ಖಾದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಖಾದಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಅಕ್ಟೋಬರ್ 7, 2009

ಗಾಂಧಿಯ ಕಂಡಿರಾ? (ಭಾಗ-ಎರಡು)


ಸದಾಶಿವಜ್ಜ ಬಂಟ್ವಾಳದ ಭಂಡಾರಿಬೆಟ್ಟಿನವರು. ಅವರು ಹುಟ್ಟಿದ್ದು ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಹೆಚ್ಚುಕಮ್ಮಿ ಹದಿನೈದು ವರ್ಷಗಳ ಹಿಂದೆ. ಬಾಲ್ಯದ ತುಂಬೆಲ್ಲ ದರಿದ್ರಲಕ್ಷ್ಮಿಯದೇ ಕಾರುಭಾರು. ಮನೆ ಪಕ್ಕದಲ್ಲಿ ದೊಡ್ಡದೊಂದು ಕೈಮಗ್ಗ. ಆ ಕಾಲಕ್ಕೆ ಬಂಟ್ವಾಳದ ಖಾದಿ ಸೆಂಟರ್ ಎಂದರೆ ಇಡೀ ಕರಾವಳಿಗೇ ಪ್ರಸಿದ್ಧ. ಎಷ್ಟು ದೊಡ್ಡದೆಂದರೆ, ಅಷ್ಟು ವರ್ಷಗಳ ಹಿಂದೆಯೇ ಅದು ಐವತ್ತು ಮಹಿಳೆಯರಿಗೆ ಉದ್ಯೋಗ ಕೊಡುತ್ತಿತ್ತು. ನಾಲ್ಕನೇ ಇಯತ್ತೆಗಿಂತ ಆಚೆಗೆ ವಿದ್ಯಾಭ್ಯಾಸ ಮುಂದುವರಿಸದಾದ ಸದಾಶಿವನಿಗೆ ಆಸರೆಯಾದದ್ದು ಇದೇ ಖಾದಿ ಸೆಂಟರ್.


ಆದರೆ ಈ ಆಧಾರ ಹೆಚ್ಚು ಸಮಯ ಉಳಿಯಲಿಲ್ಲ. ಅದೇನು ತೊಡಕಾಯಿತೋ, ದಿನೇದಿನೇ ದುರ್ಬಲವಾಗುತ್ತಾ ಬಂದ ಕೈಮಗ್ಗ ಒಂದು ದಿನ ಪರ್ಮನೆಂಟಾಗಿ ಬಾಗಿಲೆಳೆದುಕೊಂಡಿತು. "ನಾನು ನಿರುದ್ಯೋಗಿಯಾದೆ. ಹೊಟ್ಟೆಪಾಡು, ಅಲ್ಲೇ ಬಂಟ್ವಾಳದ ಒಂದು ಫರ್ನಿಚರ್ ಅಂಗಡಿಯಲ್ಲಿ ದುಡಿಯತೊಡಗಿದೆ. ಒಂದು ದಿನ ಅದ್ಯಾರೋ ನನಗೆ ಬೆಂಗಳೂರಿನ ಚರಕ ಟ್ರೈನಿಂಗ್ ವಿಚಾರ ಹೇಳಿದರು. ಟ್ರೈನಿಂಗ್ ಸಮಯದಲ್ಲಿ ತಿಂಗಳಿಗೆ ಎಪ್ಪತ್ತೈದು ರುಪಾಯಿ ಸ್ಟೈಪೆಂಡ್ ಕೊಡುತ್ತಾರೆ ಅಂತಲೂ ಹೇಳಿದರು. ಅರ್ಧಶತಮಾನದ ಹಿಂದೆ ಎಪ್ಪತ್ತೈದು ರುಪಾಯಿ ಎಂದರೆ ಸಣ್ಣ ಮಾತೇ! ಮತ್ತೇನೂ ಯೋಚಿಸದೆ ನಾನು ಹೊರಟುನಿಂತೆ," ಎಂದು ಹಳೇ ಪುಟಗಳನ್ನು ತೆರೆಯುತ್ತಾರೆ ಸದಾಶಿವಜ್ಜ.


ಚರಕ ಟ್ರೈನಿಂಗ್ ಎಂದರೆ ಚರಕದಲ್ಲಿ ನೂಲುವ ಟ್ರೈನಿಂಗ್ ಅಲ್ಲ. ಚರಕ ತಯಾರಿಸಲು ತರಬೇತಿ. ಹಾಗೆ, ೧೯೫೭ರಲ್ಲಿ ಒಟ್ಟು ೩ ತಿಂಗಳು ಸದಾಶಿವ ಮತ್ತು ಅವರ ಚಿಕ್ಕಪ್ಪನ ಮಗ ಶ್ರೀನಿವಾಸ ಬೆಂಗಳೂರಿನ ಕೃಷ್ಣರಾಜಪುರದ ದೂರವಾಣಿನಗರದಲ್ಲಿ ಚರಕ ತಯಾರಿಸುವ ತರಬೇತಿ ಪಡೆದರು. (ಅಂದಹಾಗೆ, ಅವರು ಕಲಿತದ್ದು ಅಂಬರ್ ಚರಕ ತಯಾರಿ. ಆ ಸಮಯಕ್ಕೆ ಮಹಾತ್ಮಾ ಗಾಂಧಿ ಮತ್ತವರ ಸಹವರ್ತಿಗಳಿಂದ ರೂಪುಗೊಂಡ ಯರವಾಡ ಚರಕ, ಕಿಸಾನ್ ಚರಕ, ಬನಾರಸ್ ಚರಕ ಮುಂತಾದ ಮಾದರಿಗಳಿದ್ದವು. ಅಂಬರ್ ಚರಕ ಕೊಂಚ ವಿಭಿನ್ನ. ಯರವಾಡ ಚರಕ ಪೋರ್ಟಬಲ್ ಆಗಿದ್ದರೆ, ಅಂಬರ್ ಚರಕ ದೊಡ್ಡದಾಗಿತ್ತು. ಅದರ ಚಕ್ರ ತುಂಬ ದೊಡ್ಡದಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವ ವಿಚಾರದಲ್ಲಿ ಅದು ಅಷ್ಟೊಂದು ಅನುಕೂಲಕರವಲ್ಲದಿದ್ದರೂ, ಸಾಮರ್ಥ್ಯದಲ್ಲಿ ಇತರವುಗಳಿಗಿಂತ ಹೆಚ್ಚಿನದಾಗಿತ್ತು. ಬೇರೆ ಚರಕಗಳಲ್ಲಿ ಒಮ್ಮೆಗೆ ಒಂದೇ ಎಳೆ ನೂಲು ಬರುತ್ತಿದ್ದರೆ, ಅಂಬರ್ ಚರಕದಲ್ಲಿ ಒಮ್ಮೆಗೆ ಆರು ಎಳೆ ನೂಲು ಬರುತ್ತಿತ್ತು.)


ಬಂಟ್ವಾಳಕ್ಕೆ ಹಿಂತಿರುಗಿದ ಇಪ್ಪತ್ತೈದರ ಹರೆಯದ ಸದಾಶಿವನಿಗೆ ಕೈತುಂಬ ಕೆಲಸ. ತನ್ನ ಸಹವರ್ತಿಗಳೊಡಗೂಡಿ ಅವರು ನೂರಾರು ಚರಕ ತಯಾರಿಸಿದರು. ಊರೆಲ್ಲ ಹಂಚಿದರು. "ಒಟ್ಟು ಎಷ್ಟು ತಯಾರಿಸಿದೆವೋ ನೆನಪಿಲ್ಲ. ಕೆಲವು ನೂರು ಆಗಬಹುದು. ಅತ್ಲಾಗಿ ಸುಬ್ರಹ್ಮಣ್ಯದಿಂದ ತೊಡಗಿ ಇತ್ಲಾಗಿ ಶಿರೂರಿನವರೆಗೆ ಎಷ್ಟೋ ಚರಕ ತಯಾರಿಸಿ ಜನರಿಗೆ ಹಂಚಿದೆವು. ಜಿಲ್ಲೆಯ ಬೇರೆಬೇರೆ ಕಡೆ ಅಲ್ಲಲ್ಲಿ ಚರಕದಿಂದ ನೂಲು ತೆಗೆಯುವ ಟ್ರೈನಿಂಗ್ ಕ್ಲಾಸ್ ನಡೆಯುತ್ತಿತ್ತು. ಅಲ್ಲೇ ಚರಕ ಹಂಚಲಾಗುತ್ತಿತ್ತು..." ಸದಾಶಿವಜ್ಜ ನೆನಪಿಸಿಕೊಳ್ಳುತ್ತಾರೆ.


ಆದರೆ, ಚರಕದ ಕಥೆ ಕೂಡ ಹೆಚ್ಚು ದಿನ ಮುಂದುವರಿಯಲಿಲ್ಲ. ಕರ್ನಾಟಕದ ಬೇರೆ ಕಡೆಗಳಲ್ಲಿ ಚರಕ ಚಳುವಳಿಗೆ ದೊರೆತ ಪ್ರತಿಕ್ರಿಯೆ ಕರಾವಳಿಯಲ್ಲಿ ದೊರೆಯಲಿಲ್ಲ. ಸದಾಶಿವ ಮತ್ತವರ ಸಹವರ್ತಿಗಳಿಂದ ತಯಾರಾಗಿ ಮನೆಮನೆ ತಲುಪಿದ ಚರಕಗಳು ಕೆಲವೇ ಸಮಯದಲ್ಲಿ ಅಟ್ಟ ಹತ್ತಿ ಕುಳಿತವು. ಹಾಗೆ ಮತ್ತೆ ನಿರುದ್ಯೋಗಿಯಾದ ಸದಾಶಿವಜ್ಜನಿಗೆ ೧೯೭೦ರಲ್ಲಿ ಮಂಗಳೂರಿನ ಖಾದಿ ಭವನದಲ್ಲಿ ಕೆಲಸ ಕೊಡಿಸಲಾಯಿತು. ಆ ಲಾಗಾಯ್ತು ಇಂದಿನವರೆಗೆ ಅಂದರೆ ಸುಮಾರು ನಲವತ್ತು ವರ್ಷಗಳ ಕಾಲ ಅಜ್ಜ ಖಾದಿ ನಡುವೆ ಬದುಕು ಬೆಳೆಸಿದ್ದಾರೆ.


ಈಗಾಗಲೇ ಹೇಳಿದ ಹಾಗೆ ಸರ್ಕಾರದಿಂದ ಅಧಿಕೃತಗೊಂಡಿರುವ ಮಂಗಳೂರಿನ ಎರಡೇ ಎರಡು ಖಾದಿ ಅಂಗಡಿಗಳೆಂದರೆ, ರಥಬೀದಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಭವನ, ಮತ್ತು ಕೆ.ಎಸ್.ರಾವ್ ರಸ್ತೆಯಲ್ಲಿರುವ ಕಾರ್ನಾಡು ಸದಾಶಿವ ರಾವ್ ಸ್ಮಾರಕ ಖಾದಿ ಭಂಡಾರ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಅನುಮೋದನೆಗೊಂಡಿರುವ ಈ ಎರಡನ್ನೂ ಸೌತ್ ಕೆನರಾ ವಿಲೇಜ್ ಇಂಡಸ್ಟ್ರೀಸ್ ಅಸೋಸಿಯೇಶನ್ ನಡೆಸಿಕೊಂಡು ಹೋಗುತ್ತಿದೆ. ನಮ್ಮ ಸದಾಶಿವಜ್ಜ ಎರಡೂ ಅಂಗಡಿಗಳಲ್ಲಿ ದುಡಿದಿದ್ದಾರೆ.


ನಂಬಿ ಸ್ವಾಮಿ, ದಶಕಗಳ ಕಾಲ ಖಾದಿಯ ಹಾದಿ ಸವೆಸಿರುವ ಈ ೭೭ರ ಅಜ್ಜನಿಗೆ ಈಗ ದೊರೆಯುತ್ತಿರುವ ಸಂಬಳ ಬರೀ ೨,೯೦೦ ರುಪಾಯಿ!


"ನಮಗೆ ರಿಟೈರ್ ಮೆಂಟ್ ಅಂತ ಇಲ್ಲ. ಅದಿರುತ್ತಿದ್ದರೆ, ೬೦ರ ನಂತ್ರ ಪೆನ್ಷನ್ ಆದರೂ ಬರುತ್ತಿತ್ತು... ನನ್ನ ಸಂಬಳ ೩೦೦೦ ಆಗಬೇಕಾದರೆ ಇನ್ನೂ ಸುಮಾರು ವರ್ಷ ಆಗಬೇಕು... ಪರವಾಗಿಲ್ಲ; ಹಾಗೂ ಹೀಗೂ ದಿನ ಕಳೆಯುತ್ತದೆ. ಹೆಂಡತಿ ಶಾಂತಾ ಬೀಡಿ ಕಟ್ಟುತ್ತಾಳೆ. ಬೆಳಗ್ಗೆ ಗಂಜಿ ಇಟ್ಟರೆ ರಾತ್ರಿಯವರೆಗೂ ಆಯಿತು. ನಾನು ಹೊಟೇಲಿಗೆ ಹೋಗುವುದಿಲ್ಲ. ಮನೆಯಿಂದ ಗಂಜಿ ತರುತ್ತೇನೆ. ಕಾರ್ ಸ್ಟ್ರೀಟಿನ ಒಂದು ಕ್ಯಾಂಟೀನಿನಿಂದ ದಿನಾ ಸ್ವಲ್ಪ ಸಾಂಬಾರ್ ತಗೊಂಡರೆ ಊಟ ಮುಗೀತದೆ. ಇನ್ನೇನಾಗಬೇಕು?" ಎಂದು ಅಬೋಧ ಮಗುವಿನಂತೆ ಕೇಳುತ್ತಾರೆ ಸದಾಶಿವಜ್ಜ.


"ಎಷ್ಟು ವರ್ಷ ಹೀಗೆ?" ಅಂತ ನೀವು ಕೇಳಬಹುದು. "ಗೊತ್ತಿಲ್ಲ. ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ," ಅದು ಅಜ್ಜನ ಉತ್ತರ.


ಇದು ಅಜ್ಜನ ಕಥೆ. ಸಾಮಾನ್ಯವಾಗಿ ಅವರಿದನ್ನು ಯಾರಿಗೂ ಹೇಳಿದ್ದಿಲ್ಲ. ಹೇಳುವಂಥಾ ಕಥೆಯೂ ಅದಲ್ಲ ಎಂಬುದು ಅವರ ಅಂಬೋಣ. ಅವರು ಹೇಳಿದ ಅಷ್ಟನ್ನೂ ಒಟ್ಟು ಮಾಡಿ ನಿಮಗೆ ಹೇಳಿದ್ದೇನೆ. ಇದರ ಮೇಲೆ ಅವರ ಬಗೆಗೊಂದು ಪ್ರತ್ಯೇಕ ಟಿಪ್ಪಣಿ ಬರೆಯಬೇಕೆಂದು ನನಗನಿಸುವುದಿಲ್ಲ. ಇಷ್ಟು ವರ್ಷಗಳ ಬಳಿಕವೂ "ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ ದುಡಿಯುವೆ" ಎನ್ನುವ ಅಜ್ಜ ನನಗೆ ಥೇಟ್ ಇತಿಹಾಸದಂತೆ ಕಂಡಿದ್ದಾರೆ.

ನೀವೆಲ್ಲಾದರೂ ಗಾಂಧಿಯ ಕಂಡಿರಾ?


ಶನಿವಾರ, ಅಕ್ಟೋಬರ್ 3, 2009

ಗಾಂಧಿಯ ಕಂಡಿರಾ?

ಇವರು ಗಾಂಧೀತತ್ವಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವುದಿಲ್ಲ. ಗಾಂಧೀಜಿಯವರ ಮೌಲ್ಯಾದರ್ಶಗಳ ಮೇಲೆ ಬಂದಿರುವ ನೂರಾರು ಬೃಹತ್ ಗ್ರಂಥಗಳನ್ನೂ ಇವರು ಓದಿಲ್ಲ. ಗಾಂಧೀಜಿ ಹೇಳಿಕೊಟ್ಟ ಸತ್ಯಾಗ್ರಹದಂತಹ ಅಸ್ತ್ರಗಳನ್ನೂ ಇವರು ಬಳಸಿದ್ದಿಲ್ಲ. ಆದರೂ ಇವರೊಬ್ಬ ನಿಜವಾದ ಗಾಂಧೀವಾದಿ ಎಂದು ಇವರನ್ನು ಭೇಟಿಯಾದಂದಿನಿಂದ ನನಗೆ ಅನಿಸುತ್ತಲೇ ಇದೆ.

ಹೆಚ್ಚು ಸಮಯವೇನೂ ಆಗಿಲ್ಲ. ಒಂದೂವರೆ ತಿಂಗಳ ಹಿಂದಿನ ವಿಚಾರ. ಸ್ವಾತಂತ್ರ್ಯೋತ್ಸವದ ಸಂದರ್ಭ ಲೇಖನವೊಂದರ ತಯಾರಿಗೆ ತೊಡಗಿದ್ದೆ. ರಾಷ್ಟ್ರಧ್ವಜದ ಬಗ್ಗೆ ಬರೆಯಬೇಕೆಂಬುದು ನನ್ನ ಯೋಚನೆಯಾಗಿತ್ತು. ರಾಷ್ಟ್ರಧ್ವಜದ ಬಗೆಗೆಂದರೆ ಸುಮ್ಮನೆ ಅದರ ಬಣ್ಣ, ಅವು ಸೂಚಿಸುವ ಅರ್ಥ ಅಥವಾ ಅದರ ಹುಟ್ಟಿನ ಹಿನ್ನೆಲೆ...ಇತ್ಯಾದಿ ಚರ್ವಿತಚರ್ವಣ ಅಲ್ಲ; ಬದಲಿಗೆ, ಧ್ವಜ ಎಲ್ಲಿ ತಯಾರಾಗುತ್ತೆ, ಯಾರು ತಯಾರಿಸುತ್ತಾರೆ, ಅವರಿಗೆ ಇದೇ ಉದ್ಯೋಗವೇ, ನಮ್ಮೂರಿಗೆ ಧ್ವಜ ಎಲ್ಲಿಂದ ಬರುತ್ತೆ, ಅದನ್ನು ಯಾರು ಬೇಕಾದರೂ ತಯಾರಿಸಬಹುದೇ, ಯಾರು ಬೇಕಾದರೂ ಮಾರಾಟ ಮಾಡಬಹುದೇ, ಅದಕ್ಕೇನಾದರೂ ವಿಶೇಷ ನಿಯಮಗಳಿವೆಯೇ...ಇಂತಹದೆಲ್ಲ ವಿವರಗಳಿಂದ ಕೂಡಿದ ಒಂದು ಬರಹವಾಗಬೇಕೆಂದು ವಿವರ ಕಲೆಹಾಕುತ್ತಿದ್ದೆ.

ಒಂದಷ್ಟು ಮಂದಿ ಹಿರಿಯರನ್ನು ಸಂಪರ್ಕಿಸಿದ ಮೇಲೆ - ಅಧಿಕೃತ ರಾಷ್ಟ್ರಧ್ವಜಗಳು ಮಂಗಳೂರಿನಲ್ಲಿ ತಯಾರಾಗುವುದೇ ಇಲ್ಲ, ಅವು ಹುಬ್ಬಳ್ಳಿ ಅಥವಾ ಮುಂಬೈಗಳಿಂದ ಬರುತ್ತವೆ; ಇಲ್ಲಿ ರಸ್ತೆ ಬದಿಯಲ್ಲಿ ಕಾಣಸಿಗುವುದು "ಒರಿಜಿನಲ್" ತಿರಂಗಾ ಅಲ್ಲ; ಬಣ್ಣ, ಅಳತೆ, ವಸ್ತ್ರ ಮುಂತಾದವುಗಳನ್ನೆಲ್ಲ ಕಾನೂನು ಪ್ರಕಾರ ಬಳಸಿಕೊಂಡು ತಯಾರಾಗುವ ಧ್ವಜಗಳು ಮಂಗಳೂರಿನಲ್ಲಿ ಎರಡೇ ಕಡೆ ಸಿಗುವುದು; ಒಂದು ಕಾರ್ನಾಡು ಸದಾಶಿವ ರಾವ್ ಖಾದಿ ಭಂಡಾರ, ಇನ್ನೊಂದು ಖಾದಿ ಮತ್ತು ಗ್ರಾಮೋದ್ಯೋಗ ಭವನ - ಎಂದೆಲ್ಲ ಒಂದೊಂದೆ ತಿಳಿಯಿತು.

ಸರಿ, ಮತ್ತೆ ಇವೆರಡರ ತಲಾಶಿಗೆಂದು ಹೊರಟೆ. ಒಂದಿಬ್ಬರನ್ನು ಕೇಳಿದೆ, ಅವರೋ ನನ್ನನ್ನು ಹಳೆಶಿಲಾಯುಗದಿಂದ ಬಂದವನಂತೆ ವಿಚಿತ್ರವಾಗಿ ನೋಡಿ ತಮಗರಿಯದು ಎಂದರು. ಕೊನೆಗೂ ಒಬ್ಬರು ಖಾದಿ ಭಂಡಾರದ ಅಡ್ರೆಸ್ ಹೇಳಿದರು: "ಕೆ.ಎಸ್.ರಾವ್ ರೋಡಿನಲ್ಲಿ ಹೋಗುತ್ತಾ ಇರಿ, ಬಲಗಡೆಗೆ ನಡೆಯುತ್ತಾ ಇದ್ದರೆ ಒಂದು ದೊಡ್ಡ ವೈನ್ ಶಾಪ್ ಸಿಗುತ್ತೆ, ಅದರ ಹಿಂದಿರುವುದೇ ಖಾದಿ ಭಂಡಾರ..."! (ಖಾದಿ ಭಂಡಾರದ ಅಡ್ರೆಸ್ ಕೇಳಿದರೆ ವೈನ್ ಶಾಪಿನ ಕೇರಾಫ್ ಹಾಕಿ ಹೇಳುವ ಕಾಲ ಬಂತಲ್ಲಾ ಎಂದು ಆ ಕ್ಷಣ ನನಗಾದ ಸೋಜಿಗದ ಮೇಲೆ ಬರೆಯುತ್ತಾ ಹೋದರೆ ಅದೇ ಒಂದು ನೀಳ್ಗತೆಯಾದೀತು, ಇರಲಿ.)

ಹಾಗೆ ಖಾದಿ ಭಂಡಾರ ಹೊಕ್ಕ ನನಗೆ ಸಿಕ್ಕಿದ್ದು ಎಪ್ಪತ್ತೇಳು ವರ್ಷ ಪ್ರಾಯದ ಸದಾಶಿವ. "ಇವರು ಗಾಂಧೀತತ್ವಗಳ ಬಗ್ಗೆ ಉದ್ದುದ್ದ ಭಾಷಣ ಮಾಡುವುದಿಲ್ಲ..." ಇತ್ಯಾದಿ ಆರಂಭದಲ್ಲಿ ಹೇಳಿದೆನಲ್ಲ, ಅದು ಇವರ ಬಗೆಗೇ. ನಾನು ಕೇಳಿದ ಅಷ್ಟೂ ವಿವರಗಳನ್ನು ತುಂಬ ಸಂಯಮ-ಪ್ರೀತಿಯಿಂದ ಹೇಳಿದರು ಹತ್ತಿಯಂತಹಾ ಬಿಳಿತಲೆ ಹೊಂದಿರುವ ಈ ಸದಾಶಿವಜ್ಜ. ಅವರ ಮಾತು ಕೇಳುತ್ತಿದ್ದಂತೆ ನಾನು ಬರೆಯಹೊರಟ ವಿಷಯಕ್ಕಿಂತಲೂ ಈ ವ್ಯಕ್ತಿಯೇ ಹೆಚ್ಚು ಕುತೂಹಲಕಾರಿಯಾಗಿದ್ದಾರಲ್ಲ ಅನಿಸಿತು. ಒಂದು ಹಂತದಲ್ಲಿ ನಾನು ಸಂಹ್ರಹಿಸಿದ ಅಷ್ಟೂ ವಿವರಗಳನ್ನು ಬದಿಗಿರಿಸಿ ಇವರ ಬಗೆಗೇ ಬರೆದರೇನು ಅಂದುಕೊಂಡೆ. ಆದರೆ ಹಾಗೆ ಮಾಡುವುದಕ್ಕಿಂತ, ಕೊಂಚ ಸಮಯ ಕಾದು ಗಾಂಧೀ ಜಯಂತಿಯಂದೇ ಬರೆದರೆ ಹೆಚ್ಚು ಸಮಂಜಸವೂ ಸ್ವಾರಸ್ಯಕರವೂ ಆಗಿರುತ್ತದೆ ಎಂದು ನಿರ್ಧರಿಸಿದೆ. ಆ ಸಂದರ್ಭಕ್ಕೆ ನಾನು ಪ್ಲಾನ್ ಮಾಡಿದ್ದನ್ನೇ ಬರೆದೆ.

ನಿನ್ನೆ ನೆನಪಿಟ್ಟು ಮತ್ತೆ ಸದಾಶಿವಜ್ಜನನ್ನು ಭೇಟಿಯಾದೆ. ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ದರಕಡಿತದಲ್ಲಿ ಖಾದಿ ಬಟ್ಟೆಬರೆ ಸಿಗುತ್ತಿದ್ದುದರಿಂದ ಅಜ್ಜ ಫುಲ್ ಬ್ಯುಸಿ ಆಗಿದ್ದರು. ಆದರೂ ಸುಮಾರು ಒಂದೂವರೆ ಗಂಟೆ ಅವರ ಬೆನ್ನ ಹಿಂದೆ ಬಿದ್ದು ಅವರ ಪೂರ್ತಿ ಕಥೆ ಕೇಳಿದೆ. "ನನ್ನದೇನಿದೆ ಬರೆಯುವಂತಹಾ ಕಥೆ!" ಅನ್ನುತ್ತಲೇ ಸದಾಶಿವ ತಮ್ಮದೇ ಶೈಲಿಯಲ್ಲಿ ತಮ್ಮ ಅಟೋಬಯೋಗ್ರಫಿಯನ್ನು ನನ್ನೆದುರು ತೆರೆದಿಟ್ಟರು.
(ಮುಂದುವರಿಯುವುದು...!)