ಶುಕ್ರವಾರ, ಜುಲೈ 10, 2015

ಬುಟ್ಟಿ ತುಂಬಾ ಬುದ್ಧಿಗಿಂತ...

ಜೂನ್ 15, 2015ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ.


ಟ್ರಾಫಿಕ್ ಸಿಗ್ನಲ್‍ಗಾಗಿ ಕಾಯುತ್ತಿದ್ದೆ. ಭರ್ರಂತ ಬಂದ ನವೀನ ಶೈಲಿಯ ಬೈಕೊಂದು ನನಗಿಂತ ಎರಡಡಿ ಮುಂದಕ್ಕೆ ಹೋಗಿ ಛಕ್ಕನೆ ನಿಂತಿತು. ಇಪ್ಪತ್ತರ ಆಜುಬಾಜಿನಲ್ಲಿದ್ದ ಬೈಕ್ ಸವಾರ ಅಸಹನೆಯಿಂದ ಚಡಪಡಿಸುತ್ತಿದ್ದ. ಈ ಟ್ರಾಫಿಕ್ ಸಿಗ್ನಲ್ ಎಂಬ ವ್ಯವಸ್ಥೆ ಭೂಮಿಯ ಮೇಲೆ ಯಾಕಾದರೂ ಇದೆಯೋ ಎಂಬ ಸಿಟ್ಟು ಅವನ ಮುಖದ ಮೇಲೆ ಎದ್ದು ಕಾಣುತ್ತಿತ್ತು. ಅವನ ಬೈಕ್‍ನ ಹಿಂದೆ ಇದ್ದ ಒಂದು ಸಾಲಿನ ಬರಹದ ಕಡೆಗೆ ಅಯಾಚಿತವಾಗಿ ನನ್ನ ದೃಷ್ಟಿ ಹರಿಯಿತು: “ಈಫ್ ಯೂ ಫೈಂಡ್ ದ ಡ್ರೈವಿಂಗ್ ರ್ಯಾಶ್ (rash)... ಮೈಂಡ್ ಯುವರ್ ಓನ್ ಬಿಸಿನೆಸ್...” (ಈ ವಾಹನವು ಬೇಕಾಬಿಟ್ಟಿ ಚಾಲನೆಯಾಗುತ್ತಿದ್ದರೆ...ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ...).

ಎಲಾ ಇವನಾ! ನಾನು ಅರೆಕ್ಷಣ ದಂಗಾಗಿ ಹೋದೆ. “ಈಫ್ ಯೂ ಫೈಂಡ್ ದ ಡ್ರೈವಿಂಗ್ ರ್ಯಾಶ್, ಪ್ಲೀಸ್ ಇನ್‍ಫಾರ್ಮ್ ದ ಸೇಮ್ ಟು ದಿಸ್ ನಂಬರ್...” (ಈ ವಾಹನವು ಬೇಕಾಬಿಟ್ಟಿ ಚಾಲನೆಯಾಗುತ್ತಿದ್ದರೆ, ದಯವಿಟ್ಟು ಈ ನಂಬರಿಗೆ ಮಾಹಿತಿ ನೀಡಿ...) ಎಂಬಂತಹ ಸಾಲುಗಳನ್ನು ನೀವು ಕೆಲವು ವಾಹನಗಳ ಮೇಲೆ ನೋಡಿರುತ್ತೀರಿ. ಬಾಡಿಗೆ ಕಾರು, ಶಾಲಾ ಬಸ್ಸು ಅಥವಾ ಸರ್ಕಾರಿ ಇಲಾಖೆಗಳ ವಾಹನಗಳ ಹಿಂದೆ ಈ ರೀತಿ ನಮೂದಿಸುವುದು ಸಾಮಾನ್ಯ. ಆದರೆ ಮೇಲೆ ಹೇಳಿದ ಬೈಕ್ ಹಿಂದೆ ಕಂಡ ಸಾಲು ನನ್ನನ್ನು ಚಕಿತಗೊಳಿಸಿತು. ಇಡೀ ದಿನ ಮತ್ತೆ ಮತ್ತೆ ಅದೇ ವಾಕ್ಯ ಕಣ್ಣೆದುರು ಬರುತ್ತಿತ್ತು. ನಾನು ನಿಜವಾಗಿಯೂ ಯೋಚನೆಗೆ ಬಿದ್ದಿದ್ದೆ.

If you find the driving rash...mind your own business...! ಹೊಸ ತಲೆಮಾರಿನ ಒಂದು ವರ್ಗದ ಒಟ್ಟಾರೆ ಮನಸ್ಥಿತಿಗೆ ಈ ಸಾಲು ಕನ್ನಡಿ ಹಿಡಿದಂತಿದೆ ಎಂದು ನನಗನ್ನಿಸಿತು. ಇದು ಕೇವಲ ವಯಸ್ಸಿನ ಪೌರುಷವೇ ಅಥವಾ ನಾವು ಬದುಕುತ್ತಿರುವ ಕಾಲದ ಕರಾಮತ್ತೇ? ನಮ್ಮ ಯುವಕರೇಕೆ ಈ ಮನಸ್ಥಿತಿಯಿಂದ ಹೊರಗೆ ಬರುತ್ತಿಲ್ಲ?

ನಾನು ನನಗೆ ಸರಿ ಅನ್ನಿಸಿದ್ದನ್ನು ಮಾಡುತ್ತೇನೆ, ನಿಮ್ಮ ಕೆಲಸವನ್ನು ನೀವು ನೋಡಿಕೊಳ್ಳಿ, ನನ್ನ ಉಸಾಬರಿ ನಿಮಗೇಕೆ ಎಂಬ ಉಡಾಫೆ ವಯೋಸಹಜವಾದದ್ದೋ ಏನೋ? ಆದರೆ ಈ ಹಂತವನ್ನು ದಾಟುವ ಮೊದಲೇ ಬದುಕು ಮುಗಿದು ಹೋದರೆ ಆ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ಅಷ್ಟು ಸಮಯ ಮುಚ್ಚಟೆಯಿಂದ ಪೋಷಿಸಿದ ಅಪ್ಪ-ಅಮ್ಮಂದಿರ ಕಣ್ಣೀರನ್ನು ಯಾರು ಒರೆಸುತ್ತಾರೆ?

ಸ್ನೇಹಿತರೊಬ್ಬರು ಇತ್ತೀಚೆಗೆ ಒಂದು ಘಟನೆಯನ್ನು ನೆನಪಿಸಿಕೊಂಡರು. ಅಪ್ಪ-ಅಮ್ಮ ತುಂಬ ಕಾಳಜಿಯಿಂದ ಬೆಳೆಸಿದ್ದರಂತೆ ತಮ್ಮ ಏಕೈಕ ಮಗನನ್ನು. ಆತ ಪಿಯುಸಿ ಓದುತ್ತಿದ್ದ. ಅವನಿಗೆ ವಾಹನಗಳ ಹುಚ್ಚು. ಇಷ್ಟು ಬೇಗನೇ ವಾಹನ ಏಕೆಂದು ಅವನ ಕೈಗೆ ಕಾರು ಬೈಕು ಕೊಟ್ಟಿರಲಿಲ್ಲ. ಪಿಯುಸಿ ಪರೀಕ್ಷೆ ಮುಗಿಯುತ್ತಿದ್ದಂತೆ ಅದರ ಸಂಭ್ರಮಾಚರಣೆಗೆ ಸ್ನೇಹಿತರೊಂದಿಗೆ ಗೋವಾಕ್ಕೆ ಪ್ರವಾಸ ಹೋಗುವುದಾಗಿ ಮನೆಯಲ್ಲಿ ಹಠ ಹಿಡಿದ. ಹೋಗುವುದೇನೋ ಸರಿ, ಬಸ್ಸಿನಲ್ಲಿ ಹೋಗಿ ಎಂದು ಅಪ್ಪ-ಅಮ್ಮ ಪಟ್ಟುಹಿಡಿದರು. ಇವರೋ ಮಹಾಜಾಣರು. ಕಾಯ್ದಿರಿಸಿದ ಟಿಕೇಟುಗಳನ್ನೇ ತಂದು ತೋರಿಸಿದರು. ಮನೆಯಲ್ಲಿ ಒಪ್ಪಿಗೆ ಸಿಕ್ಕಿತು. ಇವರು ಹೊರಟೇಬಿಟ್ಟರು. ಬಸ್ಸಿನಲ್ಲಲ್ಲ, ಬಾಡಿಗೆ ಕಾರುಗಳಲ್ಲಿ. ಹೊಸ ವಿನ್ಯಾಸದ ಆಧುನಿಕ ಕಾರುಗಳನ್ನು ಬಾಡಿಗೆಗೆ ಪಡೆದುಕೊಂಡು ತಾವೇ ಡ್ರೈವ್ ಮಾಡಿಕೊಂಡು ಹೆದ್ದಾರಿಯಲ್ಲಿ ಓಟ ಆರಂಭಿಸಿದರು, ಅದೂ ಕತ್ತಲಾದ ಮೇಲೆ. ಯಾರ ಮನೆಯಲ್ಲೂ ಈ ವಿಷಯ ಗೊತ್ತಿಲ್ಲ. ಆದರೆ ಏನು ಆಗಬಾರದಿತ್ತೋ ಅದು ಆಗಿಹೋಯಿತು. ಮಧ್ಯರಾತ್ರಿ ಭೀಕರ ಅಪಘಾತ. ಅಪ್ಪ-ಅಮ್ಮಂದಿರ ಮುದ್ದಿನ ಮಗ ಇನ್ನೂ ಕೋಮಾದಲ್ಲೇ ಇದ್ದಾನೆ.

ಹೇಳಿ, ಇದಕ್ಕೆ ಯಾರು ಹೊಣೆ? ತಪ್ಪುಗಳನ್ನು ತಿದ್ದಿಕೊಳ್ಳಬಹುದು, ಕಳೆದುಹೋದ ಬದುಕನ್ನು ವಾಪಸ್ ತರಬಹುದೇ? ನಮ್ಮ ಯುವಕರೇಕೆ ಹೀಗೆ ಆಡುತ್ತಿದ್ದಾರೆ? ಅಪ್ಪ-ಅಮ್ಮಂದಿರಿಗೆ ಕ್ಷಣಕ್ಷಣಕ್ಕೂ ತಮ್ಮ ಮಕ್ಕಳದ್ದೇ ಚಿಂತೆ. ಮಗ ಎಸ್.ಎಸ್.ಎಲ್.ಸಿ. ಎಂದರೆ ಅವರಿಗೆ ನಿದ್ದೆಯಿಲ್ಲ. ಮಗಳು ಪಿ.ಯು.ಸಿ. ಎಂದರೆ ಅವರಿಗೆ ಊಟವಿಲ್ಲ. ಮಗು ಯಾವುದಾದರೊಂದು ದೊಡ್ಡ ಕೆಲಸ ಹಿಡಿದು ತಮ್ಮನ್ನು ಹಗುರಗೊಳಿಸುತ್ತದೆ ಎಂಬ ನಿರೀಕ್ಷೆಯೇ ಅವರೆಲ್ಲ ತುಡಿತಗಳ ಬುನಾದಿ. ಈ ಬಿಸಿರಕ್ತದ ಉಡಾಫೆಗಳಿಗೆ ಅದ್ಯಾವುದರ ಪರಿವೆಯೇ ಇಲ್ಲ. ಅವರು ಲೈಫ್ ಎಂಜಾಯ್ ಮಾಡಬೇಕು ಅಷ್ಟೇ.

ಇನ್ನೂ ಹದಿವಯಸ್ಸಿನ ಹುಡುಗರು ಟ್ರಾಫಿಕ್ ನಿಯಮಗಳ ಗೊಡವೆಯೇ ಇಲ್ಲದೆ ಕಿಕ್ಕಿರಿದ ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನ ಚಲಾಯಿಸುವಾಗ, ‘ಸ್ವಲ್ಪ ನೋಡ್ಕೊಂಡು ಹೋಗ್ರೋ’ ಎಂದು ಯಾರಾದರೂ ಹಿರಿಯರು ದನಿಯೆತ್ತಿದರೆ ಅದು ಅವರದ್ದೇ ಅಪರಾಧ ಎಂಬಹಾಗೆ ಕಣ್ಣುಕೊಂಕಿಸಿಕೊಂಡು ಕುಹಕದ ನಗೆ ನಕ್ಕು ಸಾಗುವಾಗ, ಮೊಬೈಲ್ ಹಿಡಿದುಕೊಂಡೇ ಬೈಕ್ ಚಲಾಯಿಸುವುದು ಒಂದು ಶ್ರೇಷ್ಠ ಅರ್ಹತೆಯೋ ಎಂಬ ಹಾಗೆ ವರ್ತಿಸುವುದನ್ನು ಕಂಡಾಗ ಇವರೆಲ್ಲ ‘ಮೈಂಡ್ ಯುವರ್ ಓನ್ ಬಿಸಿನೆಸ್’ ವ್ಯವಸ್ಥೆಯ ಪ್ರತಿನಿಧಿಗಳೋ ಎಂದು ಭಾಸವಾಗುತ್ತದೆ.

ತನ್ನ ಒಂದು ಕ್ಷಣದ ಅಜಾಗರೂಕತೆ, ಉಡಾಫೆ ಇಡೀ ಬದುಕನ್ನೇ ಬಲಿತೆಗೆದುಕೊಂಡೀತು ಎಂದು ಇವರೆಲ್ಲ ಅರೆಕ್ಷಣ ಚಿಂತಿಸಿದರೆ ಸಾಕಲ್ಲವೇ? ಒರಟುತನ ಪ್ರದರ್ಶಿಸಿ ಇನ್ನೊಬ್ಬನ ಬಾಯಿಮುಚ್ಚಿಸಿದರೆ ತಾವು ಶ್ರೇಷ್ಠರು ಎಂದೇ ಅನೇಕ ಮಂದಿ ಭಾವಿಸಿಕೊಂಡಿದೆ. ಅವರ ಪ್ರಕಾರ ನಯವಿನಯದಂತಹ ಗುಣಗಳು ವ್ಯಕ್ತಿಯ ದೌರ್ಬಲ್ಯದ ಸಂಕೇತ. ಅಂಥವರಿಗೆ ಎಮರ್ಸನ್‍ನ ಮಾತನ್ನು ನೆನಪಿಸಬೇಕು: “ಒರಟುತನವೆಂಬುದು ದುರ್ಬಲ ವ್ಯಕ್ತಿಯ ಬಲಾಢ್ಯತೆಯ ಸೋಗು”.

ಪ್ರಪಂಚಕ್ಕೆ ಯುವಕರ ಸಾಧನೆ, ಕೊಡುಗೆಗಳ ವಿಷಯದಲ್ಲಿ ಎರಡು ಮಾತಿಲ್ಲ. ಅವರೇ ಈ ಸಮಾಜದ ಬೆನ್ನೆಲುಬು. ಆದರೆ ಬಿಸಿರಕ್ತದ ಹುಮ್ಮಸ್ಸಿನಲ್ಲಿ ಅವರು ತೋರುವ ಕೆಲವು ವರ್ತನೆಗಳು ಇಡೀ ಸಮೂಹಕ್ಕೇ ಕೆಟ್ಟಹೆಸರನ್ನು ತರಬಲ್ಲವು. ಸಮಾಜ ಯುವಜನತೆಯ ಬಗ್ಗೆ ಹೊಂದಿರುವ ಅಪಾರ ಅಭಿಮಾನವನ್ನು ಕಾಪಾಡಿಕೊಳ್ಳುವ ಹೊಣೆ ಅವರಿಗೇ ಇದೆ. ಚೀನಾದಲ್ಲಿ ಪ್ರಸಿದ್ಧ ಗಾದೆಯೊಂದಿದೆ: “ಬುಟ್ಟಿ ತುಂಬಾ ಬುದ್ಧಿಗಿಂತ ಮುಷ್ಟಿಯಷ್ಟು ತಾಳ್ಮೆ ಬೇಕು”. ಈ ಗಾದೆ ನಮ್ಮ ಯುವಕರ ಅಂತರಂಗದಲ್ಲಿ ನೆಲೆಗೊಳ್ಳಬೇಕು.
 

ಕಾಮೆಂಟ್‌ಗಳಿಲ್ಲ: