ಶುಕ್ರವಾರ, ಮಾರ್ಚ್ 24, 2017

ಜೈಲಿನ ಬಾಗಿಲನ್ನು ಮುಚ್ಚುವ ಶಿಕ್ಷಣ ಎಲ್ಲಿದೆ?

ಮಾರ್ಚ್ 19, 2017ರ 'ಹೊಸದಿಗಂತ'ದಲ್ಲಿ ಪ್ರಕಟವಾದ ಲೇಖನ

ಬೆಂಗಳೂರಿನ ಹೈಸ್ಕೂಲ್ ವಿದ್ಯಾರ್ಥಿಯೊಬ್ಬನನ್ನು ಆತನ ಓರಗೆಯವರೇ ಇರಿದುಕೊಂದರೆಂದು ಈಚೆಗೆ ಕೇಳಿದಾಗ ವಿಕ್ಟರ್ ಹ್ಯೂಗೋನ ಮಾತು ನೆನಪಾಯಿತು: 'ಯಾರು ಒಂದು ಶಾಲೆಯನ್ನು ತೆರೆಯುತ್ತಾರೋ, ಅವರು ಒಂದು ಜೈಲಿನ ಬಾಗಿಲನ್ನು ಮುಚ್ಚುತ್ತಾರೆ’. ಹ್ಯೂಗೋ ಹೇಳಿದ ಆದರ್ಶ ಮತ್ತು ವಾಸ್ತವದ ವಿಪರ್ಯಾಸಗಳ ನಡುವೆ ಒಂದು ವಿಷಾದದ ನಿಟ್ಟುಸಿರಿನ ಹೊರತು ಬೇರೇನಕ್ಕೆ ಅವಕಾಶ ಇದೆ?

ವಿಶ್ವದ ದಾರ್ಶನಿಕರೆಲ್ಲ ಶಿಕ್ಷಣದ ಬಗ್ಗೆ ಕಂಡ ಕನಸು ಇಂತಹದ್ದೇ. ವ್ಯಕ್ತಿತ್ವ ನಿರ್ಮಾಣ ಮತ್ತು ರಾಷ್ಟ್ರನಿರ್ಮಾಣವೇ ಶಿಕ್ಷಣದ ಪರಮಗುರಿ ಎಂದರು ಸ್ವಾಮಿ ವಿವೇಕಾನಂದರು. ಚಾರಿತ್ರ್ಯ ನಿರ್ಮಾಣ ಮಾಡದ ಶಿಕ್ಷಣ ಅರ್ಥಹೀನ ಎಂದರು ಗಾಂಧೀಜಿ. ವರ್ತಮಾನದ ನಮ್ಮ ಶಿಕ್ಷಣದ ಪರಿಸ್ಥಿತಿಯನ್ನು ನೋಡಿದಾಗೆಲ್ಲ ಈ ಪುಣ್ಯಾತ್ಮರ ಮಾತುಗಳೆಲ್ಲ ಪುಸ್ತಕಗಳಲ್ಲೇ ಉಳಿದುಹೋದವೇ ಎಂದು ಮನಸ್ಸು ವ್ಯಾಕುಲಗೊಳ್ಳುತ್ತದೆ. ನಾವು ಮತ್ತೆ ಹಳೆಶಿಲಾಯುಗದತ್ತ ನಡೆಯುತ್ತಿದ್ದೇವೆಯೇ?
ಯಲಹಂಕದ ಘಟನೆ ನಾವು ದಿನನಿತ್ಯ ಕೇಳುವ ಸುದ್ದಿಗಳ ಪೈಕಿ ಒಂದು ಮಾತ್ರ. ದಿನಬೆಳಗಾದರೆ ಇದೇ ಬಗೆಯ ಒಂದಲ್ಲ ಒಂದು ವಾರ್ತೆಗಳು ನಮ್ಮ ಕಿವಿಗೆ ಬೇಡವೆಂದರೂ ಬೀಳುತ್ತವೆ. ಇವೆಲ್ಲ ನಮ್ಮ ಶಿಕ್ಷಣ ಪದ್ಧತಿಯ ಪುನರವಲೋಕನದ ಅವಶ್ಯಕತೆಯನ್ನು ಒತ್ತಿಹೇಳುತ್ತಿಲ್ಲವೇ? ಶಿಕ್ಷಣ ಮನುಷ್ಯನನ್ನು ಮೃಗೀಯತೆಯಿಂದ ಮಾನವತ್ವದ ಕಡೆಗೂ, ಅಲ್ಲಿಂದ ದೈವತ್ವದ ಕಡೆಗೂ ಏರಿಸುವ ಸಾಧನ ಮತ್ತು ವಿಧಾನ ಎಂದಿದ್ದರು ಕುವೆಂಪು. ಅಂತಹದೊಂದು ಪ್ರಕ್ರಿಯೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿ ನಡೆಯುತ್ತಿದೆ ಎಂದು ಅನಿಸುತ್ತಿದೆಯೇ?

ಆಧುನಿಕತೆಯಲ್ಲಿ ನಾವು ಬಹುದೂರ ಸಾಗಿಬಂದಿದ್ದೇವೆ. ದಿನೇದಿನೇ ಬದುಕಿಗೆ ಹೊಸ ಆಯಾಮಗಳು ಸೇರಿಕೊಳ್ಳುತ್ತಿವೆ. ಔದ್ಯೋಗಿಕ ಜಗತ್ತು ವಿಸ್ತಾರಗೊಳ್ಳುತ್ತಿದೆ. ಇದಕ್ಕೆಲ್ಲ ಪೂರಕವಾದ ಶಿಕ್ಷಣ ಪದ್ಧತಿಯನ್ನು ರೂಪಿಸಿಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ನಾವೆಲ್ಲ ಇದ್ದೇವೆಯೇ ಹೊರತು ಇಂತಹ ಆಧುನಿಕತೆಯ ನಡುವೆಯೂ ಹೃದಯವಂತಿಕೆಯನ್ನು ಪೋಷಿಸಬಲ್ಲ, ಮನುಷ್ಯರಾಗಿ ಬಾಳಬಲ್ಲ ಬುದ್ಧಿಭಾವಗಳನ್ನು ಅರಳಿಸುವ ಶಿಕ್ಷಣವೊಂದನ್ನು ನಮ್ಮ ಮಕ್ಕಳಿಗೆ ನೀಡುತ್ತಿದ್ದೇವೆಯೇ ಎಂಬ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ.

ಆಧುನಿಕ ಜಗತ್ತು ನಿರೀಕ್ಷಿಸುವ ಶ್ರೇಷ್ಠ ವಿಜ್ಞಾನಿಗಳು, ಎಂಜಿನಿಯರ್‌ಗಳು, ವಕೀಲರು, ನ್ಯಾಯಾಧೀಶರು, ವೈದ್ಯರು, ಉದ್ಯಮಿಗಳನ್ನು ನಾವು ಕೊಡಬೇಕಾಗಿದೆ ನಿಜ. ಆದರೆ ಈ ’ಶ್ರೇಷ್ಠತೆ’ ಎಲ್ಲಿಂದ ಬರುತ್ತದೆ? ಇವರು ತಿಂಗಳಿಗೆ ಎಷ್ಟು ಲಕ್ಷ ಸಂಬಳ ಪಡೆಯುತ್ತಾರೆ, ಎಂತಹ ಕಾರುಗಳಲ್ಲಿ ಓಡಾಡುತ್ತಾರೆ, ಯಾವಯಾವ ದೇಶಗಳನ್ನು ಸುತ್ತಾಡುತ್ತಾರೆ ಎಂಬುದರಿಂದಲೇ?  ಲಕ್ಷ ಸಂಬಳ ಪಡೆಯುವವರಲ್ಲಿ ಎಷ್ಟು ಮಂದಿ ವೃದ್ಧಾಪ್ಯದಲ್ಲಿರುವ ತಮ್ಮ ತಂದೆತಾಯಿಗಳನ್ನು ತಮ್ಮೊಂದಿಗೇ ಇರಿಸಿಕೊಂಡು ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ? ಇನ್ನೆಷ್ಟು ಮಂದಿ ಹೈಟೆಕ್ ಗಂಡಹೆಂಡಿರು ಪರಸ್ಪರ ನಂಬಿಕೆಯ, ಸಮನ್ವಯದ ಜೀವನ ನಡೆಸುತ್ತಿದ್ದಾರೆ? ಸೂರ್ಯೋದಯ ಸೂರ್ಯಾಸ್ತಗಳಂತಹ ಪ್ರತಿದಿನದ ಖುಷಿಗಳನ್ನು ಕಣ್ತುಂಬಿಕೊಳ್ಳಲಾಗದ, ದಿನಕ್ಕೊಮ್ಮೆ ಮನಸಾರೆ ನಕ್ಕು ಹಗುರವಾಗಲು ಸಾಧ್ಯವಾಗದ ಇವರ ಸಾಧನೆಗಳು ಇದ್ದರೆಷ್ಟು ಬಿಟ್ಟರೆಷ್ಟು?

'ಹೃದಯವನ್ನು ಶಿಕ್ಷಿತಗೊಳಿಸದೆ ಕೇವಲ ಮನಸ್ಸಿಗೆ ಶಿಕ್ಷಣ ನೀಡುವುದು ವಾಸ್ತವವಾಗಿ ಶಿಕ್ಷಣವೇ ಅಲ್ಲ’ ಎಂದು ಮೂರು ಸಾವಿರ ವರ್ಷಗಳ ಹಿಂದೆ ಹೇಳಿದ್ದ ಅರಿಸ್ಟಾಟಲ್. ’ಅತ್ಯುನ್ನತವಾದ ಶಿಕ್ಷಣವೆಂದರೆ ಕೇವಲ ಮಾಹಿತಿ ನೀಡುವುದಲ್ಲ, ನಮ್ಮ ಬದುಕನ್ನು ಸುತ್ತಲಿನ ಪ್ರತೀ ಅಸ್ತಿತ್ವದೊಂದಿಗೂ ಸಮರಸದಿಂದ ಇರುವಂತೆ ಮಾಡುವುದು’ ಎಂದರು ರವೀಂದ್ರನಾಥ ಠ್ಯಾಗೋರ್. ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಹಂತದವರೆಗಿನ ನಮ್ಮ ಒಟ್ಟಾರೆ ಶಿಕ್ಷಣ ವ್ಯವಸ್ಥೆಯನ್ನು ನೋಡಿದಾಗ ಇಂತಹ ಉನ್ನತ ಆದರ್ಶಗಳ ಸಣ್ಣದೊಂದು ಪಾಲಾದರೂ ಅನುಷ್ಠಾನಕ್ಕೆ ಬಂದಿದೆ ಎಂದು ಅನಿಸುತ್ತದೆಯೇ?

ನಾವಿಂದು ತುಂಬ ಕಾಳಜಿ ವಹಿಸಬೇಕಿರುವುದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣದ ಬಗೆಗೇ. ಈ ಹಂತದಲ್ಲಿ ಮಕ್ಕಳಿಗೆ ಏನನ್ನು ಕಲಿಸಲಾಗುತ್ತದೆಯೋ ಅದೇ ಅವರ ಭವಿಷ್ಯವನ್ನು ನಿರ್ಧರಿಸುತ್ತದೆ. ಆ ವಯಸ್ಸಿನ ಮಕ್ಕಳ ಮನಸ್ಸು ಇನ್ನೂ ಹಸಿಯಾಗಿರುವ ಆವೆಮಣ್ಣಿನಂತೆ. ಅದಕ್ಕೆ ಯಾವ ಆಕಾರವನ್ನಾದರೂ ಕೊಡಬಹುದು. ಪ್ರಯತ್ನಿಸಿದರೆ ದೇವರ ವಿಗ್ರಹ ತಯಾರಾದೀತು, ನಿರ್ಲಕ್ಷಿಸಿದರೆ ಹಿತ್ತಲಿನ ತಿಪ್ಪೆಯಾದೀತು. ಆಯ್ಕೆ ಶಿಕ್ಷಕನಿಗೆ ಬಿಟ್ಟದ್ದು. ಜಗತ್ತಿನ ಅತ್ಯಂತ ಪ್ರಭಾವೀ ವ್ಯಕ್ತಿ ಅಮೇರಿಕದ ಅಧ್ಯಕ್ಷನೂ ಅಲ್ಲ, ಇಂಗ್ಲೆಂಡಿನ ರಾಣಿಯೂ ಅಲ್ಲ, ನಮ್ಮ ಪ್ರಾಥಮಿಕ ಶಾಲೆಯ ಮೇಸ್ಟ್ರು. ಆತ ಮನಸ್ಸು ಮಾಡಿದರೆ ಒಬ್ಬೊಬ್ಬ ಶಿಷ್ಯನನ್ನೂ ಸಮಾಜಕ್ಕೆ ಶ್ರೇಷ್ಠ ಕೊಡುಗೆಯಾಗಿ ನೀಡಬಲ್ಲ. ಪ್ರಾಥಮಿಕ ಶಾಲೆಯ ನಾಲ್ಕೈದು ವರ್ಷಗಳೇ ಯಾವುದೇ ವ್ಯಕ್ತಿಯ ಬದುಕಿನ ಸುವರ್ಣಕಾಲ.

ದುರದೃಷ್ಟವಶಾತ್, ದಿನೇದಿನೇ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆಯೇ ಹೊರತು ಆಶಾವಾದದ ಕಿಟಕಿಗಳು ತೆರೆಯುತ್ತಿಲ್ಲ. ಪಠ್ಯಕ್ರಮ, ಬೋಧನಾ ವಿಧಾನ, ಶಿಕ್ಷಕ-ವಿದ್ಯಾರ್ಥಿ ಸಂಬಂಧ, ಬೋಧನಾ ಗುಣಮಟ್ಟ, ಮೂಲಭೂತ ಸೌಕರ್ಯ, ಪಠ್ಯಪರಿಕರ, ಶಾಲಾಪರಿಸರ- ಒಂದೊಂದನ್ನು ಗಮನಿಸಿದರೂ ನಿರಾಶೆಯೇ ಕಾಡುತ್ತದೆ. ಪ್ರಾಥಮಿಕ ಶಿಕ್ಷಣಕ್ಕೆ ಪ್ರಥಮೋಪಚಾರವಾಗಬೇಕೆಂದು ಶಿವರಾಮ ಕಾರಂತರಾದಿಯಾಗಿ ನೂರಾರು ಪ್ರಾಜ್ಞರು ಹೇಳುತ್ತಲೇ ಬಂದಿದ್ದಾರೆ. ಪರಿಸ್ಥಿತಿ ಮಾತ್ರ ಹಾಗೆಯೇ ಇದೆ, ಅಥವಾ ಇನ್ನೂ ಚಿಂತಾಜನಕವಾಗಿದೆ.

ಮಳೆಗಾಲದಲ್ಲಿ ಸೊರ್ರೆಂದು ಸೋರುವ ಹುಲ್ಲಿನ ಮೇಲ್ಛಾವಣಿಯ, ಸೆಗಣಿ ಸಾರಿಸಿದ ನೆಲದ, ಇಪ್ಪತ್ತು-ಮೂವತ್ತಡಿಯ ಪರ್ಣಕುಟಿಯಲ್ಲೇ ನಮಗೆಲ್ಲ ಪ್ರಾಥಮಿಕ ಶಿಕ್ಷಣ ದೊರೆತದ್ದು. ಅದಕ್ಕೂ ಕನಿಷ್ಟ ಎರಡು ಮೂರು ಮೈಲಿ ನಡೆಯುವ ಅನಿವಾರ್ಯತೆಯಿತ್ತು. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರೇ ಎಲ್ಲ ತರಗತಿಗಳನ್ನೂ ನಿಭಾಯಿಸುತ್ತಿದ್ದರು. ಅಲ್ಲಿ ನಾವು ಕೇಳದ ಕಥೆಗಳಿಲ್ಲ, ಆಡದ ಆಟಗಳಿಲ್ಲ. ಅಕ್ಕಪಕ್ಕದಲ್ಲಿ ಕುಳಿತಿದ್ದ ಗೆಳೆಯ ಗೆಳತಿಯರ ಜಾತಿ-ಮತ-ಪಂಥಗಳೆಲ್ಲ ಯಾವುದೆಂದು ಅಂದೂ ತಿಳಿದಿರಲಿಲ್ಲ, ಇಂದಿಗೂ ನೆನಪಿಲ್ಲ. ಎರಡೇ ಪ್ರತಿ ಬಟ್ಟೆಗಳಲ್ಲಿ ವರ್ಷಗಳೇ ಕಳೆದುಹೋಗುತ್ತಿದ್ದವು. ಅಲ್ಯುಮಿನಿಯಂ ಡಬ್ಬಗಳಲ್ಲಿ ಕಟ್ಟಿಕೊಂಡು ಹೋದ ತಂಗಳೇ ಮಧ್ಯಾಹ್ನಕ್ಕೆ ಮೃಷ್ಟಾನ್ನ ಭೋಜನವಾಗಿತ್ತು. ನಮಗಿಂತ ಮುಂದಿನ ಕ್ಲಾಸುಗಳಲ್ಲಿದ್ದ ಗೆಳೆಯರ ಹಳೇ ಪುಸ್ತಕಗಳನ್ನು ಅರ್ಧಬೆಲೆಗೆ ಕೊಳ್ಳುವುದಕ್ಕೆ ವರ್ಷದ ಮೊದಲೇ ಬುಕ್ ಮಾಡುತ್ತಿದ್ದೆವು.

ಇಂದು ಊರಿಗೊಂದು 'ಇಂಟರ್‌ನ್ಯಾಶನಲ್’ ಶಾಲೆ ಬಂದಿದೆ. ಮನೆಬಾಗಿಲಿಗೇ ಶಾಲಾವಾಹನ ಬರುತ್ತದೆ. ಮಕ್ಕಳು ಚೆಂದದ ಸೂಟುಬೂಟು ಧರಿಸಿ ಸಾವಿರಾರು ರುಪಾಯಿ ಮೌಲ್ಯದ ಫಳಫಳ ಹೊಳೆಯುವ ಪುಸ್ತಕಗಳನ್ನು ಹೊತ್ತುಕೊಂಡು ಓಡಾಡುತ್ತಾರೆ. ನಾವು ಸ್ಲೇಟು-ಬಳಪ ಹಿಡಿಯುತ್ತಿದ್ದ ಕೈಗಳಲ್ಲಿ ಈ ಮಕ್ಕಳು ಟ್ಯಾಬು ಮೊಬೈಲು ಹಿಡಿದು ಇಂಟರ್ನೆಟ್ ಜಾಲಾಡುತ್ತಿದ್ದಾರೆ. 'ಚಂದಿರನೇತಕೆ ಓಡುವನಮ್ಮ?’ ಎಂದು ಕೇಳಬೇಕಿದ್ದ ಮಕ್ಕಳು 'ಅಮ್ಮ ಲೂಸಾ ಅಪ್ಪ ಲೂಸಾ?’ ಎಂದು ಕೇಳುತ್ತಿದ್ದಾರೆ.

'ಅಹಿಂಸೆಯಂತಹ ಒಂದು ಮೌಲ್ಯವನ್ನು ಎತ್ತಿಹಿಡಿದ ನಮ್ಮ ಚಿಂತನೆಯನ್ನು ಯಾವುದೋ ಒಂದು ಆಧುನಿಕ ಅಲೆ ಹೊಡೆದುಕೊಂಡು ಹೋಗದಂತೆ ನಮ್ಮ ಶಿಕ್ಷಣ ಕಾಯಬೇಕು. ಇಲ್ಲದೆ ಹೋದರೆ ಕ್ರಮೇಣ ಇಡೀ ಭೂಮಿಯೇ ಹಿಟ್ಲರ್‌ನ ಭೂಮಿಯಾಗಿ ಪರಿಣಮಿಸುತ್ತದೆ’ ಎಂದು ಎಚ್ಚರಿಸುತ್ತಾರೆ ಜಿ. ಎಸ್. ಜಯದೇವ. ಮಕ್ಕಳಲ್ಲಿ ಶ್ರೇಷ್ಠ ಮೌಲ್ಯಗಳನ್ನು ಬಿತ್ತುವ ಹೊಣೆಗಾರಿಕೆ ಎಲ್ಲ ಹಂತಗಳ ಅಧ್ಯಾಪಕರಲ್ಲೂ ಇದೆ, ಆದರೆ ಅದರ ತಳಹದಿಯನ್ನು ರೂಪಿಸುವವರು ಪ್ರಾಥಮಿಕ ಶಾಲಾ ಶಿಕ್ಷಕರೇ. ಅಲ್ಲಿ ತಪ್ಪಿದ್ದನ್ನು ಮುಂದಿನ ಹಂತಗಳಲ್ಲಿ ತಿದ್ದುವುದು ತುಂಬ ಕಷ್ಟ. ನಮ್ಮ ಇಂಟರ್‌ನ್ಯಾಶನಲ್ ಸ್ಕೂಲುಗಳಾಗಲೀ, ಸರ್ಕಾರಿ ಶಾಲೆಗಳಾಗಲೀ ಈ ಜವಾಬ್ದಾರಿಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿವೆ?

ಮಕ್ಕಳನ್ನು 'ಸ್ಮಾರ್ಟ್’ ಮಾಡುವುದೇ ತಮ್ಮ ಏಕೈಕ ಧ್ಯೇಯವಾಗಿಸಿಕೊಂಡಿರುವ ಕಾರ್ಪೋರೇಟ್ ಶಾಲೆಗಳೆಂಬ ದುಡ್ಡಿನ ಟಂಕಸಾಲೆಗಳು, ಯಾರನ್ನೂ ಯಾವ ಕ್ಲಾಸಿನಲ್ಲೂ ಫೇಲ್ ಮಾಡಬಾರದು ಎಂದಷ್ಟೇ ಭಾವಿಸಿರುವ ಅಳಿವು ಉಳಿವಿನ ಹೋರಾಟದಲ್ಲಿರುವ ಸರ್ಕಾರಿ ಶಾಲೆಗಳು- ಇವೆರಡರ ನಡುವೆ ಅಂತಹ ದೊಡ್ಡ ವ್ಯತ್ಯಾಸವೇನೂ ಕಾಣುವುದಿಲ್ಲ. ಮಕ್ಕಳಿಗೆ ಒಳ್ಳೆಯ ಭಾಷೆ ಕಲಿಸಬೇಕು, ಮೌಲ್ಯಗಳನ್ನು ಬಿತ್ತಬೇಕು, ಭವಿಷ್ಯದ ಬಗ್ಗೆ ಆಶಾವಾದ ಬೆಳೆಸಬೇಕು ಎಂಬ ನೈಜ ಕಾಳಜಿ ಎಷ್ಟು ಶಾಲೆಗಳಿಗಿದೆ, ಎಷ್ಟು ಮಂದಿ ಅಧ್ಯಾಪಕರಿಗಿದೆ? ಇಂತಹವರು ಇಲ್ಲವೇ ಇಲ್ಲ ಎಂದಲ್ಲ. ತಮ್ಮ ವಿದ್ಯಾರ್ಥಿಗಳ ಬಗ್ಗೆ ಅಪಾರ ಪ್ರೀತಿ, ಅವರ ಭವಿಷ್ಯ ಬಗ್ಗೆ ಹೇರಳ ಕಾಳಜಿಯಿರುವ ಗುರುಗಳೂ ಒಂದಷ್ಟು ಮಂದಿ ಸಿಗುತ್ತಾರೆ. ಆದರೆ ಅವರೆಲ್ಲ ಬೆತ್ತಲೆ ಬದುಕುವವರ ಊರಲ್ಲಿ ವಸ್ತ್ರದ ವ್ಯಾಪಾರಿಗಳಂತೆ ಆಗಿಬಿಟ್ಟಿದ್ದಾರೆ.

ಶಾಲೆಗಳಲ್ಲಿ ಯೋಗ ಶಿಕ್ಷಣ, ನೈತಿಕ ಶಿಕ್ಷಣ ಬೇಕೆಂಬ ಒತ್ತಾಯ ಕೇಳಿ ಬಂದಾಗಲೆಲ್ಲ ಅದು ವಿವಾದದ ವಿಷಯವೇ ಆಗುತ್ತದೆ. ಶೈಕ್ಷಣಿಕ ವಿಷಯಕ್ಕಿಂತಲೂ ಅದನ್ನೊಂದು ರಾಜಕೀಯ ವಿಷಯವನ್ನಾಗಿ ನೋಡುವವರೇ ಹೆಚ್ಚು. ರಾಮಾಯಣ-ಮಹಾಭಾರತಗಳಂತಹ ಮಹಾಕಾವ್ಯಗಳು ಕಟ್ಟಿಕೊಡುವ ಮೌಲ್ಯಗಳು ಮಕ್ಕಳನ್ನು ಮತಾಂಧರನ್ನಾಗಿಯೋ ಮಾನವವಿರೋಧಿಗಳನ್ನಾಗಿಯೋ ಮಾಡುತ್ತವೆಂದು ಅದು ಹೇಗೆ ವಾದಗಳು ಹುಟ್ಟಿಕೊಳ್ಳುತ್ತವೆಯೋ ಅರ್ಥವಾಗುವುದಿಲ್ಲ. ಸರ್ಕಾರಗಳು ಬದಲಾದಂತೆ ಪಠ್ಯಪುಸ್ತಕಗಳೂ ಬದಲಾಗುವ ದಯನೀಯ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ಭಾರತವನ್ನು ದಾಸ್ಯದಲ್ಲೇ ಮುಂದುವರಿಸಬೇಕೆಂದರೆ ಅದರ ಶಿಕ್ಷಣ ಪದ್ಧತಿಯನ್ನು ಬದಲಾಯಿಸಬೇಕೆಂದು ಶಿಫಾರಸು ಮಾಡಿದನಂತೆ ಮೆಕಾಲೆ. ಪಠ್ಯಪುಸ್ತಕಗಳನ್ನೂ ಸಿದ್ಧಾಂತದ ಕನ್ನಡಕಗಳಿಂದ ನೋಡಿ ತಮ್ಮ ಮೂಗಿನ ನೇರಕ್ಕೆ ಬದಲಾಯಿಸುವವರೂ ಅದೇ ಮೆಕಾಲೆಯ ಮೊಮ್ಮಕ್ಕಳೇ ಅಲ್ಲವೇ?

ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಹುಡುಗಿಯೊಬ್ಬಳ ಗೆಳೆತನದ ವಿಷಯದಲ್ಲಿ ಸಹಪಾಠಿಗಳ ನಡುವೆ ಇದ್ದ ವೈಷಮ್ಯವೇ ಯಲಹಂಕದ ಘಟನೆಗೆ ಕಾರಣ. ಪ್ರೌಢಶಾಲಾ ಹಂತದಲ್ಲೇ ನಮ್ಮ ಹುಡುಗರು ಪ್ರೀತಿ-ಪ್ರೇಮದಂತಹ ವಿಚಾರಗಳತ್ತ ಮನಸ್ಸು ಹರಿಸಿ ಅಪ್ರಬುದ್ಧ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆಂದರೆ ಅವರಲ್ಲಿ ಸದ್ಬುದ್ಧಿಯನ್ನೂ ಸದಭಿರುಚಿಯನ್ನೂ ಮೂಡಿಸುವುದಕ್ಕೆ ನಮ್ಮ ಶಿಕ್ಷಣ ಪದ್ಧತಿ ವಿಫಲವಾಗಿದೆಯೆಂದೇ ಅರ್ಥ.

ಒಂದೆಡೆ ಜಾಗತೀಕರಣದ ಸಮಾಜ ಬಯಸುವ ಸಿದ್ಧಸರಕುಗಳನ್ನು ಉತ್ಪಾದಿಸಿಕೊಡುವ ಶಾಲಾ ಕಾರ್ಖಾನೆಗಳು, ಇನ್ನೊಂದೆಡೆ ಮಕ್ಕಳ ಮನಸ್ಸು ಅರಳಿಸದ, ನೈತಿಕತೆ, ಪ್ರಾಮಾಣಿಕತೆ, ಮೌಲ್ಯಚಿಂತನೆಗಳನ್ನು ಉದ್ದೀಪಿಸದ ಶಿಕ್ಷಣ ಪದ್ಧತಿ- ಇವೆರಡು ಅಂಚುಗಳ ನಡುವೆ ನಾವು ದಿಗ್ಮೂಢರಾಗಿ ನಡೆಯುತ್ತಿದ್ದೇವೆ. ಇಂತಹ ನಿರಾಶಾವಾದ ಒಳ್ಳೆಯದಲ್ಲ ನಿಜ. ಆದರೆ ಬೆಳಕಿನ ದಾರಿ ಎಲ್ಲಿದೆ?

ಕಾಮೆಂಟ್‌ಗಳಿಲ್ಲ: