ಶುಕ್ರವಾರ, ಮಾರ್ಚ್ 31, 2017

ವಿಶ್ವಮಾನವತೆಯ ಹಾದಿಯಲ್ಲಿ ಸಾರ್ಥಕ ಪಯಣ

(ಮಾರ್ಚ್ 14, 2017ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ)

ತುಮಕೂರಿನ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಒಂದು ನೋಟ.
ಅದು 1980ರ ದಶಕ. ಶ್ರೀ ರಾಮಕೃಷ್ಣ-ವಿವೇಕಾನಂದರ ಚಿಂತನೆಗಳನ್ನು ಯುವಜನತೆಗೆ ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದ ರಾಮಕೃಷ್ಣ ಮಿಷನ್‌ನ ಶ್ರೀ ಪುರುಷೋತ್ತಮಾನಂದಜೀಯವರು 40 ಪುಟಗಳ ಒಂದು ಸಣ್ಣ ಪುಸ್ತಕ ಬರೆದಿದ್ದರು. ಎಲ್ಲೆಲ್ಲಿ ರಾಮಕೃಷ್ಣ ಆಶ್ರಮಗಳು ಇಲ್ಲವೋ ಅಲ್ಲೆಲ್ಲ ಅವರ ವಿಚಾರಗಳನ್ನು ಪಸರಿಸುವ ಸಂಸ್ಥೆಗಳನ್ನು ಸ್ಥಾಪಿಸಲು ಯುವಕರು ಮುಂದೆ ಬರಬೇಕೆಂಬುದು ಆ ಪುಸ್ತಕದ ಒಟ್ಟಾರೆ ಆಶಯ. 'ಕರ್ನಾಟಕದ ಯುವಜನತೆಗೊಂದು ಕರೆ’ ಎಂಬ ಒಂದು ರುಪಾಯಿ ಬೆಲೆಯ ಆ ಕಿರುಹೊತ್ತಿಗೆ ನೂರಾರು ಯುವಕರನ್ನು ಬಹುವಾಗಿ ಆಕರ್ಷಿಸಿತು.

ಹೀಗೆ ಪ್ರಭಾವಕ್ಕೆ ಒಳಗಾದ ಯುವಕರಲ್ಲಿ ಆಗತಾನೇ ಮೈಸೂರು ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದು ಬಂದ ಶಂಕರರಾಮಯ್ಯ ಎಂಬ ತರುಣನೂ ಒಬ್ಬ. ತನ್ನೆದುರಿಗಿದ್ದ ಹತ್ತುಹಲವು ಆಯ್ಕೆಗಳನ್ನೆಲ್ಲ ಬದಿಗಿಟ್ಟ ಈ ಯುವಕ ವಿವೇಕಾನಂದರು ತೋರಿಸಿದ ಹಾದಿಯಲ್ಲಿ ನಡೆಯುವುದೇ ತನಗಿರುವ ಏಕೈಕ ದಾರಿ ಎಂದು ನಿರ್ಧರಿಸಿದ. ಒಂದಷ್ಟು ಸ್ನೇಹಿತರನ್ನು ಸೇರಿಸಿಕೊಂಡು ತಾನು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದ ಕುಣಿಗಲ್‌ನಲ್ಲಿ 1988ರಲ್ಲಿ 'ವಿವೇಕಾನಂದ ವಿಚಾರ ವೇದಿಕೆ’ಯನ್ನು ಆರಂಭಿಸಿಯೇಬಿಟ್ಟ.

ವೇದಿಕೆ ಸುತ್ತಮುತ್ತಲಿನ ಜನರಿಗೆ ಬಹುಬೇಗನೆ ಹತ್ತಿರವಾಯಿತು. ಅದು ಪ್ರಕಟಿಸಿದ ಸ್ವಾಮಿ ಪುರುಷೋತ್ತಮಾನಂದಜೀಯವರ 'ವಿದ್ಯಾರ್ಥಿಗೊಂದು ಪತ್ರ’ದ ಒಂದು ಲಕ್ಷ ಪ್ರತಿಗಳು ಮಾರಾಟವಾದವು. ವೇದಿಕೆಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸಿದರೆ ಹೆಚ್ಚು ಮಂದಿಗೆ ಪ್ರಯೋಜನವಾದೀತೆಂದು ಸ್ನೇಹಿತರ ಬಳಗ ಯೋಚಿಸಿತು. 1991 ಜನವರಿ 12 ವಿವೇಕಾನಂದರ ಜನ್ಮದಿನದಂದೇ ತುಮಕೂರಿನಲ್ಲಿ ವಿವೇಕಾನಂದ ವಿಚಾರ ವೇದಿಕೆಯ ಸ್ಥಾಪನೆಯಾಯಿತು. ಇದೆಲ್ಲದಕ್ಕೂ ಮೂಲಪ್ರೇರಣೆಯಾಗಿದ್ದ ಸ್ವಾಮಿ ಪುರುಷೋತ್ತಮಾನಂದರೇ ಖುದ್ದು ಆಗಮಿಸಿ ಯುವಕರ ಹೊಸ ಸಾಹಸಕ್ಕೆ ಬೆನ್ನುತಟ್ಟಿದರು.

ಆ ವೇಳೆಗಾಗಲೇ ಶಂಕರರಾಮಯ್ಯ ರಾಮಕೃಷ್ಣ-ಶಾರದಾದೇವಿ-ವಿವೇಕಾನಂದರ ಪ್ರಭಾವದಲ್ಲಿ ಬಲುದೂರ ಸಾಗಿಬಿಟ್ಟಿದ್ದ. ಲೌಕಿಕ ಜೀವನಕ್ಕಿಂತಲೂ ವೈರಾಗ್ಯದ ಬದುಕಿನತ್ತಲೇ ಹೆಚ್ಚಿನ ಒಲವು ಬೆಳೆದಿತ್ತು. ತಮ್ಮ ಜೀವನವೇನಿದ್ದರೂ ವಿವೇಕಾನಂದರ ಆದರ್ಶಗಳನ್ನು ಸಮಾಜದಲ್ಲಿ ಹರಡುವುದಕ್ಕೆ ಮೀಸಲೆಂದು ಅವರು ದೃಢನಿರ್ಧಾರ ಮಾಡಿಯಾಗಿತ್ತು. 1992 ನವೆಂಬರ್ 22ರಂದು ವಿವೇಕಾನಂದ ವೇದಿಕೆ 'ರಾಮಕೃಷ್ಣ-ವಿವೇಕಾನಂದ ಆಶ್ರಮ’ವಾಗಿ ಬದಲಾಯಿತು. ಶಂಕರರಾಮಯ್ಯ ಹಿಮಾಲಯಕ್ಕೆ ತೆರಳಿ ಸಂನ್ಯಾಸ ದೀಕ್ಷೆ ಪಡೆದು ಸ್ವಾಮಿ ವೀರೇಶಾನಂದ ಸರಸ್ವತಿಯಾಗಿ ಹಿಂತಿರುಗಿ ಆಶ್ರಮದ ನೇತೃತ್ವ ವಹಿಸಿಕೊಂಡರು. ಅವರ ಜತೆಗಿದ್ದ ಸ್ನೇಹಿತರಲ್ಲಿ ಕೆಲವರು ಕರ್ನಾಟಕದ ಬೇರೆ ಭಾಗಗಳಿಗೆ ತೆರಳಿ ಇಂತಹದೇ ಕಾರ್ಯಗಳಲ್ಲಿ ನಿರತರಾದರು.

"ತುಮಕೂರಿಗೆ ಬಂದ ಆರಂಭದಲ್ಲಿ ನಮ್ಮ ವೇದಿಕೆ ಒಂದು ಬಾಡಿಗೆ ಕಟ್ಟಡದಲ್ಲಿತ್ತು. ಆಗಿನ ಜಿಲ್ಲಾಧಿಕಾರಿ ಕೆ. ಎಚ್. ಗೋಪಾಲಕೃಷ್ಣೇಗೌಡರ ಸಹಕಾರದಿಂದ ಆಶ್ರಮಕ್ಕೆ ಸ್ವಂತ ಭೂಮಿ ಲಭಿಸಿತು. ಸಾರ್ವಜನಿಕರ ಶೌಚದ ಬಯಲೋ ಎಂಬಂತಿದ್ದ ನಿವೇಶನವನ್ನು ದೈವಸನ್ನಿಧಿಯಾಗಿ ರೂಪಿಸುವಲ್ಲಿ ಮಾಜಿ ಮಂತ್ರಿ ದಿ| ಲಕ್ಷ್ಮೀನರಸಿಂಹಯ್ಯ, ಉದ್ಯಮಿ ದಿ| ರಾಮಣ್ಣ ಮತ್ತು ಎಂಜಿನಿಯರ್ ದಿ| ಎಂ. ವಿ. ಸತ್ಯನಾರಾಯಣ ಶೆಟ್ಟಿ ಮೊದಲಾದವರ ಸೇವೆ ಮರೆಯಲಾಗದ್ದು.
 ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿ| ಅರೆಯೂರು ನರಸಿಂಹಮೂರ್ತಿ ತಮ್ಮ ಜೀವಿತದ ಅಂತ್ಯದವರೆಗೂ ಆಶ್ರಮದ ಅಭಿವೃದ್ಧಿಗೆ ಬೆಂಬಲ ನೀಡಿದರು. ಸಮಾನತೆಯ ಸಹೋದರತೆಯ ಸಮಾಜವೊಂದನ್ನು ಕಟ್ಟುವುದಕ್ಕೆ ಏನೆಲ್ಲ ಮಾಡಬಹುದೋ ಅವನ್ನೆಲ್ಲ ಆಶ್ರಮವು ರಾಮಕೃಷ್ಣ-ವಿವೇಕಾನಂದರ ಚಿಂತನೆಗಳ ನೆರಳಲ್ಲಿ ಅತ್ಯಂತ ಶ್ರದ್ಧೆಯಿಂದ ಮಾಡುತ್ತಾ ಬಂದಿದೆ. ನಾವು ಸಾಗಬೇಕಾದ ದಾರಿ ಇನ್ನೂ ಬಹುದೂರವಿದೆ" ಎನ್ನುತ್ತಾರೆ ಸ್ವಾಮಿ ವೀರೇಶಾನಂದ ಸರಸ್ವತಿಯವರು.

ಒಂದು ಸಾಮಾನ್ಯ ಚಿಂತನಾಕೂಟವಾಗಿ ಆರಂಭಗೊಂಡ ರಾಮಕೃಷ್ಣ-ವಿವೇಕಾನಂದ ಆಶ್ರಮಕ್ಕೆ ಈಗ ರಜತೋತ್ಸವದ ಸಂಭ್ರಮ. ಈ ಇಪ್ಪತ್ತೈದು ವರ್ಷಗಳ ಪಯಣದಲ್ಲಿ ಆಶ್ರಮದ ಜತೆ ಹೆಜ್ಜೆಹಾಕಿದವರು ಲಕ್ಷಾಂತರ ಮಂದಿ. ಅವರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಸಮಾಜದ ದುರ್ಬಲ ವರ್ಗಕ್ಕೆ ಸೇರಿದವರೇ ಹೆಚ್ಚು. ತನ್ನ ವಿಶಿಷ್ಟ, ವಿನೂತನ ಚಟುವಟಿಕೆಗಳಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಆಶ್ರಮ ವಿಶ್ವಮಾನವತೆಯ ತತ್ತ್ವವನ್ನು ನಿಜದರ್ಥದಲ್ಲಿ ಅನುಷ್ಠಾನಕ್ಕೆ ತಂದಿದೆ.

ರಾಮಕೃಷ್ಣ-ವಿವೇಕಾನಂದ ಆಶ್ರಮಕ್ಕೆ ಜಾತಿ-ಸಮುದಾಯಗಳ ಹಂಗಿಲ್ಲ. ಇಂತಹ ಪಂಗಡದ ಮಂದಿಗೆ ಮಾತ್ರ ಪ್ರವೇಶ ಎಂಬ ಕಟ್ಟುಪಾಡುಗಳಿಲ್ಲ. ಆಶ್ರಮದ ಸಾಧುನಿವಾಸ, ಶ್ರೀರಾಮಕೃಷ್ಣ ವಿಶ್ವಭಾವೈಕ್ಯ ಮಂದಿರಗಳಿಗೆ ಎಲ್ಲರಿಗೂ ಮುಕ್ತಪ್ರವೇಶ. ಮನುಜಮತ, ವಿಶ್ವಪಥ, ಸರ್ವೋದಯಗಳೇ ಆಶ್ರಮ ಆರಂಭದಿಂದಲೂ ನಂಬಿಕೊಂಡು ಬಂದಿರುವ ಶ್ರೇಷ್ಠ ಆದರ್ಶಗಳು. ದೀನರು ನಮ್ಮ ದೇವರಾಗಲಿ, ದಲಿತರು ನಮ್ಮ ದೇವರಾಗಲಿ, ಅಶಕ್ತರು ನಮ್ಮ ದೇವರಾಗಲಿ, ರೋಗಿಗಳು ನಮ್ಮ ದೇವರಾಗಲಿ ಎಂಬ ಸ್ವಾಮಿ ವಿವೇಕಾನಂದರ ಕರೆಯೇ ಆಶ್ರಮದ ದಾರಿದೀಪ.

"ಜಾತಿ ಕೇವಲ ಒಂದು ಸಾಮಾಜಿಕ ವ್ಯವಸ್ಥೆ; ಅದಕ್ಕೂ ಅಧ್ಯಾತ್ಮಕ್ಕೂ ಸಂಬಂಧ ಇಲ್ಲ. ಪ್ರತೀ ಜೀವಿಯೂ ದೈವೀಸ್ವರೂಪವಾದದ್ದು ಎಂಬುದನ್ನು ನಾವೆಲ್ಲ ಒಪ್ಪುವುದಾದರೆ ಜಾತಿಯ ಕಾರಣಕ್ಕೆ ಯಾವ ವ್ಯಕ್ತಿಯೂ ಯಾವುದೇ ಅವಕಾಶಗಳಿಂದಲೂ ವಂಚಿತವಾಗಬಾರದು..." ಎನ್ನುತ್ತಾರೆ ಸ್ವಾಮೀಜಿ.

ಪ್ರತೀ ವರ್ಷ ಶ್ರೀ ಶಾರದಾದೇವಿಯವರ ಜನ್ಮದಿನವೆಂದರೆ ತುಮಕೂರು ಸುತ್ತಮುತ್ತಲಿನ ಬಡ, ಅಶಕ್ತ ಮಹಿಳೆಯರಿಗೆ ಹಬ್ಬದ ದಿನವೆಂದೇ ಅರ್ಥ. ಅದಕ್ಕೆ ಕಾರಣ ಆಶ್ರಮ ಆಚರಿಸಿಕೊಂಡು ಬಂದಿರುವ 'ಜೀವಂತ ದುರ್ಗಾಪೂಜೆ’ಯ ಪರಿಕಲ್ಪನೆ. ಕೊಳೆಗೇರಿಗಳಲ್ಲಿ, ಬೀದಿಬದಿಗಳಲ್ಲಿ ವಾಸಿಸುವ ಆಶಕ್ತ, ಆಶ್ರಯಹೀನ ಮಹಿಳೆಯರನ್ನೇ ಅಂದು ಆಶ್ರಮಕ್ಕೆ ಬರಮಾಡಿಕೊಂಡು ಅವರಿಗೆ ಅನ್ನ, ವಸ್ತ್ರ, ಧಾನ್ಯ ದಾನ ಮಾಡುವುದೇ ಈ ಪೂಜೆ. ಹಸಿದವನಿಗೆ ಬೇಕಾಗಿರುವುದು ಅನ್ನವೇ ಹೊರತು ನಿಮ್ಮ ಸಿದ್ಧಾಂತಗಳಲ್ಲ ಎಂಬ ವಿವೇಕಾನಂದರ ಮಾತು ಎಷ್ಟೊಂದು ಅರ್ಥಪೂರ್ಣವಾಗಿ ಇಲ್ಲಿ ಜಾರಿಗೆ ಬಂದಿದೆ! ಕಳೆದೆರಡು ದಶಕಗಳಲ್ಲಿ ಆಶ್ರಮವು ಏನಿಲ್ಲವೆಂದರೂ ಈ ರೀತಿಯ 8,000 ಬಡ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ.

ಸಮಾಜದಲ್ಲಿ ಪರಿವರ್ತನೆ ತರಬೇಕೆಂದರೆ ಬದಲಾವಣೆ ಆರಂಭವಾಗಬೇಕಾದುದು ಶಿಕ್ಷಣದಲ್ಲಿ ಎಂಬುದು ಆಶ್ರಮದ ದೃಢನಂಬಿಕೆ. ಅದಕ್ಕಾಗಿಯೇ ಮೊದಲಿನಿಂದಲೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಅದು ತನ್ನ ಯೋಜನೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದೆ. ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪರೀಕ್ಷೆಗಳು, ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳು, ಯುವಸಮ್ಮೇಳನಗಳು ಆಶ್ರಮ ನಡೆಸಿಕೊಂಡು ಬಂದಿರುವ ಪ್ರಮುಖ ಚಟುವಟಿಕೆಗಳು.

"ಆಶ್ರಮ ಈವರೆಗೆ ಒಂದು ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕ್ರಮಗಳನ್ನು ನಡೆಸಿದೆ. ಎರಡು ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು, ಹತ್ತು ಸಾವಿರದಷ್ಟು ಶಿಕ್ಷಕರು ವ್ಯಕ್ತಿತ್ವ ನಿರ್ಮಾಣದ ಪುಸ್ತಕಗಳನ್ನು ಓದಿ ಪರೀಕ್ಷೆ ಬರೆದಿದ್ದಾರೆ. ಸುಮಾರು 100 ಯುವಸಮ್ಮೇಳನಗಳಾಗಿವೆ. ಆ ಮೂಲಕ ಒಂದು ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ನಾವು ತಲುಪಿದ್ದೇವೆ. ಶಿಕ್ಷಕರ ಸಮಾವೇಶಗಳನ್ನು ಏರ್ಪಡಿಸುವುದರ ಮೂಲಕ 50 ಸಾವಿರ ಶಿಕ್ಷಕರನ್ನು ತಲುಪಿದ್ದೇವೆ" ಎಂದು ವಿವರಿಸುತ್ತಾರೆ ಸ್ವಾಮೀಜಿ.

ಸ್ವತಃ ಒಬ್ಬ ಉತ್ತಮ ವಾಗ್ಮಿಯಾಗಿರುವ ಸ್ವಾಮೀಜಿ ಕನ್ನಡ, ಇಂಗ್ಲಿಷ್ ಹಾಗೂ ತೆಲುಗು ಭಾಷೆಗಳಲ್ಲಿ ನಿರರ್ಗಳ ಉಪನ್ಯಾಸ ನೀಡಬಲ್ಲವರು ಮತ್ತು ಸುಶ್ರಾವ್ಯವಾಗಿ ಹಾಡಬಲ್ಲವರು. ಆಶ್ರಮದ ಚಟುವಟಿಕೆಗಳ ಹೊರತಾಗಿ ಕಳೆದ 25 ವರ್ಷಗಳಲ್ಲಿ ಸುಮಾರು 10 ಲಕ್ಷಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಉಪನ್ಯಾಸಗಳನ್ನು ನೀಡಿದ್ದಾರೆ. ರಾಜ್ಯದ ಸುಮಾರು 60 ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವಚನ ನೀಡಿದ್ದಾರೆ. ದಕ್ಷಿಣ ಕೊರಿಯಾ, ಸ್ಪೇನ್, ಇಟಲಿ, ಅಮೇರಿಕದ ಪ್ರತಿಷ್ಠಿತ ವೇದಿಕೆಗಳಲ್ಲಿ ಉಪನ್ಯಾಸ ನೀಡಿ ರಾಮಕೃಷ್ಣ-ವಿವೇಕಾನಂದರ ತತ್ತ್ವಚಿಂತನೆಗಳನ್ನು ವಿದೇಶಗಳಲ್ಲೂ ಪಸರಿಸುವ ಕೆಲಸ ಮಾಡಿದ್ದಾರೆ. ಆಶ್ರಮ ’ವಿವೇಕದೀಪ್ತಿ’ ಎಂಬ ದ್ವೈಮಾಸಿಕವನ್ನೂ ಪ್ರಕಟಿಸುತ್ತಿದೆ.

ರಜತ ವರ್ಷಾಚರಣೆಯ ಅಂಗವಾಗಿ ಆಶ್ರಮವು ಇದೇ ಮಾರ್ಚ್ ೨೨ರಿಂದ ಒಂದು ವರ್ಷ ನಿರಂತರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಎರಡು ಉಪಕೇಂದ್ರಗಳನ್ನು ಸ್ಥಾಪಿಸಲು ಸಿದ್ಧತೆ ನಡೆಸುತ್ತಿದೆ. ತುಮಕೂರು ಜಿಲ್ಲೆಯ ಶಿರಾದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ವಸತಿನಿಲಯವನ್ನೂ, ರಾಮನಗರ ಜಿಲ್ಲೆಯ ಕುದೂರಿನ ಸಮೀಪದ ತೊರೆರಾಮನಹಳ್ಳಿಯಲ್ಲಿ ಒಂದು ಅಧ್ಯಾತ್ಮಿಕ ಶಿಕ್ಷಣ ಸಂಸ್ಥೆಯನ್ನೂ ತೆರೆಯುವ ಯೋಜನೆಗೆ ಸದ್ಯದಲ್ಲೇ ಚಾಲನೆ ಸಿಗಲಿದೆ.

"ಶಿರಾದಲ್ಲಿ ಸರ್ಕಾರ 4 ಎಕರೆ ಜಾಗ ಮಂಜೂರು ಮಾಡಿದೆ. ತೊರೆರಾಮನಹಳ್ಳಿಯಲ್ಲಿ ಜಗದೀಶ್ ಎಂಬವರು ತಮ್ಮ ಹೆತ್ತವರ ಗೌರವಾರ್ಥ 5 ಎಕರೆ ಭೂಮಿಯನ್ನು ದಾನ ಮಾಡಿದ್ದಾರೆ. ನಮ್ಮ ಉಪಕೇಂದ್ರಗಳನ್ನು ತೆರೆಯುವ ಮೂಲಕ ಅಲ್ಲಿನ ಗ್ರಾಮೀಣ ಯುವಕರಲ್ಲಿ ವೃತ್ತಿಕೌಶಲ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂಬುದು ನಮ್ಮ ಆಸೆ", ಎನ್ನುತ್ತಾರೆ ಸ್ವಾಮಿ ವೀರೇಶಾನಂದರು.

"ತುಮಕೂರಿನ ಶಿಕ್ಷಣ ಕ್ರಾಂತಿಯ ಹರಿಕಾರ ದಿ| ಎಚ್. ಎಂ. ಗಂಗಾಧರಯ್ಯನವರು ನನ್ನ ಮೇಲೆ ಅಪಾರ ಪ್ರಭಾವ ಬೀರಿದ ವ್ಯಕ್ತಿ. ದಲಿತ ಸಮುದಾಯದಿಂದ ಬಂದು ಕಷ್ಟಪಟ್ಟು ದುಡಿದು ಸರ್ವರ ಏಳಿಗೆಯ ಕನಸು ಕಂಡವರು ಅವರು. ಅವರು ಸ್ಥಾಪಿಸಿದ ಕುಣಿಗಲ್‌ನ ಸಿದ್ಧಾರ್ಥ ಹೈಸ್ಕೂಲಿನಲ್ಲೇ ನಾನು ವಿದ್ಯಾಭ್ಯಾಸ ಮಾಡಿದೆ. ಅವರು ನನಗೆ ಕೊಟ್ಟ ಪ್ರೋತ್ಸಾಹ, ಬೆಂಬಲ ಅಗಾಧ. ಅವರೆಂದೂ ಜಾತೀವಾದಿಯಾಗಿರಲಿಲ್ಲ. ಪ್ರತಿಭೆಯನ್ನು ಗೌರವಿಸುತ್ತಿದ್ದ ವ್ಯಕ್ತಿತ್ವ ಅವರದು" ಎನ್ನುವ ಸ್ವಾಮೀಜಿ, ತಾವು ಕಾಣುವ ಗ್ರಾಮೀಣ ಯುವಕರ ಅಭ್ಯುದಯದ ಕನಸಿಗೆ ಗಂಗಾಧರಯ್ಯನವರೇ ಮುಖ್ಯ ಪ್ರೇರಣೆ ಎಂದು ಸ್ಮರಿಸುತ್ತಾರೆ.

ಸಮಾಜಕ್ಕೆ ಸಮರ್ಪಿತ ಕುಟುಂಬ
ಒಂದೇ ಕುಟುಂಬದ ನಾಲ್ಕು ಮಂದಿ ಸಹೋದರರು ಸಂನ್ಯಾಸಿಗಳಾಗಿ ಸಮಾಜದ ಏಳ್ಗೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆಂದರೆ ನಿಮಗೆ ಆಶ್ಚರ್ಯವೆನಿಸದೆ ಇರದು. ಆದರೆ ಇದು ನಿಜ. ಸ್ವಾಮಿ ವೀರೇಶಾನಂದರ ಕುಟುಂಬವೇ ಇಂತಹದೊಂದು ವೈಶಿಷ್ಟ್ಯತೆಗೆ ಸಾಕ್ಷಿ. ಅವರ ಅಣ್ಣ ಬಿ.ಎಸ್ಸಿ. ಪದವೀಧರ ಸ್ವಾಮಿ ನಿರ್ಭಯಾನಂದರು ಗದಗ ಮತ್ತು ಬಿಜಾಪುರಗಳಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುತ್ತಿದ್ದಾರೆ. ಇನ್ನೊಬ್ಬ ಸಹೋದರ ಸ್ವಾಮಿ ಬ್ರಹ್ಮನಿಷ್ಠಾನಂದಜಿ ಚಿತ್ರದುರ್ಗದಲ್ಲಿ ಶ್ರೀ ಶಾರದಾ ರಾಮಕೃಷ್ಣಾಶ್ರಮದ ನೇತೃತ್ವ ವಹಿಸಿದ್ದಾರೆ. ಮತ್ತೊಬ್ಬ ಸಹೋದರ ಸ್ವಾಮಿ ಧೀರಾನಂದಜಿ ತುಮಕೂರಿನ ಆಶ್ರಮದಲ್ಲೇ ಇದ್ದು ಸ್ವಾಮೀಜಿಯವರ ಸೇವಾಕಾರ್ಯಗಳಲ್ಲಿ ಜತೆಯಾಗಿದ್ದಾರೆ. ತ್ಯಾಗ ಎಂದರೆ ಇದೇ ಅಲ್ಲವೇ?

ಕಾಮೆಂಟ್‌ಗಳಿಲ್ಲ: