ಬುಧವಾರ, ಅಕ್ಟೋಬರ್ 7, 2020

ಬಂಧನದ ಬೆಸುಗೆಗೊಂದು ಒಸಗೆ

07 ಅಕ್ಟೋಬರ್ 2020ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ

ಅಲ್ಲೇ ಓದಲು ಇಲ್ಲಿ ಕ್ಲಿಕ್ಕಿಸಿ.

ಇಂತಹ ಮದುವೆ ನೋಡದೆ ವರ್ಷಗಳೆಷ್ಟಾದವು ಅಂತನ್ನಿಸಿತ್ತು. ಅಬ್ಬಬ್ಬಾ ಎಂದರೆ ಐವತ್ತರ ಆಸುಪಾಸಿನಲ್ಲಿದ್ದರು ಜನ. ಆದರೂ ಮದುವೆ ಮನೆಯ ಗದ್ದಲ ಒಂದು ಫರ್ಲಾಂಗಿನಾಚೆಗೂ ಕೇಳಿಸುತ್ತಿತ್ತು. ಹಾಗೆಂದು ಧ್ವನಿವರ್ಧಕ, ಬ್ಯಾಂಡು ವಾಲಗ ಇರಲಿಲ್ಲ. ಮನೆಯ ಸುತ್ತ ಅಲಂಕಾರಿಕ ವಿದ್ಯುದ್ದೀಪಗಳು ಝಗಮಗಿಸುತ್ತಿರಲಿಲ್ಲ. ಬಿಸಿಲು ಮಳೆಗಳಿಂದ ತೊಂದರೆಯಾಗದಂತೆ ಮನೆಯೆದುರು ಸಣ್ಣದೊಂದು ಶಾಮಿಯಾನ ಇತ್ತು.  ಪ್ರವೇಶದ್ವಾರದಲ್ಲಿ ಎರಡು ಬಾಳೆ ಕಂದು, ಮಾವಿನೆಲೆಯ ಪುಟ್ಟ ತೋರಣ.

ಚಪ್ಪರದ ತುಂಬ ನಗು, ಮಾತು, ಗೌಜು ಗದ್ದಲ. ಕುಟುಂಬದ ಸದಸ್ಯರು, ತೀರಾ ಹತ್ತಿರದ ಬಂಧುಬಳಗದ ಹೊರತಾಗಿ ಬೇರೆ ಯಾರೂ ಇರಲಿಲ್ಲ. ಹಳಬರು ಹಳೆ ಕಥೆಗಳನ್ನು ಬಿಚ್ಚುತ್ತಿದ್ದರೆ, ಹೊಸಬರು ಹೊಸ ಕನಸು ಕಟ್ಟಿಕೊಂಡು ಓಡಾಡುತ್ತಿದ್ದರು. ದಿನವಿಡೀ ಮಾತು, ತಮಾಷೆ, ಕೀಟಲೆ; ಮಧ್ಯಾಹ್ನಕ್ಕೆ ಬಂಧುಬಳಗವೇ ಬಡಿಸಿದ ಹಿತಮಿತ ಊಟ. ಮದುವೆ ಗಂಡು-ಹೆಣ್ಣು ಬಿಡುವಾಗಿ, ನಿರಾಳವಾಗಿ, ಬಂದವರ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಓಡಾಡುತ್ತಿದ್ದರು. ಹಳ್ಳಿ ಮನೆಯಾದ್ದರಿಂದ ಮಧ್ಯಾಹ್ನ ದಾಟುವ ಹೊತ್ತಿಗೆ ಪಕ್ಕದ ಹೊಲಗಳಿಂದ ಜೋಡಿ ನವಿಲುಗಳೆರಡು ಬಂದು ಅಂಗಳದಾಚೆ ನರ್ತನಕ್ಕೇ ನಿಂತು ಬಿಟ್ಟವು- ಹೇಳಿ ಕರೆಸಿದ ಹಾಗೆ.

ಕೊರೋನ ನಿಜವಾಗಿಯೂ ಎಂತಹ ಮದುವೆ ಉಡುಗೊರೆ ನೀಡಿಹೋಯಿತಲ್ಲ ಎಂದನ್ನಿಸಿಬಿಟ್ಟಿತು. ಮನೆಯಲ್ಲಿ ಮದುವೆ ನಿಶ್ಚಯವಾಯಿತೆಂದರೆ ಅದರೊಂದಿಗೆ ಚಿಂತೆಯೇ ಉಡುಗೊರೆಯಾಗಿ ಬರುವ ಕಾಲವಿದು. ಉಳಿದ ಖರ್ಚುಗಳೆಲ್ಲ ಒತ್ತಟ್ಟಿಗಿರಲಿ, ಮದುವೆ ಸುತ್ತಮುತ್ತಲಿನ ಒಂದೆರಡು ದಿನದ ಖರ್ಚುಗಳೇ ಎರಡೂ ಕುಟುಂಬದವರನ್ನು, ಅದರಲ್ಲೂ ಹೆಣ್ಣುಹೆತ್ತವರನ್ನು ಹೈರಾಣಾಗಿಸುವುದಿದೆ. ಜೀವಮಾನವಿಡೀ ಕೂಡಿಟ್ಟ ಉಳಿತಾಯ, ಹೊಲ, ಸೈಟ್ ಮಾರಿಸುವ ಮದುವೆಯೆಂಬುದು ಅನೇಕ ಮಧ್ಯಮವರ್ಗದವರಿಗೊಂದು ದುಃಸ್ವಪ್ನ.

ಊರಲ್ಲೇ ಹೆಚ್ಚು ಬಾಡಿಗೆ ವಿಧಿಸುವ ದೊಡ್ಡ ಚೌಲ್ಟ್ರಿಯನ್ನು ಗೊತ್ತುಮಾಡಬೇಕು; ವಿವಾಹದ ಆಮಂತ್ರಣಪತ್ರಿಕೆಯಲ್ಲೇ ಎರಡೂ ಕಡೆಯವರ ಸ್ಥಾನಮಾನಗಳು ಪ್ರತಿಫಲಿಸಬೇಕು; ಊಟದ ಮೆನು ಕನಿಷ್ಟ ಹತ್ತು ಮೀಟರ್ ಇರಬೇಕು; ಅದಕ್ಕೆ ಒಪ್ಪುವ ಕ್ಯಾಟರಿಂಗ್ ವ್ಯವಸ್ಥೆ ಆಗಬೇಕು; ಏನಿಲ್ಲವೆಂದರೂ ಒಂದು ಸಾವಿರ ಮಂದಿಯನ್ನು ಕರೆಯಬೇಕು; ಮದುವೆಯ ದಿನವಲ್ಲದೆ ಪ್ರಿ-ವೆಡ್ಡಿಂಗ್, ಪೋಸ್ಟ್-ವೆಡ್ಡಿಂಗ್ ಫೋಟೋಶೂಟುಗಳಾಗಬೇಕು; ಛತ್ರವನ್ನು ಲಕ್ಷಗಟ್ಟಲೆ ರೂಪಾಯಿ ವ್ಯಯಿಸಿ ಲೋಡುಗಟ್ಟಲೆ ಹೂವು, ವಿದ್ಯುದ್ದೀಪಗಳಿಂದ ಸಿಂಗರಿಸಬೇಕು. ಉಂಡದ್ದಕ್ಕಿಂತಲೂ ಹೆಚ್ಚು ಎಸೆಯುವಷ್ಟು ಭಕ್ಷ್ಯ-ಭೋಜ್ಯಗಳು ರಾರಾಜಿಸಬೇಕು. ಒಟ್ಟಿನಲ್ಲಿ ಮದುವೆ ಅದ್ದೂರಿಯಾಗಿಯಾಗಬೇಕು. 

ಬಹುತೇಕ ಮದುವೆಗಳು ನಡೆಯುವುದು ಹೀಗೆ. ಅಲ್ಲಿ ವೈಭವ, ಆಡಂಬರಗಳಿಗೆ ಆದ್ಯತೆಯೇ ಹೊರತು ಪರಸ್ಪರ ಸಂಬಂಧಗಳು ಹುಡುಕಿದರೂ ಸಿಗಲಾರವು. ಮೇಲೆ ಹೇಳಿದಷ್ಟು ವ್ಯವಸ್ಥೆಗಳಾಗಬೇಕು ಎಂದ ಮೇಲೆ ಸಂಬಂಧ, ಪ್ರೀತಿ, ವಿಶ್ವಾಸ ಎಂದೆಲ್ಲ ಮಾತನಾಡಿ ಪ್ರಯೋಜನವೂ ಇಲ್ಲ. ಎಲ್ಲರೂ ಒಂದೊಂದು ಅಡಾವುಡಿಯಲ್ಲಿ ಕಳೆದುಹೋಗಿರುತ್ತಾರೆ. ವ್ಯವಸ್ಥೆಗಳ ನಿರ್ವಹಣೆಯಲ್ಲಿ ನಿತ್ರಾಣರಾಗಿರುವ ಮನೆಮಂದಿಗೆ ಬಂದವರೆಷ್ಟು, ಹೋದವರೆಷ್ಟು, ಉಂಡವರೆಷ್ಟು, ತಿಂದವರೆಷ್ಟು ಎಂದೆಲ್ಲ ವಿಚಾರಿಸಿಕೊಳ್ಳುವ ವ್ಯವಧಾನವಾಗಲೀ, ಚೈತನ್ಯವಾಗಲೀ ಉಳಿದಿರುವುದಿಲ್ಲ. ಖುದ್ದು ಮದುಮಗ-ಮದುಮಗಳೇ ಸಾಲುಗಟ್ಟಿದ ಅತಿಥಿಗಳೆದುರು ನಗುಮುಖ ಪ್ರದರ್ಶಿಸಿ, ಕಣ್ಣುಕೋರೈಸುವ ಕ್ಯಾಮರಾ ಬೆಳಕಿಗೆ ಮುಖವೊಡ್ಡಿ, ವಾಸ್ತವವಾಗಿ ಏನೇನು ನಡೆಯಿತು ಎಂದು ನೆನಪಿಟ್ಟುಕೊಳ್ಳುವ ಪರಿಸ್ಥಿತಿಯೂ ಇರುವುದಿಲ್ಲ. 

ಸಾಂಪ್ರದಾಯಿಕ ಮದುವೆಗಳಲ್ಲಿ 'ಉಡುಗೊರೆ ಭಾರವೇ’ ಎಂದು ಪುರೋಹಿತರ ಮೂಲಕ ಮನೆಯ ಯಜಮಾನ ವಿಚಾರಿಸಿಕೊಳ್ಳುವ ಪದ್ಧತಿ ಇತ್ತು. ಈಗ ವೇದಿಕೆಯ ನಾಲ್ಕು ಮೂಲೆಗಳಲ್ಲಿ ಮಾರ್ಷಲ್‌ಗಳನ್ನು ನಿಲ್ಲಿಸಿ ಅತಿಉತ್ಸಾಹದ ಅತಿಥಿಗಳನ್ನು ಎತ್ತಿಎಸೆಯುವ ಸಂಪ್ರದಾಯವಿದೆ. ಊಟದ ಹಾಲ್ ಪ್ರವೇಶಿಸಿ ಬಡಿಸಿದ್ದನ್ನು ದಕ್ಕಿಸಿಕೊಂಡು ಹೋಗುವುದೇ ದೊಡ್ಡದೊಂದು ಸವಾಲು. ಎಲ್ಲರೂ ಊಟದ ಸಮಯಕ್ಕೆ ಆಗಮಿಸವವರಾದ್ದರಿಂದ ಅಲ್ಲಿ ಅತಿಹೆಚ್ಚು ನೂಕುನುಗ್ಗಲು. ಊಟಕ್ಕೆ ಕುಳಿತವರು ಎದ್ದತಕ್ಷಣ ಸೀಟು ಹಿಡಿಯಬೇಕಾದ್ದರಿಂದ ಅವರ ಊಟ ಆರಂಭವಾಗುವಾಗಲೇ ಬೆನ್ನಹಿಂದೆ ಸರತಿಸಾಲು. ಇವರ ಊಟ ಯಾವಾಗ ಮುಗಿಯುತ್ತದೋ ಎಂಬ ಅಸಹನೆಯ ಮುಖಹೊತ್ತ ಮಂದಿ ಬೆನ್ನಹಿಂದೆ ನಿಂತಿರುವುದರಿಂದ ಊಟಕ್ಕೆ ಕುಳಿತವನಿಗೂ 'ನೀರಿಳಿಯದ ಗಂಟಲೊಳ್ ಕಡುಬಂ ತುರುಕಿದಂಥ’ ಅನುಭವ.

ಕೊರೋನಾದಿಂದ ಜಗತ್ತೇ ಥರಗುಟ್ಟಿದ್ದೇನೋ ನಿಜ. ಅದು ಹೊತ್ತು ತಂದ ಎಲ್ಲ ಕಂಟಕಗಳ ನಡುವೆಯೂ, ಅತಿ ಆಡಂಬರದ ಮದುವೆಗಳು ತತ್ಕಾಲಕ್ಕಾದರೂ ನಿಯಂತ್ರಣಕ್ಕೆ ಬಂದವು ಎಂಬುದೊಂದು ಸಮಾಧಾನದ ಸಂಗತಿ. ಕೊರೋನದಿಂದ ಅನೇಕ ಮದುವೆಗಳು ಮುಂದೂಡಲ್ಪಟ್ಟವು. ಮಾಡಿದ ತಯಾರಿಗಳು ನಷ್ಟವಾದವು. ಇನ್ನೇನು ಮುಂದಿನ ವಾರ ಮದುವೆ ಎಂದು ಕಾಯುತ್ತಿದ್ದವರು ನಿರಾಸೆಗೊಳಗಾದರು. ಎಲ್ಲವೂ ನಿಜ. ಆದರೆ ಸೀಮಿತ ಸಂಖ್ಯೆಯ ನೆಂಟರನ್ನು ಸೇರಿಸಿಕೊಂಡು ಮದುವೆ ನಡೆಸಬಹುದು ಎಂಬ ಸೂಚನೆ ಬರುತ್ತಿದ್ದಂತೆಯೇ ಜನರ ಒಟ್ಟಾರೆ ದೃಷ್ಟಿಯೇ ಬದಲಾಗಿಹೋಯಿತು. ವೈಭವದ ಚೌಲ್ಟ್ರಿಗಳನ್ನೆಲ್ಲ ಬಿಟ್ಟು ಜನ ಮನೆಗೆ ಮರಳಿದರು. ಇರುವ ವ್ಯವಸ್ಥೆಯಲ್ಲೇ ಸರಳ ಮದುವೆಗಳು ಆರಂಭವಾದವು. ತೀರಾ ಹತ್ತಿರದ ಬಂಧುವರ್ಗ, ಸ್ನೇಹಿತರು ಮಾತ್ರ ಒಟ್ಟಾದರು. ಪರಸ್ಪರ ಕಲೆತರು, ಮನಸಾರೆ ಮಾತಾಡಿದರು, ಅಚ್ಚಳಿಯದ ಚಿತ್ರವೊಂದಕ್ಕೆ ಚೌಕಟ್ಟು ತೊಡಿಸಿ ಹೃದಯದಲ್ಲಿ ಭದ್ರವಾಗಿಸಿಕೊಂಡರು.

ಈ ಬೆಳವಣಿಗೆಯಿಂದ ಆಗಿರುವ ತೊಂದರೆಗಳೇನೂ ಕಮ್ಮಿಯಿಲ್ಲ. ಇರುವ ಒಬ್ಬನೇ/ಒಬ್ಬಳೇ ಮಗನ/ಮಗಳ ಮದುವೆಯನ್ನು ವರ್ಣರಂಜಿತವಾಗಿ ನಡೆಸಬೇಕು, ನೂರಾರು ಬಂಧುಬಳಗ ಸ್ನೇಹಿತರನ್ನು ಕರೆದು ಅದ್ದೂರಿಯಾಗಿ ಊಟಹಾಕಿಸಬೇಕು ಎಂದು ಕಾಯುತ್ತಿದ್ದವರಿಗೆ ನಿರಾಸೆ ಆಗಿದೆ. ಒಂದು ದೊಡ್ಡಮಟ್ಟದ ಮದುವೆ ನಡೆದರೆ ಅದರಿಂದ ತಮ್ಮ ದಿನದ ಕೂಲಿ ದುಡಿಯುವ ಹತ್ತಾರು ಮಂದಿಯ ಆದಾಯಕ್ಕೆ ಪೆಟ್ಟುಬಿದ್ದಿದೆ. ಮದುವೆ ಹಾಲ್‌ನ ಮಂದಿ, ಅಡುಗೆಯವರು, ಶಾಮಿಯಾನದವರು, ಹೂವಿನ ವ್ಯಾಪಾರಿಗಳು, ಛಾಯಾಗ್ರಾಹಕರು, ವಾಹನಗಳ ಮಾಲೀಕರು-ಚಾಲಕರು, ಸಹಾಯಕರು- ಎಲ್ಲರ ವ್ಯವಹಾರ ಕುಂಠಿತವಾಗಿದೆ. ಅವರಿಗಾದ ನಷ್ಟ ತುಂಬ ದೊಡ್ಡಮಟ್ಟದ್ದು.

ಆದರೆ ಒಟ್ಟಾರೆ ಬೆಳವಣಿಗೆ ಸರಳ ವಿವಾಹಗಳನ್ನು ಇಷ್ಟಪಡುವವರಿಗೆ ವರದಾನವಾಗಿ ಪರಿಣಮಿಸಿದೆ. ಮದುವೆ ಮನೆಗಳಲ್ಲಿ ಮತ್ತೆ ಮನುಷ್ಯ ಸಂಬಂಧಗಳು ಚಿಗುರಿಕೊಂಡಿವೆ. ಮದುವೆಯೇನೋ ಸ್ವರ್ಗದಲ್ಲಿ ನಡೆಯುತ್ತದೆ. ಮದುವೆ ಮಾಡಿಸಿದವನ ಬದುಕು ನರಕವಾಗಬಾರದಲ್ಲ? ಹಾಗಾಗದಂತಹ ಭಾರೀ ಒಸಗೆಯೊಂದನ್ನು ಕೊರೋನಾ ತಂದಿತೇ? ಇದು ಹೀಗೆಯೇ ಉಳಿದೀತೇ?

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: