ಶುಕ್ರವಾರ, ಜುಲೈ 10, 2015

ಐಎಎಸ್‍ನಲ್ಲಿ ಕನ್ನಡಿಗರ ಹೊಸ ಪರ್ವ

ಜುಲೈ 10, 2015ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ

ಕನ್ನಡಿಗರು ಮತ್ತೊಂದು ಮಿಥ್ಯೆಯನ್ನು ಭೇದಿಸಿದ್ದಾರೆ. ಯಾವುದನ್ನು ತಮ್ಮ ‘ಕಪ್ ಆಫ್ ಟೀ’ ಅಲ್ಲವೆಂದು ಭಾವಿಸಿದ್ದರೋ, ಅದನ್ನೇ ಅವರೀಗ ತಮ್ಮ ಸಾಧನೆಯ ಅಂಗಳವಾಗಿಸಿಕೊಂಡಿದ್ದಾರೆ. ಅಶ್ವಮೇಧದ ಕುದುರೆಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ.

ನಾಗರಿಕ ಸೇವಾ ಪರೀಕ್ಷೆಗಳಲ್ಲಿನ ಯಶಸ್ಸು ತೀರಾ ಇತ್ತೀಚಿನವರೆಗೂ ಕನ್ನಡಿಗರಿಗೆ ಕನ್ನಡಿಯ ಗಂಟೇ ಆಗಿತ್ತು. ನಮ್ಮ ಸುತ್ತಮುತ್ತಲಿನ ರಾಜ್ಯಗಳ ಯುವಕ ಯುವತಿಯರು ಪ್ರತಿವರ್ಷ ರಾಶಿರಾಶಿ ಐಎಎಸ್, ಐಪಿಎಸ್ ರ್ಯಾಂಕುಗಳನ್ನು ಬಾಚಿಕೊಳ್ಳುತ್ತಿದ್ದರೆ ನಾವು ವಿಸ್ಮಯದಿಂದ ಮತ್ತು ನಿರಾಸೆಯಿಂದ ನಿಂತು ಅವರನ್ನು ನೋಡುವ ಪರಿಸ್ಥಿತಿಯಿತ್ತು.

ಕಾಲ ಬದಲಾಗಲೇಬೇಕು; ಬದಲಾಗಿದೆ. ಕಳೆದ ಹತ್ತು ವರ್ಷಗಳಿಂದ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಕನ್ನಡಿಗರು ಇಟ್ಟಿರುವ ಹೆಜ್ಜೆಯ ದಿಕ್ಕು ಬದಲಾಗಿದೆ. ಅದಕ್ಕಿಂತ ಮೊದಲು ವರ್ಷಕ್ಕೆ ಒಂದಿಬ್ಬರು ಕನ್ನಡಿಗರು ಐಎಎಸ್ ಸಾಧನೆ ಮಾಡಿದರೂ ಅಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವ ಸನ್ನಿವೇಶ ಇತ್ತು. ನಿಧಾನವಾಗಿ ನಮ್ಮ ಪರಿಸ್ಥಿತಿ ಸುಧಾರಿಸತೊಡಗಿತು. 2005ರಲ್ಲಿ 23 ಮಂದಿ ಕನ್ನಡಿಗರು ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದರು. 2009ರಲ್ಲಿ 16 ಮಂದಿ, 2010ರಲ್ಲಿ 23 ಮಂದಿ, 2011ರಲ್ಲಿ ಬರೋಬ್ಬರಿ 65 ಮಂದಿ ಐಎಎಸ್ ಸಾಧನೆ ಮಾಡಿದರು. ಈ ಸಂಖ್ಯೆಗೆ ಹೋಲಿಸಿದರೆ ಕಳೆದೆರಡು ವರ್ಷಗಳ ಫಲಿತಾಂಶ ಕೊಂಚ ಇಳಿಮುಖವಾದಂತೆ ಕಂಡರೂ ಅದು ತಾತ್ಕಾಲಿಕ ಎಂಬುದನ್ನು ಈ ವರ್ಷದ ಫಲಿತಾಂಶ ದೃಢಪಡಿಸಿದೆ. 2012ರಲ್ಲಿ 25 ಮಂದಿ, 2013ರ ಪರೀಕ್ಷೆಯಲ್ಲಿ 45 ಮಂದಿ ಯಶಸ್ಸು ಕಂಡಿದ್ದರು. ಈ ವರ್ಷ ಮತ್ತೆ ಆತ್ಮವಿಶ್ವಾಸ ಗರಿಗೆದರಿದೆ. ಒಟ್ಟು 61 ಮಂದಿ ರ್ಯಾಂಕ್ ಗಳಿಸಿರುವುದು ನೋಡಿ ಇಡೀ ರಾಜ್ಯವೇ ಸಂಭ್ರಮಿಸಿದೆ.

2011ರ ಸಂಖ್ಯೆಗೆ ಹೋಲಿಸಿದರೆ ಇದು ಕೊಂಚ ಕಡಿಮೆ ಅನಿಸಿದರೂ, ಗುಣಾತ್ಮಕವಾಗಿ ನೋಡಿದರೆ ಈ ವರ್ಷದ್ದೇ ಕನ್ನಡಿಗರ ಶ್ರೇಷ್ಠ ಸಾಧನೆ. ಒಟ್ಟಾರೆ 65 ರ್ಯಾಂಕ್ ಗಳಿಸಿದ್ದರೂ ಮೊದಲ 25 ರ್ಯಾಂಕುಗಳ ಪೈಕಿ ನಮ್ಮದು ಒಂದೂ ಇರಲಿಲ್ಲ. ಆದರೆ ಈ ವರ್ಷ ಟಾಪ್-50 ರ್ಯಾಂಕುಗಳಲ್ಲಿ ನಮ್ಮವರು ನಾಲ್ಕು ರ್ಯಾಂಕುಗಳನ್ನು ಬಾಚಿಕೊಂಡಿದ್ದಾರೆ. ಅದರಲ್ಲೂ ಕನ್ನಡಿಗರು ಮೊದಲ ಹತ್ತರ ಪಟ್ಟಿಯಲ್ಲಿ ಕಾಣಿಸಿಕೊಳ್ಳದೆ ಒಂದು ದಶಕವೇ ಕಳೆಯಿತು. ಈ ವರ್ಷ ಆ ಆಸೆಯೂ ಈಡೇರಿದೆ. ಉಡುಪಿಯ ನಿತೀಶ್ ಕೆ. 8ನೇ ರ್ಯಾಂಕ್ ಗಳಿಸಿಬಿಟ್ಟಿದ್ದಾರೆ. ಬೆಂಗಳೂರಿನ ಫೌಸಿಯಾ ತರನಮ್-31, ಕೊರಟಗೆರೆಯ ಡಿ. ಕೆ. ಬಾಲಾಜಿ-36 ಹಾಗೂ ಬೆಂಗಳೂರಿನ ಎಂ. ಎಸ್. ಪ್ರಶಾಂತ್ 47ನೇ ರ್ಯಾಂಕ್ ಗಳಿಸಿ ಎಲ್ಲರೂ ಹೆಮ್ಮೆಪಡುವಂತೆ ಮಾಡಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರ ಇಂದಿಗೂ ಅತಿಹೆಚ್ಚು ಐಎಎಸ್ ಅಧಿಕಾರಿಗಳನ್ನು ಕೊಡುವ ರಾಜ್ಯಗಳಾಗಿವೆ. ಉಳಿದಂತೆ ತಮಿಳುನಾಡು, ಆಂಧ್ರ ಪ್ರದೇಶ, ದೆಹಲಿ, ರಾಜಸ್ತಾನ, ಪಂಜಾಬ್, ಮಹಾರಾಷ್ಟ್ರ, ಹರ್ಯಾಣ ಮತ್ತು ಮಧ್ಯಪ್ರದೇಶ ಟಾಪ್-10 ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಂಡಿವೆ. ನಮ್ಮ ನೆರೆಯ ರಾಜ್ಯಗಳೆಲ್ಲ ಈ ಪಟ್ಟಿಯಲ್ಲಿದ್ದರೂ ನಾವು ಇನ್ನೂ ಅಲ್ಲಿಗೆ ಏರದಿರುವುದು ಯೋಚಿಸಬೇಕಾದ ವಿಷಯವಲ್ಲವೇ?

ಪ್ರಪಂಚದಲ್ಲೇ ಶ್ರೇಷ್ಠ ಡಾಕ್ಟರುಗಳನ್ನು ಹಾಗೂ ಎಂಜಿನಿಯರುಗಳನ್ನು ತಯಾರು ಮಾಡುತ್ತಿರುವ ಕರ್ನಾಟಕ ತನ್ನ ಪ್ರತಿಭೆಗಳನ್ನು ನಾಗರಿಕ ಸೇವೆಯತ್ತ ತಿರುಗಿಸುವ ಅವಶ್ಯಕತೆ ಇಂದು ದಟ್ಟವಾಗಿದೆ. ನಮ್ಮಲ್ಲಿರುವುದು ಜಾಗೃತಿ ಮತ್ತು ಆತ್ಮವಿಶ್ವಾಸದ ಕೊರತೆಯೇ ಹೊರತು ಪ್ರತಿಭೆಯದ್ದಲ್ಲ. ಎಂಜಿನಿಯರಿಂಗ್-ವೈದ್ಯಕೀಯಗಳಷ್ಟೇ ಭೂಮಿ ಮೇಲಿನ ಶ್ರೇಷ್ಠ ಉದ್ಯೋಗಗಳೆಂಬ ಭ್ರಮೆಯಿಂದ ನಮ್ಮ ಯುವಕರು ಮತ್ತು ಅವರ ಹೆತ್ತವರು ಹೊರಬರಲೇಬೇಕಿದೆ.

ಈ ಜಾಗೃತಿ ಮೂಡಿಸುವ ಕೆಲಸ ಶಾಲಾ-ಕಾಲೇಜು ಹಂತದಲ್ಲೇ ನಡೆಯುವುದು ಅನಿವಾರ್ಯ. ಮಾನವಿಕ ಶಾಸ್ತ್ರ ಮತ್ತು ಮೂಲವಿಜ್ಞಾನಗಳು ಮೂಲೆಗುಂಪಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳನ್ನು ಅವುಗಳತ್ತ ಆಕರ್ಷಿಸಿ ಅವರು ಮುಂದೆ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಾಗುವಂತೆ ಪ್ರೇರೇಪಿಸುವ ಹೊಣೆಗಾರಿಕೆ ನಮ್ಮ ಕಾಲೇಜುಗಳಿಗಿದೆ. ಈ ನಿಟ್ಟಿನಲ್ಲಿ ಪ್ರತೀ ಕಾಲೇಜಿನಲ್ಲೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ತೆರೆಯುವುದು ಮತ್ತು ಅವು ಸಕ್ರಿಯವಾಗಿರುವಂತೆ ನೋಡಿಕೊಳ್ಳುವುದು ಅತ್ಯವಶ್ಯಕ. ರೋಲ್ ಮಾಡೆಲ್‍ಗಳೀಗ ನಮ್ಮ ನಡುವೆಯೇ ಇದ್ದಾರೆ. ನಾವು ಪ್ರೇರಣೆ ಪಡೆದುಕೊಳ್ಳುವುದಷ್ಟೇ ಬಾಕಿಯಿದೆ.

‘ಯಶಸ್ಸಿನ ಮುಖವನ್ನು ನೋಡುವುದು ಈ ಪ್ರಪಂಚದಲ್ಲಿ ಅಷ್ಟೇನೂ ಸುಲಭದ ಕೆಲಸವಲ್ಲ’ ಎಂದಿದ್ದರು ಠ್ಯಾಗೋರ್. ಅದೇ ಯಶಸ್ಸನ್ನು ಹುಡುಕಿ ತಂದು ತಮ್ಮೆದುರೇ ಪ್ರತಿಷ್ಠಾಪಿಸಿಕೊಂಡಿದ್ದಾರೆ ನಮ್ಮ ಯುವಕರು. ಇನ್ನದು ತಪ್ಪಿಸಿಕೊಂಡರೆ ಅದಕ್ಕೆ ನಾವೆಲ್ಲರೂ ಬಾಧ್ಯಸ್ಥರು.

ಕಾಮೆಂಟ್‌ಗಳಿಲ್ಲ: