* * *
ಸ್ಟ್ರು ನೂರಕ್ಕೊಬ್ಬರು ಎಂದು ನನಗನಿಸಿತ್ತು. ಅವರ ಪತ್ನಿಯೂ ಅಧ್ಯಾಪಕಿ. ಇಬ್ಬರೂ ತುಂಬ ಸಾತ್ವಿಕರು, ಸಾಧು ಸ್ವಭಾವದವರು. ರಾತ್ರಿ ಹತ್ತೂವರೆಗೆ ಯಾರಾದರೂ ನಮ್ಮ ಹತ್ತಿರ ಮಾತಾಡುವುದಕ್ಕೆಂದು ಫೋನಾಯಿಸಿದರೂ ಅವರು ಒಂದು ಫರ್ಲಾಂಗು ದೂರವಿರುವ ನಮ್ಮ ಮನೆಗೆ ದೌಡಾಯಿಸುತ್ತಿದ್ದರು ಇಲ್ಲವೇ ತಮ್ಮ ಮಕ್ಕಳಲ್ಲೊಬ್ಬರನ್ನು ಕಳಿಸುತ್ತಿದ್ದರು. ವಾರಕ್ಕೊಮ್ಮೆಯಾದರೂ ನಾವೆಲ್ಲ ಅವರ ಮನೆಯಲ್ಲಿ ಸೇರುವುದಿತ್ತು. ರಜೆ ದಿನ ಪೇಪರು ಓದುವುದಕ್ಕೆಂದು ನಾನವರಲ್ಲಿಗೆ ಹೋಗುತ್ತಿದ್ದೆ. ವರ್ಷದಲ್ಲೊಂದು ದಿನ (ಬಹುಶಃ ದೀಪಾವಳಿಗೆ) ಮಾಸ್ಟ್ರ ಮನೆಯಲ್ಲಿ ನಮಗೊಂದು ಖಾಯಂ ಔತಣ. ಸಾಯಿ ಮಂದಿರದಲ್ಲಿದ್ದ ಅಷ್ಟೂ ಮಂದಿಯನ್ನು ಖುದ್ದು ಆಹ್ವಾನಿಸಿ ಅಧ್ಯಾಪಕ ದಂಪತಿ ತಾವೇ ತಯಾರಿಸಿದ ವಿಶೇಷ ಅಡುಗೆಯನ್ನು ಉಣಬಡಿಸುತ್ತಿದ್ದರು. ನಾವು ಪಿ.ಜಿ. ಮುಗಿಸುವ ಕೊನೆಯ ದಿನಗಳಲ್ಲಿ ಗಂಗಾಧರ ಮಾಸ್ಟ್ರು ತುಂಬ ಕುಗ್ಗಿದ್ದರು. ಕಾರಣ, ದೂರದ ಶಿರ್ಲಾಲಿಗೆ ಅವರಿಗೆ ವರ್ಗ ಆಗುವುದರಲ್ಲಿತ್ತು. ಅವರ ಮನೆಯಿಂದ ಶಿರ್ಲಾಲಿಗೆ ಏನಿಲ್ಲವೆಂದರೂ ೮೦-೯೦ ಕಿ.ಮೀ. ದೂರ. ಪ್ರತಿದಿನ ಮೂರು-ನಾಲ್ಕು ಬಸ್ಸು ಹಿಡಿದು ಅಷ್ಟು ದೂರ ಹೋಗಿ ಬರುವುದು ಕನಸಿನ ಮಾತು. ಹಾಗಂತ ಮಾಸ್ಟ್ರು ಮನೆ ಶಿಫ್ಟ್ ಮಾಡುವಂತಿರಲಿಲ್ಲ. ಅವರು ಫಜೀರಿನಲ್ಲಿ ಸೆಟ್ಲ್ ಆಗಿದ್ದರು. ಅವರ ಪತ್ನಿ ಅಲ್ಲೇ ಪಕ್ಕದ ಶಾಲೆಯೊಂದರಲ್ಲಿ ಅಧ್ಯಾಪನ ಮಾಡುತ್ತಿದ್ದರು. ಇಬ್ಬರು ಮಕ್ಕಳೂ ಅಲ್ಲೇ ಪ್ರೈಮರಿ-ಹೈಸ್ಕೂಲ್ ಓದುತ್ತಿದ್ದರು. ಇಷ್ಟು ಜವಾಬ್ದಾರಿಯಿದ್ದುದರಿಂದ ಶಿರ್ಲಾಲಿನಲ್ಲೇ ಒಂದು ರೂಮು ಮಾಡಿ ಅವರು ಒಬ್ಬರೇ ಇರುವಂತೆಯೂ ಇರಲಿಲ್ಲ. ಟ್ರಾನ್ಸ್ಫರ್ ಬೇಡವೆಂದರೆ ತಾನಾಗಿ ಒದಗಿಬಂದ ಪ್ರಮೋಶನೂ ಕೈತಪ್ಪುತ್ತದೆ. ಇನ್ನೇನು ದಾರಿಯೆಂದು ಮಾಸ್ಟ್ರು ತುಂಬ ಚಿಂತಿತರಾಗಿದ್ದರು. ಆ ಬಗ್ಗೆ ಏನು ಮಾಡಬಹುದೆಂದು ನಮ್ಮೊಂದಿಗೆ ಹಲವು ಬಾರಿ ಚರ್ಚಿಸಿಯೂ ಇದ್ದರು. ‘ಬೇರೆ ಕಡೆ, ಸ್ವಲ್ಪ ಹತ್ತಿರಕ್ಕೆ ವರ್ಗಾವಣೆ ಸಿಗುತ್ತದೋ ನೋಡಬಹುದು’ ಎಂದು ಹೇಳುವುದರ ಹೊರತಾಗಿ ನಮಗೂ ಏನೂ ಹೊಳೆಯುತ್ತಿರಲಿಲ್ಲ.* * *
‘... ಮೊನ್ನೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ನಿಮ್ಮ ಲೇಖನ ಓದಿದೆ. ಬೀಚಿನಲ್ಲಿ ಕಡ್ಲೆ ಮಾರುವ ಹುಡುಗಿಯರ ಬಗ್ಗೆ ಬರೆದಿದ್ದಿರಿ ನೋಡಿ, ಅವ್ರು ನನ್ನ ಸ್ಟೂಡೆಂಟ್ಸು...’ ಮಾಸ್ಟ್ರು ಹೇಳಿದರು. ನಾನೊಮ್ಮೆ ಅವಾಕ್ಕಾಗಿ ನಿಂತೆ. ತಿರುಗಿ ಏನು ಹೇಳಬೇಕೆಂದು ಹೊಳೆಯಲಿಲ್ಲ. ಏಕೆಂದರೆ ‘ಅವ್ರು ನನ್ನ ಸ್ಟೂಡೆಂಟ್ಸು...’ ಎಂಬ ಮಾತು ನನಗೆ ತುಂಬ ಅನಿರೀಕ್ಷಿತವಾಗಿತ್ತು. ಮದುವೆಯಾಗಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಮೊದಲ ಬಾರಿಗೆ ನಾನು, ಆರತಿ, ಖುಷಿ ಜತೆಯಾಗಿ ಪಣಂಬೂರು ಬೀಚಿಗೆ ಹೋದದ್ದು, ಅಲ್ಲಿ ಕಡ್ಲೆ ಮಾರೋ ಪುಟ್ಟ ಹುಡುಗಿಯರನ್ನು ಕಂಡು ಕುತೂಹಲ ಮೂಡಿ ಕತ್ತಲಾವರಿಸುವವರೆಗೆ ಅವರೊಂದಿಗೆ ಹರಟುತ್ತಾ ಕೂತದ್ದು, ಫೋಟೋ ತೆಗೆದದ್ದು, ಬೀಚಿಗೆ ಬರುವುದಾದರೂ ಏಕೆ ಬೇಕಿತ್ತೆಂದು ಮತ್ತೆ ಹೆಂಡತಿ ಕೈಯ್ಯಲ್ಲಿ ಬೈಸಿಕೊಂಡದ್ದು... ಇದೆಲ್ಲ ಆಗಿ ಇನ್ನೂ ವಾರ ಆಗಿಲ್ಲ. ಆ ಮಕ್ಕಳು ನನ್ನನ್ನು ಬಹುವಾಗಿ ಕಾಡಿಬಿಟ್ಟಿದ್ದರು. ಅವರ ಬಗ್ಗೆ ಏನಾದರೂ ಬರೆಯುವವರೆಗೆ ನನಗೆ ನೆಮ್ಮದಿಯಿರಲಿಲ್ಲ. ಬರೆದೂ ಆಯ್ತು. ಈಗ ಗಂಗಾಧರ ಮಾಸ್ಟ್ರು ಅಚಾನಕ್ಕಾಗಿ ‘ಅವ್ರು ನನ್ನ ಸ್ಟೂಡೆಂಟ್ಸು...’ ಎಂದಾಗ ನಿಜಕ್ಕೂ ಚಕಿತನಾಗಿಹೋದೆ. ‘ತುಂಬಾ ಬುದ್ಧಿವಂತ ಹುಡಿಗೀರು ಇವರೇ... ತುಂಬಾ ಶಾರ್ಪು. ಆದ್ರೆ ಸಿಕ್ಕಾಪಟ್ಟೆ ಬಡವರು. ತಂದೆ ತಾನು ದುಡಿದದ್ದನ್ನೆಲ್ಲ ಕುಡಿಯುವುದಕ್ಕೇ ಸುರೀತಾನೆ... ನಮ್ಮ ಶಾಲೆಯಲ್ಲಿ ಹೆಚ್ಚಿನವರು ಇಂಥಾ ಮಕ್ಕಳೇ ಇದ್ದಾರೆ. ಆದ್ರೆ ತುಂಬಾ ಒಳ್ಳೆಯವ್ರು. ಫೋಟೊ ನೋಡಿ ನಮ್ಮ ಮಕ್ಕಳೂಂತ ಗೊತ್ತಾಗಿ ಓದುತ್ತಾ ಹೋದೆ. ಕೊನೆಗೆ ನಿಮ್ಮ ಹೆಸ್ರು ಕಂಡು ಕುತೂಹಲ ಆಯ್ತು. ನೀವು ಎಲ್ಲಿದ್ದೀರಿ ಅಂತ ಗೊತ್ತಿರಲಿಲ್ಲ. ಮರುದಿನ ಆ ಮಕ್ಳನ್ನು ಕರೆದು ‘ಇನ್ನು ಅವರು ಪುನಃ ಬೀಚಿನಲ್ಲಿ ಸಿಕ್ಕಿದ್ರೆ ನಮ್ಮ ಮಾಸ್ಟ್ರು ನಿಮ್ಮನ್ನು ಕೇಳಿದ್ದಾರೆ ಅಂತ ಹೇಳಿ’ ಅಂದೆ. ಈಗ ಹೇಗೋ ನಿಮ್ಮ ನಂಬ್ರ ಸಿಕ್ಕಿತು. ಹಾಗೆ ಕಾಲ್ ಮಾಡಿದ್ದು...’ ಮಾಸ್ಟ್ರು ಹೇಳುತ್ತಾ ಹೋಗುತ್ತಿದ್ದರೆ ನಾನು ಗಾಢ ಯೋಚನೆಯಲ್ಲಿ ಮುಳುಗಿದ್ದೆ.







