ಬುಧವಾರ, ಜನವರಿ 14, 2015

ಬೆಂಕಿ ಬೆಳಕಾಗುವ ಪರಿ

ಮುಖಪುಟ ಚಿತ್ರಕೃಪೆ: ಇಂಟರ್ನೆಟ್
ನಾಲ್ಕೂವರೆ ವರ್ಷಗಳ ಹಿಂದೆ ಅಧ್ಯಾಪಕನಾಗಿ ಮೊದಲ ತರಗತಿ ತೆಗೆದುಕೊಂಡಾಗ ಶೈಲಜ ಎಂಬೊಂದು ಕೂಸು ಕೊನೇ ಬೆಂಚಿನ ಮೂಲೆಯಲ್ಲಿ ಭಯದಿಂದ ಮುದುರಿ ಕುಳಿತಿತ್ತು. ಎಲ್ಲ ವಿದ್ಯಾರ್ಥಿಗಳು ಪರಿಚಯ ಮಾಡಿಕೊಂಡರೂ ಈಕೆಗೆ ಎದ್ದುನಿಲ್ಲುವುದಕ್ಕೂ ಮುಜುಗರ, ಸಂಕೋಚ. ಐದು ನಿಮಿಷ ಒತ್ತಾಯಿಸಿದ ಮೇಲೆ ಕಷ್ಟಪಟ್ಟು ಹೆಸರು, ಊರು ಹೇಳಿ ಧಡಕ್ಕಂತ ಕುಳಿತುಬಿಟ್ಟಿದ್ದಳು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬೆಲೆ ಎಂಬ ಹಳ್ಳಿಯ ಹುಡುಗಿ ಅದು. ಕೂಲಿ, ಬೇಸಾಯ ಬಿಟ್ಟರೆ ಅಪ್ಪ-ಅಮ್ಮನಿಗೆ ಬೇರೆ ಜೀವನಾಧಾರ ಇಲ್ಲ. ಕೆಲ ಸಮಯದ ಬಳಿಕ 'ಸಾರ್' ಅಂತ ಬಂದು ಎರಡು ಕವಿತೆ ಟೇಬಲ್ ಮೇಲೆ ಇಟ್ಟು ಒಂದು ನಿಮಿಷವೂ ನಿಲ್ಲದೆ ತಪ್ಪಿಸಿಕೊಂಡಿದ್ದಳು. ಓದಿದರೆ ಅವು ಆಕೆಯೇ ಬರೆದದ್ದಾ ಎಂಬ ಸಂಶಯ ಸಹಜವಾಗಿಯೇ ಮೂಡುವಂತಿತ್ತು. ಅವಳ ಬಾಹ್ಯ ತೋರ್ಪಡಿಕೆಗೂ ಕವಿತೆಗಳಿಗೂ ಅಜಗಜಾಂತರ ಇತ್ತು. ಆದರೆ ಅದು ತುಂಬ ಸಮಯ ಉಳಿಯಲಿಲ್ಲ. ದಿನಾ ಏನಾದರೊಂದು ಬರೆಯುತ್ತಲೇ ಇದ್ದಳು. ಅವಳೊಳಗೆ ಆಶ್ಚರ್ಯವೆನಿಸುವ ಮಿಂಚಿನಂತಹ ಸಾಲುಗಳಿದ್ದವು. ಮೊನ್ನೆ ಕನ್ನಡ ಪುಸ್ತಕ ಪ್ರಾಧಿಕಾರದ 'ಚೊಚ್ಚಲ ಕೃತಿ ಪ್ರಕಟಣೆ ಯೋಜನೆ'ಯಲ್ಲಿ ಅವಳು ಬರೆದ ಅಷ್ಟೂ ಕವಿತೆಗಳ ಸಂಗ್ರಹ ಆಯ್ಕೆಯಾಗೇಬಿಟ್ಟಿತು. ಇಷ್ಟಾದ ಮೇಲೆ ಅದನ್ನು ಪ್ರಿಂಟೂ ಮಾಡಿಸದೆ ಇದ್ದರೆ ಹೇಗೆ ಎಂಬ ಯೋಚನೆ ಬಂತು. ಎಂಬಲ್ಲಿಗೆ ನಮ್ಮ 'ಮಾಧ್ಯಮ ಪ್ರಕಾಶನ' ಅತ್ಯಂತ ಅಚಾನಕ್ಕಾಗಿ ಕಣ್ಣು ತೆರೆದಿದೆ. 'ಬೆಳಕ ಗರ್ಭದೆಡೆಗೆ' ಪ್ರಿಂಟೂ ಆಗಿದೆ.
ಅಂದಹಾಗೆ, ಕವನ ಸಂಕಲನಕ್ಕೆ ಸಹೋದ್ಯೋಗಿ ಕವಯಿತ್ರಿ ಡಾ. ಗೀತಾ ವಸಂತ ತುಂಬ ಚೆಂದದ ಮುನ್ನುಡಿ ಬರೆದಿದ್ದಾರೆ. ಅದನ್ನಿಲ್ಲಿ ಪ್ರಕಟಿಸಿದ್ದೇನೆ. ಶೈಲಜಗೆ ಒಳ್ಳೆಯದಾಗಲಿ.
                                                                  * * *

ನಿರಂತರ ಚಡಪಡಿಕೆಯಿಲ್ಲದೇ ಕವಿಯಾಗಲು ಸಾಧ್ಯವಿಲ್ಲ. ಅದು ಬೆಂಕಿಯಂತೆ ಉರಿಯುತ್ತ, ಉರಿಸುತ್ತ ಬೆಳಕಾಗುವ ಪರಿಯೇ ಸೋಜಿಗ. ಅನುಭವವು ಅರಿವಾಗಿ ಪರಿವರ್ತನೆಯಾಗುವ ಮಾಯಕ ಕ್ಷಣಗಳನ್ನುಸೆರೆಹಿಡಿಯುವ ಸೂಕ್ಷ್ಮಶಕ್ತಿಯು ಕಾವ್ಯಕ್ಕಿದೆ. ಕಾವ್ಯವು ಲೋಕ ಹಾಗೂ ಮನಸ್ಸಿನ ಒಳಲೋಕದ ನಡುವಿನ ಮಾತುಕತೆ. ಅಂಥ ಮಾತುಕತೆ ನಡೆಸಲು ಹೊಸದೊಂದು ಭಾಷೆಯೇ ಬೇಕು. ಕವಿತೆ ಪರಿಚಿತ ಭಾಷೆಗೆ ಹೊಸ ಸ್ವರೂಪವನ್ನು ನೀಡಿ ಅನನ್ಯವಾಗುತ್ತದೆ. ಅನುಭವ-ಅರಿವು-ಅಭಿವ್ಯಕ್ತಿಗಳ ತುಂಡಾಗದ ಎಳೆಯಲ್ಲಿ ಕಾವ್ಯವನ್ನು ನೇಯುವ ಅಸಲು ಕಸುಬುದಾರಿಕೆ ಸುಲಭದ್ದಲ್ಲ. ಇರುವುದನ್ನು ’ಕಾಣುವ’ ಹಾಗೂ ’ಕಟ್ಟುವ’ ಕಾವಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶೈಲಜ ಅವರ ಪ್ರಯತ್ನ ನಿಜಕ್ಕೂ ಸ್ತುತ್ಯರ್ಹ.

ಭಂಗುರವಾದ ಕ್ಷಣಗಳನ್ನು ಸೃಷ್ಟಿಸಿ ಕಾಲವು ಸರಿದುಹೋಗುತ್ತದೆ. ಅದನ್ನು ಕಾವ್ಯವು ತನ್ನ ಒಡಲಲ್ಲಿ ಧರಿಸಿ 'ರೂಪ’ ಕೊಡುತ್ತದೆ. ಕವಿತೆಯ ಕಾವಿನಲ್ಲಿ ರೂಪ, ರಸ, ಗಂಧ ಸ್ಪರ್ಷಗಳ ಜಗತ್ತು ಮತ್ತೆಮತ್ತೆ ಜನ್ಮತಾಳುತ್ತದೆ. ಚಿತ್ತಭಿತ್ತಿಯನ್ನು ಸೀಳಿ ಕಾವ್ಯದ ಬೀಜಾಂಕುರವಾಗುವ ಕ್ಷಣ ಸಂಕಟಕರವಾದುದು. ಆದರೆ ಸೃಷ್ಟಿಶೀಲತೆಯ ಅಗಾಧ ಬೆರಗಿನೆದುರು ಸಂಕಟ ಗೌಣವಾಗಿಬಿಡುತ್ತದೆ. ಆಗಲೇ ಬದುಕಿನ ಪಾಡುಗಳು ಹಾಡಾಗಲು ಸಾಧ್ಯವಾಗುತ್ತದೆ. ಜಗತ್ತಿನ ನೋವಿಗೆ ಕಿವಿಯಾಗುವ ಕವಿ ಅವುಗಳನ್ನು ತನ್ನೊಳಗೆ ಹರಿದುಬಿಡುತ್ತಾನೆ/ಳೆ. ಮನದ ಕುಲುಮೆಯಲ್ಲಿ ಹದಗೊಂಡು ಪದಗಳ 'ಮಾಟ’ದಲ್ಲಿ ಅವು ಕಾವ್ಯವಾಗುತ್ತವೆ. ಹೂ ಮಾರುವ ಹುಡುಗಿ ಹೂ ಕಟ್ಟುವ ಕ್ರಿಯೆಯಲ್ಲಿ ತನ್ನ ಹಸಿವು-ನೋವುಗಳನ್ನು ಮರೆಯುತ್ತಾಳೆ. ಹೂವು ನಲುಗದಂತೆ, ದಾರ ಹರಿಯದಂತೆ, ಆಕಾರ ಕೆಡದಂತೆ ಕಟ್ಟುತ್ತಾಳೆ. ಕವಿಯ ಸಾರ್ಥಕ ಕ್ಷಣ ಕಊಡ ಅಂತಹುದೇ. ಕಾವ್ಯದಲ್ಲಿ ಉಜ್ವಲ ಅನುಭವ ಜಗತ್ತನ್ನು ನಿರ್ಮಿಸಿದ ಜಗತ್ತಿನ ಎಲ್ಲ ಕಾಲದ ಕವಿಗಳಿಗೂ ಇದು ಸಾಮಾನ್ಯವಾದ ಅನುಭವ. ಕಾವ್ಯ ಜಗತ್ತಿನನಲ್ಲಿ ಇನ್ನೂ ಮೊದಲ ಅಡಿಯಿಡುತ್ತಿರುವ ಎಳೆ ಹರೆಯದ ಹುಡುಗಿ ಶೈಲಜ ಅಂಥ ಕಾವ್ಯಪರಂಪರೆಯ ಕೊಂಡಿಯೂ ಆಗಿರುವುದು ಖುಷಿಯ ಸಂಗತಿ.

ಶೈಲಜ ತಮ್ಮ ಮುಗ್ಧ ಕಣ್ಣುಗಳಲ್ಲಿ ಲೋಕವನ್ನು ನೋಡುತ್ತಾರೆ. ಮುಗ್ಧವಾಗಿ ನೋಡುವುದೆಂದರೆ ಶುದ್ಧವಾಗಿ ಪರಿಭಾವಿಸುವುದು. ಅವರ ಮುಗ್ಧತೆಯ ಭಿತ್ತಿಯಲ್ಲಿ ಅರಿವಿನ ಸಾಲುಗಳು ಮಿಂಚಿನಂತೆ ಫಳಫಳಿಸುತ್ತವೆ. ನಮ್ಮನ್ನು ಚಕಿತಗೊಳಿಸಿ ಅರೆಕ್ಷಣ ಆ ಸಾಲುಗಳಲ್ಲಿ ಮನಸ್ಸನ್ನು ಹಿಡಿದು ನಿಲ್ಲಿಸುತ್ತವೆ. 'ಬೆಳಕಿನ ಗರ್ಭದೆಡೆಗೆ...’ ಪಯಣಿಸುವಾಗ ಅಯಾಚಿತವಾಗಿ ಆವರಿಸಿಕೊಳ್ಳುವ ಬೆಳಕು 'ಅವಳ ಅರಿವ’ನ್ನು ತೆರೆದುತೋರಿಸುತ್ತವೆ.

ಈ ಕವಿತೆಗಳಲ್ಲಿ ಕೊನೆಯಿಲ್ಲದ ಹುಡುಕಾಟವಿದೆ. ಅದು ಕವಿತೆಗೆ ಚಲನಶೀಲತೆಯನ್ನು ನೀಡಿದೆ. ಮೂರ್ತ ಬದುಕಿನ ತಲ್ಲಣಗಳಿಗೆ ಸ್ಪಂದಿಸುತ್ತಲೇ ಅಮೂರ್ತಕ್ಕೆ ಕೈಚಾಚುವ ದಾಹ ಕವಿತೆಗಳಲ್ಲಿ ಆರ್ತತೆಯನ್ನೂ ಆರ್ದ್ರತೆಯನ್ನೂ ತುಂಬಿದೆ.

ಸಿಕ್ಕದ, ದಕ್ಕದ ಅದ್ಯಾವುದೋ ಸ್ವರವನ್ನ
ನುಡಿಸಹೊರಟಿದೆ ಕೈಬೆರಳು
ಜೀವಸ್ವರವನ್ನು ಕೈವಶಮಾಡಿಕೊಂಡು ನುಡಿಸಲೆತ್ನಿಸುವ ಕವಯತ್ರಿ ಪ್ರೇಮದ ಮಾರ್ದವತೆಯಲ್ಲಿ ಅದನ್ನು ಕಾಣುತ್ತಾಳೆ. ಕವಿತೆಗಳ ಒಳಗೆ ಪ್ರೇಮದ ಕನಸುಗಳು ಹರಡಿವೆ. ಪ್ರೇಮ ಭಾವದ ಉಸಿರು ತಾಕುವ ಹಾಗೆ ತಾದಾತ್ಮ್ಯದಲ್ಲಿ ಬರೆಯುವ ಕವಯತ್ರಿ ವಯೋಸಹಜ ನವಿರು ಭಾವನೆಗಳಿಗೆ ನಿರೀಕ್ಷೆಯ ಬೆಚ್ಚನೆಯ ಹೊದಿಕೆ ತೊಡಿಸುತ್ತಾರೆ. ನಿಲ್ಲದ ಹುಡುಕಾಟ, ಕೋರಿಕೆ, ಆಲಾಪನೆ, ನಿರೀಕ್ಷಕಿ ಮುಂತಾದ ಕವಿತೆಗಳಲ್ಲಿ ಈ ರಾಗದ ಪಲಕುಗಳು ಗುಂಯ್‌ಗುಡುತ್ತವೆ.
ಕವಿತೆಗಳಲ್ಲಿ 'ಅವನ’ ಪ್ರೇಮಕ್ಕಾಗಿ ಸದಾ ತುಡಿಯುವ ಈ ಹೆಣ್ಣುದನಿ ಪ್ರೇಮದ ಗಾಢ ವ್ಯಾಮೋಹದಲ್ಲಿ ತೇಲಿಹೋಗುವಂಥಹುದಲ್ಲ. ಇದು ಜಾಗೃತ ಸ್ತ್ರೀ ಧ್ವನಿಯೂ ಹೌದು. ಇಲ್ಲಿ ಹೆಣ್ತನದ ಸುಕುಮಾರತೆಗೆ ಸ್ವಾಭಿಮಾನದ ವಜ್ರಲೇಪವಿದೆ. ವಿಚಾರದ ವಿವೇಕವಿದೆ. ಆದ್ದರಿಮದ ಅವಳು ಕಾಯುತ್ತಿರುವ 'ಅವನು’ ರಾಮನಂತೆಯೋ, ದುಷ್ಯಂತನಂತೆಯೋ - ಸ್ತ್ರೀ ಮನ ಭಂಜಕನಲ್ಲ. ಹೆಣ್ಣುಮನವನ್ನು ಹೊಸಕಿ ಹಾಕದೇ ಜೀವಭಾವದ ಉದ್ದೀಪಕನಾಗಿ ಇರುವಂಥವನು ಅವನು.

ಇಂದ್ರಿಯ ಸೈನಿಕರೆಲ್ಲ ಎಚ್ಚರಗೊಂಡು
ಕಾಯುತ್ತಿದ್ದಾರೆ ಅವನ ಆಗಮನಕ್ಕೆ
ಪ್ರಕೃತಿ ಸಹಜವಾದ ಇಂದ್ರಿಯಾನುಭೂತಿಗೆ ಕಾತರಿಸುತ್ತಲೇ ಹೆಣ್ಣನ್ನು ತುಳಿಯುವ ಸೋಗಲಾಡಿತನವನ್ನು ಧಿಕ್ಕರಿಸುವ ಎಚ್ಚರವನ್ನೂ ತಾಳುವ ಕವಿತೆ ಪರಂಪರೆಯೊಂದಿಗೆ ಮಾತಿಗಿಳಿವ ಪರಿ ಚೇತೋಹಾರಿಯಾಗಿದೆ. ಹೆಣ್ಣಿನ ಒಳಲೋಕದ ಆಕಾಂಕ್ಷೆಗಳನ್ನು ಸೂಚ್ಯವಾಗಿ ಪ್ರತಿಪಾದಿಸುವ 'ನಿನಗಾಗಿ ಕಾದಿರುವೆ ಪುಟ್ಟ ಹಣತೆಯ ಹಚ್ಚಿ’ ಕವಿತೆಯಲ್ಲಿ ಪ್ರೇಮದ ಪ್ರಭೆ ಪಸರಿಸುತ್ತದೆ. ಆ ಪ್ರಭೆ ಹಲವು ಕವಿತೆಗಳಲ್ಲಿ ಪ್ರತಿಫಲಿಸಿದೆ.

ಕವಯತ್ರಿ ಶೈಲಜಾರ ಬರವಣಿಗೆಯ ಕುರಿತು ಆಸ್ಥೆ ಮೂಡುವುದು ಅವರು ಇಡಿಯಾಗಿ ಬದುಕನ್ನು ಪರಿಭಾವಿಸುವ ಪ್ರಬುದ್ಧತೆಯಿಂದಾಗಿ. ಆ ಪ್ರಬುದ್ಧತೆ ಅವರಿಗೆ 'ಒಳನೋಟ’ವನ್ನು ನೀಡಿದೆ. ಬದುಕಿನಿಂದಲೇ ಮೂಡಿದ ಫಿಲಾಸಫಿಯನ್ನು ಹಸಿಹಸಿಯಾಗಿ ಮುಂದಿಡದೆ, ಘೋಷಣೆಯಾಗಿಸದೆ ಪ್ರತಿಮೆಗಳಲ್ಲಿ ಧ್ವನಿಸುವ ಕೌಶಲ ಇಲ್ಲಿನ ಕೆಲವು ಕವಿತೆಗಳಲ್ಲಿ ಸಿದ್ಧಿಸಿದೆ. ಹುಲುಗೂರು ಸಂತೆ ಇನ್ನೆಷ್ಟು ದಿನ? ಎಂಬ ಕವಿತೆಯಲ್ಲಿ ಷರೀಫರು ಕಂಡ ಬದುಕೆಂಬ ಸಂತೆಯ ನೆರಳಿದೆ. ಅದನ್ನು ತಮ್ಮೊಳಗೂ ಕಂಡು ಶೈಲಜ ಮರುಸೃಷ್ಟಿಸುತ್ತಾರೆ. ವ್ಯವಸ್ಥೆಯ ಕರಾಳ ಮುಖಗಳು, ಸರಕು ಸಂಸ್ಕೃತಿಯ ಕ್ರೌರ್ಯ ಇವೆಲ್ಲವನ್ನೂ ಕಂಡು ದಿಗ್ಭ್ರಾಂತಗೊಂಡ ಮನಸ್ಥಿತಿ ಕವಿತೆಯಲ್ಲಿ ಕಂಡರಿಸಲ್ಪಟ್ಟಿದೆ.

ಹೌದು, ಸಂತೆಗೆ ಬಂದುಬಿಟ್ಟಿದ್ದೇನೆ
ನಾನು ಸಹ ನಿಮ್ಮೊಂದಿಗೆ.
ಯಾರು ಕರೆತಂದರು? ಎಲ್ಲಿದ್ದೆ?
ಎಲ್ಲಿಂದ? ಅದೇಕೆ? ಎಂದು ಯೋಚಿಸುತ್ತಾ
ಹೋದಂತೆಲ್ಲ ಪ್ರಶ್ನೆಗಳ ಸರಮಾಲೆ.
ಅವುಗಳಿಗೆ ಅರ್ಥವೂ ಇಲ್ಲ ಉತ್ತರವೂ ಇಲ್ಲ
ಸಂತೆಯ ಸಂಭ್ರಮದಲ್ಲಿ ಕಳೆದುಕೊಳ್ಳುತ್ತಿರುವಂತೆಯೇ ವ್ಯವಹಾರ ಜಗತ್ತಿನ ದ್ರೋಹ ಧುತ್ತೆಂದು ಎದುರಾಗಿ ದಿಗಿಲುಗೊಳಿಸುತ್ತದೆ.
ಅರೆ! ಹುಲುಗೂರು ಸಂತೆಯಲ್ಲಿ ಹೆಣ್ಣುಗಳು
ಮಾರಾಟವಾಗುತ್ತವೆಯಂತೆ
ನನಗೆ ತಿಳಿದೇ ಇರಲಿಲ್ಲ
.........................................
ಸರಕು ಮಾರಾಟವಾಗುತ್ತಿದೆ ತನಗೆ ಗೊತ್ತಿಲ್ಲದಂತೆ
ಮತ್ಯಾವ ದೇಶಕ್ಕೋ, ಮತ್ತೆಷ್ಟು ಜನರ ಕೈಯಡಿಗೋ
ಅದೆಷ್ಟು ಬೇಡುವ ಕಾಡಿಸುವ ಕೈಗಳಿಗೋ
ಅದ್ಯಾವ ಮಹಡಿಗೋ, ಮಂಚಕ್ಕೋ!
ಬಂಡವಾಳಶಾಹಿಯ ಕ್ರೌರ್ಯವನ್ನು ಸೂಕ್ಷ್ಮವಾಗಿ ಹೇಳುವ ಕವಿತೆ ತನ್ನ ಬಹುಸ್ಪರೀಯತೆಯಿಂದ ಗಮನಸೆಳೆಯುತ್ತದೆ.
'ಬೆಳಕ ಗರ್ಭದೆಡೆಗೆ...’ ಕೂಡ ಭರವಸೆಯ ಕವಿತೆ. ಹುಟ್ಟು-ಸಾವುಗಳು ಹಗಲು ಇರುಳುಗಳಂತೆ ಒಂದರ ಹಿಂದೆ ಇನ್ನೊಂದು ಇವೆ. ಇವುಗಳ ಮಧ್ಯೆಯೇ ಬದುಕಿನ ಓಟ ಸಾಗಿದೆ. ಬೆಳಕನ್ನು ಹೊಂದುವ ಹಂಬಲ ಹಾಗೂ ಬದುಕುವ ಹಂಬಲಗಳೆರಡೂ ಇಲ್ಲಿ ಒಂದೇ ಆಗಿವೆ. ಬೆಳಕನ್ನು ಕೆಲಕಾಲ ಹಿಡಿದಿಡುವ ಹಣತೆಯಂತೆ ನಮ್ಮ ಬದುಕು... ಹೀಗೆ ಬದುಕಿನ ಒಳಮರ್ಮವನ್ನು ಕವಿತೆ ಬೆದಕುತ್ತ ಹೋಗುತ್ತದೆ.

ಅಶ್ವವೂ ನೀನೆ ಬಯಲೂ ನಿನ್ನದೆ
ಓಡುವುದಷ್ಟೆ ನಿನ್ನ ಕೆಲಸ, ಅದ ನೋಡುವುದಷ್ಟೆ 
ನನ್ನ ಭಾಗ್ಯ.
ಯಾರ ಹಂಗೂ ಇಲ್ಲ ನಿನಗೆ 
ಜೀವದ ಹಂಗೂ ಸಹ!
ಈ ಹಣತೆ ಕಲಾವಿದನ ಕೈಯಲ್ಲಿ 
ಅರಳಿದ ಬೆಳಕು.
ಆದರೆ ಸಾವಿನೊಂದಿಗೆ ಲೋಕ ಕೊನೆಯಾಗುವುದಿಲ್ಲ. ಹಣತೆಯಿಂದ ಹಣತೆ ಹಚ್ಚುತ್ತ ಜಗತ್ತು ಚಲಿಸುತ್ತದೆ. ಮುಂದುವರೆದು ಅದನ್ನು ಮಿಂಚುಹುಳದ ಪ್ರತಿಮೆಯಲ್ಲಿ ಕವಯತ್ರಿ ಕಂಡರಿಸುತ್ತಾಳೆ. ಒಂದು ಮಿಂಚುಹುಳದ ಬೆಳಕು ಆರುತ್ತಿದ್ದಂತೆಯೇ ಮತ್ತಷ್ಟು ಹೊಸಜೀವಗಳು ಆ ಬೆಳಕನ್ನು ತಮ್ಮ ಪುಟ್ಟ ಮೈಯ್ಯಲ್ಲಿ ಹೊತ್ತೊಯ್ಯುತ್ತಿರುತ್ತವೆ.

ಕಮಟು ಮಣ್ಣಿನ ಮೇಲೆ ಪವಡಿಸಿ 
ಮಿನುಗುವೆ, ಮಿಂಚುವೆ, ಬೆಳಗುವೆ ಬೆಳಕ.
ನಿನ್ನ ಬೆಳಕು ಆರುವ ಮುನ್ನ,
ಬೆಳಗುತ್ತಿದೆ ಮತ್ತೊಂದು ಬೆಳಕು.
ಅಲ್ಲಿ ಚಿಲಿಪಿಲಿಗಳುಲಿಯಲ್ಲಿ 
ಅವುಗಳಿಂಚರದ ಪಲುಕು.

'ಅನುಭವದ ಅಡುಗೆ’ ಕವಿತೆಯಲ್ಲಿ ಕವಯತ್ರಿ ನಡೆಸುವ ಅನುಭವ ಶೋಧದ ಪರಿ ಆಸಕ್ತಿದಾಯಕವಾದುದು. ಬದುಕಿನ ಬವಣೆಗಳಲ್ಲಿ ಉರಿದಾಗಲೇ ಅನುಭವವು ಸಿಗುವುದು. ಬದುಕಿನ ಪೈಪೋಟಿಯಲ್ಲಿ ಉರಿಯುವ ನಾವು ಕೆಲವೊಮ್ಮೆ ಹಸಿಯಾಗಿ ಉರಿಯಲಾಗದೇ ಹೊಗೆ ಕಾರುತ್ತೇವೆ! ಅಡುಗೆ ಒಲೆ ಉರಿಯುವ ಹಂತ ಹಂತವಾದ ಪ್ರಕ್ರಿಯೆಯ ಮೂಲಕ ಬದುಕಿನ ಸತ್ಯವನ್ನು ಕವಯತ್ರಿ ಕಾಣಿಸುತ್ತಾಳೆ. ಈ ಅನುಭವದ ಅಡುಗೆ 'ಮಾಡಿ’ದ್ದಲ್ಲ 'ಆಗಿ’ದ್ದು. ನಮ್ಮ ಯೋಚನೆ, ಯೋಜನೆಗಳನ್ನು ಮೀರಿ ಅನುಭವವು 'ಆಗು’ತ್ತದೆ. ಅನುಭವದ ಹಸಿವು ಎಂದಿಗೂ ತಣಿಯದೆ ಮುಂದುವರಿಯುತ್ತಲೇ ಇರುತ್ತದೆ.

ಅನುಭವದ ಅಡುಗೆ
ಆ ನಳಮಹಾರಾಜನ ಪಾಕದಂತೆ,
ಸವಿದಷ್ಟು ಸ್ವಾದ, ಉಂಡಷ್ಟೂ ಹಸಿವು.
'ಉಂಡಷ್ಟೂ ಹಸಿವು’ ಎಂಬ ಕವಿತೆಯ ಕೊನೆ ಮತ್ತೆಮತ್ತೆ ಅನುರಣಿಸುವ ಗುಣ ಹೊಂದಿದೆ.

'ಇನ್ಯಾವ ಹಣ್ಣು ತರಲಿರುವೆ ಜಾಬ್ಸ್...?’ ಕವಿತೆ ಈ ಸಂಕಲನದಲ್ಲಿ ಕಾಡುವ ಮತ್ತೊಂದು ಕವಿತೆ. ತಾಂತ್ರಿಕ ಜಗತ್ತಿನ ಮೇಧಾವಿ ಸ್ಟೀವ್ ಜಾಬ್ಸ್ ಬಗ್ಗೆ ಹುಟ್ಟಿದ ಕವಿತೆ ಬರಿಯ ಅವನ ಕಥೆ ಹೇಳದೆ ಮನುಕುಲದ ಕಥೆಯಾಗಿಬಿಡುತ್ತದೆ. ಇದೇ ಉತ್ತಮ ಕಾವ್ಯದ ಲಕ್ಷಣ. 'ಆಪಲ್’ ಪದವನ್ನು ಧ್ವನಿಪೂರ್ಣವಾಗಿ ದುಡಿಸಿಕೊಳ್ಳುವಲ್ಲಿ ಕವಿತೆ ಯಶಸ್ವಿಯಾಗಿದೆ. ಸ್ಟೀವ್ ಎಷ್ಟು ಎತ್ತರಕ್ಕೆ ಬೆಳೆದರೂ ಸಾವು ಅವನನ್ನು ಬಿಡಲಿಲ್ಲ ಎಂಬುದು ಮನುಕುಲದ ಮುಂದಿರುವ ಸತ್ಯ. ಒಂದರ ಅಂತ್ಯ ಇನ್ನೊಂದರ ಆರಂಭವೆಂಬುದೂ ಅಷ್ಟೇ ಸತ್ಯ.

ಆಪಲ್ ತೊಟ್ಟು ಕಳಚಿ 
ಮತ್ತೆ ಹುಟ್ಟು ಪಡೆಯಲು ಹೋಯಿತೇ
.......................................
ಈಗ ಮತ್ಯಾವ ಹಣ್ಣು 
ತರಲು ಹೊರಟಿರುವೆ ಜಾಬ್ಸ್?
ಇಂತಹ ಗಹನ ಪ್ರಶ್ನೆಗಳನ್ನು ಕೇಳುವ ಮೂಲಕ ಕಾವ್ಯ ಪ್ರಪಂಚಕ್ಕೆ ಅಡಿಯಿರಿಸುತ್ತಿರುವ ಶೈಲಜ ನಿಂಬೇನಹಳ್ಳಿ ನಿಜಕ್ಕೂ ಭರವಸೆ ಮೂಡಿಸುತ್ತಾರೆ. ಇನ್ನೂ ವಿದ್ಯಾರ್ಥಿನಿಯಾಗಿರುವ ಅವರೊಳಗಿನ ಜಿಜ್ಞಾಸೆ ಹಾಗೂ ಅರಿವಿನ ದಾಹ ಗಮನನಿಸುವಂಥದ್ದು.

ನನಗೆ ಅರಿವು ಬಂದಾಗಿನಿಂದ 
ಆಗಸಕ್ಕೆ ಕೈಚಾಚಿಯೇ ಇದ್ದೇನೆ
ಎಂಬ ಮಹತ್ವಾಕಾಂಕ್ಷೆಯುಳ್ಳ ಕವಯತ್ರಿಯು ಬರೆದ ಕವಿತೆಗಳು ಮೆಚ್ಚಿಗೆ ಮೂಡಿಸುವಂತೆ ಬರೆಯಬಹುದಾದ ಕವಿತೆಗಳ ಕುರಿತು ಕುತೂಹಲ ಮೂಡಿಸುತ್ತವೆ. ಅನುಭವದ ದಾಹ, ಅರಿವಿನ ಎಚ್ಚರ ಎರಡನ್ನೂ ಹೊಂದಿರುವ ಶೈಲಜ ಅವುಗಳನ್ನು ಧರಿಸಿ ದಕ್ಕಿಸಿಕೊಳ್ಳುವ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳಬೇಕಾದುದು ಅಗತ್ಯವಾಗಿದೆ. ಅಂತಹ ಸಾಧ್ಯತೆ ಅವರಿಗಿದೆ. ಶೈಲಜರೊಂದಿಗೆ ಅವರ ಕಾವ್ಯವೂ ಬೆಳೆಯಲಿ ಎಂಬುದು ಹಾರೈಕೆ.

1 ಕಾಮೆಂಟ್‌:

Nagaraj Surve ಹೇಳಿದರು...

ಸಮಾಜದ ಹಿಂದಿನ ಸ್ಥಿತಿಗೆ ಇಡೀದ ಕನ್ನಡಿ ನಿಮ್ಮ ಕವಿತೆ...