ಭಾನುವಾರ, ಮಾರ್ಚ್ 8, 2015

ಭಾರತರತ್ನಕ್ಕೊಂದು ವಿಶಿಷ್ಟ ಗೌರವ: ತುಮಕೂರು ವಿ.ವಿ.ಯ ಮಾಳವೀಯ ಭವನ

(ಮಾರ್ಚ್ 08, 2015ರಂದು 'ವಿಜಯವಾಣಿ' ಪತ್ರಿಕೆಯ ಭಾನುವಾರದ ಪುರವಣಿ 'ವಿಜಯ ವಿಹಾರ'ದಲ್ಲಿ ಪ್ರಕಟವಾದ ಲೇಖನ)

ಪಂ| ಮಾಳವೀಯ
ಸತ್ಯವನ್ನೇ ಮಾತನಾಡಿ, ಸತ್ಯವನ್ನೇ ಜೀವಿಸಿ, ಸತ್ಯವನ್ನೇ ಯೋಚಿಸಿ. ಅಧ್ಯಯನವನ್ನು ನಿಮ್ಮ ಜೀವನದುದ್ದಕ್ಕೂ ಮುಂದುವರಿಸಿ. ನ್ಯಾಯಯುತರಾಗಿರಿ ಮತ್ತು ಯಾರಿಗೂ ಹೆದರಬೇಡಿ. ಕೆಟ್ಟದ್ದನ್ನು ಮಾಡುವುದಕ್ಕೆ ಮಾತ್ರ ಹಿಂಜರಿಯಿರಿ. ಇಷ್ಟಪಟ್ಟು ನಿಮ್ಮ ಸಹವಾಸಿಗಳ ಸೇವೆ ಮಾಡಿ. ಮಾತೃಭೂಮಿಯನ್ನು ಪ್ರೀತಿಸಿ. ಒಳ್ಳೆಯದನ್ನು ಮಾಡುವುದಕ್ಕೆ ಅವಕಾಶ ದೊರೆತಾಗಲೆಲ್ಲ ಅದನ್ನು ಮಾಡಿ... ಹೀಗೆನ್ನುವ ಫಲಕವನ್ನು ಓದುತ್ತಲೇ ನೀವು ಆ ಭವ್ಯ ಭವನದ ಒಳಗೆ ಅಡಿಯಿಡುತ್ತೀರಿ.
ಅಷ್ಟರಲ್ಲಿ ಮತ್ತೊಂದು ಫಲಕ ನಿಮ್ಮ ಕಣ್ಣಿಗೆ ಬೀಳುತ್ತದೆ. ಕೇವಲ ಕೈಗಾರಿಕಾ ಪ್ರಗತಿ ಯಾವ ಜನರಿಗೂ ಸಂತೋಷ ಹಾಗೂ ಅಭ್ಯುದಯವನ್ನು ತಂದುಕೊಡದು. ನೈತಿಕ ಪ್ರಗತಿಯೇ ಎಲ್ಲಕ್ಕಿಂತ ಮಿಗಿಲಾದದ್ದು... ಹಾಗೇ ಮುಂದುವರಿದರೆ ಇನ್ನೊಂದು, ಮತ್ತೊಂದು. ಆಯಸ್ಕಾಂತದಂತೆ ಸೆಳೆಯುವ ಆ ಹೇಳಿಕೆಗಳನ್ನೆಲ್ಲ ನೀವು ಓದುತ್ತಲೇ ಹೋಗುತ್ತೀರಿ, ಮತ್ತೆ ಯೋಚನಾಮಗ್ನರಾಗುತ್ತೀರಿ. ನಡುನಡುವೆ ಇಣುಕುವ ಅಪೂರ್ವ ಚಿತ್ರಪಟಗಳನ್ನು ಕಂಡು ಸೋಜಿಗಪಡುತ್ತೀರಿ, ಇತಿಹಾಸಕ್ಕೆ ಜಾರುತ್ತೀರಿ.

ಅದು ತುಮಕೂರು ವಿಶ್ವವಿದ್ಯಾನಿಲಯದ ಪಂಡಿತ ಮದನ ಮೋಹನ ಮಾಳವೀಯ ಭವನ. ತುಮಕೂರು ನಗರದ ಹೆಬ್ಬಾಗಿಲಿನಲ್ಲೇ ಬಿ. ಎಚ್. ರಸ್ತೆಯ ಮಗ್ಗುಲಿಗೆ ಹೊಂದಿಕೊಂಡಂತಿರುವ ತುಮಕೂರು ವಿಶ್ವವಿದ್ಯಾನಿಲಯದ ಒಳ ಹೊಕ್ಕರೆ ಇಡೀ ಕ್ಯಾಂಪಸ್‌ಗೆ ಕಳಶಪ್ರಾಯದಂತೆ ಕಂಗೊಳಿಸುತ್ತದೆ ಮಾಳವೀಯ ಭವನ. ಎದುರಿಗೆ ಹಬ್ಬಿರುವ ಹಸಿರು ಉದ್ಯಾನದ ಒಂದು ಪಾರ್ಶ್ವಕ್ಕೆ ಭಾರತರತ್ನ ಡಾ. ಎಂ. ಎಸ್. ಸುಬ್ಬುಲಕ್ಷ್ಮಿಯವರ ಕಂಚಿನ ವಿಗ್ರಹ, ಇನ್ನೊಂದು ಅಂಚಿಗೆ ಶಹನಾಯ್ ದಿಗ್ಗಜ ಭಾರತರತ್ನ ಬಿಸ್ಮಿಲ್ಲಾ ಖಾನ್ ಅವರ ಪುತ್ಥಳಿ; ಮತ್ತೊಂದೆಡೆ ಭಾರತರತ್ನ ಡಾ. ಸಿ. ಎನ್. ಆರ್. ರಾವ್ ಉನ್ನತ ಸಂಶೋಧನ ಕೇಂದ್ರ. ಮಾಳವೀಯ ಅವರಿಗೆ ಕಳೆದ ಜನವರಿ 26ರಂದು ಭಾರತರತ್ನ ಪ್ರಶಸ್ತಿ ಮರಣೋತ್ತರವಾಗಿ ಸಂದಾಯವಾಗಿರುವುದರೊಂದಿಗೆ ಕ್ಯಾಂಪಸಿನ ಒಟ್ಟಾರೆ ಪರಿಸರದಲ್ಲಿ ಈಗ ಹೊಸದೊಂದು ಕಾಂತಿ ನಳನಳಿಸತೊಡಗಿದೆ. ನಾಲ್ಕೂ ಭಾರತರತ್ನಗಳು ಹೀಗೆ ಕಣ್ಣಳತೆಯ ದೂರದಲ್ಲಿ ರಾರಾಜಿಸುತ್ತಿರುವುದು ಎಂತಹ ಕಾಕತಾಳೀಯ!

ತುಮಕೂರು ವಿ.ವಿ.ಯಲ್ಲಿರುವ ಪಂ| ಮಾಳವೀಯ ಭವನ
2012ರಲ್ಲಿ ಅಂದಿನ ಕುಲಪತಿ ಡಾ. ಎಸ್. ಸಿ. ಶರ್ಮಾ ಅವರ ನೇತೃತ್ವದಲ್ಲಿ ಮಾಳವೀಯ ಭವನ ಸ್ಥಾಪನೆಯಾದಾಗ ಮಾಳವೀಯರಿಗೆ ಮುಂದೊಂದು ದಿನ ಭಾರತರತ್ನ ಘೋಷಣೆಯಾಗಬಹುದೆಂಬ ಊಹೆ ಯಾರಿಗೂ ಇದ್ದಿರಲಾರದು. ಭವನ ಸ್ಥಾಪನೆಯ ಹಿಂದೆ ಇದ್ದುದು ದೇಶ ಕಂಡ ಅಪರೂಪದ ದಾರ್ಶನಿಕ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಶಿಕ್ಷಣ ತಜ್ಞನಿಗೆ ತನ್ನದೇ ಆದ ರೀತಿಯಲ್ಲಿ ಗೌರವವನ್ನು ಅರ್ಪಿಸುವ ಉದ್ದೇಶ.

ವಿಶ್ವವಿದ್ಯಾನಿಲಯಕ್ಕೆ ಆಗಮಿಸುವ ಅತಿಗಣ್ಯ ವ್ಯಕ್ತಿಗಳಿಗಾಗಿ ಒಂದು ವಿಶಿಷ್ಟ ಅತಿಥಿಗೃಹವನ್ನು ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದೆವು. ಮಹಾತ್ಮ ಗಾಂಧೀಜಿಯವರಿಂದಲೇ ಮಹಾಮನ ಎಂದು ಕರೆಸಿಕೊಂಡ, ದೇಶದ ಉದ್ದಗಲ ಸುತ್ತಿ ಒಂದೊಂದು ಪೈಸೆ ದೇಣಿಗೆ ಸಂಗ್ರಹಿಸಿ ಏಷ್ಯಾದಲ್ಲೇ ಅತಿದೊಡ್ಡ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯವನ್ನು ಕಟ್ಟಿದ ಮಾಳವೀಯ ಅವರಿಗೇ ಏಕೆ ಈ ವಿಶೇಷ ಭವನವನ್ನು ಸಮರ್ಪಿಸಬಾರದು ಎಂಬ ಆಲೋಚನೆ ಬಂತು. ನನಗೆ ಜತೆಯಾಗಿದ್ದ ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ ಅವರೂ ಇದರಲ್ಲಿ ತುಂಬ ಮುತುವರ್ಜಿ ವಹಿಸಿದರು. ತಕ್ಷಣ ಅದನ್ನು ಕಾರ್ಯಗತಗೊಳಿಸಿದೆವು. ಜನರಿಂದ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಅಭೂತಪೂರ್ವ. ಬಹುಶಃ ದೇಶದಲ್ಲೇ ಮಾಳವೀಯರಿಗೆ ಇಂಥದ್ದೊಂದು ಸ್ಮಾರಕ ಇನ್ನೊಂದಿಲ್ಲ, ಎಂದು ನೆನಪಿಸಿಕೊಳ್ಳುತ್ತಾರೆ ಮಾಜಿ ಕುಲಪತಿ ಡಾ. ಶರ್ಮಾ. ಅವರೀಗ ಛತ್ತೀಸ್‌ಘಡದ ಕೇಂದ್ರೀಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಪತಿ.

ಬನಾರಸ್ ಹಿಂದೂ ವಿ.ವಿ. ಹೀಗೆ ಆರಂಭವಾಯ್ತಂತೆ...
ಮಾಳವೀಯ ಭವನ ಬರೀ ಅತಿಥಿಗೃಹವಾಗಿ ಉಳಿದಿಲ್ಲ. ಮಾಳವೀಯ ಅವರ ಚಿಂತನೆ, ಜೀವನ ಮತ್ತು ಸಾಧನೆಗಳನ್ನು ಸಮಾಜಕ್ಕೆ ಪರಿಚಯಿಸುವ ಅಪರೂಪದ ನಿರ್ಮಾಣವಾಗಿ ಬೆಳೆದುನಿಂತಿದೆ. ಭವನದ ಪ್ರವೇಶದ್ವಾರದಲ್ಲೇ ಸುಂದರ ಚೌಕಟ್ಟಿನೊಳಗೆ ಶೋಭಿಸುವ ಮಾಳವೀಯ ಅವರ ಆಳೆತ್ತರದ ವರ್ಣಚಿತ್ರ ವೀಕ್ಷಕರನ್ನು ಸೆಳೆಯುತ್ತದೆ. ಅದರ ಇಕ್ಕೆಲಗಳಲ್ಲಿ ಇಡಲಾಗಿರುವ ಮಾಳವೀಯ ಅವರ ಜೀವನದ ವಿವಿಧ ಮಜಲುಗಳನ್ನು ಪರಿಚಯಿಸುವ ಇನ್ನೆರಡು ಫಲಕಗಳು ನೋಡುಗರನ್ನು ಭವನದ ಭೇಟಿಗೆ ಸಿದ್ಧಗೊಳಿಸುತ್ತವೆ.

1919ರಿಂದ 1936ರವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಕುಲಪತಿಯಾಗಿದ್ದ ಮಾಳವೀಯರು ವಿವಿಧ ಸಂದರ್ಭಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳನ್ನು ಆಯ್ದು ಸುಂದರ ಚೌಕಟ್ಟುಗಳಲ್ಲಿ ವಿನ್ಯಾಸಗೊಳಿಸಿ ಭವನದ ತುಂಬೆಲ್ಲ ಪ್ರದರ್ಶಿಸಲಾಗಿದೆ. ಮಾಳವೀಯ ಅವರು ತಮ್ಮ ಕನಸಿನ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಯೋಜನೆಯನ್ನು ಸಾಕಾರಗೊಳಿಸುವ ಮುನ್ನವೇ ಅದರ ಸಂವಿಧಾನವನ್ನು ಬರೆದಿಟ್ಟಾಗಿತ್ತು. ಭವನದ ಗೋಡೆಯ ಮೇಲೆ ರಾರಾಜಿಸುವ ಅಂತಹದೊಂದು ಫಲಕ ಹೀಗೆನ್ನುತ್ತದೆ: ವಿದ್ಯಾರ್ಥಿಗಳ ಮೆದುಳಿನಷ್ಟೇ ಅವರ ಹೃದಯವನ್ನೂ ಬೆಳೆಸದೇ ಹೋದರೆ ಒಂದು ವಿಶ್ವವಿದ್ಯಾನಿಲಯ ತನ್ನ ಕಾರ್ಯದಲ್ಲಿ ಎಡವಿದಂತೆ. ಹೀಗಾಗಿ ಯುವಕರ ಚಾರಿತ್ರ್ಯವನ್ನು ಬೆಳೆಸುವುದು ಪ್ರಸ್ತಾಪಿತ ವಿಶ್ವವಿದ್ಯಾನಿಲಯ ಒಂದು ಪ್ರಮುಖ ಉದ್ದೇಶವಾಗಲಿದೆ. ವ್ಯಕ್ತಿಗಳನ್ನು ಕೇವಲ ಎಂಜಿನಿಯರುಗಳನ್ನಾಗಿ, ವಿಜ್ಞಾನಿಗಳನ್ನಾಗಿ, ವೈದ್ಯರುಗಳನ್ನಾಗಿ, ವ್ಯಾಪಾರಿಗಳನ್ನಾಗಿ, ಧರ್ಮಶಾಸ್ತ್ರಕಾರರನ್ನಾಗಿ ತಯಾರಿಸುವುದು ಇದರ ಗುರಿಯಲ್ಲ. ಅವರು ಉನ್ನತ ಚಾರಿತ್ರ್ಯ, ಪ್ರಾಮಾಣಿಕತೆ ಹಾಗೂ ಗೌರವದ ಬದುಕನ್ನು ಬಾಳುವಂತಾಗಬೇಕು... ಮಾಳವೀಯ ಅವರ ವಿಶ್ವವಿದ್ಯಾನಿಯದ ಪರಿಕಲ್ಪನೆ ನಮ್ಮ ಇಂದಿನ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಮಾಡಿದ ನೀತಿಪಾಠದಂತಿದೆ.

ಮಾಳವೀಯ ಭವನದಲ್ಲಿ ಪ್ರದರ್ಶಿಸಲಾಗಿರುವ ಒಂದು ಅಪರೂಪದ ಚಿತ್ರ.
ಅಸಹಕಾರ ಚಳುವಳಿಯೂ ಸೇರಿದಂತೆ ಇಡೀ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಮಾಳವೀಯ ಅವರು ವಿವಿಧ ನಾಯಕರುಗಳೊಂದಿಗೆ ಇದ್ದ ಕ್ಷಣಗಳು, ಮಹಾತ್ಮ ಗಾಂಧೀಜಿ, ಸರೋಜಿನಿ ನಾಯ್ಡು, ಜವಾಹರಲಾಲ್ ನೆಹರೂ, ಡಾ. ಎಸ್. ರಾಧಾಕೃಷ್ಣನ್ ಅವರೊಂದಿಗಿನ ಒಡನಾಟ ಎಲ್ಲದರ ಕಥೆ ಹೇಳುತ್ತವೆ ಅಲ್ಲಲ್ಲಿ ಜೋಡಿಸಲಾಗಿರುವ ಅಪೂರ್ವ ಛಾಯಾಚಿತ್ರಗಳು. ಎಲ್ಲವನ್ನೂ ಖುದ್ದು ಬನಾರಸ್ ವಿಶ್ವವಿದ್ಯಾನಿಲಯಕ್ಕೇ ಭೇಟಿ ನೀಡಿ ಸಂಗ್ರಹಿಸಿ, ಸಂಸ್ಕರಿಸಿ ಇಲ್ಲಿ ಪ್ರದರ್ಶಿಸಲಾಗಿದೆ. ಮಾಳವೀಯ ಅವರ ಶಿಕ್ಷಣ ಹಾಗೂ ನೈತಿಕ ಬದುಕಿನ ದರ್ಶನವನ್ನು ಸ್ವಲ್ಪಮಟ್ಟಿಗಾದರೂ ನಮ್ಮ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರತಿಫಲಿಸುವ ಸಣ್ಣ ಪ್ರಯತ್ನ ಇದು, ಎನ್ನುತ್ತಾರೆ ಭವನದ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದ ತುಮಕೂರು ವಿವಿ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಉದಯರವಿ ಎಸ್. ಮೂರ್ತಿ. ಬನಾರಸ್ ವಿಶ್ವವಿದ್ಯಾನಿಲಯದಿಂದ ಸಂಗ್ರಹಿಸಲಾದ ಮಾಳವೀಯ ಅವರನ್ನು ಕುರಿತ ಹತ್ತಾರು ಪುಸ್ತಕಗಳು, ಅವರು ಆರಂಭಿಸಿದ ಪತ್ರಿಕೆಗಳ ಕೆಲವು ಪುಟಗಳು, ಅವರ ಭಾಷಣ ಹಾಗೂ ಬರಹಗಳ ಸಂಗ್ರಹ ಕೂಡ ಮಾಳವೀಯ ಭವನದಲ್ಲಿ ಇವೆ.

ಮಾಳವೀಯ ಅವರೊಬ್ಬ ಶ್ರೇಷ್ಠ ದಾರ್ಶನಿಕ, ಶಿಕ್ಷಣ ತಜ್ಞ, ಮಾನವತಾವಾದಿ, ನೈತಿಕ ಬದುಕಿನ ಪ್ರತಿಪಾದಕ. ಭವನದ ಪ್ರತಿ ಕೊಠಡಿಯಲ್ಲೂ ಮಾಳವೀಯ ಅವರ ಮಹತ್ವದ ಹೇಳಿಕೆಗಳು, ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ವಿಶ್ವವಿದ್ಯಾನಿಲಯಕ್ಕೆ ಭೇಟಿನೀಡುವ ಗಣ್ಯ ವ್ಯಕ್ತಿಗಳು ಇಲ್ಲಿ ವಿಶ್ರಾಂತಿಯನ್ನಷ್ಟೇ ಪಡೆಯುವುದಿಲ್ಲ. ತಾವು ತೆರಳುವಾಗ ದೇಶದ ದಾರ್ಶನಿಕನೊಬ್ಬನ ಉನ್ನತ ಚಿಂತನೆಗಳನ್ನೂ ತಮ್ಮೊಂದಿಗೆ ಒಯ್ಯುತ್ತಾರೆ. ಮಾಳವೀಯ ಅವರಿಗೆ ಭಾರತರತ್ನ ಸಲ್ಲುತ್ತಿರುವುದು ವಿಶ್ವವಿದ್ಯಾನಿಲಯಕ್ಕೆ ಖಂಡಿತಕ್ಕೂ ಹೆಮ್ಮೆಯ ಕ್ಷಣವೇ, ಎನ್ನುತ್ತಾರೆ ತುಮಕೂರು ವಿವಿ ಕುಲಪತಿ ಪ್ರೊ. ಎ. ಎಚ್. ರಾಜಾಸಾಬ್ ಮತ್ತು ಕುಲಸಚಿವ ಪ್ರೊ. ಡಿ. ಶಿವಲಿಂಗಯ್ಯ.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನಿಮಗೆ ಮನೋಬಲ ಇರಬೇಕು ಎನ್ನುತ್ತದೆ ಭವನದ ಗೋಡೆಯ ಮೇಲಿನ ಒಂದು ಫಲಕ. ಅಂತಹದೊಂದು ಮನಸ್ಸು ಹಾಗೂ ಪ್ರಯತ್ನಗಳ ಫಲದಂತೆ ಭಾಸವಾಗುತ್ತದೆ ಮದನ ಮೋಹನ ಮಾಳವೀಯ ಭವನ.

ಕಾಮೆಂಟ್‌ಗಳಿಲ್ಲ: