ಮಂಗಳವಾರ, ಜನವರಿ 29, 2013

ಮಂಗಳೂರು ವಿ.ವಿ. ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಸ್ಪರ್ಧೆಗಳು

ಹಿನ್ನೋಟ: ಶ್ರೀ ಜೋಗಿಯವರು 24-03-2012ರಂದು 8ನೇ ಸಮ್ಮೇಳನ ಉದ್ಘಾಟಿಸಿದ ಕ್ಷಣ.

ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಹಳೆವಿದ್ಯಾರ್ಥಿ ಸಂಘವು ವಿ.ವಿ. ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ ತಿಂಗಳ ಎರಡನೇ ವಾರ ಮಂಗಳೂರಿನಲ್ಲಿ ಆಯೋಜಿಸಲಿದೆ. ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕಥಾಗೋಷ್ಠಿ ಹಾಗೂ ಕವಿಗೋಷ್ಠಿಗಳು ನಡೆಯಲಿದ್ದು, ಅವುಗಳಲ್ಲಿ ಮಂಡನೆಯಾಗಬೇಕಾದ ಪ್ರಬಂಧ, ಕಥೆ ಹಾಗೂ ಕವಿತೆಗಳನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಿದೆ.

ಪ್ರಬಂಧ ಸ್ಪರ್ಧೆಗೆ ಎರಡು ವಿಷಯಗಳನ್ನು ಕೊಡಲಾಗಿದೆ:
1. ಜಾತಿಮುಕ್ತ ಭಾರತ: ಸಾಧ್ಯತೆಗಳು ಮತ್ತು ಸವಾಲುಗಳು
2. ಮಹಿಳಾ ಸಬಲೀಕರಣ: ಆಗಿರುವುದೇನು? ಆಗಬೇಕಿರುವುದೇನು?

ವಿದ್ಯಾರ್ಥಿಗಳು ಯಾವುದೇ ಒಂದು ವಿಷಯವನ್ನು ಆಯ್ದುಕೊಳ್ಳಬಹುದು. ಪ್ರಬಂಧ 15 ನಿಮಿಷಗಳ ಓದಿನ ಮಿತಿಯಲ್ಲಿರಬೇಕು. ಪ್ರತೀ ವಿಷಯಕ್ಕೂ ಮೂರು ಪ್ರತ್ಯೇಕ ಬಹುಮಾನಗಳಿವೆ. ಪ್ರಥಮ ಬಹುಮಾನ ಪಡಕೊಂಡ ಪ್ರಬಂಧಗಳು ಸಮ್ಮೇಳನದಲ್ಲಿ ಮಂಡನೆಯಾಗುತ್ತವೆ.

ಕಥೆ ಹಾಗೂ ಕವನಗಳ ವಿಷಯ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟದ್ದು. ಮೂರು ಉತ್ತಮ ಕಥೆಗಳನ್ನು ಹಾಗೂ ಮೊದಲ ಹತ್ತು ಸ್ಥಾನ ಪಡೆದುಕೊಳ್ಳುವ ಕವಿತೆಗಳನ್ನು ಸಮ್ಮೇಳನದ ಗೋಷ್ಠಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಕಥೆ ನಾಲ್ಕು ಪುಟಗಳ ಮಿತಿಯಲ್ಲಿರಲಿ.

ಮಂಗಳೂರು ವಿ.ವಿ. ವ್ಯಾಪ್ತಿಗೆ ಬರುವ (ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ) ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಕಾಸರಗೋಡಿನ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವಿದೆ. ಎಲ್ಲಾ ವಿಜೇತರಿಗೆ ನಗದು ಬಹುಮಾನ ಹಾಗೂ ಭಾಗವಹಿಸುವ ಎಲ್ಲಾ ವಿದ್ಯಾರ್ಥಿ ಸಾಹಿತಿಗಳಿಗೆ ಪ್ರಶಸ್ತಿ ಪತ್ರಗಳಿವೆ.

ಒಂದು ಕಾಲೇಜಿನಿಂದ ಎಷ್ಟು ಮಂದಿ ಬೇಕಾದರೂ ಭಾಗವಹಿಸಬಹುದು. ಸಂಖ್ಯೆಯ ನಿರ್ಬಂಧವಿಲ್ಲ. ಕಾಲೇಜಿನ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಜತೆಗಿರಿಸಬೇಕು. ಪ್ರವೇಶದೊಂದಿಗೆ ಪೂರ್ಣ ಕಾಲೇಜು ವಿಳಾಸ ಮತ್ತು ಸಂಪರ್ಕ ವಿಳಾಸ ಇರಲಿ. ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ.

ನಿಮ್ಮ ಪ್ರವೇಶಗಳನ್ನು ಫೆಬ್ರವರಿ 20, 2013 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ: ಕಾರ್ಯದರ್ಶಿ, ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಸಮಿತಿ, ಅಕ್ಷರೋದ್ಯಮ, 4ನೇ ಮಹಡಿ, ಸಿಟಿ ಪಾಯಿಂಟ್, ಕೋಡಿಯಾಲಬೈಲ್, ಮಂಗಳೂರು-572103. ಆಸಕ್ತರು ಹೆಚ್ಚಿನ ಮಾಹಿತಿಗಳಿಗೆ 9880621824, 9449525854, 9449663744 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಕಾಮೆಂಟ್‌ಗಳಿಲ್ಲ: