ಶುಕ್ರವಾರ, ಜುಲೈ 10, 2015

ಸಂಶೋಧನೆ ಗೊಂದಲ

ಜೂನ್ 15, 2015ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಪೃಥ್ವಿ ದತ್ತ ಚಂದ್ರ ಶೋಭಿಯವರು ಸಂಶೋಧನಾ ಕ್ಷೇತ್ರದಲ್ಲಿನ ಅಪಸವ್ಯಗಳನ್ನು ಎತ್ತಿತೋರಿಸಿರುವುದು (ಪ್ರಜಾವಾಣಿ, ಜೂನ್ 12) ಅತ್ಯಂತ ಸಕಾಲಿಕವೂ ಸ್ವಾಗತಾರ್ಹವೂ ಆಗಿದೆ. ಅವರ ವಿಚಾರಗಳಿಗೆ ಪೂರಕವಾಗಿ, ಸಂಶೋಧನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕೆಂಬ ಆಸಕ್ತಿಯಿರುವ ಬೆರಳೆಣಿಕೆ ಮಂದಿಯನ್ನು ನಮ್ಮ ವಿಶ್ವವಿದ್ಯಾನಿಲಯ ವ್ಯವಸ್ಥೆಯು ಹೇಗೆ ನಿರುತ್ತೇಜಿಸಿ ಅಜ್ಞಾತವಾಸಕ್ಕೆ ಕಳುಹಿಸುತ್ತದೆ ಎಂಬುದರ ಬಗೆಗೂ ಕೆಲವು ಸ್ವಾನುಭವದ ಮಾತುಗಳನ್ನು ಸೇರಿಸಬೇಕೆನಿಸುತ್ತದೆ.

ಸುಮಾರು ಎರಡೂವರೆ ವರ್ಷಗಳ ಹಿಂದೆ ಕರ್ನಾಟಕದ ಪ್ರಮುಖ ವಿಶ್ವವಿದ್ಯಾನಿಲಯವೊಂದರಲ್ಲಿ ಪಿಎಚ್.ಡಿ. ಸಂಶೋಧನಾರ್ಥಿಯಾಗಿ ನನ್ನ ತಾತ್ಕಾಲಿಕ ನೋಂದಣಿಯಾಯ್ತು. ಯು.ಜಿ.ಸಿ. ನಿಯಮಾನುಸಾರ ಪ್ರವೇಶ ಪರೀಕ್ಷೆ, ಅಭ್ಯರ್ಥಿಗಳ ಹಂಚಿಕೆ, ಆರು ತಿಂಗಳ ಕೋರ್ಸ್‍ವರ್ಕ್, ಅದರ ಮೇಲೆ ಮತ್ತೊಂದು ಪರೀಕ್ಷೆ ಎಲ್ಲ ಆಯಿತು. ಫಲಿತಾಂಶ, ಅಂಕಪಟ್ಟಿ ಬಂತು. ಸಂಶೋಧನೆಗೆ ಆಯ್ದುಕೊಂಡಿರುವ ವಿಷಯದ ಸಾರಲೇಖವನ್ನೂ ಸೂಕ್ತ ಪರಾಮರ್ಶೆ ಬಳಿಕ ವಿ.ವಿ. ಸ್ವೀಕರಿಸಿತು.

ಇಷ್ಟೆಲ್ಲ ಮಾಡಿದ ವಿಶ್ವವಿದ್ಯಾನಿಲಯವು ಈ ಹಂತದಲ್ಲಿ ನನಗೆ (ಮತ್ತು ಸಹಸಂಶೋಧನಾರ್ಥಿಗಳಿಗೆ) ಮಾರ್ಗದರ್ಶಕರಾಗಿದ್ದವರ ಮಾನ್ಯತೆಯನ್ನೇ ರದ್ದುಗೊಳಿಸಿತು. ಸದರಿ ಮಾರ್ಗದರ್ಶಕರು ಯತಾರ್ಥವಾಗಿ ಆ ಹುದ್ದೆಗೆ ಅರ್ಹರಲ್ಲ ಎಂಬ ಆಕ್ಷೇಪಣೆಗಳು ವಿ.ವಿ. ಗಮನಕ್ಕೆ ಬಂದು, ಅವು ಅಧ್ಯಯನ ಮಂಡಳಿ ಮತ್ತು ಸಿಂಡಿಕೇಟ್‍ಗಳಲ್ಲಿ ಚರ್ಚೆಗೊಳಗಾಗಿ, ಸದರಿ ಮಾರ್ಗದರ್ಶಕರಿಗೆ ನೀಡಿದ ಸ್ಥಾನಮಾನವನ್ನು ವಿ.ವಿ.ಯೇ ವಾಪಸ್ ಪಡೆದುಕೊಂಡಿತು.

ಮಾನ್ಯತೆ ರದ್ದಾದ ಮಾರ್ಗದರ್ಶಕರ ಜತೆಗಿದ್ದ ಎಂಟು ಮಂದಿ ಸಂಶೋಧನಾರ್ಥಿಗಳ ಪೈಕಿ ನಾಲ್ವರನ್ನು ವಿ.ವಿ.ಯು ಅದೇ ವಿಭಾಗದಲ್ಲಿರುವ ಇತರ ಮಾರ್ಗದರ್ಶಕರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿತು. ನಮಗೂ ಅದೇ ವ್ಯವಸ್ಥೆ ಮಾಡಿ ಎಂದರೆ ‘ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಈಗಾಗಲೇ ಯು.ಜಿ.ಸಿ. ಸೂಚಿಸಿರುವ ಮಿತಿಗಿಂತ ಹೆಚ್ಚು ಸಂಶೋಧನಾರ್ಥಿಗಳನ್ನು ಅವರಿಗೆ ಹಂಚಿಕೆ ಮಾಡಿದ್ದೇವೆ. ಇನ್ನೂ ಹೆಚ್ಚು ಮಂದಿಗೆ ಮಾರ್ಗದರ್ಶನ ಮಾಡಿ ಎಂದು ಅವರ ಮೇಲೆ ಒತ್ತಡ ಹೇರಲು ಬರುವುದಿಲ್ಲ. ನಿಮಗೆ ಬೇರೆ ಪರಿಹಾರ ಹುಡುಕೋಣ’ ಎಂದಿತು ವಿ.ವಿ.

ಈ ನಡುವೆ ‘ಕರ್ನಾಟಕದ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ನಿಮ್ಮ ವಿಷಯದಲ್ಲಿ ಮಾನ್ಯತೆ ಪಡೆದಿರುವ ಮಾರ್ಗದರ್ಶಕರನ್ನು ಆಯ್ಕೆ ಮಾಡಿಕೊಂಡು ಅವರ ಒಪ್ಪಿಗೆ ಪತ್ರವನ್ನು ತಂದರೆ ಮುಂದಿನ ಕ್ರಮವನ್ನು ಕೈಗೊಳ್ಳಲಾಗುವುದು’ ಎಂಬ ಬುದ್ಧಿವಂತಿಕೆಯ ಪತ್ರವೊಂದು ವಿ.ವಿ.ಯಿಂದ ಬಂತು. ಮಾರ್ಗದರ್ಶಕರನ್ನು ನೇಮಿಸಿಕೊಂಡು ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡುವ ಜವಾಬ್ದಾರಿ ವಿಶ್ವವಿದ್ಯಾನಿಲಯದ್ದೇ ಹೊರತು ವಿದ್ಯಾರ್ಥಿಗಳದ್ದಲ್ಲ. ಅಂತೂ ಹೀಗಾದರೂ ಸಮಸ್ಯೆ ಬಗೆಹರಿದರೆ ಸಾಕು ಎಂದುಕೊಂಡು ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳಿಗೂ ಎಡತಾಕಿದ್ದಾಯಿತು. ಮತ್ತೆ ಅಲ್ಲಿಯೂ ನಿರಾಸೆ. ನಮ್ಮ ಬಳಿ ಸೀಟುಗಳು ಖಾಲಿಯಿಲ್ಲವೆಂದೋ, ಬೇರೆ ವಿ.ವಿ.ಯ ವಿದ್ಯಾರ್ಥಿಗಳಿಗೆ ಗೈಡ್ ಮಾಡಲು ನಮ್ಮಲ್ಲಿ ತಾಂತ್ರಿಕ ತೊಂದರೆಗಳಿವೆ ಎಂದೋ ನಾನಾ ಕಾರಣಗಳನ್ನು ನೀಡಿ ಎಲ್ಲರೂ ವಾಪಸ್ ಅಟ್ಟಿದರು.

ಕೆಲವರು ಕೂಡಲೇ ನಿರಾಸೆ ಮಾಡಬಾರದೆಂದು ಒಂದಷ್ಟು ಸಮಯ ನಮ್ಮ ಅರ್ಜಿಗಳನ್ನು ಇಟ್ಟುಕೊಂಡು ಆಮೇಲೆ ತಣ್ಣಗೆ ಜಾರಿಕೊಂಡರು. ಹೇಗಾದರೂ ಈ ‘ತಾಂತ್ರಿಕ ತೊಂದರೆ’ಗಳನ್ನು ನಿವಾರಿಸಿ ನಮಗೊಂದು ಸಹಾಯ ಮಾಡಿಕೊಡಿ ಸಾರ್ ಎಂದು ಕರ್ನಾಟಕದ ದೊಡ್ಡ ವಿ.ವಿ.ಯೊಂದರ ಕುಲಪತಿಗಳ ಬಳಿಗೇ ಖುದ್ದು ಹೋಗಿ ಕೈಮುಗಿದೆ. ‘ಅಯ್ಯೋ ನಿಮಗೆ ಸಹಾಯ ಮಾಡಹೊರಟರೆ ನಮ್ಮ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತೆ. ನಿಮಗೆ ಸಹಾಯ ಮಾಡಬೇಕಾದ್ದು ನಿಮ್ಮ ಯೂನಿವರ್ಸಿಟಿಯೇ ಹೊರತು ನಾವಲ್ಲ’ ಎಂದು ಸ್ಪಷ್ಟವಾಗಿ ಹೇಳಿ ಕೈಚೆಲ್ಲಿದರು.

ಆ ವಿಷಯವನ್ನೂ ನಮ್ಮ ವಿ.ವಿ. ಗಮನಕ್ಕೆ ತಂದಾಯಿತು. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಯಾರಾದರೊಬ್ಬರು ನಿವೃತ್ತ ಪ್ರಾಧ್ಯಾಪಕರನ್ನಾದರೂ ಗೈಡ್ ಆಗಿ ನೇಮಿಸಿಕೊಂಡು ನಮ್ಮ ಸಂಶೋಧನೆ ಮುಂದುವರಿಸುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡದ್ದಾಯಿತು. ಅದು ವಿ.ವಿ.ಯ ನಿಯಮಗಳಲ್ಲಿ ಇಲ್ಲ. ‘ನಾವು ನಿಯಮಗಳ ಪ್ರಕಾರ ಕೆಲಸ ಮಾಡಬೇಕಾಗುತ್ತೆ. ನಾವು ಅವುಗಳನ್ನು ಬೆಂಡ್ ಮಾಡಬಹುದೇ ಹೊರತು ಬ್ರೇಕ್ ಮಾಡೋಹಾಗಿಲ್ಲ. ಇನ್ನೇನಾದರೂ ಪರಿಹಾರ ಹುಡುಕೋಣ. ನೀವು ತಾಳ್ಮೆಯಿಂದ ಕಾಯಿರಿ’ ಎಂದಿತು ವಿ.ವಿ.

ಇವರು ಯಾವ ನಿಯಮಗಳ ಬಗ್ಗೆ ಮಾತನಾಡುತ್ತಿದ್ದಾರೆ? ಒಬ್ಬ ವ್ಯಕ್ತಿಗೆ ಪಿಎಚ್.ಡಿ. ಮಾರ್ಗದರ್ಶಕನಾಗಲು ಅರ್ಹತೆಯಿಲ್ಲ ಎಂದಾದಮೇಲೆ ವಿ.ವಿ.ಯು ಆತನನ್ನು ಮಾರ್ಗದರ್ಶಕನನ್ನಾಗಿ ಹೇಗೆ ನೇಮಿಸಿಕೊಂಡಿತು? ಸದರಿ ಮಾರ್ಗದರ್ಶಕರ ನೇತೃತ್ವದಲ್ಲಿ ಸಂಶೋಧನೆ ನಡೆಸಿ ಅದಾಗಲೇ ಇಬ್ಬರು ತಮ್ಮ ಪಿಎಚ್.ಡಿ. ಪೂರ್ಣಗೊಳಿಸಿದ್ದಾರೆ; ಅದೇ ವಿ.ವಿ.ಯಿಂದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ! ಮಾನ್ಯತೆ ಕಳೆದುಕೊಂಡ ಮಾರ್ಗದರ್ಶಕರ ಅಡಿಯಲ್ಲಿ ಸಂಶೋಧನೆ ನಡೆಸಿರುವ ಅವರ ಪಿಎಚ್.ಡಿ.ಯೂ ಅನೂರ್ಜಿತವೇ? ಹಾಗಾದರೆ ಅವರ ಭವಿಷ್ಯವೇನು? ನಾವು ಯಾವ ಪಾಪಕ್ಕೆ ಈಗ ಪ್ರಾಯಶ್ಚಿತ್ತ ಅನುಭವಿಸುತ್ತಿದ್ದೇವೆ? ವಿ.ವಿ. ನಿಯಮಗಳ ಪ್ರಕಾರ ಅರ್ಹತೆಯಿಲ್ಲದಿದ್ದರೂ ಮಾರ್ಗದರ್ಶಕನಾಗಬೇಕೆಂದು ಬಯಸಿದ ವ್ಯಕ್ತಿಯನ್ನು ನಾವು ಹಳಿಯಬೇಕೆ? ಆಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಗ ಭೂತಗನ್ನಡಿ ಹಿಡಿದಿರುವ ವಿ.ವಿ.ಯನ್ನು ಹಳಿಯಬೇಕೆ? ಈ ವಿ.ವಿ.ಯ ಸಹವಾಸವನ್ನು ಯಾಕಾದರೂ ಮಾಡಿದೆವೋ ಎಂದು ನಮ್ಮನ್ನು ನಾವೇ ಹಳಿದುಕೊಳ್ಳಬೇಕೆ? ನಮ್ಮ ವೃತ್ತಿಜೀವನದ ಭವಿಷ್ಯಕ್ಕೆ ಯಾರು ಜವಾಬ್ದಾರಿ? ನಾನೊಂದು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕ. ಪಿಎಚ್.ಡಿ. ಪದವಿ ನನ್ನ ವೃತ್ತಿಜೀವನದ ಭವಿಷ್ಯಕ್ಕೂ ಅನಿವಾರ್ಯ. ಈ ಅಡಾವುಡಿಗಳ ನಡುವೆ ಓಡಾಡಿಕೊಂಡು ನಾನು ಬರಿದೇ ಕಳೆದಿರುವ ಎರಡೂವರೆ ವರ್ಷವನ್ನು, ಮಾನಸಿಕ ನೆಮ್ಮದಿಯನ್ನು ನನಗೆ ತುಂಬಿಕೊಡುವವರು ಯಾರು?

‘ರೈತ ಚಳುವಳಿಯನ್ನು ಕಟ್ಟಿಬೆಳೆಸುವಲ್ಲಿ, ಪ್ರಭಾವಿಸುವಲ್ಲಿ ಕರ್ನಾಟಕದ ಮುದ್ರಣ ಮಾಧ್ಯಮ ವಹಿಸಿದ ಪಾತ್ರ ಏನು’ ಎಂಬ ಅತ್ಯಂತ ಗಂಭೀರವಾದ ವಿಷಯವೊಂದನ್ನು ಆಯ್ದುಕೊಂಡು ನಾನು ಸಂಶೋಧನೆಗೆ ಇಳಿದಿದ್ದೆ. ಆ ದಿನಗಳಲ್ಲಿ ನನ್ನಲ್ಲಿದ್ದ ಮಹತ್ವಾಕಾಂಕ್ಷೆ, ನಿರೀಕ್ಷೆ, ಆತ್ಮವಿಶ್ವಾಸ ನೆನಪಾಗುತ್ತದೆ. ನಾಮಕಾವಾಸ್ತೆ ಪಿಎಚ್.ಡಿ. ಆಗಬಾರದು; ನನ್ನ ಸಂಶೋಧನಾ ಪ್ರಬಂಧ ನಿಜದರ್ಥದಲ್ಲಿ ಒಂದು ದಿಕ್ಸೂಚಿ ಕೃತಿಯಾಗಬೇಕು; ಅದಕ್ಕಾಗಿ ಎಷ್ಟು ಶ್ರಮಪಡಬೇಕಾಗಿ ಬಂದರೂ ಸರಿ, ಅದನ್ನು ಮಾಡಿಯೇ ತೀರಬೇಕು ಎಂದೆಲ್ಲ ತೀರ್ಮಾನಿಸಿಕೊಂಡಿದ್ದೆ. ಈ ಎರಡೂವರೆ ವರ್ಷದ ಅಲೆದಾಟದಲ್ಲಿ ನನ್ನ ಉತ್ಸಾಹವೇ ಉಡುಗಿದೆ. ಭ್ರಮನಿರಸನ ಕಾಡಿದೆ. ಇನ್ನೂ ನಿಜವಾದ ಅಧ್ಯಯನ ಆರಂಭವಾಗುವ ಮೊದಲೇ ಸಾಕಪ್ಪಾ ಸಾಕು ಈ ಪಿಎಚ್.ಡಿ. ಸಹವಾಸ ಎಂಬ ವಿಷಣ್ಣತೆ ಬಂದುಬಿಟ್ಟಿದೆ.

ಇದೇನಾ ನಮ್ಮ ವಿಶ್ವವಿದ್ಯಾನಿಲಯಗಳು ಸಂಶೋಧನೆಯನ್ನು ಉತ್ತೇಜಿಸುವ ರೀತಿ? ಇದೇನಾ ಇವರು ಹೊಸ ತಲೆಮಾರಿನ ಸಂಶೋಧಕರನ್ನು ಬೆಳೆಸುವ ವಿಧಾನ? ಮಾತೆತ್ತಿದರೆ ಯುಜಿಸಿ ನಿಯಮ, ಗುಣಮಟ್ಟ, ಸಂಶೋಧನೆಗೆ ಪೂರಕ ವಾತಾವರಣ ಎಂದೆಲ್ಲ ಬಡಬಡಿಸುವ ವಿ.ವಿ.ಗಳು ತಾವು ಅನುಷ್ಠಾನಗೊಳಿಸಬೇಕಿರುವ ಸಂಶೋಧನಾ ಸಂಸ್ಕøತಿಯನ್ನು ನಿಜದರ್ಥದಲ್ಲಿ ಜಾರಿಗೆ ತಂದಿವೆಯೇ? ಒಂದು ವ್ಯವಸ್ಥೆ ಸುಗಮವಾಗಿ ನಡೆದುಕೊಂಡುಹೋಗಬೇಕೆಂದರೆ ನೀತಿನಿಯಮಗಳು ಅನಿವಾರ್ಯ. ಆದರೆ ಆ ವ್ಯವಸ್ಥೆಯೊಳಗೆ ನಮ್ಮನ್ನು ನಾವೇ ಕಟ್ಟಿಹಾಕಿಕೊಳ್ಳುವ ಪರಿಸ್ಥಿತಿ ಬಂದರೆ ಅಂತಹ ವ್ಯವಸ್ಥೆಯ ಸುಸಂಬದ್ಧತೆ ಏನು?

ಶೈಕ್ಷಣಿಕ ಅರ್ಹತೆಗಾಗಿ ಒಂದು ಪಿಎಚ್.ಡಿ. ಇದ್ದರಾಯಿತಪ್ಪ ಎಂದು ಮಾರ್ಗದರ್ಶಕ-ಸಂಶೋಧಕ ಇಬ್ಬರೂ ಪರಸ್ಪರ ಭಾವಿಸಿಕೊಳ್ಳುವುದು, ಸಂಶೋಧನೆಯ ಗುಣಮಟ್ಟ ಪಾತಾಳ ತಲುಪಿರುವುದು, ಸಂಶೋಧನಾ ಯೋಜನೆಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿಯಾಗುತ್ತಿರುವುದು ಎಲ್ಲವೂ ನಿಜ; ಇವೆಲ್ಲವುಗಳನ್ನೂ ಮೀರಿ ಹೋಗಬೇಕು ಎಂಬ ನೈಜ ಉತ್ಸಾಹದಲ್ಲಿರುವವರಿಗೆ ನಮ್ಮ ವಿ.ವಿ.ಗಳು ಏನು ಕೊಟ್ಟಿವೆ?

ಕಾಮೆಂಟ್‌ಗಳಿಲ್ಲ: