಕಾ ಸ್ವಾತಂತ್ರ್ಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 'ಪರಿಚ್ಛೇದ ೧೯(೧)(ಎ)ಯಲ್ಲಿ ದತ್ತವಾಗಿರುವ ಹಕ್ಕು ಅಬಾಧಿತವಾದುದಲ್ಲವಾದರೂ, ಅದನ್ನು ಪರಿಚ್ಛೇದ ೧೯(೨)ರಲ್ಲಿ ಹೇಳಲಾಗಿರುವ ಸಕಾರಣ ನಿರ್ಬಂಧಗಳ ಮೂಲಕ ಮಾತ್ರ ಮಿತಗೊಳಿಸಬಹುದು' ಎಂಬುದು ಅವರ ವಾದವಾದರೆ, ಆ ಪತ್ರಿಕೆಯ ಸಂಪಾದಕ ಸಿದ್ಧಾರ್ಥ ವರದರಾಜನ್ ತಮ್ಮ ಲೇಖನವೊಂದರಲ್ಲಿ, 'ನ್ಯಾಯಾಂಗದ ತುತ್ತತುದಿಯಲ್ಲಿರುವ ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಿಬಿಟ್ಟರೆ ಅದು ಸರ್ಕಾರದ ಇತರ ಅಂಗಗಳಿಗೂ ಪ್ರೇರಣೆಯಾಗುವ ಸಾಧ್ಯತೆಯಿದೆ; ಸಂಸತ್ತು, ರಾಜ್ಯ ವಿಧಾನಸಭೆಗಳು, ಸಚಿವಾಲಯಗಳು ಹೀಗೆ ಎಲ್ಲರೂ ಪತ್ರಕರ್ತರಿಗೆ ನಿಯಮಗಳನ್ನು ರೂಪಿಸುತ್ತಾ ಹೋಗುವುದಕ್ಕೆ ಇದು ಕಾರಣವಾಗಬಹುದು' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟಿನ ಅಧಿಕೃತ ನ್ಯಾಯಾಲಯ ವರದಿಗಾರರು ಕಡ್ಡಾಯವಾಗಿ ಕಾನೂನು ಪದವೀಧರರಾಗಿರಬೇಕು ಮತ್ತು ಇಂತಿಷ್ಟು ವರ್ಷಗಳ ಕಾಲ ಅಧೀನ ನ್ಯಾಯಾಲಯಗಳ ಕಲಾಪಗಳನ್ನು ವರದಿ ಮಾಡಿದ ಅನುಭವ ಹೊಂದಿರಬೇಕು ಎಂಬ ನಿಯಮಗಳನ್ನು ನ್ಯಾಯಾಲಯ ರೂಪಿಸುವ ಸಾಧ್ಯತೆಯಿರುವ ಬಗ್ಗೆ ತಮ್ಮ ಈಚಿನ ಬರೆಹವೊಂದರಲ್ಲಿ ಪ್ರಸ್ತಾಪಿಸಿರುವ ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಡಾ. ಎಂ. ವಿ. ಕಾಮತ್, 'ವರದಿಗಾರಿಕೆ ಒಂದು ಕಲೆ. ನ್ಯಾಯಾಧೀಶರು ನೀಡಿರುವ ತೀರ್ಪನ್ನು ಯಥಾವತ್ತು ಉದ್ಧರಿಸುವುದಷ್ಟೇ ವರದಿಗಾರಿಕೆಯಲ್ಲ. ಒಬ್ಬ ಒಳ್ಳೆಯ ಜ್ಞಾನವಂತ ನ್ಯಾಯವಾದಿ ಒಳ್ಳೆಯ ಪತ್ರಿಕಾ ವರದಿಗಾರ ಆಗಿರಬೇಕೆಂದು ನಿರೀಕ್ಷಿಸಲಾಗದು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸುಪ್ರೀಂ ಕೋರ್ಟು ನ್ಯಾಯಾಲಯ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಜಾರಿಗೆ ತರಲು ಪ್ರಯತ್ನಿಸಿದಲ್ಲಿ ತಮ್ಮ ನೇತೃತ್ವದಲ್ಲೇ ಅದರ ವಿರುದ್ಧ ಆಂದೋಲನ ರೂಪಿಸಬೇಕಾದೀತು ಎಂದಿದ್ದಾರೆ. 'ಮಾಧ್ಯಮ ಏನಾದರೂ ಕೆಟ್ಟದು ಮಾಡುತ್ತದೆ ಎಂದುಕೊಳ್ಳುತ್ತೇವಲ್ಲ, ಅದಕ್ಕಿಂತ ಹೆಚ್ಚು ಅನಾಹುತ ಮಾಡುವ ಶಕ್ತಿ ನ್ಯಾಯಂಗಕ್ಕಿದೆ... ಒಂದು ವರದಿಯಲ್ಲಿನ ಸಣ್ಣಪುಟ್ಟ ತಪ್ಪುಗಳಿಗಿಂತ ಒಂದು ತಪ್ಪು ತೀರ್ಪು ಅತಿಹೆಚ್ಚು ಅನಾಹುತ ಮಾಡಬಲ್ಲದು...' ಎಂದು ಅವರು ತಮ್ಮ ಅಂಕಣದಲ್ಲೂ ಬರೆದಿದ್ದಾರೆ.

ಇನ್ನೊಂದೆಡೆ, ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ನ್ಯಾ| ಮಾರ್ಕಂಡೇಯ ಕಟ್ಜು ಮಾರ್ಗಸೂಚಿಗಳನ್ನು ರೂಪಿಸುವ ಸುಪ್ರೀಂ ಕೋರ್ಟಿನ ಪ್ರಸ್ತಾಪಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ. ಪತ್ರಿಕಾ ಮಂಡಳಿಯ ಚುಕ್ಕಾಣಿ ಹಿಡಿದಂದಿನಿಂದಲೂ ಈ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ನ್ಯಾ| ಕಟ್ಜು, 'ರೆಗ್ಯುಲೇಶನ್' ಬೇರೆ, 'ಕಂಟ್ರೋಲ್' ಬೇರೆ. ನಾನು ಮಾಧ್ಯಮಗಳನ್ನು 'ಕಂಟ್ರೋಲ್' ಮಾಡಬೇಕೆಂದು ಹೇಳುತ್ತಿಲ್ಲ, 'ರೆಗ್ಯುಲೇಟ್' ಮಾಡಬೇಕೆಂದು ಹೇಳುತ್ತಿದ್ದೇನೆ ಎಂದು ತಮ್ಮ ಲೇಖನವೊಂದರಲ್ಲಿ ಹೇಳಿದ್ದಾರೆ. ಸ್ವನಿಯಂತ್ರಣದ ಮಂತ್ರ ಹೇಳುವ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್ ಆಗಲೀ, ಬ್ರಾಡ್‌ಕಾಸ್ಟ್ ಎಡಿಟರ್ಸ್ ಅಸೋಸಿಯೇಶನ್ ಆಗಲೀ ತಮ್ಮ ಚಾನೆಲ್‌ಗಳನ್ನು ಎಷ್ಟರಮಟ್ಟಿಗೆ ನಿಯಂತ್ರಿಸಲು ಯಶಸ್ವಿಯಾಗಿದ್ದಾರೆ ಎಂಬುದು ಅವರ ಪ್ರಶ್ನೆ.

ಒಟ್ಟಿನಲ್ಲಿ, ಸರ್ವೋಚ್ಛ ನ್ಯಾಯಾಲಯದ ಮೂಲಕ ಆರಂಭವಾಗಿರುವ ಈ ಚರ್ಚೆ ಎಂತಹ ತಾತ್ವಿಕ ಅಂತ್ಯ ತಲುಪೀತು ಎಂದು ಹೇಳುವುದು ಕಷ್ಟ. ಆದರೆ ನ್ಯಾಯಾಲಯ ವರದಿಗಾರಿಕೆಯ ರೀತಿನೀತಿಗಳ ಬಗ್ಗೆ ಚರ್ಚೆ ನಡೆಸುವ ನೆಪದಲ್ಲಿ ಇಡೀ ಮಾಧ್ಯಮ ರಂಗದ ಬಗ್ಗೆ ಒಂದು ಉನ್ನತ ಮಟ್ಟದ ಆರೋಗ್ಯಕರ ಚರ್ಚೆ ನಡೆಯುತ್ತಿರುವುದಂತೂ ಸ್ವಾಗತಾರ್ಹ ವಿಚಾರವೇ. ಅದಕ್ಕಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಧನ್ಯವಾದ ಎನ್ನೋಣ.

ಕಾಮೆಂಟ್‌ಗಳಿಲ್ಲ: