ಬುಧವಾರ, ಮೇ 16, 2012

ಸಂವೇದನಾಶೀಲ ಮನಸ್ಸೇ ನಗರಗಳ ಬರಕ್ಕೆ ಪರಿಹಾರ


ಥ್ಯಾಂಕ್ಸ್: ವಿಜಯವಾಣಿ, 16 ಮೇ 2012


ಪಕ್ಕದ ಬೀದಿಯ ಮನೆಯೊಂದರ ಟೆರೇಸ್ ಮೇಲಿನ ನೀರಿನ ಟ್ಯಾಂಕ್ ಭರ್ತಿಯಾಗಿ ಅರ್ಧ ಗಂಟೆಯೇ ಕಳೆದಿದೆ. ನೀರು ದಪದಪನೆ ಕೆಳಗಿಳಿದು ಚರಂಡಿಯಲ್ಲಿ ಸುಖಾಸುಮ್ಮನೆ ಹರಿದುಹೋಗುತ್ತಿದೆ. ಅರೆ, ಪಂಪ್ ಆಫ್ ಮಾಡದೆ ಮನೆಯವರು ಏನು ಮಾಡುತ್ತಿದ್ದಾರೆ? ಅವರು ಪ್ರವಾಸ ಹೋಗಿದ್ದಾರೆ. ಟ್ಯಾಂಕ್‌ನಲ್ಲಿ ನೀರಿಲ್ಲವೆಂದು ಅವರು ಹೊರಡೋ ಅರ್ಧ ಗಂಟೆ ಮುಂಚೆ ಪಂಪ್ ಆನ್ ಮಾಡಿದ್ದರು. ಈ ನಡುವೆ ಕರೆಂಟ್ ಹೋಗಿತ್ತು; ಅವರಿಗೆ ಸ್ವಿಚ್ ಆಫ್ ಮಾಡಲು ಮರೆತುಹೋಗಿದೆ. ಅವರು ಹೊರಟು ಎಷ್ಟೋ ಹೊತ್ತಿನ ನಂತರ ಕರೆಂಟ್ ಬಂದಿದೆ. ಪಂಪ್ ಆನ್ ಆಗಿದೆ...

ಅರೆ ಈಗೇನು ಮಾಡೋಣ? ಪೇಟೆ ಬೇರೆ; ಅಕ್ಕಪಕ್ಕದ ಮನೆಗಳವರಿಗೆ ಈ ಮನೆಯವರ ಮೊಬೈಲ್ ಸಂಖ್ಯೆಯೂ ಗೊತ್ತಿಲ್ಲ. ಅದೃಷ್ಟವಶಾತ್, ಯಾರೋ ಒಬ್ಬರಲ್ಲಿ ಆ ಮನೆಯ ಮಾಲೀಕನ ಫೋನ್ ನಂಬರಿತ್ತು. ಅವರು ಮಾಲೀಕನಿಗೆ ಕರೆ ಮಾಡುತ್ತಾರೆ; ಮಾಲೀಕ ಬಾಡಿಗೆದಾರನಿಗೆ ಕರೆ ಮಾಡುತ್ತಾರೆ. ಬಾಡಿಗೆದಾರ ಮನೆ ಉಸ್ತುವಾರಿಗಾಗಿ ಕೆಲಸದವಳೊಬ್ಬಳನ್ನು ಗೊತ್ತುಮಾಡಿ ಅವಳಿಗೊಂದು ಕೀ ಕೊಟ್ಟಿದ್ದು ನೆನಪಾಗಿ ಅವಳಿಗೆ ಫೋನಾಯಿಸುತ್ತಾನೆ. ಮನೆಗೆಲಸದಾಕೆ ಗಡಬಡಿಸಿ ತನ್ನ ಮನೆಯಿಂದ ಓಡಿಬಂದು ಬೀಗ ತೆರೆದು ಮೋಟಾರು ಬಂದ್ ಮಾಡುವಷ್ಟರಲ್ಲಿ ಟ್ಯಾಂಕ್ ತುಂಬಿಹರಿಯಲು ಶುರುವಾಗಿ ಒಂದೂವರೆ ಗಂಟೆಯಾಗಿದೆ...

ರಾಜ್ಯದ ಬರಪೀಡಿತ ಪ್ರದೇಶಗಳಲ್ಲೊಂದು ಎಂದು ಗುರುತಿಸಲ್ಪಟ್ಟ ತುಮಕೂರಿನ ಬಡಾವಣೆಯೊಂದರಲ್ಲಿ ನಡೆದ ಘಟನೆ ಇದು. ಬಹುಶಃ ಇಂಥ ಉದಾಹರಣೆಗಳನ್ನು ಬರೀ ತುಮಕೂರಿಗೇ ಸೀಮಿತಗೊಳಿಸಬೇಕಾಗಿಲ್ಲ. ಬಹುತೇಕ ನಗರ ಪ್ರದೇಶಗಳ ಮಂದಿ ನೀರಿನ ಬಗ್ಗೆ ಹೊಂದಿರುವ ದಿವ್ಯನಿರ್ಲಕ್ಷ್ಯ ಇದು. ಕೈತುಂಬ ಹಣವಿದ್ದರೆ ಏನನ್ನೂ ಕೊಂಡುಕೊಳ್ಳಬಹುದು, ಯಾವ ಕಷ್ಟವನ್ನೂ ಎದುರಿಸಬಹುದು ಎಂಬ ದುರಹಂಕಾರದಿಂದಲೇ ಇವರ ಸಂವೇದನೆಗೂ ಬರ ಬಡಿದಿದೆ. ಬರಗಾಲ ಹಾಗಿರಲಿ, ಊರಿಗೆ ಊರೇ ಹೊತ್ತಿಕೊಂಡು ಉರಿಯುತ್ತಿದ್ದರೂ ಅದಕ್ಕೂ ತಮಗೂ ಏನೇನೂ ಸಂಬಂಧವಿಲ್ಲ ಎಂದು ಮುಸುಕೆಳೆದುಕೊಂಡು ಮಲಗುವ ಜನರೇ ಸಮಾಜದಲ್ಲಿ ತುಂಬಿ ಹೋಗುತ್ತಿದ್ದಾರೆ.

ರಾಜ್ಯ ಹಿಂದೆದೂ ಕಾಣದ ಬರದ ಬೇಗೆ ಅನುಭವಿಸಿತು. ಈಚೆಗೆ ಒಂದೆರಡು ಒಳ್ಳೆಯ ಮಳೆಯಾಗಿದ್ದರೂ ಅದು ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತಷ್ಟೇ ಆಗಿದೆ. ಮುನಿಸಿಪಾಲಿಟಿಯ ನಲ್ಲಿ ನೀರಿನ ಕೃಪೆಯಲ್ಲೇ ಜೀವದ ದಾಹ ಇಂಗಿಸಿಕೊಳ್ಳಬೇಕಾದ ನಗರ ಪ್ರದೇಶಗಳ ಮಂದಿಯಲ್ಲಂತೂ ಈ ವರ್ಷದ ಕಥೆ ಹೇಗೋ ಮುಗಿಯುತ್ತಿದೆ, ಮುಂದಿನ ವರ್ಷ ಇನ್ನೂ ಭೀಕರವಾಗಿರದೇ ಎಂಬ ಭಯ ಅಡರಿಕೊಂಡಿದೆ. ಆದರೂ ನೀರಿನ ಅಮೂಲ್ಯತೆ ಬಗ್ಗೆ, ಅದರ ಕೊರತೆಯಲ್ಲಿ ತಲೆದೋರಬಹುದಾದ ಭವಿಷ್ಯದ ಕರಾಳತೆ ಬಗ್ಗೆ ಅವರಿನ್ನೂ ಏಕೆ ಸಂವೇದನಾಶೀಲರಾಗುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಸಂಪಿನಲ್ಲಿ ನೀರಿಲ್ಲವೇ? ಟ್ಯಾಂಕರ್ ನೀರು ತರಿಸೋಣ ಎನ್ನುತ್ತಾರವರು. ಈ ಟ್ಯಾಂಕರುಗಳ ಅವಸ್ಥೆ ಕೇಳುವುದೇ ಬೇಡ. ಅವು ಎಲ್ಲಿಂದ ಹೊರಟವೋ ಅಲ್ಲಿಂದ ನೀರು ತರಹೇಳಿದ ಮನೆಯವರೆಗೆ ನೀರಿನ ಅಭಿಷೇಕ ಮಾಡುತ್ತಲೇ ಬರುತ್ತವೆ. ನಗರದ ಬೀದಿಗಳಲ್ಲಿ ಓಡಾಡುವ ನೀರಿನ ಟ್ಯಾಂಕರ್‌ಗಳನ್ನು ಗಮನಿಸಿ ಬೇಕಾದರೆ, ಹತ್ತರಲ್ಲೊಂದಾದರೂ ಲೀಕೇಜ್ ಇಲ್ಲದೆ ಚಲಿಸುತ್ತಿದ್ದರೆ ನಮ್ಮ ಪುಣ್ಯ. ಮನೆಗೆ ತಲುಪಿದಾಗ ಅರ್ಧ ಟ್ಯಾಂಕೋ ಕಾಲು ಟ್ಯಾಂಕೋ ನೀರಿದ್ದರೂ ಅವರಿಗೆ ಚಿಂತೆಯಿಲ್ಲ; ನೀರು ಹಾಕಿಸಿಕೊಂಡವನು ಕೇಳಿದಷ್ಟು ಹಣ ಎಣಿಸುತ್ತಾನೆ. ಬೀದಿಯಲ್ಲಿ ಚೆಲ್ಲಿ ಹೋದ ನೀರಿನ ಮೌಲ್ಯ ತುಂಬುವವರು ಯಾರು?

ಮಳೆಗಾಲವೋ, ವೈಶಾಖವೋ, ಚಳಿಗಾಲವೋ, ನಮ್ಮವರ ಶಾಸ್ತ್ರ-ಸಂಪ್ರದಾಯಗಳಿಗೆ ಎಳ್ಳಿನಿತೂ ಕುಂದುಂಟಾಗಬಾರದು. ಭರ್ತಿ ಮೂವತ್ತು ಲೀಟರು ನೀರು ಸುರಿದು ಮೆಟ್ಟಿಲು-ಜಗುಲಿ ತೊಳೆದು ರಂಗೋಲಿ ಹಾಕಲೇ ಬೇಕು. ರಂಗೋಲಿ ಹಾಕಲಿ ಬಿಡಿ, ಅದಕ್ಕೆ ಕೊಡಗಟ್ಟಲೆ ನೀರು ಸುರಿಯಬೇಕೆ? ಸರಳವಾಗಿ ನೀರು ಚಿಮುಕಿಸಿ ಗುಡಿಸಿಕೊಂಡರೆ ಸಾಲದೆ? ನೆಲಬಿರಿವ ಬೇಸಿಗೆಯಲ್ಲಾದರೂ ಕನಿಷ್ಟ ಈ ನಿಯಮ ಪಾಲಿಸಬಾರದೇ? ಕೆಲವರಂತೂ ಒಂದು ಹನಿ ನೀರೂ ತಮ್ಮ ಮನೆಯಂಗಳದಲ್ಲಿ ಇಂಗಿ ಅಂತರ್ಜಲ ಸೇರಬಾರದೆಂದು ಅಷ್ಟೂ ಜಾಗಕ್ಕೆ ಕಾಂಕ್ರೀಟ್ ಹಾಕಿಸಿರುತ್ತಾರೆ. ಹಾಗಿದ್ದರೇ ಅವರಿಗದು ಹೆಚ್ಚು ನೀಟ್, ಕ್ಲೀನ್. ಕೆಲವರಿಗೆ ಅಷ್ಟಿದ್ದರೂ ಸಮಾಧಾನವಿಲ್ಲ, ಕುಡಿಯುವ ನೀರಿಗೆ ತತ್ವಾರವಾದರೂ ಪ್ರತಿದಿನ ಅವರ ಕಾಂಕ್ರೀಟ್ ಮನೆಯಂಗಳಕ್ಕೆ ನೀರುಣಿಸಿ ಶುಚಿಗೊಳಿಸಲೇಬೇಕು.

ನಮ್ಮ ನಗರವಾಸಿಗಳು ನೀರಿನ ವಿಷಯದಲ್ಲಿ ಇನ್ನಾದರೂ ಎಚ್ಚೆತ್ತುಕೊಳ್ಳದೇ ಹೋದರೆ ಉಳಿಗಾಲವಿಲ್ಲ. ಮನಸ್ಸು ಮಾಡಿದರೆ ಇರುವ ನೀರನ್ನೇ ಸದುಪಯೋಗಪಡಿಸಿಕೊಂಡು ಬರದ ಭಾರವನ್ನು ಕೊಂಚಮಟ್ಟಿಗಾದರೂ ಇಳಿಸಿಕೊಳ್ಳಬಹುದು. ಹೊಸ ಕಟ್ಟಡಗಳು ನೀರಿಂಗಿಸುವ ವ್ಯವಸ್ಥೆ ಮಾಡಿಕೊಳ್ಳುವುದನ್ನೇನೋ ಈಗ ಸರ್ಕಾರ ಕಡ್ಡಾಯ ಮಾಡಿದೆ. ಆದರೆ ಅವರು ಅದನ್ನು ಮನಃಪೂರ್ವಕವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆಯೇ ಎಂಬುದನ್ನೂ ಪರಿಶೀಲಿಸುವ ವ್ಯವಸ್ಥೆಯೊಂದನ್ನು ಸ್ಥಳೀಯಾಡಳಿತ ಮಾಡಿಕೊಳ್ಳಬೇಕು.

ಅದರೊಂದಿಗೆ ಇತರ ಕಟ್ಟಡಗಳ, ಮನೆಗಳ ಮಾಲೀಕರೂ ಮಳೆಗಾಲದಲ್ಲಿ ಸಿಗುವ ನೀರನ್ನಾದರೂ ಸದುಪಯೋಗಪಡಿಸಿಕೊಳ್ಳುವ/ಇಂಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ಮನೆ ಟೆರೇಸ್ ಮೇಲೆ ಸಂಗ್ರಹವಾಗುವ ನೀರನ್ನು ಕುಡಿಯುವುದರ ಹೊರತಾಗಿ ಬೇರೆಲ್ಲ ಕೆಲಸಗಳಿಗೂ ಬಳಸಿಕೊಳ್ಳಬಹುದು. ಒಂದೆರಡು ಮಳೆಗೆ ಟೆರೇಸ್ ಸ್ವಚ್ಛವಾಗುತ್ತದೆ; ಆಮೇಲಿನ ಅಷ್ಟೂ ನೀರನ್ನೂ ನೇರವಾಗಿ ಸಂಪ್‌ಗೆ ತುಂಬಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಮಳೆಗಾಲದಲ್ಲೇ ಏಕೆ, ಈಗಲೇ ವಾರಕ್ಕೊಂದೆರಡು ಮಳೆ ಸುರಿಯುತ್ತಿದೆ. ಇದೇ ನೀರನ್ನು ಸಂಗ್ರಹಿಸಿಕೊಂಡರೂ ಸಾಕಷ್ಟು ಅನುಕೂಲವಾದೀತು. ಮನೆಯೊಳಗೂ ಅಷ್ಟೇ, ಮಿತಬಳಕೆಯ ವಿಧಾನಗಳನ್ನು ಅನುಸರಿಸಬಹುದು. ಟ್ಯಾಪ್ ತಿರುಗಿಸಿ ನೀರು ಬಳಸುವ ಸಂದರ್ಭಗಳನ್ನು ಕಡಿಮೆ ಮಾಡಿ ಪಾತ್ರೆಯಲ್ಲಿ ನೀರು ತುಂಬಿಕೊಂಡು ಬಳಸಬಹುದು; ತರಕಾರಿ-ಹಣ್ಣುಹಂಪಲುಗಳನ್ನು ತೊಳೆದ ನೀರನ್ನು ಟಾಲೆಟ್ ಸ್ವಚ್ಛಗೊಳಿಸಲು, ವೆರಾಂಡದ ಗಿಡಗಳಿಗೆರೆಯಲು, ಗಾರ್ಡನ್ ಇದ್ದರೆ ಅದಕ್ಕೂ ಬಳಸಬಹುದು. ಬೇಸಿಗೆಯಲ್ಲಾದರೂ ವಾಷಿಂಗ್ ಮಷಿನ್‌ಗೆ ರಜೆ ಕೊಟ್ಟು ಕೈಯಲ್ಲೇ ಬಟ್ಟೆ ಒಗೆದುಕೊಂಡರೆ ಸಾಕಷ್ಟು ನೀರಿನ ಉಳಿತಾಯವಾಗುತ್ತದೆ. ಬಟ್ಟೆ ಹಿಂಡಿದ ನೀರೂ ಬೇರೊಂದು ಕಡೆ ಉಪಯೋಗಕ್ಕೆ ಬರುತ್ತದೆ.

ಮನಸ್ಸು ಮಾಡಿದರೆ ನೀರಿನ ಮಿತವ್ಯಯಕ್ಕೆ ನೂರಾರು ಹಾದಿಗಳಿವೆ. ಎಲ್ಲರೂ ಏಕಕಾಲಕ್ಕೆ ಇವುಗಳನ್ನು ಅನುಸರಿಸುವುದರಿಂದ ದೊಡ್ಡ ಮಟ್ಟದ ಲಾಭವಂತೂ ಖಂಡಿತ ಆಗುತ್ತದೆ. ಆದರೆ ಎಲ್ಲಕ್ಕಿಂತ ಮೊದಲು ಹದಗೊಳ್ಳಬೇಕಾಗಿರುವುದು ನಮ್ಮ ಮನಸ್ಸು. ಅಲ್ಲಿ ಸಂವೇದನೆಯ ಸೆಲೆ ಒಡೆದರೆ ಮಾತ್ರ, ಹೊರಗೆ ನೀರಿನ ಸೆಲೆ ಚಿಮ್ಮೀತು.