ಶುಕ್ರವಾರ, ಅಕ್ಟೋಬರ್ 2, 2015

ಅಭಿನಂದನೆಗೊಂದು ಪ್ರಸ್ತಾವನೆ

(ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಪ್ರಾಧ್ಯಾಪಕ, ಜನಪ್ರಿಯ ನುಡಿಚಿತ್ರಕಾರ ಡಾ. ನಿರಂಜನ ವಾನಳ್ಳಿಯವರ 50ನೇ ಜನ್ಮದಿನದ ಸಂದರ್ಭದಲ್ಲಿ ಅರ್ಪಿಸಲಾದ ಗೌರವ ಗ್ರಂಥ 'ನುಡಿರಂಜನ'ಕ್ಕೆ ಬರೆದ ಪ್ರಸ್ತಾವನೆ)

ರಕ್ಷಾಪುಟ ವಿನ್ಯಾಸ: ಲಕ್ಷ್ಮೀಕಾಂತ್ ಬಸ್ರೀಕಟ್ಟೆ
ಅರ್ಧ ಶತಮಾನವೆಂಬುದು ಈ ಸೂಪರ್ ಸಾನಿಕ್ ಯುಗದಲ್ಲಿ ಬಹುದೊಡ್ಡ ಅವಧಿ. ನಿಮಿಷ-ಗಂಟೆಗಳ ಅಂತರದಲ್ಲಿ ಪ್ರಪಂಚದ ಸ್ಥಿತಿಗತಿಗಳೇ ಬದಲಾಗುವ ಕಾಲ ಇದು. ಹೀಗಾಗಿ ಒಬ್ಬ ವ್ಯಕ್ತಿಯ ಬದುಕಿನಲ್ಲಿ ಐವತ್ತು ವರ್ಷವೆಂಬುದು ಅತ್ಯಂತ ಮಹತ್ವದ ಮತ್ತು ಸಾಕಷ್ಟು ದೀರ್ಘವಾದ ಪ್ರಯಾಣವೇ ಹೌದು.

ನಿರಂಜನ ವಾನಳ್ಳಿಯವರಿಗೆ ಸಂಬಂಧಿಸಿದಂತೆ ಹೀಗೊಂದು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದಾಗ ಸಂಭ್ರಮಿಸಿದವರು ನೂರಾರು ಮಂದಿ. 'ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಶುಭವಾಗಲಿ' ಎಂದು ಬೆನ್ನು ತಟ್ಟಿದವರು ಹಲವರು. 'ಈಗಲೇ ಸನ್ಮಾನ ಮಾಡುತ್ತೀರಾ?' ಎಂದು ನೇರವಾಗೇ ಕೇಳಿದವರು ಕೆಲವರು ಇದ್ದಾರೆ. ಅವರಿಗೆ ನಮ್ಮ ಪ್ರಶ್ನೆ ಅಥವಾ ಉತ್ತರ ಇಷ್ಟೇ: ಒಬ್ಬ ವ್ಯಕ್ತಿಯನ್ನು ಅಭಿನಂದಿಸುವುದಕ್ಕೆ ಸೂಕ್ತವಾದದ್ದು ಎಂಬ ಸಮಯವೊಂದು ಇದೆಯೇ?

ಒಬ್ಬ ವ್ಯಕ್ತಿ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡುತ್ತಿದ್ದಾಗ ಅದರ ಬಗ್ಗೆ ದಿವ್ಯಮೌನ ವಹಿಸುವುದು, ಇಲ್ಲವೇ ಸಾಧ್ಯವಾದಷ್ಟು ಆತನ ಕಾಲೆಳೆಯಲು ಯತ್ನಿಸುವುದು, ಆತ ಕಾಲವಾದ ಮೇಲೆ ಅವನನ್ನು ತಿಂಗಳುಗಟ್ಟಲೆ ಹೊಗಳುವುದು, ಮಣಗಟ್ಟಲೆ ಬರೆಯುವುದು ನಮ್ಮ ಸಮಾಜದ ಅವಿಭಾಜ್ಯ ಲಕ್ಷಣವಾಗಿಬಿಟ್ಟಿದೆ - ಹೀಗೆಂದು ಹೇಳಿದರೆ ಕೊಂಚ ನಿಷ್ಠುರದ ಮಾತಾಗಬಹುದೇನೋ? ಆದರೆ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ತೀರಾ ಇತ್ತೀಚಿನ ಉದಾಹರಣೆಯೂ ಸೇರಿದಂತೆ ನೂರಾರು ನಿದರ್ಶನಗಳು ನಮ್ಮ ಕಣ್ಣ ಮುಂದೆ ಇವೆ.

ಮಾಡಬೇಕಾದ್ದನ್ನು ಮಾಡಬೇಕಾದಾಗ ಮಾಡದೆ ಸಮಯ ಮೀರಿದ ಮೇಲೆ 'ಇದನ್ನೆಲ್ಲ ಸ್ವಲ್ಪ ಮೊದಲೇ ಮಾಡಬೇಕಿತ್ತು' ಎಂಬ ಬುದ್ಧಿವಂತಿಕೆಯ ಮಾತಾಡುವವರಿಗೂ ನಮ್ಮಲ್ಲಿ ಕಡಿಮೆಯಿಲ್ಲ. ಸಾಧಕನೊಬ್ಬ ತನ್ನ ಜೀವನದ ನಿರ್ಣಾಯಕ ಹಂತದಲ್ಲಿರುವಾಗಲೇ ಆತನಿಗೊಂದು ಮನಃಪೂರ್ವಕ ಅಭಿನಂದನೆ ಹೇಳಿ 'ನಿಮ್ಮಿಂದ ನಮ್ಮ ಸಮಾಜ ಇನ್ನೂ ಹೆಚ್ಚಿನದನ್ನು ಬಯಸುತ್ತದೆ' ಎಂದು ನೆನಪಿಸುವುದರಲ್ಲಿ ತಪ್ಪೇನಿದೆ?

ಪ್ರಶಸ್ತಿ-ಪುರಸ್ಕಾರಗಳನ್ನು ಅರ್ಜಿ ಹಾಕಿಯೇ ಪಡೆದುಕೊಳ್ಳಬೇಕಾದ ಈ ನಾಡಿನಲ್ಲಿ ಒಂದಷ್ಟು ಮಂದಿ ತಾವಾಗಿಯೇ ಆಸಕ್ತಿ ವಹಿಸಿ ತಮ್ಮೆದುರಿನ ಒಬ್ಬ ಸಾಧಕನಿಗೆ ಗೌರವ ಸಲ್ಲಿಸುತ್ತಾರೆಂದರೆ ಜನ ಅನುಮಾನಪಡುವುದೂ ಸಹಜವಾಗಿಯೇ ಇದೆ.

ಅಂದಹಾಗೆ, ಈ ಗೌರವ ಗ್ರಂಥವನ್ನು ರೂಪಿಸಿರುವುದಕ್ಕೆ ಕಾರಣಗಳನ್ನು ಪಟ್ಟಿ ಮಾಡುವುದು ಈ ಪ್ರಸ್ತಾವನೆಯ ಉದ್ದೇಶ ಅಲ್ಲ. ಈ ಎಲ್ಲ ಕಾರಣಗಳಿಗಾಗಿ ನಿರಂಜನ ವಾನಳ್ಳಿಯವರನ್ನು ಅಭಿನಂದಿಸುತ್ತಿದ್ದೇವೆ ಎಂದು ಹೇಳುವುದು ವಾಸ್ತವವಾಗಿ ಅವರನ್ನು ಅಗೌರವಿಸಿದಂತೆಯೇ. ನಾಲ್ಕು ಅರ್ಥಪೂರ್ಣ ಮಾತುಗಳನ್ನು ಆಡುವುದಕ್ಕೋ ಬರೆಯುವುದಕ್ಕೋ ಬಾರದ ಕಾಲೇಜು-ವಿಶ್ವವಿದ್ಯಾನಿಲಯಗಳ ಅಧ್ಯಾಪಕರು ನೂರಿನ್ನೂರು ಪುಟಗಳ ಬಯೋಡಾಟಾ ಹಿಡಿದುಕೊಂಡು ಓಡಾಡುವುದುನ್ನು ನಾವು ಕಾಣುತ್ತೇವೆ. ಅವರ ವ್ಯಕ್ತಿತ್ವಕ್ಕೂ ಆ ಬಯೋಡಾಟಾಕ್ಕೂ ಸಂಬಂಧವೇ ಇರುವುದಿಲ್ಲ.

ನಿರಂಜನ ವಾನಳ್ಳಿಯವರು ಬಯೋಡಾಟಾದ ಚೌಕಟ್ಟನ್ನು ಮೀರಿ ನಿಂತವರು. ಅವರು ಬರೆದಿರುವ ನೂರಾರು ಲೇಖನಗಳು, ಹತ್ತಾರು ಪುಸ್ತಕಗಳು, ನಡೆಸಿರುವ ತರಬೇತಿ ಶಿಬಿರಗಳು, ನಿರ್ವಹಿಸಿರುವ ಆಡಳಿತಾತ್ಮಕ ಜವಾಬ್ದಾರಿಗಳು- ಇವನ್ನೆಲ್ಲ ಪಟ್ಟಿ ಮಾಡಬಹುದು. ತಮ್ಮ ಹೃದ್ಯ ಬರೆವಣಿಗೆಯ ಮೂಲಕ ಅವರು ತಲುಪಿರುವ ಸಾವಿರಾರು ಜನರ ಮನಸ್ಸಿನ ಮಿಡಿತವನ್ನು ಪಟ್ಟಿ ಮಾಡಬಹುದೇ? ಅವರಿಂದ ತರಬೇತಿ, ಪ್ರೋತ್ಸಾಹ ಪಡೆದು ಬರೆವಣಿಗೆಯಲ್ಲಿ ಬದುಕು ಕಂಡುಕೊಂಡ ನೂರಾರು ಮಂದಿಯ ಮನಸ್ಸಿನ ಕೃತಜ್ಞತಾಭಾವವನ್ನು ಪಟ್ಟಿ ಮಾಡಬಹುದೇ? ನೀವು ಮೇಷ್ಟ್ರಾಗಿ ಸಿಕ್ಕಿದ್ದು ನಮ್ಮ ಪುಣ್ಯ ಸಾರ್ ಎಂದು ಹೇಳುವ ಸಾಲುಸಾಲು ವಿದ್ಯಾರ್ಥಿಗಳ ಧನ್ಯತೆಯ ಕ್ಷಣಗಳನ್ನು ಪಟ್ಟಿ ಮಾಡಬಹುದೇ?

ವಿಶ್ವವಿದ್ಯಾನಿಲಯಗಳ ಅಧ್ಯಾಪಕರುಗಳೆಂದರೆ ಜನ ಅನುಮಾನದಿಂದ ನೋಡುವ ಕಾಲ ಬಂದಿದೆ. ಅಧ್ಯಾಪನದಿಂದ ತೊಡಗಿ ಸಂಶೋಧನೆಯವರೆಗೆ ಎಲ್ಲವನ್ನೂ ಕಾಗದಪತ್ರಗಳಲ್ಲಿ ಮಾತ್ರ ತೋರಿಸುವ, ವಿದ್ಯಾರ್ಥಿಗಳನ್ನು ಮಾರುದೂರದಲ್ಲಿಟ್ಟು ತಮ್ಮ ಸ್ಟೇಟಸ್ ಮತ್ತು ಬುದ್ಧಿವಂತಿಕೆಯನ್ನು ಕಾಪಾಡಿಕೊಳ್ಳುವ, ಕೆಲವೇ ವಿದ್ಯಾರ್ಥಿಗಳನ್ನು/ಸಂಶೋಧನಾರ್ಥಿಗಳನ್ನು ಮಾತ್ರ ತೀರಾ ಹತ್ತಿರ ಮಾಡಿಕೊಂಡು ಆಮೇಲೆ ಲೆಕ್ಕಾಚಾರ ತಪ್ಪಿ ಮಾಧ್ಯಮಗಳಲ್ಲಿ ಸುದ್ದಿಯಾಗಿ ಜನಸಾಮಾನ್ಯರ ಶಾಪಕ್ಕೆ ತುತ್ತಾಗುವ, ಜಾತಿ ರಾಜಕೀಯ ಮಾಡುತ್ತಲೇ ತಮ್ಮ ಆಯಸ್ಸನ್ನು ಕಳೆದುಬಿಡುವ ಅಧ್ಯಾಪಕರೇ ನಮ್ಮ ವಿ.ವಿ.ಗಳಲ್ಲಿ ಹಲವು ಮಂದಿ ಇರುವಾಗ ಈ ಅನುಮಾನ ಅಮಾನುಷವೂ ಅಲ್ಲ, ಅತಿರಂಜಿತವೂ ಅಲ್ಲ. ನಿರಂಜನ ವಾನಳ್ಳಿಯವರು ಯೂನಿವರ್ಸಿಟಿಗಳ ಇಂತಹ ಅನುಮಾನಾಸ್ಪದ ಗೋಡೆಗಳಿಗಿಂತಲೂ ಆಚೆ ನಿಲ್ಲುವ ವ್ಯಕ್ತಿತ್ವ ಹೊಂದಿರುವವರು.

ವಿದ್ಯಾರ್ಥಿಗಳೆಂದರೆ ತಮ್ಮ ದಿವ್ಯಜ್ಞಾನವನ್ನು ಸ್ವೀಕರಿಸಿ ಒಪ್ಪಿಕೊಂಡು ಹೋಗಬೇಕಾದ ಜಡ ವಸ್ತುಗಳೆಂಬ ಭಾವನೆಯನ್ನು ಎಂದೂ ಹೊಂದಿದವರಲ್ಲ ವಾನಳ್ಳಿಯವರು. ಅವರು ವಿದ್ಯಾರ್ಥಿಗಳ ನಡುವಿನ ಅಧ್ಯಾಪಕರು. ತಾವೂ ಬರೆಯುತ್ತ ಉಳಿದವರನ್ನೂ ಬರೆಸಿದವರು; ತಾವೂ ಬೆಳೆಯುತ್ತಲೇ ತಮ್ಮೊಂದಿಗಿನವರನ್ನೂ ಬೆಳೆಸಿದವರು. ಮುಖ್ಯವಾಗಿ ಅವರು ತಮ್ಮ ಬೇರುಗಳನ್ನು ಮರೆತಿಲ್ಲ. ನೆಲವನ್ನು ಬಿಟ್ಟು ಮೇಲಕ್ಕೇರಿಲ್ಲ. ಅದಕ್ಕೇ ಅವರು ನಮ್ಮ ಮನಸ್ಸಿನಲ್ಲಿ ತುಂಬ ಎತ್ತರವನ್ನು ತಲುಪಿದ್ದಾರೆ. ಅವರ ಗುರುಗಳ, ಸಹಪಾಠಿಗಳ, ಸಮಕಾಲೀನರ, ಸ್ನೇಹಿತರ, ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ. ಅದಕ್ಕೆ ಈ ಪುಸ್ತಕದಲ್ಲಿರುವ ಬರೆಹಗಳಿಗಿಂತ ಹೆಚ್ಚಿನ ಸಾಕ್ಷಿ ಬೇಕಾಗಿಲ್ಲ.

ಮಾಧ್ಯಮರಂಗ ಮತ್ತು ಮಾಧ್ಯಮ ಶಿಕ್ಷಣ ಹೊರಳು ಹಾದಿಯಲ್ಲಿವೆ. ಮಾಧ್ಯಮರಂಗದ ಬಗ್ಗೆ ಮಾತನಾಡುವುದು ಈ ಪುಸ್ತಕದ ವ್ಯಾಪ್ತಿಗೆ ಮೀರಿದ್ದು. ಆದರೆ ಮಾಧ್ಯಮ ಶಿಕ್ಷಣದ ಬಗ್ಗೆ ಒಂದು ಮಾತು ಬರೆಯುವುದು ಅಪ್ರಸ್ತುತ ಆಗಲಾರದು. ಮಾಧ್ಯಮ ಶಿಕ್ಷಣ ಎರಡು ವೈಪರೀತ್ಯಗಳ ನಡುವೆ ಇದೆ. ಸರ್ಕಾರಿ ಕಾಲೇಜುಗಳು, ವಿಶ್ವವಿದ್ಯಾನಿಲಯಗಳಲ್ಲಿ ಮಾಧ್ಯಮ ಶಿಕ್ಷಣಕ್ಕೆ ಅಗತ್ಯವಿರುವ ಮೂಲಕಸೌಕರ್ಯ ಹಾಗೂ ಪ್ರಾಯೋಗಿಕ ಜ್ಞಾನವುಳ್ಳ ನುರಿತ ಅಧ್ಯಾಪಕರ ಕೊರತೆಯಾದರೆ, ಇವೆರಡೂ ಇರುವ ಒಂದಷ್ಟು ಖಾಸಗಿ ಸಂಸ್ಥೆಗಳು ತಾವು ನಿರೀಕ್ಷಿಸುವ ಲಕ್ಷಗಟ್ಟಲೆ ಶುಲ್ಕದಿಂದಾಗಿ ಜನಸಾಮಾನ್ಯರಿಗೆ ಕನ್ನಡಿಯ ಗಂಟುಗಳಾಗಿವೆ. ಇವೆಲ್ಲದರ ನಡುವೆ ಮಾಧ್ಯಮ ಶಿಕ್ಷಣದ ಸ್ವರೂಪ ಏನೆಂಬುದರ ಬಗೆಗೇ ಗೊಂದಲಗಳು ಬಗೆಹರಿದಿಲ್ಲ. ಒಂದೆಡೆ, ಪ್ರಾಯೋಗಿಕ ತಿಳುವಳಿಕೆಯೇ ಇಲ್ಲದೆ ವಿಶ್ವವಿದ್ಯಾನಿಲಯಗಳಿಂದ ಹೊರಬರುವ ಈ ವಿದ್ಯಾರ್ಥಿಗಳನ್ನು ಕಟ್ಟಿಕೊಂಡು ನಾವೇನು ಮಾಡಲಿ ಎಂದು ಪತ್ರಿಕಾ ಕಚೇರಿಗಳು ಕೇಳುತ್ತಿವೆ. ಇನ್ನೊಂದೆಡೆ, 'We are not here to produce journalists; we are here to produce researchers'  ಎಂದು ಪ್ರಾಧ್ಯಾಪಕರು ಹೇಳುವುದನ್ನು ನಾನು ಕೇಳಿದ್ದೇನೆ. ನಮ್ಮ ವಿಶ್ವವಿದ್ಯಾನಿಲಯಗಳಿಂದ ಪ್ರಾಮಾಣಿಕ ಹಾಗೂ ಶ್ರೇಷ್ಠ ಸಂಶೋಧಕರು ಹೊರಬರುವುದಿದ್ದರೆ ಅದು ನೂರಕ್ಕೆ ನೂರು ಸ್ವಾಗತಾರ್ಹ, ಆದರೆ ಪತ್ರಿಕೋದ್ಯಮ ವಿಭಾಗಗಳಿಂದ ಕೇವಲ ಸಂಶೋಧಕರು ಹೊರಬಂದರೆ ಸಾಕೇ? ಹಾಗಾದರೆ ಮಾಧ್ಯಮ ವಿಭಾಗ ಎಂದು ಹೆಸರಿಟ್ಟುಕೊಂಡು ಮಾಧ್ಯಮರಂಗಕ್ಕೆ ನಾವು ನೀಡುವ ಕೊಡುಗೆ ಏನು?

ಸಿದ್ಧಾಂತ ಮತ್ತು ಪ್ರಯೋಗದ ನಡುವೆ ನಾವೊಂದು ಸಮನ್ವಯತೆ ಸಾಧಿಸಲೇಬೇಕಾಗಿದೆ. ಪತ್ರಿಕೋದ್ಯಮದ ಉನ್ನತ ಶಿಕ್ಷಣ ಬಯಸಿ ಹೋಗುವವರಲ್ಲಿ ಸಂಶೋಧನೆ, ಪ್ರಯೋಗ - ಹೀಗೆ ವಿಭಿನ್ನ ಆಸಕ್ತಿ ಹೊಂದಿರುವವರು ಇರಬಹುದು. ಅವರ ಆಸಕ್ತಿ ಅಭಿಲಾಷೆಗಳನ್ನು ಗಮನಿಸಿಕೊಂಡು ಅವರನ್ನು ಮುನ್ನಡೆಸುವ ಕೆಲಸವನ್ನು ಅಧ್ಯಾಪಕರು ಮಾಡಬೇಕಿದೆ. ವಿದ್ಯಾರ್ಥಿಯ ಆಸಕ್ತಿಯ ಕ್ಷೇತ್ರವನ್ನು ಗಮನಿಸಿಕೊಂಡು ಆತನನ್ನು ಬೆಳೆಯಗೊಡುವ ಪದ್ಧತಿ ಬರಬೇಕೆಂಬುದು ಎಲ್ಲಾ ಕಾಲಕ್ಕೂ ಎಲ್ಲ ದೇಶಗಳಿಗೂ ಸಲ್ಲುವ ವಾದ. ಶಿಕ್ಷಣ ವ್ಯಕ್ತಿಯ ಬದುಕು ರೂಪಿಸುವಂಥದ್ದಾಗಬೇಕೆಂಬ ಮಾತನ್ನು ಬಹುಶಃ ಯಾರೂ ಅಲ್ಲಗಳೆಯಲಾರರು.

***

ಈ ಒಟ್ಟಾರೆ ಹಿನ್ನೆಲೆಯಲ್ಲಿ ರೂಪುಗೊಂಡಿರುವುದು 'ನುಡಿರಂಜನ’ ಎಂಬ ಈ ಅಭಿನಂದನ ಗ್ರಂಥ. ಐವತ್ತೇ ವರ್ಷಕ್ಕೆ ಈ ಕೆಲಸ ಯಾಕೆ, ಅರುವತ್ತಕ್ಕೆ ಮಾಡಿದರೆ ಸಾಕೇ ಎಂಬಂತಹ ಗೊಂದಲಗಳು ನಮ್ಮ ಮನಸ್ಸಿನಲ್ಲಿ ಇಲ್ಲ. ನಮ್ಮ ಕಣ್ಣ ಮುಂದಿರುವುದು ಅವರ ನಿರ್ಮಲ ವ್ಯಕ್ತಿತ್ವ ಮತ್ತು ಆ ವ್ಯಕ್ತಿತ್ವವನ್ನು ಗೌರವಿಸಬೇಕೆನ್ನುವ ಭಾವ; ಅವರಿಂದ ಪತ್ರಿಕೋದ್ಯಮ ಹಾಗೂ ಪತ್ರಿಕೋದ್ಯಮ ಶಿಕ್ಷಣಕ್ಕೆ ಇನ್ನಷ್ಟನ್ನು ನಿರೀಕ್ಷಿಸುವ ಸಣ್ಣ ಸ್ವಾರ್ಥ; ಮೇಷ್ಟ್ರು ಹೇಗಿದ್ದರೆ ವಿದ್ಯಾರ್ಥಿಗಳು ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂಬುದಕ್ಕೂ ಇದೊಂದು ಸಂಕೇತವಾಗಿ ಉಳಿಯಬಹುದು ಎಂಬ ಆಸೆ.

ಅನುಬಂಧವೂ ಸೇರಿ ಈ ಪುಸ್ತಕದಲ್ಲಿ ಐದು ವಿಭಾಗಗಳಿವೆ. ವಾನಳ್ಳಿಯವರ ಗುರುಗಳು, ಗೆಳೆಯರು, ಸಮಕಾಲೀನರು, ವಿದ್ಯಾರ್ಥಿಗಳು ವಾನಳ್ಳಿಯವರ ಕುರಿತಾಗಿ ಬರೆದ ಲೇಖನಗಳು ಮೊದಲ ಭಾಗ 'ಬಿಂಬ'ದಲ್ಲಿ ಇದೆ. ಎರಡನೇ ಭಾಗ 'ದೃಷ್ಟಿ'ಯಲ್ಲಿ ವಾನಳ್ಳಿಯವರು ಅಂಕಣಕಾರರಾಗಿ, ನುಡಿಚಿತ್ರಕಾರರಾಗಿ ಮಾಡಿದ ಬರೆವಣಿಗೆ ಬಗೆಗಿನ ವಿಶ್ಲೇಷಣೆಯಿದೆ. ಮೂರನೇ ಭಾಗ 'ಸೃಷ್ಟಿ'ಯಲ್ಲಿ ಅವರ ಕೆಲವು ಆಯ್ದ ನುಡಿಚಿತ್ರ ಹಾಗೂ ಪ್ರಬಂಧಗಳಿವೆ. ಮೂವತ್ತು ವರ್ಷಗಳ ಫ್ರೀಲಾನ್ಸ್ ಪತ್ರಿಕೋದ್ಯಮದಲ್ಲಿ ಅವರು ಬರೆದಿರುವ ನೂರಾರು ಲೇಖನಗಳ ಪೈಕಿ ಇಲ್ಲಿ ಬಳಸಿಕೊಂಡವು ಬೆರಳೆಣಿಕೆಯಷ್ಟು. ಇಲ್ಲಿ ಸಂಕಲಿಸಿದ್ದಕ್ಕಿಂತ ಉತ್ತಮವಾದ ಬರೆಹಗಳೂ ಅವರ ಕೃತಿಗಳಲ್ಲಿ ಕಾಣಸಿಗಬಹುದು. ಇವು ಕೇವಲ ಪ್ರಾತಿನಿಧಿಕ. ನಾಲ್ಕನೇ ಭಾಗ ಚಿತ್ರಸಂಪುಟ. ಅನುಬಂಧದಲ್ಲಿ ವಾನಳ್ಳಿಯವರ ಈವರೆಗಿನ ಕೃತಿಗಳ ಸಂಕ್ಷಿಪ್ತ ಪರಿಚಯ ಮಾಡುವ ಪ್ರಯತ್ನ ಇದೆ.

'ಡಾ. ನಿರಂಜನ ವಾನಳ್ಳಿ ಅಭಿನಂದನ ಸಮಿತಿ'ಯ ಗೆಳೆಯರು ವಯಸ್ಸು-ಅನುಭವ ಎರಡರಲ್ಲೂ ಕಿರಿಯನಾಗಿರುವ ನನ್ನ ಮೇಲೆ ವಿಶ್ವಾಸ ಇಟ್ಟು ಈ ಪುಸ್ತಕವನ್ನು ಸಂಪಾದಿಸುವ ಜವಾಬ್ದಾರಿ ಕೊಟ್ಟಿದ್ದಾರೆ. ಅವರಿಗೆ ನನ್ನ ಮೊದಲ ಕೃತಜ್ಞತೆ ಸಲ್ಲಬೇಕು. ಈ ಕೃತಿಯೇನಾದರೂ ಚೆನ್ನಾಗಿ ಮೂಡಿಬಂದಿದ್ದರೆ ಅದರ ಮನ್ನಣೆಗಳು ಇಡೀ ಸಮಿತಿಗೆ ಸಲ್ಲಬೇಕು. ಈ ಪುಸ್ತಕದ ಕೆಲಸದಲ್ಲಿ ಕೈಜೋಡಿಸಿದವರು ತುಂಬ ಮಂದಿ ಇದ್ದಾರೆ. ಮುಖ್ಯವಾಗಿ ನನ್ನ ಗುರುಗಳಾದ ಶ್ರೀ ಭಾಸ್ಕರ ಹೆಗಡೆ, ಗೆಳೆಯರಾದ ಡಾ. ಮಾಧವ, ಚಂದ್ರಮೋಹನ ಮರಾಠೆ, ಡಾ. ಎಚ್. ಜಿ. ಶ್ರೀಧರ, ಶ್ರೀಶ ಪುಣಚ, ಮೌಲ್ಯ ಜೀವನ್, ರಾಕೇಶ ಕುಮಾರ್ ಕಮ್ಮಜೆ, ಜೀವನ ಸಂಗಾತಿ ಆರತಿ ಪಟ್ರಮೆ ಎಲ್ಲರೂ ನನಗೆ ಹೆಗಲೆಣೆಯಾಗಿ ಕೆಲಸ ಮಾಡಿದ್ದಾರೆ. ಗುರುಗಳ ಅಭಿನಂದನೆಯ ಪುಸ್ತಕ ಎಂಬ ಪ್ರೀತಿಯಿಂದ ಗೆಳೆಯ ಲಕ್ಷ್ಮೀಕಾಂತ್ ಬಸ್ರೀಕಟ್ಟೆ ದೂರದ ಮಸ್ಕತ್‌ನಿಂದಲೇ ಸುಂದರ ರಕ್ಷಾಪುಟ ಮಾಡಿ ಕಳಿಸಿದ್ದಾರೆ. ಅವರ ಸಹಾಯವನ್ನೆಲ್ಲ ಈ ಸಂದರ್ಭ ಸ್ಮರಿಸಿಕೊಳ್ಳುತ್ತೇನೆ. ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಬಿ. ಎಸ್. ಕುಲಾಲ್ ಹಾಗೂ ಸರ್ವಸದಸ್ಯರಿಗೆ ವಂದನೆಗಳು.

ವಾನಳ್ಳಿಯವರ ಮೇಲಿನ ಪ್ರೀತಿ-ಅಭಿಮಾನಗಳಿಂದ ಕೇವಲ ಒಂದು ಇ-ಮೇಲ್ ಅಥವಾ ಒಂದು ನಿಮಿಷದ ದೂರವಾಣಿ ಕರೆಗೆ ಸ್ಪಂದಿಸಿ ಸಕಾಲದಲ್ಲಿ ಬರೆಹಗಳನ್ನು ತಲುಪಿಸಿದ ಎಲ್ಲ ಲೇಖಕರಿಗೂ ಪ್ರತ್ಯೇಕ ವಂದನೆಗಳು. ಈ ನಿಮಿತ್ತದಿಂದ ಅನೇಕ ಮಂದಿ ಹಿರಿಯರ ಸಂಪರ್ಕ ನನಗೆ ದೊರೆತಿರುವುದು ಒಂದು ಸುಯೋಗ. ವಿಚಾರ ಗೊತ್ತಾಗಿದ್ದರೆ ನಾವೂ ಬರೆಯುತ್ತಿದ್ದೆವು ಎಂದುಕೊಳ್ಳುವ ವಾನಳ್ಳಿಯವರ ಇನ್ನೂ ಹಲವು ಒಡನಾಡಿಗಳು, ವಿದ್ಯಾರ್ಥಿಗಳು ಇರಬಹುದು. ಅವರೆಲ್ಲರನ್ನು ಸಂಪರ್ಕಿಸಲು ಸಾಧ್ಯವಾಗದ್ದು ನಮ್ಮ ಮಿತಿ.

ಅಂದಹಾಗೆ, 'ನುಡಿರಂಜನ' ಎಂಬ ಈ ಪದದ ಕಾಪಿರೈಟು ಹಿರಿಯ ಪತ್ರಕರ್ತರೂ ಗುರುಸಮಾನರೂ ಆಗಿರುವ ಶ್ರೀ ನಾಗೇಶ ಹೆಗಡೆಯವರದ್ದು. ಅವರ ಲೇಖನದ ಶೀರ್ಷಿಕೆ ನೋಡಿದ ಕೂಡಲೇ ಅದರ ಒಂದು ಪದವನ್ನು ಈ ಪುಸ್ತಕದ ಶೀರ್ಷಿಕೆಯಾಗಿ ಬಳಸಿಕೊಳ್ಳಬೇಕೆಂಬ ತಹತಹ ಉಂಟಾಯಿತು. ಹೀಗಾಗಿ ಅವರ ಅನುಮತಿಯೊಂದಿಗೇ 'ನುಡಿರಂಜನ' ಎಂಬ ಪದವನ್ನು ಅವರಿಗೆ ಧನ್ಯವಾದ ಹೇಳುವುದು ನನ್ನ ಕರ್ತವ್ಯ. ಪುಸ್ತಕವನ್ನು ಸಕಾಲದಲ್ಲಿ ಅಂದವಾಗಿ ಮುದ್ರಿಸಿಕೊಟ್ಟ ಮೆ| ರಾಜಾ ಪ್ರಿಂಟರ್ಸ್, ಬೆಂಗಳೂರು, ಇವರಿಗೂ ನನ್ನ ಕೃತಜ್ಞತೆಗಳು.

ನನ್ನ ಯಾವತ್ತೂ ಚಟುವಟಿಕೆಗಳನ್ನು ಕಂಡು ಸಂತೋಷಪಡುವ, ಬೆಂಬಲಿಸುವ ಸ್ನೇಹಿತರಾದ ಟಿ. ಎನ್. ಹರಿಪ್ರಸಾದ್, ವೆಂಕಟರೆಡ್ಡಿ ರಾಮರೆಡ್ಡಿ, ಸುಬ್ರಹ್ಮಣ್ಯ ಶರ್ಮ, ಶಶಾಂಕ್, ಶಮ, ಅಶ್ವಿನಿ, ನನ್ನ ವಿದ್ಯಾರ್ಥಿಗಳು- ಎಲ್ಲರನ್ನೂ ನೆನಪಿಸಿಕೊಳ್ಳುತ್ತೇನೆ. ಪುಸ್ತಕದ ವಿವಿಧ ಹಂತಗಳಲ್ಲಿ ನನಗೆ ಸಹಕಾರ ನೀಡಿದ ಡಾ. ವಾನಳ್ಳಿ, ಅವರ ಪತ್ನಿ ಶ್ರೀಮತಿ ಸವಿತ, ಬಾಯ್ತುಂಬ ಅಣ್ಣಾ ಎಂದು ಕರೆಯುವ ಸ್ಫೂರ್ತಿ-ಸಿರಿಯವರನ್ನು ಮರೆಯಲಾರೆ.

ನೆರಳಿನಂತೆ ನನ್ನೊಂದಿಗಿರುವ ಆರತಿ, ಪುಟಾಣಿಗಳಾದ ಖುಷಿ-ಸಂವೃತ, ಮೌನವಾಗಿ ಸಂಭ್ರಮಿಸುವ ಅಪ್ಪ-ಅಮ್ಮ ಎಲ್ಲರೂ ಹಗಲು ಇರುಳು ಕಂಪ್ಯೂಟರಿನೆದುರು ಕುಳಿತಿದ್ದ ನನ್ನನ್ನು ಬೇಷರತ್ತಾಗಿ ಕ್ಷಮಿಸಿದ್ದಾರೆ. ಅವರಿಗೆ ಧನ್ಯವಾದ ಎಂದರೆ ಅದು ಕಡಿಮೆಯೂ ಕೃತಕವೂ ಆಗುತ್ತದೆ.

ಹೇಳುವುದು ಇನ್ನೂ ತುಂಬಾ ಇದೆ.

ಆಗಸ್ಟ್ 18, 2015/ ತುಮಕೂರು                                      ಸಿಬಂತಿ ಪದ್ಮನಾಭ ಕೆ. ವಿ./ಸಂಪಾದಕ

1 ಕಾಮೆಂಟ್‌:

KanthiBasu ಹೇಳಿದರು...

ನಮಸ್ಕಾರ,
I am Basavaraj Kanthi. I have a ebook publishing website where you can publish your writings. With online publishing you can reach more number of readers. Also you can decide price of books yourself. Contact me for more details.
email: kanthibasu@gmail.com

Thanks,
Basavaraj