ಶುಕ್ರವಾರ, ಮಾರ್ಚ್ 22, 2019

ಯಂಗ್ ವೋಟರ್ಸ್ ಗೆ ಡಿಮಾಂಡು!

ಮಾರ್ಚ್ 20, 2019ರ ವಿಜಯವಾಣಿ 'ಮಸ್ತ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ಭಾರತದ ಚುನಾವಣಾ ಫಲಿತಾಂಶಗಳಿಗೆ ಸಂಬಂಧಿಸಿದಂತೆ ಭವಿಷ್ಯ ನುಡಿಯಬಹುದಾದ ಏಕೈಕ ಅಂಶವೆಂದರೆ ಅದು ಎಲ್ಲ ಭವಿಷ್ಯಗಳಿಗೂ ಮೀರಿದ್ದು ಎಂಬುದು. ಇದು ಇಲ್ಲಿಯವರೆಗೂ ಪ್ರಚಲಿತದಲ್ಲಿದ್ದ ಮಾತು. ನಮ್ಮ ಚುನಾವಣೆಗಳು ಜಾತಿ, ಮತ, ಹಣ, ಧರ್ಮ, ಪಕ್ಷ ವಿಧೇಯತೆ, ವೈಯುಕ್ತಿಕ ವರ್ಚಸ್ಸು, ಭಾವುಕತೆ ಎಂಬಿತ್ಯಾದಿ ಹತ್ತುಹಲವು ಅಂಶಗಳ ಮೇಲೆ ನಿಂತಿರುವುದೇ ಇದಕ್ಕೆ ಕಾರಣ. ಈ ಅಂಶಗಳ್ಯಾವುವೂ ಬದಲಾಗಿಲ್ಲ, ಆದರೆ ಬದಲಾವಣೆ ತರುವ ಹೊಸದೊಂದು ಅಂಶ ಕಳೆದೊಂದು ದಶಕದಿಂದ ಈ ಪಟ್ಟಿಗೆ ಸೇರ್ಪಡೆಗೊಂಡಿದೆ - ಯುವಮತದಾರರು!

ವಿಜಯವಾಣಿ, 20-03-2019
ಹೌದು, ಯುವಕರೇ ಈ ದೇಶದ ಭವಿಷ್ಯ ಎಂಬುದನ್ನು ನಮ್ಮ ಯುವಕರು ಇತ್ತೀಚಿನ ಚುನಾವಣೆಗಳಲ್ಲಿ ಸಾಬೀತುಮಾಡುತ್ತಿದ್ದಾರೆ. ಜಾತಿಬಲ, ಹಣಬಲ, ತೋಳ್ಬಲ ಮುಂತಾದವುಗಳಿಗಿಂತಲೂ ಯುವಕರ ಮನೋಬಲವೇ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ ಎಂಬುದು ನಮ್ಮ ಪ್ರಜಾಪ್ರಭುತ್ವದ ಹೊಸ ಆಶಾವಾದದ ಬೆಳಕಿಂಡಿ.

ಈ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಮೂರನೇ ಒಂದು ಪಾಲನ್ನು 15-34 ವರ್ಷಗಳ ನಡುವಿನ ಯುವಕರೇ ಹೊಂದಿದ್ದಾರೆ. 2020ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ 'ತರುಣ ದೇಶ’ವಾಗಲಿದೆ ಎಂಬುದನ್ನು ಸಮೀಕ್ಷೆಗಳು ದೃಢಪಡಿಸಿವೆ. ಸದ್ಯಕ್ಕಂತೂ 1997ರಿಂದ 2001ರ ನಡುವೆ ಹುಟ್ಟಿದ ಯುವಕರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು. ಯಾಕೆಂದರೆ ಮುಂದಿನ ತಿಂಗಳು ನಡೆಯುವ ಮಹಾಚುನಾವಣೆಯಲ್ಲಿ ಇವರೆಲ್ಲ ಮೊದಲ ಬಾರಿ ತಮ್ಮ ಮತ ಚಲಾಯಿಸಲಿದ್ದಾರೆ.

2014ರ ಚುನಾವಣೆಗೆ ಮುನ್ನ ಸುಮಾರು 2.4 ಕೋಟಿ ಹೊಸ ಯುವಕರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದರು. ಈಗ ಈ ಸಂಖ್ಯೆ ಇನ್ನೂ ಬೆಳೆದಿದೆ. ಈ ಬಾರಿ ಸುಮಾರು 4.5 ಕೋಟಿ ಹೊಸಬರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಇವರು ಅಂತಿಂಥ ಯುವಕರಲ್ಲ. ಇವರಲ್ಲಿ ಬಹುತೇಕರು ನ್ಯೂ ಮಿಲೇನಿಯಂ ತಲೆಗಳು. ಇವರು ಅವಿದ್ಯಾವಂತರಲ್ಲ, ಅವಿವೇಕಿಗಳೂ ಅಲ್ಲ.

ಇವರ ಕೈಗಳಲ್ಲೆಲ್ಲ ಆಂಡ್ರಾಯ್ಡ್ ಮೊಬೈಲ್‌ಗಳಿವೆ. 24 ಗಂಟೆ ಇಂಟರ್ನೆಟ್ ಸಂಪರ್ಕವಿದೆ. ಫೇಸ್‌ಬುಕ್, ವಾಟ್ಸಾಪ್, ಟ್ವಿಟರ್ ಇತ್ಯಾದಿಗಳೆಲ್ಲ ಇವರ ಅಂಗೈಗಳಲ್ಲೇ ಮನೆಮಾಡಿವೆ. ಇವರಿಗೆ ಮಾಹಿತಿಯ ಕೊರತೆಯಿಲ್ಲ. ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಮಾಹಿತಿ ಇವರಿಗೆ ಕ್ಷಣಕ್ಷಣಕ್ಕೂ ಲಭ್ಯವಾಗುತ್ತಿದೆ. ರಾಜಕೀಯ ಸಂಜೆ ಹೊತ್ತಿನ ಅರಳಿಕಟ್ಟೆಗಳ ಹರಟೆಯಾಗಿ ಉಳಿದಿಲ್ಲ. ಉಭಯಕುಶಲೋಪರಿಯಷ್ಟೇ ಸಹಜವಾಗಿ ದಿನನಿತ್ಯದ ಮಾತುಕತೆಗಳ ಅವಿಭಾಜ್ಯ ಅಂಗವಾಗಿದೆ. ರಾಜಕಾರಣಿಗಳ ಸುಳ್ಳುಪೊಳ್ಳು ನಮ್ಮ ಯುವಕರ ಬಳಿ ನಡೆಯದು. ಅವರು ಹೇಳಿದ್ದರ ತಿರುಳನ್ನು ಅರೆಕ್ಷಣದಲ್ಲಿ ಜಾಲಾಡಿ ಸಾಮಾಜಿಕ ಜಾಲತಾಣಗಳೆಂಬ ಬಟಾಬಯಲಿನಲ್ಲಿ ಬೆತ್ತಲು ಮಾಡುವ ಕಲೆ ನಮ್ಮ ಹೊಸ ತಲೆಮಾರಿನ ಕುಶಾಗ್ರಮತಿಗಳಿಗೆ ಕರತಲಾಮಲಕವಾಗಿದೆ.

ಮತದಾನದ ವಿಷಯದಲ್ಲಿ ಕುಟುಂಬ ಮತ್ತು ಸ್ನೇಹಿತರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ಇಲ್ಲಿನವರೆಗಿನ ಎಲ್ಲ ಅಧ್ಯಯನಗಳೂ ಹೇಳಿವೆ. ಕುಟುಂಬದ ಹಿರಿಯರು ಯಾವ ಪಕ್ಷ ಅಥವಾ ಅಭ್ಯರ್ಥಿ ಬಗ್ಗೆ ಒಲವು ಹೊಂದಿದ್ದಾರೋ ಅದು ಅಲ್ಲಿನ ಕಿರಿಯರ ಮೇಲೆ ಅನಾಯಾಸವಾಗಿ ಪ್ರಭಾವ ಬೀರುತ್ತದೆ ಎಂದೇ ತಿಳಿಯಲಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ರಾಜಕೀಯ ವಿಚಾರದಲ್ಲಂತೂ ಅಪ್ಪ ಹಾಕಿದ ಆಲದ ಮರಕ್ಕೆ ಜೋತುಬೀಳುವ ಯುವಕರು ಇಲ್ಲವೇ ಇಲ್ಲ. ಅವರೆಲ್ಲ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಶಕ್ತರೂ ಬುದ್ಧಿವಂತರೂ ಆಗಿದ್ದಾರೆ.

ಜಾತಿ, ಮತ, ಪಂಥ, ಪಂಗಡ, ಹಣ ಇತ್ಯಾದಿಗಳ ಪ್ರಭಾವವನ್ನು ಭಾರತದಂತಹ ದೇಶದಲ್ಲಿ ತಡೆಯುವುದು ಕಷ್ಟ. ಆದರೆ ಅವುಗಳನ್ನು ಮೀರಿ ನಿಲ್ಲುವ ಯುವವರ್ಗವೊಂದು ನಮ್ಮಲ್ಲಿ ಸೃಷ್ಟಿಯಾಗುತ್ತಿದೆ ಎಂಬುದು ಮಹತ್ವದ ಅಂಶ. ಈ ಯುವಕರೇ ಸದ್ಯಕ್ಕೆ ನಮ್ಮ ಮುಂದಿರುವ ಭರವಸೆಯ ಶಕ್ತಿಗಳು. ಕೆಲವರು ಅಭ್ಯರ್ಥಿ ಮುಖ್ಯ ಎಂಬ ಭಾವನೆ ಹೊಂದಿದ್ದರೆ ಪಕ್ಷ ಮುಖ್ಯ ಎಂದು ಹೇಳುವವರೂ ಇದ್ದಾರೆ. ಆದರೆ ತಾವು ಹೇಳುತ್ತಿರುವುದಕ್ಕೆ ಅವರು ಸೂಕ್ತ ಕಾರಣವನ್ನೂ ಕೊಡಬಲ್ಲರು. ಅಂತಿಮವಾಗಿ ಇವರೆಲ್ಲರೂ ದೇಶದ ಒಳಿತಿನ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಎಂಬುದೇ ಗಮನಿಸಬೇಕಾದ ಅಂಶ.

ತಮಗೊದಗಿರುವ ಡಿಮ್ಯಾಂಡಪ್ಪೋ ಡಿಮ್ಯಾಂಡು ಸ್ಥಾನಮಾನವನ್ನು ದಿಟ್ಟತನದಿಂದ ಬಳಸಿಕೊಳ್ಳುವ ನಿರ್ಣಾಯಕ ಪರಿಸ್ಥಿತಿ ಯುವಕರದ್ದು. ಚುನಾವಣೆಯ ದಿನ ಸಿನಿಮಾ ಹಾಲುಗಳಲ್ಲಿ, ಝಗಮಗಿಸುವ ಮಾಲುಗಳಲ್ಲಿ ಕಾಲ ಕಳೆಯುವ ಬೇವಾಬ್ದಾರಿತನವನ್ನು, ಯಾರು ಅಧಿಕಾರಕ್ಕೆ ಬಂದರೂ ಅಷ್ಟೇ ಎಂಬ ಸಿನಿಕತೆಯನ್ನು ಅವರು ತೋರದಿರಲಿ. ಏಕೆಂದರೆ ಮುಂದೆ ಸರ್ಕಾರ ಯಾರು ರಚಿಸುತ್ತಾರೋ ಗೊತ್ತಿಲ್ಲ, ಆದರೆ ಅವರ ಹಣೆಬರಹವನ್ನು ಬರೆಯಬೇಕಾದವರು ನಮ್ಮ ಯುವಕರು ಎಂಬುದಂತೂ ಶತಃಸಿದ್ಧ.
*****************************************

ಅವರೇನು ಹೇಳುತ್ತಾರೆ?
ದೊಡ್ಡ ರಾಜಕೀಯ ಪಕ್ಷದಲ್ಲಿರುವ ಭ್ರಷ್ಟ ರಾಜಕಾರಣಿಗಿಂತ ತನ್ನದೇ ರಾಜಕೀಯ ವರ್ಚಸ್ಸು ಹೊಂದಿರುವ ಪ್ರಾಮಾಣಿಕ ಸ್ವತಂತ್ರ ಅಭ್ಯರ್ಥಿಯನ್ನು ನಾನು ಬೆಂಬಲಿಸುತ್ತೇನೆ. ಸರಿಯಾದ ವ್ಯಕ್ತಿಯನ್ನು ಗುರುತಿಸಿ ಗೆಲ್ಲಿಸುವುದರಿಂದ ರಾಜಕಾರಣ ಶುದ್ಧವಾಗುತ್ತದೆ.
- ಚೇತನ್, ಗುಜ್ಜೇನಗಳ್ಳಿ, ಕುಣಿಗಲ್

ಜನರ ನಾಡಿಮಿಡಿತವನ್ನು ಬಲ್ಲವರು, ನೈಜ ಅಭಿವೃದ್ಧಿಗೆ ಕಾರಣವಾಗಬಲ್ಲವರು ನಮಗೆ ಬೇಕು. ನಮ್ಮ ಕ್ಷೇತ್ರಕ್ಕೆ ಆ ವ್ಯಕ್ತಿ ಯೋಗ್ಯನೇ ಎಂಬುದೂ ಮುಖ್ಯ. ನಾವು ಆಮಿಷಗಳಿಗೆ ಬಲಿಯಾಗುವುದಿಲ್ಲ. ಉತ್ತಮ ಸಮಾಜದ ಕಲ್ಪನೆ ಹೊಂದಿರುವ ಕವಿ-ಸಾಹಿತಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾದರೆ ಒಳ್ಳೆಯದೆಂದು ನನಗನಿಸುತ್ತದೆ.
- ಅನಿಲ್ ಕುಮಾರ್, ದೇವಲಕೆರೆ, ಪಾವಗಡ

ಆ ಪಕ್ಷ ಈ ಪಕ್ಷ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಡಿದಾಡುವುದರಿಂದ ಏನೂ ಪ್ರಯೋಜನ ಇಲ್ಲ. ಪಕ್ಷಗಳ ಆರಾಧಕರಾಗಲು ನಾವು ಸಿದ್ಧರಿಲ್ಲ. ಉತ್ತಮ ಅಭ್ಯರ್ಥಿಯೇ ನಮ್ಮ ಆಯ್ಕೆ.
- ಯೋಗೇಶ್ ಮಲ್ಲೂರು

ಅಭ್ಯರ್ಥಿ ಕೇವಲ ವ್ಯಕ್ತಿಯಲ್ಲ, ಅವನೊಂದು ಶಕ್ತಿ ಎಂದು ಮನಗಂಡು ಮತ ಚಲಾಯಿಸಬೇಕಿದೆ. ನಾವು ಆಯ್ಕೆ ಮಾಡುವ ಒಬ್ಬೊಬ್ಬ ವ್ಯಕ್ತಿಯ ಮೇಲೆ ದೇಶದ ಭವಿಷ್ಯ ನಿಂತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
- ತೃಷಭ ಎನ್., ಮಾರಗೊಂಡನಹಳ್ಳಿ, ನೆಲಮಂಗಲ

ಒಂದು ಹಂತದಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯವಾಗುತ್ತದೆ. ದೇಶದ ರಕ್ಷಣೆ ಹಾಗೂ ಒಳಿತಿಗೆ ಯಾವ ಪಕ್ಷ ಸಹಕಾರ ನೀಡುತ್ತದೋ ಅದು ನಮ್ಮ ಆಯ್ಕೆಯಾಗಬೇಕು. ಒಬ್ಬ ಅಭ್ಯರ್ಥಿ ಏನು ಮಾಡುತ್ತಾನೆ ಎಂಬುದಕ್ಕಿಂತಲೂ ನಾಳೆ ಅಧಿಕಾರಕ್ಕೆ ಬರುವವರು ಯಾರು ಎಂಬ ಅಂಶ ಮುಖ್ಯವಾಗುತ್ತದೆ.
- ಧನಂಜಯ ಆರ್., ತುಮಕೂರು

ಬುದ್ಧಿವಂತ, ಆದರೆ ಸುಸಂಸ್ಕೃತ, ಸೌಜನ್ಯಶೀಲ, ಮಾನವೀಯ ಗುಣಗಳುಳ್ಳ ಅಭ್ಯರ್ಥಿಯ ಆಯ್ಕೆಯನ್ನು ನಾನು ಬಯಸುತ್ತೇನೆ. ಈ ದೇಶದ ಸೂಕ್ಷ್ಮತೆಗಳನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿ ನಮಗೆ ಅಗತ್ಯವಿದೆ.
- ಖಾದರ್ ಸಾಬ್, ಗಂಗಾವತಿ

ಯುವಕರು ತಮ್ಮತನ ಮರೆಯಬಾರದು. ಸಮಾಜದ ಅಭಿವೃದ್ಧಿಗೆ ಪೂರಕವಾದ ವಸ್ತುನಿಷ್ಠ ಚಿಂತನೆಯುಳ್ಳ ಅಭ್ಯರ್ಥಿಗಳು ಆಯ್ಕೆಯಾಗಬೇಕು. ಪಕ್ಷ ರಾಜಕಾರಣಕ್ಕಿಂತ ದೇಶದ ಭವಿಷ್ಯವೇ ಮುಖ್ಯ.
- ಸುರೇಶ್, ಕಂಬಾಳು, ನೆಲಮಂಗಲ

ನಾವು ಆಯ್ಕೆ ಮಾಡುವ ವ್ಯಕ್ತಿ ಜಾತಿ, ಮತ, ಧರ್ಮ ಇತ್ಯಾದಿ ಕಟ್ಟುಪಾಡುಗಳಿಂದ ಮುಕ್ತನಾಗಿರಬೇಕು. ಸಮರ್ಥ ನಾಯಕನೊಬ್ಬ ದೇಶದ ಚುಕ್ಕಾಣಿ ಹಿಡಿಯಬೇಕು. ಅದಕ್ಕೆ ಪೂರಕವಾದ ಆಯ್ಕೆಗಳು ನಮ್ಮಿಂದಾಗಬೇಕು.
- ಚಂದ್ರಶೇಖರ, ಓಬಳಿಹಳ್ಳಿ, ಮಧುಗಿರಿ

ತಂದೆ-ತಾಯಿ ಕಾಲದ ಪಕ್ಷನಿಷ್ಠೆ, ಹಣದಾಸೆ, ಅಜ್ಞಾನ ನಮ್ಮನ್ನು ಮತದಾನಕ್ಕೆ ಪ್ರೇರೇಪಿಸಬಾರದು. ಜನರ ಒಳಿತು ಮತದಾನದ ಮೊದಲ ಆದ್ಯತೆ. ಆದ್ದರಿಂದ ಅಭ್ಯರ್ಥಿಯೇ ಮುಖ್ಯ.
- ಗೋವರ್ಧನ ಎಸ್. ಎನ್., ಸಿರಾ

ದೇಶವನ್ನು ಮುನ್ನಡೆಸುವ ನಾಯಕನನ್ನು ಆಯ್ಕೆ ಮಾಡುವ ಅಧಿಕಾರ ನಮ್ಮ ಕೈಗೆ ಬಂದಿದೆ. ಇದು ವ್ಯರ್ಥವಾಗಕೂಡದು. ಆಮಿಷಗಳಿಗೆ ಒಳಗಾಗದೆ ನಾಡು ನುಡಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುವವರನ್ನು ಆಯ್ಕೆ ಮಾಡೋಣ. ಅಭಿವೃದ್ಧಿ ನಮ್ಮಿಂದ ಆರಂಭವಾಗಲಿ.
- ಶ್ರೀಕಾಂತ್, ರಂಭಾಪುರ, ಬಿಜಾಪುರ

ನನಗೆ ಅಭ್ಯರ್ಥಿ ಮುಖ್ಯ. ಆತನ ವ್ಯಕ್ತಿತ್ವ, ಯೋಚನೆ, ಅಭಿವೃದ್ಧಿಪರತೆ, ಮಾನವೀಯತೆ ಎಲ್ಲವೂ ಪ್ರಮುಖವಾಗುತ್ತದೆ. ಆದರೆ ಪಕ್ಷಸಿದ್ಧಾಂತಕ್ಕೆ ಜೋತು ಬಿದ್ದವರೇ ಈಗಿನ ಕಾಲದಲ್ಲಿ ಹೆಚ್ಚು. ಯುವಕರು ಯೋಚಿಸಿ ಮತ ಹಾಕಬೇಕು.
- ಬೀರಲಿಂಗಯ್ಯ

ನನಗೆ ಪಕ್ಷ ಮತ್ತು ಪಕ್ಷದ ಪ್ರಣಾಳಿಕೆಗಿಂತ ಅಭ್ಯರ್ಥಿ ಮುಖ್ಯ. ಆತನ ಜಾತಿ, ಮತ, ಪಂಗಡ, ಧರ್ಮವನ್ನು ನೋಡುವುದಿಲ್ಲ. ಅವರ ವ್ಯಕ್ತಿತ್ವದ ಪೂರ್ವಾಪರ ನೋಡಿ ಮತ ಹಾಕುತ್ತೇನೆ. ಹೊಸ ಅಭ್ಯರ್ಥಿಗೆ ಯುವ ಮತದಾರರು ಒಂದು ಅವಕಾಶ ನೀಡಬೇಕು.
- ಗಿರೀಶ ಎಸ್. ಕಲ್ಗುಡಿ, ಗುಬ್ಬಿ


ಕಾಮೆಂಟ್‌ಗಳಿಲ್ಲ: