ಶನಿವಾರ, ಮೇ 16, 2020

ನಾಳೆಗಾಗಿ ಕಾಯಬೇಡಿ, ಇಂದೇ ಮಾಡಿಬಿಡಿ | ಸರಿ ಎನಿಸಿದ್ದನ್ನು ಮಾಡಲು ಹಿಂಜರಿಕೆ ಬೇಡ

 ಮೇ 16-22, 2020ರ ‘ಬೋಧಿವೃಕ್ಷ’ದಲ್ಲಿ ಪ್ರಕಟವಾದ ಬರೆಹ

ಸಮುದ್ರಸ್ನಾನಕ್ಕೆಂದು ಹೋದವನೊಬ್ಬ ತೆರೆ ಮುಗಿಯಲಿ ಎಂದು ಜೀವಮಾನವಿಡೀ ಕಾದನಂತೆ. ಅತ್ತ ಸ್ನಾನವೂ ಆಗಲಿಲ್ಲ, ಇತ್ತ ಜೀವನದಲ್ಲಿ ಬೇರೇನನ್ನೂ ಮಾಡಲಿಲ್ಲ. ಇದು ಸ್ನಾನಕ್ಕೆ ಹೋದ ಪುಣ್ಯಾತ್ಮನೊಬ್ಬನ ಕಥೆ ಮಾತ್ರ ಅಲ್ಲ. ಹಲವು ಬಾರಿ ನಮ್ಮೆಲ್ಲರದೂ.

ಏನೋ ಒಂದು ಕೆಲಸ ಮಾಡಬೇಕೆಂದುಕೊಂಡಿರುತ್ತೇವೆ. ತಕ್ಷಣಕ್ಕೆ ಆರಂಭಿಸುವುದಿಲ್ಲ. ಬಹುತೇಕ ಬಾರಿ ಮನಸ್ಸಿಗೆ ಬರುವ ಮೊದಲ ಯೋಚನೆಯೇ ‘ನಾಳೆಯೇ ಈ ಕೆಲಸ ಆರಂಭಿಸಬೇಕು’ ಎಂಬುದು. ವಾಸ್ತವವಾಗಿ ಸಮಸ್ಯೆ ಇರುವುದೇ ‘ನಾಳೆ ಆರಂಭಿಸಬೇಕು’ ಎಂಬಲ್ಲೇ. ಈಗಲೇ ಶುರು ಮಾಡಿಬಿಡೋಣ ಎಂದುಕೊಂಡು ಕೆಲಸ ಆರಂಭಿಸುವವ ಅಲ್ಲೇ ಅರ್ಧ ತೇರ್ಗಡೆಯಾಗಿರುತ್ತಾನೆ.
 ಬೋಧಿವೃಕ್ಷ | ಮೇ 16-22, 2020

ಕೆಲವರು ‘ನ್ಯೂ ಇಯರ್ ರೆಸಲ್ಯೂಶನ್’ ಅಥವಾ ‘ಬರ್ತ್‍ಡೇ ರೆಸೊಲ್ಯುಶನ್’ ಮಾಡಿಕೊಳ್ಳುವ ಕ್ರಮ ಇದೆ. ಬೆಳಗ್ಗೆ ಬೇಗನೆ ಏಳುವುದು, ವಾಕ್ ಮಾಡುವುದು, ಯೋಗಾಭ್ಯಾಸ ಆರಂಭಿಸುವುದು, ಕಡಿಮೆ ಊಟ ಮಾಡುವುದು, ತೂಕ ಇಳಿಸಿಕೊಳ್ಳುವುದು, ತಿಂಗಳಿಗೊಂದಾದರೂ ಹೊಸ ಪುಸ್ತಕ ಓದುವುದು, ಸಮಯಕ್ಕೆ ಸರಿಯಾಗಿ ಕಚೇರಿ ತಲುಪುವುದು, ಇತ್ಯಾದಿ ಇತ್ಯಾದಿ. ಸಮಸ್ಯೆ ಯಾವುದೆಂದರೆ ಈ ಎಲ್ಲಾ ಹೇಳಿಕೆಗಳ ಪೂರ್ವದಲ್ಲಿ ‘ಇವತ್ತಿನಿಂದಲೇ’ ಎಂಬ ಪದ ಸೇರಿಸಿಕೊಳ್ಳದಿರುವುದು. ಅವರೇನಿದ್ದರೂ ‘ನಾಳೆಯಿಂದ’ ಆರಂಭಿಸುವವರು. ನಾಳೆ ಗಣಪತಿಗೆ ಮದುವೆ ಎಂಬ ಗಾದೆ ಕೇಳಿದ್ದೀರಲ್ಲ!

ಬದುಕಿನಲ್ಲಿ ಬದಲಾಗಬೇಕು ಎಂಬ ಆಸೆ ಅನೇಕ ಮಂದಿಗೆ ಇರುತ್ತದೆ. ಈ ರೆಸಲ್ಯೂಶನ್‍ಗಳ ಹಿಂದಿನ ಕಾರಣ ಬದಲಾಗಬೇಕು ಎಂಬ ಆಸೆಯೇ. ಬದಲಾವಣೆ ಯಾಕೆ ಸಾಧ್ಯವಾಗುವುದಿಲ್ಲ ಎಂದರೆ ವಾಸ್ತವವಾಗಿ ಅದು ಆರಂಭವೇ ಆಗಿರುವುದಿಲ್ಲ. ಆಮೇಲೆ ಮಾಡೋಣ, ನಾಳೆ ಮಾಡೋಣ, ಇನ್ನೊಮ್ಮೆ ಮಾಡೋಣ, ಈಗ ಮೂಡ್ ಇಲ್ಲ, ಮನಸ್ಸು ಫ್ರೆಶ್ ಇಲ್ಲ, ಇನ್ನೂ ಸಾಕಷ್ಟು ದಿನ ಇದೆ, ಇತ್ಯಾದಿ ನಾವೇ ಸೃಷ್ಟಿಸಿಕೊಳ್ಳುವ ನೂರೆಂಟು ಕಾರಣಗಳಿಂದ ಈ ಬದಲಾಗುವ ಯೋಜನೆ ಅನುಷ್ಠಾನಕ್ಕೇ ಬರುವುದಿಲ್ಲ. ಇಂಗ್ಲಿಷಿನಲ್ಲಿ ಈ ವಿಳಂಬ ಪ್ರವೃತ್ತಿಗೆ ‘ಪ್ರೊಕ್ರಾಸ್ಟಿನೇಶನ್’ ಎಂಬ ಚಂದದ ಪದ ಇದೆ.

ಅನೇಕ ಮಂದಿಗೆ ತಾವು ಇಂಥದ್ದನ್ನೆಲ್ಲ ಮಾಡುವವರಿದ್ದೇವೆ ಎಂದು ಮೊದಲೇ ಘೋಷಿಸಿಕೊಳ್ಳುವ ಚಟ ಇರುತ್ತದೆ. ನಾನೊಂದು ಲೇಖನ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ, ನಾನೊಂದು ಸಿನಿಮಾ ಮಾಡಬೇಕು ಅಂದುಕೊಂಡಿದ್ದೇನೆ, ನಾನೊಂದು ಬಿಸಿನೆಸ್ ಆರಂಭಿಸಬೇಕು ಅಂದುಕೊಂಡಿದ್ದೇನೆ,  ನಾನು ದೊಡ್ಡ ಸಾಧನೆ ಮಾಡಿ ಎಲ್ಲರಿಂದ ಭೇಷ್ ಅನಿಸಿಕೊಳ್ಳುತ್ತೇನೆ- ಎಂದು ಹೇಳುವವರು ಅಲ್ಲಲ್ಲಿ ಸಿಗುತ್ತಾರೆ. ಅವರು ವಾಸ್ತವವಾಗಿ ಯಾವುದನ್ನೂ ಮಾಡುವುದಿಲ್ಲ. ಜಗತ್ತು ಅರ್ಧ ಹಾಳಾಗಿರುವುದೇ ಹೀಗೆ ‘ಅಂದುಕೊಳ್ಳುವವ’ರಿಂದ. ಕುಣಿಯಬೇಕು ಅಂದುಕೊಂಡಾಗೆಲ್ಲ ನೆಲ ಡೊಂಕಾಗಿ ಕಂಡರೆ ಇನ್ನೇನು ಮಾಡಲು ಸಾಧ್ಯ?

‘ಆಡದೆ ಮಾಡುವನು ರೂಢಿಯೊಳಗುತ್ತಮನು, ಆಡಿ ಮಾಡುವನು ಮಧ್ಯಮ, ಲೋಕದಲಿ ಆಡಿಯೂ ಮಾಡದವ ಅಧಮ’ ಎಂದು ಸರ್ವಜ್ಞ ಇವರನ್ನೆಲ್ಲ ನೋಡಿಯೇ ಹೇಳಿರುವುದು. ನಿಜವಾದ ಸಾಧಕರು ಮಾತಾಡುವುದು ಕಡಿಮೆ. ಉಳಿದವರಿಗೆ ಮಾತಾಡುವುದೇ ಸಾಧನೆ. ಬಡಾಯಿ ಕಡಿಮೆ ಮಾಡಿದರೆ ಕೆಲಸ ಮಾಡುವುದಕ್ಕೆ ಸಮಯವಾದರೂ ಸಿಗುತ್ತದೆ. ‘ಮನಸಾ ಚಿಂತಿತಂ ಕಾರ್ಯಂ, ವಾಚ್ಯಂ ನೈವ ಪ್ರಕಾಶಯೇತ್’ ಎಂದು ಹಳಬರು ಸುಮ್ಮನೇ ಹೇಳಿದ್ದಾರೆಯೇ?

ಮಾಡಬೇಕು ಅಂದುಕೊಂಡಿದ್ದನ್ನು ಮಾಡಿಯೇ ತೀರಬೇಕು. ಅದು ಆತ್ಮಸಾಕ್ಷಿಗೆ ಒಪ್ಪಿದರೆ, ನಾಲ್ವರು ಹಿರಿಯರಿಗೆ ಸರಿ ಎನ್ನಿಸಿದರೆ, ಮಾಡುವುದಕ್ಕೆ ಏನಡ್ಡಿ? ನಮ್ಮ ಸುತ್ತ ಇರುವ ಎಲ್ಲರಿಗೂ ನಮ್ಮ ನಿರ್ಧಾರಗಳು ಸರಿ ಎನಿಸಬೇಕಾಗಿಲ್ಲ. ಕೊಂಕು ನುಡಿಯುವವರು ಎಲ್ಲ ಕಡೆ, ಎಲ್ಲ ಕಾಲದಲ್ಲೂ ಇರುತ್ತಾರೆ. ನಾವು ನಮ್ಮ ಸಂತೃಪ್ತಿಗಾಗಿ ಮಾಡುವುದೇ ಆಗಿದ್ದರೆ ಬೇರೆಯವರ ಗೊಡವೆ ಏಕೆ? ಕಾರ್ಯವೊಂದನ್ನು ಮಾಡಿ ಪಶ್ಚಾತ್ತಾಪ ಪಡುವವರಿಗಿಂತ ಮಾಡದೆಯೇ ಪಶ್ಚಾತ್ತಾಪಪಡುವವರು ಲೋಕದಲ್ಲಿ ಹೆಚ್ಚಿಗೆ ಇದ್ದಾರಂತೆ.

ಮಾಡಬೇಕು ಅಂದುಕೊಂಡಿರುವ ಕೆಲಸಗಳನ್ನು ಮುಂದೂಡಲು ಪ್ರಮುಖ ಕಾರಣ ಆ ಕೆಲಸದ ಬಗೆಗಿರುವ ಸಣ್ಣ ಆತಂಕ. ಉದಾಹರಣೆಗೆ, ಪರೀಕ್ಷೆಗೆ ಓದಬೇಕು ಅಂದುಕೊಂಡಿರುವ ವಿದ್ಯಾರ್ಥಿ ಓದಲು ಆರಂಭಿಸದೆ ಇರಲು ಪ್ರಮುಖ ಕಾರಣ ತಾನು ಓದಬೇಕೆಂದುಕೊಂಡಿರುವ ವಿಷಯ ಕಠಿಣವಾಗಿದೆ ಮತ್ತು ಆ ಕಾರಣಕ್ಕೆ ಅರ್ಥವಾಗದು ಎಂಬ ಭಾವನೆ. ಲೇಖನ ಬರೆಯಬೇಕು ಅಂದುಕೊಂಡಿರುವ ವ್ಯಕ್ತಿ ಅದನ್ನು ಬರೆಯದೆ ಇರಲು ಕಾರಣ ತಾನು ಚೆನ್ನಾಗಿ ಬರೆಯಲಾರೆ, ಅದು ಓದಿದವರಿಗೆ ಇಷ್ಟವಾಗದಿದ್ದರೆ ಏನು ಗತಿ ಎಂಬ ಅಂತರಂಗದ ಆತಂಕ. ಅನೇಕ ‘ಪರ್ಪೆಕ್ಷನಿಸ್ಟ್’ಗಳಿಗೂ ಈ ಸಮಸ್ಯೆ ಇರುವುದುಂಟು. ಈ ಆತಂಕ ಮೂಡಿದಾಗಲೆಲ್ಲ ‘ಆಮೇಲೆ ಮಾಡಿದರಾಯ್ತು’, ‘ನಾಳೆ ಮಾಡೋಣ’ ಎಂದು ತಮಗೆ ತಾವೇ ಸಬೂಬು ಹೇಳಿಕೊಳ್ಳುವ ಪ್ರಸಂಗ ಬರುತ್ತದೆ. ಅವರಿಗೆ ಫೇಸ್‍ಬುಕ್, ವಾಟ್ಸಾಪುಗಳು ತಾತ್ಕಾಲಿಕ ನೆಮ್ಮದಿ ನೀಡುತ್ತವೆ.

ಬದ್ಧತೆಯೇ ಇಂತಹ ಸಮಸ್ಯೆಗಳಿಗೆ ಇರುವ ಏಕೈಕ ಪರಿಹಾರ. ಮಾಡಬೇಕಿರುವ ಕೆಲಸಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳುವುದು ಮುಖ್ಯ ಅಲ್ಲ, ಮಾಡಬೇಕು ಎಂಬ ಅಂತರ್ಯದ ಗಟ್ಟಿತನ ಮುಖ್ಯ. ಇಂಥದ್ದನ್ನೆಲ್ಲ ಮಾಡಿಬಿಡುತ್ತೇನೆ ಎಂದು ಊರಿಗೆ ಡಂಗುರ ಸಾರಲು ನಾವೆಲ್ಲರೂ ರಾಜಕಾರಣಿಗಳಲ್ಲವಲ್ಲ? ಕೆಲವೊಮ್ಮೆ ನಮ್ಮ ನಿರ್ಧಾರಗಳನ್ನು ಸ್ಪಷ್ಟಪಡಿಸಿಕೊಳ್ಳಲು ಯಾರ ಬಳಿಯಲ್ಲಾದರೂ ಹೇಳಿಕೊಳ್ಳಬೇಕಾಗುತ್ತದೆ. ಆಗ ಅಂತರಂಗದ ಮಾತುಗಳಿಗೆ ಕಿವಿಕೊಡಬಲ್ಲ ಒಂದಿಬ್ಬರು ಆಪ್ತರು ಸಿಕ್ಕರೆ ಸಾಕು. ಮನಸ್ಸಿನ ಮಾತುಗಳಿಗೆ ಧ್ವನಿವರ್ಧಕ ಯಾಕೆ?

ಹಾಗೆಂದು ಅಂದುಕೊಂಡ ತಕ್ಷಣ ಕೆಲಸವೊಂದಕ್ಕೆ ಧುಮುಕಿಬಿಡುವುದೂ ಕೆಲವೊಮ್ಮೆ ಆತುರದ ನಿರ್ಧಾರವಾಗುತ್ತದೆ. ಅನುಷ್ಠಾನದ ಹಿಂದೆ ಸಾಕಷ್ಟು ಚಿಂತನೆ ಇರಬೇಕು. ಚಿಂತನೆಗೂ ಮುಂದೂಡುವ ಪ್ರವೃತ್ತಿಗೂ ವ್ಯತ್ಯಾಸ ಇದೆ. ಚಿಂತನೆಯಿಲ್ಲದೆ ಆರಂಭಿಸುವ ಕೆಲಸ ಅನೇಕ ಬಾರಿ ಆರಂಭಶೂರತನವಷ್ಟೇ ಆಗುತ್ತದೆ. ಯಾವುದೋ ಒಂದು ಯೋಚನೆ ಬಂದ ತಕ್ಷಣ ದಬದಬನೆ ಅದನ್ನು ಆರಂಭಿಸಿಬಿಡುವವರು ಇದ್ದಾರೆ. ಅವರು ಎರಡೇ ದಿನದಲ್ಲಿ ನಿವೃತ್ತಿ ಘೋಷಿಸುತ್ತಾರೆ. ಅಂಥವರು ಯಾವುದನ್ನೂ ಪೂರ್ತಿ ಮಾಡುವುದಿಲ್ಲ. ಎಲ್ಲವೂ ಅರ್ಧಂಬರ್ಧವೇ.

ಡೆಡ್‍ಲೈನಿನಲ್ಲಿ ಕೆಲಸ ಮಾಡಬಲ್ಲವರು ಬೆರಳೆಣಿಕೆಯ ವೃತ್ತಿಪರರು ಮಾತ್ರ. ಆದ್ದರಿಂದ ಇನ್ನೂ ಸಮಯವಿದೆ ಎಂಬ ಭಾವನೆಯಿಂದ ಮೊದಲು ಹೊರಬರಬೇಕು. ಸಾಧ್ಯವಾದಷ್ಟೂ ಸದ್ದುಗದ್ದಲವಿಲ್ಲದೆ ಅಂದುಕೊಂಡದ್ದನ್ನು ಮಾಡಿಮುಗಿಸಬೇಕು. ಈ ಕೆಲಸವನ್ನು ಈಗಲೇ ಮಾಡುವುದರಿಂದ ದೊರೆಯಬಹುದಾದ ಯಶಸ್ಸಿನ ಕಲ್ಪನೆಯಿಂದ ಮನಸ್ಸಿಗೆ ಉತ್ಸಾಹವನ್ನು ತಂದುಕೊಳ್ಳಬೇಕು. ನಮ್ಮ ಸ್ನಾನಕ್ಕಾಗಿ ಸಮುದ್ರದ ತೆರೆಗಳು ಕಾಯುವುದಿಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: